ಈಗ ಅತ್ಯಾಚಾರ ‘ಕಾಮನ್ ಫೆನಾಮೆನಾ’ ನಮ್ಮ ದೇಶದಲ್ಲಿ

ಈಗ ಅತ್ಯಾಚಾರ ಕಾಮನ್ ಫೆನಾಮೆನಾ ನಮ್ಮ ದೇಶದಲ್ಲಿ. ಟೈಮ್ಸ್ ಆಫ್ ಇಂಡಿಯಾ ದ ಆನ್ ಲೈನ್ ಆವೃತ್ತಿಯ ಮಧ್ಯ ಭಾಗದ ಸುದ್ದಿ ಯಲ್ಲಿ ದಿನವೂ ರಾರಾಜಿಸುವ ಚಟುವಟಿಕೆ ಈ ರೇಪು ಎನ್ನುವ ಅಸಹ್ಯ ಹುಟ್ಟಿಸುವ perversion. ಇದಕ್ಕೆ ಮುಖ್ಯ ಕಾರಣ ಎಂದರೆ ರೇಪಿಗೆ ತಕ್ಕ ಶಿಕ್ಷೆಯ ಕೊರತೆ ಅದರೊಂದಿಗೇ ಈ ನೀಚ ಕೃತ್ಯಕ್ಕೆ ಮಹಿಳೆಯನ್ನು ಹೊಣೆಯಾಗಿಸುವ  ನಾಚಿಕೆಗೆಟ್ಟ ವರ್ತನೆ. ಮಹಿಳೆ ಸರಿಯಾಗಿ ಬಟ್ಟೆ ಉಡಲು ಅಸಮರ್ಥಳಾದರೆ ರೇಪ್ ಬಂದು ಎರಗುತ್ತದೆ ಎನ್ನುವುದು ಬಹಳಷ್ಟು ಜನರ ವಕ್ರ ನ್ಯಾಯ. ವಯಸ್ಕ, ಹದಿಹರೆಯದ ಹೆಣ್ಣಿನ ಉಡುಗೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವುದಾದರೆ ಒಂದೂವರೆ, ಎರಡು, ಮೂರು ವರ್ಷದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಏನು ಸಮಜಾಯಿಷಿ?

ಇಂದು ೧೧ ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಈ ಅಮಾನುಷ ಕೃತ್ಯಗಳು ನಾಗರೀಕ ಸಮಾಜದ ಕಣ್ಣು ತೆರೆಸಲು ವಿಫಲ ವಾಗುತ್ತಿರುವುದು ದಿಗಿಲನ್ನು ಹುಟ್ಟಿಸುತ್ತಿದೆ. ನನ್ನ ಪ್ರಕಾರ ಅತ್ಯಾಚಾರ ಭ್ರಷ್ಟಾಚಾರಕ್ಕಿಂತ ಕೀಳು, ಅಸಹ್ಯ. ಅತ್ಯಾಚಾರದ ವಿರುದ್ಧ ಅಣ್ಣಾ ಹಜಾರೆ, ಕೇಜರಿವಾಲ (ನಾನು ಈತನ ಫ್ಯಾನ್ ಅಲ್ಲ) ನಂಥವರು ಧ್ವನಿ ಎತ್ತುತ್ತಿಲ್ಲ?

ಅತ್ಯಾಚಾರಕ್ಕೆ ಮಹಿಳೆಯ ಉಡುಗೆ ಕಾರಣ ಎಂದು ಬರೀ ಜನ ಸಾಮಾನ್ಯನ ಅಭಿಪ್ರಾಯ ಮಾತ್ರವಲ್ಲ ಮಂತ್ರಿ ಮಹೋದಯರೂ, ಪೊಲೀಸ್ ಅಧಿಕಾರಿಗಳೂ ಈ ಮಾತಿಗೆ ಧ್ವನಿಗೂಡಿಸುತ್ತಾರೆ.  ಈಗ ಹರಿಯಾಣ ರಾಜ್ಯದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಕೊಡುವ ಸಲಹೆ ಏನೆಂದರೆ ಹೆಣ್ಣು ಗಂಡುಗಳ ವಿವಾಹಾರ್ಹ ವಯಸ್ಸನ್ನು ಇಳಿಸಬೇಕು ಎನ್ನುವುದು. ಒಂದು ಕಡೆ ಸರಿಯಾಗಿ ಬಟ್ಟೆ ತೊಡು ಇಲ್ಲಾ ಮಾನ ಕಳೆದು ಕೊಳ್ಳಲು ತಯಾರಾಗು ಎನ್ನುವ ಎಚ್ಚರಿಕೆಗೆ ಮದುವೆ ವಯಸ್ಸನು ಇಳಿತ ಮಾಡಿದರೆ ರೇಪ್ ದರದಲ್ಲಿ ಕಡಿತ ಬರಬಹುದು ಎನ್ನುವ ವಾದಕ್ಕೆ ಜೋಡಿ ಎನ್ನುವಂತೆ ಬರುತ್ತಿದೆ ಮಂತ್ರಿಯ ಸಲಹೆ. ಈ ಮಾತಿನೊಂದಿಗೆ ಈ ಮು. ಮಂತ್ರಿ ಮುಘಲರನ್ನೂ ಎಳೆದು ತರುತ್ತಾನೆ. ಕುಣಿಯಲು ಬಾರದವಳು ನೆಲ ಡೊಂಕು ಎಂದಳಂತೆ, ಆಳನು ಬಾರದವನು ಮುಘಲರನ್ನು, ಪೋರ್ಚುಗೀಸರನ್ನು ಹೊನೆಯಾಗಿಸುತ್ತಾನೆ ತನ್ನ ಹೊಣೆಗೇಡಿತನಕ್ಕೆ.

ಒಟ್ಟಿನಲ್ಲಿ ಸಮಾಜದ ನಿಲುವು ಇಷ್ಟೇ. ಏನೇ ಆಗಲಿ, ಏನೇ ಬರಲಿ, ನಾವು ಮಾತ್ರ ನಮ್ಮ ಗಂಡು ಮಕ್ಕಳಿಗೆ ನೈತಿಕತೆಯ ಪಾಠ ಹೇಳೋಲ್ಲ, ಪರ ಹೆಣ್ಣನ್ನು ಗೌರವದಿಂದ ಕಾಣಲು ಉತ್ತೇ ಜಿಸೋಲ್ಲ ಎನ್ನುವ ಹೊಟ್ಟೆ ತೊಳೆಸುವಂಥ ಮೊಂಡುತನ. ನಮ್ಮ ಸಂಸ್ಕಾರ ಅಂಥದ್ದು, ಇಂಥದ್ದು ಎಂದು vainglorious ಆಗಿ ಕಣ್ಣು ಮುಚ್ಚಿ, ಎದೆಯುಬ್ಬಿಸಿ ನಡೆದರೆ ಸಾಲದು. ಅತ್ಯಾಚಾರದಂಥ ಅವಮಾನಕಾರೀ ಸಾಮಾಜಿಕ ಪಿಡುಗಿಗೆ ಇತಿಶ್ರೀ ಹಾಡಲೇ ಬೇಕು.              

ಅಂಬಾನಿ ಸಂಪತ್ತಿಗೆ ಟಾ ಟಾ ಸವಾಲ್

ಉಪ್ಪಿನಿಂದ ಹಿಡಿದು ಬೆಲೆಬಾಳುವ ಜಾಗ್ವಾರ್ ಕಾರುಗಳ ತನಕ ಉತ್ಪಾದಿಸುವ ಬೃಹತ್ ಕೈಗಾರಿಕೋದ್ಯಮಿ ರತನ್ ಲಾಲ್ ಟಾ ಟಾ (ಕೆಲವರು ತಾ ತಾ ಎಂತಲೂ ಬರೆಯುತ್ತಾರೆ) ಇಂಗ್ಲೆಂಡಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಲಯನ್ಸ್ ಕೈಗಾರಿಕಾ ಸಮುಚ್ಚಯಗಳ ಮಾಲೀಕ ಮುಕೇಶ್ ಅಂಬಾನಿಯ ಶ್ರೀಮಂತಿಕೆ ಬಗ್ಗೆ ಮಾತನಾಡಿ ವಿವಾದಕ್ಕೆ ಒಳಗಾಗಿದ್ದಾರೆ.

ವಿಶ್ವ ನಿಬ್ಬೆರಗಾದ, ಶ್ರೀಮಂತಿಕೆಯ ನಗ್ನ ಪ್ರದರ್ಶನ ನೀಡಿದ ಅಂಬಾನಿ ವಾಸದ ಮನೆ ಭಾರತದಂಥ ಬಡ ದೇಶದಲ್ಲಿ ಭಾರತೀಯನೊಬ್ಬನಿಂದ ಬೇಕಿತ್ತೆ ಎಂದು ಸಾಮಾನ್ಯ ಜನ ಕೇಳಿದರೆ ವಕ್ರ ನೋಟ ಎದುರಿಸಬೇಕಾಗುತ್ತದೆ ಆದರೆ ಅದೇ ಮತೊಬ್ಬ ಆಗರ್ಭ ಶ್ರೀಮಂತ ಟಾ ಟಾ ಹೇಳಿದಾಗ  ಆ ಮಾತಿಗೆ ತೂಕ ಸೇರಿ ದೊಡ್ಡ ಸುದ್ದಿಯಾಯಿತು.

ಅಂಬಾನಿ ಕಟ್ಟಿದ ೧೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ, ೩೯೮,೦೦೦ ಸಾವಿರ ಚದರಡಿಯ, ಏಳು ವರ್ಷಗಳ ಕಾಲ ಸಮಯ ತೆಗೆದು ಕೊಂಡ, ೧೬೦ ಕಾರುಗಳನ್ನು, ಮೂರು ಹೆಲಿಕಾಪ್ಟರ್ ಗಳನ್ನು ಪಾರ್ಕ್ ಮಾಡಬಹುದಾದ  ೨೭ ಮಹಡಿಯ ಕಟ್ಟಡ ದ ಉದ್ಘಾಟನೆ ಗೇ  ವಿಶ್ವದ ವಿವಿಧ  ಕಡೆಗಳಿಂದ ಬರುವ ಅತಿಥಿಗಳು ಮೈಲುಗಟ್ಟಲೆ ಉದ್ದ ಚಾಚಿ ಕೊಂಡ ಕೊಳೆಗೇರಿಗಳನ್ನು ದಾಟಿ ಕೊಂಡು ಬರಬೇಕಂತೆ. ಭಾರತದ ಸುಮಾರು ಎಂಭತ್ತು ಕೋಟಿ ಗೂ ಅಧಿಕ ಜನ ದಿನಕ್ಕೆ ನೂರು ರೂಪಾಯಿಗಿಂತ ಕಡಿಮೆ ಸಂಪಾದನೆ ಮಾಡುವಾಗ ಈ ಆಗರ್ಭ ಶ್ರೀಮಂತ ಇಂಥ ದುಂದು ವೆಚ್ಚ ಮಾಡೋ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸುವವರೂ ಇದ್ದಾರೆ.

ಶ್ರೀಮಂತಿಕೆಯ ಮೇಲಿನ ಉದಾಹರಣೆ ದೇಶೀಯ ದಾದರೆ ಕೆಳಗಿದೆ ನೋಡಿ ವಿದೇಶೀ ಶ್ರೀಮಂತನ ಕಥೆ.

ಅಮೆರಿಕೆಯ ಆಗರ್ಭ ಶ್ರೀಮಂತ ನಿಕೊಲಸ್ ಬರ್ಗ್ರೆವಿನ್ ಎಲ್ಲ ಧನವಂತರ ಹಾಗೆ ಧನಪಿಶಾಚಿ ಅಲ್ಲ. ಈತ ಒಬ್ಬ ಮಹಾ ಸಾತ್ವಿಕ.  ತನ್ನ ಧನದ ಮದದಿಂದ ಓಲಾಡದೇ ಬಡವರಿಗೆ ದಾನ ಮಾಡುವ, ಕಾಳಜಿ ಇರುವ ಶ್ರೀಮಂತ.

ಕಾಂಬೋಡಿಯದಲ್ಲಿ ಕೃಷಿಕರಿಗೆ ಸಹಾಯ ಮತ್ತು ಬಡ ರಾಷ್ಟ್ರಗಳಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣ ಹೀಗೆ ಹತ್ತು ಹಲವು ದಾರಿದ್ರ್ಯ ನಿವಾರಣಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಕೊಲಸ್ ಇತರ ಧನವಂತರಿಗೆ ಮಾದರಿಯಾಗಿದ್ದಾರೆ.

ಷೇರುಮಾರುಕಟ್ಟೆಯಲ್ಲಿ ಅಗಾಧವಾಗಿ ಸಂಪಾದಿಸಿದ ನಿಕೊಲಸ್ ಹಣದೊಂದಿಗೆ ಬರುವ ಎಲ್ಲಾ ಸೌಕರ್ಯಗಳನ್ನೂ ಪಡೆದರು. ಫ್ಲೋರಿಡಾದ ಖಾಸಗಿ ದ್ವೀಪವೊಂದರಲ್ಲಿ ಬಂಗಲೆ, ನ್ಯೂಯಾರ್ಕಿನಲ್ಲಿ ಅತಿ ದುಬಾರಿ ಮನೆ, ಇವೆಲ್ಲವನ್ನೂ ಮಾರಿ ಹೋಟೆಲ್ನಲ್ಲಿ ಬಾಡಿಗೆಗಿದ್ದು,  ತಮ್ಮ ಸಂಪತ್ತನ್ನು ಬಡವರ ಏಳಿಗೆಗಾಗಿ ಇಟ್ಟಿದ್ದಾರೆ ನಿಕೊಲಸ್.

“ಥಳಕು ಬೆಳಕಿನ ಜೀವನ ಮತ್ತು ಜನರಿಗೆ ಪ್ರದರ್ಶಿಸುವ ತೋರಿಕೆಯ ಬದುಕು ಶೂನ್ಯ, ನನ್ನ ಹತ್ತಿರ ಇರುವುದೆಲ್ಲವೂ ಕ್ಷಣಿಕ, ನಾವೀ ಜಗತ್ತಿನಲ್ಲಿರುವುದು ಅಲ್ಪ ಸಮಯ ಮಾತ್ರ. ಶಾಶ್ವತವಾಗಿ ನಿಲ್ಲುವ ನಮ್ಮ ನಡವಳಿಕೆಗಳೇ ನಿಜವಾದ ಮೌಲ್ಯ” ಇವು ನಿಕೊಲಸ್ ಅವರ ನುಡಿಮುತ್ತುಗಳು.

ಪ್ರಚಾರಗಳಿಂದ ಯಾವಾಗಲೂ ದೂರವಿರುವ ಈ ಯುವ ಶ್ರೀಮಂತ ಅನೇಕರಿಗೆ ದೊಡ್ಡ ಒಗಟು. ಕೆಲ ವರ್ಷಗಳ ಹಿಂದೆ ಡಚ್ ಪತ್ರಿಕೆಯೊಂದು ಅವರ ಬಗ್ಗೆ  ಬರೆದಾಗ ಪತ್ರಿಕೆಯ ಎಲ್ಲ ಪ್ರತಿಗಳನು ಖರೀದಿಸಿ ಬಿಸಾಕಿದರು.

ನಮ್ಮಲ್ಲಿನ ಶ್ರೀಮಂತರಾದ ಅಂಬಾನಿಯಂಥವರು, ಮೈಮಾಟ ಪ್ರದರ್ಶಿಸಿ ಹಣಗಳಿಸುವ ಬಾಲಿವುಡ್ನ ನರ್ತಕ ನರ್ತಕಿಯರು ಮತ್ತು ಇತರೆ ಹತ್ತು ಹಲವು ಕೃತ್ರಿಮ ಗಳ ಮೂಲಕ ಸಂಪಾದಿಸಿದ ಹಣವಂತರು ನಿಕೊಲಸ್ ಬರ್ಗ್ರೆವಿನ್ ಅವರಿಂದ ಕಲಿಯಲು ಬಹಳಷ್ಟಿದೆ.

ಈಗಿನ ಕಾಲದ ಹಣವಂತರ ಅಹಂಕಾರ, ಧಿಮಾಕನ್ನು ಕಂಡ ನಮಗೆ ನಿಕೊಲಸ್ ಒಂದು ಕಾರಂಜಿ ಇದ್ದಂತೆ. ಒಂದು ಆಹ್ಲಾದಕರ ತಂಗಾಳಿ.

ಓರ್ವ ಧೀಮಂತ ಪತ್ರಕರ್ತ

ಇಂದು ಬೆಳಿಗ್ಗೆ ನನ್ನ ಮನಸ್ಸಿನ ಮೇಲೆ ವಿವಿಧ ಭಾವನೆಗಳು ಅಲೆಗಳಂತೆ ಅಪ್ಪಳಿಸುವಂತೆ ಮಾಡಿದ ವಿಚಿತ್ರ ವರದಿಯೊಂದು ಕಣ್ಣಿಗೆ ಬಿತ್ತು. ಆಘಾತ, ದಿಗ್ಭ್ರಮೆ, ಕನಿಕರ, ಹೇಸಿಗೆ ಹೀಗೆ ನಾನಾ ಭಾವನೆಗಳನ್ನು ಒಮ್ಮೆಗೇ ಹುಟ್ಟುಹಾಕಿದ ಒಂದು ವರದಿ;   ಒಬ್ಬ ಪತ್ರಕರ್ತ ತನ್ನ ಮನಃಪರಿವರ್ತನೆಯಾದ ಕಾರಣ ಪತ್ರಕರ್ತನ ಕಸುಬಿಗೆ “ಬೈ ಬೈ” ಹೇಳಿದ್ದು. ಇಂಗ್ಲೆಂಡಿನ ಟ್ಯಾಬ್ಲಾಯ್ಡ್ daily star ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ “ರಿಚರ್ಡ್ ಪೆಪ್ಪಿಯಾಟ್” ಪತ್ರಿಕೆಯ ಧಣಿಗೆ ಬರೆದ ಬಹಿರಂಗ ಪತ್ರ ಪತ್ರಿಕಾ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ, ಹಾಗೆಯೇ ತಮ್ಮ ರಹಸ್ಯ ಅಜೆಂಡಾ ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸುದ್ದಿ ಮಾಧ್ಯಮಗಳು ಎಂಥ ನೀಚ ಕೃತ್ಯಕ್ಕೂ ಇಳಿಯಲು ಸಿದ್ಧ ಎನ್ನುವುದನ್ನು ಸ್ಥಿರೀಕರಿಸಿದೆ.      

ರಿಚರ್ಡ್ ಪೆಪ್ಪಿ ಯಾಟ್ ರಾಜೀನಾಮೆ ನೀಡಲು ಕಾರಣವಾದ ವರದಿಗಳನ್ನ ನೋಡಿ.

ಇಂಗ್ಲಿಷ್ ಡಿಫೆನ್ಸ್ ಲೀಗ್ (EDL) ಎನ್ನುವ ಸಂಘಟನೆ ಇಂಗ್ಲೆಂಡಿಗೆ ವಲಸೆ ಬರುವವರ ವಿರುದ್ಧ ಹೋರಾಡುತ್ತದೆ. ಬಿಳಿಯರ ಹಕ್ಕುಗಳು ಮಾಯವಾಗುತ್ತಿವೆ ಎಂದು ಪುಕಾರು ಹಬ್ಬಿಸುತ್ತದೆ. ಇದೊಂದು ಮುಸ್ಲಿಂ ವಿರೋಧಿ, ಬಲಪಂಥೀಯ ಸಂಘಟನೆ. ಈ ಸಂಘಟನೆಗೆ ರಾಜಕೀಯ ಪಸ್ಖವಾಗುವ ಇರಾದೆ ಇಲ್ಲ. daily star ನ ಪತ್ರಕರ್ತ edl ನಾಯಕನೊಬ್ಬನ ಸಂದರ್ಶನ ದಲ್ಲಿ ರಾಜಕೀಯ ಸೇರುವ ಬಗ್ಗೆ ಕೇಳಿದಾಗ ನಾಯಕ ಅಂಥ ಉದ್ದೇಶ ಸದ್ಯಕ್ಕಿಲ್ಲ ಎನ್ನುತ್ತಾನೆ. ಆದರೆ ಪತ್ರಿಕೆ ವರದಿ ಮಾಡಿದ್ದು edl ರಾಜಕೀಯ ಸೇರಲಿದೆ ಎಂದು. ಈ ಸುದ್ದಿ ಮುಖಪುಟದಲ್ಲಿ ರಾರಾಜಿಸಿದಾಗ ಭಯಗ್ರಸ್ಥನಾದ ಪತ್ರಿಕೆ ಮಾರುವ ಮುಸ್ಲಿಂ ವ್ಯಕ್ತಿಯ ಮುಖದ ಮೇಲಿನ ದುಗುಡ ನೋಡಿ ರಿಚರ್ಡ್ ಕೆಲಸಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸುತ್ತಾನೆ.

daily star ಪತ್ರಿಕೆ ತನ್ನ ವರದಿಗಾರಿಗೆ ಕೊಡುವ brief ಏನೆಂದರೆ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುವ (islamophobia) ಲೇಖನಗಳನ್ನು ಸೃಷ್ಟಿಸಿ ಕೊಡಬೇಕು. ಈ ಕೆಲಸಕ್ಕೆ ಪತ್ರಕರ್ತರ ಮನಃಸ್ಸಾಕ್ಷಿ ಒಪ್ಪದೇ ಇದ್ದ ಪಕ್ಷದಲ್ಲಿ ನೀನಲ್ಲದಿದ್ದರೆ ಮತ್ತೊಬ್ಬ ಎನ್ನುವ ಧೋರಣೆ ಆ ಪತ್ರಿಕೆಯದು. ಕೆಲಸದಿಂದ ವಜಾ ಆಗುವ ಭಯ ದಿಂದ ಪತ್ರಕರ್ತರು ಪತ್ರಿಕೆಯ ವಿರುದ್ಧ ಹೋಗಲು ತಯಾರಿಲ್ಲ. 

ಮುಸ್ಲಿಮರಿಗಾಗಿ ಮಾತ್ರ ಇರುವ ಶೌಚಗಳನ್ನು ನಮ್ಮ ತೆರಿಗೆ ಹಣದ ಖರ್ಚಿನಲ್ಲಿ ಕಟ್ಟಲಾಗುತ್ತಿದೆ ಎನ್ನುವ ಸುಳ್ಳು ವರದಿಯನ್ನು ತಾನು ಸೃಷ್ಟಿಸಿದೆ ಎನ್ನುವ ಈತನ ಮಾತನ್ನು ಕೇಳುವಾಗ ನಮ್ಮ ವರದಿಗಾರರು ಗಿಳಿ ಪಾಠದಂತೆ ಯಾವಾಗಲೂ ಪುನರಾವರ್ತಿಸುವ ಮುಸ್ಲಿಮರಿಗೆ ಮೀಸಲಾತಿ ಎನ್ನುವ ವರದಿಗಳು ಕಣ್ಣ ಮುಂದೆ ಬರುತ್ತವೆ. ಮುಸ್ಲಿಮರಿಗೆ ಮಾತ್ರವಲ್ಲ ಮೀಸಲಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು, ಹಿಂದುಳಿದ ಜಾತಿ ಮುಂತಾದ  ಹಲವು ಸಾಮಾಜಿಕ ಗುಂಪುಗಳಿಗೂ ಇವೆ ರಿಯಾಯಿತಿ ಮತ್ತು ಮೀಸಲಾತಿ ಎನ್ನವುದು ಇವರಿಗೆ ತಿಳಿದಿದ್ದರೂ ತಿಳಿಯುವುದಿಲ್ಲ.

ಪ್ರತೀ ನಿತ್ಯವೂ ಇಸ್ಲಾಂ ಧರ್ಮೀಯರನ್ನು ಗುರಿಯಾಗಿಸಿ “ ಅವರು, ಮತ್ತ ನಾವು (us and them) “ ಎನ್ನುವ ಭಾವನೆ ಹುಟ್ಟಿಸುವ ಲೇಖನ ಬರೆಯಲೇಬೇಕು. ಒಪ್ಪದೇ ಇದ್ದರೆ ನನ್ನ ಕೆಲಸ ಹೋಗಬಹುದೋ ಎಂದು ಮಾಡುತ್ತಿದ್ದೆ. ನನ್ನ ಫೋನಿನ speed dial ನಲ್ಲಿ ಒಬ್ಬ ಮೌಲ್ವಿಯ ನಂಬರ್ ಇಟ್ಟುಕೊಂಡಿದ್ದೇನೆ. ಬೆಳಗಾದ ಕೂಡಲೇ ಈ ತಲೆ ಕೆಟ್ಟ ಮೌಲ್ವಿ ಗೆ ಫೋನಾಯಿಸಿ ಸಲಿಂಗ ಕಾಮಿಗಳಿಗೆ ಮತ್ತು ಕುಡುಕರಿಗೆ ಕಲ್ಲು ಹೊಡೆಯುವ ಶಿಕ್ಷೆ ಇದೆಯೇ ಎಂದು ಕೆಣಕಿದ ನಂತರ ಆ ಮೌಲ್ವಿ ಕೆರಳಿ ಫತ್ವ ನೀಡುವ ರೀತಿಯಲ್ಲಿ ಹೇಳುವುದನ್ನು ಭಕ್ತಿಯಿಂದ ವರದಿ ಮಾಡುತ್ತಿದ್ದೆ. 

ಓರ್ವ ನಟಿ ತಾನು ಹೊರಹೋಗುವಾಗ ಮಾಡಿಕೊಳ್ಳುವ ಸಿದ್ಧತೆ ಗೆ ತೆಗೆದುಕೊಳ್ಳುವ ಸಮಯವನ್ನೂ ಕಡಿಮೆ ಮಾಡಲು “ಸಂಮೋಹನ” (hypno therapy) ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು  ಹುಟ್ಟಿಸಿ ಕೊಂಡು ಬರೆದಿದ್ದ ಈ ಪತ್ರಕರ್ತ ಹೇಳುತ್ತಾನೆ, “ಈ ಸಂಮೋಹನ ದ ಬಗ್ಗೆ ನನಗೆ ಹೇಗೆ ತಿಳಿಯಿತು? ಸಂಜೆ ಆರರ ಸಮಯ ಖಾಲಿ ಹಾಳೆ ನೋಡುತ್ತಾ ಮಗ್ನನಾಗಿದ್ದಾಗ ನನ್ನ ಕುಂಡೆ ಯೊಳಗಿಂದ ಎಳೆದು ತಂದೆ ಈ ಕಲ್ಪನೆಯನ್ನು ಎಂದು ಹೇಳುತ್ತಾನೆ. ಆದರೆ ಈ ಕಲ್ಪನಾ ಬರಹ ನನಗೆ ೧೫೦.೦೦ ಪೌಂಡ್ ಗಳ ಧನವನ್ನೂ ಒದಗಿಸಿತು ಎಂದು ಹೇಳುತ್ತಾನೆ.

ರಿಚರ್ಡ್ ಹೇಳುತ್ತಾನೆ, ನನಗೆ ಗೊತ್ತು ಡೈಲಿ ಮೇಲ್ ಪತ್ರಿಕೆ (ನೈತಿಕತೆ ಇಲ್ಲದ) ಕುರೂಪಿಗಳ ಹಿಂಡಿನಲ್ಲಿ ಎದ್ದು ಕಾಣುವ ಮತ್ತೊಂದು ಕುರೂಪಿ ಪತ್ರಿಕೆ ಎಂದು.

ಇಂಥ ಸುಳ್ಳು ವರದಿಗಳನ್ನು ಸೃಷ್ಟಿಸುವವನು ಬರೀ ಒಬ್ಬ ವ್ಯಕ್ತಿಯಾಗಿದ್ದರೆ ಅವನನ್ನು schizophrenic (ಭ್ರಮಾ ಲೋಕದಲ್ಲಿರುವವ) ಎಂದು ಆಸ್ಪತ್ರೆಗೆ ಅಟ್ಟಬಹುದಿತ್ತು, ಆದರೆ ಈ ಕೆಲಸವನ್ನ ಪತ್ರಿಕೆ ಮಾಡಿದಾಗ ಅದೆಲ್ಲ ಓಕೆ ಎನಿಸಿಕೊಳ್ಳುತ್ತದೆ ಎಂದು ರಿಚರ್ಡ್ ನ ಅಭಿಪ್ರಾಯ. ಪತ್ರಕರ್ತ ರಿಚರ್ಡ್ ನಿಗೆ ಅವನ ಜೀವನದ ಯಾವುದಾದರೂ ಒಂದು ಸನ್ನಿವೇಶದಲ್ಲಿ ಸಿಕ್ಕಿರಬಹುದಾದ ನೈತಿಕ ಶಿಕ್ಷಣ ತನ್ನ ಲೇಖನಿಯನ್ನು ಮಾರಿಕೊಳ್ಳುವ ಕಸುಬಿಗೆ ಎಡಗಾಲಿನಲ್ಲಿ ಒದ್ದು ಹೊರಬರಲು ಪ್ರೇರಣೆ ನೀಡಿತು.  ತಡವಾಗಿಯಾದರೂ ಬಂದ ಈ ಉನ್ನತ ಮಟ್ಟದ ನೈತಿಕತೆ ಬೇರೆ ಪತ್ರಕರ್ತರುಗಳಲ್ಲೂ ಬರಬಹುದೇ? ಆ ಸುದಿನಕ್ಕಾಗಿ ನಾವು ಕಾಯಬಹುದೇ?     

ನನಗೂ ಆಗಾಗ ಅನ್ನಿಸಿದ್ದಿದೆ. ಈ ರೀತಿ ಒಂದು ಧರ್ಮೀಯರ ಮೇಲೆ ಕಪೋಲ ಕಲ್ಪಿತ ವರದಿಗಳನ್ನು, ಊಹಾಪೋಹಗಳನ್ನು ಸೃಷ್ಟಿಸುತ್ತಾ ಸಮಾಜದಲ್ಲಿ ಗಲಭೆ, ಕ್ಷೋಭೆಗೆ ಕಾರಣವಾಗುವ ಲೇಖನಿ ಹಿಡಿದ ಈ so called journalist ಗಳಿಗೆ ಭಗವಂತನು ಆತ್ಮವೊಂದನ್ನು ಫಿಟ್ ಮಾಡಿದ್ದಿದ್ದರೆ ಅವರು ತಮ್ಮ ಕಸುಬಿಗೆ ಎಂದೋ ವಿದಾಯ ಹೇಳುತ್ತಿದ್ದರು ಎಂದು. ತಮ್ಮ ವರದಿ ಕಾರಣ ಜನರ ಸಂಶಯ ಗುಮಾನಿಗೆ ಒಳಪಟ್ಟು, ದಬ್ಬಾಳಿಕೆಗೆ ಶೋಷಣೆಗೆ ಗುರಿಯಾಗುವ ಅಮಾಯಕನನ್ನು ನೋಡಿದಾಗ ಅವರಿಗೆ ಏನೂ ಅನ್ನಿಸುವುದಿಲ್ಲವೇ? ಜೇಬು ಭರ್ತಿಯಾಗುತ್ತಿದ್ದಂತೆ ಬುದ್ಧಿ ದಿವಾಳಿತನದ ದಾರಿ ಹಿಡಿದ್ದು ಬಹುಶಃ ಅವರುಗಳಿಗೆ ಕಾಣುವುದಿಲ್ಲವೇನೋ.  

ಪತ್ರಿಕೆಗಳಲ್ಲ್ಲಿ ಯಾವುದಾದರೂ ಉತ್ಪನ್ನಗಳ ಬಗ್ಗೆ ಲೇಖನ ಬಂದರೂ ಆ ಲೇಖನದ ಹಿಂದೆ ಹಣದ ವಾಸನೆ ಬಡಿದೇ ತೀರುತ್ತದೆ. ವಿಮರ್ಶೆ ಮಾಡುವ ನೆಪದಲ್ಲಿ ಉತ್ಪಾದನೆಗಳ ಬಿಕರಿಗೆ ಕಂಪೆನಿಗಳಿಗೆ ಸಹಾಯ ಒದಗಿಸುವ ಪತ್ರಕರ್ತರಿದ್ದಾರೆಂದು ಕೇಳಿದ್ದೇನೆ. ವೈಯಕ್ತಿಕ ನಿಂದನೆ ಮತ್ತು ತೇಜೋವಧೆಯಂಥ  ಕೆಲಸವಂತೂ ಎಷ್ಟು ಸೊಗಸಾಗಿ ಮಾಡುತ್ತವೆ ಪತ್ರಿಕೆಗಳು ಎಂದು ಬೇರೆ ಹೇಳಬೇಕಿಲ್ಲ.  

ದಿನ ನಿತ್ಯದ ಆಗುಹೋಗುಗಳ ಬಗ್ಗೆ ನಿಗಾ ಇಟ್ಟುಕೊಂಡು ಕುತೂಹಲದಿಂದ ನಿರಂತರವಾಗಿ ಸುದ್ದಿಗಳೊಂದಿಗೆ ನಂಟು ಬಯಸುವ ಓದುಗ ಕೇವಲ ಸುದ್ದಿ ಮಾತ್ರವನ್ನಲ್ಲ ಅದರೊಂದಿಗೆ ಬರುವ ಹಲವು ವಿಚಾರಗಳನ್ನೂ ಅರಿಯುತ್ತಾ ಸಾಗುತ್ತಾನೆ. ಹಾಗಾಗಿ ಮಾಧ್ಯಮ ಎನ್ನವುದು ಒಂದು ರೀತಿಯ ಮುಕ್ತ ವಿಶ್ವ ವಿದ್ಯಾಲಯ. ಆದರೆ ಈ ಪವಿತ್ರ ಕಸುಬನ್ನು ಲಾಭ ಗಳಿಸುವ ಉದ್ದಿಮೆಯಾಗಿ ಮತ್ತು ತಮ್ಮ ರಾಜಕೀಯ ಚಿಂತನೆಗಳನ್ನು ಪ್ರಚುರಪಡಿಸಲು propaganda machinery ಆಗಿ ಉಪಯೋಗಿಸಿಕೊಂಡಾಗ ಆಗುವ ಅನಾಹುತವೇ ನಾವು ಇಂದು ಕಾಣುತ್ತಿರುವ ವೈಮನಸ್ಸು, ಸಂಶಯ ಮತ್ತು ಇವೆರೆಡರ ಕಾರಣ ನಡೆಯುವ ಗಲಭೆ, ಹಿಂಸೆ.

ನಾವು ಹಣ ಕೊಟ್ಟು ಕೊಳ್ಳುವ ವಸ್ತುಗಳ ಬಗ್ಗೆ ನಿಗಾ ಇಡುತ್ತೇವೆ. ವಸ್ತುವಿನ ಗುಣಮಟ್ಟ, ತಯಾರಾದ ತಾರೀಖು, ಕಂಪೆನಿ, ಅದರಲ್ಲಿರಬಹುದಾದ ingredients, ತಯಾರಿಸಿದ ಕಂಪೆನಿಯು ISO, HACCP ಮುಂತಾದ certification  ಗಳನ್ನು ಹೊಂದಿದೆಯೇ ಇತ್ಯಾದಿ. ಆದರೆ ನಾವು ಕೊಳ್ಳುವ ಪತ್ರಿಕೆಗಳ ಗುಣಮಟ್ಟದ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ?ಅದರಲ್ಲಿ ಬರುವ ಕಂಟೆಂಟ್ ಗಳ ಬಗ್ಗೆಯಾಗಲೀ, ಅದರಲ್ಲಿ ಬರುವ ವಿಷಯಗಳು, ಮತ್ತು ಆ ವಿಷಯಗಳ ಹಿಂದಿನ ಕರ್ತೃಗಳ ನಾವೇಕೆ ಅಸಡ್ಡೆ ತೋರಿಸುತ್ತೇವೆ? ಬೇರೆಲ್ಲಾ PRODUCT ಗಳಿಗೆ ಇರುವಂತೆ  ಪತ್ರಿಕೆಗಳಿಗೂ ಯಾಕೆ ಒಂದು CERTIFICATION ಇರಕೂಡದು? ಪ್ರಾಥಮಿಕ ಶಾಲೆಯ ಬಾಗಿಲನ್ನೂ ಕಾಣದವನೂ ಪತ್ರಕರ್ತನಾಗಿ ತನಗೆ ತೋಚಿದ ರೀತಿಯಲ್ಲಿ ವರದಿಗಳನ್ನು, ಜನರಿಗೆ ಬಡಿಸಿದರೆ ಅದರ ಪರಿಣಾಮ ಸಮಾಜದ ಮೇಲೆ ಹೇಗಾಗಬಹುದು?  journalistic standard, ethics ಮತ್ತು ಪತ್ರಿಕೋದ್ಯಮದ ಗುಣಶ್ರೇಷ್ಠತೆ (merit) ಇವುಗಳ ಅವಶ್ಯಕತೆ ಇಲ್ಲವೇ ಪ್ರಜಾಪ್ರಭುತ್ವದ ನಾಲ್ಕನೇ ವ್ಯವಸ್ಥೆ (fourth estate) ಎಂದು ಕರೆಯಲ್ಪಡುವ ಪತ್ರಿಕೋದ್ಯಮಕ್ಕೆ? ಅಥವಾ ಹಣ ಮತ್ತು ಅಜೆಂಡಾದ ಹಿಂದೆ ಬಿದ್ದು “ಫಿಫ್ತ್ ಕಾಲಂ” ಆಗಿ ಕುಸಿದು ಬಿಟ್ಟಿತೆ ಪತ್ರಿಕೋದ್ಯಮ?

ಕೊನೆಯದಾಗಿ ತನ್ನ ಧಣಿಗೆ ರಿಚರ್ಡ್ ಹೀಗೆ ಹೇಳುತ್ತಾನೆ. “ನಿನ್ನ ಪತ್ರಿಕೆಯವರು ಹೆಣೆಯುವ ಪದಗಳು, ವಿಷಯಗಳು ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎನ್ನುವ ಜ್ಞಾನ ನಿನಗಿಲ್ಲದಿದ್ದರೆ ಒಂದು ಕಾಮ ಪ್ರಚೋದಕ (porn) ಪತ್ರಿಕೆಯನ್ನು ಶುರು ಮಾಡು. ಅಥವಾ ಅವರು ಬರೆದ ಲೇಖನಗಳು ಪರಿಣಾಮ ಬೀರುತ್ತವೆ ಎಂದು ನಿನಗನ್ನಿಸಿಯೂ ಸಹ ನಿನ್ನ ಸಂಪಾದಕರು ಅನುಮತಿಸುವ ಪ್ರಚೋದಕ ಲೇಖನಗಳನ್ನು ತಡೆಯುವ ಮನಸ್ಸು ನಿನಗೆ ಇಲ್ಲದಿದ್ದರೆ ಬ್ರಿಟನ್ ನಂಥ ಒಂದು ಮಹೋನ್ನತ ದೇಶಕ್ಕೆ ನೀನೊಬ್ಬ ಕಂಟಕಪ್ರಾಯ ಎಂದು ತಿಳಿದುಕೋ”.

ಹತಾಶೆಯ ಮತ್ತು ಕ್ರೋಧ ತುಂಬಿದ ಮೇಲಿನ ಮಾತುಗಳು daily star ನ ಧಣಿಗೆ ಮಾತ್ರ ಅನ್ವಯವಾಗದೇ ಲೇಖನಿಯ ಪಾವಿತ್ರ್ಯದ ಅರಿವಿಲ್ಲದ ಎಲ್ಲರಿಗೂ ಅನ್ವಯವಾಗುತ್ತದೆ.         

fifth column: A fifth column is a group of people who clandestinely undermine a larger group such as a nation from within.

ಸಂಪೂರ್ಣ ಲೇಖನಕ್ಕೆ ಈ ಕೊಂಡಿ ಕ್ಲಿಕ್ಕಿಸಿ.

http://www.guardian.co.uk/media/2011/mar/04/daily-star-reporter-letter-full

ಬುರ್ಖಾ ನಿಷೇಧ

ಯೂರೋಪಿನಲ್ಲಿ ಈಗ ಬುರ್ಖಾ ನಿಷೇಧಿಸುವ ಕುರಿತ ಚರ್ಚೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ಸಂಸತ್ತು ಬುರ್ಖಾವನ್ನು ನಿಷೇಧಿಸಲಿದೆ. ಎಂಥ ವೈಚಿತ್ರ್ಯ ಇದು. ಒಂದು ಕಡೆ ಮಹಿಳೆಯ ಜನ್ಮಸಿದ್ಧ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು, ಚಟುವಟಿಕೆಗಳು ಜರಗುತ್ತಿದ್ದರೆ ಮತ್ತೊಂದು ಕಡೆ ತಾನು ಮಾನವಾಗಿ ತನ್ನ ಶರೀರವನ್ನು ಮುಚ್ಚಿಕೊಂಡು ಓಡಾಡುತ್ತೇನೆ ಎಂದು ಹೇಳುವ ಮಹಿಳೆಯರ ಮೇಲೆ ಸಮಾಜದ ದಿಗ್ಬಂಧನ, ಕಾನೂನು. ಫ್ರಾನ್ಸ್ ನ ಅಧ್ಯಕ್ಷ ಮಹಾಶಯನ ಲೈಂಗಿಕ ಚಟುವಟಿಕೆ ತಿಳಿದವರಿಗೆ ಅಲ್ಲಿನ ಸಂಸತ್ತಿನಲ್ಲಿ ಅವನಂಥ ಎಷ್ಟು ಸದಸ್ಯರು ತಮ್ಮ ಅಧ್ಯಕ್ಷನ ರೀತಿ ಹೆಣ್ಣನ್ನು ತಮ್ಮ ತೃಷೆಗಾಗಿ ಉಪಯೋಗಿಸಿಕೊಳ್ಳುತ್ತಿರಬಹುದು ಎಂದು ಯೋಚಿಸಿದರೆ ತಪ್ಪಿಲ್ಲ. ಇದೇ ನಡತೆಗೆಟ್ಟ ಗಂಡಸರು ಹೆಣ್ಣು ವಿವಸ್ತ್ರಳಾಗೋದನ್ನು ಬಯಸುತ್ತಾ ಮಾನವಾಗಿ ನಡೆಯಲಿಚ್ಚಿಸುವ ಮಹಿಳೆಯರ ಮೇಲೆ ಕಾನೂನಿನ ತೂಗುಗತ್ತಿಯನ್ನು ಇಳಿ ಬಿಡುತ್ತಾರೆ. ಇವರಿಗೆ ಮಹಿಳೆ ಮೈತುಂಬಾ ಹೊದ್ದು ಕೊಳ್ಳುವುದು ಗುಲಾಮಗಿರಿಯ ಸಂಕೇತ. ಶೋಷಣೆಯ ಹೆಗ್ಗುರುತು. ಹೆಣ್ಣು ಕನಿಷ್ಠ ಉಡುಗೆ ತೊಡುವುದು ultimate civilization.     

ಬೆತ್ತಲೆ, ಕನಿಷ್ಠ ಉಡುಗೆ ಇಷ್ಟ ಪಡುವ ವಿಶ್ವ. ದೊಡ್ಡ ಕೋಲಾಹಲವನ್ನೇ ಸೃಷ್ಟಿಸುತ್ತಿದೆ ಈ ಸುಮಾರು ಐದು ಮೀಟರು ಬಟ್ಟೆ. ಮೂರೂ ಬಿಟ್ಟು, ಕನಿಷ್ಠ ಉಡುಗೆ ತೊಟ್ಟು ತಮ್ಮ ಶರೀರ ದಾರಿಹೋಕರ ಕಣ್ಣುಗಳಿಗೆ ಎಂದು ಬಿಂಕದಿಂದ ನಡೆಯುವ ಉದಾರವಾದಿ ಮಹಿಳೆ ಮತ್ತು ಇಂಥ ಉಡುಗೆಗಳಲ್ಲಿ ಪರಸ್ತ್ರೀಯರನ್ನು ನೋಡಿ ನಾಲಗೆ ಚಪ್ಪರಿಸಿ ಸವಿಯುವ  ಪುರುಷರಿಗೆ ಈ ಬುರ್ಖಾ ಎನ್ನುವ ವಸ್ತ್ರ ಸಹ್ಯವಾದರೂ ಹೇಗಾದೀತು? ಸೌಂದರ್ಯ ಸ್ಪರ್ದೆಯ ಹೆಸರಿನಲ್ಲಿ ಹೆಣ್ಣನ್ನು ನಾನಾ ಬಗೆಯ  ಉಡುಗೆಗಳಲ್ಲಿ ಅತ್ತಿಂದಿತ್ತ ಓಡಾಡಿಸಿ ಕ್ಯಾಮೆರಾ ಕಣ್ಣುಗಳಿಂದ ಅವಳ ಉಬ್ಬು ತಗ್ಗುಗಳನ್ನು ವಿವಿಧ ಕೊನಗಳಲ್ಲಿ ಸೆರೆಹಿಡಿದು, ಅವಳ ಅಂಗ ಸೌಷ್ಟವದ ಅಳತೆ ತೆಗೆದು ತಾವು ಕಲ್ಪಿಸಿಕೊಂಡ ಮಾನ ದಂಡಕ್ಕೆ ಅವಳ ಅಳತೆಯಿದ್ದರೆ ಅವಳನ್ನು ವಿಶ್ವ ಸುಂದರಿ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ದ್ಯಾಟ್, ಮಿಸ್ ದಿಸ್ ಎಂದು ಪ್ರಶಸ್ತಿ ಕೊಟ್ಟು ನಗ್ನತೆಯನ್ನು, ಬಹಿರಂಗ ಸೌಂದರ್ಯವನ್ನು ಸನ್ಮಾನಿಸುವ, ಆದರಿಸುವ ಸಮಾಜಕ್ಕೆ ಖಂಡಿತವಾಗಿಯೂ ಪಥ್ಯವಲ್ಲ ಬುರ್ಖಾ. ಈ ರೀತಿಯ ಅಳತೆಗೆ ನಿಲುಕದ ಬಹುಪಾಲು ಮಹಿಳೆಯರು  ಕೀಳರಿಮೆಯಿಂದ ಬಳಲುತ್ತಿದ್ದರೆ ಅದೊಂದು ಸಮಸ್ಯೆ ಅಲ್ಲ ಇವರಿಗೆ. size and beauty obssessed ಸಮೂಹಕ್ಕೆ.

ಬುರ್ಖಾ ನಿಷೇಧಿಸುವಲ್ಲಿ  ಫ್ರಾನ್ಸ್ ಕಾನೂನನನ್ನು ಜಾರಿ ಗೊಳಿಸಿದಂತೆ ಇಂಗ್ಲೆಂಡ್ ಸಹಾ ಬುರ್ಖಾ ನಿಷೇಧ ಕಾನೂನನ್ನು ತರಬೇಕೆಂದು ಒತ್ತಾಯಿಸುತ್ತಿರುವ ಜನರು ಹೆಣ್ಣನ್ನು ಸೌಂದರ್ಯ  ಪ್ರಸಾಧನ ಉತ್ಪಾದಿಸುವವರ, ಕಾಮ ಪಿಪಾಸುಗಳ ಆಟಿಕೆಯಾಗಿ ಬಳಸಿಕೊಳ್ಳುತ್ತಾ ತಮ್ಮನ್ನು ತಾವು ನಾಗರೀಕರು ಎಂದು ಬೆನ್ನು ತಟ್ಟಿ ಕೊಳ್ಳುವವರ ದಾರ್ಷ್ಟ್ಯತನವನ್ನು ಮೆಚ್ಚಲೇ ಬೇಕು. ಬುರ್ಖಾ ಗುಲಾಮಗಿರಿಯ ಸಂಕೇತ, ಪುರುಷರ ಒತ್ತಾಯಕ್ಕೆ ಮಣಿದು ಮಹಿಳೆಯರು ಧರಿಸುತ್ತಾರೆ ಎಂದು ವಾದಿಸುವ ಸಮೂಹಕ್ಕೆ ಈ ಸತ್ಯದ ಅರಿವಾದದ್ದು ಯಾವಾಗಲೋ ಏನೋ? ಅವರಿಗೆ ಹೇಗೆ ಗೊತ್ತು ಇದು ಪುರುಷ ಹೇರಿದ ಕಟ್ಟಳೆ ಎಂದು? ಸ್ವಂತ ಇಷ್ಟದಿಂದ ಹಿಜಾಬ್ ಧರಿಸುವ ಮಹಿಳೆಯರನ್ನು ನಾನು ನೋಡಿದ್ದೇನೆ. ತನ್ನ ತಾಯಿ ಧರಿಸುವ ಹಿಜಾಬನ್ನು ನೋಡಿ ಪುಟ್ಟ ಮಗುವೂ ತಾಯಿಯನ್ನು ಅನುಕರಿಸಲು ನೋಡುತ್ತದೆ. ಹೊರಗೆ ಮಹಿಳೆಯರು ತಮಗಿಷ್ಟದ, ನವೀನ ಶೈಲಿಯ ಬಟ್ಟೆ ಧರಿಸಿ ಹೋಗುವುದನ್ನು ಕಂಡರೂ ಆ ಪುಟ್ಟ ಮಗುವಿಗೆ ತನ್ನ ತಾಯಿ ಧರಿಸುವ ಕಪ್ಪು ಬಣ್ಣದ ಬುರ್ಖಾ ಕರಾಳವಾಗಿ ಕಾಣೋದಿಲ್ಲ. ಇಲ್ಲಿ ಆ ಮುಗ್ಧ ಮಗು ಕಾಣೋದು ತನ್ನ ತಾಯಿಯ ನಾರ್ಮಲ್ ಉಡುಗೆ ಮಾತ್ರ. ಬುರ್ಖಾ ಪದ್ಧತಿ ಇಸ್ಲಾಮಿನ ನಿಯಮವೋ, ಕಟ್ಟಳೆಯೋ ಅಲ್ಲ. ಪವಿತ್ರ ಕುರಾನಿನಲ್ಲಿ ದೇವರು ನಿರ್ದೇಶಿಸಿದ್ದು ಹೆಣ್ಣು ಮತ್ತು ಗಂಡು ಮೈ ತುಂಬಾ ಉಡಲು. ಅಂಗ ಸೌಷ್ಟವ ಪ್ರದರ್ಶಿಸದಂತೆ ತಾಕೀತು. ಹೆಣ್ಣು ಗಂಡು ಇಬ್ಬರೂ ತಮ್ಮ ದೃಷ್ಟಿಗಳನ್ನು ಅನಾವಶ್ಯವಾಗಿ ಬೇಕೆಂದಲ್ಲಿ ಹರಿಬಿಡದೆ ನಡೆಯಲು ಅಪೇಕ್ಷೆ, ನೆಲ ನೋಡಿ ವಿನೀತರಾಗಿ ನಡೆಯಲು ಸೂಚನೆ. ಇವು ಮಾತ್ರ ಇರುವುದು ಕುರಾನಿನಲ್ಲಿ. ಬಟ್ಟೆ ಹೀಗೆ ಇರಬೇಕು, ಇಂಥ ಬಣ್ಣದ್ದೇ ಆಗಿರಬೇಕು ಎಂದು ಎಲ್ಲೂ ಹೇಳಿಲ್ಲ. ಹಾಗಿದ್ದರೆ ಬುರ್ಖಾ ಸಾರ್ವತ್ರಿಕವಾಗಿರುತ್ತಿತ್ತು. ವಿಶ್ವದ ಬಹುಪಾಲು ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ದೂರದ ದೇಶಗಳ ಮಾತೇಕೆ ನಮ್ಮ ಪಕ್ಕದ ಕೇರಳದಲ್ಲೂ ಬಹುಪಾಲು ಮಹಿಳೆಯರು ಬುರ್ಖಾ ಧರಿಸುವುದಿಲ್ಲ. ಉದ್ದದ ತೋಳಿನ ರವಿಕೆ, ಮೈ ತುಂಬಾ ಸೀರೆ ಉಟ್ಟು ಕೊಳ್ಳುತ್ತಾರೆ. ಅಲ್ಲಿ ಯಾವ ಮುಲ್ಲಾ ಮಹಾಶಯರೂ ಫತ್ವಾ ಹೊರಡಿಸಲಿಲ್ಲ, ಕಪ್ಪು ಬಟ್ಟೆಯಿಂದ ಬಿಗಿದು ಕೊಳ್ಳಿ ನಿಮ್ಮ ಶರೀರವನ್ನು ಎಂದು. ಬುರ್ಖಾ ಒಂದು ಸಾಮಾಜಿಕ, ಸಾಂಸ್ಕೃತಿಕ ಉಡುಗೆ. ಸುಡಾನಿನ ಮಹಿಳೆಯರು ಸೀರೆ ಥರಾ ಕಾಣುವ  ಬಟ್ಟೆಯನ್ನು ಮೈ ತುಂಬಾ ಹೊದ್ದು ಕೊಳ್ಳುತ್ತಾರೆ. ಇರಾನಿನಲ್ಲಿ ಎಲ್ಲಾ  ಮಹಿಳೆಯರೂ ಧರಿಸುವುದಿಲ್ಲ. ಶೇಕಡಾ ೯೮ ಮುಸ್ಲಿಮರಿರುವ ತುರ್ಕಿ, ಟುನೀಸಿಯಾ ದೇಶಗಳ ಮಹಿಳೆಯರೂ ಸಹ ಬುರ್ಖಾ ಧಾರಿಗಳಲ್ಲ. ಅಲ್ಲಿ ಮುಲ್ಲಾಗಳ ಹಾವಳಿ ಇಲ್ಲ ಎಂದಲ್ಲ, ಆದರೆ ಇದೊಂದು ಧಾರ್ಮಿಕ ಉಡುಗೆ ಯಲ್ಲ ಎನ್ನುವ ಅರಿವಿರುವುದರಿಂದಲೇ ಅವರು ಅಲ್ಲಿನ ಮಹಿಳೆಯರ ಮೇಲೆ ಈ ವಸ್ತ್ರವನ್ನು ಹೇರದಿರುವುದು.

ಈ ಮೇಲಿನ ಮಾತಿಗೆ ಪುಷ್ಟಿಯಾಗಿ ಇತ್ತೀಚೆಗೆ ನಡೆದ ಘಟನೆಯೊಂದನ್ನು ನಿಮ್ಮ ಅವಗಾಹನೆಗೆ ತರಲು ಇಚ್ಛಿ ಸುತ್ತೇನೆ. ಪುರಾತನ ನಾಗರೀಕತೆಯ ತವರಾದ ಈಜಿಪ್ಟ್ ದೇಶ ಇಸ್ಲಾಂ ಧರ್ಮವನ್ನ ಅನುಸರಿಸುವ ದೇಶ. ಅಲ್ಲಿನ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯ ಅಲ್- ಅಜ್ಹರ್ ಸ್ಥಾಪಿತ ವಾಗಿದ್ದು ಕ್ರಿ. ಷ ೯೫೦ ರಲ್ಲಿ. ಅಲ್ಲಿನ “ರೆಕ್ಟರ್” ಆಗಿದ್ದ ಇತ್ತೀಚೆಗೆ ದಿವಂಗತರಾದ ಶೇಖ್ ತಂತಾವೀ. ಇವರು ಜಗದ್ವಿಖ್ಯಾತ ಮುಸ್ಲಿಂ ವಿಧ್ವಾಂಸ. ಅತ್ಯಂತ ಕ್ಲಿಷ್ಟ ಶರಿಯಾ ದ ಸಮಸ್ಯೆಗಳಿಗೆ ಮುಸ್ಲಿಂ ವಿಶ್ವ ಉತ್ತರ ಅರಸೋದು ಇವರಲ್ಲಿ. ಆರು ತಿಂಗಳ ಹಿಂದೆ ನಡೆದ ವಿಶ್ವ ವಿದ್ಯಾಲಯದ ಸಮಾರಂಭವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಭಿಕರಲ್ಲಿ ಒಬ್ಬ ಹದಿ ಹರೆಯದ ಯುವತಿಯೊಬ್ಬಳು ಹಿಜಾಬ್ ಮಾತ್ರವಲ್ಲದೆ ಕಣ್ಣು ಮಾತ್ರ ಕಾಣುವಂಥ “ನಿಕಾಬ್” ಸಹ ಧರಿಸಿದ್ದಳು. ಭಾಷಣ ಮಾಡುತ್ತಿದ್ದ ತಂತಾವೀ ಯುವತಿಗೆ ಹೇಳಿದರು ಮುಖದ ಮೇಲಿನ ನಿಕಾಬ್ ತೆಗೆಯುವಂತೆ. ಆಕೆ ಒಪ್ಪಲಿಲ್ಲ. ಒತ್ತಾಯಿಸಿದಾಗ ಆಕೆ ಹೇಳಿದಳು ಇದು ನನ್ನ ಧಾರ್ಮಿಕ ಉಡುಗೆ, ನನ್ನ ಸ್ವಂತ ಇಷ್ಟದಿಂದ ಧರಿಸಿದ್ದು ಎಂದು. ಇದನ್ನು ಕೇಳಿ ಕುಪಿತರಾದ ತಂತಾವೀ ಹೇಳದರು, ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿರುವ ಈ ಸುಪ್ರಸಿದ್ಧ ವಿದ್ಯಾಲಯದ ಕುಲಪತಿಯಾದ ನನಗಿಂತ ನಿನಗೆ ಗೊತ್ತೋ ಇಸ್ಲಾಮಿನ ಉಡುಗೆ ಬಗ್ಗೆ? ನೀನು ಧರಿಸುತ್ತಿರುವ ಮುಖ ಮುಚ್ಚಿ ಕೊಳ್ಳುವ ನಿಕಾಬ್ ಇಸ್ಲಾಮಿನ ಕಾನೂನಲ್ಲ, ಅದೊಂದು ಸಾಮಾಜಿಕ ಉಡುಗೆ ಎಂದು ಹೇಳಿ ಆಕೆಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಅದೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತು ಮುಸ್ಲಿಂ ಜಗತ್ತಿನಲ್ಲಿ, ವಿಶೇಷವಾಗಿ ಅರಬ್ ವಲಯಗಳಲ್ಲಿ. ಆಕೆ ಯಾರ ಬಲವಂತವೂ ಇಲ್ಲದೆ ತನ್ನ ಇಷ್ಟಾನುಸಾರ ಧರಿಸಿದ ವಸ್ತ್ರಕ್ಕೆ ಈ ವಿಧ್ವಾಂಸರ  ಆಕ್ಷೇಪವೇಕೆ ಎಂದು ಅವರನ್ನು ಟೀಕಿಸಲಾಯಿತು.

ಕುವೈತ್ ಅರಬ್ ಮುಸ್ಲಿಂ ರಾಷ್ಟ್ರ. ಅಲ್ಲಿನ ಸಂಸತ್ತಿನಲ್ಲಿ ಕೆಲವರು ಮಹಿಳಾ ಸದಸ್ಯೆಯರೂ ಇದ್ದಾರೆ. ಅವರಲ್ಲಿ ಇಬ್ಬರು ಸಂಸದೆಯರು ಹಿಜಾಬ್ ಧರಿಸುವುದಿಲ್ಲ. ಅರಬ್ ರಾಷ್ಟ್ರವಾದ ಮೇಲೆ ಧರ್ಮಗುರುಗಳ ವರ್ಚಸ್ಸು ಇಲ್ಲದ್ದಿಲ್ಲ, ಆದರೂ ಯಾವುದೇ ಧರ್ಮ ಗುರುವೂ ಇದುವರೆಗೆ ಆ ಸಂಸದೆಯರ ವಿರುದ್ಧ ಫತ್ವ ಹೊರಡಿಸಲಿಲ್ಲ.

ಮಧ್ಯ ಪ್ರಾಚ್ಯದ “ಜೋರ್ಡನ್” ದೇಶ ಪುರಾತನ ವಂಶಸ್ಥರ ರಾಜಮನೆತನ ಆಳುವ ದೇಶ. ಇಲ್ಲಿನ ರಾಜ ಅಬ್ದುಲ್ಲಾ ರ ಪತ್ನಿ “ರಾನಿಯಾ” ಹಿಜಾಬ ಧರಿಸುವುದಿಲ್ಲ. ಜೋರ್ಡನ್ ದೇಶದ ಧರ್ಮಗುರುಗಳು ಆಕೆಯ ವಿರುದ್ಧ ಫತ್ವ ಹೊರಡಿಸಲಿಲ್ಲ. ಜೋರ್ಡನ್ ದೇಶದ ರಾಣಿ ಮಾತು ದಿವಂಗತ ಬೆನಜೀರ್ ಭುಟ್ಟೋ ಹಿಜಾಬ್ ಧರಿಸದೆಯೂ ಮುಸ್ಲಿಮರಾಗಿರಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟು ಇಸ್ಲಾಂ ಯಾವ ರೀತಿ ಶಿಷ್ಟಾಚಾರ ಮತ್ತು ಆಧುನಿಕತೆಯೊಂದಿಗೆ ಹೆಜ್ಜೆ ಹಾಕಬಲ್ಲದು ಎಂದು ತೋರಿಸಿ ಕೊಟ್ಟ ಮುಸ್ಲಿಂ ಮಹಿಳೆಯರು.    

ಒಬ್ಬ ಮಹಿಳೆ ಹಿಜಾಬ್ ಧರಿಸಿದ ಮಾತ್ರಕ್ಕೆ ಪರಿಪೂರ್ಣ ಮುಸ್ಲಿಮಳಾಗುವುದಿಲ್ಲ. ಹಿಜಾಬ್ ಧರಿಸದೆಯೂ ಮುಸ್ಲಿಂ ಮಹಿಳೆ ತನ್ನ ಇಸ್ಲಾಮೀ ಸಂಸ್ಕೃತಿಯನ್ನು ಹೆಮ್ಮೆಯಿಂದ ಕೊಂಡಾಡಬಹುದು. ಆದರೆ ಆಕೆ ಏನನ್ನು ಧರಿಸಬೇಕು ಏನನ್ನು ಧರಿಸಬಾರದು ಎಂದು ನಿರ್ಧರಿಸುವ ಸಮಾಜ ಅವಳಿಗೂ ಅವಳದೇ ಆದ ಹಕ್ಕುಗಳಿವೆ, ಆ ಹಕ್ಕನ್ನು ಚಲಾಯಿಸಿಕೊಳ್ಳುವ ಅವಕಾಶವನ್ನೂ ಆಕೆಗೆ ನೀಡಬೇಕು ಎನ್ನುವುದನ್ನು ಮರೆಯಬಾರದು.    

ಇನ್ನು ಓರ್ವ ಮಹಿಳೆ ತನಗಿಷ್ಟವಾದ ಬಟ್ಟೆ ತೊಟ್ಟರೆ ಅವಳ ಸ್ವಾತಂತ್ರ್ಯಕ್ಕೆ ಹೇಗೆ ಅವಳು ಧರಿಸುವ ವಸ್ತ್ರ ಮುಳುವಾಗುತ್ತದೆ ಅನ್ನೋದೇ ಒಂದು ದೊಡ್ಡ ಒಗಟು.        

ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಅತೀವ ಕಾಳಜಿ ತೋರಿಸುವ ಸಮಾಜ ಗಲಭೆ, ಜನಾಂಗ ಧ್ವೇಷ ಗಳಂಥ ಸಂದರ್ಭಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ರಾಜಾರೋಷ ಅತ್ಯಾಚಾರ ಕಣ್ಣಿಗೆ ಗೋಚರಿಸೋಲ್ಲ ಏಕೆಂದರೆ ತಮಗೆ ಎಲ್ಲಿ ಬೇಕು ಅಲ್ಲಿ ಮಾತ್ರ  ಕಣ್ಣುಗಳನ್ನು ತೆರೆಯುತ್ತಾರೆ, ಬೇಡದೆಡೆ ತಾತ್ಕಾಲಿಕ, ಕುರುಡನ್ನು ಪ್ರದರ್ಶಿಸುತ್ತಾರೆ.   

ಸ್ವಾತಂತ್ರ್ಯದ ಹರಣದ ಬಗ್ಗೆ ಮಾತನಾಡುವ ಜನರಿಗೆ ಈವಾನ್ ಗೊಎಥ್ ಹೇಳಿದ ಮಾತು ನೆನಪಿಗೆ ತರಬೇಕು; “ತಾವು ಎಲ್ಲರಿಗಿಂತ ಸ್ವತಂತ್ರರು ಎಂದು ಭಾವಿಸಿ ನಡೆಯುವ ಜನರಷ್ಟು ಗುಲಾಮಗಿರಿಯಲ್ಲಿ ಬಂಧಿಸಲ್ಪಟ್ಟವರು  ಬೇರಾರಿಲ್ಲ”.

“None are more hopelessly enslaved than those who falsely believe they are free.”
von Goethe

 

ಹಿಜಾಬ್ ವಿವಿಧ ಧರ್ಮಗಳಲ್ಲಿ: ಯಹೂದ್ಯರು ತಮ್ಮ ಮಹಿಳೆಯರು ಶರೀರವನ್ನು ಸಂಪೂರ್ಣವಾಗಿ ಮುಚ್ಚುವಂಥ ವಸ್ತ್ರ ಧರಿಸಲು ಉತ್ತೆಜಿಸುತ್ತಿದ್ದರು. ಕೂದಲನ್ನು ಪ್ರದರ್ಶಿಸಿ ನಡೆಯುವುದು ಅಪರಾಧ. ಉಚ್ಚ ಕುಲೀನ ಸ್ತ್ರೀಯರು ತಲೆಯ ಮೇಲೆ ಬಟ್ಟೆ ಧರಿಸುತ್ತಿದ್ದರು ಮತ್ತು ಸಮಾಜದ ಕೆಳಸ್ತರದ ಮಹಿಳೆಯರು ಪ್ರತಿಷ್ಠೆ ಗಾಗಿ ತಲೆ ಕೂದಲನ್ನು ಮುಚ್ಚುತ್ತಿದ್ದರು. ಯಹೂದ್ಯ ಸಮಾಜದಲ್ಲಿ ವೇಶ್ಯೆಯರು ತಲೆ ಕೂದಲನ್ನು ಮರೆ ಮಾಚುವಂತಿಲ್ಲ.

ಕ್ರೈಸ್ತ ಧರ್ಮದಲ್ಲಿ: ಸಂತ “ಪಾಲ್” ಹೊಸ ಒಡಂಬಡಿಕೆಯಲ್ಲಿ ಹೇಳಿದ್ದು ಹೀಗೆ: ಪ್ರತೀ ಗಂಡಿನ ತಲೆಯೂ ಕ್ರೈಸ್ತನದು ಮತ್ತು ಪ್ರತೀ ಹೆಣ್ಣಿನ ತಲೆ ಗಂಡಿನದು ಮತ್ತು ಕ್ರಿಸ್ತನ ತಲೆ ದೇವರದು. ಪ್ರತೀ ಹೆಣ್ಣು ತಲೆ ಕೂದಲನ್ನು ಮರೆ ಮಾಚಲೇ ಬೇಕು ಇಲ್ಲಾ ತಲೆ ಬೋಳಿಸಿ ಕೊಳ್ಳಬೇಕು. ಗಂಡು ತಲೆ ಕೂದಲನ್ನು ಮರೆಮಾಚೋ ಅಗತ್ಯ ಇಲ್ಲ ಏಕೆಂದರೆ ಗಂಡು ದೇವರ ಪ್ರತಿ ರೂಪ. ಆದರೆ ಹೆಣ್ಣು ಗಂಡಿನ ಗೌರವ, ಘನತೆ. ಕ್ರೈಸ್ತ ಧರ್ಮ ಗುರುಗಳ ಪ್ರಕಾರ ಹೆಣ್ಣು ತಲೆ ಕೂದಲನ್ನು ಮರೆಮಾಚುವುದು ಆಕೆ ಗಂಡಿಗೆ ಮತ್ತು ದೇವರಿಗೆ ವಿಧೇಯಳಾಗಿರಬೇಕಾದ ಕುರುಹು.  ಯಹೂದ್ಯ ಮತ್ತು ಕ್ರೈಸ್ತ ಧರ್ಮದಲ್ಲಿ ಹಿಜಾಬ್ ಗಂಡಿಗೆ ಮತ್ತು ಸಮಾಜಕ್ಕೆ ಹೆಣ್ಣು ವಿಧೇಯಳಾಗುವ ನಿಟ್ಟಿನಲ್ಲಿ ಆಗ್ರಹಿಸಿದರೆ, ಬಯಸಿದರೆ ಇಸ್ಲಾಮ್ ಹಿಜಾಬನ್ನು ಬಯಸಿದ್ದು ಹೆಣ್ಣಿನ ನಮ್ರ ನಡತೆಯನ್ನು ಉತ್ತೇಜಿಸಲು ಮತ್ತು ಪರಪುರುಷರ ಆಸಕ್ತ ಕಣ್ಣುಗಳಿಂದ ರಕ್ಷಿಸಿಕೊಳ್ಳಲು.      

 

ಕೆನಡಾದ ಕ್ವೀನ್ಸ್ ವಿಶ್ವ ವಿದ್ಯಾಲಯ ಹೊರಡಿಸಿದ ಒಂದು ಪತ್ರದಲ್ಲಿ ಈ ಆಘಾತಕಾರಿ ಅಂಶಗಳು ಒಳಗೊಂಡಿದ್ದವು.  ಪ್ರತೀ ೬ ನಿಮಿಷ ಗಳಿಗೊಮ್ಮೆ ಹೆಣ್ಣಿನ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತದೆ;

ಪ್ರತೀ ಮೂರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾಳೆ.

ಪ್ರತೀ ನಾಲ್ವರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಬಲಾತ್ಕಾರದ ಅಪಾಯಕ್ಕೆ ಸಿಲುಕಿರುತ್ತಾಳೆ.

ಪ್ರತೀ ಎಂಟು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಕಾಲೇಜು ವ್ಯಾಸಂಗದ ವೇಳೆ ಲೈಂಗಿಕ ಶೋಷಣೆಗೆ ಒಳಪತ್ತಿರುತ್ತಾಳೆ.

ಆಧುನಿಕ ವಿಶ್ವದಲ್ಲಿ ಆಧುನಿಕ ಮನೋಭಾವದ ವ್ಯಕ್ತಿಗಳು ತಮ್ಮ ಆಧುನಿಕತೆಗೆ ವಸ್ತ್ರ ವನ್ನು ಮಾನದಂಡ ವಾಗಿರಿಸ ಕೂಡದು. ಗಂಡು ಮುಚ್ಚಿದಷ್ಟೂ gentleman ಮತ್ತು ಹೆಣ್ಣು ತೆರೆದಷ್ಟೂ cultured lady. ಈ ಮಾನ ದಂಡವನ್ನು ಎಲ್ಲರ ಮೇಲೂ ಹೇರಕೂಡದು.

ವೈಯಕ್ತಿವಾಗಿ ನಾನು ನಿಕಾಬ್ ಅಭಿಮಾನಿಯಲ್ಲ. ಬುರ್ಖಾ ಧರಿಸದೆಯೂ ಹೆಣ್ಣು ತನ್ನ ಅಂಗ ಸೌಷ್ಠವ ಪ್ರದರ್ಶಿಸದೆ ಬದುಕಬಹುದು. ಇತ್ತೀಚೆಗೆ ವಿವಾಹಿತರಾದ ಮಹೇಂದ್ರ ಸಿಂಗ್ ಧೋನಿ ಯವರ ಪತ್ನಿ ತುಂಬು ತೋಳಿನ ( full sleeved) ಚೂಡಿದಾರ್ ಧರಿಸಿ ತಲೆಯ ಮೇಲೆ ದುಪಟ್ಟಾ ಹಾಕಿಕೊಂಡು ಅಭಿನಂದಿಸಲು ಬಂದ ಜನರನ್ನು ಸ್ವೀಕರಿಸಿದರು ಎಂದು ಯಾರೋ ಹೇಳಿದರು. ಇಲ್ಲಿ ಈ ನವವಿವಾಹಿತೆ ತನಗರಿವಿಲ್ಲದೆಯೇ ಇಸ್ಲಾಮೀ ಸಂಸ್ಕೃತಿಯ ಉಡುಗೆಗೆ ಮಾರು ಹೋಗಿರಬೇಕು.       

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಕೇಳಿದಳು ಯಾವುದರ ಬಗ್ಗೆ ಬರೆಯುತ್ತಿದ್ದೀರಿ ಎಂದು. ಯೂರೋಪಿನಲ್ಲಿ ಬುರ್ಖಾ ಬ್ಯಾನ್ ಮಾಡ್ತಾರಂತೆ, ಅದರ ಬಗ್ಗೆ ಬರೆಯುತ್ತಿದ್ದೇನೆ ಎಂದೆ. ಅರ್ಥವಾಗದೆ ಕೇಳಿದಳು, ಬುರ್ಖಾ ಬ್ಯಾನ್ ಮಾಡ್ತಾರ? ಏಕೆ? ಕಾರಣ ಏನು?

ಕಾರಣ ನನಗೂ ಗೊತ್ತಿಲ್ಲ. ಕೆಲವೊಮ್ಮೆ  ಸಿಂಪಲ್ ಪ್ರಶ್ನೆಗಳಿಗೆ ಸಿಂಪಲ್ ಉತ್ತರ not so simple.