ಒಂದು ಬಾಷ್ಪಾಂಜಲಿ, ಶಾಂತಿ ದೂತನಿಗೆ

ಬ್ರಿಟನ್ ಮೂಲದ ಶಾಂತಿ ದೂತ ಬ್ರಯಾನ್ ಹಾವ್ ಇನ್ನಿಲ್ಲ. ಎರಡು ವರ್ಷಗಳ ಹಿಂದೆ ಬ್ರಯನ್ ಹಾವ್ ನನ್ನು ‘ಬ್ರಿಟಿಷ್ ಏಕಲವ್ಯ’ ಎನ್ನುವ ಶೀರ್ಷಿಕೆಯಡಿ ಒಂದು ಲೇಖನ ಬರೆದು ನನ್ನ ‘ಹಳೇ ಸೆತುವೆ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ. ದುರ್ದೈವ, ಈಗ ಅವನಿಗೆ ಶ್ರದ್ಧಾಂಜಲಿ ಹೇಳುವ ಸಮಯ.

ಬ್ರಿಟಿಷ್ ಸಂಸತ್ ಭವನದ ಎದುರು ಚಳಿ ಮಳೆಗೆ ಮೈಯ್ಯೊಡ್ಡಿ ಡೇರೆ ಯೊಳಗೆ ಬದುಕುತ್ತಾ ಆಫ್ಘನ್ ಗುಡ್ಡ ಗಾಡಿನ ಲ್ಲಿ ಮತ್ತು ಇರಾಕ್ ನಲ್ಲಿ ನಡೆದ ಮಾರಣ ಹೋಮ ದ ಬಗ್ಗೆ ವಿಶ್ವದ ಗಮನ ಸೆಳೆಯಲು ಪ್ರಯತ್ನ ಪಡುತ್ತಿದ್ದ ಧ್ವನಿ ನಿಸ್ತೇಜ ಈತನ ಸಾವಿನೊಂದಿಗೆ. ರಾಜಕಾರಣಿಗಳ ಬೆದರಿಕೆಗೆ, ಪೊಲೀಸರ ದಬ್ಬಾಳಿಕೆಗೆ ಸಡ್ಡು ಹೊಡೆದು ನಿಂತಿದ್ದ ಹಾವ್ ಕೊನೆಗೆ ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಶರಣಾದ ಈ ತಿಂಗಳ ೧೮ ರಂದು. ಈತನ ಸಾವಿನೊಂದಿಗೆ ಬುಶ್ ಮತ್ತು ಬ್ಲೇರ್ ರಂಥ ಯುದ್ಧ ಕೋರರಿಗೆ ಒಸಾಮಾ ಸಾವಿನಿಂದಿಂದ ಸಿಕ್ಕ ‘closure’ ಭಾವ ಅಥವಾ ನಿರಾಳ ಭಾವ ಸಿಕ್ಕಿರಬಹುದು. ಲಂಚ ಸಮಾಜದ ಅವಿಭಾಜ್ಯ ಅಂಗ ಮಾತ್ರವಲ್ಲ ಅದೊಂದು ಮಾಮೂಲು ಧಂಧೆ ಎನ್ನುವ ಮಟ್ಟಕ್ಕೆ ಬಂದಾಗ ಅದರ ವಿರುದ್ಧ ಸೊಲ್ಲೆತ್ತಿದ ಸಿರಿವಂತ ಸಾಧು ರಾಮ್ ದೇವ್ ಮತ್ತು ಸಮಾಜ ಸೇವಕ ಅಣ್ಣಾ ಹಜಾರೆ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾದಂತೆಯೇ ಈತನೂ ಸಹ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಬ್ರಯನ್ ಕೆಚ್ಚೆದೆಯ ವ್ಯಕ್ತಿ. ನಾವೆಂದೂ ಮಾಡಲಾಗದ, ಕೆಲಸವನ್ನೂ ಆತ ಮಾಡಿ ತೋರಿಸಿದ. ಸರಕಾರದಿಂದ, ವ್ಯವಸ್ಥೆಯಿಂದ ಪ್ರತಿರೋಧ ಎದುರಾದಾಗ ವೇಷ ಬದಲಿಸಿಕೊಂಡು ಕಾಲಿಗೆ ಬುದ್ಧಿ ಹೇಳುವ ಯತ್ನ ಮಾಡಲಿಲ್ಲ.

ಶಾಂತಿಯ ಪರಂಪರೆ ಹುಟ್ಟು ಹಾಕಿದ ಬ್ರಯನ್ ನಮಗೆಲ್ಲರಿಗೂ ಒಂದು ಪಾಠ. ಉರಿ ಬಿಸಿಲಿನಲ್ಲಿ ಒಂದು ಘಂಟೆ ನಿಂತು ವ್ಯವಸ್ಥೆಯ ವಿರುದ್ಧ ಪ್ರತಿಭಟಿಸದ ನಾವು ಬ್ರಯನ್ ರೀತಿ ಹಗಲು ರಾತ್ರಿ ಪೂರ್ತಿ ಹತ್ತು ವರ್ಷಗಳ ಕಾಲ ಒಂದು ಕಡೆ ಡೇರೆ ಬಿಗಿದು ಕೂರಲು ಸಾಧ್ಯವೇ? ಅದರ ಮೇಲೆ ರಾಜಕಾರಣಿಗಳ ಕಟು ಟೀಕೆ. ಪೊಲೀಸರ ನಿರಂತರ ಒತ್ತಡ, ಡೇರೆ ಖಾಲಿ ಮಾಡಲು. ಒಮ್ಮೆ ಪೊಲೀಸರು ಬಂದು ಅವನು ಡೇರೆ ಹೊರಗೆ ಅಂಟಿಸಿದ್ದ ಕೈಬರಹದ ಪೋಸ್ಟರ್ ಗಳನ್ನು ಕಿತ್ತು ಹಾಕಿದ್ದರು. ಮರು ದಿನ ಶ್ರದ್ಧೆಯಿಂದ ಮತ್ತೆ ತಾನು ಬರೆಯಬೇಕಾದುದನ್ನು ಬರೆದು ನೇತು ಹಾಕಿದ ತಾನೇ ಬೀಡು ಬಿಟ್ಟಿದ್ದ ಠಿಕಾಣಿ ಹೊರಗೆ. ಈತನನ್ನು ಕೆಲವರು, ಧೀಮಂತ, ಶಾಂತಿ ದೂತ ಎಂದು ಕೊಂಡಾಡಿದರೆ ರಾಜಕಾರಣಿಗಳಿಗೆ ಈತ ಒಂದು nuisance. ಸಂಸತ್ ಭವನದ ಘನತೆಯನ್ನು ಗೌರವವನ್ನೂ ತನ್ನ ಭಿತ್ತಿ ಪತ್ರಗಳಿಂದ, ಬಾವುಟ, banner, placard, poster, teddy bears ಗಳಿಂದ ಹಾಳುಗೆಡವುತ್ತಿದ್ದಾನೆ ಎಂದು ದೂರು. ಈತ ಹಾಕಿದ್ದ ಡೇರೆ ಮತ್ತು ಅದರ ಸುತ್ತ ಮುತ್ತ ಅಂಟಿಸಿದ್ದ ಮುಗ್ಧ ಮಕ್ಕಳ, ಸ್ತ್ರೀಯರ ರೋದನದ ಚಿತ್ರಗಳು, ಭಿತ್ತಿ ಪತ್ರಗಳು ಸಂಸತ್ ವಲಯವನ್ನು ಕೊಳೆ ಗೇರಿಯಾಗಿ ಪರಿವರ್ತಿಸಿವೆ ಎಂದು ದೂರಿದ ರಾಜಕಾರಣಿಗೆ ಈ ವಿಷಯ ಹೊಳೆಯದೆ ಹೋಯಿತು ಸುಳ್ಳುಗಳನ್ನು ಹೆಣೆದು, ದಾಖಲೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ, ಕಾಲು ಕೆರೆದು ಯುದ್ಧಕ್ಕೆ ಹೋಗೋದು ಕೊಳೆಗೇರಿ ಎಬ್ಬಿಸುವುದಕ್ಕಿಂತ ಗಬ್ಬು ಕೆಲಸ ಎಂದು.

ಬ್ರಯನ್ ಹೀಗೆ ಹಗಲು ರಾತ್ರಿ ಎನ್ನದೆ ತನ್ನ ಕೌಟುಂಬಿಕ ಬದುಕನ್ನು ಬಿಟ್ಟು ವಿಶ್ವದ ಯಾವ್ಯಾವುದೋ ಮೂಲೆಯಲ್ಲಿ ನೆಲೆಸುವ ಜನರ ಮೇಲೆ ಈತನಿಗಿರುವ ಮರುಕ, ಕಾಳಜಿಗೆ ಆಸಕ್ತರಾಗಿ ಈತನೊಂದಿಗೆ ಮಾತಿಗೆ ನಿಲ್ಲುವವರ ಮೇಲೂ ಕೆಲವು ಜನರು ಹರಿಹಾಯ್ದಿದ್ದಿದೆ. ಈ ಜನ ಎಂಥವರೆಂದರೆ ಸರಕಾರ ಮಾಡುವುದು ತಪ್ಪು ಎಂದು ತೋರಿದರೂ ಪ್ರತಿಭಟಿಸಲು ಅವರಲ್ಲಿ ಬೇಕಾದ ಕಸುವು ಇರುವುದಿಲ್ಲ, ಅಥವಾ ವೇಳೆ ಇರೋಲ್ಲ. ಬೇರೆಯವ ಈ ಕಾರ್ಯವನ್ನ ಕೈಗೆತ್ತಿಕೊಂಡಾಗ ಭೀತಿ ಆವರಿಸಿಕೊಳ್ಳುತ್ತದೆ. ಆಗ ಬೈಗುಳಗಳ ಸುರಿಮಳೆ. ಸರಕಾರದ ಪರ ವಕಾಲತ್ತು. ಇಂಥ ಜನರ ಅಲ್ಪತನದಿಂದ ಈತ ಇನ್ನಷ್ಟು ಎತ್ತರಕ್ಕೆ ಬೆಳೆದನೆ ಹೊರತು ಈತನ ಕೆಚ್ಚನ್ನು ಕುಗ್ಗಿಸಲಿಲ್ಲ. ಕಟು ಮಾತುಗಳು. ಲಂಡನ್ನಿಗೆ ಬರುವ ಪ್ರವಾಸಿಗರಿಗೆ ಈತನ ಡೇರೆ ಒಂದು ಪ್ರಮುಖ ಆಕರ್ಷಣೆಯಾಗಿತ್ತು.

ಹೀಗೆ ಹೊರಗಿನವರ, ಸಂಘಟನೆಗಳ ವಶೀಲಿ ಬಾಜೀ ಇಲ್ಲದೆ ತೆರನಾದ ಸವಾಲುಗಳಿಗೆ ಧೃತಿಗೆಡದೆ ಸ್ಥೈರ್ಯದಿಂದ ತಾವು ನಂಬಿದ ಮೌಲ್ಯಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಡುವ ಸಾಧಕರು ಅಲ್ಲಲ್ಲಿ ಕಾಣಲು ಸಿಗುತ್ತಾರೆ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಿದ ನಮ್ಮವರೇ ಆದ ವ್ಯಕ್ತಿಯೊಬ್ಬರ ಉದಾಹರಣೆ ಇದೆ. ಅವರೇ ‘ಹೊಟ್ಟೆ ಪಕ್ಷ’ ದ ರಂಗ ಸ್ವಾಮಿ.

ಅತ್ಯಧಿಕ ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಉಂಡದ್ದು ಸೋಲನ್ನೇ ಆದರೂ ಬಡವರಿಗೆ ಕಿಲೋ ಗ್ರಾಂ ಗೆ ಒಂದು ರೂಪಾಯಿ ಅಕ್ಕಿ ಕೊಡುವ ವಾಗ್ದಾನ ದ ಮೂಲಕ ಚುನಾವಣೆಗಳನ್ನು ಸೆಣಸುತ್ತಿದ್ದರು ಹೊಟ್ಟೆ ಪಕ್ಷದ ರಂಗ ಸ್ವಾಮಿ. ಚಿಕ್ಕಮಗಳೂರಿನಲ್ಲಿ ಇಂದಿರಾ ವಿರುದ್ಧವೂ ಸ್ಪರ್ದಿಸಿದ್ದ ರಂಗ ಸ್ವಾಮೀ ಬಹುಶಃ ತಾವು ಗೆಲ್ಲುವುದಿಲ್ಲ ಎನ್ನುವ ಸ್ಪಷ್ಟ ಅರಿವಿದ್ದೂ ಚುನಾವಣೆಯಲ್ಲಿ ಸ್ಪರ್ದೆಗೆ ಮುಂದಾಗುತ್ತಿದ್ದದ್ದು ಒಪ್ಪೊತ್ತಿನ ಅನ್ನಕ್ಕಾಗಿ ಬಡವರು ಪಡುವ ಬವಣೆ ಬಗ್ಗೆ ರಾಜಕಾರಣಿಗಳ ಮನ ಸೆಳೆಯುವ ಉದ್ದೇಶವೂ ಆಗಿರಬಹುದು. ಚುನಾವಣೆ ಪ್ರಚಾರಕ್ಕೆ ಇವರು ಬಂದಾಗ ಸೋಲುವುದು ಗ್ಯಾರಂಟಿಯಾದರೂ ಯಾಕಾದರೂ ಈತ ನಿಲ್ಲುತ್ತಾರೋ ಎಂದು ಜನ ಕನಿಕರ ಮತ್ತು ಅಪಹಾಸ್ಯದಿಂದ ಮಾತಾಡಿದರೆ ಇವರಿಗೆ ಅದರ ಪರಿವೆಯಿಲ್ಲ. ರಂಗ ಸ್ವಾಮೀ ನಿಧನರಾಗಿ ನಾಲ್ಕು ವರ್ಷಗಳಾ ದುವಂತೆ. ಆದರೆ ನನಗೆ ತಿಳಿದಿದ್ದು ಬ್ರಯನ್ ಹಾವ್ ತೀರಿ ಹೋದ ದಿನ.

ಒಂದು ಕಡೆ ಬುಶ್ ಮತ್ತು ಬ್ಲೇರ್ ರ ಸುಳ್ಳಿನಿಂದ ಪ್ರೇರಿತವಾದ ಸೈನ್ಯಗಳು ದಿನದ ೨೪ ಘಂಟೆಗಳ ಕಾಲ ನಿರಂತರ ಇರಾಕ್ ಆಫ್ಘಾನಿಸ್ತಾನ, ಮುಂತಾದ ದೇಶಗಳ ಮೇಲೆ ಬಾಂಬುಗಳ ಮಳೆಗರೆಯುತ್ತಿದ್ದರೆ ಈ ಕೃತ್ಯಗಳ ವಿರುದ್ಧ ಈತ ಪ್ರತಿರೋಧ ನಡೆಸಿದ ೧೦ ವರ್ಷ ಪೂರ್ತಿ. ಕ್ಯಾನ್ಸರ್ ರೋಗದ ಚಿಕಿತ್ಸೆಗೆಂದು ಜರ್ಮನಿ ದೇಶಕ್ಕೆ ಹೋದ ಬ್ರಯನ್ ಮರಳಿ ಬರದೆ ಡೇರೆ ಖಾಲಿಯಾಯಿತೆ ವಿನಃ ಅವನನ್ನು ಹೊರಹಾಕಲು ಬ್ರಿಟಿಶ್ ಸರಕಾರ ನಡೆಸಿದ ಎಲ್ಲ ಪ್ರಯತ್ನಗಳೂ (ನಮ್ಮ ದೇಶದ UPA ಸರಕಾರಕ್ಕೆ ಈತನ ಡೇರೆ ಖಾಲಿ ಮಾಡಿಸುವ ಕೆಲಸದ ಗುತ್ತಿಗೆ ನೀಡಿದ್ದರೆ ಏನಾಗುತ್ತಿತ್ತೋ ಊಹಿಸಿ) ವಿಫಲವಾದವು. ಪ್ರಶಸ್ತಿ ಪುರಸ್ಕಾರಗಳ ಅಪೇಕ್ಷಿಯಿಲ್ಲದೆ ‘ಮೆಗಾ ಫೋನ್’ ಹಿಡಿದು ತನ್ನ ಕಸುಬನ್ನು ಅತೀ ಶ್ರದ್ಧೆಯಿಂದ ಮಾಡುತ್ತಿದ್ದ ಈ ‘ಬಡಗಿ’ ಗೆ ೨೦೦೭ ರಲ್ಲಿ ‘ಚಾನಲ್ ೪’ ಟೀವೀ ಸಂಸ್ಥೆ ‘ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿ’ ಎಂದು ಅವನನ್ನು ಆಯ್ಕೆ ಮಾಡಿದಾಗ ಹಿಗ್ಗಿದ ಬ್ರಯನ್ ತನಗೆ ಟೋನಿ ಬ್ಲೇರ್ ಮತ್ತು ಡೇವಿಡ್ ಕೆಮರೂನ್ ರಿಗಿಂತ ಹೆಚ್ಚು ಮತ ನೀಡಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಹರ್ಷದಿಂದ ಅಭಿನಂದನೆ ಸಲ್ಲಿಸಿದ. ಯುದ್ಧ ಕೋರ ನಾಯಕರ ಕೃತ್ಯಗಳ ಕಾರಣ ನೋವನ್ನನುಭವಿಸುವ ಜನರಿಗಾಗಿ ಏಕಾಂಗಿಯಾಗಿ ಹೋರಾಡಿದ ಬ್ರಯನ್ ವೈಯಕ್ತಿಕ ಜೀವನದಲ್ಲಿ ನೋವನ್ನೂ, ಹಿನ್ನಡೆಯನ್ನೂ ಕಂಡ. ೨೦೦೧ ರಲ್ಲಿ ಈ ಅಪರೂಪದ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಆರಂಬಿಸಿದ ಒಂದು ವರ್ಷದ ಒಳಗೆ ಈತನ ಪತ್ನಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದಳು. ವಿಚಲಿತನಾಗದ ಬ್ರಯನ್ ಹೇಳಿದ್ದು ನಾನು ನನ್ನ ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ, ಅವರು ದೂರವಾಗುವಂತೆ ಮಾಡಿದ್ದೂ ದುರುಳ ನಾಯಕರೆ ಎಂದು ಹಲುಬುತ್ತಾನೆ.

ಬ್ರಯನ್ ಗೆ ಏಳು ಜನ ಮಕ್ಕಳಿದ್ದರು.

‘ವಿಕಿಲೀಕ್’ ಅವಾಂತರ

ವಿಕಿಲೀಕ್ ಈಗ ವಿಶ್ವ ಸುದ್ದಿಯಲ್ಲಿ. ವಿಶ್ವದ ಸರಕಾರಗಳ ಮಧ್ಯೆ, ಧುರೀಣರ ಮಧ್ಯೆ ನಡೆದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಕೇಬಲ್ ಗಳನ್ನು ತನ್ನ ವೆಬ್ ತಾಣದಲ್ಲಿ ಪ್ರಕಟಿಸಿ ಅಂತಾರಾಷ್ಟ್ರೀಯ ರಾಜಕಾರಣ ಎಂದರೆ ಗರಿ ಗರಿ ಕಪ್ಪು ಸೂಟು, ಮುಗುಳ್ನಗುವಿನೊಂದಿಗೆ ಹಸ್ತಲಾಘವ, ನಂತರ ಮೃಷ್ಟಾನ್ನ ಭೋಜನ ಎಂದು ತಿಳಿದಿದ್ದ ನಮಗೆ ಹೊಸತೊಂದು ವಿಶ್ವದ ಪರಿಚಯ ಮಾಡಿಕೊಟ್ಟಿತು ವಿಕಿಲೀಕ್. ‘ವಿಕಿಪೀಡಿಯ’ ಗೊತ್ತು, ಇದೇನೀ ‘ವಿಕಿಲೀಕ್’ ಎಂದಿರಾ? ವಿಕಿಪೀಡಿಯ ನಮಗೆ ತಿಳಿಯಬೇಕಾದ ವಿಷಯಗಳನ್ನು ಸರಾಗವಾಗಿ, ಕ್ಷಣ ಮಾತ್ರದಲ್ಲಿ ತಿಳಿಸಿಕೊಡುವ ತಾಣವಾದರೆ, ವಿಕಿಲೀಕ್ ಮಾತ್ರ ಸ್ವಲ್ಪ ಸರಿದು ನಿಂತು ನಾವೆಂದಿಗೂ ‘ಕೇಳಬಾರದ, ಆಡಬಾರದ, ನೋಡಬಾರದ’, ವಿಷಯಗಳನ್ನು ನಮಗೆ ತಲುಪಿಸಿ ಮಗುಮ್ಮಾಗಿ ಇದ್ದುಬಿಡುವ whistle blower. ಸ್ವಲ್ಪ ಮಟ್ಟಿಗೆ ನಮ್ಮ ಅಚ್ಚು ಮೆಚ್ಚಿನ ‘ತೆಹೆಲ್ಕಾ’ ರೀತಿಯದು. ಈ ವೆಬ್ ತಾಣದ ಸಾರಥಿ ಆಸ್ಟ್ರೇಲಿಯಾದ 39 ರ ಪ್ರಾಯದ ಜೂಲಿಯಾನ್ ಅಸಾಂಜ್. ಈಗ ಈತ ಕಂಬಿ ಎಣಿಸಲು ಅಥವಾ ತನ್ನ ತಲೆ ಕಳೆದುಕೊಳ್ಳುವ ನಿರೀಕ್ಷೆಯಲ್ಲಿ ಲಂಡನ್ನಿನ ಮೂಲೆಯೊಂದರಲ್ಲಿ ದಿನ ಕಳೆಯುತ್ತಿದ್ದಾನೆ.

ಅಭಿವ್ಯಕ್ತಿ ಸ್ವಾತಂತ್ರ್ಯ. ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬಂದಾಗ ತಮ್ಮದೇ ಆದ ಧೋರಣೆ. ಆ ಧೋರಣೆ ಹಿಂಸಾರೂಪ ತಾಳಿದರೂ ಯಾರಿಗೂ ಅದರ ಪರಿವೆ ಇಲ್ಲ. ಸೂಟು ಬೂಟು, ಬಿಳಿಚರ್ಮ ಹೊತ್ತವರು ಏನೇ ಹೇಳಿದರೂ ಎಲ್ಲಾ ಓಕೆ. ಗಡ್ಡ ಮಾತ್ರ ಇರಬಾರದು ಈ ರೀತಿಯ ಮಾತನ್ನಾಡಲು. ಆಗ ಪದಪ್ರಯೋಗದ ಸಮೀಕರಣ ಬದಲಾಗಿ ಬಿಡುತ್ತದೆ. ಕೆನಡಾದ ಪ್ರಧಾನಿಯ ಮಾಜಿ ಸಲಹೆಗಾರ stephen ‘Harper’ ನ ಪ್ರಕಾರ ವಿಕಿ ಲೀಕ ನ ಅಸಾಂಜ್ ನನ್ನು ಕೊಲ್ಲಬೇಕು. ನೋಡಿ ಎಂಥ ಅಸಂಬದ್ಧ, harping ಈತನದು. ಹೆಸರಿಗೆ ತಕ್ಕಂತೆ ನಡತೆ. ಅಭಿವ್ಯಕ್ತಿ ಸ್ವಾತಂತ್ರ್ಯ ತಂದು ಕೊಡುವ ಕಚಗುಳಿ ಎಂಥದ್ದು ಎಂದು ತಡವಾಗಿ ತಿಳಿಯಿತು ಅಮೆರಿಕೆಗೆ ಮತ್ತು ಅದರ ಹಿಂಬಾಲಕರಿಗೆ.

ರಾಜನಿಂದ ಹಿಡಿದು ರಾಜತಾಂತ್ರಿಕನವರೆಗೆ ಯಾರು ಏನು ಹೇಳಿದರು ಎಂದು ಸವಿಸ್ತಾರವಾಗಿ ಪ್ರಕಟಿಸಿದ ವಿಕಿಲೀಕ್ ಅಂತಾರಾಷ್ಟ್ರೀಯ ರಾಜಕಾರಣ ಯಾವ ರೀತಿಯ ‘ಡಬಲ್ ಗೇಂ’ ಎಂದು ನಮಗೆ ಮನವರಿಕೆ ಮಾಡಿಕೊಡುತ್ತಿದೆ. ನಮ್ಮ ದೇಶಕ್ಕೆ ಬಂದು ನಮ್ಮೆಲ್ಲರನ್ನೂ ಮರುಳು ಮಾಡಿ, ನಮಗೆ ಬಾಲಿವುಡ್ ಮೇಲೆ ಇರುವ ವ್ಯಾಮೋಹಕ್ಕೆ ತಕ್ಕಂತೆ ಒಂದಿಷ್ಟು ಡ್ಯಾನ್ಸ್ ಮಾಡಿ ಕೊನೆಗೆ ತಮ್ಮ ಊರು ತಲುಪಿದ ನಂತರ ಬೇರೆಯದೇ ಆದ ಸನ್ನೆ ಕಳಿಸುವುದು. ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕಾಗಿರುವ ನಮ್ಮ ಆಸೆಯನ್ನೂ, ಅದಕ್ಕಾಗಿ ನಾವು ಹೆಣಗುತ್ತಿರುವುದನ್ನು ಅರಿತ ಅಮೇರಿಕಾದ ಅಧ್ಯಕ್ಷ ನಮ್ಮಲ್ಲಿಗೆ ಬಂದು ಭಾರತ ಈ ಸ್ಥಾನಕ್ಕೆ ಅತ್ಯಂತ ಅರ್ಹ ರಾಷ್ಟ್ರ, ನಮ್ಮ ಬೆಂಬಲ ಅದಕ್ಕಿದೆ ಎಂದು ನಮ್ಮನ್ನು ಪುಳಕಿತರಾಗಿಸಿ ಹೋದರು. ಈ ಮಾತು ಕೇಳಿ ನಮಗೆ ಆನಂದದ ಮಂಪರು. ಅತ್ತ ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಅಭಿಪ್ರಾಯ ಬೇರೆಯೇ. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತ “ಸ್ವಯಂ ನೇಮಿತ” ಆಕಾಂಕ್ಷಿ ಎಂದು ಬಿರುದು ನೀಡಿದರು. “self appointed frontrunners” ಅಂತೆ. ಬೇಸರಿಸಬೇಡಿ, ಈ ಸ್ವಯಂ ನೇಮಿತ ಕ್ಲಬ್ಬಿನಲ್ಲಿ ಜಪಾನ್, ಬ್ರೆಜಿಲ್ ಮತ್ತು ಜರ್ಮನಿ ಸಹ ಸೇರಿವೆ. ಆಹ್, ಈಗ ಸ್ವಲ್ಪ ಸಮಾಧಾನ ನೋಡಿ. ನಮ್ಮೊಂದಿಗೆ ಇತರರನ್ನೂ ಸೇರಿಸಿ ಅಪಹಾಸ್ಯ ಮಾಡಿದರೆ ಭಾರ ಸಹಜವಾಗಿಯೇ ಸ್ವಲ್ಪ ಕಡಿಮೆ ಆಗುತ್ತದೆ. ಈ ಭಾವನೆಯೇ ಇರಬೇಕು ನಮ್ಮ ಮಾಧ್ಯಮಗಳು ಇದನ್ನು ಒಂದು ‘slight’ ಎಂದು ಪರಿಗಣಿಸಲು ಸೋತಿದ್ದು. ನೀವು ಅನುಮತಿಸಿದರೆ ನನ್ನದೊಂದು ಸಂಶಯ. ಅಮೇರಿಕಾ ನಮ್ಮನ್ನು ಇನ್ಯಾವ ರೀತಿಯಲ್ಲಿ ನಡೆಸಿ ಕೊಂಡಾಗ ನಾವು ಎಚ್ಚೆತ್ತು ಕೊಂಡು ‘ thanks for everything, yank. bye bye’ ಎಂದು ವಿನಯದಿಂದ ಹೇಳೋದು? ಅಮೆರಿಕೆಯ ಸಹವಾಸ ಮಾಡಿದವರು ಉದ್ಧಾರವಾದ ಕುರಿತು ಕೈಲಾಸದಲ್ಲಿ ಮನೆ ಮಾಡಿರುವವನಿಗೆ ಬಹುಶಃ ಗೊತ್ತಿರಬಹುದು. ಬೇರಾರಿಗೂ ಗೊತ್ತಿರುವ ಬಗ್ಗೆ ವರದಿಯಿಲ್ಲ. ಸದ್ದಾಮ್ ಕಾಲಾವಧಿ ನಂತರದ ಇರಾಕಿನ ತೈಲ ಸಚಿವನಾಗಿದ್ದ ‘ಅಹಮದ್ ಶಲಾಬಿ’ ಹೇಳಿದ್ದು america betrays its friends. it sets them up and betrays them. I’d rather be america’s enemy. ನಿನ್ನ ಮೈತ್ರಿಗಿಂತ ನಿನ್ನ ಶತ್ರುತ್ವವೇ ಬಲು ಚೆಂದ ಎಂದು. ವಿಷಕನ್ಯೆಗೆ ಹೇಳಬಹುದಾದ ಸವಿ ಮಾತುಗಳು ಇವು, ಅಲ್ಲವೇ? ಅಮೆರಿಕೆಯ ಸಹಾಯದಿಂದ ಅಧಿಕಾರದ ಗದ್ದುಗೆಗೆ ಏರಿದ ವ್ಯಕ್ತಿಯೊಬ್ಬ ಈ ಮಾತನ್ನು ಹೇಳಬೇಕೆಂದರೆ ಅವನಿಗೆ ಎಂಥ ರಾಜೋಪಚಾರ ಸಿಕ್ಕಿರಬೇಕು?

ಈಗ ಈ ಬರಹದಲ್ಲಿ anti americanism ಧೋರಣೆಯನ್ನು ದಯಮಾಡಿ ಕಾಣಬೇಡಿ. ಅಮೆರಿಕೆಯವೇ ಆದ “Levis” ಜೀನ್ಸ್, ‘papa johns’ pizza, ಮತ್ತು ಕಡಿಮೆ ಸ್ಪೆಲ್ಲಿಂಗ್ ಇರುವ ‘ಅಮೇರಿಕನ್ ಇಂಗ್ಲಿಶ್’ ನನಗೆ ತುಂಬಾ ಇಷ್ಟ. ನನ್ನ ನಿಲುವು ಇಷ್ಟೇ. ನಮ್ಮ ರಾಜಕಾರಣ ಮತ್ತು ಅವರ ರಾಜಕಾರಣ ಸ್ವಲ್ಪ ‘ಡಿಫ್ಫ್ರೆಂಟು’. ಆದರೆ ನಮಗೆ ಈ ‘ಡಿಫ್ಫ್ರೆನ್ಸು’ ಅರಗಿಸಿಕೊಳ್ಳಲಾಗದಂಥ ‘depression’ ತಂದೊಡ್ಡುತ್ತದೆ. ಹಾಗಾಗಿ ಸಂಚಾರಿ ನಿಯಮದ ಥರ ‘ನಡುವೆ ಅಂತರವಿರಲಿ’ ರೀತಿಯ ಅಂತರ ಕಾಯ್ದು ಕೊಳ್ಳಲು ನನ್ನ ಹಂಬಲ. ಗುಮಾನಿ ಪಡಬೇಕಾದ ulterior motive ಇಲ್ಲ.

ಬನ್ನಿ ನಾನಿರುವ ಕೊಲ್ಲಿ ಪ್ರದೇಶಕ್ಕೆ. ಇಲ್ಲೊಂದು ಸ್ವಾರಸ್ಯ. ನೋಡಿ, ನಾನು ಕೊಲ್ಲಿ ಎಂದು ಟೈಪ್ ಮಾಡಿದಾಗ “ಕೊಳ್ಳಿ” ಅಂತ ತೋರಿಸಿತು ಗೂಗಲ್. ಒಂದು ರೀತಿಯ “ಕೊಳ್ಳಿ” ಎಂದೇ ಕರೆಯಬಹುದು ಈ ಪ್ರಾಂತ್ಯವನ್ನು. ಸೌದಿ ಅರೇಬಿಯಾದ ದೊರೆ ‘ಅಬ್ದುಲ್ಲಾ ಇಬ್ನ್ ಅಬ್ದುಲ್ ಅಜೀಜ್ ಅಲ್-ಸೌದ್’ ವಿಶ್ವದ ಮುಸ್ಲಿಮರು ಗೌರವಿಸುವ ವ್ಯಕ್ತಿತ್ವ. ಏಕೆಂದರೆ ಇಸ್ಲಾಮಿನ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನ ಇರುವುದು ಸೌದಿ ಅರೇಬಿಯಾದಲ್ಲಿ. ಇಲ್ಲಿನ ದೊರೆ ಹೆಮ್ಮೆಯಿಂದ ತನ್ನನ್ನು ತಾನು ಕರೆದುಕೊಳ್ಳುವುದು ಎರಡು ಪವಿತ್ರ ಕ್ಷೇತ್ರಗಳ ಸಂರಕ್ಷಕ ಎಂದು. ಸಾವಿರಾರು ಕೋಟಿ ಖರ್ಚು ಮಾಡಿ ಎರಡು ಪವಿತ್ರ ಕ್ಷೆತ್ರಗಳನ್ನು ಇನ್ನಷ್ಟು ವಿಸ್ತರಿಸಿದ ಖ್ಯಾತಿ ಈ ದೊರೆಗೆ. ಹಾಗಾಗಿ ವಿಶ್ವದ ಮುಸ್ಲಿಮರಿಗೆ ಇವರ ಮೇಲೆ ಆದರ, ಗೌರವ. ಹಾವಿನ ತಲೆ ಕಡಿಯುವಂತೆ ಕಡಿಯಬೇಕು ಎಂದು ಇರಾನಿನ ಕುರಿತು ಅಮೆರಿಕೆಗೆ ಶಿಫಾರಸು ಮಾಡಿದರು ದೊರೆ ಅಬ್ದುಲ್ಲಾ ಎಂದು ವಿಕಿಲೀಕ್ ಎಲ್ಲರನ್ನೂ ತಲ್ಲಣಗೊಳಿಸಿತು. ಒಬ್ಬ ಮುಸ್ಲಿಮ್ ರಾಷ್ಟ್ರದ ದೊರೆ ಮತ್ತೊಂದು ಸೋದರ ದೇಶದ ವಿರುದ್ಧ ಈ ರೀತಿ ಮಾತನಾಡಿದ್ದು ಅಚ್ಚರಿ ತರಿಸಿತು ಪಾಶ್ಚಾತ್ಯ ದೇಶಗಳಿಗೆ. ಇವರಿಬ್ಬರ ನಡುವಿನ ಸ್ನೇಹದ “ಆಳ” ಎಲ್ಲರಿಗೂ ಗೊತ್ತಿದ್ದರೂ ತಲೆ ಕಡಿಯಲು ಶಿಫಾರಸ್ಸು ಮಾಡುವ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಇರಾನ್ ಶಿಯಾ ಬಾಹುಳ್ಯದ ರಾಷ್ಟ್ರ ಮತ್ತು ಸೌದಿ, ಸುನ್ನಿ ರಾಷ್ಟ್ರ. ಚಾರಿತ್ರಿಕವಾಗಿ ಶಿಯಾ – ಸುನ್ನಿ ಪಂಗಡಗಳ ನಡುವಿನ ಜಟಾಪಟಿ ತುಂಬಾ ಹಳತು. ideological difference ಅಲ್ಲದಿದ್ದರೂ ವ್ಯಕ್ತಿ (ಪ್ರವಾದಿ ಮುಹಮ್ಮದ್ ಮತ್ತು ‘ಹಜರತ್ ಅಲಿ’ ವಿಷಯದಲ್ಲಿ) ನಿಷ್ಠೆಯಲ್ಲಿ ಸುನ್ನಿ ಮತ್ತು ಶಿಯಾ ಜನರಲ್ಲಿ ಒಡಕಿದೆ. ಸೌದಿ ದೊರೆಯ ಈ ಬೆಚ್ಚಿ ಬೀಳಿಸುವಂಥ ಮಾತನ್ನು ಕೇಳಿದ ಇರಾನ್ ಸೌದಿಯನ್ನು ಇನ್ನು ಯಾವ ರೀತಿ ನಡೆಸಿಕೊಳ್ಳಬಹುದು ಎಂದು ಕಾದು ನೋಡಬೇಕು.

ಈ ತೆರನಾದ ಸುದ್ದಿಗಳನ್ನು ಚಿಕ್ಕಾಸಿನ ಅಪೇಕ್ಷೆಯೂ ಇಲ್ಲದೆ ಬಟಾಬಯಲು ಮಾಡುತ್ತಿರುವ ವಿಕಿಲೀಕ್ ಮೇಲೆ ಅಮೇರಿಕ ಮುಂತಾದ ರಾಷ್ಟ್ರಗಳ ಕೆಂಗಣ್ಣು. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದೆಯೋದು ಲೋಕ ರೂಢಿಯೇ ತಾನೇ? ಅಮೇರಿಕಾ ಏಕೆ ಅದಕ್ಕೆ ಹೊರತಾಗಬೇಕು? ವಿಕಿಲೀಕ್ ವೆಬ್ ತಾಣ ಬೇರಾವುದಾದರೂ ಒಂದು ದೇಶ ಅಮೆರಿಕೆಯ ವಿರುದ್ಧ ಹೇಳಿದ್ದನ್ನು ಲೀಕ್ ಮಾಡಿದ್ದಿದ್ದರೆ ಅಮೇರಿಕ ಕುಣಿದು ಕುಪ್ಪಳಿಸುತ್ತಿತ್ತು. ಆದರೆ ‘ವಿಕಿಲೀಕ್’ ನ ಕೊಡಲಿ ತನ್ನ ಬುಡದ ಕಡೆಗೆ ಪ್ರಯಾಣ ಬೆಳೆಸಿದಾಗ ಮಾತ್ರ ಅಮೇರಿಕಾ ಹೌಹಾರಿತು. ಹೌಹಾರದೆ ಏನು? ಬೇಲಿಯೂ ತಾನೇ, ಮೇಯುವವನೂ ತಾನೇ. ಇದು ಅಮೆರಿಕೆಯ ವಿದೇಶಾಂಗ ನೀತಿ. ಹಾಗಾಗಿ ವಿಕಿಲೀಕ್ ಸ್ಥಾಪಕ ‘ಅಸಾಂಜ್’ ನನ್ನು ದೇಶದ್ರೋಹಿ ಎಂದು ಹಣೆ ಪಟ್ಟಿ ಲಗತ್ತಿಸಿದ್ದಲ್ಲದೆ ಅವನನ್ನು ವಧಿಸುವ ತನಕ ಅಮೆರಿಕೆಯ ಆಕ್ರೋಶ ಆವರಿಸಿತು. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದೆ ಅಸಾಂಜ್ ತನ್ನ ಕೆಲಸ ಇನ್ನೂ ಮುಂದುವರಿಸುವುದಾಗಿ ಅವನ ಬೆಂಬಲಿಗರಿಗೆ ಭರವಸೆ ನೀಡಿದ. ಈಗ ಆತನ ಕಣ್ಣು ಅಮೆರಿಕೆಯ ಅತಿ ದೊಡ್ಡ ಬ್ಯಾಂಕುಗಳ ಅವ್ಯವಹಾರ ಮತ್ತು ಕಾರ್ಯವೈಖರಿಯ ಕಡೆ. ಅಸಾಂಜ್ ನ ಮಾತು ಸಿಡಿಲಿನಂತೆ ಎರಗಿತು ಬ್ಯಾಂಕಿಂಗ್ ವಲಯಗಳ ಮೇಲೆ. ಇವನ್ನೆಲ್ಲಾ ಕೇಳುತ್ತಿರುವ, ನೋಡುತ್ತಿರುವ ನಮಗೆ ಅಮೇರಿಕಾ ಪ್ರಪಂಚದ ಎಲ್ಲಾ ಪಾಪಗಳ, ಕೃತ್ರಿಮಗಳ ಉಗಮಸ್ಥಾನವೋ ಎಂದು ತೋರುವುದು ಅಸಹಜವೇನಲ್ಲ. ಹಾಲಿವುಡ್ ಅಂದ್ರೆ ಒಂದಿಷ್ಟು ಸೆಕ್ಸ್ ಇರಲೇಬೇಕು, ಏನಂತೀರಾ? ಹಾಗೆಯೇ ಅಂತಾರಾಷ್ಟ್ರೀಯ ರಾಜಕಾರಣದಲ್ಲೂ ಒಂದಿಷ್ಟು ಶೃಂಗಾರ ನುಸುಳುವುದಿದೆ ಎಂದು ವಿಕಿಲೀಕ್ ಬಯಲು ಮಾಡಿತು. ಲಿಬ್ಯಾ ದೇಶದ charismatic ಅಧ್ಯಕ್ಷ ‘ಮುಅಮ್ಮರ್ ಗದ್ದಾಫಿ’ ಜೊತೆ ಯಾವಾಗಲೂ ಮೋಹಕ ಅಂಗಸೌಷ್ಟವ ಹೊಂದಿದ ಯುಕ್ರೇನ್ ದೇಶದ ನರ್ಸ್ ಇರುತ್ತಾಳೆ ಎಂದು ಒಬ್ಬ ರಾಜತಾಂತ್ರಿಕ ಅಸೂಯೆಯಿಂದ ಜೊಳ್ಳು ಸುರಿಸಿದ. ಅಂದ್ರೆ ಬರೀ ಬೋರ್ ಹೊಡೆಸುವ global warming ರಾಜಕಾರಣ ಮಾತ್ರ ಅಲ್ಲ ಮಹೋದಯರ ಆಸಕ್ತಿ ಎಂದು ಇದರಿಂದ ಸ್ಪಷ್ಟವಾಯಿತು. ಕಂಪ್ಯೂಟರ್ ಬದಿಗೆ ಸರಿಸಿ ಹೀಗೇ ಮೋಜಿಗಾಗಿ ಸ್ವಲ್ಪ ಊಹಿಸಿ. ವಿಕಿಲೀಕ್ ತೆರನಾದ ಒಂದು ವ್ಯವಸ್ಥೆ ನಮ್ಮ ದೇಶದಲ್ಲಿಯೂ ಇದ್ದಿದ್ದರೆ 2G, 3G ಕಾಂಡಗಳು, ಆದರ್ಶ್ ಸೊಸೈಟಿ, ಸೈನಿಕರ ಶವ ಪೆಟ್ಟಿಗೆ ಗಳಂಥ ಹಗರಣ ಗಳು, ನಾವು ಕಂಡ ಬಗೆ ಬಗೆಯ ವರ್ಣರಂಜಿತ ಧಂಧೆಗಳು, ಇವೆಲ್ಲಾ ಪಿಕ್ನಿಕ್ ಥರ ಕಾಣುತ್ತಿದ್ದವು. ಈ ಮೇಲೆ ಹೇಳಿದ ಹಗರಣಗಳನ್ನೂ ಮೀರಿಸುವ ದೈತ್ಯಾಕಾರದ ತಿಮಿಂಗಿಲಗಳು ವಿಕಿಲೀಕ್ ಬಲೆಗೆ ಸಿಕ್ಕು ವಿಲವಿಲ ಎನ್ನುತ್ತಿದ್ದವೋ ಏನೋ.

ಜೂಲಿಯನ್ ಅಸಾಂಜ್ ನ ವಿಕಿಲೀಕ್ ಜ್ವಾಲಾಮುಖಿಯಂತೆ ಸ್ಫೋಟಿಸಿದೆ. ಅದರ ಸುಡುವ ಲಾವಾರಸ ಜಗತ್ತಿನ ನಾಲ್ಕೂ ಕಡೆ ಹರಿಯುತ್ತಿದೆ. ಹರಿಯುವ ನಾಲಗೆಗಳಿಗೆ ಇನ್ನಷ್ಟು ಫಲವತ್ತನ್ನು ಒದಗಿಸುತ್ತಿದೆ. ಇದಕ್ಕೆಲ್ಲಾ ಕಾರಣೀಭೂತನಾದ ಜೂಲಿಯಾನ್ ಅಸಾಂಜ್ ನನ್ನು ಹೇಗೆ ಗತಿ ಕಾಣಿಸಬೇಕೆಂದು ಬಲಿಷ್ಠ ರಾಷ್ಟ್ರಗಳು ಲೆಕ್ಕ ಹಾಕುತ್ತಿವೆ. ಅಮೇರಿಕಾ ವಿರೋಧಿಯಾದ ಅಸಾಂಜ್ ಒಬ್ಬ ಸಾಮಾನ್ಯ ಆಸ್ಟ್ರೇಲಿಯನ್ ಪ್ರಜೆ. ಆತನದು ಠಿಕಾಣಿ ಯಿಲ್ಲದ ವಾಸ. ಒಂದೇ ಸ್ಥಳದಲ್ಲಿ ಎರಡು ರಾತ್ರಿಗಳನ್ನು ಕಳೆಯದ ಅಲೆಮಾರಿ. ವಿಶ್ವದ ಮೇಲಿನ ಅಮೆರಿಕೆಯ ಕಪಿ ಮುಷ್ಠಿ ಅವನಿಗೆ ಇಷ್ಟವಿಲ್ಲ. ಪ್ರಪಂಚದಲ್ಲಿ ನಡೆಯುವ ಅನ್ಯಾಯಗಳು ಜನರಿಗೆ ತಲುಪಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಂಬಿರುವ ಈತ, ಮಾಡುತ್ತಿರುವುದು ಒಳ್ಳೆಯ ಕೆಲಸವೋ ಅಥವಾ ಕೆಲಸವಿಲ್ಲದ ಬಡಗಿಯ ಬೇಡದ ಉಸಾಬರಿಯೋ ಎಂದು ವಿಶ್ವವೇ ಹೇಳಬೇಕು. ಆದರೆ ಆತನ ತಾಯಿ ಮಾತ್ರ ಹೇಳುತ್ತಿರುವುದು “ನನಗೆ ನನ್ನ ಮಗನ ಪರಿಸ್ಥಿತಿಯ ಬಗ್ಗೆ ಆತಂಕವಾಗುತ್ತಿದೆ, ನಾನು ಅವನನ್ನು ಪ್ರೀತಿಸುತ್ತೇನೆ, ಅವನು ಎಷ್ಟಿದ್ದರೂ ನನ್ನ ಮಗನೇ. ನನ್ನ ಮತ್ತು ನನ್ನ ಮಗನ ಬಗ್ಗೆ ಅವರು ಹೇಳುತ್ತಿರುವುದೆಲ್ಲಾ ನಿಜವಲ್ಲ’ ಎಂದು ಆಕೆ ತನ್ನ ಮಗನ ಸುರಕ್ಷೆಗಾಗಿ ಹಂಬಲಿಸುತ್ತಾಳೆ, ಎಲ್ಲಾ ಹೆತ್ತಬ್ಬೆಯರು ಚಡಪಡಿಸುವ ರೀತಿಯಲ್ಲಿ.

ಗೊತ್ತಿಲ್ಲದವರಿಗೆ: ‘ವಿಕಿ’ ಎಂದರೆ, ‘ಹವಾಯಿ’ ಭಾಷೆಯಲ್ಲಿ ವೇಗ, ಕ್ಷಿಪ್ರ ‘fast’ ಅಂತ. ಮತ್ತು ಲೀಕ್ ಎಂದರೆ ಅದೇ ಆರ್ಡಿನರಿ ಲೀಕು, ನಮ್ಮಗಳ ಅಡುಗೆ ಮನೆಯಲ್ಲಿನ ‘ನಲ್ಲಿ’ ತೊಟ ತೊಟ ಎಂದು ಹನಿಯುದುರಿಸುತ್ತಾ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸೋರಿಕೆ. ಈ ಕ್ಷಿಪ್ರ ಮತ್ತು ಸೋರಿಕೆ ಇವೆರಡೂ ಸೇರಿಕೊಂಡಾಗ ಆಗುವುದು ants in the pant ಪರಿಸ್ಥಿತಿ. ಮೇಲೆ ವಿವರಿಸಿದ ಪರಿಸ್ಥಿತಿ.

pic courtesy: independent, UK

ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು

ಕೆಲವೊಂದು ಮಾತುಗಳು ಎಂದಿಗೂ ಕಿವಿಗಳಲ್ಲಿ ರಿಣ ಗುಟ್ಟು ತ್ತಿರುತ್ತವೆ. ಅವು ಕುಹಕವಾಗಿರಬಹುದು, ಪ್ರಶಂಸೆ ಆಗಿರಬಹುದು, ತಮಾಷೆ ಅಥವಾ ಗೇಲಿಗಾಗಿ ಇರಬಹುದು. ಕೆಳಗಿದೆ ಒಂದಿಷ್ಟು ಮಾತುಗಳು ನನ್ನ ನೆನಪಿನ ಮೂಸೆಯಿಂದ ಹೊರಬಂದವು.

ಸೋಮನಾಥ್ ಚಟರ್ಜೀ ದೊಡ್ಡ ಮಾತುಗಾರ, ವಾಗ್ಮಿ. ಭಾಜಪ ಸೋತ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರ ಸೋಮನಾಥರನ್ನು ಲೋಕಸಭೆಯ ಸಭಾಪತಿ ಆಗಿ ನೇಮಿಸಿತು. ಚಟರ್ಜಿ ಯವರನ್ನು ಅಭಿನಂದಿಸುತ್ತಾ, ಸೋಮನಾಥ ಚಟರ್ಜಿ ಮಟ್ಟದ ವಾಗ್ಮಿಯಲ್ಲದಿದ್ದರೂ ಒಳ್ಳೆಯ ಭಾಷಣಕಾರರಾದ ವಾಜಪೇಯಿ “ಇಷ್ಟು ಕಾಲ ತಾವು ಹೇಳಿದ್ದನ್ನು ನಾವು ಕೇಳುತ್ತಿದ್ದೆವು, ಈಗ ನಾವು ಹೇಳಿದ್ದನ್ನು ಕೇಳುತ್ತಾ ಕೂರುವ ಸರದಿ ತಮ್ಮದು ಎಂದು ಹಾಸ್ಯದ ಚಟಾಕಿ ಹಾರಿಸಿದ್ದರು. ಸಭಾಪತಿಯ ಕೆಲಸ ಸದಸ್ಯರು ಮಾತನಾಡುವುದನ್ನು ಕೇಳುತ್ತಾ ಕೂರುವುದು ತಾನೇ?

ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಯಾವುದೇ ಗಲಭೆಗಳು ದೇಶದಲ್ಲಿ ನಡೆದರೂ ಮೂರಕ್ಷರದ ಸಂಘಟನೆ ಯೊಂದನ್ನು ಯಾವಾಗಲೂ ದೂರುತ್ತಿದ್ದರು. ಹಾಗೆಯೇ ವಿದೇಶೀ ಕೈವಾಡದ ಮಾತು ಬಂದಾಗ ನೆರೆಯ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸುತ್ತಿದ್ದರು. ಪದೇ ಪದೇ ಈ ಮಾತನ್ನು ಕೇಳಿ ಬೇಸತ್ತಿದ್ದ ವಿರೋಧಪಕ್ಷದ ನಾಯಕರಲ್ಲಿ ಒಬ್ಬರಾದ ಸುಬ್ರಮಣ್ಯಮ್ ಸ್ವಾಮೀ ಭಾಷಣ ವೊಂದರಲ್ಲಿ ಹೇಳಿದ್ದು. “ ನಾನು ಲೋಕಸಭೆಯ ಕಲಾಪಗಳಲ್ಲಿ ಪಾಲುಗೊಂಡಾಗ ವಿದೇಶೀ ಸಮಸ್ಯೆಗಳಿಗೆ ಇಂದಿರಾ ಪಾಕಿನ ಕೈವಾಡ ಇದೆ ಎಂದು ಹೇಳುವುದನ್ನು ಹಲವು ಬಾರಿ ಕೇಳಿದ್ದೇನೆ. ಭಾರತದಲ್ಲಿ ಜನಸಂಖ್ಯೆ ವಿಪರೀತ ಏರುತ್ತಿದೆ, ಇದರಲ್ಲೂ ಪಾಕಿಸ್ತಾನದ ಕೈವಾಡ ಇರಬಹುದೇ ಎಂದು ನನ್ನ ಸಂಶಯ ಎಂದು ತಮಾಷೆ ಮಾಡಿದರು.

ಬಾಟ್ಲಿಂಗ್ ಹಗರಣದ ಸಮಯ ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಡೆ ವಿಚಾರಣೆಗೆ ಆದೇಶ ನೀಡಿದರು. ಕುಂಬ್ಳೆ ಕಾಯಿ ಕಳ್ಳ ಅಂದ್ರೆ ಹೆಗಲನ್ನು ಯಾಕೆ ಮುಟ್ಟಿ ನೋಡ್ ಕೊಳ್ತೀರಾ ಎಂದು ವಿರೋಧ ಪಕ್ಷ ಕೆಣಕಿದಾಗ ಹೆಗ್ಡೆ ಹೇಳಿದ್ದು, “… ಹೆಗಲು ಮುಟ್ಟಿ ನೋಡಿಕೊಂಡಾಗ ಬೂದಿ ಮೆತ್ತಿ ಕೊಂಡಿತ್ತು” ಸಂಶಯ ನಿವಾರಣೆಯಾಗಲಿ ಎಂದು ತನಿಖೆಗೆ ಆದೇಶ ನೀಡಿದೆ ಎಂದರು.

ಬಹಳ ವರ್ಷಗಳ ಹಿಂದಿನ ಮಾತು. ಲೋಕಸಭೆಯಲ್ಲಿ ಒಮ್ಮೆ ಸದಸ್ಯರೊಬ್ಬರು ಕೇರಳದ ಬಗ್ಗೆ ಚರ್ಚೆ ನಡೆದಾಗ “ಕೇರಳದ ಹೆಣ್ಣು ಮಕ್ಕಳು ಬೆಳದಿಂಗಳಿನಲ್ಲಿ ನೋಡಲು ಬಲು ಚೆಂದ” ಎಂದು ಪ್ರಶಂಸಾತ್ಮಕವಾಗಿ ಹೇಳಿದ್ದೆ ತಡ ಕೇರಳದ ಸದಸ್ಯರೆಲ್ಲ ತೀವ್ರವಾಗಿ ಪ್ರತಿಭಟಿಸಿ ಆ ಬಡಪಾಯಿ ಸದಸ್ಯ ಕ್ಷಮೆ ಕೇಳುವಂತೆ ಮಾಡಿದರು.

ನಮ್ಮ ಕರ್ನಾಟಕದ ವಿಧಾನ ಪರಿಷತ್ ಸದಸ್ಯ A.K. ಸುಬ್ಬಯ್ಯ ಒಂದು ರೀತಿಯ AK 47 ತುಪಾಕಿಯಂತೆ. ಅವರ ಯಾವುದೇ ಮಾತುಗಳು ನೆನಪಿಗೆ ಬರದಿದ್ದರೂ ಇಬ್ರಾಹೀಮರ ROLEX WATCH ನ ಹಿಂದೆ ಬಿದ್ದು ಸಾಕಷ್ಟು ಸತಾಯಿಸಿದ್ದು ಮಾತ್ರ ಇನ್ನೂ ನೆನಪಿದೆ.

ತನ್ನ rabble rousing ಭಾಷಣದಿಂದ ದೇಶದ ವಿವಿದೆಡೆ ದೊಡ್ಡ ತಲೆನೋವು ತರುತ್ತಿದ್ದ ತೊಗಾಡಿಯಾ ಬಿಹಾರ ಪ್ರವಾಸದ ಮೇಲೆ ಪಾಟ್ನಾ ನಗರದಲ್ಲಿ ಬಂದಿಳಿದಾಗ ವಿಮಾನ ನಿಲ್ದಾಣ ದಿಂದಲೇ ಆತನನ್ನು ಆತ ಬಂದ ಊರಿಗೆ ರವಾನಿಸಿ ಆದೇಶ ಹೊರಡಿಸಿದ ಲಾಲೂ ಪ್ರಸಾದ ಯಾದವ್ ಪತ್ರಕರ್ತರಿಗೆ ಹೇಳಿದ್ದು “ ತೊಗಾಡಿಯಾ ನಿಗೆ ಎಂಥ ಲಾತ (kick) ಕೊಟ್ಟಿದ್ದೇವೆ ಎಂದರೆ ಆತ land ಆಗೋದು ದೆಹಲಿಯಲ್ಲೇ (we have kicked him like a football and he will land only in delhi) ಎಂದು ತಮ್ಮ ಎಂದಿನ ಚಮತ್ಕಾರದ ನಗುವಿನೊಂದಿಗೆ ಹೇಳಿದರು. ರಾಜಕಾರಣಿಗಳು ಬರೀ ರಾಜಕೀಯ ಮಾತ್ರವಲ್ಲ ತಮ್ಮನ್ನು ಆರಿಸಿದ ಜನರಿಗೆ ಆಗಾಗ ಪುಕ್ಕಟೆ ಮನರಂಜನೆಯನ್ನೂ ಕೊಡುತ್ತಾರೆ.

ಭಾಜಪದ ಅಧಿಕಾರಾವಧಿಯಲ್ಲಿ ವಾಜಪೇಯೀ ಪ್ರಧಾನಿಯಾದರೂ ತೆರೆಮರೆಯ ಚುಕ್ಕಾಣಿ ಅದ್ವಾನಿ ಕೈಯ್ಯಲ್ಲಿ ಎಂದು ಕೆಲವರ ಅಭಿಮತವಾಗಿತ್ತು. ಹಾಗೆಂದ ಮೇಲೆ ಯಾರದಾದರೂ ಬಾಯಲ್ಲಿ ಉದುರಲೇ ಬೇಕಲ್ಲವೇ ಅಣಿ ಮುತ್ತುಗಳು? ಉದುರಿದವು ನೋಡಿ ಆವರದೇ ಪಕ್ಷದ ಮುಖಂಡ ಶೇಷಾದ್ರಿ ಬಾಯಿಂದ. ವಾಜಪೇಯೀ ಭಾಜಪ ಸರಕಾರದ ಮುಖವಾಡ ಮಾತ್ರ ಎಂದು ಹಾಕಿದರು ಬಾಂಬನ್ನು. ಹಿಂದಿಯಲ್ಲಿ “ಮುಖೋಟ” ಕನ್ನಡದಲ್ಲಿ ಮುಖವಾಡ. ರಾಜಧಾನಿ ಸೇರಿ ದೇಶವೇ ನಲುಗಿತು ಈ ಬಾಂಬಿಗೆ. ಈ ಮಾತಿನ ಕಾರಣ ದೊಡ್ಡ ಗಲಾಟೆ ಎದ್ದ ಕೂಡಲೇ ತಡಬಡಿಸಿ ಅವರು ಹೇಳಿದ್ದು “ನಾನು ಹೇಳಿದ್ದು ಮುಖೋಟಾ ಅಲ್ಲ, “ಮುಕುಟ್” (ಕಿರೀಟ) ಹೇ ಹೇ ಹೇ ಎಂದು ಸೋತ ನಗುವಿನೊಂದಿಗೆ ತಮ್ಮ ಮತ್ತು ಸರಕಾರದ ಮಾನ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದರು. ಕೆಲವೊಮ್ಮೆ ರಾಜಕಾರಣಿಗಳು ತಾವು ಮೊದಲು ರಾಜಕಾರಣಿ ನಂತರ ಎಲ್ಲರಂತೆಯೇ “ಮನುಷ್ಯ” ಎಂದು ಸಾಬೀತು ಪಡಿಸುತ್ತಾರೆ ತಮ್ಮ ಮಾತುಗಳಿಂದ.

೧೯೯೦ ರಲ್ಲಿ ಇರಾಕ್ ನ ಅಧ್ಯಕ್ಷರಾದ ಸದ್ದಾಮ್ ಹುಸೇನರು ಕುವೈತ್ ದೇಶವನ್ನು ವಶಪಡಿಸಿಕೊಂಡದ್ದಕ್ಕೆ ಅಮೆರಿಕಾದ ಅಧ್ಯಕ್ಷ ಬುಶ್ ಸೀನಿಯರ್ ಇರಾಕಿನ ಮೇಲೆ ಆಕ್ರಮಣ ಎಸಗಲು ಮೀನಾ ಮೇಷ ಎಣಿಸುತ್ತಿದ್ದಾಗ ಅಂದಿನ ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಹೇಳಿದ್ದು “dont wobble, george” ಅಂತ. ಅಂದರೆ ಹೆದರಬೇಡ ಜಾರ್ಜ್, ನಾನಿದ್ದೇನೆ ನಿನ್ನ ಸಾಮೂಹಿಕ ನರಹತ್ಯೆಗೆ ಸಾಕ್ಷಿಯಾಗಿ ಮತ್ತು ಬೆಂಬಲವಾಗಿ, ಸಾಂಗವಾಗಿ ಸಾಗಲಿ ನಿನ್ನ ಅಮಾಯಕರ ಮೇಲಿನ ಆಕ್ರಮಣ ಎಂದು. ಒಳ್ಳೆಯ ಕೆಲಸಕ್ಕೆ ಮಿತ್ರರು ಸಿಗುವುದು ಸ್ವಲ್ಪ ವಿರಳವೇ, ಆದರೆ ಮನೆ ಹಾಳು ಕೆಲಸಕ್ಕೆ ಸದಾ ಜನರ ಬೆಂಬಲ ಇರುತ್ತದೆ ಎನ್ನುವುದಕ್ಕೆ ಬ್ರಿಟನ್ನಿನ “ಉಕ್ಕಿನ ಮಹಿಳೆ” ಸಾಕ್ಷಿಯಾದರು.