ಭಾರತದ ವಿಜಯ

ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ, ಮನುಷ್ಯರಂತೆ ಬದುಕು ಎಂದು ತಾಕೀತಿನೊಂದಿಗೆ ಕಳಿಸಿದ, ಎಲ್ಲರೂ ಆರಾಧಿಸುವ ಪರಮಾತ್ಮನಿಗೆ  ಮಂದಿರವೋ ಮಸೀದಿಯೋ ಎನ್ನುವ ತಕಾರಾರಿಗೆ ಸಿಕ್ಕಿತು ಮುಕ್ತಿ. ಅದೂ ಸಂಕೀರ್ಣಮಯ ಮುಕ್ತಿ. ಸಂಕೀರ್ಣ ಸಮಸ್ಯೆಗೊಂದು ಅಷ್ಟೇ ಸಂಕೀರ್ಣವಾದ ಪರಿಹಾರ. ಅಯೋಧ್ಯೆ, ದೇಶದ ಜನರನ್ನು ಬೇರ್ಪಡಿಸಿದ್ದು ಮಾತ್ರವಲ್ಲ ದೇಶವಾಸಿಗಳು ತಮ್ಮ ಸಮಯ, ಶ್ರಮ, ಸಂಪತ್ತು ಈ ವಿವಾದದ ಹಿಂದೆ ಹೂಡಿ, ಕಚ್ಚಾಡಿ, ಬಡಿದಾಡಿ “

ವಸುಧೈವ ಕುಟುಂಬಕಂ” ಎಂಬುದು ಪುಸ್ತಕದ ಬದನೇಕಾಯಿ ಮಾತ್ರ ಎಂದು ಜಗತ್ತಿಗೆ ಸಾರಿದ ಸಮಸ್ಯೆ. ಬದುಕು, ಬದುಕಲು ಬಿಡು (ಜಿಯೋ ಔರ್ ಜೀನೇದೋ) ಎನ್ನುವ ಸಮೀಕರಣಕ್ಕೆ ಒಲ್ಲೆ ಎಂದು ಪಟ್ಟು ಹಿಡಿದ ವಿವಾದ. ಮೂರು ನ್ಯಾಯಾಧೀಶರುಗಳ ಪೀಠ ಕೊನೆಗೂ ಕೊಟ್ಟಿತು ತೀರ್ಪು, ಎರಡೆಕರೆ ೭೦ ಗುಂಟೆ ಮೂರುಭಾಗ ಮಾಡಿಕೊಂಡು ಭಜನೆ, ಹರಕೆ, ಏಕದೇವೋಪಾಸನೆ ಮಾಡಿಕೊಳ್ಳಿ ಎಂದು. ಆದರೆ ಈ ಗಲಾಟೆಯಲ್ಲಿ ರಾಮ ಮತ್ತು ರಹೀಮರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ ಎಂದು ಸದ್ದಿಲ್ಲದೇ ಕಾಲು ಕಿತ್ತಿದ್ದು ಮಾತ್ರ ಯಾರೂ ಗಮನಿಸಲೇ ಇಲ್ಲ.

ಭಾರತ ಜಾತ್ಯಾತೀತ ರಾಷ್ಟ್ರ. ಆ ಹೆಗ್ಗಳಿಕೆಗೆ ನ್ಯಾಯವೆಸಗಲು ಹೆಣಗಿದ ತೀರ್ಪು ಇದು. ಇದರಲ್ಲಿ ಯಾರಿಗೂ ವಿಜಯವಿಲ್ಲ. ಆದರೆ ವಿಜಯ ಮಾಲೆ ತಾಯಿ ಭಾರತಿಗೆ ಎಂದು ಸಮಾಧಾನ. ಆದರೂ ಕೆಲವು ಕಿಡಿ ಗೇಡಿಗಳು ಸರಕಾರದ ಕಟ್ಟುನಿಟ್ಟಾದ ನಿರ್ದೇಶನದ ನಡುವೆಯೂ “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು. ದೇವರ ಹೆಸರಿನಲ್ಲಿ ರಾಜಕಾರಣ ಮಾಡಿ ಹೊಟ್ಟೆ ಹೊರೆದು ಕೊಳ್ಳುವವರಿಗೆ ಯಾವ ಸಂದಿಗ್ಧ ಪರಿಸ್ಥಿತಿಯೂ ವಿಜಯೋಲ್ಲಸವೇ. ಇಂದು ಬೆಳಗ್ಗಿನ ಹಲವು ಪತ್ರಿಕೆಗಳನ್ನು ನೋಡಿದ ನನಗೆ ಅನ್ನಿಸಿದ್ದು ಈಗಲೂ ಮಾಧ್ಯಮಕ್ಕೆ ಭಾರತೀಯರ ನಡುವೆ ಕಂದಕ ತೊಡುವುದೇ ಇವರ ಕಾಯಕ ಎಂದು. ಕರಾವಳಿಯ ಗುಡ್ಡದ ಮೇಲೊಂದರಿಂದ  ಪ್ರಕಾಶಿತವಾಗುವ ಪತ್ರಿಕೆಯಾಗಲಿ, ಸಮಸ್ತ ಕನ್ನಡಿಗರ ಹೆಮ್ಮೆ ಎಂದು ಘೋಷಣೆ ಹೊತ್ತ ಪತ್ರಿಕೆಯಾಗಲಿ ತಮ್ಮ screaming headlines ಮೂಲಕ ಒಂದು ಸಮಾಜಕ್ಕೆ ಸಂದ ವಿಜಯವೆಂದೇ ಪ್ರತಿಬಿಂಬಿಸಿದವು. ಈ ತೆರನಾದ, ಉದ್ರೇಕಿಸುವ ಪತ್ರಿಕೆಗಳ ತಲೆಬರಹಗಳನ್ನು ನಿರ್ಲಕ್ಷಿಸಿ ನ್ಯಾಯಾಲಯದ  ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.

ದೇಶದ ಜನಸಂಖ್ಯೆಯ ಶೇಕಡಾ ೭೭ ಭಾಗ ಇಪ್ಪತ್ತಕ್ಕೂ ಕಡಿಮೆ ರೂಪಾಯಿಯ ಆದಾಯದ ಮೇಲೆ ಕಳೆಯುತ್ತಾರಂತೆ. ಒಪ್ಪೊತ್ತಿನ ಅನ್ನಕ್ಕಾಗಿ ಪರದಾಡುವವನಿಗೆ ತನ್ನ ಹಸಿದ ಹೊಟ್ಟೆಗೆ ಊಟ ಯಾವ ಕಡೆಯಿಂದ ಬರಬಹುದು ಎನ್ನುವ ಕಾತುರ, ನಿರೀಕ್ಷೆ.  ದೇಶವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ಅಸಮಾನತೆ, ಹಸಿವು, ಲಂಚ, ಕೊಲೆ ಸುಲಿಗೆ ಬಗ್ಗೆ ಮೇಲಿನ ಸಮಸ್ಯೆಗಳಿಗೆ ತೋರಿಸಿದ ಕಾಳಜಿ, ಕಾತುರ ತೋರಿದ್ದಿದ್ದರೆ ಪಕ್ಕದ ಚೀನಾ ಅಥವಾ ಮಲೇಷ್ಯ ದಂಥ ದೇಶಗಳ ಪ್ರಗತಿ ಕಂಡು ಕರುಬುವ ಅವಶ್ಯಕತೆ ಇರಲಿಲ್ಲ. ಏನೇ ಆಗಲಿ ಈ ದೇಶದ ನೆಮ್ಮದಿ ಕೆಡಿಸಿದ್ದ ಸಮಸ್ಯೆಗೆ ಒಂದು ಪರಿಹಾರ ಬಂತು ಅಲ್ಲಾಹನ ಊರಿನಿಂದ (ಇಲಾಹಾಬಾದ್). ಈ ತೀರ್ಪು ದೇಶಕ್ಕೆ ಅವಶ್ಯ ಬೇಕಾದ ಶಾಂತಿ ನೆಮ್ಮದಿ ಕೊಡಿಸುವುದೋ ಎಂದು ನ್ಯಾಯ ಮೂರ್ತಿಗಳು ವಿಧಿಸಿದ ಮೂರು ತಿಂಗಳುಗಳ status quo ಉತ್ತರ ನೀಡಬಹುದು.            

ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಕುತೂಹಲದಿಂದ ನೋಡುತ್ತಾ ಕೂತ ನಮಗೆ ಕಿಟಕಿಯ ಮೂಲಕ ಕಾಣಲು ಸಿಕ್ಕಿದ್ದು, ನನ್ನ ಎರದುಉವರೆ ವರ್ಷದ ಪುಟ್ಟ ಪೋರಿ ಕಾಲುದ್ದ ಮಾಡಿಕೊಂಡು ನನ್ನ ಮೇಜಿನ ಮೇಲಿನಿಂದ ಎಗರಿಸಿದ ಪುಟ್ಟ ಭಾರತದ ಧ್ವಜದಿಂದ ತನ್ನ ಮುಖಕ್ಕೆ ತಂಗಾಳಿಯನ್ನು ಬೀಸಿಕೊಳ್ಳುತ್ತಾ ಮಂದಿರ ಮಸೀದಿ ವಿವಾದ ನನಗೆ ನಗಣ್ಯ ಎನ್ನುವ ಥರ ಕೂತಿದ್ದಳು.

ಇಂದು ಬೆಳಿಗ್ಗೆ ನನ್ನ mobile ಗೆ ಬಂದ ಸಂದೇಶ; who are we Hindu or Muslim? When there is “Ali” in “Diwali” and “Ram” in “Ramadan” cant we help India to be united?

ಮುಸ್ಲಿಮರಲ್ಲಿ ಕಾಣಲು ಸಿಕ್ಕಿದ ಈ ಮೇಲಿನ ಉದಾತ್ತ, ಸಾಮರಸ್ಯದ ಭಾವನೆ ಸರ್ವರಲ್ಲೂ ಕಾಣುವಂತಾಗಲಿ ಎಂದು ಆಶಿಸುತ್ತಾ..

ಮರುಭೂಮಿಯ ಎಲೆಮರೆಕಾಯಿ

ವಾರಾಂತ್ಯವಾದ್ದರಿಂದ ಮೊನ್ನೆ ಗುರುವಾರ ಜೆಡ್ಡಾ ದಿಂದ ೪೦೦ ಕಿ. ಮೀ ದೂರ ಇರುವ ಮದೀನಾ ನಗರಕ್ಕೆ ಹೊರಟೆವು ಪರಿವಾರ ಸಮೇತ. ಮಧ್ಯಾಹ್ನ ಬುತ್ತಿ ಕಟ್ಟಿಕೊಂಡು ( ಇಲ್ಲಿ ರಸ್ತೆಗೆ ತಾಗಿದ ಮರಳುಗಾಡಿನಲ್ಲಿ ಕಂಬಳಿ ಹಾಸಿ ಕೂತು ತಿನ್ನುವುದು ಒಂದು ರೀತಿಯ ಮೋಜು, ನಮ್ಮಲ್ಲಿನ ತೋಟದಲ್ಲಿ ಊಟದ ಥರ ) ಹೊರಟೆವು. ನಗರದ ಪರಿಮಿತಿ ಬಿಟ್ಟು ಸ್ವಲ್ಪ ದೂರ ಬರುತ್ತಲೇ ತಪಾಸಣಾ ನಿಲುಗಡೆ. ಸೌದಿ ಅರೇಬಿಯಾದಲ್ಲಿ ಎಲ್ಲಿ ನೋಡಿದರೂ ತಪಾಸಣೆಯೇ. ನಗರದ ಗಡಿ ಬಿಟ್ಟಾಗ, ಬೇರೆ ನಗರ ಪ್ರವೇಶಿಸುವಾಗ, ಇವೆರೆಡರ ನಡುವೆ random ಆಗಿ patrol ಮಾಡುವ ಪೋಲೀಸರ ತಪಾಸಣೆ ಅಲ್ಲಲ್ಲಿ. ೧೯೯೦ ರ ಕೊಲ್ಲಿ ಯುದ್ಧಾ ನಂತರ ಇಲ್ಲಿನ ಅರಸು ಮನೆತನಕ್ಕೆ ಮುನಿದು ಅಲ್ ಕೈದಾ ನಡೆಸಿದ ಕೆಲವು ಭಯೋತ್ಪಾದಕ ಚಟುವಟಿಕೆಗಳ ನಂತರ ಹೆಚ್ಚಿನ ಬಂದೋಬಸ್ತು. ಈಗ ಈ ದೇಶ ತುಂಬಾ ಸುರಕ್ಷಿತ. ಸರಿ ತಪಾಸಣಾ ನಿಲುಗಡೆ ಸಮೀಪಿಸುತ್ತಲೇ ನಾನು ಕಾರನ್ನು ನಿಧಾನಗೊಳಿಸಿ ಕಿಟಕಿಯ ಗಾಜನ್ನು ಇಳಿಸಿದೆ. ನನ್ನತ್ತ ನೋಡಿದ ಸುಮಾರು ಇಪ್ಪತ್ತರ ಚಿಗುರು ಮೀಸೆಯ ಮಂದಸ್ಮಿತ ಪೋಲಿಸ್ ಕೇಳಿದ ನಾನು ಯಾವ ದೇಶದವನೆಂದು. ನಾನು ಭಾರತೀಯ ಎಂದು ಹೇಳುತ್ತಿದ್ದಂತೆಯೇ ಆಹ್, ಹಿಂದಿ ಎನ್ನುತ್ತಾ ಸ್ವಾಗತ (ಮರ್ಹಬ) ಎಂದು ಅರಬ್ಬಿಯಲ್ಲಿ ಹೇಳಿ ನನ್ನ ಗುರುತು ಚೀಟಿ ಮತ್ತು ವಾಹನ ಚಾಲನಾ ಪರವಾನಗಿಯನ್ನು ತೆಗೆಯಲು ಬಿಡದೆ ಮುಂದೆ ಹೋಗಲು ಬಿಟ್ಟ. ಭಾರತೀಯರಿಗೆ ಅರಬರು ಹಿಂದಿ ಎಂದು ಕರೆಯತ್ತಾರೆ. ಹಿಂದ್ ದೇಶದವ ಎಂದರ್ಥ. ಕೆಲವು ಪಂಡಿತರ ಪ್ರಕಾರ ಹಿಂದೂ ಶಬ್ದ ಮೂಲವೂ ಅದೇ. ಅದೇ ಪದದಿಂದಲೇ ಹಿಂದೂ ಎನ್ನುವ ಪದವೂ ಬಂದಿದ್ದು. ಭಾರತೀಯರ ಮೇಲಿನ ಪೋಲಿಸ್ ಪೇದೆಯ ನಂಬುಗೆ ನೋಡಿ ನನಗೆ ಭಾರತೀಯನಾಗಿ ಹುಟ್ಟಿದ್ದು ಧನ್ಯ ಎನ್ನಿಸಿತು. ಈ ಮರ್ಯಾದೆ, ಆತಿಥ್ಯ  ಭಾರತದಲ್ಲೂ ನನಗೆ ಸಿಗಲಿಕ್ಕಿಲ್ಲವೇನೋ? ಭಾರತೀಯರು ತಮ್ಮ ದೇಶದ ಒಳಗೆ ಜಾತಿ ಧರ್ಮ, ಭಾಷೆ ಎಂದು ಹೇಗಾದರೂ ಕಚ್ಚಾಡಿಕೊಳ್ಳಲಿ, ಸಾಗರೋಲ್ಲಂಘನ ಅಥವಾ ಸೀಮೋಲ್ಲಂಘನ ಮಾಡಿದ ಕೂಡಲೇ ನಮ್ಮ identity ಎಲ್ಲಿ ಹೋದರೂ ಒಂದೇ. identical. ಭಾರತೀಯ. Indian. ಪೂರ್ಣ ವಿರಾಮ.

 ಭಾರತೀಯತೆಯೇ ಗುಣ, ಬಾಕಿ ಎಲ್ಲಾ ಗೌಣ.

 ಬೇರಾವುದೇ ದೇಶದವರನ್ನು ಕಂಡರೂ, ವಿಶೇಷವಾಗಿ ಪಾಕಿ, ಆಫ್ಘನ್ ರನ್ನು ಕಂಡರಂತೂ ಪೊಲೀಸರಿಗೆ ದೊಡ್ಡ ಕೆಲಸ. ಬರೀ ಅವರ ಕಾಗದ ಪತ್ರ, ಜಾತಕವಲ್ಲ, ವಾಹನವನ್ನೂ ಕೆಳಗೆ ಮೇಲೆ ಎಂದು ಕನ್ನಡಿ ಹಿಡಿದು ಪರೀಕ್ಷಿಸಿ ಮುಂದೆ ಬಿಡುತ್ತಾರೆ. ಅಂಥ reputation ಅವರದು. ಹೊಡಿ ಬಡಿ ಕಡಿ ಎಂದರೆ ಇವರುಗಳು ಮುಂದೆ. ಹೆಚ್ಚು ಮಾತನಾಡಿದರೆ ಪೇದೆಯನ್ನೂ ತದುಕಲು ಹೆದರುವುದಿಲ್ಲ. ಹಾಗಾಗಿ ಇವರಿಗೆ ತಪಾಸಣಾ ಸ್ಥಳಗಳಲ್ಲಿ ವಿಶೇಷ ಮನ್ನಣೆ ಮತ್ತು ಮಣೆ. ವಿಷದ ಹಲ್ಲು ಇಲ್ಲ ಎಂದು ಚೆನ್ನಾಗಿ ಖಾತ್ರಿ ಪಡಿಸಿಕೊಂಡ ನಂತರವೇ ಹಸಿರು ನಿಶಾನೆ ಮುಂದೆ ಹೋಗಲು. ಆದರೆ ಭಾರತೀಯ ಹಾಗಲ್ಲ, ತಾನಿರುವ ನಾಡಿನ ಕಾನೂನಿಗೆ ತಲೆಬಾಗಿ ಇರುವಷ್ಟು ದಿನ ಯಾವ ತಕರಾರುಗಳಿಗೂ ಹೋಗದೆ ಎಲೆಮರೆಕಾಯಿಯಂತೆ ತನ್ನ ಪಾಡಿಗೆ ದುಡಿದು ದಣಿದು ಬಂದು ರೂಮಿನಲ್ಲಿ ತನ್ನ ಪ್ರೀತಿ ಪಾತ್ರರ ಭಾವ ಚಿತ್ರಗಳನ್ನು ನೋಡುತ್ತಾ ಮುದುಡಿ ಬಿದ್ದಿರುತ್ತಾನೆ ತನ್ನ ನಾಡಿನ ಕನಸನ್ನು ಕಾಣುತ್ತಾ.  

 ಈ ದೇಶದ ಬಿಗಿಯಾದ ಕಾನೂನಿನ ಬಗ್ಗೆ ಒಂದೆರಡು ಮಾತುಗಳನ್ನೂ ಹೇಳುತ್ತೇನೆ, ಮತ್ತು ಇಂಥವನ್ನು ನಾವೂ ಅಳವಡಿಸಿಕೊಂಡರೆ ಮುಂಬೈಯಲ್ಲಿ ಪಾಕಿ ಪಾತಕಿಗಳು ನಡೆಸಿದ ನರಸಂಹಾರದಂಥ ಘಟನೆಗಳು ಮರುಕಳಿಸದಂತೆ ತಡೆಗಟ್ಟಬಹುದು. ಈ ದೇಶಕ್ಕೆ ಉದ್ಯೋಗಕ್ಕಾಗಿ ಬರುವ ಪ್ರತಿಯೊಬ್ಬನೂ ತನ್ನ ಪಾಸ್ ಪೋರ್ಟನ್ನು ತನ್ನ ಯಜಮಾನನಿಗೆ (employer) ಒಪ್ಪಿಸಿ ಅದರ ಬದಲಿಗೆ “ಇಕಾಮ” ಎಂದು ಕರೆಯಲ್ಪಡುವ ಗುರುತಿನ ಕಾರ್ಡನ್ನು ಪಡೆಯಬೇಕು. ಈ ಕಾರ್ಡನ್ನು ತಾನು ತನ್ನ ರೂಮನ್ನು ಬಿಟ್ಟು ಎಲ್ಲೇ ಹೋದರೂ ಜೊತೆಗೇ ಒಯ್ಯಬೇಕು. ಅಲ್ಲಲ್ಲಿ ನಡೆಯುವ random ತಪಾಸಣೆಗಳಲ್ಲಿ ಗುರುತು ಚೀಟಿ ಇಲ್ಲದ್ದನ್ನು ಕಂಡರೆ ಯಾವುದೇ ಸಮಜಾಯಿಷಿಗೂ ಕಿವಿಗೊಡದೆ ಒಳಗೆ ತಳ್ಳುತ್ತಾರೆ. ಚೀಟಿಯನ್ನು ತಂದ ನಂತರವೆ ಬಿಡುಗಡೆ. ಹಜ್ ಸಮಯದಲ್ಲಿ ತಪಾಸಣೆ ಸ್ವಲ್ಪ ಜೋರು. ಯಾತ್ರಾರ್ಥಿಯಾಗಿ ಬಂದು ಮರಳಿ ತಮ್ಮ ದೇಶಕ್ಕೆ ವಾಪಸು ಹೋಗದೆ ದುಡಿಯಲು ಇಲ್ಲೇ ಉಳಿದು ಕೊಳ್ಳುವ ಜನರು ಅಸಂಖ್ಯ. ಅವರಲ್ಲಿ ಬಡ ರಾಷ್ಟ್ರಗಳ ಅರಬರು ಮತ್ತು ಆಫ್ರಿಕನ್ನರು ಹೇರಳ. ಹೀಗೆ ಅಕ್ರಮವಾಗಿ ಉಳಿದು ಕೊಳ್ಳುವ ಯಾವ ದೇಶದವನೇ ಆಗಲಿ, ಮುಸ್ಲಿಮನೇ ಆಗಿರಲಿ ಯಾವ ರಿಯಾಯ್ತಿಯೂ ಇಲ್ಲ. forced deportation.  

 ಮೇಲೆ ಹೇಳಿದ ಮದೀನಾ ಹೋಗುವ ದಾರಿಯಲ್ಲಿನ  ತಪಾಸಣೆ ಮುಗಿದ ಕೂಡಲೇ, ದೇವನೊಬ್ಬನೇ ಆರಾಧನೆಗೆ ಅರ್ಹ ಎಂದು ವಿಶ್ವ ಕೇಳುವಂತೆ ಮೊಳಗಿಸಿ, ಸಮಾನತೆಯ ಕಹಳೆ ಊದಿದ ಮರಳುಗಾಡಿನ ನಿರಕ್ಷರಕುಕ್ಷಿ, ಸಂಪತ್ತು, ಕೀರ್ತಿ ನಶ್ವರ, ದೈವಭಕ್ತಿ, ಸನ್ನಡತೆಯೇ ಶಾಶ್ವತ ಎಂದು ಜಗಕ್ಕೆ ಹೇಳಿ ಕೊಟ್ಟ ಮಹಾ ಪ್ರವಾದಿಯ ಪ್ರೀತಿಯ ಪಟ್ಟಣದ ಕಡೆ ಕಾರು ಸಾಗುತ್ತಿದ್ದಂತೆ ನನಗೊಂದು ಕರೆ ಬಂದಿತು. ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ store assistant ನನ್ನು ಗುರುತು ಚೀಟಿ ಇಲ್ಲದೆ ತನ್ನ ರೂಮಿನ ಹೊರಗಿನ browsing center ಹತ್ತಿರ ಅಡ್ಡಾಡುತ್ತಿದ್ದ ಎಂದು ಪೊಲೀಸರು ಬಂಧಿಸಿದರು ಎಂದು ಸುದ್ದಿ. ಜೆಡ್ಡಾ ಬಿಟ್ಟು ತುಂಬಾ ದೂರ ಬಂದಿದ್ದರಿಂದ ನಾನು ನಮ್ಮ ಮಾನವ ಸಂಪನ್ಮೂಲ ವಿಭಾಗದ ಸೌದಿಗೆ ಫೋನಾಯಿಸಿ ವಿಚಾರಿಸಲು ಹೇಳಿದೆ. ಸೌದಿಯ ವಿವರಣೆಗೂ ಪೊಲೀಸರು ಜಪ್ಪಯ್ಯ ಎನ್ನಲಿಲ್ಲ. ಕೊನೆಗೆ ಬಹಳಷ್ಟು ಮನವಿಯ ನಂತರವೇ ಆತನನ್ನು ಅವರು ಬಿಟ್ಟಿದ್ದು. ಹಿಡಿಯಲ್ಪಟ್ಟವನು ಮುಸ್ಲಿಂ ಮಾತ್ರವಲ್ಲ, ಪೊಲೀಸರು ಮರ್ಯಾದೆ ಕೊಡುವ, ಗೌರವಿಸುವ ವಿಶ್ವಾಸಿಗಳು ಬಿಡುವ  ದೊಡ್ಡ ಗಡ್ದವನ್ನೂ ಹುಲುಸಾಗಿ ಬೆಳೆಸಿದ್ದ. ಊಹೂಂ, ಚೀಟಿ ಇಲ್ಲವೋ ನಡಿ ಮಾವನ ಮನೆಗೆ ಎಂದರು ಪೊಲೀಸರು. ಧರ್ಮ, ಜಾತಿ ಎಲ್ಲಾ ಆಮೇಲೆ. ಈ ಗುರುತಿನ ಚೀಟಿಯ ನಿಯಮ ಬರೀ ವಿದೇಶೀಯರಿಗೆ ಮಾತ್ರವಲ್ಲ, ಸೌದಿ ಗಳೂ “ಬುತಾಕ” ಅಥವಾ “ಹವ್ವಿಯ್ಯ” ಎನ್ನುವ ಕಾರ್ಡನ್ನು ಹೊಂದಿರಲೇಬೇಕು. ಬ್ಯಾಂಕಿನಲ್ಲಿ ಹಣ ಪಾವತಿಸುವಾಗಲಾಗಲಿ, ಬೇರೆ ಯಾವುದೇ ಕಾರ್ಯಗಳಿಗೂ ಮೊದಲಿಗೆ ಕಾರ್ಡ್ ನ ದರ್ಶನ ಆಗಬೇಕು, ಇಲ್ಲದಿದ್ದರೆ ಕಾನೂನಿನ ದುರ್ದರ್ಶನ. ನಾನು ಮನೆಯಲ್ಲಿ ಮರೆತೆ, ಅತ್ತೆ ಮನೆಯಲ್ಲಿ ಬಿಟ್ಟು ಬಂದೆ ಹಾಗೆ ಹೀಗೆ ಎಂದು ಕತೆಗಳನ್ನ ನೇಯ್ದರೆ ಅವು ನಮ್ಮ ಕಿವಿಗಳಿ ಗೇ ಇಂಪು. ಕೇಳಿಸಿಕೊಳ್ಳುವವನ ಕಿವಿಗಲ್ಲ. ಎಷ್ಟೋ ಜನ ಸೌದಿಗಳು ಗೊಗರೆಯುವುದನ್ನು  ನೋಡಿದ್ದೇನೆ, ನಾನು ಕಾರ್ಡನ್ನು ಮರೆತು ಬಂದೆ, ನನ್ನ ಕೆಲಸ ಮಾಡಿ ಕೊಡು ಎಂದು. ಕೇಳುವವರು ಬೇಕಲ್ಲ.  ನಮ್ಮ ದೇಶದಲ್ಲೂ ಇಂಥ ಒಂದು ಕಟ್ಟುನಿಟ್ಟಿನ ವ್ಯವಸ್ಥೆ ಇರಬೇಕು. ಎಷ್ಟೇ ಹಣ ಖರ್ಚಾದರೂ ಭಾರತದ ಪ್ರತೀ ಪೌರನಿಗೆ ಒಂದು ಗುರುತು ಚೀಟಿಯನ್ನು ಹೊಂದಿಸಲೇ ಬೇಕು.

 ಅಕ್ರಮವಾಗಿ ನಮ್ಮ ಗಡಿ ಹಾರಿ ಬರುವ ನೇಪಾಳಿ ಮತ್ತು ಇತರೆ ದೇಶಗಳ ಜನರನ್ನು ತಡೆಯಲು ಇದೇ ಮಾದರಿಯ ಕಾರ್ಡು ಮತ್ತು ತಪಾಸಣೆ ನಮಗಿರಬೇಕು. ಅದಕ್ಕೆ ತಗಲುವ ಖರ್ಚು ದುಂದು ಖರ್ಚಲ್ಲ.  ದೇಶದ ಗಡಿ, ಜನ ಸುರಕ್ಷಿತವಾಗಿರಬೇಕೆಂದರೆ ನಾವು ನಿಷ್ಟುರರಾಗಿರಬೇಕು. ನಮ್ಮ ಒಳ್ಳೆಯತನವನ್ನು, ಹೃದಯ ವೈಶಾಲ್ಯತೆಯನ್ನು  ದೇಶದ ಒಳಗೆ ನೆಲೆಸಿ ಕೊಂಡಿರುವ ಸಹ ಭಾರತೀಯರಿಗೆ ಮಾತ್ರ ಮೀಸಲಿಟ್ಟರೆ ಸಾಕು.