ಅವರು ಹಾಗೆ, ನಾವ್ಯಾಕೆ ಹೀಗೆ?

ಜಾರ್ಜ್ ಬುಶ್ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅತ್ಯಾಧುನಿಕ ದುರ್ಬೀನು ಹಿಡಿದು ಗುಡ್ಡ ಕಣಿವೆ, ಹಳ್ಳ ಕೊಳ್ಳ ಬಿಡದೆ ಹುಡುಕಾಡಿದರೂ ಸಿಗದ ಒಸಾಮಾ ಬಿನ್ ಲಾದೆನ್ ನನ್ನು ತನ್ನ ಅಧಿಕಾರಾವಧಿಯ ಉತ್ತರಾರ್ಧದಲ್ಲೇ ಕೆಡವಿ ಬೀಳಿಸಿದ ಕೀರ್ತಿ ಒಬಾಮಾರದು. “ನನ್ನ” ನಿರ್ದೇಶನದ ಮೇರೆಗೆ “ನಾವಿಕ ಸೀಲ್ – ೬” ರ ವಿಶೇಷ ಪಡೆಗಳು ಒಸಾಮಾನನ್ನು ಬಲಿ ಹಾಕಿ ಜಲಸಮಾಧಿ ಮಾಡಿದರು ಎನ್ನುವ ಮಾತಿನಲ್ಲಿ “ನನ್ನ” ಎನ್ನುವ narcissistic ಮಾತೊಂದು ಬಿಟ್ಟರೆ ಒಬಾಮಾ ಬೇರಾವುದೇ ಶೌರ್ಯ ಪ್ರದರ್ಶನ ಮಾಡಲಿಲ್ಲ. ಒಸಾಮಾನನ್ನು ಬಲಿ ಹಾಕಿದ ಕೂಡಲೇ ಜಾರ್ಜ್ ಬುಶ್ ರಿಗೆ ಫೋನಾಯಿಸಿ ಇನ್ನು ಈ ಭೂಮಿಯ ಮೇಲೆ ಒಸಾಮಾ ನಡೆಯುವುದನ್ನು ನೋಡಲಾರಿರಿ ಎನ್ನುವ  ಸಂದೇಶ ನೀಡಿದರು ಅಧ್ಯಕ್ಷ ಒಬಾಮ. ದೇಶಕ್ಕೆ, ವಿಶ್ವಕ್ಕೆ ಈ ವಿಷಯವನ್ನ ಹೊರಗೆಡಹುವ ಮೊದಲೇ ತನ್ನ ಪಕ್ಷದವನಲ್ಲದ ರಿಪಬ್ಲಿಕನ್ ಪಕ್ಷದ ಹಿಂದಿನ ಅಧ್ಯಕ್ಷ ಬುಶ್ ನಿಗೆ ಈ ಸಂದೇಶ ರವಾನೆ ಮಾಡಿದ್ದು ಏಕೆ? ಈ ರಾಜಕಾರಣಕ್ಕೆ ನಿಷ್ಕೃಷ್ಟವಾಗಿ  bipartisan politics ಎಂದು ಕರೆಯುತ್ತಾರೆ ಅಮೆರಿಕೆಯಲ್ಲಿ. ದೇಶದ ಭದ್ರತೆ, ಸಮಗ್ರತೆ, ಮುಂತಾದ ಗಂಭೀರ ವಿಚಾರಗಳು ಬಂದಾಗ ಅಮೆರಿಕೆಯಲ್ಲಿ ಎಲ್ಲಾ ಪಕ್ಷಗಳೂ ಒಂದು. ಅವರೆಲ್ಲರ ಪಕ್ಷ ಒಂದೇ. ಅದುವೇ ಅಮೇರಿಕನ್. put america first, ಅಮೆರಿಕೆಯ ರಾಜಕಾರಣಿಗಳ ಧ್ಯೇಯ ವಾಕ್ಯ. ಅವರುಗಳ ಏಕೋದ್ದೇಶ. ದೇಶ ಉರಿಯುವಾಗ ಬಾಣಲೆ ಎತ್ತಿ ಕೊಂಡು ಬಂದು ಕಜ್ಜಾಯ ಹುರಿಯಲು ಮುಂದಾಗೋಲ್ಲ ಅಲ್ಲಿನ ರಾಜಕಾರಣಿಗಳು. ಹಾಗೇನಾದರೂ ಮಾಡಿದರೆ ಇ- ಮೇಲ್ ಮೂಲಕ ಬರುತ್ತವೆ ಎಕ್ಕಡಗಳು. ಮುಂದಿನ ಬಾರಿ ಆರಿಸಿ ಬರುವ ಆಸೆ ಕನಸಾಗುತ್ತದೆ.       

ಈಗ ಬನ್ನಿ ಭಾರತಕ್ಕೆ. “ನಿನ್ನ ತಲೆ ಹೋದರೂ ಪರವಾಗಿಲ್ಲ ನನ್ನ ತಲೆಯ ಮೇಲಿನ ಪೇಟ intact ಆಗಿದ್ದರೆ ಸಾಕು” ಎನ್ನುವ ರಾಜಕಾರಣಕ್ಕೆ ಸುಸ್ವಾಗತ. ೨೦೦೮ ನವೆಂಬರ್ ೨೬ ಕ್ಕೆ ವಿಶ್ವವನ್ನೇ ನಡುಗಿಸಿದ, ಪಾಕಿಸ್ತಾನದ ಭಯೋತ್ಪಾದಕರು ಮುಂಬೈಯಲ್ಲಿ ನಡೆಸಿದ ಮಾರಣ ಹೋಮ ಎರಡೂ ದೇಶಗಳು ಯುದ್ಧ ತಯಾರಿ ನಡೆಸುವಷ್ಟು ತೀವ್ರ ಪರಿಣಾಮ ಬೀರಿತು. ಮೂರು ದಿನಗಳ ಕಾಲ ಮುಂಬೈ ನಗರವನ್ನು ಒತ್ತೆಯಾಗಿರಿಸಿಕೊಂಡಿದ್ದ ಕೊಲೆಗಡುಕರು ನಮ್ಮ ಯೋಧರ ಗುಂಡುಗಳಿಗೆ ಒಬ್ಬೊಬ್ಬರಾಗಿ ಉರುಳಿದರು. ಎಲ್ಲಾ ಭಯೋತ್ಪಾದಕರೂ ಹತರಾಗಿ ಮುಂಬೈ ಮತ್ತೊಮೆ ಸುರಕ್ಷಿತ ಸ್ಥಿತಿಗೆ ಮರಳಿದಾಗ ನಮ್ಮ ಪ್ರಧಾನಿಗಳೂ, ವಿರೋಧ ಪಕ್ಷದ ನಾಯಕರೂ ಮುಂಬೈಗೆ ಧಾವಿಸಿ ಬಂದರು. ಬಂದಿದ್ದು ದೊಡ್ಡ ವಿಷಯವಲ್ಲ. ಅವರು ಬಂದ ರೀತಿ ಮಾತ್ರ ವಿಶೇಷವಾದದ್ದು. ಇಡೀ ವಿಶ್ವಕ್ಕೆ ನಾವು ಯಾವ ಪಕ್ಷಗಳಿಗೆ ಸೇರಿದ್ದರೂ ನಾವು ಭಾರತೀಯರು ಒಂದು ಎಂದು ತೋರಿಸಲು ಈ ಮಹನೀಯರುಗಳು ಒಟ್ಟಿಗೆ ಬರಲಿಲ್ಲ. ಬೇರೆ ಬೇರೆ ವಿಮಾನಗಳಲ್ಲಿ ಆಗಮಿಸಿದರು. ಈ ಇಬ್ಬರೂ ನಾಯಕರು ತಮ್ಮ ಹೇಳಿಕೆಗಳಲ್ಲಿ ದೇಶ ಒಗ್ಗಟ್ಟಾಗಿದೆ ಎಂದು ಸಾರಿದರೂ ಕೆಲವೊಂದು ಸಂದರ್ಭಗಳಲ್ಲಿ ಚಿಕ್ಕ ಪುಟ್ಟ ಸಂಗತಿಗಳು ಬೃಹದಾಕಾರವಾಗಿ ಗೋಚರಿಸುತ್ತವೆ. ಮುಂಬೈ ಮಾರಣ ಹೋಮಕ್ಕೆ ಮೊದಲು ಕಂದಹಾರಕ್ಕೆ ಅಪಹರಿಸಿಕೊಂಡು ಹೋದ ನಮ್ಮ ವಿಮಾನ, ಸಂಸತ್ ಭವನದ ಮೇಲೆ ನಡೆದ ಧಾಳಿ ಹೀಗೆ ಹಲವು ಯಾತನಾಮಯ ಸಂದರ್ಭಗಳಲ್ಲಿ ನಮ್ಮ ಒಗ್ಗಟು ಸಾಕಾಗಲಿಲ್ಲವೇನೋ ಎನ್ನುವಷ್ಟು ಐಕ್ಯತೆಯಿಂದ ಕೂಡಿರಲಿಲ್ಲ.

ಅಮೇರಿಕೆಯಿಂದ ನಾವು ಕಲಿಯುವುದು ಬಹಳಷ್ಟಿದೆ. ದೇಶ ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ, ಯಾರ ಬೆಂಬಲವನ್ನೂ ನಿರೀಕ್ಷಿಸುವ ಗತಿಗೇಡು ಸಹ ಬರುವುದಿಲ್ಲ. ನಮಗೆ ಸರಿ ಎನಿಸಿದ್ದನ್ನು ನಿರ್ಭಯವಾಗಿ, ನಿರ್ಭಿಡೆಯಿಂದ ಮಾಡಬಹದು ದೇಶದ ರಕ್ಷಣೆಯನ್ನು.           

 

 

ಶುಂಠಿ, ನೊಬೆಲ್, “ಸಪ್ಲೈ ಮತ್ತು ಡಿಮಾಂಡ್”

ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್ ಪಿಸ್ಸಾರಿಡ್ಸ್, ಪ್ರಶಸ್ತಿ ಯನ್ನು ಮೂರು ಪಾಲು ಮಾಡಿಕೊಂಡ ಅರ್ಥಶಾಸ್ತ್ರಜ್ಞರು ತಮ್ಮ ಪ್ರತಿಭೆಯ ಆಧಾರದ ಮೇಲೆ. ಏಕೆ ಸಿಕ್ಕಿತು ಈ ತ್ರಿಮೂರ್ತಿಗಳಿಗೆ ನೊಬೆಲ್? ಪೂರೈಕೆ ಮತ್ತು ಬೇಡಿಕೆ – supply and demand – ಮೇಲಿನ ಅಧ್ಯಯನಕ್ಕೆ ಲಭಿಸಿತು ಇವರುಗಳಿಗೆ ವಿಶ್ವದ ಅತ್ಯುನ್ನತ ಪ್ರಶಸ್ತಿ ನೊಬೆಲ್. ೧೯೭೦ ರ ದಶಕದಲ್ಲಿ ಮುಂದುವರಿದ ರಾಷ್ಟ್ರಗಳಿಗೆ “ತೈಲ ಸಂಕಷ್ಟ” ದ ನಂತರ ಎದುರಾದ ಮತ್ತೊಂದು ಸಮಸ್ಯೆ ನಿರುದ್ಯೋಗ. ನಿರುದ್ಯೋಗ, ಉದ್ಯೋಗದ ಲಭಿಕೆ ಮತ್ತು ವೇತನ, ಈ ಮೂರು ಅಂಶಗಳು ಒಂದಕ್ಕೊಂದು ತಳುಕು ಹಾಕಿಕೊಂಡು ವಿಶ್ವದ ಸರಕಾರಗಳಿಗೆ ಒಂದು ಸವಾಲಾಗಿತ್ತು. ಈ ಸಮಸ್ಯೆ ಹೇಗೆಂದರೆ ಕೆಲಸ ಕೊಡುವ ಧಣಿಗೆ ಕೆಲಸಗಾರರು ಸಿಗುವುದಿಲ್ಲ, ಕೆಲಸಗಾರಿಗೆ ಕೆಲಸ ಕೊಡುವ ಧಣಿ ಸಿಗುವುದಿಲ್ಲ. ಒಂದು ರೀತಿಯ catch 22 ಪರಿಸ್ಥಿತಿ. ಈ ಪರಿಸ್ಥಿತಿಯಿಂದ ಹೇಗೆ ಹೊರಬರಬಹುದು ಎಂದು ತೋರಿಸಿ ಕೊಟ್ಟರು ಈ ತ್ರಿಮೂರ್ತಿ ವಿಧ್ವಾಂಸರುಗಳು. “ಉದ್ಯೋಗಗಳಿದ್ದೂ ನಿರೋದ್ಯೋಗ” ಸಮಸ್ಯೆಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ನಡೆಸಿದ ಇವರುಗಳ ಅಧ್ಯಯನ ಮತ್ತು ಪರಿಹಾರ ವಿಶ್ವ ಸರಕಾರಗಳಿಗೆ ನೆರವಾಗುತ್ತದಂತೆ.

“ಸಪ್ಲೈ ಮತ್ತು ಡಿಮಾಂಡ್”ಎಂದರೇನು? ಬಹುತೇಕ ಜನರಿಗೆ ತಿಳಿದದ್ದೇ ಇದು, ಆದರೂ ದಿನ ನಿತ್ಯ ನಮಗೆ ಕಾಣ ಸಿಗುವ ಉದಾಹರಣೆಗಳ ಮೂಲಕ ಅರ್ಥೈಸಿ ಕೊಳ್ಳೋಣ ಈ phenomenon ಅನ್ನು. ಮೇಲೆ ಹೇಳಿದ “ಉದ್ಯೋಗಗಳಿದ್ದೂ ನಿರೋದ್ಯೋಗ” ಗೆ ಸಂಬಂಧಿಸಿದ ಅನುಭವವಲ್ಲ ಕೆಳಗಿನದು. ಇದು ೧೯೮೪ ರ ಮಾತು.

ಒಮ್ಮೆ ತರಕಾರಿಗೆಂದು ಭದ್ರಾವತಿಯ ಪುರಸಭೆ ಒಡೆತನದ (ನಿಜವಾದ ಒಡೆಯ ರೈಲ್ವೆ ಅಂತೆ, ಈಗ ಅದನ್ನು ನೆಲಸಮಗೊಳಿಸಿದ್ದಾರೆ ರಸ್ತೆ ಅಗಲೀಕರಣದ ಕಾರಣ ಒಡ್ಡಿ ) ಮಾರುಕಟ್ಟೆಗೆ ಹೋಗಿದ್ದೆ. ಪರಿಚಯದ ಕೇರಳ ಮೂಲದ ಅಂಗಡಿಯವ ಹೇಳಿದ ಹೇ, ಶುಂಠಿ ತಗೊಂಡು ಹೋಗು, ಈ ಶುಂಠಿ ಮಾರಿಯೇ ನಿನ್ನ ಮಾವನಿಗೆ ವರದಕ್ಷಿಣೆ ಕೊಟ್ಟಿದ್ದು ಹೆಣ್ಣಿನ ಕಡೆಯವರು ಎಂದು. ನನಗೆ ಅರ್ಥವಾಗಲಿಲ್ಲ, ಆತ ಬಿಡಿಸಿ ಹೇಳಿದ. ಆ ಸಮಯದಲ್ಲಿ ರಾಜ್ಯದಲ್ಲಿ ಶುಂಠಿಗೆ ಬಂತು ಬರ, ಶುಂಠಿ ಬೆಳೆದು ಗುಡ್ಡ ಹಾಕಿದವನೇ ಶ್ರೀಮಂತ. ಲಾಟರಿ ಹೊಡೆದಂತೆ. ನನ್ನ ಅತ್ತೆಯ ಮನೆಯವರು ಜಮೀನ್ದಾರರು. ಅವರ ಲಕ್ ಖುಲಾಯಿಸಿದ್ದರಿಂದ ಎಲ್ಲಾ ಬಿಟ್ಟು ಅಂಕು ಡೊಂಕಾಗಿ ತರಕಾರಿಯಲ್ಲಿ ಶುದ್ಧ ಕುರೂಪಿಯಾದ ಶುಂಠಿಯನ್ನು ಬೆಳೆದರು ತಮ್ಮ ಹೊಲದ ತುಂಬಾ. ಬಂತು ಒಳ್ಳೆ ಬೆಲೆ, ಮಾರಿದ್ದೇ ಮಾರಿದ್ದು. ಶುಂಠಿ ಇಲ್ಲದ ಮಾರುಕಟ್ಟೆಯಲ್ಲಿ ಶುಂಠಿ ಇಟ್ಟುಕೊಂಡವನೇ “ಶಾಣ”. ಶುಂಠಿ ಬೆಳೆದವ ವಿಜಯದ ನಗೆ ಬೀರಿದ. ಜೇಬು ತುಂಬಿಸಿಕೊಂಡ. ಈಗಲೂ ನೋಡಿ, ಆ ಪಕ್ಷದಿಂದ ಈ ಪಕ್ಷ ಎಂದು ನೆಗೆಯುವ ನಾಚಿಕೆಗೆಟ್ಟ ಶಾಸಕ, ರಾಜಕಾರಣಿಯಂತೆ ನಮ್ಮ ರೈತರೂ ಒಲಾಡುತ್ತಾರೆ, ಒಮ್ಮೆ ಕಬ್ಬು ಎಂದರೆ, ಮತ್ತೊಮ್ಮೆ ಅಡಿಕೆ, ಮಗುದೊಮ್ಮೆ ರೇಶಿಮೆ, ಬಾಳೆ ಹೀಗೇ. ಯಾವುದಕ್ಕೆ ಮಾರುಕಟ್ಟೆಯಲ್ಲಿ ಕ್ಷಾಮವಿರುತ್ತದೋ ಅದನ್ನು ಪೂರೈಸಿದಾಗ ಸಿಗುವ ಲಾಭದ ಮೇಲೆ ಕಣ್ಣಿಟ್ಟು ಬೆಳೆಯುತ್ತಾರೆ ಉತ್ಪನ್ನಗಳನ್ನು.

ಇದು ನಾನು ಅರ್ಥೈಸಿ ಕೊಂಡ supply demand story.