ದ್ವೇಷದ ಗಂಟನ್ನು ಬಂಗಾಳ ಕೊಲ್ಲಿಗೆ ಎಸೆದು…

ಮತ್ತೊಂದು ಸುತ್ತಿನ ಚುನಾವಣೆ, ಮಗುದೊಂದು ಸುತ್ತಿನ ಅಚ್ಚರಿ. ಮಹಾರಾಷ್ಟ್ರ, ಅರುಣಾಚಲ ಪ್ರದೇಶ ದಲ್ಲಿ ಕಾಂಗ್ರೆಸ್ಸಿಗೆ ಗೆಲುವು ಮತ್ತು ಹರಿಯಾಣದಲ್ಲಿ ಮುನ್ನಡೆ. ಭಾಜಪಕ್ಕೆ ಮತ್ತದೇ ಪೆಚ್ಚು ಮೋರೆ, ಇಲೆಕ್ಟ್ರಾನಿಕ್ ಮತ ಎಣಿಕೆಯ ಯಂತ್ರಗಳ ಮೇಲೆ ತಗಾದೆ, ಆತ್ಮಾವಲೋಕನ. ಒಂದೇ ಸಮನೆ ಚುನಾವಣೆಗಳನ್ನು ಗೆಲ್ಲುತ್ತಿರುವ ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಮಾರಕವಾಗಬಹುದೇ, ಇದು ಯಕ್ಷ ಪ್ರಶ್ನೆ. ಜನಾದೇಶದ ಮೇಲೆ ಈ ರೀತಿಯ ಹಿಡಿತ ಬಹು ಪಕ್ಷ ರಾಜಕಾರಣಕ್ಕೆ ಮಾರಕವಾಗಬಹುದೇ? ಒಂದೊಮ್ಮೆ ವೆಸ್ಟ್ ಇಂಡೀಸಿನ ಮಾರಕ ಬೌಲಿಂಗಿಗೆ ನಮ್ಮ ವಿಕೆಟುಗಳು ತಪ ತಪನೆ ಉದುರುತ್ತಿದ್ದ ಹಾಗೆ ಭಾಜಪದ ಕೈಗಳಿಂದ ಒಂದೊಂದೇ ರಾಜ್ಯಗಳು ತಪ್ಪಿ ಭಾರತೀಯ ರಾಜಕಾರಣದಿಂದ ಭಾಜಪ ಜಪ್ತಿ ಆಗಬಹುದೇ? ಕಾಂಗ್ರೆಸ್ಸಿನ ಮೇಲೆ ನನಗೆ ವಿಶೇಷವಾದ ಒಲವೇನೂ ಇಲ್ಲದಿದ್ದರೂ ( ಜಸ್ವಂತ್ ಸಿಂಗರ india, pakistan, partition ಪುಸ್ತಕ ಓದಿದ ನಂತರ ) ಭಾಜಪದ ರಾಜನೀತಿ ರಾಜ ಧರ್ಮ ಪಾಲಿಸುವುದರಲ್ಲಿ ತೋರುವ ಅಸಡ್ಡೆ ಆ ಪಕ್ಷ ಹಿನ್ನಡೆ ಅನುಭವಿಸಿದಾಗ ನನ್ನಲ್ಲಿ ಒಂದು ರೀತಿಯ ಪುಳಕ ಎಂದರೂ ಸರಿಯೇ. ದ್ವೇಷ, ರೋಷ, ಹಗೆತನ, ಮತ್ಸರಗಳೇ ಬಂಡವಾಳ ವಾಗಿಟ್ಟುಕೊಂಡು ಭಾರತೀಯ ಮತದಾರನಿಗೆ ಎಷ್ಟು ಸಮಯ ಮೂರ್ಖರನ್ನಾಗಿಸಲು ಸಾಧ್ಯ ಎಂದು ಚಿಂತನ ಭೈಟಕ್ ನಲ್ಲಿ ಚರ್ಚಿಸಬೇಕು. ನಮ್ಮ ಮತದಾರ ಬಡವನಿರಬಹುದು, ನಿರಕ್ಷರಕುಕ್ಷಿ ಇರಬಹುದು, ಹೆಂಡ ಸೀರೆ ರವಿಕೆಗೆ ಮಾರು ಹೋಗಬಹುದು. ಆದರೆ ತನಗೆ ಬೇಕಾದ್ದನ್ನು ಪಡೆದು ಬೇಕಾದ ಪಕ್ಷಕ್ಕೆ ಮಾತ್ರ ಮತ ಕೊಡುವನು. ಇಲ್ಲಿ ನಾವು ethics ನ ಪಾಠ ಹೇಳಿ ಪ್ರಯೋಜನವಿಲ್ಲ. ಎಥಿಕ್ಸ್ ಕುಡಿಕೆ ತುಂಬಾ ಹಣ ಇಟ್ಟುಕೊಂಡು ಕೆಲಸವಿಲ್ಲದೆ ನಡೆಯುವವರಿಗೆ ಮಾತ್ರ. ಯಾವ ಸಮಯ ಯಾವ ರೀತಿ ಮತ ಚಲಾಯಿಸಬೇಕು ಎನ್ನುವ ಕಲೆಯನ್ನು ಮನೋಹರವಾಗಿ ರೂಢಿಸಿಕೊಂಡಿರುವ ನಮ್ಮ ಮತದಾರನ ಮೇಲೆಯೇ ಒಂದು ದೊಡ್ಡ ಗ್ರಂಥ ಬರೆಯಬಹುದು. ಸೋತು ಸೋತು ಕಳೆಯಲು ಬೇಕಷ್ಟು ಸಮಯ ಹೊಂದಿರುವ ಅಡ್ವಾಣಿ ಮತ್ತು ಗೆಳೆಯರು ಈ ಕೆಲಸ ಆರಂಭಿಸಿ ಒಂದಿಷ್ಟು ಪುಡಿಗಾಸನ್ನಾದರೂ ಸಂಪಾದಿಸಬಹುದು. ಭಾರತೀಯ ರಾಜಕಾರಣಕ್ಕೆ ಒಂದು ಹೊಸ ರೂಪ ಕೊಟ್ಟು ಕಾಂಗ್ರೆಸ್ಸಿನ victory march ಗೆ ಬ್ರೇಕ್ ಹಾಕಲು ಭಾಜಪ ಶ್ರಮಿಸಲಿ. ದ್ವೇಷದ ಗಂಟನ್ನು ಬಂಗಾಳ ಕೊಲ್ಲಿಗೆ ಎಸೆದು ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಮಾನವಾಗಿ, ಸಮಾನತೆಯಿಂದ ಬದುಕುವ ಹಕ್ಕಿನ ಸಾಮಾನ್ಯ ಜ್ಞಾನವನ್ನು ಮನಗಂಡು, ಕಾರ್ಯರೂಪಕ್ಕೆ ತರುವಲ್ಲಿ ಭಾಜಪ ಶ್ರಮಿಸಿದರೆ ಚುನಾವಣೆ ಗೆಲ್ಲಲು ಕಾಲ ಇನ್ನೂ ಮಿಂಚಿಲ್ಲ ಎನ್ನಬಹುದು.