ನಮ್ಮ ರಾಷ್ಟ್ರಗೀತೆ ಚಿಕ್ಕದಾಯಿತು

ನಮ್ಮ ರಾಷ್ಟ್ರ ಗೀತೆ ಚಿಕ್ಕದಾಯಿತು, ಸ್ವಲ್ಪ ದೊಡ್ಡದು ಮಾಡಬಾರದೇ? ಡಿಮಾಂಡಪ್ಪೋ ಡಿಮಾಂಡು, ತರಾವರಿ ಡಿಮಾಂಡುಗಳು ಜನರದು. ತಿನ್ನೋಕ್ಕೆ ಒಪ್ಪೊತ್ತಿನ ಅನ್ನ ಇಲ್ಲ, ಅನ್ನ ಹಾಕಿ ಎಂದು ಎಂದು ಕೆಲವರ ಡಿಮಾಂಡ್ ಆದರೆ ಇನ್ನೂ ಕೆಲವರದು ತಮ್ಮ ತಲೆ ಮೇಲೆ ಸೂರಿಲ್ಲ, ಸಹಾಯ ಮಾಡಿ ಎನ್ನುವ ಡಿಮಾಂಡು. ಬದುಕಿನ ಅತ್ಯವಶ್ಯಕತೆ ಗಳ ಡಿಮಾಂಡು ಗಳನ್ನು ಈಡೇರಿಸಲು ಪ್ರಪಂಚ ಹೆಣಗಾಡುತ್ತಿದ್ದರೆ ನಮ್ಮ ರಾಷ್ಟ್ರ ಗೀತೆ ಯಾಕೋ ತುಂಬಾ ಚಿಕ್ಕದಾಯಿತು, ಅದನ್ನು ಸ್ವಲ್ಪ ಸ್ಟ್ರೆಚ್ ಮಾಡಿ ದೊಡ್ಡದು ಮಾಡಬಾರದೇ ಎನ್ನುವ ತುಂಟನದ ಡಿಮಾಂಡು. ಬೇಸ್ತು ಬೀಳಬೇಡಿ, ಈ ಡಿಮಾಂಡನ್ನು ನಮ್ಮ ದೇಶ ವಾಸಿಗಳಲ್ಲಿ ಯಾರೂ ಮಾಡಲಿಲ್ಲ, ಈ ಸವಿನಯ, ದೇಶಭಕ್ತಿ ತುಂಬಿ ತುಳುಕುವ ಮನವಿ ಬಂದಿದ್ದು ಫಾರ್ಮುಲಾ ಒನ್ ಕಾರ್ ರೇಸಿನ ಇಂಗ್ಲೆಂಡ್ ಮೂಲದ ಡ್ರೈವರ್ ಒಬ್ಬನಿಂದ. ಚಾಲಕ ಲೀವೈಸ್ ಹ್ಯಾಮಿಲ್ಟನ್ ನ ಅಳಲಿನ ಮರ್ಮ ಸ್ವಲ್ಪ ನೋಡೋಣ.

ಯಾವುದೇ ಕ್ರೀಡಾಪಟುವೂ ಸ್ಪರ್ದೆಯಲ್ಲಿ ವಿಜೇತನಾದಾಗ podium ಮೇಲೆ ನಿಂತು ತನ್ನ ರಾಷ್ಟ್ರ ಗೀತೆಯನ್ನು ನುಡಿಸುವುದನ್ನು ಹೆಮ್ಮೆಯಿಂದ ಕೇಳುವುದು ರೋಮಾಂಚನವೇ ಸರಿ. ಆದರೆ ನಾನು ಈ ಕಾರ್ ರೇಸಿನ ಈ ಪಂದ್ಯದಲ್ಲಿ ಗೆದ್ದು podium ಮೇಲೆ ನಿಂತ ಅರ್ಧ ನಿಮಿಷದಲ್ಲೇ ಮುಗಿದು ಹೋಯಿತು ನನ್ನ ರಾಷ್ಟ್ರ ಗೀತೆ. ಕೆಲವರು ೧೦ ನಿಮಿಷಗಳಿಗೂ ಹೆಚ್ಚು ಹೊತ್ತು ನಿಂತು ತಮ್ಮ ಗೀತೆಯನ್ನು ಆಲಿಸುತ್ತಾರೆ. ಇದು ಅವನ ಅಳಲು. ಅವನಿಗೆ podium ಮೇಲೆ ಹೆಚ್ಚು ಹೊತ್ತು ನಿಂತು ಸಂಭ್ರಮಿಸುವ ಆಸೆ, ಈ ಆಸೆ ಪೂರಸಲು ಅವನ ದೇಶದ god save the queen ಎನ್ನುವ ರಾಷ್ಟ್ರಗೀತೆಯನ್ನು ಇನ್ನಷ್ಟು ಉದ್ದ ಮಾಡಬೇಕು. ಹೇಗಿದೆ ಬೇಡಿಕೆ?

ನಮ್ಮ ರಾಷ್ಟ್ರಗೀತೆಯಲ್ಲಿ ಸ್ವಲ್ಪ alteration ಮಾಡಿ ಎಂದು ನಮ್ಮ ದೇಶದಲ್ಲಿ ಒಬ್ಬರು ಕೋರ್ಟು ಹತ್ತಿದರಂತೆ. “ಪಂಜಾಬ್, ಸಿಂಧು, ಗುಜರಾತ, ಮರಾಠ…” ಗೀತೆಯ ಈ ಸಾಲಿನಲ್ಲಿನ ಸಿಂಧ್ ಈಗ ನಮ್ಮ ದೇಶದಲ್ಲಿಲ್ಲದ್ದರಿಂದಲೂ, ಕಾಶ್ಮೀರ ನಮ್ಮ ದೇಶದಲ್ಲಿದ್ದರೂ ಅದರ ಪ್ರಸ್ತಾಪ ಗೀತೆಯಲ್ಲಿಲ್ಲದ್ದರಿಂದಲೂ ಸ್ವಲ್ಪ ಬದಲಾವಣೆ ಮಾಡಬಾರದೇ ಎನ್ನುವ ಮನವಿ. ಸಿಂಧ್ ಎಂದರೆ ಬರೀ ಪ್ರಾಂತ್ಯ ಮಾತ್ರವಲ್ಲ ಅದೊಂದು ನಾಗರೀಕತೆ, ನದಿಯ ಹೆಸರೂ ಹೌದು, ಹಾಗಾಗಿ ಯಾವ ಬದಲಾವಣೆ ಕೂಡದು ಎಂದು ವಿರೋಧಿಸಿದವರ ಪಾಟೀ ಸವಾಲು. ನ್ಯಾಯಾಲಯ alteration ಮನವಿಯನ್ನು ತಿಪ್ಪೆಗೆ ಬಿಸುಟಿತು.

ಆಫ್ಘಾನಿಸ್ತಾನದಲ್ಲಿ ೧೯೯೯- ೨೦೦೨ ರವರೆಗೆ ರಾಷ್ಟ್ರ ಗೀತೆಯೇ ಇರಲಿಲ್ಲ. ಬದಲಿಗೆ ಇದ್ದಿದ್ದು “ಕಲಾಶ್ನಿಕೋವ್” ಕೋವಿಗಳ ಸಂಗೀತ ಮಾತ್ರ.

ರಾಷ್ಟ್ರ ಗೀತೆಗಳ ಅಧ್ಯಯನಕ್ಕೆ anthematology ಎಂದು ಹೆಸರು. ಅಧ್ಯಯನ ಮಾಡುವ ವ್ಯಕ್ತಿ anthematologist.

ಕೋಶ ಓದು, ಇಲ್ಲಾ ದೇಶ ಸುತ್ತು

 ಕೋಶ ಓದು ಇಲ್ಲಾ ದೇಶ ಬಿಡು….ಹಾಂ, ಇದೇನಿದು, ನನ್ನ ಕಣ್ಣುಗಳು ನನ್ನನ್ನು ಮೋಸ ಮಾಡುತ್ತಿಲ್ಲವಷ್ಟೇ? ಶೀರ್ಷಿಕೆ ಯಲ್ಲಿ “ಕೋಶ ಓದು, ದೇಶ ಸುತ್ತು” ಎಂದಿರುವಾಗ ಲೇಖನದ ಆರಂಭದಲ್ಲೇ ಅದ್ಹೇಗೆ ಬದಲಾಗಿ ಬಿಟ್ಟಿತು ಶೀಷಿಕೆ? ರಾಜಕಾರಣಿ ತನ್ನ ಮಾತುಗಳನ್ನು ಪಲ್ಟಾಯಿಸುವ ರೀತಿ ಎಂದು ಯೋಚಿಸಿದಿರಾ?

ಬ್ಲಾಗ್ ಒಂದರಲ್ಲಿ ಬಂದ ಲೇಖನದಲ್ಲಿ ಈ ಕುರಿತು ಓದಿದೆ. ಕೋಲಾರದಲ್ಲಿ, ಸಮಾರಂಭ ವೊಂದರಲ್ಲಿ ಮಾನ್ಯ ಸಚಿವರು “ಭಗವದ್ಗೀತೆ ಬೇಡವಾದವರು ಭಾರತ ಬಿಟ್ಟು ತೊಲಗಿ” ಎಂದು ಗುಡುಗಿದರು ಎಂದು ಬರೆದಿದ್ದರು. ಸನ್ಮಾನ್ಯ ಶಿಕ್ಷಣ ಮಂತ್ರಿಗಳೇ ಹೀಗೆ ಹೇಳಿದಾಗ ಸಮಾಜ ಯಾವ ರೀತಿ ಪ್ರತಿಸ್ಪಂದಿಸಬಹುದು. ಸಮಾಜದಲ್ಲಿ ವಿಷಬೀಜ ಬಿತ್ತಲೆಂದೇ ಹುಟ್ಟಿ ಕೊಂಡ ಮಾಧ್ಯಮಗಳು ಸಚಿವರ ಈ rhetoric ನ ಎಳೆ ಹಿಡಿದು ಕೊಂಡು ಸಮಾಜದಲ್ಲಿ ಮತ್ತಷ್ಟು ಗದ್ದಲ ಗೊಂದಲಕ್ಕೆ ಕಾರಣರಾಗಲಾರರೆ? ಅತ್ಯಂತ ಜವಾಬ್ದಾರೀ ಹುದ್ದೆಯಲ್ಲಿರುವವರು, ಅದರಲ್ಲೂ ಜನರಿಂದ ನೇರವಾಗಿ ಆರಿಸಲ್ಪಟ್ಟವರ ಬಾಯಲ್ಲೇ ಇಂಥ ಮಾತುಗಳು ಉದುರಿದರೆ ಜನಸಾಮಾನ್ಯರ ಪಾಡೇನು?

ಕೋಶ ಓದು, ದೇಶ ಸುತ್ತು ಹಳೇ ಕಾಲದ ಮುತ್ಸದ್ದಿಗಳು, ಹಿರಿಯರು ಹೇಳಿದ್ದು. ಈ ಮಾತುಗಳಲ್ಲಿ ಅನುಭವ ತುಂಬಿ ತುಳುಕುತ್ತದೆ. ಕೋಶ ಓದು ಇಲ್ಲಾ ದೇಶ ಬಿಡು ಎನ್ನುವುದು ಆಧುನಿಕ ಮನೋಭಾವದ ಹಿರಿಯರು. ಇಂಟರ್ನೆಟ್ ಯುಗದ ಪ್ರಾಡಕ್ಟ್ ಗಳು. ಒಂದರಲ್ಲಿ ಅನುಭವ ತುಂಬಿ ತುಳುಕುತ್ತಿದ್ದರೆ, ಮತ್ತೊಂದರಲ್ಲಿ ಅಸಹನೆಯ ಕೊಡ ತುಂಬಿ ತುಳುಕುತ್ತಿರುತ್ತದೆ. ನಮ್ಮ ಪ್ರಯಾಣ ಯಾವ ಕಡೆ ಎಂದು ಅರಿಯದೆ ಜನ ಸಾಮಾನ್ಯ ಕಕ್ಕಾಬಿಕ್ಕಿಯಾಗುತ್ತಾನೆ ಈ ಮಾತುಗಳನ್ನು ಕೇಳಿ. ಇನ್ನು ಶಾಲೆಗೆ ಹೋಗುವ ಮಕ್ಕಳ ಸ್ಥಿತಿ? ವಿದ್ಯಾರ್ಥಿಯೊಬ್ಬ ಶಿಕ್ಷಕನಲ್ಲಿ ತನ್ನ ಅಳಲನ್ನು ತೋಡಿ ಕೊಳ್ಳುತ್ತಾನೆ. ತನಗೆ ಆಂಗ್ಲ ಬಾಷೆ ತುಂಬಾ ಕಷ್ಟ ಆಗ್ತಾಯಿದೆ, ತಲೆಗೆ ಏನೂ ಹೋಗೋದಿಲ್ಲ ಎಂದು. ಅದಕ್ಕೆ ಶಿಕ್ಷಕ ತಲೆಗೆ ಹೋಗದಿದ್ದರೆ ಶಾಲೆ ಬಿಡು ಅಥವಾ ಊರು ಬಿಡು ಎಂದು terrorize ಮಾಡಬಾರದು. ಅಸಹಾಯಕನಾಗಿ ಬಂದ ಶಿಷ್ಯನ ತಲೆ ನೇವರಿಸಿ ಇನ್ನಷ್ಟು ಶ್ರಮ ಪಡಲು ಹೇಳಬೇಕು ಅಥವಾ ಬೇರಾವುದಾದರೂ ಪರಿಹಾರ ಸೂಚಿಸಿ ಅವನಲ್ಲಿ ವಿದ್ಯೆ ಬಗ್ಗೆ ಆಸಕ್ತಿ ಮೂಡಿಸಬೇಕು. ಅದು ಬಿಟ್ಟು ಅವನನ್ನು ಗದರಿಸಿ ಬೆದರಿಸಿ ದಾರಿಗೆ ತರಲು ನೋಡಿದರೆ ಆಗದ ಮಾತು. ಶಿಕ್ಷಕ ರಿಯಾಕ್ಟಿವ್ ಆಗಬಾರದು. compassionate ಆಗಬೇಕು.

“ಈ ಲೋಕದಲ್ಲಾಗಲೀ, ಬೇರೆಲ್ಲೇ ಆಗಲಿ ಸಂಶಯ ಪಡುವವನಿಗೆ ಸಂತೋಷ ಸಿಗದು”

“ಕೋಪದ ಕಾರಣ ಭ್ರಮೆ ಹುಟ್ಟುತ್ತದೆ. ಭ್ರಮೆಯ ಕಾರಣ ಮನಸ್ಸು ಗೊಂದಲಗೊಳ್ಳುತ್ತದೆ. ಮನಸ್ಸು ಗೊಂದಲ ಗೊಂಡಾಗ ತರ್ಕ ನಾಶವಾಗುತ್ತದೆ. ತರ್ಕ ನಾಶವಾದಾಗ ಮನುಷ್ಯ ಬೀಳುತ್ತಾನೆ”

ಇಂಥ ನುಡಿ ಮುತ್ತುಗಳನ್ನು ನೀಡಿದ ಭಗವದ್ಗೀತೆಯ ಅಧ್ಯಯನಕ್ಕೆ ಈ ರೀತಿಯ ಧಮಕಿ ಕೂಡಿದ “ಉತ್ತೇಜನ” ವೇ ಹಿರಿಯರಿಂದ? – ಗೀತೆ ಗೀತೆಯಲ್ಲಿರುವ ಇಂಥ ಸಂದೇಶಗಳನ್ನು ಜನರಿಗೆ ತಿಳಿ ಹೇಳುವುದು ತರವೋ ಅಥವಾ ಇದನ್ನು ಬೇಡ ಎನ್ನುವವರು ದೇಶ ಬಿಟ್ಟು ತೊಲಗಲಿ ಎಂದು ಗೀತೆಯಿಂದ ಜನರನ್ನು ದೂರ ಓಡಿಸುವುದು ತರವೋ? ಸಚಿವರ ಈ ಹೇಳಿಕೆಯ ಔಚಿತ್ಯವನ್ನು ಜನರು ಪ್ರಶ್ನಿಸಬೇಕು. ಶಾಲೆಗಳಲ್ಲಿ ಗೀತೆ, ಕುರಾನ್, ಬೈಬಲ್, ಗುರುಗ್ರಂಥ್ ಸಾಹಿಬ್, ಬುದ್ಧರ ತ್ರಿಪಿಟಕ, ಪಾರ್ಸಿಗಳ ‘ಜೆಂದ್ ಅವೆಸ್ತಾ’, ಯಹೂದ್ಯರ ‘ತೋರಾ’ ಹೀಗೆ ಹೇಳಿಕೊಡುತ್ತಾ ಕೂತರೆ ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಗಳನ್ನು ಹೇಳಿಕೊಡಲು ಸಮಯ ಇರುವುದೇ ಎಂದು ಪ್ರಶ್ನಿಸುವವರಿದ್ದಾರೆ. ಪರಿಹಾರವಾಗಿ ಎಲ್ಲಾ ಧರ್ಮಗಳ ಸಾರವನ್ನು ಹೇಳಿಕೊಡುವ ಒಂದು ಪುಸ್ತಕದ ರಚನೆಯಾಗಲಿ. ಗೀತೆ, ಕುರಾನ್, ಬೈಬಲ್ ಮುಂತಾದವುಗಳ ಸುವರ್ಣ ವಾಕ್ಯಗಳು ಅದರಲ್ಲಿ ಸೇರಿರಲಿ. ವಿದ್ಯಾರ್ಥಿಗಳು ನಾವೆಂಥ ಸೊಗಸಾದ ಬಹು ಸಂಸ್ಕೃತಿ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನೋ ಭಾವನೆ ಬೆಳೆಸಿಕೊಳ್ಳಲಿ.

ನನ್ ಟೈಮ್ ಸರಿಯಿಲ್ಲ ಅಷ್ಟೇ !

ಟೈಮ್ ಸರಿಯಿಲ್ಲ, ಇದು ನಾವು ಕೇಳುವ ದೂರು . ನಮ್ಮ ಅರಿವುಗೇಡಿತನದಿಂದ ಅಥವಾ ಬೇರಾವುದಾರೂ ಕಾರಣದಿಂದ  ಬರುವ ಸಂಕಷ್ಟಗಳಿಗೆ ಸುಲಭ ಮತ್ತು ಪುಕ್ಕಟೆಯಾಗಿ ಸಮಯವನ್ನೂ ಜರೆಯುವುದು, ದೂರುವುದು ನಮ್ಮ ತಾತ ಮುತ್ತಾತಂದಿರು ನಮಗೆ ಬಳುವಳಿಯಾಗಿ ನೀಡಿದ ಜಾಯಮಾನ.  ಇಂದು ಬೆಳಿಗ್ಗೆ ನಮ್ಮ ಕಂಪೆನಿಯಲ್ಲಿ ಸೇಲ್ಸ್ ವಿಭಾಗದಲ್ಲಿ  ಕೆಲಸ ಮಾಡುವ ಒಬ್ಬರು ಬಂದು ಹೇಳಿದರು, ನಿನ್ನೆ ರಾತ್ರಿ ನನ್ನ ಲ್ಯಾಪ್ ಟಾಪ್ ಕಳುವಾಯಿತು. ಫ್ಲಾಟ್ ಹೊರಗೆ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದು ಕಳ್ಳತನ ಮಾಡಿದರು ಎಂದು ಹೇಳಿ ಏನು ಮಾಡೋದು, ನನ್ನ ಟೈಮ್ ಸರಿಯಿಲ್ಲ ಅಷ್ಟೇ ಎಂದು ಮರುಗಿದರು. ಈ ರೀತಿಯ ಕಹಿ ಅನುಭವ ಈ ವ್ಯಕ್ತಿಗೆ ಮೊದಲನೆಯದಲ್ಲ. ಕಳೆದ ವರ್ಷ ಅವರ ಫ್ಲಾಟ್ ಒಳಕ್ಕೆ ನುಗ್ಗಿ ಪತ್ನಿಯ ಒಡವೆಗಳನ್ನು ಕದ್ದೊಯ್ದಿದ್ದರು ಕಳ್ಳರು.  ಆದರೆ ಈ ಕಳ್ಳತನದ ಬಗ್ಗೆ ಮಾತ್ರ ಅವರಿಗೆ ನಿಖರವಾದ ಮಾಹಿತಿ ಇತ್ತು. ಅವರಿಗೆ ಹೊಸತಾಗಿ ಪರಿಚಯವಾಗಿದ್ದ ವ್ಯಕ್ತಿ ಮಾಡಿದ್ದೆಂದು ಅವರಿಗೆ ಚೆನ್ನಾಗಿ ತಿಳಿದಿದ್ದರೂ ಪೊಲೀಸರಿಗೆ ದೂರು ಕೊಡಲು ಹೆದರಿದರು. ಏಕೆಂದರೆ ಇಲ್ಲಿನ ಪೊಲೀಸರು ಲಂಚ, ವಶೀಲಿ ಬಾಜಿಗೆ ಬೀಳದೆ ಮುಲಾಜಿಲ್ಲದೆ ಬಾಯಿ ಬಿಡಿಸಿ ಬಿಡುತ್ತಾರೆ. ಆ ವ್ಯಕ್ತಿಯ ವಿರುದ್ಧ ದೂರು ನೀಡಿದರೆ ನಾಳೆ ಭಾರತದಲ್ಲಿ ತನಗೆ ತೊಂದರೆ ಆಗಬಹುದು ಎಂದು ಹೆದರಿ ಪೊಲೀಸ್ ದೂರು ಕೊಡಲು ಒಪ್ಪಲಿಲ್ಲ. ಎಲ್ಲಾ ನನ್ ಟೈಮ್ ಅಷ್ಟೇ ಎಂದು ಕೈ ಚೆಲ್ಲಿ ಕೂತ ಅವರಿಗೆ ನಾನು ಹೇಳಿದೆ, ನಾವು ಟೈಮ್ ಅನ್ನು ದೂರುವುದು ಸರಿಯಲ್ಲ. ಜೀವನದಲ್ಲಿ ಅದೇನು ಸಂಭವಿಸಬೇಕೋ ಅದು ಆಗಿಯೇ ತೀರುತ್ತದೆ. ನಮ್ಮಿಂದ ಅದನ್ನು  ತಡೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ದೇವರ ಮೊರೆ ಹೋಗಬೇಕೆ ಹೊರತು ಸಮಯವನ್ನೂ ದೂರುವುದು ಸರಿಯಲ್ಲ ಎಂದು ನಯವಾಗಿ ಹೇಳಿದೆ. ಆದರೆ ಬೆಲೆ ಬಾಳುವ ವಸ್ತುಗಳನ್ನು ಕಳೆದು ಕೊಂಡ ಆತ ಮಾತ್ರ ‘ಸಮಯ’ ದ ಪರವಾಗಿ ನಿಂತ ನನ್ನ ನಿಲುವನ್ನು ಒಪ್ಪಿದಂತೆ ಕಾಣಲಿಲ್ಲ.

ಮೇಲೆ ಹೇಳಿದ ರೀತಿಯ ಘಟನೆಗಳನ್ನು ನಾವು ದಿನವೂ ನೋಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಒಂದರ ಹಿಂದೆ ಒಂದು ಅವಘಡಗಳು ಸಂಭವಿಸಿದರಂತೂ ಕೇಳಬೇಡಿ’ ಟೈಮ್’ ನ ಗೋಳು. ಸಮಯದ ಜನ್ಮ ಜಾಲಾಡುತ್ತಾರೆ. ಪರಿಹಾರ ಕಾಣಲೆಂದು ಜ್ಯೋತಿಷ್ಯರ,  ಮಂತ್ರವಾದಿಗಳ  ಮೊರೆಯೂ ಹೋಗುತ್ತಾರೆ. ತಂತ್ರ ಯಂತ್ರ ಕಟ್ಟಿಸಿ ಕೊಳ್ಳಲು ಎಂದು  ಮತ್ತಷ್ಟು ಕಳೆದುಕೊಳ್ಳುತ್ತಾರೆ. ಆದರೆ ನಮಗೆದುರಾಗುವ ಎಲ್ಲಾ ಪ್ರಾರಬ್ದ ಗಳಿಗೂ ನಿಜವಾಗಿಯೂ ‘ಟೈಮ್’’ ಅಥವಾ ಕೆಟ್ಟ ಘಳಿಗೆ ಕಾರಣವೇ?  

ಕಾಲವನ್ನು  ಸಂವತ್ಸರ ಎಂದು ಕರೆಯುತ್ತಾರೆ. ವತ್ಸರ ಎಂದರೆ ದೇವರು. ಅಂದರೆ ಕಾಲವೇ ದೇವರು. ಸಂವತ್ಸರ ಎಂದರೆ ವರ್ಷ ಎಂದಲ್ಲ. ಪ್ರತೀ ಕ್ಷಣ, ನಿಮಿಷ, ಘಂಟೆಗಳು ಸಂವತ್ಸರವೇ. ಏಕೆಂದರೆ ಈ ಕ್ಷಣ, ನಿಮಿಷ, ಘಂಟೆಗಳಿಂದ ದಿನಗಳು, ತಿಂಗಳುಗಳಾಗಿ ವರ್ಷ ಎಂದೆನ್ನಿಸಿ ಕೊಳ್ಳುತ್ತದೆ. ಅಂದರೆ ನಾವು ನಮಗೆ ಎದುರಾಗುವ ಕಷ್ಟ, ದುಃಖ ದುಮ್ಮಾನಗಳಿಗೆ  ಸಮಯವನ್ನು ಹಳಿದರೆ ದೇವರನ್ನು ತೆಗಳಿದಂತಾಗುತ್ತದೆ, ಅಲ್ಲವೇ?    

ತೃಣಮಪಿ ನಃ ಚಲತಿ. ದೇವನ ಅಪ್ಪಣೆಯಿಲ್ಲದೆ ಹುಲ್ಲೂ ಕೂಡ ಚಲಿಸದು ಎನ್ನುವ ಅರ್ಥದ ಈ ಮಾತು ಇಸ್ಲಾಂ ಧರ್ಮೀಯರ “ಪವಿತ್ರ ಕುರ್’ಆನ್” ನಲ್ಲಿಯೂ ಇದೆ. ಪ್ರತೀ ಕಾರ್ಯವೂ, ಪ್ರತೀ ಘಟನೆಯೂ, ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಘಟನೆಗಳು ದೇವನ ಅಪ್ಪಣೆಯಿಲ್ಲದೆ ನಡೆಯುವುದಿಲ್ಲ ಎಂದು ಆಸ್ತಿಕರು ಬಲವಾಗಿ ನಂಬುವರು. ಅದರಲ್ಲೂ ಮುಸ್ಲಿಮರಲ್ಲಿ ಈ ನಂಬಿಕೆ ಹೆಚ್ಚು. ಯಾವುದೇ ತೆರನಾದ ಅವಘಡಕ್ಕೂ ಕಾಲವನ್ನಾಗಲಿ, ದುರದೃಷ್ಟ ವನ್ನಾಗಲೀ ಟೀಕಿಸಲು, ಶಪಿಸಲು ಹೋಗದೆ ಎಲ್ಲಾ ದೈವೇಚ್ಛೆ ಎಂದು ಇರುವುದರಲ್ಲೇ ತೃಪ್ತಿ ಕಾಣುತ್ತಾರೆ. ಒಮ್ಮೆ ಪಾಶ್ಚಾತ್ಯ ದೇಶವೊಂದರ ಯಾತ್ರಿಯೊಬ್ಬ (ನೆದರ್ ಲ್ಯಾಂಡ್ಸ್ ನ van der post ಎಂದು ನನ್ನ ನೆನಪು) ಸಹರಾ ಮರುಭೂಮಿಯ ಮುಖಾಂತರ ಪ್ರಯಾಣ ಬೆಳೆಸಿದಾಗ ಮೊರಾಕ್ಕೋ ದೇಶಕ್ಕೆ ಸೇರಿದ ಮರುಭೂಮಿಯಲ್ಲಿ ಒಂದು ದೃಶ್ಯ ಕಾಣಲು ಸಿಗುತ್ತದೆ.  ಮರುಭೂಮಿಯಲ್ಲಿ ವಾಸಿಸುವ ಬೆದೂಯಿನ್ (bedouin) ಬುಡಕಟ್ಟಿನವರು ಒಂದು ಕಡೆ ತಾತ್ಕಾಲಿಕ ಡೇರೆ ಹಾಕಿದ್ದನ್ನು ಈತ ಕಾಣುತ್ತಾನೆ. ಅವರೊಂದಿಗೆ ಹರಟುತ್ತಾ ಇದ್ದಾಗ ಒಮ್ಮೆಗೆ ಈ ಬಿರುಗಾಳಿ ಅಪ್ಪಳಿಸಿ ಕುರಿ, ಕೋಳಿ, ಒಂಟೆ, ಡೇರೆ, ಸಾಮಾನು ಪಾತ್ರೆ ಪಗಡಿ ಎಲ್ಲವನ್ನೂ ಬಾಚಿಕೊಂಡು ಹೋಗಿ ಬಿಡುತ್ತದೆ. ಮರುಭೂಮಿಯ ಬಿರುಗಾಳಿ (sand storm) ಗೊತ್ತೇ ಇದೆಯಲ್ಲಾ. ತನ್ನ ಹಾದಿಗೆ ಅಡ್ಡ ಬರುವ ಯಾವುದನ್ನೂ ಬಿಡದೆ ಬಾಚಿಕೊಂಡು ಹೋಗುವ ಬಿರುಗಾಳಿ. ನಮಗೆ ಪರಿಚಯವಿರುವ ಸುಂಟರ ಗಾಳಿಯಂತೆ. ಸಾವಿರ ಸುಂಟರ ಗಾಳಿ ಕೂಡಿಕೊಂಡು ಧಾಳಿ ಮಾಡಿದರೆ ಹೇಗಿರುತ್ತೋ ಹಾಗಿರುತ್ತದೆ ಮರುಭೂಮಿಯ ಬಿರುಗಾಳಿ. ಸುಮಾರು ಹೊತ್ತಿನ ನಂತರ ಬಿರುಗಾಳಿಯ ಅಬ್ಬರ ನಿಂತ ಮೇಲೆ ಒಂದೇ ಒಂದು ಶಬ್ದವನ್ನೂ ಆಡದೆ, ತುಟಿ ಪಿಟಿಕ್ಕನ್ನದೆ ತಮ್ಮ ಕೆಟ್ಟ ಘಳಿಗೆಯನ್ನು ತೆಗಳದೆ, ಇದೊಂದು ಸಾಮಾನ್ಯ ಘಟನೆ ಎನ್ನುವ ಭಾವದಿಂದ  ಸಿಕ್ಕಿದ್ದೇ ಶಿವ ಎಂದು ಬೀಸಿದ ಬಿರುಗಾಳಿ ಅಳಿದುಳಿಸಿದ ಸಾಮಾನುಗಳನ್ನು ಅತ್ಯಂತ ಶ್ರದ್ಧೆಯಿಂದ, ಜೋಪಾನದಿಂದ, ಸಂಯಮದಿಂದ ಹೆಕ್ಕುತ್ತಿದ್ದನ್ನು ನೋಡಿದ ಈ ಪಾಶ್ಚಾತ್ಯ ದಂಗಾಗಿ ನಿಲ್ಲುತ್ತಾನೆ. ಕೆಲವೇ ಕ್ಷಣಗಳಲ್ಲಿ ತಮ್ಮ ಬದುಕನ್ನೇ ಮೂಲೋತ್ಪಾಟನೆ ಮಾಡಿದ ಬಿರುಗಾಳಿಯನ್ನು ಶಪಿಸದೇ, ಅತ್ಯಂತ ಸಮಯದಿಂದ ಸಹಿಸಿ, ಶಾಂತ ಚಿತ್ತತೆಯಿಂದ ಅಳಿದುಳಿದುದದನ್ನು ಆರಿಸಿ ಕೊಳ್ಳುತ್ತಿದ್ದ ಬೆದೂಯಿನ್ ರನ್ನು ಕಂಡು ಆತನಿಗೆ ತನ್ನ ಕಣ್ಣುಗಳ ನ್ನು ನಂಬಲಾಗಲಿಲ್ಲ. ಅಲ್ಲಿದ್ದ ಒಬ್ಬನಿಗೆ ಈ ಕುರಿತು ಕೇಳಿದಾಗ ಅವನು ಹೇಳಿದ್ದು, ನಮಗೆ ಈ ಸ್ಥಿತಿ ತಂದ ಬಿರುಗಾಳಿಯನ್ನು ನಾನು ಶಪಿಸಿ ಪಡೆಯುವುದಾದರೂ ಏನನ್ನು? ಹೋದ ಸಾಮಾನುಗಳು, ಆದ ನಷ್ಟ, ತಿರುಗಿ ಬರುತ್ತದೆಯೇ? ಹೆಚ್ಚು ವಿಳಂಬ ಮಾಡದೇ “ಅಲ್ಹಂದು ಲಿಲ್ಲಾಹ್’” (ದೇವರಿಗೆ ಸರ್ವಸ್ತುತಿ) ಎಂದು ಇರುವುದನ್ನು ಆರಿಸಿ ಕೊಂಡು ಮುಂದಿನ ದಾರಿ ನೋಡುವುದು ತಾನೇ ಜಾಣತನ ಎಂದು ಆತನಿಗೆ ಮರು ಪ್ರಶ್ನೆ ಹಾಕಿದಾಗ ಬಿಳಿಯ ಆ ಪ್ರಶ್ನೆಗೆ ಉತ್ತರ ಕಾಣದೆ ತನ್ನ ದೇಶದಲ್ಲಾಗಿದ್ದರೆ ಏನು ಮಾಡುತ್ತಿದ್ದರು ಎಂದು ಯೋಚಿಸುತ್ತಾ ತನ್ನ ದಾರಿ ಹಿಡಿಯುತ್ತಾನೆ.  

ಎಂಥದ್ದೇ ಗಂಭೀರವಾದ, ಕ್ಲಿಷ್ಟಕರವಾದ, ದಬ್ಬಾಳಿಕೆಗೆ ಒಳಗಾದಾಗ, ಮಾನಸಿಕ ಕ್ಲೇಶ, ದೈಹಿಕ ನೋವು, ಅಗಲಿಕೆ ಬಂದಾಗಲೂ ಅರಬರು ಹೇಳುವುದು “ಅಲ್ಹಂದು ಲಿಲ್ಲಾಹ್”, ಅಥವಾ “ನಿನ್ನಿಂದಲೇ ಬಂದೆವು, ನಿನ್ನಲ್ಲಿಗೇ ನಾವು ಮರಳುವೆವು, (ಇನಾ ಲಿಲ್ಲಾಹಿ ವಯಿನ್ನಾ ಇಲೈಹಿ ರಾಜಿಊನ್) ಎನ್ನುವ ಮಾತನ್ನು ಹೇಳುತ್ತಾರೆ. ವಿಶೇಷವಾಗಿ ನಿಧನದ ವಾರ್ತೆ ಕೇಳಿದಾಗ ಈ ಮಾತನ್ನು ಹೇಳಲೇ ಬೇಕು. ಅಯ್ಯೋ ಪಾಪ, ಯಾವಾಗ ಸತ್ರು, ಪಾಪ, ಎಷ್ಟು ಚೆನ್ನಾಗಿದ್ರು, ಚಿಕ್ಕ ವಯಸ್ಸು, ಸ್ವಲ್ಪ ಮೊದಲು ತಾನೇ  ಮಾತನಾಡಿಸಿದ್ದೆ…. ಎಂದೆಲ್ಲಾ ಬಡಬಡಿಸುವ ಗೋಜಿಗೆ ಅರಬರು ಹೋಗುವುದಿಲ್ಲ. ಏಕೆಂದರೆ ಎಲ್ಲವೂ ವಿಧಿಯ ಕೈಯ್ಯಲ್ಲಿ, ಆ ವಿಧಿಯನ್ನು ಕಾರ್ಯಗತ ಗೊಳಿಸುವವನೇ ಮೇಲೆ ಕೂತಿರುವ ಆ ಪರಮಾತ್ಮ. ಮತ್ತೊಂದು ಹದೀಸ್ ಸೂಕ್ತದಲ್ಲಿ “ಆದಮನ (ಆದಿ ಮಾನವ) ಮಗ ತಪ್ಪು ತಿಳಿದಿದ್ದಾನೆ. ಘಳಿಗೆಯನ್ನು ಅವನು ಶಪಿಸುತ್ತಾನೆ ಆದರೆ ನಾನೇ ಆಗಿದ್ದೇನೆ ಆ ಘಳಿಗೆ. ಒಳಿತು ಮತ್ತು ಎಲ್ಲವೂ ನನ್ನ ಕೈಗಳಿಂದಲೇ ಬರುತ್ತವೆ. ಮತ್ತು ಹಗಲನ್ನು ಹಿಂಬಾಲಿಸುವ ಇರುಳು ಸಹ ನನ್ನಿಂದಲೇ” ಎಂದು ದೇವರು ಹೇಳುತ್ತಾನೆ.       

ನಮ್ಮ ಅಜಾಕರೂಕತೆಯಿಂದ ಉಂಟಾಗುವ ಅನಾಹುತಗಳಿಗೆ ಸುಖಾ ಸುಮ್ಮನೆ ಸಮಯವನ್ನು ಶಿಲುಬೆಗೆ ಏರಿಸದೆ ಹೆಚ್ಚು ಜಾಗರೂಕರಾಗೋದೇ ಲೇಸು ಅಲ್ಲವೇ?