ನಾವೀಗಲೂ ವಿಶ್ವ ವಿಜಯೀ

we are still world champs. ಭಾರತ ತಂಡದ ನಾಯಕ ಆಸ್ಟ್ರೇಲಿಯಾದವರಿಂದ ಮತ್ತೊಮ್ಮೆ ಇಕ್ಕಿಸಿಕೊಂಡ ನಂತರ ಹೇಳಿದ ಮಾತು. ಅದರ ಅರ್ಥ ಇನ್ನೂ ಮೂರು ನಾಲ್ಕು ವರ್ಷಗಳ ಕಾಲ ಸೋಲಿನ ಮೇಲೆ ಸೋಲನ್ನು ನಾವು ಅನುಭವಿಸಿದರೂ ಪರವಾಗಿಲ್ಲ, ಈಗಲೂ ನಾವು ವಿಶ್ವ ಚಾಂಪಿಯನ್ನರು.

ಗತ ಕಾಲದ ವೈಭವವನ್ನು ಮೆಲುಕು ಹಾಕುತ್ತಾ ವಾಸ್ತವದ ಬಗ್ಗೆ ಅಸಡ್ಡೆ ತೋರಿಸುತ್ತಾ ಸಾಗುವ ಸಮಾಜ ನಮ್ಮನ್ನು ಬಿಟ್ಟರೆ ಬೇರೆಯೂ ಇರಬಹುದೇ, ಅಥವಾ are we unique in this?

ಈಗ ತಾನೇ ಮುಕ್ತಾಯ ಗೊಂಡ ಆಸೀ-ಭಾರತ ನಾಲ್ಕು ಟೆಸ್ಟ್ ಗಳ ಟೆಸ್ಟ್ ಪಂದ್ಯಾವಳಿ ಕ್ರಿಕೆಟ್ ಇತಿಹಾಸದ ಕಡಿಮೆ ಸಮಯದಲ್ಲಿ ಮುಕ್ತಾಯವಾದ ಸರಣಿ ಆಗಿರಬಹುದೇ? ಏಕೆಂದರೆ ಎರಡು ಟೆಸ್ಟ್ ಗಳು ಮೂರೇ ಮೂರು ದಿನಗಳಲ್ಲಿ ಮುಕ್ತಾಯವಾದವು. ಮತ್ತೆರಡು ಟೆಸ್ಟ್ ಗಳು ನಿಗದಿತ ಸಮಯಕ್ಕಿಂತ ಬೇಗ ಮುಕ್ತಾಯವಾಯಿತು.

ಆಘಾತಕಾರೀ ಸುದ್ದಿ: ಪಾಕಿಸ್ತಾನಕ್ಕೆ ಆಘಾತಕಾರೀ ಗೆಲುವು. ಎರಡನೇ ಟೆಸ್ಟ್ ನಲ್ಲಿ ಗೆಲ್ಲಲು ಕೇವಲ ೧೪೫ ರನ್ನುಗಳ ಗುರಿ ಇಟ್ಟುಕೊಂಡಿದ್ದ ಬಲಿಷ್ಠ ಇಂಗ್ಲೆಂಡ್ ತಂಡ ಕೇವಲ ೭೨ ರನ್ನುಗಳನ್ನು ಮಾಡಿ ತನ್ನೆಲ್ಲಾ ವಿಕೆಟು ಗಳನ್ನು ತರಗೆಲೆ ಗಳಂತೆ ಉದುರಿಸಿ ಕೊಂಡಿತು. ಪಾಕಿಸ್ತಾನದ ಹಲವು ಆಟಗಾರರು ಜೈಲಿನಲ್ಲಿದ್ದರೂ, ತಂಡ ಒಗ್ಗಟ್ಟಿನಿಂದ ಆಡುವ ಅನುಮಾನವಿದ್ದರೂ, ಪಾಕ್ ಅಮೋಘ ಯಶಸ್ಸನ್ನು ಸಾಧಿಸಿತು ತನ್ನ ಮಾಜಿ ಒಡೆಯನ ವಿರುದ್ಧ. ಭಯೋತ್ಪಾದಕರ ಬೆದರಿಕೆಗೆ ತನ್ನ ನೆಲದಲ್ಲೇ ಆಡಲು ಯೋಗ್ಯತೆ ಇಲ್ಲದ ತಂಡ ಮೂರನೇ ದೇಶವೊಂದರಲ್ಲಿ, ( ನ್ಯೂಟ್ರಲ್ ಅವೆನ್ಯೂ ) ಆಡಿ ಸಾಧಿಸಿದ್ದನ್ನು ನೋಡಿದರೆ ನಾವೂ ಸಹ ಅದೇ ದಾರಿ ಏಕೆ ತುಳಿಯಬಾರದು. ನಮ್ಮ ನೆಲದಲ್ಲಿ ಆಡಿದರೂ ನಮಗೆ ಸೋಲು, ಅತಿಥೇಯ ದೇಶದಲ್ಲಿ ಆಡಿದರೂ ಸೋಲು. ನಾವೂ ಹುಡುಕೋಣ ನ್ಯೂಟ್ರಲ್ ಅವೆನ್ಯೂ ಒಂದನ್ನು, ಬಾರಿಸೋಣ ಜಯಭೇರಿಯನ್ನು.

ಎಲ್ಲದಕ್ಕೂ ಧೋನಿಯೇ ಕಾರಣ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟಿನಲ್ಲಿ ಭಾರತ ಮತ್ತೊಮ್ಮೆ ಸೋತಿತು. ಮೊದಲ ಟೆಸ್ಟಿನ ಪಂಗ ನಾಮದ ನಂತರ ಒಂದು ಒಳ್ಳೆಯ ಪ್ರದರ್ಶನ ನೀಡಿ ತಿರುಗೇಟು ನೀಡಬಹುದು ಎಂದು ಕಾತುರದಿಂದ ನಿರೀಕ್ಷಿಸಿದ್ದ ನಮಗೆ ದಕ್ಕಿದ್ದು ಮತ್ತೊಂದು ಲಾತಾ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಪಂದ್ಯದ ಉಳಿದೆಲ್ಲಾ ಸೆಷನ್ಸ್ ಗಳಲ್ಲೂ ಮಿಂಚಿದ್ದು ಬಿಳಿಯರೇ. ಇಂಗ್ಲೆಂಡ್ ತಂಡ ಒಂದು ಪರಿಪೂರ್ಣ ತಂಡವಾಗಿ, ಪರಿಪಕ್ವತೆ ಯಿಂದ ಕ್ರಿಕೆಟ್ ಆಡುತ್ತಿದೆ ಎಂದರೆ ಯಾರೂ ಅಲ್ಲಗಳೆಯಲಾರರು. ಸರಿ ಸೋತಿದ್ದು ಒಂದು ಒಳ್ಳೆಯ ತಂಡದೆದುರು. ಅದರಲ್ಲೇನು ಅವಮಾನ? ಮುಜುಗುರ? ಹಾಗಂತ ನಾನೂ, ನೀವೂ ಹೇಳಬಹುದು,TRP ಸಲುವಾಗೇ ಬದುಕುವ, TRP ಏರಲು ಯಾವ ಪಾತಾಳಕ್ಕೂ ಇಳಿಯಲು ಹೇಸದ ಮಾಧ್ಯಮಕ್ಕೆ ಆಟದ ಗಮ್ಮತ್ತು, ಅದರ ಕೌಶಲ್ಯ, ವೃತ್ತಿ ಪರಿಣತೆ ಎಲ್ಲಾ ಅರ್ಥವಾಗಲು ಸಾಧ್ಯವೇ? ಸೋತು ತಂಡ ಪೆವಿಲಿಯನ್ ಸೇರಿಕೊಳ್ಳುವ ಮುನ್ನವೇ ಶುರುವಾಯಿತು ಧೋನಿಯ ಮತ್ತು ತಂಡದ ಅಂತ್ಯ ಸಂಸ್ಕಾರ. ಸತ್ತ ಹೆಣದ ಮುಂದೆ ಲಬೋ ಲಬೋ ಎಂದು ಎದೆ ಬಡಿದು ಕೊಳ್ಳುವ ರೀತಿಯಲ್ಲಿ ಆಡಿದವು ಮಾಧ್ಯಮಗಳು. ಸ್ಟಾರ್ ಟೀವಿ ಕತೆ ಹೇಳಬೇಕಿಲ್ಲ. ‘ಧೋನಿ ಕಾರಣ ಈ ಸೋಲಿಗೆ’, ‘ಧೋನಿ ನಾಯಕತ್ವದಲ್ಲಿ ಸೋಲು’, ‘ಧೋನಿ ನಾಯಕತ್ವದಲ್ಲಿ ಮೊಟ್ಟ ಮೊದಲ, ಅತಿದೊಡ್ಡ ಸೋಲು’, ಧೋನಿ… ಧೋನಿ… ಧೋನಿ… ಎಂದು ಅರಚಲು ಶುರು ಮಾಡಿತು. ಯಾಕೆ ತಂಡದಲ್ಲಿ ಒಂದೇ ಧೋನಿಯೇ ಇರೋದು? ಇನ್ನೂ ದೊಡ್ಡ ದೊಡ್ಡ ‘ದೋಣಿ’ ಗಳಿದ್ದವಲ್ಲ? ಅವಕ್ಕೆಲ್ಲಾ ಏನಾಗಿ ಬಿಟ್ಟಿತು? ಹನ್ನೊಂದು ದೋಣಿ ಗಳಲ್ಲಿ ಒಂದು ಕೆಟ್ಟಿತು, ಬಾಕಿ ಹತ್ತು?

ಇಂಗ್ಲೆಂಡ್ ನ ಬೌಲಿಂಗ್ ಪ್ರಾವೀಣ್ಯತೆ ನೋಡಿದವರಿಗೆ ಅರ್ಥವಾಗುತ್ತೆ. ಬಾಕಿ ಉಳಿದ ಎರಡು ಟೆಸ್ಟ್ ಗಳಲ್ಲಿ ಸೋಲದೆ ಡ್ರಾ ಮಾಡಿ ಕೊಂಡು ಬಂದರೂ ಅದು ದೊಡ್ಡ ಸಾಹಸವೇ ನಮ್ಮ ಪಾಲಿಗೆ. ಅಷ್ಟು ಚೊಕ್ಕ ಬೌಲಿಂಗ್ ಪ್ರದರ್ಶನ. ಇಂಗ್ಲೆಂಡ್ ಎಸೆದ ಶಾರ್ಟ್ ಪಿಚ್ ಬಾಲ್ ಗಳನ್ನು ನಾವು ಆಡಿದ ರೀತಿ ನೋಡಿದವರಿಗೆ ತಿಳಿಯುತ್ತೆ ನಮ್ಮ ತಯಾರಿ ಬಗ್ಗೆ, ನಮ್ಮ ಟೆಕ್ನಿಕ್ ಬಗ್ಗೆ. ಎರಡನೇ ಇನ್ನಿಂಗ್ಸ್ ನಲ್ಲಿ ಶಾರ್ಟ್ ಪಿಚ್ ಬಾಲ್ ಒಂದನ್ನು ಆಡಲು ಹೋಗಿ ಎಲ್ಲಿಗೋ ಬ್ಯಾಟ್ ಬೀಸಿದ ಯುವರಾಜ್ ಸಿಂಗ್, ತಾನು ಹೊಡೆದ ಬಾಲ್ ಎಲ್ಲಿಗೋ ಹೋಗಿ ಫೀಲ್ಡರ್ ಕೈ ಸೇರಿದ್ದು ಬೆಪ್ಪನಂತೆ ನೋಡಿದ ದೃಶ್ಯ ಅವಿಸ್ಮರಣೀಯ. ಔಟ್ ಆಗಿ ಆತ ಕ್ರೀಸ್ ಬಿಟ್ಟು ಹೋಗುವಾಗ ಮಾಡಿದ ಮುಸುಡಿಯ ದೃಶ್ಯ (ತರಡು ಬೀಜ ಕಳಕೊಂಡಾಗ ಆಗುವ ರೀತಿ) ಬಹಳ ಕಾಲ ನಮ್ಮ ಮನದಲ್ಲಿ ನಿಲ್ಲುತ್ತದೆ.           

ವೆಸ್ಟ್ ಇಂಡೀಸ್ ಪದ್ಯವೊಂದರಲ್ಲಿ ಗೆದ್ದ ನಂತರ ಅಂಪೈರಿಂಗ್ ಚೆನ್ನಾಗಿದ್ದಿದ್ದರೆ ಇನ್ನೂ ಬೇಗೆ ಗೆದ್ದು ಪೆವಿಲಿಯನ್ ಗೆ ತೆರಳಿ ವಿಶ್ರಮಿಸಬಹುದಿತ್ತು ಎಂದು ಕೊರಗಿದ್ದ ಧೋನಿಗೆ ಎರಡನೇ ಟೆಸ್ಟನ್ನು ಕೇವಲ ಮೂರೂವರೆ ದಿನಗಳಲ್ಲಿ ಮುಗಿಸಿ ಸುದೀರ್ಘ ವಿಶ್ರಮ ಇಂಗ್ಲೆಂಡ್ ಕೊಟ್ಟಿದ್ದು ಈ ಪಂದ್ಯದ ವೈಶಿಷ್ಟ್ಯ. ಈ ವಿಶ್ರಮ ಧೋನಿ ಪಾಲಿಗೆ ಸ್ವಯಂ ನಿವೃತ್ತಿ ತೆರನಾದ ವಿಶ್ರಾಮವಾಗದಿರಲಿ ಎಂದು ಹಾರೈಸುತ್ತಾ..

ನಾವೇಕೆ ಹೀಗೆ?

ಭಾರತ twenty20 ಯಲ್ಲಿ ಸೋಲುಂಡ ನಂತರ ನಮ್ಮ ಪತ್ರಿಕೆಗಳು ಧೋನಿ ಮತ್ತು ತಂಡದವರನ್ನು ಹಿಗ್ಗಾ ಮುಗ್ಗಾ ಹೀಗಳೆದು ಬರೆದವು. ವಿದ್ಯುನ್ಮಾನ ಮಾಧ್ಯಮಗಳು ತಾವು ಯಾರಿಗೂ ದ್ವಿತೀಯರಲ್ಲ ಎಂದು ತೋರಿಸುವ ಹುಮ್ಮಸ್ಸಿನಲ್ಲಿ ಭಾರತ ತಂಡವನ್ನು ಟೀಕಿಸಿ ಅವರ ಅಳಿದುಳಿದ ಮನೋಸ್ಥೈರ್ಯವನ್ನು ಉಡುಗಿಸುವ ಕೆಲಸ ಸೊಗಸಾಗಿ ಮಾಡಿದವು. ಯಾವುದೇ ಆಟದಲ್ಲೂ ಒಬ್ಬರು ಗೆದ್ದರೆ ಮತ್ತೊಬ್ಬ ಸೋಲಲೇ ಬೇಕು. ಇದು ನಿಯಮ. ಇದನ್ನು ಅರಿಯಲಾರದ ಮಾಧ್ಯಮಗಳಿಗೆ ಬೇಕಿರುವುದು ವಿಷಯಗಳನ್ನು ಸಂಕೀರ್ಣಗೊಳಿಸಿ ತಮಗೆ ತೋಚಿದಂತೆ ಬರೆದು ಪತ್ರಿಕಾ ದ್ಧರ್ಮವನ್ನು ಮೆರೆದ ಪುಣ್ಯಭಾವದ ಸೋಗು ಹಾಕುವುದು. ವಿಶ್ವದ ಬೇರಾವುದೇ ರಾಷ್ಟ್ರಗಳಲ್ಲೂ ಕಾಣದ ಈ ವರ್ತನೆ ನಮ್ಮ ದೇಶಕ್ಕೆ ಬಂದದ್ದಾದರೂ ಹೇಗೆ? ಬಹುಶಃ ಕ್ರೀಡೆಯಲ್ಲಿ ಕ್ರಿಕೆಟ್ ಮಾತ್ರ ಇರಬೇಕು ನಮಗೆ ಒಂದಿಷ್ಟು ಸಾಧಿಸಿದ್ದೇವೆ ಎನ್ನೋ ಭಾವ ತಂದ ಆಟ. ಇದನ್ನೂ ಸೋಲುತ್ತಾ ಕೂತರೆ ಮತ್ಯಾವುದರಲ್ಲಿ ನಾವು ಶ್ರೇಷ್ಠರು? ಕ್ರಿಕೆಟ್ ಗೆ ಕೊಟ್ಟ ಮರ್ಯಾದೆ ಮಾನ್ಯತೆಯಲ್ಲಿ ಕಾಲು ಭಾಗವಾದರೂ ಇತರೆ ಕ್ರೀಡೆಗಳಿಗೆ ಕೊಟ್ಟಿದ್ದರೆ ನಮಗೆ ಹೀಗೆ ನಮ್ಮನ್ನು ನಾವೇ ಹಳಿದುಕೊಳ್ಳುವ ಗತಿ ಬರುತ್ತಿರಲಿಲ್ಲವೋ ಏನೋ?