ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ಭಾರತ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೆಟ್ಟ ಅಂಪೈರಿಂಗ್ ಕಾರಣ ತಡವಾಗಿ ಮುಗಿಯಿತು. ಇಲ್ಲದಿದ್ದರೆ ಸ್ವಲ್ಪ ಬೇಗನೆ ಪಂದ್ಯ  ಗೆದ್ದು ವಿಶ್ರಾಂತಿ ಪಡೆಯ ಬಹುದಿತ್ತು ಎಂದು ವಿಜಯದ ನಂತರ  ನಮ್ಮ ತಂಡದ ನಾಯಕ ಧೋನಿ ದೂರಿದರು. ಕಾಲ ಹೇಗೆ ಬದಲಾಯಿತು ನೋಡಿ.  

೧೯೮೩ ರಲ್ಲಿ ವೆಸ್ಟ್ ವಿಂಡೀಸ ನ್ನು ಸೋಲಿಸಿ ವಿಶ್ವ ಕಪ್ ಗೆದ್ದ ಭಾರತ ವಿಶ್ವವನ್ನೇ ಬೆರಗು ಗೊಳಿಸಿತ್ತು. ಆಗಿನ ಕಾಲದ ಪಂಡಿತರ ಪ್ರಕಾರ ಬಲಿಷ್ಠ ವಿಂಡೀಸ್ ವಿರುದ್ಧದ ಭಾರತದ ಗೆಲುವು ಒಂದು fluke ಆಗಿತ್ತು. ಆದರೆ ಭಾರತ ಬರೀ ಫೈನಲ್ ನಲ್ಲಿ ಅಲ್ಲ, prelim ರೌಂಡ್ಸ್ ನಲ್ಲೂ ವಿಂಡೀಸನ್ನು ಮಣಿಸಿತ್ತು. ಆದರೂ ಟೀಕಾಕಾರರಿಗೆ ಭಾರತದ ಶಕ್ತಿಯ ಬಗ್ಗೆ ಅನುಮಾನವೇ ಇತ್ತು. ಈ ಅನುಮಾನ ನಿಜವಾಗಿಸಲೆಂಬಂತೆ ವೆಸ್ಟ್ ಇಂಡೀಸ್ ಭಾರತ ಪ್ರವಾಸ ಆರಂಭಿಸಿತು. ಆರು ಟೆಸ್ಟು, ಐದು ಏಕ ದಿನ ಪಂದ್ಯಗಳ ಸರಣಿಯಲ್ಲಿ  ಭಾರತವನ್ನು ಮೂರು ಟೆಸ್ಟು ಗಳಲ್ಲೂ, ಎಲ್ಲಾ ಏಕ ದಿನ ಪಂದ್ಯಗಳಲ್ಲೂ ಸೋಲಿಸಿ ವಿಶ್ವ ಕಪ್ ಸೋತಿದ್ದು ನಮ್ಮ ತಿಮಿರಿನಿಂದ ಅಲ್ಲದೆ ಭಾರತದ ಕ್ರೀಡಾ ಕೌಶಲ್ಯದಿಂದ ಅಲ್ಲ ಎನ್ನುವುದನ್ನು ವಿಂಡೀಸ್ ವಿಶ್ವಕ್ಕೆ ತೋರಿಸಿ ಕೊಟ್ಟಿತು.  

ಆಗ ಪ್ರವಾಸಗೈದಿದ್ದ ವಿಂಡೀಸ್ ತಂಡದಲ್ಲಿ ಘಟಾನುಘಟಿ ಗಳೇ ತುಂಬಿದ್ದರು. ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಮಾಲ್ಕಂ ಮಾರ್ಷಲ್ ಹೀಗೆ ಅತಿರಥ ಮಹಾರಥರ ಧಾಳಿಗೆ ನಮ್ಮ ತಂಡ mediocre ತಂಡದಂತೆ ತೋರಿತು. ಮಾಲ್ಕಂ ಮಾರ್ಷಲ್ ಅಂತೂ ತನ್ನ ಮಾರಕ ಅತಿ ವೇಗದ ಬೌಲಿಂಗ್ ಧಾಳಿಯಿಂದ ನಮ್ಮ ಬ್ಯಾಟ್ಸ್ಮನ್ ಗಳಿಗೆ ಸಿಂಹ ಸ್ವಪ್ನವಾಗಿದ್ದ. ಈಗ ನೋಡಿ ಅವರ ಪಾಡನ್ನು. ಯಾವುದೇ ಮೊತ್ತದ ರನ್ನು ಚೇಸ್ ಮಾಡಲೂ ಪಡುವ ಪಾಡನ್ನು.    

ಯಥೇಚ್ಛ ಹಣ, ಮತ್ತು ಹಣದ ಅಭಾವ ಯಾವ ರೀತಿ ಒಂದು ಕ್ರೀಡೆಯನ್ನು ರೂಪಿಸಬಲ್ಲುದು ಮತ್ತು ನಿಸ್ತೇಜವಾಗಿಸಬಹುದು ಎನ್ನುವುದಕ್ಕೆ ಭಾರತ ವಿಂಡೀಸ್ ಕ್ರಿಕೆಟ್ ಕ್ರೀಡೆಯೇ ಸಾಕ್ಷಿ. ಕ್ರಿಕೆಟ್ ನಲ್ಲಿ ಹಣವಿದೆ ಮತ್ತು ಶ್ರೀಮಂತ ಪ್ರಾಯೋಜಕರ ಬೆಂಬಲ ಅದಕ್ಕಿದೆ ಎಂದರಿತ ಪೋಷಕರು ತಮ್ಮ ಮಕ್ಕಳು ಈ ಕ್ರೀಡೆಯನ್ನು ಪ್ರವೇಶಿಸಲು ಉತ್ತೇಜಿಸಿದರು. ಪರಿಣಾಮ ಹೊಸ ಪ್ರತಿಭೆಗಳು ದಂಡು ದಂಡಾಗಿ ಆಗಮಿಸಿದವು. ಈಗ ಭಾರತ ಕ್ರಿಕೆಟ್ ಸುದೃಢ. ಬಲಿಷ್ಠ. ಆದರೆ ಈ ಭಾಗ್ಯದ ಲಕ್ಷ್ಮಿ ವಿಂಡೀಸರಿಗೆ ಒಲಿಯದೆ ಹೋದಳು. ಪ್ರಾಯೋಜಕರ ಕೊರತೆ ಮಾತ್ರವಲ್ಲ ಅಲ್ಲಿನ ಕ್ರಿಕೆಟ್ ಮಂಡಳಿ ಕೊಡುವ ಹಣವೂ ಏನೇನೂ ಸಾಲದಾದಾಗ ಒಂದು ಕಾಲದಲ್ಲಿ fearsome  ಆಗಿದ್ದ ವಿಂಡೀಸ್ ಕ್ರಿಕೆಟ್ ನೆಲ ಕಚ್ಚಿತು.

ವಿಂಡೀಸ್ ತನ್ನ ಗತ ವೈಭವವನ್ನು ಯಾವಾಗ ಮರಳಿ ಪಡೆದೀತೋ ಕಾದು ನೋಡಬೇಕು.    

ಅಪ್ಪನೊಂದಿಗೆ ಒಂದು ಸಂಜೆ

ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಡ್ರೈವರ್ ಒಂದಿಗೆ ಅವರನ್ನು ಕಳಿಸುವ ನಾನು ಇಂದು ಆಫೀಸಿನಿಂದ ಸ್ವಲ್ಪ ಬೇಗ ಬಿಡುವು ಮಾಡಿಕೊಂಡು ಅಪ್ಪನನ್ನೂ ಮತ್ತು ಮಡದಿ ಮಕ್ಕಳ ಸಮೇತ ಮಕ್ಕಾದ ಕಡೆ ಹೊರಟೆ. ಸಂಜೆ ಐದಾದರೂ ಮರುಭೂಮಿಯ ಸೂರ್ಯ ಸುಲಭವಾಗಿ ಇರುಳಿಗೆ ಕೊರಳೊಡ್ಡುವುದಿಲ್ಲ. ಪ್ರಖರತೆ ಸ್ವಲ್ಪ ಜೋರೇ. ತನ್ನ ದಿನಚರಿಯ ಕೊನೆಯಲ್ಲೂ ಪೊಗರು ತೋರಿಸಿಯೇ ವಿರಮಿಸುವುದು. ಡ್ರೈವ್ ಮಾಡುತ್ತಾ ಪಪ್ಪ ರನ್ನು ಮಾತಿಗೆ ಎಳೆದೆ. ಮನೆಯಲ್ಲಿ ಹಿರಿಯರ ಇದೆಂಥಾ ಆಂಗ್ಲ ಸಂಸ್ಕಾರ ಎನ್ನುವ ಪ್ರತಿಭಟನೆಯ ನಡುವೆಯೂ ನಾವು ಅಪ್ಪ ಅಮ್ಮನನ್ನು ಪಪ್ಪ- ಮಮ್ಮಿ ಎಂದು ಕರೆಯುತ್ತೇವೆ. ಇದು ನಮ್ಮ ಚಿಕ್ಕಮ್ಮಂದಿರು ಹಾಕಿದ ಚಾಳಿ. ಹರಟುತ್ತಾ ನಾನು ಡ್ರೈವ್ ಮಾಡುತ್ತಿದ್ದ GMC Yukon ಗಾಡಿಯ ಡ್ಯಾಶ್ ಬೋರ್ಡ್ ೧೪೦ ಕೀ ಮೀ ಮುಳ್ಳನ್ನು ಮುಟ್ಟಿದ್ದನ್ನು ನೋಡಿ ಪಪ್ಪ ತಮ್ಮ ಸಂದು ಹೋದ ಕಾಲದ ಮುಳ್ಳನ್ನು ಹಿಂದಕ್ಕೆ ಓಡಿಸಿ ಸುಂದರ ನೆನಪಿನ ಸುರುಳಿ ಬಿಚ್ಚಿದರು.

ನನ್ನ ತಂದೆ ಕೇರಳದ ಕಾಸರಗೋಡಿನಿಂದ ಸುಮಾರು ೮ ಕೀ.ಮೀ ದೂರದಲ್ಲಿರುವ ಚೇರೂರ್ ಗ್ರಾಮದವರು. ಬದುಕಿನ ಸಂಗಾತಿಯಾಗಿ ಬಂತು ಕಡು ಬಡತನ. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಪಪ್ಪ ಮ್ಯಾಟ್ರಿಕ್ ಮುಗಿಸಿದ್ದರು. ನಂತರ ಓದಲು ಹಣದ ಕೊರತೆಯಿಂದ ಶಾಲೆ ಬಿಟ್ಟು ವಿವಿಧ ಧಂಧೆ ಗೆ ಇಳಿದರು. ಚೇರೂರ್ ನ ಗುಡ್ಡದ ತಳದಲ್ಲಿ ಅವರ ಮನೆಯಂತೆ. ತನ್ನ ಅಣ್ಣನ ಸೈಕಲ್ ಅನ್ನು ಗುಡ್ಡದ ಮೇಲೆ ತಲುಪಿಸಬೇಕು ಪಪ್ಪ. ಕಿರಿಯರ ಮೇಲೆ ಹಿರಿಯರ ಸವಾರಿ. ದೂರವೆಲ್ಲಾದರೂ ಹೋಗಬೇಕೆಂದರೆ ಕಾಸರಗೋಡಿನವರೆಗೆ ಸೈಕಲ್ ಅಥವಾ ನಡೆದುಕೊಂಡು ಬಂದು ನಂತರ “ಚಾರ್ಕೋಲ್ ಬಸ್” ಹತ್ತಬೇಕು ಎಂದರು ಪಪ್ಪ. ಚಾರ್ಕೋಲ್ ಬಸ್ಸಾ, ಎಂದು ನಾನು ಅಚ್ಚರಿಯಿಂದ ಕೇಳಿದೆ. ಹೌದು ಕಲ್ಲಿದ್ದಲ ಬಸ್ಸು ಕಣೋ ಆಗಿನ ಕಾಲದಲ್ಲಿ ಎಂದರು ಪಪ್ಪ. ನನಗೆ ನಂಬಲಾಗಲಿಲ್ಲ. ಉಗಿ ಬಂಡಿಯನ್ನು ನೋಡಿ, ಹತ್ತಿ ಪರಿಚಯವಿದ್ದ ನನಗೆ ಕಲ್ಲಿದ್ದಲ ಬಸ್ಸು ವಿಚಿತ್ರವಾಗಿ ತೋರಿತು. ಬಸ್ಸಿನ ಬಾನೆಟ್ ಮೇಲೆ ಒಂದು ತೂತಿರುತ್ತದೆ. ಅದಕ್ಕೆ ಲಿವರ್ ಹಾಕಿ ಕಂಡಕ್ಟರ್ ಜೋರಾಗಿ ತಿರುಗಿಸುತ್ತಾನೆ ಗಿರ್ರ್, ಗಿರ್ರ್ ಅಂತ. ಈ ಗಿರ್ರ್, ಗಿರ್ರೂ, ಕಂಡಕ್ಟರನ ಏದುಸಿರೂ ಸೇರಿ ಬಸ್ಸು ಡುರ್ರ್, ಡುರ್ರ್, ಎಂದು ಸದ್ದು ಮಾಡುತ್ತಾ ಜೀವ ತುಂಬಿಕೊಳ್ಳುತ್ತದೆ. ವಾಹ್ ಎಂಥ ಸುಂದರ ಪ್ರಯಾಣವಾಗಿರಬಹುದು ಕಲ್ಲಿದ್ದಲಿನ ಬಸ್ಸಿನದು. ನನ್ನ ದೊಡ್ಡಪ್ಪ ಭದ್ರಾವತಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಗೆ ಇನ್ನೂ ಚಿಕ್ಕ ಪ್ರಾಯದ ನನ್ನ ಅಪ್ಪ ಬಂದರು ಅಣ್ಣನ ಸಹಾಯಕ್ಕೆಂದು. ಭದ್ರಾವತಿಯಿಂದ ಕಾಸರಗೋಡಿಗೆ ಪ್ರಯಾಣ ಬೆಳೆಸುವುದು ಚಂದ್ರಯಾನದಂತೆ ಇರಬೇಕು ಎಂದು ತೋರಿತು ನನಗೆ ನನ್ನ ಅಪ್ಪನ ಅನುಭವ ಕೇಳಿ.  ಕೇರಳದಲ್ಲಿ ಅಕ್ಕಿ, ಸಕ್ಕರೆ ಹೀಗೆ ಅವಶ್ಯಕ ವಸ್ತುಗಳ ಅಭಾವವಂತೆ. ಅದರ ಮೇಲೆ ಕಾಳ ಧಂಧೆ ಬೇರೆ. ಮೂರು ಹೊತ್ತಿನ ಊಟ ಬಹಳಷ್ಟು ಜನರಿಗೆ ಅಪರೂಪ. ಬೆಳಿಗ್ಗೆ ತಿಂದರೆ ಮಧ್ಯಾಹ್ನ ಇಲ್ಲ ಕೂಳು. ಮಧ್ಯಾಹ್ನ ತಿಂದರೆ ರಾತ್ರಿ ಉಪವಾಸ. ನನ್ನ ಅಪ್ಪನ ಬಳಿ ನನ್ನ ದೊಡ್ಡಪ್ಪ ೧೦ ಕೆಜಿ ಸಕ್ಕರೆ ಕಳಿಸಿದರು ಊರಿಗೆಂದು. ಶಿವಮೊಗ್ಗದಿಂದ ಆಗುಂಬೆಗೆ ಒಂದು ವ್ಯಾನು ಹಿಡಿಯಬೇಕು. ಆಗುಂಬೆಯಿಂದ ಸೋಮೆಶ್ವರಕ್ಕೆ ಮತ್ತೊಂದು ವ್ಯಾನು. ಸೋಮೇಶ್ವರದಿಂದ ಮಂಗಳೂರಿಗೆ ಮತ್ತೊಂದು ವ್ಯಾನು. ಈ ವ್ಯವಸ್ಥೆ ಏಕೆ ಎಂದರೆ ಘಾಟಿ ಏರಿ ಇಳಿಯಲು ಬಯಲು ಸೀಮೆಯಲ್ಲಿ ಪಳಗಿದ ವಾಹನಗಳಿಗೆ ಸಾಧ್ಯವಿಲ್ಲವಂತೆ. ಒಂದು ರೀತಿಯ ghat specialist ಈ ಆಗುಂಬೆಯಿಂದ ಸೋಮೇಶ್ವರಕ್ಕೆ ಜನರನ್ನು ಕೊಂಡೊಯ್ಯುವ ವಾಹನಗಳು. ಆಗುಂಬೆ ತಲುಪಿದ ನಂತರ ಸೋಮೇಶ್ವರಕ್ಕೆ ಅಂದು ವ್ಯಾನಿಲ್ಲ. ಬೇರೆ ದಾರಿ ಕಾಣದೆ ಸಕ್ಕರೆ ಚೀಲವನ್ನು ಹೊತ್ತು ನಡೆದುಕೊಂಡು ಆಗುಂಬೆ ಇಳಿದು ಬಂದರಂತೆ. ಭದ್ರಾವತಿಯಲ್ಲಿ ದಿನಸಿ ಅಂಗಡಿ ಇಟ್ಟು ಕೊಂಡಿದ್ದ ದೊಡ್ಡಪ್ಪ ಎರಡನೇ ವಿಶ್ವ ಯುದ್ಧದ ಸಮಯ ಭಾರತೀಯ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರಂತೆ. ಯುದ್ಧ ಮುಗಿದ ನಂತರ ಬೇಕಾದರೆ ನಿವೃತ್ತಿ ತೆಗೆದು ಕೊಳ್ಳಬಹುದು ಎಂದು ಸರಕಾರ ಹೇಳಿದಾಗ ನಿವೃತ್ತಿ ತೆಗೆದುಕೊಂಡರಂತೆ. ಇದನ್ನು ಕೇಳಿ ನನಗೆ ರೋಮಾಂಚನ. ನೌಕಾ ಸೇನೆಯಲ್ಲಿ ನನ್ನ ದೊಡ್ಡಪ್ಪ. ಇನ್ನಷ್ಟು ತಿಳಿಯುವಾ ಎಂದರೆ ಆಗ ಅಪ್ಪ ತೀರಾ ಚಿಕ್ಕವರಾಗಿದ್ದರಿಂದ ಹೆಚ್ಚಿನ ವಿವರ ಸಿಗಲಿಲ್ಲ. ದೊಡ್ದಪ್ಪನನ್ನೇ ಕೇಳೋಣ ಎಂದರೆ ಅವರು ನಿಧನರಾಗಿ ೧೮ ವರ್ಷಗಳು.  

ಆಗಿನ ಕಾಲದಲ್ಲಿ ಕೆಲವರು ಹೆಚ್ಚಿನ ಸಂಪಾದನೆಗಾಗಿ ಮಲೇಷ್ಯಾ, ಶ್ರೀಲಂಕೆಗೆ ಹೋಗುತ್ತಿದ್ದರಂತೆ. ಮತ್ತೊಬ್ಬ ದೊಡ್ಡಪ್ಪ ಶ್ರೀಲಂಕೆಯಲ್ಲಿ ಇದ್ದರು. ಅವರ ಸಂಬಳ ತಿಂಗಳಿಗೆ ೫೦ ರೂಪಾಯಿ. ಸುಮಾರು ಅರವತ್ತು ವರ್ಷಗಳ ಹಿಂದೆ ಅದು ದೊಡ್ಡ ಮೊತ್ತ. ದೊಡ್ಡಪ್ಪ ಹಣ ಹೇಗೆ ಕಳಿಸುತ್ತಿದ್ದರು ಎಂದು ನಾನು ಕೇಳಿದಾಗ ಪೋಸ್ಟ್ ಮ್ಯಾನ್ ತರುತ್ತಿದ್ದ ಎಂದು ಉತ್ತರಿಸಿದ ಅಪ್ಪ ಮತ್ತೊಂದು ಸ್ವಾರಸ್ಯವನ್ನು ಹೇಳಿದರು. ಪೋಸ್ಟ್ ಮ್ಯಾನ್ ಬಂದ ಎಂದು ಜನರಿಗೆ ತಿಳಿಯುವುದು ಘಂಟೆಯ ಸದ್ದು ಕೇಳಿದಾಗಲಂತೆ. ಹೆಗಲ ಮೇಲೆ ಒಂದು ದೊಣ್ಣೆ, ಅದಕ್ಕೆ ಒಂದು ಘಂಟೆ ಸಿಕ್ಕಿಸಿ ಘಂಟೆ ಬಾರಿಸುತ್ತಾ ಬರುತ್ತಾನಂತೆ ಅಂಚೆಯವ ಕಾಸು ಕಾಗದ ವಿತರಿಸಲು. oh, how much I miss that rustic life. ಈಗಿನ ಕಾಲದ ಈ ಮೇಲು, ಸ್ಪ್ಯಾಮು, ಕ್ರೆಡಿಟ್ ಕಾರ್ಡ್ ಸ್ಕ್ಯಾಮು ಮತ್ತು ಆಗಿನ ಕಾಲದ ಘಂಟೆಯ ನಿನಾದ.

ಪಪ್ಪ ಇಷ್ಟು ಹೇಳಿ ಮುಗಿಸುತ್ತಿದ್ದಂತೆ ಮೇಲೆಲ್ಲಾ ಥಳಕು, ಒಳಗೆಲ್ಲಾ ಟೊಳಕನ್ನು ಇಟ್ಟುಕೊಂಡು ನಮ್ಮನ್ನು ಮರುಳು ಮಾಡುತಿರುವ ಆಧುನಿಕತೆ ಬಿಂಬಿಸುವ  ಗಗನ ಚುಂಬಿ ಕಟ್ಟಡಗಳು ಭವ್ಯವಾದ ಮಕ್ಕಾ ಮಸ್ಜಿದ್ ನ ನೀಳ ಗೋಪುರಗಳನ್ನು ಕುಬ್ಜವಾಗಿಸುವ ದೃಶ್ಯ ಗೋಚರಿಸಿ ಕಾರನ್ನು ಪಾರ್ಕಿಂಗ್ ಲಾಟ್ ನತ್ತ ತಿರುಗಿಸಿದೆ ಹಳೆ ಕಾಲದ ಗುಂಗಿನಲ್ಲಿ.            

ವಯಸ್ಸಾದವರೊಂದಿಗೆ ಮಾತನಾಡುತ್ತಿದ್ದರೆ ಕೆಲವರು ಹಳೆ ತಲೆಯವನ ಜೊತೆ ಏನ್ ಕೆಲಸ ನಡಿ ಎಂದು ಗದರಿಸಿ ಎಬ್ಬಿಸುವುದಿದೆ. ನನ್ನ ಪಾಲಿಗೆ ಹಿರಿಯರು ಮನೆಗೆ ಕಿರೀಟವಿದ್ದಂತೆ. ವಯಸ್ಸಾದವರೊಂದಿಗೆ ಸಮಯ ಕಳೆಯಲು ನನಗೆ ಬೇಸರ ಎನ್ನಿಸುವುದಿಲ್ಲ. ಮುಪ್ಪು ಏನು, ಹಾಗೂ ಆ ಮುಪ್ಪಿನ ಹಿಂದೆ ಇರುವ ಅನುಭವವನ್ನು ಸವಿಯಬೇಕೆಂದರೆ ವಯಸ್ಸಾದವರೊಂದಿಗೆ ಕಾಲ ಕಳೆಯವೇಕು. ಬದುಕಿನ ಸುವರ್ಣ ಕಾಲವನ್ನು, ಪ್ರೀತಿ, ನಿಸ್ವಾರ್ಥತೆ, ಸಹನೆ, ಸರಳತೆಯಿಂದ ಕೂಡಿದ ಬದುಕನ್ನು ಕಂಡ “ಮುದಿ ತಲೆಗಳು” ತಮ್ಮ ತಲೆಯ ಮೇಲಿನ ಕೂದಲು ಬೆಳ್ಳಿ ವರ್ಣಕ್ಕೆ ತಿರುಗಿದ ಕೂಡಲೇ ಸಮಾಜಕ್ಕೆ ಹೊರೆಯಾಗಿ ಬಿಡುವುದು ಖೇದಕರ. ನಿಮ್ಮ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಹಿರಿಯರಿದ್ದಾರೆ ಅವರನ್ನು ಕಂಡು ಮಾತನಾಡಿಸಿ, ಏಕತ ಕಪೂರಳ ಸುಳ್ಳಿನ ಸರಮಾಲೆಯ ಸೀರಿಯಲ್ಲುಗಳಿಗಿಂತ ಸ್ವಾರಸ್ಯಕರ ಇವರು ಬದುಕಿದ ಬದುಕು. ನೌಕಾ ಸೇನೆಯಲ್ಲಿ ನನ್ನ ದೊಡ್ಡಪ್ಪ ಸೇವೆ ಸಲ್ಲಿಸಿದ್ದರು ಎಂದು ನನಗೆ ತಿಳಿದದ್ದು ಅವರು ಸತ್ತು ಹದಿನೆಂಟು ವರುಷಗಳ ನಂತರ, ಅದೇ ರೀತಿ ಸುಮಾರು ಅರವತ್ತು ವರುಷಗಳ ಮೊದಲು ಮೆಟ್ರಿಕ್ ಕಲಿತಿದ್ದ ನನ್ನ ಅಜ್ಜಿ ಸಹಾ ಕಳೆದ ವರುಷ ತೀರಿಕೊಂಡರು. ಇವರಿಬ್ಬರಿಂದ ನನಗೆ ತಿಳಿಯುವುದು ಬಹಳಷ್ಟಿತ್ತು, ಆದರೆ ಆಧುನಿಕ ಬದುಕಿನ ಬ್ಯಾನೆ ಆ ಅವಕಾಶವನ್ನು ನಿರಾಕರಿಸಿತು.   

ಕಲ್ಲಿದ್ದಲ ಬಸ್ಸಿನ ಬಗ್ಗೆ ಮತ್ತಷ್ಟು: ಕಲ್ಲಿದ್ದಲ ಬಸ್ಸುಗಳು ೧೯೫೦ ರವರೆಗೂ ಚೈನಾದಲ್ಲಿ ಉಪಯೋಗದಲ್ಲಿದ್ದವು ಮತ್ತು ಈಗಲೂ ಉತ್ತರ ಕೊರಿಯಾದಲ್ಲಿ ಕಲ್ಲಿದ್ದಲ ಬಸ್ಸುಗಳು ಓಡಾಡುತ್ತಿವೆ. ಎರಡನೇ ವಿಶ್ವ ಯುದ್ಧದ ನಂತರವೂ ಜಪಾನಿನಲ್ಲಿ ಇಂಥ ಬಸ್ಸುಗಳು ಓಡಾಡುತ್ತಿದ್ದವು. ೧೯೩೧ ರಲ್ಲಿ Tang Zhongming  ಕಲ್ಲಿದ್ದಲಿನಿಂದ ಓಡಾಡುವ ವಾಹನವನ್ನು ಚಲಾವಣೆಗೆ ತಂದನು.

ಇನ್ನಾದರೂ ಜೀವನದಲ್ಲಿ ಹಿಂದೆ ಬನ್ನಿ..

ಇನ್ನಾದರೂ ಜೀವನದಲ್ಲಿ ಹಿಂದೆ ಬನ್ನಿ ಹಾಡಿನಲ್ಲಿ ಮುಂದೆ ಬರುವ ಹುರುಪು ಇರಬಹುದು ಆದರೆ ನಿಜ ಜೀವನದಲ್ಲಿ ಕೆಲವೊಮ್ಮೆ ಹಿಂದೆ ಹೋಗುವ ಅವಶ್ಯಕತೆ ಬರುತ್ತದೆ. ಆಂಗ್ಲ ಭಾಷೆಯಲ್ಲಿ back to basics ಎನ್ನುತ್ತಾರೆ. ನೈತಿಕವಾಗಿ ಅಧಃಪತನದ ಹಾದಿ ಹಿಡಿದಾಗ ಹೇಳುವುದಿದೆ ಕಾಲ ಕೆಟ್ಟು ಹೋಯಿತು, now is time to look back ಅಂತ. ಕಾಲ ಎಂದಿಗೂ ಕೆಡುವುದಿಲ್ಲ, ಕಾಲವನ್ನು ಕೆಡಿಸುವವರು ನಾವು. ಇಷ್ಟೆಲ್ಲಾ ಹೇಳಲು ಕಾರಣ ಆಧುನಿಕ ಬದುಕಿನ ನೂರಾರು ಆವಿಷ್ಕಾರಗಳಲ್ಲಿ ಒಂದಾದ ಪ್ಲಾಸ್ಟಿಕ್ ಹೇಗೆ ನಮ್ಮ ಭೂಮಿಯ ಮೇಲಿನ ಬದುಕನ್ನು ದುಸ್ತರಗೊಳಿಸುತ್ತದೆ ಮತ್ತು ಅದನ್ನು ನಿಗ್ರಹಿಸಲು ನಾವೆಷ್ಟು ಶ್ರಮ ಪಡುತ್ತಿದ್ದೇವೆ ಎನ್ನುವುದರತ್ತ ಒಂದು ನೋಟ ಹರಿಸೋಣ. ಮಾರುಕಟ್ಟೆಗೆ ಕರಿಬೇವು ತರಲು ಹೋದರೆ ಕೂಡಲೇ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಾನೆ ಅಂಗಡಿಯವ. ಕಾಲವೊಂದಿತ್ತು ಬಟ್ಟೆ ಚೀಲವನ್ನು ಶಾಪಿಂಗ್ ವೇಳೆ ಕೊಂಡುಹೋಗುವುದು. ಈಗ ಅದು outdated ಮತ್ತು out of sync. ಕಾಲದೊಂದಿಗೆ ಹೆಜ್ಜೆ ಹಾಕಲು ಬರದವ ಎಂದು ಕನಿಕರದ ನೋಟ ಎದುರಾಗುತ್ತದೆ. ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಚೀಲದ ಉಪಯೋಗದಿಂದ ಆಗುವ ಅನಾಹುತ ಕೇಳಿಯೇ ಇದ್ದೇವೆ. ಕೆಲ ವರ್ಷಗಳ ಹಿಂದೆ ಮುಂಬೈ ಮಹಾ ನಗರದ ಚರಂಡಿಗಳು ಪಾಲಿಥಿನ್ ಚೀಲಗಳಿಂದ ತುಂಬಿ ಮಳೆ ನೀರು ಹರಿದು ಹೋಗಲು ಸ್ಥಳ ಇಲ್ಲದೆ ಪ್ರವಾಹದ ಪರಿಸ್ಥಿತಿ ನಿರ್ಮಿತವಾಗಿತ್ತು. ಇಂಥ ಘಟನೆಗಳಿಂದ ಬುದ್ಧಿ ಕಲಿಯುವ ಇರಾದೆ ಮತ್ತು ಸಮಯ ನಮಗಿಲ್ಲದಿದ್ದರೂ ಪಕ್ಕದ ಚೀನಾ ದೇಶ ಮಾತ್ರ ದೊಡ್ಡ ಅನಾಹುತ ಎರಗುವ ಮೊದಲೇ ಎಚ್ಚತ್ತುಕೊಳ್ಳುವ ಸಿದ್ಧತೆ ಮಾಡಿದೆ. ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಚೀನಾ ನಿಸರ್ಗಕ್ಕೆ ಮಾಡಿದ ಅನ್ಯಾಯದ ಅರಿವು ತಡವಾಗಿಯಾದರೂ ಬಂದಿತು. ಪ್ರತಿ ದಿನ ೩ ಕೋಟಿ ಚೀಲಗಳನ್ನು ಬಳಸುವ ಚೀನಾ ಇಂಥ ಚೀಲಗಳ ಉತ್ಪಾದನೆಗೆ ಬಹಳಷ್ಟು ಸಂಪನ್ಮೂಲಗಳನ್ನು ಉಪಯೋಗಿಸಬೇಕಿತ್ತು. ಅಮೇರಿಕಾ ಈ ಪ್ರಮಾಣದ ( ೩ ಕೋಟಿ ) ಚೀಲ ಬಳಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಚೀನಾ ಈಗ ಪಾಲಿಥಿನ್ ಚೀಲದ ಮೇಲೆ ನಿರ್ಬಂಧ ಹೇರಿದ್ದು ಸಾರ್ವಜನಿಕ ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ. ಈ ವಿಷಯದಲ್ಲಿ ನಾವೇಕೆ ಹಿಂದೆ ಬೀಳಬೇಕು? ಇನ್ನು ಮುಂದೆ ಸಾಮಾನು ಕೊಳ್ಳಲು ಹೋಗುವಾಗ ಬಟ್ಟೆ ಚೀಲವನ್ನು ಏಕೆ ಉಪಯೋಗಿಸಬಾರದು. ನಾವು ಮಾತ್ರವಲ್ಲ, ಮನೆಯವರಿಗೂ, ನೆಂಟರಿಷ್ಟರಿಗೂ ಸ್ನೇಹಿತರಿಗೂ ಇದರ ಬಗ್ಗೆ ತಿಳಿ ಹೇಳಿ ಒಂದು ಪುಟ್ಟ ಅಭಿಯಾನ ಆರಂಬಿಸಿದರೆ ಹೇಗೆ? every great journey starts with one small step, ಅಲ್ಲವೇ?