ನಾವಾಡುವ ನುಡಿ …

ನಾವಾಡುವ ನುಡಿ … ಕನ್ನಡ ನುಡಿಗೆ, ಭಾಷೆಗೆ ‘ಇಗೋ’ (ಅಹಂ) ಇಲ್ಲ ಎಂದು ‘ಇಗೋ ಕನ್ನಡ’ ದಂಥ ಪುಸ್ತಕ ಓದಿದ ಯಾರಿಗೂ ಅರಿವಾಗದೇ ಇರದು. ಏಕೆಂದರೆ ಅರಬ್ಬೀ, ಪಾರ್ಸಿ, ಮರಾಠಿ ಬಾಷೆಗಳ ಪದಗಳನ್ನು ಸರಾಗವಾಗಿ ತನ್ನೊಡಲಲ್ಲಿ ಇಟ್ಟುಕೊಂಡು, ಶ್ರೀಮಂತಗೊಂಡ ಭಾಷೆ ಕನ್ನಡ. ಅದರಲ್ಲೂ ಸಂಸ್ಕೃತದ ಪ್ರಭಾವ ಸ್ವಲ್ಪ ಅಪಾರವೇ ಎನ್ನಬೇಕು; ಶೇಕಡ ೬೦ ಕ್ಕೂ ಹೆಚ್ಚು ಪದಗಳು ಸಂಸ್ಕೃತದಿಂದ ಬಂದವಂತೆ.  ಇಗೋ ಕನ್ನಡ ಪುಸ್ತಕವನ್ನು ತಿರುವಿ ಹಾಕುವಾಗ ಸಿಕ್ಕಿದ ಕೆಲವು ಸ್ವಾರಸ್ಯಕರ ಅಂಶಗಳನ್ನ ನಿಮ್ಮ ಮುಂದೆ ಇಡುವ ಬಯಕೆ.  

ಹಿರಿಯ ಮಗನನ್ನು ಜ್ಯೇಷ್ಠ ಪುತ್ರ ಎಂದು ಕರೆಯುವರು. ಸರಿ, ಮೊದಲ ಮಗನೇನೋ ಜ್ಯೇಷ್ಠ ಆಗುತ್ತಾನೆ.  ಆದರೆ ಹಿರಿಯ ಮಗಳನ್ನು “ಜ್ಯೇಷ್ಠೆ” ಎಂದು ಕರೆಯರು, ಯಾಕೆ? ಲಕ್ಷ್ಮಿಯ ಹಿರಿಯ ಅಕ್ಕನಾದ  ಜ್ಯೇಷ್ಠೆಗೆ ದುರದೃಷ್ಟದ ದೇವತೆ ಎನ್ನುತ್ತಾರಂತೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಈ ಹೆಸರಿನಿಂದ ಕರೆಯುವುದಿಲ್ಲ, ದುರದೃಷ್ಟ ವಕ್ಕರಿಸೀತೆಂದು ಹೆದರಿ. ‘ಜ್ಯೇಷ್ಠಾ’ ಎಂದರೆ ಹಿರಿಯ ಹೆಂಡತಿ, ಪ್ರಿಯೆಯಾದ ಹೆಂಡತಿ ಎನ್ನುವ ಅರ್ಥಗಳೂ ಇವೆ. ನನಗೆ ತಿಳಿದಂತೆ,  ಸಾಮಾನ್ಯವಾಗಿ ಕಿರಿಯ ಹೆಂಡತಿ ಪ್ರಿಯಳಾದವಳು, ಹಿರಿಯ ಹೆಂಡತಿಯಲ್ಲ. ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಚಿಕ್ಕವಳು ಅಂತ ಕಿರಿಯ ಹೆಂಡತಿ  ಮೇಲೆ ಪ್ರೀತಿ ಸ್ವಲ್ಪ ಹೆಚ್ಚೇ ಇರುತ್ತದೆ.  

ಶ್ರೀಮತಿ ಎಂದ ಕೂಡಲೇ ಮದುವೆಯಾದಾಕೆ ಎನ್ನುವ ಭಾವನೆ ನಮ್ಮಲ್ಲಿದೆ. ‘ಶ್ರೀಮಾನ್, ಶ್ರೀಮತಿ’ ಗಳನ್ನು ಆಂಗ್ಲ ಭಾಷೆಯ mr and mrs ನ ಸಮಾನ ರೂಪವಾಗಿ ಉಪಯೋಗಿಸುತ್ತಾರೆ.  ಶ್ರೀಮತಿ ವಿವಾಹಿತ ಮಹಿಳೆಗೆ ಅನ್ವಯ ಎನ್ನುವ ನಿಯಮವೇನೂ ಇಲ್ಲ. ಶ್ರೀಮತಿ ಎಂದರೆ, ಸಂಪತ್ತುಳ್ಳವಳು, ಬುದ್ಧಿ, ಶೋಭೆ, ಕಾಂತಿಯುಳ್ಳವಳು ಎಂದರ್ಥ. ಶ್ರೀಮತಿ ಅವಿವಾಹಿತೆ ಸಹ ಆಗಬಹುದು. ಗೌರವಾರ್ಹರಾದ ಎಲ್ಲಾ ಮಹಿಳೆಯರಿಗೂ ಇದು ಅನ್ವಯಿಸುವುದು.  ಹಾಗಾದರೆ ಆಂಗ್ಲ ಭಾಷೆಯ ‘ಮಿಸಸ್’ ಪದಕ್ಕೆ ಕನ್ನಡದ ರೂಪ ಏನು? 

ಊರು ತಲಪಿದ ಕೂಡಲೇ ಫೋನ್ ಮಾಡಿ ತಿಳಿಸು. ತಲಪು? ಅಥವಾ ‘ತಲು’ಪು? ಎರಡೂ ಸರಿಯಂತೆ, ಹಾಗಂತ ‘ಇಗೋ ಕನ್ನಡ’ ದ ಫರ್ಮಾನು. ಫರ್ಮಾನ್ ಎಂದರೆ ಆಜ್ಞೆ. ರಾಜನೊಬ್ಬ ಫರ್ಮಾನ್ ನೀಡಿದಾಗ ಅದು ರಾಜಾಜ್ಞೆ.   

‘ತಾಬಡತೋಬ’ – ಈ ಪದಕ್ಕೆ ಕನ್ನಡದ ಸಮಾನ ಪದ ತುರ್ತು. ಹೋಗೋ ಅವನಿಗೆ ತಾಬಡತೋಬ್ (ತುರ್ತಾಗಿ) ಬರೋಕ್ಕೆ ಹೇಳು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಉರ್ದು ಭಾಷಿಕರೂ, ಹುಬ್ಬಳ್ಳಿ ಧಾರವಾಡದ ಮಂದಿಯೂ ಹೀಗೆ ಹೇಳ್ತಾರಂತೆ. ನಾಲಗೆಯ ಮೇಲೆ ಅಂಕು ಡೊಂಕಾಗಿ ನಿಲ್ಲಲು ಪ್ರಯತ್ನಿಸುವ ಈ ಪದದ ಮೂಲ ‘ಮರಾಠಿ’.  

‘ತಾದಾತ್ಮ್ಯ’ ನನಗಿಷ್ಟವಾದ ಪದ. ಇದರ ಅರ್ಥ ತಲ್ಲೀನತೆ, ಮಗ್ನ. ಓದು, ಬರಹ ತಾದಾತ್ಮ್ಯ ತೆಯಿಂದ ಮಾಡಬಹುದೋ ಅಥವಾ ಈ ಪದವನ್ನು ಅರಾಧನೆಯಂಥ ಗಂಭೀರ ಕಾರ್ಯಗಳಿಗೆ ಮಾತ್ರ ಬಳಸಬೇಕೋ?

ಈ ಕ್ಷಣಕ್ಕೆ ಇಷ್ಟು ಸಾಕು….ಸಿರಿಗನ್ನಡಂ ಗೆಲ್ಗೆ.

“ಪೆರು” ವಿಗೆ ಈ ವರುಷದ ನೊಬೆಲ್ ಸಾಹಿತ್ಯ ಪ್ರಶಸ್ತಿ



 

ಸಾಹಿತ್ಯದಲ್ಲಿ ಈ ವರ್ಷ ನೊಬೆಲ್ ಗಿಟ್ಟಿಸಿದ ಲ್ಯಾಟಿನ್ ಅಮೇರಿಕೆಯ “ಪೆರು” ದೇಶದ ಮಾರಿಯೋ ವರ್ಗಾಸ್ ಲೌಸ  ಕಾಗದ ಪುಸ್ತಕ ಪ್ರಿಯರು. “ಇ” ಪುಸ್ತಕಗಳು ಮತ್ತು ಇವನ್ನ ಓದಲು ಅನುಕೂಲ ಮಾಡಿಕೊಡುವ ಇಲೆಕ್ಟ್ರೋನಿಕ್ ಗೆಜೀಟ್ ಗಳು ಎಬ್ಬಿಸುತ್ತಿರುವ ಬಿರುಗಾಳಿಗೆ ಶತಮಾನಗಳ ನಮ್ಮ ಮಿತ್ರ “ಬಡಪಾಯಿ ಕಾಗದ” ತೂರಿ ಹೋಗುವುದು ಅವರಿಗೆ ಇಷ್ಟವಲ್ಲ.

ಮಾರಿಯೋ ವರ್ಗಾಸ್ ಅವರ ಪ್ರಥಮ ಪುಸ್ತಕ ೧೯೬೪ ರಲ್ಲಿ ಪ್ರಕಟ. ಬರಹದ ೪೬ ವರುಷಗಳ ಕಾಲದಲ್ಲಿ ವಿಶ್ವದ ಅತ್ಯುನ್ನತ ಪ್ರಶಸ್ತಿಗೆ ಭಾಜನರು ಈ ಲೇಖಕರು. ಶುಭ ಮುಂಜಾನೆ ಎನ್ನುವ ಸಂದೇಶದ ಬೆನ್ನಲ್ಲೇ ತಮಗೆ ನೊಬೆಲ್ ಸಿಕ್ಕಿತು ಎನ್ನುವ ಸುದ್ದಿಯೂ ಬಂದಿತು. ಇವರ ಆಸಕ್ತಿ ಬರೀ ಸಾಹಿತ್ಯ ಕೃಷಿಗೆ ಮಾತ್ರ ಸೀಮಿತವಲ್ಲ, ಅನ್ಯಾಯದ ವಿರುದ್ಧದ ಜನರ ಹೋರಾಟದಲ್ಲೂ ಭಾಗಿಯಾಗಿ (ನಮ್ಮ ಅರುಂಧತಿ ರಾಯ್ ರೀತಿ) ಹಲವು ಸಂಕಷ್ಟಗಳನ್ನು ಅನುಭವಿಸಿದ ಸಾಮಾಜಿಕ ಲೇಖಕ. ತನ್ನ ಹುಟ್ಟೂರಿನಲ್ಲಿ ಆಳುವವರ ದಬ್ಬಾಳಿಕೆ ಅತಿಯಾಗಿ ಅಲ್ಲಿನ ಸೇನಾಧಿಕಾರಿ ಮಾರಿಯೋ ಲೌಸ ಅವರ ಪೌರತ್ವ ಪೆರುವಿನ “ಭೌಗೋಳಿಕ ಆಕಸ್ಮಿಕ” (geographical accident) ಆಗಿದ್ದು ದೇಶದ ಪೌರತ್ವವನ್ನು ರದ್ದು ಗೊಳಿಸ ಬೇಕೆಂದು ಸರಕಾರಕ್ಕೆ ಶಿಫಾರಸ್ಸು ಮಾಡಿದಾಗ ಅಪಾಯ ಮನಗಂಡ ಈ ಲೇಖಕ ಸ್ಪೇನ್ ದೇಶದ ಪೌರತ್ವ ಪಡೆದು ಅದರ ಜೊತೆಗೆ ಪೆರುವಿನ ಪುರತ್ವವನ್ನೂ ಉಳಿಸಿಕೊಂಡರು. ಪ್ರಬಂಧಗಳು, ನಾಟಕ, ಸಾಹಿತ್ಯ ಮತ್ತು ರಾಜಕೀಯ ಹೊರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಈ ಲೇಖಕ ಅಮೆರಿಕೆಯ ಮತ್ತು ಅಇರೋಪ್ಯ ದೇಶಗಳ ವಿಶ್ವ ವಿದ್ಯಾಲಯಗಳಿಗೆ ಅತಿಥಿ ಪ್ರಾಧ್ಯಾಪಕರಾಗಿ, ಭಾಷಣಕಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ರೀತಿಯ ಹಲವು ದೇಶಗಳ ಬಿಡುವಿಲ್ಲದ  ಪರ್ಯಟನದಿಂದ ಬರವಣಿಗೆಗೆ ತೊಡಕಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ  “ವಾಸ್ತವವಾಗಿ ವಿವಿಧ ಭಾಷೆ ಗಳೊಂದಿಗಿನ ತಮ್ಮ ಬದುಕು ತಮ್ಮ ಅರಿವನ್ನು ಹೆಚ್ಚಿಸಿದ್ದು, ಒಂದೇ ಭಾವನೆಯನ್ನು ಹೇಗೆ ವಿವಿಧ ಭಾಷೆಗಳು ವ್ಯಕ್ತಪಡಿಸುತ್ತವೆ ಎನ್ನುವ ಸೂಕ್ಷ್ಮತೆ ಸಹ ತನಗೆ ಕಾಣಲು ಸಿಗುತ್ತದೆ, ಹಾಗೆಯೇ ಮಾತೃ ಭಾಷೆಯೊಂದಿಗಿನ ನನ್ನ ನಂಟು ಇತರೆ ಭಾಷೆ ಗಳೊಂದಿಗಿನ ಒಡನಾಟದಿಂದ ಇನ್ನಷ್ಟು ಶ್ರೀಮಂತ ಗೊಂಡಿದೆ” ಎಂದು ಹೇಳಿದರು. ಸಂದರ್ಶನದ ವೇಳೆ ಹೇಳಿದ ಈ ಮಾತುಗಳು ಗಡಿಬಿಡಿಯ ಅಂತಾರಾಷ್ಟ್ರೀಯ ಬದುಕು ಈ ಲೇಖಕನ ಸಂಸ್ಕಾರವನ್ನು ಹೇಗೆ ಶ್ರೀಮಂತ ಗೊಳಿಸಿತು ಎನ್ನುವ ಸತ್ಯವನ್ನು ನಮಗೆ ತೋರಿಸುತ್ತದೆ.

ಲ್ಯಾಟಿನ್ ಅಮೆರಿಕಾದ ದೇಶಗಳು ಕಿತ್ತು ತಿನ್ನುವ ಬಡತನದೊಂದಿಗೆ ಮಾದಕ ದ್ರವ್ಯಗಳ ಮಾರಾಟ ಮತ್ತು ದಂಧೆಯನ್ನು ನಡೆಸುವ ಭೂಗತ ದೊರೆಗಳ ದಬ್ಬಾಳಿಕೆ ಯಿಂದಲೂ ತತ್ತರಿಸುತ್ತಿದೆ. ಈ ಹಾವಳಿಯನ್ನ ತಡೆಯಲು ಸರಕಾರಗಳು ಕೋಟ್ಯಂತರ ಡಾಲರುಗಳನ್ನು ಇವರ ವಿರುದ್ಧ ದ ಹೋರಾಟಕ್ಕೆ ವ್ಯಯಿಸಿದರೂ ಆ ಹಣ ಲಂಚಕೋರ ಸೇನಾಧಿಕಾರಿಗಳ, ರಾಜಕಾರಣಿಗಳ ಪಾಲಾಗುವುದನ್ನು ಕಂಡ ಈ ಲೇಖಕ ಸರಕಾರದ ಈ ನೀತಿಯನ್ನು ವಿರೋಧಿಸಿ ಹಣವನ್ನ ಶಸ್ತ್ರಗಳನ್ನು ಖರೀದಿಸಲು ವ್ಯಯಿಸದೆ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಭಿಯಾನವನ್ನು ಆರಂಭಿಸಲು ಮತ್ತು ಮಾದಕ ದ್ರವ್ಯವ್ಯಸನಿಗಳ ಚಿಕಿತ್ಸೆಗೆ ಖರ್ಚು ಮಾಡಲು ಕರೆ ನೀಡಿದರು. ಸೇನಾಧಿಕಾರಿಗಳ ಮತ್ತು ರಾಜಕಾರಣಿಗಳ ವಿಷವರ್ತುಲ ಇವರ ಮಾತುಗಳನ್ನು ಕೇಳುವ ಗೋಜಿಗೆ ಹೋಗಲಿಲ್ಲ.

ಲೇಖಕರೂ ಸಹ ಸಾಮಾನ್ಯ ಜನರಂತೆ ಪೌರರಾಗಿದ್ದು ಜನರ ಹೋರಾಟ ಮತ್ತು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ನೈತಿಕ ಹೊಣೆ ಅವರ ಮೇಲೆ ಇರಬೇಕು ಎಂದು ನೊಬೆಲ್ ಪ್ರಶಸ್ತಿ ಪಡೆಯುವ ಮುನ್ನ ನಡೆದ ಚರ್ಚೆಯಲ್ಲಿ ಹೇಳಿದ್ದರು ಲೌಸ. ೧೯೯೦ ರಲ್ಲಿ ಆಲ್ಬರ್ಟೋ ಫುಜಿಮೋರಿ ವಿರುದ್ಧ ಸೋತ ಈ ಲೇಖಕ ಮತ್ತೆ ರಾಜಕೀಯದ ಕಡೆ ತಲೆಹಾಕದೆ ಪೂರ್ಣ ಸಮಯ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಸರ್ವಾಧಿಕಾರಿಗಳನ್ನು ಚುನಾವಣೆಯಲ್ಲಿ ಬಗ್ಗು ಬಡಿಯದಿದ್ದರೇನಂತೆ ತಮ್ಮ ಪ್ರಖರ ಬರಹವನ್ನೇ ಅಸ್ತ್ರವನ್ನಾಗಿ ಉಪಯೋಗಿಸಿ ಲೇಖನಿಯೂ ಓಟು ಗಳಷ್ಟೇ ಪರಿಣಾಮಕಾರಿ ಎಂದು ತೋರಿಸಿದರು. “ಪದಗಳೇ ಕೃತ್ಯಗಳು…. ಬರಹದ ಮೂಲಕ ಚರಿತ್ರೆಯನ್ನು ಬದಲಿಸಲು ಸಾಧ್ಯ” ಎಂದು ಬಲವಾಗಿ ನಂಬಿದವರು. ಲ್ಯಾಟಿನ್ ಅಮೆರಿಕಾದಲ್ಲಿ ಎಲ್ಲೇ ಶೋಷಣೆ ಅನ್ಯಾಯ ನಡೆದರೂ ಅಲ್ಲಿಗೆ ಧಾವಿಸುವ ಈ ಲೇಖಕ ತಾವು ಕಂಡಿದ್ದನ್ನು ಬರೆದು ನೀಚ ಕೃತ್ಯಗಳನ್ನು ಬಯಲಿಗೆಳೆಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕ್ರೌರ್ಯ ಸಹ ಇವರ ಲೇಖನಿಯ ಮೊನಚಿಗು ಸಿಕ್ಕು ಸಮಾಜದ ಕಣ್ಣು ತೆರೆಸುವಂತೆ ಮಾಡುತ್ತದೆ ಇವರ ಬರಹಗಳು. ಇಂಥದ್ದೇ ಒಂದು ಘಟನೆ ಮತ್ತೊಂದು “ಡೊಮಿನಿಕನ್ ರೆಪಬ್ಲಿಕ್”. ಅಲ್ಲಿನ ಸರ್ವಾಧಿಕಾರಿ ರಾಫೆಲ್ ಟ್ರೂಜಿಲೋ ೧೯೩೦ ರಿಂದ ೧೯೬೧ ರವರೆಗಿನ ತನ್ನ ಆಳ್ವಿಕೆಯಲ್ಲಿ ತನ್ನ ಮಗಂದಿರೊಂದಿಗೆ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯವನ್ನು ಪ್ರತಿರೋಧವಿಲ್ಲದೆ ನಡೆಸುತ್ತಿದ್ದ. ಎಷ್ಟೋ ಜನ ತಮ್ಮ ಹೆಣ್ಣು ಮಕ್ಕಳನ್ನು ಈ ಸರ್ವಾಧಿಕಾರಿ ಮತ್ತು ಮಗಂದಿ ರಿಗೆ “ಉಡುಗೊರೆ” ಯಾಗಿ ಕೊಡುತ್ತಿದ್ದರಂತೆ ಭಯ ಬಿದ್ದು. (ಉತ್ತರ ಭಾರತದ ಠಾಕೂರ ಜಮೀನ್ದಾರರಿಗೆ ಹೆದರಿ ಬಡ ರೈತರು ಬದುಕಿದಂತೆ).  ರಾಫೆಲೋ ನ ದೌರ್ಜನ್ಯವನ್ನು “the feast of the goat” ಪುಸ್ತಕದಲ್ಲಿ ಸವಿವರವಾಗಿ ವರ್ಣಿಸಿದ್ದಾರೆ ಈ ಲೇಖಕ. ಇದೇ ತೆರನಾದ ಮಹಿಳೆಯರ ಮೇಲಿನ ದೌರ್ಜನ್ಯ ಇರಾಕಿನ ಸದ್ದಾಮ್ ಹುಸೇನರ ಮಕ್ಕಳೂ ಬೀದಿಯಲ್ಲಿ ಕಂಡ ಸುಂದರ ಹೆಣ್ಣುಮಕ್ಕಳನ್ನು ಎಗರಿಸಿಕೊಂಡು ಹೋಗುತ್ತಿದ್ದರು ಎಂದು ಈ ಲೇಖಕರು ಹೇಳಿದರೂ  ( ಅಮೇರಿಕ ನಿಯಂತ್ರಿತ ಮಾಧ್ಯಮಗಳ ಅಪಪ್ರಚಾರವೂ ಆಗಿರಲಿಕ್ಕೆ ಸಾಕು ) “ಕ್ರೌರ್ಯ ಯಾವುದೇ ಸರ್ವಾಧಿಕಾರಿಗಳ ಆಡಳಿತದಲ್ಲೂ ಸಮನಾಗಿರುತ್ತದೆ” ಎನ್ನುವ ಅಭಿಪ್ರಾಯ “ಮಾರಿಯೋ ವರ್ಗಾಸ್ ಲೌಸ” ಅವರದು. ಕೊನೆಯದಾಗಿ ಸಾಹಿತ್ಯದ ಬಗ್ಗೆ ವರ್ಗಾಸ್ ಅವರ, ವಿಶೇಷವಾಗಿ ನಮಗೆ ಅನ್ವಯವಾಗುವ,   ಮುತ್ತಿನಂಥ ಮಾತುಗಳು…

“I think that literature has the important effect of creating free, independent, critical citizens who cannot be manipulated.”

 

 

twitter

picture-for-twitter-article 

twitter ಅಂದ್ರೆ ಚಿಲಿಪಿಲಿ ಆಲ್ವಾ? social networking ಸುದ್ದಿ ಮಾಡುತ್ತಿರುವ twitter ಒಂದು ಆಕರ್ಷಕ application. ಒಮ್ಮೆಗೆ ೧೪೦ ಅಕ್ಷರಗಳಲ್ಲಿ ಮಾತ್ರ ಬರೆಯಬಹುದಾದ ಈ ವ್ಯವಸ್ಥೆಯನ್ನು ಪರಿವಾರದವರೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಚಿಕ್ಕ ಹರಟೆ ಹೊಡಯಲು ಉಪಯೋಗಿಸಬಹುದು. facebook ಮತ್ತು twitter ಇಂದಿನ ಯುವಪೀಳಿಗೆ ಮಾರು ಹೋದ ಅಂತರ್ಜಾಲ ತಾಣದ ಹೊಸ ಅನ್ವೇಷಣೆ. ಲೇಖನದೊಂದಿಗಿರುವ ಈ ಪುಟ್ಟ ಗುಬ್ಬಿ “ಬಡಪಾಯಿ ನನ್ನನ್ನೂ ವ್ಯಾಪಾರದ ವಸ್ತುವಾಗಿಸಿಬಿಟ್ಟಿರಾ” ಎಂದು ನಿಟ್ಟುಸಿರು ಬಿಡುತ್ತಿರುವಂತೆ ಕಾಣುತ್ತಿಲ್ಲವೇ