ಭೂತ ಚೇಷ್ಟೆ ಮತ್ತು ಕಾಮ ಚೇಷ್ಟೆ

ಭೂತ ಚೇಷ್ಟೆ ಮತ್ತು ಕಾಮ ಚೇಷ್ಟೆ. ತನ್ನ ಮನೆಯಲ್ಲಿ ಭೂತ ಚೇಷ್ಟೆ ಎಂದು ಅನುಮಾನ ಪಟ್ಟ ಮನೆಯ ಯಜಮಾನ ಖಾತ್ರಿ ಪಡಿಸಲು ಕ್ಯಾಮರ ಅಳವಡಿಸಿದ ತನ್ನ ಮನೆಗೆ. ಭೂತ ಬಂತೋ, ಸಿಕ್ಕಿತೋ ಗೊತ್ತಿಲ್ಲ ಆದರೆ ಕಾಣಲು ಸಿಕ್ಕಿದ್ದು ಮಾತ್ರ ಎದೆ ಧಸಕ್ಕೆನ್ನುವ ಚಿತ್ರ. ತನ್ನ ಪ್ರೇಯಸಿ ಹದಿ ಹರೆಯದ ತನ್ನ ಮಗನೊಂದಿಗೆ ಚೆಲ್ಲಾಟವಾಡುವ steamy scene ಕಾಣಲು ಸಿಕ್ಕಿತು ಈ ಪಡಪೋಶಿಗೆ. ಮಲತಾಯಿ ಮತ್ತು ಮಲಮಗನ ಆಟ.

ಈ ಘಟನೆ ನಡೆದಿದ್ದು ಆಸ್ಟ್ರೇಲಿಯಾದಲ್ಲಿ. ವಯಸ್ಸು ಇನ್ನೂ ಪೂರ್ತಿಯಾಗದ ಹುಡುಗನೊಂದಿಗೆ ಲೈಂಗಿಕ ಚೇಷ್ಟೆಯಲ್ಲಿ ತೊಡಗಿದ್ದ ಮಹಿಳೆ ಗೆ ಒಂದು ವರ್ಷದ ಸಜೆ.

ಕದ್ದು ಮುಚ್ಚಿ ಮಾಡೋ ಯಾವುದೇ ಚಟುವಟಿಕೆಗಳು, ಮಂಚದ್ದೇ ಆಗಲೀ, ಲಂಚದ್ದೇ, ಆಗಲೀ ಯಾವ ರೀತಿ ಬಯಲಾಗುತ್ತವೆ ಎನ್ನೋದೇ ಒಂದು ವಿಸ್ಮಯ. ಆದರೂ ಮನುಷ್ಯ ಕಲಿಯೋಲ್ಲ. ಉಪ್ಪು ಹುಳಿ ತಿಂದ ಶರೀರವಲ್ಲವೇ?

ಯೋನಿ ಆಕಾರದ ಸ್ಟೇಡಿಯಂ

Image

ತುಂಬಾ ದಿನಗಳ ನಂತರ ಬರೆಯುತ್ತಿರುವುದರಿಂದ ಆ belated ಬರಹ ಸ್ವಲ್ಪ orgasmic ಆಗಿರಲಿ ಎನ್ನುವ ತುಂಟತನ ನನ್ನಲ್ಲಿ ಮೂಡಿತು. ಅಷ್ಟಕ್ಕೂ ಬ್ಲಾಗ್ ಲೋಕಕ್ಕೆ ಸಾಮಾನ್ಯವಾಗಿ ಎಳೆಯರು ಬರೋಲ್ಲ, ಅದರಲ್ಲೂ ಕನ್ನಡ ಬ್ಲಾಗ್ ಕಡೆಯಂತೂ ತಲೆಯೇ ಹಾಕೋಲ್ಲ ಎಂದು ನನ್ನ ಲೆಕ್ಕಾಚಾರ. ಹಾಗೇನಾದರೂ ಅಪ್ಪಿ ತಪ್ಪಿ ‘ಪಡ್ಡೆ’ ಗಳು ತಲೆ ಹಾಕಿದರೆ…keep off !

2022 ರಲ್ಲಿ ಕೊಲ್ಲಿ ಪ್ರದೇಶದ ಕತಾರ್ ದೇಶದಲ್ಲಿ ವಿಶ್ವ ಫುಟ್ಬಾಲ್ ಪಂದ್ಯಾವಳಿ. ಕೊಲ್ಲಿ ಪ್ರದೇಶದಲ್ಲಿ ಫುಟ್ ಬಾಲ್ ಎಂದರೆ ಹುಚ್ಚು. ನಮ್ಮ ಕ್ರಿಕೆಟ್ ಥರ. ಇಲ್ಲಿನ ಶ್ರೀಮಂತ ಶೇಖ್ ಗಳು ಯೂರೋಪ್ ದೇಶದ ಪ್ರತಿಷ್ಠಿತ ಫುಟ್ ಬಾಲ್ ಕ್ಲಬ್ ಗಳ ಮಾಲೀಕರು. ಕತಾರ್ ಗೆ ವಿಶ್ವ ಕಪ್ ಪಂದ್ಯಾವಳಿಯ ಅವಕಾಶ ಸಿಕ್ಕಾಗ ಇಡೀ ಪ್ರಾಂತ್ಯ ದಲ್ಲೇ ಒಂದು ಬಗೆಯ ರೋಮಾಂಚನ. ಕತಾರ್ ನ ಪ್ರಯತ್ನಕ್ಕೆ, ಆಸೆಗೆ ತಣ್ಣೀರೆರೆಚಲು ಸಾಕಷ್ಟು ಪ್ರಯತ್ನಗಳು ನಡೆದರೂ ಅವು ಸಫಲವಾಗಲಿಲ್ಲ. ಕತಾರ್ natural gas ಸಂಪನ್ನ ದೇಶ. ಪುಟ್ಟ ದೇಶ, ಅಗಾಧ ಸಂಪತ್ತು. ದೇಶದ ದೊರೆ modern ಚಿಂತನೆಯ ವ್ಯಕ್ತಿ. ಆತನ ಪತ್ನಿ ಇನ್ನಷ್ಟು ಮಾಡರ್ನ್, ಮಾತ್ರವಲ್ಲ ತನ್ನ ಪತಿಯ ಸಲಹೆಗಾರ್ತಿ ಕೂಡಾ.

ಈ ಫುಟ್ ಬಾಲ್ ಪಂದ್ಯಾವಳಿಯ ಯಶಸ್ಸಿಗೆ ಕತಾರ್ ಏನೆಲ್ಲಾ ಸಾಧ್ಯವೋ ಅವನ್ನೆಲ್ಲಾ ಮಾಡುತ್ತಿದೆ. ಹಣದ ಹೊಳೆಯೇ ಹರಿಯುತ್ತಿದೆ. (ಕಾಮನ್ ವೆಲ್ತ್ ಕ್ರೀಡೆಯಲ್ಲಿ ತನ್ನ ವೈಯಕ್ತಿಕ ‘ವೆಲ್ತ್’ ಹೆಚ್ಚಿಸಿಕೊಂಡ ಸುರೇಶ್ ಕಲ್ಮಾಡಿ ಜೊಲ್ಲು ಸುರಿಸುತ್ತಿರಬಹುದು). ಅನೇಕ ಸ್ಟೇಡಿಯಂ ಗಳು ತಲೆಯುತ್ತುತ್ತಿವೆ. ಅತ್ಯಾಧುನಿಕ ಸ್ಟೇಡಿಯಂ ಗಳು, ಪ್ರತಿಭಾವಂತ architect ಗಳ ಸಂಗಮ ಕತಾರ್.

‘ಅಲ್- ವಕ್ರಾ’ ಹೆಸರಿನ ಸ್ಟೇಡಿಯಂ ಈಗ ಹೆಸರು ಮಾಡುತ್ತಿದೆ. for all wrong reasons. ಸ್ಟೇಡಿಯಂ ನ ನಕ್ಷೆ ನೋಡಿದ ಜನ ಗುಸು ಗುಸು ಅನ್ನ ತೊಡಗಿದರು. ಇದೇನು, ಈ ಸ್ಟೇಡಿಯಂ ಯೋನಿಯ ಥರ ಕಾಣ್ತಾ ಇದೆಯಲ್ಲಾ? ooops. ‘ಯೋನಿ’ ನಾ? ಶಿವ ಶಿವಾ ಎನ್ನಬೇಡಿ. architecture ಅನ್ನು anatomy ಗೆ ಹೋಲಿಸುವ ವಕ್ರ ಬುದ್ಧಿ ಬಿಡಬೇಕು. ಬೆಪ್ಪೆ, ಹವಳ ವನ್ನು ಹೆಕ್ಕಲು ಸಮುದ್ರಕ್ಕೆ ಹೋಗುವ dhow ಎಂದು ಕರೆಯಲ್ಪಡುವ ದೋಣಿಯ ಆಕಾರದಲ್ಲಿದೆ ಈ ಸ್ಟೇಡಿಯಂ ಎಂದು architect ನ ಉದ್ಗಾರ.

ಈಗ ಈ ಚಿತ್ರ ನೋಡಿ, ನಿಮ್ಮ ತೀರ್ಮಾನ ಹೇಳಿ. ಇಲ್ಲಾ ರೀ, ನೀವ್ ಏನೇ ಹೇಳಿ, ಇದು ದೋಣಿಯಲ್ಲ, ಯೋನಿ, ಎಂದಿರಾ?…ಏನೀಗ? ಹೌದು, ಅದು ಯೋನಿಯೇ, put up or shut up.

ಅಷ್ಟಕ್ಕೂ ದೋಣಿ ಮತ್ತು ಯೋನಿ ಕಾಯಕದಲ್ಲಿ, ಮಾಡುವ ಕೆಲಸ ಒಂದೇ….
ಹ ಹಾ.

 

ಇಶಾಂತ್ ಶರ್ಮ – ಚೇತನ್ ಶರ್ಮಾ

ನಿನ್ನೆ ನಡೆದ ಭಾರತ ಆಸ್ಟ್ರೇಲಿಯಾದ ಮೂರನೇ ಒಂದು ದಿನದ ಪಂದ್ಯ ಯಾರೂ ಊಹಿಸದ ಫಲಿತಾಂಶ ನೀಡಿತು. ಯಾವ ಆಟ ಅಥವಾ ಸ್ಪರ್ದೆಯೇ ಆದರೂ ನಿರೀಕ್ಷಿಸಿದ ಫಲಿತಾಂಶ ಕೊಡಲ್ಲ. ಅದರಲ್ಲೇ ಅಲ್ಲವೇ ಆಟದ ಮಜಾ ಇರೋದು? ಆದರೆ ಕ್ರಿಕೆಟ್ ನ ಸೊಗಸೇ ಬೇರೆ. ಬೌಲ್ ಮಾಡಿದ ಪ್ರತೀ ಚೆಂಡು, ಬೀಸಿದ ಪ್ರತೀ ಹೊಡೆತ ಫಲಿತಾಂಶವನ್ನು ಏರು ಪೇರು ಮಾಡುತ್ತದೆ. ಕಮೆಂಟೇಟರ್ ನನ್ನು ಪ್ರೇಕ್ಷಕನನ್ನು ಇಂಗು ತಿಂದ ಮಂಗವನ್ನಾಗಿಸುತ್ತದೆ. ನಿನ್ನೆಯ ಕತೆಯೂ ಅದೇ. ೪೭ ನೆ ಓವರ ವರೆಗೂ ಗೆಲುವು ಭಾರತದ ಕೈಯಲ್ಲಿತ್ತು. ೪೮ನೆ ಓವರ ಎಸೆಯಲು ಬಂದ ಇಶಾಂತ್ ಶರ್ಮ ಎಲ್ಲಾ ಲೆಕ್ಕಾಚಾರವೂ ತಲೆ ಕೆಳಗಾಗುವಂತೆ ಬೌಲ್ ಮಾಡಿ ಆರು ಚೆಂಡು ಗಳಲ್ಲಿ ಭಾರ್ತಿ ೩೦ ರನ್ ಕೊಟ್ಟು ಆಸ್ಟ್ರೇಲಿಯಾ ಕುಣಿಯುವಂತೆ ಮಾಡಿದ. ಆಟದ ಪ್ರತೀ ಸನ್ನಿವೇಶದ ಬಗ್ಗೆ ಇಲ್ಲಿ ಹೇಳುವ ಅಗತ್ಯ ಇಲ್ಲ. ೩೦ ರನ್ ಕೊಟ್ಟ ಇಶಾಂತ್ ಶರ್ಮನನ್ನು ಮಾತ್ರ ಜನ ಮನೆಯ ಟೀವೀ ರೂಂ ನಿಂದ ಹಿಡಿದು ಅಂತರ್ಜಾಲದ ವಿವಿಧ ಸಾಮಾಜಿಕ ತಾಣಗಳ ತನಕ ಹಿಗ್ಗಾ ಮುಗ್ಗಾ ಮೂದಲಿಸಿದರು. ಧೋನಿಯನ್ನೂ ಬಿಡಲಿಲ್ಲ. ಧೋನಿ ಮತ್ತು ಇಶಾಂತ್ ಸಲಿಂಗ ಕಾಮಿಗಳಂತೆ, ಅದಕ್ಕೆ ಧೋನಿ ಇಶಾಂತ್ ನನ್ನೇ ಆಡಿಸುವ ಬಗ್ಗೆ ಹಠ ತೊಡುತ್ತಾನಂತೆ….ಅಂತೆ ಕಂತೆ. ತಂಡಗಳ ಮೇಲಿನ ವ್ಯಾಮೋಹ, ನಿಷ್ಠೆ ಆಟದ ನಿಜವಾದ ಆಕರ್ಷಣೆ, ಮತ್ತು ಸೊಗಸನ್ನು ಆಸ್ವಾದಿಸದಂತೆ ಮಾಡಿ ಬಿಡುತ್ತದೆ. ನಮ್ಮ ದೇಶದ ತಂಡವನ್ನ ಖಂಡಿತ ಬೆಂಬಲಿಸಬೇಕು , ಆದರೆ ಆಟ ಒಂದು ಘಟ್ಟ ತಲುಪಿದ ಕೂಡಲೇ, ನಮ್ಮವರು ಪ್ರಯತ್ನಿಸಿಯೂ ಸೋತಾಗ, ಎದುರಾಳಿಯ ಆಟದ ವೈಖರಿಯನ್ನು, ಕೆಚ್ಚನ್ನು ಮೆಚ್ಚಲೇ ಬೇಕು. ಪ್ರತೀ ಸಲವೂ ನಾವು ಗೆಲ್ಲಲಾಗುವುದಿಲ್ಲ.

೩೦ ರನ್ ಕೊಟ್ಟು ಭಾರತ ಸೋಲುವಂತೆ ಮಾಡಿದ ಇಶಾಂತ್ ಶರ್ಮನ ರೀತಿಯ ಕಥೆಯ ಮತ್ತೊಬ್ಬ ಶರ್ಮ ನದು. ಅವನೇ ನಮ್ಮಾ ಚೇತನ್ ಶರ್ಮಾ. ಇಸವಿ ೧೯೮೬. ಶಾರ್ಜಾ ನಗರ. ಗೆಲ್ಲಲು ಪಾಕಿಸ್ತಾನಕ್ಕೆ ಬೇಕು, ನಾಲ್ಕು ರನ್ನುಗಳು. ೫೦ ನೆ ಓವರಿನ ಕೊನೆಯ ಚೆಂಡಿನಲ್ಲಿ ಈ ನಾಲ್ಕು ರನ್ ಗಳು ಬೇಕು. ಚೇತನ್ ಹಾಕುತ್ತಾನೆ ಫುಲ್ ಟಾಸ್, ಬ್ಯಾಟ್ ಮಾಡುತ್ತಿದ್ದ ಜಾವೇದ್ ಮಿಯಂದಾದ್ ಚೆಂಡನ್ನು ಬೌಂಡರಿಯ ಆಚೆಗೆ ಅಟ್ಟುತ್ತಾನೆ, ಸಿಕ್ಸರ್ ಗಾಗಿ. ಇಡೀ ದೇಶ ದುಃಖದ ಮಡುವಿನಲ್ಲಿ ಮುಳುಗುತ್ತದೆ, ಚೇತನ್ ಶರ್ಮನಿಗೆ ಹಿಡಿ ಹಿಡಿ ಶಾಪ ಹಾಕುತ್ತಾ.

ನಿನ್ನೆ ರಾತ್ರಿಯೂ ಎಲ್ಲರೂ ಮಲಗಲು ಹೋಗಿದ್ದು ಇಶಾಂತ್ ಶರ್ಮ ನಿಗೆ ಶಾಪ ಹಾಕಿಯೇ. ಆದರೆ ಇಶಾಂತ್ ಧೃತಿಗೆಡಬಾರದು. ನಾಯಕ ಇಟ್ಟ ವಿಶ್ವಾಸಕ್ಕೆ, ೩೦ ರನ್ ಬಾರಿಸಿದ “ಜೇಮ್ಸ್ ಫಾಕ್ನರ್” ನ ಹುರುಪಿನ ಮಾತಿಗೆ ತಕ್ಕಂತೆ ಆಡಿ ಕ್ರಿಕೆಟ್ ಆಟಕ್ಕೆ ಕೀರ್ತಿ ತರಬೇಕು.

ಈ ಸರೀ ರಾತ್ರೀಲಿ ಅವಳಿಗೆ ಹೊರಗೇನು ಕೆಲಸ?

ಈ ಸರೀ ರಾತ್ರೀಲಿ ಅವಳಿಗೇನು ಕೆಲಸ ಹೊರಗೆ?…. ಈ ಥರ ಡ್ರೆಸ್ ಮಾಡಿಕೊಂಡರೆ ಇನ್ನೇನು?…ಆ ಜಾಗದಲ್ಲಿ ಅವಳೇನು ಮಾಡುತ್ತಿದ್ದಳು?
ಪ್ರಶ್ನೆಗಳು, ಪ್ರಶ್ನೆಗಳು, ಪ್ರಶ್ನೆಗಳು. ತುಂಟ ನಗೆ ತುಂಬಿದ ಪ್ರಶ್ನೆಗಳು, ಗಂಡು ಮತ್ತು ಹೆಣ್ಣು, ಇಬ್ಬರಿಂದಲೂ.

ಓರ್ವ ಹೆಣ್ಣು ಬಲಾತ್ಕಾರಕ್ಕೆ ತುತ್ತಾದಾಗ ಮೇಲಿನ ಪ್ರಶ್ನೆಗಳ ಧಾಳಿ. ಡಿಫೆನ್ಸ್ ಲಾಯರ್ ಕಡೆಯಿಂದಲ್ಲ, ಜನಸಾಮಾನ್ಯ ನ ಕಡೆಯಿಂದ . ಈ ಪ್ರಶ್ನೆ ಬರೀ ನಮ್ಮಂಥ ಹಿಂದುಳಿದ ದೇಶಗಳ ಜನರಿಂದ ಮಾತ್ರವಲ್ಲ, ಮಂಗಳ ಗ್ರಹಕ್ಕೆ ಜನರನ್ನು ಕಲಿಸಲು ಸಿದ್ಧತೆ ನಡೆಸುವ ಅಮೇರಿಕಾ ದಂಥ ದೇಶದವರದೂ ಇದೇ ನಿಲುವು. (ಭೂಮಿಯ ಪಾಡನ್ನು ನಾಯಿ ಪಾಡು ಮಾಡಿಯಾಯಿತು, ಈಗ ಮಂಗಳದ ಕಡೆ ಪಯಣ, ಅದನ್ನೂ ಹಾಳುಗೆಡವಲು).

ಅಮೆರಿಕೆಯ ‘ಮೇರಿ ವಿಲ್’ ಪಟ್ಟಣದಲ್ಲಿ ೧೪ ರ ವರ್ಷದ ಬಾಲಕಿಯೊಬ್ಬಳ ಮೇಲೆ ಫುಟ್ ಬಾಲ್ ಆಟಗಾರನೊಬ್ಬ ಅತ್ಯಾಚಾರ ಎಸಗಿ ಆಕೆಯ ಮನೆಯ ಹತ್ತಿರವೇ ಆಕೆಯನ್ನು ಬಿಸಾಡಿ ಹೋದ. ಅವನ ಮಿತ್ರ ಈ ನಡತೆಗೆಟ್ಟ ಕೃತ್ಯದ ಮೊಬೈಲ್ ಶೂಟಿಂಗ್ ಸಹ ನಡೆಸಿದ. ಕೊರೆಯುವ ಚಳಿಯಲ್ಲಿ ಆ ಬಾಲೆ ರಾತ್ರಿ ಕಳೆದಳು. ಸರಿಯಾದ ತನಿಖೆಯ ಕೊರತೆ ಮತ್ತು ಹುಡಗಿಯ ಅಸಹಕಾರದ ಕಾರಣ ತಪ್ಪಿತಸ್ಥ ರನ್ನು ಕೋರ್ಟ್ ಬಿಡುಗಡೆ ಮಾಡಿತು. ಹುಡುಗನ ಪರ ವಾದ ಮಾಡಿದ ಡಿಫೆನ್ಸ್ ಲಾಯರ್ ಫಾಕ್ಸ್ ನ್ಯೂಸ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ” ಆಕೆಗೆ ಸಂಭವಿಸಿದ್ದು ಸರಿ ಎಂದು ನಾನು ಹೇಳ್ತಾ ಇಲ್ಲ, ಆದರೆ ಆ ಸರೀ ರಾತ್ರೀಲಿ ಆಕೆ ಹೊರಕ್ಕೆ ಹೋಗಿದ್ದಾದರೂ ಏಕೆ?” ಎಂದು ಪ್ರಶ್ನೆ ಮಾಡಿದ. ಮಾಡದೆ ಏನು ಮಾಡಿಯಾನು? ಅತ್ಯಾಚಾರಕ್ಕೆ ಒಳಗಾಗಿದ್ದು ಯಾರದೋ ಹೆಣ್ಣು ಮಗಳು. ತನ್ನ ಮಗಳೋ, ತಂಗಿಯೋ ಆ ಸ್ಥಾನದಲ್ಲಿದ್ದರೆ ಗಲ್ಲು ಶಿಕ್ಷೆ ಕೊಡ ಮಾಡಲು ತನ್ನೆಲ್ಲಾ ಶ್ರಮ ವ್ಯಯಿಸುತ್ತಿದ್ದ. ಕೋರ್ಟಿನ ಛಾವಣಿ ಹರಿಯುವಂತೆ ಅಬ್ಬರಿಸುತ್ತಿದ್ದ.

ನವದೆಹಲಿಯ ನಿರ್ಭಯ ಅತ್ಯಾಚಾರದ ಗಲಾಟೆ ಗೊತ್ತೇ ಇದೆಯಲ್ಲ. ಸಂಸ್ಕಾರ ವಿಹೀನ, ನಿರ್ದಯೀ ಕಾಮ ಪಿಪಾಸುಗಳ ಪರ ವಕಾಲತ್ತು ವಹಿಸಿದ ವಕೀಲನೂ ಅತ್ಯಾಚಾರಿಗಳ ರೀತಿಯ ನಿರ್ದಯಿಯೇ. ಕಾಮ ಪಿಪಾಸುಗಳು ತಮ್ಮ ಮದನ ದಂಡದ ಪ್ರಯೋಗ ಮಾಡಿದರೆ ಇವನು ತಾನು ಕಲಿತ ವಕ್ರ ಬುದ್ಧಿಯ ವಕೀಲಿತನವನ್ನು ಬಳಸಿ ವಿವೇಚನೆಯ ಮೇಲೆ ತನ್ನದೇ ರೀತಿಯ ಅತ್ಯಾಚಾರವನ್ನು ಮಾಡುತ್ತಾನೆ. ಈ ವಕೀಲ, “ಲಿವಿಂಗ್ ಟುಗೆದರ್” ಅರೆಬರೆ ಬಟ್ಟೆ, ಬಾಯ್ ಫ್ರೆಂಡ್ ಜೊತೆ ಹೊರಗೆ ತಿರುಗೋದು ಮಾಡಿದಾಗ ಅತ್ಯಾಚರವನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಬೇಡಿ” ಎಂದು ಕಿವಿ ಮಾತನ್ನು ಹೇಳುತ್ತಾನೆ.

ಮನೆಯಲ್ಲಿ ಸದಾಚಾರ ಹೇಳಿ ಕೊಡಬೇಕಾದ ತಂದೆ ತಾಯಿ ಧನದಾಸೆಗೆ ಬಿದ್ದು ಮಕ್ಕಳನ್ನು ಮತ್ತೊಬ್ಬರ ಸುಪರ್ದಿಗೆ ಬಿಟ್ಟು ದುಡಿಯಲು ಹೊರಟರೆ ಆಗುವ ಅನಾಹುತ ಇದು. ಹೆಣ್ಣನ್ನು ಗೌರವಿಸಲು, ಆದರಿಸಲು ಕಲಿಸದ ಸಮಾಜ ತನ್ನ ಹೆಣ್ಣು ಮಕ್ಕಳ ಅಸಹಾಯಕ ಪರಿಸ್ಥಿತಿಗೆ ತಾನೇ ಜವಾಬ್ದಾರೀ ಹೊರಬೇಕಾಗುತ್ತದೆ. ಅಷ್ಟೇ ಅಲ್ಲ, ಗಂಡು ಮಾಡಿದ್ದೆಲ್ಲಾ ಸರಿ, ಅವನು ಎಷ್ಟಿದ್ದರೂ ಗಂಡು ತಾನೇ ಎನ್ನುವ ಮಾತುಗಳ ಮುಕ್ತ ಲೈಸನ್ಸ್ ಚಾರಿತ್ರ್ಯವಿಹೀನ ಗಂಡುಗಳಿಗೆ ಹಿರಿಯರು ಕೊಡಮಾಡಿದಾಗ ಅವನು ತನ್ನ ಪಶು ಸಂಸ್ಕಾರ ವನ್ನಲ್ಲದೆ ಮತ್ತೇನನ್ನು ಮೆರೆಯಲು ಸಾಧ್ಯ?

ಚಾರಿತ್ರ್ಯ, ಶೀಲ, ಒಳ್ಳೆಯ ನಡತೆ, ಹೆಣ್ಣಿಗೆ ಮಾತ್ರ ಸೀಮಿತವಾಗಬಾರದು, ಅವು ಗಂಡಿಗೂ ಅನ್ವಯಿಸಬೇಕು. ಆಗ ಮಾತ್ರ ಬೀದಿನಾಯಿ ಬುದ್ಧಿಯ ಗಂಡುಗಳಿಂದಲೂ, ಕಂತ್ರಿ ಬುದ್ಧಿಯ ವಕೀಲರಿಂದಲೂ ನಾವು ನಮ್ಮ ಹೆಣ್ಣು ಮಕ್ಕಳು ಬಚಾವಾಗಬಹುದು.

 

“ಮೇಕೆ” ಗೆ ಕೇವಲ ೫ ಲಕ್ಷ ರೂಪಾಯಿ

ಊರು ಇಂದೂರು. ಮಧ್ಯಪ್ರದೇಶದ ಈ ಪಟ್ಟಣ ಹೆಸರು ಮಾಡಿತು ಮೇಕೆ ವ್ಯಾಪಾರದಲ್ಲಿ. ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬ ‘ಬಕ್ರೀದ್’ ದಿನ ಬಲಿಕೊಡಲೆಂದು ಮೇಕೆ ಅರಸುತ್ತಾ ಒಬ್ಬ ಸಿರಿವಂತ ಮುಸ್ಲಿಂ ಬಾಂಧವ ಮಾರುಕಟ್ಟೆಗೆ ತನ್ನ ಕಿರಿ ಮಗನೊಂದಿಗೆ ಬಂದ. ಮಗ ಆಯ್ಕೆ ಮಾಡಿದ ಮೇಕೆ ಗೆ ಐದು ಲಕ್ಷದ ಹನ್ನೊಂದು ಸಾವಿರ ಎಂದು ವ್ಯಾಪಾರಿ ಹೇಳಿದಾಗ without blinking ಅಷ್ಟು ಹಣ ಕೊಟ್ಟು ಮೇಕೆ ಕೊಂಡು ಕೊಂಡ. ಹಣದುಬ್ಬರದ ಕಾರಣ ನಮ್ಮ ರೂಪಾಯಿ ನೆಲಕಚ್ಚಿದ ಪರಿಣಾಮ ಅಲ್ಲ ಈ ದುಬಾರೀ ಮೇಕೆ ವ್ಯಾಪಾರ. ಹಣದುಬ್ಬರ ವಿಪರೀತವಾದಾಗ ಒಂದು ಪ್ಯಾಕೆಟ್ ಹಾಲನ್ನು ಕೊಳ್ಳಲು ಗೋಣೀ ಚೀಲ ತುಂಬಾ ಹಣ ಬೇಕಾಗುತ್ತದೆ. ಮೇಕೆ ಕೊಳ್ಳಲು ಒಂದು ಟ್ರಾಕ್ಟರ್ ತುಂಬಾ ಹಣ ಬೇಕು. ಆ ಪರಿಸ್ಥಿತಿಗೆ ನಮ್ಮ ಸರಕಾರ ನಮ್ಮನ್ನು ತಂದು ನಿಲ್ಲಿಸದಿದ್ದರೆ ಸಾಕು.

ಈಗ ಮತ್ತೆ ಮೇಕೆ: ಕಿರಿ ಮಗ ಆಯ್ಕೆ ಮಾಡಿದ ಮೇಕೆ ಅದೆಷ್ಟೇ ಆದರೂ ಕೊಂಡು ಕೊಳ್ಳುವ ಸಂಪ್ರದಾಯ ಈ ಸಿರಿವಂತನ ಮನೆಯವರದಂತೆ. ಆದ ಕಾರಣ ಯಾವುದೇ ತಕರಾರಿಲ್ಲದೆ, ತಡ ಬಡಿಸದೆ ಮೇಕೆ ವ್ಯಾಪಾರ ಅರ್ಧ ಮಿಲಿಯನ್ ರೂಪಾಯಿಗೆ ತಂದು ನಿಲ್ಲಿಸಿ ದಾಖಲೆ ಮಾಡಿದ.

 

ಗಾಂಧೀ ಜಯಂತಿ, ಅಪರೂಪದ ಚಿತ್ರ

ಅಕ್ಟೋಬರ್ ೨, ಗಾಂಧೀ ಜಯಂತಿ. ಈ ದಿನ ಗಾಂಧಿಜೀಯವರ ತತ್ವಗಳನ್ನು, ತ್ಯಾಗಗಳನ್ನು ಮತ್ತು ಆದರ್ಶಗಳನ್ನು ಕೊನೆಗೆ, ಅವರ ಬಲಿದಾನದ ಬಗ್ಗೆ ಸ್ಮರಿಸುವ ದಿನ. ಗಾಂಧೀಜೀ ಯವರ ಬಗ್ಗೆ ಪ್ರತಿಯೊಬ್ಬರಿಗೂ ಒಂದೊಂದು ಅಭಿಪ್ರಾಯ. ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅವರ ಗಣನೀಯ ಪಾತ್ರದ ಬಗ್ಗೆ ಹೆಮ್ಮೆ, ಕೃತಜ್ಞತಾ ಭಾವ ಕೆಲವರಲ್ಲಿದ್ದರೆ, ಮತ್ತೆ ಕೆಲವರು ಅವರ ವೈಯಕ್ತಿಕ ಜೀವನದ ಕಡೆ ನೋಟ ಹರಿಸಿ ಗಾಂಧೀ ಯನ್ನು ಹಳಿದು ತೃಪ್ತಿ ಪಡುತ್ತಾರೆ.

ಗಾಂಧೀ ಬಗ್ಗೆ ದೇಶೀಯರ ನಿಲುವು ಏನೇ ಇರಲಿ ವಿದೇಶೀಯರಿಗಂತೂ ಅವರ ವಿಚಾರಗಳು ಅನುಕರಣೀಯ ಎನ್ನುವ ಭಾವನೆ ತರಿಸಿವೆ. ಮಾರ್ಟಿನ್ ಲೂಥರ್ ಕಿಂಗ್, ಜಾನ್ ಕೆನಡಿ, ಆಲ್ಬರ್ಟ್ ಐನ್ಸ್ಟೀನ್ ಚಿತ್ರಗಳು ಹೇಗೆ ಜನರ ಮನಃ ಪಟಲದಲ್ಲಿ ಅಚ್ಚಳಿಯದೆ ನಿಂತಿವೆಯೋ ಹಾಗೆಯೂ ಗಾಂಧೀ ಸ್ಮೃತಿ ಸಹ ಎಂದು ವಿದೇಶೀಯರ ಅಭಿಪ್ರಾಯ. ವಿದೇಶೀ ಛಾಯಾಗ್ರಾಹಕಿ Margaret Bourke-White ಗಾಂಧೀಜಿಯವರನ್ನು ಹತ್ತಿರದಿಂದ ಬಲ್ಲ, ಅವರ ಚಟುವಟಿಕೆಗಳನ್ನು ವರದಿ ಮಾಡುತ್ತಿದ್ದ ಮಹಿಳೆ. ಇವರ ಚಿತ್ರಗಳು ಅಮೆರಿಕೆಯ time ಪತ್ರಿಕೆಯಲ್ಲಿ ಕಾಣಿಸಿ ಕೊಳ್ಳು ತ್ತಿದ್ದವು. ಗಾಂಧೀ ತಮ್ಮ ಚರಕ ದ ಹಿಂದೆ ಕೂತ ಮತ್ತು ಮಾರ್ಗರೆಟ್ ತಾನು ಚರಕ ದ ಹಿಂದೆ ಕೂತ ಎರಡು ಅಪರೂಪದ ಚಿತ್ರಗಳು ಕೆಳಗಿವೆ.

Image

Image

‘intended purpose’ ನ ಪರಿಧಿಯ ಆಚೆ

 

Image

ಪ್ರತಿಯೊಂದು ವಸ್ತುವೂ ‘intended purpose’ ನ ಪರಿಧಿಯ ಆಚೆ ಉಪಯೋಗಕ್ಕೆ ಬರುತ್ತದೆ. ಉದಾಹರಣೆಗಳು ಹೇರಳ, ಆದರೆ ನಾನಿಲ್ಲಿ ತೋರಿಸ ಹೊರಟಿರುವುದು ಚಾಪೆಯ ಮತ್ತೊಂದು ಉಪಯೋಗದ ಬಗ್ಗೆ.

ಪವಿತ್ರ ಹಜ್ ಯಾತ್ರೆಗೆ ಹೊರಟ ಸಂಬಂಧಿಗಳನ್ನು ಬೀಳ್ಕೊಡಲು ರೈಲು ನಿಲ್ದಾಣಕ್ಕೋ, ಬಸ್ ನಿಲ್ದಾಣಕ್ಕೋ ಬಂದ ಜನರಿಗೆ ಮಳೆಯ ಸ್ವಾಗತ ಸಿಕ್ಕಿದಾಗ ಕೊಡೆಯ ಬದಲಿಗೆ ಸಿಕ್ಕಿದ್ದು ನಮ್ಮ ಅದೇ age old ಚಾಪೆ. ಈ ಚಿತ್ರ ಅರಬ್ ನ್ಯೂಸ್ ಪತ್ರಿಕೆಯಲ್ಲಿ ಸಿಕ್ಕಿತು, ಅದರ ಜಾಡನ್ನು ಹಿಡಿದಾಗ ‘ರೈಟರ್ಸ್’ ಸುದ್ದಿ ಸಂಸ್ಥೆಯ ಛಾಯಾ ಗ್ರಾಹಕ ಕ್ಲಿಕ್ಕಿಸಿದ್ದು ಎಂದು ಅಂತರ್ಜಾಲದಲ್ಲಿ ಕಾಣ ಸಿಕ್ಕಿತು.

ಈ ಸಲ ಭಾರತಕ್ಕೆ ಬಂದಿದ್ದಾಗ ಕಂಡ ದೃಶ್ಯ. ಕಾಸರಗೋಡಿನ ಸಮೀಪದ ಕುಂಬ್ಳೆ ಕಡೆ ಪ್ರಯಾಣ ಹೋದಾಗ ಅಪರಾಹ್ನದ ನಮಾಜ್ ಸಮಯ. ಅಲ್ಲೇ ಇದ್ದ ಮಸ್ಜಿದ್ ನ ಆವರಣ ದೊಳಗೆ ಹೋದಾಗ disabled ವ್ಯಕ್ತಿಯೊಬ್ಬ ಧನ ಸಹಾಯಕ್ಕಾಗಿ ನಿಂತಿದ್ದ. ತನ್ನಲ್ಲಿದ್ದ ಛತ್ರಿ ಯನ್ನು ಬಿಚ್ಚಿ ಉಲ್ಟಾ ಮಾಡಿ ತನಗೆ ಸಿಕ್ಕ ಹಣ ಶೇಖರವಾಗುವಂತೆ ಹಿಡಿದಿದ್ದ. ಮಳೆ ಹನಿಯನ್ನು ತಡೆಯಲು ಉಪಯೋಗಿಸುವ ಕೊಡೆ ಹಣ ಸಂಗ್ರಹಿಸಲು ಉಪಯೋಗಕ್ಕೆ ಬಂತು. ಸ್ವಲ್ಪ ದೂರ ನಿಂತು ಈ ಚಿತ್ರ ತೆಗೆಯೋಣ ಎನ್ನುವಾಗ ದರಿದ್ರದ ನನ್ನ i phone ಚಾರ್ಜ್ ಇಲ್ಲದೆ ಸತ್ತಿತ್ತು.

ಕನ್ನಡೀಕರಣಕ್ಕೆ ಜೈ

ಕಂಪ್ಯೂಟರ್ ಗೆ ‘ಗಣಕ ಯಂತ್ರ’ ಅಂತಾರೆ ಕನ್ನದಲ್ಲಿ, ಆಲ್ವಾ? ಈ ಗಣಕ ಯಂತ್ರ ಅಂದ ಕೂಡಲೇ ಕಂಪ್ಯೂಟರ್ ಕಣ್ಣಿಗೆ ಬರೋ ಬದಲು ಮಂತ್ರವಾದಿಯ ಯಂತ್ರ, ತಂತ್ರದ ದೃಶ್ಯ ಕಣ್ಣಿಗೆ ಬರುತ್ತೆ. ಎಲ್ಲವನ್ನೂ ಕನ್ನಡೀಕರಿಸಲೇಬೇಕೆ? ಇಂಜಿನಿಯರ್ ಅಂದ್ರೆ ಅಭಿಯಂತರ. ಈ ಪದ ಯಾರೂ ಉಪಯೋಗಿಸಿದ್ದು ಕಿವಿಗೆ ಬಿದ್ದಿಲ್ಲ. ಡಾಕ್ಟರ್ ಅಂದ್ರೆ ವೈದ್ಯ ಅಲ್ವಾ? ಆದ್ರೆ ವೈದ್ಯ ಅಂದ್ರೆ ಆಯುರ್ವೇದದ ಡಾಕ್ಟ್ರು. MBBS ಮಾಡಿದವನನ್ನು ವೈದ್ಯ ಅನ್ನೋಲ್ಲ. ಅವನು ಡಾಕ್ಟರ್.

ಕನ್ನಡೀಕರಿಸಿ ಜನರನ್ನು ಪೇಚಿಗೆ, ಕಷ್ಟಕ್ಕೆ ಸಿಕ್ಕಿಸೋಕ್ಕಿಂತ ನಾನು ಕನ್ನಡ ಮಾತನಾಡ ಬಲ್ಲೆ ಎಂದು ಕನ್ನಡವನ್ನು ತಮಿಳೀ ಕರಿಸುವ ಜನರನ್ನು ದಾರಿಗೆ ತರುವುದು ಒಳ್ಳೆಯದು. ಕನ್ನಡ ಟೀವೀ ಚಾನಲ್ ಗಳಲ್ಲಿ ಕೇಳಿ ಬರುವ ಕನ್ನಡ ಯಾವ ಕ್ವಾಲಿಟಿ ದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ? ಸುದ್ದಿ ಓದುವವರು, ವರದಿ ಮಾಡುವವರು, ಒಂದೋ ತಮಿಳರು ಅಥವಾ ಬೆಂಗಳೂರಿನಲ್ಲಿ ವ್ಯಾಪಕ ವಾಗಿರುವ ಚೆನ್ನೈ ಪ್ರಭಾವಕ್ಕೆ ಒಳಗಾಗಿ ತಮ್ಮ ಕನ್ನಡವನ್ನು ತಮಿಳಿಗೋ ಅಥವಾ ತಮಿಳನ್ನು ಕನ್ನಡಕ್ಕೋ adapt ಮಾಡಿಕೊಂಡವರು. ಚಾನಲ್ ನವರ ಕನ್ನಡ ಕೇಳಿದಾಗ ವಾಕರಿಕೆ ಅಲ್ಲದೆ ಬೇರೇನೂ ಬರುವುದಿಲ್ಲ. ಬೇರೆ ಭಾಷೆಗಳ ಅವಸ್ಥೆ ನಮ್ಮ ಹಾಗಲ್ಲ. ಸ್ವಚ್ಛವಾಗಿ, ಹೆಮ್ಮೆಯಿಂದ ಬೀಗುತ್ತಾ ಮಾತನ್ನಾಡುತ್ತಾರೆ ತಮ್ಮ ತಮ್ಮ ಭಾಷೆಯಲ್ಲಿ. ನಮಗೋ ಪರ ಭಾಷಾ ವ್ಯಾಮೋಹ. ಈ ತೆರನಾದ ನಡವಳಿಕೆ ಇಟ್ಟುಕೊಂಡು ನಮ್ಮ ಭಾಷೆ ಕಲಿಯಿರಿ, ಗೌರವಿಸಿ ಎಂದು ಹೇಳುವ ಹಮ್ಮು ನಮಗೆ.

ಕಂಪ್ಯೂಟರ್ ನಲ್ಲಿ ಕನ್ನಡೀಕರಣ… cu, asl, gn, gm, gr8, f9 ಇವು ನಮಗೆಲ್ಲಾ ಗೊತ್ತಿರುವ ಗಣಕ ಭಾಷೆ, ಗ್ರಾಮರ್ ಬೇಡ, ಸ್ಪೆಲ್ಲಿಂಗ್ ಬೇಡವೇ ಬೇಡ. ಮತ್ತೊಂದು ಪದ ಇದೆ, lol (laughing out loud ). ಇದನ್ನು ಕನ್ನಡೀಕರಿಸಿದಾಗ ‘ಗಗನ’ ಎನ್ನಬಹುದು. ಅಂದರೆ, ಗ-ಹ ಗ-ಹಿಸಿ ನ-ಗು. ಕನ್ನಡೀಕರಣಕ್ಕೆ ಜೈ.

‘ಟೈಟ್ಲ್’ ಬೇಡ

ಮೂರು ತಿಂಗಳುಗಳ ಮೇಲೆ ಈ ಪೋಸ್ಟು. ಗುಡ್ಡ ಕಡಿಯುವಂಥ ಪೋಸ್ಟ್ ಏನೂ ಅಲ್ಲ, ತುಂಬಾ ದಿನಗಳಾದ್ದರಿಂದ ಮೈ ಮುರಿದು ಏಳುವ ರೀತಿಯ ಒಂದು ಪ್ರಯತ್ನ. ಬರಹವೇ ಆಗಲೇ. ಪಿಯಾನೋ ನುಡಿಸುವುದೇ ಆಗಲೇ, ಪ್ರಾವೀಣ್ಯತೆಗೆ ಬೇಕಿರುವುದು ನಿರಂತರ ಅಭ್ಯಾಸ. ಇಲ್ಲದಿದ್ದರೆ ನಾವು ಅಪ್ಯಾಯಮಾನತೆಯಿಂದ ತೊಡಗಿಸಿ ಕೊಂಡ ಪ್ರತಿಯೊಂದರಲ್ಲೂ ಅಭಾಸ ಗ್ಯಾರಂಟಿ. ಸುಮಾರು ನಾಲ್ಕು ವರ್ಷಗಳಿಂದ ಬರೆಯುತ್ತಿರುವ ನಾನು ಈಗಲೂ ಪದಗಳಿಗಾಗಿ, ವಿಷಯಗಳಿಗಾಗಿ ತಡಕಾಡುತ್ತಿದ್ದರೆ ಅದಕ್ಕೆ ಕಾರಣ ನಿತ್ಯ ಅಭ್ಯಾಸದ ಕೊರತೆ. ಸೋಮಾರಿತನ ಅದಕ್ಕಿಂತ ದೊಡ್ಡ ಶತ್ರು.

ಫೇಸ್ ಬುಕ್ಕಿನಲ್ಲಿ ಭದ್ರಾವತಿಯ ನನ್ನ ಮಿತ್ರರೊಬ್ಬರ ಮಗನೊಂದಿಗೆ ಲಘು ಹರಟೆ. ಧಂಧೆನೇ ಇಲ್ಲ ಅಂಕಲ್, ಉಕ್ಕಿನ ಕಾರ್ಖಾನೆ ಮಗುಚಿಕೊಂಡಿತು, ಕಾಗದ ಕಾರ್ಖಾನೆ ಗತಿಯೂ ಅದೇ ಎಂದು ಅಲವತ್ತುಕೊಂಡ. ಈ ಎರಡೂ ಕಾರ್ಖಾನೆಗಳು ಭದ್ರಾವತಿಯ ಜೀವಾಳ. ಇವು ಮುಚ್ಚಿ ಕೊಂಡರೆ ಭದ್ರಾವತಿಯ ಸೊಗಸು ಸೊರಗಿದಂತೆ. ಭದ್ರವಾತಿಯ ಕಾರ್ಖಾನೆಯ ದುಃಸ್ಥಿತಿ ಬಗ್ಗೆ ಒಮ್ಮೆ ಆಗಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಡೆ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸಿ ಈ ಕಾರ್ಖಾನೆಯ ಅವನತಿಗೆ ಕಾರಣರಾದ ತಿಮಿಂಗಿಲಗಳನ್ನ (ಅಧಿಕಾರಿಗಳನ್ನು) ಹಿಡಿದು ಹಾಕುತ್ತೇನೆ ಎಂದು ಅಬ್ಬರಿಸಿ ಅಬ್ಬರದ ಚಪ್ಪಾಳೆ ಜೊತೆಗೆ ವೋಟನ್ನೂ ಗಿಟ್ಟಿಸಿ ಕೊಂಡು ಹೋಗಿದ್ದರು. ರಾಜಕಾರಣಿಯ ಭಾಷಣ, ಅವನ ಅಬ್ಬರ ಎಲ್ಲವೂ ಕೆಲಸಕ್ಕೆ ಬಾರದವು.

ರಾಜಕಾರಣಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂದಿನಿಂದ ಭಾಷಣ ಮಾಡಿ ನಮ್ಮನ್ನು ಮತ್ತೊಂದು ತೆರನಾದ ಗುಲಾಮಗಿರಿಗೆ ತುತ್ತಾಗಿಸಿದನೇ ಹೊರತು ಬೇರೇನನ್ನೂ ಮಾಡಲಿಲ್ಲ. ಹೈ ಸ್ಕೂಲಿನ ಹಿಸ್ಟರಿ ಮೇಡಂ ಹೇಳಿದ ಹಾಗೆ ನಮ್ಮದು ಈಗಲೂ ‘ಬಡಾ’ ಮತ್ತು ಬಡ ಭಾರತವೇ ತಿಮಿಂಗಿಲ – ರಾಜಕಾ ರಣಿ nexus ಕಾರಣ. ಭದ್ರಾವತಿಗೆ ಒಳ್ಳೆಯ ದಿನಗಳು ಬರಬಹುದು ಎನ್ನುವ ಆಶಾಭಾವನೆ ನನ್ನದು.

ಎವರೆಸ್ಟ್ ಅಲ್ಲ, ಅದರಾಚೆಯ ಶಿಖರದ ಬೆನ್ನು ಹತ್ತಿ…

SAUDI EVEREST GADLINGDOTCOM
ತಮ್ಮ ಎದುರಿಗೆ ಶಿಖರದಷ್ಟೇ ಎತ್ತರವಿದ್ದ ಅಡಚಣೆಗಳನ್ನು ಗೆದ್ದು ಜಗದ ತುತ್ತ ತುದಿಯನ್ನು ಮೆಟ್ಟಿ ನಿಂತರು ಇಬ್ಬರು ಪರ್ವತಾರೋಹಿಗಳು. ಒಬ್ಬಾಕೆ ಸೌದಿ ಅರೇಬಿಯಾ ಮೂಲದ ೨೭ ರ ತರುಣಿಯಾದರೆ, ಜಪಾನ್ ದೇಶದ ೮೦ ವಯಸ್ಸಿನ ಹಿರಿಯ ಮತ್ತೊಬ್ಬ.

“ರಾಹಾ ಮುಹರ್ರಕ್” ಸೌದಿ ಅರೇಬಿಯಾದ ವಾಣಿಜ್ಯ ನಗರ ಜೆಡ್ಡಾ ನಗರದವಳು. ಮನದಾಳದಲ್ಲಿ ಅಡಗಿ ಕೂತಿದ್ದ ಆಕಾಂಕ್ಷೆ ಎನ್ನುವ “ಪುಟ್ಟ ರಕ್ಕಸ ಸ್ಫೋಟ ಗೊಂಡಾಗ” ಶಿಖರ ಮಣಿಯಿತು ಈ ನಾರೀಮಣಿಗೆ. ಮಂಗಳವಾರ ಅವರೋಹಣ ಮಾಡಿದ ನಂತರ ಈಕೆಯ ಮೊಬೈಲ್ ರಿಂಗ್ ಗುಟ್ಟುತ್ತಲೇ ಇದೆಯಂತೆ.

ಸಂಪ್ರದಾಯವಾದಿಗಳ ತಮ್ಮದೇ ಆದ ವ್ಯಾಖ್ಯಾನಕ್ಕೆ ಎದುರು ಉತ್ತರ ನೀಡದ ಸಂಪ್ರದಾಯವಾದೀ ಸೌದಿ ಅರೇಬಿಯಾ, ತನ್ನ ಮಹಿಳೆಯರಿಗೆ ಡ್ರೈವಿಂಗ್ ಮಾಡಲು ಅನುಮತಿಸದ ವಿಶ್ವದ ಏಕೈಕ, ವಿಶ್ವದ ಏಕೈಕ ಮುಸ್ಲಿಂ ದೇಶ. ಯಾವುದೇ ದೇಶದಲ್ಲೂ ಮಹಿಳೆ ವಾಹನ ಚಲಾಯಿಸ ಬಹುದು. ಸೌದಿ ಅರೇಬಿಯಾ ಹೊರತು ಪಡಿಸಿದರೆ ಯಾವುದೇ ಮುಸ್ಲಿಂ ದೇಶದಲ್ಲೂ ಮಹಿಳೆ ವಾಹನ ಚಲಾಯಿಸಬಹುದು. ಆದರೆ ನಮ್ಮ ಸಮಾಜ ಇನ್ನೂ ಪರಿ ಪಕ್ವವಾಗಿಲ್ಲ, ಕಾಲ ಇನ್ನೂ ಪ್ರಶಸ್ತ ವಾಗಿಲ್ಲ ಎನ್ನುವ ನೆಪದ ಕಾರಣ ಮಹಿಳೆ ಕಾಲು ಕಾರಿನ accelerator ಮೇಲೆ ಊರಲು ಆಗಿಲ್ಲ. ಆದರೆ ಇದೇ ಕಾಲುಗಳು ಪರ್ವತವನ್ನು ಮೆಟ್ಟಿ ನಿಂತವು. ಸಾಮಾನ್ಯ ಪರ್ವತವಲ್ಲ. ಅದೇ ಎವರೆಸ್ಟ್ ಶಿಖರ. ಎತ್ತರ, ಭರ್ತಿ ಇಪ್ಪತ್ತೊಂಭತ್ತು ಸಾವಿರದ ಮೂವತ್ತೈದು ಅಡಿಗಳು.

ಪರ್ವತದಷ್ಟೇ ಸವಾಲಾಗಿತ್ತು ತನ್ನ ಕುಟುಂಬದವರನ್ನು ಒಪ್ಪಿಸುವ ಕೆಲಸ ಎನ್ನುವ ‘ರಾಹಾ’ ಕ್ರಮೇಣ ಮನೆಯವರ ಸಹಕಾರ ಮತ್ತು ಬೆಂಬಲವನ್ನ ಗಳಿಸಿಕೊಂಡಳು. ತನ್ನ ಗುರಿಯೆಡೆ ದೃಢ ಹೆಜ್ಜೆಗಳನ್ನು ಹಾಕಿದಳು. ಸಂಪ್ರದಾಯವಾದೀ ಹಿನ್ನೆಲೆಯಿಂದ ಬಂದ ಯಾವುದೇ ಮಹಿಳೆಯೂ ಸಾಧಿಸಲಾರದ್ದನ್ನು ಸಾಧಿಸಿದಾಗ ಆಗುವ ಅವರ್ಣನೀಯ ಆನಂದ ಈ ಯುವತಿಗೆ ಸಿಕ್ಕಿದ್ದು ಈಕೆಯ ಯಶಸ್ಸಿಗಾಗಿ ಹಾರೈಸುತ್ತಿದ್ದ ಜನರಿಗೆ ಸಂತಸ ತಂದಿತು. ಎವರೆಸ್ಟ್ ಏರುವ ಮೊದಲು ಒಂದೂವರೆ ವರ್ಷಗಳ ಕಾಲ ಎಂಟು ವಿವಿಧ ಪರ್ವತಗಳನ್ನು ಈಕೆ ಏರಿ ತಯಾರಿ ತೆಗೆದುಕೊಂಡಳು.ಸೂರ್ಯನ ಅತ್ಯಂತ ಆಪ್ತ, ಉರಿ ಬಿಸಿಲಿನ ದೇಶದಿಂದ ಬಂದ ಈಕೆಗೆ ಮೂಳೆ ಕೊರೆಯುವ ಚಳಿ ಇಟ್ಟುಕೊಂಡ ಹಿಮಚ್ಛಾದಿತ ಪರ್ವತ ಸಾಕಷ್ಟು ಸವಾಲುಗಳನ್ನೇ ಒಡ್ಡಿರಬಹುದು. ಸಾಧಿಸುವ ಛಲ ಸವಾಲನ್ನು ಸಲೀಸಾಗಿ ಓವರ್ಟೇಕ್ ಮಾಡುತ್ತದೆ.

ಗುರಿಯ ಗಾತ್ರದಷ್ಟೇ ಯಶಸ್ಸಿನ ಗಾತ್ರವೂ ಆಗಿರುತ್ತದೆ ಎನ್ನುವ ರಾಹಾ ತಾನು ಎವೆರೆಸ್ಟ್ ಏರಿದ ಪ್ರಪ್ರಥಮ ಸೌದಿ ಎನ್ನುವ ಹೆಗ್ಗಳಿಕೆಗಿಂತ ತನ್ನ ಯಶಸ್ಸು ಇತರೆ ಮಹಿಳೆಯರಿಗೂ ಸ್ಫೂರ್ತಿಯಾದರೆ ತನಗೆ ಹೆಚ್ಚು ತೃಪ್ತಿ ಎನ್ನುತ್ತಾಳೆ. ಕೇವಲ ಒಂದೂವರೆ ವರ್ಷಗಳ ಹಿಂದೆ ಒಂದೂ ಪರ್ವತವನ್ನು ಏರದೇ ಇದ್ದ ತನಗೆ ಎವರೆಸ್ಟ್ ಒಲಿದಿದ್ದು ಹೊಸ ಚೇತನವನ್ನು ಆಕೆಗೆ ಕೊಟ್ಟಿದೆ. ಅಮೆರಿಕೆಯ ಆಲಾಸ್ಕಾ ರಾಜ್ಯದ ದೆನಾಲಿ ಮತ್ತು ಆಸ್ಟ್ರೇಲಿಯಾದ Kosciuszko (ಉಚ್ಛಾರ ಗೊತ್ತಿಲ್ಲ) ಪರ್ವತಗಳನ್ನು ಏರುವ ಆಸೆ ಇಟ್ಟುಕೊಂಡಿರುವ ಈಕೆ ಹೇಳುವುದು…

“ಯಾವುದನ್ನೂ ನೀವು ಪ್ರಯತ್ನಿಸದೆ ಇದ್ದರೆ ಹೇಗೆ ತಾನೇ ಗೊತ್ತಾಗುವುದು ನಿಮಗೆ ಸಾಧಿಸುವುದಕ್ಕೆ ಆಗೋಲ್ಲ ಎಂದು?”
ಏಕೆಂದರೆ ಹೆಜ್ಜೆ ಕೀಳುವ, ಹೆಜ್ಜೆ ಮುಂದಕ್ಕೆ ಊರುವ, ಅದಮ್ಯ ಆಸೆ, ಹುರುಪು, ಛಲ ಇದ್ದರೆ ಪರ್ವತವೂ, ಕಣಿವೆಯೂ ನಮ್ಮ ಅಧೀನಕ್ಕೆ, ಏನಂತೀರಿ?

ವಯಸ್ಸು ಅಂಕಿ ಅಂಶಗಳ ಕೆಲಸಕ್ಕೆ ಮಾತ್ರ ಸೀಮಿತ ಎಂದು ದೃಢವಾಗಿ ನಂಬಿದ, ನಂಬಿದ್ದನ್ನು ಸಾಧಿಸಿಯೂ ತೋರಿಸಿದ ಜಪಾನ್ ದೇಶದ ಹಿರಿಯ, ವಯಸ್ಸಿನ ನೆಪ ಒಡ್ಡಿ ಮೂಲೆ ಗುಂಪಾಗಲು ಬಯಸುವ ಎಲ್ಲರಿಗೂ ಒಂದು ಸ್ಫೂರ್ತಿ.
‘ಯುಚಿರೋ ಮೂರಾ’ ಎವರೆಸ್ಟ್ ಶಿಖರವನ್ನು ಕೆಣಕಿದ್ದು ಮೂರು ಸಲ. ಎಲ್ಲಾ ಯಶಸ್ಸೂ ಕೈ ಸೇರಿದ್ದು ಸಾಮಾನ್ಯ ಜನರ ಕೈಗಳು ನಡುಗುವ ವಯಸ್ಸಿನಲ್ಲಿ. ೭೦ ಮತ್ತು ೭೫ ನೇ ವಯಸ್ಸಿನಲ್ಲಿ ಮತ್ತು ಈಗ ೮೦ ರ ತುಂಬು ಪ್ರಾಯದಲ್ಲಿ ಎವರೆಸ್ಟ್ ಏರಿದ ಈ ತ್ರಿವಿಕ್ರಮ ಬಹುಶಃ ವಿಶ್ವದಾಖಲೆ ಸರದಾರ.

ವಯಸ್ಸು ಎಂಭತ್ತಾದರೆ ವಯೋವೃದ್ಧ ಎನ್ನುತ್ತಾರೆ, ಆದರೆ ಯುಚಿರೋ ರನ್ನು ಕರೆಯಬೇಕಿರೋದು ಹಿರಿಯ ಅಂತ. ನಮ್ಮಲ್ಲಿ ಈ ವಯಸ್ಸಿನವರ್ಯಾರಾದರೂ ತಮ್ಮ ಮನದಾಳದಲ್ಲಿ ಹುದುಗಿ ಕೂತ ಆಸೆಗಳನ್ನು ಸಾಕಾರಗೊಳಿಸುವ ಇಚ್ಛೆ ವ್ಯಕ್ತ ಪಡಿಸಿದರೆ ಮನೆಯವರ, ನೆರೆಹೊರೆಯವರ ಮತ್ತು ಸಮಾಜದ ಪ್ರತಿಕ್ರಿಯೆ ಹೇಗಿರುತ್ತದೆ? ಸ್ವಲ್ಪ ವಯಸ್ಸಾದರೆ ಮುದಿ ಗೂಬೆ ಎಂದು ಮೂದಲಿಸುವ ಸಮಾಜ ಹಿರಿಯರ ಆಸೆಗೆ ಒತ್ತಾಸೆಯಾಗಿ ನಿಂತೀತೆ?

ಎರಡು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲಿನ ಮೇಲ್ಭಾಗದ (hip) ಶಸ್ತ್ರ ಚಿಕಿತ್ಸೆ ಮಾಡಿಸಿ ಕೊಂಡ, ಕಳೆದ ಜನವರಿ ತಿಂಗಳಿನಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಯುಚಿರೋ, ೩೦ ಕೇಜೀ ತೂಕವನ್ನು ಬೆನ್ನ ಮೇಲೆ ಹೊತ್ತು ವಾರದಲ್ಲಿ ಮೂರು ದಿನ ನಡೆಯುತ್ತಾರೆ ತನ್ನ ಕನಸಿನ ಬೆನ್ನ್ಹತ್ತಿ. “I have a dream to climb Everest at this age,” he said. “If you have a dream, never give up. Dreams come true.” ಯಾರದೋ ಕನಸುಗಳು ನಮಗೆ ಬೀಳುವುದಿಲ್ಲ, ನಮ್ಮ ಕನಸುಗಳು ನಮ್ಮನ್ನು ನಂಬುತ್ತವೆ. ನಮ್ಮ ಕನಸು ಪರೋಕ್ಷವಾಗಿ ನಮಗೆ ಹೇಳೋದು, ಏಳು, ಗುರಿಯೆಡೆ ಸಾಗು ಎಂದು. ಆದರೆ ನೆಪ ಹುಡುಕುವವರಿಗೆ ಇದರ ಅರಿವಿರುವುದಿಲ್ಲ. ಮೈ ಕೊಡವಿ ಎದ್ದಾಗ ದೈತ್ಯದಂಥ ಗುರಿ ಮುದುಡಿ ಕೊಳ್ಳುತ್ತದೆ, ನಮ್ಮ ಕೈ ಸೇರುತ್ತದೆ.
ಎವರೆಸ್ಟ್ ಪರ್ವತ ಹತ್ತಿದ ಅತ್ಯಂತ ಹಿರಿಯ ಪುರುಷ ಯುಚಿರೋ ಆದರೆ, ಅತ್ಯಂತ ಹಿರಿಯ ಮಹಿಳೆ ಸಹ ಜಪಾನ್ ದೇಶದವರು. ಎರಡನೇ ವಿಶ್ವ ಯುದ್ಧದಲ್ಲಿ ಸೋತು ಸುಣ್ಣವಾಗಿ ಅಮೆರಿಕೆಯ ನಿರ್ದಯ ಧಾಳಿಗೆ ತುತ್ತಾಗಿ, ನುಚ್ಚು ನೂರಾಗಿ, ನಲುಗಿ ಹೋದ ದೇಶದ ಪ್ರಜೆಗಳಿಗೆ, ಅದೂ ಇಳಿ ವಯಸ್ಸಿನಲ್ಲಿ ಇರುವ ಛಲ ನೋಡಿ.

ಮೊದಲ ಚಿತ್ರ ಕೃಪೆ: http://www.gadling.com