ಮಾಧ್ಯಮಗಳು ನಂಬಲನರ್ಹ

ಚಾರ್ಲ್ಸ್ ಶೋಭರಾಜ್ ಅಂತಾರಾಷ್ಟ್ರೀಯ ಕುಖ್ಯಾತಿಯ ಕ್ರಿಮಿನಲ್. ಸರಣಿ ಕೊಲೆಗಾರ, serial killer. ಹಲವಾರು ಹೆಣ್ಣು ಮಕ್ಕಳನ್ನು ಕೊಲೆಗೈದಿದ್ದ ಈತನನ್ನು ಬಿಕಿನಿ ಕಿಲ್ಲರ್ ಎಂದೂ ಕರೆಯುತ್ತಾರೆ. ಈತ ಪೂಲೀಸರಿಗೆ ಲಂಚ್ ಕೊಟ್ಟೋ ಚಳ್ಳೆ ಹಣ್ಣು ತಿನ್ನಿಸಿಯೋ ತಪ್ಪಿಸಿಕೊಳ್ಳುತ್ತಿದ್ದ. ಒಮ್ಮೆ ಯಾರೋ ಒಬ್ಬ ಭಾರತೀಯ ಪೊಲೀಸರು ಇವನ ಹಿಂದೆ ಬಿದ್ದಿದ್ದಾರೆ ಎಂದು  ಪ್ರಸ್ತಾಪಿಸಿದಾಗ ಶೋಭ ರಾಜ್, ಓಹ್, ಭಾರತೀಯ ಪೊಲೀಸರು ೫ ರೂಪಾಯಿ ಪೊಲೀಸರು, ಐದು ರೂಪಾಯಿಯ ನೋಟನ್ನು ಕೊಟ್ಟರೆ ಬಿಟ್ಟು ಬಿಡುತ್ತಾರೆ ಎಂದು ಗಹ ಗಹಿಸಿ ನಕ್ಕಿದ್ದ. ಕೊನೆಗೆ ಇವನಿಗೆ ಮುಳುವಾಗಿದ್ದು ಒಬ್ಬ ಒಬ್ಬ ದಕ್ಷ ಭಾರತೀಯ ಪೊಲೀಸ್ ಅಧಿಕಾರಿ. ಚಾಣಕ್ಷ  ಪೊಲೀಸ್ ಅಧಿಕಾರಿ  “ಮಧುಕರ್ ಜೆನ್ಡೇ” ೧೯೯೬ ರಲ್ಲಿ ಅತ್ಯದ್ಭುತವಾದ ಕಾರ್ಯಾಚರಣೆ ಯೊಂದರಲ್ಲಿ ಚಾರ್ಲ್ಸ್ ನನ್ನು ಅರೆಸ್ಟ್ ಮಾಡಿದ್ದರು.

ಇವನ ದಸ್ತಗಿರಿಯೊಂದಿಗೆ ಭಾರತೀಯ ಪೊಲೀಸರು ಐದು ರೂಪಾಯಿ ಪೊಲೀಸರಲ್ಲ ಎಂದು ಸುಂದರವಾಗಿ ಸಾಬೀತಾಯಿತು. ಪೊಲೀಸ್ ಇಲಾಖೆಯ ವೃತ್ತಿಪರತೆ ವಿಜ್ರಂಭಿಸಿತು.

ವಿಜಯ್ ಮಲ್ಯ ರವರ ಕಿಂಗ್ ಫಿಶರ್ ಆರ್ಥಿಕ ಸಂಕಟ ದಲ್ಲಿರುವ ವೈಮಾನಿಕ  ಸಂಸ್ಥೆ. ಉತ್ತರ ಭಾರತದ ಮೋಸಗಾರ, ವಂಚಕ ಉದ್ಯಮಿಗಳಲ್ಲಿ ರಕ್ತಗತವಾಗಿರುವ ಕಪಟತನ, ಸರಕಾರೀ  ವ್ಯವಸ್ಥೆಯನ್ನ ಸಲೀಸಾಗಿ ಜೇಬಿಗಿಳಿಸಿ ಕೊಳ್ಳುವ ಕಂತ್ರಿ ಗುಣ ಈ ಕನ್ನಡಿಗ ಉದ್ಯಮಿಯಲ್ಲಿ ಇಲ್ಲ. ಇವರ ಹಣಕಾಸು ತೊಂದರೆಗಳಿಗೆ ರೆಕ್ಕೆ ಪುಕ್ಕ ಕೊಟ್ಟಿದ್ದು ಮಾತ್ರವಲ್ಲದೆ ವರ್ಣರಂಜಿತವಾಗಿ ಪ್ರಕಟಿಸಿ ತೀಟೆ ತೀರಿಸಿ ಕೊಂಡವು ಪತ್ರಿಕೆಗಳು. ಬಹುಶಃ ಕೆಲವು ಉದ್ಯಮಿಗಳ ಹಾಗೆ ದಕ್ಷಿಣೆ ಬಿಸಾಕುವ ಗುಣ ಮಲ್ಯರಲ್ಲಿಲ್ಲದ್ದರಿಂದಲೋ ಏನೋ ಇವರ ಬೆನ್ನು ಹತ್ತಿದವು. ತಮ್ಮನ್ನು ಗುರಿಯಾಗಿಸಿ ನಡೆಯುತ್ತಿರವ witch hunting ಗೆ ಬೇಸತ್ತ ಮಲ್ಯ ಕೊನೆಗೆ ಉದುರಿಸಿದರು ನನಗೂ ನಿಮಗೂ ತಿಳಿದಿದ್ದ ನುಡಿ ಮುತ್ತುಗಳನ್ನು; indian media has no credibility. ಭಾರತೀಯ ಮಾಧ್ಯಮಗಳು “ನಂಬಲರ್ಹ ಎಂದು.  ನಂಬಲನರ್ಹ ಅಥವಾ ಯೋಗ್ಯತೆಗೆಟ್ಟ  ಮಾಧ್ಯಮಗಳು ಎಂದರೂ ಸರಿಯೇ.

ಪತ್ರಕರ್ತರ ಮೇಲಿನ ವಿಶ್ವಾಸ ಕ್ರಮೇಣ ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ೧೯೮೦ ರ ಕ್ಕಿಂತ ಮೊದಲಿದ್ದ  ಪತ್ರಕರ್ತರ ಮೇಲಿನ ವಿಶ್ವಾಸ ಈಗ ಇಲ್ಲ. ಈಗ ಮಾಧ್ಯಮಗಳು ಸರಕಾರೀ ಯಂತ್ರಗಳ, ರಾಜಕಾರಣಿಗಳ ‘ಸ್ಟೆನೋ ಗ್ರಾಫರ್’ ಗಳಾಗಿ ಮಾರ್ಪಟ್ಟಿದ್ದಾರೆ. ರಾಜಕಾರಣಿ ಅಥವಾ ಅಧಿಕಾರಿಗಳು ಹೇಳಿದ್ದು ಸರಿಯೇ ಎಂದು ತನಿಖೆ ನಡೆಸಿ ವರದಿ ಮಾಡುವ ವ್ಯವಧಾನ, ವೃತ್ತಿಪರತೆ  ಇವರಿಗಿಲ್ಲ. ಯಾವ ಆಮಿಷಕ್ಕಾಗಿ ಪತ್ರಕರ್ತನಿಗಿರಬೇಕಾದ ಗುಣಗಳನ್ನ ಇವರು ಬಲಿ ಕೊಟ್ಟಿದ್ದಾರೆ ಎನ್ನುವುದು ಜನರಿಗೆ ಗೊತ್ತಿಲ್ಲ. ಕೆಲವು ಪತ್ರಕರ್ತರು ತಮ್ಮ ರಾಜಕೀಯ ಅಜೆಂಡಾ ಗಳಿಗೆ ಹೊಂದುವ ವರದಿ ಪ್ರಕಟಿಸಿ ಪತ್ರಕರ್ತ ಹುದ್ದೆಗೆ ಕಳಂಕ ತರುವ, ಆ ಹುದ್ದೆಯ ಘನತೆ ಕುಗ್ಗಿಸುವ ಕೆಲಸ ಮಾಡುತ್ತಿರುವುದೂ ಸಹ ಜನ ಗಮನಿಸುತ್ತಿದ್ದಾರೆ.      ಒಂದು ಪತ್ರಿಕೆ ಬರೆದ ವರದಿಗಳ ಕಾರಣ ಕರ್ನಾಟಕದ ಒಂದು ಪಟ್ಟಣ  ಸಂಪೂರ್ಣ ಬಂದ್ ಅನ್ನೂ ಆಚರಿಸಿತಂತೆ. ಹಿಂದೆಂದೂ  ಇದನ್ನು ಹೋಲುವ ಘಟನೆ ಕರ್ನಾಟಕದಲ್ಲಿ ನಡೆದ ಬಗ್ಗೆ ನನಗೆ ನೆನಪಿಲ್ಲ. unprecedented ಎನ್ನಬಹುದುನಮ್ಮ ನಾಡಿನಲ್ಲಿ ಪತ್ರಿಕೋದ್ಯಮ ಈ ಮಟ್ಟಕ್ಕೆ ಬಂದು ನಿಂತಿದೆ ಇಂದು.

ಒಬ್ಬ ಪತ್ರಕರ್ತ ಎನ್ನಿಸಿ ಕೊಳ್ಳಲು ನಾಲ್ಕು ವಾಕ್ಯಗಳನ್ನು ಹೆಣೆಯುವ ಕಲೆ ರೂಢಿಸಿ ಕೊಂಡರೆ ಸಾಲದು, ಕನಿಷ್ಠ ಓದು ಬರಹದ ವಿದ್ಯೆ ಮಾತ್ರ ಸಾಲದು. ಪಕ್ಷ ಅಥವಾ ಸಿದ್ಧಾಂತ ನಿಷ್ಠೆ ತೋರಿಸುವ ‘ಪಟ್ಟೆ’ಗಳು ಸಹ ಇರಕೂಡದು   ಪತ್ರಕರ್ತನಲ್ಲಿ. ಬದಲಿಗೆ   ವೃತ್ತಿ ಪರತೆಯ ಗುಣಗಳು ಇರಬೇಕು, libel and libel law ಇವುಗಳ ಜ್ಞಾನವೂ ಇರಬೇಕು. ಓಹ್, ಇದು ಒಂದು ಬಹು ದೊಡ್ಡ ಬೇಡಿಕೆಯಾಗಿ ತೋರಬಹುದೇನೋ ಪತ್ರಕರ್ತರ ವೇಷ ತೊಟ್ಟ ಜನರಿಗೆ.

ತಮ್ಮ ಬಗೆಗಿನ ವಿಜಯ್ ಮಲ್ಯರವರ ಲೆಕ್ಕಾಚಾರ ತಪ್ಪು ಎಂದು ಜನರಿಗೆ ಮನವರಿಕೆ ಮಾಡುವ ಕೆಲಸ ಈ ಪತ್ರಕರ್ತ ಸಮೂಹ ಮಾಡೀತೆ?

 

ಮೂರನೆಯ ಶಕ್ತಿ

ಪ್ರಪಂಚದಲ್ಲಿ ಎರಡು ರೀತಿಯ ಶಕ್ತಿಗಳಿವೆ. ಒಂದು, ‘ಖಡ್ಗ’ ದ ಶಕ್ತಿ ಮತ್ತೊಂದು ‘ಲೇಖನಿ’ ಯ ಶಕ್ತಿ. ಆದರೆ ಇವೆರಡನ್ನೂ ಮೀರಿಸುವ ಶಕ್ತಿ ಶಾಲಿಯಾದ ಮೂರನೆಯ ಶಕ್ತಿಯೊಂದಿದೆ. ಅದೇ ಸ್ತ್ರೀ ಶಕ್ತಿ. ವಾಹ್, ಯಾರಪ್ಪ ಹೇಳಿದ್ದು ಇದು? ನಾರಿ ಮುನಿದರೆ ಮಾರಿ ಅಂತ ನಮ್ಮ ಪೂರ್ವಜರು ಹೆಣ್ಣಿನ ಸಹವಾಸ ಮಾಡಿ ಸೋತು ಸುಣ್ಣವಾದಾಗ ಕಂಡುಕೊಂಡಾಗಿದೆ ಈ ಹಸಿ ಸತ್ಯವನ್ನು. ದೇವರು ಸೃಷ್ಟಿಸುವಾಗ ಒಂದೇ ಸಮಯದಲ್ಲಿ, ಸರಿಸಮನಾಗಿ ಪುರುಷನೊಂದಿಗೆ ಸ್ತ್ರೀಯನ್ನೂ ಸೃಷ್ಟಿಸಿದ. ಇಬ್ಬರಿಗೂ ಅವವರದೇ ಆದ ಜವಾಬ್ದಾರಿ ಗಳನ್ನೂ ಕೊಟ್ಟು ಒಬ್ಬರನ್ನೊಬ್ಬರು ಆಸರೆಯಾಗಿ, ಒತ್ತಾಸೆಯಾಗಿ ಬದುಕುವ ಕಿವಿಮಾತನ್ನು ಹೇಳಿ ಭೂಲೋಕಕ್ಕೆ ಕಳಿಸಿದ. ಹೆಣ್ಣು ಗಂಡು ಜಾತಿಗಳಲಿ ಹೆಚ್ಚು ಕುಯುಕ್ತಿ ಪ್ರದರ್ಶಿಸುವ ಗಂಡು ಆಗಾಗ ಹೆಣ್ಣಿನ ಅಧಿಕಾರ ವ್ಯಾಪ್ತಿಯನ್ನು ಎನ್ಕ್ರೋಚ್ (encroach) ಮಾಡಿ ತನ್ನ ವರ್ಚಸ್ಸನ್ನು ಹೆಚ್ಚು ಮಾಡಿ ಕೊಂಡಾಗೆಲ್ಲಾ ಹೆಣ್ಣು ಮುನಿದು ತಿರುಗೇಟು ಕೊಡುತ್ತಾಳೆ. ಹಾಗೆ ತಿರುಗೇಟು ತಿಂದಾಗ ಕಂಡು ಕೊಂಡ ಸತ್ಯ ಈ “ಹೆಣ್ಣು ಒಲಿದರೆ ವಯ್ಯಾರಿ, ಮುನಿದರೆ ಮಾರಿ” ಎನ್ನುವ ಕಟು ಸತ್ಯ.

ಹೆಣ್ಣು ಗಂಡಿನ ಪುರಾತನ ಜಂಜಾಟದ ಪುರಾಣ ಬಿಟ್ಟು ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರಾರು ಎನ್ನುವ ನಿಮ್ಮ ಪ್ರಶ್ನೆಗೆ ಅಡಗಿದೆ ಉತ್ತರ ನೀವು ಕನಸಿನಲ್ಲಿಯೂ ನೆನೆಸಿರದ, ಊಹಿಸಿರದ ಸ್ಥಳದಲ್ಲಿ.

ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರು ಬೇರಾರೂ ಅಲ್ಲ, ಪಾಕಿಸ್ತಾನದ ಹುಟ್ಟಿಗೆ “ಕಾರಣೀ ‘ಭೂತ’ ” ನಾದ ಮುಹಮ್ಮದ್ ಅಲಿ ಜಿನ್ನಾ. ಇದೇ ಮೂರನೇ ಶಕ್ತಿ ತನ್ನ ದೇಶದ ಪ್ರಧಾನಿಯಾಗಿ ಮತಾಂಧರ ಆಕ್ರಮಣಕ್ಕೆ ಸಿಕ್ಕು ಸತ್ತಾಗ ಈ ಮಾತನ್ನು ಹೇಳಿದ ಜಿನ್ನಾ ತನ್ನ ಸಮಾಧಿಯಲ್ಲಿ ನೋವಿನಿಂದ ಖಂಡಿತ ಹೊರಳಾಡಿರಬಹುದು.

ಒಂದ್ನಿಮ್ಷ, ಹೋಗ್ಬೇಡಿ. ಮತ್ತೊಂದು ಶಕ್ತಿ ಇದೇರೀ. ಈ ಹೆಣ್ಣನ್ನು ಒಲಿಸಿಕೊಳ್ಳೋ ಗಲಾಟೆಯಲ್ಲಿ ಮರೆತೇ ಬಿಟ್ಟೆ. ಅದೇ ರೀ ಇಚ್ಛಾ ಶಕ್ತಿ. ಇದೊಂದಿದ್ದರೆ ಮೇಲೆ ಹೇಳಿದ ಮೂರೂ ಶಕ್ತಿಗಳೂ ನಮಗೆ ಶರಣು ಶರಣು ಎನ್ನುತ್ತವೆ.

ಈಗ ಆದುವಲ್ಲ ಎಲ್ಲಾ ಶಕ್ತಿಗಳೂ ಸೇರಿ ಚತುರ್ಶಕ್ತಿ ಗಳು? ಈಗ ಬೇರಿನ್ನೇನು ಬೇಕು ಹೇಳಿ ಈ ಜಗತ್ತನ್ನು ಜಯಿಸಲು?

ನೀವೆಷ್ಟು ಓದುವಿರಿ?

ಓದಿನ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನಾವೆಲ್ಲರೂ ಕೇಳುವ ದೂರು. ಅದರಲ್ಲೂ ಪುಸ್ತಕ  ಕೊಂಡು ಓದುವವರ ಸಂಖೆಯಂತೂ ವಿರಳವೇ. ವಿಶೇಷವಾಗಿ ಕನ್ನಡಿಗರಲ್ಲಿ ಆ ಕೊರತೆ ಎದ್ದು ಕಾಣುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಒಂದೇ ದಿನಪತ್ರಿಕೆ ಸಾಕು ಇಡೀ ಬಸ್ಸಿಗೆ ಅಥವಾ ರೈಲು ಬೋಗಿಗೆ. ನಮಗೆ recycling ನಲ್ಲಿ ದೊಡ್ಡ ವಿಶ್ವಾಸ. ಈ ವಿದ್ಯಮಾನ ದಿನಪತ್ರಿಕೆಗಳಂಥ ಓದಿಗಾದರೆ ಪುಸ್ತಕಗಳನ್ನು, ಗ್ರಂಥಗಳನ್ನು  ನಾವೆಷ್ಟು ಓದುತ್ತೇವೆ?

ಅಮೆರಿಕನ್ನರು ವರ್ಷದಲ್ಲಿ ೧೫ ಪುಸ್ತಕಗಳನ್ನಾದರೂ ಓದುತ್ತಾರಂತೆ. ಆಸ್ಟ್ರೇಲಿಯನ್ನರು ಅಮೆರಿಕನ್ನರಿಗಿಂತ ಹೆಚ್ಚು ಓದುತ್ತಾರಂತೆ. ಓದುವಿಕೆಗೆ ಪಾಶ್ಚಾತ್ಯರು ಕೊಡುವ ಪ್ರಾಧಾನ್ಯ ಪುಸ್ತಕ ಓದುವವರ ಕುರಿತ ನಡೆಸಿದ ಅಧ್ಯಯನ ಮತ್ತು ಸಮೀಕ್ಷೆ ಗಳಲ್ಲಿ ಕಾಣಬಹುದು. ಡೆಮೊಕ್ರಾಟ ಪಕ್ಷದ ಜನ ರಿಪಬ್ಲಿಕನ್ನರಿಗಿಂತ ಹೆಚ್ಚು ಓದುತ್ತಾರಂತೆ. ಆದರೆ ಧಾರ್ಮಿಕ ಪುಸ್ತಕಗಳನ್ನು ಡೆಮೊಕ್ರಾಟ್ ರಿಗಿಂತ ಹೆಚ್ಚಾಗಿ ರಿಪಬ್ಲಿಕನ್ನರು ಓದುತ್ತಾರಂತೆ. ಜಾರ್ಜ್ ಬುಶ್ ರಿಪಬ್ಲಿಕನ್ ಪಕ್ಷಕ್ಕೆ ಸೇರಿದವರು. ಹೆಚ್ಚು ಓದು, ಹೆಚ್ಚು ಅವಾಂತರ? ಅಷ್ಟು ಮಾತ್ರವಲ್ಲ ಧಾರ್ಮಿಕ ಪುಸ್ತಕಗಳನ್ನು ಕಪ್ಪು ಜನರು (blacks), ವಯಸ್ಸಾದವರು, ಗೃಹಿಣಿಯರು, ಕಡಿಮೆ ವಿದ್ಯಾಭ್ಯಾಸ ಇರುವವರು, ಕಡಿಮೆ ಸಂಪಾದನೆ ಮಾಡುವವರು, ಗ್ರಾಮ ವಾಸಿಗಳು ಹೆಚ್ಚಾಗಿ ಓದುತ್ತಾರಂತೆ.   

ಕಾಲೇಜು ವಿದ್ಯಾಥಿಗಳು ಹೆಚ್ಚು ಓದುತ್ತಾರೆ, ಯುವಜನರಿಗಿಂತ ಹೆಚ್ಚಾಗಿ ೫೦ ವಯಸ್ಸಿಗೆ ಮೇಲ್ಪಟ್ಟ ಜನ ಓದುತ್ತಾರೆ ಅಮೆರಿಕೆಯಲ್ಲಿ. 

ಈ ತೆರನಾದ ಸಮೀಕ್ಷೆ ನಮ್ಮಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಮಾತಂತೂ ಸತ್ಯ. ನಾವು ಭೇಟಿ ಕೊಡುವ ಬಂಧು ಮಿತ್ರರ ಮನೆಗಳಲ್ಲಿ ಪುಸ್ತಕಗಳ ದರ್ಶನ ಆಗುವುದು ಅಪರೂಪ. ಕೆಲಸಕ್ಕೆ ಬಾರದ ವಸ್ತುಗಳನ್ನು ಕೊಂಡು ಎಲ್ಲರಿಗೂ ಕಾಣುವಂತೆ drawing room ಗಳಲ್ಲಿ ಪ್ರದರ್ಶಿಸುವುದನ್ನು ಕಾಣಬಹುದು. ಮನೆ ಒಂದು ರೀತಿಯ ಮ್ಯೂಸಿಯಂ. ಕಣ್ಣಿಗೆ ವಿಶ್ರಾಂತಿ ಇರುವುದಿಲ್ಲ. ದೃಷ್ಟಿ ಎತ್ತ ಹಾಯಿಸಿದರೂ ಒಂದೊಂದು collection ಗಳ ದರ್ಶನ.    

ಒಳ್ಳೆಯ ಅಭಿರುಚಿ ಬೆಳೆಸಿಕೊಂಡು ಒಳ್ಳೆಯ ಪುಸ್ತಕ ಓದುವುದರಿಂದ ನಮ್ಮ ವ್ಯಕ್ತಿತ್ವವೂ ಬೆಳೆಯುತ್ತದಂತೆ. ಪುಸ್ತಕ ನಿರ್ಜೀವ ಅಲ್ಲ, ಉಸಿರಾಡದಿದ್ದರೂ ಅದು ಜೀವಂತ ಎಂದು ಒಬ್ಬ voracious reader ತನ್ನ ಅಭಿಪ್ರಾಯ ವ್ಯಕ್ತ ಪಡಿಸುತ್ತಾನೆ.  ಹೌದು ಪುಸ್ತಕ ಬರೆದ ವ್ಯಕ್ತಿಯ ಜೊತೆ ನಮ್ಮ ನಂಟು ಬೆಳೆಯುತ್ತದೆ, ಲೇಖನೊಂದಿಗೆ ಸಮಯ ಕಳೆದಂತೆ ಭಾಸವಾಗುತ್ತದೆ,ಓದುತ್ತಾ ಇದ್ದಂತೆ ನಾವು ನಮ್ಮದೇ ಆದ parallel ಪುಸ್ತಕದ ಬರಹವನ್ನೂ ಮನಸ್ಸಿನಲ್ಲೇ ಮಾಡಿಕೊಳ್ಳುತ್ತೇವೆ. ಹೊಸ ಲೋಕ ಸುತ್ತುತ್ತೇವೆ, ನಮಗಿಂತ ವಿಭಿನ್ನವಾದ ರೀತಿ ರಿವಾಜುಗಳ ಪರಿಚಯವಾಗುತ್ತದೆ. ಹೆಚ್ಚು ಓದುವುದರಿಂದ ಒಳ್ಳೆಯ ಬರಹಗಾರರಾಗಬಹುದು (ಅಂಥ ಇಚ್ಛೆ ಇದ್ದರೆ) ಮಾತ್ರವಲ್ಲ ನಮಗೆ ಗೊತ್ತಿಲ್ಲದ ಹೊಸ ಹೊಸ ಪದಗಳ ಪರಿಚಯವಾಗುತ್ತದೆ, ನಮ್ಮ ಶಬ್ದ ಭಂಡಾರ ಇನ್ನಷ್ಟು ಶ್ರೀಮಂತವಾಗುತ್ತದೆ, ನಮ್ಮ ಮಾತುಗಳು, ಚರ್ಚೆಗಳು ಹೆಚ್ಚು ಆಕರ್ಷಕವಾಗುತ್ತವೆ.   

ಪುಸ್ತಕ ಗಳನ್ನು ಓದುವ ಹವ್ಯಾಸ ನಿಜಕ್ಕೂ ಆಕರ್ಷಕ. ಓದುವಿಕೆಯ ಈ ಹವ್ಯಾಸವನ್ನು ಮನೆಯಲ್ಲಿರುವವರಿಗೂ ಹಂಚಬಹುದು. ನಾನು ಪುಸ್ತಕ ಕೈಯ್ಯಲ್ಲಿ ಹಿಡಿದ ಕೂಡಲೇ ನನ್ನ ಎರಡೂವರೆ ವರ್ಷದ ಮಗಳೂ ತನ್ನ ಪುಟ್ಟ ಪುಸ್ತಕ ಹಿಡಿದು ಕೊಂಡು ನನ್ನ ಪಕ್ಕ ಸೋಫಾದಲ್ಲಿ ಬಂದು ಕೂರುತ್ತಾಳೆ. ಏನೂ ಅರ್ಥವಾಗದಿದ್ದರೂ ಪುಟಗಳನ್ನುತಿರುವಿ ಹಾಕೋದು, ಚಿತ್ರಗಳನ್ನೂ ನೋಡಿ ಊ, ಆ , ಎಂದು ಉದ್ಗರಿಸೋದು ಮಾಡುತ್ತಾಳೆ. ಪುಸ್ತಕ ಅಂಗಡಿಗೆ ಹೋದರೆ ತನಗಾಗಿ ಒಂದು ಪುಸ್ತಕವನ್ನೂ ತೆಗೆದು ಕೊಳ್ಳುತ್ತಾಳೆ. ನೋಡಿ ನಮ್ಮ ಓದು ಯಾವ ರೀತಿ epidemic ಆಗಿ ಕೆಲಸ ಮಾಡುತ್ತದೆ.   

Prolific reader ಒಬ್ಬರ ಬ್ಲಾಗ್ ನೋಡಿದೆ. ಅಮೆರಿಕೆಯವನಾದ ಈತ ವಾರಕ್ಕೊಂದು ಪುಸ್ತಕ ಓದಲು ತೀರ್ಮಾನಿಸಿ ಅದರಂತೆಯೇ ಕಳೆದ ವರ್ಷ ೫೨ ಪುಸ್ತಗಗಳನ್ನು ಓದಿದನಂತೆ. ಆದರೆ ಇದು ಪ್ರಾಯೋಗಿಕವೇ ಎಂದು ಒಬ್ಬರು ಸಂಶಯ ವ್ಯಕ್ತ ಪಡಿಸಿದ್ದರು. ಏಕೆಂದರೆ ಈ ರೀತಿ ಹಠ ಹಿಡಿದು ಓದಿದರೆ ಮಾತ್ರ ಪ್ರಯೋಜನವಿಲ್ಲ, ತಲೆಯಲ್ಲಿ ಎಷ್ಟು ವಿಷಯಗಳು ಉಳಿಯಬಹುದು ಎನ್ನುವುದನ್ನೂ ನೋಡಬೇಕಾಗುತ್ತದೆ ಎಂದರು. ವಾರಕ್ಕೊಂದು ಪುಸ್ತಕ ಓದಬೇಕೆಂದೇ ಆದರೆ ಪುಸ್ತಕ ಗಾತ್ರವನ್ನೂ ನೋಡಬೇಕಾಗುತ್ತದೆ. ಸುಮಾರು ೩೦೦ ಪುಟಗಳ ಗಾತ್ರದ ಪುಸ್ತಕ ವಾದರೆ ವಾರಕ್ಕೊಂದು ನಿಯಮಕ್ಕೆ ಒಗ್ಗುತ್ತದೆ, ಆದರೆ ಪುಸ್ತಕ ಇತ್ತೀಚೆಗೆ ಜಸ್ವಂತ್ ಸಿಂಗರು ಬರೆದ ಪುಸ್ತಕದ ಗಾತ್ರಕ್ಕಿದ್ದರೆ? ಇಲ್ಲಿ ನಾವು ನೋಡಬೇಕಾದ್ದು ಕೇವಲ ೫೨ ಔಸ್ತಕಗಳನ್ನು ಓದುವ ಗುರಿಯಲ್ಲ, ಬದಲಿಗೆ ಈ ರೀತಿಯ ತಡೆರಹಿತ ಓದಿನಿಂದ ಆಗುವ ಪ್ರಯೋಜನ. ೫೨ ಅಲ್ಲದಿದ್ದರೂ ಅದರ ಅರ್ಧವಾದರೂ ಒಂದು ದೊಡ್ಡ ಸಾಧನೆಯೇ ಅಲ್ಲವೇ?   

ಕೆಲವರು ಒಂದಕ್ಕಿಂತ ಹೆಚ್ಚು ಪುಸ್ತಕ ಓದುತ್ತಾರೆ. ಒಂದಕ್ಕಿಂತ ಹೆಚ್ಚು ಪುಸ್ತಕ ಓದಲು ಸಾಧ್ಯವೇ? ಖಂಡಿತ ಸಾಧ್ಯ. ಕನ್ನಡ ಸೀರಿಯಲ್ಲು, ಹಿಂಡಿ ಸೀರಿಯಲ್ಲು, ಅವುಗಳ ಮಧ್ಯೆ ಸಿನೆಮಾಗಳು, ಇವೆಲ್ಲವುಗಳ ಪಾತ್ರಗಳು ನಮಗೆ ಕಲಸುಮೇಲೊಗರ ಆಗೋದಿಲ್ಲ. ಒಂದಕ್ಕಿಂತ ಹೆಚ್ಚು ಟೀ ವೀ ಸೀರಿಯಲ್ಲುಗಳನ್ನು ವೀಕ್ಷಿಸಿ ಜ್ಞಾಪಕ ಇಟ್ಟುಕೊಳ್ಳಲು ಸಾಧ್ಯವಾಗುವುದಾದರೆ ಪುಸ್ತಕಗಳಿಗೂ ಇದೇ ನಿಯಮ ಅನ್ವಯಿಸಿ ಕೊಳ್ಳಬಹುದು ಅಲ್ಲವೇ? 

ಅಥವಾ ಈ ರೀತಿಯ ಓದನ್ನು ರೂಢಿ ಮಾಡಿಕೊಂಡರೆ “ಓದಿ, ಓದಿ, ಮರುಳಾದ ಕೂಚು ಭಟ್ಟ” ಎಂದು ಗೇಲಿ ಮಾಡುವರೇ?

foto courtesy: fotosearch

ರಾತ್ರಿ ತರಗತಿ

ರಾಮನ್ ಮತ್ತು ನಾರಾಯಣ್ ಆಫೀಸಿನಲ್ಲಿ ಹರಟುತ್ತಿದ್ದರು.

ರಾಮನ್:  ನಾರಾಯಣ, ನಾನು ಕಳೆದ ಐದು ತಿಂಗಳುಗಳಿಂದ ರಾತ್ರಿ ತರಗತಿಗಳಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನ್ನ ಪರೀಕ್ಷೆ ಇದೆ.

ನಾರಯಣ್: ಓಹ್

ರಾಮನ್: ಉದಾಹರಣೆಗೆ ಗ್ರಹಾಮ್ ಬೆಲ್ ಯಾರೆಂದು ನಿನಗೆ ಗೊತ್ತಾ?

ನಾರಾಯಣ್: ಇಲ್ಲ.

ರಾಮನ್: ಗ್ರಹಾಮ ಬೆಲ್ ಅಲ್ಲವೇ ೧೮೭೬ ರಲ್ಲಿ ಟೆಲಿ ಫೋನ್ ಕಂಡುಹಿಡಿದವನು? ನೀನು ರಾತ್ರಿ ತರಗತಿಗೆ ಹೋದರೆ ಇವೆಲ್ಲಾ ತಿಳಿಯುತ್ತವೆ.

ಮಾರನೆ ದಿನ…

ರಾಮನ್: ಹೋಗಲಿ ನಿನಗೆ ಅಲೆಕ್ಸಾಂಡರ್ ಡೂಮ ಯಾರೂಂತ ಗೊತ್ತಾ?

ನಾರಾಯಣ್: ಇಲ್ಲ

ರಾಮನ್: ಅವನು ಸುಪ್ರಸಿದ್ಧ ಕಾದಂಬರಿಕಾರ. ಅವನೇ three musketeers ಪುಸ್ತಕ ಬರೆದದ್ದು.

ಹೀಗೆ ಪ್ರತೀ ದಿನ ರಾಮನ್ ತನ್ನ ಜ್ಞಾನದ ಬಗ್ಗೆ ನಾರಾಯಣನಲ್ಲಿ ಕೊಚ್ಚುತ್ತಿದ್ದ. ಬೇಸತ್ತಿದ ನಾರಾಯಣ್ ಕೇಳ್ದ, ರಾಮನ್, ನಿನಗೆ ಬಾಲಕೃಷ್ಣನ್ ಕುಪ್ಪುಸ್ವಾಮಿ ಯಾರೂಂತ ಗೊತ್ತಾ?

ರಾಮನ್: ಇಲ್ಲ, ಗೊತ್ತಿಲ್ಲ.

ನಾರಾಯಣ್: ಅಯ್ಯೋ, ಅವನೇ ಇಲ್ಲವೇ ನಿನ್ನ ಹೆಂಡತಿಯ ಜೊತೆ ರಾತ್ರಿಯಲ್ಲಿ ತಿರುಗುತ್ತಾ ಇರೋದು. ನೀನು ಈ ರಾತ್ರಿ ತರಗತಿಗಳನ್ನು ನಿಲ್ಲಿಸಿದರೆ ಇದು ನಿನಗೆ ತಿಳಿಯಬಹುದು” ಎಂದು ಹೇಳಿದ.

moral of the story:

ಜೀವನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅರಿಯಬೇಕಾದ ಬೇರೆ ಸಂಗತಿಗಳೂ ಇವೆ