ಬಸವ ಜಯಂತಿ

ಬಸವಣ್ಣ ಜಯಂತಿ ನಿಮಿತ್ತ ಹಿರಿಯ ಸಾಹಿತಿ ಆನಂದರಾಮ ಶಾಸ್ತ್ರಿಗಳು ಕೆಲವೊಂದು ಅನರ್ಘ್ಯ ವಚನಗಳನ್ನು ಸಂಪದ ಓದುಗರಿಗೆ ಪರಿಚಯಿಸಿದ್ದಾರೆ. ನನಗಿಷ್ಟವಾದ ವಚನಗಳು…

ಸರಿಯಿದ್ದವರಮೇಲೂ ಕೆಲವೊಮ್ಮೆ ಸುಳ್ಳು ಅಪವಾದ ಬಂದೆರಗಬಹುದು. ಕೊಳಕು ರಾಜಕಾರಣದ ಈ ದಿನಗಳಲ್ಲಿ ಇಂಥ ಚೋದ್ಯ ಸಾಮಾನ್ಯ. ಸುಳ್ಳು ಆರೋಪವನ್ನು ಸತ್ಯಸಂಗತಿಯೆಂಬಂತೆ ಬಿಂಬಿಸುವಲ್ಲಿ ಇಂದಿನ ತಂತ್ರಜ್ಞಾನ ನೆರವಿಗೆ ಬರುತ್ತಿದೆ. ಸನ್ನಿವೇಶದ ಲಾಭ ಪಡೆದು ಮತ್ತು ತಂತ್ರಜ್ಞಾನದ ನೆರವಿನಿಂದ ಸುಳ್ಳನ್ನು ಸತ್ಯವೆಂದು ಸಾರಬಹುದಾದ ದಿನಗಳಿವು. ಇಂಥ ಚೋದ್ಯದ ಬಗ್ಗೆ ದನಿಯೆತ್ತಿದೆ ಈ ವಚನ.
  ತಾಳ ಮರದ ಕೆಳಗೆ
  ಒಂದು ಹಾಲ ಹರವಿಯಿದ್ದೊಡೆ
  ಅದ ಹಾಲ ಹರವಿಯೆನ್ನರು
  ಸುರೆಯ ಹರವಿಯೆಂಬರು
  ಈ ಭಾವನಿಂದೆಯ ಮಾಣಿಸಾ
  ಕೂಡಲಸಂಗಮದೇವಾ.
  (ಹರವಿ=ಗಡಿಗೆ; ಮಾಣಿಸು=ಇಲ್ಲವಾಗಿಸು)

ಒಂದೆ ಮನ ಮಾತ್ರವಲ್ಲ, ಮನದ ಶುದ್ಧಿಯೂ ಮನುಜನಿಗೆ ಅವಶ್ಯ. ಕಾಣುವವರ ಕಣ್ಣಿಗಷ್ಟೇ ಆತ ಶುದ್ಧನಾದರೆ ಸಾಲದು. ಶುದ್ಧಿಯೆಂಬುದು ಅಂತರಂಗದಲ್ಲೂ ಇರಬೇಕು. ಆತನ ಭಾವವು ಪರಿಶುದ್ಧವಾದುದಾಗಿರಬೇಕು.
  ಕೆಲಕ್ಕೆ ಶುದ್ಧನಾದೆನಲ್ಲದೆ
  ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ?
  ಕೈಮುಟ್ಟಿ ಪೂಜಿಸುವೊಡೆ
  ಎನ್ನ ಮನಶುದ್ಧವಲ್ಲವಯ್ಯಾ
  ಭಾವ ಶುದ್ಧವಾದೊಡೆ ಕೂಡಲ ಸಂಗಯ್ಯನು
  ಇತ್ತ ಬಾಯೆಂದೆತ್ತಿಕೊಳ್ಳನೇಕಯ್ಯಾ!
  (ಕೆಲಕ್ಕೆ=ನೆರೆಹೊರೆಯವರ ಕಣ್ಣಿಗೆ)

ಕೋಪ ಬಂದಾಗ ಒಂದು ಮೊಳೆ

ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನೆ. ಉತ್ಸಾಹದಿಂದ ಹೋಗುವ ಹುಡುಗ ಮೊದಲ ದಿನವೇ ೩೭ ಮೊಳೆಗಳನ್ನು ಹೊಡೆದು ಹಾಕುತ್ತಾನೆ ಗೋಡೆಗೆ.  ಒಂದೆರಡು ವಾರಗಳಲ್ಲಿ ತನ್ನ ಕೋಪ ತಾಪ ಎಲ್ಲಾ ತಹಬಂದಿಗೆ ಬಂದು ಗೋಡೆಗೆ ಹೊಡೆಯಬೇಕಾದ ಮೊಳೆಗಳು ಸಂಖ್ಯೆಯಲ್ಲಿ ಕಡಿಮೆಯಾಗುತ್ತವೆ. ತನ್ನ ಅಪ್ಪ ಹೇಳಿದ ಹಾಗೆ ಮೊಳೆ ಹೊಡೆಯುವುದಕ್ಕಿಂತ ಸುಲಭ ತನ್ನ ಕೋಪವನ್ನು ನಿಯಂತ್ರಿಸುವುದು ಎಂದು ಈ ಹೊತ್ತಿಗಾಗಲೇ ಹುಡುಗ ಅರಿತು ಕೊಳ್ಳುತ್ತಾನೆ. ಕೊನೆಗೊಂದು ದಿನ ಹುಡುಗ ಮೊದಲಿನ ಥರ ಕೋಪಿಷ್ಠನಾಗದೇ ಮಂದಸ್ಮಿತನಾಗುತ್ತಾನೆ, ಸಂಯಮಿಯಾಗುತ್ತಾನೆ, ಮೊಳೆಯ ಚೀಲ ಬರಿದಾಗುತ್ತದೆ. ಈ ವಿಷಯವನ್ನು ತನ್ನ ತಂದೆಗೆ ಬಂದು ಹೇಳಿದಾಗ ತಂದೆ ಹೇಳುತ್ತಾನೆ, ಮಗನೇ, ಈಗ ಹೋಗಿ ನೀನು ಹೊಡೆದ ಮೊಳೆಗಳನ್ನೆಲ್ಲಾ ದಿನಕ್ಕೊಂದರಂತೆ ಕೀಳು ಎಂದು. ಮತ್ತೊಮ್ಮೆ ಗೋಡೆ ಕಡೆ ಮರಳಿದ ಹುಡುಗ ಸಾವಧಾನದಿಂದ ದಿನಕ್ಕೊಂದರಂತೆ  ಒಂದೊಂದೇ ಮೊಳೆ ಗಳನ್ನು ಕೀಳುತ್ತಾನೆ. ಒಂದೆರಡು ವಾರಗಳ ತರುವಾಯ ಹುಡುಗ ಬಂದು ತಾನು ಎಲ್ಲಾ ಮೊಳೆಗಳನ್ನು ಕಿತ್ತ ವಿಷಯ ಹಿಗ್ಗುತ್ತಾ ತಂದೆಗೆ ತಿಳಿಸುತ್ತಾನೆ. ಮಗನನ್ನು ನೋಡಿ ಮುಗುಳ್ನಗುತ್ತಾ ಅವನ ಕೈ ಹಿಡಿದು ಕೊಂಡು ಹಿತ್ತಲಿನ ಗೋಡೆಗೆ ಬಂದ ತಂದೆ ಮಗನ ತಲೆ ತಡವುತ್ತಾ ಹೇಳುತ್ತಾನೆ, ಮಗೂ, ಎಷ್ಟು ಸುಂದರ ಕೆಲಸ ನೀನು ಮಾಡಿದೆ, ಆದರೆ ನೋಡು ಒಮ್ಮೆ ಗೋಡೆಯನ್ನು. ಮೊದಲಿನ ಹಾಗಿದೆಯೇ ಗೋಡೆ? ಎಷ್ಟೊಂದು ತೂತುಗಳು ಬಿದ್ದಿವೆ ನೋಡು ಗೋಡೆಯ ಮೇಲೆ. ಈ ಗೋಡೆ ಮೊದಲಿನ ಹಾಗೆ ಆಗಲು ಸಾಧ್ಯವೆ?  ಎಂದಿಗೂ ಇಲ್ಲ. ನೀನು ಕೋಪದಲ್ಲಿ ಆಡಿದ ಮಾತುಗಳೂ ಸಹ ಹಾಗೆಯೇ. ನಿನ್ನ ಕೋಪದ ಮಾತುಗಳು, ಜನರಿಗೆ ಮಾಡಿದ ನೋವು ನೀನು ಮೊಳೆಗಳಿಂದ ಗೋಡೆಗೆ ಮಾಡಿದ ತೂತುಗಳಂತೆ.  ಅವೆಂದೂ ಮಾಸಲಾರವು. ಒಬ್ಬನಿಗೆ ಚೂರಿ ಇರಿದು ಆ ಚೂರಿಯನ್ನು ಹಿಂದಕ್ಕೆ ಎಳೆಯಬಹುದು, ಆದರೆ ಆ ಚೂರಿ ಮಾಡಿದ ಗಾಯ? ಆ ಗಾಯ ಮಾಸುವುದೇ? ನೀನೆಷ್ಟೇ ಕ್ಷಮೆ ಕೋರಿದರೂ ಆ ಗಾಯ ಅಲ್ಲೇ ಇರುತ್ತದೆ.

ಅನರ್ಘ್ಯ ರತ್ನಗಳಂಥ ಮಾತುಗಳನ್ನು ತನ್ನ ಪ್ರೀತಿಯ ತಂದೆಯ ಬಾಯಿಂದ ಆಲಿಸಿದ ಹುಡುಗ ದಂಗುಬಡಿದವನಂತೆ, ತಟಸ್ಥನಾಗಿ ನಿಂತು ತನ್ನ ತಂದೆಯನ್ನೇ ನೋಡುತ್ತಾ ನಿಂತ ಕಣ್ಣೀರು ಹರಿಸುತ್ತಾ.