ಬೆಟ್ಟಿಂಗ್ ಭಯ

ಭಾರತ ಪಾಕ್ ನಡುವೆ ೨೦೧೧ ರ ವಿಶ್ವ ಕ್ರಿಕೆಟ್ ಕಪ್ ಸೆಮಿಫೈನಲ್ ಮೊಹಾಲಿಯಲ್ಲಿ. ಎಲ್ಲರ ದೃಷ್ಟಿಗಳೂ ಮೊಹಾಲಿ ಕಡೆಗೂ ಮತ್ತು ಕ್ರಿಕೆಟಿಗರ ಕಡೆಗೂ ನೆಟ್ಟಿರುವುದರಲ್ಲಿ ಸಂಶಯವಿಲ್ಲ. ವಿಶ್ವದ ಅತಿ ಸ್ಪರ್ದಾತ್ಮಕ ಕ್ರೀಡೆ ಎಂದರೆ ಭಾರತ ಪಾಕ್ ನಡುವಿನ ಜಿದ್ದಾ ಜಿದ್ದಿನ ಕ್ರಿಕೆಟ್. ಸಹಜವಾಗಿಯೇ ಭಾರತೀಯರಿಗೂ ಪಾಕಿಗಳಿಗೂ ತಮ್ಮ ತಂಡವೇ ಗೆಲ್ಲಬೇಕು ಎನ್ನುವ ಅದಮ್ಯ ಆಸೆ ಮನದಲ್ಲಿದ್ದರೂ ಕ್ರಿಕೆಟ್ ಮೋಹಕವಾಗಿ ರಂಜಿಸಬಲ್ಲುದೆ ಎನ್ನುವುದನ್ನು ಕಾದು ನೋಡಬೇಕು. ಬ್ಯಾಟಿಂಗ್ ನಲ್ಲಿ ಈಗಿನ ಭಾರತವನ್ನ ಮೀರಿಸುವ ತಂಡ ಮತ್ತೊಂದಿಲ್ಲ, ಆದರೆ ಬೌಲಿಂಗ್ ನಲ್ಲಿ ನಮ್ಮ ಸಾಧನೆ ಎಂದಿಗೂ ಉತ್ಕೃಷ್ಟ ಮಟ್ಟದ್ದಾಗಿರಲಿಲ್ಲ. ಆದರೂ ವೇಗದ ಬೌಲಿಂಗ್ ನಲ್ಲಿ ಜಹೀರ್ ಖಾನ್ ಪ್ರದರ್ಶಿಸುತ್ತಿರುವ ಸಾಹಸ ಪ್ರಶಂಸಾರ್ಹವೆ. ಜಹೀರ್ ರನ್ನು ನಾಯಕ ಯಾವ ರೀತಿಯಲ್ಲಿ ಬಳಸಿಕೊಳ್ಳುವರು ಎನ್ನುವುದರ ಮೇಲೆ ಅವಲಂಬಿತ ಈ ಪಂದ್ಯದ ಫಲಿತಾಂಶ. ಯಾರು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳಲಿ, ಕೋಟ್ಯಂತರ ಭಾರತೀಯರ ಆಸೆ ಮಾತ್ರ ಈಡೇರಲಿ.

ಈ ನಡುವೆ ಪಾಕ್ ದೇಶದ ಆಂತರಿಕ ವ್ಯವಹಾರಗಳ ಸಚಿವ ಪಾಕ್ ಕ್ರೀಡಾಗಾರರಿಗೆ ಬೆಟ್ಟಿಂಗ್ ಬಲೆಗೆ ಬೀಳದಂತೆ ಕಟು ಎಚ್ಚರಿಕೆ ನೀಡಿದ್ದಾರೆ. ಪಾಕಿಗಳ ಹಿಂದಿನ ಪುರಾಣ ಓದಿದವರಿಗೆ ಈ ಎಚ್ಚರಿಕೆ ಸಮಂಜಸವಾಗಿ ಕಂಡರೂ ತಾನು ಈ ಪಂದ್ಯದಲ್ಲಿ ಸೋತರೆ ಮಗುಮ್ಮಾಗಿ ಬೆಟ್ಟಿಂಗ್ ಗುಮ್ಮವನ್ನು ತನ್ನ ತಂಡದ ಮೇಲೆ ಹೊರೆಸಿ ಮಾನ ಕಾಯ್ದು ಕೊಳ್ಳುವ ಹುನ್ನಾರವೇನಾದರೂ ಇರಬಹುದೇ ಈ ಎಚ್ಚರಿಕೆ ಘಂಟೆಯ ಹಿಂದೆ? ಒಂದು ರೀತಿಯ pre-emptive ತಂತ್ರ. ಎಷ್ಟಿದ್ದರೂ ರೆಹಮಾನ್ ಮಲಿಕ್ ರಾಜಕಾರಣಿ, ತನ್ನ ಕುಬುದ್ಧಿಯನ್ನು ಎಂದಿಗಾದರೂ ಬಿಟ್ಟಾನೆಯೇ? ಮಂತ್ರಿಯ ಎಚ್ಚರಿಕೆಯ ಬಗ್ಗೆ ಒಬ್ಬ ಓದುಗ ಪ್ರತಿಕ್ರಯಿಸಿದ್ದು ಹೀಗೆ: 

ಮಂತ್ರಿಯ ಎಚ್ಚರಿಕೆಯು ತನ್ನದೇ ಮನೆಯ ಮುಂದೆ “ವೇಶ್ಯಾವಾಟಿಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ” ಎನ್ನುವ ಸೂಚನಾ ಫಲಕ ನೇತು ಹಾಕಿದಂತೆ. ಹೇಗಿದೆ ಡೈಲಾಗು?

ಯಾರ ಸೋಲು, ಯಾರ ಗೆಲುವು

ಬೆಂಗಳೂರು ನಗರ ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ರೋಮಾಂಚಕಾರಿಯಾಗಿ ಕೊನೆಗೊಂಡಿತು. ಗೆಲ್ಲಲು ೩೩೮ ರ ಗುರಿಯನ್ನು ಕೆಚ್ಚೆಯಿಂದ ಸ್ವೀಕರಿಸಿದ ಅಂಡ್ರೂ ಸ್ಟ್ರಾಸ್ ನ ಬಂಟರು ಗೆಲುವಿನ ಹೊಸ್ತಿಲಿನವರೆಗೂ ಬಂದು ಬರಿಗೈಲಿ ಹೋದರು. ಬರಿಗೈಲಿ ಹೋದರು ಆದ್ರೆ  ಹೋಗಿದ್ದು ಮಾತ್ರ ಹಿಗ್ಗುತ್ತಾ, ಮುಗುಳ್ನಗುತ್ತಾ. ಭಾರತೀಯರ ಹೃದಯಗಳು ಅವರ ಬಾಯಿಗಳಿಗೆ ಬರುವಂತೆ ಮಾಡಿದ ನಮ್ಮ ಮಾಜಿ ಯಜಮಾನರುಗಳು ತಾವೆಂಥಾ ಆಟಗಾರರೆಂದು ವಿಸ್ಮಯಕಾರಕವಾಗಿ ತೋರಿಸಿದರು. ವಿಪರೀತ ಕೇಕೆ ಹಾಕುವ ಬೆಂಗಳೂರಿನ ಜನರ  ಸದ್ದಡಗಿಸುತ್ತೇವೆ ಎನ್ನುವಂಥ ಸ್ಪಿನ್ನೆರ್ “ಸ್ವಾನ್” ನ ಹೇಳಿಕೆಗೆ ನ್ಯಾಯ ಒದಗಿಸುವಂತೆ ಆಡಿದ ಇಂಗ್ಲೆಂಡ್ ನಾಯಕ ತನ್ನ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಬೆಂಗಳೂರಿಗರಿಗೆ ಉಣಬಡಿಸಿದ.

ಆದರೆ ೩೩೯ ಮಾಡಿದ್ದು ನಮ್ಮ ಸಾಹಸವಲ್ಲವೇ? ಅಷ್ಟೇ ಅಲ್ಲ ಆ ಗುರಿ ಮುಟ್ಟದಂತೆ ತಡೆಯುವಲ್ಲಿ ನಾವು ಯಶಸ್ವಿಯಾಗಲಿಲ್ಲವೇ? no. a resounding NO. ೩೩೯ ಮಾಡಿ ಮುನ್ನೂರರ ಒಳಗೆ ಅವರ ಇನ್ನಿಂಗ್ಸ್ ಅನ್ನು ಕವುಚಿ ಬಿಟ್ಟಿದ್ದರೆ ನಾವು ಹೆಮ್ಮೆ ಪಡಬಹುದಿತ್ತು. ಆ ರೀತಿ ಮಾಡದೆ ಶತ್ರು ನಮ್ಮ ಅಡುಗೆ ಮನೆ ತನಕ ನುಸುಳಲು ಬಿಟ್ಟಿದ್ದು ನಮ್ಮ ಸೋಲು. ಇಲ್ಲಿ ನಮ್ಮ ಬೌಲಿಂಗ್ ನ ಬಂಡವಾಳ ಬಟಾ ಬಯಲಾಯಿತು. mediocre bowling ಎನ್ನುವ ಹಣೆ ಪಟ್ಟಿ ಸಿಗುವಂತೆ ಮಾಡಿತು. ಹೌದು ಜಹೀರ್ ಖಾನ್ ಆಟದ ಗತಿಯನ್ನೇ ಬದಲಿಸಿದ ಆ ಅದ್ಭುತ ಓವರ್ ಅನ್ನು unleash ಮಾಡದೆ ಇದ್ದಿದ್ದರೆ ಇಂಗ್ಲೆಂಡ್ ಆಟಗಾರರು ಚಿನ್ನಸ್ವಾಮಿ ಮೈದಾನದ ಪ್ರದಕ್ಷಿಣೆ ಹಾಕುತ್ತಿದ್ದರು ಕೇಕೆ ಹಾಕುತ್ತಾ.  ತನ್ನ ವಯಸ್ಸು ನಾಚುವಂತೆ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ತೆಂಡೂಲ್ಕರ್ ಅವರ ಈ ಶತಕವೂ ಮತ್ತೊಂದು ಅಂಕಿ ಅಂಶವಾಗಿ ಉಳಿಯಿತೇ ವಿನಃ “ಅಂತಿಮ ನಗು” ವಿನ ರೋಮಾಂಚನವನ್ನು ನೀಡಲಿಲ್ಲ.