ಜೈಪುರ ಸಾಹಿತ್ಯ ಮೇಳ

• ಜೈಪುರ ಸಾಹಿತ್ಯ ಮೇಳ ಪ್ರಸಿದ್ಧಿ ಪಡೆದ ಸಾಹಿತ್ಯಾಸಕ್ತರ ಕೂಟ. ಇಲ್ಲಿ ವಿಶ್ವಾದಾದ್ಯಂತ ಪ್ರಕಾಶಿತವಾದ ಪುಸ್ತಕಗಳ ಅಮೋಘ ಸುಗ್ಗಿ ಮತ್ತು ಹೆಸರಾಂತ ಲೇಖಕರ ಸಮ್ಮಿಲನ. ಪುಸ್ತಕಗಳ Cannes ಎಂದು ಹೇಳಬಹುದು. ಸಾಮಾನ್ಯವಾಗಿ ಇಂಥ ಪುಸ್ತಕ ಮೇಳಗಳು ನೀರಸವಾಗಿ ಶುರುವಾಗಿ ಅಷ್ಟೇ ನೀರಸವಾಗಿ ಮುಗಿದು ಬಿಡುತ್ತವೆ ಕೂಡಾ. ಯಾರೋ ಸಾಹಿತ್ಯ ಪ್ರೇಮಿಗಳು, ಡಿಸ್ಕೌಂಟ್ ಪುಸ್ತಕಕ್ಕಾಗಿ ಆಸೆಯಿಂದ ಬರುವ ಒಂದಿಷ್ಟು ಜನರನ್ನು ಬಿಟ್ಟರೆ ಈ ಉತ್ಸವದ ಮೇಲಿನ ಆಸಕ್ತಿ ಗೌಣ. ಆದರೆ ಈ ಬಾರಿಯ ಮೇಳ ಸ್ವಲ್ಪ ವಿಭಿನ್ನವಾಗಿ ಆರಂಭವಾಗಿ ವಿವಾದದ ಸುಳಿಯಲ್ಲಿ ಸಿಕ್ಕಿ ಕೊಂಡಿತು. ಕಾರಣ ವಿಶ್ವ ಪ್ರಸಿದ್ಧ ಲೇಖಕ, ಕಾದಂಬರಿಕಾರ ಸಲ್ಮಾನ್ ರುಷ್ಡಿ ಈ ಮೇಳಕ್ಕೆ ಆಗಮಿಸುವ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ರುಶ್ಡಿ ಬರಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳಿದ್ದೆ ತಡ ರಾಜ್ಯ ಸರಕಾರಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭೂಗತ ಲೋಕದ ಬಾಡಿಗೆ ಹಂತಕರಿಂದ ರುಶ್ಡಿ ಜೀವಕ್ಕೆ ಅಪಾಯವಿದೆ ಎಂದು ರುಶ್ಡಿ ತನ್ನ ಭಾರತ ಪ್ರಯಾಣದ ಟಿಕೆಟ್ ಗಳನ್ನು ಹರಿದು ಹಾಕುವಂತೆ ಮಾಡಿದವು. ಮಾರನೆ ದಿನ ಮತ್ತೊಂದು ಸುದ್ದಿ, ಈ ವಿಷಯ ಮುಂಬೈ ಪೊಲೀಸರಿಗೆ ತಿಳಿದೇ ಇಲ್ಲ. ಎರ್ಡೆಡ್ಲೆ ನಾಕು, ಸಲ್ಮಾನ್ ರುಶ್ಡಿ ಗೆ ಮನವರಿಕೆ ಆಯಿತು ಈ ಸುದ್ದಿ ಸುಳ್ಳೆಂದು, ತನ್ನನ್ನು ಉತ್ಸವದ ಹೊರಗಿಡಲು ಸರಕಾರ ಮಾಡಿದ ಹುನ್ನಾರ ಎಂದು.

ಭಾವನೆಗಳನ್ನ ಘಾಸಿಗೊಳಿಸುವ ಅಧಿಕಾರ ಯಾವ ಲೇಖಕನಿಗೂ ಇರಕೂಡದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ವೈಚಾರಿಕ ಸ್ವೇಚ್ಚಾಚಾರಕ್ಕಿರುವ ಮುಕ್ತ ಪರವಾನಗಿ ಅಲ್ಲ. ಕ್ರಿಯಾಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಜನರನ್ನು ಕೆರಳಿಸುವ ಪರಿಪಾಠಕ್ಕೆ ನಾಗರೀಕ ಸಮಾಜ ಮಣೆ ಹಾಕಬಾರದು. ಸ್ವೇಚ್ಚಾಚಾರ ಅರಗಿಸಿಕೊಳ್ಳುವ ಗುಣ ನಮ್ಮ ಉಪಖಂಡದ ಜನತೆಗೆ ಇನ್ನೂ ಬಂದಿಲ್ಲ. ಕಾಲ ಬದಲಾದಾಗ ರುಶ್ಡಿ ಯಂಥವರಿಗೆ ಮನ್ನಣೆ ನೀಡೋಣ, ಅಲ್ಲಿಯತನಕ ಸಂಯಮದಿಂದ ಕಾಲದೊಂದಿಗೆ ಹೆಜ್ಜೆ ಹಾಕೋಣ.

ಹಾಗೆಯೇ ಸಲ್ಮಾನ್ ರುಶ್ಡಿ ಪ್ರಕರಣ ಪ್ರಪಂಚದ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ.

ಕೆಳಗಿನ ಲಿಂಕ್ ಕ್ಲಿಕ್ಕಿಸಿದರೆ ಪ್ರಪಂಚದಲ್ಲಿ ಇದುವರೆಗೆ ಬಹಿಷ್ಕರಿಸಲ್ಪಟ್ಟ ಕೆಲವು ಪುಸ್ತಕಗಳ ಮಾಹಿತಿ ಇದೆ. • http://www.ala.org/advocacy/banned/frequentlychallenged/challengedclassics/reasonsbanned

ಹಂದಿಯೊಂದಿಗೆ ಸೆಣಸಬಾರದು

“ಹಂದಿಯೊಂದಿಗೆ ಸೆಣಸಬಾರದು, ನೀವು ಕೊಳಕಾಗುವುದು ಮಾತ್ರವಲ್ಲ, ಹಂದಿಗೆ ಇದು ಖುಷಿಯನ್ನೂ ಕೊಡುತ್ತದೆ”.

ವಾದ ವಿವಾದ, ಕಲಹ, ವೈಮನಸ್ಸು ಅತಿಯಾಗಿ ವಾದಿಸುವವರು ಎಷ್ಟೇ ತಪ್ಪಿದ್ದರೂ ತಮ್ಮ ಪಟ್ಟನ್ನು ಬಿಡದೆ ವಿತಂಡವಾದಕ್ಕೂ, ತಾವೇ ಸರಿ ಎಂದು ತೋರಿಸುವ ಉತ್ಸುಕತೆಯಲ್ಲಿ ಮೊಂಡುತನ ತೋರಿಸಿ ಕತ್ತೆಯನ್ನು ಕುದುರೆಯಾಗಿಸುವ ಪರಿಶ್ರಮ ಪಟ್ಟಾಗ ಮೇಲಿನ ಗಾದೆ ಅನ್ವಯವಾಗುತ್ತದೋ ಏನೋ? ಮೊಂಡು ತನದಿಂದ  ಚರ್ಚೆಯ ಧಾಟಿ ತಪ್ಪುತ್ತದೆ, ಮತ್ತೊಬ್ಬನ ವಿಚಾರಗಳನ್ನ ಒಪ್ಪಿ ಬಿಟ್ಟರೆ ತಮ್ಮ ಅಹಂ ಗೆ ಆಗುವ ಪೆಟ್ಟನ್ನು ನೆನೆದು ತಾವೇ ಸರಿ ಎಂದು ಕೊನೆಯವರೆಗೂ ಸಾಧಿಸಲು ವ್ಯರ್ಥ ಪ್ರಯತ್ನ ಮಾಡುವ ಜನರನ್ನು ನಾವು ಕಂಡೇ ಇರುತ್ತೇವೆ. ಆಂಗ್ಲ ಭಾಷೆಯಲ್ಲಿ live with the difference ಎನ್ನುತ್ತಾರೆ ಮತ್ತು agreeing to disagree ಎಂದೂ ಹೇಳುತ್ತಾ ವಾದ ವಿವಾದಗಳು ಮಾತುಕತೆಯ ರೂಪ ತಾಳಿದಾಗ ಈರ್ವರೂ ಯಾವ ರೀತಿ ನಡೆದು ಕೊಳ್ಳಬೇಕು ಎನ್ನುವತ್ತ ಮೇಲಿನ ಎರಡು ಮಾತುಗಳು ಮಾರ್ಗದರ್ಶನವೀಯುತ್ತವೆ. ಆದರೆ ಸುಶಿಕ್ಷಿತರಲ್ಲೇ ಅಸಹನೆ ಮನೆ ಮಾಡಿದರೆ ಚರ್ಚೆ ಬೀದಿ ಜಗಳದ ರೀತಿ acrimonious ಆಗುತ್ತದೆಯೇ ಹೊರತು ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ.