ಪಾಕಿಸ್ತಾನದ yorker

ಪಾಕಿಸ್ತಾನದ ವಿದೇಶಾಂಗ ಸಚಿವೆ ಮಾತುಕತೆಗೆಂದು  ಭಾರತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಒಂದು ‘ಯಾರ್ಕರ್’ ನಮ್ಮ ಕಾಲ ಬುಡಕ್ಕೆ ಬಂದು ಬಿದ್ದಿದೆ. ಭಾರತದ ವಿದೇಶಾಂಗ ಸಚಿವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮುತ್ಸದ್ದಿಯಾಗಿದ್ದು ಪಾಕ್ ನ ಹೊಸ ವಿದೇಶಾಂಗ ಸಚಿವೆ ಅವರ ಮುಂದೆ ಏನೂ ಅಲ್ಲ ಅನುಭವದಲ್ಲಿ. ಹೀಗೆಂದು ಹೇಳಿದ್ದು ಕಾಂಗ್ರೆಸ್ ಹೈ ಕಮಾಂಡ್ ಅಲ್ಲ. ಈ ಅಪರೂಪದ ಹೊಗಳಿಕೆಯ ಮಾತುಗಳು ಪಾಕಿಸ್ತಾನದ ಜಮೀಯತ್ ಉಲೇಮಾ ಪಕ್ಷದ ಫಜ್ಲುರ್ ರಹಮಾನ್ ಬಾಯಿಂದ ಬಿದ್ದಿದ್ದು. ಭಾರತದ ಕೃಷ್ಣ, ಪಾಕ್ ನ ನೂತನ ವಿದೇಶಾಂಗ ಸಚಿವೆ ‘ಹೀನಾ ಖಾರ್’ ರನ್ನು outsmart ಮಾಡುವರು ಎನ್ನುವ ಮಾತಿನ ಹಿಂದೆ ಮಾತುಕತೆಗಳ ಮುನ್ನವೇ ನಮ್ಮನ್ನು outsmart ಮಾಡೋ ಹುನ್ನಾರವೇ ಪಾಕಿಗಳದು? ಪಾಕಿಸ್ತಾನವನ್ನು ನಂಬಿ ಕೆಟ್ಟವರ “ಕ್ಯೂ” ನಮ್ಮ ಪಡಿತರ ಅಂಗಡಿಯ ಮುಂದೆ ಸಕ್ಕರೆಗಾಗಿ ಕಾದು ನಿಲ್ಲುವವರಿಗಿಂತಲೂ ದೊಡ್ಡದು. ಹಾಗಾಗಿ ಪ್ರಶಂಸೆಯ ಮಾತುಗಳೂ ಸಹ ‘ಸ್ಕ್ಯಾನರ್’  ದಾಟಿಯೇ ಹೋಗಬೇಕು. ಇಲ್ಲದಿದ್ದರೆ ಚಳ್ಳೆ ಹಣ್ಣಿನ ಆತಿಥ್ಯ ನಮ್ಮದಾಗುತ್ತದೆ.   

 ಹೀನಾ ರಬ್ಬಾನಿ ಖಾರ್. ಆಧುನಿಕ ಶಿಕ್ಷಣ ಪಡೆದ, ಈ ಮಹಿಳೆ ಪಾಕ್ ರಾಜಕೀಯ ಕ್ಷೇತ್ರ ಪ್ರವೇಶ ಪಡೆದಿದ್ದು ತನ್ನ ತಂದೆಯ ಹೆಸರಿನ ಕಾರಣ. ಸಾಮಾನ್ಯವಾಗಿ ಮಹಿಳೆಯರು ರಾಜಕೀಯಕ್ಕೆ ಪುರುಷರ ನೆರಳಿನಿಂದಲೇ ಬರುವರು ಎನ್ನುವ ಮಾತು ಕೇಳಿ ಬಂದರೂ ಸಾಕಷ್ಟು ಮಹಿಳೆಯರು ಸ್ವ ಸಾಮರ್ಥ್ಯದಿಂದ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಬ್ರಿಟನ್ ದೇಶದ ಮಾರ್ಗರೆಟ್ ಥ್ಯಾಚರ್, ತುರ್ಕಿ ದೇಶದ ಮಾಜಿ ಪ್ರಧಾನಿ ತಾಂಸು ಚಿಲ್ಲರ್, ನಮ್ಮ ಮಮತಾ ಬ್ಯಾನರ್ಜೀ ಮುಂತಾದವರು ಸ್ವ ಸಾಮರ್ಥ್ಯದಿಂದ ಜನಬೆಂಬಲ ಪಡೆದು ಕೊಂಡವರು. ಪಾಕಿಸ್ತಾನದ  ಸಂಸತ್ ಸದಸ್ಯರಾಗ ಬೇಕೆಂದರೆ ಪದವೀಧರರಾಗಿರಬೇಕು ಎನ್ನುವ ನಿಯಮವಿದೆ. ಈ ನಿಯಮದ ಕಾರಣ ಪದವೀಧರರಲ್ಲದ ರಾಜಕಾರಣಿಗಳು ತಮ್ಮ ಮಕ್ಕಳನ್ನು ಚುನಾವಣೆಯಲ್ಲಿ ಸ್ಪರ್ದಿಸಲು ಉತ್ತೇಜಿಸುತ್ತಾರೆ. ಹೀಗೆ ಮತ್ತೆ ಇನ್ನಿತರ ರೀತಿಯಲ್ಲಿ ತಮ್ಮ ತಂದೆಯರ ಪ್ರಭಾವ ಬಳಸಿ ರಾಜಕಾರಣ ಪ್ರವೇಶಿಸುವವರು ಹೆಚ್ಚು. ಈ ವ್ಯವಸ್ಥೆಯ ಮುಖಾಂತರ ಹೀನಾ ರಾಜಕಾರಣ ಪ್ರವೇಶಿಸಿದ್ದು.

 ವಿದೇಶಾಂಗ ಖಾತೆಯ ವಿಷಯದಲ್ಲಿ ಪಾಕ್ ಬಹಳ ನಾಜೂಕು, choosy. ಕಳ್ಳರು ತಮ್ಮ ಕಿತಾಪತಿಯಿಂದ ಬೇಸತ್ತ ವಿಶ್ವಕ್ಕೆ ಅವಶ್ಯವಾಗಿ ಬೇಕಾದ ಆರೈಕೆಯನ್ನು ಆಕರ್ಷಕ ವ್ಯಕ್ತಿತ್ವಗಳ ಕೈಯ್ಯಲ್ಲಿ ಮಾಡಿಸುತ್ತಾರೆ. ಪಾಕಿಸ್ತಾನದ ಅಮೆರಿಕೆಯ ರಾಯಭಾರಿ ಯಾಗಿದ್ದ ಮಲೀಹಾ ಲೋಧಿ ಶ್ವೇತ ಭವನದ ಮೇಲೆ ದೊಡ್ಡ ಪ್ರಭಾವ ಬೀರಿದ್ದರು. ಪಾಕಿಸ್ತಾನ ಕಿತಾಪತಿ ಮಾಡಿದಾಗಲೆಲ್ಲಾ ಇನ್ನೇನು ಅಮೇರಿಕಾ ಆ ದೇಶವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುತ್ತದೆ ಎನ್ನುತ್ತಿದ್ದಂತೆಯೇ ಈಕೆ ತನ್ನ ಮಾತಿನ, ನಗುವಿನ ಪ್ರಭಾವದಿಂದ ತನ್ನ ದೇಶವನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದಳು.  ಜುಲ್ಫಿಕಾರ್ ಅಲಿ ಭುಟ್ಟೋ ಸಹ ಪಾಕ್ ದೇಶದ ಪ್ರತಿಭಾವಂತ ವಿದೇಶಾಂಗ ಸಚಿವರಾಗಿದ್ದರು. ದೇಶದ ವರ್ಚಸ್ಸು, ಹೆಚ್ಚೆಬೇಕೆಂದರೆ ಸಾಮಾನ್ಯವಾಗಿ ವಿದೇಶಾಂಗ ಸಚಿವರುಗಳು ಮತ್ತು ದೊಡ್ಡ ದೊಡ್ಡ ಪ್ರಭಾವಶಾಲೀ ದೇಶಗಳ ರಾಯಭಾರಿಗಳು ಆಕರ್ಷಕ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಇಂಥ ಹುದ್ದೆಗಳ ಆಯ್ಕೆಯಲ್ಲಿ ಸರಕಾರಗಳು ಜಾಗರೂಕವಾಗಿರುತ್ತವೆ.  

 ಕೇವಲ ೩೪ ವರುಷ ಪ್ರಾಯದ ಪಾಕಿಸ್ತಾನದ ನವ ನಿಯುಕ್ತ ವಿದೇಶಾಂಗ ಸಚಿವೆ ಕಂಡಿದ್ದು ಕಾರ್ಗಿಲ್ ಯುದ್ಧ ಮಾತ್ರ. ೨೦೦೫ ರ ಭೂಕಂಪದ ವೇಳೆ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ದೊಡ್ಡ ವಿದೇಶೀ ಅನುಭವ ಈಕೆಯಲ್ಲಿ ಕಾಣುತ್ತಿಲ್ಲ. ೨೦೦೯ ರಲ್ಲಿ ಪಾಕಿಸ್ತಾನದ ಆಯವ್ಯಯ ಪತ್ರವನ್ನೂ ಈಕೆ ಮಂಡಿಸಿದ್ದರು. ವಯಸ್ಸು ೩೨ ಆದರೂ ಈಗಾಗಲೇ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.  

ಹಾಗಾಗಿ ಸಾಕಷ್ಟು ಅನುಭವ ಇಲ್ಲದ ಈ ಮಹಿಳೆ ಭಾರತದಲ್ಲಿ ಬಂದು ಯಾವ ರೀತಿಯ ಪ್ರದರ್ಶನ ನೀಡುವರೋ ಎನ್ನುವುದು ಕುತೂಹಲಕರ ಸಂಗತಿ. ಆಕೆಯ ರಾಜಕೀಯ, ಕೌಟುಂಬಿಕ, ಅನುಭವದ ಹಿನ್ನೆಲೆ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳದೆ ನಾವು ಹೇಳಬೇಕಾದ್ದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಬೇಕು. ಅತಿಥಿ ಎಳೆ ಪ್ರಾಯದವಳು, ಅನುಭವ ಇಲ್ಲದಾಕೆ, ಅತಿಥಿ ಸತ್ಕಾರ, ಹಾಗೆ ಹೀಗೆ ಎಂದು ಸಲೀಸಾಗಿ ನಡೆಸಿಕೊಳ್ಳದೆ ನಮ್ಮ ಹಿತಾಸಕ್ತಿಯನ್ನು ಎಂದಿಗಿಂತ ಸ್ವಲ್ಪ ಜೋರಾಗಿಯೇ ಕಾಯ್ದು ಕೊಂಡರೆ ನಮಗೇ ಹಿತ. ಅಷ್ಟು ಮಾತ್ರ ಅಲ್ಲ, ಇಲ್ಲೊಂದು ‘caveat emptor’ ಸಹ ಇದೆ. ಪಾಕ್ ನ ಈ ವಿದೇಶಾಂಗ ಸಚಿವೆ ಪದವಿ ಪಡೆದಿದ್ದು ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ, ಅದೂ ಅಮೆರಿಕೆಯ ವಿಶ್ವ ವಿದ್ಯಾಲಯದಿಂದ. deadly double. ಈ ಪದವಿ ಪಡೆದವರು ಯಾವಾಗಲೂ ಮುಗುಳ್ನಗುವನ್ನೇ ಧರಿಸಿರುತ್ತಾರೆ, ಒಳ್ಳೆಯ, ಸಿಹಿಯಾದ, ಸತ್ಕಾರದ ಮಾತುಗಳನ್ನೇ ಆಡುತ್ತಾರೆ ಎಂಥ ಸಂದರ್ಭಗಳಲ್ಲೂ. ಹಳಸಿದ ಪುಳಿಯೋಗರೆ ಯನ್ನು ಇದು ತುಂಬಾ delicious ಎಂದು ನಮ್ಮ ಒಲ್ಲದ ಬಾಯಿಗೆ ತುರುಕುವ ಜನ ಈ hospitality management ಗಳಿಸಿದವರು.

ಒಂದು ಕಡೆ ಹಿಲರಿ ಕ್ಲಿಂಟನ್, ಮತ್ತೊಂದು ಕಡೆ ಹೀನಾ ರಬ್ಬಾನಿ, ಇವರಿಬ್ಬರ ನಡುವೆ ನಮ್ಮ ಮುದ್ದು ಕೃಷ್ಣಾ, ಊಹಿಸಿ ನೋಡಿ. ಅಂತಾರಾಷ್ಟ್ರೀಯ ರಾಜಕಾರಣ ಮುಗುಳ್ನಗುವಿನ, ಫೋಟೋ ಶಾಟ್ ಗಳಿಂದ ತುಂಬಿದ ಪಿಕ್ನಿಕ್ ಅಲ್ಲ. ನಲ್ನುಡಿಗಳ land mine ಗಳು ತುಂಬಿರುತ್ತವೆ ಹಾದಿ ಯುದ್ದಕ್ಕೂ. ಇವನ್ನು  ಗುರುತಿಸಿ ನಮ್ಮ ಹಿತಾಸಕ್ತಿ ಕಾಯ್ದು ಕೊಳ್ಳುವುದು ಒಂದು ದೊಡ್ಡ ಸಾಹಸವೇ ಸರಿ. ಈ ಸಾಹಸದಲ್ಲಿ ನಮ್ಮ ಕೃಷ್ಣ ವಿಜಯಿಯಾಗಲಿ.  

 ಚಿತ್ರ ಕೃಪೆ: ibtimes.com

ಎರಡು ಘಟನೆಗಳು, ಎರಡು ಸಾವು

ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ ಮಕ್ಕಳಿಗೆಂದು ಗೋಬಿ ಮಂಚೂರಿ ಕಟ್ಟಿಸಿಕೊಂಡು ಮನೆಗೆ ಹೋಗುತ್ತಾನೆ. ಅದನ್ನು ತಿಂದ ಮಕ್ಕಳು ತುಂಬಾ ಖಾರ ಆಯಿತು ಎಂದು ಅಪ್ಪನಲ್ಲಿ ದೂರುತ್ತಾರೆ. ಕೋಪಗೊಂಡ ಅಪ್ಪ ಗೋಬಿ ಮಾರಿದ ಹೋಟೆಲ್ ಗೆ ಬಂದು ಇದರ ಬಗ್ಗೆ ದೂರುತ್ತಾನೆ. ರಾತ್ರಿಯಾದ್ದರಿಂದ ಹೋಟೆಲ್ ಮುಚ್ಚುತ್ತಿದ ಯಜಮಾನ ದೂರಿದ ಗಿರಾಕಿಯ ಮೇಲೆ ಕೈ ಮಾಡುತ್ತಾನೆ, ಇನ್ನಷ್ಟು ತದುಕಲು ಕೆಲಸಗಾರರನ್ನೂ ಕರೆಸುತ್ತಾನೆ. ಎಲ್ಲರ ಬಡಿತ ತಿಂದ ಗಿರಾಕಿ ಕೊನೆಯುಸಿರೆಳೆಯುತ್ತಾನೆ. ಎಂಥ ದುರಂತ ನೋಡಿ. ಮಕ್ಕಳು ಆಸೆ ಪಡುತ್ತಾರೆ ಎಂದೋ ಅಥವಾ ಬೆಳಿಗ್ಗೆ ಮನೆಯಿಂದ ಹೊರಡುವಾಗ ಅಪ್ಪಾ, ಬರುವಾಗ ಗೋಬಿ ತಗೊಂಡು ಬಾ ಎಂದು ಹೇಳಿದ ಪುಟಾಣಿಗಳ ಆಸೆ ಪೂರೈಸಲು ಕಟ್ಟಿಸಿಕೊಂಡು ತಂದ ತಿಂಡಿ ಅವನ ಅವಸಾನಕ್ಕೆ ಕಾರಣ ವಾಗಬಹುದು ಎಂದು ಅವನಿಗೆ ಖಂಡಿತ ಹೊಳೆದಿರಲಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಗಾಭರಿ ಹುಟ್ಟಿಸುತ್ತದೆ. ಇಷ್ಟು ಕ್ಷುಲ್ಲಕ, ಸಾಧಾರಣ ಸಮಸ್ಯೆಯೊಂದು ಒಬ್ಬನ ಸಾವಿನಲ್ಲಿ ಸಮಾಪ್ತಿಯಾದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ನಮ್ಮ ಸಹನೆಯ ಮಿತಿ ಈ ರೀತಿ ತಳ ಮುಟ್ಟಲು ಕಾರಣವೇನು? ದಿನ ಬೆಳಗಾದರೆ ಈ ತೆರನಾದ ಮನಕಲಕುವ, ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸಗಳು ದೇಶದ ಎಲ್ಲೆಡೆ ವರದಿ ಆಗುತ್ತಿದ್ದರೂ ನಮಗೆ ಅದು ಒಂದು ಪುಟ್ಟ distraction ಮಾತ್ರವಾಗಿ ಗೋಚರಿಸುವುದು ಖೇದಕರ.   

ಮೇಲಿನ ದುರಂತ ದಕ್ಷಿಣ ಭಾರತದ್ದಾದರೆ ಈಗ ಬನ್ನಿ ಉತ್ತರ ಭಾರತಕ್ಕೆ.

ತಾನು ಪ್ರೀತಿಸಿದವನನ್ನು ತನ್ನ ತಂದೆ ಇಷ್ಟ ಪಡಲಿಲ್ಲ ಎಂದು ಪ್ರಿಯಕರ ಮತ್ತು ಅವನ ಮಿತ್ರನನ್ನು ತನ್ನ ತಂದೆಯನ್ನು ಕೊಲ್ಲಲು ಮಗಳು ನಿಯಮಿಸುತ್ತಾಳೆ. ಅವರಿಬ್ಬರೂ ಸೇರಿ ಹುಡುಗಿಯ ತಂದೆಗೆ ಗತಿ ಕಾಣಿಸುತ್ತಾರೆ. ನಂಬಲು ಸಾಧ್ಯವೇ ಈ ಘಟನೆಯನ್ನು? ಇಂಥ ಪೈಶಾಚಿಕ ಪ್ರವೃತ್ತಿಗೆ ಕಾರಣವಾದರೂ ಏನಿರಬಹುದು? ಅಸಹನೆಯ ಕಿಡಿ, ಧ್ವೇಷದ ಮನೋಭಾವ ಇವಕ್ಕೆ ಕಾರಣ ಎಂದು ದೂರುವಂತಿಲ್ಲ. ಏಕೆಂದರೆ ಇವು ಆ ಕ್ಷಣದಲ್ಲಿ ಹುಟ್ಟಿಕೊಂಡ ವಿಕೃತ ಕೃತ್ಯ. ವ್ಯವಸ್ಥಿತವಾಗಿ ನಡೆಯುವ ಹಲ್ಲೆಗಳಿಗೆ ಪರಿಹಾರ ಹಾಗೂ ಹೀಗೂ ಕಂಡು ಕೊಳ್ಳಬಹುದು. ಜನರನ್ನು ಜಾಗೃತಿ ಗೊಳಿಸಬಹುದು. ಧ್ವೇಷ ದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ ಕೊಡಬಹುದು. ಅಂಥ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳ ಬಹುದು. ಆದರೆ ಈ ರೀತಿ ಥಟ್ಟನೆ ಉದ್ಭವವಾಗುವ ಹಿಂಸೆಗೆ ಏನು ಪರಿಹಾರ?

ಮೇಲಿನ ಎರಡು ಪೈಶಾಚಿಕ ಘಟನೆಗಳು ಎಲ್ಲೋ ಒಂದೋ ಎರಡೋ ಆಗಿದ್ದಿದ್ದರೆ ನಿಟ್ಟುಸಿರು ಬಿಟ್ಟು ಮುಂದೆ ಸಾಗಬಹುದಿತ್ತು. ದಿನ ಬೆಳಗಾದರೆ ನಮಗೆ ಎದುರಾಗುವುದು ಇಂಥ ಅವಿವೇಕತನದಿಂದ ಕೂಡಿದ ಹಿಂಸೆಗಳೇ. ಚಿಲ್ಲರೆಗಾಗಿ ಕೊಲೆ, ಚೌಕಾಶಿ ಮಾಡಿದ್ದಕ್ಕೆ ಕೊಲೆ, ಇಟ್ಟುಕೊಂಡವಳಿಗಾಗಿ ಕೊಲೆ, ತನ್ನ ಸೋದರಿಯನ್ನು ಪ್ರೀತಿಸಿದ್ದಕ್ಕಾಗಿ ಕೊಲೆ…………ಅಸಹನೆಯ ಕೂಪಕ್ಕೆ ದಬ್ಬಲ್ಪಡುತ್ತಿರುವ ನಮ್ಮ ಸಮಾಜವನ್ನು, ಸಂಸ್ಕಾರವನ್ನು ಪಾರು ಮಾಡಲು ನಾವೇನು ಮಾಡಬಹುದು? ನಾಗರೀಕ, ಪ್ರಜ್ಞಾವಂತ ಸಮಾಜ ಕೇಳಿಕೊಳ್ಳಬೇಕಾದ ಪ್ರಶ್ನೆ.

ಕುರಿಗಳು ಸಾರ್, ಕುರಿಗಳಲ್ಲಾ ಸಾರ್

ಪ್ರಾಣಿಗಳಿಗೆ ಹಿಂಸೆ ಆದಾಗ ಪ್ರಾಣಿ ದಯಾ ಸಂಘಕ್ಕೆ ಕರೆ ಕೊಡೋದು ವಾಡಿಕೆ. ಬಂದ್ ಗಾಗಿ ಕರೆ ಅಲ್ಲ, ಬಂದು ಪ್ರಾಣಿಯನ್ನು ಉಳಿಸಿ ಅಂತ ಹೇಳೋಕೆ ಕರೆ. ಜಟಕಾ ಗಾಡಿಯ ಮಾಲೀಕ ಬಳಲಿದ, ಹಸಿದ, ನಿತ್ರಾಣವಿಲ್ಲದೆ ಒಲ್ಲೆ ಎಂದರೂ ಬಿಡದೆ ಬಾರು ಕೋಲಿನಿಂದ ಬಾರಿಸಿ ತನ್ನ ಗಾಡಿಯಲ್ಲಿರುವ ಪೋಸ್ಟ್ ಮಾರ್ಟಂ ದಾರಿ ಹಿಡಿದ ಹೆಣ ವನ್ನು ಅದು ಸೇರಬೇಕಾದ ಸ್ಥಳ ತಲುಪಿಸಲು ಕುದುರೆಗೆ ಕೊಡುವ ಹಿಂಸೆ ನೋಡಿ, ನೋಡಲಾರದೆ ಪ್ರಾಣಿ ದಯಾ ಸಂಘಕ್ಕೆ ಬುಲಾವ್ ಕೊಡೋದು.  ಹೌದು ಪ್ರಾಣಿಗಳಿಗೆ ದಯೆ ತೋರಿಸಬೇಕಾದ್ದೆ. ಆದರೆ ಈ ಬುಲಾವ್ ಬರೀ ಕುದುರೆ ಕತ್ತೆ ನಾಯಿಗಳಿಗೆ ಮಾತ್ರ ಏಕೆ, ಕೋಳಿ ಕುರಿಗಳಿಗೂ ಏಕಿಲ್ಲ ಅವೂ ಪ್ರಾಣಿಗಳೇ ಅಲ್ಲವೇ ಎಂದು ಕೆಲವರ ಸಂಶಯ. ಒಬ್ಬರ ಸಂಶಯಕ್ಕೆ ಪಾರ್ಶ್ವ ಉತ್ತರವಾಗಿ ಮತೊಬ್ಬರು ಹೇಳಿದರು, ಕುರಿ ಏನೋ ಪ್ರಾಣಿಯೇ, ಆದರೆ ಕೋಳಿ ಪ್ರಾಣಿಯಲ್ಲ, ಅದು ಪಕ್ಷಿ ಎಂದು. ಪ್ರಾಣಿಯೋ , ಪಕ್ಷಿಯೋ ಪ್ರಾಣವಂತೂ ಇದೆಯಲ್ರೀ ಅಂತೀರಾ? ಸೊಳ್ಳೆಗೂ ಇದೆ ಪ್ರಾಣ, ಹಾಗೆಯೇ ತಿಗಣೆಗೂ ಸಹ, ಅಲ್ವರ? ಸೊಳ್ಳೆಯನ್ನು ಕೊಲ್ಲಲು ಈಗ ಚೀನೀ ತಂತ್ರಜ್ಞಾನ ಉಪಯೋಗಿಸುತ್ತಿಲ್ಲವೇ ನಾವು. ಟೆನ್ನಿಸ್ ಬೆಡಗಿ ಸಾನಿಯಾ ಥರ ಎಲೆಕ್ಟ್ರೋನಿಕ್ ಬ್ಯಾಟ್ ಹಿಡಿದು ಚಟ ಚಟ, ಚಟ, ಚಟಾ ಅಂತ ಅಟ್ಟಾಡಿಸಿಕೊಂಡು ಸುಡುತ್ತಿಲ್ಲವೇ ಸೊಳ್ಳೆ ಗಳನ್ನು?  ನಮ್ಮ ಕಿವಿಗಳ ಸುತ್ತಾ ಹಾರುತ್ತಾ, ತಪ್ಪಿಸಿಕೊಳ್ಳುತ್ತಾ, ಒಂದು ರೀತಿಯ ಅಣಕದ ಶಬ್ದ ಮಾಡಿ ನಂತರ ನಮ್ಮ ರಕ್ತ ಹೀರುವ  ಸೊಳ್ಳೆಗಳನ್ನು ಹಾಗೆ ಬಿಡಿ ಅಂತೀರಾ ಎಂದು ಕೇಳಬೇಡಿ. back hand, fore hand, ಹೀಗೆ ನಾನಾ ರೀತಿ ರಾಕೆಟ್ ತಿರುಗಿಸಿ ಫ್ರೈ ಮಾಡಿ ಸೊಳ್ಳೆಗಳನ್ನು.   ಹಾಗಾದರೆ ಈ ಮೇಲಿನ ಪುರಾಣ ಯಾಕೆ? ಕುರಿ, ಕೋಳಿ, ಪ್ರಾಣಿ ದಯೆ, ಬ್ಲಾ, ಬ್ಲಾ, ಬ್ಲಾ ಎಂದಿರಾ?

ಈಗ ಪ್ರಾಣಿ ಹಿಂಸೆ ವಿಷಯ ಬಂದಾಗ ಕೆಲವರು by choice ಅಥವಾ by taste ಕಾರಣ ಆರಿಸಿಕೊಂಡ ಆಹಾರ ಪದ್ಧತಿಗೆ ಕೊನೆ ಹಾಡಿ ಕುರಿ ಕೋಳಿ ಭಕ್ಷ್ಯ ಮಾಡುವ ಪರಿಪಾಠಕ್ಕೆ ನಾಂದಿ ಹಾಡಬೇಕು. ನಮ್ಮ ದೇಶದಲ್ಲಿ ಕುರಿ ಕೋಳಿ ಹಂದಿ ಮುಂತಾದುವುಗಳ ಹಿಂಸೆಗೆ ನಾಂದಿ ಹಾಡಿದರೆ ವಿಎಟ್ನಾಮ್, ಚೈನಾ, ಮುಂತಾದ ದೇಶಗಳಲ್ಲಿ ನಾಯಿ, ಜಿರಲೆ ಇವುಗಳ ಹತ್ಯೆಗೂ ಹಾಡಬೇಕು ಇತಿಶ್ರೀ. ಅಯ್ಯೋ ನಾಯ್ ತಿಂತಾರಾ ಚೈನಾದಲ್ಲಿ ಎಂದು ಮೂಗೆಳೆಯಬೇಡಿ. ಆರ್ಥಿಕ ಸಂಕಷ್ಟ ಜನರನ್ನು ಬಡಿದು ಕುರಿ ಕೋಳಿ, ಹಂದಿ ದುಬಾರಿ ಯಾದಾಗ ನಾಯಿಗಳು “ಮೆನ್ಯು ಪಟ್ಟಿ”- menu-  ಗೆ ಬಡ್ತಿ ಪಡೆದು ಕೊಳ್ಳುತ್ತವೆ ಕೆಲವು ದೇಶಗಳಲ್ಲಿ. ಕುರಿ ಕೋಳಿ ಹತ್ಯೆ ಕುರಿತ ಚರ್ಚೆಯಲ್ಲಿ ಓದುಗರೊಬ್ಬರು ಕೇಳಿದರು, “ಪ್ರಾಣ ಇರುವುದೆಲ್ಲ ಪ್ರಾಣಿಗಳೇ ….. ಜಗದೀಶ್ ಚಂದ್ರಬೋಸರು ತೋರಿಸಿದ್ದಾರೆ ಸಸ್ಯಗಳೀಗೂ ಪ್ರಾಣವಿದೆ ಹಾಗೂ ಅವೂ ಉಸಿರಾಡುತ್ತವೆ ಎಂದು. ಹಾಗಾಗಿ ಪ್ರಾಣಿ ದಯಾಸಂಘದವರು ಪ್ರಾಣವಿರುವ ಎಲ್ಲವನ್ನೂ ರಕ್ಷಿಸಲು ಮುಂದಾಗಬೇಕು ಎನ್ನುವುದು ನನ್ನ ಕೋರಿಕೆ!!!!!” ಓಹ್, ಇದೆಂಥಾ ಬಾಂಬ್ ಅಪ್ಪಾ! ಹಾಗಾದರೆ ನಾವು ತಿನ್ನೋದೇನನ್ನು? ನನಗೆ ಗೊತ್ತಿಲ್ಲ. ಆದರೆ ಅದುನ್ ತಿನ್ನೋದ್ ಬ್ಯಾನ್ ಮಾಡಿ, ಇದುನ್ ತಿನ್ನೋದನ್ ಬ್ಯಾನ್ ಮಾಡಿ ಎನ್ನುವವರಿಗೆ ಮತ್ತೊಂದು ಉತ್ತರ ಹೀಗೆ..

“ಅನುಕೂಲ ಶಾಸ್ತ್ರ” ದ proponent ಗಳಿಗೆ ತಮ್ಮದೇ ಆದ ತರ್ಕಗಳಿರುತ್ತವೆ, ಆ ತರ್ಕಗಳಿಗೆ ವಿವೇಚನೆ ಅಥವಾ reasoning ಕೆಲಸಕ್ಕೆ ಬಾರದ ಸಂಗತಿಗಳು, ಹಾಗೆಯೇ “ಅನುಕೂಲ ಶಾಸ್ತ್ರ” thrive ಆಗೋದು ನಂಬರ್ ಗೇಂ ನಲ್ಲಿ. ಸಂಖ್ಯೆ ಹೆಚ್ಚಿದ್ದರೆ ಅವರು ಹೇಳಿದ್ದೇ ಸರಿ, ಈ ವಿಷಯದಲ್ಲಿ ಮಾತ್ರ ಇವರುಗಳು truly democratic.
ತುರೇ ಮಣೆ ಕಯ್ಯಿಂದ ನಿರ್ದಯವಾಗಿ ತುರಿಸಿಕೊಳ್ಳುವ ತೆಂಗಿನಕಾಯಿ ಮತ್ತು ಹರಿಯುವ ಚಾಕುವಿನ ಅಡಿ ದಯನೀಯವಾಗಿ ನಲುಗುವ ಈರುಳ್ಳಿ ಬಗ್ಗೆ ಇವರುಗಳಿಗೆ ಕನಿಕರ ಭಾವ ತೋರಿದಾಗ ಅವುಗಳನ್ನು ಒಳಗೊಂಡ ತಿನಿಸಿಗೂ ಬರುತ್ತದೆ ಸಂಚಕಾರ.

ಈಗ ಚರ್ಚೆ ಪರಿಸಮಾಪ್ತಿ. ನಡೀರಿ ಮಿಲ್ಟ್ರಿ ಹೋಟೆಲ್ ಕಡೆ.  ಚೀನಿಯರು ನಮ್ಮ menu ಮೇಲೆ ಇನ್ನೂ ಧಾಳಿ ಮಾಡಿಲ್ಲ ತಾನೇ? ಇಲ್ದಿದ್ರೆ, ನಾಯ್, ಜಿರಲೆ….ಅಯ್ಯೋ….