ಎಲ್ಲದಕ್ಕೂ ಧೋನಿಯೇ ಕಾರಣ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟಿನಲ್ಲಿ ಭಾರತ ಮತ್ತೊಮ್ಮೆ ಸೋತಿತು. ಮೊದಲ ಟೆಸ್ಟಿನ ಪಂಗ ನಾಮದ ನಂತರ ಒಂದು ಒಳ್ಳೆಯ ಪ್ರದರ್ಶನ ನೀಡಿ ತಿರುಗೇಟು ನೀಡಬಹುದು ಎಂದು ಕಾತುರದಿಂದ ನಿರೀಕ್ಷಿಸಿದ್ದ ನಮಗೆ ದಕ್ಕಿದ್ದು ಮತ್ತೊಂದು ಲಾತಾ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಪಂದ್ಯದ ಉಳಿದೆಲ್ಲಾ ಸೆಷನ್ಸ್ ಗಳಲ್ಲೂ ಮಿಂಚಿದ್ದು ಬಿಳಿಯರೇ. ಇಂಗ್ಲೆಂಡ್ ತಂಡ ಒಂದು ಪರಿಪೂರ್ಣ ತಂಡವಾಗಿ, ಪರಿಪಕ್ವತೆ ಯಿಂದ ಕ್ರಿಕೆಟ್ ಆಡುತ್ತಿದೆ ಎಂದರೆ ಯಾರೂ ಅಲ್ಲಗಳೆಯಲಾರರು. ಸರಿ ಸೋತಿದ್ದು ಒಂದು ಒಳ್ಳೆಯ ತಂಡದೆದುರು. ಅದರಲ್ಲೇನು ಅವಮಾನ? ಮುಜುಗುರ? ಹಾಗಂತ ನಾನೂ, ನೀವೂ ಹೇಳಬಹುದು,TRP ಸಲುವಾಗೇ ಬದುಕುವ, TRP ಏರಲು ಯಾವ ಪಾತಾಳಕ್ಕೂ ಇಳಿಯಲು ಹೇಸದ ಮಾಧ್ಯಮಕ್ಕೆ ಆಟದ ಗಮ್ಮತ್ತು, ಅದರ ಕೌಶಲ್ಯ, ವೃತ್ತಿ ಪರಿಣತೆ ಎಲ್ಲಾ ಅರ್ಥವಾಗಲು ಸಾಧ್ಯವೇ? ಸೋತು ತಂಡ ಪೆವಿಲಿಯನ್ ಸೇರಿಕೊಳ್ಳುವ ಮುನ್ನವೇ ಶುರುವಾಯಿತು ಧೋನಿಯ ಮತ್ತು ತಂಡದ ಅಂತ್ಯ ಸಂಸ್ಕಾರ. ಸತ್ತ ಹೆಣದ ಮುಂದೆ ಲಬೋ ಲಬೋ ಎಂದು ಎದೆ ಬಡಿದು ಕೊಳ್ಳುವ ರೀತಿಯಲ್ಲಿ ಆಡಿದವು ಮಾಧ್ಯಮಗಳು. ಸ್ಟಾರ್ ಟೀವಿ ಕತೆ ಹೇಳಬೇಕಿಲ್ಲ. ‘ಧೋನಿ ಕಾರಣ ಈ ಸೋಲಿಗೆ’, ‘ಧೋನಿ ನಾಯಕತ್ವದಲ್ಲಿ ಸೋಲು’, ‘ಧೋನಿ ನಾಯಕತ್ವದಲ್ಲಿ ಮೊಟ್ಟ ಮೊದಲ, ಅತಿದೊಡ್ಡ ಸೋಲು’, ಧೋನಿ… ಧೋನಿ… ಧೋನಿ… ಎಂದು ಅರಚಲು ಶುರು ಮಾಡಿತು. ಯಾಕೆ ತಂಡದಲ್ಲಿ ಒಂದೇ ಧೋನಿಯೇ ಇರೋದು? ಇನ್ನೂ ದೊಡ್ಡ ದೊಡ್ಡ ‘ದೋಣಿ’ ಗಳಿದ್ದವಲ್ಲ? ಅವಕ್ಕೆಲ್ಲಾ ಏನಾಗಿ ಬಿಟ್ಟಿತು? ಹನ್ನೊಂದು ದೋಣಿ ಗಳಲ್ಲಿ ಒಂದು ಕೆಟ್ಟಿತು, ಬಾಕಿ ಹತ್ತು?

ಇಂಗ್ಲೆಂಡ್ ನ ಬೌಲಿಂಗ್ ಪ್ರಾವೀಣ್ಯತೆ ನೋಡಿದವರಿಗೆ ಅರ್ಥವಾಗುತ್ತೆ. ಬಾಕಿ ಉಳಿದ ಎರಡು ಟೆಸ್ಟ್ ಗಳಲ್ಲಿ ಸೋಲದೆ ಡ್ರಾ ಮಾಡಿ ಕೊಂಡು ಬಂದರೂ ಅದು ದೊಡ್ಡ ಸಾಹಸವೇ ನಮ್ಮ ಪಾಲಿಗೆ. ಅಷ್ಟು ಚೊಕ್ಕ ಬೌಲಿಂಗ್ ಪ್ರದರ್ಶನ. ಇಂಗ್ಲೆಂಡ್ ಎಸೆದ ಶಾರ್ಟ್ ಪಿಚ್ ಬಾಲ್ ಗಳನ್ನು ನಾವು ಆಡಿದ ರೀತಿ ನೋಡಿದವರಿಗೆ ತಿಳಿಯುತ್ತೆ ನಮ್ಮ ತಯಾರಿ ಬಗ್ಗೆ, ನಮ್ಮ ಟೆಕ್ನಿಕ್ ಬಗ್ಗೆ. ಎರಡನೇ ಇನ್ನಿಂಗ್ಸ್ ನಲ್ಲಿ ಶಾರ್ಟ್ ಪಿಚ್ ಬಾಲ್ ಒಂದನ್ನು ಆಡಲು ಹೋಗಿ ಎಲ್ಲಿಗೋ ಬ್ಯಾಟ್ ಬೀಸಿದ ಯುವರಾಜ್ ಸಿಂಗ್, ತಾನು ಹೊಡೆದ ಬಾಲ್ ಎಲ್ಲಿಗೋ ಹೋಗಿ ಫೀಲ್ಡರ್ ಕೈ ಸೇರಿದ್ದು ಬೆಪ್ಪನಂತೆ ನೋಡಿದ ದೃಶ್ಯ ಅವಿಸ್ಮರಣೀಯ. ಔಟ್ ಆಗಿ ಆತ ಕ್ರೀಸ್ ಬಿಟ್ಟು ಹೋಗುವಾಗ ಮಾಡಿದ ಮುಸುಡಿಯ ದೃಶ್ಯ (ತರಡು ಬೀಜ ಕಳಕೊಂಡಾಗ ಆಗುವ ರೀತಿ) ಬಹಳ ಕಾಲ ನಮ್ಮ ಮನದಲ್ಲಿ ನಿಲ್ಲುತ್ತದೆ.           

ವೆಸ್ಟ್ ಇಂಡೀಸ್ ಪದ್ಯವೊಂದರಲ್ಲಿ ಗೆದ್ದ ನಂತರ ಅಂಪೈರಿಂಗ್ ಚೆನ್ನಾಗಿದ್ದಿದ್ದರೆ ಇನ್ನೂ ಬೇಗೆ ಗೆದ್ದು ಪೆವಿಲಿಯನ್ ಗೆ ತೆರಳಿ ವಿಶ್ರಮಿಸಬಹುದಿತ್ತು ಎಂದು ಕೊರಗಿದ್ದ ಧೋನಿಗೆ ಎರಡನೇ ಟೆಸ್ಟನ್ನು ಕೇವಲ ಮೂರೂವರೆ ದಿನಗಳಲ್ಲಿ ಮುಗಿಸಿ ಸುದೀರ್ಘ ವಿಶ್ರಮ ಇಂಗ್ಲೆಂಡ್ ಕೊಟ್ಟಿದ್ದು ಈ ಪಂದ್ಯದ ವೈಶಿಷ್ಟ್ಯ. ಈ ವಿಶ್ರಮ ಧೋನಿ ಪಾಲಿಗೆ ಸ್ವಯಂ ನಿವೃತ್ತಿ ತೆರನಾದ ವಿಶ್ರಾಮವಾಗದಿರಲಿ ಎಂದು ಹಾರೈಸುತ್ತಾ..

ಕೈ ಕೊಟ್ಟ ದೇವರು

ಅರ್ಜೆಂಟೀನ ವಿಶ್ವಕಪ್ ನಿಂದ ಹೊರಕ್ಕೆ, ಅದೂ ಹೀನಾಯ ಸೋಲಿನೊಂದಿಗೆ. ೪-೦ ಎಂದರೆ ಸಾಧಾರಣ ಸೋಲಲ್ಲ ಫುಟ್ ಬಾಲ್ ಕ್ರೀಡೆಯಲ್ಲಿ. ತಮ್ಮ ಆಟವನ್ನು ಅತ್ಯಂತ ಸಾಂಪ್ರದಾಯಿಕ ಮತ್ತು ಕಾಪಿ ಬುಕ್ ಶೈಲಿಯಲ್ಲಿ ಅರ್ಜೆಂಟಿನ ತಂಡ ತಮ್ಮ brute muscle power ತೋರಿಸಿ ಒರಟಾಗಿ ಆಡುವ ಜರ್ಮನಿ ಎದುರು ಯಾವುದೇ ಉತ್ತರವಿಲ್ಲದೆ ಬರಿಗೈಲಿ ಮರಳ ಬೇಕಾಯಿತು ಡ್ರೆಸ್ಸಿಂಗ್ ಕೋಣೆಗೆ, ತದನಂತರ ತಮ್ಮ ದೇಶಕ್ಕೆ. ೧೯೮೬ ವಿಶ್ವಕಪ್ ನಲ್ಲಿ ಸಂಭವಿಸಿದ ಹಾಗೆ ಈ ಸಲ ದೇವರು ಬರಲಿಲ್ಲ ಸಹಾಯಕ್ಕೆ ಅರ್ಜೆಂಟಿನ ತಂಡವನ್ನು ಜರ್ಮನಿ ನುಂಗುವಾಗ. ವಿಶ್ವಕಪ್ ೧೯೮೬, ಮೆಕ್ಸಿಕೋ: ಜಗತ್ತಿನ ಬಲಿಷ್ಠ ಫುಟ್ಬಾಲ್ ಆಡುವ ದೇಶಗಳು ಬಂದಿಳಿದವು ಮೆಕ್ಸಿಕೋ ದೇಶಕ್ಕೆ ವಿಶ್ವಕಪ್ ತಮ್ಮದಾಗಿಸಿಕೊಳ್ಳಲು. ಆದರೆ ಬೇರೆಲ್ಲಾ ಪಂದ್ಯಗಳಿಗಿಂತ ಖ್ಯಾತಿ ಪಡೆದ ಪಂದ್ಯ ಇಂಗ್ಲೆಂಡ್, ಅರ್ಜೆಂಟಿನ ನಡುವಿನದು. ಕ್ವಾರ್ಟರ್ ಫೈನಲ್ ಎಂದರೆ ಫೈನಲ್ ನಿಂದ ಕೇವಲ ಎರಡು ಗಜ ದೂರ. ಎದುರಾಲಿಯನ್ನು ಮಣಿಸಿ ಸೆಮಿ ತಲುಪಲು ಆತುರ, ಉತ್ಸಾಹ ಈ ಎರಡು ತಂಗಳಲ್ಲಿ. ಅತ್ಯಂತ ಪ್ರತಿಭಾವಂತ ತಂಡಗಳು ಬೇರೆ, ಇನ್ನು ಸ್ಪರ್ದೆಯ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ತಮ್ಮ ಕ್ರೀಡಾ ಪ್ರತಿಭೆಯ ನ್ನು ವಿಶ್ವದ ಪ್ರದರ್ಶನಕ್ಕಿಟ್ಟ ಈ ಎರಡೂ ತಂಡಗಳು ಹೇಗೇ ಸೆಣಸಿದರೂ ಪೂರ್ವಾರ್ಧದ ಸ್ಕೋರು ಎಲ್ಲಾ ಸೊನ್ನೆ. ಪಾನೀಯದ ನಂತರ ಹೊಸ ರಣ ನೀತಿಯೊಂದಿಗೆ ಮೈದಾನ ಪ್ರವೆಶಿಸಿದ ತಂಡಗಳು ಮೇಲುಗೈ ಸಾಧಿಸುವತ್ತ ತಮ್ಮ ಗಮನ ಕೇಂದ್ರೀಕರಿಸಿದವು. ಈಗ ಬಂತು ಉತ್ತರಾರ್ಧದ ಆರನೇ ನಿಮಿಷದಲ್ಲಿ ವಿಶ್ವ ದಂಗಾದ ಒಂದು ದೃಶ್ಯ. ಗೋಲ್ ಪೋಸ್ಟ್ ನ ಹತ್ತಿರ ಚೆಂಡನ್ನು ತಂದ ಮೆರಡೋನ ಮತ್ತು ವಲ್ದಾನೋ ಇಂಗ್ಲೆಂಡಿನ ರಕ್ಷಣೆಯನ್ನು ಭೇಧಿಸಲು ಹೆಣಗಿದರು. ಇಂಗ್ಲೆಂಡಿನ ರಕ್ಷಣಾ ಆಟಗಾರ ಸ್ಟೀವ್ ಹಾಡ್ಜ್ ಚೆಂಡನ್ನು ತನ್ನ ನಿಯಂತ್ರಣಕ್ಕೆ ತರುವ ಗಡಿಬಿಡಿಯಲ್ಲಿ ಒಂದು ರೀತಿಯ ಅನಿಶ್ಚಿತ ಸ್ಥಿತಿ, ಈ ವೇಳೆಗೆ ನುಗ್ಗಿದ ಮೆರಡೋನ ಚೆಂಡನ್ನು ತನ್ನ ನಿಯಂತ್ರಣಕ್ಕೆ ತೆಗೆದು ಕೊಳ್ಳಲು ಶ್ರಮ ಪಡುತ್ತಿದ್ದಂತೆ ಹಾಡ್ಜ್ ಸಹ ಅಲ್ಲಿಗೆ ಬಂದು ಮೆರಡೋನ ರನ್ನು ತಡೆಯುವಷ್ಟರಲ್ಲಿ ಮೆರಡೋನ ತಲೆಯಿಂದ ಚಿಮ್ಮಿದ ಚೆಂಡು ಗೋಲ್ ಪೋಸ್ಟಿನೊಳಕ್ಕೆ ಸೇರಿಕೊಂಡಿತು. ಆದರೆ ನಿಜವಾಗಿಯೂ ಚೆಂಡು ಮೆರಡೋನ ರ ತಲೆಯ ಹೊಡೆತದಿಂದ ಮಾತ್ರವಲ್ಲ ಅವರ ಎಡಗೈಯ ಸಹಾಯದಿಂದ ಗೋಲ್ ಪೋಸ್ಟಿಗೆ ಸೇರಿಕೊಂಡಿತು. ಟುನೀಸಿಯ ದೇಶದ ರೆಫೆರಿ “ಅಲಿ ಬಿನ್ ನಾಸರ್” ಈ ವಿವಾದಾತ್ಮಕ ಗೋಲನ್ನು ಸಕ್ರಮ ಎಂದು ಘೋಷಿಸಿದರು. ಈ ಚಮತ್ಕಾರದ ಗೋಲು ಇಂಗ್ಲೆಂಡ್ ತಂಡಕ್ಕೆ “ಗೋಳಾಗಿ” ಪರಿಣಮಿಸಿತು. ಪಂದ್ಯ ಗೆದ್ದ ನಂತರ ಮೆರಡೋನ ಪತ್ರಿಕಾ ಗೋಷ್ಠಿಯಲ್ಲಿ ಗೋಲಿನ ಬಗ್ಗೆ ವಿವರಿಸುತ್ತಾ ಈ ಚಮತ್ಕಾರದ ಗೋಲ್ ನಲ್ಲಿ “ದೇವರ ಕೈ” ಇತ್ತು ಎಂದು. ಸ್ವಲ್ಪ ನನ್ನ ತಲೆಯಿಂದಲೂ, ಸ್ವಲ್ಪ ದೇವರ ಕೈ ಯಿಂದಲೂ ಬಂದ ಗೋಲಿದು ಎಂದು ವರ್ಣಿಸಿದ ಮೆರಡೋನ “hand of god” ಅಪರೂಪದ ಪದ ಪ್ರಯೋಗವನ್ನು ಫುಟ್ ಬಾಲ್ ಕ್ರೀಡೆಗೆ ನೀಡಿದರು. ಆದರೆ ಅಂದು ೧೯೮೬ ರಲ್ಲಿ ಅರ್ಜೆಂಟಿನ ದ ನೆರವಿಗೆ ಬಂದ ದೇವರು ೨೦೧೦ ರಲ್ಲಿ ಬರಲಿಲ್ಲ. ಒಂದು ಸಲ ಬಂದು ತನ್ನ ಕೀರ್ತಿ ಹಾಳಾಗಿದ್ದು ಸಾಕು ಎಂದೆನ್ನಿಸಿರಬೇಕು ಆ ಪರಮಾತ್ಮನಿಗೆ.