ತಿಳಿವಳಿಕೆಗೆ ಮತ್ತೊಂದಿಷ್ಟು ತಿಳಿಸಾರು

ಬದುಕಿನಲ್ಲಿ ಮನೆಯವರಿಂದ , ನೆಂಟರಿಂದ , ಮಿತ್ರರಿಂದ, ಸಹೋದ್ಯೋಗಿಗಳಿಂದ ಬಹಳಷ್ಟು ಕುಹಕಗಳನ್ನು, ಕಟು ಮಾತುಗಳನ್ನ ಕೇಳಿರುತ್ತೇವೆ. ನಿನ್ನ ಕೈಯ್ಯಿಂದ ಏನೇನೂ ಆಗದು, ನೀನು ದಡ್ಡ, ಮೂರ್ಖ, ಕೋಪಿಷ್ಠ, ನಿನ್ನನ್ನು ಕಂಡರೆ ಯಾರಿಗೂ ಆಗೋದಿಲ್ಲ್ಲ, ನಿನ್ನ ಮುಖ ನೋಡು, ಇನ್ನೂ ಸ್ವಲ್ಪ ಚೆನ್ನಾಗಿ, ನೋಡುವಂತಿದ್ದರೆ ಏನು ಮಾಡುತ್ತಿದ್ದೆಯೋ, ನೀನ್ಯಾಕೆ ಹೀಗೇ, ನೀನು “ಸ್ಟ್ರೇಂಜ್”,  “ವೀರ್ಡ್” ಹೀಗೇ ಸಾಗುತ್ತವೆ ಗುಣಗಾನಗಳು. ಇವನ್ನು ಒದರುವವರಿಗೆ ತಿಳಿದಿರುವುದಿಲ್ಲ ಈ ಮಾತುಗಳು ಮನಸ್ಸಿಗೆ ಮಾತ್ರವಲ್ಲ ನಮ್ಮ self worth ಮೇಲೂ ಯಾವ ಪರಿಣಾಮ ಬೀರುತ್ತವೆ ಎಂದು. ಕೆಲವರಿಗೆ ಟೀಕಿಸೋದರಲ್ಲೇ ಏನೋ ಒಂದು ಸುಖ, ನೆಮ್ಮದಿ. ಯಾರನ್ನಾದರೂ ಕಟು ಮಾತುಗಳಲ್ಲಿ ಹಳಿದ ಮೇಲೆ ಏನನ್ನೋ ಸಾಧಿಸಿದ ಹಾಗೆ. ಚೆನ್ನಾಗಿ ಉರ್ಕೊಂಡ ಎಂದು ಒಳಗೊಳಗೇ ಸಂತಸ. ಇನ್ನು ಕೆಲವರಿಗೆ ತಮ್ಮ ಕುಟುಕು ಮಾತು ಜನರಿಗೆ ನೋವುಂಟು ಮಾಡುತ್ತದೆ ಎನ್ನುವ ಪರಿವೆಯೂ ಇರುವುದಿಲ್ಲ. ಚೆನ್ನಾಗಿ ಬೊಗಳಿದ ನಂತರ ಬಾಲವನ್ನು ಕುಂಡೆ ಯಡಿಗೆ ಸೇರಿಸಿ ನಡೆಯುವ ನಾಯಿಯಂತೆ ಜಾಗ ಖಾಲಿ ಮಾಡುತ್ತಾರೆ.  

ಇಂಥ ತಿಳಿಗೇಡಿಗಳು, ಮತಿಹೀನರು, ಹೇಳಿದ್ದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಇರುವುದೂ ಕೆಲವೊಮ್ಮೆ ಅಸಾಧ್ಯವೇ. ಹಾಗಾದ್ರೆ ಕೊರಗಿ ಕೊರಗಿ ಮನಸ್ಸು ಕೆಡಿಸಿಕೊಳ್ಳ ಬೇಕೋ? ಬೇಡ, ಅಂಥ ವ್ಯಕ್ತಿಗಳ ಸಹವಾಸವನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಮೊದಲನೆಯದಾಗಿ ಮಾಡಬೇಕಾದ ಕೆಲಸ. ಸ್ವತಃ ಮನೆಯವರೇ ಆದರೆ? ಅವರಿಗೆ ತಿಳಿ ಹೇಳೋದು ಕಷ್ಟವಾದರೂ ಜಾಣ್ಮೆಯಿಂದ, ನಾಜೂಕಿನಿಂದ ವಿವರಿಸಬೇಕು. ಆದರೆ ಆಗೊಮ್ಮೆ ಈಗೊಮ್ಮೆ ಸನ್ನಡತೆಯ, ಸ್ವೀಟ್ ನೇಚರ್ ನ ಜನರನ್ನೂ ನಾವು ಕಾಣುತ್ತೇವೆ. ಮುಕ್ತ ಕಂಠದಿಂದ ಹೊಗಳುವ, ಮೆಚ್ಚುಗೆ ವ್ಯಕ್ತಪಡಿಸುವ, ಒಳ್ಳೆಯ ಮಾತನ್ನಾಡುವ, ನಮ್ಮ ಮೇಲೆ ನಮಗೇ ಅಭಿಮಾನ ಮೂಡುವಂತೆ  ಮಾಡುವ ಜನರೂ ಇಲ್ಲದ್ದಿಲ್ಲ. ಅಂಥವರ ಸಹವಾಸ ಮನಸ್ಸಿಗೆ ಮುದ ನೀಡುತ್ತದೆ, ಅಂಥವರು ಆದರ್ಶ ಸಂಗಾತಿಗಳು. ಒಬ್ಬ ವ್ಯಕ್ತಿ ವ್ಯಾಯಾಮ ನಿರತನಾಗಿದ್ದಾಗ ಅವನ ಲಾಕರ್ ನಲ್ಲಿ ಅವನ ಸ್ನೇಹಿತ ಒಂದು ಚಿಕ್ಕ ಚೀಟಿಯನ್ನು ಇಟ್ಟು ಹೋಗಿರುತ್ತಾನೆ, ತೆರೆದು ನೋಡಿದಾಗ ಅದರಲ್ಲಿ ಹೀಗೇ ಬರೆದಿರುತ್ತದೆ;

“ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ, ನೀನು ಜ್ಞಾನದಲ್ಲಾಗಲಿ, ಅನುಭವದಲ್ಲಾಗಲಿ ಕಡಿಮೆಯಲ್ಲ. ನೀನು ನಿಷ್ಠುರವಾಗಿ ಮಾತನಾಡಿದರೂ ಸತ್ಯವನ್ನೇ ನುಡಿಯುವೆ, ಕ್ರಿಯಾಶೀಲತೆ ಇದೆ ನಿನ್ನಲ್ಲಿ, ನೀನು ಮಾತಿಗೆ ತಪ್ಪುವವನಲ್ಲ, ನಿನ್ನಿಂದಾದ ಸಹಾಯ ಮಾಡಲು ನೀನು ಯಾವಾಗಲೂ ತಯಾರು. ನಿನ್ನದು ನಿನಗೇ ತಿಳಿಯದಷ್ಟು ಉನ್ನತ ಮೌಲ್ಯಗಳುಳ್ಳ ವ್ಯಕ್ತಿತ್ವ, ಇಂದಲ್ಲ ನಾಳೆ ಯಶಸ್ಸು ನಿನ್ನನ್ನು ಹುಡುಕಿಕೊಂಡು ಬಂದೆ ಬರುತ್ತದೆ”. ನಾವೆಂದಾದರೂ ನೊಂದ ಆತ್ಮಗಳಿಗೆ ಇಂಥ ಸಾಂತ್ವನದ ನುಡಿಗಳನ್ನು ಹೇಳಿದ್ದೇವೆಯೇ, ಬರೆದಿದ್ದೇವೆಯೇ?

One thought on “ತಿಳಿವಳಿಕೆಗೆ ಮತ್ತೊಂದಿಷ್ಟು ತಿಳಿಸಾರು

  1. Narendra's avatar Narendra ಹೇಳುತ್ತಾರೆ:

    ಕೆಲವು ಮಾತುಗಳು ಕೇಳಲು ಹಿತವಾಗಿರುತ್ತವೆ, ಮನಸ್ಸಿಗೆ ಆನಂದ ನೀಡುತ್ತವೆ…..ಅದರೆ, ಪರಿಣಾಮದಲ್ಲಿ ಕೆಟ್ಟದನ್ನುಂಟು ಮಾಡುತ್ತವೆ.
    ಕೆಲವು ಮಾತುಗಳು ಕೇಳಲು ಕಠಿಣವಾಗಿರುತ್ತವೆ, ಮನಸ್ಸಿಗೆ ತುಂಬಾ ದುಃಖವಾಗುತ್ತದೆ……ಆದರೆ, ಪರಿಣಾಮದಲ್ಲಿ ಒಳ್ಳೆಯದನ್ನುಂಟು ಮಾಡುತ್ತವೆ…….ಔಷಧದ ಕಹಿ ಗುಳಿಗೆಯಂತೆ!

    ಮಾತು ಹೇಗಿರುತ್ತದೆ ಎನ್ನುವುದಕ್ಕಿಂತ ಅದನ್ನು ಆಡಿದವರು ಯಾರು, ಆಡುತ್ತಿರುವವರ ಉದ್ದೇಶ ಮುಖ್ಯವಾಗಿರುತ್ತದೆ.

    ತಾಯಿಯಾದವಳು ಮಗುವಿಗೆ ಬೈಯ್ಯುತ್ತಾಳೆ, ಹೊಡೆತವನ್ನೂ ನೀಡುತ್ತಾಳೆ.
    ಆ ಕ್ಷಣದಲ್ಲಿ ಮಗುವಿಗೆ ಬಹಳ ಕಷ್ಟವಾಗುತ್ತದೆ, ದುಃಖವಾಗುತ್ತದೆ, ಅದು ಅಳುತ್ತದೆ.
    ಆದರೆ, ಆ ತಾಯಿಯ ಆ ಕ್ಷಣದ ಒರಟು ವರ್ತನೆಗಳೆಲ್ಲಾ ತನ್ನ ಮಗುವಿಗೆ ಒಳ್ಳೆಯದಾಗಲೆಂದೇ.
    ಹೀಗಾಗಿ ಆ ತಾಯಿಯ ಕಟು ಮಾತುಗಳು ಪರಿಣಾಮದಲ್ಲಿ ಒಳ್ಳೆಯದನ್ನುಂಟು ಮಾಡುತ್ತವೆ.

    ನಯ ವಂಚಕರಿರುತ್ತಾರೆ, ಭಟ್ಟಂಗಿಗಳಿರುತ್ತಾರೆ.
    ಅವರು ಮುಖಸ್ತುತಿ ಮಾಡುವುದರಲ್ಲಿ ನಿಸ್ಸೀಮರು. ಅವರ ಮಾತುಗಳನ್ನು ಕೇಳಿದರೆ, “ನೀನೇ ಇಂದ್ರ, ಚಂದ್ರ, ದೇವೇಂದ್ರ. ನಿನ್ನನ್ನು ಬಿಟ್ಟರಿಲ್ಲ”, ಇತ್ಯಾದಿ.
    ಅದನ್ನು ಕೇಳಿದಾಗ, ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
    ಮನಸ್ಸಿಗೆ ಬಹಳ ಸಂತೋಷವಾಗುತ್ತದೆ, ಹಿತವೆನಿಸುತ್ತದೆ.
    ಅವರಿಗಿಂತ ಆಪ್ತರಿಲ್ಲ ಎನಿಸುತ್ತದೆ.
    ಆದರೆ, ಆ ಹಿತವಾದ ಮಾತುಗಳನ್ನೇ ನಿಜವೆಂದು ನಂಬಿದರೆ, ಪರಿಣಾಮದಲ್ಲಿ ಕೆಟ್ಟದ್ದೇ ಆಗುತ್ತದೆ.

    ಆಡುವ ಅಥವಾ ಕೇಳುವ ಮಾತುಗಳಿಗಿಂತ, ಅದನ್ನಾಡುತ್ತಿರುವವರ ಮನಸ್ಸಿನ ಭಾವನೆಯೇ, ಉದ್ದೇಶವೇ ಮುಖ್ಯ.

Leave a reply to Narendra ಪ್ರತ್ಯುತ್ತರವನ್ನು ರದ್ದುಮಾಡಿ