ತೇರೆ ಬಿನ್ ಲಾದೆನ್…

ಲಾದೆನ್, ನೀನಿಲ್ಲದೆ… ಸಿನೆಮಾ ದೊಡ್ಡ ಸುದ್ದಿ ಮಾಡಿತು ನಮ್ಮ ದೇಶದಲ್ಲಿ. ಲಾದೆನ್ ಬಗೆಗೆ ಅಮೆರಿಕೆಯ ಅತಿ ಆಸಕ್ತಿಯ ಕುರಿತು ರಚಿಸಿದ ಈ ಚಿತ್ರ ವೀಕ್ಷಕರನ್ನು ರಂಜಿಸಿತು. ಲಾದೆನ್ ನ         enigma ರಾಜಕಾರಣಿ, ಸುದ್ದಿ ಪಂಡಿತರನ್ನು ಮಾತ್ರವಲ್ಲ ಚಿತ್ರರಂಗವನ್ನೂ ಬಾಧಿಸಿತು. ಹತ್ತು ಹಲವು ವರ್ಷಗಳಿಂದ ಒಂದೇ ಸಮನೆ ಅಮೇರಿಕಾ ಲಾದೆನ್ ಗಾಗಿ ಪ್ರಪಂಚ ಜಾಲಾಡಿದರೂ ಸಿಗದೇ ಹತಾಶವಾಗಿದ್ದಾಗ ಇದ್ದಕ್ಕಿದ್ದಂತೆ, ಯಾವ ಸುಳಿವೂ, ಮುನ್ಸೂಚನೆಯೂ ಇಲ್ಲದೆ justice is done, Laden is gone ಎಂದು ಬೆಳ್ಳಂ ಬೆಳಗ್ಗೆ  ಕೇಳಿ ತಬ್ಬಿಬ್ಬಾದ ನಮಗೆ ಲಾದೆನ್ ಸಾವು ಸಿನಿಮೀಯ ರೀತಿ ಎಂದು ಅನ್ನಿಸಿದರೆ ತಪ್ಪಾಗಲಾರದು. ಹತ್ತು ವರ್ಷಗಳಿಂದ ಅತ್ಯಾಧುನಿಕ ಉಪಗ್ರಹಗಳಿಂದ ಹಿಡಿದು ಅಮೇರಿಕನ್ ಸೈನಿಕರ high tech binocular ಗಳಿಗೂ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಬಿನ್ ಲಾದೆನ್ ದಿಢೀರನೆ ಕೊಲ್ಲಲ್ಪಟ್ಟ ಎಂದರೆ ಒಂದು ರೀತಿಯ ಸಿನಿಮೀಯ ತಾನೇ?  

ಲಾದೆನ್ ಬರೀ ಅಮೆರಿಕೆಗೆ ಮಾತ್ರವಲ್ಲ, ನಮ್ಮ ದೇಶದಲ್ಲೂ ಕುತೂಹಲ, ಭಯ, ಆಕ್ರೋಶ ಬರಿಸಿದ ಹೆಸರು. ಅಮೆರಿಕೆಯ ಮೇಲೆ ಮತ್ತು ವಿಶ್ವದ ಇತರೆ ನಗರಗಳಲ್ಲಿ ತನ್ನ ಸಾವಿನ ಏಜೆಂಟರನ್ನು ಹರಿಬಿಟ್ಟ ಲಾದೆನ್ ಕೊನೆಗೂ ಸೆಣೆಸುತ್ತಾ  ಉರುಳಿ ಬಿದ್ದ ಅಮೆರಿಕೆಯ ನಾವಿಕ ದಳದ ಯೋಧರ ಗುಂಡುಗಳಿಗೆ,  ಪಾಕಿಸ್ತಾನದ “ಅಬೋಟ್ಟಾಬಾದ್” ನಗರದಲ್ಲಿ.

ಅಬೋಟ್ಟಾಬಾದ್, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ೩೫ ಮೈಲು ದೂರ ಇರುವ, ಪ್ರತಿಷ್ಠಿತ ಸೈನಿಕ ತರಬೇತಿ ಕಾಲೇಜು ಹೊಂದಿದ ಈ ನಗರದಲ್ಲಿ ಬಿನ್ ಲಾದೆನ್ ಸುಮಾರು ಐದು ವರ್ಷಗಳಿಗೂ ಹೆಚ್ಚು ಕಾಲ ಅವಿತು ಕೊಂಡಿದ್ದ ಎಂದರೆ ಯಾರೂ ದಂಗಾಗುವರು. ಅಮೆರಿಕೆಯಂತೂ ಮೂರ್ಛೆ ಬೀಳುವುದೊಂದು ಬಾಕಿ. ಭಯೋತ್ಪಾದನೆ ತಡೆಯಲು, ಲಾದೆನ್ ಕ್ರುತ್ಯಗಳನ್ನು ತಡೆಯಲು ಪಾಕಿಸ್ತಾನದ ಬೆಂಬಲ ಪಡೆದಿದ್ದ ಅಮೇರಿಕಾ ಈ ಸಹಾಯಕ್ಕೆ ಕೊಡುತ್ತಿದ್ದ ಫೀಸು ವರ್ಷಕ್ಕೆ ೩ ಬಿಲ್ಲಿಯನ್ ಡಾಲರ್. ಯಾಚಕ ದೇಶ. ಇಂಥದ್ದೇ ಮತ್ತೊಂದು ಯಾಚಕ ದೇಶ ಇಸ್ರೇಲ್. ಬಿನ್ ಲಾದೆನ್ ನನ್ನು ಹುಡುಕುತ್ತಿದ್ದೇವೆ, ತಾಲಿಬಾನಿ ಗಳನ್ನು ಸದೆ ಬಡಿಯುತ್ತಿದ್ದೇವೆ ಎಂದು ಸುಳ್ಳು ಸುಳ್ಳೇ ಭರವಸೆ ನೀಡುತ್ತಾ ಅಮೆರಿಕೆಯ ಡಾಲರುಗಳ ಲಂಚವನ್ನು ಲಜ್ಜೆಯಿಲ್ಲದೆ ಸ್ವೀಕರಿಸಿದ ಪಾಕ್ ಅಮೆರಿಕೆಗೆ ಮೋಸ ಮಾಡಿತೆಂದೇ ವಿಶ್ವದ, ಅಮೆರಿಕನ್ನರ ನಂಬಿಕೆ. ಈ ರೀತಿ ಪುಕ್ಕಟೆ ಯಾಗಿ ಸಿಗುತ್ತಿದ್ದ ಸಂಪತ್ತನ್ನು ನುಂಗುತ್ತಿದ್ದ ಪಾಕಿಗೆ ಲಾದೆನ್ ಚಿನ್ನದ ತತ್ತಿ ಇಡುವ ಕೋಳಿ. main source of income. ಪಾಪ, ಲಾದೆನ್ ಸಾವಿನಿಂದ ದೊಡ್ಡ, ಭರಿಸಲಾರದ ನಷ್ಟ ಪಾಕಿಗೆ.  

ಪಾಕಿಸ್ತಾನ ಮಾತ್ರ ತನಗೆ ಲಾದೆನ್ ನ ಇರುವಿನ ಬಗ್ಗೆ ಗೊತ್ತೇ ಇಲ್ಲ ಎಂದು ಆಣೆ ಹಾಕಿ ಹೇಳಿದರೂ circumstantial evidence ಇದಕ್ಕೆ ವ್ಯತಿರಿಕ್ತ. ಈ ವಿವಾದದಲ್ಲಿ ಮತ್ತೊಂದು ಸಮಸ್ಯೆ ಇದೆ. ಅಮೇರಿಕಾ ಮತ್ತು ಪಾಕಿಸ್ತಾನ chronic liars. ಶುದ್ಧ ಸುಳ್ಳರು. ಈ ಇಬ್ಬರ ತಗಾದೆ ಬಗೆಹರಿಸಲು ಇಲ್ಲಿದೆ ಲಿಟ್ಮಸ್ ಟೆಸ್ಟ್. ಲಾದೆನ್ ಎಲ್ಲಿದ್ದಾನೆ ಎನ್ನುವುದು ಪಾಕಿಗೆ ತಿಳಿದಿತ್ತೆ? ಪಾಕಿನ ಸಹಾಯವಿಲ್ಲದೆ ಅಮೆರಿಕೆಯ ಬ್ಲಾಕ್ ಹಾಕ ಹೆಲಿಕಾಪ್ಟರ್ ಗಳು ಹೇಗೆ ತಾನೇ ಲಾದೆನ್ ಇರುವಲ್ಲಿಗೆ ಬರಲು ಸಾಧ್ಯ? ಅಲ್ಕೈದಾ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಬಹುದು ಎನ್ನುವ ಭೀತಿ ಪಾಕಿಗೆ ತಾನು ಈ ಸಾಹಸದಲ್ಲಿ ಪಾಲು ಗೊಂಡಿಲ್ಲ ಎಂದು ಹೇಳಲು ಪ್ರೇರೇಪಿಸುತ್ತಿರಬಹುದೇ? ಪಾಕಿಸ್ತಾನದ ಪರಿಸ್ಥತಿ ಅಡಕ್ಕೊತ್ತರಿ ಯಲ್ಲಿ ಸಿಕ್ಕ ಅಡಿಕೆಯಂತೆ. ಲಾದೆನ್ ಇರುವ ಸ್ಥಳ ತೋರಿಸಿ ಅಮೆರಿಕೆಗೆ ಸಹಕಾರ ನೀಡಿದೆ ಎಂದರೆ ಅಲ್ ಕೈದಾ ಬಿಡೋಲ್ಲ, ಲಾದೆನ್ ಎಲ್ಲಿದ್ದಾನೆ ಎಂದು ತನಗೆ ತಿಳಿದಿಲ್ಲ ಎಂದರೆ ಅಮೇರಿಕಾ ಬಿಡೋಲ್ಲ. ಸುಮಾರು  ಐದು ವರ್ಷಗಳ ಕಾಲ ದೊಡ್ಡ ಪಾಕಿಸ್ತಾನದ ರಾಜಧಾನಿಯ ಹಿತ್ತಲಿನಲ್ಲಿ,  ಬಂಗಲೆಯೊಂದರಲ್ಲಿ ವಾಸಿಸುತ್ತಿದ್ದ ಲಾದೆನ್ ಬಗ್ಗೆ ಪಾಕ್ ಸೈನ್ಯಕ್ಕೆ, ಸರಕಾರಕ್ಕೆ ತಿಳಿದಿಲ್ಲ ಎಂದರೆ ದೊಡ್ಡ ಆಶ್ಚರ್ಯವೇ. ಒಂದು ವೇಳೆ ಪಾಕಿಗೆ ಲಾದೆನ್ ಪಾಕಿನಲ್ಲಿ ಇರುವ ಅರಿವು ಇಲ್ಲದಿದ್ದರೆ ಅಮೇರಿಕಾ ತಾನು ನೀಡುವ ಉದಾರ ಧನ ಸಹಾಯ ಮುಂದುವರೆಸಬಹುದು. ಅಥವಾ ಲಾದೆನ್ ಪಾಕಿಸ್ತಾನದಲ್ಲಿ ಇರುವುದನ್ನು ಅಮೆರಿಕೆಗೆ ತಿಳಿಸದೇ ಡಬಲ್ ಗೇಂ ಆಡಿದ್ದರೆ ಪಾಕಿಸ್ತಾನವನ್ನು ದಾರಿಗೆ ತರುವ ಕೆಲಸ ಅಮೇರಿಕಾ ಶೀಘ್ರ ಶುರು ಮಾಡಬೇಕು. ಇದೇ ಟೆಸ್ಟು. Litmus ಟೆಸ್ಟು.    

ಬಿನ್ ಲಾದೆನ್ ಇಲ್ಲದೆ ಪಾಕ್ ಹೇಗೆ ತಾನೇ ಜೀವಿಸೀತು ಎನ್ನುವುದೀಗ ಆಸಕ್ತಿಕರ ಪ್ರಶ್ನೆ. ಪ್ರೀತೀ,  ನೀನಿಲ್ಲದೆ ನಾ ಹೇಗಿರಲಿ… ಎಂದು ಶೋಕ ಗೀತೆ ಹಾಡುತ್ತಿರಬಹುದೇ ಪಾಕಿಗಳು?

೨೦೦೧ ರ ಅಮೆರಿಕೆಯ ವಿರುದ್ಧದ ಧಾಳಿಗೆ ಬಿನ್ ಲಾದೆನ್ ನನ್ನು ನೇರ ಹೊಣೆಯಾಗಿರಿಸಿದ ಜಾರ್ಜ್ ಬುಶ್, ಬಿನ್ ಲಾದೆನ್ wanted, dead or alive ಎಂದು ಘೋಷಿಸಿದ. ಅಮೆರಿಕೆಯ ಮೇಲೆ ನಿರ್ದಯೀ, ಭೀಕರ ಧಾಳಿ ಮಾಡಿ ತಾನು ಒಂದು ದಿನ ಪೂರ್ತಿ ರಹಸ್ಯ ಅಡಗು ತಾಣವೊಂದರಲ್ಲಿ ದಿನ ಕಳೆಯುವಂತೆ ಮಾಡಿದ ಬಿನ್ ಲಾದೆನ್ ನ ತಲೆಗೆ ೨೫ ಮಿಲ್ಲಿಯನ್ ಡಾಲರ್ ಮೊತ್ತದ ಬೆಲೆಯನ್ನೂ ಕಟ್ಟಿದ ಬುಶ್.  ಹೊಗೆಯುಗುಳುತ್ತಾ ನೆಲಕ್ಕುರುಳಿದ ನ್ಯೂಯಾರ್ಕ್ ನ ಗಗನ ಚುಂಬಿ ಕಟ್ಟಡಗಳು ಅಮೆರಿಕನ್ನರ ಚಿತ್ತ ಕಲಕಿದವು. ಕ್ರುದ್ಧ ಅಮೇರಿಕಾ ಬಿನ್ ಲಾದೆನ್ ಅಡಗಿದ್ದ ಆಫ್ಘಾನಿಸ್ತಾನ ವನ್ನು ಆಕ್ರಮಣ ಮಾಡಿತು. ಬಿನ್ ಲಾದೆನ್ ಎಲ್ಲಿದ್ದರೂ ಹೊಗೆ ಹಾಕಿ ಹೊರತೆಗೆಯುತ್ತೇನೆ ಎಂದು ಘರ್ಜಿಸಿದ ಬುಶ್ ಆಫ್ಘಾನಿಸ್ತಾನದ ಗುಡ್ಡಗಾಡು ಗಳನ್ನು ಮಾತ್ರವಲ್ಲ ಅಲ್ಲಿನ ತೋರಾ ಬೋರಾ ಗವಿ ಸಮುಚ್ಛಯಗಳನ್ನು ಜಾಲಾಡಿದ. ಸೋವಿಯೆಟ್ ಸೇನೆಗೆ ಚಳ್ಳೆ ಹಣ್ಣು ತಿನ್ನಿಸಿದ್ದ, ಸ್ವತಃ ಅಮೆರಿಕನ್ನರಿಂದಲೇ ತರಬೇತಿ ಪಡೆದ, ಸ್ವಾತಂತ್ರ್ಯ ಹೋರಾಟಗಾರ ಎಂದು ರೋನಾಲ್ಡ್ ರೇಗನ್ನರಿಂದ ಹೊಗಳಿಸಿಕೊಂಡಿದ್ದ  ಬಿನ್ ಲಾದೆನ್ ರಂಗೋಲಿ ಕೆಳಗೆ ತೂರಿಕೊಳ್ಳುವುದನ್ನು ಕರಗತ ಮಾಡಿಕೊಂಡ.  

ಬಿನ್ ಲಾದೆನ್,  wanted, dead or alive ಎಂದ ಅಮೇರಿಕಾ ಲಾದೆನ್ ಇರುವ ಮನೆಯ ಮೇಲೆ ಧಾಳಿ ಮಾಡಿ, ೪೦ ನಿಮಿಷಗಳ ಕಾಳಗದಲ್ಲಿ ಎರಡು ಗುಂಡುಗಳನ್ನು ಲಾದೆನ್ ತಲೆಗೆ ಸಿಡಿಸಿ ಕೊಂದಿದ್ದಾರೂ ಏಕೆ? ಅವನನ್ನು ಜೀವಂತ ಸೆರೆ ಹಿಡಿದು, ಅಮೆರಿಕೆಯ USS COLE , ಆಫ್ರಿಕಾದ ದಾರುಸ್ಸಲಾಮ್, ಸ್ಪೇನ್ ನ MADRID, ಲಂಡನ್, ಸೌದಿ ಅರೇಬಿಯಾದ ದಹರಾನ್, ಇರಾಕ್, ಸೋಮಾಲಿಯಾ, ಇಂಡೋನೇಷ್ಯಾದ ಬಾಲಿ ಮುಂತಾದ ನಗರಗಳ ಮೇಲೆ ಧಾಳಿ ಮಾಡಿದ ಈತನನ್ನು ವಿಚಾರಣೆ ಮಾಡಬಹುದಿತ್ತಲ್ಲ. ಅಮೆರಿಕೆಯ ಕಾರ್ಯ ವೈಖರಿ ಆ ದೇಶದಷ್ಟೇ ನಿಗೂಢ. ಕ್ರಿಸ್ಟಫರ್ ಕೊಲಂಬಸ್ ಕಂಡು ಹಿಡಿಯುವವರೆಗೂ ನಿಗೂಢವಾಗಿದ್ದ ದೇಶವಲ್ಲವೇ ಅಮೇರಿಕಾ? ಈತನನ್ನು ಸೆರೆ ಹಿಡಿದು ಅಮೇರಿಕಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿ ಕೊಳ್ಳಲು ಇಷ್ಟ ಪಡಲಿಲ್ಲ. ವಿಚಾರಣೆ ವೇಳೆ ಬಿನ್ ಲಾದೆನ್ ಬಾಯಿ ಬಿಟ್ಟರೆ ತಾವು ಕೇಳಲು ಇಚ್ಛಿಸುವುದಕ್ಕಿಂತ ಸ್ವಲ್ಪ ಹೆಚ್ಚನ್ನೇ ಬಡಬಡಿಸಬಹುದು. ಈ ಕಸಿವಿಸಿಯಿಂದ ಪಾರಾಗಲು ಇರುವ ಒಂದೇ ದಾರಿ ಎಂದರೆ ನೇರ ಆಕ್ರಮಣ. ಈ ಆಕ್ರಮಣದಲ್ಲಿ ಅಮೇರಿಕಾ ಯಶಸ್ಸನ್ನು ಕಂಡಿತು.         

ತಾನು ಕರಿಯನಾದ ಒಂದೇ ಕಾರಣಕ್ಕೆ ದಿನವೂ ಬಿಳಿ ಅಮೆರಿಕನ್ನರ ಕುಹಕಕ್ಕೆ, ಅವಹೇಳನಕ್ಕೆ  ಗುರಿಯಾಗುತ್ತಿದ್ದ ಒಬಾಮ ಕೊನೆಗೆ ತನ್ನ ಜೀವನದ ಅತಿ ದೊಡ್ಡ ಅವಮಾನವನ್ನು ಎದುರಿಸಬೇಕಾಯಿತು. ಒಬಾಮಾರ ಜನನ ಪ್ರಮಾಣ ಪತ್ರವನ್ನು ಬಲ ಪಂಥೀಯ ರಿಪಬ್ಲಿಕನ್ ಪಕ್ಷ ಕೇಳಿತು. ಒಬಾಮಾ ತನ್ನ ಜನನ ಪ್ರಮಾಣ ಪತ್ರದ ಜೊತೆ ಜೊತೆಗೇ ಅಮೆರಿಕನ್ನರ ಸಿಂಹಸ್ವಪ್ನನಾಗಿದ್ದ ಲಾದೆನ್ ನ ಸಾವಿನ ಪ್ರಮಾಣ ಪತ್ರವನ್ನೂ ಅಮೆರಿಕನ್ನರಿಗೆ ನೀಡಿ ತಾನು ಕಾರ್ಯಕ್ಷಮತೆಯಲ್ಲಿ ಯಾವ ಬಿಳಿ ಅಧ್ಯಕ್ಷನಿಗೂ ಕಡಿಮೆಯಲ್ಲ ಎನ್ನುವುದನ್ನು ತೋರಿಸಿ ಕೊಟ್ಟರು.   

ಒಸಾಮಾ ಬಿನ್ ಮುಹಮ್ಮದ್ ಬಿನ್ ಅವಾದ್ ಬಿನ್ ಲಾದೆನ್.  ೫೪ ವರ್ಷ ಪ್ರಾಯದ, ಆರಡಿ ಮೂರಿಂಚು ಎತ್ತರದ ಸ್ಫುರದ್ರೂಪಿ ಮತ್ತು ಆಗರ್ಭ ಶ್ರೀಮಂತ ಆಫ್ಘನ್ ಗುಡ್ಡ ಗಾಡಿನ ಜನರ ವಿಶ್ವಾಸ, ಪ್ರೀತಿ, ಅಭಿಮಾನ ಗಳಿಸಲು ಕಾರಣವಾಗಿದ್ದಾದರೂ ಏನು? ಜನರೊಂದಿಗೆ ಸುಲಭವಾಗಿ, ಆತ್ಮೀಯತೆಯಿಂದ ಬೆರೆಯುತ್ತಿದ್ದ ಈತ ಸೌಮ್ಯ ಮಾತುಗಾರಿಕೆಯಿಂದ, ತನ್ನ ಉದಾರ ಸ್ವಭಾವದಿಂದ ಅಲ್ಲಿನ ಯುವಜನರ ಮನ ಗೆದ್ದಿದ್ದ. ಕೋಟ್ಯಾಧೀಶ ಮನೆತನದಿಂದ ಬಂದ ಈತ ಐಶಾರಾಮದ ಬದುಕನ್ನು ಬಿಟ್ಟು ಆಫ್ಘನ್ ಗುಡ್ಡಗಾಡಿನಲ್ಲಿ ಒಣಗಿದ ಚಪಾತಿ ತಿನ್ನುತ್ತಾ ತಮ್ಮೊಂದಿಗೆ ಇರುತಿದ್ದ ಈತನನ್ನು ಕಂಡು ಜನ ಮಾರುಹೋದರು. ಸೋವಿಯೆಟ್ ಸೈನ್ಯದೊಂದಿಗೆ ಹೋರಾಡಿದ ಈತ ಓರ್ವ ಸೈನಿಕನೊಂದಿಗೆ hand to hand combat ನಲ್ಲಿ ಸೈನಿಕನ್ನು ಕೊಂದು ಅವನ kalashnikov ಬಂದೂಕನ್ನು ವಶಪಡಿಸಿ ಕೊಂಡಿದ್ದ. ಈ ಬಂದೂಕು ಅವನ ಅಭಿಮಾನದ ಸ್ವತ್ತಾಗಿತ್ತು.

ಈತ ಆರಂಭಿಸಿದ ಅಲ್ ಕೈದಾ ಒಂದು ಸಂಘಟನೆಯೋ ಆಗಿರದೆ ಒಂದು ತೆರನಾದ ideology ಆಗಿತ್ತು. ಸದಸ್ಯ ಶುಲ್ಕವಾಗಲೀ, ಯಾವುದೇ formal induction ಆಗಲಿ ಬೇಕಿಲ್ಲದ ಈ ವಿಚಾರಧಾರೆಗೆ ಮೂರು ಅಂಶಗಳೇ ಉರುವಲಾಗಿ ಕೆಲಸ ಮಾಡುತ್ತಿದ್ದವು. ಆಕ್ರೋಶ, ನಿರಾಶೆ, ನಿಸ್ಸಹಾಯಕತೆ (anger, frustration, desperation).  ಒಂದು ಕಡೆ ಮುಸ್ಲಿಂ ದೇಶಗಳಲ್ಲಿನ ಆಳುವವರ ಭ್ರಷ್ಟಾಚಾರ ಸಾಲದು ಎಂಬಂತೆ ಅಮೆರಿಕೆಯ ಮೇಲಿನ ವಿಪರೀತ ಅವಲಂಬನೆ ಮತ್ತು ಅರಬ್ಬರ ಸಂಪತ್ತನ್ನು ಲೂಟಿ ಹೊಡೆಯುತ್ತಾ ಇಸ್ರೇಲ್ ದೇಶವನ್ನು ಸಾಕುತ್ತಿದ್ದ ಅಮೆರಿಕೆಯ ಆಟ ಈತನಲ್ಲಿ ಆಕ್ರೋಶ ಹುಟ್ಟಿಸಿತ್ತು. ಸೌದಿ ದೊರೆಗಳ ವಿರುದ್ಧವೂ ಈತ ಸಮರ ಸಾರಿದ ನಂತರ ಇವನ ವಿರೋಧಿಗಳ ಪಟ್ಟಿ ದೊಡ್ಡದಾಗುತ್ತಾ ಹೋಯಿತು. ಈತನ ನೂರಾರು ಹಿಂಬಾಲಕರಲ್ಲಿ ಹಲವರನ್ನು ಕೊಂದು, ನೂರಾರು ಜನರನ್ನು ಜೈಲಿಗೆ ತಳ್ಳಿ ಅಲ್ ಕೈದಾ ಪಿಡುಗನ್ನು ಕೊನೆಗಾಣಿಸಿದ ಸೌದಿ ಸರಕಾರ ಭಯೋತ್ಪಾದನೆ ತಡೆಯುವಲ್ಲಿ ಯಾವ ಕ್ರಮ ತೆಗೆದು ಕೊಳ್ಳುವುದಕ್ಕೂ ತಾನು ಹೇಸುವುದಿಲ್ಲ ಎಂದು ವಿಶ್ವಕ್ಕೆ ತೋರಿಸಿ ಕೊಟ್ಟಿತು.   

ಯಹೂದಿಗಳ ಕೈಯ್ಯಲ್ಲೂ, ಅಮೆರಿಕೆಯ ಕೈಯ್ಯಲ್ಲೂ ಮುಸ್ಲಿಮರ ಮಾರಣ ಹೋಮ ನೋಡಿದ ಬಿನ್ ಲಾದೆನ್ ಪ್ರತಿಕ್ರಯಿಸಿದ್ದು ಹಿಂಸಾ ಮಾರ್ಗದಿಂದ. ಸುಮಾರು ೧೫೦೦ ವರ್ಷಗಳ ಚರಿತ್ರೆ ಇರುವ ಇಸ್ಲಾಂ ಧರ್ಮಕ್ಕೆ ಬಹುಶಃ ಸ್ವತಃ ಮುಸ್ಲಿಂ ಆದ ಬಿನ್ ಲಾದೆನ್ ಮಾಡಿದಷ್ಟು ಅಪಕಾರ ಬೇರಾರೂ ಮಾಡಿರಲಾರ ರೇನೋ? ತನ್ನ ಕುಕೃತ್ಯಗಳಿಂದ ಎರಡು ಯುದ್ಧಗಳಿಗೆ ಕಾರಣನಾದ, ಎರಡು ದಶಲಕ್ಷಕ್ಕೂ ಅಧಿಕ ಮುಸ್ಲಿಮರ ಸಾವಿಗೆ ಸಾಕ್ಷಿ ನಿಂತ ಬಿನ್ ಲಾದೆನ್ ಅದ್ಯಾವ ರೀತಿ ತಾನು ನಂಬಿದ ಧರ್ಮದ ಸೇವೆ ಮಾಡಿದನೋ ಅವನೇ ಬಲ್ಲ.  ವಿಶ್ವದ ಡಜನ್ ಗಟ್ಟಲೆ ಹೆಚ್ಚು ನಗರಗಳಲ್ಲಿ ಸಾವು ನೋವನ್ನು ತಂದು ನಿಲ್ಲಿಸಿದ ಬಿನ್ ಲಾದೆನ್ ಕೊನೆಗೂ ಹಿಂಸೆಯ ಮೂಲಕವೇ ತನ್ನ ಜೀವ ಕಳೆದುಕೊಂಡ. ಇಂಡೋನೇಷ್ಯಾದ “ಬಾಲಿ” ಯಿಂದ ಹಿಡಿದು ಆಫ್ರಿಕಾದ  ನೈರೋಬಿ ವರೆಗೆ ಸಾವು ನೋವಿನ ಕರಾಳ ಕಂಬಳಿಯನ್ನು ಹರಡಿದ ಬಿನ್ ಲಾದೆನ್ “ವಿನಾಕಾರಣ ಒಬ್ಬನನ್ನು ಕೊಂದರೆ ಇಡೀ ಮನುಕುಲವನ್ನು ಕೊಂದಂತೆ” ಎಂದ ಹೇಳಿದ ತನ್ನ ಭಗವಂತನ ಮುಂದೆ ನಿಂತು ಯಾವ ಸಮಜಾಯಿಷಿ ನೀಡುವನೋ?

ಬಿನ್ ಲಾದೆನ್ ನಿರ್ಗಮನದಿಂದ ನಮ್ಮೀ ವಿಶ್ವ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗೆ ಕಾಲಗರ್ಭದಲ್ಲಿ ಅಡಗಿದೆ  ಉತ್ತರ.

ಟ್ವಿಟ್ಟರ್ ನಲ್ಲಿ ಸಿಕ್ಕಿದ್ದು:

Kentucky Fried Chicken ಶುರು ಮಾಡಿದ “ಕರ್ನಲ್ ಸ್ಯಾಂಡರ್ಸ್” ನ ನಿಧನದೊಂದಿಗೆ KFC ಯ franchising ನಿಲ್ಲಲಿಲ್ಲ. ಅದೇ ರೀತಿ ಅಲ್ ಕೈದಾ ಸ್ಥಾಪಕನ ಸಾವಿನಿಂದ ಅಲ್ ಕೈದಾ ಸಹ ಮುಗಿಯೋದಿಲ್ಲ.  ಆದರೆ ಇದೇ ವೇಳೆ, ಅಂತರಾಷ್ಟ್ರೀಯ ಖ್ಯಾತಿಯ, ಸಂಪಾದಕ ಭಾರತೀಯ ಮೂಲದ ಫರೀದ್ ಜಕರಿಯಾ ಹೇಳಿದ್ದು, loss of a symbol can end a movement.  

ವಿ. ಸೂ: ನನ್ನ ಈ ಲೇಖನ ಬಿನ್ ಲಾದೆನ್ ನ ಅವಸಾನ ಮತ್ತು ಅವಸಾನದ ಕ್ಷಣಗಳನ್ನು ಅಮೆರಿಕೆಯ ವೃತ್ತಾಂತವನ್ನು ಆಧರಿಸಿದ್ದು. ಯಾವುದೇ independent confirmation ಯಾರಿಗೂ ಲಭ್ಯವಾಗಿಲ್ಲ.      

 

ಜಿಹಾದ್ ಎಂದರೇನು?

ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ “ಮದ್ರಸಾ” ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿಕ್ಷಣ ಪಡೆದ ನಾನು ಜಿಹಾದ್ ಪದದ ಕುರಿತು ಯಾರ ಬಾಯಲ್ಲೂ ಕೇಳಿರಲಿಲ್ಲ.  ಪ್ರಪ್ರಥಮವಾಗಿ ಜಿಹಾದ್ ಎನ್ನುವ ಪದ ಕೇಳಿದ್ದು ೨೦೦೧ ರಲ್ಲಿ. ಅಮೆರಿಕೆಯ ಮೇಲೆ ನಡೆದ ಧಾಳಿಯಲ್ಲಿ ಅಮೇರಿಕಾ ಮತ್ತು ಇತರೆ ಪಾಶ್ಚಾತ್ಯ ರಾಷ್ಟ್ರಗಳ ರಾಜಕೀಯ ಪಂಡಿತರುಗಳು ಉಪಯೋಗಿಸಿದ ಪದದಿಂದ ನನಗೆ ಪ್ರಥಮವಾಗಿ ಜಿಹಾದ್ ಪದದ ಪರಿಚಯವಾಯಿತು. ಇನ್ನು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಳ ರೀತಿ ಜಿಹಾದ್ ಅನ್ನೂ ಹೇಳಿ ಕೊಟ್ಟು, ಜಿಹಾದ್ ಅಂದರೆ ಯುದ್ಧ, ಸಿಕ್ಕ ಸಿಕ್ಕವರನ್ನು ಕೊಲ್ಲುವುದು ಎಂದಿದ್ದರೆ ವಿಶ್ವ ಈ ರೀತಿಯಲ್ಲಿ ಖಂಡಿತಾ ಇರುತ್ತಿರಲಿಲ್ಲ. ನನಗೂ ಈ ಪದದ ಬಗ್ಗೆ ಅರಿಯಲು ಇಷ್ಟೊಂದು ವರ್ಷಗಳು ಬೇಕಿರಲಿಲ್ಲ.  ೧೭೦ ಕೋಟಿ ಮುಸ್ಲಿಮ್ ಜನಸಂಖ್ಯೆಯಿರುವ ಪ್ರಪಂಚದಲ್ಲಿ ಈ ತೆರನಾದ ನಿರರ್ಥಕ ಹಿಂಸೆಯಲ್ಲಿ ತೊಡಗಿಸಿಕೊಂಡವರು ಕೆಲವೇ ಲಕ್ಷಗಳಷ್ಟು ದುರುಳರು, ಧರ್ಮ ದ್ರೋಹಿಗಳು. ಬಹುಪಾಲು ಮುಸ್ಲಿಮರು ಎಲ್ಲರಂತೆ ದುಡಿಯುತ್ತಾ, ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಶ್ರಮ ಪಡುತ್ತಿರುವವರು. ಅವರಿಗೆ ಹಿಂಸೆ ಬೇಕಿಲ್ಲ. ಅವರಿಗೆ ಬೇಕಿರುವುದು ರೋಟಿ, ಕಪಡಾ, ಔರ್ ಮಕಾನ್. ತಿನ್ನಲು ಆಹಾರ, ಉಡಲು ಬಟ್ಟೆ, ಮತ್ತು ತಲೆಯ ಮೇಲೊಂದು ಸೂರು.        

ಆಸ್ಟ್ರೇಲಿಯಾದಲ್ಲಿ ಜಿಹಾದ್ ನ ಬಗ್ಗೆ ಒಂದು ಸಮ್ಮೇಳನದಲ್ಲಿ ಮಾತನಾಡಿದ ಇಸ್ಲಾಮೀ ವಿಧ್ವಾಂಸರು ಹೇಳಿದ್ದು, ಜಿಹಾದ್ ಎಂದರೆ ಶ್ರಮ ಎಂದು ಹೇಳುತ್ತಾ ಒಂದು ಒಳ್ಳೆಯ ಸುಸಂಸ್ಕೃತ ಸಮಾಜ ಕಟ್ಟಲು ವಿಶ್ವದ ಎಲ್ಲಾ ದೇಶಗಳ ಥರಾ ಆಸ್ಟ್ರೇಲಿಯಾ ದೇಶದ ಸರಕಾರ ಸಹ ಜಿಹಾದ್ ಇಲಾಖೆಗಳನ್ನು ಹೊಂದಿದೆ, ಅದೆಂದರೆ ಗೃಹ ಅಥವಾ ರಕ್ಷಣಾ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ  ಮತ್ತು ವಿದ್ಯಾ ಇಲಾಖೆ. ಅದರ ಅರ್ಥ ಸಮಾಜದ ರಕ್ಷಣೆ, ಒಳಿತು ಮತ್ತು ಉನ್ನತಿಗಾಗಿ ಜನ ನೇಮಿಸಿದ, ಆರಿಸಿದ ಸರಕಾರ ಪರಿಶ್ರಮ ಪಡುವುದು ಎಂದು.

ಜಿಹಾದ್ ಪದದ ಮೂಲ “ಜಹ್ದ್” ಎನ್ನುವ ಅರಬ್ ಪದದಿಂದ. ಅದರ ಅರ್ಥ ಶ್ರಮ ವಹಿಸುವುದು. ಒಬ್ಬ ದುಶ್ಚಟ ಬಿಡಲು, ಕುಡಿತ ನ್=ಬಿಡಲು , ಜೂಜಾಟ ಬಿಡಲು ಪರಿಶ್ರಮಿಸುವ ಹಾಗೆಯೇ ಜಿಹಾದ್ ಎನ್ನುವುದು ಸಹ ಒಳ್ಳೆಯ ನಡತೆಗೆ ಒಬ್ಬ ಮಾಡುವ ಪರಿಶ್ರಮ. ಮೇಲೆ ಹೇಳಿದ ಮೂಲ ಪದದಿಂದ ಬಂದ ಮತ್ತೆರಡು ಪದಗಳೆಂದರೆ ಇಜ್ತಿಹಾದ್, ಮತ್ತು ತಹಜ್ಜುದ್.

ಇಜ್ತಿಹಾದ್ ಎಂದರೆ  ಜ್ಞಾನಾರ್ಜನೆ ಎಂದು. ಈ ಇಜ್ತಿಹಾದ್ ನ ಪರಿಣಾಮವೇ ಒಂದು ಸಾವಿರ ವರ್ಷಗಳಿಗೂ ಮೊದಲು ಬಾಗ್ದಾದ್, ಕೈರೋ ಮತ್ತು ಡಮಾಸ್ಕಸ್ ನಗರಗಳಲ್ಲಿ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯಗಳು ಸ್ಥಾಪಿತ ಗೊಂಡಿದ್ದು ಮತ್ತು ಅಲ್ಲಿಂದಲೆ ಅಂಧಕಾರದಲ್ಲಿದ್ದ ಅಇರೋಪ್ಯ ದೇಶಗಳಿಗೆ ಜ್ಞಾನ ಹರಡಿದ್ದು.

“ಇಜ್ತಿಹಾದ್” ನ ಪರಿಣಾಮವೇ ಇರಬೇಕು ಹಿಂದೂ ವೇದಗಳನ್ನು ಮುಘಲ್ ಚಕ್ರವರ್ತಿ  ಷಾಜಹಾನನ ಮಗ “ದಾರಾ ಶಿಕೋ” ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಭಾಷಾಂತರಿಸಿ ವಿಶ್ವಕ್ಕೆ ಪರಿಚಯಿಸಿದ್ದು. ಆಗಲೇ ವೇದಗಳ ಸೊಗಸು ವಿಶ್ವಕ್ಕೆ ತಿಳಿದಿದ್ದು, ಅದರ ಕಂಪು ಪಸರಿದ್ದು.   

“ತಹಜ್ಜುದ್: ಎಂದರೆ ಏಕಾಂತದ ಆರಾಧನೆ: ಗಾಢ ನಿದ್ದೆಯಿಂದ ರಾತ್ರಿ ಎಚ್ಚರವಾದರೆ ಕೂಡಲೇ ಎದ್ದು ನಮಾಜ್ ಮಾಡಬೇಕೆಂದು ನಿಯಮವಿದೆ. ಆ ನಮಾಜ್ ಕಡ್ಡಾಯವಲ್ಲ,  ಆದರೆ ಬಹಳಷ್ಟು ಜನ ಈ ತಹಜ್ಜುದ್ ನಮಾಜ್ ಮಾಡುತ್ತಾರೆ. ಏಕೆಂದರೆ ನೀರವ ರಾತ್ರಿಯಲ್ಲಿ ಇಡೀ ವಿಶ್ವ ಗಾಢ ನಿದ್ದೆಯಲ್ಲಿರುವಾಗ ತನ್ನನ್ನು ಸೃಷ್ಟಿಸಿದ ಪ್ರಭುವನ್ನು ನೆನೆದು ಸಾಷ್ಟಾಂಗ ಮಾಡಿದರೆ ಅವನ ಪ್ರಾರ್ಥನೆಗೆ ಉತ್ತರ ಸಿಗುವುದಲ್ಲದೆ ಅವನು ದೇವರಿಗೆ ತೀರಾ ಹತ್ತಿರದವನಾಗುತ್ತಾನೆ ಎನ್ನುವ ನಂಬಿಕೆಯಿಂದ.  

ಈಗ ನನ್ನ ಈ ಬರಹವನ್ನ ಅತ್ಯಂತ  ಸಂಯಮದಿಂದ ಯಾವುದೇ ಆವೇಶಕ್ಕೆ ಒಳಗಾಗದೆ ನೀವು ಓದುತ್ತಿದ್ದರೆ ನೀವು ಜಿಹಾದ್ ಮಾಡುತ್ತಿದ್ದೀರಿ ಎಂದರ್ಥ. ಅಂದರೆ ಕಾತುರತೆಯನ್ನು ಹತ್ತಿಕ್ಕಿ ಶಾಂತರಾಗಿ ಸಂಯಮದಿಂದ ಮುಂದೆ ಬರೆದಿದ್ದನ್ನು ಓದುವ, ನೀವು ಮಾಡುವ ಯತ್ನ ಅಥವಾ ಪರಿಶ್ರಮ, ಇದೇ ನಿಜವಾದ ಜಿಹಾದ್ ನ ಅರ್ಥ.  

ಈ ಮೇಲಿನ ವಿಶ್ಲೇಷಣೆ ನೋಡಿದಾಗ ಜಿಹಾದ್ ಪದಕ್ಕೂ ಹಿಂಸೆ, ಭಯೋತ್ಪಾದನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನಮಗೆ ತಿಳಿಯುತ್ತದೆ. “ಜುಹ್ದ್” ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೂ ಕೌಶಲ್ಯವನ್ನೂ, ಉತ್ತಮ ಪಡಿಸಿ ಕೊಳ್ಳಲು ಮಾಡುವ ಪ್ರಾಮಾಣಿಕ ಯತ್ನ, “ಇಜ್ತಿಹಾದ್” ಎಂದರೆ ಆ ಪ್ರಾಮಾಣಿಕ ಯತ್ನದ ಕಡೆ ಜ್ಞಾನದ ಸಹಾಯ ಪಡೆಯುವುದು ಮತ್ತು ತನ್ನ ಪರಿಶ್ರಮ ಮತ್ತು ಜ್ಞಾನಾರ್ಜನೆಯ ಅನ್ವೇಷಣೆಯಲ್ಲಿ ತನ್ನನ್ನು ಸೃಷ್ಟಿಸಿದ ತನ್ನ ಭಗವಂತನ ಸಹಾಯ ಯಾಚಿಸುವುದು ಏಕಾಂತದ ಆರಾಧನೆಯಾದ ” ತಹಜ್ಜುದ್” ಮೂಲಕ. ಹಾಗಾದರೆ ಯುದ್ಧಕ್ಕೆ, ಹೋರಾಟಕ್ಕೆ ಅರಬ್ಬೀ  ಏನೆಂದು ಕರೆಯುತ್ತಾರೆ?   

ಜಿಹಾದ್ ಎಂದರೆ ಯುದ್ಧ ಹಿಂಸೆ ಮಾತ್ರ ಅಲ್ಲ ಎಂದಾದರೆ ಯುದ್ಧ ಮತ್ತು ಈ ತೆರನಾದ ಸ್ವರಕ್ಷಣೆಯ ಹೋರಾಟಕ್ಕೆ “ಹರ್ಬ್” ಮತ್ತು “ಕತ್ಲ್” ಎಂತಲೂ ಕರೆಯತ್ತಾರೆ. “ಹರ್ಬ್” ಎಂದರೆ ಯುದ್ಧ. “ಕತ್ಲ್” ಎಂದರೆ ಕೊಲೆ ಎಂದು. (ಹಿಂದೀ ಮತ್ತು ಉರ್ದು ಭಾಷೆಯಲ್ಲಿ ಕೂಡಾ ಕತ್ಲ್ ಅಂದರೆ ಕೊಲೆ ಎಂದೂ, ಕಾತಿಲ್ ಎಂದರೆ ಕೊಲೆಗಾರ ಎಂದೂ ಕರೆಯುತ್ತಾರೆ).

ಹಾಗಾದರೆ ಮಾಧ್ಯಮಗಳು ಮತ್ತು ಇಸ್ಲಾಂ ಟೀಕಾಕಾರ ರಿಗೆ ಈ ವಿವರಣೆ ಆಗಲಿ, ಅರಬ್ಬೀ ವ್ಯಾಕರಣದ ಈ ಅಂಶಗಳಾಗಲಿ ತಿಳಿದಿಲ್ಲ ಎಂದಲ್ಲ. ಇಸ್ಲಾಮನ್ನು ದೂಷಿಸುವ ಪರಿಪಾಠ ಇಂದು ನಿನ್ನೆಯದಲ್ಲ. ಕ್ರೈಸ್ತರ ಮೊದಲ ಧರ್ಮ ಯುದ್ಧ ದ (crusade) ನಂತರ ಮತ್ತು ಎರಡನೇ ಧರ್ಮ ಯುದ್ಧದಲ್ಲಿ ಇಂಗ್ಲೆಂಡಿನ ರಾಜ richard the lion heart ಮುಸ್ಲಿಮರ ವಿರುದ್ಧ ನಡೆದ ಜೆರುಸಲೆಂ ಕದನದಲ್ಲಿ ಸೋತ ನಂತರ ಆರಂಭ ಗೊಂಡ ಈ wittch hunting and slandering campaign ನಿರಂತರವಾಗಿ ನಡೆದುಕೊಂಡು ಬಂದು ಸೆಪ್ಟಂಬರ್ ಧಾಳಿಯ ನಂತರ ಆಧುನಿಕ ರೂಪ ಪಡೆದುಕೊಂಡಿತು.  

ಜಿಹಾದ್ ಅಂದರೆ ಯುದ್ಧ ಅಲ್ಲವೇ ಅಲ್ಲ ಎಂತಲೋ? ಸ್ವರಕ್ಷಣೆಗೆ ರಾಷ್ಟ್ರಗಳು ಯುದ್ಧ ಸಾರಿವೆ, ಅವನ್ನು ಜಿಹಾದ್ ಎಂದೂ ಕರೆಯಲಾಗಿದೆ. ಆದರೆ ಕಂದಹಾರದ, ಪಾಕಿಸ್ತಾನದ ಗುಡ್ಡ ಗಾಡಿನಲ್ಲಿ ಅವಿತುಕೊಂಡು ನಮ್ಮ ಮೇಲೆ ಮತ್ತು ಅಲ್ಲಿನ ಮುಗ್ಧ ಜನರ ಮೇಲೆ ಆಕ್ರಮಣ ನಡೆಸಿ ರಕ್ತ ಪಾತ ಎಸಗುವ ಮತಾಂಧರು ಜಿಹಾದ್ ಅಲ್ಲ ಮಾಡುತ್ತಿರುವುದು. ಧರ್ಮದ್ರೋಹದ, ಅಮಾನವೀಯ ಕೃತ್ಯ.

ಇಸ್ಲಾಮೀ ರಾಜಕೀಯ ಶಾಸ್ತ್ರದಲ್ಲಿ ಎರಡು ರೀತಿಯ ರಾಷ್ಟ್ರ ಸಮೂಹಗಳ ಉಲ್ಲೇಖವಿದೆ. ಒಂದು, “ದಾರುಲ್ ಹರ್ಬ್”, ಮತ್ತೊಂದು “ದಾರುಲ್ ಇಸ್ಲಾಮ್”. ದಾರುಲ್ ಹರ್ಬ್ ಎಂದರೆ ಶತ್ರು ರಾಷ್ಟ್ರ. ಕಾರಣವಿಲ್ಲದೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನ ಮತ್ತು ಚೀನಾ ದೇಶಗಳಂತೆ. ಇಂಥ ರಾಷ್ಟ್ರಗಳು ದಾರುಲ್ ಹರ್ಬ್ ವ್ಯಾಖ್ಯಾನಕ್ಕೆ ಬರುತ್ತವೆ. ದಾರುಲ್ ಇಸ್ಲಾಂ ಎಂದರೆ ಮುಸ್ಲಿಂ ರಾಷ್ಟ್ರ. ಮುಸ್ಲಿಂ ರಾಷ್ಟ್ರ ಮಾತ್ರವಲ್ಲ ಇಸ್ಲಾಮನ್ನು ಗೌರವಿಸಿ, ಆದರಿಸಿ ಮುಸ್ಲಿಮರ ಆರಾಧನೆಗೆ ಅನುಕೂಲ ಮಾಡಿಕೊಡುವ, ಮಸೀದಿ, ಮದ್ರಸಗಳನ್ನು ಕಟ್ಟಲು ಸಹಾಯ ಮಾಡುವ, ಸರಿಸಮನಾದ ಹಕ್ಕುಗಳನ್ನೂ ನೀಡಿ ಕಾಳಜಿ ವಹಿಸುವ ಮುಸ್ಲಿಮೇತರ ರಾಷ್ಟ್ರವೂ ದಾರುಲ್ ಇಸ್ಲಾಂ ವ್ಯಾಖ್ಯಾನದ ಅಡಿಗೆ ಬರುತ್ತದೆ. ನಮ್ಮ ಭವ್ಯ ಭಾರತ ಈ ರಾಷ್ಟ್ರದ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಇಲ್ಲಿ ಬಹುಸಂಖ್ಯಾತ ಹಿಂದೂಗಳು ಮುಸ್ಲಿಮರನ್ನು, ಅವರ ಸಂಸ್ಕೃತಿಯನ್ನು ಆದರಿಸುವ ರೀತಿ ನೋಡಿ ಜಗತ್ತಿನ ಇತರೆ ಇಸ್ಲಾಮೀ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಮೋಘ ಭಾರತೀಯ ಸಂಸ್ಕಾರವನ್ನು,  ಹೃದಯ ವೈಶಾಲ್ಯತೆಯನ್ನು ಕೊಂಡಾಡಿವೆ.  ಹೀಗಿರುವಾಗ ಈ ದೇಶದ ಮೇಲೆ ಶಸ್ತ್ರ ಪ್ರಯೋಗ ಮಾಡುವುದು, ಅಮಾಯಕರನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಅಂಥ ವಿದ್ರೋಹಿಗಳನ್ನು ನೇರ ಮಾಡಲು ಸಾಧ್ಯವಿಲ್ಲದಿದ್ದರೆ ನೇರವಾಗಿ ನೇಣಿಗೆ ಕಳಿಸಬೇಕಾದ್ದು ನಾಗರೀಕ ಸಮಾಜ ಮಾಡಬೇಕಾದ ಪ್ರಥಮ ಕೆಲಸ.

ಪ್ರಪಂಚದಲ್ಲಿ ಎಲ್ಲಾ ಧರ್ಮಕ್ಕೆ ಸೇರಿದ ಜನರು ಒಂದಲ್ಲ ಒಂದು ರೀತಿಯ ಹೋರಾಟದಲ್ಲಿ ನಿರತರಾಗಿದ್ದನ್ನು ನಾವು ಕಂಡಿದ್ದೇವೆ. ಯೂರೋಪ್ ಖಂಡದಲ್ಲಿ ೬೦ ಲಕ್ಷ ಯೂಹೂದ್ಯರನ್ನು ಕೊಂದಿದ್ದು, gas chamber ಗಳಿಗೆ ಕಳಿಸಿ ನಿರ್ನಾಮ ಮಾಡಿದ್ದು “ನಾಜಿಗಳು”. ನಾಜಿಗಳು ಯಾವ ಧರ್ಮೀಯರೆಂದು ಯಾರಿಗಾದರೂ ತಿಳಿದಿದೆಯೇ? ಬೋಸ್ನಿಯಾದಲ್ಲಿ ೮೦ ಸಾವಿರಕ್ಕೂ ಮುಸ್ಲಿಮರನ್ನು ಕೊಂದವರು “ಸರ್ಬಿಯನ್ನರು”. ಸರ್ಬಿಯನ್ನರು ಯಾವ ಧರ್ಮೀಯರೆಂದು ಎಲ್ಲೂ ಉಲ್ಲೇಖವಿಲ್ಲ. ಶ್ರೀಲಂಕೆಯಲ್ಲಿ ಅಮಾಯಕ ತಮಿಳರ ಹಿಂಸೆ, ಕೊಲೆ ನಡೆಸಿದ್ದು “JVP” ಯವರು, JVP ಯವರು ಯಾವ ಧರ್ಮದರೆಂದು ಉಲ್ಲೇಖವಿಲ್ಲ. ಅದೇ ಶ್ರೀಲಂಕೆಯಲ್ಲಿ ೨೫ ವರ್ಷಗಳಿಗೂ ಹೆಚ್ಚು ಕಾಲ ಬೌದ್ಧರನ್ನೂ, ಅಲ್ಲಿನ ದೊಡ್ಡ ದೊಡ್ಡ ನಾಯಕರನ್ನೂ ಕೊಂದವರು “ವ್ಯಾಘ್ರರು”. ವ್ಯಾಘ್ರರು ಯಾವ ಧರ್ಮೀಯರೆಂದು ಉಲ್ಲೇಖವಿಲ್ಲ. ಇತ್ತೀಚೆಗೆ ಅಮೆರಿಕೆಯಲ್ಲಿ ಅಪಾರ ಆಯುಧ ಶೇಖರಿಸಿ ದೊಡ್ಡ ರೀತಿಯ ಹಿಂಸೆಗೆ ಅಣಿಯಾಗುತ್ತಿದ್ದ ಜನರು “ಹುಟಾರಿ” ಪಂಗಡದವರು. “ಹುಟಾರಿ” ಗಳು ನಂಬಿದ ಧರ್ಮ ಯಾವುದು ಎಂದು ಯಾರಿಗೂ ತಿಳಿದಿಲ್ಲ. ಆದರೆ ಈ ಮಾನದಂಡ ಮುಸ್ಲಿಮರೆಂದು ಕರೆದುಕೊಂಡು ಧರ್ಮಕ್ಕೆ ಕಳಂಕ ತರುವ ಜನರಿಗೆ ನೀಡಲು ಮಾಧ್ಯಮ, ಕುಬುದ್ಧಿಯ ಪಂಡಿತರು ತಯಾರಿಲ್ಲ. ಸಿಕ್ಕಿ ಹಾಕಿಕೊಂಡವನ ಹೆಸರು ಮುಸ್ಲಿಂ ಆದರೆ ಸಾಕು ಟಾಮ್ ಟಾಮ್ ಶುರು; ಮುಸ್ಲಿಮ್ ಭಯೋತ್ಪಾದಕ, ಶಂಕಿತ ಮುಸ್ಲಿಂ ತೀವ್ರವಾದಿ, ಮುಸ್ಲಿಂ ಮೂಲಭೂತವಾದಿ, islamic activist, muslim radical, muslim fundamentalist…………………ಯಾವ ರೀತಿಯ ಲೇಬಲ್ಲುಗಳು ಬೇಕು ನಿಮಗೆ, ಆ ರೀತಿಯ ಲೇಬಲ್ಲುಗಳು ತಯಾರು. ಹಾಗಾದರೆ ಮೇಲೆ ನಾನು ಉದ್ಧರಿಸಿದ ಹತ್ಯಾಕಾಂಡಗಳ ಕರ್ತೃಗಳು ಯಾರು? “ಹುಟಾರಿ”, “ನಾಜಿ” ಎಂದರೆ ಮಂಗಳ ಗ್ರಹದಿಂದಲೋ ಅಥವಾ ಬೇರಾವುದು ಗ್ರಹದಿಂದ ಬಂದಪ್ಪಳಿಸಿದ ಅನರ್ಥವೋ? ವ್ಯಾಘ್ರ ಅಂದರೆ ಒಂದು ರೀತಿಯ ಸೊಂಕೋ, ರೋಗವೋ? JVP ಎಂದರೆ AIDS ರೀತಿಯ ಬ್ಯಾನೆಯೋ? ಸರ್ಬಿಯನ್ ಎಂದರೆ ಪ್ರಳಯವೋ, ಜ್ವಾಲಾಮುಖಿಯೋ? ಏಕೀ ಇಬ್ಬಂದಿತನ? ಲೇಖನಿಗೆ ದ್ರೋಹ ಬಗೆಯುವ ಪರಿಪಾಠ? ಲೇಖನಿ ಹುತಾತ್ಮನ ರಕ್ತಕ್ಕಿಂತಲೂ ಪವಿತ್ರ ಅಂತಾರೆ. ಆದರೆ ಮೇಲೆ ಹೇಳಿದ ಉದಾಹರಣೆಗಳಲ್ಲಿ ಎಷ್ಟೊಂದು ಪಾವಿತ್ರ್ಯ ಅವಿತುಕೊಂಡಿದೆ ನೋಡಿ. 

ಜನರನ್ನು ಲೇಬಲ್ ಅಡಿಯಲ್ಲಿ ವ್ಯಾಖ್ಯಾನಿಸಿ ದೂರ ಮಾಡುವುದಕ್ಕಿಂತ ಒಳ್ಳೆಯ ಕೆಲಸ ಸಂವಾದದ ಪ್ರಕ್ರಿಯೆ ಶುರು ಮಾಡುವುದು. ಜನರ ಮಧ್ಯೆ ಕಂದಕ ತೋಡಲೆಂದೇ ಅವತರಿಸಿದ ಸಮೂಹವನ್ನು ನಾಗರೀಕ ಸಮಾಜ ದೂರ ಮಾಡಿ ಎಲ್ಲರೂ ಮೇಲೆ ಕೂತ ಭಗವಂತನ ಮಕ್ಕಳು, ಎಲ್ಲರಿಗೂ ಸರಿಸಮನವಾಗಿ ವಿಶಾಲವಾದ ಭೂಮಿಯನ್ನು ಹರಡಿ ತಾರತಮ್ಯ ಮಾಡದೆ ಗಾಳಿ ಬೆಳಕು ನೀರು ಒದಗಿಸುತ್ತಿರುವ ಮಹಾ ಪ್ರಭುವಿನ ಮಕ್ಕಳೆಂದು ಭಾವಿಸಿ ಬದುಕನ್ನು ಸಾಗಿಸುವುದು. ಹಕ್ಕಿಯಂತೆ ಹಾರಲು ಕಲಿತ, ಮೀನಿನನಂತೆ ಈಜಲು ಕಲಿತ ಮನುಷ್ಯ ಮನುಷ್ಯನ  ರೀತಿ ಬಾಳಲು ಕಲಿಯುವುದನ್ನು ಕಲಿಯುವುದು ಅತ್ಯವಶ್ಯಕ. man should “relearn” how to live like a man.

* ತಿಳಿವಳಿಕೆಗೆ ತಿಳಿಸಾರು

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ, ನಿರಾಶೆ ಇವೆಲ್ಲಾ ಹೆಚ್ಚೂ ಕಡಿಮೆ ನಮ್ಮ ಸಂಪಾದನೆಯೇ. ಬಳುವಳಿಯಾಗಿ ಬಂದವೇನೂ ಅಲ್ಲ. ನಮ್ಮ ವಂಶವಾಹಿಯಲ್ಲೂ ಇಲ್ಲ. ಅತಿಯಾಸೆ, ಅನುಕಂಪವಿಲ್ಲದ ಬದುಕು, ನಮ್ಮದಾಗುವುದು ಬೇಡ.   

ಸುಪ್ರಸಿದ್ಧ ತತ್ವಜ್ಞಾನಿ ಕಾರ್ಲ್ ಜಂಗ್ ಹೇಳುತ್ತಾನೆ, ಹೃದಯದೊಳಕ್ಕೆ ನಾವು ಇಣುಕಿ ನೋಡಿಕೊಂಡಾಗಲೇ ನಮ್ಮ ದೃಷ್ಟಿ ತಿಳಿಯಾಗುವುದು ಎಂದು. ಯಾರು ತಮ್ಮ ಹೃದಯದ ಹೊರಕ್ಕೆ ನೋಡುತ್ತಾರೋ ಅವರು ಕನಸನ್ನು ಕಾಣುವರು, ಮತ್ತು ಯಾರು ತಮ್ಮ ಹೃದಯದೊಳಕ್ಕೆ ಇಣುಕಿ ನೋಡುತ್ತಾರೋ ಅವರು ಎಚ್ಚೆತ್ತುಕೊಳ್ಳುವರು. ಇಷ್ಟೆಲ್ಲಾ ಸರ್ಕಸ್ ಮಾಡಲು ನಮಗಿದೆಯೇ ವ್ಯವಧಾನ, ಸಮಯ? ದಿನವೂ ನಮ್ಮ ಚಟುವಟಿಕೆಗಳ ಬಗ್ಗೆ ನಾವು ತೆಗೆದುಕೊಳ್ಳಬೇಕು stock taking. taking stock of the situation ಅಂತಾರಲ್ಲ ಹಾಗೆ, ನಮ್ಮ ಅಂತರಂಗ ಬಹಿರಂಗದ stock taking.  ಸೂಫಿ ಸಂತ ರೊಬ್ಬರು ಈ ಮಾತನ್ನು ಹೇಳುತ್ತಾರೆ, ಎಂದಿಗೂ ಅಹಂಕಾರದಿಂದ ಬೇರೆಯವರ ಮೇಲೆ ಸವಾರಿ ಮಾಡಬೇಡ, ಹಾಗೂ ನಿನ್ನ ಅಡಿಯಾಳುಗಳ ಮೇಲಂತೂ ನಿನ್ನ ದರ್ಪ ಬೇಡವೇ ಬೇಡ. ನಿಮ್ಮಲ್ಲಿ ಅಂತರಂಗ, ಬಹಿರಂಗ ಶುದ್ಧಿಯಿಲ್ಲದಿದ್ದರೆ ಸೃಷ್ಟಿ ಕರ್ತನ ಬಳಿ ನೀವು ಸಲ್ಲುವುದಿಲ್ಲ.

ನಾವು ತಿಂಡಿಗೋ  ಊಟಕ್ಕೋ ಹೋಗುವ ರೆಸ್ಟುರಾಂಟ್ ನಲ್ಲಿ ಕೆಲಸಮಾಡುವ ಮಾಣಿ (ವೇಟರ್) ನ ಹತ್ತಿರದ ನಮ್ಮ ವರ್ತಿಸುವ ರೀತಿಯನ್ನು ನೋಡೋಣ. ಮುಖ ಸಿಂಡರಿಸಿಕೊಂಡು ಆರ್ಡರ್ ಕೊಡುವ ನಮಗೆ ಇಷ್ಟು ಜ್ಞಾನವೂ ಇರುವುದಿಲ್ಲ ಆರ್ಡರ್ ತೆಗೆದುಕೊಂಡು ಹೋಗಿ ಅಡುಗೆ ಮನೆಯಿಂದ ಆತ ನಮ್ಮ ಮುಂದೆ ತಂದಿಡುವುದು ನಾವು ಸೇವಿಸುವ ಆಹಾರವನ್ನು ಎಂದು. ಮಾಣಿ ಮಾಡುತ್ತಿರುವುದು ಅತ್ಯಂತ ಗೌರವಾರ್ಹವಾದ ಕೆಲಸ ಎಂದು ನಮಗೆಂದಾದರೂ ತೋಚಿದ್ದಿದೆಯೇ? ಅವನನ್ನು ಕೆಲಸಕ್ಕಿಟ್ಟ ಯಜಮಾನನಿಂದ ಹಿಡಿದು, ಅಡುಗೆ ಭಟ್ಟನವರೆಗೆ  ನಮ್ಮನೂ ಸೇರಿಸಿ ಅವನ ಪಾಡು ನೋಡಿ. ಹರಿದು ತಿನ್ನುವ ತೋಳಗಳು. ಮರುಕ ತೋರುವುದಿಲ್ಲವೇ? ಆದರೆ ಈ ರೀತಿಯ ನಡವಳಿಕೆ ನಮ್ಮ ದೇಶದಲ್ಲಿ ಅಥವಾ ದಕ್ಷಿಣ ಏಶಿಯಾದ ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ಮುಂದುವರಿದ ದೇಶಗಳಲ್ಲಿ ಚೆನ್ನಾಗಿ ಕಲಿತವರು ಮಾಣಿಯ ಕೆಲಸ ಮಾಡುವುದರಲ್ಲಿ ಯಾವುದೇ ಅವಮಾನವನ್ನೂ ಕಾಣುವುದಿಲ್ಲ. ಏಕೆಂದರೆ ಮಾಣಿಯ ಕೆಲಸ ಹಲವು ಗುಣ ವೈಶಿಷ್ಟ್ಯ ಗಳನ್ನು ನಮಗೆ ಕಲಿಸುತ್ತದೆ. ಯಾವ ರೀತಿ ಅತಿಥಿಯನ್ನು ಬರಮಾಡಿಕೊಳ್ಳಬೇಕು, ಉಪಚರಿಸಬೇಕು, ಅವರಿಗಿಷ್ಟವಾದ ಆಹಾರದೊಂದಿಗೆ ಅವರನ್ನು ಹೇಗೆ  ಸತ್ಕರಿಸಬೇಕು, ಅವರೊಡನೆ ಯಾವ ರೀತಿ ವರ್ತಿಸಬೇಕು…..ಇತ್ಯಾದಿ. ಹೀಗಿರುವಾಗ ನಮಗೆ ಈ ಉದ್ಯೋಗದ ಬಗ್ಗೆ ತಾತ್ಸಾರ. ನಮ್ಮ ಸಂಸ್ಕಾರವೇ ಯಜಮಾನಿಕೆಯ ಸಂಸ್ಕಾರ ನೋಡಿ. ಕೈಯ್ಯಲ್ಲಿ ಒಂದಿಷ್ಟು ಕಾಸು ಓಡಾಡುತ್ತಿದ್ದರೆ ನೆಲ ಕಾಣುವುದಿಲ್ಲ ನಮಗೆ. ಯಜಮಾನ ಎಂದರೆ ಮುಖ ಗಂಟಿಕ್ಕಿಕೊಂಡಿರಬೇಕೆಂದು ಸಮಾಜದ ಅಲಿಖಿತ ನಿಯಮ. ನಾವು ಯಾವ ರೀತಿ ಇವರೊಂದಿಗೆ ವರ್ತಿಸುತ್ತೇವೆಯೋ ಅದೇ ರೀತಿಯೇ ನಮ್ಮ ಮಕ್ಕಳೂ ನಮ್ಮನ್ನು ಅನುಕರಿಸುವುದು.

ಸಂಪತ್ತು ಸ್ಥಿರವಲ್ಲ. ಅಗರ್ಭ ಶ್ರೀಮಂತರು ಯಾವುದಾದರೂ ಒಂದು ಕಾರಣಕ್ಕೆ ತಮ್ಮ ಸಂಪತ್ತನ್ನೆಲ್ಲಾ ಕಳೆದು ಕೊಂಡು ಬೀದಿಗೆ ಬಂದಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ೧೯೯೦ ರಲ್ಲಿ ಇರಾಕಿನ ಆಗಿನ ಅಧ್ಯಕ್ಷ ಸದ್ದಾಮ್ ಪಕ್ಕದ ಪುಟ್ಟ ರಾಷ್ಟ್ರ ಕುವಿತನ್ನು ಆಕ್ರಮಿಸಿ ಅದು ತನ್ನ ೧೯ ನೆ ಪ್ರಾಂತ್ಯ ವೆಂದು ಘೋಷಿಸಿ ವಿಶ್ವವನ್ನೇ ದಿಗಿಲುಗೊಳಿಸಿದ. ರಾತ್ರೋ ರಾತ್ರಿ ಕುವೈತ್ ನ ಅರಸ ದೇಶ ಬಿಟ್ಟು ಹೆಲಿಕಾಪ್ಟರ್ ನಲ್ಲಿ ಸೌದಿ ಗೆ ಬಂದಿಳಿದು ಆಶ್ರಯ ಬೇಡಿದ. ವಿಶ್ವದ ಅಗರ್ಭ ಶ್ರೀಮಂತ ರಲ್ಲಿ ಒಬ್ಬನಾಗಿದ್ದ ಅರಸ “ಅಲ್-ಸಬಾ” ಕೆಲವೇ ಘಂಟೆಗಳಲ್ಲಿ ಎಲ್ಲವನ್ನೂ ಕಳೆದು ಕೊಂಡ. ಅಲ್ಲಿಯವರೆಗೂ ಕುವೈತ್ ನ ಹಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವಿದೇಶಿ ವಿನಮಯ ಹೊಂದಿತ್ತು. ಈ ಘಟನೆಯ ನಂತರ ಕುವೈತ್ ನ ಹಣಕ್ಕೆ ವಿಶ್ವದ ಅತ್ಯಂತ ಬಡ ರಾಷ್ಟ್ರದ ಹಣದ ಮುಂದೆ ಯಾವ ಬೆಲೆಗೂ ಬರದೇ ಹೋಯಿತು. ಕುವೈತಿ ನೋಟುಗಳು ಬೀದಿಗಳಲ್ಲಿ ಚೆಲ್ಲಾಟ, ಡ್ರಾ ಆದ ನಂತರ ಗೋತಾ ಹೊಡೆದ ಲಾಟರಿ ಟಿಕೆಟುಗಳು ರಸ್ತೆಯ ಮೇಲೆ ದಿಕ್ಕಾ ಪಾಲಾದಂತೆ. ತನ್ನ ದೇಶವನ್ನು ಮರಳಿ ಕೊಡಿಸುವಂತೆ ಸರಕಾರಗಳನ್ನು ಒತ್ತಾಯಿಸಲು ವಿಶ್ವದ ರಾಜಧಾನಿಗಳನ್ನು ಅಲೆದ, ಗೋಗರೆದ. ನೋಡಿ, ಕೇವಲ ಕೆಲವೇ ಘಂಟೆಗಳ ವಿದ್ಯಮಾನ ತಂದ ಅವಸ್ಥೆ.

ಈ ಅರಸ (ಮಧ್ಯ ಪ್ರಾಚ್ಯದ ಎಲ್ಲ ಅರಸರ ಕತೆಯೂ ಇದೇ) ತಾನು ಹೋಗುವ ಕಡೆಯೆಲ್ಲಾ ಅವನದೇ ಖಾಸಗಿ ಹೆಲಿ ಪ್ಯಾಡು, ಅರಮನೆಗಳು, ರೋಲ್ಲ್ಸ್ ರಾಯ್ಸ್ ಕಾರುಗಳು. ಧಿಡೀರನೇ ಎಲ್ಲವನ್ನೂ – ರಾಜ್ಯ, ಕೋಶ, ಪದವಿ, ಪೀಠ – ಕಳೆದುಕೊಂಡು ಬೀದಿಯಲ್ಲಿ ಅಸಹಾಯಕನಾಗಿ ತಲೆ ಮೇಲೆ ಕೈ ಹೊತ್ತು ಕೂರುವ ಬೇಡುವವನ ಪರಿಸ್ಥಿಗೆ ಬಂದು ಬಿಟ್ಟ. ಸಂಪತ್ತಿನ ಅಹಂಕಾರದಿಂದ ಕುವೈತಿ ಅರಸ ಒಂದು ಸಭೆಯಲ್ಲಿ ಸದ್ದಾಮನನ್ನು ಹೀನಾಯವಾಗಿ ನಡೆಸಿಕೊಂಡ, ಆದ್ದರಿಂದ ಸದ್ದಾಮ್ ಈ ಶಿಕ್ಷೆ ನೀಡಿದ ಎನ್ನುವವರೂ ಇದ್ದಾರೆ. ಅದೇನೇ ಇರಲಿ ಕೆಲ ತಿಂಗಳ ಕಾಲ ಅವನು ಬೀದಿ ಪಾಲಾದದ್ದು ವಾಸ್ತವವೇ.      

ಒಬ್ಬ ವ್ಯಕ್ತಿ ಅಸಹಾಯಕನಾಗಿ ಬೀದಿ ಬದಿಯ ಕಟ್ಟೆಯ ಮೇಲೆ ತಲೆಯನ್ನು ತನ್ನ ಕೈಗಳಲ್ಲಿ ಹೊತ್ತು ಅಳುತ್ತಾ ಕುಳಿತಿರುತ್ತಾನೆ. ದಾರಿ ಹೋಕನೊಬ್ಬ ಇದನ್ನು ಕಂಡು ಕನಿಕರ ಪಟ್ಟು ಅಲ್ಲೇ ಹತ್ತಿರದ ಹೂವಿನ ಅಂಗಡಿಗೆ ಹೋಗಿ ಒಂದು ಹೂವಿನ ಗುಚ್ಚವನ್ನು ಖರೀದಿಸಿ ಆ ವ್ಯಕ್ತಿಗೆ ಕೊಟ್ಟು, take heart my friend, life is still good, Lord will help you ಎಂದು ಸಾಂತ್ವನದ ಮಾತುಗಳನ್ನು ಆಡಿ ಹೋಗುತ್ತಾನೆ. ಈ spontaneous gesture ಆ ನೊಂದ ವ್ಯಕ್ತಿಗೆ ದೊಡ್ಡ ಅಸರೆಯನ್ನೇ ನೀಡುತ್ತದೆ. Dont sweat over small things (ಚಿಕ್ಕ ವಿಷಯಗಳ ದೊಡ್ಡದು ಮಾಡುವುದು ಬೇಡ) ಎಂದು ಹೇಳುವುದಿದೆ. ಆದರೆ ಇಂಥ ಸನ್ನಿವೇಶಗಳಲ್ಲಿ ಚಿಕ್ಕ- ಚಿಕ್ಕ, ಪುಟ್ಟ- ಪುಟ್ಟ, ಹೃದಯವನ್ನು ಅರಳಿಸುವ ಚಮತ್ಕಾರಗಳನ್ನು ನಾವು ಮಾಡಲು, ಪ್ರದರ್ಶಿಸಲು ತೊಡಗಿದರೆ ನಮ್ಮ worth ಕೂಡಾ ಚಮತ್ಕಾರಗಳನ್ನು ಸಾಧಿಸುತ್ತದೆ. ಈ ತೆರನಾದ ಚಮತ್ಕಾರಗಳನ್ನು ಅನಾವರಣ ಮಾಡಲು ನಮಗಿದೆಯೇ ವ್ಯವಧಾನ? where is time? we are in hurry. ಮೇಲೆ ಕೂತ, ನಮ್ಮ ನಾಗಾಲೋಟ ಗಮನಿಸುತ್ತಿರುವ ಆ “ಹರಿ” ನಮ್ಮ ಆಕಾಂಕ್ಷೆಗಳು ಪೂರ್ತಿಯಾಗುವ ಮುನ್ನ ನಮ್ಮನ್ನು ಕರೆಸಿಕೊಳ್ಳದಿರಲಿ.

ಒಬ್ಬ ವ್ಯಕ್ತಿ, ಒಬ್ಬನ ಬಳಿ ಹೋಗಿ ೧೦೦ ಡಾಲರ್ ನ ಚಿಲ್ಲರೆ ಕೇಳುತ್ತಾನೆ. ದೊಡ್ಡ ಮುಗುಳ್ನಗುವಿನೊಂದಿಗೆ ಓಹ್ ಸ್ಸಾರಿ, ನನ್ನಲ್ಲಿದ್ದಿದ್ದರೆ ಖಂಡಿತ ನಿನಗೆ ಕೊಡುತ್ತಿದ್ದೆ ಎಂದು ಹೇಳಿದಾಗ ಚಿಲ್ಲರೆಗೆ ಬಂದ ವ್ಯಕ್ತಿ ಅವನ ಮುಗುಳ್ನಗುವಿಗೆ ಮಾರು ಹೋಗಿ ನನಗಿನ್ನು ಚಿಲ್ಲರೆಯ ಅವಶ್ಯಕತೆಯಿಲ್ಲ ನಿನ್ನ ಆ ದೊಡ್ಡ, ಮನಃಪೂರ್ವಕವಾಗಿ ಬಂದ ಮುಗುಳ್ನಗುವೇ ನನಗೆ ಸಿಕ್ಕ ಚಿಲ್ಲರೆ, you made my day ಎಂದು ವಂದಿಸಿ ಹೋಗುತ್ತಾನೆ. ನೋಡಿ ಒಂದೇ ಒಂದು ನಗು, ಪುಕ್ಕಟೆಯಾಗಿ ದೈವದತ್ತವಾಗಿ, ulterior motive ಇಲ್ಲದೆ ಬಂದ, ಸೂರ್ಯನ ರಶ್ಮಿ ಗಳಂಥ ಬೆಚ್ಚಗಿನ ಮುಗುಳ್ನಗು. ಮುಖ ಸಿಂಡರಿಸಲು ನೂರಾರು ಸ್ನಾಯುಗಳು ಕೆಲಸ ಮಾಡುತ್ತವಂತೆ. ಮಂದಾಹಸಕ್ಕೆ ಕೆಲವೇ ಸ್ನಾಯುಗಳು.  

ಬಾಲಿವುಡ್ ತಾರೆಯೊಬ್ಬ (ಅಮೀರ್ ಖಾನ್ ಇರಬೇಕು) ಹೊರಗೆ ರೆಸ್ಟುರಾಂಟ್ ಗೆ ಹೋದರೆ ತಾನು  ಆರ್ಡರ್ ಮಾಡಿದ ಆಹಾರ ಹೆಚ್ಚು ಎಂದು ತೋರಿದರೆ ಅದನ್ನು ಹಾಳು ಮಾಡದೆ ಮನೆಗೆಂದು (take home) ಕಟ್ಟಿಸಿಕೊಂಡು ಹೊರಗೆಲ್ಲಾದರೂ ಕೂತು ಬೇಡುವವರಿಗೆ ಕೊಡುತ್ತಾನಂತೆ. ನಾವು? ಹೊಟ್ಟೆ ಬಿರಿಯುವ ಹಾಗೆ ತಿಂದು ಉಳಿದದ್ದನ್ನು ನಾಳೆ ಬೆಳಿಗ್ಗೆಗೋ, ಮಧ್ಯಾಹ್ನಕ್ಕೋ ಆಯಿತು ಎಂದು ಕಟ್ಟಿಸಿಕೊಂಡು ಹೋಗುತ್ತೇವೆ. ನಾಳೆಯ ಬಗ್ಗೆ ಅಷ್ಟೊಂದು ಖಾತರಿ. ಇಸ್ತ್ರಿ ಪೆಟ್ಟಿಗೆ ಒಂದು ವರ್ಷದ ಖಾತರಿಯೊಂದಿಗೆ ಬರುತ್ತದೆ, ಆದರೆ ಮನುಷ್ಯನ ಜೀವಕ್ಕೆ ಒಂದು ಸೆಕೆಂಡಿನ ಖಾತರಿಯೂ ಇಲ್ಲ ಎಂದು ಬಹುತೇಕ ಜನರಿಗೆ, ಬಹಳಷ್ಟು ಸಮಯ ಅರಿವೇ ಇರುವುದಿಲ್ಲ.     

ಮಾರುಕಟ್ಟೆಗಳ ತಿಕ್ಕಲುತನ ಮತ್ತು ಹೊಸ ಅಂತರ್ಜಾಲ ತಂತ್ರಜ್ಞಾನದ development ಗಳಿಂದ ಬಹಳಷ್ಟು ಜನ ಹಣ ಬಾಚಿಕೊಳ್ಳ ತೊಡಗಿದರು. ಸುಲಭವಾಗಿ ಬಂದ ಹಣವನ್ನು ಯಾವ ರೀತಿ ಬಳಸಬೇಕೆಂದು ಅರಿಯದೆ ಬೇಕಾ ಬಿಟ್ಟಿಯಾಗಿ ಖರ್ಚು ಮಾಡಿ, ಮಾರುಕಟ್ಟೆಯಲ್ಲಿ ಬೆಲೆಗಳು ಸಾಮಾನ್ಯ ಜನರಿಗೆ ಎಟುಕದಂತೆ ಮಾಡಿದರು. ಕಳೆದ ವರ್ಷದ ಆರ್ಥಿಕ ಸಂಕಷ್ಟದಲ್ಲಿ ಸಾಫ್ಟ್ ವೇರ್ ಕಂಪೆನಿಗಳು ಉದ್ಯೋಗಿಗಳಿಗೆ ಸೋಡಾ ಚೀಟಿ ಕೊಟ್ಟಾಗ ಸಂತಸ ಪಟ್ಟವರೂ ಇದ್ದಾರೆ. ದೊಡ್ಡ ದೊಡ್ಡ ಸಂಬಳ ತೆಗೆದು ಕೊಳ್ಳುವ ಈ ಉದ್ಯೋಗಿಗಳು ವರ್ತಕ ಹೇಳಿದ ಬೆಲೆ ಕೊಟ್ಟು ಸಾಮಾನು ಕೊಂಡರು. ಕಾಲದ ಸವಾಲನ್ನು ಎದುರಿಸಿದ “ಚೌಕಾಸಿ” ದೂರ ಉಳಿಯಿತು. what? haggling for bargain? NO!  ಪ್ರಳಯ ಡಿಕ್ಲೇರ್ ಆಯ್ತೇನೋ ಎನ್ನಬೇಕು, ಆ ತೆರನಾದ frantic shopping spree. baskin’ robbins, cafe coffee day, pub, pizza hut, glittering mall ಇವರ ತಾಣಗಳು.  ಇದು ಸಮಾಜದ ಕೆಲ ವರ್ಗಗಳ, ಕಡಿಮೆ ಸಂಬಳ ಪಡೆಯುವ, ಒಂದೊಂದು ರೂಪಾಯಿಯನ್ನೂ, ಪೈಸೆಯನ್ನೂ ಜೋಪಾನವಾಗಿ ಕಾಪಾಡಿ, ಬೇಕಿದ್ದ ಕಡೆ ಮಾತ್ರ ಖರ್ಚು ಮಾಡುವ ಜನರನ್ನು ಬಾಧಿಸಿ ಅವರು ಮನಸಾರೆ ಶಪಿಸುವಂತಾಯಿತು.

ಬದುಕಿನ ಪ್ರತಿ ಘಟ್ಟಗಳಲ್ಲೂ ನಮಗೆ ಸವಾಲುಗಳಿರುತ್ತವೆ. ಧನದಲ್ಲೂ, ಆರೋಗ್ಯದಲ್ಲೂ, ಅಧಿಕಾರದಲ್ಲೂ ಸವಾಲುಗಳಿರುತ್ತವೆ. ಇವನ್ನು ಸಮರ್ಥವಾಗಿ ಎದುರಿಸಲು ವಿಫಲರಾದಾಗ ಉಂಟಾಗುತ್ತದೆ ಕ್ಲೇಶ, ತರುತ್ತದೆ ಮತ್ಸರ. ಆದರೆ ಇಂಥ ಸಂಕೋಲೆಗಳಿಂದ ಬಿಡಿಸಿಕೊಳ್ಳಲು ಹೊರಬರಲು, ನಮಗೆ ವಿದೇಶೀ ಗುರುವಿನ ಅಗತ್ಯ ಬರಬಹುದೇ? ಬರಕೂಡದು. ಈ ವಿದೇಶಿ ಗುರು ಹೇಳಿಕೊಡುವುದು ಪೂರ್ವ ದಿಕ್ಕಿನ ಆದರ್ಶಗಳನ್ನು. ನಮ್ಮ ಅಜ್ಜ ಅಜ್ಜಿಯಂದಿರು ನಮಗೆ ಹೇಳಿ ಕೊಟ್ಟ ನೀತಿ ಕಥೆಗಳನ್ನು. ಸೂಫಿ ವರ್ಯರು, ಮುನಿಗಳು ಹೇಳಿದ ಸತ್ಯವನ್ನು. ನಮ್ಮ ಆದರ್ಶಗಳನ್ನು ನಮಗೆ ಹೇಳಿಕೊಡಲು ನಮ್ಮಿಂದ ಫೀಸನ್ನೂ ಪೀಕುತ್ತಾನೆ, ತನ್ನ ಮೂರನೇ ವಿವಾಹ ವಿಚ್ಛೇದನಕ್ಕಾಗಿ ಹೋರಾಡಿ ಬಂದ, ಸೂಟು ಬೂಟು ತೊಟ್ಟ, ತಲೆಗೆ ಫಳ, ಫಳ ಹೊಳೆಯುವ “ಜೆಲ್” ಹಚ್ಚಿಕೊಂಡ ವಿದೇಶೀ ಗುರು. ದೇಶೀ ಆದರ್ಶಗಳ ವಿದೇಶೀ ಗುರು.      

ಸರ್ವಿಸ್ ಗೆಂದು ಬಿಟ್ಟಿದ್ದ ನನ್ನ ಕಾರನ್ನು ತರಲು ಟ್ಯಾಕ್ಸಿ ಯಲ್ಲಿ ಹೋಗುವಾಗ ಚಾಲಕ ಹೇಳಿದ, ಈ ಅರಬರಿಗೆ ಹಣದ ಮದ ಸರಿಯಾಗಿ ಹತ್ತಿದೆ, ತಾವೇನು ಮಾಡುತ್ತಿದ್ದೇವೆ ಎಂದು ತಮಗೆ ಗೊತ್ತಿರುವುದಿಲ್ಲ. “ಕ್ಯಾಮೆಲ್ ಟು ಕ್ಯಾಮ್ರೀ” transformation ಕಣ್ಣಿವೆ ಇಕ್ಕುವಷ್ಟರಲ್ಲಿ ಆಯಿತು ಎಂದು. ಇದರರ್ಥ ಒಂಟೆ ಸವಾರಿ ಮಾತ್ರ ಮಾಡಿ ಗೊತ್ತಿದ್ದ ಅರಬ್ ಕ್ಯಾಮ್ರೀ (ದುಬಾರಿ ಕಾರು) ಕಾರಿನಲ್ಲಿ ಓಡಾಡ ತೊಡಗಿದಾಗ ಆದ confusion.

yes, money brings confusion, when priorities are lost. ಈ ಕಹಿ ಸತ್ಯ ನಮಗೆ ಅನ್ವಯಿಸದೆ ಇರಲಿ.

* ಮಾರ್ವಾಡಿ ಮತ್ತು ಅರಬ್

ಮಾರ್ವಾಡಿಯೊಬ್ಬ ಅರಬ ನೊಬ್ಬನಿಗೆ ರಕ್ತ ದಾನ ಮಾಡುತ್ತಾನೆ. ಸಂತುಷ್ಟನಾದ ಶ್ರೀಮಂತ, ವಿಶಾಲ ಹೃದಯದ ಅರಬ್ ಮಾರವಾಡಿಗೆ ಬೆಲೆಬಾಳುವ “ಫೆರ್ರಾರಿ” ಕಾರನ್ನು ಕೊಡುತ್ತಾನೆ. ಮಾರವಾಡಿ ಮತ್ತೊಮ್ಮೆ ಅರಬನಿಗೆ ರಕ್ತ ದಾನ ಮಾಡಿದಾಗ ಅರಬ್ ಆತನಿಗೆ ಒಂದು ರೂಪಾಯಿ ಕೊಡುತ್ತಾನೆ. ಇದೇಕೆ ಹೀಗೆ ಎಂದು ಬೇಸರಗೊಂಡ  ಮಾರ್ವಾಡಿ ಕೇಳಿದಾಗ ಅರಬ್ ಹೇಳುತ್ತಾನೆ,
“ಈಗ ನನ್ನ ರಕ್ತ ನಾಳಗಳಲ್ಲಿ ನಿನ್ನ ರಕ್ತ ಹರಿಯುತ್ತಿದೆ” ಎಂದು.