ಇಂಥ ಮಾತುಗಳನ್ನು ಎಂದಾದರೂ ಕೇಳಿದ್ದೀರಾ?

ಆರು ವರ್ಷ ಪ್ರಾಯದ ಮುಬೀನ ನನ್ನ ಸೋದರಿಯ ಮಗಳು. ಅವಳು ಮಾತನಾಡಲು ಶುರು ಮಾಡಿದಂದಿನಿಂದ ನಮ್ಮನ್ನು ದಂಗು ಬಡಿಸುವ ಮಾತುಗಳನ್ನೇ ಆಡುತ್ತಿದ್ದುದು. ಅರಳು ಹುರಿದಂತೆ ಮಾತನ್ನಾಡುತ್ತಿದ್ದ ಮುಬೀನಾ ಳನ್ನು ನನ್ನ ತಂದೆ ತಾಯಿ ತುಂಬಾ ಪ್ರೀತಿಸುತ್ತಿದ್ದರು. ಒಂದೆರಡು ದಿನಗಳ ರಜೆ ಸಿಕ್ಕರೂ ಅಪ್ಪ ಅವಳಿರುವಲ್ಲಿಗೆ ತಾವೇ ಹೋಗಿ ಕರೆದು ಕೊಂಡು ಬರುತ್ತಿದ್ದರು. ಒಂದೆರಡು ದಿನ ಇದ್ದು ಅವಳ ಮನೆಗೆ ಅವಳು ಮರಳಿದರೆ ಮಣೆ ಬಿಕೋ ಎನ್ನುತ್ತಿರುತ್ತದೆ. ಕೆಲವೊಮ್ಮೆ ತನ್ನ ಅಮ್ಮನನ್ನು ಬಿಟ್ಟು ಅವಳ ಅಜ್ಜಿಯ ಮನೆಯಲ್ಲಿ ಇರುತ್ತಿದ್ದ ಸಮಯದಲ್ಲಿ ನಿನ್ನ ಅಜ್ಜಿ ಚೆನ್ನಾಗಿ ನೋಡಿ ಕೊಳ್ಳುತ್ತಾರಾ ಎಂದು ಮನೆಯಲ್ಲಿ ಕೇಳುತ್ತಿದ್ದರು. ಯಾವಾಗಲೂ ಏನಾದರೊಂದು ಕಂಪ್ಲೇಂಟ್ ಇದ್ದೇ ಇರುತ್ತಿತ್ತು ಅವಳ ಹತ್ತಿರ. ಅಜ್ಜಿ ಹಾರ್ಲಿಕ್ಸ್ ಕೊಡೋಲ್ಲ, ಐಸ್ ಕ್ರೀಂ ಕೊಡೋಲ್ಲ ಎನ್ನುವಂಥವು .

ಮೊನ್ನೆ ನಮ್ಮ ಮನೆಯಲ್ಲಿ ಅವಳನ್ನು ಕೇಳಿದರು ನಿನ್ನ ಅಜ್ಜಿ (ಅವಳ ತಂದೆಯ ತಾಯಿ) ನಿನ್ನನ್ನು ಹೇಗೆ ನೋಡಿಕೊಳ್ಳುತ್ತಾರೆ ಅಂತ. ಆಗ ಅವಳು ಹೇಳಿದ್ದು, ನಾವು ಹೋಂ ವರ್ಕ್ ಮಾಡುವಾಗ ಮೊದಮೊದಲು ಚೆನ್ನಾಗಿ ತಪ್ಪಿಲ್ಲದೆ ಗುಂಡು ಗುಂಡಾಗಿ ಬರೆಯುತ್ತೇವೆ, ಸ್ವಲ್ಪ ಬರೆದಾದ ಮೇಲೆ ಬೇಕಾಬಿಟ್ಟಿ ಬರೆಯುತ್ತೆವಲ್ಲಾ ಹಾಗೆ ಅಜ್ಜಿಯೂ ಕೂಡಾ. ಮೊದ ಮೊದಲು ಚೆನ್ನಾಗಿ ನೋಡಿ ಕೊಳ್ಳುತ್ತಾರೆ, ಆಮೇಲೆ ಏನೂ ಕೊಡೋಲ್ಲಾ, ಎಂದು ಹೇಳಿ ಎಲ್ಲರನ್ನೂ ಬೇಸ್ತು ಬೀಳಿಸಿದಳು. ಅವಳ camparison ನೋಡಿ.

ಮುಬೀನಾ ಶಾಲೆಗೆ ಹೋಗುತ್ತಿದ್ದ ಆರಂಭದ ದಿನಗಳು. ವ್ಯಾನ್ ಡ್ರೈವರ್ ಮಕ್ಕಳನ್ನು ಉಸಿರುಗಟ್ಟುವ ರೀತಿಯಲ್ಲಿ ತುಂಬುತ್ತಿದ್ದ. ಇದನ್ನು ಕಂಡು ರೋಸಿದ ಅವಳು ಡ್ರೈವರ್ನನ್ನು ಕೇಳಿದಳು, ಏಯ್, ನಾವೇನು ಕೋಳಿ ಮರಿಗಳಾ ಈ ಥರಾ ತುಂಬಲು ಎಂದು. ಮಕ್ಕಳಿಗೆ ಮಾತುಗಳ ಟ್ರೈನಿಂಗ್ ಸಾಮಾನ್ಯವಾಗಿ ದೊಡ್ಡವರಿಂದ ಬಂದರೂ ಕೆಲವೊಮ್ಮೆ ನಾವು ಹೇಳಿರದಂಥ ಮಾತುಗಳನ್ನು ಹೇಳಿ ಬೆಚ್ಚಿ ಬೀಳಿಸುತ್ತಾರೆ ನಮ್ಮನ್ನು.

ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು

ಕೆಲವೊಂದು ಮಾತುಗಳು ಎಂದಿಗೂ ಕಿವಿಗಳಲ್ಲಿ ರಿಣ ಗುಟ್ಟು ತ್ತಿರುತ್ತವೆ. ಅವು ಕುಹಕವಾಗಿರಬಹುದು, ಪ್ರಶಂಸೆ ಆಗಿರಬಹುದು, ತಮಾಷೆ ಅಥವಾ ಗೇಲಿಗಾಗಿ ಇರಬಹುದು. ಕೆಳಗಿದೆ ಒಂದಿಷ್ಟು ಮಾತುಗಳು ನನ್ನ ನೆನಪಿನ ಮೂಸೆಯಿಂದ ಹೊರಬಂದವು.

ಸೋಮನಾಥ್ ಚಟರ್ಜೀ ದೊಡ್ಡ ಮಾತುಗಾರ, ವಾಗ್ಮಿ. ಭಾಜಪ ಸೋತ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರ ಸೋಮನಾಥರನ್ನು ಲೋಕಸಭೆಯ ಸಭಾಪತಿ ಆಗಿ ನೇಮಿಸಿತು. ಚಟರ್ಜಿ ಯವರನ್ನು ಅಭಿನಂದಿಸುತ್ತಾ, ಸೋಮನಾಥ ಚಟರ್ಜಿ ಮಟ್ಟದ ವಾಗ್ಮಿಯಲ್ಲದಿದ್ದರೂ ಒಳ್ಳೆಯ ಭಾಷಣಕಾರರಾದ ವಾಜಪೇಯಿ “ಇಷ್ಟು ಕಾಲ ತಾವು ಹೇಳಿದ್ದನ್ನು ನಾವು ಕೇಳುತ್ತಿದ್ದೆವು, ಈಗ ನಾವು ಹೇಳಿದ್ದನ್ನು ಕೇಳುತ್ತಾ ಕೂರುವ ಸರದಿ ತಮ್ಮದು ಎಂದು ಹಾಸ್ಯದ ಚಟಾಕಿ ಹಾರಿಸಿದ್ದರು. ಸಭಾಪತಿಯ ಕೆಲಸ ಸದಸ್ಯರು ಮಾತನಾಡುವುದನ್ನು ಕೇಳುತ್ತಾ ಕೂರುವುದು ತಾನೇ?

ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಯಾವುದೇ ಗಲಭೆಗಳು ದೇಶದಲ್ಲಿ ನಡೆದರೂ ಮೂರಕ್ಷರದ ಸಂಘಟನೆ ಯೊಂದನ್ನು ಯಾವಾಗಲೂ ದೂರುತ್ತಿದ್ದರು. ಹಾಗೆಯೇ ವಿದೇಶೀ ಕೈವಾಡದ ಮಾತು ಬಂದಾಗ ನೆರೆಯ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸುತ್ತಿದ್ದರು. ಪದೇ ಪದೇ ಈ ಮಾತನ್ನು ಕೇಳಿ ಬೇಸತ್ತಿದ್ದ ವಿರೋಧಪಕ್ಷದ ನಾಯಕರಲ್ಲಿ ಒಬ್ಬರಾದ ಸುಬ್ರಮಣ್ಯಮ್ ಸ್ವಾಮೀ ಭಾಷಣ ವೊಂದರಲ್ಲಿ ಹೇಳಿದ್ದು. “ ನಾನು ಲೋಕಸಭೆಯ ಕಲಾಪಗಳಲ್ಲಿ ಪಾಲುಗೊಂಡಾಗ ವಿದೇಶೀ ಸಮಸ್ಯೆಗಳಿಗೆ ಇಂದಿರಾ ಪಾಕಿನ ಕೈವಾಡ ಇದೆ ಎಂದು ಹೇಳುವುದನ್ನು ಹಲವು ಬಾರಿ ಕೇಳಿದ್ದೇನೆ. ಭಾರತದಲ್ಲಿ ಜನಸಂಖ್ಯೆ ವಿಪರೀತ ಏರುತ್ತಿದೆ, ಇದರಲ್ಲೂ ಪಾಕಿಸ್ತಾನದ ಕೈವಾಡ ಇರಬಹುದೇ ಎಂದು ನನ್ನ ಸಂಶಯ ಎಂದು ತಮಾಷೆ ಮಾಡಿದರು.

ಬಾಟ್ಲಿಂಗ್ ಹಗರಣದ ಸಮಯ ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಡೆ ವಿಚಾರಣೆಗೆ ಆದೇಶ ನೀಡಿದರು. ಕುಂಬ್ಳೆ ಕಾಯಿ ಕಳ್ಳ ಅಂದ್ರೆ ಹೆಗಲನ್ನು ಯಾಕೆ ಮುಟ್ಟಿ ನೋಡ್ ಕೊಳ್ತೀರಾ ಎಂದು ವಿರೋಧ ಪಕ್ಷ ಕೆಣಕಿದಾಗ ಹೆಗ್ಡೆ ಹೇಳಿದ್ದು, “… ಹೆಗಲು ಮುಟ್ಟಿ ನೋಡಿಕೊಂಡಾಗ ಬೂದಿ ಮೆತ್ತಿ ಕೊಂಡಿತ್ತು” ಸಂಶಯ ನಿವಾರಣೆಯಾಗಲಿ ಎಂದು ತನಿಖೆಗೆ ಆದೇಶ ನೀಡಿದೆ ಎಂದರು.

ಬಹಳ ವರ್ಷಗಳ ಹಿಂದಿನ ಮಾತು. ಲೋಕಸಭೆಯಲ್ಲಿ ಒಮ್ಮೆ ಸದಸ್ಯರೊಬ್ಬರು ಕೇರಳದ ಬಗ್ಗೆ ಚರ್ಚೆ ನಡೆದಾಗ “ಕೇರಳದ ಹೆಣ್ಣು ಮಕ್ಕಳು ಬೆಳದಿಂಗಳಿನಲ್ಲಿ ನೋಡಲು ಬಲು ಚೆಂದ” ಎಂದು ಪ್ರಶಂಸಾತ್ಮಕವಾಗಿ ಹೇಳಿದ್ದೆ ತಡ ಕೇರಳದ ಸದಸ್ಯರೆಲ್ಲ ತೀವ್ರವಾಗಿ ಪ್ರತಿಭಟಿಸಿ ಆ ಬಡಪಾಯಿ ಸದಸ್ಯ ಕ್ಷಮೆ ಕೇಳುವಂತೆ ಮಾಡಿದರು.

ನಮ್ಮ ಕರ್ನಾಟಕದ ವಿಧಾನ ಪರಿಷತ್ ಸದಸ್ಯ A.K. ಸುಬ್ಬಯ್ಯ ಒಂದು ರೀತಿಯ AK 47 ತುಪಾಕಿಯಂತೆ. ಅವರ ಯಾವುದೇ ಮಾತುಗಳು ನೆನಪಿಗೆ ಬರದಿದ್ದರೂ ಇಬ್ರಾಹೀಮರ ROLEX WATCH ನ ಹಿಂದೆ ಬಿದ್ದು ಸಾಕಷ್ಟು ಸತಾಯಿಸಿದ್ದು ಮಾತ್ರ ಇನ್ನೂ ನೆನಪಿದೆ.

ತನ್ನ rabble rousing ಭಾಷಣದಿಂದ ದೇಶದ ವಿವಿದೆಡೆ ದೊಡ್ಡ ತಲೆನೋವು ತರುತ್ತಿದ್ದ ತೊಗಾಡಿಯಾ ಬಿಹಾರ ಪ್ರವಾಸದ ಮೇಲೆ ಪಾಟ್ನಾ ನಗರದಲ್ಲಿ ಬಂದಿಳಿದಾಗ ವಿಮಾನ ನಿಲ್ದಾಣ ದಿಂದಲೇ ಆತನನ್ನು ಆತ ಬಂದ ಊರಿಗೆ ರವಾನಿಸಿ ಆದೇಶ ಹೊರಡಿಸಿದ ಲಾಲೂ ಪ್ರಸಾದ ಯಾದವ್ ಪತ್ರಕರ್ತರಿಗೆ ಹೇಳಿದ್ದು “ ತೊಗಾಡಿಯಾ ನಿಗೆ ಎಂಥ ಲಾತ (kick) ಕೊಟ್ಟಿದ್ದೇವೆ ಎಂದರೆ ಆತ land ಆಗೋದು ದೆಹಲಿಯಲ್ಲೇ (we have kicked him like a football and he will land only in delhi) ಎಂದು ತಮ್ಮ ಎಂದಿನ ಚಮತ್ಕಾರದ ನಗುವಿನೊಂದಿಗೆ ಹೇಳಿದರು. ರಾಜಕಾರಣಿಗಳು ಬರೀ ರಾಜಕೀಯ ಮಾತ್ರವಲ್ಲ ತಮ್ಮನ್ನು ಆರಿಸಿದ ಜನರಿಗೆ ಆಗಾಗ ಪುಕ್ಕಟೆ ಮನರಂಜನೆಯನ್ನೂ ಕೊಡುತ್ತಾರೆ.

ಭಾಜಪದ ಅಧಿಕಾರಾವಧಿಯಲ್ಲಿ ವಾಜಪೇಯೀ ಪ್ರಧಾನಿಯಾದರೂ ತೆರೆಮರೆಯ ಚುಕ್ಕಾಣಿ ಅದ್ವಾನಿ ಕೈಯ್ಯಲ್ಲಿ ಎಂದು ಕೆಲವರ ಅಭಿಮತವಾಗಿತ್ತು. ಹಾಗೆಂದ ಮೇಲೆ ಯಾರದಾದರೂ ಬಾಯಲ್ಲಿ ಉದುರಲೇ ಬೇಕಲ್ಲವೇ ಅಣಿ ಮುತ್ತುಗಳು? ಉದುರಿದವು ನೋಡಿ ಆವರದೇ ಪಕ್ಷದ ಮುಖಂಡ ಶೇಷಾದ್ರಿ ಬಾಯಿಂದ. ವಾಜಪೇಯೀ ಭಾಜಪ ಸರಕಾರದ ಮುಖವಾಡ ಮಾತ್ರ ಎಂದು ಹಾಕಿದರು ಬಾಂಬನ್ನು. ಹಿಂದಿಯಲ್ಲಿ “ಮುಖೋಟ” ಕನ್ನಡದಲ್ಲಿ ಮುಖವಾಡ. ರಾಜಧಾನಿ ಸೇರಿ ದೇಶವೇ ನಲುಗಿತು ಈ ಬಾಂಬಿಗೆ. ಈ ಮಾತಿನ ಕಾರಣ ದೊಡ್ಡ ಗಲಾಟೆ ಎದ್ದ ಕೂಡಲೇ ತಡಬಡಿಸಿ ಅವರು ಹೇಳಿದ್ದು “ನಾನು ಹೇಳಿದ್ದು ಮುಖೋಟಾ ಅಲ್ಲ, “ಮುಕುಟ್” (ಕಿರೀಟ) ಹೇ ಹೇ ಹೇ ಎಂದು ಸೋತ ನಗುವಿನೊಂದಿಗೆ ತಮ್ಮ ಮತ್ತು ಸರಕಾರದ ಮಾನ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದರು. ಕೆಲವೊಮ್ಮೆ ರಾಜಕಾರಣಿಗಳು ತಾವು ಮೊದಲು ರಾಜಕಾರಣಿ ನಂತರ ಎಲ್ಲರಂತೆಯೇ “ಮನುಷ್ಯ” ಎಂದು ಸಾಬೀತು ಪಡಿಸುತ್ತಾರೆ ತಮ್ಮ ಮಾತುಗಳಿಂದ.

೧೯೯೦ ರಲ್ಲಿ ಇರಾಕ್ ನ ಅಧ್ಯಕ್ಷರಾದ ಸದ್ದಾಮ್ ಹುಸೇನರು ಕುವೈತ್ ದೇಶವನ್ನು ವಶಪಡಿಸಿಕೊಂಡದ್ದಕ್ಕೆ ಅಮೆರಿಕಾದ ಅಧ್ಯಕ್ಷ ಬುಶ್ ಸೀನಿಯರ್ ಇರಾಕಿನ ಮೇಲೆ ಆಕ್ರಮಣ ಎಸಗಲು ಮೀನಾ ಮೇಷ ಎಣಿಸುತ್ತಿದ್ದಾಗ ಅಂದಿನ ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಹೇಳಿದ್ದು “dont wobble, george” ಅಂತ. ಅಂದರೆ ಹೆದರಬೇಡ ಜಾರ್ಜ್, ನಾನಿದ್ದೇನೆ ನಿನ್ನ ಸಾಮೂಹಿಕ ನರಹತ್ಯೆಗೆ ಸಾಕ್ಷಿಯಾಗಿ ಮತ್ತು ಬೆಂಬಲವಾಗಿ, ಸಾಂಗವಾಗಿ ಸಾಗಲಿ ನಿನ್ನ ಅಮಾಯಕರ ಮೇಲಿನ ಆಕ್ರಮಣ ಎಂದು. ಒಳ್ಳೆಯ ಕೆಲಸಕ್ಕೆ ಮಿತ್ರರು ಸಿಗುವುದು ಸ್ವಲ್ಪ ವಿರಳವೇ, ಆದರೆ ಮನೆ ಹಾಳು ಕೆಲಸಕ್ಕೆ ಸದಾ ಜನರ ಬೆಂಬಲ ಇರುತ್ತದೆ ಎನ್ನುವುದಕ್ಕೆ ಬ್ರಿಟನ್ನಿನ “ಉಕ್ಕಿನ ಮಹಿಳೆ” ಸಾಕ್ಷಿಯಾದರು.

ನಿಮ್ಮ ವಯಸ್ಸೇನು?

How old is too old to wear a mini skirt? ಎನ್ನುವ ಒಂದು ಲೇಖನ ಕಣ್ಣಿಗೆ ಬಿತ್ತು. how old is too old to wear a mini skirt? ಅನ್ನೋ ಪ್ರಶ್ನೆಗೆ ನಿಖರವಾದ ಉತ್ತರ ಸಾಧ್ಯವಲ್ಲದಿದ್ದರೂ ಉಡುವವರ ಅಭಿರುಚಿ, ಅವರ ಸೆನ್ಸ್ ಆಫ್ ಫ್ಯಾಶನ್ ಮತ್ತು ಆಕರ್ಷಕ ಮೈ ಮಾಟ ತಮಗೆ ಬೇಕಾದ ಉಡುಗೆಯನ್ನು ತೊದಲು ಜನರನ್ನು ಪ್ರೇರೇರಿಪಿಸುತ್ತದೆ. ಇದೇನು ಬುರ್ಖಾದಿಂದ ಮಿನಿ ಸ್ಕರ್ಟ್ ಗೆ “ಕುಸಿಯಿತೆ”  ನಿನ್ನ ಅಭಿರುಚಿ ಎಂದು ಹುಬ್ಬೇರಿಸಬೇಡಿ. ಈ ಲೇಖನ ಯಾವುದೇ political statement ಮಾಡ್ತಾ ಇಲ್ಲ, ಬದಲಿಗೆ ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಮನುಷ್ಯ ಯಾವ ಯಾವ ರೀತಿ ಬಟ್ಟೆ ತೊಡುತ್ತಾನೆ/ಳೆ ಎನ್ನುವ ಮೇಲೊಂದು ಪಕ್ಷಿ ನೋಟ. ಬಟ್ಟೆ ಧರಿಸುವಾಗ ವಯಸ್ಸನ್ನೂ ಗಮನಕ್ಕೆ ಇಟ್ಟು ಕೊಳ್ಳಬೇಕು ಎನ್ನುವುದು ಬಹುತೇಕ ಭಾರತೀಯರ ಅಭಿಪ್ರಾಯ. ಒಂದು ಲೆಕ್ಕದಲ್ಲಿ ಇದು ಸರಿಯೂ ಕೂಡಾ. ಮೇಲೆ ಹೇಳಿದಂತೆ ೭೦ ರ ಮಹಿಳೆ ಮಿನಿ ಸ್ಕರ್ಟ್ ತೊಟ್ಟರೆ ಒಂದು ರೀತಿಯ ಅಭಾಸವಾಗುತ್ತದೆ. ನಿಲ್ಲಿ, ನಿಲ್ಲಿ, ಅಭಾಸ ಏಕಾಗಬೇಕು? ನಿಕೃಷ್ಟ ಉಡುಗೆ ತೊಡುವುದನ್ನು ವಿರೋಧಿಸುವವರಿಗೆ ನಾವು ಹೇಳುವ ಕಿವಿ ಮಾತು ಉಟ್ಟ ಬಟ್ಟೆ ಮಾತ್ರ ನೋಡಿದರೆ ಸಾಕು, ಅದರೊಂದಿಗೇ ಬರುವ ಉಬ್ಬು ತಗ್ಗುಗಳನ್ನಲ್ಲ ಎಂದು. ಒಪ್ಪಿಕೊಂಡೆ. ಉಡುಗೆ ಬರೀ ಫ್ಯಾಶನ್ ಸೆನ್ಸ್ ನ ಮಾತ್ರ ಬಿಂಬಿಸಿದರೆ ೧೬ ರ ಪೋರಿಯ ಥರ ೭೦ ರ ಚೆಲುವೆ ಸಹ ಏಕೆ ಮಿನಿ ಸ್ಕರ್ಟ್ ಹಾಕಬಾರದು? ಒಹ್, ಎಪ್ಪತ್ತರ ಮಹಿಳೆಗೆ ೧೬ ರ ಅಂಗ ಸೌಷ್ಠವ ಇಲ್ಲ ಎಂದಿರಬೇಕು, ಹಾಗಾದರೆ ಎಲ್ಲಿ ಹೋಯಿತು ಫ್ಯಾಶನ್ ಸೆನ್ಸ್. ಇಲ್ಲಿರೋದು ಅಪ್ಪಟ ಲೈಂಗಿಕತೆ ಅಲ್ಲವೇ ನಮ್ಮ ನೋಟದಲ್ಲಿ? ವಾದ ವಿವಾದ ಬಂದಾಗ ಅಭಿರುಚಿ, ಫಾಶನ್ ಸೆನ್ಸ್, ಇಲ್ಲದಿದ್ದರೆ  ವಾರೆನೋಟ ಕನಿಷ್ಠ ಉಡುಗೆ ತೊಟ್ಟವರ ಕಡೆ. political statement ಬೇಡ ಎಂದು ಕೊಂಡರೂ ನುಸುಳಿಕೊಂಡಿತು ದರಿದ್ರ ರಾಜಕೀಯ. ವಿಷಯಕ್ಕೆ ಬರೋಣ…

ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ (೯೦ ರ ದಶಕದಲ್ಲಿ) ಅವರಿಗೆ ಪ್ರಾಯ ಹೆಚ್ಚಿರಲಿಲ್ಲ. ೪೫-೫೦ ರ ಸಮೀಪ. ಆಗಾಗ ಜೀನ್ಸ್, ಟೀ ಶರ್ಟ್ ಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದರು. ಕ್ಲಿಂಟನ್ ಅವರದು ಆಕರ್ಷಕ ವ್ಯಕ್ತಿತ್ವ. ಬರೀ ಉಡುಗೆ ಯಲ್ಲಿ ಮಾತ್ರವಲ್ಲ, ಸಂಗೀತದಲ್ಲೂ ಆಸಕ್ತಿ. “ಸಾಕ್ಸೋ ಫೋನ್” ನುಡಿಸುವುದೆಂದರೆ ತುಂಬಾ ಇಷ್ಟ. ಕೆಲವೊಮ್ಮೆ ಸಾರ್ವಜನಿಕ ಸಭೆಗಳಲ್ಲಿ ನುಡಿಸುತ್ತಿದ್ದರು. ಅಧ್ಯಕ್ಷರ ಘನತೆಗೆ ಈ ವರ್ತನೆ ಕುಂದು ಎಂದು ಸಲಹೆಗಾರರು ಕಿವಿ ಮಾತನ್ನು ಹೇಳಿದಾಗ ನಿಲ್ಲಿಸಿದ್ದರು ಸಾಕ್ಸೋ ಫೋನ್ ಸಹವಾಸವನ್ನು. ಹೀಗೆ ಕ್ಲಿಂಟನ್ ಜೀನ್ಸ್ ತೊಟ್ಟಾಗ ಜನ ಹೇಳುತ್ತಿದ್ದದ್ದು ೪೦ ವಯಸ್ಸಿನ ನಂತರ ಜೀನ್ಸ್ ತೊಡುವುದಕ್ಕೆ you need to be brave ಎಂದು. ಅಂದರೆ ಜೀನ್ಸ್ ಅನ್ನು ಹದಿಹರೆಯದವರು, ಕಾಲೇಜಿಗೆ ಹೋಗುವವರು, ಹೀಗೇ ಯುವಜನರು ಮಾತ್ರ ತೊಡಬೇಕು ಎನ್ನುವ ಅಲಿಖಿತ ನಿಯಮ. ಆದರೆ ಈಗ ನೋಡಿ, ೯೦ ರ ತರುಣನೂ (ತರುಣ ಎಂದಾಗ ವ್ಯಂಗ್ಯ ಇಲ್ಲ, ಏಕೆಂದರೆ ವಯಸ್ಸು ೯೦ ಆದರೂ young at heart ಎಂದು ಕೊಳ್ಳುವ ಜನರಿದ್ದಾರೆ) ತೊಡುತ್ತಾನೆ ಜೀನ್ಸ್. ಸುಮಾರು ಐವತ್ತರ ಆಸುಪಾಸಿನ ನನಗೆ ಪರಿಚಯದ ವ್ಯಕ್ತಿಯೊಬ್ಬರು ಜೀನ್ಸ್ ಮಾತ್ರವಲ್ಲ ಕಾಲಿನ ತುಂಬಾ ಜೇಬುಗಳೇ ಇರುವ ಕಾರ್ಗೋ ಪ್ಯಾಂಟುಗಳನ್ನು ಧರಿಸುತ್ತಿದ್ದರು, ಆತ್ಮ ವಿಶ್ವಾಸದಿಂದ. ನೋಡಿ ಇಲ್ಲಿದೆ ಮಂತ್ರ. ಯಾವುದೇ ಉಡುಗೆ ತೊಡಬೇಕಾದರೂ ಆತ್ಮವಿಶ್ವಾಸ ಬೇಕು. ಅದು ನಮ್ಮ ಮುಖದ ಮೇಲೆ, ನಮ್ಮ ಮಾತು, ನಡಿಗೆಯ ಮೇಲೆ ಪ್ರಭಾವ ಬೀರುತ್ತದೆ. ಇನ್ಸ್ಟಂಟ್ ಆಗಿ ಯಂಗ್ ಆಗಿ ಬಿಡುತ್ತೇವೆ, ಆತ್ಮ ವಿಶ್ವಾಸ ಇದ್ದರೆ. ನೀವು ಏನು ತೊಡಬೇಕು ಎಂದು ನಿಮಗೇ ಅರಿವಿಲ್ಲದೆ ಬರೀ ಫ್ಯಾಶನ್ ಟ್ರೆಂಡ್ ಅನ್ನು ಹಿಂಬಾಲಿಸಿದರೆ ಕರೀ ಕಾಗೆ ಚೆಂದ ಕಾಣಲು ಸುಣ್ಣದ ಮೊರೆ ಹೊಕ್ಕ ಹಾಗಾಗಬಹುದು.

ನನ್ನ ಮರೆವು ನನಗೆ ಕೆಲವೊಮ್ಮೆ ಭಾರಿಯಾಗಿ ಕಾಣುತ್ತದೆ. ಮೊನ್ನೆ ಶಾಪ್ಪಿಂಗ್ ಮಾಡಲು ಹೋಗಿ ಎಲ್ಲೋ ನನ್ನ ಸನ್ ಗ್ಲಾಸನ್ನು ಬಿಟ್ಟು ಬಂದೆ. ಮರಳುಗಾಡಿನ ಬೇಗೆಯಲ್ಲಿ ಸನ್ ಗ್ಲಾಸಿಲ್ಲದೆ ಡ್ರೈವ್ ಮಾಡೋದು ಕಷ್ಟ. ಹತ್ತಿರದ ಆಪ್ಟಿಕಲ್ ಶಾಪಿಗೆ ಹೋಗಿ ಕೆಲವೊಂದು ಕನ್ನಡಕಗಳನ್ನು ನೋಡಿದೆ. ಸನ್ ಗ್ಲಾಸ್ ಬರೀ ಸೂರ್ಯ ಕಿರಣಗಳಿಗೆ ಮಾತ್ರವಲ್ಲ, ಅದೊಂದು fashion statement ಸಹ ಅಲ್ವರ? ಅಂಗಡಿಯವ ಸೊಗಸಾದ, ನವನವೀನ ಮಾಡೆಲ್ಲು ಗಳನ್ನು ತೋರಿಸಿದ. ನನಗೆ ಅನುಮಾನ, ಇಷ್ಟೊಂದು fashionable glasses ತೊಡುವ ವಯಸ್ಸಾ ನನ್ನದು ಎಂದು. ನೀವೆಷ್ಟೇ modern outlook ನವರಾದರೂ ದರಿದ್ರ ಸಮಾಜ ಯಾವ ರೀತಿ ನಮ್ಮ ಮತಿಯೊಳಕ್ಕೆ ಬೇಡದ್ದನ್ನು ತುರುಕಿರುತ್ತೋ ಅದು ತನ್ನ ತಲೆಯನ್ನ ಆಗಾಗ ಎತ್ತುತ್ತಿರುತ್ತಲೇ ಇರುತ್ತದೆ. ನನ್ನ ಈ ವಯಸ್ಸಿನ apprehension ಅನ್ನು ನನಗೆ ಗೊತ್ತಿಲ್ಲದೇ ಸೇಲ್ಸ್ ಮ್ಯಾನ್ ಗೆ ಆಡಿಯೂ ತೋರಿಸಿಬಿಟ್ಟೆ, i am not that young to wear those glasses ಎಂದು. lack of confidence? ಕೆಲವೊಮ್ಮೆ ಈ ಲ್ಯಾಕ್ ಆಫ್ ಕಾನ್ಫಿಡೆನ್ಸ್ ಸಹ ಕೆಲಸಕ್ಕೆ ಬರುತ್ತೆ ಅನ್ನಿ.  ಸಾಕಷ್ಟು ಕನ್ನಡಕಗಳನ್ನು ನೋಡಿದ ನಂತರ  ಅಲ್ಲಿ, ಇಲ್ಲಿ ಎಂದು ಚದುರಿ ಹೋಗಿದ್ದ ಕಾನ್ಫಿಡೆನ್ಸ್ ಅನ್ನು gather ಮಾಡಿ ನನಗಿಷ್ಟವಾದ, ಸ್ವಲ್ಪ ಮಾಡರ್ನೇ ಆದ “ತಂಪು ಕನ್ನಡಕ” ಕೊಂಡು ಅಂಗಡಿಯಿಂದ ಹೊರನಡೆದೆ ಹೋಡೀ, ವಯಸ್ಸಿಗೊಂದು ಗೋಲಿ ಎನ್ನುತ್ತಾ.

ಹುಲ್ಲಾಗು ಬೆಟ್ಟದಡಿ,, ಸಿಹಿಯಾಗು ಮಾತಿನಲ್ಲಿ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು — ಮಂಕುತಿಮ್ಮ ।।

ಸಿಹಿಯಾಗು ಮಾತಿನಲ್ಲಿ, ಬೆಳಕಾಗು ಬಾಳಿನಲ್ಲಿ

ರೋಷಾ….ಬಿಡೂ, ಬಿಡೂ, ಸಾಕೂ….   

ಸಂಪದದಲ್ಲಿ ಸಿಕ್ಕ ಈ ಡೀ ವೀ ಜೀ ಯವರ ಸಾಲುಗಳು ಇಷ್ಟವಾದವು, ಹಾಗೆಯೇ ಅದನ್ನು ಓದುತ್ತಿರುವಾಗ “ಸಿಹಿಯಾಗು ಮಾತಿನಲ್ಲಿ…..” ಹಾಡು ನೆನಪಿಗೆ ಬಂತು.

ಈ ಮೇಲಿನ ಮಾತುಗಳು ಬಹುಶಃ ಹಗೆ ವರ್ತಕರಿಗೆ ಇಷ್ಟವಾಗದಿರಬಹುದು. ಆದರೂ ಒಂದಲ್ಲ ಒಂದು ದಿನ ತಮ್ಮ “ವ್ಯಾಪಾರ” ಬಿಟ್ಟು ಮಾನವೀಯ ಮೌಲ್ಯಗಳ ಕಡೆ ಗಮನ ಕೊಡುವರೆಂಬ ಆಶಯ ಮನದ ಮೂಲೆಯಲ್ಲಿ.