ಅತ್ತೆ ಜೋಕು

ಅತ್ತೆ ಯರ ಬಗೆಗೆ ಇರುವ quote ಗಳ ಬಗ್ಗೆ ಗೂಗ್ಲ್ ಮಾಡ್ತಾ ಇದ್ದೆ. ಪಾಶ್ಚಾತ್ಯ ಗಂಡಸರಿಗೆ ತಮ್ಮ ಅತ್ತೆಯಂದಿರ ಬಗ್ಗೆ ಅಂಥ ಒಳ್ಳೆ ಅಭಿಪ್ರಾಯ ಇಲ್ಲ ಅಂತ ಕಾಣುತ್ತೆ. ಆದರೆ ಭಾರತೀಯ ಗಂಡು ಈ ವಿಷಯದಲ್ಲಿ ಅದೃಷ್ಟಶಾಲಿ. ಮಗಳು ಭದ್ರವಾಗಿರಲೆಂದು ಅತ್ತೆ ತಮ್ಮ ಅಳಿಯಂದಿರನ್ನು ತುಂಬಾ ಜೋಪಾನವಾಗಿ ನೋಡಿ ಕೊಳ್ಳುತ್ತಾರೆ. ಗಂಡನನ್ನು ಹೇಗೆ ನೋಡಿ ಕೊಳ್ಳಬೇಕೆಂದು ತನ್ನ ಮಗಳಿಗೂ ಬುದ್ಧಿ ಹೇಳುತ್ತಾಳೆ. ಆದರೆ ಈ ಅದೃಷ್ಟ ಮಹಿಳಾ ಮಣಿಗಳಿಗೆ ಮಾತ್ರ ಇಲ್ಲ. ಒಂದು ಕಡೆ ಅತ್ತೆ – ಅಳಿಯಂದಿರ ಸಂಬಂಧ ಸುಮಧುರವಾಗಿದ್ದರೆ ಮತ್ತೊಂದು ಕಡೆ ಅತ್ತೆ- ಸೊಸೆಯರ ಜಟಾಪಟಿ ಸೂರ್ಯನಷ್ಟೇ ಸತ್ಯ, ಪ್ರಖರ.

ಈಗ ಪಾಶ್ಯಾತ್ಯ ಗಂಡಿನ ಕಡೆ ಬರೋಣ. ಮೇಲೆ ಹೇಳಿದ ಹಾಗೆ ಅಲ್ಲಿನ ಅತ್ತೆ – ಅಳಿಯದಿರ ಸಂಬಂಧ ನಮ್ಮ ದೇಶದ DMK-CONGRESS ಪಕ್ಷದ ರೀತಿ. ಅಂಥಾ understanding. ಪಾಶ್ಚಾತ್ಯ ಗಂಡು ಹಾಡೋದು, ಅತ್ತೆ, ನೀನು ಸತ್ತರೆ, ನನ್ನ ಬಾಳು ಸಕ್ಕರೆ… ಅಂತ.

ಒಬ್ಬ ತನ್ನ ಅತ್ತೆಯನ್ನು ಮೃಗಾಲಯಕ್ಕೆ ಕರೆದೊಯ್ಯುತ್ತಾನೆ. ಮೊಸಳೆಗಳಿರುವ ಕೊಳದ ಹತ್ತಿರ ಬಂದಾಗ ತನ್ನ ಅತ್ತೆಯನ್ನು ನೂಕಿ ಬಿಡುತ್ತಾನೆ. ಅತ್ತೆಯನ್ನು ಕೊಂದ ಅಪವಾದ ಸಾಲದೆಂಬಂತೆ ಈಗ ಅವನ ಮೇಲೆ ಪ್ರಾಣಿ ದಯಾ ಸಂಘದವರು ಕೇಸು ಹಾಕಿದ್ದಾರೆ, ಮೊಸಳೆಗಳೊಂದಿಗೆ ಈತ ಕ್ರೂರವಾಗಿ ವರ್ತಿಸಿದ ಎಂದು. ಆತ್ತೆಯ ಬಗ್ಗೆ ಇದಕ್ಕಿಂತ ಕ್ರೂರವಾದ ಹೇಳಿಕೆ ಬೇರೇನಿದೆ?      

 

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ಭಾರತ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೆಟ್ಟ ಅಂಪೈರಿಂಗ್ ಕಾರಣ ತಡವಾಗಿ ಮುಗಿಯಿತು. ಇಲ್ಲದಿದ್ದರೆ ಸ್ವಲ್ಪ ಬೇಗನೆ ಪಂದ್ಯ  ಗೆದ್ದು ವಿಶ್ರಾಂತಿ ಪಡೆಯ ಬಹುದಿತ್ತು ಎಂದು ವಿಜಯದ ನಂತರ  ನಮ್ಮ ತಂಡದ ನಾಯಕ ಧೋನಿ ದೂರಿದರು. ಕಾಲ ಹೇಗೆ ಬದಲಾಯಿತು ನೋಡಿ.  

೧೯೮೩ ರಲ್ಲಿ ವೆಸ್ಟ್ ವಿಂಡೀಸ ನ್ನು ಸೋಲಿಸಿ ವಿಶ್ವ ಕಪ್ ಗೆದ್ದ ಭಾರತ ವಿಶ್ವವನ್ನೇ ಬೆರಗು ಗೊಳಿಸಿತ್ತು. ಆಗಿನ ಕಾಲದ ಪಂಡಿತರ ಪ್ರಕಾರ ಬಲಿಷ್ಠ ವಿಂಡೀಸ್ ವಿರುದ್ಧದ ಭಾರತದ ಗೆಲುವು ಒಂದು fluke ಆಗಿತ್ತು. ಆದರೆ ಭಾರತ ಬರೀ ಫೈನಲ್ ನಲ್ಲಿ ಅಲ್ಲ, prelim ರೌಂಡ್ಸ್ ನಲ್ಲೂ ವಿಂಡೀಸನ್ನು ಮಣಿಸಿತ್ತು. ಆದರೂ ಟೀಕಾಕಾರರಿಗೆ ಭಾರತದ ಶಕ್ತಿಯ ಬಗ್ಗೆ ಅನುಮಾನವೇ ಇತ್ತು. ಈ ಅನುಮಾನ ನಿಜವಾಗಿಸಲೆಂಬಂತೆ ವೆಸ್ಟ್ ಇಂಡೀಸ್ ಭಾರತ ಪ್ರವಾಸ ಆರಂಭಿಸಿತು. ಆರು ಟೆಸ್ಟು, ಐದು ಏಕ ದಿನ ಪಂದ್ಯಗಳ ಸರಣಿಯಲ್ಲಿ  ಭಾರತವನ್ನು ಮೂರು ಟೆಸ್ಟು ಗಳಲ್ಲೂ, ಎಲ್ಲಾ ಏಕ ದಿನ ಪಂದ್ಯಗಳಲ್ಲೂ ಸೋಲಿಸಿ ವಿಶ್ವ ಕಪ್ ಸೋತಿದ್ದು ನಮ್ಮ ತಿಮಿರಿನಿಂದ ಅಲ್ಲದೆ ಭಾರತದ ಕ್ರೀಡಾ ಕೌಶಲ್ಯದಿಂದ ಅಲ್ಲ ಎನ್ನುವುದನ್ನು ವಿಂಡೀಸ್ ವಿಶ್ವಕ್ಕೆ ತೋರಿಸಿ ಕೊಟ್ಟಿತು.  

ಆಗ ಪ್ರವಾಸಗೈದಿದ್ದ ವಿಂಡೀಸ್ ತಂಡದಲ್ಲಿ ಘಟಾನುಘಟಿ ಗಳೇ ತುಂಬಿದ್ದರು. ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಮಾಲ್ಕಂ ಮಾರ್ಷಲ್ ಹೀಗೆ ಅತಿರಥ ಮಹಾರಥರ ಧಾಳಿಗೆ ನಮ್ಮ ತಂಡ mediocre ತಂಡದಂತೆ ತೋರಿತು. ಮಾಲ್ಕಂ ಮಾರ್ಷಲ್ ಅಂತೂ ತನ್ನ ಮಾರಕ ಅತಿ ವೇಗದ ಬೌಲಿಂಗ್ ಧಾಳಿಯಿಂದ ನಮ್ಮ ಬ್ಯಾಟ್ಸ್ಮನ್ ಗಳಿಗೆ ಸಿಂಹ ಸ್ವಪ್ನವಾಗಿದ್ದ. ಈಗ ನೋಡಿ ಅವರ ಪಾಡನ್ನು. ಯಾವುದೇ ಮೊತ್ತದ ರನ್ನು ಚೇಸ್ ಮಾಡಲೂ ಪಡುವ ಪಾಡನ್ನು.    

ಯಥೇಚ್ಛ ಹಣ, ಮತ್ತು ಹಣದ ಅಭಾವ ಯಾವ ರೀತಿ ಒಂದು ಕ್ರೀಡೆಯನ್ನು ರೂಪಿಸಬಲ್ಲುದು ಮತ್ತು ನಿಸ್ತೇಜವಾಗಿಸಬಹುದು ಎನ್ನುವುದಕ್ಕೆ ಭಾರತ ವಿಂಡೀಸ್ ಕ್ರಿಕೆಟ್ ಕ್ರೀಡೆಯೇ ಸಾಕ್ಷಿ. ಕ್ರಿಕೆಟ್ ನಲ್ಲಿ ಹಣವಿದೆ ಮತ್ತು ಶ್ರೀಮಂತ ಪ್ರಾಯೋಜಕರ ಬೆಂಬಲ ಅದಕ್ಕಿದೆ ಎಂದರಿತ ಪೋಷಕರು ತಮ್ಮ ಮಕ್ಕಳು ಈ ಕ್ರೀಡೆಯನ್ನು ಪ್ರವೇಶಿಸಲು ಉತ್ತೇಜಿಸಿದರು. ಪರಿಣಾಮ ಹೊಸ ಪ್ರತಿಭೆಗಳು ದಂಡು ದಂಡಾಗಿ ಆಗಮಿಸಿದವು. ಈಗ ಭಾರತ ಕ್ರಿಕೆಟ್ ಸುದೃಢ. ಬಲಿಷ್ಠ. ಆದರೆ ಈ ಭಾಗ್ಯದ ಲಕ್ಷ್ಮಿ ವಿಂಡೀಸರಿಗೆ ಒಲಿಯದೆ ಹೋದಳು. ಪ್ರಾಯೋಜಕರ ಕೊರತೆ ಮಾತ್ರವಲ್ಲ ಅಲ್ಲಿನ ಕ್ರಿಕೆಟ್ ಮಂಡಳಿ ಕೊಡುವ ಹಣವೂ ಏನೇನೂ ಸಾಲದಾದಾಗ ಒಂದು ಕಾಲದಲ್ಲಿ fearsome  ಆಗಿದ್ದ ವಿಂಡೀಸ್ ಕ್ರಿಕೆಟ್ ನೆಲ ಕಚ್ಚಿತು.

ವಿಂಡೀಸ್ ತನ್ನ ಗತ ವೈಭವವನ್ನು ಯಾವಾಗ ಮರಳಿ ಪಡೆದೀತೋ ಕಾದು ನೋಡಬೇಕು.    

ಗೋಲ್ಡಿನ ಗೋಳು

Truth is the first casualty in war, ಹಾಗಂತ ಒಂದು ಕಹಾವತ್ ಇದೆ. ಸತ್ಯವೂ ಹೌದು. ಆದರೆ ಈ ಆಧುನಿಕ ಯುಗದಲ್ಲಿ gold is the first casualty, ಏನಂತೀರಾ? ಕೆಲ ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ಆತುರದಿಂದ ಎಲ್ಲೋ ಹೊರಟಿದ್ದ ನನ್ನನ್ನು ತಡೆದು  ಕೇಳಿದರು, ಅಲ್ಲಾ, ಅಮೆರಿಕೆಯಲ್ಲಿನ ಕಟ್ಟಡಗಳು ಉರುಳಿದಾಗ (sept 11,2001) ಚಿನ್ನದ ಬೆಲೆ ಏಕೆ ತಾರಕಕ್ಕೇರಿತು ಅಂತ. ನನಗೆ ಒಂದೆಡೆ ನಗು, ಅಲ್ಲಿ ಜನ ಸತ್ತು ಬಿದ್ದಿದ್ದಾರೆ, ಇಲ್ಲಿ ನೋಡಿದರೆ ಈ ಎಪ್ಪನಿಗೆ ಚಿನ್ನದ ಚಿಂತೆ. ಮತ್ತೊಂದೆಡೆ ಅವರ ದುಗುಡವೂ ಅರ್ಥವಾಗುವಂಥದ್ದೇ. ೩ ಹೆಣ್ಣು ಮಕ್ಕಳ ತಂದೆ ಆತ. ಚಿನ್ನದ ಬೆಲೆ ಗಿಲೆ ನೋಡದೆ ನಾಚಿಕೆ ಬಿಟ್ಟು ಅಷ್ಟು ತೊಲ ಕೊಡು, ಇಷ್ಟು ತೊಲ ಕೊಡು ಅಂತ ತೋಳಗಳ ರೀತಿ ಹರಿದು ತಿನ್ನುತ್ವೆ ಮದುವೆ ಆಗುವ ಗಂಡು ಎನ್ನಿಸಿ ಕೊಂಡವನ ಮಾತಾ, ಪಿತರು.

ಈಗ ಗೋಲ್ಡ್ ಏಣಿಯ ಸಹಾಯವೇ ಇಲ್ಲದೆ ಅಟ್ಟ ಹತ್ತಿ ಕೂತಿದೆ. ಕಾರಣ credit crunch, financial turmoil, market woes, ಆಹಾ ಎಂತೆಂಥ ಹೆಸರುಗಳು ನಮ್ಮ ಮೇಲೆ ನಾವೇ ತಂದುಕೊಂಡ ಅನಿಷ್ಟಗಳಿಗೆ. ಅತಿಯಾಸೆ, ಮಿತಿಮೀರಿದ ಖರ್ಚು, ಆದಾಯಕ್ಕಿಂತ ಹೆಚ್ಚಿನ ಶಾಪಿಂಗ್ ಟ್ರಿಪ್ಗಳು, ಬ್ಯಾಂಕುಗಳ, ಕಂಪೆನಿಗಳ ಕಳ್ಳ ವಹಿವಾಟು ಇತ್ಯಾದಿ, ಇತ್ಯಾದಿ.

ಮಾಡಿದ್ದುಣ್ಣೋ ಮಹಾರಾಯ…