೯೬ ರ ಲೈಂಗಿಕ ಶಕ್ತಿ

oldest dad with family
ಉತ್ತರ ಭಾರತದ ಹರಿಯಾಣ ಎಂದರೆ ಬರೀ ‘ಖಾಪ್’ ಪಂಚಾಯತಿ ಅಲ್ಲ. ಹರಿಯಾಣದ ರಾಮ್ ಜೀತ್ ರಾಘವ್ ವಿಶ್ವದ ಅತೀ ಹಿರಿಯ ತಂದೆ. ವಯಸ್ಸು ೯೬. ಎರಡು ಮಕ್ಕಳ ತಂದೆ. ಬಾಳ ಸಂಗಾತಿಯನ್ನು ಕಂಡು ಕೊಂಡಿದ್ದು ೮೬ ನೇ ವಯಸ್ಸಿನಲ್ಲಿ. ಅಲ್ಲಿಯರೆಗೆ ಅವಿವಾಹಿತ. ರೈತನೂ, ಪೈಲ್ವಾನನೂ ಆದ ಈತನಿಗೆ ಈಗಲೂ ತನ್ನ ಮಲಗುವ ಕೋಣೆ ‘ಅಖಾಡ’ ಮತ್ತು ತನ್ನ ಸಂಗಾತಿ ಒಂದು ಹೊಲದಂತೆ. ಪ್ರತೀ ರಾತ್ರಿ ಮೂರ್ನಾಲ್ಕು ಸಲ ಸಂಭೋಗಿಸುತ್ತೇನೆ ಎಂದು ಹೇಳುವ ಈತನ ಮೇಲೆ ನೆರೆಯ ಗಂಡುಗಳಿಗೆ ಉರಿ, ಮತ್ಸರ. ಪಿಕ್ ಪಾಕೆಟ್ ಮಾಡುವಂತೆ ಒದ್ದು ಕಸಿದು ಓಡಿ ಹೋಗುವಂಥದ್ದು ಅಲ್ಲವಲ್ಲ ಆತನಲ್ಲಿ ಇರುವ ಲೈಂಗಿಕ ಸಾಮರ್ಥ್ಯ. ಹೋಗಲಿ, ನೀನೇನನ್ನು ತಿನ್ನುತ್ತೀಯ ಅದನ್ನಾದರೂ ಹೇಳು ಎಂದರೆ ಆತ ಹೇಳೋದು, ಹಾಲು, ಬೆಣ್ಣೆ, ಮತ್ತು ಬಾದಾಮಿ.

ಈ ಬಾದಾಮಿ ಸ್ವಲ್ಪ ತಕರಾರಿನ ‘ಬೀಜ’ವೇ ಅನ್ನಿ. ಗಂಡನ್ನು ನಿಜಕ್ಕೂ nut ಆಗಿಸುತ್ತದೆ. ಆದರೆ ಈ ತೊಂಭತ್ತೈದರ ಮೇಲಿನ ಪ್ರಾಯದಲ್ಲೂ…ದಿನಕ್ಕೆ ಮೂರೂ, ನಾಕೂ ಸಲ….ಅದೇನೋ ನಾನರಿಯೆ.

ಜ್ಞಾಪಕ ಶಕ್ತಿ ಹೆಚ್ಚಲು…..

ಜ್ಞಾಪಕ ಶಕ್ತಿ ಹೆಚ್ಚಲು  ದಿನಕ್ಕೊಂದು ಲೋಟ ಹಾಲು ಕುಡಿಯಬೇಕಂತೆ. ಅಮೆರಿಕೆಯ ಮೇಯ್ನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ, ಅಥವಾ some-ಶೋಧನೆ. ಯಾವುದಾರೂ ಕಂಪೆನಿ, ಹಾಲಿನ ಕಂಪೆನಿಯೋ, ಚಾಕಲೇಟ್ ಕಂಪೆನಿಯೋ some thing ಕೊಟ್ಟರೆ ಅವರಿಗೆ ಇಷ್ಟವಾದ , ಅವರ ಉತ್ಪಾದನೆಗಳು ಮಾರಾಟವಾಗಲು ಸಹಾಯಕವಾಗುವ some-ಶೋಧನೆಗಳು ಲಭ್ಯ. ಇಲ್ಲಿ ಯಾರಾದರೂ ಈ ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಹಾಲು ಕುಡಿಯಿರಿ, ಕುಡಿದರೆ ಒಳ್ಳೆಯದು ಎನ್ನವುದು ನಮ್ಮ ಭೂಮಿಯಷ್ಟೇ ಹಳತಾದ ಸತ್ಯ. ಅದಕ್ಕೆ ಅಲ್ಲವೇ ಮನುಷ್ಯನಿಂದ ಹಿಡಿದು ಮೃಗಗಳವರೆಗೂ ಭೂಮಿಗೆ ಉದುರಿದ ಕೂಡಲೇ ಭಗವಂತ ಹಾಲಿನ ಸರಬರಾಜನ್ನು  ಅಡೆತಡೆಯಿಲ್ಲದೆ ಮುಂದುವರೆಸಿರುವುದು?

ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತಂತೆ. ಎಲ್ಲರೂ ಕಿವಿ ನಿಮಿರಿಸಿ ಕೇಳುವ, ಕಣ್ಣರಳಿಸಿ ನೋಡುವ ವಿಷ್ಯ ಇದು. ವಾವ್, ನನ್ನ ಮಟ್ಟಿಗೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ ಕೊಳ್ಳುವುದಕ್ಕಿಂತ ಇಂಪಾರ್ಟೆಂಟ್ ಈ ಜ್ಞಾಪಕ ಶಕ್ತಿ ವರ್ಧನೆ. ಏಕೆಂದರೆ ಜ್ಞಾಪಕ ಶಕ್ತಿ ಇಲ್ಲ ಎಂದರೆ ಲೈಂಗಿಕ ಚಟುವಟಿಕೆ ನಡೆಸುವುದನ್ನು ಮರೆತು ಬಿಡುತ್ತೇವೆ. ಕೆಲವೊಮ್ಮೆ ಹಸಿವಿನಂತೆ ಲೈಂಗಿಕ ಬಯಕೆಗಳು spontaneous ಆಗಿ ಬಂದರೂ ಬದುಕಿನಲ್ಲಿ ಒಂದು ಸ್ಟೇಜ್ ಬರುತ್ತೆ ಜ್ಞಾಪಕ ಬಂದಾಗ ದೈಹಿಕ ಸುಖ ಪಡೆಯಬೇಕು ಎನ್ನುವ ಆಸೆ. ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚು, ೨೩ ರಿಂದ ೯೮ ವರ್ಷ ವಯಸ್ಸಿನ ಸುಮಾರು ೯೦೦ ‘ಎಳೆ’ಯರ ಮೇಲೆ ನಡೆಸಿದ ಸಂಶೋಧನೆಯಿಂದ ಕಂಡು ಕೊಂಡ ಅಂಶ ಇದು. ಆದರೆ ಈಗ ನಾವು ಸೇವಿಸುತ್ತಿರುವುದು – ಹಾಲಾಗಲೀ, ಸೊಪ್ಪಾಗಲೀ, ಮೊಟ್ಟೆಯಾಗಲೀ, ಮಾಂಸವಾಗಲೀ – ಆಹಾರಕ್ಕಿಂತ ಹೆಚ್ಚು ರಾಸಾಯನಿಕಗಳನ್ನು. ಗೊಬ್ಬರದಿಂದ ಶುರುವಾದ ಈ ರಾಸಾಯನಿಕಗಳ ಹಸ್ತಕ್ಷೇಪ ಸೇಬಿನ ಹಣ್ಣಿಗೆ ಮೆರುಗನ್ನು ನೀಡುವವರೆಗೆ ಬಂದು ತಲುಪಿದೆ. ತರಕಾರೀ, ಹಣ್ಣುಗಳು, ಮಾಂಸ ಇವುಗಳಿಗೆ ರಾಸಾಯನಿಕ ಸಿಂಪಡಿಸೀ, ಸಿಂಪಡಿಸೀ ಈಗ ಆಹಾರಕ್ಕೆ ಅಂಟಿಕೊಂಡ ರಸಾಯನಿಕಗಳನ್ನು ತೊಳೆದು ತೆಗೆಯಲು ಮತ್ತೊಂದು ರೀತಿಯ washing detergent ಬಂದಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಅಲ್ಲವೇ?

ಈಗ ಮತ್ತೊಮ್ಮೆ ಹಾಲಿನ ವಿಷಯಕ್ಕೆ ಬರೋಣ. ಹಾಲು ಕುಡಿಯೋಣ, ಅದು ಹಾಲಿನ ಲಕ್ಷಣ ಹೊಂದಿದ್ದರೆ. ಅರ್ಥ? ನಮ್ಮ ದೇಶದಲ್ಲಿ ಸಿಗುವ ಹಾಲು ಹಾಲಲ್ವಂತೆ. ಅಂದ್ರೆ? ಅಂದ್ರೆ, ನಾವು ಕುಡಿಯೋ ಹಾಲಿಗೆ ಯೂರಿಯಾ, ಹಾಳೂ ಮೂಳೂ ಸೇರಿಸಿ ಕೊಡ್ತಾರಂತೆ. ಒಹ್, ಹಾಗಾದ್ರೆ ಹಾಲು ಕುಡಿದು ನಮ್ಮ ಜ್ಞಾಪಕ ಶಕ್ತಿ ವರ್ಧಿಸುವುದೂ ಬೇಡ, ಈಗ ಇರೋ ಶಕ್ತಿಯೇ ಸಾಕು ಎಂದು ಹಾಲಿಗೆ ಬೆನ್ನು ತಿರುಗಿಸಿದರೆ ಒಳ್ಳೆಯದು ಎಂದು ನನ್ನ ಒಪೀನಿಯನ್ನು.

ಹಾಕಿರಣ್ಣ, ಈಕೆಗೊಂದು ಸೆಲ್ಯೂಟ್

ಅಂತಾರಾಷ್ಟ್ರೀಯ ಮಹಿಳಾ ದಿನ. ಹೆಣ್ಣುಮಗಳ ಶಕ್ತಿ ಸಾಮರ್ಥ್ಯ, ತ್ಯಾಗ ಬಲಿದಾನಗಳ ಬಗ್ಗೆ ಹಾಡಿ ಹೊಗಳಲು ಮತ್ತೊಂದು ವಿಶೇಷ ದಿನ. ದಿನಗಳ ಆಚರಣೆ ಅರ್ಥಹೀನ ನಾವು ಅದರ ಹಿಂದಿನ ಅರ್ಥ ಹುಡುಕಿ ಮಹಿಳೆಗಾಗಿ ಸಮಾನತೆಯ ಪ್ರಬಂಧ ಸೃಷ್ಟಿಸಲು ಅಸಮರ್ಥರಾದಾಗ. ಆಧುನಿಕ ಯುಗದಲಿ ಮಹಿಳೆ ಬಹಳಷ್ಟನ್ನು ಸಾಧಿಸಿದ್ದರೂ ಪ್ರಪಂಚದ ಹಲವು ಭಾಗಗಳಲ್ಲಿ ಈಗಲೂ ಆಕೆ ಕಗ್ಗತ್ತಿಲಿನಲ್ಲಿ ತಡಕಾಡುತ್ತಿದ್ದಾಳೆ. ಬಿರುದು ಬಾವಲಿ, ಸಮ್ಮಾನ ಸಂಪತ್ತಿಗಾಗಿ ಅಲ್ಲ, ದೇವರು ಹೆಣ್ಣು ಗಂಡು ಎನ್ನುವ ಬೇಧವಿಲ್ಲದೆ ಕೊಡಮಾಡಿದ ಸ್ವಾತಂತ್ರ್ಯಕ್ಕಾಗಿ.

ಮಹಿಳೆಯ ಹುಟ್ಟು ಈಗಲೂ ಕೆಲವು ಸಮಾಜಗಳಲ್ಲಿ ಅಸಮಾಧಾನ, ಅತೃಪ್ತಿ ತರುತ್ತದೆ. ಗಂಡು ಮಗುವನ್ನ ಹೆರುವುದು ಹೆಣ್ಣಿಗೆ ಪ್ರತಿಷ್ಠೆ ತಂದು ಕೊಡುತ್ತದೆ. ಗಂಡು ಮಗುವಿನ ಜನ್ಮ ಕುಟುಂಬದಲ್ಲಿ, ನೆಂಟರಿಷ್ಟರಲ್ಲಿ ಸಂತಸವನ್ನು ಹರಡುತ್ತದೆ. ಒಂದೆರಡು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ತಾಯಿಗೆ ನಿನ್ನ ಹೊಟ್ಟೆಯಲ್ಲಿ ದೇವರು ಗಂಡು ಮಗುವನ್ನ ಹಾಕಿಲ್ಲವೆ ಎಂದು ಮೂದಲಿಕೆ ಕೇಳಿ ಬರುತ್ತದೆ. ಗಂಡು ಸಂತಾನಕ್ಕೆ ಇರುವ ಬೇಡಿಕೆ ಕಂಡ ವೈದ್ಯಕೀಯ ಸಮೂಹ ಕೂಡಾ ಅಲ್ಟ್ರಾ ಸೌಂಡ್, ಅಬಾರ್ಶನ್ ಮೂಲಕ ಹೆಣ್ಣಿನ ಹುಟ್ಟನ್ನು ಕೊನೆಗೊಳಿಸುವ ನೀಚ ಪ್ರವೃತ್ತಿಗೆ ಸಾಕ್ಷಿ ಯಾಗುತ್ತಿದೆ.  ಗುಜರಾತಿನಲ್ಲಿ ಗಂಡು ಮಕ್ಕಳನ್ನು ಸೃಷ್ಟಿಸುವ ಕ್ಲಿನಿಕ್ ಕಾರ್ಯಾಚರಣೆಯ ಆಘಾತಕಾರಿ ಸುದ್ದಿಯ ಬಗ್ಗೆ ಇತ್ತೀಚೆಗೆ ತಾನೇ ಓದಿದ್ದೇವೆ. ಹೆಣ್ಣು ಮಗುವಿನ ಸಂತಾನ ಇಲ್ಲದಂತೆ ಮಾಡುವ ಇನ್ನೂ ಯಾವ ಯಾವ ತೆರನಾದ ಟ್ರಿಕ್ಕು ಗಳು ಅವಿತು ಕೊಂಡಿವೆಯೋ ಕುಬುದ್ಧಿ ತಲೆಗಳಲ್ಲಿ. ಅರೇಬಿಯದಲ್ಲಿ ಹುಟ್ಟುವ ಮೊದಲ ಮಗು ಹೆಣ್ಣಾದರೆ ಜೀವಂತ ಹೂಳುತ್ತಿದ್ದರಂತೆ. ಹುಟ್ಟಿದ ಹೆಣ್ಣುಮಗುವಿನ ಬಾಯೊಳಗೆ ಬೂಸಾ ಹಾಕಿ ಕೊಲ್ಲುತ್ತಿದ್ದರು ತಮಿಳು ನಾಡಿನಲ್ಲಿ. ಅರೇಬಿಯಾದ ಅನಿಷ್ಟ ಅಮಾನವೀಯ ಪದ್ಧತಿಗೆ ಪ್ರವಾದಿ ಮುಹಮ್ಮದರು ಅಂತ್ಯ ಹಾಡಿದರು. ಯಾವ ತಪ್ಪೂ ಮಾಡದ ಹೆಣ್ಣು ಹಸುಳೆ ಯನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಎಂದು ಸಮಜಾಯಿಷಿ ಕೇಳಲಾಗುವುದು ಎಂದು ದೇವರು ಪವಿತ್ರ ಕುರಾನ್ ನಲ್ಲಿ ಕಟ್ಟೆಚ್ಚರ ನೀಡುತ್ತಾನೆ. ಯಾರು ತಮಗೆ ಹೆಣ್ಣು ಮಕ್ಕಳನ್ನು ತಾರತಮ್ಯ ತೋರಿಸದೆ ಅವರ ಲಾಲನೆ ಪೋಷಣೆ ಮಾಡಿ ಸಂರಕ್ಷಿಸುವರೋ ಅವರು ಮತ್ತು ನಾನು ಸ್ವರ್ಗ ಲೋಕದಲ್ಲಿ ಇಷ್ಟು ಸಮೀಪ ಇರುತ್ತೇವೆ ಎಂದು ಪ್ರವಾದಿಗಳು ತಮ್ಮ ತೋರುಬೆರಳನ್ನು ಮತ್ತು ಮಧ್ಯದ ಬೆರಳನ್ನು ತೋರಿಸಿ ಹೇಳುತ್ತಾರೆ. ಆಸ್ತಿಯಲ್ಲಿ ಹಕ್ಕು, ವಿಚ್ಛೇದನದಲ್ಲಿ ಹಕ್ಕು, ವಿಧವೆಗೆ ಮರು ವಿವಾಹದ ಹಕ್ಕು, ವೇದ ಪಾರಾಯಣದಲ್ಲಿ ಹಕ್ಕು ಹೀಗೆ ಎಲ್ಲ ರೀತಿಯ ಹಕ್ಕುಗಳಿಗೆ ಮಹಿಳೆಯನ್ನು ಅರ್ಹಳನ್ನಾಗಿಸಿದ ಪ್ರವಾದಿಗಳು ಮಹಿಳೆಯನ್ನು ಯಾವ ರೀತಿ ನಡೆಸಿ ಕೊಳ್ಳಬೇಕು ಎಂದು ಜಗತ್ತಿಗೆ ತೋರಿಸಿ  ಒಂದು ಮಹಾ ಪರಂಪರೆಯನ್ನೇ ಹುಟ್ಟು ಹಾಕಿದರು. ದುರದೃಷ್ಟವಶಾತ್ ಈ ಹಕ್ಕುಗಳನ್ನ ಕೊಡ ಮಾಡಲು ಮುಸ್ಲಿಂ ಸಮಾಜ ಚೌಕಾಸಿ ಮಾಡುತ್ತಿರುವುದು ಖಂಡನೀಯ.

ಮದುವೆ ವಿಷಯದ ತಕರಾರಿಗೆ ಮಹಿಳೆಯೊಬ್ಬಳನ್ನು ನಗ್ನವಾಗಿ ಪರೇಡ್ ಮಾಡಲಾಯಿತು ಲಾಹೋರ್ ನಗರದಲ್ಲಿ. ಈ ತೆರನಾದ ಮಹಿಳೆ ವಿರುದ್ಧದ ಹಿಂಸೆ ನಮಗೆ ಎಲ್ಲೆಲ್ಲೂ ಕಾಣಲು ಸಿಗುತ್ತದೆ. ಈ ವಿಷಯದಲ್ಲಿ ಅತಿ ಮುಂದುವರಿದ, ಅತಿ ಹಿಂದುಳಿದ ದೇಶಗಳು ಸಮಾನತೆಯನ್ನು ಸಾಧಿಸಿವೆ. ಇಂಗ್ಲೆಂಡ್ ನಲ್ಲಿ ಪ್ರತೀ ಮೂವರು ಹೆಣ್ಣುಮಕ್ಕಳಿಗೆ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಂತೆ. ಸೂರ್ಯ ಮುಳುಗದ ಸಾಮ್ರಾಜ್ಯದ ಕಥೆ ಇದು. ಕುಡಿತ, ಜೂಜು ಮುಂತಾದ ಅನಿಷ್ಟಗಳಿಗೆ ಗುಲಾಮನಾದ ಗಂಡು ಮಹಿಳೆಯ ಮೇಲೆ ದೌರ್ಜನ್ವ ಎಸಗುತ್ತಾನೆ. ವರವ ನೀಡು ತಾಯೆ ಕುಡುಕನಲ್ಲದ ಗಂಡನ. ಈ ಮಾತಿನ ಹಿಂದೆ ಹೆಣ್ಣು ನೆಮ್ಮದಿಯ ಬದುಕು ಬಯಸುವುದು ವ್ಯಕ್ತ ವಾಗುತ್ತದೆ. ಕಾರು ಬಂಗಲೆ ಕೇಳುತ್ತಿಲ್ಲ ಆಕೆ. ಕೇವಲ ನೆಮ್ಮದಿಯ ಬದುಕು ಆಕೆಯ ಆಸೆ. 

ಗರ್ಭ ನಿರೋಧಕ ಸೌಲಭ್ಯ ಕೇಳಿದ ವಿಶ್ವ ವಿದ್ಯಾಲಯದ ಹೆಣ್ಣು ಮಗಳೊಬ್ಬಳನ್ನು ಅಮೆರಿಕೆಯ ರೇಡಿಯೋ ಬಾತ್ಮೀದಾರ “ರಷ್ ಲಿಂಬಾ” (rush limbaugh) ವೇಶ್ಯೆ ಎಂದು ಜರೆದ. ಕಾಮ ತೀಟೆ ತೀರಿಸಿ ಕೊಳ್ಳಲು ಸರಕಾರ ಭರಿಸಬೇಕಂತೆ ವೆಚ್ಚ ಎಂದು ಕೀಳು ಮಟ್ಟದ ವಾಗ್ದಾಳಿ ಮಾಡಿದ ಈ ಬಲಪಂಥೀಯ ವರದಿಗಾರ. ಇದು ಅತ್ಯಂತ ಮುಂದುವರೆದ ದೇಶವೊಂದರ ಕಥೆ. ಇಂಥ ಮಾತುಗಳನ್ನು ತಲೆ ಕೆಟ್ಟ ತಾಲಿಬಾನಿಯೂ ಆಡಿರಲಿಕ್ಕಿಲ್ಲ. ಗುಹೆಗೆಳಲ್ಲಿ ಅಡಗಿ ಕೂತು ಮಹಿಳೆಗೆ ಸ್ವಾತಂತ್ರ್ಯ ಕೊಡಲು ಒಪ್ಪದ ತಾಲಿಬಾನಿ ಬಾಯಿಂದ ಇಂಥ ಮಾತುಗಳು ಹೊರಡಲಿಲ್ಲ. ಗಗನಚುಂಬಿ ಕಟ್ಟಡಗಳ ನಾಡಿನಿಂದ ಬಂದವು ಈ ಮಾತುಗಳು. ಅದ್ಯಾವ ನಿಗೂಢ ಕಾರಣಕ್ಕೆ ಮಹಿಳೆಯನ್ನು ಗಂಡು ಶತ್ರು ಎಂದು ಪರಿಗಣಿಸುತ್ತಾನೋ ಅರ್ಥವಾಗುತ್ತಿಲ್ಲ. ಈಡನ್ ಉದ್ಯಾನವನದಲ್ಲಿ ದೇವರು  ನಿಷಿದ್ಧ ಗೊಳಿಸಿದ ಸೇಬನ್ನು ತಿನ್ನಲು ಆಡಂ ನಿಗೆ ಈವ್ ಉತ್ತೇಜಿಸಿದ ಕಾರಣ ದೇವರು ಮಹಿಳೆಗೆ ಪ್ರಸವ ವೇದನೆ ನೀಡಿದ ಎನ್ನುವ ಮತಿಹೀನರೂ ಇದ್ದಾರೆ. ಅಂದರೆ ಈ ಮಹಿಳೆ ವಿರುದ್ಧದ ಭಾವನೆಗೆ, ನಡವಳಿಕೆಗೆ ಕಾರಣ ಸಿಗುತ್ತದೆ.

ಮಹಿಳೆಯನ್ನು ಹಾಯ್, ಸೆಕ್ಸಿ ಎಂದು ಕರೆದರೆ ಸಿಕ್ಸಿಸ್ಟ್ ಆಗಬಹುದೋ ಅಥವಾ ಅದು ಒಂದು complimentary ಯೋ ಎಂದು ಒಂದು ಪತ್ರಿಕೆ ಕೇಳುತ್ತದೆ. ಮಾಧ್ಯಮಗಳು ಹೆಣ್ಣಿನ ಸೌಂದರ್ಯಕ್ಕೆ ಕೊಡುತ್ತಿರುವ ಅತೀವ ಮಹತ್ವ ಆಕೆ ತನಗರಿವಿಲ್ಲದೆಯೇ ಕೀಳರಿಮೆ ಬೆಳೆಸಿಕೊಂಡು ತೊಳಲಾಡುವಂತೆ ಮಾಡುತ್ತಿದೆ. ಅಂತರಂಗದ ಸೌಂದರ್ಯಕ್ಕೆ ಮಹತ್ವ ಮನ್ನಣೆ ಬರುವವರೆಗೆ ಈ ಕೀಳರಿಮೆಯ ಬವಣೆ ಹೆಣ್ಣಿಗೆ ತಪ್ಪದು. ಮಾಧ್ಯಮಗಳ, ಸೌಂದರ್ಯ ಪ್ರಸಾಧನ ಉತ್ಪಾದಿಸುವ ಕಂಪೆನಿಗಳ ಈ ನಡವಳಿಕೆಗೆ ದಾರಿ ಬೇರೆ ಕಾಣದೇ ತನಗರಿವಿಲ್ಲದಂತೆಯೇ ಭಾಗವಹಿಸುತ್ತಿರುವುದು ಖೇದಕರ. ಮಹಿಳೆಗೆ ಹೆಚ್ಚು ಮೈ ಪ್ರದರ್ಶನ ಮಾಡಲು ಕೊಟ್ಟ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ ಎಂದು ಬಗೆದ ಆಧುನಿಕ ವಿಶ್ವ ಮಹಿಳೆಯನ್ನು ಎಲ್ಲ ರೀತಿಯ ಅಪಮಾನಗಳಿಗೆ ಎಗ್ಗಿಲ್ಲದೆ ಉಪಯೋಗಿಸಿ ಕೊಂಡಿತು. ಕನಿಷ್ಠ ಉಡುಗೆ ತೊಟ್ಟು cat walk ಮಹಿಳೆಯ ಸೌಂದರ್ಯಕ್ಕೆ ಆಶ್ಚರ್ಯದಿಂದ ಹುಬ್ಬೇರಿಸಿ ಕರತಾಡನ ಮಾಡುವ ಜನ ಆಕೆ ವೇತನದಲ್ಲಿ ಸಮಾನತೆ ಬೇಡಿದಾಗ ಹುಬ್ಬು ಗಂಟಿಕ್ಕುತ್ತಾರೆ. ಹೆರಿಗೆ ವೇಳೆ ಅವಳಿಗೆ ಬೇಕಾದ ಸೌಲಭ್ಯ ಕೊಡಲು ತಕರಾರು ಮಾಡುತ್ತಾರೆ. ಗಂಡಿನಂತೆಯೇ ದುಡಿದರೂ ಅವಳ ಶ್ರಮಕ್ಕೆ ಬೆಲೆಯಿಲ್ಲ. ಹೊಲ ಗದ್ದೆಗಳಲ್ಲಿ ಕೆಲಸಮಾಡುವ, ಮನೆಗೆಲಸ ಮಾಡುವ, ತಮ್ಮದೇ ವ್ಯಾಪಾರ ಧಂಧೆ ನಡೆಸುವ, ಚಿಕ್ಕ ಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವೂ ಇಲ್ಲ, ಭದ್ರತೆಯೂ ಇಲ್ಲ. 

ಇಷ್ಟೆಲ್ಲಾ ಅಡೆ ತಡೆಗಳ ನಡುವೆಯೂ, ದೌರ್ಜನ್ಯ ಅಪಮಾನಗಳ ಮಧ್ಯೆಯೂ ಹೆಣ್ಣು ಸಾಧನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಳೆ. ನನಗೆ ಪರಿಚಯದ ವ್ಯಕ್ತಿಯೊಬ್ಬರ ಅವಳಿ ಹೆಣ್ಣುಮಕ್ಕಳು ಗಣಕ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಪದವೀಧರೆಯರಾದರು. ಡಿಗ್ರೀ ಪಡೆದು ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಒಳ್ಳೆಯ ಸಂಸ್ಥೆಯಲ್ಲಿ ಕೆಲಸವೂ ಸಿಕ್ಕಿತು. ಗ್ರಾಮ ಪ್ರದೇಶದಿಂದ, ಮುಸ್ಲಿಂ ಕುಟುಂಬದಿಂದ ಬಂದ ಈ ಹೆಣ್ಣು ಮಕ್ಕಳು ಸುತ್ತ ಮುತ್ತಲಿನವರ ಅಸಮ್ಮತಿಗೆ ಸೊಪ್ಪು ಹಾಕದೆ, ತನ್ನ ಪಾಲಕರ ಪ್ರೋತ್ಸಾಹದಿಂದ ತಮ್ಮ ಶಿಕ್ಷಣದ ಉದ್ದಕ್ಕೂ ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಾ ತಮ್ಮ ಕನಸನ್ನು ನನಸಾಗಿಸಿಕೊಂಡರು.

ಹೀಗೆ ಸಮಾಜದ ಕೆಂಗಣ್ಣಿಗೆ, ಕುಹಕಕ್ಕೆ ತಲೆ ಬಾಗದೆ ಮುನ್ನಡೆಯ ದೃಢವಾದ ಹೆಜ್ಜೆ ಇಡುತ್ತಿರುವ ಹೆಣ್ಣು ಮಕ್ಕಳಿಗೆ ಮಹಿಳಾ ದಿನದ ಶುಭಾಶಯಗಳು.

ಚಿತ್ರ ಕೃಪೆ: http://www.nationalgeographic.com

ಮೂರನೆಯ ಶಕ್ತಿ

ಪ್ರಪಂಚದಲ್ಲಿ ಎರಡು ರೀತಿಯ ಶಕ್ತಿಗಳಿವೆ. ಒಂದು, ‘ಖಡ್ಗ’ ದ ಶಕ್ತಿ ಮತ್ತೊಂದು ‘ಲೇಖನಿ’ ಯ ಶಕ್ತಿ. ಆದರೆ ಇವೆರಡನ್ನೂ ಮೀರಿಸುವ ಶಕ್ತಿ ಶಾಲಿಯಾದ ಮೂರನೆಯ ಶಕ್ತಿಯೊಂದಿದೆ. ಅದೇ ಸ್ತ್ರೀ ಶಕ್ತಿ. ವಾಹ್, ಯಾರಪ್ಪ ಹೇಳಿದ್ದು ಇದು? ನಾರಿ ಮುನಿದರೆ ಮಾರಿ ಅಂತ ನಮ್ಮ ಪೂರ್ವಜರು ಹೆಣ್ಣಿನ ಸಹವಾಸ ಮಾಡಿ ಸೋತು ಸುಣ್ಣವಾದಾಗ ಕಂಡುಕೊಂಡಾಗಿದೆ ಈ ಹಸಿ ಸತ್ಯವನ್ನು. ದೇವರು ಸೃಷ್ಟಿಸುವಾಗ ಒಂದೇ ಸಮಯದಲ್ಲಿ, ಸರಿಸಮನಾಗಿ ಪುರುಷನೊಂದಿಗೆ ಸ್ತ್ರೀಯನ್ನೂ ಸೃಷ್ಟಿಸಿದ. ಇಬ್ಬರಿಗೂ ಅವವರದೇ ಆದ ಜವಾಬ್ದಾರಿ ಗಳನ್ನೂ ಕೊಟ್ಟು ಒಬ್ಬರನ್ನೊಬ್ಬರು ಆಸರೆಯಾಗಿ, ಒತ್ತಾಸೆಯಾಗಿ ಬದುಕುವ ಕಿವಿಮಾತನ್ನು ಹೇಳಿ ಭೂಲೋಕಕ್ಕೆ ಕಳಿಸಿದ. ಹೆಣ್ಣು ಗಂಡು ಜಾತಿಗಳಲಿ ಹೆಚ್ಚು ಕುಯುಕ್ತಿ ಪ್ರದರ್ಶಿಸುವ ಗಂಡು ಆಗಾಗ ಹೆಣ್ಣಿನ ಅಧಿಕಾರ ವ್ಯಾಪ್ತಿಯನ್ನು ಎನ್ಕ್ರೋಚ್ (encroach) ಮಾಡಿ ತನ್ನ ವರ್ಚಸ್ಸನ್ನು ಹೆಚ್ಚು ಮಾಡಿ ಕೊಂಡಾಗೆಲ್ಲಾ ಹೆಣ್ಣು ಮುನಿದು ತಿರುಗೇಟು ಕೊಡುತ್ತಾಳೆ. ಹಾಗೆ ತಿರುಗೇಟು ತಿಂದಾಗ ಕಂಡು ಕೊಂಡ ಸತ್ಯ ಈ “ಹೆಣ್ಣು ಒಲಿದರೆ ವಯ್ಯಾರಿ, ಮುನಿದರೆ ಮಾರಿ” ಎನ್ನುವ ಕಟು ಸತ್ಯ.

ಹೆಣ್ಣು ಗಂಡಿನ ಪುರಾತನ ಜಂಜಾಟದ ಪುರಾಣ ಬಿಟ್ಟು ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರಾರು ಎನ್ನುವ ನಿಮ್ಮ ಪ್ರಶ್ನೆಗೆ ಅಡಗಿದೆ ಉತ್ತರ ನೀವು ಕನಸಿನಲ್ಲಿಯೂ ನೆನೆಸಿರದ, ಊಹಿಸಿರದ ಸ್ಥಳದಲ್ಲಿ.

ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರು ಬೇರಾರೂ ಅಲ್ಲ, ಪಾಕಿಸ್ತಾನದ ಹುಟ್ಟಿಗೆ “ಕಾರಣೀ ‘ಭೂತ’ ” ನಾದ ಮುಹಮ್ಮದ್ ಅಲಿ ಜಿನ್ನಾ. ಇದೇ ಮೂರನೇ ಶಕ್ತಿ ತನ್ನ ದೇಶದ ಪ್ರಧಾನಿಯಾಗಿ ಮತಾಂಧರ ಆಕ್ರಮಣಕ್ಕೆ ಸಿಕ್ಕು ಸತ್ತಾಗ ಈ ಮಾತನ್ನು ಹೇಳಿದ ಜಿನ್ನಾ ತನ್ನ ಸಮಾಧಿಯಲ್ಲಿ ನೋವಿನಿಂದ ಖಂಡಿತ ಹೊರಳಾಡಿರಬಹುದು.

ಒಂದ್ನಿಮ್ಷ, ಹೋಗ್ಬೇಡಿ. ಮತ್ತೊಂದು ಶಕ್ತಿ ಇದೇರೀ. ಈ ಹೆಣ್ಣನ್ನು ಒಲಿಸಿಕೊಳ್ಳೋ ಗಲಾಟೆಯಲ್ಲಿ ಮರೆತೇ ಬಿಟ್ಟೆ. ಅದೇ ರೀ ಇಚ್ಛಾ ಶಕ್ತಿ. ಇದೊಂದಿದ್ದರೆ ಮೇಲೆ ಹೇಳಿದ ಮೂರೂ ಶಕ್ತಿಗಳೂ ನಮಗೆ ಶರಣು ಶರಣು ಎನ್ನುತ್ತವೆ.

ಈಗ ಆದುವಲ್ಲ ಎಲ್ಲಾ ಶಕ್ತಿಗಳೂ ಸೇರಿ ಚತುರ್ಶಕ್ತಿ ಗಳು? ಈಗ ಬೇರಿನ್ನೇನು ಬೇಕು ಹೇಳಿ ಈ ಜಗತ್ತನ್ನು ಜಯಿಸಲು?