ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?

ನಾಳೆ ಸೋಮವಾರ ಹುಟ್ಟಲಿರುವ ಮಗು ಪ್ರಪಂಚದ ೭೦೦ ನೇ ಕೋಟಿಯದಂತೆ. ೧೨ ವರ್ಷಗಳ ಹಿಂದೆ ೬೦೦ ಕೋಟಿಯಿದ್ದದ್ದು ಈಗ ೭೦೦ ಕೋಟಿಗೆ ಭಡ್ತಿ. ಈ ವರ್ಷ ಹುಟ್ಟಲಿದ್ದ ಏಳು ಕೋಟಿ ಎಂಭತ್ತು ಲಕ್ಷ ಮಕ್ಕಳಲ್ಲಿ ಸೋಮವಾರದಂದು ಹುಟ್ಟಲಿರುವ ಮಗು ೭೦೦ ಕೋಟಿಯದು. ಭರ್ತಿ ಏಳು ಬಿಲ್ಲಿಯನ್. ವಿರಾಮ ಖುರ್ಚಿ ಪಂಡಿತರಿಗೆ ಈ ಸುದ್ದಿ ಒಂದು ಸುಗ್ಗಿ. ತಮಟೆ ಬಾರಿಸಲು ಆರಂಭಿಸುತ್ತಾರೆ ಜನಸಂಖ್ಯೆಯ ವಿಪರೀತ ವೃದ್ಧಿ ಮತ್ತು ಅದು ತರಬಹುದಾದ ಆಪತ್ತುಗಳ, ಅನಾಹುತಗಳ ವರ್ಣನೆಯೊಂದಿಗೆ.     

ಜನಸಂಖ್ಯೆ ತಡೆಯಲು ಇರುವ ನೂರ ಒಂದು ಅಥವಾ ಸಾವಿರದ ಒಂದು ಉಪಾಯಗಳ ಜೊತೆ ಮತ್ತೊಂದು ಉಪಾಯ ಈಗ ಸೇರಿಕೊಂಡಿದೆ. ಮಹಿಳೆಯರಿಗೆ ಸಂತಾನೋತ್ಪತ್ತಿ ಫ್ಯಾಕ್ಟರಿಯ ಉಸ್ತುವಾರಿ ವಹಿಸಿದರೆ ಜನಸಂಖ್ಯೆ ತಗ್ಗ ಬಹುದಂತೆ. ದೇವರೇ ಬಲ್ಲ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಧ್ವನಿ ಜೋರಾದಾಗ ಸಂತಾನೋತ್ಪತ್ತಿ ತಂತಾನೇ ನಿಧಾನ ಆಗಬಹುದು ಅನ್ನೋ ಆಶಯ. ಜನಸಂಖ್ಯೆ ಏರಿಕೆ ಈಗ ಇರುವ ಸಂಪನ್ಮೂಲಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಂಡಿತರ ಒಂದು ಗುಂಪು ಹೇಳುತ್ತಿದ್ದರೆ ಮತ್ತೊಂದು ಗುಂಪಿಗೆ ಈ ಥಿಯರಿ ನಥಿಂಗ್ ಬಟ್ ಟ್ರಾಶ್. ಯಾರನ್ನು ನಂಬುವುದು?

 ಕ್ಷಿಪ್ರ ಗತಿಯಲ್ಲಿ ಮುಪ್ಪಾಗುತ್ತಿರುವ ಜಪಾನ್

ಒಂದು ಕಡೆ ಏರುತ್ತಿರುವ ಜನಸಂಖ್ಯೆ ವಿಶೇಷಜ್ಞರ ಆತಂಕವನ್ನು ಹೆಚ್ಚಿಸುತ್ತಿದ್ದರೆ ಮತ್ತೊಂದು ಕಡೆ ತಮ್ಮ ದೇಶದ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಡಿಸ್ಕೌಂಟು, ಅದರ ಜೊತೆ ಟೈಮ್ ಆಫು ಮುಂತಾದುವುಗಳನ್ನು ಯುವಜನರ ಮುಂದೆ ಇಡುತ್ತಿರುವ ಬೆಳವಣಿಗೆ. ಈ ಬೆಳವಣಿಗೆ ಎರಡನೇ ವಿಶ್ವ ಮಹಾಯುದ್ಧದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾದರೂ ಪವಾಡಸದೃಶವಾಗಿ ಶ್ರೀಮಂತಿಕೆಯಿಂದ ಕಂಗೊಳಿಸಿದ ಜಪಾನ್ ದೇಶದ್ದು. time off ಏಕೆಂದರೆ ಮಕ್ಕಳನ್ನು ಹುಟ್ಟಿಸಲು, ದೊಡ್ಡ ಪರಿವಾರಕ್ಕಾಗಿ ಅಂಗಡಿ ಮುಂಗಟ್ಟು ಗಳು ರಿಯಾಯಿತಿಯನ್ನು ಘೋಷಿಸುತ್ತಿವೆ ಜಪಾನ್ ದೇಶದಲ್ಲಿ. ಹುಟ್ಟುವ ಪ್ರತೀ ಮಗುವಿನ ಮೇಲೂ ಹಣಕಾಸಿನ ಸಹಾಯ ಕೊಡ ಮಾಡುತ್ತಿದೆ ಅಲ್ಲಿನ ಸರಕಾರ. ಈ ಕ್ರಮಗಳ ಮೂಲಕ ಏನಾದರೂ ಮಾಡಿ, ಹೇಗಾದರೂ ಮಾಡಿ, ಜನಸಂಖ್ಯೆ ಹೆಚ್ಚಿಸಿರಯ್ಯ ಎಂದು ಅಲ್ಲಿನ ಸರಕಾರದ ವಿಜ್ಞಾಪನೆ. ನಮ್ಮ ದೇಶ one is fun ಎಂದು ಊಳಿಡುತ್ತಿದ್ದರೆ, ಜಪನೀಯರ ಆಕ್ರಂದನ more please ಎಂದು.  ಪ್ರಪಂಚ ವೈರುಧ್ಯಗಳ ಸಂತೆ, ಅಲ್ಲವೇ?

ಬಹುಪಾಲು ಜಪನೀಯರಿಗೆ ಸಂತಾನ ವೃದ್ಧಿ ಅನ್ನೋದು ‘to do list’ ನ ಕಟ್ಟಕಡೆಯ ಎಂಟ್ರಿ. ಇದನ್ನು ಟಾಪ್ ಪ್ರಯಾರಿಟಿ ಮಾಡಲು ಸರಕಾರದ ಸರ್ಕಸ್ಸು. ಯುವಜನರ ಒತ್ತು ಪ್ರೋಗ್ರೆಸ್ ಕಡೆ, ಪ್ರೊಕ್ರಿಯೇಶನ್ ಕಡೆ ಅಲ್ಲ. ಏಕೆಂದರೆ ಅಲ್ಲಿ ವಿವಾಹ ದುಬಾರಿ. ಪ್ರತೀ ವಿವಾಹಕ್ಕೆ ಸುಮಾರು ೨೦ ಲಕ್ಷ ರೂಪಾಯಿ ಖರ್ಚು. ಮದುವೆಯಾದ ಮೇಲೆ ಮಗು ಹುಟ್ಟಿದರೆ ಮಗುವಿನ ತಾಯಿಗೆ ಒಳ್ಳೆಯ ವರಮಾನ ಕೊಡುವ ಕೆಲಸ ಸಿಗೋದು ಕಷ್ಟ. ಅಮೇರಿಕಾ ಅಥವಾ ಅಇರೋಪ್ಯ ದೇಶಗಳ ಹಾಗೆ  ಮದುವೆಯಾಗದೆ ಸಂತಾನೋತ್ಪತ್ತಿ ಜಪಾನಿನಲ್ಲಿ ವಿರಳ.  ಅಷ್ಟು ಮಾತ್ರವಲ್ಲ ಜಪಾನಿನಲ್ಲಿ ದೀರ್ಘಾಯುಷಿಗಳು ಹೆಚ್ಚು. ಮೇಲಿನ ಕಾರಣಗಳನ್ನು ಕೂಡಿಸಿ ನೋಡಿದಾಗ ಜಪಾನಿನಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ಅತಿ ಕಡಿಮೆ.     

ಜನಸಂಖ್ಯೆ ವೃದ್ಧಿಗೆ ಒತ್ತು ಕೊಡುತ್ತಿರುವ ಮತ್ತೊಂದು ದೇಶ ಸ್ಪೇನ್. ಸ್ಪೇನ್ ದೇಶದಲ್ಲಿ ಹುಟ್ಟುವ ಪ್ರತೀ ಮಗುವಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಸರಕಾರ ನೀಡುತ್ತದೆ.      

ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು

ತಟ್ಟು ಚಪ್ಪಾಳೆ ಪುಟ್ಟ ಮಗು, ಇಕೋ ಕೈ, ತಕೋ ಕೈ, ತಟ್ಟು ಚಪ್ಪಾಳೆ ಪುಟ್ಟ ಮಗು… ಈ ಕವಿತೆಯನ್ನು ೭೦೦ ನೇ ಕೋಟಿ ಮಗುವಿಗೆ ಹಾಡಿ ಕೇಳಿಸಲು ಸಲ್ಮಾನ್ ರುಶ್ಡಿ ತಯಾರಲ್ಲ. ೭೦೦ ನೇ ಕೋಟಿ ಮಗುವಿಗೆ ನೀವು ಕೊಡುವ ಸಂದೇಶವೇನು ಎಂದು ಕೇಳಿದಾಗ ಬುಕರ್ ಪ್ರಶಸ್ತಿ ವಿಜೇತ, ವಿವಾದಾಸ್ಪದ ಲೇಖಕ ಹೇಳಿದ್ದು “(ಧರೆಯ ಮೇಲೆ) ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು” ಎಂದು. imagine no heaven.

ಸಂಪನ್ಮೂಲಗಳನ್ನು ನುಂಗಲೆಂದೇ ಹುಟ್ಟುತ್ತವೆ ಮಕ್ಕಳು ಎಂದು ನಂಬುವವರು ಇದಕ್ಕಿಂತ ಒಳ್ಳೆಯ ಮಾತನ್ನು ಆಡಲಾರರು. ಸುಮಾರು ಐದು ದಶಕಗಳಿಂದಲೂ ನಾವು ಕೇಳುತ್ತಾ ಬಂದಿದ್ದು, ಜನಸಂಖ್ಯೆ ಏರುತ್ತಿದೆ, ವಾತಾವರಣ ಬದಲಾಗುತ್ತದೆ, ತಿನ್ನಲು ಏನೂ ಇರುವುದಿಲ್ಲ, ಹಸಿವಿನಿಂದ ಜನ ಸಾಯಲಿದ್ದಾರೆ, ಬರ ಬಂದೆರಗಲಿದೆ. ಏರುತ್ತಿರುವ ಜನಸಂಖ್ಯೆ ಕಾರಣ ನಮ್ಮ ಗ್ರಹ ಇಕ್ಕಟ್ಟಾಗುತ್ತಿದೆ, ಹಾಗೇ ಹೀಗೆ…ಆದರೆ ಅಂಥ ಎಚ್ಚರಿಕೆಗಳು, ‘caveat emptor’ ಗಳು  ಪ್ರಕಟವಾದ ಕಾಗದಗಳ ಜೊತೆ ರದ್ದಿ ಸೇರಿದವೆ ವಿನಃ ಯಾವುದೇ ಕೇಡುಗಾಲ ಬಂದೆರಗಲಿಲ್ಲ.   

ಈ ಲೇಖನದ ಕರ್ತೃವಿನ ಸಂದೇಶ

ಕಂದಾ ಸುಸ್ವಾಗತ, ನಮ್ಮ ಭವ್ಯ ಧರೆಗೆ. ಶತಮಾನಗಳಿಂದ ಪೂರ್ವದಿಂದ ಹುಟ್ಟುತ್ತಿರುವ ಸೂರ್ಯ ಮತ್ತು ಪಶ್ಚಿಮದಲ್ಲಿ ಮುಳುಗುವ ಸೂರ್ಯನ ನಡಿಗೆಯ ನಿಯಮವನ್ನು ನಾವು ಬದಲಿಸಲಿಲ್ಲ. ಉಸಿರಾಡುವ ಗಾಳಿ ಎಂದಿನ ಹಾಗೇ ಈಗಲೂ ತೆರಿಗೆಯಿಂದ ಮುಕ್ತ. ಹೌದು ನಿನ್ನಿಂದ ಎರವಲು ಪಡೆದಿದ್ದ ಭೂಮಿಯ ಮೇಲೆ ನಮ್ಮ ಅಹಂ ಮತ್ತು ಸ್ವಾರ್ಥದ ಕಾರಣ ಸಾಕಷ್ಟು ಅನಾಚಾರ ಎಸಗಿದ್ದೇವೆ. ನಮ್ಮ ಮಣ್ಣನ್ನು ಮೊನ್ಸಾಂಟೊ ಕಂಪೆನಿಗೆ ಗುತ್ತಿಗೆ ಕೊಟ್ಟು ಉಸಿರುಗಟ್ಟಿಸಿದ್ದೇವೆ. ಕಾಯಿ ಹಣ್ಣಾಗಲು ನಿಸರ್ಗ ನಿಯಮ ತೆಗೆದುಕೂಳ್ಳುವ ಸಮಯಕ್ಕೆ ಕಾಯುವ ವ್ಯವಧಾನ ನಮ್ಮಲ್ಲಿಲ್ಲ, ಅದಕ್ಕೆ. ಆದರೂ, ಇವೆಲ್ಲದರ ನಡುವೆಯೂ, ಕೆಲವೊಂದು ಒಳ್ಳೆಯ ಅವಿಷ್ಕಾರಗಳನ್ನೂ ನಿನಗಾಗಿ ತಯಾರಿಸಿ ಇಟ್ಟಿದ್ದೇವೆ. ನೀನು ಜನರೊಂದಿಗೆ ಬೇರೆಯದೇ, ಯಾವುದೇ ಸಭೆ ಸಮಾರಂಭ ಗಳಿಗೂ ಹೋಗುವ ತಾಪತ್ರಯವಿಲ್ಲದೆ ಮನೆಯಲ್ಲೇ ಕೂತು ಜೇಡನ ಬಲೆಯೊಳಕ್ಕೆ ಅವಿತುಕೊಂಡು ಮೊಬೈಲ್, ಫೇಸ್ ಬುಕ್, ಟ್ವಿಟ್ಟರ್, ಎಸ್ಸೆಮ್ಮೆಸ್, ಐ-ಪ್ಯಾಡ್, ಐ-ಪಾಡ್, ಇ-ಮೇಲ್ ಮುಂತಾದ ಸಾಮಾಜಿಕ ತಾಣ, ಅನುಕೂಲಗಳ ಮೂಲಕ ಜನರೊಂದಿಗೆ ನೇರವಾಗಿ ಬೆರೆಯದೆ ವ್ಯವಹರಿಸಲು ಅನುಕೂಲ ಮಾಡಿದ್ದೇವೆ. ಜನರೊಂದಿಗೆ ಬೆರೆತಾಗ ತಾನೇ ತಾಪತ್ರಯ? ಇಂಥ ಸುಂದರ ಪ್ರಪಂಚಕ್ಕೆ ನಿನಗಿದೋ ನನ್ನ ಸ್ವಾಗತ. ನೆನಪಿರಲಿ, ವಿಶ್ವ ಸಮಾನ ಅವಕಾಶ ನೀಡುವ fair ground ಅಂತೂ ಅಲ್ಲ, ಇದು ದಗಲಬಾಜಿಗಳ, ಸುಳ್ಳರ, ಕಪಟ ಜನರ, ಪ್ರತೀ ಕಾರ್ಯಕ್ಕೂ ಕಮಿಷನ್ ವಾಸನೆಯ ಬೆನ್ನು ಹತ್ತಿ ಹೋಗುವ ಅತಿ ದೊಡ್ಡ fair (ಜಾತ್ರೆ). ಲಂಚಗುಳಿತನದ ಒಂದು ಸುಂದರ eco system ಅನ್ನು  ಹುಟ್ಟುಹಾಕಿದ್ದೇವೆ.  ಲಕ್ಷಾಂತರ ವರ್ಷಗಳ ಕಾಲ ನಿರಂತರ ಪ್ರಯಾಣ ಮಾಡಿದ ವೀರ್ಯದ ಫಲ ನೀನಾಗಿರೋದರಿಂದ ಈ ಪ್ರಪಂಚದಲ್ಲಿ ಬಾಳಿಬದುಕಲು ನಿನಗೆ ಕಷ್ಟವೇನೂ ಆಗಲಿಕ್ಕಿಲ್ಲ, you will effortlessly adapt.     

ಬೀಳ್ಕೊಡುವ ಮೊದಲು ಒಂದು ಮಾತು ನೆನಪಿರಲಿ…..ಯಾರು ತಾವು ಕಾಣುವ ಸುಂದರ ಕನಸನ್ನು ನಂಬುವರೋ ಅವರಿಗೆ ಮಾತ್ರ ಭವಿಷ್ಯ ಸೇರಿದ್ದು; “ಸ್ವರ್ಗ ಕಲ್ಪಿಸಿಕೊಳ್ಳದಿರು” ಎಂದು ಹೇಳುವ ಮತಿಹೀನರಿಗಂತೂ ಖಂಡಿತಾ ಅಲ್ಲ. ಧುಮುಕು ಧರೆಗೆ ಧೈರ್ಯವಾಗಿ.   

 ಚಿತ್ರ ಸೌಜನ್ಯ: ಇಂಗ್ಲೆಂಡಿನ “ಗಾರ್ಡಿಯನ್” ದಿನಪತ್ರಿಕೆ.

“ಪೆರು” ವಿಗೆ ಈ ವರುಷದ ನೊಬೆಲ್ ಸಾಹಿತ್ಯ ಪ್ರಶಸ್ತಿ



 

ಸಾಹಿತ್ಯದಲ್ಲಿ ಈ ವರ್ಷ ನೊಬೆಲ್ ಗಿಟ್ಟಿಸಿದ ಲ್ಯಾಟಿನ್ ಅಮೇರಿಕೆಯ “ಪೆರು” ದೇಶದ ಮಾರಿಯೋ ವರ್ಗಾಸ್ ಲೌಸ  ಕಾಗದ ಪುಸ್ತಕ ಪ್ರಿಯರು. “ಇ” ಪುಸ್ತಕಗಳು ಮತ್ತು ಇವನ್ನ ಓದಲು ಅನುಕೂಲ ಮಾಡಿಕೊಡುವ ಇಲೆಕ್ಟ್ರೋನಿಕ್ ಗೆಜೀಟ್ ಗಳು ಎಬ್ಬಿಸುತ್ತಿರುವ ಬಿರುಗಾಳಿಗೆ ಶತಮಾನಗಳ ನಮ್ಮ ಮಿತ್ರ “ಬಡಪಾಯಿ ಕಾಗದ” ತೂರಿ ಹೋಗುವುದು ಅವರಿಗೆ ಇಷ್ಟವಲ್ಲ.

ಮಾರಿಯೋ ವರ್ಗಾಸ್ ಅವರ ಪ್ರಥಮ ಪುಸ್ತಕ ೧೯೬೪ ರಲ್ಲಿ ಪ್ರಕಟ. ಬರಹದ ೪೬ ವರುಷಗಳ ಕಾಲದಲ್ಲಿ ವಿಶ್ವದ ಅತ್ಯುನ್ನತ ಪ್ರಶಸ್ತಿಗೆ ಭಾಜನರು ಈ ಲೇಖಕರು. ಶುಭ ಮುಂಜಾನೆ ಎನ್ನುವ ಸಂದೇಶದ ಬೆನ್ನಲ್ಲೇ ತಮಗೆ ನೊಬೆಲ್ ಸಿಕ್ಕಿತು ಎನ್ನುವ ಸುದ್ದಿಯೂ ಬಂದಿತು. ಇವರ ಆಸಕ್ತಿ ಬರೀ ಸಾಹಿತ್ಯ ಕೃಷಿಗೆ ಮಾತ್ರ ಸೀಮಿತವಲ್ಲ, ಅನ್ಯಾಯದ ವಿರುದ್ಧದ ಜನರ ಹೋರಾಟದಲ್ಲೂ ಭಾಗಿಯಾಗಿ (ನಮ್ಮ ಅರುಂಧತಿ ರಾಯ್ ರೀತಿ) ಹಲವು ಸಂಕಷ್ಟಗಳನ್ನು ಅನುಭವಿಸಿದ ಸಾಮಾಜಿಕ ಲೇಖಕ. ತನ್ನ ಹುಟ್ಟೂರಿನಲ್ಲಿ ಆಳುವವರ ದಬ್ಬಾಳಿಕೆ ಅತಿಯಾಗಿ ಅಲ್ಲಿನ ಸೇನಾಧಿಕಾರಿ ಮಾರಿಯೋ ಲೌಸ ಅವರ ಪೌರತ್ವ ಪೆರುವಿನ “ಭೌಗೋಳಿಕ ಆಕಸ್ಮಿಕ” (geographical accident) ಆಗಿದ್ದು ದೇಶದ ಪೌರತ್ವವನ್ನು ರದ್ದು ಗೊಳಿಸ ಬೇಕೆಂದು ಸರಕಾರಕ್ಕೆ ಶಿಫಾರಸ್ಸು ಮಾಡಿದಾಗ ಅಪಾಯ ಮನಗಂಡ ಈ ಲೇಖಕ ಸ್ಪೇನ್ ದೇಶದ ಪೌರತ್ವ ಪಡೆದು ಅದರ ಜೊತೆಗೆ ಪೆರುವಿನ ಪುರತ್ವವನ್ನೂ ಉಳಿಸಿಕೊಂಡರು. ಪ್ರಬಂಧಗಳು, ನಾಟಕ, ಸಾಹಿತ್ಯ ಮತ್ತು ರಾಜಕೀಯ ಹೊರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಈ ಲೇಖಕ ಅಮೆರಿಕೆಯ ಮತ್ತು ಅಇರೋಪ್ಯ ದೇಶಗಳ ವಿಶ್ವ ವಿದ್ಯಾಲಯಗಳಿಗೆ ಅತಿಥಿ ಪ್ರಾಧ್ಯಾಪಕರಾಗಿ, ಭಾಷಣಕಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ರೀತಿಯ ಹಲವು ದೇಶಗಳ ಬಿಡುವಿಲ್ಲದ  ಪರ್ಯಟನದಿಂದ ಬರವಣಿಗೆಗೆ ತೊಡಕಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ  “ವಾಸ್ತವವಾಗಿ ವಿವಿಧ ಭಾಷೆ ಗಳೊಂದಿಗಿನ ತಮ್ಮ ಬದುಕು ತಮ್ಮ ಅರಿವನ್ನು ಹೆಚ್ಚಿಸಿದ್ದು, ಒಂದೇ ಭಾವನೆಯನ್ನು ಹೇಗೆ ವಿವಿಧ ಭಾಷೆಗಳು ವ್ಯಕ್ತಪಡಿಸುತ್ತವೆ ಎನ್ನುವ ಸೂಕ್ಷ್ಮತೆ ಸಹ ತನಗೆ ಕಾಣಲು ಸಿಗುತ್ತದೆ, ಹಾಗೆಯೇ ಮಾತೃ ಭಾಷೆಯೊಂದಿಗಿನ ನನ್ನ ನಂಟು ಇತರೆ ಭಾಷೆ ಗಳೊಂದಿಗಿನ ಒಡನಾಟದಿಂದ ಇನ್ನಷ್ಟು ಶ್ರೀಮಂತ ಗೊಂಡಿದೆ” ಎಂದು ಹೇಳಿದರು. ಸಂದರ್ಶನದ ವೇಳೆ ಹೇಳಿದ ಈ ಮಾತುಗಳು ಗಡಿಬಿಡಿಯ ಅಂತಾರಾಷ್ಟ್ರೀಯ ಬದುಕು ಈ ಲೇಖಕನ ಸಂಸ್ಕಾರವನ್ನು ಹೇಗೆ ಶ್ರೀಮಂತ ಗೊಳಿಸಿತು ಎನ್ನುವ ಸತ್ಯವನ್ನು ನಮಗೆ ತೋರಿಸುತ್ತದೆ.

ಲ್ಯಾಟಿನ್ ಅಮೆರಿಕಾದ ದೇಶಗಳು ಕಿತ್ತು ತಿನ್ನುವ ಬಡತನದೊಂದಿಗೆ ಮಾದಕ ದ್ರವ್ಯಗಳ ಮಾರಾಟ ಮತ್ತು ದಂಧೆಯನ್ನು ನಡೆಸುವ ಭೂಗತ ದೊರೆಗಳ ದಬ್ಬಾಳಿಕೆ ಯಿಂದಲೂ ತತ್ತರಿಸುತ್ತಿದೆ. ಈ ಹಾವಳಿಯನ್ನ ತಡೆಯಲು ಸರಕಾರಗಳು ಕೋಟ್ಯಂತರ ಡಾಲರುಗಳನ್ನು ಇವರ ವಿರುದ್ಧ ದ ಹೋರಾಟಕ್ಕೆ ವ್ಯಯಿಸಿದರೂ ಆ ಹಣ ಲಂಚಕೋರ ಸೇನಾಧಿಕಾರಿಗಳ, ರಾಜಕಾರಣಿಗಳ ಪಾಲಾಗುವುದನ್ನು ಕಂಡ ಈ ಲೇಖಕ ಸರಕಾರದ ಈ ನೀತಿಯನ್ನು ವಿರೋಧಿಸಿ ಹಣವನ್ನ ಶಸ್ತ್ರಗಳನ್ನು ಖರೀದಿಸಲು ವ್ಯಯಿಸದೆ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಭಿಯಾನವನ್ನು ಆರಂಭಿಸಲು ಮತ್ತು ಮಾದಕ ದ್ರವ್ಯವ್ಯಸನಿಗಳ ಚಿಕಿತ್ಸೆಗೆ ಖರ್ಚು ಮಾಡಲು ಕರೆ ನೀಡಿದರು. ಸೇನಾಧಿಕಾರಿಗಳ ಮತ್ತು ರಾಜಕಾರಣಿಗಳ ವಿಷವರ್ತುಲ ಇವರ ಮಾತುಗಳನ್ನು ಕೇಳುವ ಗೋಜಿಗೆ ಹೋಗಲಿಲ್ಲ.

ಲೇಖಕರೂ ಸಹ ಸಾಮಾನ್ಯ ಜನರಂತೆ ಪೌರರಾಗಿದ್ದು ಜನರ ಹೋರಾಟ ಮತ್ತು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ನೈತಿಕ ಹೊಣೆ ಅವರ ಮೇಲೆ ಇರಬೇಕು ಎಂದು ನೊಬೆಲ್ ಪ್ರಶಸ್ತಿ ಪಡೆಯುವ ಮುನ್ನ ನಡೆದ ಚರ್ಚೆಯಲ್ಲಿ ಹೇಳಿದ್ದರು ಲೌಸ. ೧೯೯೦ ರಲ್ಲಿ ಆಲ್ಬರ್ಟೋ ಫುಜಿಮೋರಿ ವಿರುದ್ಧ ಸೋತ ಈ ಲೇಖಕ ಮತ್ತೆ ರಾಜಕೀಯದ ಕಡೆ ತಲೆಹಾಕದೆ ಪೂರ್ಣ ಸಮಯ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಸರ್ವಾಧಿಕಾರಿಗಳನ್ನು ಚುನಾವಣೆಯಲ್ಲಿ ಬಗ್ಗು ಬಡಿಯದಿದ್ದರೇನಂತೆ ತಮ್ಮ ಪ್ರಖರ ಬರಹವನ್ನೇ ಅಸ್ತ್ರವನ್ನಾಗಿ ಉಪಯೋಗಿಸಿ ಲೇಖನಿಯೂ ಓಟು ಗಳಷ್ಟೇ ಪರಿಣಾಮಕಾರಿ ಎಂದು ತೋರಿಸಿದರು. “ಪದಗಳೇ ಕೃತ್ಯಗಳು…. ಬರಹದ ಮೂಲಕ ಚರಿತ್ರೆಯನ್ನು ಬದಲಿಸಲು ಸಾಧ್ಯ” ಎಂದು ಬಲವಾಗಿ ನಂಬಿದವರು. ಲ್ಯಾಟಿನ್ ಅಮೆರಿಕಾದಲ್ಲಿ ಎಲ್ಲೇ ಶೋಷಣೆ ಅನ್ಯಾಯ ನಡೆದರೂ ಅಲ್ಲಿಗೆ ಧಾವಿಸುವ ಈ ಲೇಖಕ ತಾವು ಕಂಡಿದ್ದನ್ನು ಬರೆದು ನೀಚ ಕೃತ್ಯಗಳನ್ನು ಬಯಲಿಗೆಳೆಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕ್ರೌರ್ಯ ಸಹ ಇವರ ಲೇಖನಿಯ ಮೊನಚಿಗು ಸಿಕ್ಕು ಸಮಾಜದ ಕಣ್ಣು ತೆರೆಸುವಂತೆ ಮಾಡುತ್ತದೆ ಇವರ ಬರಹಗಳು. ಇಂಥದ್ದೇ ಒಂದು ಘಟನೆ ಮತ್ತೊಂದು “ಡೊಮಿನಿಕನ್ ರೆಪಬ್ಲಿಕ್”. ಅಲ್ಲಿನ ಸರ್ವಾಧಿಕಾರಿ ರಾಫೆಲ್ ಟ್ರೂಜಿಲೋ ೧೯೩೦ ರಿಂದ ೧೯೬೧ ರವರೆಗಿನ ತನ್ನ ಆಳ್ವಿಕೆಯಲ್ಲಿ ತನ್ನ ಮಗಂದಿರೊಂದಿಗೆ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯವನ್ನು ಪ್ರತಿರೋಧವಿಲ್ಲದೆ ನಡೆಸುತ್ತಿದ್ದ. ಎಷ್ಟೋ ಜನ ತಮ್ಮ ಹೆಣ್ಣು ಮಕ್ಕಳನ್ನು ಈ ಸರ್ವಾಧಿಕಾರಿ ಮತ್ತು ಮಗಂದಿ ರಿಗೆ “ಉಡುಗೊರೆ” ಯಾಗಿ ಕೊಡುತ್ತಿದ್ದರಂತೆ ಭಯ ಬಿದ್ದು. (ಉತ್ತರ ಭಾರತದ ಠಾಕೂರ ಜಮೀನ್ದಾರರಿಗೆ ಹೆದರಿ ಬಡ ರೈತರು ಬದುಕಿದಂತೆ).  ರಾಫೆಲೋ ನ ದೌರ್ಜನ್ಯವನ್ನು “the feast of the goat” ಪುಸ್ತಕದಲ್ಲಿ ಸವಿವರವಾಗಿ ವರ್ಣಿಸಿದ್ದಾರೆ ಈ ಲೇಖಕ. ಇದೇ ತೆರನಾದ ಮಹಿಳೆಯರ ಮೇಲಿನ ದೌರ್ಜನ್ಯ ಇರಾಕಿನ ಸದ್ದಾಮ್ ಹುಸೇನರ ಮಕ್ಕಳೂ ಬೀದಿಯಲ್ಲಿ ಕಂಡ ಸುಂದರ ಹೆಣ್ಣುಮಕ್ಕಳನ್ನು ಎಗರಿಸಿಕೊಂಡು ಹೋಗುತ್ತಿದ್ದರು ಎಂದು ಈ ಲೇಖಕರು ಹೇಳಿದರೂ  ( ಅಮೇರಿಕ ನಿಯಂತ್ರಿತ ಮಾಧ್ಯಮಗಳ ಅಪಪ್ರಚಾರವೂ ಆಗಿರಲಿಕ್ಕೆ ಸಾಕು ) “ಕ್ರೌರ್ಯ ಯಾವುದೇ ಸರ್ವಾಧಿಕಾರಿಗಳ ಆಡಳಿತದಲ್ಲೂ ಸಮನಾಗಿರುತ್ತದೆ” ಎನ್ನುವ ಅಭಿಪ್ರಾಯ “ಮಾರಿಯೋ ವರ್ಗಾಸ್ ಲೌಸ” ಅವರದು. ಕೊನೆಯದಾಗಿ ಸಾಹಿತ್ಯದ ಬಗ್ಗೆ ವರ್ಗಾಸ್ ಅವರ, ವಿಶೇಷವಾಗಿ ನಮಗೆ ಅನ್ವಯವಾಗುವ,   ಮುತ್ತಿನಂಥ ಮಾತುಗಳು…

“I think that literature has the important effect of creating free, independent, critical citizens who cannot be manipulated.”