ಜನರಿಗೆ ಭಯಪಡುವ ಮುಖ್ಯ ಮಂತ್ರಿ

ಇಂದು ಬೆಳಿಗ್ಗೆ ಮಲಯಾಳಿ ಒಬ್ಬಾತ ನಡೆಸುವ ಬುಫಿಯಾ ಎಂದು ಕರೆಯಲ್ಪಡುವ ಚಾದಂಗಡಿಯ ಟೀವಿಯಲ್ಲಿ ಕೇರಳದ ನೂತನ ಮಖ್ಯ ಮಂತ್ರಿಗಳ ಸಂದರ್ಶನವನ್ನು ಕೈರಳಿ ಚಾನಲ್ ನ ಬಾತ್ಮೀದಾರ ನಡೆಸುತ್ತಿದ್ದನ್ನು ವೀಕ್ಷಿಸಿದೆ. ಎರಡನೇ ಬಾರಿಗೆ ಮು. ಮಂತ್ರಿಯಾದ ಊಮ್ಮನ್ ಚಾಂಡಿ ಅನುಭವೀ ರಾಜಕಾರಣಿ.

ಬಾತ್ಮೀದಾರ ಕೇಳಿದ ಪ್ರಶ್ನೆಗಳಿಗೆ ವಿಚಲಿತನಾಗದೆ ನೇರವಾಗಿ ಉತ್ತರ ನೀಡುತ್ತಿದ್ದ ಮು. ಮಂತ್ರಿಗಳು ಕೆಲವೊಂದು ಕ್ಲಿಷ್ಟಕರ ಪ್ರಶ್ನೆಗಳನ್ನು ಎದುರಿಸಿದರು. ಕೇವಲ ಎರಡು ಶಾಸಕರ ಹೆಚ್ಚಳದ ಬಹುಮತ ಹೊಂದಿರುವ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಎಡರು ತೊಡರು ಗಳನ್ನು ಕಾಣದು ಎನ್ನುವುದು ಇವರ ವಿಶ್ವಾಸ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಯಾರಿಗೂ ಭಯ ಪಡುವ ಅವಶ್ಯಕತೆ ಎನಗಿಲ್ಲ ಎಂದಾಗ ಮು. ಮಂತ್ರಿಗಳನ್ನು ಬಾತ್ಮೀದಾರ ಕೇಳಿದ, ಭಯವಿಲ್ಲ ಎಂದಿರಲ್ಲ ಯಾರ ಭಯವೂ ಇಲ್ಲವೇ? ಆಗ ಮು. ಮಂತ್ರಿಗಳು ಹೇಳಿದ್ದು “ನನಗೆ ದೇವರ ಮೇಲೆ ಭಯ ಮತ್ತು ಜನರ ಭಯ ಇದೆ, ಅಷ್ಟೇ”.  

ಮಂತ್ರಿಗಳಿಗೆ ಇರಬೇಕಾದ ಅರ್ಹತೆಗಳ ಕುರಿತು ಕೇಳಲಾಗಿ integrity, common sense ಇದ್ದರೆ ಕೆಲಸ ಸುಗಮ ಎಂದರು. ಒಳ್ಳೆಯ ಮಾತುಗಳೇ. ಆದರೆ ಅವರು ಹೇಳಿದ ಈ ಎರಡು ಗುಣದ್ವಯಗಳು ರಾಜಕಾರಣಿ ಅಥವಾ ಮಂತ್ರಿ ಮಹೊದಯರುಗಳಲ್ಲಿ ಇದ್ದಿದ್ದರೆ ನಮ್ಮ ದೇಶ ಹೀಗೆ ಇರುತ್ತಿತ್ತೇ?    

ಕೊನೆಗೆ ಮುಖ್ಯಮಂತ್ರಿಗಳು ಸಂದರ್ಶನದ ಅವಧಿಯಲ್ಲಿ ದೇವರ ಪ್ರಸ್ತಾವನೆ ಮಾಡಿದ್ದನ್ನು ಮತ್ತೊಮ್ಮೆ ಕೆದಕುತ್ತಾ ಆತ ಕೇಳಿದ ಇಂದು ಬೆಳಿಗ್ಗೆ ದೇವರಲ್ಲಿ ಏನನ್ನು ಬೇಡಿ ಕೊಂಡಿರಿ ಎಂದು. ಅದಕ್ಕೆ ಊಮ್ಮನ್ ಚಾಂಡಿ ನೀಡಿದ ಉತ್ತರ “ಯಾವುದೇ ನಿರ್ದಿಷ್ಟ ಬೇಡಿಕೆ ಇಟ್ಟುಕೊಂಡು ನಾನು ದೇವರಲ್ಲಿ ಕೇಳೋಲ್ಲ, ನಾನು ಮಾಡುವ ಕೆಲಸಗಳು ಸರಿಯಾದ ಮಾರ್ಗದಲ್ಲಿ ಇರಲು ಸಹಕರಿಸು ಎಂದು ಮಾತ್ರ ಕೇಳಿ ಕೊಳ್ಳುತ್ತೇನೆ”.  

ಅತ್ಯಂತ ಸರಳವಾಗಿ ಬದುಕುವ, ತಲೆ ಸಹ ಬಾಚದ, ಇಸ್ತ್ರಿ ಹಾಕಿದ ಬಟ್ಟೆ ಧರಿಸದ, ದೇವರನ್ನು ಭಯಪಡುವ ದೈವ ಭಕ್ತ, ಜನರಿಗೆ ಹೆದರುವ ಪ್ರಜಾಪತಿ ಕೇರಳ ರಾಜ್ಯವನ್ನ ಅಭಿವೃದ್ಧಿ ಪಥದತ್ತ ಮುನ್ನಡೆಸಲಿ ಎಂದು ಹಾರೈಸೋಣ.

ದೈವ ಭಕ್ತಿ

ಒಂದು ಬ್ಲಾಗ್ ಪೋಸ್ಟ್ ನಲ್ಲಿ ಎರಡು ರೀತಿಯ ಧಾರ್ಮಿಕ ಪ್ರವಚನ ಅಥವಾ ಉಪದೇಶಕರ ಬಗ್ಗೆ ಚರ್ಚೆ ಇತ್ತು. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಕ್ರೈಸ್ತ ಉಪದೇಶಕನೊಬ್ಬ ” turn or burn ” ಎಂದು ಬರೆದಿದ್ದ ಭಿತ್ತಿ ಪತ್ರ ಹಿಡಿದು ಜನರನ್ನು ಪಾಪದಿಂದ ವಿಮೋಚಿತರಾಗಲು ಉತ್ತೇಜಿಸುತ್ತಿದ್ದ. ಆತನ ಗೆಳೆಯ ಬೈಬಲ್ ಗ್ರಂಥವನ್ನು ಹಿಡಿದುಕೊಂಡು ಒಬ್ಬರೊಂದಿಗೆ ವಾದ ಮಾಡುತ್ತಿದ್ದ. ನೆರೆದಿದ್ದ ಹಲವು ಜನ ಇವರಿಗೆ ಬೆಂಬಲ ಕೊಡುತ್ತಿದ್ದರು. ಮತ್ತೊಂದು ಕಡೆ ಮತ್ತೊಂದು ಗುಂಪು ಧರ್ಮ ಪ್ರಚಾರ ಮಾಡುತ್ತಿತ್ತು; ಭಕ್ತಿ ಗೀತೆಗಳನ್ನು ಹಾಡುವ ಮೂಲಕ. ಇಲ್ಲಿ ಪ್ರಶ್ನೆ ಏನೆಂದರೆ ಒಂದು ಕಡೆ “turn or burn” ಎಂದರೆ “ಭಕ್ತಿ ಇಡು ಅಥವಾ ನರಕದಲ್ಲಿ ಬೇಯಿ” ಎಂದು; ಈ ರೀತಿ ಜನರಲ್ಲಿ ಭಯ ಹುಟ್ಟಿಸುವ ಪ್ರವಚನ ಫಲಿತಾಂಶವನ್ನು ಕೊಡಬಲ್ಲುದೆ ಎಂದು. ಕೆಲವರ ಪ್ರಕಾರ ಇದು ಸರಿ ಏಕೆಂದರೆ ಜನರ ಗಮನ ಶಿಕ್ಷೆ ಕಡೆ ಹರಿಸದಿದ್ದರೆ ಅವರಿಗೆ ಭಕ್ತಿ ಮೂಡುವುದಿಲ್ಲ ಮತ್ತು ಪಾಪಗಳನ್ನು ಮಾಡಲು ಹೇಸುವುದಿಲ್ಲ ಎಂದು. ನನ್ನ ಪ್ರಕಾರ ದೇವರ ಶಿಕ್ಷೆ ಜೊತೆಗೆ ಅವನ ಕಾರುಣ್ಯವನ್ನೂ ಕೊಂಡಾಡಿ ಜನರನ್ನು ಧಾರ್ಮಿಕತೆ ಕಡೆ ಎಳೆಯಬೇಕು. ಮತ್ತು ಇಂಥ ಸಂದೇಶಗಳನ್ನು ಬೀದಿಯಲ್ಲಿ ಮಾಡುವುದು ಅಷ್ಟೇನೂ ಸಮಂಜಸ ಎನ್ನಿಸುವುದಿಲ್ಲ ಮತ್ತು ಅಂಥ ಪ್ರಯತ್ನಗಳಿಗೆ ಜನರ ಪ್ರೋತ್ಸಾಹವೂ ಸಿಗಲಿಕ್ಕಿಲ್ಲ. ಮೇಲೆ ಹೇಳಿದ ಘಟನೆ ಅಮೆರಿಕೆಯಲ್ಲಿ ನಡೆದದ್ದು.