ಗೋ ಹತ್ಯೆ ನಿಷೇಧಿಸಿ

ದೇಶದ ಸಮಯ, ಸಂಪನ್ಮೂಲಗಳನ್ನು ನುಂಗುತ್ತಿರುವ ಹಲವು ತಗಾದೆಗಳಲ್ಲಿ ಗೋ ಹತ್ಯೆ ಒಂದು. ಹಿಂದೂಗಳು ಪವಿತ್ರ, ಮಾತೆ ಎಂದು ಆದರಿಸಲ್ಪಡುವ, ಗೌರವಿಸಲ್ಪಡುವ ಗೋವಿನ ಮತ್ತು ಅದನ್ನು ಸಂರಕ್ಷಿಸಬೇಕಾದ ವಿಧಾನಗಳ ಬಗ್ಗೆ ಚರ್ಚೆಗೆ ಶತಮಾನಗಳ ಇತಿಹಾಸ ಇದೆ. ಸಾಕಷ್ಟು ನೆತ್ತರೂ ಹರಿದಿದೆ. ದೇಶವನ್ನು ಕಿತ್ತು ತಿನ್ನುವ ಸಮಸ್ಯೆಗಳಿಗೆ ರಾಜಕಾರಣದ ಲೇಪನ ಇಲ್ಲದಿದ್ದರೆ ಅದಕ್ಕೆ ಮಹತ್ವವಾಗಲೀ, ಮೋಜಾಗಲೀ ಇರುವುದಿಲ್ಲ. ಗೋ ವಿನ ವಿಷಯದಲ್ಲೂ ಆಗಿದ್ದೂ ಇದೇ.  ಗೋ ಮಾಂಸ ಭಕ್ಷಕರೆಂದು ಪರಿಗಣಿಸಲ್ಪಡುವ, ಮುಖ್ಯವಾಗಿ ಕ್ರೈಸ್ತರು ಮತ್ತು ಮುಸ್ಲಿಮರಿಗೆ, ಗೋ ಮಾಂಸವನ್ನು ಅವರ ಮೆನ್ಯು (menu) ಪಟ್ಟಿಯಿಂದ ತೆಗೆದುಬಿಟ್ಟರೆ ಆಕಾಶ ಕಳಚಿ ಬೀಳೋಲ್ಲ. ಹೃದಯದ  clogged arteries ಗಳಿಗೆ ಮಾತ್ರ ದೊಡ್ಡ ಪ್ರಯೋಜನವಾಗುತ್ತದೆ ಈ ಮಾಂಸ ಮೆನ್ಯು ವಿನಿಂದ ಹೊರಗುಳಿದರೆ.

ಈಗ ಪ್ರವೇಶ ರಾಜಕಾರಣ. ಎಂಟರ್ ದಿ ಡ್ರಾಗನ್ ಥರ. ಅಪಾಯಕಾರಿ ಆದರೂ ಒಂದಿಷ್ಟು ಸೀಟುಗಳನ್ನು ಅಥವಾ ಅಧಿಕಾರದ ಗದ್ದುಗೆಯನ್ನು ತರಲು ಸಹಕಾರಿಯಾದರೆ ಗೋವನ್ನು ಮಾತ್ರವಲ್ಲ ಯಾರನ್ನು ಬೇಕಾದರೂ ಬಲಿ ಕೊಡಲು ಸಿದ್ಧ. ಗೋಮಾಂಸ ನಿಷೇಧಿಸಿದರೆ ಅಲ್ಪಸಂಖ್ಯಾತರ ಆಹಾರ ಪದ್ಧತಿ ಯಲ್ಲಿ ಹಸ್ತಕ್ಷೇಪ ನಡೆಸಿದಂತೆ ಎಂದು ರಗಳೆ ಇವರದು. ಗೋ ಮಾಂಸ ತಿಂದೇ ಸಿದ್ಧ ಎಂದು ಪಟ್ಟು ಹಿಡಿಯುವ ಅಲ್ಪತನ ಅಲ್ಪ ಸಂಖ್ಯಾತರು ತೋರಿಸರು ಎನ್ನುವ ಪ್ರಜ್ಞೆ ಇವರಿಗಿಲ್ಲ, ಆಳುವ ಮಂದಿಗೆ. ಗೋ ಮಾಂಸ ನಿಷೇಧಿಸಿ ಬಿಟ್ಟರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದೀತು ಎನ್ನುವ ಅತಂತ್ರ, ಅಭದ್ರ ಮನಸ್ಥಿತಿಯವರೂ ಅಲ್ಲ ಮುಸ್ಲಿಮರು ಅಥವಾ ಕ್ರೈಸ್ತರು. ಮತ್ತೇಕೆ ಈ ಸಮಸ್ಯೆ ಆಗಾಗ ತಲೆ ಎತ್ತುತ್ತಾ ಇರುತ್ತದೆ ಎನ್ನುವುದು ಯಕ್ಷ ಪ್ರಶ್ನೆ.

ಗೋ ಹತ್ಯೆ ಬಹುಸಂಖ್ಯಾತ ವರ್ಗದವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಾದರೆ ಖಂಡಿತಾ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದೇ ತೀರಬೇಕು. ಗೋ ಹತ್ಯಾ ನಿಷೇಧ ಕೂಡದು ಎನ್ನುವ ಕಾಂಗ್ರೆಸ್ಸಿಗರು ಮುಸ್ಲಿಮರ ಓಟಿಗಾಗಿ ದೊಂಬರಾಟ ನಡೆಸೋದು ನಿಲ್ಲಿಸಬೇಕು. ಮುಸ್ಲಿಮರಿಗೆ ಗೋ ಮಾಂಸ ತಿನ್ನಲೇ ಬೇಕೆನ್ನುವ ನಿಯಮವೇನಿಲ್ಲ. ದಿನ ಪೂರ್ತಿ ಇದರ ಜಪ ಮಾಡುತ್ತಾ ಕೂರುವ ವ್ಯವಧಾನವೂ ಇಲ್ಲ ಅವರಲ್ಲಿ. ಅವರಿಗೆ (ಮುಸ್ಲಿಮರಿಗೆ) ತಲೆಕೆಡಿಸಿ ಕೊಳ್ಳಬೇಕಾದ ನೂರೊಂದು ವಿಷಯಗಳಿವೆ. ಮುಸ್ಲಿಂ ಧರ್ಮೀಯ ಸಸ್ಯಾಹಾರಿಯಾಗಲು ಧರ್ಮದ ಅಡ್ಡಿಯಿಲ್ಲ. ನಿಷೇಧ ಬೇಡ ಎನ್ನುವ ಕಾಂಗ್ರೆಸ್ಸಿಗರಿಗೆ ಏಕೆ ಗೋವು ಪವಿತ್ರ ಅಲ್ಲ ಅನ್ನೋದು ಒಂದು ಒಗಟು. ಹಾಗೆಯೇ ಗೋವು ಪಾವಿತ್ರ್ಯತೆಯನ್ನು ಪಡೆದು ಕೊಂಡಿದ್ದು ಯಾವಾಗಿನಿಂದ ಎಂದು ಯಾರಾದರೂ ಬೆಳಕು ಚೆಲ್ಲಿದರೆ ಉಪಕಾರ. ಈ ಸಂಬಂಧ ಪ್ರೊಫೆಸರ್ D.N. Jha ರವರು ಬರೆದ the myth of holy cow ಪುಸ್ತಕದಲ್ಲಿ ಗೋಮೇಧ, ಅಶ್ವಮೇಧ ಯಾಗಗಳು, ಗೋಮಾಂಸ ಭಕ್ಷಿಸಿದ ಉದಾಹರಣೆಗಳೊಂದಿಗೆ ವಿಸ್ತೃತವಾದ ಮಾಹಿತಿಗಳಿವೆ.

ಗೋ ಹತ್ಯೆಯ ಬಗ್ಗೆ ಮುಸ್ಲಿಮರಿಗೆ ಇರುವ ತಕರಾರಿಗಿಂತ ಬಹುಸಂಖ್ಯಾತರಿಗೆ ಹೆಚ್ಚು ಆಸಕ್ತಿಕರ ಎನ್ನುವುದು ಕಾಂಗ್ರೆಸ್ಸಿಗರ ಮತ್ತು ಇತರೆ ಪಕ್ಷಗಳವರ ಪ್ರತಿಭಟನೆಗಳಿಂದ ವ್ಯಕ್ತವಾಗುತ್ತದೆ. ಈ ತಗಾದೆಯಿಂದ ಶಾಂತಿ ಪ್ರಿಯ ಭಾರತೀಯರು ಹೊರಗುಳಿದರೆ ದೇಶಕ್ಕೆ ಒಳ್ಳೆಯದು. ಏಕೆಂದರೆ ಇಲ್ಲಿ ನಡೆಯುತ್ತಿರುವುದು ಚರ್ಚೆಗಿಂತ ಸಮುದಾಯಗಳ ನಡುವಿನ ಕಂದಕದ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತದೆ.     

  

 

ಬುರ್ಖಾ ಹೆಣ್ತನಕ್ಕೆ ಅಪಮಾನ

hijab protest
ಬುರ್ಖಾ ಧಾರ್ಮಿಕ ತೊಡುಗೆ ಅಲ್ಲ ಬದಲಿಗೆ ಅದೊಂದು ಗುಲಾಮಗಿರಿಯ ಸಂಕೇತ ಎಂದು ಕರೆದು ಫ್ರೆಂಚ್ ಅಧ್ಯಕ್ಷ ನಿಕೊಲಸ್ ಸರ್ಕೊಜಿ ಹೊಸ ವಿವಾದಕ್ಕೆ ನಾಂದಿ ಹಾಡಿದರು.

ಈ ಅಧ್ಯಕ್ಷ ಮದುವೆಯಾಗದೆ ತನ್ನೊಂದಿಗೆ ಒಬ್ಬ ಹಾಡುಗಾರ್ತಿಯನ್ನು (ಮಾಡೆಲ್ ಸಹ ಹೌದು) ಇಟ್ಟುಕೊಂಡು ವಿಶ್ವವೆಲ್ಲಾ ಸುತ್ತಾಡಿದ. ಅನೈತಿಕ ಸಂಬಂಧ ಹೊಂದಿದ್ದ ಈ ಪ್ರಜೆಗಳಿಂದ ಆಯ್ಕೆಯಾದ ಅಧ್ಯಕ್ಷನಿಗೆ ಮುಸ್ಲಿಮರಾರೂ ಹೀಗಳೆಯಲಿಲ್ಲ. ಇವರ ಸಂಸ್ಕೃತಿಯೇ ಸ್ವೇಚ್ಚಾಚಾರದ್ದು, ನಮಗೇಕೆ ಅದರ ಅದರ ಉಸಾಬರಿ ಎಂದು ಮುಸ್ಲಿಮರು ಸುಮ್ಮನಿದ್ದರು.

ಇಂಥದ್ದೇ ಮತ್ತೊಬ್ಬ ನಾಯಕ ಇಟಲಿಗೆ. ಸಿಲ್ವಿಯೋ ಬೆರ್ಲಸ್ಕೊನಿ ಪ್ರಧಾನಿಯಾದರೂ ತನ್ನ ಸ್ತ್ರೀ ಲೋಲುಪತೆಯನ್ನು ಬಿಡಲಿಲ್ಲ. ಆಗರ್ಭ ಶ್ರೀಮಂತ ಬೇರೆ. ಹೆಣ್ಣುಗಳಿಗೆ ಬರವೇ? ೭೨ ರ ಈತನಿಗೆ ೧೯ರ ಪೋರಿ ಸಂಗಾತಿ. ಮೊನ್ನೆ ಮತ್ತೊಂದು ಹಗರಣ. ಶ್ರೀಮಂತ ಕರೆವೆಣ್ಣನ್ನು ತನ್ನ ಬಂಗಲೆಗೆ ಕರೆಸಿ ” wait for me in the big bed ” ಎಂದು ಸಂದೇಶ ಕಳಿಸಿದ. ಇವಾವುದೂ ಅವರಿಗೆ ದೊಡ್ಡದಲ್ಲ. ಓರ್ವ ಹೆಣ್ಣು ತನ್ನ ಇಷ್ಟದ ಪ್ರಕಾರ ಉಡುಗೆ ತೊಟ್ಟರೆ, ಮಾನವಾಗಿರಲು ಇಚ್ಚಿಸಿದರೆ ಬಂತು ತಕರಾರು. ಹೆಣ್ಣಿನ ಶೋಷಣೆ ಅಂತ ಪುಕಾರು.
     
ಮುಸ್ಲಿಮರು ಇತರರ ವಸ್ತ್ರ ಶೈಲಿಯನ್ನು ಟೀಕಿಸುವುದಿಲ್ಲ, ಬಿಕಿನಿ ಆದರೂ ಹಾಕಲಿ, ನಗ್ನಾರಾಗಿಯಾದರೂ ಹೋಗಲಿ, ಅದು ನಮಗೆ ಸಂಬಂಧಿಸಿದ್ದಲ್ಲ. ಆಧುನಿಕತೆಯ ಹೆಸರಿನಲ್ಲಿ, ಸೌಂದರ್ಯ ಸ್ಪರ್ದೆಯ ಹೆಸರಿನಲ್ಲಿ ನಗ್ನತೆಯನ್ನು ಕೊಂಡಾಡುವ ಸಂಸ್ಕೃತಿಗೆ ಇಸ್ಲಾಮಿನ ಮನ್ನಣೆ ಇಲ್ಲ. ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯಕ್ಕೆ ಗೌರವ ಸಲ್ಲಿಸುವ ಧರ್ಮಕ್ಕೆ ಸ್ತ್ರೀ ಲೋಲುಪ ನಾಯಕರುಗಳ ಶಿಫಾರಸು ಬೇಡ, ಅದರ ಅಗತ್ಯವೂ ಇಲ್ಲ.