ಅತ್ಯಾಚಾರದ ಗರ್ಭಧಾರಣೆಗೆ “ದೈವೇಚ್ಚೆ” ಕಾರಣ

ಶೀಲಭಂಗದಿಂದ ಅಥವಾ ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಅಮೆರಿಕೆಯ ರಿಪಬ್ಲಿಕನ್ ಪಕ್ಷದ ನಾಯಕನೊಬ್ಬ. ಈಗ ಈ ಮಾತು ಅಮೆರಿಕೆಯ ರಾಜಕೀಯ ವಲಯದಲ್ಲಿ ಕಂಪನ ತರುತ್ತಿದೆ. ಡೆಮೊಕ್ರಾಟ್ ಪಕ್ಷದವರು ಈ ಮಾತನ್ನು ಹಿಡಿದು ಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾತುರರಾಗಿದ್ದಾರೆ. ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಬಲಪಂಥೀಯ ಎಂದು ರಿಪಬ್ಲಿಕನ್ ಪಕ್ಷ ಪರಿಗಣಿಸಲ್ಪಟ್ಟಿದೆ ಅಮೆರಿಕೆಯಲ್ಲಿ. ತಲೆಕೆಟ್ಟ ಕೆಲವು ಕ್ರೈಸ್ತ ಪಾದ್ರಿಗಳೂ ಈ ಪಕ್ಷವನ್ನ ಬೆಂಬಲಿಸುತ್ತಾರೆ. ಬಲಪಂಥವೋ, ಎಡ ಪಂಥವೋ, ನಡು ಪಂಥವೋ, ಪಂಥ ಯಾವುದೇ ಇರಲಿ ಮಾನವೀಯ ಮೌಲ್ಯಗಳ ವಿಷಯ ಬಂದಾಗ ಸರಿಯಾದ ವಿವೇಚನೆ, ತೋರದ ಪಂಥ ತಿಪ್ಪೆ ಸೇರುವುದಕ್ಕೆ ಮಾತ್ರ ಲಾಯಕ್ಕು.

Let us get back to rape-induced pregnancy. ಮತ್ತೊಮ್ಮೆ ಗರ್ಭ ಧಾರಣೆಗೆ ಬರೋಣ. ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಈತನ ಹೆಸರು ರಿಚರ್ಡ್ ಮುರ್ಡೋಕ್. ಇಂಡಿಯಾನ ರಾಜ್ಯದಿಂದ ಸೆನೆಟ್ ಗಾಗಿ ಸ್ಪರ್ದೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ. ತಾನಾಡಿದ  ಮಾತಿನಿಂದ ಎದ್ದ ವಿವಾದ ಈತನನ್ನು ವಿಚಲಿತನನ್ನಾಗಿಸಿದೆ.  ಈಗ ಈತ ಹೇಳುವುದು, “ನಾನು ಹೇಳಿದ ಅರ್ಥವೇ ಬೇರೆ. ನನ್ನ ಪಾಯಿಂಟ್ ಏನೆಂದರೆ ದೇವರು ಜೀವದ ಸೃಷ್ಟಿಗೆ ಕಾರಣ, ದೇವರಿಗ ಅತ್ಯಾಚಾರ ಇಷ್ಟವಿಲ್ಲ, ಅತ್ಯಾಚಾರ ಒಂದು horrible thing” ಈ ಸಮಜಾಯಿಷಿ ಈತನದು.

ಗರ್ಭಧಾರಣೆ ದೈವೇಚ್ಚೆ ಎಂದಾಗ ಒಂದು ಮಾತು ನೆನಪಿಗೆ ಬರುತ್ತದೆ. ಅದೆಂದರೆ “ತೇನ ವಿನಾ ತೃಣಮಪಿ ನ ಚಲತಿ”. ಈ ಮಾತಿನ ಅರ್ಥ ಒಂದು ಹುಲುಕಡ್ಡಿ ಅಲುಗಾಡಲೂ ಪರಮಾತ್ಮನ ಅಪ್ಪಣೆ ಬೇಕು. ಪವಿತ್ರ ಕುರ್’ಆನ್ ನ ಆರನೇ ಅಧ್ಯಾಯ, ೫೯ ನೇ ಸೂಕ್ತದಲ್ಲೂ ಇದೇ ಅರ್ಥ ಬರುವ ಮಾತಿದೆ. “Not a leaf fall but with His Knowledge”. ಈಗ ಈ ಮೇಲಿನ ಸೂಕ್ತಗಳನ್ನು ಉದ್ಧರಿಸಿ ಜಗತ್ತಿನಲ್ಲಿ ನಡೆಯುವ ಪ್ರತೀ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ಮೋಸ ದಗಾ, ವಂಚನೆ… ಎಲ್ಲವಕ್ಕೂ ತಂದು ನಿಲ್ಲಿಸಲಿ ಪರಮಾತ್ಮನನ್ನು ಸಾಕ್ಷಿಯಾಗಿ.

 

ಜ್ಯೋತಿಷ್ಯ ವೈಜ್ಞಾನಿಕವೇ?

ಜ್ಯೋತಿಷ್ಯ ಶಾಸ್ತ್ರವನ್ನು “ಖೋಟಾ ಅಧ್ಯಯನ” (fake discipline) ಎಂದಿದ್ದಾರೆ ವಿಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ವಿಜೇತರಾದ ವೆಂಕಟರಾಮನ್ ರಾಮಕೃಷ್ಣನ್ ಅವರು. ಚನ್ನೈ ನಗರದ ಭಾರತೀಯ ವಿದ್ಯಾ ಭವನದಲ್ಲಿ ಉಪನ್ಯಾಸ ನೀಡುತ್ತಿದ್ದ ಇವರು ಜ್ಯೋತಿಷ್ಯದೊಂದಿಗೆ ಹೋಮಿಯೋಪತಿ ವೈದ್ಯ ಶಾಸ್ತ್ರವನ್ನೂ ತರಾಟೆಗೆ ತೆಗೆದುಕೊಂಡರು. ಜ್ಯೋತಿಷ್ಯದ ಹೆಸರಿನಲ್ಲಿ ಜನರನ್ನು ವಂಚಿಸುವ ಪರಿಪಾಠ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಜ್ಯೋತಿಷ್ಯ ಕ್ಷೇತ್ರ multi million dollar ಉದ್ದಿಮೆ ಎಂದು ಸುಲಭವಾಗಿ ಹೇಳಬಹುದು. unsuspecting ಜನರನ್ನು ಲೀಲಾ ಜಾಲವಾಗಿ ವಂಚಿಸಿ ಹಣ ಕೊಳ್ಳೆ ಹೊಡೆಯುವ ಇವರಿಗೆ ನಿಯಮದ ಯಾವ ತೊಡಕೂ ಇಲ್ಲ. ಭಾಜಪ ಸರಕಾರದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವರಾಗಿದ್ದ ಮುರಳಿ ಮನೋಹರ್ ಜೋಶಿ ಜ್ಯೋತಿಷ್ಯವನ್ನು ವೈದಿಕ ವಿಜ್ಞಾನದ ಅಡಿಯಲ್ಲಿ ತಂದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ವಸ್ತುವನ್ನಾಗಿಸಿದ್ದರು. ಭಾರತದಲ್ಲಿ ಎಲ್ಲ ಸಮಾಜದ ಬಹಳಷ್ಟು ಜನ ನಂಬುವ ಜ್ಯೋತಿಷ್ಯದ ಬಗ್ಗೆ ಇಸ್ಲಾಮಿನ ನಿಲುವು ಅತ್ಯಂತ ಕಟುವಾದುದು. ಯಾವುದಾದರೂ ಜ್ಯೋತಿಷಿಯನ್ನು ಒಬ್ಬ ಕಂಡರೆ ಅವನ ನಲವತ್ತು ದಿನಗಳ ಕಾಲದ ಆರಾಧನೆ ನಷ್ಟ ಪಡುವುದು ಮಾತ್ರವಲ್ಲ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಪಡೆದವನು ಪಾಪದ ಹೊರೆಯನ್ನು ಹೊರುತ್ತಾನೆ ಎನ್ನುತ್ತದೆ ಇಸ್ಲಾಂ. ಜ್ಯೋತಿಷ್ಯದ ಕುರಿತ ಪವಿತ್ರ ಕುರಾನಿನ ಹೇಳಿಕೆ ಹೀಗಿದೆ.

“With Him are the keys to the unseen and none knows it except Him”.The Holy Qur’an, Chapter 6, Verse 59

“Say: None in the heavens or earth knows the unseen except Allah.”The Holy Qur’an, Chapter 27, Verse 65

ಮತ್ತೊಂದೆಡೆ ಪ್ರವಾದಿಗಳನ್ನು ಸಂಬೋಧಿಸುತ್ತಾ ಪವಿತ್ರ ಕುರಾನ್ ಹೀಗೆ ಹೇಳುತ್ತದೆ: “ಹೇಳಿ ಪ್ರವಾದಿಗಳೇ, ನನಗೆ ಅಗೊಚರವಾದದ್ದು ಕಾಣುವಂತಾಗಿದ್ದಿದ್ದರೆ ನಾನು ಒಳ್ಳೆಯದನ್ನೇ ಬಯಸುತ್ತಿದ್ದೆ, ಆದರೆ ನಾನು ಒಬ್ಬ ಸಂದೇಶವಾಹಕ ಮತ್ತು ವಿಶಾಸಿಗಳಿಗೆ ಶುಭ ವಾರ್ತೆ ತರುವವ ಮಾತ್ರ”

ಈ ರೀತಿಯ ಹೇಳಿಕೆಗಳು ಮತ್ತು ವಿಧ್ವಾಂಸರ ಅಭಿಪ್ರಾಯಗಳು ವ್ಯತಿರಿಕ್ತ ವಾಗಿದ್ದೂ ಬಹಳಷ್ಟು ಮುಸ್ಲಿಮರು ಹಸ್ತ ಸಾಮುದ್ರಿಕೆ, ಅದೂ ಇದೂ ಎಂದು ಅಲೆಯುವುದನ್ನು ನಾನು ಕಂಡಿದ್ದೇನೆ.

ಅಧ್ಯಕ್ಷರ ವಿಧವೆಯ ಪತ್ರ

ನಮ್ಮ ದೇಶದಲ್ಲಿ ಈಗ ಇರುವುದು ಅಧ್ಯಕ್ಷರಲ್ಲ, ಅಧ್ಯಕ್ಷೆ. ಹಾಗಾಗಿ ಇದು ನಮ್ಮ ದೇಶಕ್ಕೆ ಸಂಬಂಧಿಸಿದ್ದಲ್ಲ. ಇಂದಿನ ಇ- ಟಪ್ಪಾಲಿನಲ್ಲಿ ನನಗೊಂದು ಪತ್ರ ಬಂತು. ಶ್ರೀಮತಿ ಸುಹಾ ಅರಫಾತ್ ರಿಂದ. ಇವರು ಪಲೆಸ್ತಿನ್ ದೇಶದ ಮಾಜಿ ಅಧ್ಯಕ್ಷ ದಿವಂಗತ ಯಾಸಿರ್ ಅರಫಾತ್ ರ ಪತ್ನಿ. ಅರಫಾತ್ ನನಗೆ ಅಚ್ಚು ಮೆಚ್ಚು. ಇಸ್ರೇಲಿಗಳು ಆಕ್ರಮಿಸಿ ಕೊಂಡ ತನ್ನ ದೇಶದ ಬಿಡುಗಡೆಗೆ ಹೋರಾಡಿದ ಜೀವ. ಭಾರತದ ಆಪ್ತ ಮಿತ್ರನೂ ಹೌದು. ಇಂದಿರಾ ಗಾಂಧಿಯವರ ನಿಧನದ ಸುದ್ದಿ ಕೇಳುತ್ತಲೇ ಮೊದಲಿಗೆ ಭಾರತಕ್ಕೆ ಧಾವಿಸಿ ಬಂದ ಮೊದಲ ನಾಯಕರಲ್ಲಿ ಅರಫಾತ್ ಒಬ್ಬರು. ತನ್ನ ಜನರ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಮತ್ತು ಇಂದಿರಾ ನೀಡಿದ ಬೆಂಬಲವನ್ನೂ ಮೆಲುಕು ಹಾಕಿ ನಾನು ನನ್ನ ಸೋದರಿಯನ್ನು ಕಳೆದು ಕೊಂಡೆ ಎಂದು ಕಣ್ಣೀರು ಹಾಕಿದ್ದರು. ಯಾವಾಗಲೂ ಮಿಲಿಟರಿ ಉಡುಗೆ ಮತ್ತು ತಲೆಗೆ ಅರಬ್ಬರು ಕಟ್ಟುವ “ಕಿಫಾಯೇ’ ಎಂದು ಕರೆಯಲ್ಪಡುವ ಬಟ್ಟೆ ಧರಿಸುತ್ತಿದ್ದ ಅರಫಾತ್ ವಿಶ್ವದ ಅತಿ ಪರಿಚಿತ ನಾಯಕರು. ಅಂಥ ನಾಯಕರ ವಿಧವೆ ಪತ್ರ ನನಗ್ಗೆ ಬಂದಿದ್ದು ನೋಡಿ ಸಂತಸ. ನಡುಗುತ್ತಲೇ ಕ್ಲಿಕ್ಕಿಸಿದೆ. ತೆರೆದು ಕೊಂಡಿತು ಪತ್ರ…

ನಾನು ಸುಹಾ. ಸುಹಾ ಅರಫಾತ್. ಪಲೆಸ್ತಿನ್ ದೇಶದ ದಿವಂಗತ ಅಧ್ಯಕ್ಷರ ಪತ್ನಿ. ಪತಿಯ ಮರಣಾ ನಂತರ ನಾನೀಗ ಲಂಡನ್ನಿನಲ್ಲಿ ನೆಲೆಸಿದ್ದೇನೆ. ನನ್ನ ಹತ್ತಿರ ಐದು ಮಿಲ್ಲಿಯನ್ ಡಾಲರ್ ಇದೆ. ನಿಮ್ಮ ದೇಶದಲ್ಲಿ ವಿನಿಯೋಗಿಸುವ ಆಸೆ ಇದೆ. ಈ ಸಹಾಯಕ್ಕಾಗಿ ನಿಮಗೆ ಶೇಕಡಾ ೨೦ ಭಾಗವನ್ನು ಕೊಡಲು ನಾನು ತಯಾರು. ಹಾಗೆಯೇ ತಮ್ಮ ಮೊಬೈಲ್ ನಂಬರ್, ತಮ್ಮ ಉದ್ಯೋಗದ ಕುರಿತೂ ನನಗೆ ಬರೆಯಿರಿ…. ಹೀಗೆ ಶುರುವಾಯಿತು ವೃತ್ತಾಂತ. ಇದನ್ನು ಓದುತ್ತಿದ್ದಂತೆ ನನಗೆ ವಿಷಯ ತಿಳಿಯಾಗಲು ತೊಡಗಿತು. ಈ ಪತ್ರ ಸಾಮಾನ್ಯವಾಗಿ ಆಫ್ರಿಕಾದ ಅದರಲ್ಲೂ ನೈಜೀರಿಯಾದಿಂದ ಬರುವಂಥವು. ನನ್ನ ಅಪ್ಪ ಕೂಡಿಸಿಟ್ಟ ಐವತ್ತೋ ನೂರೋ ಮಿಲಿಯನ್ ಡಾಲರ್ ಇದೆ, ಅಪ್ಪ ಅಪಘಾತದಲ್ಲಿ ತೀರಿಕೊಂಡ. ಆ ಹಣವನ್ನು ನಿಮ್ಮ ಖಾತೆಗೆ ರವಾನಿಸುತ್ತೇನೆ ಎಂದು ಹೇಳಿ ನಯವಾಗಿ ಬಲೆಯನ್ನು ಹೆಣೆಯುತ್ತಾರೆ ಕಪಟವರಿಯದ ಜನರ ಸುತ್ತ. ನೀವು ತಿಳಿಯಬಹುದು ಇಂಥ ಮೋಸದ ವ್ಯಾಪಾರಕ್ಕೆ ಯಾರಾದರೂ ಬೀಳುತ್ತಾರೆಯೇ ಎಂದು. ಖಂಡಿತ ಬೀಳುತ್ತಾರೆ. ಖೊಟ್ಟಿ ಜನರ ಸಹವಾಸ ಎಂದರೆ ನಮ್ಮ ಜನರಿಗೆ ಬಹಳ ಇಷ್ಟ. ಮಕ್ಕಳಾಗದವರಿಗೆ ಭಸ್ಮ ನೀಡುವ ಸನ್ಯಾಸಿಯಿಂದ ಹಿಡಿದು, ನಪುಂಸಕತೆ ಹೋಗಲಾಡಿಸಿ ಹೊಸ ಪುರುಷತ್ವ ತಂದು ಕೊಡುವ ಖೊಟ್ಟಿ ವೈದ್ಯ ನವರೆಗೆ, ಹಲವು ರೀತಿಯಲ್ಲಿ ಜನರು ಮಾಡುವ ಮೋಸದ ಅರಿವಿದ್ದೂ ಪದೇ ಪದೇ ಅವರುಗಳು ತೋಡಿಟ್ಟ ಹೊಂಡಕ್ಕೆ ಬೀಳಲೇ ಬೇಕು ಅಮಾಯಕರು.

ಬೆಂಗಳೂರಿನ, ಇಂಟರ್ನೆಟ್ ಕೇಂದ್ರ ನಡೆಸುವ ಕೇರಳ ಮೂಲದ ದಂಪತಿಗಳಿಗೆ ಇದೇ ರೀತಿಯ ಟೋಪಿಯೊಂದು ಇಂಗ್ಲೆಂಡಿ ನಿಂದ ಹಾರಿ ಬಂದಿತ್ತು. ಸಾಲ ಸೋಲ ಮಾಡಿ, ಒಡವೆ, ಪಾತ್ರೆ ಪಗಡಿ ಎಲ್ಲಾ ಅಡವಿಟ್ಟು ಹಣ ಕಳಿಸಿದರು ಡಾಲರ್ ಸಿಗುವ ನಿರೀಕ್ಷೆಯಲ್ಲಿ. ಆದರೆ ತಮ್ಮ ಹೆಗಲು ಏರಿದ್ದು ಡಾಲರ್ ತುಂಬಿದ ಚೀಲವಲ್ಲ, ಶುದ್ಧ ಮೋಸ ಎಂದು ಅವರಿಗೆ ತಡವಾಗಿ ವೇದ್ಯವಾಯಿತು. ಬದುಕಿಡೀ ದುಡಿದರೂ ತೀರಿಸಲಾಗದ ಸಾಲದ ಹೊರೆ ಆ ನತದೃಷ್ಟ ದಂಪತಿಗಳ ಸಂಗಾತಿಯಾಯಿತು. ಮೇಲ್ ಮೂಲಕ ಹಣ ಹೇಗಾದರೂ, ಏಕಾದರೂ ಬರಬೇಕು, ಹೇಳಿ? ಯಾರಿಗಾದರೂ ಪುಕ್ಕಟೆಯಾಗಿ, ಯಾವುದೇ ಶ್ರಮವಿಲ್ಲದೆ ಹಣ ಬಂದಿದ್ದಿದೆಯೇ? ಲಾಟರಿ ಒಂದನ್ನು ಹೊರತು ಪಡಿಸಿ ಹಣ ಪುಕ್ಕಟೆಯಾಗಿ ಬರಲಿಕ್ಕಿಲ್ಲ. ಹೀಗಿರುವಾಗ ಮೇಲ್ ಮೂಲಕ ಮಿಲಿಯನ್ ಗಟ್ಟಲೆ ಡಾಲರ್ ಹೇಗೆ ಬರಬಹುದು?

ನೆನಪಿಡಿ, ಮೇಲ್ ಮೂಲಕ ಬರುವುದು bugs ಗಳು. bucks ಅಲ್ಲ.