ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ

ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ ಶೈಲಿಯಲ್ಲಿ ಪಾಕಿಸ್ತಾನದ ಅರಿವಿಗೆ ಸುಳಿವಿಗೆ ಸಿಗದೇ ತನ್ನ ಸೀಲ್-೬ ಕಮಾಂಡೋಗಳನ್ನು ಕಳಿಸಿ ಬಲಿ ಹಾಕಿತು. ತನಗೆ ತಿಳಿಸದೆ ತನ್ನ ದೇಶದೊಳಕ್ಕೆ ನುಗ್ಗಿ ಲಾದೆನ್ ಹತ್ಯೆಗೈದ ಅಮೇರಿಕೆಯ ಬಗ್ಗೆ ಪಾಕ್ ಕ್ರೋಧ ವ್ಯಕ್ತಪಡಿಸಿತು. ಪಾಕಿಸ್ತಾನದ ಅರಿವಿಗೆ ಬರದೆ ಬಿನ್ ಲಾದೆನ್ ಬದುಕುತ್ತಿದ್ದ ಅದೂ ಪಾಕ್ ರಾಜಧಾನಿಯ ಹತ್ತಿರ, ಅದೂ ಮಿಲಿಟರಿ ಅಕಾಡೆಮಿ ಯೊಂದರ ಸಮೀಪ ಎಂದರೆ ದೊಡ್ಡ ಆಶ್ಚರ್ಯವೇ. ಕೆಲವರ ಪ್ರಕಾರ ಪಾಕ್ ನೀಡಿದ ಸುಳಿವಿನ ಆಧಾರದ ಮೇಲೆಯೇ ಅಮೇರಿಕಾ ಬಿನ್ ಲಾದೆನ್ ನನ್ನು ಕೊಂದಿದ್ದು ಮತ್ತು ಪಾಕಿಸ್ತಾನದಲ್ಲಿರುವ ತಾಲಿಬಾನಿಗಳ ಆಕ್ರೋಶ ಎದುರಿಸಲು ಆಗದ ಪಾಕ್ ತನಗೆ ಈ ಕಾರ್ಯಾಚರಣೆ ಗೊತ್ತೇ ಇಲ್ಲ ಎಂದು ನಾಟಕ ಮಾಡಿ ಕೈ ತೊಳೆದು ಕೊಂಡಿತು ಎನ್ನುವ ಅಭಿಪ್ರಾಯದೊಂದಿಗೆ ಈ ಮಿಲಿಟರಿ ಕಾರ್ಯಾಚರಣೆ ಒಂದು ನಿಗೂಢ ರಹಸ್ಯವಾಗಿ ಜನರ ಊಹಾ, ಕಲ್ಪನೆಗಳಿಗೆ ಇನ್ನಷ್ಟು ಕಾಲ ಮೇವನ್ನು ಒದಗಿಸಲು ಕಾರಣವಾಯಿತು.

ಸೀಲ್ ಗಳು ನಡೆಸಿದ ಕಾರ್ಯಾಚರಣೆ ಪಾಕಿಗೆ ಗೊತ್ತೇ ಇರಲಿಲ್ಲ ಎನ್ನುವ ಮಾತಿಗೆ ಮನ್ನಣೆ ನೀಡುವುದಾದರೆ ರಹಸ್ಯ ಕಾರ್ಯಾಚರಣೆ ಪಾಕ್ ಮತ್ತು ಅಮೇರಿಕಾ ನಡುವಿನ ಆಪ್ತ ಬಾಂಧವ್ಯವನ್ನು ಡಿವೋರ್ಸ್ ಅಂಚಿಗೆ ತಂದು ನಿಲ್ಲಿಸಿದೆ ಎನ್ನಬಹುದು. ಡಿವೋರ್ಸ್ ಸಹ ಅಷ್ಟು ಸುಲಭದ್ದಲ್ಲ. ಅದು acrimonious ಆಗಿ ತೀರುತ್ತದೆ. ಏಕೆಂದರೆ ಅಮೇರಿಕಾ ಪಾಕ್ ಸುಮಧುರ ಸಂಬಂಧ ಮಕ್ಕಳು ಮರಿಗಳನ್ನು ಹುಟ್ಟಿಸಿದೆ ತಾನೇ? ತಾಲಿಬಾನ್, ಅಲ್ಕೈದಾ, ಆಫ್ಘಾನಿಸ್ತಾನ್, ಮುಲ್ಲಾ ಉಮರ್, ಭಯೋತ್ಪಾದನೆ ಇತ್ಯಾದಿ.. ಹೀಗೆ ಮುಂದುವರಿಯುವ ಸಂತಾನಗಳ ಲಾಲನೆ ಪಾಲನೆ ಹೇಗೆ? ಈ ಸಂತಾನಗಳು ಯಾರ ಜವಾಬ್ದಾರಿ? ಹೀಗೆ ಒಂದು ರೀತಿಯ ವಿಶ್ವದ ನೆಮ್ಮದಿ ಕೆಡಿಸುವ ‘ಡಿವೋರ್ಸ್ ಅಂಡ್ ಕಸ್ಟೋಡಿಯಲ್ ಪ್ರೊಸೀಡಿಂಗ್ಸ್’ ಯಾವ ಹಂತಕ್ಕೆ ಬಂದು ಮುಟ್ಟುತ್ತದೋ ಎಂದು ವಿಶ್ವ ಕೈ ಹೊಸಕಿಕೊಳ್ಳುತ್ತಾ ಆತಂಕಿತವಾಗಿದ್ದರೆ ಇದೋ ಬಂತು ಅಮೇರಿಕೆಯಿಂದ ವಿಶೇಷ ವಿಮಾನವೊಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯನ್ನು ಹೊತ್ತು. ಹಿಲರಿ ಕ್ಲಿಂಟನ್ ಬಂದರು ಫಸ್ಟ್ ಏಡ್ ಕಿಟ್ ನೊಂದಿಗೆ. ನೊಂದ ಪ್ರಿಯತಮ/ಮೆ ಮನಕ್ಕೆ ಕೂಲಿಂಗ್, ಹೀಲಿಂಗ್ ಬಾಮ್ ನೊಂದಿಗೆ ಬಂದ ಹಿಲರಿ ಅದೇ characteristic smile ನೊಂದಿಗೆ ಪಾಕಿಸ್ತಾನ ಈಗಲೂ “ಒಳ್ಳೆಯ ಸಹಭಾಗಿ” – ಎ, ಗುಡ್ ಪಾರ್ಟ್ನರ್ ಎಂದು ಹೇಳಿ ಮಲಾಮಿನ ಲೇಪನ ಶುರು ಮಾಡಿದರು. ಈ ಮಾತಿನೊಂದಿಗೆ ಈ ಶನಿ ಸಂಬಂಧ ಇನ್ನೆಂಥ ಮಕ್ಕಳನ್ನು ಹುಟ್ಟಿಸುವ ತರಾತುರಿಯಲ್ಲಿದೆಯೋ ಎಂದು ನಮಗನ್ನಿಸಿದರೆ ಅದರಲ್ಲೇನೂ ತಪ್ಪಿಲ್ಲ.

ಯಾರೊಂದಿಗಿನ ಸ್ನೇಹದಲ್ಲೂ, ಶತ್ರುತ್ವದಲ್ಲೂ ಅಮೇರಿಕಾ ಎಂದಿಗೂ ಸಕಾರಾತ್ಮಕ beneficiary ಆಗಿಯೇ ಉಳಿಯುತ್ತದೆ. ಅದಕ್ಕೆ ಇತರರ ಇರುಸು ಮುರುಸು, ಕಷ್ಟ ಕಾರ್ಪಣ್ಯ ಇವೆಲ್ಲಾ ನಗಣ್ಯ. ಪಾಕಿಸ್ತಾನದೊಂದಿಗಿನ ನಮ್ಮ ಗಡಿ ಬದಲಿಸಿ ಕೊಳ್ಳಲು ಆಗದೆ ಬೆರಳುಗಳ ನಟಿಕೆ ಮುರಿಯುತ್ತಾ ಹಲ್ಲು ಮಸೆಯುವ ನಮಗೆ ಇವರೀರ್ವರ ಸಂಬಂಧ ತಲೆ ಬೇನೆಯೇ. ಇವರಿಬ್ಬರ ಸಂಬಂಧ ಚೆನ್ನಾಗಿದ್ದರೂ, ಹಳಸಿದರೂ ನಮಗೆ ಮಾತ್ರ ಗದ್ದಲ ಕಟ್ಟಿಟ್ಟ ಬುತ್ತಿ.

ಅಂಬಾನಿ ಸಂಪತ್ತಿಗೆ ಟಾ ಟಾ ಸವಾಲ್

ಉಪ್ಪಿನಿಂದ ಹಿಡಿದು ಬೆಲೆಬಾಳುವ ಜಾಗ್ವಾರ್ ಕಾರುಗಳ ತನಕ ಉತ್ಪಾದಿಸುವ ಬೃಹತ್ ಕೈಗಾರಿಕೋದ್ಯಮಿ ರತನ್ ಲಾಲ್ ಟಾ ಟಾ (ಕೆಲವರು ತಾ ತಾ ಎಂತಲೂ ಬರೆಯುತ್ತಾರೆ) ಇಂಗ್ಲೆಂಡಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಲಯನ್ಸ್ ಕೈಗಾರಿಕಾ ಸಮುಚ್ಚಯಗಳ ಮಾಲೀಕ ಮುಕೇಶ್ ಅಂಬಾನಿಯ ಶ್ರೀಮಂತಿಕೆ ಬಗ್ಗೆ ಮಾತನಾಡಿ ವಿವಾದಕ್ಕೆ ಒಳಗಾಗಿದ್ದಾರೆ.

ವಿಶ್ವ ನಿಬ್ಬೆರಗಾದ, ಶ್ರೀಮಂತಿಕೆಯ ನಗ್ನ ಪ್ರದರ್ಶನ ನೀಡಿದ ಅಂಬಾನಿ ವಾಸದ ಮನೆ ಭಾರತದಂಥ ಬಡ ದೇಶದಲ್ಲಿ ಭಾರತೀಯನೊಬ್ಬನಿಂದ ಬೇಕಿತ್ತೆ ಎಂದು ಸಾಮಾನ್ಯ ಜನ ಕೇಳಿದರೆ ವಕ್ರ ನೋಟ ಎದುರಿಸಬೇಕಾಗುತ್ತದೆ ಆದರೆ ಅದೇ ಮತೊಬ್ಬ ಆಗರ್ಭ ಶ್ರೀಮಂತ ಟಾ ಟಾ ಹೇಳಿದಾಗ  ಆ ಮಾತಿಗೆ ತೂಕ ಸೇರಿ ದೊಡ್ಡ ಸುದ್ದಿಯಾಯಿತು.

ಅಂಬಾನಿ ಕಟ್ಟಿದ ೧೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ, ೩೯೮,೦೦೦ ಸಾವಿರ ಚದರಡಿಯ, ಏಳು ವರ್ಷಗಳ ಕಾಲ ಸಮಯ ತೆಗೆದು ಕೊಂಡ, ೧೬೦ ಕಾರುಗಳನ್ನು, ಮೂರು ಹೆಲಿಕಾಪ್ಟರ್ ಗಳನ್ನು ಪಾರ್ಕ್ ಮಾಡಬಹುದಾದ  ೨೭ ಮಹಡಿಯ ಕಟ್ಟಡ ದ ಉದ್ಘಾಟನೆ ಗೇ  ವಿಶ್ವದ ವಿವಿಧ  ಕಡೆಗಳಿಂದ ಬರುವ ಅತಿಥಿಗಳು ಮೈಲುಗಟ್ಟಲೆ ಉದ್ದ ಚಾಚಿ ಕೊಂಡ ಕೊಳೆಗೇರಿಗಳನ್ನು ದಾಟಿ ಕೊಂಡು ಬರಬೇಕಂತೆ. ಭಾರತದ ಸುಮಾರು ಎಂಭತ್ತು ಕೋಟಿ ಗೂ ಅಧಿಕ ಜನ ದಿನಕ್ಕೆ ನೂರು ರೂಪಾಯಿಗಿಂತ ಕಡಿಮೆ ಸಂಪಾದನೆ ಮಾಡುವಾಗ ಈ ಆಗರ್ಭ ಶ್ರೀಮಂತ ಇಂಥ ದುಂದು ವೆಚ್ಚ ಮಾಡೋ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸುವವರೂ ಇದ್ದಾರೆ.

ಶ್ರೀಮಂತಿಕೆಯ ಮೇಲಿನ ಉದಾಹರಣೆ ದೇಶೀಯ ದಾದರೆ ಕೆಳಗಿದೆ ನೋಡಿ ವಿದೇಶೀ ಶ್ರೀಮಂತನ ಕಥೆ.

ಅಮೆರಿಕೆಯ ಆಗರ್ಭ ಶ್ರೀಮಂತ ನಿಕೊಲಸ್ ಬರ್ಗ್ರೆವಿನ್ ಎಲ್ಲ ಧನವಂತರ ಹಾಗೆ ಧನಪಿಶಾಚಿ ಅಲ್ಲ. ಈತ ಒಬ್ಬ ಮಹಾ ಸಾತ್ವಿಕ.  ತನ್ನ ಧನದ ಮದದಿಂದ ಓಲಾಡದೇ ಬಡವರಿಗೆ ದಾನ ಮಾಡುವ, ಕಾಳಜಿ ಇರುವ ಶ್ರೀಮಂತ.

ಕಾಂಬೋಡಿಯದಲ್ಲಿ ಕೃಷಿಕರಿಗೆ ಸಹಾಯ ಮತ್ತು ಬಡ ರಾಷ್ಟ್ರಗಳಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣ ಹೀಗೆ ಹತ್ತು ಹಲವು ದಾರಿದ್ರ್ಯ ನಿವಾರಣಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಕೊಲಸ್ ಇತರ ಧನವಂತರಿಗೆ ಮಾದರಿಯಾಗಿದ್ದಾರೆ.

ಷೇರುಮಾರುಕಟ್ಟೆಯಲ್ಲಿ ಅಗಾಧವಾಗಿ ಸಂಪಾದಿಸಿದ ನಿಕೊಲಸ್ ಹಣದೊಂದಿಗೆ ಬರುವ ಎಲ್ಲಾ ಸೌಕರ್ಯಗಳನ್ನೂ ಪಡೆದರು. ಫ್ಲೋರಿಡಾದ ಖಾಸಗಿ ದ್ವೀಪವೊಂದರಲ್ಲಿ ಬಂಗಲೆ, ನ್ಯೂಯಾರ್ಕಿನಲ್ಲಿ ಅತಿ ದುಬಾರಿ ಮನೆ, ಇವೆಲ್ಲವನ್ನೂ ಮಾರಿ ಹೋಟೆಲ್ನಲ್ಲಿ ಬಾಡಿಗೆಗಿದ್ದು,  ತಮ್ಮ ಸಂಪತ್ತನ್ನು ಬಡವರ ಏಳಿಗೆಗಾಗಿ ಇಟ್ಟಿದ್ದಾರೆ ನಿಕೊಲಸ್.

“ಥಳಕು ಬೆಳಕಿನ ಜೀವನ ಮತ್ತು ಜನರಿಗೆ ಪ್ರದರ್ಶಿಸುವ ತೋರಿಕೆಯ ಬದುಕು ಶೂನ್ಯ, ನನ್ನ ಹತ್ತಿರ ಇರುವುದೆಲ್ಲವೂ ಕ್ಷಣಿಕ, ನಾವೀ ಜಗತ್ತಿನಲ್ಲಿರುವುದು ಅಲ್ಪ ಸಮಯ ಮಾತ್ರ. ಶಾಶ್ವತವಾಗಿ ನಿಲ್ಲುವ ನಮ್ಮ ನಡವಳಿಕೆಗಳೇ ನಿಜವಾದ ಮೌಲ್ಯ” ಇವು ನಿಕೊಲಸ್ ಅವರ ನುಡಿಮುತ್ತುಗಳು.

ಪ್ರಚಾರಗಳಿಂದ ಯಾವಾಗಲೂ ದೂರವಿರುವ ಈ ಯುವ ಶ್ರೀಮಂತ ಅನೇಕರಿಗೆ ದೊಡ್ಡ ಒಗಟು. ಕೆಲ ವರ್ಷಗಳ ಹಿಂದೆ ಡಚ್ ಪತ್ರಿಕೆಯೊಂದು ಅವರ ಬಗ್ಗೆ  ಬರೆದಾಗ ಪತ್ರಿಕೆಯ ಎಲ್ಲ ಪ್ರತಿಗಳನು ಖರೀದಿಸಿ ಬಿಸಾಕಿದರು.

ನಮ್ಮಲ್ಲಿನ ಶ್ರೀಮಂತರಾದ ಅಂಬಾನಿಯಂಥವರು, ಮೈಮಾಟ ಪ್ರದರ್ಶಿಸಿ ಹಣಗಳಿಸುವ ಬಾಲಿವುಡ್ನ ನರ್ತಕ ನರ್ತಕಿಯರು ಮತ್ತು ಇತರೆ ಹತ್ತು ಹಲವು ಕೃತ್ರಿಮ ಗಳ ಮೂಲಕ ಸಂಪಾದಿಸಿದ ಹಣವಂತರು ನಿಕೊಲಸ್ ಬರ್ಗ್ರೆವಿನ್ ಅವರಿಂದ ಕಲಿಯಲು ಬಹಳಷ್ಟಿದೆ.

ಈಗಿನ ಕಾಲದ ಹಣವಂತರ ಅಹಂಕಾರ, ಧಿಮಾಕನ್ನು ಕಂಡ ನಮಗೆ ನಿಕೊಲಸ್ ಒಂದು ಕಾರಂಜಿ ಇದ್ದಂತೆ. ಒಂದು ಆಹ್ಲಾದಕರ ತಂಗಾಳಿ.

ಸುನ್ನತಿ ಕೂಡದು ಎನ್ನುವ ಸ್ಯಾನ್ ಫ್ರಾನ್ಸಿಸ್ಕೋ

ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರ ದಲ್ಲಿ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ “ಸುನ್ನತಿ” ಯನ್ನು ನಿಷೇಧಿಸುವ ಕುರಿತು ಜನಾಭಿಪ್ರಾಯ ಕೇಳಲಾಗುತ್ತದೆ. ಪುರುಷರ ಗುಪ್ತಾಂಗದ ತುದಿಯ ಚರ್ಮವನ್ನು ಕಳೆಯುವ ಈ ಆಚರಣೆ ಕ್ರೈಸ್ತರಲ್ಲಿ ವ್ಯಾಪಕವಾಗಿಯೂ, ಯಹೂದ್ಯ ಮತ್ತು ಇಸ್ಲಾಂ ಧರ್ಮೀಯರಲ್ಲಿ ಕಡ್ದಾ ಯವಾಗಿಯೂ ಆಚರಿಸಲ್ಪಡುತ್ತದೆ.

ಅಮೆರಿಕೆಯಲ್ಲಿ ಶೇಕಡ ಎಂಭತ್ತು ಅಮೆರಿಕನ್ನರು ಸುನ್ನತಿ ಮಾಡಿಸಿಕೊಂಡಿರುತ್ತಾರೆ. ಕ್ರೈಸ್ತ ಧರ್ಮ ಪಾಲಿಸಲ್ಪಡುವ ಫಿಲಿಪ್ಪೀನ್ಸ್ ನಂಥ ದೇಶಗಳಲ್ಲಿ ಎಲ್ಲಾ ಪುರುಷರೂ ಸುನ್ನತಿ ಮಾಡಿಸಿ ಕೊಂಡಿರುತ್ತಾರೆ. ಮತ್ತು ಸುನ್ನತಿ ಮಾಡಿಸಿಕೊಂಡವ ಪರಿಪೂರ್ಣ ಪುರುಷ ಎಂದು ಹೆಮ್ಮೆ ಪಡುತ್ತಾರೆ. ಇಸ್ಲಾಂ ಧರ್ಮದ ಪ್ರಭಾವದ ಕಾರಣ ಫಿಲಿಪ್ಪಿನ್ಸ್ ನಲ್ಲಿ ಸುನ್ನತಿ ಪದ್ಧತಿ ಜಾರಿಗೆ ಬಂದಿತು ಎಂದು ಅಲ್ಲಿನ ಇತಿಹಾಸಕಾರರೊಬ್ಬರ ಅಭಿಪ್ರಾಯ.

ಇಸ್ಲಾಂನ ಪವಿತ್ರ ಗ್ರಂಥ ‘ದಿವ್ಯ ಕುರಾನ್’ ನಲ್ಲಿ ಇದರ ಉಲ್ಲೇಖವಿಲ್ಲದಿದ್ದರೂ ಇಸ್ಲಾಂ ಧರ್ಮ ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳ ತರಹ ಅಬ್ರಹಾಮಿಕ್ ಧರ್ಮವಾದ್ದರಿಂದ ಮತ್ತು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಈ ಮೂರೂ ಧರ್ಮಗಳವರ ಪಿತಾಮಹರಾದ್ದರಿಂದ ಮುಸ್ಲಿಮರೂ ಕಡ್ಡಾಯವಾಗಿ ಸುನ್ನತಿ ಮಾಡಿಸಿ ಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕುರಾನಿನಲ್ಲಿ ಆ ಪ್ರಸ್ತಾಪ ಇಲ್ಲದಿದ್ದರೂ ಪ್ರವಾದಿಗಳು ವಿಶ್ವಾಸಿಗಳಿಗೆ ಇರಲೇ ಬೇಕಾದ “ಫಿತ್ರ” ಎಂದು ಕರೆಯಲ್ಪಡುವ ಶುಚಿತ್ವಕ್ಕೆ ಸಂಬಂಧಿಸಿದ “ನೈಜ” (natural) ಅಭ್ಯಾಸ  ಅನುಸರಿಸಲೇಬೇಕು ಎಂದು ನಿರ್ದೇಶಿಸಿದ್ದಾರೆ. ಅವು, ೧. ಸುನ್ನತಿ ೨. ಗುಪ್ತಾಂಗದ ಸುತ್ತ ಶುಚಿ ೩. ಮೀಸೆ ಚಿಕ್ಕದಾಗಿ ಕತ್ತರಿಸುವುದು, ೪. ಉಗುರು ಕತ್ತರಿಸುವುದು ಮತ್ತು ೫. ಕಂಕುಳಿನ ಭಾಗದ ಕೂದಲನ್ನು ತೆಗೆಯುವುದು.     

ಸುನ್ನತಿಯನ್ನು ಕೇವಲ ಧಾರ್ಮಿಕ ಕಟ್ಟಳೆಯಾಗಿ ಮಾತ್ರ ಮಾಡಿಸಿ ಕೊಳ್ಳದೆ ಶುಚಿತ್ವ ಮತ್ತು ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಮಾಡಿಸಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮೀಯರಿಗೆ ಪ್ರತೀದಿನ ಕಡ್ಡಾಯವಾದ ಐದು ಹೊತ್ತಿನ ಆರಾಧನಾ ನಿರ್ವಹಣೆಗೆ ದೈಹಿಕ ಶುಚಿತ್ವದೊಂದಿಗೆ “ಶೌಚ” ಶುಚಿತ್ವ ಇರುವುದೂ ಅತೀ ಅವಶ್ಯ. ಮೂತ್ರ ವಿಸರ್ಜನೆ ನಂತರ ನೀರಿನೊಂದಿಗೆ ಶುಚಿ ಮಾಡಿಕೊಳ್ಳಲೇ ಬೇಕು, ಹಾಗೆ ಯಾವುದಾದರೂ ಕಾರಣಕ್ಕೆ ಶುಚಿ ಮಾಡಿ ಕೊಳ್ಳಲು ಆಗದ ಸಂದರ್ಭದಲ್ಲಿ ಮಸ್ಜಿದ್ ಒಳಗೆ ಪ್ರವೇಶಿಸುವಂತಿಲ್ಲ. ಹಾಗೆಯೆ ಸುನ್ನತಿ ಮಾಡಿಸಿಕೊಳ್ಳದಿದ್ದವರು ನಮಾಜ್ ಮಾಡುವುದಾಗಲೀ, ಮಸ್ಜಿದ್ ಒಳಗೆ ಪ್ರವೇಶಿಸುವುದಾಗಲೀ ಕೂಡದು. ಸುನ್ನತಿ ಮಾಡಿಕೊಳ್ಳದ, ಶೌಚ ಶುಚಿತ್ವ ಅನುಸರಿಸದವರು ಪವಿತ್ರ ಕುರಾನ್ ಸಹ ಮುಟ್ಟುವಂತಿಲ್ಲ ಎಂದು ಸಂಪ್ರದಾಯವಾದಿಗಳ ನಿಲುವು.

ಈಗ ಇದಕ್ಕೆ ಚ್ಯುತಿ ಅಮೆರಿಕೆಯ ರಾಜ್ಯವೊಂದರಲ್ಲಿ. ಮುಸ್ಲಿಂ ವಿರೋಧಿ ಅಥವಾ Islamophobia ಕಾರಣ ಈ ನಿಯಮವನ್ನು ಜಾರಿಗೊಳಿಸುತ್ತಿಲ್ಲವಾದರೂ ಬಹಳಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರ ವಿರೋಧ ಈ ನಿಯಮಕ್ಕೆ ಬರುತ್ತಿದೆ. ಕ್ರೈಸ್ತರೂ ಮತ್ತು ಯಹೂದ್ಯರೂ ಈ ಕ್ರಮವನ್ನು ಟೀಕಿಸಿ ಇದು ಅಮೆರಿಕೆಯ first amendment ನಲ್ಲಿ ನೀಡಲಾಗಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುತ್ತಿದ್ದಾರೆ.  

ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು. ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು, ಸೋಂಕು ತಗುಲಬಹುದು ಎನ್ನುವ ಭಯ. ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ. ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ. ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು  ವೈದ್ಯರುಗಳ ಅಭಿಪ್ರಾಯ.

ಸುನ್ನತಿ ಶಸ್ತ್ರ ಚಿಕಿತ್ಸೆ ಅತ್ಯಂತ ವೇದನೆಯಿಂದ ಕೂಡಿದ್ದು, ಎಳೇ ಮಕ್ಕಳ ಮೇಲೆ ಇದನ್ನು ಅವರ ಸಮ್ಮತಿಯಿಲ್ಲದೆ ಹೇರಲಾಗುವುದರಿಂದ ಇದು ಕೂಡದು ಎನ್ನುವುದು ವಿರೋಧಿಗಳ ನಿಲುವು. ಸುನ್ನತಿ ಸಹಿಸಲಾಗದ  ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ. ಹದಿನೈದು ಇಪ್ಪತ್ತು ವರ್ಷಗಳ ಮೊದಲು ಅರಿವಳಿಕೆ ನೀಡದೆ ಹೆಚ್ಚಾಗಿ ಕ್ಷೌರಿಕರು ಸುನ್ನತಿ ಮಾಡುತ್ತಿದ್ದರು. ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.

ಯಹೂದ್ಯರಲ್ಲಿ ಸುನ್ನತಿ ಮಾಡಿಸಿ ಕೊಳ್ಳುವುದು ದೇವರ ಮತ್ತು ಅಬ್ರಹಾಮರ ನಡುವಿನ ಒಪ್ಪಂದದ ಆಚರಣೆಯಾಗಿ. ಯಹೂದ್ಯರು ಗಂಡು ಮಗು ಜನಿಸಿದ ಎಂಟನೆ ದಿನ ಸುನ್ನತಿ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಮಗು ಹುಟ್ಟಿದ ಕೂಡಲೇ ಮಾಡುವುದಾದರೂ, ಅವರವರ ಅನುಕೂಲಕ್ಕೆ ತಕ್ಕಂತೆ ೧೦-೧೨ ವರ್ಷಗಳ ಒಳಗೆ ಮಾಡುತ್ತಾರೆ.

ಸುನ್ನತಿ ವಿರುದ್ಧ ವಾದಿಸುವವರು ಯಾವುದೇ ರೀತಿಯ ಕಾರಣಗಳನ್ನು ನೀಡಿದರೂ ವಿವೇಚನೆಗೆ  ನಿಲುಕುವ ಯಾವುದೇ ಧಾರ್ಮಿಕ  ಆಚರಣೆಗಳಿಗೆ ಯಾರದೇ ಶಿಫಾರಸ್ಸಿನ ಅಥವಾ ವಿರೋಧದ ಪರಿವೆ ಇರಕೂಡದು. ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಧರ್ಮಗಳಿಗೆ ಸಂಬಂಧಿಸಿದ ಪ್ರತಿಯೊಂದನ್ನು ಟೀಕಿಸುವುದು ಕೆಲವರ ಜಾಯಮಾನ ಸರಿಯಲ್ಲ. ಆಚರಣೆಗಳನ್ನು ವಿರೋಧಿಸುವವರಿಗೆ ವಿರೋಧಿಸಳು ಇರುವ ಹಕ್ಕಿನಂತೆಯೇ ಅದರ ಪರವಾಗಿ ನಿಲ್ಲುವವರಿಗೂ ಅದೇ ತೆರನಾದ ಹಕ್ಕಿದೆ ಎನ್ನುವದನ್ನು ಮನಗಾಣಬೇಕು.

ಸುನ್ನತಿ ಬಗ್ಗೆ ಒಂದು ಜೋಕು: ಒಮ್ಮೆ ಒಬ್ಬ ಹುಡುಗನಿಗೆ ಸುನ್ನತಿ ಮಾಡಿಸಲು ಮನೆಯವರು ನಿರ್ಧರಿಸುತಾರೆ. ಅವನು ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾಗಿರುತ್ತಾನೆ. ಅವನ ಮಿತ್ರರುಗಳು ತುಂಬಾ ನೋವಾಗುತ್ತೆ ಈ ವಯಸ್ಸಿನಲ್ಲಿ ಕತ್ತರಿಸಿಕೊಂಡಾಗ ಎಂದು ಹೆದರಿಸಿದ ಕಾರಣ ಅವನು ರಂಪಾಟ ಮಾಡುತ್ತಾನೆ. ಒಂದೇ ಸಮನೆ ಅಳುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಬೇಡುತ್ತಿದ್ದ ಅವನನ್ನು ಕಂಡು ಅವನ ತಾಯಿಗೆ ಮರುಕ ತೋರುತ್ತದೆ. ಆಕೆ ಕೂಗಿ ಹೇಳುತ್ತಾಳೆ, ಪಾಪ ಆ ಹುಡುನನ್ನು ಯಾಕೆ ಹಾಗೆ ಎಳೆದು ಕೊಂಡು ಹೋಗ್ತೀರಾ, ಮೊದಲು ಅವನ ಅಪ್ಪನಿಗೆ ಸುನ್ನತಿ ಮಾಡಿಸಿ, ನಂತರ ಮಗನಿಗೆ ಮಾಡಿಸುವಿರಂತೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸುತ್ತಾಳೆ. ಹುಡುಗನ ಬದಲಿಗೆ ಈಗ ಹರಕೆ ಕುರಿಯಾಗುವ ಸರತಿ ಅಪ್ಪನದಾಗುತ್ತದೆ.

ನಾರೀಮಣಿಗಳ ವಿಜೃಂಭಣೆ

ಮಿನಿ ಮಹಾ ಚುನಾವಣೆ ಎನ್ನಬಹುದಾದ ನಾಲ್ಕು ರಾಜ್ಯಗಳ ಚುನಾವಣೆಗಳಲ್ಲಿ ಮಹಿಳೆ ಅಭೂತ ಪೂರ್ವ ಯಶಸ್ಸನ್ನು ಸಾಧಿಸಿದ್ದಾಳೆ. ದಿಲ್ಲಿಯಿಂದ ಹಿಡಿದು ದಕ್ಷಿಣದ ತಮಿಳು ನಾಡಿನವರೆಗೆ ನಾರೀ ಮಣಿಗಳ ವಿಜೃಂಭಣೆ ಅಧಿಕಾರದ ಪಡಸಾಲೆಗಳಲ್ಲಿ.  ಸ್ವ ಸಾಮರ್ಥ್ಯದಿಂದ ಮಮತಾ ಬ್ಯಾನರ್ಜಿ, ಶೀಲಾ ದೀಕ್ಷಿತ್ ರಾಜಕಾರಣದಲ್ಲಿ ಮಿಂಚಿದರೆ ಸೋನಿಯಾ, ಜಯಲಲಿತಾ ಮತ್ತು ಮಾಯಾವತಿ ಪುರುಷರ ನೆರಳಿನ ಸಹಾಯದಿಂದ ಮಿಂಚಿದವರು. ಹೆಣ್ಣಿನ ಹುಟ್ಟು ಹೇಸಿಗೆ ಮತ್ತು ತಾತ್ಸಾರ ಹುಟ್ಟಿಸುವ, ಗರ್ಭದಲ್ಲೇ ಅವಳನ್ನು ಹೊಸಕಿ ಹಾಕುವ ಅತ್ಯಂತ ತ ಕಳವಳಕಾರೀ ವಿದ್ಯಮಾನಗಳನ್ನು ನಾವು ದಿನವೂ ಕಾಣುತ್ತಿರುವಾಗ ರಾಜಕೀಯದಲ್ಲಿ ಸ್ತ್ರೀಯರ ಯಶಸ್ಸು ನಿಜಕ್ಕೂ ಸಂತಸವನ್ನು ಮೂಡಿಸುತ್ತದೆ. ಈ ಮಹಿಳಾ ಮಣಿಗಳು ಮಾಡಬೇಕಾದ ಮೊದಲ ಕೆಲಸವೆಂದರೆ ಮೇಲೆ ಹೇಳಿದ ಹೆಣ್ಣಿನ ಭ್ರೂಣ ಹತ್ಯೆ ಮತ್ತು ಹೆಣ್ಣಿನ ಮೇಲೆ ನಡೆಯುವ ಅವ್ಯಾಹತ ಶೋಷಣೆಯ ವಿರುದ್ಧ ಸಮರವನ್ನೇ ಸಾರಿ ಜನರಲ್ಲಿ ಹೆಣ್ಣು ನಿಕೃಷ್ಟಳಲ್ಲ, ಪುರುಷನಷ್ಟೇ ಬಲಿಷ್ಠಳು ಎನ್ನುವ ಸತ್ಯವನ್ನು ಮನಗಾಣಿಸುವುದು.

ಬೆಟ್ಟಿಂಗ್ ಭಯ

ಭಾರತ ಪಾಕ್ ನಡುವೆ ೨೦೧೧ ರ ವಿಶ್ವ ಕ್ರಿಕೆಟ್ ಕಪ್ ಸೆಮಿಫೈನಲ್ ಮೊಹಾಲಿಯಲ್ಲಿ. ಎಲ್ಲರ ದೃಷ್ಟಿಗಳೂ ಮೊಹಾಲಿ ಕಡೆಗೂ ಮತ್ತು ಕ್ರಿಕೆಟಿಗರ ಕಡೆಗೂ ನೆಟ್ಟಿರುವುದರಲ್ಲಿ ಸಂಶಯವಿಲ್ಲ. ವಿಶ್ವದ ಅತಿ ಸ್ಪರ್ದಾತ್ಮಕ ಕ್ರೀಡೆ ಎಂದರೆ ಭಾರತ ಪಾಕ್ ನಡುವಿನ ಜಿದ್ದಾ ಜಿದ್ದಿನ ಕ್ರಿಕೆಟ್. ಸಹಜವಾಗಿಯೇ ಭಾರತೀಯರಿಗೂ ಪಾಕಿಗಳಿಗೂ ತಮ್ಮ ತಂಡವೇ ಗೆಲ್ಲಬೇಕು ಎನ್ನುವ ಅದಮ್ಯ ಆಸೆ ಮನದಲ್ಲಿದ್ದರೂ ಕ್ರಿಕೆಟ್ ಮೋಹಕವಾಗಿ ರಂಜಿಸಬಲ್ಲುದೆ ಎನ್ನುವುದನ್ನು ಕಾದು ನೋಡಬೇಕು. ಬ್ಯಾಟಿಂಗ್ ನಲ್ಲಿ ಈಗಿನ ಭಾರತವನ್ನ ಮೀರಿಸುವ ತಂಡ ಮತ್ತೊಂದಿಲ್ಲ, ಆದರೆ ಬೌಲಿಂಗ್ ನಲ್ಲಿ ನಮ್ಮ ಸಾಧನೆ ಎಂದಿಗೂ ಉತ್ಕೃಷ್ಟ ಮಟ್ಟದ್ದಾಗಿರಲಿಲ್ಲ. ಆದರೂ ವೇಗದ ಬೌಲಿಂಗ್ ನಲ್ಲಿ ಜಹೀರ್ ಖಾನ್ ಪ್ರದರ್ಶಿಸುತ್ತಿರುವ ಸಾಹಸ ಪ್ರಶಂಸಾರ್ಹವೆ. ಜಹೀರ್ ರನ್ನು ನಾಯಕ ಯಾವ ರೀತಿಯಲ್ಲಿ ಬಳಸಿಕೊಳ್ಳುವರು ಎನ್ನುವುದರ ಮೇಲೆ ಅವಲಂಬಿತ ಈ ಪಂದ್ಯದ ಫಲಿತಾಂಶ. ಯಾರು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳಲಿ, ಕೋಟ್ಯಂತರ ಭಾರತೀಯರ ಆಸೆ ಮಾತ್ರ ಈಡೇರಲಿ.

ಈ ನಡುವೆ ಪಾಕ್ ದೇಶದ ಆಂತರಿಕ ವ್ಯವಹಾರಗಳ ಸಚಿವ ಪಾಕ್ ಕ್ರೀಡಾಗಾರರಿಗೆ ಬೆಟ್ಟಿಂಗ್ ಬಲೆಗೆ ಬೀಳದಂತೆ ಕಟು ಎಚ್ಚರಿಕೆ ನೀಡಿದ್ದಾರೆ. ಪಾಕಿಗಳ ಹಿಂದಿನ ಪುರಾಣ ಓದಿದವರಿಗೆ ಈ ಎಚ್ಚರಿಕೆ ಸಮಂಜಸವಾಗಿ ಕಂಡರೂ ತಾನು ಈ ಪಂದ್ಯದಲ್ಲಿ ಸೋತರೆ ಮಗುಮ್ಮಾಗಿ ಬೆಟ್ಟಿಂಗ್ ಗುಮ್ಮವನ್ನು ತನ್ನ ತಂಡದ ಮೇಲೆ ಹೊರೆಸಿ ಮಾನ ಕಾಯ್ದು ಕೊಳ್ಳುವ ಹುನ್ನಾರವೇನಾದರೂ ಇರಬಹುದೇ ಈ ಎಚ್ಚರಿಕೆ ಘಂಟೆಯ ಹಿಂದೆ? ಒಂದು ರೀತಿಯ pre-emptive ತಂತ್ರ. ಎಷ್ಟಿದ್ದರೂ ರೆಹಮಾನ್ ಮಲಿಕ್ ರಾಜಕಾರಣಿ, ತನ್ನ ಕುಬುದ್ಧಿಯನ್ನು ಎಂದಿಗಾದರೂ ಬಿಟ್ಟಾನೆಯೇ? ಮಂತ್ರಿಯ ಎಚ್ಚರಿಕೆಯ ಬಗ್ಗೆ ಒಬ್ಬ ಓದುಗ ಪ್ರತಿಕ್ರಯಿಸಿದ್ದು ಹೀಗೆ: 

ಮಂತ್ರಿಯ ಎಚ್ಚರಿಕೆಯು ತನ್ನದೇ ಮನೆಯ ಮುಂದೆ “ವೇಶ್ಯಾವಾಟಿಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ” ಎನ್ನುವ ಸೂಚನಾ ಫಲಕ ನೇತು ಹಾಕಿದಂತೆ. ಹೇಗಿದೆ ಡೈಲಾಗು?

ಚಂದ್ರ ಮತ್ತಷ್ಟು ಹತ್ತಿರ, ಆಪ್ತ

ಚಂದ್ರ ಮತ್ತಷ್ಟು ಹತ್ತಿರ, ಆಪ್ತ. ೧೯ ವರ್ಷಗಳ ನಂತರ ಇಂದು ಚಂದ್ರ ನಮಗೆ ಹತ್ತಿರ ಬಂದಿದ್ದಾನಂತೆ. ಭೂವಾಸಿಗಳಲ್ಲಿ ಅದ್ಯಾವ ಹೆಗ್ಗಳಿಕೆ ನೋಡಿ ಬಂದನೋ ಇನ್ನಷ್ಟು ಸಮೀಪ ನನಗೆ ತಿಳೀದು, ಆದರೆ ಸೂಪರ್ ಮೂನ್, ಮೆಗಾ ಮೂನ್, ಡಬ್ಬಲ್ ಮೂನ್ ಹಾಗೆ ಹೀಗೆ ಎಂದು ಕೆಲದಿನಗಳಿಂದ ಕೇಳುತ್ತಾ ಇದ್ದುದರಿಂದ ಸಂಜೆಯ ದೂರದ ನೆಂಟನಿಗಾಗಿ ಕಾದು ಕೂತೆ. ಮಧ್ಯಾಹ್ನದ ಉರಿ ಸೂರ್ಯ, ಸಂಜೆಯಾಗುತ್ತಾ ಬೆಳ್ಳಿ ಬಣ್ಣ ಪಡೆದುಕೊಂಡು, ಸ್ವಲ್ಪ ನಂತರ ತನ್ನ ಮೈಯ್ಯನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿಕೊಂಡು ತನ್ನ ವಧು ಕೆಂಪು ಸಮುದ್ರದ ತೆಕ್ಕೆಗೆ ಜಾರಿದ ಕೆಲ ಹೊತ್ತಿನಲ್ಲೇ ಕಳ್ಳ ನಗೆ ಬೀರುತ್ತಾ ಬಂದ ನಮ್ಮ ಮಾಮ. ಚಂದಾಮಾಮ. ಅರೆ, ಇದೇನಿದು,  ೧೯ ವರ್ಷಗಳ ನಂತರ ಹತ್ತಿರ ಬಂದ ಈ ಮಾಮ ಥೇಟ್ ಹಿಂದಿನ ಮಾಮನ ಥರವೇ ಇದ್ದ. ಮುಖದಲ್ಲಿ ಸ್ವಲ್ಪ ಹೆಚ್ಚು ಮಾಂಸ ತುಂಬಿಕೊಂಡು ನಳನಳಿಸುತ್ತಾ ಬರಬಹುದು ಎಂದೆಣಿಸಿದ್ದ ನನಗೆ ಕಾಣಲು ಸಿಕ್ಕಿದ್ದು ಅದೇ age old ಮಾಮ. (ಅಂಕಲ್ ಅಂತ ಅವನನ್ನು ಕರೆಯಲು ನನಗೆ ಇಷ್ಟವಿಲ್ಲ. ಬಸ್ ಸ್ಟಾಂಡ್ ನಲ್ಲಿ ಕೈ ಚಾಚಿ ಬೇಡುವವನೂ, ಬಸ್ಸಿನ ಸೀಟಿಗಾಗಿ ಜಗಳ ಕಾಯುವವರೆಲ್ಲಾ ಅಂಕಲ್ ಗಳೇ ಆದ್ದರಿಂದ ನಮ್ಮ ಚಂದಾ ಮಾಮನಿಗೆ ಆಂಗ್ಲ ಪ್ರಯೋಗ ಬೇಡ.). ನನ್ನ ಬರಿಗಣ್ಣಿಗೆ ಇವನು ಅದೇ ಗಾತ್ರದ ಮಾಮ. ಮುಖದ ತುಂಬಾ freckles ಇದ್ದರೂ ತನ್ನ ಕಾಂತಿಯನ್ನು ತನ್ನನ್ನು ಸುತ್ತುವರೆದ ಮೋಡಗಳಿಗೂ ನೀಡುತ್ತಾ aloof ಆಗಿ ಆಗಸಕ್ಕೆ ಅಂಟಿ ಕೊಂಡ ಮಾಮ. ಬಹುಶಃ ಇವನ ನಿಖರವಾದ ಅಳತೆಗೆ ಸ್ಟೆತಾಸ್ಕೋಪು, ಪೆರಿಸ್ಕೋಪು, ಟೆಲಿಸ್ಕೋಪು ಇವ್ಯಾವುದೂ ನನ್ನಲ್ಲಿಲ್ಲದೆ ಇರೋದ್ರಿಂದ ನನಗೆ ಹಳೇ ಮಾಮನ ದರ್ಶನದ ಭಾಗ್ಯ ಮಾತ್ರಾ.  ಸೂಪರ್ ಮೂನ್ ವಿದ್ಯಮಾನದಲ್ಲಿ ಸೂರ್ಯ , ಭೂಮಿ ಮತ್ತು ಚಂದಿರರು ಒಂದೇ ರೇಖೆಯಲ್ಲಿ ಇದ್ದು ಚಂದ್ರ ಮತ್ತು ಭೂಮಿಗಳು ಸ್ವಲ್ಪ ಸಮೀಪಕ್ಕೆ ಬರುತ್ತವಂತೆ. ಸೂಪರ್ ಮೂನ್ ಕಾರಣ, ಪ್ರವಾಹ, ಭೂಕಂಪ, ಜ್ವಾಲಾ ಮುಖಿ, ಬಿರುಗಾಳಿಗಳೂ ಸಂಭವಿಸಬಹುದಂತೆ. ಬ್ರೇಕಿಂಗ್ ನ್ಯೂಸ್ ನಲ್ಲಿ ಇದುವರೆಗೂ ಯಾವುದೇ ಅಹಿತಕರ ನೈಸರ್ಗಿಕ ಅವಘಡ ಸಂಭವಿಸಿಲ್ಲ.

ಒಂದೇ ಒಂದು ಅವಘಡ ಏನೆಂದರೆ ಕಳೆದ ಹಲವು “ವಿಶ್ವಕಪ್ ಪಂದ್ಯಾವಳಿ” ಯ ೩೫ ಪಂದ್ಯಗಳಲ್ಲಿ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ಸೋಲನ್ನು ಕಂಡಿದ್ದು ಅದೂ ದುರ್ಬಲ, ಪಾಕ್ ತಂಡದ ಕೈಯ್ಯಲ್ಲಿ.     

ಹೀಗೇ ಸುಮ್ಮನೆ: ಸೂಪರ್ ಮೂನ್ ಎನ್ನುವ ಪದವನ್ನು ಶುರು ಮಾಡಿದ್ದು HOROSCOPE ಪತ್ರಿಕೆಯ ಜ್ಯೋತಿಷ್ಯಕಾರ Richard Nolle.

ಯಾರ ಸೋಲು, ಯಾರ ಗೆಲುವು

ಬೆಂಗಳೂರು ನಗರ ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ರೋಮಾಂಚಕಾರಿಯಾಗಿ ಕೊನೆಗೊಂಡಿತು. ಗೆಲ್ಲಲು ೩೩೮ ರ ಗುರಿಯನ್ನು ಕೆಚ್ಚೆಯಿಂದ ಸ್ವೀಕರಿಸಿದ ಅಂಡ್ರೂ ಸ್ಟ್ರಾಸ್ ನ ಬಂಟರು ಗೆಲುವಿನ ಹೊಸ್ತಿಲಿನವರೆಗೂ ಬಂದು ಬರಿಗೈಲಿ ಹೋದರು. ಬರಿಗೈಲಿ ಹೋದರು ಆದ್ರೆ  ಹೋಗಿದ್ದು ಮಾತ್ರ ಹಿಗ್ಗುತ್ತಾ, ಮುಗುಳ್ನಗುತ್ತಾ. ಭಾರತೀಯರ ಹೃದಯಗಳು ಅವರ ಬಾಯಿಗಳಿಗೆ ಬರುವಂತೆ ಮಾಡಿದ ನಮ್ಮ ಮಾಜಿ ಯಜಮಾನರುಗಳು ತಾವೆಂಥಾ ಆಟಗಾರರೆಂದು ವಿಸ್ಮಯಕಾರಕವಾಗಿ ತೋರಿಸಿದರು. ವಿಪರೀತ ಕೇಕೆ ಹಾಕುವ ಬೆಂಗಳೂರಿನ ಜನರ  ಸದ್ದಡಗಿಸುತ್ತೇವೆ ಎನ್ನುವಂಥ ಸ್ಪಿನ್ನೆರ್ “ಸ್ವಾನ್” ನ ಹೇಳಿಕೆಗೆ ನ್ಯಾಯ ಒದಗಿಸುವಂತೆ ಆಡಿದ ಇಂಗ್ಲೆಂಡ್ ನಾಯಕ ತನ್ನ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಬೆಂಗಳೂರಿಗರಿಗೆ ಉಣಬಡಿಸಿದ.

ಆದರೆ ೩೩೯ ಮಾಡಿದ್ದು ನಮ್ಮ ಸಾಹಸವಲ್ಲವೇ? ಅಷ್ಟೇ ಅಲ್ಲ ಆ ಗುರಿ ಮುಟ್ಟದಂತೆ ತಡೆಯುವಲ್ಲಿ ನಾವು ಯಶಸ್ವಿಯಾಗಲಿಲ್ಲವೇ? no. a resounding NO. ೩೩೯ ಮಾಡಿ ಮುನ್ನೂರರ ಒಳಗೆ ಅವರ ಇನ್ನಿಂಗ್ಸ್ ಅನ್ನು ಕವುಚಿ ಬಿಟ್ಟಿದ್ದರೆ ನಾವು ಹೆಮ್ಮೆ ಪಡಬಹುದಿತ್ತು. ಆ ರೀತಿ ಮಾಡದೆ ಶತ್ರು ನಮ್ಮ ಅಡುಗೆ ಮನೆ ತನಕ ನುಸುಳಲು ಬಿಟ್ಟಿದ್ದು ನಮ್ಮ ಸೋಲು. ಇಲ್ಲಿ ನಮ್ಮ ಬೌಲಿಂಗ್ ನ ಬಂಡವಾಳ ಬಟಾ ಬಯಲಾಯಿತು. mediocre bowling ಎನ್ನುವ ಹಣೆ ಪಟ್ಟಿ ಸಿಗುವಂತೆ ಮಾಡಿತು. ಹೌದು ಜಹೀರ್ ಖಾನ್ ಆಟದ ಗತಿಯನ್ನೇ ಬದಲಿಸಿದ ಆ ಅದ್ಭುತ ಓವರ್ ಅನ್ನು unleash ಮಾಡದೆ ಇದ್ದಿದ್ದರೆ ಇಂಗ್ಲೆಂಡ್ ಆಟಗಾರರು ಚಿನ್ನಸ್ವಾಮಿ ಮೈದಾನದ ಪ್ರದಕ್ಷಿಣೆ ಹಾಕುತ್ತಿದ್ದರು ಕೇಕೆ ಹಾಕುತ್ತಾ.  ತನ್ನ ವಯಸ್ಸು ನಾಚುವಂತೆ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ತೆಂಡೂಲ್ಕರ್ ಅವರ ಈ ಶತಕವೂ ಮತ್ತೊಂದು ಅಂಕಿ ಅಂಶವಾಗಿ ಉಳಿಯಿತೇ ವಿನಃ “ಅಂತಿಮ ನಗು” ವಿನ ರೋಮಾಂಚನವನ್ನು ನೀಡಲಿಲ್ಲ.

Switzerland. ಭೂಮಿಯ ಮೇಲಿನ ಸ್ವರ್ಗ

Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿ, swiss army knife, ವಿಶ್ವ ಪ್ರಸಿದ್ಧ Lindt chocolate, ಬೆಲೆಬಾಳುವ ವಾಚುಗಳ ಉತ್ಪಾದನೆ, ಮತ್ತು ವಿಶ್ವ ರಾಜಕಾರಣದಲ್ಲಿ ಯಾರ ಗೊಡವೆಗೂ ಹೋಗದೆ ತಟಸ್ಥ ನೀತಿ ಅನುಸರಿಸುವ ಒಂದು ಪುಟ್ಟ, ಅತಿ ಶ್ರೀಮಂತ ದೇಶ ಸ್ವಿಟ್ಜರ್ ಲ್ಯಾಂಡ್. ಇದು ನಮ್ಮ ಮುಗ್ಧ  ತಿಳಿವಳಿಕೆ ಈ ಪುಟ್ಟ ದೇಶದ ಬಗ್ಗೆ. 

ಆದರೆ ತನ್ನ ಸುತ್ತಲೂ ಶುಭ್ರ, ಮಂಜಿನ ಪರ್ವತವನ್ನೇ ಇಟ್ಟುಕೊಂಡ ಈ ಪುಟ್ಟ ದೇಶ ತನ್ನ ಒಡಲೊಳಗೆ ಇಟ್ಟುಕೊಂಡಿರುವುದು, ಶ್ರೀಮಂತವಾಗಿರುವುದು ಪಾಪದ ಹಣದ ಸಹಾಯದಿಂದ ಎಂದು ಹೇಳಿದರೆ ಹೌಹಾರುವಿರಾ?  

ವಿಶ್ವದ ಎಲ್ಲಾ ಭ್ರಷ್ಟ ರಾಜಕಾರಣಿ, ಅಧಿಕಾರಿ, ಕೈಗಾರಿಕೋದ್ಯಮಿ, ಕಳ್ಳ ಸಾಗಣೆದಾರ, ಮಾದಕ ದ್ರವ್ಯದ ವ್ಯಾಪಾರಿ ಹೀಗೆ ಹತ್ತು ಹಲವು ವರ್ಣರಂಜಿತ ವ್ಯಕ್ತಿತ್ವಗಳು ಲೂಟಿಗೈದ ಹಣವನ್ನು ಬಚ್ಚಿಡಲು ಆರಿಸಿಕೊಂಡ ತಾಣವೇ ಸ್ವಿಟ್ಜರ್ ಲ್ಯಾಂಡ್. ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ಇಟಲಿ ದೇಶಗಳಿಂದ ಸುತ್ತುವರೆದ ಸ್ವಿಸ್ಸ್, ಒಳ್ಳೆ ಬೆಚ್ಚಿಗಿನ ದೇಶ ಲೂಟಿ ಕೋರರಿಗೆ, ಪುಂಡರಿಗೆ. ಇದಕ್ಕಿಂತ ಬೆಚ್ಚಗಿನ, ರಹಸ್ಯ ಸ್ಥಳ ಬೇರೆಲ್ಲಿ ಸಿಗಲು ಸಾಧ್ಯ ಕಳ್ಳ ಧನವನ್ನು ಬಚ್ಚಿಡಲು, ಅಲ್ಲವೇ?   

ಭಾರತೀಯರು ಕೋಟಿಗಟ್ಟಲೆ ತೆರಿಗೆ ವಂಚಿಸಿದ, ನಮ್ಮ ಸಂಪನ್ಮೂಲ ಕದ್ದ, ಲಂಚದ ಮೂಲಕ ಗಳಿಸಿದ ಪಾಪದ ಹಣವನ್ನೂ ಸ್ವಿಸ್ ರೀತಿಯದೇ ಆದ Liechtenstein (ಲೀಚ್ಟೆನ್ ಸ್ಟೈನ್, ಯೂರೋಪ್ ನ ಮತ್ತೊಂದು ಮೈಕ್ರೋ ಸ್ಕೋಪಿಕ್ ದೇಶ )  ಬ್ಯಾಂಕ್ ನಲ್ಲಿ ಹೂತು ಹಾಕಿರುವುದನ್ನು ತೆಹೆಲ್ಕಾ ಬಯಲಿಗೆ ಹಾಕಿದೆ. ಸುಮಾರು ಹದಿನೈದು ಜನರ ಹೆಸರನ್ನು ಬಹಿರಂಗ ಗೊಳಿಸಿರುವ ತೆಹೆಲ್ಕಾ ಬರುವ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಹೊರಗೆಡವಲಿದೆ.  

ಸ್ವಿಸ್ ದೇಶದಲ್ಲಿ ಅಕ್ರಮವಾಗಿ ಧನ ಗುಡ್ಡೆ ಹಾಕಿರುವ ಜನರ ಹೆಸರುಗಳನ್ನು ಅಲ್ಲಿನ ಬ್ಯಾಂಕುಗಳು ಬಹಿರಂಗ ಪಡಿಸಬೇಕು. ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದೂ ಅಲ್ಲದೆ ಲೂಟಿಗೈದ ಸಂಪತ್ತಿಗೆ ತೆರಿಗೆಯನ್ನೂ ಕಟ್ಟದೆ ದುರಹಂಕಾರದಿಂದ ಮೆರೆಯುವ, ಶ್ರೀಮಂತರು ತಾವು ತಿಂದಿದ್ದನ್ನು ಕಕ್ಕಬೇಕು. ದೇಶದಲ್ಲಿ ಆಗಾಗ ಹೊರಬೀಳುತ್ತಿರುವ ಪ್ರತೀ ಹಗರಣದ ಹಿಂದೆಯೂ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿಯ ಮಾಹಿತಿ ಇದ್ದೂ ನಾವು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.  ಅದರ ಮೇಲೆ ಭಾರತ ಬಡ ದೇಶ ಎನ್ನುವ ಪಟ್ಟ ಬೇರೆ.  ಹೆಚ್ಚು ಎಂದರೆ ಅವನು ರಾಜಕಾರಣಿಯಾದರೆ ರಾಜೀನಾಮೆ ನೀಡಬಹುದು ಅಷ್ಟೇ. ರಾಜೀನಾಮೆ ನಂತರ ತಾನು ಕಬಳಿಸಿದ ಸಂಪತ್ತನ್ನು ಜೀವನ ಪೂರ್ತಿ ತಾನು ತನ್ನ ಮಕ್ಕಳು ತಿನ್ನಬಹುದು. ಜನರ ಮನ್ನಣೆಯನ್ನೂ ಗಳಿಸಿಕೊಳ್ಳಬಹುದು. ಇಂಥ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಒಳಗೊಂಡ ಹಗರಣಗಳನ್ನು ನೋಡಿದಾಗ ನಮಗನ್ನಿಸದೆ ಇರುತ್ತದೆಯೇ ನಮ್ಮ ದೇಶ ನಾವೆಣಿಸಿದಂತೆ ಬಡ ದೇಶವಲ್ಲ ಎಂದು?  

ತನ್ನ ಸ್ವ- ರಕ್ಷಣೆಗಾಗಿ ಅಥವಾ ಇಂಧನದ ಅವಶ್ಯಕತೆಗಾಗಿ ಅಣು ಸ್ಥಾವರಗಳನ್ನು ನಿರ್ಮಿಸಿದ್ದಕ್ಕೆ ಇರಾನಿನ ಮೇಲೆ ಹರಿ ಹಾಯುವ ಪಾಶ್ಚಾತ್ಯ ದೇಶಗಳು ಸ್ವಿಸ್ ತೆರನಾದ ಮೋಸದ ಜಾಲದ ಬಗ್ಗೆ ಮಾತ್ರ ಮೌನ ತಾಳಿರುವುದು  ಆಷಾಢ ಭೂತಿತನದ ಪರಮಾವಧಿ. ಕೊಳಕು ಹಣವನ್ನು ಒಡಲಲ್ಲಿಟ್ಟುಕೊಂಡು ವಿಶ್ವಕ್ಕೆ ತಾನು ಸಭ್ಯಸ್ಥ ಎಂದು ತೋರಿಸುವ ಸ್ವಿಸ್ ಪರಿಪಾಠ ಹೇಸಿಗೆ ಹುಟ್ಟಿಸುವಂಥದ್ದು. ಮೋಸದ, ಲಂಚದ ಹಣವನ್ನು ರಹಸ್ಯವಾಗಿ,  ಜೋಪಾನವಾಗಿರಿಸಿ ಬಡ ದೇಶಗಳಲ್ಲಿರುವ ಲಂಚಗುಳಿತನದ ಬಗ್ಗೆ ಮರುಕ ತೋರುತ್ತಾ ತಾನು ವಿಶ್ವದಲ್ಲಿ ಲಂಚ ರಹಿತ ದೇಶ ಎಂದು ತೋರಿಸಿಕೊಳ್ಳುವ ದೇಶದ ಬಗ್ಗೆ ಏನೆನ್ನಬೇಕೋ ತಿಳಿಯದು. ಬ್ಯಾಂಕಿಂಗ್ ಗೌಪ್ಯವನ್ನು ಕಾಪಾಡಲು ಸ್ವಿಟ್ಜರ್ ಲ್ಯಾಂಡ್ ನ ೭೩ % ಜನ ರ ಬೆಂಬಲವಿದೆಯಂತೆ. ಇಲ್ಲದೆ ಏನು, ಈ ಕಳ್ಳ ಹಣದ ನೆರವಿನಿಂದಲೇ ಅಲ್ಲವೇ ಅವರ ಬಾಳು ಬೆಳಗುತ್ತಿರುವುದು.

ಭಯೋತ್ಪಾದಕರು ಯಾವುದಾದರೂ ದೇಶದಲ್ಲಿ ಅಡಗಿ ಕೂತರೆ ಅವರನ್ನು ಹೊಗೆ ಹಾಕಿ ಹೊರಕ್ಕೆಳೆಯುವ ಅಮೆರಿಕೆಯಾಗಲಿ, ಅಥವಾ ಇನ್ಯಾವುದೇ ದೇಶವಾಗಲೀ ಸ್ವಿಸ್ ಬ್ಯಾಂಕುಗಳಲ್ಲಿ ಬಡ ದೇಶಗಳ ಧನ ಲೂಟಿ ಮಾಡಿ ಕಲೆಹಾಕಿದ್ದಕ್ಕೆ ಸ್ವಿಸ್ ದೇಶವನ್ನು ದಂಡಿಸಲು ಸಾಧ್ಯವೇ? ಭಯೋತ್ಪಾದಕ ಕೃತ್ಯದಲ್ಲಿ ಒಬ್ಬ ಭಾಗಿಯಾಗಿಲ್ಲದಿದ್ದರೂ ಓರ್ವ  ಭಯೋತ್ಪಾದಕನಿಗೆ ಆಶ್ರಯ ನೀಡುವುದೂ ಭಯೋತ್ಪಾದನೆಗೆ ಸಹಕರಿಸಿದ್ದಂತೆ. ಈ ಮಾನದಂಡವನ್ನು ಸ್ವಿಸ್ ನಂಥ ದೇಶಗಳ ಮೇಲೆ ಏಕೆ ಉಪಯೋಗಿಸಬಾರದು?  ಲೂಟಿ ಮಾಡಿದವ ಮಾತ್ರ ಕಳ್ಳನಲ್ಲ, ಅವನ ಲೂಟಿಯನ್ನು ಜಾಗರೂಕತೆಯಿಂದ ಕಾಯುವುದೂ ಠಕ್ಕತನವೇ.  

ಸ್ವಿಸ್ ದೇಶದ ಗಿರಾಕಿಗಳಲ್ಲಿ ಬರೀ ಲಂಚ ತಿನ್ನುವ ರಾಜಕಾರಣಿಗಳು ಮಾತ್ರವಲ್ಲ. ಮೆಕ್ಸಿಕೋ ದೇಶದ ಮಾದಕ ದ್ರವ್ಯ ಮಾರುವ ದೊರೆಗಳು ಸಹ ಇಲ್ಲಿ ಹಣ ಅಡಗಿಸಿಡುತ್ತಾರೆ. ಅಂದರೆ ಪ್ರಪಂಚವನ್ನು ಕಾಡುತ್ತಿರುವ ಎಲ್ಲ ರೀತಿಯ ಪೀಡೆಗಳಿಗೆ ಸ್ವಿಸ್ ನೇರ ಹೊಣೆ ಎಂದರೆ ತಪ್ಪಾಗಬಹುದೇ?

ನೈಜೀರಿಯಾದ ಸಾನಿ ಅಬಾಚ, ಕೀನ್ಯಾದ ಡೇನಿಯಲ್ ಅರಪ್ ಮೊಯ್, ಫಿಲಿಪ್ಪಿನ್ಸ್ ದೇಶದ ಮಾರ್ಕೋಸ್, ನೆರೆಯ ಪಾಕಿಸ್ತಾನದ ಭುಟ್ಟೋ ಪರಿವಾರ, ಇಂಥ ಸರ್ವಾಧಿಕಾರಿಗಳು ಮತ್ತು ಭ್ರಷ್ಟರು ಸ್ವಿಸ್ ದೇಶದ ಮಿತ್ರರುಗಳು. ಆಂಗ್ಲ ಭಾಷೆಯಲ್ಲಿನ ಗಾದೆ; A person is known by the company he keeps.   

ವಿಶ್ವ ಸಮುದಾಯದಲ್ಲಿ ಸ್ವಿಸ್ ತಟಸ್ಥ ದೇಶವಾದರೆ ಮಾತ್ರ ಸಾಲದು, ಒಂದು ಜವಾಬ್ದಾರಿಯುತ ದೇಶವಾಗಿ ವಿಶ್ವದ ಬಡಜನರ, ಹತಾಶೆಗೂ ಸಹ ಸ್ಪಂದಿಸಬೇಕಾದ್ದು ಅತ್ಯಗತ್ಯ. ಬಡದೇಶಗಳ ಸಂಪತ್ತನ್ನು ಲೂಟಿ ಮಾಡಿದ ನಾಯಕರುಗಳ ಬ್ಯಾಂಕ್ ಖಾತೆಯನ್ನು ರಹಸ್ಯವಾಗಿರಿಸಿ ತನ್ಮೂಲಕ ಹಗಲು ದರೋಡೆಗೆ ಪರೋಕ್ಷ ಸಹಾಯ ನೀಡುತ್ತಿರುವ ಸ್ವಿಸ್ ಒಂದು ಪರಾವಲಂಬಿ ದೇಶ ಎನ್ನುವ ಬಿರುದು ಕಟ್ಟಿಕೊಂಡು ಬದುಕುವುದು ಬೇಡ. ಶೀತಲ ವಾತಾವರಣದ ಜನರ ಭಾವನೆಗಳು ಶೀತಲವಾಗಿಬಿಟ್ಟರೆ ಆಗುವ ಅನಾಹುತಕ್ಕೆ ಸ್ವಿಸ್ಸ್ ದೇಶವೇ ಸಾಕ್ಷಿಯೇನೋ? ಹಸಿವು, ರೋಗ, ಕುಡಿಯುವ ಸ್ವಚ್ಚ ನೀರಿನ ಅಭಾವ, ರಸ್ತೆ, ಆಸ್ಪತ್ರೆ, ಶಾಲೆಗಳ ತೀವ್ರ ಕೊರತೆ ಮುಂತಾದ ನೂರೊಂದು ಸಾಮಾಜಿಕ ಸಮಸ್ಯೆಗಳಿಂದ ಬಡ ದೇಶಗಳ ಜನ ಬಳಲುತ್ತಿದ್ದರೆ ತನ್ನ ತಿಜೋರಿಯನ್ನು ಪಾಪದ ಹಣದಿಂದ ಅಲಂಕರಿಸುವುದು ಬೇಡ. 

 ಬಡ ರಾಷ್ಟ್ರಗಳು ತಮ್ಮ ದೇಶದಿಂದ ಹೊರ ಹೋದ ಹಣಕ್ಕಾಗಿ ಸ್ವಿಸ್ ದೇಶವನ್ನು ಸಂಪರ್ಕಿಸಿದಾಗ ಕಾನೂನು ತೊಡಕುಗಳನ್ನು ಕಾರಣವಾಗಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ಕೊಡದೆ ವರ್ಷಗಟ್ಟಲೆ ಕಾಯಿಸಿದರು. ಈ ಅವಧಿಯಲ್ಲಿ ಈ ಬಡ ರಾಷ್ಟ್ರಗಳಲ್ಲಿ ಹೊಟ್ಟೆಗಿಲ್ಲದೆ, ಔಷಧಿ ಇಲ್ಲದೆ ಸತ್ತ ಜನರ ಸಂಖ್ಯೆ ಅದೆಷ್ಟೋ ದೇವರೇ ಬಲ್ಲ. ತನ್ನ ಪ್ರಜೆಗಳು ಕೊಬ್ಬು ತುಂಬಿದ ಸ್ಟೇಕ್ ತಿನ್ನುತ್ತಾ ವೈನು, ಬೀರು ಸವಿಯುತ್ತಿದ್ದರೆ ಬಡ ದೇಶಗಳ ಬಹುಸಂಖ್ಯಾತ ಜನ ಒಪ್ಪೊತ್ತಿನ ಅನ್ನವಿಲ್ಲದೆ ನರಳುವ ದೃಶ್ಯ ವಿಶ್ವದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ನಮ್ಮ ದೇಶದಿಂದ ಸ್ವಿಸ್ ದೇಶಕ್ಕೆ ವಲಸೆ ಹೋದ ಅಗಾಧ ಸಂಪತ್ತು ಮರಳಿ ಬಂದರೆ ಕೆಳಗೆ ತೋರಿಸಿದ ಮಕ್ಕಳ ಅಸಹಾಯಕ ಪರಿಸ್ಥಿತಿ ಸುಧಾರಿಸಲು ನೆರವಾಗಬಹುದು.

ಆರು ವರ್ಷ ಪ್ರಾಯದ ವಿಶಾಲ್ ಒಂದು ಕಪ್ ಚಹಾ ಮತ್ತು ಎರಡು ತುಂಡು ಬಿಸ್ಕಿಟ್ ಒಂದಿಗೆ ತನ್ನ ದಿನವನ್ನು ಆರಂಭಿಸುತ್ತಾನೆ. ಬಡ ಮಕ್ಕಳಿಗೆ ಪುಕ್ಕಟೆಯಾಗಿ ಹಂಚುವ ಚಿತ್ರಾನ್ನ ಅವನ ಮಧ್ಯಾಹ್ನದ ಊಟ. ಅದರಲ್ಲಿ ಅರ್ಧ ತಿಂದು ಮತ್ತೊಂದಿಷ್ಟನ್ನು ತೆಗೆದಿಡುತ್ತಾನೆ ಹಸಿದಾಗ ತಿನ್ನಲು. ರಾತ್ರಿ ಹಸಿದಾಗ ಐದು ರೂಪಾಯಿಯ ಕುರ್ಕುರೆ ಕೊಡಿಸುತ್ತಾಳೆ ಅವನ ತಾಯಿ. ಈ ತಿನಿಸುಗಳೇ ಅವನ ಒಂದು ದಿನದ ಆಹಾರ. ಇಷ್ಟು ತಿಂದಾಗ ವಿಶಾಲನಿಗೆ ಸಿಗುವ ಕ್ಯಾಲೋರಿಗಳು ೮೫೬.

ಎರಡು ವರ್ಷದ ಸುರ್ಜ ಕೊಲ್ಕತ್ತಾದ ಕಲ್ಯಾಣಿ ರೈಲ್ವೆ ಸ್ಟೇಶನ್ ನ ಪ್ಲಾಟ್ಫಾರ್ಮ್ ನಾಲ್ಕರಲ್ಲಿ ಮನೆ ಮಾಡಿ ಕೊಂಡಿದ್ದಾನೆ. ಬೆಳಗ್ಗಿನ ತಿಂಡಿಗೆ ಅರ್ಧ ಪೂರಿ. ಮಧ್ಯಾಹ್ನ, ಎರಡು ಹಿಡಿ ಅನ್ನ ಮತ್ತು ಬೇಳೆ ಸಾರು. ರಾತ್ರಿ ಮತ್ತೆರಡು ಹಿಡಿ ಅನ್ನ, ಸಾರು ಅಥವಾ ಒಂದು ರೊಟ್ಟಿ. ಸುರ್ಜ, ಐದು ವರ್ಷಗಳ ತನ್ನ ಅಕ್ಕ, ಮತ್ತು ಕುಷ್ಠ ರೋಗಿ ತಂದೆಯೊಂದಿಗೆ ವಾಸಿಸುತ್ತಾನೆ. ಬೇಡಿ ತಿನ್ನುವುದು ಅವರ ಬದುಕು. ದಿನಕ್ಕೆ ೨೦ – ೨೫ ರೂಪಾಯಿ ದುಡಿಯುತ್ತಾರೆ. ರೈಲು ಪ್ರಯಾಣಿಕರು ತಿಂದು ಉಳಿದುದನ್ನು ಇವರು ತಿಂದು ಬದುಕುತ್ತಾರೆ. ಇವರಿಗೆ ದೊರಕುವ ಕ್ಯಾಲೋರಿ ಹೆಚ್ಚು ಕಡಿಮೆ ವಿಶಾಲನಷ್ಟೇ. ನಮ್ಮ ಹೊಟ್ಟೆ ಬಡಿದ ಪಾಶ್ಚಾತ್ಯ ದೇಶಗಳ ಮಕ್ಕಳು ತಿನ್ನುವ ತಿನಿಸು ಮತ್ತು ಅವರಿಗೆ ಲಭ್ಯವಾಗುವ ಕ್ಯಾಲೋರಿ ಬಗ್ಗೆ ಬರೆಯಬೇಕೆ? ಬೇಡ ಬಿಡಿ, ಅವರಾದರೂ ತಿಂದುಂಡು ಚೆನ್ನಾಗಿರಲಿ.

child, Relief and You (CRY) ನಡೆಸಿದ ಸಮೀಕ್ಷೆಯ ವೇಳೆ ಸಿಕ್ಕಿದ ಚಿತ್ರಣ ಮೇಲಿನದು. CRY ಸಂಸ್ಥೆಗೆ ಸ್ವಿಸ್ ಸೇರಿ ಬಿಳಿಯ ದೇಶಗಳು ಧಾರಾಳವಾಗಿ ದಾನ ಕೊಡುತ್ತಿರಬಹುದು. ನಮ್ಮ ನಾಯಕರುಗಳು ಪೇರಿಸಿಟ್ಟ ಧನದ ಮೇಲೆ ಅವರಿಗೆ ಸಿಗುವ ಬಡ್ಡಿಯ ಒಂದಿಷ್ಟು ಅಂಶ. LET POOR KIDS FROM THIRD WORLD COUNTRIES SURVIVE ಅಂತ ಕನಿಕರದಿಂದ ದಾನ ಮಾಡುತ್ತಾರೆ ಬಿಳಿಯರು.   

“ವಿಶ್ವ ಹಸಿವಿನ ಸೂಚಿ” (world hunger index)  ಪ್ರಕಾರ ವಿಶ್ವದ ಪೌಷ್ಟಿಕಾಂಶ ಕೊರತೆಯಿರುವ ಶೇಕಡಾ ೪೨ ರಷ್ಟಿರುವ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳು ಭಾರತದಲ್ಲಿ ಇದ್ದಾರಂತೆ. India shining? ಕ್ಷಮಿಸಿ india starving ಎಂದಿರಬೇಕಿತ್ತು. india shining ಎಂದು ಹೇಳಿ ನಮಗೆ ಗರಿ ಗರಿಯಾದ ಟೋಪಿ ತೊಡಿಸಲು ಬಂದ ನಮ್ಮ ನಾಯಕರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದು ಹೇಳಿದವರಾರು?

ನನ್ನ ಮನವಿ ಇಷ್ಟೇ. ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯಲು ಹಾಕಿರುವ ಹಣ ನಮ್ಮ ದೇಶಕ್ಕೆ ಹಿಂತಿರುಗಲಿ. ಲೂಟಿ ಮಾಡಿದವರ ಮೇಲೆ ಸೇಡು ಬೇಡ. ಅವು ಆಗುವ ಹೋಗುವ ಕೆಲಸಗಳಲ್ಲ. ಅವರನ್ನು ಕ್ಷಮಿಸೋಣ ಆದರೆ ನಮ್ಮ ಸಂಪತ್ತು ಮಾತ್ರ ರವಾನೆಯಾಗಲಿ ಭಾರತಕ್ಕೆ.

ಒಬಾಮಾ ಬಂದ್ರು, ಹೋದ್ರು , period .

ಅಮೆರಿಕೆಯ ಅಧ್ಯಕ್ಷ ಮಹೋದಯರು ಭಾರತದಲ್ಲಿ. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು, ಗಗನಚುಂಬಿ ಕಟ್ಟಡಗಳು ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನ ನೋಡಿ ಪ್ರಶಂಸಿಸಲು ಮತ್ತು ಮುಂಬೈಗೆ ಬಂದಿಳಿದ ಒಬಾಮ ಮುಂಬೈ ನರಹತ್ಯೆಯ ರೂವಾರಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ನಾಮಕರಣ ಮಾಡಬಹುದು ಎಂದು. ಆದರೆ ಒಬಾಮರಿಗೆ ಅಥವಾ ಅಮೆರಿಕನ್ನರಿಗೆ ಮುಂಬೈ ನರಹತ್ಯೆ ದೊಡ್ಡ ವಿಷಯವಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ರಾಷ್ಟ್ರರಾಷ್ಟ್ರ ಗಳ ನಡುವಿನ ಸಂಬಂಧದಲ್ಲಿ ಅನುಭವವಾಗುವ collateral damage ಅಷ್ಟೇ ಮುಂಬೈಯಲ್ಲಿ ನಡೆದ ನಗ್ನ ಹಿಂಸೆ. ಪಾಕಿಗಳನ್ನು ವಿಚಾರಿಸಿ ಕೊಳ್ಳಲು ನಾವು ಅಮೆರಿಕೆಯನ್ನಾಗಲೀ ಇನ್ಯಾವುದೇ ರಾಷ್ಟ್ರವನ್ನಾಗಲಿ ಅವಲಂಬಿಸಕೂಡದು ಎಂದು ಚಾಣಕ್ಯಪುರಿಗೆ ಯಾವಾಗ ಹೊಳೆಯುತ್ತದೋ ನೋಡೋಣ. ಹಾಗೇನಾದರೂ ಸುದೈವವಶಾತ್ ಹೊಳೆದಲ್ಲಿ ಅಷ್ಟು ಹೊತ್ತಿಗೆ ನಾವೆಲ್ಲಾ ಪಾಕಿ ಭಯೋತ್ಪಾದಕರಿಗೆ  ಬಲಿಯಾಗದೆ ಜೀವಂತವಾಗಿದ್ದರೆ ನಮ್ಮ ಪುಣ್ಯ ಸಹ ಹೌದು.

ಈ ಮಧ್ಯೆ ಪತ್ರಿಕೆಗಳು ಮತ್ತು ಟೀವೀ ಮಾಧ್ಯಮಗಳು ಒಬಾಮಾ ಪಾಕ್ ಬಗ್ಗೆ ಏನೂ ಹೇಳಲೇ ಇಲ್ಲ ಎಂದು ಮುನಿಸಿಕೊಂಡವು. ನಾವೆಲ್ಲಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಬೇಡಿ ಎಂದು ಪಾಕಿಗಳಿಗೆ ತಾಕೀತು ಮಾಡಬಹುದು ಎಂದು ಬಗೆದಿದ್ದೆವು ಆದರೆ ಅಮೇರಿಕಾ ಎಂದಿಗೂ ಪಾಕಿನ ಮಿತ್ರ ಎಂದು ಸಾಬೀತು ಪಡಿಸಿತು ಎಂದು ಹಲುಬಿದವು ಮಾಧ್ಯಮಗಳು. ಒಂದು ರೀತಿಯ ದೈನಂದಿನ ಬದುಕಿನ ದೃಶ್ಯದ ಥರ ಕಾಣುತ್ತಿಲ್ಲವೇ ಇದು? ಕಮಲಮ್ಮನ ಮನೆಗೆ ಪಕ್ಕದ ಮನೆಯ ಜಾನಕಮ್ಮ ಬಂದು ಸರಸಮ್ಮನ ಬಗ್ಗೆ ಏನೂ ಚಾಡಿ ಹೇಳಿಲ್ಲ ಎಂದು ದೂರುವ ಹಾಗೆ ವರ್ತಿಸಿದವು ಮಾಧ್ಯಮಗಳು ಮತ್ತು ಒಬಾಮಾರ ಭೇಟಿಯ ಬಗ್ಗೆ ಮಾತನಾಡಲು ಬಂದ ಪಂಡಿತರು. ಅಮೇರಿಕಾ ಪಾಕಿನ ಬಗ್ಗೆ ಅಷ್ಟು ಸುಲಭವಾಗಿ ದೂರಲು ಹೋಗೋದಿಲ್ಲ. ಕೆಲವಾರಗಳ ಹಿಂದೆ ಬ್ರಿಟಿಶ್ ಪ್ರಧಾನಿ ಕಮೆರೂನ್ ಬಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದು ಕೊಂಡಿದ್ದರು. ಭಯೋತ್ಪಾದಕತೆ ಶುರು ಆಗೋದೆ ಪಾಕಿನಿಂದ ಎನ್ನುವರ್ಥದ ಮಾತನ್ನು ಹೇಳಿದರು. ಹಾಗೆ ಹೇಳಿದ್ದಕ್ಕೆ ಪಾಕಿನಿಂದ ಉಗ್ರ ಪ್ರತಿಭಟನೆ ಬಂದರೂ ಕಮೆರೂನ್ ಜಗ್ಗಲಿಲ್ಲ. ಆದರೆ ಇದನ್ನು ವೀಕ್ಷಿಸಿದ್ದ ಅಮೆರಿಕೆಗೆ ಇದು ಎಚ್ಚರಿಕೆ ಗಂಟೆಯಾಯಿತು. ಕೆಮೆರೂನ್ ಏನೇ ಹೇಳಿದರೂ ಅವರಿಗೆ ನಷ್ಟವಿಲ್ಲ ಏಕೆಂದರೆ ಆಫ್ಘಾನಿಸ್ತಾನದಲ್ಲಿ ಅವರ ಪಾತ್ರ ದೊಡ್ಡದಲ್ಲ. ಆದರೆ ಅಮೆರಿಕೆಯ ವಿಷಯ ಹಾಗಲ್ಲ. ಕಂದಹಾರದ ಉಗ್ರರನ್ನು ಬಲಿ ಹಾಕಬೇಕೆಂದರೆ ಪಾಕಿನ ಸಹಕಾರ ಬೇಕೇ ಬೇಕು. ನಾವ್ಯಾಕೆ ಬೇಡದ ಉಸಾಬರಿಗೆ ಕೈ ಹಾಕಿ ಕಷ್ಟದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕು. ನಾವು ಬಂದಿರೋದು ವ್ಯಾಪರಕ್ಕೊಸ್ಕರ. ವ್ಯಾಪಾರ ಕುದುರಿಸಿ ಒಂದಿಷ್ಟು ಡಾನ್ಸ್ ಮಾಡಿ ಭಾರತೀಯರನ್ನು ಮೋಡಿ ಮಾಡಿದರೆ ಸಾಕು ಎಂದು ಅಮೆರಿಕೆಯ ಎಣಿಕೆ. ಈ ಕಾರಣಕ್ಕಾಗಿಯೇ ಅಮೆರಿಕೆಯ ದಿವ್ಯ ಮೌನ ಪಾಕ್ ಭಯೋತ್ಪಾದಕತೆ ಬಗ್ಗೆ. ಒಬಾಮ ಬಂದ ಮೊದಲ ದಿನವೇ 10 billion ಡಾಲರ್ಗಳ ವ್ಯಾಪಾರ ಮಾಡಿತು ಅಮೇರಿಕ.

NPR ಅಮೆರಿಕೆಯ ಪ್ರಸಿದ್ಧ ರೇಡಿಯೋ ಮಾಧ್ಯಮ. ಒಬಾಮಾ ಜೊತೆಗೆ ಬಂದಿದ್ದ npr ವರದಿಗಾರ st. xaviers college ನಲ್ಲಿ ನಡೆದ ಅಧ್ಯಕ್ಷರ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ದ ವೇಳೆ ೧೯ ರ ಓರ್ವ ತರುಣಿ ಪಾಕಿನ ಭಯೋತ್ಪಾದನೆ ಬಗ್ಗೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಹೇಳುತ್ತಾ “ಭಾರತಕ್ಕೆ ಪಾಕಿಸ್ತಾನ ಎಂದರೆ ಒಂದು ರೀತಿಯ jealous and rivalry ಎಂದು ಹೇಳಿದ. rivalry ಏನೋ ಸರಿಯೇ. ಆದರೆ jealous ಯಾವುದರ ಬಗ್ಗೆಯೋ ತಿಳಿಯುತ್ತಿಲ್ಲ. ಎಲ್ಲಾ ತೀರ್ಮಾನಗಳಿಗೂ, ನಿರ್ಧಾರಗಳಿಗೂ ಇಸ್ಲಾಮಾಬಾದ್ ಅಮೆರಿಕೆಯ ವಾಷಿಂಗ್ಟನ್ ನಿಂದ dictation ತೆಗೆದು ಕೊಳ್ಳುತ್ತದಲ್ಲಾ, ಪಾಕಿಗಳ ಈ ಬೆನ್ನುಲುಬಿಲ್ಲದ ನಡವಳಿಕೆ ಬಗ್ಗೆ ಇರಬೇಕು ನಮಗೆ ಮತ್ಸರ, jealousy.           

ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕಾರಣಿಗಳಂತೆಯೇ ಭರವಸೆಯನ್ನ ನೀಡಲು ಮರೆಯಲಿಲ್ಲ ಒಬಾಮಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ ಒಬಾಮ ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತ ಜಗಾರೂಕತೆಯಿಂದ ವರ್ತಿಸುವಂತೆ ಸೂಕ್ಷ್ಮವಾಗಿ ಸೂಚಿಸಿದರು. ಆದರೆ ಈ ಆಶ್ವಾಸನೆಯ ಬೆನ್ನಲ್ಲೇ ಬಂದವು ಅಪಸ್ವರಗಳು, ಜರ್ಮನಿ ಮತ್ತು ಜಪಾನ್ ದೇಶಗಳಿಂದ. ಒಬಾಮಾ ನೀಡಿದ್ದು ಆಶ್ವಾಸನೆ ಮಾತ್ರ, ಈ ಆಶ್ವಾಸನೆ ವಿರುದ್ಧವೇ ತಕರಾರು ಬಂದರೆ ಇನ್ನು ವಿಶ್ವಸಂಸ್ಥೆಯಲ್ಲಿ ನಮಗೆ ಯಾವ ರೀತಿಯ ಬೆಂಬಲ ಸಿಕ್ಕೀತು ಎಂದು ಊಹಿಸಲು ನಮಗೆ ರಾಜನೀತಿಯಲ್ಲಿ ಡಾಕ್ಟರೇಟ್ ಪದವಿಯ ಅವಶ್ಯಕತೆಯಿಲ್ಲ.  

ಒಟ್ಟಿನಲ್ಲಿ ಒಬಾಮ ಬಂದರು, ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. ಒಬಾಮ ಎಲ್ಲಿಗೆಹೋದರು, ಏನನ್ನು ತಿಂದರು,  ಹೇಗೆ ಕುಣಿದರು ಇತ್ಯಾದಿ ಇತ್ಯಾದಿ ಪುಂಖಾನುಪುಂಖವಾಗಿ ವರದಿ ಮಾಡಿದವು. ನಮಗೂ ಒಂದು ರೀತಿಯ ಪುಳಕ. ಬಿಳಿಯರ ನಾಡಿನಿಂದ ಒಂದು ಕಾಗೆ ಬಂದಿಳಿದರೂ ನಮ್ಮ ಬದುಕು ಸಾರ್ಥಕವಾಗಿ “ಅತಿಥಿ ದೇವೋ ಭವನನ್ನು ಸಂತುಷ್ಟ ನನ್ನಾಗಿಸಿದ ಭಾವನೆಯಲ್ಲಿ ಧನ್ಯರಾಗಿ ಬಿಡುತ್ತೇವೆ.

ಅಡಗಿ ಕೂತಿದ್ದ ಭಾಷೆ

Ethnologue ಎನ್ನುವ ಭಾಷೆಗಳ ಅಧ್ಯಯನಕ್ಕಾಗೇ ಇರುವ ಪತ್ರಿಕೆ ಪ್ರಕಾರ ಇದುವರೆಗೂ ನಮಗೆ ಗೊತ್ತಿರುವ ವಿಶ್ವದ ಭಾಷೆಗಳು ೬೯೦೯. ಈಗ ಭಾರತದಿಂದಲೇ ಮತ್ತೊಂದು ಭಾಷೆಯ ಪ್ರವೇಶವಾಗಿದೆ ಅರುಣಾಚಲ ಪ್ರದೇಶದಿಂದ. National Geographic’s Enduring Voices ನವರು ನಡೆಸಿದ ಅಧ್ಯಯನದಿಂದ ಈ ರೋಚಕ ಸಂಗತಿ ತಿಳಿದು ಬಂತು. “ಕೋರೋ” ಎಂದು ಕರೆಯಲ್ಪಡುವ ಈ ಭಾಷೆಯನ್ನು ಕೇವಲ ೮೦೦ ರಿಂದ ೧೨೦೦ ಜನ ಮಾತನ್ನಾಡುತ್ತಾರಂತೆ. ಇಂಥದ್ದೇ ಮತ್ತೊಂದು ಅಪರೂಪದ “ಬೊ” ಎನ್ನುವ ಅಂಡಮಾನ್ ದ್ವೀಪದ ಭಾಷೆ ಆ ಭಾಷೆಯನ್ನಾಡುವ  ಕೊನೆಯ ವ್ಯಕ್ತಿ ಕಳೆದ ವರ್ಷ ಸಾಯುವುದರೊಂದಿಗೆ ಅವನೊಂದಿಗೇ ಸ್ವರ್ಗ ಸೇರಿಕೊಂಡಿತು. ಧಾರ್ಮಿಕವಾಗಿ ಮಾತ್ರ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತವೂ ಅದೇ ದಾರಿ ಹಿಡಿಯಬಹುದು ಎನ್ನುವ ಆತಂಕವಿತ್ತು ಮೊದಲು. 

ಕೋರೋ ಭಾಷೆ ಆಡುವ ಯುವಜನರು ಕ್ರಮೇಣ ಹಿಂದಿ ಮತ್ತು ಆಂಗ್ಲ ಭಾಷೆಗಳ ಕಡೆ ಒಲವನ್ನು ತೋರಿಸಲು ತೊಡಗಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಅದೂ ಸಹ  “ಬೊ” ಭಾಷೆಯ ದಾರಿ ಹಿಡಿದರೆ ಅಚ್ಚರಿ ಪಡಬೇಕಿಲ್ಲ. ಮೇಲೆ ಹೇಳಿದ ಭಾಷೆ ಯೊಂದಿಗೆ ಅರುಣಾಚಲ ಪ್ರದೇಶದಲ್ಲಿ ಸುಮಾರು ೧೨೦ ಭಾಷೆಗಳಿವೆಯಂತೆ. “ಕೋರೋ” ಭಾಷೆ “ಅಕಾ” ಎನ್ನುವ ಮತ್ತೊಂದು ಅರುಣಾಚಲದ ಭಾಷೆಯ ರೂಪವೆಂದೇ ಮೊದಲಿಗೆ ಊಹಿಸಲಾಗಿತ್ತು. ಏಕೆಂದರೆ ಕೋರೋ ಮತ್ತು  ಭಾಷೆಯನ್ನಾಡುವ ಜನ ವೇಷ ಭೂಷಣ ಮತ್ತು ಅಡುಗೆ ಮುಂತಾದುವುಗಳಲ್ಲಿ ಒಂದೇ ರೀತಿಯ ಆಚರಣೆಗಳನ್ನು ಹೊಂದಿದ್ದರು ಮತ್ತು ಭಾಷೆಗಳು ಬೇರೆ ಬೇರೆಯದಾದರೂ ಅವರೊಳಗೆ (ಭಾಷಾಂತರ) ವಿವಾಹಗಳು ಏರ್ಪಡುವುದೂ ಉಂಟು. ಪ್ರೇಮಿಸಲು ಭಾಷೆಯ ಅವಶ್ಯಕತೆ ಅಲ್ಲ ಇರೋದು ಎನ್ನುವುದಕ್ಕೆ “ಕೋರೋ” ಮತ್ತು “ಬೊ” ಭಾಷಿಕರೇ ಸಾಕ್ಷಿ ನಿಲ್ಲುವರು, ಅಲ್ಲವೇ?  ಭಾಷೆಗಳು ಎಷ್ಟೊಂದು ಸ್ವಾರಸ್ಯವೆಂದರೆ ದ್ರಾವಿಡ ಭಾಷೆಗಳು ಭಾರತದಲ್ಲಿ ಮಾತ್ರ ಎಂದು ಅರಿತಿದ್ದ ನಮಗೆ ಆಫ್ಘಾನಿಸ್ತಾನದ ಪ್ರಾಂತ್ಯವೊಂದರಲ್ಲಿ ಬ್ರಾಹೂಯಿ ಎನ್ನುವ ಭಾಷೆ ದ್ರಾವಿಡ ಕುಟುಂಬಕ್ಕೆ ಸೇರಿದ್ದು ಎಂದು ತಿಳಿದಾಗ ವಿಶ್ವ ಭಾವನಾತ್ಮಕವಾಗಿ ನಿಜಕ್ಕೂ ಕುಬ್ಜ ಎಂದು ತೋರಿತು.

೬೯೦೯ ಭಾಷೆಗಳಲ್ಲಿ ಸುಮಾರು ಅರ್ಧದಷ್ಟು ಸಂಖ್ಯೆಯ ಭಾಷೆಗಳು ಕೊನೆ ಯುಸಿರೆಳೆಯುತ್ತಿವೆ ಎನ್ನುವ ಆಘಾತಕಾರಿ ಸತ್ಯವನ್ನೂ National Geographic’s Enduring Voices ಸಂಸ್ಥೆ ಹೊರಗೆಡಹಿದೆ. ಕೋರೋ ಭಾಷೆ ಲಿಪಿಯಿಲ್ಲದ ಭಾಷೆ, ಕೊಂಕಣಿ ಮತ್ತು ತುಳು ರೀತಿ.   

ಸ್ವಾರಸ್ಯ(?) ವೆಂದರೆ ಈಶಾನ್ಯ ಭಾರತದ ಅರುಣಾಚಲ ಪ್ರದೇಶಕ್ಕೆ  ಹೋಗಿ ಆ ಹೊಸ ಭಾಷೆಯ ಸೊಗಡನ್ನು ಕೇಳಿ ನೋಡಿ ಆನಂದಿಸೋಣ ಎಂದರೆ ಅಲ್ಲಿಗೆ ಹೋಗಲು “ವಿಶೇಷ ಅನುಮತಿ” permit ಬೇಕು. ನಾವೆಲ್ಲಾ ಟೀಕಿಸಲು, ದೇಶ ವಿರೋಧಿಗಳ ರಾಜ್ಯ ಎಂದು ಹಳಿಯುವ ಕಾಶ್ಮೀರಕ್ಕೆ ಹೋಗಲು ನಮಗೆ ಯಾವುದೇ ಪರವಾನಗಿ ಬೇಡ, ಕಾಶ್ಮೀರಿಗಳಂತೆಯೇ ಭಾರತೀಯರಾದರೆ ಸಾಕು. ಪರವಾನಗಿ ಪಡೆಯಬೇಕಾದ ಮತ್ತೆರಡು ರಾಜ್ಯಗಳೆಂದರೆ “ಮಿಜೋರಾಂ” ಮತ್ತು “ನಾಗಾಲ್ಯಾಂಡ್”.