ಚಿತ್ರ, ಘನ ಘೋರ

ಚಿತ್ರಗಳು ನೋಡುವವರ ಮೇಲೆ ಗಾಢ, ಗಂಭೀರ ಪರಿಣಾಮ ಬೀರುತ್ತವೆ. ಆಂಗ್ಲ ಭಾಷೆಯಲ್ಲಿ a picture speaks a thousand words ಮತ್ತು  a picture is worth of thousand words ಎಂತಲೂ ಹೇಳುತ್ತಾರೆ. ಚಿತ್ರಗಳು ಬರೀ ಭಾವನೆಗಳನ್ನ ರೂಪಿಸುವುದಕ್ಕೆ, ಕೆರಳಿಸುವುದಕ್ಕೆ ಮಾತ್ರವಲ್ಲ, ಹೇಳಿದ ವಿಷಯ ಸರಿಯಾಗಿ ಅರ್ಥವಾಗಿ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲೂ ಸಹಕಾರಿಯಾಗುತ್ತವೆ.

ಒಸಾಮಾನನ್ನು ಬಲಿ ತೆಗೆದುಕೊಂಡ ವಿಷಯವನ್ನು ಒಬಾಮಾ ಅಮೆರಿಕೆಗೂ, ವಿಶ್ವಕ್ಕೂ ಹೇಳಿದ ಕೂಡಲೇ ಎಲ್ಲರೂ ಕೇಳಿದ್ದು ಓಕೆ, ಎಲ್ಲಿದೆ ಚಿತ್ರ? ಎಂದು. ಹತ್ತು ವರ್ಷಗಳಿಂದ ಪ್ರಪಂಚ ಪೂರ್ತಿ ಜಾಲಾಡಿಯೂ ಸಿಗದ, ಈ ಹುಡುಕಾಟಕ್ಕೆ ಸುಮಾರು ಒಂದು ಟ್ರಿಲ್ಲಿಯನ್ ಡಾಲರ್ (೧೦೦ ಶತ ಕೋಟಿ ಡಾಲರ್) ಖರ್ಚು ಮಾಡಿಯೂ ಕೈಗೆ ಸಿಗದ ಒಸಾಮಾ ಏಕಾಏಕಿ ಸಿಕ್ಕಿ ಬಿದ್ದಿದ್ದು ಮಾತ್ರವಲ್ಲ ಸತ್ತೂ ಬಿದ್ದ ಎಂದರೆ? picture please, ಎಂದಿತು ಅಮೇರಿಕಾ ಮತ್ತು ವಿಶ್ವ. ಚಿತ್ರ ಘೋರವಾದ ದೃಶ್ಯದಿಂದ ಕೂಡಿದ್ದರಿಂದ ನಾವು ಕೊಡೋಲ್ಲ ಅಂತ ಶ್ವೇತ ಭವನ. gruemsome picture ತೋರಿಸಿ ಒಸಾಮಾನ ಬೆಂಬಲಿಗರನ್ನು ಮತ್ತಷ್ಟು ಹಿಂಸೆಗೆ ಪ್ರಚೋದಿಸಲು ನಾವು ತಯಾರಿಲ್ಲ, ಮಾತ್ರವಲ್ಲ “You know, that’s not who we are.”, ಎಂದರು ಅಮೆರಿಕೆಯ ಅಧ್ಯಕ್ಷರು.

ತನ್ನ ಬದುಕಿನ ಒಂದು ಘಟ್ಟದ ನಂತರ ಘೋರವಾಗಿ ಪ್ರಪಂಚವನ್ನು ಕಾಡಿದ ಒಸಾಮಾ ತನ್ನ ಸಾವಿನಲ್ಲೂ ಘನ ಘೋರನಾದ. ಈ ಶುಕ್ರವಾರ ಹೇಳಿಕೆಯೊಂದರಲ್ಲಿ ತಮ್ಮ ನಾಯಕ ಸತ್ತಿರುವುದನ್ನು ಅಲ್ಕೈದಾ ಖಚಿತಪಡಿಸಿ ಚಿತ್ರಕ್ಕಾಗಿ ಗೋಗರೆಯುತ್ತ್ತಿದ್ದ ಜನರ ಬಾಯನ್ನು ಶಾಶ್ವತವಾಗಿ ಮುಚ್ಚಿಸಿತು.

ಹಸಿವು ಮತ್ತು ಸರ್ಕಸ್

ಕೇರಳದ ಹೆಸರನ್ನು ಈಗ “ಕೇರಳಮ್” ಎಂದು ಮಾಡಲು ಸರಕಾರ ಯೋಚಿಸುತ್ತಿದೆ ಎಂದು ವರದಿ. ದಕ್ಷಿಣ ಭಾರತದ ಸಂಪೂರ್ಣಸಾಕ್ಷರ ರಾಜ್ಯ ಹೆಸರು ಬದಲಿಸುವುದರಲ್ಲಿ ಹಿಂದೆ ಇಲ್ಲ ಎಂದು ಈಗಾಗಲೇ ತೋರಿಸಿ ಕೊಟ್ಟಿದೆ. ತ್ರಿಚೂರ್, ಕ್ಯಾಲಿಕಟ್, ಟ್ರೀವೆನ್ಡ್ರಂ ಗಳನ್ನು ಬದಲಿಸಿ ತ್ರಿಶೂರ್, ಕೊಜಿಕೋಡ್, ತಿರುವನಂತಪುರಂ ಎಂದು ಬದಲಿಸಲಾಗಿದ್ದು ಹೆಸರುಗಳನ್ನ ಬದಲಿಸಿ ಅದೇನನ್ನು ಸಾಧಿಸಲು ಹೊರಟಿದ್ದೇವೆಯೋ ಎಂದು ಖಾದಿ ಧರಿಸುವ ರಾಜಕಾರಣಿಗಳೇ ಹೇಳಬೇಕು. ಭಾರತದ ಬಡತನದ ಬಗೆಗಿನ ವರದಿಯೊಂದು ನಮ್ಮ ವ್ಯವಸ್ಥೆಯ ವೈಫಲ್ಯದ ಮೇಲೆ ಕನ್ನಡಿ ಹಿಡಿದಿರುವಾಗ ರಾಜಕಾರಣಿಗಳು ಹೆಸರು ಬದಲಿಸುವ ಸರ್ಕಸ್ ಗಳಲ್ಲಿ ನಿರತರಾಗಿ ಜನರ ಲಕ್ಷ್ಯ ಬೇರೆಡೆ ತಿರುಗಿಸುವ ಆಟದಲ್ಲಿ ನಿರತರಾಗಿದ್ದಾರೆ. ಆಫ್ರಿಕಾದ ೨೬ ಅತಿ ಬಡ ರಾಷ್ಟ್ರಗಳಲ್ಲಿರುವ ಬಡವರಿಗಿಂತಲೂ ಹೆಚ್ಚು ಬಡವರು ನಮ್ಮ ದೇಶದ ಎಂಟು ರಾಜ್ಯಗಳಲ್ಲಿ ಇದ್ದಾರಂತೆ. ಆ ಎಂಟು ರಾಜ್ಯಗಳು ಯಾವುವೆಂದರೆ ಬಿಹಾರ್, ಛತ್ತೀಸ್ ಘಡ, ಒರಿಸ್ಸಾ, ಝಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ.      

ಆದರೆ ರೊಟ್ಟಿ ಯಿಲ್ಲದೆ ಹಸಿದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದಂತೆಯೇ ಕೋಟ್ಯಾಧಿ ಪತಿಗಳ ಸಂಖ್ಯೆಯೂ ಅಷ್ಟೇ ವೇಗದಲ್ಲಿ ಬೆಳೆಯುತ್ತಿರುವುದು ವಿಸ್ಮಯಕಾರಿ ಬೆಳವಣಿಗೆ ಎನ್ನಬಹುದು.