“ಪಂಚ ಕನ್ಯೆ” ಯರ ವಿದಾಯ

“ಪಂಚ ಕನ್ಯೆ” ಯರ ವಿದಾಯ ಪರಂಪರೆ ಮುಕ್ತಾಯ, ನೇಪಾಳದಲ್ಲಿ.  ಪಂಚ ಕನ್ಯೆಯರು ಎಂದ ಕೂಡಲೇ ಆರತಿ, ಭಾರತಿ, ಮಂಜುಳ, ಕಲ್ಪನ, ಚಂದ್ರಕಲಾ…. ಇವರೇ ನಮ್ಮ ಕನ್ನಡ ನಾಡಿನ ಪಂಚ ಕನ್ನೆಯರೂ……ಎನ್ನೋ ಹಾಡು ನೆನಪಿಗೆ ಬಂದಿರಬೇಕು ಆಲ್ವಾ? ಬಿಟ್ಹಾಕಿ, ಇದು ಆ ಗತಕಾಲದ ನಮ್ಮೆಲ್ಲರ ಮನ ರಂಜಿಸಿದ ಕನ್ನೆಯರ ಕಥೆಯಲ್ಲ, ನಮ್ಮ ದೇಶದ ಉತ್ತರದ ಗಡಿಯಾಚೆಗಿನ ನೇಪಾಳದ ಕನ್ನೆಯರ ವ್ಯಥೆಯ ಕಥೆಯಿದು.

ನೇಪಾಳದ ರಾಷ್ಟ್ರ ನಾಯಕ ಹೊರದೇಶದ ಪ್ರವಾಸ ಹೊರಟಾಗ ಅವರನ್ನು ಬೀಳ್ಕೊಡಲು ಐದು ಕನ್ಯೆಯರನ್ನು ಸಿದ್ಧ ಪಡಿಸಲಾಗುತ್ತಿತ್ತಂತೆ. ದುರ್ಗ, ಸರಸ್ವತಿ, ಲಕ್ಷ್ಮಿ, ರಾಧ, ಅನ್ನಪೂರ್ಣ ಎನ್ನುವ ಯಶಸ್ಸನ್ನು ತರುವ ಈ ದೇವತೆಗಳನ್ನು ಪ್ರತಿನಿಧಿಸುವ ಪಂಚ ಕನ್ಯೆಯರು ಪ್ರವಾಸ ಹೋಗುವ ನಾಯಕನಿಗೆ ಶುಭವಾಗಲು ಮತ್ತು ಸಂಪತ್ತು ಸಿಗಲೆಂದು ಹಾರೈಸಿ ಈ ವ್ಯವಸ್ಥೆ ಮಾಡುತ್ತಿದ್ದರಂತೆ. ಶಾಲೆಗೆ ಹೋಗುವ ಈ ಹೆಣ್ಣು ಮಕ್ಕಳು ಸುಡು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ನಿಂತು ಅವರಿಗೆ ಶುಭ ಕೋರುವುದನ್ನು ಕಂಡು ಮರುಗಿದ ಅಧ್ಯಕ್ಷರು ಈ ಪರಂಪರೆಗೆ ಮಂಗಳ ಹಾಡಲು ತೀರ್ಮಾನಿಸಿದರಂತೆ.

ಶತಮಾನಗಳಿಂದ ನಡೆದು ಕೊಂಡು ಬರುತ್ತಿದ್ದ ಈ five virgin farewell ಸಮಾರೋಹದ ಪರಂಪರೆಗೆ ನೇಪಾಳದ ಅಧ್ಯಕ್ಷರು ಕೊನೆಗೂ good bye, good riddance ಹೇಳಿ ಸುಡು ಬಿಸಿಲಿನ ಬೇಗೆಯಿಂದ ಕನ್ನೆಯರ ಬಿಡುಗಡೆಗೆ ನಾಂದಿ ಹಾಡಿದರು.

ಒಂದು ಎರಡು ಬೇಕು…

family-planningಒಂದು ಎರಡು ಬೇಕು ಮೂರು ಮಕ್ಕಳು ಸಾಕು. ೭೦ ರ ದಶಕದಲ್ಲಿ ನಮ್ಮ ನಿಶಾ ಚಟುವಟಿಕೆ ಜೋರಾದಾಗ ಸರಕಾರ ನಿಷೇಧಾಜ್ಞೆ ಜಾರಿ ಮಾಡಿದ್ದು ಹೀಗೆ. ತದನಂತರ ಇಲಿ ಹೆಗ್ಗಣಗಳು FCI ಗೋಡೌನ್ನಿನ ದವಸ ಧಾನ್ಯಗಳನ್ನು ನುಂಗಿ ಹಾಕಿದಾಗ ಆ ಪ್ರಮಾದವನ್ನು ಮರೆಮಾಚಲು ಮತ್ತೊಂದು ಬಾಣ ಬಿಟ್ಟಿತು ಸರಕಾರ; food grain shortage ಇದೆ, ಮ್ಯಾಟಿನೀ, ಫರ್ಸ್ಟ್ ಶೋ ಎರಡು ದೆಖಾವೆಗಳು ಸಾಕು, ಆರತಿಗೊಬ್ಬ, ಕೀರ್ತಿಗೊಬ್ಬಳು ಅಂತ. ಸ್ವಲ್ಪ ವರ್ಷಗಳ ನಂತರ ರಾಜೀವ್ ಗಾಂಧಿಯ ವಿದೇಶ ಪ್ರವಾಸ ಜಾಸ್ತಿಯಾಗಿ ಮುಂದುವರಿದ ರಾಷ್ಟ್ರಗಳನ್ನು ನೋಡಿ one is fun ಎಂದು ನಮ್ಮ ಚೇಷ್ಟೇಗಳಿಗೆ ಪೂರ್ಣ ವಿರಾಮ ಹಾಕಿತು. ಇದ್ಯಾವುದರ ರಗಳೆಯೂ ಬೇಡ let us find middle course ಎಂದು ೨ ಮಕ್ಕಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿದೆವು ನಾವು.