ಲಂಕಾ ದಹನ

twenty20 ವಿಶ್ವಕಪ್ ಸರಣಿಯಲ್ಲಿ ಲಂಕೆಗೆ ಸೋಲು. ಆಡಿದ ಎಲ್ಲ ಪಂದ್ಯಗಳನ್ನೂ ಗೆದ್ದು ಬೀಗುತಿದ್ದ ಲಂಕೆಗೆ ಅಂತಿಮ ಪಂದ್ಯದಲ್ಲಿ ಪಾಕ್ ಪೆಡಂಭೂತ ನುಂಗಿ ಹಾಕಿತು. “ವಾಟರ್ ಲೂ” ಆಗಿ ಪರಿಣಮಿಸಿತು ಲಂಕೆಗೆ Lord’s ಮೈದಾನ. ತನ್ನ ದಾರಿಗೆ ಅಡ್ಡ ನಿಂತ ಒಂದೊಂದೇ ತಂಡಗಳನ್ನು ಮಣಿಸುತ್ತಾ ಬಂದ ಲಂಕಾ ಕಪ್ ತನ್ನದೇ ಎಂದು ಭಾವಿಸಿದ್ದರೆ ತಪ್ಪಿಲ್ಲ. ಆದರೆ ಎಂದಿನಂತೆ ಅನಿಶ್ಚಿತತೆಯೇ ತನ್ನ ಪ್ರಕೃತಿ ಎಂದು ಆಡುವ ಪಾಕಿಸ್ತಾನ ಸರಿಯಾದ ಆಘಾತವನ್ನೇ ಲಂಕೆಗೆ ನೀಡಿತು. ಬೂಂ ಬೂಂ ಎಂದು ವರ್ಣಿಸಲ್ಪಡುವ ಶಾಹಿದ್ ಆಫ್ರಿದಿ ತನ್ನ ನೈಸರ್ಗಿಕ ಆಟಕ್ಕೆ  ಅತ್ಯಂತ ವಿರುದ್ಧವಾಗಿ ಜಾಗರೂಕನಾಗಿ ಆಡಿ ಪಂದ್ಯ ಪಾಕ್ ಕೈ ತಪ್ಪದಂತೆ ನೋಡಿಕೊಂಡಿದ್ದು ವಿಶೇಷ.

ಎಂಟು ವಿಕೆಟುಗಳು, ಎಂಟು ಚೆಂಡುಗಳು ಬಾಕಿ ಇರುವಂತೆ ಪಾಕ್ ವಿಜಯ ಕಹಳೆ ಮೊಳಗಿತು.

ಲಂಕಾ ಆಟಗಾರರ ಮೇಲೆ ಪಾಕ್ ನೆಲದ ಮೇಲೆ ನಡೆದ ಆಕ್ರಮಣದಿಂದ ಪಾಕ್ ಕ್ರಿಕೆಟ್ ತತ್ತರಿಸಿತ್ತು. ಯಾವುದೇ ತಂಡಗಳೂ ಪಾಕಿಗೆ ಹೋಗಲು ತಯಾರಿಲ್ಲ. ಸ್ಥಳೀಯ ಕ್ರಿಕೆಟ್ ಸಹ ಹಲವು ಕಾರಣಗಳಿಗೆ ಸೊರಗಿತ್ತು. ಆಂತರಿಕ ಕ್ಷೋಭೆಗಳಿಂದ ಬಳಲುತ್ತಿದ್ದ ಪಾಕಿಗೆ ಭಯೋತ್ಪಾದಕ ರಾಷ್ಟ್ರ ಎನ್ನುವ ಪಟ್ಟ. ಇಂಥ ಹೆನ್ನೆಲೆಯ ನಡುವೆಯೂ ಪಾಕ್ ಆಟಗಾರರು ಮೋಹಕ ಪ್ರದರ್ಶನ ನೀಡಿ ವಿಶ್ವಕಪ್ ಗೆದ್ದರು. ಈ ಗೆಲುವಿನಿಂದ ಪಾಕಿಸ್ತಾನಕ್ಕೆ ವಿಶ್ವ ಸ್ಥರದಲ್ಲಿ ಒಂದಿಷ್ಟು ಮಾನ. ಪಾಕ್ ಬರೀ ಭಯೋತ್ಪಾದಕರ ಸಂತೆಯಲ್ಲ ಎಂದು ತೋರಬಹುದು ವಿಶ್ವಕ್ಕೆ.

ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ದ್ರೋಹಿಗಳನ್ನು ಸದೆಬಡಿಯುತ್ತಿರುವ ಪಾಕ್ ಸೈನಿಕರಿಗೆ ಇನ್ನಷ್ಟು ಹುಮ್ಮಸ್ಸು ಬಂದು ಸಂಪೂರ್ಣವಾಗಿ ತಾಲಿಬಾನ್ ಎಂಬ ವಿಷ ಕಳೆಯನ್ನು ಕಿತ್ತು ಹಾಕಲು ಈ ಗೆಲುವು ಸಹಾಯಕವಾಗಬಹುದು. ಹೀಗಾದರೆ ಅದು ಪಾಕಿಗೂ ಒಳ್ಳೆಯದು ನಮಗೂ ಒಳ್ಳೆಯದು.

ನಾವೇಕೆ ಹೀಗೆ?

ಭಾರತ twenty20 ಯಲ್ಲಿ ಸೋಲುಂಡ ನಂತರ ನಮ್ಮ ಪತ್ರಿಕೆಗಳು ಧೋನಿ ಮತ್ತು ತಂಡದವರನ್ನು ಹಿಗ್ಗಾ ಮುಗ್ಗಾ ಹೀಗಳೆದು ಬರೆದವು. ವಿದ್ಯುನ್ಮಾನ ಮಾಧ್ಯಮಗಳು ತಾವು ಯಾರಿಗೂ ದ್ವಿತೀಯರಲ್ಲ ಎಂದು ತೋರಿಸುವ ಹುಮ್ಮಸ್ಸಿನಲ್ಲಿ ಭಾರತ ತಂಡವನ್ನು ಟೀಕಿಸಿ ಅವರ ಅಳಿದುಳಿದ ಮನೋಸ್ಥೈರ್ಯವನ್ನು ಉಡುಗಿಸುವ ಕೆಲಸ ಸೊಗಸಾಗಿ ಮಾಡಿದವು. ಯಾವುದೇ ಆಟದಲ್ಲೂ ಒಬ್ಬರು ಗೆದ್ದರೆ ಮತ್ತೊಬ್ಬ ಸೋಲಲೇ ಬೇಕು. ಇದು ನಿಯಮ. ಇದನ್ನು ಅರಿಯಲಾರದ ಮಾಧ್ಯಮಗಳಿಗೆ ಬೇಕಿರುವುದು ವಿಷಯಗಳನ್ನು ಸಂಕೀರ್ಣಗೊಳಿಸಿ ತಮಗೆ ತೋಚಿದಂತೆ ಬರೆದು ಪತ್ರಿಕಾ ದ್ಧರ್ಮವನ್ನು ಮೆರೆದ ಪುಣ್ಯಭಾವದ ಸೋಗು ಹಾಕುವುದು. ವಿಶ್ವದ ಬೇರಾವುದೇ ರಾಷ್ಟ್ರಗಳಲ್ಲೂ ಕಾಣದ ಈ ವರ್ತನೆ ನಮ್ಮ ದೇಶಕ್ಕೆ ಬಂದದ್ದಾದರೂ ಹೇಗೆ? ಬಹುಶಃ ಕ್ರೀಡೆಯಲ್ಲಿ ಕ್ರಿಕೆಟ್ ಮಾತ್ರ ಇರಬೇಕು ನಮಗೆ ಒಂದಿಷ್ಟು ಸಾಧಿಸಿದ್ದೇವೆ ಎನ್ನೋ ಭಾವ ತಂದ ಆಟ. ಇದನ್ನೂ ಸೋಲುತ್ತಾ ಕೂತರೆ ಮತ್ಯಾವುದರಲ್ಲಿ ನಾವು ಶ್ರೇಷ್ಠರು? ಕ್ರಿಕೆಟ್ ಗೆ ಕೊಟ್ಟ ಮರ್ಯಾದೆ ಮಾನ್ಯತೆಯಲ್ಲಿ ಕಾಲು ಭಾಗವಾದರೂ ಇತರೆ ಕ್ರೀಡೆಗಳಿಗೆ ಕೊಟ್ಟಿದ್ದರೆ ನಮಗೆ ಹೀಗೆ ನಮ್ಮನ್ನು ನಾವೇ ಹಳಿದುಕೊಳ್ಳುವ ಗತಿ ಬರುತ್ತಿರಲಿಲ್ಲವೋ ಏನೋ?