ಬಸವ ಜಯಂತಿ

ಬಸವಣ್ಣ ಜಯಂತಿ ನಿಮಿತ್ತ ಹಿರಿಯ ಸಾಹಿತಿ ಆನಂದರಾಮ ಶಾಸ್ತ್ರಿಗಳು ಕೆಲವೊಂದು ಅನರ್ಘ್ಯ ವಚನಗಳನ್ನು ಸಂಪದ ಓದುಗರಿಗೆ ಪರಿಚಯಿಸಿದ್ದಾರೆ. ನನಗಿಷ್ಟವಾದ ವಚನಗಳು…

ಸರಿಯಿದ್ದವರಮೇಲೂ ಕೆಲವೊಮ್ಮೆ ಸುಳ್ಳು ಅಪವಾದ ಬಂದೆರಗಬಹುದು. ಕೊಳಕು ರಾಜಕಾರಣದ ಈ ದಿನಗಳಲ್ಲಿ ಇಂಥ ಚೋದ್ಯ ಸಾಮಾನ್ಯ. ಸುಳ್ಳು ಆರೋಪವನ್ನು ಸತ್ಯಸಂಗತಿಯೆಂಬಂತೆ ಬಿಂಬಿಸುವಲ್ಲಿ ಇಂದಿನ ತಂತ್ರಜ್ಞಾನ ನೆರವಿಗೆ ಬರುತ್ತಿದೆ. ಸನ್ನಿವೇಶದ ಲಾಭ ಪಡೆದು ಮತ್ತು ತಂತ್ರಜ್ಞಾನದ ನೆರವಿನಿಂದ ಸುಳ್ಳನ್ನು ಸತ್ಯವೆಂದು ಸಾರಬಹುದಾದ ದಿನಗಳಿವು. ಇಂಥ ಚೋದ್ಯದ ಬಗ್ಗೆ ದನಿಯೆತ್ತಿದೆ ಈ ವಚನ.
  ತಾಳ ಮರದ ಕೆಳಗೆ
  ಒಂದು ಹಾಲ ಹರವಿಯಿದ್ದೊಡೆ
  ಅದ ಹಾಲ ಹರವಿಯೆನ್ನರು
  ಸುರೆಯ ಹರವಿಯೆಂಬರು
  ಈ ಭಾವನಿಂದೆಯ ಮಾಣಿಸಾ
  ಕೂಡಲಸಂಗಮದೇವಾ.
  (ಹರವಿ=ಗಡಿಗೆ; ಮಾಣಿಸು=ಇಲ್ಲವಾಗಿಸು)

ಒಂದೆ ಮನ ಮಾತ್ರವಲ್ಲ, ಮನದ ಶುದ್ಧಿಯೂ ಮನುಜನಿಗೆ ಅವಶ್ಯ. ಕಾಣುವವರ ಕಣ್ಣಿಗಷ್ಟೇ ಆತ ಶುದ್ಧನಾದರೆ ಸಾಲದು. ಶುದ್ಧಿಯೆಂಬುದು ಅಂತರಂಗದಲ್ಲೂ ಇರಬೇಕು. ಆತನ ಭಾವವು ಪರಿಶುದ್ಧವಾದುದಾಗಿರಬೇಕು.
  ಕೆಲಕ್ಕೆ ಶುದ್ಧನಾದೆನಲ್ಲದೆ
  ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ?
  ಕೈಮುಟ್ಟಿ ಪೂಜಿಸುವೊಡೆ
  ಎನ್ನ ಮನಶುದ್ಧವಲ್ಲವಯ್ಯಾ
  ಭಾವ ಶುದ್ಧವಾದೊಡೆ ಕೂಡಲ ಸಂಗಯ್ಯನು
  ಇತ್ತ ಬಾಯೆಂದೆತ್ತಿಕೊಳ್ಳನೇಕಯ್ಯಾ!
  (ಕೆಲಕ್ಕೆ=ನೆರೆಹೊರೆಯವರ ಕಣ್ಣಿಗೆ)

(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ.

ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ್ನು ಎಲ್ಲಿಂದ ಆರಂಭಿಸಬೇಕು ಎಂದು ತಿಳಿಯದೆ ಭಾವನೆಗಳನ್ನು ತಮ್ಮಲ್ಲೇ ಇಟ್ಟು ಕೊಂಡಿರುತ್ತಾರೆ. ತಾವು ಬರೆದದ್ದನ್ನೆಲ್ಲಾ ಪತ್ರಿಕೆಗಳು ಪ್ರಕಟಿಸಬೇಕೆಂದೇನೂ ಇಲ್ಲವಲ್ಲ. ಆದರೆ ಅಂತರ್ಜಾಲದ ಉಗಮದೊಂದಿಗೆ ಬರೆಯುವವರಿಗೆ ಒಂದು ವೇದಿಕೆಯಾಗಿ, ವರವಾಗಿ ಬಂದವು ಬ್ಲಾಗ್ ಗಳು. ಚಿಕ್ಕಾಸಿನ ಖರ್ಚಿಲ್ಲದೆ ತಮಗೆ ಇಷ್ಟವಾದ ಹೆಸರಿನಲ್ಲಿ ಬ್ಲಾಗೊಂದನ್ನು ಆರಂಭಿಸಿಕೊಂಡು ನಮಗೆ ತೋಚಿದ್ದನ್ನು ಬರೆಯಬಹುದು. ಅಥವಾ ತಾವು ಬರೆದದ್ದು ಸಾರ್ವಜನಿಕರಿಗೆ ಕಾಣಿಸಬಾರದು ಎಂದೇನಾದರೂ ಆಸೆಯಿದ್ದರೆ ಅದಕ್ಕೂ ಹಾಕಬಹುದು ಕಡಿವಾಣವ ಸೆಟ್ಟಿಂಗ್ಸ್ ಮೂಲಕ.

ಸರಿ ಬ್ಲಾಗ್ ಏನೋ ತೆರೆದಾಯಿತು. ಬರೆಯಲು ಈಗ ಲಾಂಚಿಂಗ್ ಪ್ಯಾಡ್ ಆಗಿ ಬ್ಲಾಗ್ ಒಂದನ್ನು ತೆರೆದಾಯಿತು. ಜಿಗಿಯೋದು ಹೇಗೆ?

ಈಜಲು ಕಲಿಯಬೇಕೆಂದರೆ ಧುಮುಕಬೇಕು ನೀರಿಗೆ. ಬರೆಯಬೇಕು ಎಂದೆನ್ನಿಸಿದರೆ ಕೂಡಲೇ ಒಂದು ಪ್ರಶಸ್ತವಾದ ಸ್ಥಳವನ್ನ ಆರಿಸಿಕೊಂಡು ತೊಡಗಬೇಕು ಪೋಣಿಸಲು ಅಕ್ಷರಗಳನ್ನು. ಆದರೆ ಈ ಕೆಲಸ ಹೇಳಿದಷ್ಟು ಸುಲಭವಲ್ಲದಿದ್ದರೂ ಬರೆಯುವ ಹಂಬಲವಿದ್ದರೆ ಬರೆಯಲೇಬೇಕು. we do not write because we want to; we write because we have to ಸುಪ್ರಸಿದ್ಧ ಸಾಹಿತಿ “ಸಾಮರ್ಸೆಟ್ ಮಾಹಂ” (somerset maugham) ಅವರ ಮಾತುಗಳಿವು.  

ಇನ್ನು ಬರೆಯಲು ನಮ್ಮನ್ನು ನಾವು ತೊಡಗಿಸಿಕೊಂಡರೆ ಬೇಕಾಗುವ ಅವಶ್ಯಕತೆಗಳಲ್ಲಿ “ಓದು” ಮೊಟ್ಟ ಮೊದಲನೆಯದು. ನಮಗಿಷ್ಟವಾದ ಲೇಖಕರ ಲೇಖನ, ಬರಹಗಳನ್ನ ಓದಿ ಅವರು ಬರೆಯುವ ಶೈಲಿ, ಪದ ಪ್ರಯೋಗ ಮುಂತಾದುವುಗಳನ್ನು ಗಮನಿಸಿ ನಮ್ಮ ಬರಹಗಳಲ್ಲಿ ಅವನ್ನು ಅಳವಡಿಸಿಕೊಂಡರೆ ನಮ್ಮ ಬರಹದ ಕಡೆಗಿನ ಪ್ರಯಾಣ ಸುಖಕರ. ಆಂಗ್ಲ ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು ಮೇಲೆ ಹೇಳಿದ Somerset  Maugham ಅವರ ಕಥೆಗಳನ್ನ ಓದಿದರೆ ಬಹಳಷ್ಟನ್ನು ಕಲಿಯಬಹುದು. ಮಾಹಂ ಅವರ of human bondage ನನ್ನನ್ನು ಕಾಡಿದ, ಮನ ಕರಗಿಸಿದ ಪುಸ್ತಕಗಳಲ್ಲೊಂದು. ಮತ್ತೊಂದು Wilkie Collins ಅವರ woman in white.  

ಮೊನ್ನೆ ದುಬೈ ನಗರದ ಕಂಪೆನಿಯೊಂದು ಜೆಡ್ಡಾದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿತ್ತು. ಅಲ್ಲಿ ಪುಸ್ತಕವೊಂದನ್ನು ಕೊಂಡೆ. “chicken soup for writer’s soul”. ಈ ಪುಸ್ತಕ ನೂರಾರು ಉದಾಹರಣೆಗಳ ಸಮೇತ ಹಲವು ಬರಹಗಾರರ ಅನುಭವಗಳನ್ನ ಕೊಟ್ಟು ಎಂಥ ನಕಾರಾತ್ಮಕ ಪ್ರತಿಕ್ರಿಯೆಗಳಿಗೂ ಸೊಪ್ಪು ಹಾಕದೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನನ್ನ ಪ್ರಕಾರ ನವ ಬರಹಗಾರರಿಗೆ ಇದಕ್ಕಿಂತ ಉತ್ತಮ ಪುಸ್ತಕ ಬೇರೊಂದಿಲ್ಲ. ಆ ಪುಸ್ತಕದಲ್ಲಿ ನ ಸ್ವಾರಸ್ಯಕರವಾದ ತುಣುಕುಗಳನ್ನು ವೈಯಕ್ತಿಕ ಬ್ಲಾಗ್ ನಲ್ಲಿ ಬರೆಯುತ್ತೇನೆ.   

ಒಹ್, ಈ ಪುರಾಣ ಎಲ್ಲಾ ಬಿಟ್ಟು ಆ ಮಾಂತ್ರಿಕ “ಸೂತ್ರ” ಗಳ ಬಗ್ಗೆ ಹೇಳಬಾರದೇ  ಎಂದು ಹಲ್ಲನ್ನು ಕಟ ಕಟಾಯಿಸಬೇಡಿ. ಬರುತ್ತೇನೆ, ಸೂತ್ರಕ್ಕೆ ಶೀಘ್ರದಲ್ಲೇ.     

ಹಾಂ, ನೋಡಿ. ಸೂತ್ರಗಳು ಎಂದಾಗ ಮತ್ತೊಂದು ಮಾತು ನೆನಪಾಯಿತು. ಸುಖ ಸಂಸಾರಕ್ಕೆ ಹತ್ತು ಸೂತ್ರಗಳು. ಅವುಗಳಲ್ಲಿ ಒಂದು, ಯಾವುದೇ ಕಾರಣಕ್ಕೂ ರಾತ್ರಿ ತರಗತಿಗಳಿಗೆ ಹೋಗಬಾರದು. (ಈ ರಾತ್ರಿ ತರಗತಿ ಬಗ್ಗೆ ಬ್ಲಾಗ್ ಬರೆದಿದ್ದೇನೆ ಸಂಪದದಲ್ಲಿ). ಮೂಗಿಗೆ ತುಪ್ಪ ಸವರೋದನ್ನು ನಿಲ್ಲಿಸಿ ಸೂತ್ರ ಅನಾವರಣ ಮಾಡ್ತೀಯೋ ಇಲ್ವೋ ಎಂದು ಧಮಕಿ ಕೊಡಬೇಡಿ. ತಾಳಿದವನು ಬಾಳಿಯಾನು. ಬರಹಕ್ಕೆ ಈ attitude ಅತ್ಯವಶ್ಯಕ. ಸುಖೀ ಸಂಸಾರಕ್ಕೂ ಅಷ್ಟೇ. ಸಂಯಮ ಬೆಳೆಸಿಕೊಳ್ಳಬೇಕು. ಲೇಖನ ವಾಪಸು ಮಾಡಿದ ಸಂಪಾದಕನ ಮೇಲೆ ಹರಿಹಾಯ್ದರೆ ಕೆಲಸ ನಡೆಯೋಲ್ಲ. chicken soup for soul ಎನ್ನುವ ಮತ್ತೊಂದು ಪುಸ್ತಕ ಡಜನ್ಗಟ್ಟಲೆ ಒಂದು ಪ್ರಕಾಶಕರಿಂದ ಮತ್ತೊಂದು ಪ್ರಕಾಶಕರವರೆಗೆ ಗಡಿಯಾರದ pendulum ನಂತೆ ಲಾಳಿ ಹೊಡೆದ ನಂತರವೇ ಕ್ಲಿಕ್ ಆಗಿದ್ದು. ಹಾಗಾಗಿ ತಾಳ್ಮೆ ಇರಲಿ. perseverance and patience. ಇವೆರಡು ಬರೀ ಬರಹಕ್ಕೆ ಮಾತ್ರವಲ್ಲ ಬದುಕಿನ ಎಲ್ಲಾ ಮಜಲುಗಳಿಗೂ  ಹರಡಲಿ ಈ ಕಂಪು. perseverance and patience ನ ಕಂಪು.

ಮತ್ತೊಂದು ವಿಷಯ. ಬರೆಯಿರಿ, ಆದರೆ ಯಾರನ್ನೂ ಇಂಪ್ರೆಸ್ ಮಾಡಲು ಬೇಡ. ಏನಿಲ್ಲವೆಂದರೂ ನಿಮ್ಮ  ತುಡಿತ, ತುರಿಕೆ ತೀರಿಸಿಕೊಳ್ಳಲಾದರೂ ಬರೆಯಿರಿ. ಅಬ್ದುಲ್, ಆ ಮೂರು ಸೂತ್ರ ಗಳು ಎಲ್ಲಯ್ಯ….. ಇಗೋ ಬಂದೆ ಮೂರು ಸೂತ್ರಗಳೊಂದಿಗೆ.

ಸಾಮರ್ಸೆಟ್ ಮಾಹಂ ಹೇಳುತ್ತಾರೆ, “ಬರೆಯಲು ಮೂರು ಸೂತ್ರಗಳು. ಆದರೆ ಅವು ಯಾವುವು ಎಂದು ದುರದೃಷ್ಟವಶಾತ್ ಯಾರಿಗೂ ಗೊತ್ತಿಲ್ಲ”.

ಹೌದು, ಮಾಹಂ ಹೇಳಿದ್ದು ಸರಿ. ಮಂತ್ರಕ್ಕೆ ಮಾವಿನ ಕಾಯಿ ಉದುರಿದ್ದನ್ನು ಕಂಡಿದ್ದೀರಾ?

ನನ್ನ ತಲೆ ಚಚ್ಚಲು ಇಟ್ಟಿಗೆ ಚೂರನ್ನು ಯಾಕೆ ಹುಡುಕುತ್ತಿದ್ದೀರಾ, ಅಲ್ಲೇ ಪಕ್ಕದಲ್ಲೇ ಇರುವ ಕೀ ಬೋರ್ಡಿನಿಂದ ಟ್ವೀಕಿಸಬಾರದೇ ನಿಮ್ಮ ಮನದೊಳಗಿನ ಮಾತುಗಳನ್ನು, ಮೌನಗಳನ್ನು?   

ಚಿತ್ರ: ನನ್ನ “ನಡೆಯುಲಿ”ಯಿಂದ

ನೆತ್ತರಾದ ಸಮುದ್ರ

 

ಯೂರೋಪ್ ಅಥವಾ ಅಮೇರಿಕಾ ಬಹಳ ಮುಂದುವರಿದ ಮಾನವ ಹಕ್ಕುಗಳ ಬಗ್ಗೆ, ಪ್ರಾಣಿ ದಯೆಯ ಬಗ್ಗೆ ಅತೀವ ಕಾಳಜಿ ನೋವುಳ್ಳ ಸಮಾಜ ಎಂದು ನಾವು ಭಾವಿಸಿ ಅವರಂತೆಯೇ ಆಗಲು ಶ್ರಮ ಪಡಲು ನಮ್ಮ ದಾರ್ಶನಿಕರು, ಬರಹಗಾರರಿಂದ ಕಿವಿ ಮಾತನ್ನು ಹೇಳಿಸಿಕೊಳ್ಳುತ್ತೇವೆ. ಆದರೆ ಈ ಉಚ್ಚ ಮಟ್ಟದ ನಾಗರೀಕತೆಯ ಹಿಂದೆ ನೀಚ ಮಟ್ಟದ ಪ್ರವೃತ್ತಿಗಳೂ ಇವೆ ಎಂದು ನಮಗೆ ಯಾರಾದರೂ ಬೆಟ್ಟು ಮಾಡಿ ತೋರಿಸಿದಾಗ ಒಂದು ಕ್ಷಣ ತಬ್ಬಿಬ್ಬಾಗುವ ನಾವು ಸತ್ಯ ದರ್ಶನದೊಂದಿಗೆ ಆ ದೇಶಗಳ ಬಗೆಗಿನ ನಮ್ಮ ಅಭಿಪ್ರಾಯ, ಭಾವನೆಗಳನ್ನು ಪುನರಾವಲೋಕನ ಮಾಡುತ್ತೇವೆ.ಅಂಥದ್ದೇ ಆದ ಒಂದು ನೆತ್ತರು ತುಂಬಿದ ಕಥೆ ಡೆನ್ಮಾರ್ಕಿನಿಂದ. ಡೆನ್ಮಾರ್ಕ್. ಎಂಥ ಸುಂದರ ದೇಶ. ಬಡ ದೇಶಗಳ ಉನ್ನತಿಗಾಗಿ ಶ್ರಮಿಸುವ, ಧನ ಸಹಾಯ ಮಾಡುವ ಈ ಪುಟ್ಟ ದೇಶ ಬೃಹತ್ ಭಾರತ ದೇಶಕ್ಕೂ ದೇಣಿಗೆ ನೀಡುತ್ತದೆ ನಮ್ಮ ಕೃಷಿ ಕಾರ್ಯಕ್ರಮಗಳಿಗೆ. ಡೆನ್ಮಾರ್ಕ್ ದೇಶ ಡೈರಿ ಉದ್ಯಮಕ್ಕೂ ಹೆಸರಾದ ದೇಶ. ಇಲ್ಲಿಯ ಉತ್ಪಾದಿಸುವುವ ಹಾಲು, ಕೆನೆ ಪದಾರ್ಥಗಳು ವಿಶ್ವ ದರ್ಜೆಯವು. ಇದರ ಖ್ಯಾತಿ ಹೆಚ್ಚು ಕಡಿಮೆ ಇಲ್ಲಿಗೆ ನಿಲ್ಲುತ್ತದೆ. ಈಗ ನಮ್ಮ ಗಮನ ಈ ದೇಶದ ಮತ್ತೊಂದು ಮುಖದ ಅನಾವರಣ. ಈಗ ನಾನು ಹೇಳಲು ಹೊರಟಿರುವುದು ಡೇನರ ಕ್ರೌರ್ಯದ ಕುರಿತು. ಹರೆಯಕ್ಕೆ ಹುಡುಗ ಬಂದನೆ ಎಂದು ತಿಳಿಯಲು ಅಥವಾ ಅವನನ್ನು ಪುರುಷರ ಗುಂಪಿಗೆ ಸೇರಿಸಲು ಅವನಲ್ಲಿರುವ ಪೌರುಷವನ್ನು ಮೆರೆಸಲು ಒಂದು ಮೋಜಿನ ರಕ್ತಸಿಕ್ತ ಕ್ರೀಡೆ. ಇಲ್ಲಿ ವಿಕೃತ ಆನಂದಕ್ಕಾಗಿ ಬಲಿಯಾಗುವುವು ಮೂಕ ಪ್ರಾಣಿಗಳು. ಮೂಕ, ಮುಗ್ಧ, ಮನುಷ್ಯನ ಒಡನಾಟವನ್ನು ಬಯಸುವ, ಆಸ್ವಾದಿಸುವ ಡಾಲ್ಫಿನ್ ಮೀನುಗಳು. ಇವರ ಕ್ರೌರ್ಯಕ್ಕೆ ಸಮುದ್ರವೇ ನೆತ್ತರಾಗುತ್ತದೆ ಡಾಲ್ಫಿನ್ ಗಳ ರಕ್ತದಿಂದ, ನಿಸರ್ಗದ ವೈಚಿತ್ರ್ಯದಿಂದಲ್ಲ. ಬದಲಿಗೆ ಡಾಲ್ಫಿನ್ಗಳ ಕಗ್ಗೊಲೆಯಿಂದ. ಡೆನ್ಮಾರ್ಕಿನ ಫೆರೋ ದ್ವೀಪ ನೆತ್ತರಾಗುವುದನ್ನು ಸಮುದ್ರ, ಮತ್ತು ಸಮುದ್ರ ಜೀವಿಗಳು ಮೂಕಪ್ರೇಕ್ಷಕನಾಗಿ ನೋಡುತ್ತವೆ. ಕೋಳಿ ಅಂಕಣ ಆಟದಲ್ಲಿ ಹುಂಜದ ಕಾಲಿನಿಂದ ಒಂದು ಹನಿ ರಕ್ತ ತೊಟ್ಟಿಕ್ಕಿದರೆ ಬಿಳಿಯ ನಮ್ಮ ಕ್ರೌರ್ಯವನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುತ್ತಾನೆ, ಅರಬರು ಮಕ್ಕಳನ್ನು ಒಂಟೆ ಸವಾರಿಗೆ ಬಳಸಿದರೆ savage culture ಎಂದು ಜರೆಯುತ್ತಾನೆ. ಆದರೆ ಹುಡುಗರನ್ನು ಹರೆಯಕ್ಕೆ ಸ್ವಾಗತಿಸಲು ಹುಟ್ಟಿಸಿಕೊಂಡ ವಿದ್ಯೆಯನ್ನು ಸಮರ್ಥಿಸಲು ಮಾಧ್ಯಮಗಳ ದೊಡ್ಡ ದಂಡೇ ಇರುತ್ತದೆ. ಯಾಂತ್ರೀಕೃತ ದೋಣಿಗಳಲ್ಲಿ ೨೦೦೦ ದಿಂದ ೩೫೦೦ ಡಾಲ್ಫಿನ್ ಗಳನ್ನು ಅಟ್ಟಿಸಿಕೊಂಡು ಸಮುದ್ರದ ತೀರದ ಸಮೀಪ ಮೀನುಗಳನ್ನು ಅಡ್ಡಗಟ್ಟಿ ಅವುಗಳ ಮೇಲೆ ಶೂಲ, ಕತ್ತಿಗಳಿಂದ ಆಕ್ರಮಣ ಮಾಡುತ್ತಾರೆ. ದೊಡ್ಡವರು ನಡೆಸುವ ಈ ನೆತ್ತರ ಕ್ರೀಡೆಯನ್ನು ಎಳೆ ಪ್ರಾಯದ ಮಕ್ಕಳು ಬೆರಗುಗಣ್ಣುಗಳಿಂದ ನೋಡುತ್ತಾರೆ. ಆ ದ್ವೀಪದವರ ಪ್ರಕಾರ ದೇವರು ಈ ಡಾಲ್ಫಿನ್ ಗಳನ್ನು ಕೊಲ್ಲಲೆಂದೇ ಸೃಷ್ಟಿಸಿದ್ದಂತೆ.

ನಾವೇಕೆ ಸೋಲಬೇಕು?

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು. ಕ್ರಿಕೆಟ್ ನ ಜ್ವರ ನನ್ನನ್ನು ಬಿಟ್ಟು ಹಲವು ವರ್ಷಗಳೇ ಕಳೆದವು. ಆದರೆ ಭಾರತದಲ್ಲಿ ಇದರ ಹುಚ್ಚನ್ನು ಅರಿತ ನನಗೆ ಗೊತ್ತು ಯಾವ ರೀತಿಯ ಯಾತನೆಯನ್ನು ಕ್ರೀಡಾ, ಕ್ಷಮಿಸಿ ಕ್ರಿಕೆಟ್ ಪ್ರೇಮಿಗಳು ಅನುಭವಿಸುತ್ತಿದ್ದಾರೆಂದು. ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತಾ ನನ್ನ ಭಾವನಿಗೆ ಫೋನಾಯಿಸಿದೆ. ಅವರ ಅರ್ಧ ಸತ್ತ ಸ್ವರ ಕೇಳಿ ಯಾರಾದರೂ ಬೇಕಾದವರು ಗೊಟಕ್ ಅಂದು ಬಿಟ್ಟರಾ ಎಂದು ಗಾಭರಿಯಾದೆ. ನೋಡಿದರೆ ಭಾರತ ಸೋತದ್ದಕ್ಕೆ ಆಕಾಶ ತಲೆ ಮೇಲೆ ಬಿದ್ದವರಂತೆ ಮಾತನಾಡುತ್ತಿದ್ದರು ನನ್ನ ಭಾವ. ಆಗಲೇ ನನಗೆ ಗೊತ್ತಾಗಿದ್ದು ಭಾರತ ಸೋತ ವಿಷಯ. ಸುದೈವವಶಾತ್ ನನ್ನ ತಲೆ ಮೇಲೆ ಆಗಸ ಬಂದು ಬೀಳಲಿಲ್ಲ, ಬದಲಿಗೆ ಆದದ್ದು ಒಂದು ರೀತಿಯ ಸಂತೋಷವೇ. ನಾವು ಸೋಲಬೇಕು. ಹೌದು ನಾವು ಸೋಲಬೇಕು. I am not mincing my words. ಬರೀ ಈ ಪಂದ್ಯಾವಳಿಯಲ್ಲಿ ಮಾತ್ರವಲ್ಲ, ಇನ್ನು ಬರಲಿರುವ  ಹತ್ತು ಹಲವು ಪಂದ್ಯಾವಳಿ ಗಳಲ್ಲಿ ನಮಗೆ ಸೋಲನ್ನುಣಿಸಿ ನಮ್ಮ ಕ್ರಿಕೆಟಿಗರು ನಮಗೆ ಮತ್ತು ನಮ್ಮ ದೇಶಕ್ಕೆ ಒಂದು ಮಹದುಪಕಾರವನ್ನು ಮಾಡಬೇಕು. ಸತ್ತು ಹೋದ, ಸಾವಿನಂಚಿನಲ್ಲಿರುವ ನಮ್ಮ ದೇಸೀ ಕ್ರೀಡೆಗಳಿಗೆ ಒಂದು ಮರುಜನ್ಮ ಬರಬೇಕಾದರೆ ಕ್ರಿಕೆಟ್ನ ಸಾವು ಅತ್ಯವಶ್ಯಕ. ಹೀಗೆ ಮೇಲಿಂದ ಮೇಲೆ ಈ ರೀತಿಯ ಸೋಲುಗಳನ್ನು ನಮ್ಮ ಕ್ರಿಕೆಟ್ ಕಲಿಗಳು ನಮ್ಮ ಹೊಸ್ತಿಲಿನ ಮುಂದೆ ತಂದು ಸುರಿದಾಗ ಗತಿಯಿಲ್ಲದೆ ನಾವು ಮನೋರಂಜನೆಗೆ ಇನ್ಯಾವುದಾದರೂ ಕ್ರೀಡೆಗಳನ್ನು ಆರಿಸಿಕೊಳ್ಳುತ್ತೇವೆ, ಪೋಷಿಸುತ್ತೇವೆ. ಕಂಗಾಲಾಗಿ, ಕರುಬುತ್ತಾ ಸಿರಿವಂತ ಕ್ರಿಕೆಟಿಗರನ್ನು ನೋಡುವ ನಮ್ಮ ಹಾಕಿ ಪಟುಗಳು, ಮತ್ತು ಇತರೆ ಕ್ರೀಡಾ ಪಟುಗಳು ಹೊಸ ಎತ್ತರ ಏರಲು ಸಹಾಯ ಮಾಡುತ್ತೇವೆ. ಅವರಲ್ಲಿ ಹುರುಪನ್ನು ತುಂಬುತ್ತೇವೆ.          

ಈಗ ನನ್ನೀ ಬರಹವನ್ನ ಕಂಡು ಆಕ್ರೋಶ ತೋರುವ ಜನರಿಗೆ ನಾವು ಇತರೆ ಕ್ರೀಡೆಗಳ ಜನರನ್ನು ನಡೆಸಿಕೊಂಡ ಪರಿಯನ್ನು ಕೊಂಚ ಪರಿಚಯ ಮಾಡಿಸೋಣ. 

ನಮ್ಮ ಕ್ರಿಕೆಟ್ ಪಟುಗಳು ಹೋಗುವೆಡೆಯೆಲ್ಲಾ ಬಿಗಿಯಾದ ಬಂದೋಬಸ್ತ್ ಏನು, ಸ್ವಯಂಚಾಲಿತ ಬಂದೂಕುಧಾರಿಗಳೇನು, ಅವರ ಹಸ್ತಾಕ್ಷರಕ್ಕಾಗಿ ಮುಗಿ ಬೀಳುವ ಯುವಕ ಯುವತಿಯರೆನು, ಯಾವ ಜನ್ಮದಲ್ಲಿ ಇಷ್ಟೊಂದು ಪುಣ್ಯ ಮಾಡಿದ್ದರೋ ನಮ್ಮ ಕ್ರಿಕೆಟ್ ಪಟುಗಳು. ಹೋಲಿಸಿ ನೋಡಿ ಈ ಸಿಕ್ಸರ್ ಬಾರಿಸುವ, ದೇಶ ಸೋತರೂ ಸೆಂಚುರಿ ಖಾತ್ರಿಯಾಗಿಸುವ ತಾರೆಯರನ್ನು ಮತ್ತು ಬೆವರು ಸುರಿಸಿ ಇತರೆ ಕ್ರೀಡೆಗಳನ್ನಾಡುವ ತಿರುಕರನ್ನು. ಭಾರತೀಯ ಹಾಕಿ ಆಟಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾದ ದಯನೀಯ ಪರಿಸ್ಥಿತಿ. what? hunger strike? ಹೌದು, ಉಪವಾಸ ಬಿದ್ದು ಪ್ರತಿಭಟನೆ. ರಾಷ್ಟ್ರೀಯ ಕ್ರೀಡೆ ಹಾಕಿ ಆಟಗಾರರ ದುಃಸ್ಥಿತಿ. ಹಾಕಿ ಕೋಚ್ ಜೋಕಿಂ ಕರ್ವಾಲೋ ಹಾಕಿ ಆಟಗಾರರನ್ನು ನಡೆಸಿ ಕೊಳ್ಳುವ ರೀತಿ ಕಂಡು ಉರಿದು ಬಿದ್ದು ಏಕೆ ಹಾಕಿ ಆಟಗಾರರನ್ನು ಅನಾಥರಂತೆ ನೋಡುತ್ತೀರಾ ಮತ್ತು ರಾಜಕಾರಣಿಗಳೇಕೆ ಹಾಕಿ ಬಗ್ಗೆ ಅಸಡ್ಡೆ ತೋರುತ್ತಾರೆ ಎಂದು ಗುಡುಗಿದ್ದರು. ಆದರೆ ಅವರ ಹತಾಶ ಗುಡುಗನ್ನು ನಮ್ಮ ತೆಂಡುಲ್ಕರ ನ ಅಮೋಘ ಸಿಕ್ಸರ್ ಮೈದಾನದ ಹೊರಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತೇ ವಿನಃ ಬೇರೇನೂ ಪ್ರಯೋಜನವಾಗಲಿಲ್ಲ.  

ಕ್ರಿಕೆಟಿಗರನ್ನು ಸನ್ಮಾನಿಸಲು ರಾಜ್ಯ ಸರಕಾರಗಳ ಮಧ್ಯೆ ಪೈಪೋಟಿ ನೋಡಿದರೆ ಹೊಟ್ಟೆ ತೊಳೆಸುತದೆ. ಎಲ್ಲಾ ಕ್ರೀಡಾಪಟುಗಳೂ ನಮ್ಮ ಮಕ್ಕಳೇ ಅಲ್ಲವೇ? ಇದ್ಯಾವ ತಾರತಮ್ಯವೋ ನಾ ಕಾಣೆ. ಕ್ರಿಕೆಟಿಗರಲ್ಲದ ಕ್ರೀಡಾಪಟುಗಳಿಗೆ ಈ ರೀತಿಯ ಯಾತನಾಮಯ ಉಪಚಾರವನ್ನು ಕಂಡ ಯಾವ ತಾಯಿ ತನ್ನ ಮಗ ಧ್ಯಾನ್ ಚಂದ್ ಅಥವಾ ಮೊಹಮ್ಮದ್ ಶಾಹಿದ್ ರಂತೆ ಹಾಕಿ ಸ್ಟಿಕ್ ಹಿಡಿದು ಡ್ರಿಬ್ಲ್ ಮಾಡಿ ಎದುರಾಳಿ ಗೆ ಚಳ್ಳೆ ಹಣ್ಣು ತಿನ್ನಿಸಲು ಉತ್ತೇಜಿಸುವಳು? ಅಥವಾ ಹಾರುವ ಸಿಖ್ ಎಂದೇ ಪ್ರಖ್ಯಾತನಾದ ಜೀವ್ ಮಿಲ್ಖಾ ಸಿಂಗರಂತೆ ಚಿಗರೆಯಂತೆ ಓಡಿ ಪದಕ ತರುವ ಕಾತುರತೆಯನ್ನು ಯಾವ ಪಿತಾಮಹ ತೋರಿಸಿಯಾನು? ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆ ಆರಿಸಿಕೊಂಡು ಹೊಟ್ಟೆಗೂ ಇಲ್ಲದೆ ಬವಣೆ ಪಡುವ ಮಕ್ಕಳ ಕಂಡು ಯಾವ ಪೋಷಕರಿಗೆ ತಾನೇ ಸಹಿಸಲು ಸಾಧ್ಯ? ಕ್ರಿಕೆಟ್ ನಮ್ಮ ಸಮಾಜವನ್ನೇ ಕೆಡಿಸುತ್ತದೆ ಎಂದರೂ ತಪ್ಪಿಲ್ಲ. ಜನರ ಹುಚ್ಚು ಪ್ರೋತ್ಸಾಹ, ಸರಕಾರಗಳ ಅತೀವ ಬೆಂಬಲ ಕ್ರಿಕೆಟಿಗರು ಕ್ರೀಡಾ ಮನೋಭಾವವನ್ನೇ ಮರೆತು ಹೇಗಾದರೂ ಗೆಲ್ಲಲು ಪ್ರಯತ್ನಿಸುತ್ತಾರೆ. ಬೌಲರ್ ನ ಅಪ್ಪೀಲ್ ಗೆ ಅಂಪೈರ್ ಸೊಪ್ಪು ಹಾಕದೆ ಇದ್ದಾಗ ಅವನು ಉದುರಿಸುವ ಬೈಗಳನ್ನು ಅವನ ತುಟಿಗಳ ಚಲನದಿಂದಲೇ ಅರಿಯಬಹುದು. ಇದನ್ನು ನೋಡಿದ ನಮ್ಮ ಕಿಣ್ಣರು ಅದೇನಪ್ಪಾ XYZ ಹೇಳುತ್ತಿರುವುದು ಎಂದು ಕೇಳಿದರೆ ಆಂಗ್ಲ ಭಾಷೆಯ f**k ಪದ ಕಣಪ್ಪಾ ನಿನ್ನ ಆರಾಧ್ಯ ದೈವ ಉಲಿದಿದ್ದು  ಎಂದು ಹೇಳಲು ನಮಗೆ ಸಾಧ್ಯವೇ?

ಕಾಳಧಂಧೆ ಮಾಡುವವರ ಸ್ವರ್ಗವಾಗಿ ಹೋಗಿದೆ ಕ್ರಿಕೆಟ್ ಮೈದಾನ. ಮೋದಿ ಹಗರಣ ಏನೇನೆಲ್ಲಾ ಬಯಲು ಮಾಡಿತು ನೋಡಿ. ಇದೇಕೆ ಸಂಭವಿಸಿತು? ದುರುಳರಿಗೆ ತೋರಿತು ಕ್ರಿಕೆಟ್ ತಮ್ಮ ಕಾಳ ಧನವನ್ನು ಶ್ವೇತ ವಾಗಿಸಲು ಸಿಕ್ಕ ಮಾಂತ್ರಿಕ ಕ್ರೀಡೆ ಎಂದು. ಚೆನ್ನಾಗಿಯೇ ಪೋಷಿಸಿದರು ನಮ್ಮ ಮಾಜೀ ಒಡೆಯರ ಕ್ರೀಡೆಯನ್ನು. ಈಗ ಒಡೆಯಿತು ಮಡಿಕೆ ನೋಡಿ.  ಕ್ರಿಕೆಟ್ ಎಂದರೆ ಜಾಹೀರಾತುಗಳು ಮುಂಗಾರು ಮಳೆಯಂತೆ. ಬೇರೆ ಕ್ರೀಡೆಗಳಿಗೆ endorsement ಇಲ್ಲ. ಅಪ್ಪಿ ತಪ್ಪಿ ಸಹಾಯ ಕೇಳಿದಿರೋ,  ಕ್ಷಮಿಸಿ ನಮ್ಮ ಈ ಬಾರಿಯ ಬಜೆಟ್ ನಲ್ಲಿ ಇಲ್ಲ, ಭಿಕ್ಷೆ ಬೇಡುವವನಿಗೆ ಮುಂದೆ ಹೋಗಪ್ಪಾ ಎಂದು ತಾತ್ಸಾರದಿಂದ ಹೇಳುವಂತೆ ಸಾಗ ಹಾಕುತ್ತಾರೆ.

ಆಧುನಿಕ ಬದುಕಿನ ಹಲವು ವೈಫಲ್ಯಗಳನ್ನು ಮರೆಸಲು ನಾವು ಕ್ರಿಕೆಟ್ಟಿನ ಮೊರೆ ಹೋದದ್ದು ಸಾಕು. ಕ್ರಿಕೆಟ್ ನಮಗೆ ಒಂದು ರೀತಿಯ “ಮಾರಿಹ್ವಾನಾ” (marijuana). ಇದುವರೆಗೆ ಈ ಕ್ರೀಡೆ ನಮ್ಮ ego ಕಾಪಾಡಿಕೊಂಡು ಬರಲು, ಮತ್ತು ಒಂದು ರೀತಿಯ ದುರಹಂಕಾರ ಮನೆ ಮಾಡುವಂತೆ ಮಾಡಿತಲ್ಲ. ಅದಕ್ಕೆ ಒಂದು ದೊಡ್ಡ ಧನ್ಯವಾದ. ಈಗ ಅದಕ್ಕೊಂದು epitaph ಬರೆಯೋಣ. ಕ್ರಿಕೆಟ್ಟಿಗೊಂದು ಚೆಂದದ ಗೋರಿ ಬರಹ; “ಇಗೋ ಇಲ್ಲಿ ಮಲಗಿದ್ದಾನೆ, ಆವೇಶದ ಆಟದ ಮಧ್ಯೆಯೂ ಪಾನೀಯ, ಊಟ, ಚಹಾ ಸೇವಿಸುತ್ತಾ, ನಮ್ಮ ಮಹನೀಯರ ಕಳ್ಳ ಧಂಧೆಗೆ ಮಾನ್ಯತೆ ತಂದು, ನಮ್ಮ ಇತರೆ ಕ್ರೀಡೆಗಳನ್ನು ಕೊಂದು ಹಾಕಿದ ಕ್ರಿಕೆಟ್ ಎಂಬ ಬಿಳಿ ಭೂತ”    

ಕ್ರಿಕೆಟ್ ನಮ್ಮನ್ನು ಇದುವರೆಗೂ ಕುಣಿಸಿದ್ದು ಸಾಕು. ಇನ್ನಾದರೂ ಕಬಡ್ಡಿ, ಖೋ ಖೋ ರಾರಾಜಿಸಲಿ, ಬುಗುರಿ, ಗಾಳಿ ಪಟ ಮತ್ತೊಮ್ಮೆ ನಮ್ಮೆಡೆ ಬಾಳಲು ಬರಲಿ. ಇನ್ನೂ ಇಂಥ ನೂರಾರು ಕ್ರೀಡೆಗಳಿವೆ ಎಂದು ನಮ್ಮ ಮಕ್ಕಳಿಗೆ ತಿಳಿಯಲಿ. ಕ್ರೀಡೆಯೊಂದಿಗೆ ಸಂಸ್ಕಾರವನ್ನೂ ನಮ್ಮ ಮಕ್ಕಳು ಮರಳಿ ಕಂಡುಕೊಳ್ಳಲಿ.

“ಮೊಣಕೈ” ಸಮಾಜ ಮತ್ತು ಕಳಚಿಕೊಂಡ ಕಾಲುಂಗುರ

“elbow society” ಅಂದರೆ ಮೊಣಕೈ ಸಮಾಜ. ಮೊಣ ಕಯ್ಯಿಲ್ಲದ ಸಮಾಜ ಎಲ್ಲಿದೆ ಎಂದು ಊಹಾಲೋಕಕ್ಕೆ ಓಡದಿರಿ. ಈ ತೆರನಾದ ಸಮಾಜ ಜಬರದಸ್ತಿಯ ಸಮಾಜ ಅಂತ. ಒಂಥರಾ ರೌಡಿಸಂ ವರ್ತನೆ. ಅಂದರೆ ನೂಕುನುಗ್ಗಲಿನಲ್ಲಿ ತನ್ನ ಮೊಣ ಕೈ ಎಷ್ಟು ಬಲ ಶಾಲಿ ಮತ್ತು ಪರಿಣಾಮಕಾರಿ ಎಂದು ಪರೀಕ್ಷಿಸಿ ಅದರಲ್ಲಿ ಗೆಲ್ಲವುದು, ರೈಲಿನ ಅಥವಾ ಬಸ್ಸಿನ ಸೀಟು ಹಿಡಿಯುವ ಮೂಲಕ. ಕೆಲವರು ಮೊಣಕೈಗಿಂತಲೂ ಟವಲನ್ನೋ, ಬೀಡಿ ಪಾಕೀಟನ್ನೋ ಸೀಟಿನ ಮೇಲೆ ಎಸೆದು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ ಆಸ್ತಿಯನ್ನು, ತಾವು ಕೂರಲು ಹೊರಟ ಸೀಟನ್ನು. ಹೌದಲ್ವಾ? ನಾವೆಷ್ಟು ಅನಾಗರೀಕರು ಎಂದು ಮನದೊಳಗೆ ಮರುಗಬೇಡಿ. ನಮ್ಮನ್ನು ಮೀರಿಸುವವರಿಲ್ಲದಿದ್ದರೂ ನಮ್ಮಷ್ಟೇ ಯಶಸ್ವಿಯಾಗಿ ಮೊಣ ಕಯ್ಯನ್ನು ಉಪಯೋಗಿಸುವ ಇತರರೂ ಇದ್ದಾರೆ. ಆ ಇತರರ ಸಾಲಿಗೆ ಜಪಾನೀಯರೂ ಸೇರಿ ಕೊಂಡರು ಎಂದರೆ ಆಹ್, ನಮ್ಮ ಜನ್ಮ ಅಥವಾ ಮೊಣ ಕೈ ಸಾರ್ಥಕ. ಇಷ್ಟು ಶಿಸ್ತು ಬದ್ದ ಬದುಕನ್ನು ನಡೆಸುವ ಚಪ್ಪಟೆ ಮೂಗಿನ ಜಪಾನೀಯರು ನೂಕು ನುಗ್ಗಲಿನ ಸ್ಪರ್ದೆಯಲ್ಲಿ ಮುಂದು ಎಂದರೆ ನಾವು ಮಾಡುತ್ತಿರುವುದು ಸರಿಯೇ ಇರಬೇಕು ಎಂದು self congratulating mode ಗೆ ಬಂದು ಹಿಗ್ಗೋಣ ಮೊಣಕೈಯ್ಯನ್ನು ಇನ್ನಷ್ಟು ಉತ್ಸಾಹದಿಂದ ಹಾರಿಸುತ್ತಾ.

ಜಪಾನಿನ ರೈಲು ವ್ಯವಸ್ಥೆ ವಿಶ್ವ ದರ್ಜೆ. ಕೇವಲ ಸೌಲಭ್ಯಗಳು ಮಾತ್ರವಲ್ಲ ಸರಿಯಾದ ಸಮಯಕ್ಕೆ ಬಂದು ಕಾದು ನಿಂತ ಎಲ್ಲರನ್ನೂ ಕರೆದುಕೊಂಡು ಹೋಗುವ ವ್ಯವಸ್ಥೆ ಜಪಾನೀಯರ ಹೆಮ್ಮೆ. ಆದರೆ ರೈಲಿಗಾಗಿ ಕಾಯುತ್ತಾ ನಿಂತು ತಮಗೆ ಬೋಗಿಯೊಳಕ್ಕೆ ಸೇರಲು ಸಾಧ್ಯವಾಗದಿದ್ದರೆ? ಆಗಲೇ ನೋಡಿ, ರೈಲಿನ ಆಗಮನದೊಂದಿಗೆ ಎಲ್ಲಾ ಶಿಷ್ಟಾಚಾರಗಳ ಮೌನ ನಿರ್ಗಮನ. ರೈಲಿನ ಮೂತಿ ಕಂಡಿದ್ದೇ ತಡ ನೆರೆದ ಜನಸ್ತೋಮಕ್ಕೆ ಮರು ಜೀವ ಬಂದಂತೆ. ಅದುವರೆಗೂ excuse me, sorry, may i beg your pardon, please, ಗ್ಲೀಸ್ ಎಂದೆಲ್ಲಾ ಉಲಿಯುತ್ತಾ ತಮ್ಮ ನಡತೆ, ವಿದ್ಯೆಯ ಮಟ್ಟ ತೋರಿಸುತ್ತಾ ನಡೆದ ಜನ ಸಮೂಹ ರೈಲು ಕಂಡ ಕೂಡಲೇ ತನ್ನ ಶಿಷ್ಟಾಚಾರವನ್ನೆಲ್ಲಾ ತನ್ನ ಮೊಣ ಕೈಯ್ಯಿಗೆ ಬದಲಾಯಿಸಿ ಶುರು ಮಾಡುತ್ತದೆ ರೌಡಿತನದ ನಗ್ನ ನೃತ್ಯವನ್ನು. social grace ಎಲ್ಲಾ ರೈಲಿನ ಹಳಿಗಳಿಗೆ ಒಪ್ಪಿಸಿ ನಾ ಮೊದಲು, ತಾ ಮೊದಲು ಎಂದು ನುಗ್ಗುತ್ತಾರೆ. ವೃದ್ಧರು, ಮಕ್ಕಳು, ಮಹಿಳೆಯರು ಎಂಬುದಿಲ್ಲ, ಅಂಡಿಗಲ್ಲದಿದ್ದರೂ ತನ್ನ ಕಾಲಿಗೆ ಒಂದು ನೆಲೆ ಸಿಕ್ಕರೆ ಸಾಕು ಎಂದು ಎಲ್ಲರನ್ನೂ ನೂಕಿ, ಕೆಡವಿ ಹೋಗುತ್ತಾರೆ. ಇಂಥ ಮೊಣ ಕೈಗಳ ಜಬರದಸ್ತಿ ನಡುವೆಯೇ ಈ ನೂಕು ನುಗ್ಗಲಿನಲ್ಲಿ ಮಹಿಳೆಯರ ಬೇಡದ ಸ್ಥಳಕ್ಕೆಲ್ಲಾ ಹಸ್ತಗಳನ್ನು ಕಳಿಸಿ ಅಲ್ಲೂ ಒಂದು ರೀತಿಯ sexual harassment ನಡೆಸಿ ಖುಷಿ ಪಡೆಯುವವರು ಕೆಲವರು. ಸರ್ವಾಂತರ್ಯಾಮಿ ಕೈಗಳು. ಇವರೆಲ್ಲಾ ಸೂಟು ಬೂಟಿನಲ್ಲಿ ಬೋರ್ಡ್ ರೂಮಿಗೋ, ಸಭೆಗೋ ಹೋಗುವ ಮಾನ್ಯ ವ್ಯಕ್ತಿಗಳು. ಸ್ವಲ್ಪ ಹೊತ್ತಿಗಾದರೂ ಮಾನ್ಯತೆಯನ್ನ “ತಿಪ್ಪೆ ರೌಂಡ್ಸ್” ಗೆ ಕಳಿಸದಿದ್ದರೆ ಏನು ಮಜಾ ಆಲ್ವಾ? ತಮ್ಮ ಕೈಗಳನ್ನೂ, ಹಸ್ತಗಳನ್ನು ಈ ರೀತಿ ಬೇಡದ ಟ್ರಿಪ್ ಮೇಲೆ ಕಳಿಸುವ ಮಹೋದಯರ ಗೊಡವೆಯೇ ಬೇಡ ಎಂದು ನಾರೀ ಮಣಿಗಳು ತಮಗೆಂದೇ ಮೀಸಲಾದ ಪ್ರತ್ಯೇಕ ಬೋಗಿ ಗಳಲ್ಲೊ ಅಥವಾ ರೈಲುಗಳಲ್ಲೋ ಪ್ರಯಾಣಿಸುತ್ತಾರೆ. ಧೂಮಪಾನದಷ್ಟೇ ubiquitous ಹಸ್ತ ಪ್ರಯಾಣ.

ಕೆಲವೊಮ್ಮೆ ನನಗನ್ನಿಸುವುದು ಈ ಶೋಕಿ ಗಂಡಿಗೆ ಮಾತ್ರ ಏಕೆ? ರೋಗ, ಬ್ಯಾನೆಗಳು, ಚಟಗಳು ಇವೆಲ್ಲಾ ಎರಡೂ ಲಿಂಗಗಳಿಗೆ ಇರುವಂಥವು. ಆದರೆ ಲೈಂಗಿಕ ಕಿರುಕುಳ ಅಥವಾ ಕಚಗುಳಿ ಕೊಡುವ ಈ ವಿದ್ಯೆ ಗಂಡಿಗೆ ಮಾತ್ರ ಒಲಿದಿದ್ದು ಏಕೆ? for a pleasant change ಹೆಣ್ಣಿಗೇಕೆ ಕರಗತವಾಗಲಿಲ್ಲ ಈ ವಿದ್ಯೆ? ಬಸ್ಸಿನಲ್ಲೇ ನೋಡಿ. ಮುಂದುಗಡೆ ಯಿಂದ ಹೆಣ್ಣು ಹತ್ತಬೇಕು, ಹಿಂದಿನಿಂದ ಗಂಡು ಹತ್ತಬೇಕು. ಹಿಂದೆ ಹತ್ತಿದ ಗಂಡು ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಒಳಗಾಗಿ ನಿಧಾನ ಮುಂದಿನ ಬಾಗಿಲಿನ ಕಡೆ ತಲುಪಿರುತ್ತಾನೆ. ಈ ಚಟುವಟಿಕೆ ಕಾಲೇಜು ಬಿಡುವ ವೇಳೆ ಕೊಂಚ ಅಧಿಕ. ಈ ಲೈಂಗಿಕ ಕಿರುಕುಳ ಅಥವಾ ಮೇಲೆ ಹೇಳಿದ ಕಚಗುಳಿ ಗಂಡು ಮಾತ್ರ ಸವಿಯುತ್ತಾನೆ ಎಂದರೂ ತಪ್ಪೇ.

ತುಂಬಾ ವರ್ಷಗಳ ಹಿಂದೆ ನಡೆದ ಘಟನೆ. ಬಸ್ಸಿನಲ್ಲಿ ಒಬ್ಬ ರೋಮಿಯೋ ಕೂತಿದ್ದ. ಅವನ ಹಿಂದಿನ ಸೀಟಿನಲ್ಲಿ ಗಂಡ ಹೆಂಡಿರ ಜೋಡಿ ಕುಳಿತಿತ್ತು. ಹಿಂದೆ ಕೂತ ಮಹಿಳೆಯನ್ನು ನೋಡಿ ಮಿಸುಕಾಡುತ್ತಿದ್ದ ರೋಮಿಯೋ ಕೂತಾಕೆಗೆ ಇಷ್ಟವಾದ. ಅವನ ಸೀಟಿನ ಮೂಲೆಯಿಂದ ಆಕೆ ತನ್ನ ಕಾಲನ್ನು ತೂರಿಸಿದಳು. ಸ್ವಲ್ಪ ಹೊತ್ತಿನ ನಂತರ ಕಚಗುಳಿ ಜಾಸ್ತಿಯಾದಾಗ ಆಕೆ ಕಾಲನ್ನು ಹಿಂದಕ್ಕೆ ಎಳೆದುಕೊಂಡಳು. ಕಾಲೇನೋ ಹಿಂದಕ್ಕೆ ಬಂತು ಆದರೆ ಆಕೆ ತೊಟ್ಟಿದ್ದ ಕಾಲುಂಗುರ ಅವನ ಕೈಯ್ಯಲ್ಲೇ ಉಳಿಯಿತು.ಈಗ reverse acting. ಕಚಗುಳಿ ಇಡುವ ಸರತಿ ಈಕೆಯದು. ಉಂಗುರ ಮರಳಿಸು ಎಂದು ತಿವಿದೂ ತಿವಿದೂ ಕೇಳಿದಳು. ಇವನಿಗೆ ಒಂಥರಾ ಖುಷಿ. ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ. ಕಣ್ಣಿನಲ್ಲೇ ಗೋಗರೆದಳು ಉಂಗುರ ಕೊಡು ಎಂದು. ಕಾಲುಂಗುರ ಉದುರಿ ಹೋಯಿತು ಎಂದರೆ ಯಾರದಾರೂ ನಂಬುವರೇ?ಯಾರು ನಂಬಿದರೂ ಸದಾ ಸಂಶಯಿ ಅತ್ತೆಮ್ಮ ನಂಬುವಳೇ? ಕೈಯ್ಯುನ್ಗುರ, ವಾಲೆ, ಜುಮ್ಕಿ, ಸರ, ಉದುರೋದಿದೆ, ಆದರೆ ಕಾಲುಂಗುರ? ಸಾಕಷ್ಟು ಮನೋರಂಜನೆ ಪಡೆದ ರೋಮಿಯೋ ಉಂಗುರ ಮರಳಿಸಿದ ಅನ್ನಿ.

ಹೀಗೆ ನಿಮಗೂ ಒಂದಲ್ಲ ಒಂದು ರೀತಿಯ ಅನುಭವವಾಗಿರಲೇಬೇಕು ಪ್ರಯಾಣದ ವೇಳೆ, ರೇಶನ್, ಸೀಮೆಣ್ಣೆಗಾಗಿ, ಸರತಿಯಲ್ಲಿ ನಿಂತಾಗ.

ರಾತ್ರಿ ತರಗತಿ

ರಾಮನ್ ಮತ್ತು ನಾರಾಯಣ್ ಆಫೀಸಿನಲ್ಲಿ ಹರಟುತ್ತಿದ್ದರು.

ರಾಮನ್:  ನಾರಾಯಣ, ನಾನು ಕಳೆದ ಐದು ತಿಂಗಳುಗಳಿಂದ ರಾತ್ರಿ ತರಗತಿಗಳಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನ್ನ ಪರೀಕ್ಷೆ ಇದೆ.

ನಾರಯಣ್: ಓಹ್

ರಾಮನ್: ಉದಾಹರಣೆಗೆ ಗ್ರಹಾಮ್ ಬೆಲ್ ಯಾರೆಂದು ನಿನಗೆ ಗೊತ್ತಾ?

ನಾರಾಯಣ್: ಇಲ್ಲ.

ರಾಮನ್: ಗ್ರಹಾಮ ಬೆಲ್ ಅಲ್ಲವೇ ೧೮೭೬ ರಲ್ಲಿ ಟೆಲಿ ಫೋನ್ ಕಂಡುಹಿಡಿದವನು? ನೀನು ರಾತ್ರಿ ತರಗತಿಗೆ ಹೋದರೆ ಇವೆಲ್ಲಾ ತಿಳಿಯುತ್ತವೆ.

ಮಾರನೆ ದಿನ…

ರಾಮನ್: ಹೋಗಲಿ ನಿನಗೆ ಅಲೆಕ್ಸಾಂಡರ್ ಡೂಮ ಯಾರೂಂತ ಗೊತ್ತಾ?

ನಾರಾಯಣ್: ಇಲ್ಲ

ರಾಮನ್: ಅವನು ಸುಪ್ರಸಿದ್ಧ ಕಾದಂಬರಿಕಾರ. ಅವನೇ three musketeers ಪುಸ್ತಕ ಬರೆದದ್ದು.

ಹೀಗೆ ಪ್ರತೀ ದಿನ ರಾಮನ್ ತನ್ನ ಜ್ಞಾನದ ಬಗ್ಗೆ ನಾರಾಯಣನಲ್ಲಿ ಕೊಚ್ಚುತ್ತಿದ್ದ. ಬೇಸತ್ತಿದ ನಾರಾಯಣ್ ಕೇಳ್ದ, ರಾಮನ್, ನಿನಗೆ ಬಾಲಕೃಷ್ಣನ್ ಕುಪ್ಪುಸ್ವಾಮಿ ಯಾರೂಂತ ಗೊತ್ತಾ?

ರಾಮನ್: ಇಲ್ಲ, ಗೊತ್ತಿಲ್ಲ.

ನಾರಾಯಣ್: ಅಯ್ಯೋ, ಅವನೇ ಇಲ್ಲವೇ ನಿನ್ನ ಹೆಂಡತಿಯ ಜೊತೆ ರಾತ್ರಿಯಲ್ಲಿ ತಿರುಗುತ್ತಾ ಇರೋದು. ನೀನು ಈ ರಾತ್ರಿ ತರಗತಿಗಳನ್ನು ನಿಲ್ಲಿಸಿದರೆ ಇದು ನಿನಗೆ ತಿಳಿಯಬಹುದು” ಎಂದು ಹೇಳಿದ.

moral of the story:

ಜೀವನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅರಿಯಬೇಕಾದ ಬೇರೆ ಸಂಗತಿಗಳೂ ಇವೆ

ಬ್ಲಾಗಿಗೊಂದು ಎಲ್ಲೆ ಎಲ್ಲಿದೇ…

ಬ್ಲಾಗಿಗೊಂದು ಎಲ್ಲೆ ಎಲ್ಲಿದೇ, ನಿರಾಸೆಗಿಲ್ಲಿ ಕೊನೆಯಿದೇ,

ಏನೇನು ಕನಸು ಕಾಣುವೇ,

ಬ್ಲಾಗಿಸು ನೀ ಬ್ಲಾಗಿಸೂ…

ನನ್ ಫ್ರೆಂಡ್ ಕೇಳ್ದ, ಏನಮ್ಮಾ ತುಂಬಾ ಬ್ಲಾಗ್ತಾ ಇದ್ದೀಯಾ, ಏನ್ಸಮಾಚಾರ ಅಂತ. ಏನಮ್ಮಾ ತುಂಬಾ ಬೊಗುಳ್ತಾ ಇದ್ದೀಯಾ ಅಂತ ಮಾತ್ರ ಕೇಳಿಲ್ಲ ಪುಣ್ಯಾತ್ಮ. ಈ ಬ್ಲಾಗ್ ಅಲೆ ಅಥವಾ ಶೋಕಿ ಬಂದ ಮೇಲಂತೂ ಎಲ್ಲರೂ ಬೊಗಳುವವರೇ, ಊಪ್ಸ್ ಬ್ಲಾಗುವವರೇ. ಒಂದಲ್ಲ ಒಂದು ವಿಷಯವಂತೂ ಇದ್ದೇ ಇರುತ್ತಲ್ಲ ಹೇಳೋದಕ್ಕೆ, ಬರೆಯೋದಕ್ಕೆ. ನಲ್ಲಿ ಜಗಳದಿಂದ ಹಿಡಿದು, ನಮ್ಮನ್ನು ಆಳುವವರ ಲೈಂಗಿಕ ಬದುಕಿನವರೆಗೂ ವಿಷಯಗಳೋ ವಿಷಯಗಳು. ಇವನ್ನೆಲ್ಲಾ ಬರೆದರೆ ಪ್ರಕಟಿಸಲು ಪತ್ರಿಕೆಗಳು ಬೇಕಲ್ಲ. ಮೊದಲೇ ಎರವಲು ಪಡೆದು ಓದುವ ಸಮಾಜ. ಇನ್ನು ಅಂಡೇ ಪಿರ್ಕಿಗಳು ಬರೆದದ್ದನ್ನೆಲ್ಲಾ ಕೊಂಡು ಓದುವುದೂ ಇಲ್ಲ, ಅದಕ್ಕೆ ಬಿಡುವೂ ಇಲ್ಲ. ಇಂಥ ಸನ್ನಿವೇಶದಲ್ಲಿ ಬ್ಲಾಗ್ ವಿಶ್ವ ತನ್ನ ಬಾಗಿಲು ತೆರೆದು ಎಲ್ಲರಿಗೂ ಒಂದು ವೇದಿಕೆ ಒದಗಿಸಿತು, ಒದರಲು. ಸಮಾನತೆಯ ಮೋಹಕ ಕಹಳೆ. blogging is a great liberator and equalizer. ಚಿರಪರಿಚಿತ ಲೇಖಕರಿಂದ ಹಿಡಿದು ಅಂಡೇ ಪಿರ್ಕಿ (ಈ ಪದ ಎರಡು ಸಲ ಬರೆದಿದ್ದು ಏಕೆಂದರೆ ಇದು ನನಗಿಷ್ಟವಾದ ಪದ, ಕನ್ನಡದವರಿಗೆ ಕ್ರಿಯಾ ಶೀಲತೆ ಇಲ್ಲ ಎನ್ನುವವರಿಗೆ ಈ ಪದ ಒಂದು ಉತ್ತರ) ಗಳವರೆಗೆ. ಬರೆಯಿರಪ್ಪಾ/ಮ್ಮಾ ಎಂದು ಮುಕ್ತ ಆಹ್ವಾನ.

ವಿ.ಸೂ : ಅಂಡೇ ಪಿರ್ಕಿ ಎನ್ನುವ ಪದ ಸಭ್ಯವೋ, ಸಂಸದೀಯವೋ (parliamentary) ಎನ್ನುವುದರ ಬಗ್ಗೆ ಯಾರಾದರೂ ಬರೆದರೆ ಚೆನ್ನಿತ್ತು.

ಹಾಗೆಯೇ, ತಲೆ ಸರಿಯಿಲ್ಲದವನಿಗೆ, ಪೆಕರು ಪಕರು ಥರಾ ಆಡುವವನಿಗೆ “ಮಂಡೆ ಪಿರ್ಕಿ” (ಮಂಡೆ, ಅಂದ್ರೆ ತಲೆ) ಅಂತ ಕರೆದರೆ ಹೇಗೆ? ನಮ್ಮ ಕನ್ನಡ ಶಬ್ದ ಭಂಡಾರವನ್ನು ಇನ್ನಷ್ಟು ಶ್ರೀಮಂತಗೊಳಿಸಿದಂತಾಗದೇ?

ಮದುವೆಯ ಈ ಬಂಧಾ…..

ವಿವಾಹದ ದಿನ ಎಂದರೆ ಪ್ರತಿ ಹೆಣ್ಣು ಗಂಡಿನ ಬದುಕಿನ ಅತ್ಯಂತ ಮಹತ್ತರವಾದ, ಎಂದೆಂದೂ ನೆನಪಿನಲ್ಲುಳಿಯುವ ದಿನ. ರೋಮಾಂಚನ, ದುಗುಡ, ಕಾತುರ, ಸಂತಸ, ಹೆಮ್ಮೆ ಹೀಗೆ ನೂರೊಂದು ಭಾವನೆಗಳು ವಿವಾಹದಂದು. ಆ ವಿಶೇಷ ದಿನಕ್ಕಾಗಿಯೇ ವಧೂ ವರರು ತಿಂಗಳುಗಟ್ಟಲೆ ತಯಾರಿ ನಡೆಸಿರುತ್ತಾರೆ. ವರ ಅಷ್ಟೊಂದು ತಲೆ ಕೆಡಿಸಿಕೊಳ್ಳದಿದ್ದರೂ ವಧುವಿಗಂತೂ ತನ್ನ ವಿವಾಹದ ದಿನ ಹೀಗೆಯೇ ಇರಬೇಕೆನ್ನುವ ಸ್ಪಷ್ಟ ಕಲ್ಪನೆ ಇರುತ್ತದೆ.

ನಮ್ಮ ದೇಶದಲ್ಲಿ ಯಾವ ಧರ್ಮೀಯರೇ ಆಗಲಿ ವಿವಾಹದ ದಿನ ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆ ಇಷ್ಟಪಟ್ಟರೆ ಪಾಶ್ಚಾತ್ಯರದು ಬೇರೆಯೇ ಆದ ದೃಷ್ಟಿಕೋನ. ಉಡುಗೆ ಮಾತ್ರವಲ್ಲ ಮದುವೆ ಆಗುವ ಸ್ಥಳಗಳೂ ಸಹ ವಿಚಿತ್ರವೇ. ಕೆಲವರು ನೀರಿನೊಳಕ್ಕೆ ಇಳಿದು ವಿವಾಹಿತರಾದರೆ ಇನ್ನೂ ಕೆಲವರು ಪ್ಯಾರಾಶೂಟ್ ನಲ್ಲಿ ಕೂತು ಮದುವೆ ಆಗುತ್ತಾರೆ.

ಹೀಗೆ ವಿವಿಧ ರೀತಿಯಲ್ಲಿ ಜನರ ಗಮನವನ್ನ ಸೆಳೆಯುವ ಉದ್ದೇಶದೊಂದಿಗೆ ವಿಶಿಷ್ಟ ವಾದ ರೀತಿಯಲ್ಲಿ ಮದುವೆಯಾಗುತ್ತಾರೆ.  ಕೆಲವು ಉಡುಗೆಗಳ ದೃಶ್ಯಗಳಿವೆ ಪಾಶ್ಚಾತ್ಯರದು. ನೋಡಿ ಆನಂದಿಸಿ.

 

ಮೇಲಿನ ಬಲ ಬದಿಯ ಎರಡು ಚಿತ್ರಗಳನ್ನೂ ನೋಡಿ ಮೂರ್ಛೆ ಹೋಗಿಲ್ಲ ತಾನೇ? ಹೋದರೂ ಅಚ್ಚರಿಯಿಲ್ಲ. ಸತ್ತ ಹೆಣವೂ ಶವ ಪೆಟ್ಟಿಗೆಯೊಳಕ್ಕೆ ಮಲಗಲು ಹೆದರುತ್ತದೆ, ಆದರೆ ಈ ಲಲನಾಮಣಿ ವಧು ಆರಿಸಿಕೊಂಡ ಜಾಗ ಶವಪೆಟ್ಟಿಗೆ. ಅವಳ ಗುಂಡಿಗೆಗೆ ಕೊಡಬೇಕು ನೋಡಿ ಬಹುಮಾನ. ತಾನು ಪ್ರೀತಿಸಿದ ವನನ್ನು ವಿವಾಹವಾಗಲು ೨೭ ವರ್ಷ ತಗುಲಿತಂತೆ. ಅಷ್ಟರಲ್ಲಿ ಇಬ್ಬರಿಗೂ ಬೇರೆಯವರೊಂದಿಗೆ ಮದುವೆಯಾಗಿ ಮಕ್ಕಲ್ಲೂ ಇದ್ದವು. ಕೊನೆಗೆ ಈ ಪ್ರೇಮಿಗಳು ಮದುವೆಯಾಗುವ ಕಾಲ ಕೂಡಿ ಬಂತು ತಮ್ಮ ತಮ್ಮ ಬಾಳ ಸಂಗಾತಿಗಳು ಬೇರೆಯಾದಾಗ. ಇನ್ನೆಂದೂ ತನ್ನ ಇನಿಯ ತನ್ನಿಂದ ಬೇರೆಯಾಗ ಕೂಡದೆಂದು ಅವನ ಕೊರಳಿಗೆ ನಾಯಿಗೆ ಕಟ್ಟುವ ಪಟ್ಟಿ ಕಟ್ಟಿದ್ದಾಳೆ ಸಹ. ನಮ್ಮಲ್ಲಿ ಹೆಣ್ಣಿಗೆ ತಾಳಿ ಕಟ್ಟುವುದಿಲ್ಲವೆ ಹಾಗೆ.

ಕಟುಕನಿಗಾಗಿ ಕಾಯುತಿಹ ಕುರಿಗಳು ಮತ್ತು ಕುವರಿಯರು

                                            

ನಾಗರೀಕ ಸಮಾಜಕ್ಕೆ ಕಳಂಕವಾಗಿರುವ ವೇಶ್ಯಾವಾಟಿಕೆ ಬಗ್ಗೆ ಸನ್ಮನಸ್ಸಿನ ಕನ್ನಡಿಗರೊಬ್ಬರು “ಸಂಪದ” ದದಲ್ಲಿ ಚರ್ಚೆ ಇಟ್ಟು ತಾವು ಬೆಂಗಳೂರಿನಲ್ಲಿ ಕಂಡ ದೃಶ್ಯದ ಬಗ್ಗೆ ಓದುಗರ ಗಮನ ಸೆಳೆದರು.

ಮೈಮಾರುವ, ವೇಶ್ಯಾವಾಟಿಕೆ, ಹಾದರ, ಹೀಗೆಲ್ಲಾ ವಿವಿಧ ನಾಮಾವಳಿಗಳಿಂದ ಗುರುತಿಸಲ್ಪಡುವ flesh trade ಇಂದು ನಿನ್ನೆಯದಲ್ಲ. ಇದು world’s oldest profession ಅಂತೆ. ಈ ವೃತ್ತಿಗೆ profession ಅಂತ ಕರೆದು ದಾರ್ಶನಿಕ ಅಥವಾ ಸಮಾಜ ಶಾಸ್ತ್ರಜ್ಞ ಈ ವೃತ್ತಿಗೆ ಒಂದು definition ಕೊಟ್ಟು ಮನುಷ್ಯನ ನೂರಾರು ವೃತ್ತಿಗಳಲ್ಲಿ ಇದೂ ಒಂದು ಎಂದು ಪ್ರತಿಬಿಂಬಿಸಿ ಪರೋಕ್ಷವಾಗಿ ಪ್ರೋತ್ಸಾಹಿಸಿದ್ದಾನೆ. ಮತ್ತೊಂದು ಕಡೆ ನಮ್ಮ ಹೆಣ್ಣು ಮನೆಯ ಹೆಣ್ಣು ಮಕ್ಕಳು ಮಾನವಾಗಿ ಓಡಾಡಲು ಪರರ ಹೆಣ್ಣು ಮಕ್ಕಳು ಮಾನ ಬಿಟ್ಟು ಮೆಜೆಸ್ಟಿಕ್ ನಲ್ಲೋ ಇನ್ಯಾವುದಾದರೂ ರೆಡ್ ಲೈಟ್ ಏರಿಯಾದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಗಿರಾಕಿಗೆ ಕಾಯಬೇಕು. ಹೇಗಿದೆ ವ್ಯವಸ್ಥೆ? ಈ ವ್ಯವಸ್ಥೆ ಸರಿ ಎಂದು ಹೇಳುವ ಮಹಿಳೆಯರೂ ಇದ್ದಾರೆ.

ಯಾವ ಹೆಣ್ಣೂ ತನ್ನ ಸ್ವ ಇಚ್ಚೆಯಿಂದ ಈ ದಂಧೆಗೆ ಇಳಿಯುವುದಿಲ್ಲ. ಹೌದು ಶಾಪಿಂಗ್ ಗೀಳು ಹಚ್ಚಿಕೊಂಡ ಕೆಲವರು ಶೋಕಿಗಾಗಿ, (ಇದರಲ್ಲಿ ಗೃಹಿಣಿಯರೂ ಸೇರಿದ್ದಾರೆ ಎನ್ನುವುದನ್ನು ಮರೆಯಬಾರದು) ಈ ಕೆಲಸಕ್ಕೆ ಇಳಿಯುತ್ತಾರೆ. ಈ ದಂಧೆಯ ಬಗ್ಗೆ ಕೂಲಂಕುಷವಾಗಿ ನೋಡಿದಾಗ ನಮಗೆ ಸಿಗುವ ಕಾರಣಗಳು ಹಲವು. ಬಳಕೆದಾರ ಸಂಸ್ಕೃತಿ, ಕೊಳ್ಳಲು ಪ್ರೇರೇಪಿಸುವ ಜಾಹೀರಾತುಗಳು, ಸಂಪತ್ತನ್ನು ವೈಭವೀಕರಿಸುವ ಸೀರಿಯಲ್ಲುಗಳು. ಇದಲ್ಲದೆ ಸಂಪತ್ತಿನ ಬಗೆಗಿನ ಸಮಾಜದ ದೃಷ್ಟಿಕೋನ. ಯಶಸ್ವೀ ವ್ಯಕ್ತಿ ಬಳಿ ದೊಡ್ಡ ಕಾರು, ಬಂಗಲೆ ಇದ್ದರೆ ಅವನಿಗೆ ಮನ್ನಣೆ. ಆ ಬಂಗಲೆ, ಕಾರು, ಸಂಪತ್ತು ಹೇಗೆ ಬಂತು ಎಂದು ಕೇಳುವ ಅರಿಯುವ ಹಂಬಲ ಸಮಾಜಕ್ಕಿದೆಯೇ? ಯಾವುದಾದರೂ upscale neighbourhood ಕಡೆ ನಡೆದರೆ ತಿಳಿಯುತ್ತೆ. ನೋಡಪ್ಪಾ, ಅಲ್ಲಿರೋ ಬಂಗಲೆ forest conservator ಅವರದು. ಅಲ್ಲಿ ನಿಂತಿದೆಯಲ್ಲಾ ದೊಡ್ಡ ಕಾರು,ಅದು pwd engineer ಅವರದು, ಅಲ್ಲಿ ಯಮಾಹಾ ಬೈಕಿನಲ್ಲಿ ಹೋಗ್ತಾ ಇದ್ದಾನಲ್ಲ ಅವನು ಕೆಎಸ್ಸಾರ್ಟೀಸಿ ಬಸ್ಸಿನ ಕಂಡಕ್ಟರನ ಮಗ, MBBS ಮಾಡ್ತಾ ಇದ್ದಾನೆ……….ಹೀಗೆ ಸಾಗುತ್ತದೆ ಗುಣಗಾನ, ಪ್ರಶಂಸೆ, ಭಕ್ತಿ ಭಾವ. ನಾವೆಂದಾದರೂ ಯೋಚಿಸಿದ್ದೇವೆಯೇ ಈ ವ್ಯಕ್ತಿಗಳು ಪಡೆಯುವ ಸಂಬಳದಲ್ಲಿ ಈ ಸೌಕರ್ಯಗಳನ್ನು ತಮದಾಗಿಸಿಕೊಳ್ಳಲು ಅವರಿಂದ ಸಾಧ್ಯವೇ ಎಂದು? ಮಾನ ಬಿಟ್ಟು ಸಂಪಾದನೆ ಮಾಡಿದರೆ ಸಂಪಾದನೆ ಮಾನವನ್ನು ತಂದು ಕೊಡುತ್ತದಂತೆ. ಎಷ್ಟು ಸೊಗಸಾಗಿ ಮರಳಿ ಬಂತು ನೋಡಿ ಮಾನ ಇಲ್ಲಿ. ಈಗ ವೇಶ್ಯಾವಾಟಿಕೆಗೂ ಇಲ್ಲಿ ಬರೆದಿರುವುದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ ತಾನೇ?

ಅನೈತಿಕ ಸಂಪಾದನೆಯನ್ನು ಕಂಡು ಹಿಗ್ಗಿ, ಹೊಗಳುವ ಸಮಾಜ ಒಳಗೊಳಗೇ ಅದೇ ರೀತಿ ತಾನೂ ಆಗಬೇಕೆಂದು ಬಯಸುತ್ತದೆ. ಈ ಸಂಪತ್ತನ್ನು ನೋಡಿದ ಸಾಮಾನ್ಯ ಗೃಹಿಣಿ ತನ್ನ ಗಂಡನನ್ನು ಪ್ರೇರೇಪಿಸುತ್ತಾಳೆ ಅಡ್ಡ ದಾರಿ ಹಿಡಿ ದು ಸಂಪಾದಿಸಲು. ಅಬಲೆ ಬಯಸುತ್ತಾಳೆ ತನ್ನ ಮೈ ಮಾಟವನ್ನು ಶ್ರೀಮಂತನಿಗೆ ಉಣಿಸಿದರೆ ಅವನಂತೆಯೇ ತಾನೂ ಸುಖವಾಗಿ ಇರಬಹುದು ಎಂದು. ಲಂಚ ಪಡೆಯುವ ವ್ಯಕ್ತಿ ಒಂದು ರೀತಿಯ ಹಾದರ ಮಾಡಿದರೆ ಏರು ಜವ್ವನೆ ಮತ್ತೊಂದು ರೀತಿಯ ಹಾದರಕ್ಕೆ ಇಳಿಯುತ್ತಾಳೆ. ಇಬ್ಬರ ಉದ್ದೇಶ ಸ್ಪಷ್ಟ. ಭರ್ಜರಿಯಾಗಿ ಬಾಳುವುದು.

ಶೀಲ ಮತ್ತು ಅಶ್ಲೀಲದ ಮಧ್ಯೆ ಇರುವ ಪರದೆ ಬಹು ತೆಳುವಾದುದು. ಯಾವುದೋ ಒಂದು ಘಳಿಗೆಯಲ್ಲಿ, ಯಾವುದೋ ಒಂದು ಕಾರಣಕ್ಕೆ ಆ ಪರದೆ ಸರಿಯಿತೋ ಪಯಣ ಶುರು ಅನೀತಿಯೆಡೆಗೆ. ಚಿಕ್ಕ ಪುಟ್ಟ, ಒಂದು ಸಲ, ಎರಡು ಸಲ, ಎಂದು ತಮಗರಿವಿಲ್ಲದೆಯೇ ಅನೈತಿಕತೆಯ ಪ್ರಪಾತಕ್ಕೆ ಜಾರುತ್ತಾರೆ. ಟೀವೀ ಆನ್ ಮಾಡಿದರೆ ಸೀರಿಯಲ್ಲುಗಳಲ್ಲಿ ಸಾವಿರ ಕೋಟಿಗಳ ಮಾತು, ಬೀದಿಯಲ್ಲಿ ಹೋದರೆ ಭರ್ರ್ ಎಂದು ಹೋಗುವ ಮಾರುತಿ, ಹೊಂಡಾ, ಮರ್ಸಿಡೀಸ್ ಗಳು. ಪರಿಣಾಮ? ಈ ಮೇಲೆ ಹೇಳಿದ ಸಂಪತ್ತನ್ನು ಕಂಡು ಜೊಲ್ಲು ಸುರಿಸಿ ನೋಡುತ್ತಾ ಮೆಜೆಸ್ಟಿಕ್ನಲ್ಲಿ ನಿಲ್ಲುವ ನೀರೆಯರು.

ಮಾವಿನ ಹಣ್ಣು

ಈ ಚಿತ್ರವನ್ನು ನನ್ನ ಎರಡು ವರ್ಷದ ಮಗಳು ಇಸ್ರಾ ತೆಗೆದದ್ದು. ನನ್ನ ತಂಗಿ ಇತ್ತೀಚೆಗೆ ಭಾರತಕ್ಕೆ ಹೋದಾಗ ನಮ್ಮ ಮನೆಯ ಮುಂದಿನ ಮರದಲ್ಲಿ ಆದ ಮಾವಿನ ಹಣ್ಣುಗಳನ್ನು ತಂದಿದ್ದಳು. ಹಣ್ಣು ಬಹಳ ರುಚಿಯಾಗಿದ್ದವು.  ಅದೂ ಅಲ್ಲದೆ ನಮ್ಮ ಮನೆಯ ತೋಟದಲ್ಲಿ ಬೆಳೆದ ಹಣ್ಣು ಎಂದರೆ ವಿಶೇಷವಾದ ರುಚಿ ಅದಕ್ಕೆ ಇರುತ್ತದಲ್ಲವೇ? ಮನೆಯ ಮುಂದಿನ ಮಾವಿನ ಮರಕ್ಕೆ ಹಾದು ಹೋಗುವ ಪಡ್ಡೆ ಹುಡುಗರ ದುರ್ಗಣ್ಣು. ಯಾರೂ ಇಲ್ಲದಾಗ ಮರ ಬೋಳಿಸಿ ಹೋಗಿ ಬಿಡುತ್ತಾರೆ. ನನ್ನಮ್ಮನ ಶಾಪವೋ ಶಾಪ.

ಹಣ್ಣುಗಳ ರಾಜ ಮಾವಿನ ಹಣ್ಣನ್ನು ಇಷ್ಟ ಪಡದವರು ವಿರಳ. ಕೆಲವರಿಗೆ ಮಾವಿನ ಹಣ್ಣು ಶರೀರವನ್ನು ಸ್ಥೂಲ ವಾಗಿಸುತ್ತದೆ ಎಂದು ತಿನ್ನಲು ಭಯ. ಒಂದು ದೊಡ್ಡ ಬಾಳೆ ಹಣ್ಣಿನಲ್ಲೂ ಮತ್ತು ಸಾಮಾನ್ಯ ಗಾತ್ರದ ಮಾವಿನ ಹಣ್ಣಿನಲ್ಲೂ ಇರುವುದು ೧೦೦ ಕ್ಯಾಲೋರಿಗಳು. ಬಾಳೆಹಣ್ಣನ್ನು ತಿನ್ನಲು ತಕರಾರಿಲ್ಲದೆ ಇದ್ದರೆ ಮಾವಿನ ಹಣ್ಣಿಗೇಕೆ ತಕರಾರು?

ಮಾವಿನ ಹಣ್ಣನ್ನು ತಿನ್ನುವ ಕಲೆ ತಿಳಿದಿರುವುದು ಕೆಲವರಿಗೆ ಮಾತ್ರ. ಇಡಿಯಾದ ಹಣ್ಣನ್ನು ಕತ್ತರಿಸದೆ ತಿಂದರಂತೂ ಆಗುವ ಪಾಡು ಗೊತ್ತೇ ಇದೆಯಲ್ಲ. ಮಾವಿನ ಹಣ್ಣಿನ ಕಲೆಯೂ ಸಹ ಸುಲಭವಾಗಿ ಹೋಗುವನ್ಥದ್ದಲ್ಲ. ಚಿಕ್ಕವನಿದ್ದಾಗ ಹಣ್ಣನ್ನು ತಿನ್ನುವಾಗ  ಅದರ ರಸ ಅಂಗೈಯಿಂದ ಹಿಡಿದು ಮೊಣಕಯ್ಯವರೆಗೂ ಬಂದು ಅಲ್ಲಿಂದ ತನ್ನ ದಿಕ್ಕನ್ನು ಬದಲಿಸಿ ಅಂಗಿಯ ಮೇಲೂ ಬಿದ್ದು, ಮುಂದುವರೆದು ಚಡ್ಡಿ ಪ್ಯಾಂಟಿ ನ ಮೇಲೆ ಎರಗಿದಾಗ ಮನೆಯಲ್ಲಿ ಅಮ್ಮನ ಕೈಯ್ಯಲ್ಲಿ ಹೊಡೆತ ತಿಂದ ಉದಾಹರಣೆಗಳು ಬಹಳ. ಹೇಗೆ ತಿಂದರೂ ತನ್ನ ಒಸರುವ ಬುದ್ಧಿ ಬಿಡದ ತುಂಟ ರಸ ಮೈ, ಬಟ್ಟೆ ಮೇಲೆ ಹರಿಯುವುದರಿಂದ ತಡೆಯಲು ಒಂದು ಮಾರ್ಗವಿದೆ. ಅದೆಂದರೆ ನಮ್ಮ ಪ್ರೀತಿಯ ಹಣ್ಣನ್ನು ನಮ್ಮೊಂದಿಗೆ ತಿನ್ನಲು ಕೊಂಡೊಯ್ಯುವುದು ಸ್ನಾನ ಗೃಹಕ್ಕೆ. ಶವರ್ ಅಡಿಯಲ್ಲಿ ನಿಂತು ತಿನ್ನಬೇಕು ಹಣ್ಣನ್ನು. ರಸ ತನಗೆ ಬೇಕಾದ ರೀತಿಯಲ್ಲಿ, ಬೇಕಾದ ಕಡೆ ಒಸರಿ ಕೊಳ್ಳಲಿ, ಹಾಡುತ್ತಾ ತಿಂದು, ಗೊರಟೆಯ ಬುಡ ಕಾಣುವವರೆಗೂ ಸರಿಯಾಗೇ ಚೀಪಿ ಶವರ್ ಆನ್ ಮಾಡಿದರೆ ಸಂಪೂರ್ಣ ಮುಕ್ತಿ ರಸದಿಂದ. ಹೇಗಿದೆ ಪ್ಲಾನು?