ಈ ಸರೀ ರಾತ್ರೀಲಿ ಅವಳಿಗೆ ಹೊರಗೇನು ಕೆಲಸ?

ಈ ಸರೀ ರಾತ್ರೀಲಿ ಅವಳಿಗೇನು ಕೆಲಸ ಹೊರಗೆ?…. ಈ ಥರ ಡ್ರೆಸ್ ಮಾಡಿಕೊಂಡರೆ ಇನ್ನೇನು?…ಆ ಜಾಗದಲ್ಲಿ ಅವಳೇನು ಮಾಡುತ್ತಿದ್ದಳು?
ಪ್ರಶ್ನೆಗಳು, ಪ್ರಶ್ನೆಗಳು, ಪ್ರಶ್ನೆಗಳು. ತುಂಟ ನಗೆ ತುಂಬಿದ ಪ್ರಶ್ನೆಗಳು, ಗಂಡು ಮತ್ತು ಹೆಣ್ಣು, ಇಬ್ಬರಿಂದಲೂ.

ಓರ್ವ ಹೆಣ್ಣು ಬಲಾತ್ಕಾರಕ್ಕೆ ತುತ್ತಾದಾಗ ಮೇಲಿನ ಪ್ರಶ್ನೆಗಳ ಧಾಳಿ. ಡಿಫೆನ್ಸ್ ಲಾಯರ್ ಕಡೆಯಿಂದಲ್ಲ, ಜನಸಾಮಾನ್ಯ ನ ಕಡೆಯಿಂದ . ಈ ಪ್ರಶ್ನೆ ಬರೀ ನಮ್ಮಂಥ ಹಿಂದುಳಿದ ದೇಶಗಳ ಜನರಿಂದ ಮಾತ್ರವಲ್ಲ, ಮಂಗಳ ಗ್ರಹಕ್ಕೆ ಜನರನ್ನು ಕಲಿಸಲು ಸಿದ್ಧತೆ ನಡೆಸುವ ಅಮೇರಿಕಾ ದಂಥ ದೇಶದವರದೂ ಇದೇ ನಿಲುವು. (ಭೂಮಿಯ ಪಾಡನ್ನು ನಾಯಿ ಪಾಡು ಮಾಡಿಯಾಯಿತು, ಈಗ ಮಂಗಳದ ಕಡೆ ಪಯಣ, ಅದನ್ನೂ ಹಾಳುಗೆಡವಲು).

ಅಮೆರಿಕೆಯ ‘ಮೇರಿ ವಿಲ್’ ಪಟ್ಟಣದಲ್ಲಿ ೧೪ ರ ವರ್ಷದ ಬಾಲಕಿಯೊಬ್ಬಳ ಮೇಲೆ ಫುಟ್ ಬಾಲ್ ಆಟಗಾರನೊಬ್ಬ ಅತ್ಯಾಚಾರ ಎಸಗಿ ಆಕೆಯ ಮನೆಯ ಹತ್ತಿರವೇ ಆಕೆಯನ್ನು ಬಿಸಾಡಿ ಹೋದ. ಅವನ ಮಿತ್ರ ಈ ನಡತೆಗೆಟ್ಟ ಕೃತ್ಯದ ಮೊಬೈಲ್ ಶೂಟಿಂಗ್ ಸಹ ನಡೆಸಿದ. ಕೊರೆಯುವ ಚಳಿಯಲ್ಲಿ ಆ ಬಾಲೆ ರಾತ್ರಿ ಕಳೆದಳು. ಸರಿಯಾದ ತನಿಖೆಯ ಕೊರತೆ ಮತ್ತು ಹುಡಗಿಯ ಅಸಹಕಾರದ ಕಾರಣ ತಪ್ಪಿತಸ್ಥ ರನ್ನು ಕೋರ್ಟ್ ಬಿಡುಗಡೆ ಮಾಡಿತು. ಹುಡುಗನ ಪರ ವಾದ ಮಾಡಿದ ಡಿಫೆನ್ಸ್ ಲಾಯರ್ ಫಾಕ್ಸ್ ನ್ಯೂಸ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ” ಆಕೆಗೆ ಸಂಭವಿಸಿದ್ದು ಸರಿ ಎಂದು ನಾನು ಹೇಳ್ತಾ ಇಲ್ಲ, ಆದರೆ ಆ ಸರೀ ರಾತ್ರೀಲಿ ಆಕೆ ಹೊರಕ್ಕೆ ಹೋಗಿದ್ದಾದರೂ ಏಕೆ?” ಎಂದು ಪ್ರಶ್ನೆ ಮಾಡಿದ. ಮಾಡದೆ ಏನು ಮಾಡಿಯಾನು? ಅತ್ಯಾಚಾರಕ್ಕೆ ಒಳಗಾಗಿದ್ದು ಯಾರದೋ ಹೆಣ್ಣು ಮಗಳು. ತನ್ನ ಮಗಳೋ, ತಂಗಿಯೋ ಆ ಸ್ಥಾನದಲ್ಲಿದ್ದರೆ ಗಲ್ಲು ಶಿಕ್ಷೆ ಕೊಡ ಮಾಡಲು ತನ್ನೆಲ್ಲಾ ಶ್ರಮ ವ್ಯಯಿಸುತ್ತಿದ್ದ. ಕೋರ್ಟಿನ ಛಾವಣಿ ಹರಿಯುವಂತೆ ಅಬ್ಬರಿಸುತ್ತಿದ್ದ.

ನವದೆಹಲಿಯ ನಿರ್ಭಯ ಅತ್ಯಾಚಾರದ ಗಲಾಟೆ ಗೊತ್ತೇ ಇದೆಯಲ್ಲ. ಸಂಸ್ಕಾರ ವಿಹೀನ, ನಿರ್ದಯೀ ಕಾಮ ಪಿಪಾಸುಗಳ ಪರ ವಕಾಲತ್ತು ವಹಿಸಿದ ವಕೀಲನೂ ಅತ್ಯಾಚಾರಿಗಳ ರೀತಿಯ ನಿರ್ದಯಿಯೇ. ಕಾಮ ಪಿಪಾಸುಗಳು ತಮ್ಮ ಮದನ ದಂಡದ ಪ್ರಯೋಗ ಮಾಡಿದರೆ ಇವನು ತಾನು ಕಲಿತ ವಕ್ರ ಬುದ್ಧಿಯ ವಕೀಲಿತನವನ್ನು ಬಳಸಿ ವಿವೇಚನೆಯ ಮೇಲೆ ತನ್ನದೇ ರೀತಿಯ ಅತ್ಯಾಚಾರವನ್ನು ಮಾಡುತ್ತಾನೆ. ಈ ವಕೀಲ, “ಲಿವಿಂಗ್ ಟುಗೆದರ್” ಅರೆಬರೆ ಬಟ್ಟೆ, ಬಾಯ್ ಫ್ರೆಂಡ್ ಜೊತೆ ಹೊರಗೆ ತಿರುಗೋದು ಮಾಡಿದಾಗ ಅತ್ಯಾಚರವನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಬೇಡಿ” ಎಂದು ಕಿವಿ ಮಾತನ್ನು ಹೇಳುತ್ತಾನೆ.

ಮನೆಯಲ್ಲಿ ಸದಾಚಾರ ಹೇಳಿ ಕೊಡಬೇಕಾದ ತಂದೆ ತಾಯಿ ಧನದಾಸೆಗೆ ಬಿದ್ದು ಮಕ್ಕಳನ್ನು ಮತ್ತೊಬ್ಬರ ಸುಪರ್ದಿಗೆ ಬಿಟ್ಟು ದುಡಿಯಲು ಹೊರಟರೆ ಆಗುವ ಅನಾಹುತ ಇದು. ಹೆಣ್ಣನ್ನು ಗೌರವಿಸಲು, ಆದರಿಸಲು ಕಲಿಸದ ಸಮಾಜ ತನ್ನ ಹೆಣ್ಣು ಮಕ್ಕಳ ಅಸಹಾಯಕ ಪರಿಸ್ಥಿತಿಗೆ ತಾನೇ ಜವಾಬ್ದಾರೀ ಹೊರಬೇಕಾಗುತ್ತದೆ. ಅಷ್ಟೇ ಅಲ್ಲ, ಗಂಡು ಮಾಡಿದ್ದೆಲ್ಲಾ ಸರಿ, ಅವನು ಎಷ್ಟಿದ್ದರೂ ಗಂಡು ತಾನೇ ಎನ್ನುವ ಮಾತುಗಳ ಮುಕ್ತ ಲೈಸನ್ಸ್ ಚಾರಿತ್ರ್ಯವಿಹೀನ ಗಂಡುಗಳಿಗೆ ಹಿರಿಯರು ಕೊಡಮಾಡಿದಾಗ ಅವನು ತನ್ನ ಪಶು ಸಂಸ್ಕಾರ ವನ್ನಲ್ಲದೆ ಮತ್ತೇನನ್ನು ಮೆರೆಯಲು ಸಾಧ್ಯ?

ಚಾರಿತ್ರ್ಯ, ಶೀಲ, ಒಳ್ಳೆಯ ನಡತೆ, ಹೆಣ್ಣಿಗೆ ಮಾತ್ರ ಸೀಮಿತವಾಗಬಾರದು, ಅವು ಗಂಡಿಗೂ ಅನ್ವಯಿಸಬೇಕು. ಆಗ ಮಾತ್ರ ಬೀದಿನಾಯಿ ಬುದ್ಧಿಯ ಗಂಡುಗಳಿಂದಲೂ, ಕಂತ್ರಿ ಬುದ್ಧಿಯ ವಕೀಲರಿಂದಲೂ ನಾವು ನಮ್ಮ ಹೆಣ್ಣು ಮಕ್ಕಳು ಬಚಾವಾಗಬಹುದು.

 

ಈಗ ಅತ್ಯಾಚಾರ ‘ಕಾಮನ್ ಫೆನಾಮೆನಾ’ ನಮ್ಮ ದೇಶದಲ್ಲಿ

ಈಗ ಅತ್ಯಾಚಾರ ಕಾಮನ್ ಫೆನಾಮೆನಾ ನಮ್ಮ ದೇಶದಲ್ಲಿ. ಟೈಮ್ಸ್ ಆಫ್ ಇಂಡಿಯಾ ದ ಆನ್ ಲೈನ್ ಆವೃತ್ತಿಯ ಮಧ್ಯ ಭಾಗದ ಸುದ್ದಿ ಯಲ್ಲಿ ದಿನವೂ ರಾರಾಜಿಸುವ ಚಟುವಟಿಕೆ ಈ ರೇಪು ಎನ್ನುವ ಅಸಹ್ಯ ಹುಟ್ಟಿಸುವ perversion. ಇದಕ್ಕೆ ಮುಖ್ಯ ಕಾರಣ ಎಂದರೆ ರೇಪಿಗೆ ತಕ್ಕ ಶಿಕ್ಷೆಯ ಕೊರತೆ ಅದರೊಂದಿಗೇ ಈ ನೀಚ ಕೃತ್ಯಕ್ಕೆ ಮಹಿಳೆಯನ್ನು ಹೊಣೆಯಾಗಿಸುವ  ನಾಚಿಕೆಗೆಟ್ಟ ವರ್ತನೆ. ಮಹಿಳೆ ಸರಿಯಾಗಿ ಬಟ್ಟೆ ಉಡಲು ಅಸಮರ್ಥಳಾದರೆ ರೇಪ್ ಬಂದು ಎರಗುತ್ತದೆ ಎನ್ನುವುದು ಬಹಳಷ್ಟು ಜನರ ವಕ್ರ ನ್ಯಾಯ. ವಯಸ್ಕ, ಹದಿಹರೆಯದ ಹೆಣ್ಣಿನ ಉಡುಗೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವುದಾದರೆ ಒಂದೂವರೆ, ಎರಡು, ಮೂರು ವರ್ಷದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಏನು ಸಮಜಾಯಿಷಿ?

ಇಂದು ೧೧ ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಈ ಅಮಾನುಷ ಕೃತ್ಯಗಳು ನಾಗರೀಕ ಸಮಾಜದ ಕಣ್ಣು ತೆರೆಸಲು ವಿಫಲ ವಾಗುತ್ತಿರುವುದು ದಿಗಿಲನ್ನು ಹುಟ್ಟಿಸುತ್ತಿದೆ. ನನ್ನ ಪ್ರಕಾರ ಅತ್ಯಾಚಾರ ಭ್ರಷ್ಟಾಚಾರಕ್ಕಿಂತ ಕೀಳು, ಅಸಹ್ಯ. ಅತ್ಯಾಚಾರದ ವಿರುದ್ಧ ಅಣ್ಣಾ ಹಜಾರೆ, ಕೇಜರಿವಾಲ (ನಾನು ಈತನ ಫ್ಯಾನ್ ಅಲ್ಲ) ನಂಥವರು ಧ್ವನಿ ಎತ್ತುತ್ತಿಲ್ಲ?

ಅತ್ಯಾಚಾರಕ್ಕೆ ಮಹಿಳೆಯ ಉಡುಗೆ ಕಾರಣ ಎಂದು ಬರೀ ಜನ ಸಾಮಾನ್ಯನ ಅಭಿಪ್ರಾಯ ಮಾತ್ರವಲ್ಲ ಮಂತ್ರಿ ಮಹೋದಯರೂ, ಪೊಲೀಸ್ ಅಧಿಕಾರಿಗಳೂ ಈ ಮಾತಿಗೆ ಧ್ವನಿಗೂಡಿಸುತ್ತಾರೆ.  ಈಗ ಹರಿಯಾಣ ರಾಜ್ಯದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಕೊಡುವ ಸಲಹೆ ಏನೆಂದರೆ ಹೆಣ್ಣು ಗಂಡುಗಳ ವಿವಾಹಾರ್ಹ ವಯಸ್ಸನ್ನು ಇಳಿಸಬೇಕು ಎನ್ನುವುದು. ಒಂದು ಕಡೆ ಸರಿಯಾಗಿ ಬಟ್ಟೆ ತೊಡು ಇಲ್ಲಾ ಮಾನ ಕಳೆದು ಕೊಳ್ಳಲು ತಯಾರಾಗು ಎನ್ನುವ ಎಚ್ಚರಿಕೆಗೆ ಮದುವೆ ವಯಸ್ಸನು ಇಳಿತ ಮಾಡಿದರೆ ರೇಪ್ ದರದಲ್ಲಿ ಕಡಿತ ಬರಬಹುದು ಎನ್ನುವ ವಾದಕ್ಕೆ ಜೋಡಿ ಎನ್ನುವಂತೆ ಬರುತ್ತಿದೆ ಮಂತ್ರಿಯ ಸಲಹೆ. ಈ ಮಾತಿನೊಂದಿಗೆ ಈ ಮು. ಮಂತ್ರಿ ಮುಘಲರನ್ನೂ ಎಳೆದು ತರುತ್ತಾನೆ. ಕುಣಿಯಲು ಬಾರದವಳು ನೆಲ ಡೊಂಕು ಎಂದಳಂತೆ, ಆಳನು ಬಾರದವನು ಮುಘಲರನ್ನು, ಪೋರ್ಚುಗೀಸರನ್ನು ಹೊನೆಯಾಗಿಸುತ್ತಾನೆ ತನ್ನ ಹೊಣೆಗೇಡಿತನಕ್ಕೆ.

ಒಟ್ಟಿನಲ್ಲಿ ಸಮಾಜದ ನಿಲುವು ಇಷ್ಟೇ. ಏನೇ ಆಗಲಿ, ಏನೇ ಬರಲಿ, ನಾವು ಮಾತ್ರ ನಮ್ಮ ಗಂಡು ಮಕ್ಕಳಿಗೆ ನೈತಿಕತೆಯ ಪಾಠ ಹೇಳೋಲ್ಲ, ಪರ ಹೆಣ್ಣನ್ನು ಗೌರವದಿಂದ ಕಾಣಲು ಉತ್ತೇ ಜಿಸೋಲ್ಲ ಎನ್ನುವ ಹೊಟ್ಟೆ ತೊಳೆಸುವಂಥ ಮೊಂಡುತನ. ನಮ್ಮ ಸಂಸ್ಕಾರ ಅಂಥದ್ದು, ಇಂಥದ್ದು ಎಂದು vainglorious ಆಗಿ ಕಣ್ಣು ಮುಚ್ಚಿ, ಎದೆಯುಬ್ಬಿಸಿ ನಡೆದರೆ ಸಾಲದು. ಅತ್ಯಾಚಾರದಂಥ ಅವಮಾನಕಾರೀ ಸಾಮಾಜಿಕ ಪಿಡುಗಿಗೆ ಇತಿಶ್ರೀ ಹಾಡಲೇ ಬೇಕು.              

ದಿಲ್ಲಿ ಗದ್ದುಗೆ ಸನಿಹ

ತಾಳ್ಮೆ ತಂದು ಕೊಳ್ಳಿ…ಇದು ಮುಲಾಯಂ ಸಿಂಗರ  ಸಮಾಜವಾದೀ ಪಕ್ಷ ಪ್ರಮುಖ ವಿರೋಧ ಪಕ್ಷ ಭಾ.ಜ.ಪ ಕ್ಕೆ ಹೇಳಿಕೊಟ್ಟ ಮಂತ್ರ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ ಸಮಾಜವಾದೀ ಪಕ್ಷ ದೊಡ್ಡ ದೊಡ್ಡ ಪಕ್ಷಗಳಿಗೆ ದೊಡ್ಡ ಆಘಾತವನ್ನೇ ನೀಡಿತು. ಉತ್ತರ ಪ್ರದೇಶ, ಉತ್ತರ್ ಖಾಂಡ್, ಪಂಜಾಬ್, ಗೋವಾ. ಸಿಕ್ಕಿಂ ರಾಜ್ಯಗಳಲ್ಲಿ ನಡೆದ ಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಭರವಸೆಯನ್ನೇನೂ ನೀಡಿಲ್ಲ. ಯುವರಾಜ ಎಂದೇ ಬಿರುದಾಂಕಿತರಾದ ರಾಹುಲ್ ಗಾಂಧಿಯವರ ವರ್ಚಸ್ಸು ಅಷ್ಟಾಗಿ ಕೆಲಸ ಮಾಡಿಲ್ಲ. ಇದೇ ಹಣೆ ಬರಹವೇ ಭಾಜಪ ದ್ದೂ ಸಹ. ಹಾಗಾಗಿ ಕಾಂಗ್ರೆಸ್ ಆಗಲೀ, ಭಾಜಪ ವಾಗಲೀ ಈಗಲೇ ಕೇಂದ್ರದ ಕುರ್ಚಿಯ ವಾಸನೆ ತಮ್ಮ ಮೂಗಿಗೆ ತಾಗಿಸಿ ಕೊಳ್ಳುವ ಆತುರ ತೋರಬೇಕಿಲ್ಲ. ಹಾಗೆಯೇ  ಭಾಜಪ ತನ್ನ ಪಕ್ಷದ outlook ಅನ್ನು drastic ಆಗಿ ಬದಲಿಸಿ ಕೊಳ್ಳುವ ಅಗತ್ಯವೂ ಸಹ ಇದೆ.

ನಮ್ಮ ದೇಶ ವಿಭಿನ್ನ ಸಂಸ್ಕೃತಿಗಳ ಬೀಡು. ಭಾರತೀಯ ಸಂಸ್ಕೃತಿ ಶ್ರೀಮಂತಗೊಂಡಿರುವುದು ಹಲವು ಸಂಸ್ಕಾರಗಳನ್ನು, ನಂಬಿಕೆಗಳನ್ನು ತನ್ನದು ಎಂದು ಒಪ್ಪಿಕೊಳ್ಳುವ ಔದಾರ್ಯದ ಕಾರಣ. ಇದನ್ನು ಗಮನದಲ್ಲಿಟ್ಟು ಕೊಂಡು ಎಲ್ಲರನ್ನೂ ಸೇರಿಸಿಕೊಂಡು ದೇಶ ಕಟ್ಟುವ ಸಂಕಲ್ಪ ಈ ಪಕ್ಷ ಮಾಡಿದರೆ ದಿಲ್ಲಿ ಗದ್ದುಗೆ ಸನಿಹ.

ಕನಿಷ್ಠ ಉಡುಗೆ, ಗರಿಷ್ಠ ಅಪಾಯ

ನಮ್ಮ ದೇಶದಲ್ಲಿ ಅತ್ಯಾಚಾರ ಹೆಚ್ಚುತ್ತಿರುವುದಕ್ಕೆ ಕಾರಣ ಮಹಿಳೆಯರು ಪ್ರಚೋದನಕಾರಿ ಉಡುಗೆ ತೊಡುತ್ತಿರುವುದು ಎಂದು ಆಂಧ್ರ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿನೇಶ್ ರೆಡ್ಡಿ ಹೇಳಿಕೆ ನೀಡುವುದರ ಮೂಲಕ ಜೇನುಗೂಡಿಗೆ ಕಲ್ಲು ಬೀಸಿದ್ದಾರೆ. ಈ ಮಾತಿಗೆ ವಿರೋಧ ವ್ಯಕ್ತಪಡಿಸಿದರು ನಮ್ಮ ಸನ್ಮಾನ್ಯ ಗೃಹ ಮಂತ್ರಿಗಳು. ಈ ಹೇಳಿಕೆ ಸರಿಯಲ್ಲ, ಕಾಕ್ಟೇಲ್ ಪಾರ್ಟಿ ಗೆ ಹೋಗುವ ಮಹಿಳೆ ಬಿಕಿನಿಯಲ್ಲಿ ಹೋಗಲಾರಳು, ಸಂದರ್ಭಕ್ಕೆ ಅನುಸಾರವಾಗಿ ಆಕೆ ಬಟ್ಟೆ ತೊಡುವಳು ಎಂದು ಬಡಬಡಿಸಿದರು.

ಗೃಹ ಮಂತ್ರಿಗಳಿಗಿಂತ ಚೆನ್ನಾಗಿ ಸಮಾಜ ಕಾಯುವ ಪೊಲೀಸರಿಗೆ ತಾನೇ ಗೊತ್ತಿರೋದು ಸಮಾಜದ ಆಗುಹೋಗುಗಳು? ಕನಿಷ್ಠ ಬಟ್ಟೆ ತೊಟ್ಟ ಹುಡುಗಿ ಅಥವಾ ಮಹಿಳೆ ಯಾವುದೇ ಕಾರಣದಿಂದಲೂ ಒಳ್ಳೆಯ ಭಾವನೆ ತರಲಾರರು. ನಮ್ಮಲ್ಲಿ ಬರುವ ವಿದೇಶೀ ಮಹಿಳೆಯರನ್ನು ಗಂಡಸರು ನೋಡುವ ರೀತಿ ನೀವು ಗಮನಿಸಿರಲೇಬೇಕಲ್ಲ, ಅದಕ್ಕೆ ಕಾರಣ ಏನು, ಆಕೆಯ ಅಂಗ ಸೌಷ್ಠವದ ಪ್ರದರ್ಶನ. ಮೈ ಪ್ರದರ್ಶನ ನಡೆಸೋ ಮಹಿಳೆಯರು loose character ನವರು ಎಂದು ಬಹಳ ಜನ ತಪ್ಪಾಗಿ ತಿಳಿಯುತ್ತಾರೆ. ನಮಗೇಕೆ ವಿದೇಶೀ  ಜನರ ಉಡುಗೆ ತೊಡುಗೆ ಮೇಲೆ ವ್ಯಾಮೋಹ? ಅವರು ಕನಿಷ್ಠ ಉಡುಗೆ ತೊದಲು ಕಾರಣ ಯಾವಾಗಲೂ ಗಡಿ ಬಿಡಿ ಯಾಗಿರುವ ಅವರ ಚಟುವಟಿಕೆ ಯಾಗಿರಬಹುದು. ನಮ್ಮ ಮಹಿಳೆಯರ ಥರ ಉದ್ದದ ಕೂದಲನ್ನೂ ಸಹ ಬೆಳೆಸೋಲ್ಲ ಅವರು. ಸ್ನಾನದ ನಂತರ ಒಣಗಲು ನಂತರ  ಬಾಚಲು ಸಿಗದ ಸಮಯದ ಕಾರಣ. ಮಹಿಳೆಯರು ಅಂತರಂಗದ ಸೌಂದರ್ಯಕ್ಕೆ  ಪ್ರಾಶಸ್ತ್ಯ ಕೊಟ್ಟರಾಗದೆ? ಈ ವರದಿ ಆಂಗ್ಲ ಪತ್ರಿಕೆಯಲ್ಲಿ ಬಂದಿದ್ದೆ ತಡ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು. ಬಹುತೇಕ ಓದುಗರು ದಿನೇಶ್ ರೆಡ್ಡಿಯವರ ಮಾತಿಗೆ ಸಹಮತ ವ್ಯಕಪಡಿಸಿದರು. ದಿನೇಶ ರೆಡ್ಡಿಯವರ ಪ್ರಕಾರ ಗ್ರಾಮಾಂತರ ಪ್ರದೇಶಗಳಿಗೂ ಅಂಟಿಕೊಂಡಿದೆ ಈ ಪಿಡುಗು. ಪೊಲೀಸ್ ಮುಖ್ಯಸ್ಥರ ಹೇಳಿಕೆಗೆ ಮಹಿಳಾ ಸಂಘಟನೆಗಳು ರೆಡ್ಡಿಯವರನ್ನು chauvinist ಎಂದು ಮೂದಲಿಸಿದವು.

ನಮ್ಮ ಸಂಸ್ಕೃತಿ ಪಾಶ್ಚಾತ್ಯರಿಗಿಂತ ವಿಭಿನ್ನ, ಹಾಗೆಯೇ ಅಂಥಾ ಮಾಡರ್ನ್ ಸಂಸ್ಕಾರಕ್ಕೆ ನಮ್ಮ ಸಮಾಜ ಇನ್ನೂ ತಯಾರಾಗಿಲ್ಲ, ತಯಾರಾಗುವವರೆಗೆ ನಮ್ಮ ಸಂಸ್ಕೃತಿಗೆ ತಕ್ಕುದಾದ ಉಡುಗೆ ಧರಿಸುವುದು ಒಳಿತು.