ವರುಣನ (ಅವ) ಕೃಪೆ

ಚುನಾವಣೆ ನಡೆದು ತಿಂಗಳುರುಳಿದರೂ ಆಘಾತಕಾರಿ ಸೋಲನ್ನು ಕಂಡ ರಾಜಕೀಯ ಪಕ್ಷವೊಂದರ post mortem ಇನ್ನೂ ನಡೆಯುತ್ತಲೇ ಇದೆ. ಹಿಂದುತ್ವ ಬಿಟ್ಟಿದ್ದರಿಂದ ಬಂತು ಹೊಡೆತ ಎಂದು ಒಬ್ಬ ಹೇಳಿದರೆ ವರುಣನ “ನಿಂದಾ ವರ್ಷ” ಕಾರಣ ಎಂದ ಮಗುದೊಬ್ಬ. ಅಲ್ಪಸಂಖ್ಯಾತರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ನಂತರ ನಾನು ಆ ರೀತಿ ಹೇಳಿಯೇ ಇಲ್ಲ ಯಾವುದೋ ಭೂತ ಪಿಶಾಚಿ CD ಒಳಗೆ ನುಗ್ಗಿ ರಂಪ ಮಾಡುತ್ತಿದೆ ಎಂದು ತಾಯಿ ಮಗ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೆ ಇದನ್ನು ಮಾಧ್ಯಮಗಳಾಗಲಿ, ಸಾಮಾನ್ಯ ಜನರಾಗಲಿ ನಂಬುವುದಿಲ್ಲ. ಹೌದು ನನ್ನಿಂದ ತಪ್ಪು ನಡೆದು ಹೋಯಿತು, ಉನ್ಮಾದದಲ್ಲಿ ಆಡಿದ ಮಾತುಗಳಿಗೆ ಕ್ಷಮೆಯಿರಲಿ ಎಂದು ಹೇಳಿಕೆ ಕೊಟ್ಟು ಜನರನ್ನು ಗೆಲ್ಲಬಹುದಿತ್ತು. ಆದರೆ ಅಂತ ಮಾತುಗಳನ್ನು ಆಡಲು ವ್ಯಕ್ತಿಯ ನೈತಿಕತೆ ಉನ್ನತ ಮಟ್ಟದ್ದಾಗಿರಬೇಕು.  

ಪ್ರಾಣಿ ದಯೆ ಬೋಧಿಸುವ ತಾಯಿ (ಮೇನಕ ಗಾಂಧಿ) ಮನುಷ್ಯರನ್ನು ಹೇಗೆ ನಡೆಸಿಕೊಳ್ಳಬೇಕೆಂದು ತನ್ನ ಸುಪುತ್ರನಿಗೆ ಹೇಳಿಕೊಡಲು ಸಮಯ ಸಿಗದಿದ್ದದು ಖೇದಕರ.  

ಒಂದು ಸಮುದಾಯವನ್ನು ನಿಂದಿಸಿ, ಓರ್ವ ಸಮರ್ಥ ಪ್ರಧಾನಿಯನ್ನು ಅಸಮರ್ಥ ಎಂದು ಬಣ್ಣಿಸಿ ಚುನಾವಣೆ ಗೆಲ್ಲಬಹುದು ಎಂದು ಎಣಿಸಿದ್ದ ಪಕ್ಷವೊಂದು ಭಾರತೀಯ ಮತದಾರ ವಿಶ್ವದಲ್ಲೇ ಅತ್ಯಂತ ಪ್ರಬುಧ್ಧ ಎಂದು ಮನಗಾಣಲು ಸೋತಿದ್ದು ತನ್ನ ಹಿನ್ನಡೆಗೆ ಕಾರಣ ಎಂದು ಅರಿತುಕೊಳ್ಳಬೇಕು. ಸಮಸ್ತ ಭಾರತೀಯರನ್ನು ಭರತವರ್ಷ ಎಂಬ ಹಡಗಿನಲ್ಲಿ ಕೂರಿಸಿ ಭವ್ಯ ಭವಿಷ್ಯದ ಕಡೆಗೆ ಹಡಗನ್ನು ಮುನ್ನಡೆಸುವ ಹೃದಯ ವೈಶಾಲ್ಯತೆಯನ್ನು ಮತ್ತು ಅಗತ್ಯವನ್ನು ಮನಗಾಣಬೇಕು.  

ಮತದಾರನಿಗೆ ಏನು ಬೇಕು ಎಂದು ಮನಗಂಡು ಅದಕ್ಕೆ ತಕ್ಕ ಕಾರ್ಯಕ್ರಮ ಪ್ರಸ್ತುತಪಡಿಸದೆ ತಾನು ಏನು ಹೇಳಿದರೂ ಜನ ನಂಬಿ ಗದ್ದುಗೆಗೆ ಕೂರಿಸಬಹುದು ಎಂಬ ನಂಬಿಕೆ ತನಗೆ ಮುಳುವಾಯಿತು ಎಂದು ಪಕ್ಷ ಶೀಘ್ರ ಅರಿತು ಕೊಂಡರೆ ಭಾರತದ ರಾಜಕಾರಣದಿಂದ ಸಂಪೂರ್ಣವಾಗಿ ಅಳಿಸಿ ಹೋಗುವ ಭೀತಿ ಇಲ್ಲವಾಗಬಹುದು.