ನಮ್ಮ ರಾಜ್ಯದ ರಾಜಕಾರಣ

ಕರ್ನಾಟಕದ ಕಿಣ್ಣರು ಗಣಿತ ಮತ್ತು ಜಾಗ್ರಫಿ ವಿಷಯಗಳಲ್ಲಿ ಬೇರೆಲ್ಲಾ ರಾಜ್ಯಗಳ ಕಿಣ್ಣ ರಿಗಿಂತ ಮುಂದೆ ಅಂತೆ – “ಅಧ್ಯಯನ” (ದಿನವೂ ನಾವು ಓದಿದ ದಿನಪತ್ರಿಕೆಯ ಅಧ್ಯಯನ).

ಗಡಗಡ ನಡುಗಿಸುವ ಗಣಿತ, ಜೋಂಪು ಹತ್ತಿಸುವ ಜಾಗ್ರಫಿ ವಿಷಯಗಳಲ್ಲಿ ನಮ್ಮ ಮಕ್ಕಳು ಮುಂದು ಎಂದರೆ ನಮ್ಮ “ಗುರು ದೇವೋಭವಃ” ಸಮುದಾಯ ಹಗಲು ರಾತ್ರಿ ಸಂಶೋಧನೆ ಮಾಡಿ ಹೊಸತನ್ನೇನಾದರೂ ಕಂಡು ಹಿಡಿದಿರಬೇಕು ಗಣಿತ ವನ್ನು amusing ಮಾಡಲು ಮತ್ತು ಜಾಗ್ರಫಿ ಯನ್ನು interesting ಆಗಿಸಲು. ಬಿಡ್ತು ಅನ್ನಿ, ಹಾಗೇನಿಲ್ಲ. ಸರಕಾರ ವಿದ್ಯೆ ಕೊಡುವ ಸಮುದಾಯಕ್ಕೆ ಕೊಡುವ ಸಂಬಳದ ಚೆಂದ ನೋಡಿದರೆ ಅಂಥ ಕಾಲ ಇನ್ನೂ ಬಹು ದೂರ. ಕಲಿಕೆಯಲ್ಲಿ innovation ತರುವ ಮಾತಿರಲಿ, ಬಾರುಕೋಲಿನ ಪ್ರಯೋಗ ಇಲ್ಲದೆ ಪಾಠ ಹೇಳಿದ್ದರೆ ಸಾಕಿತ್ತು ಶಿಕ್ಷಕರು. ಗಣಿತದಲ್ಲೂ, ಭೂಗೋಳದಲ್ಲೂ ನಮ್ಮ ಮಕ್ಕಳು ಮುಂದೆ ಎಂದ ಮಾತಿನಲ್ಲಿ ರಾಜಕಾರಣ ಅಡಗಿದೆ. ಪ್ರತಿಯೊಂದರಲ್ಲೂ ರಾಜಕಾರಣ ಕಾಣುವ ಸಮಾಜ ತಾನೆ ನಮ್ಮದು?

ಕರ್ನಾಟಕದ ರಾಜಕೀಯ ದಿನದಿಂದ ದಿನಕ್ಕೆ ಬಗೆಯ ಬಗೆಯ ಮನೋರಂಜನೆಯನ್ನು ಒದಗಿಸುತ್ತಿದ್ದು ಬಿಡುವಿನ ಸಮಯವನ್ನು ವ್ಯರ್ಥ ಮಾಡಲು ಟೀವೀಯ ಮೊರೆಯೋ, ಅಂತರ್ಜಾಲದ ಜಾಲದಲ್ಲೋ ಬೀಳಬೇಕಿಲ್ಲ ಕನ್ನಡಿಗ. ನಮ್ಮ ರಾಜಕಾರಣ ಎನ್ನುವುದು ನಂಬರ್ ಗೇಂ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ನಿಚ್ಚಳ ಬಹುಮತ ಸಾಧಿಸಿದರೂ ಅದನ್ನು ನೆಮ್ಮದಿಯಾಗಿ ಆಳಲು ಬಿಡಲು ಒಲ್ಲೆ ಎನ್ನುವ ಗುಂಪು ಆಗಾಗ ದೊಡ್ಡ ದೊಡ್ಡ ಸದ್ದನ್ನು ಮಾತ್ರವಲ್ಲ, ಎಲ್ಲಾ ಬಗೆಯ ಟ್ರಿಕ್ಕುಗಳನ್ನು ತನ್ನ ಬಗಲಿನಿಂದ ಎಸೆಯುತ್ತಲೇ ಇರುತ್ತದೆ. ಒಂದೆಂಟು ಅತೃಪ್ತ ಶಾಸಕರನ್ನು ನಂದಿ ಬೆಟ್ಟಕ್ಕೋ, ಅದರಲ್ಲೂ ಅತೃಪ್ತರಾದರೆ ಇನ್ನೂ ಹೆಚ್ಚಿನ excitement ಗಾಗಿ ಗೋವಾ ಪರ್ಯಟನೆ ಗೋ ಕಳಿಸಿ ನಮ್ಮ ಸನ್ಮಾನ್ಯ ಮು. ಮಂತ್ರಿಗಳು ಕಣ್ಣೇರು ಹಾಕುವಂತೆ ಮಾಡಿ sadist ಮಜಾ ತೆಗೆದು ಕೊಳ್ಳೋದು. ದಿನ ಬೆಳಗಾದರೆ ಸಾಕು ಅಂಕಿ ಸಂಖ್ಯೆಗಳು ಏರು ಪೇರಾಗುತ್ತವೆ, ಥೇಟ್ ನಮ್ಮ BSE Index ಥರ. ಸ್ಟಾಕ್ ಎಕ್ಸ್ಚೇಂಜ್ ರೀತಿ. ಬೆಳಿಗ್ಗೆ ಸಂಖ್ಯೆಯಲ್ಲಿ ವೃದ್ಧಿ ಕಂಡರೆ ಸಂಜೆಯಾಗುತ್ತಲೇ ಇಳಿತ. ಅಥವಾ “ವೈಸೀ ವರ್ಸಾ”. ಹೀಗೆ ದಿನವೂ ಕೂಡುತ್ತಾ, ಕಳೆಯುತ್ತಾ ಏರುಪೇರಾಗುವ, ಸಂಖ್ಯೆಗಳನ್ನು ನೆನಪಿನಲ್ಲಿ ಇಡಬೇಕು, ಇಲ್ಲದಿದ್ದರೆ ಎರಡು ತಿಂಗಳಿಗೊಮ್ಮೆ ಬರುವ ಟೆಸ್ಟು ಗಳಲ್ಲಿ ನಮ್ಮ ಮು. ಮಂತ್ರಿ ಯಾರು ಎಂದರೆ ತಿಳಿದಿರಲೇಬೇಕಲ್ಲ. ಇಲ್ಲದಿದ್ದರೆ ಸಿಗುವ ಒಂದೇ ಒಂದು ಅಂಕಕ್ಕೂ ಚ್ಯುತಿ. ಹೀಗೆ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹೆಣಗಾಡುತ್ತಾ ಗಣಿತವನ್ನು ಕರಗತವಾಗಿಸಿ ಕೊಂಡರು ನಮ್ಮ ಮಕ್ಕಳು. ಅದರೊಂದಿಗೆ ಸಂಭವನೀಯತೆ ಎನ್ನುವ ವಿಷ್ಯ ಕೂಡಾ.

ಒಂದು ಡೇರೆಯಿಂದ ಮತ್ತೊಂದು ಡೇರೆ ಗೆ ಕೆಲವು ಶಾಸಕರು ಜಿಗಿದರೆ ಯಾರು ಮು. ಮಂತ್ರಿ ಆಗಬಹುದು ಎನ್ನುವ ಸಂಭವನೀಯತೆ. ಸಂಭವನೀಯತೆಯಲ್ಲಿ ನಾಣ್ಯ ಚಿಮ್ಮುವ ಉದಾಹರಣೆ ಕೊಟ್ಟರೆ ರಾಜಕಾರಣದ ಸಂಭವನೀಯತೆಯಲ್ಲಿ ಡೇರೆ ಜಿಗಿಯುವ ಉದಾಹರಣೆ. ಅತೃಪ್ತ ಸದಸ್ಯರನ್ನು round the world, ಕ್ಷಮಿಸಿ, round the state ಟೂರಿಗೋ, ಅಥವಾ across the sate sojourn ಗೋ ಕಳಿಸಿದಾಗ ಜಾಗ್ರಫಿ ಸಹ ಮೂಡಿ ಬಂತು ತೆರೆಯ ಮೇಲೆ. ಯಾವ ಯಾವ ರೆಸಾರ್ಟ್ ಎಲ್ಲಿದೆ, ಅಡಗುತಾಣಗಳ ವಿಳಾಸ ಇವೆಲ್ಲವನ್ನೂ ತಿಳಿದಾಗ ಜಾಗ್ರಫಿ ಸಹ ಕರಗತವಾಗದೆ ಇದ್ದೀತೆ? ಅಷ್ಟೇ ಅಲ್ಲ, ಟೂರ್ ಹೊಡೆಸಿ, ಆಳಲು ಬೇಕಾದ ಮಾಂತ್ರಿಕ ಸಂಖ್ಯೆಯನ್ನು ಹೊಂದಿಸಿ, ನಂತರ ನಮ್ಮ ದೇಶದ ಅಧ್ಯಕ್ಷೆ ಯವರ ಹತ್ತಿರ ಪರೇಡ್ ಸಹ ಮಾಡಿಸಬೇಕು. ಅದಕ್ಕೆ ದಿಲ್ಲಿಗೆ ಹೋಗಬೇಕು. ಜಾಗ್ರಫಿ ಜ್ಞಾನ ವಿಸ್ತಾರ ಆಯಿತು ನೋಡಿ. ಆ ಪರೇಡ್ ಸಮಯ ಬರೀ ಮು. ಮಂತ್ರಿಗಳೂ, ಶಾಸಕ ಮಹೋದಯರೂ ಇದ್ದರೆ ಸಾಲದು, ಅವರನ್ನು ಕಾಯಲು ಪಕ್ಷದ ವತಿಯಿಂದ ವರಿಷ್ಠ ರೂ ಬರಬೇಕು, ವಿರೋಧೀ ಪಾಳಯ ದೂರದಲ್ಲಿ ನಿಂತು ಗೋವಾದ ಗೋಲ್ದನ್ ಬೀಚ್ ನ ಚಿತ್ರವನ್ನೋ, ನಾನ್ ಸ್ಟಾಪ್ ಅಂಕೆಗಳಿರುವ ಚೆಕ್ ನ ಫೋಟೋ ಕಾಪಿಯನ್ನೋ ತೋರಿಸಿ ಈಚೆ ಕಡೆ ಎಳೆದುಕೊಂಡು ಬಿಟ್ಟರೆ? ಪರೇಡ್ ಒಂದು ರೀತಿಯ ಮುಜುಗರ ತರುವ ಕಪ್ಪೆ ತೂಕವಾಗಿ ಪರಿವರ್ತನೆ ಆಗಬಾರದು ನೋಡಿ.

ನಮ್ಮ ಈ ರಾಜಕೀಯ ಅವ್ಯವಸ್ಥೆಗೆ ಪ್ರಜಾಪ್ರಭುತ್ವ ಎನ್ನುವ ಹೆಸರೇ ಒಂದು ‘misnomer’. ಅಪಪ್ರಯೋಗ. ಈ ವ್ಯವಸ್ಥೆಯಲ್ಲಿ ಪ್ರಜೆ ಪ್ರಭುವಾಗೋದು ಮತದಾನ ಕೇಂದ್ರದ ಕಡೆಗಿನ ನಡಿಗೆ ವೇಳೆ ಮಾತ್ರ. ಅವನನ್ನು ಕಳ್ಳ ನಗೆಯಿಂದ, ಓಲೈಸಲು ಡಜನ್ ಗಟ್ಟಲೆ ಜನ. ಮತದಾನವಾಯಿತೋ, ಆ ಕೂಡಲೇ ಅವನು ಹತಾಶ ಏಕಾಂಗಿ, ಮುಂದೆ ಅನಾವರಣಗೊಳ್ಳಲಿರುವ ನಾಟಕದ ಪರದೆ ಮುಂದೆ.

“ನೀವು ಕರೆಮಾಡಿದ ಚಂದಾದಾರರು…”

“ನೀವು ಕರೆಮಾಡಿದ ಚಂದಾದಾರರು ನಿಮ್ಮ ಯಾವುದೇ ಕರೆಗಳಿಗೂ ಪ್ರತಿಕ್ರಯಿಸುತ್ತಿಲ್ಲ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ”. – ಮೊಬೈಲ್ ಇಟ್ಟುಕೊಂಡ ಯಾವನಿಗೂ ಈ ಸಂದೇಶ ಬಾಯಿ ಪಾಠವೇ. ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹೆಚ್ಚೂ ಕಡಿಮೆ ಎಲ್ಲಾ ಸ್ಥಾನಗಳಿಗೂ ಸ್ಪರ್ದಿಸಿ ಒಂದರಲ್ಲಾದರೂ ಗೆದ್ದು ಖಾತೆ ತೆರೆಯುವ ಭಾರತದ ಪ್ರತಿಪಕ್ಷದ ಆಸೆಗೆ ಕೇರಳದ ಜನ ಓಗೊಡದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ.   ಹೀಗೆ, ಕೇರಳದಲ್ಲಿ ಈ ಸಲವೂ ಭಾಜಪಕ್ಕೆ ಸಿಕ್ಕ ಸಂದೇಶ ನಾವು ಕೇಳುವ ಮೊಬೈಲ್ ಸಂದೇಶದ ರೀತಿಯೇ ಆಯಿತು. ಈ unmistakable ಸಂದೇಶ ಕೊಟ್ಟವ ಮತದಾರ ಮಹೋದಯ. ನಿರಾಶೆಯ ಸಂಗತಿ ಏನೆಂದರೆ ಈ “ಸ್ವಲ್ಪ ಸಮಯ” ಕಾಯುವಿಕೆ ಐದು ವರ್ಷಗಳಷ್ಟು ಸುದೀರ್ಘ.

 ಅತ್ತ ತಮಿಳು ನಾಡಿನಲ್ಲೂ incumbent ಪಕ್ಷ ಸೋತು ಸುಣ್ಣವಾಯಿತು. 3G ಉಷ್ಣತೆ ಸ್ವಲ್ಪ ಜೋರಾಗಿಯೇ ತಗುಲಿಸಿಕೊಂಡ ದ್ರಾವಿಡ ಮುನ್ನೇಟ್ರಂ ಕಳಗಂ ತರಗೆಲೆಯಂತೆ ಉದುರಿತು ಜಯಲಲಿತಾ ಬಿರುಗಾಳಿಗೆ.  ಇಲ್ಲೂ ಭಾರತದ ಅತಿ ದೊಡ್ಡ ಪ್ರತಿಪಕ್ಷಕ್ಕೆ ಅತಿ ದೊಡ್ಡ ನಿರಾಶೆಯೇ ಕಾದಿತ್ತು. ಹೀಗೆ ಕರ್ನಾಟಕವನ್ನು ಬಿಟ್ಟರೆ ದಕ್ಷಿಣದ ಯಾವುದೇ ರಾಜ್ಯದ ಮತದಾರ ಈ ಪಕ್ಷಕ್ಕೆ ಮಣೆ ಹಾಕದಿರಲು ಕಾರಣವೇನು? ಹಾಗೆಯೆ ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಶಿಕಾರಿಪುರದ ಕೇವಲ ಒಂದು ಸ್ಥಾನದಿಂದ ಹಿಡಿದು ಈಗಿನ ಅಧಿಕಾರದ ಗದ್ದುಗೆ ಏರುವ ಭಾಜಪದ ಪಯಣದ ಯಶಸ್ಸಿಗೆ ಕಾರಣವೇನು? ಇತರೆ ಪಕ್ಷಗಳ ಅಸಡ್ಡೆ, ಅಧಿಕಾರ ದಾಹದ ಕಾರಣ ಬೇಸತ್ತ ಕರುನಾಡಿನ ಮತದಾರ last straw ಆಗಿ ಭಾಜಪವನ್ನು ಅಧಿಕಾರಕ್ಕೆ ಏರಿಸಿರಬಹುದೇ?

ವರುಣನ (ಅವ) ಕೃಪೆ

ಚುನಾವಣೆ ನಡೆದು ತಿಂಗಳುರುಳಿದರೂ ಆಘಾತಕಾರಿ ಸೋಲನ್ನು ಕಂಡ ರಾಜಕೀಯ ಪಕ್ಷವೊಂದರ post mortem ಇನ್ನೂ ನಡೆಯುತ್ತಲೇ ಇದೆ. ಹಿಂದುತ್ವ ಬಿಟ್ಟಿದ್ದರಿಂದ ಬಂತು ಹೊಡೆತ ಎಂದು ಒಬ್ಬ ಹೇಳಿದರೆ ವರುಣನ “ನಿಂದಾ ವರ್ಷ” ಕಾರಣ ಎಂದ ಮಗುದೊಬ್ಬ. ಅಲ್ಪಸಂಖ್ಯಾತರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ನಂತರ ನಾನು ಆ ರೀತಿ ಹೇಳಿಯೇ ಇಲ್ಲ ಯಾವುದೋ ಭೂತ ಪಿಶಾಚಿ CD ಒಳಗೆ ನುಗ್ಗಿ ರಂಪ ಮಾಡುತ್ತಿದೆ ಎಂದು ತಾಯಿ ಮಗ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೆ ಇದನ್ನು ಮಾಧ್ಯಮಗಳಾಗಲಿ, ಸಾಮಾನ್ಯ ಜನರಾಗಲಿ ನಂಬುವುದಿಲ್ಲ. ಹೌದು ನನ್ನಿಂದ ತಪ್ಪು ನಡೆದು ಹೋಯಿತು, ಉನ್ಮಾದದಲ್ಲಿ ಆಡಿದ ಮಾತುಗಳಿಗೆ ಕ್ಷಮೆಯಿರಲಿ ಎಂದು ಹೇಳಿಕೆ ಕೊಟ್ಟು ಜನರನ್ನು ಗೆಲ್ಲಬಹುದಿತ್ತು. ಆದರೆ ಅಂತ ಮಾತುಗಳನ್ನು ಆಡಲು ವ್ಯಕ್ತಿಯ ನೈತಿಕತೆ ಉನ್ನತ ಮಟ್ಟದ್ದಾಗಿರಬೇಕು.  

ಪ್ರಾಣಿ ದಯೆ ಬೋಧಿಸುವ ತಾಯಿ (ಮೇನಕ ಗಾಂಧಿ) ಮನುಷ್ಯರನ್ನು ಹೇಗೆ ನಡೆಸಿಕೊಳ್ಳಬೇಕೆಂದು ತನ್ನ ಸುಪುತ್ರನಿಗೆ ಹೇಳಿಕೊಡಲು ಸಮಯ ಸಿಗದಿದ್ದದು ಖೇದಕರ.  

ಒಂದು ಸಮುದಾಯವನ್ನು ನಿಂದಿಸಿ, ಓರ್ವ ಸಮರ್ಥ ಪ್ರಧಾನಿಯನ್ನು ಅಸಮರ್ಥ ಎಂದು ಬಣ್ಣಿಸಿ ಚುನಾವಣೆ ಗೆಲ್ಲಬಹುದು ಎಂದು ಎಣಿಸಿದ್ದ ಪಕ್ಷವೊಂದು ಭಾರತೀಯ ಮತದಾರ ವಿಶ್ವದಲ್ಲೇ ಅತ್ಯಂತ ಪ್ರಬುಧ್ಧ ಎಂದು ಮನಗಾಣಲು ಸೋತಿದ್ದು ತನ್ನ ಹಿನ್ನಡೆಗೆ ಕಾರಣ ಎಂದು ಅರಿತುಕೊಳ್ಳಬೇಕು. ಸಮಸ್ತ ಭಾರತೀಯರನ್ನು ಭರತವರ್ಷ ಎಂಬ ಹಡಗಿನಲ್ಲಿ ಕೂರಿಸಿ ಭವ್ಯ ಭವಿಷ್ಯದ ಕಡೆಗೆ ಹಡಗನ್ನು ಮುನ್ನಡೆಸುವ ಹೃದಯ ವೈಶಾಲ್ಯತೆಯನ್ನು ಮತ್ತು ಅಗತ್ಯವನ್ನು ಮನಗಾಣಬೇಕು.  

ಮತದಾರನಿಗೆ ಏನು ಬೇಕು ಎಂದು ಮನಗಂಡು ಅದಕ್ಕೆ ತಕ್ಕ ಕಾರ್ಯಕ್ರಮ ಪ್ರಸ್ತುತಪಡಿಸದೆ ತಾನು ಏನು ಹೇಳಿದರೂ ಜನ ನಂಬಿ ಗದ್ದುಗೆಗೆ ಕೂರಿಸಬಹುದು ಎಂಬ ನಂಬಿಕೆ ತನಗೆ ಮುಳುವಾಯಿತು ಎಂದು ಪಕ್ಷ ಶೀಘ್ರ ಅರಿತು ಕೊಂಡರೆ ಭಾರತದ ರಾಜಕಾರಣದಿಂದ ಸಂಪೂರ್ಣವಾಗಿ ಅಳಿಸಿ ಹೋಗುವ ಭೀತಿ ಇಲ್ಲವಾಗಬಹುದು.