TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು. ಕ್ರಿಕೆಟ್ ನ ಜ್ವರ ನನ್ನನ್ನು ಬಿಟ್ಟು ಹಲವು ವರ್ಷಗಳೇ ಕಳೆದವು. ಆದರೆ ಭಾರತದಲ್ಲಿ ಇದರ ಹುಚ್ಚನ್ನು ಅರಿತ ನನಗೆ ಗೊತ್ತು ಯಾವ ರೀತಿಯ ಯಾತನೆಯನ್ನು ಕ್ರೀಡಾ, ಕ್ಷಮಿಸಿ ಕ್ರಿಕೆಟ್ ಪ್ರೇಮಿಗಳು ಅನುಭವಿಸುತ್ತಿದ್ದಾರೆಂದು. ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತಾ ನನ್ನ ಭಾವನಿಗೆ ಫೋನಾಯಿಸಿದೆ. ಅವರ ಅರ್ಧ ಸತ್ತ ಸ್ವರ ಕೇಳಿ ಯಾರಾದರೂ ಬೇಕಾದವರು ಗೊಟಕ್ ಅಂದು ಬಿಟ್ಟರಾ ಎಂದು ಗಾಭರಿಯಾದೆ. ನೋಡಿದರೆ ಭಾರತ ಸೋತದ್ದಕ್ಕೆ ಆಕಾಶ ತಲೆ ಮೇಲೆ ಬಿದ್ದವರಂತೆ ಮಾತನಾಡುತ್ತಿದ್ದರು ನನ್ನ ಭಾವ. ಆಗಲೇ ನನಗೆ ಗೊತ್ತಾಗಿದ್ದು ಭಾರತ ಸೋತ ವಿಷಯ. ಸುದೈವವಶಾತ್ ನನ್ನ ತಲೆ ಮೇಲೆ ಆಗಸ ಬಂದು ಬೀಳಲಿಲ್ಲ, ಬದಲಿಗೆ ಆದದ್ದು ಒಂದು ರೀತಿಯ ಸಂತೋಷವೇ. ನಾವು ಸೋಲಬೇಕು. ಹೌದು ನಾವು ಸೋಲಬೇಕು. I am not mincing my words. ಬರೀ ಈ ಪಂದ್ಯಾವಳಿಯಲ್ಲಿ ಮಾತ್ರವಲ್ಲ, ಇನ್ನು ಬರಲಿರುವ ಹತ್ತು ಹಲವು ಪಂದ್ಯಾವಳಿ ಗಳಲ್ಲಿ ನಮಗೆ ಸೋಲನ್ನುಣಿಸಿ ನಮ್ಮ ಕ್ರಿಕೆಟಿಗರು ನಮಗೆ ಮತ್ತು ನಮ್ಮ ದೇಶಕ್ಕೆ ಒಂದು ಮಹದುಪಕಾರವನ್ನು ಮಾಡಬೇಕು. ಸತ್ತು ಹೋದ, ಸಾವಿನಂಚಿನಲ್ಲಿರುವ ನಮ್ಮ ದೇಸೀ ಕ್ರೀಡೆಗಳಿಗೆ ಒಂದು ಮರುಜನ್ಮ ಬರಬೇಕಾದರೆ ಕ್ರಿಕೆಟ್ನ ಸಾವು ಅತ್ಯವಶ್ಯಕ. ಹೀಗೆ ಮೇಲಿಂದ ಮೇಲೆ ಈ ರೀತಿಯ ಸೋಲುಗಳನ್ನು ನಮ್ಮ ಕ್ರಿಕೆಟ್ ಕಲಿಗಳು ನಮ್ಮ ಹೊಸ್ತಿಲಿನ ಮುಂದೆ ತಂದು ಸುರಿದಾಗ ಗತಿಯಿಲ್ಲದೆ ನಾವು ಮನೋರಂಜನೆಗೆ ಇನ್ಯಾವುದಾದರೂ ಕ್ರೀಡೆಗಳನ್ನು ಆರಿಸಿಕೊಳ್ಳುತ್ತೇವೆ, ಪೋಷಿಸುತ್ತೇವೆ. ಕಂಗಾಲಾಗಿ, ಕರುಬುತ್ತಾ ಸಿರಿವಂತ ಕ್ರಿಕೆಟಿಗರನ್ನು ನೋಡುವ ನಮ್ಮ ಹಾಕಿ ಪಟುಗಳು, ಮತ್ತು ಇತರೆ ಕ್ರೀಡಾ ಪಟುಗಳು ಹೊಸ ಎತ್ತರ ಏರಲು ಸಹಾಯ ಮಾಡುತ್ತೇವೆ. ಅವರಲ್ಲಿ ಹುರುಪನ್ನು ತುಂಬುತ್ತೇವೆ.
ಈಗ ನನ್ನೀ ಬರಹವನ್ನ ಕಂಡು ಆಕ್ರೋಶ ತೋರುವ ಜನರಿಗೆ ನಾವು ಇತರೆ ಕ್ರೀಡೆಗಳ ಜನರನ್ನು ನಡೆಸಿಕೊಂಡ ಪರಿಯನ್ನು ಕೊಂಚ ಪರಿಚಯ ಮಾಡಿಸೋಣ.
ನಮ್ಮ ಕ್ರಿಕೆಟ್ ಪಟುಗಳು ಹೋಗುವೆಡೆಯೆಲ್ಲಾ ಬಿಗಿಯಾದ ಬಂದೋಬಸ್ತ್ ಏನು, ಸ್ವಯಂಚಾಲಿತ ಬಂದೂಕುಧಾರಿಗಳೇನು, ಅವರ ಹಸ್ತಾಕ್ಷರಕ್ಕಾಗಿ ಮುಗಿ ಬೀಳುವ ಯುವಕ ಯುವತಿಯರೆನು, ಯಾವ ಜನ್ಮದಲ್ಲಿ ಇಷ್ಟೊಂದು ಪುಣ್ಯ ಮಾಡಿದ್ದರೋ ನಮ್ಮ ಕ್ರಿಕೆಟ್ ಪಟುಗಳು. ಹೋಲಿಸಿ ನೋಡಿ ಈ ಸಿಕ್ಸರ್ ಬಾರಿಸುವ, ದೇಶ ಸೋತರೂ ಸೆಂಚುರಿ ಖಾತ್ರಿಯಾಗಿಸುವ ತಾರೆಯರನ್ನು ಮತ್ತು ಬೆವರು ಸುರಿಸಿ ಇತರೆ ಕ್ರೀಡೆಗಳನ್ನಾಡುವ ತಿರುಕರನ್ನು. ಭಾರತೀಯ ಹಾಕಿ ಆಟಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾದ ದಯನೀಯ ಪರಿಸ್ಥಿತಿ. what? hunger strike? ಹೌದು, ಉಪವಾಸ ಬಿದ್ದು ಪ್ರತಿಭಟನೆ. ರಾಷ್ಟ್ರೀಯ ಕ್ರೀಡೆ ಹಾಕಿ ಆಟಗಾರರ ದುಃಸ್ಥಿತಿ. ಹಾಕಿ ಕೋಚ್ ಜೋಕಿಂ ಕರ್ವಾಲೋ ಹಾಕಿ ಆಟಗಾರರನ್ನು ನಡೆಸಿ ಕೊಳ್ಳುವ ರೀತಿ ಕಂಡು ಉರಿದು ಬಿದ್ದು ಏಕೆ ಹಾಕಿ ಆಟಗಾರರನ್ನು ಅನಾಥರಂತೆ ನೋಡುತ್ತೀರಾ ಮತ್ತು ರಾಜಕಾರಣಿಗಳೇಕೆ ಹಾಕಿ ಬಗ್ಗೆ ಅಸಡ್ಡೆ ತೋರುತ್ತಾರೆ ಎಂದು ಗುಡುಗಿದ್ದರು. ಆದರೆ ಅವರ ಹತಾಶ ಗುಡುಗನ್ನು ನಮ್ಮ ತೆಂಡುಲ್ಕರ ನ ಅಮೋಘ ಸಿಕ್ಸರ್ ಮೈದಾನದ ಹೊರಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತೇ ವಿನಃ ಬೇರೇನೂ ಪ್ರಯೋಜನವಾಗಲಿಲ್ಲ.
ಕ್ರಿಕೆಟಿಗರನ್ನು ಸನ್ಮಾನಿಸಲು ರಾಜ್ಯ ಸರಕಾರಗಳ ಮಧ್ಯೆ ಪೈಪೋಟಿ ನೋಡಿದರೆ ಹೊಟ್ಟೆ ತೊಳೆಸುತದೆ. ಎಲ್ಲಾ ಕ್ರೀಡಾಪಟುಗಳೂ ನಮ್ಮ ಮಕ್ಕಳೇ ಅಲ್ಲವೇ? ಇದ್ಯಾವ ತಾರತಮ್ಯವೋ ನಾ ಕಾಣೆ. ಕ್ರಿಕೆಟಿಗರಲ್ಲದ ಕ್ರೀಡಾಪಟುಗಳಿಗೆ ಈ ರೀತಿಯ ಯಾತನಾಮಯ ಉಪಚಾರವನ್ನು ಕಂಡ ಯಾವ ತಾಯಿ ತನ್ನ ಮಗ ಧ್ಯಾನ್ ಚಂದ್ ಅಥವಾ ಮೊಹಮ್ಮದ್ ಶಾಹಿದ್ ರಂತೆ ಹಾಕಿ ಸ್ಟಿಕ್ ಹಿಡಿದು ಡ್ರಿಬ್ಲ್ ಮಾಡಿ ಎದುರಾಳಿ ಗೆ ಚಳ್ಳೆ ಹಣ್ಣು ತಿನ್ನಿಸಲು ಉತ್ತೇಜಿಸುವಳು? ಅಥವಾ ಹಾರುವ ಸಿಖ್ ಎಂದೇ ಪ್ರಖ್ಯಾತನಾದ ಜೀವ್ ಮಿಲ್ಖಾ ಸಿಂಗರಂತೆ ಚಿಗರೆಯಂತೆ ಓಡಿ ಪದಕ ತರುವ ಕಾತುರತೆಯನ್ನು ಯಾವ ಪಿತಾಮಹ ತೋರಿಸಿಯಾನು? ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆ ಆರಿಸಿಕೊಂಡು ಹೊಟ್ಟೆಗೂ ಇಲ್ಲದೆ ಬವಣೆ ಪಡುವ ಮಕ್ಕಳ ಕಂಡು ಯಾವ ಪೋಷಕರಿಗೆ ತಾನೇ ಸಹಿಸಲು ಸಾಧ್ಯ? ಕ್ರಿಕೆಟ್ ನಮ್ಮ ಸಮಾಜವನ್ನೇ ಕೆಡಿಸುತ್ತದೆ ಎಂದರೂ ತಪ್ಪಿಲ್ಲ. ಜನರ ಹುಚ್ಚು ಪ್ರೋತ್ಸಾಹ, ಸರಕಾರಗಳ ಅತೀವ ಬೆಂಬಲ ಕ್ರಿಕೆಟಿಗರು ಕ್ರೀಡಾ ಮನೋಭಾವವನ್ನೇ ಮರೆತು ಹೇಗಾದರೂ ಗೆಲ್ಲಲು ಪ್ರಯತ್ನಿಸುತ್ತಾರೆ. ಬೌಲರ್ ನ ಅಪ್ಪೀಲ್ ಗೆ ಅಂಪೈರ್ ಸೊಪ್ಪು ಹಾಕದೆ ಇದ್ದಾಗ ಅವನು ಉದುರಿಸುವ ಬೈಗಳನ್ನು ಅವನ ತುಟಿಗಳ ಚಲನದಿಂದಲೇ ಅರಿಯಬಹುದು. ಇದನ್ನು ನೋಡಿದ ನಮ್ಮ ಕಿಣ್ಣರು ಅದೇನಪ್ಪಾ XYZ ಹೇಳುತ್ತಿರುವುದು ಎಂದು ಕೇಳಿದರೆ ಆಂಗ್ಲ ಭಾಷೆಯ f**k ಪದ ಕಣಪ್ಪಾ ನಿನ್ನ ಆರಾಧ್ಯ ದೈವ ಉಲಿದಿದ್ದು ಎಂದು ಹೇಳಲು ನಮಗೆ ಸಾಧ್ಯವೇ?
ಕಾಳಧಂಧೆ ಮಾಡುವವರ ಸ್ವರ್ಗವಾಗಿ ಹೋಗಿದೆ ಕ್ರಿಕೆಟ್ ಮೈದಾನ. ಮೋದಿ ಹಗರಣ ಏನೇನೆಲ್ಲಾ ಬಯಲು ಮಾಡಿತು ನೋಡಿ. ಇದೇಕೆ ಸಂಭವಿಸಿತು? ದುರುಳರಿಗೆ ತೋರಿತು ಕ್ರಿಕೆಟ್ ತಮ್ಮ ಕಾಳ ಧನವನ್ನು ಶ್ವೇತ ವಾಗಿಸಲು ಸಿಕ್ಕ ಮಾಂತ್ರಿಕ ಕ್ರೀಡೆ ಎಂದು. ಚೆನ್ನಾಗಿಯೇ ಪೋಷಿಸಿದರು ನಮ್ಮ ಮಾಜೀ ಒಡೆಯರ ಕ್ರೀಡೆಯನ್ನು. ಈಗ ಒಡೆಯಿತು ಮಡಿಕೆ ನೋಡಿ. ಕ್ರಿಕೆಟ್ ಎಂದರೆ ಜಾಹೀರಾತುಗಳು ಮುಂಗಾರು ಮಳೆಯಂತೆ. ಬೇರೆ ಕ್ರೀಡೆಗಳಿಗೆ endorsement ಇಲ್ಲ. ಅಪ್ಪಿ ತಪ್ಪಿ ಸಹಾಯ ಕೇಳಿದಿರೋ, ಕ್ಷಮಿಸಿ ನಮ್ಮ ಈ ಬಾರಿಯ ಬಜೆಟ್ ನಲ್ಲಿ ಇಲ್ಲ, ಭಿಕ್ಷೆ ಬೇಡುವವನಿಗೆ ಮುಂದೆ ಹೋಗಪ್ಪಾ ಎಂದು ತಾತ್ಸಾರದಿಂದ ಹೇಳುವಂತೆ ಸಾಗ ಹಾಕುತ್ತಾರೆ.
ಆಧುನಿಕ ಬದುಕಿನ ಹಲವು ವೈಫಲ್ಯಗಳನ್ನು ಮರೆಸಲು ನಾವು ಕ್ರಿಕೆಟ್ಟಿನ ಮೊರೆ ಹೋದದ್ದು ಸಾಕು. ಕ್ರಿಕೆಟ್ ನಮಗೆ ಒಂದು ರೀತಿಯ “ಮಾರಿಹ್ವಾನಾ” (marijuana). ಇದುವರೆಗೆ ಈ ಕ್ರೀಡೆ ನಮ್ಮ ego ಕಾಪಾಡಿಕೊಂಡು ಬರಲು, ಮತ್ತು ಒಂದು ರೀತಿಯ ದುರಹಂಕಾರ ಮನೆ ಮಾಡುವಂತೆ ಮಾಡಿತಲ್ಲ. ಅದಕ್ಕೆ ಒಂದು ದೊಡ್ಡ ಧನ್ಯವಾದ. ಈಗ ಅದಕ್ಕೊಂದು epitaph ಬರೆಯೋಣ. ಕ್ರಿಕೆಟ್ಟಿಗೊಂದು ಚೆಂದದ ಗೋರಿ ಬರಹ; “ಇಗೋ ಇಲ್ಲಿ ಮಲಗಿದ್ದಾನೆ, ಆವೇಶದ ಆಟದ ಮಧ್ಯೆಯೂ ಪಾನೀಯ, ಊಟ, ಚಹಾ ಸೇವಿಸುತ್ತಾ, ನಮ್ಮ ಮಹನೀಯರ ಕಳ್ಳ ಧಂಧೆಗೆ ಮಾನ್ಯತೆ ತಂದು, ನಮ್ಮ ಇತರೆ ಕ್ರೀಡೆಗಳನ್ನು ಕೊಂದು ಹಾಕಿದ ಕ್ರಿಕೆಟ್ ಎಂಬ ಬಿಳಿ ಭೂತ”
ಕ್ರಿಕೆಟ್ ನಮ್ಮನ್ನು ಇದುವರೆಗೂ ಕುಣಿಸಿದ್ದು ಸಾಕು. ಇನ್ನಾದರೂ ಕಬಡ್ಡಿ, ಖೋ ಖೋ ರಾರಾಜಿಸಲಿ, ಬುಗುರಿ, ಗಾಳಿ ಪಟ ಮತ್ತೊಮ್ಮೆ ನಮ್ಮೆಡೆ ಬಾಳಲು ಬರಲಿ. ಇನ್ನೂ ಇಂಥ ನೂರಾರು ಕ್ರೀಡೆಗಳಿವೆ ಎಂದು ನಮ್ಮ ಮಕ್ಕಳಿಗೆ ತಿಳಿಯಲಿ. ಕ್ರೀಡೆಯೊಂದಿಗೆ ಸಂಸ್ಕಾರವನ್ನೂ ನಮ್ಮ ಮಕ್ಕಳು ಮರಳಿ ಕಂಡುಕೊಳ್ಳಲಿ.