ನೀವು ಪುಸ್ತಕದ ನರಿಗಳೋ?

ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮಾಜವೇ ಈ ಹುಳು ಎನ್ನುವ ಪದವನ್ನು ಓದುಗನಿಗೆ ದಯಪಾಲಿಸಿದ್ದು ಅಚ್ಚರಿಯೇ ಸರಿ. ಜ್ಞಾನಾರ್ಜನೆಯ ಮೊದಲ ಮೆಟ್ಟಿಲೇ ಓದು. ಪವಿತ್ರ ಕುರಾನ್ ಅವತೀರ್ಣವಾಗಿದ್ದು ಈ ಆರಂಭದ ಸಾಲಿನಿಂದ. “ಓದು, ನಿನ್ನನ್ನು ಸೃಷ್ಟಿಸಿದ ಭಗವಂತನ ನಾಮದಿಂದ”. ಓದಿನ ಬಗೆಗಿನ ವರ್ಣನೆ, ಕಲ್ಪನೆಗಳು ಹೀಗಿರುವಾಗ ಹುಳು ನುಸುಳಿದ್ದಾದರೂ ಎಲ್ಲಿಂದ? ಅಥವಾ ಪುಸ್ತಕದ ಹುಳು ಎಂದು ಕರೆಯುವಾಗ ಅದರಲ್ಲಿ ಗೂಢಾರ್ಥವೇನಾದರೂ ಅವಿತಿರಬಹುದೇ? ಏಕೆಂದರೆ ಹಳೇ ತಲೆಮಾರಿನ ತಲೆ ಯೋಚಿಸುವ ರೀತಿಯೇ ಬೇರೆ ನೋಡಿ.

ಎಲ್ಲರಿಗೂ ತಿಳಿದಂತೆ ಕಾಗದದ ಉತ್ಪಾದನೆ ಮರಗಳಿಂದ ತಾನೇ ? ಗೆದ್ದಲಿನಂಥ ಹುಳುವಿನ ಕೆಲಸವೂ ಅದೇ ಅಲ್ಲವೇ? ಒಂದು ಆರೋಗ್ಯವಂತ, ದಷ್ಟ ಪುಷ್ಟ ಮರವನ್ನ ನಿಧಾನವಾಗಿ, ಶ್ರದ್ಧೆಯಿಂದ ಕೊರೆಯುತ್ತಾ ದುರ್ಬಲಗೊಳಿಸಿ ಕೊನೆಗೆ ಅದರ ಅವಸಾನಕ್ಕೆ ಕಾರಣವಾಗುವುದು? ಒಂದು ಮರವನ್ನು ಬಲಿ ಹಾಕಿ ತಾನೇ ನಮ್ಮ ಮಹೋನ್ನತ ನಾಯಕರ ಬಲಿದಾನದ ಬಗ್ಗೆ ನಾವು ಓದೋದು? ಈ ಕಾರಣಕ್ಕಾಗಿರಬಹುದೇ ಪುಸ್ತಕ ಪ್ರೇಮಿಗಳನ್ನು ಪುಸ್ತಕದ ಹುಳು ಎಂದು ನಿಕೃಷ್ಟವಾಗಿ ಕರೆಯುವುದು?

ಪುಸ್ತಕದ ನರಿ. ಪುಸ್ತಕಗಳನ್ನು ನುಂಗುವ, ಅತಿಯಾದ ಕಲ್ಪನಾಮಯಿಯಾಗಿದ್ದು ಮತ್ತು ಅತಿ ಹೆಚ್ಚು ಪುಸ್ತಕದಂಗಡಿಯ ಖರ್ಚುಳ್ಳ ಒಂದು ಪುಟ್ಟ ಸಸ್ತನಿ. ಪುಸ್ತಕದ ನರಿಗಳು ನಾನಾ ತೆರನಾದ ವಾಸಸ್ಥಳಗಳಲ್ಲಿ ಬದುಕುತ್ತವೆ ಮತ್ತು ಓದಲೆಂದು ಅಸಹಜವಾದ ಸ್ಥಳವನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಅವು ಒಂಟಿಯಾಗಿ ಬೇಟೆ ಯಾಡಲು ಇಷ್ಟಪಡುತ್ತವೆ ಮತ್ತು ತಮ್ಮ ಹಿಂಡಿನೊಂದಿಗೆ ತಮ್ಮ ಬೇಟೆಯ ಬಗ್ಗೆ ಚರ್ಚಿಸುತ್ತವೆ.

ಈ ಮೇಲಿನ ಮಾತುಗಳು ಪುಸ್ತಕಗಳನ್ನು ಪ್ರೀತಿಸುವ ವ್ಯಕ್ತಿಯೊಬ್ಬರ ಬ್ಲಾಗ್ನಿಂದ ಸಿಕ್ಕಿದ್ದು. ಓದುಗನನ್ನು ಹುಳು ವಿನೊಂದಿಗೆ ಹೋಲಿಸದೆ ನರಿಯೊಂದಿಗೆ ಹೋಲಿಸಿಕೊಂಡು ಬರೆದ ಸಾಲುಗಳು. ಪುಸ್ತಕದ ನರಿಗೂ, ನರನಿಗೂ ಎಷ್ಟೊಂದು ಸಾಮ್ಯ ನೋಡಿ.

ಈಗ ಹೇಳಿ ನೀವು ಪುಸ್ತಕದ ಹುಳುವೋ ಅಥವಾ ಪುಸ್ತಕದ ಗುಳ್ಳೆ ನರಿಯೋ ಎಂದು.

ನನ್ನ ಬಗ್ಗೆ ಕೇಳಿದಿರಾದರೆ ನನ್ನ ಪುಸ್ತಕ ಪ್ರೀತಿ ಹೀಗೆ. an ardent book enthusiast. ಪುಸ್ತಕದ ಮೇಲ್ಮೆಯನ್ನು ಅಪ್ಯಾಯಮಾನದಿಂದ ಓರ್ವ ಮಮತಾಮಯಿ ತಂದೆ ತನ್ನ ಮಗನ ತಲೆ ಸವರುವಂತೆ ಸವರಿ, ಪುಸ್ತಕದ ಪುಟಗಳನ್ನು ತಿರುವುತ್ತಾ ಅದರೊಳಗಿನಿಂದ ಬರುವ ನತದೃಷ್ಟ ಮರದ ತೊಗಟೆಯ ಘಮ ಘಮ ವಾಸನೆಯನ್ನು ಆಸ್ವಾದಿಸುತ್ತಾ, ಅಕ್ಷರಗಳ ಜೋಡಣೆ, ಅಲಂಕಾರದ ಚೆಂದಕ್ಕೆ ತಲೆದೂಗುತ್ತಾ, ಮುನ್ನುಡಿ, ಹಿನ್ನುಡಿ ಬರೆದವರ ಬಗ್ಗೆ ಕಲ್ಪಿಸಿಕೊಳ್ಳುತ್ತಾ, ಬರೆದವ ಎಷ್ಟು ಸಂಪಾದಿಸಿರಬಹುದೆಂದು ಲೆಕ್ಕ ಹಾಕುತ್ತಾ, ಕೊನೆಗೆ, ಓರೆಗಣ್ಣಿನಿಂದ ಈ ಪುಸ್ತಕಕ್ಕೆ ಎಷ್ಟಿರಬಹುದು ಎಂದು ಭಯ, ಆಸೆ ಮಿಶ್ರಿತ ಭಾವನೆಗಳಿಂದ ನೋಡುವುದೇ ನನ್ನ ಮಟ್ಟಿಗಿನ ಹುಮ್ಮಸ್ಸು, enthusiasm. ಹಾಗಾಗಿ ನಾನು ಅತ್ತ ಯಕಃಶ್ಚಿತ್ ಹುಳುವೂ ಅಲ್ಲ, ಇತ್ತ scheming ಗುಳ್ಳೆ ನರಿಯೂ ಅಲ್ಲ.

ಅತ್ಯಂತ ಸುಂದರ ಸೌದಿಗಳು

ಜೇಡನ ತಾಣವನ್ನು ತಡಕಾಡುತ್ತಿದ್ದಾಗ ಎಡವಿದ ತಾಣ ಸೌದಿ ಮಹಿಳೆಯ ಬ್ಲಾಗ್. ಇಲ್ಲಿ ಹತ್ತು ಅತ್ಯಂತ ಸುಂದರ ಪುರುಷ ಮತ್ತು ಮಹಿಳೆಯರ ಚಿತ್ರಗಳನ್ನೂ ಅವರ ಕಿರು ಪರಿಚಯ ಸಹ ಕೊಡಲಾಗಿದೆ. ಸುಂದರ ಎಂದರೆ earth shattering or heaven cleaving ಎಂದಾಗಿರಬೇಕಿಲ್ಲ. ತಮ್ಮ ಪ್ರತಿಭೆ ಮತ್ತು ಪ್ರಭಾವದಿಂದಲೂ ಜನ ಸುಂದರರಾಗಬಹುದು ಅಲ್ಲವೇ? ಆದರೆ ಇಲ್ಲಿ ಬಹಿರಂಗ ಸೌಡ್ನರ್ಯದ ಕೊರತೆ ಇದೇ ಎಂದಲ್ಲ, ಆದರೆ ಹಾಲಿವುಡ್ ನ ಬ್ರಾಡ್ ಪಿಟ್ ಅಥವಾ ನಮ್ಮ ದೇಸೀ ಸೆಕ್ಸೀ ಕರೀನಾಳಂತೆಯೋ ಅಲ್ಲ ಇಲ್ಲಿರುವವರು. ಸೌದಿ ಒಂದು ನಿಗೂಢ ದೇಶ, ಹಾಗಾಗಿ ತಮಗೂ ಆ ನಿಗೂಢತೆ ಯ ಪರಿಚಯವಾಗಲಿ ಎಂದು ಈ ಬ್ಲಾಗನ್ನು “ಪುನಃ ಬ್ಲಾಗಿ” ಸುತ್ತಿದ್ದೇನೆ. ಎಂಜಾಯ್! 

via Saudiwoman’s Weblog

ತೆರಿಗೆ ವಸೂಲಿ ಮಾಡುವವರು ಮತ್ತು ವೇಶ್ಯೆಯರು

ಪ್ರತೀ ವರ್ಷವೂ ನಡೆಯುವ ಆಸ್ಟ್ರಿಯಾದ ವಾರ್ಷಿಕ ಮೋಜಿನ ಕಾರ್ಯಕ್ರಮದಲ್ಲಿ (annual ball season) ಮೊರಾಕ್ಕೋ ದೇಶದ ಷೋ ಗರ್ಲ್ ಮತ್ತು ಇಟಲಿಯ ಪ್ರಧಾನಿ ಬೆರ್ಲಸ್ಕೊನಿಯವರ ಗರ್ಲ್ ಫ್ರೆಂಡ್ ಹದಿಹರೆಯದ  “ರೂಬಿ” ಯ ಉಪಸ್ಥಿತಿಯನ್ನು ಅಲ್ಲಿಗೆ ಬಂದ ಅತಿಥಿಗಳು ವಿರೋಧಿಸಿದರು. ಇದೊಂದು ಗೌರವಾನ್ವಿತರ ಸಮಾರಂಭ ಮತ್ತು ಮೋಜಿನ ಕಾರ್ಯಕ್ರಮವಾಗಿದ್ದು ಇಲ್ಲಿಗೆ ಕರೆವೆಣ್ಣು ಗಳು ಬಂದು ಘನತೆಯನ್ನು ಕುಗ್ಗಿಸುತ್ತಿದ್ದಾರೆ ಎಂದು ದೂರಿದರು. ಈಕೆಯನ್ನು ಕರೆತಂದಿದ್ದ ಶ್ರೀಮಂತನೊಬ್ಬನಿಗೆ ಮುಂದಿನ ವರ್ಷ ಈ ಸಮಾರಂಭಕ್ಕೆ ಟಿಕೆಟ್ ನೀಡೋದಿಲ್ಲ ಎಂದು ಆಯೋಜಕರು ಹೇಳಿದರು. ಹೀಗೆ, ಪ್ರತಿಷ್ಠಿತ ವ್ಯಕ್ತಿಗಳ, ಶ್ರೀಮಂತರ, ಪ್ರಭಾವೀ  ರಾಜಕಾರಣಿಗಳ ಮತ್ತ ಅವರ ಸಂಸಾರವಂದಿಗರ ಮೋಜಿನ ಮೇಳಕ್ಕೆ ಯಕಃಶ್ಚಿತ್ call girl ಬರುವುದು ಎಂದರೆ ಅಪರಾಧವೇ. ಮೋಜು ಮುಗಿದ ನಂತರ ಅಲ್ಲಿಗೆ ಬಂದ ಕೆಲವರು ಇದೇ call girl ಗಳು ಮಾಡೋ ಕೆಲಸವನ್ನೇ ಮಾಡಿದರೂ ಅದು ಪ್ರತಿಷ್ಠೆ, ಘನತೆ, ಶ್ರೀಮಂತಿಕೆಯ ಕಂಬಳಿಯಡಿ ನುಸುಳಿ ಹೋಗುತ್ತದೆ, we are having ball of a time, you see? ಅದಿರಲಿ, ಈ ಸಮಸ್ಯೆಗೆ ಧಾರ್ಮಿಕ ತಿರುವನ್ನು ನೀಡಿದರು ಕ್ರೈಸ್ತ ಪಾದ್ರಿಯೊಬ್ಬರು. ರೂಬಿಯ ಉಪಸ್ಥಿತಿಯನ್ನು ಸಮರ್ಥಿಸುತ್ತಾ ಪಾದ್ರಿಗಳು ಹೇಳಿದರು,

“ತೆರಿಗೆ ವಸೂಲಿ ಮಾಡುವವರು ಮತ್ತು ವೇಶ್ಯೆಯರು ಎಲ್ಲರಿಗಿಂತ ಮೊದಲು ದೇವನ ಸಾಮ್ರಾಜ್ಯವನ್ನು ಸೇರುವರು”. ಇದಕ್ಕೆ ಉತ್ತರ ಗಡಚ್ಚಿಕ್ಕುವ ಡ್ರಂ ಗಳ ಸದ್ದಿನಲ್ಲಿ, ಕುಣಿತದ ಗದ್ದಲದಲ್ಲಿ, ರೂಬಿಯ ಮೈಮಾಟದ ಪ್ರದರ್ಶನದಲ್ಲಿ ಕೇಳಿಸಲೇ ಇಲ್ಲ.

ಓರ್ವ ಧೀಮಂತ ಪತ್ರಕರ್ತ

ಇಂದು ಬೆಳಿಗ್ಗೆ ನನ್ನ ಮನಸ್ಸಿನ ಮೇಲೆ ವಿವಿಧ ಭಾವನೆಗಳು ಅಲೆಗಳಂತೆ ಅಪ್ಪಳಿಸುವಂತೆ ಮಾಡಿದ ವಿಚಿತ್ರ ವರದಿಯೊಂದು ಕಣ್ಣಿಗೆ ಬಿತ್ತು. ಆಘಾತ, ದಿಗ್ಭ್ರಮೆ, ಕನಿಕರ, ಹೇಸಿಗೆ ಹೀಗೆ ನಾನಾ ಭಾವನೆಗಳನ್ನು ಒಮ್ಮೆಗೇ ಹುಟ್ಟುಹಾಕಿದ ಒಂದು ವರದಿ;   ಒಬ್ಬ ಪತ್ರಕರ್ತ ತನ್ನ ಮನಃಪರಿವರ್ತನೆಯಾದ ಕಾರಣ ಪತ್ರಕರ್ತನ ಕಸುಬಿಗೆ “ಬೈ ಬೈ” ಹೇಳಿದ್ದು. ಇಂಗ್ಲೆಂಡಿನ ಟ್ಯಾಬ್ಲಾಯ್ಡ್ daily star ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ “ರಿಚರ್ಡ್ ಪೆಪ್ಪಿಯಾಟ್” ಪತ್ರಿಕೆಯ ಧಣಿಗೆ ಬರೆದ ಬಹಿರಂಗ ಪತ್ರ ಪತ್ರಿಕಾ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ, ಹಾಗೆಯೇ ತಮ್ಮ ರಹಸ್ಯ ಅಜೆಂಡಾ ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸುದ್ದಿ ಮಾಧ್ಯಮಗಳು ಎಂಥ ನೀಚ ಕೃತ್ಯಕ್ಕೂ ಇಳಿಯಲು ಸಿದ್ಧ ಎನ್ನುವುದನ್ನು ಸ್ಥಿರೀಕರಿಸಿದೆ.      

ರಿಚರ್ಡ್ ಪೆಪ್ಪಿ ಯಾಟ್ ರಾಜೀನಾಮೆ ನೀಡಲು ಕಾರಣವಾದ ವರದಿಗಳನ್ನ ನೋಡಿ.

ಇಂಗ್ಲಿಷ್ ಡಿಫೆನ್ಸ್ ಲೀಗ್ (EDL) ಎನ್ನುವ ಸಂಘಟನೆ ಇಂಗ್ಲೆಂಡಿಗೆ ವಲಸೆ ಬರುವವರ ವಿರುದ್ಧ ಹೋರಾಡುತ್ತದೆ. ಬಿಳಿಯರ ಹಕ್ಕುಗಳು ಮಾಯವಾಗುತ್ತಿವೆ ಎಂದು ಪುಕಾರು ಹಬ್ಬಿಸುತ್ತದೆ. ಇದೊಂದು ಮುಸ್ಲಿಂ ವಿರೋಧಿ, ಬಲಪಂಥೀಯ ಸಂಘಟನೆ. ಈ ಸಂಘಟನೆಗೆ ರಾಜಕೀಯ ಪಸ್ಖವಾಗುವ ಇರಾದೆ ಇಲ್ಲ. daily star ನ ಪತ್ರಕರ್ತ edl ನಾಯಕನೊಬ್ಬನ ಸಂದರ್ಶನ ದಲ್ಲಿ ರಾಜಕೀಯ ಸೇರುವ ಬಗ್ಗೆ ಕೇಳಿದಾಗ ನಾಯಕ ಅಂಥ ಉದ್ದೇಶ ಸದ್ಯಕ್ಕಿಲ್ಲ ಎನ್ನುತ್ತಾನೆ. ಆದರೆ ಪತ್ರಿಕೆ ವರದಿ ಮಾಡಿದ್ದು edl ರಾಜಕೀಯ ಸೇರಲಿದೆ ಎಂದು. ಈ ಸುದ್ದಿ ಮುಖಪುಟದಲ್ಲಿ ರಾರಾಜಿಸಿದಾಗ ಭಯಗ್ರಸ್ಥನಾದ ಪತ್ರಿಕೆ ಮಾರುವ ಮುಸ್ಲಿಂ ವ್ಯಕ್ತಿಯ ಮುಖದ ಮೇಲಿನ ದುಗುಡ ನೋಡಿ ರಿಚರ್ಡ್ ಕೆಲಸಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸುತ್ತಾನೆ.

daily star ಪತ್ರಿಕೆ ತನ್ನ ವರದಿಗಾರಿಗೆ ಕೊಡುವ brief ಏನೆಂದರೆ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುವ (islamophobia) ಲೇಖನಗಳನ್ನು ಸೃಷ್ಟಿಸಿ ಕೊಡಬೇಕು. ಈ ಕೆಲಸಕ್ಕೆ ಪತ್ರಕರ್ತರ ಮನಃಸ್ಸಾಕ್ಷಿ ಒಪ್ಪದೇ ಇದ್ದ ಪಕ್ಷದಲ್ಲಿ ನೀನಲ್ಲದಿದ್ದರೆ ಮತ್ತೊಬ್ಬ ಎನ್ನುವ ಧೋರಣೆ ಆ ಪತ್ರಿಕೆಯದು. ಕೆಲಸದಿಂದ ವಜಾ ಆಗುವ ಭಯ ದಿಂದ ಪತ್ರಕರ್ತರು ಪತ್ರಿಕೆಯ ವಿರುದ್ಧ ಹೋಗಲು ತಯಾರಿಲ್ಲ. 

ಮುಸ್ಲಿಮರಿಗಾಗಿ ಮಾತ್ರ ಇರುವ ಶೌಚಗಳನ್ನು ನಮ್ಮ ತೆರಿಗೆ ಹಣದ ಖರ್ಚಿನಲ್ಲಿ ಕಟ್ಟಲಾಗುತ್ತಿದೆ ಎನ್ನುವ ಸುಳ್ಳು ವರದಿಯನ್ನು ತಾನು ಸೃಷ್ಟಿಸಿದೆ ಎನ್ನುವ ಈತನ ಮಾತನ್ನು ಕೇಳುವಾಗ ನಮ್ಮ ವರದಿಗಾರರು ಗಿಳಿ ಪಾಠದಂತೆ ಯಾವಾಗಲೂ ಪುನರಾವರ್ತಿಸುವ ಮುಸ್ಲಿಮರಿಗೆ ಮೀಸಲಾತಿ ಎನ್ನುವ ವರದಿಗಳು ಕಣ್ಣ ಮುಂದೆ ಬರುತ್ತವೆ. ಮುಸ್ಲಿಮರಿಗೆ ಮಾತ್ರವಲ್ಲ ಮೀಸಲಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು, ಹಿಂದುಳಿದ ಜಾತಿ ಮುಂತಾದ  ಹಲವು ಸಾಮಾಜಿಕ ಗುಂಪುಗಳಿಗೂ ಇವೆ ರಿಯಾಯಿತಿ ಮತ್ತು ಮೀಸಲಾತಿ ಎನ್ನವುದು ಇವರಿಗೆ ತಿಳಿದಿದ್ದರೂ ತಿಳಿಯುವುದಿಲ್ಲ.

ಪ್ರತೀ ನಿತ್ಯವೂ ಇಸ್ಲಾಂ ಧರ್ಮೀಯರನ್ನು ಗುರಿಯಾಗಿಸಿ “ ಅವರು, ಮತ್ತ ನಾವು (us and them) “ ಎನ್ನುವ ಭಾವನೆ ಹುಟ್ಟಿಸುವ ಲೇಖನ ಬರೆಯಲೇಬೇಕು. ಒಪ್ಪದೇ ಇದ್ದರೆ ನನ್ನ ಕೆಲಸ ಹೋಗಬಹುದೋ ಎಂದು ಮಾಡುತ್ತಿದ್ದೆ. ನನ್ನ ಫೋನಿನ speed dial ನಲ್ಲಿ ಒಬ್ಬ ಮೌಲ್ವಿಯ ನಂಬರ್ ಇಟ್ಟುಕೊಂಡಿದ್ದೇನೆ. ಬೆಳಗಾದ ಕೂಡಲೇ ಈ ತಲೆ ಕೆಟ್ಟ ಮೌಲ್ವಿ ಗೆ ಫೋನಾಯಿಸಿ ಸಲಿಂಗ ಕಾಮಿಗಳಿಗೆ ಮತ್ತು ಕುಡುಕರಿಗೆ ಕಲ್ಲು ಹೊಡೆಯುವ ಶಿಕ್ಷೆ ಇದೆಯೇ ಎಂದು ಕೆಣಕಿದ ನಂತರ ಆ ಮೌಲ್ವಿ ಕೆರಳಿ ಫತ್ವ ನೀಡುವ ರೀತಿಯಲ್ಲಿ ಹೇಳುವುದನ್ನು ಭಕ್ತಿಯಿಂದ ವರದಿ ಮಾಡುತ್ತಿದ್ದೆ. 

ಓರ್ವ ನಟಿ ತಾನು ಹೊರಹೋಗುವಾಗ ಮಾಡಿಕೊಳ್ಳುವ ಸಿದ್ಧತೆ ಗೆ ತೆಗೆದುಕೊಳ್ಳುವ ಸಮಯವನ್ನೂ ಕಡಿಮೆ ಮಾಡಲು “ಸಂಮೋಹನ” (hypno therapy) ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು  ಹುಟ್ಟಿಸಿ ಕೊಂಡು ಬರೆದಿದ್ದ ಈ ಪತ್ರಕರ್ತ ಹೇಳುತ್ತಾನೆ, “ಈ ಸಂಮೋಹನ ದ ಬಗ್ಗೆ ನನಗೆ ಹೇಗೆ ತಿಳಿಯಿತು? ಸಂಜೆ ಆರರ ಸಮಯ ಖಾಲಿ ಹಾಳೆ ನೋಡುತ್ತಾ ಮಗ್ನನಾಗಿದ್ದಾಗ ನನ್ನ ಕುಂಡೆ ಯೊಳಗಿಂದ ಎಳೆದು ತಂದೆ ಈ ಕಲ್ಪನೆಯನ್ನು ಎಂದು ಹೇಳುತ್ತಾನೆ. ಆದರೆ ಈ ಕಲ್ಪನಾ ಬರಹ ನನಗೆ ೧೫೦.೦೦ ಪೌಂಡ್ ಗಳ ಧನವನ್ನೂ ಒದಗಿಸಿತು ಎಂದು ಹೇಳುತ್ತಾನೆ.

ರಿಚರ್ಡ್ ಹೇಳುತ್ತಾನೆ, ನನಗೆ ಗೊತ್ತು ಡೈಲಿ ಮೇಲ್ ಪತ್ರಿಕೆ (ನೈತಿಕತೆ ಇಲ್ಲದ) ಕುರೂಪಿಗಳ ಹಿಂಡಿನಲ್ಲಿ ಎದ್ದು ಕಾಣುವ ಮತ್ತೊಂದು ಕುರೂಪಿ ಪತ್ರಿಕೆ ಎಂದು.

ಇಂಥ ಸುಳ್ಳು ವರದಿಗಳನ್ನು ಸೃಷ್ಟಿಸುವವನು ಬರೀ ಒಬ್ಬ ವ್ಯಕ್ತಿಯಾಗಿದ್ದರೆ ಅವನನ್ನು schizophrenic (ಭ್ರಮಾ ಲೋಕದಲ್ಲಿರುವವ) ಎಂದು ಆಸ್ಪತ್ರೆಗೆ ಅಟ್ಟಬಹುದಿತ್ತು, ಆದರೆ ಈ ಕೆಲಸವನ್ನ ಪತ್ರಿಕೆ ಮಾಡಿದಾಗ ಅದೆಲ್ಲ ಓಕೆ ಎನಿಸಿಕೊಳ್ಳುತ್ತದೆ ಎಂದು ರಿಚರ್ಡ್ ನ ಅಭಿಪ್ರಾಯ. ಪತ್ರಕರ್ತ ರಿಚರ್ಡ್ ನಿಗೆ ಅವನ ಜೀವನದ ಯಾವುದಾದರೂ ಒಂದು ಸನ್ನಿವೇಶದಲ್ಲಿ ಸಿಕ್ಕಿರಬಹುದಾದ ನೈತಿಕ ಶಿಕ್ಷಣ ತನ್ನ ಲೇಖನಿಯನ್ನು ಮಾರಿಕೊಳ್ಳುವ ಕಸುಬಿಗೆ ಎಡಗಾಲಿನಲ್ಲಿ ಒದ್ದು ಹೊರಬರಲು ಪ್ರೇರಣೆ ನೀಡಿತು.  ತಡವಾಗಿಯಾದರೂ ಬಂದ ಈ ಉನ್ನತ ಮಟ್ಟದ ನೈತಿಕತೆ ಬೇರೆ ಪತ್ರಕರ್ತರುಗಳಲ್ಲೂ ಬರಬಹುದೇ? ಆ ಸುದಿನಕ್ಕಾಗಿ ನಾವು ಕಾಯಬಹುದೇ?     

ನನಗೂ ಆಗಾಗ ಅನ್ನಿಸಿದ್ದಿದೆ. ಈ ರೀತಿ ಒಂದು ಧರ್ಮೀಯರ ಮೇಲೆ ಕಪೋಲ ಕಲ್ಪಿತ ವರದಿಗಳನ್ನು, ಊಹಾಪೋಹಗಳನ್ನು ಸೃಷ್ಟಿಸುತ್ತಾ ಸಮಾಜದಲ್ಲಿ ಗಲಭೆ, ಕ್ಷೋಭೆಗೆ ಕಾರಣವಾಗುವ ಲೇಖನಿ ಹಿಡಿದ ಈ so called journalist ಗಳಿಗೆ ಭಗವಂತನು ಆತ್ಮವೊಂದನ್ನು ಫಿಟ್ ಮಾಡಿದ್ದಿದ್ದರೆ ಅವರು ತಮ್ಮ ಕಸುಬಿಗೆ ಎಂದೋ ವಿದಾಯ ಹೇಳುತ್ತಿದ್ದರು ಎಂದು. ತಮ್ಮ ವರದಿ ಕಾರಣ ಜನರ ಸಂಶಯ ಗುಮಾನಿಗೆ ಒಳಪಟ್ಟು, ದಬ್ಬಾಳಿಕೆಗೆ ಶೋಷಣೆಗೆ ಗುರಿಯಾಗುವ ಅಮಾಯಕನನ್ನು ನೋಡಿದಾಗ ಅವರಿಗೆ ಏನೂ ಅನ್ನಿಸುವುದಿಲ್ಲವೇ? ಜೇಬು ಭರ್ತಿಯಾಗುತ್ತಿದ್ದಂತೆ ಬುದ್ಧಿ ದಿವಾಳಿತನದ ದಾರಿ ಹಿಡಿದ್ದು ಬಹುಶಃ ಅವರುಗಳಿಗೆ ಕಾಣುವುದಿಲ್ಲವೇನೋ.  

ಪತ್ರಿಕೆಗಳಲ್ಲ್ಲಿ ಯಾವುದಾದರೂ ಉತ್ಪನ್ನಗಳ ಬಗ್ಗೆ ಲೇಖನ ಬಂದರೂ ಆ ಲೇಖನದ ಹಿಂದೆ ಹಣದ ವಾಸನೆ ಬಡಿದೇ ತೀರುತ್ತದೆ. ವಿಮರ್ಶೆ ಮಾಡುವ ನೆಪದಲ್ಲಿ ಉತ್ಪಾದನೆಗಳ ಬಿಕರಿಗೆ ಕಂಪೆನಿಗಳಿಗೆ ಸಹಾಯ ಒದಗಿಸುವ ಪತ್ರಕರ್ತರಿದ್ದಾರೆಂದು ಕೇಳಿದ್ದೇನೆ. ವೈಯಕ್ತಿಕ ನಿಂದನೆ ಮತ್ತು ತೇಜೋವಧೆಯಂಥ  ಕೆಲಸವಂತೂ ಎಷ್ಟು ಸೊಗಸಾಗಿ ಮಾಡುತ್ತವೆ ಪತ್ರಿಕೆಗಳು ಎಂದು ಬೇರೆ ಹೇಳಬೇಕಿಲ್ಲ.  

ದಿನ ನಿತ್ಯದ ಆಗುಹೋಗುಗಳ ಬಗ್ಗೆ ನಿಗಾ ಇಟ್ಟುಕೊಂಡು ಕುತೂಹಲದಿಂದ ನಿರಂತರವಾಗಿ ಸುದ್ದಿಗಳೊಂದಿಗೆ ನಂಟು ಬಯಸುವ ಓದುಗ ಕೇವಲ ಸುದ್ದಿ ಮಾತ್ರವನ್ನಲ್ಲ ಅದರೊಂದಿಗೆ ಬರುವ ಹಲವು ವಿಚಾರಗಳನ್ನೂ ಅರಿಯುತ್ತಾ ಸಾಗುತ್ತಾನೆ. ಹಾಗಾಗಿ ಮಾಧ್ಯಮ ಎನ್ನವುದು ಒಂದು ರೀತಿಯ ಮುಕ್ತ ವಿಶ್ವ ವಿದ್ಯಾಲಯ. ಆದರೆ ಈ ಪವಿತ್ರ ಕಸುಬನ್ನು ಲಾಭ ಗಳಿಸುವ ಉದ್ದಿಮೆಯಾಗಿ ಮತ್ತು ತಮ್ಮ ರಾಜಕೀಯ ಚಿಂತನೆಗಳನ್ನು ಪ್ರಚುರಪಡಿಸಲು propaganda machinery ಆಗಿ ಉಪಯೋಗಿಸಿಕೊಂಡಾಗ ಆಗುವ ಅನಾಹುತವೇ ನಾವು ಇಂದು ಕಾಣುತ್ತಿರುವ ವೈಮನಸ್ಸು, ಸಂಶಯ ಮತ್ತು ಇವೆರೆಡರ ಕಾರಣ ನಡೆಯುವ ಗಲಭೆ, ಹಿಂಸೆ.

ನಾವು ಹಣ ಕೊಟ್ಟು ಕೊಳ್ಳುವ ವಸ್ತುಗಳ ಬಗ್ಗೆ ನಿಗಾ ಇಡುತ್ತೇವೆ. ವಸ್ತುವಿನ ಗುಣಮಟ್ಟ, ತಯಾರಾದ ತಾರೀಖು, ಕಂಪೆನಿ, ಅದರಲ್ಲಿರಬಹುದಾದ ingredients, ತಯಾರಿಸಿದ ಕಂಪೆನಿಯು ISO, HACCP ಮುಂತಾದ certification  ಗಳನ್ನು ಹೊಂದಿದೆಯೇ ಇತ್ಯಾದಿ. ಆದರೆ ನಾವು ಕೊಳ್ಳುವ ಪತ್ರಿಕೆಗಳ ಗುಣಮಟ್ಟದ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ?ಅದರಲ್ಲಿ ಬರುವ ಕಂಟೆಂಟ್ ಗಳ ಬಗ್ಗೆಯಾಗಲೀ, ಅದರಲ್ಲಿ ಬರುವ ವಿಷಯಗಳು, ಮತ್ತು ಆ ವಿಷಯಗಳ ಹಿಂದಿನ ಕರ್ತೃಗಳ ನಾವೇಕೆ ಅಸಡ್ಡೆ ತೋರಿಸುತ್ತೇವೆ? ಬೇರೆಲ್ಲಾ PRODUCT ಗಳಿಗೆ ಇರುವಂತೆ  ಪತ್ರಿಕೆಗಳಿಗೂ ಯಾಕೆ ಒಂದು CERTIFICATION ಇರಕೂಡದು? ಪ್ರಾಥಮಿಕ ಶಾಲೆಯ ಬಾಗಿಲನ್ನೂ ಕಾಣದವನೂ ಪತ್ರಕರ್ತನಾಗಿ ತನಗೆ ತೋಚಿದ ರೀತಿಯಲ್ಲಿ ವರದಿಗಳನ್ನು, ಜನರಿಗೆ ಬಡಿಸಿದರೆ ಅದರ ಪರಿಣಾಮ ಸಮಾಜದ ಮೇಲೆ ಹೇಗಾಗಬಹುದು?  journalistic standard, ethics ಮತ್ತು ಪತ್ರಿಕೋದ್ಯಮದ ಗುಣಶ್ರೇಷ್ಠತೆ (merit) ಇವುಗಳ ಅವಶ್ಯಕತೆ ಇಲ್ಲವೇ ಪ್ರಜಾಪ್ರಭುತ್ವದ ನಾಲ್ಕನೇ ವ್ಯವಸ್ಥೆ (fourth estate) ಎಂದು ಕರೆಯಲ್ಪಡುವ ಪತ್ರಿಕೋದ್ಯಮಕ್ಕೆ? ಅಥವಾ ಹಣ ಮತ್ತು ಅಜೆಂಡಾದ ಹಿಂದೆ ಬಿದ್ದು “ಫಿಫ್ತ್ ಕಾಲಂ” ಆಗಿ ಕುಸಿದು ಬಿಟ್ಟಿತೆ ಪತ್ರಿಕೋದ್ಯಮ?

ಕೊನೆಯದಾಗಿ ತನ್ನ ಧಣಿಗೆ ರಿಚರ್ಡ್ ಹೀಗೆ ಹೇಳುತ್ತಾನೆ. “ನಿನ್ನ ಪತ್ರಿಕೆಯವರು ಹೆಣೆಯುವ ಪದಗಳು, ವಿಷಯಗಳು ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎನ್ನುವ ಜ್ಞಾನ ನಿನಗಿಲ್ಲದಿದ್ದರೆ ಒಂದು ಕಾಮ ಪ್ರಚೋದಕ (porn) ಪತ್ರಿಕೆಯನ್ನು ಶುರು ಮಾಡು. ಅಥವಾ ಅವರು ಬರೆದ ಲೇಖನಗಳು ಪರಿಣಾಮ ಬೀರುತ್ತವೆ ಎಂದು ನಿನಗನ್ನಿಸಿಯೂ ಸಹ ನಿನ್ನ ಸಂಪಾದಕರು ಅನುಮತಿಸುವ ಪ್ರಚೋದಕ ಲೇಖನಗಳನ್ನು ತಡೆಯುವ ಮನಸ್ಸು ನಿನಗೆ ಇಲ್ಲದಿದ್ದರೆ ಬ್ರಿಟನ್ ನಂಥ ಒಂದು ಮಹೋನ್ನತ ದೇಶಕ್ಕೆ ನೀನೊಬ್ಬ ಕಂಟಕಪ್ರಾಯ ಎಂದು ತಿಳಿದುಕೋ”.

ಹತಾಶೆಯ ಮತ್ತು ಕ್ರೋಧ ತುಂಬಿದ ಮೇಲಿನ ಮಾತುಗಳು daily star ನ ಧಣಿಗೆ ಮಾತ್ರ ಅನ್ವಯವಾಗದೇ ಲೇಖನಿಯ ಪಾವಿತ್ರ್ಯದ ಅರಿವಿಲ್ಲದ ಎಲ್ಲರಿಗೂ ಅನ್ವಯವಾಗುತ್ತದೆ.         

fifth column: A fifth column is a group of people who clandestinely undermine a larger group such as a nation from within.

ಸಂಪೂರ್ಣ ಲೇಖನಕ್ಕೆ ಈ ಕೊಂಡಿ ಕ್ಲಿಕ್ಕಿಸಿ.

http://www.guardian.co.uk/media/2011/mar/04/daily-star-reporter-letter-full

ನೀವೂ ಸ್ವಲ್ಪ ನಕ್ಕು ಹಗುರವಾಗಿ

 

ಲಿಬ್ಯಾದ ಅಧ್ಯಕ್ಷ ಮುಅಮ್ಮರ್ ಗದ್ದಾಫಿ ವಿರುದ್ಧ ಜನಾಂದೋಲನ ದಿನಗಳೆದಂತೆ ವಿಕೋಪಕ್ಕೆ ಹೋಗುತ್ತಿದೆ. ಜನ ಸಾಯುತ್ತಿದ್ದಾರೆ, ಗದ್ದಾಫಿ ತನ್ನ ಹಿಂದಿನ ಪೊಗರು ಬಿಡದೆ ಲಿಬಿಯನ್ನರನ್ನು ಇಲಿ, ಜಿರಲೆಗಳಿಗೆ ಹೋಲಿಸಿ ಅವರನ್ನು (ಅವುಗಳನ್ನ) ನಿರ್ನಾಮ ಮಾಡುತ್ತೇನೆ, ಇಡೀ ದೇಶವನ್ನೇ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ನೀಡುತ್ತಿದ್ದಾನೆ. ಈ ಬೆದರಿಕೆ ನೀಡುವಾಗ ತಾನೂ ಅದೇ ದೇಶದಲ್ಲೇ ಹುಟ್ಟಿದವ ಎನ್ನುವ ಸಾಮಾನ್ಯ ಪ್ರಜ್ಞೆಯೂ ಅವನಿಂದ ವಿದಾಯ ಪಡೆದು ಕೊಂಡಿದೆ.

೧೯೬೯ ರ ಕ್ರಾಂತಿಯಲ್ಲಿ ಅಧಿಕಾರದ ಗದ್ದುಗೆಗೆ ಏರಿದ ಕೇವಲ ೨೭ ರ ಪ್ರಾಯದ ಸೇನಾ ಕ್ಯಾಪ್ಟನ್ ಗದ್ದಾಫಿಗೂ, ಇಂದಿನ ಗದ್ದಾಫಿಗೂ ಅಜಗಜಾಂತರ ವ್ಯತ್ಯಾಸ. ಸರ್ವಾಧಿಕಾರಿಗಳೇ ಹೀಗೆ ಏನೋ? ತಾವು ಹಿಡಿದ ಅಧಿಕಾರ ಸ್ವಲ್ಪ ಹೆಚ್ಚು ಕಾಲ ನಿಂತರೂ ಮದ್ಯದ ಬಟ್ಟಲನ್ನು ಬಿಡದ ಮದ್ಯ ವ್ಯಸನಿಯಂತೆ ಆಡಲು ತೊಡಗುತ್ತಾರೆ. ಅಧಿಕಾರದ ಅಮಲಿಗೂ, ಮಧ್ಯದ ಅಮಲಿಗೂ ದೊಡ್ಡ ವ್ಯತ್ಯಾಸವೇನೂ ಕಾಣದು. ೧೯೭೭ ರ ತುರ್ತು ಪರಿಸ್ಥಿತಿ ವೇಳೆಯ ಇಂದಿರಾ ಗಾಂಧೀ ಮತ್ತು ಆಕೆಯ ಮಗ ಸಂಜಯ್ ಗಾಂಧೀಯವರುಗಳ ಸರ್ವಾಧಿಕಾರ ಮಾತ್ರ ನಮಗೆ ಗೊತ್ತು. ಚರಿತ್ರೆಯ ಆ ಒಂದು ಕಹಿ ಪಾಠ ಒಂದು ನೆನಪು ಮಾತ್ರ.

ಸರ್ವಾಧಿಕಾರಿಗಳ ಕೈಗೆ ಸರ್ವ ಅಧಿಕಾರಗಳೂ ಪ್ರಾಪ್ತವಾದಾಗ ಇಂದ್ರಿಯಗಳು ಕಾಲಿಗೆ ಬುದ್ಧಿ ಹೇಳುತ್ತವೆ. ವಿಶೇಷವಾಗಿ ಕಿವುಡುತನ ಆವರಿಸಿ ಕೊಳ್ಳುತ್ತದೆ. ಜನರ ನಾಡಿಮಿತ ಕೇಳುವುದಿಲ್ಲ. ತುನೀಸಿಯಾದ, ಈಜಿಪ್ಟ್ನ ಅಧ್ಯಕ್ಷರುಗಳಿಗೆ ಆಗಿದ್ದು ಇದೇ. ದೀರ್ಘಕಾಲ ಆಡಳಿತ ನಡೆಸುತ್ತಾ ತಮಗೆ ಬೇಕಾದ ಹೊಗಳು ಭಟ್ಟರನ್ನು ತಮ್ಮ ಸುತ್ತಾ ಹೆಣೆದು ಕೊಂಡು ರಾಜ್ಯದ ಜನರನ್ನು ಮರೆತರು. ಒಂದು ಸುದಿನ ಜನರ ಬಂಡಾಯಕ್ಕೆ ಬೆಲೆ ತೆತ್ತರು.

ಸರ್ವಾಧಿಕಾರಿಗಳು delusional ಆಗಿ ಬಿಡುತ್ತಾರಂತೆ ಸುದೀರ್ಘ ಕುರ್ಚಿ ವಾಸದ ಕಾರಣ. ಈ delusion ಬಗ್ಗೆ ಒಂದು ಸುಂದರ ಕಾರ್ಟೂನ್ ಕಾಣಲು ಸಿಕ್ಕಿತು ವೆಬ್ ತಾಣವೊಂದರಲ್ಲಿ. ಈ ಕಾರ್ಟೂನ್ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕೆ ನಾನು. ನಿಮಗೂ ಆ ಅನುಭವ ಆಗಲೇ ಬೇಕಿಂದಿಲ್ಲ ಆದರೆ ತುಟಿಯಂಚಿನಲ್ಲಿ ಮುಗುಳ್ನಗು ವನ್ನಾದರೂ elicit ಮಾಡಿಯೇ ತೀರುತ್ತದೆ ಈ ವ್ಯಂಗ್ಯ ಚಿತ್ರ. ಆಸ್ವಾದಿಸಿ.

ಅಜ್ಜಿಯ ನೆನಪು

ಗೋರ್ಬಚೋಫ್ ೮೦ ನೆ ಜನ್ಮದಿನಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ಅತ್ಯಂತ VISIBLE LEADER ಗಳಲ್ಲಿ ಒಬ್ಬರಾಗಿದ್ದರು ಗೋರ್ಬಚೋಫ್. ೮೦ ರ ದಶಕದಲ್ಲಿ ಅಮೆರಿಕೆಯ ರೊನಾಲ್ಡ್ ರೇಗನ್, ರಷ್ಯದ ಗೋರ್ಬಚೋಫ್ ಸುದ್ದಿ ಮಾಡಿದ್ದೆ ಮಾಡಿದ್ದು. ರೊನಾಲ್ಡ್ ರೇಗನ್ ಒಬ್ಬ ಹಾಲಿವುಡ್ ನಟ. ಕೋಟಿಗಟ್ಟಲೆ ಜನರನ್ನು ತನ್ನ ಚಿತ್ರಗಳ ಮೂಲಕ ರಂಜಿಸಿದ ರೇಗನ್ ರಾಜಕಾರಣದಲ್ಲೂ ತಮ್ಮದೇ ಆದ ಛಾಪನ್ನು ಒತ್ತಿದ್ದರು. ರೇಗನ್ ಮತ್ತು ಗೋರ್ಬಚೋಫ್ ಮಧ್ಯೆ ಇದ್ದುದು ಒಂದು ಕಾಲದ ಧರ್ಮೇಂದ್ರ – ಹೇಮಾ ಮಾಲಿನಿ, ಸಲ್ಮಾನ್ – ಐಶ್ವರ್ಯ ನಡುವಿನ “ಕೆಮಿಸ್ಟ್ರಿ”. ಇವರುಗಳು ನಾಯಕರಾಗಿದ್ದ ಎರಡೂ ದೇಶಗಳೂ ಅಪನಂಬಿಕೆಯಿಂದ ತೊಳಲುತ್ತಿದ್ದರೆ ಇವರೀರ್ವರು ಮಾತ್ರ ಒಬ್ಬರನ್ನೊಬ್ಬರ ಕಾರ್ಯಶೈಲಿಯನ್ನು ಮೆಚ್ಚುತ್ತಾ ಒಂದು ಅಪೂರ್ವವಾದ ಸ್ನೇಹವನ್ನು ಹೆಣೆದಿದ್ದರು. ರೇಗನ್ ರವರು ಗೋರ್ಬಚೋಫ್ ರನ್ನು ಉದ್ದೇಶಿಸಿ Mr. Gorbachev, tear down this wall. ಬರ್ಲಿನ್ ಗೋಡೆ ಬಗ್ಗೆ ಅಮೆರಿಕೆಯ ಅಧ್ಯಕ್ಷ ನೊಬ್ಬ ಸೋವಿಯೆಟ್ ನಾಯಕನಿಗೆ ಈ ರೀತಿ ಸಂಬೋಧಿಸಿ ಹೇಳಬೇಕೆಂದರೆ ಮಾಮೂಲಿ ಕೆಲಸವಲ್ಲ. ಸಿನಿಮಾದ ಡಯಲಾಗ್ ಥರ ಹೊಡೆದೇ ಬಿಟ್ಟರು ರೇಗನ್ ವಿಶ್ವ ದಂಗಾಗುವಂತೆ.

ಗೋರ್ಬಚೋಫ್ ಮಾತು ಬಂತೆಂದರೆ ಗತಿಸಿಹೋದ ನನ್ನ ಪ್ರೀತಿಯ ಅಜ್ಜಿಯ ನೆನಪು ಬರುತ್ತದೆ. ಕನ್ನಡ ಭಾಷೆಯನ್ನ ಬಹು ಚೆನ್ನಾಗಿ ಮಾತನಾಡುತ್ತಿದ್ದ ಅವರು ತುಷಾರ, ಕಸ್ತೂರಿ, ಮಲ್ಲಿಗೆ, ಮಯೂರ, ಸುಧಾ ಮುಂತಾದ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದರು. ನನ್ನ ಅಜ್ಜಿಗೂ ನನ್ನ ಹಾಗೆಯೇ ವಿಶ್ವದ ಆಗುಹೋಗುಗಳ ಮೇಲೆ ಆಸಕ್ತಿ ಹೆಚ್ಚು. ಟೀವೀ ಪರದೆ ಮೇಲೆ ಗೋರ್ಬಚೋಫ್ ಕಾಣಿಸಿದ್ದೇ ತಡ ಕೇಳುತ್ತಿದ್ದರು, ಏನೋ ಅದು, ಅವನ ತಲೆ ಮೇಲೆ ಅದ್ಯಾವಾಗ ಕಾಗೆ ಕಕ್ಕ ಮಾಡಿತು ಎಂದು. ಗೋರ್ಬಚೋಫ್ ಅವರ ಕೂದಲಿಲ್ಲದ ನುಣ್ಣಗಿನ ತಲೆ ಮೇಲೆ ದೊಡ್ಡದಾದ ಮಚ್ಚೆ ಇತ್ತು. ಈ ಮಚ್ಚೆ world famous. ನೋಡಿದವರಿಗೆ ನನ್ನ ಅಜ್ಜಿಗೆ ತೋಚಿದಂತೆಯೇ ಕಾಗೆ ಕಕ್ಕ ಉದುರಿಸಿದ ಹಾಗೆ ಕಾಣುತ್ತಿತ್ತು. ಗೋರ್ಬಚೋಫ್ ರ ನೆನಪಾದಾಗ ಎರಡು ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದ ಅಜ್ಜಿಯ ನೆನಪೂ ಸಹ ಬರುತ್ತದೆ.

ಯಾರ ಸೋಲು, ಯಾರ ಗೆಲುವು

ಬೆಂಗಳೂರು ನಗರ ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ರೋಮಾಂಚಕಾರಿಯಾಗಿ ಕೊನೆಗೊಂಡಿತು. ಗೆಲ್ಲಲು ೩೩೮ ರ ಗುರಿಯನ್ನು ಕೆಚ್ಚೆಯಿಂದ ಸ್ವೀಕರಿಸಿದ ಅಂಡ್ರೂ ಸ್ಟ್ರಾಸ್ ನ ಬಂಟರು ಗೆಲುವಿನ ಹೊಸ್ತಿಲಿನವರೆಗೂ ಬಂದು ಬರಿಗೈಲಿ ಹೋದರು. ಬರಿಗೈಲಿ ಹೋದರು ಆದ್ರೆ  ಹೋಗಿದ್ದು ಮಾತ್ರ ಹಿಗ್ಗುತ್ತಾ, ಮುಗುಳ್ನಗುತ್ತಾ. ಭಾರತೀಯರ ಹೃದಯಗಳು ಅವರ ಬಾಯಿಗಳಿಗೆ ಬರುವಂತೆ ಮಾಡಿದ ನಮ್ಮ ಮಾಜಿ ಯಜಮಾನರುಗಳು ತಾವೆಂಥಾ ಆಟಗಾರರೆಂದು ವಿಸ್ಮಯಕಾರಕವಾಗಿ ತೋರಿಸಿದರು. ವಿಪರೀತ ಕೇಕೆ ಹಾಕುವ ಬೆಂಗಳೂರಿನ ಜನರ  ಸದ್ದಡಗಿಸುತ್ತೇವೆ ಎನ್ನುವಂಥ ಸ್ಪಿನ್ನೆರ್ “ಸ್ವಾನ್” ನ ಹೇಳಿಕೆಗೆ ನ್ಯಾಯ ಒದಗಿಸುವಂತೆ ಆಡಿದ ಇಂಗ್ಲೆಂಡ್ ನಾಯಕ ತನ್ನ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಬೆಂಗಳೂರಿಗರಿಗೆ ಉಣಬಡಿಸಿದ.

ಆದರೆ ೩೩೯ ಮಾಡಿದ್ದು ನಮ್ಮ ಸಾಹಸವಲ್ಲವೇ? ಅಷ್ಟೇ ಅಲ್ಲ ಆ ಗುರಿ ಮುಟ್ಟದಂತೆ ತಡೆಯುವಲ್ಲಿ ನಾವು ಯಶಸ್ವಿಯಾಗಲಿಲ್ಲವೇ? no. a resounding NO. ೩೩೯ ಮಾಡಿ ಮುನ್ನೂರರ ಒಳಗೆ ಅವರ ಇನ್ನಿಂಗ್ಸ್ ಅನ್ನು ಕವುಚಿ ಬಿಟ್ಟಿದ್ದರೆ ನಾವು ಹೆಮ್ಮೆ ಪಡಬಹುದಿತ್ತು. ಆ ರೀತಿ ಮಾಡದೆ ಶತ್ರು ನಮ್ಮ ಅಡುಗೆ ಮನೆ ತನಕ ನುಸುಳಲು ಬಿಟ್ಟಿದ್ದು ನಮ್ಮ ಸೋಲು. ಇಲ್ಲಿ ನಮ್ಮ ಬೌಲಿಂಗ್ ನ ಬಂಡವಾಳ ಬಟಾ ಬಯಲಾಯಿತು. mediocre bowling ಎನ್ನುವ ಹಣೆ ಪಟ್ಟಿ ಸಿಗುವಂತೆ ಮಾಡಿತು. ಹೌದು ಜಹೀರ್ ಖಾನ್ ಆಟದ ಗತಿಯನ್ನೇ ಬದಲಿಸಿದ ಆ ಅದ್ಭುತ ಓವರ್ ಅನ್ನು unleash ಮಾಡದೆ ಇದ್ದಿದ್ದರೆ ಇಂಗ್ಲೆಂಡ್ ಆಟಗಾರರು ಚಿನ್ನಸ್ವಾಮಿ ಮೈದಾನದ ಪ್ರದಕ್ಷಿಣೆ ಹಾಕುತ್ತಿದ್ದರು ಕೇಕೆ ಹಾಕುತ್ತಾ.  ತನ್ನ ವಯಸ್ಸು ನಾಚುವಂತೆ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ತೆಂಡೂಲ್ಕರ್ ಅವರ ಈ ಶತಕವೂ ಮತ್ತೊಂದು ಅಂಕಿ ಅಂಶವಾಗಿ ಉಳಿಯಿತೇ ವಿನಃ “ಅಂತಿಮ ನಗು” ವಿನ ರೋಮಾಂಚನವನ್ನು ನೀಡಲಿಲ್ಲ.

ನಾಸ್ತಿಕನ ಬಾಯಲ್ಲಿ ದೇವರು

 

೮೦ ನೆ ಜನ್ಮ ದಿನವನ್ನು ಆಚರಿಸುತ್ತಿರುವ ಮಿಖಾಯಿಲ್ ಗೋರ್ಬಚೋಫ್ ಸೋವಿಎಟ್ ಒಕ್ಕೊಟವನ್ನು ಛಿದ್ರಗೊಳಿಸಿದ ಕೀರ್ತಿಗೆ ಭಾಜನರು. ಒಕ್ಕೂಟ ಮುರಿದು ಬೀಳುವವರೆಗೆ ಅಮೆರಿಕೆಗೆ ಕಮ್ಯುನಿಸ್ಟ್ ರಷ್ಯಾ ಎಂದರೆ ಒಂದು ರೀತಿಯ ನಡುಕ, ಭಯ. ೮೦ ರ ದಶಕದಲ್ಲಿ ಬಿರುಸಾಗಿ ನಡೆದ ಅಂತಾ ರಾಷ್ಟ್ರೀಯ ವಿದ್ಯಮಾನದಲ್ಲಿ ಅಮೇರಿಕಾ ಬರ್ಲಿನ್ ಗೋಡೆಗೂ ಒಂದು ಗತಿ ಕಾಣಿಸಿ ಸೋವಿಎಟ್ ಮೂರಾಬಟ್ಟೆ ಆಗಿಸುವಲ್ಲಿ ಯಶಸ್ಸನ್ನು ಕಂಡಿತು. ಈ ಯಶಸ್ಸಿಗೆ ಅಮೆರಿಕೆಯ ಕಪಟತನ ಕ್ಕಿಂತ ಒಂಚೂರು ಗೋರ್ಬಚೋಫ್ ಮತ್ತೊಂಚೂರು ಸಾಕ್ಷಾತ್ ಪರಮಾತ್ಮನೇ ಕಾರಣೀಕರ್ತರಾದರು. ದೇವರು ಯಾಕೆ ಬಂದ ಇಲ್ಲಿ ಎನ್ನುತ್ತೀರೋ? ಅಲ್ಲ, ಈ ವಿಶ್ವವನ್ನು, ಅಗಾಧ ಆಗಸವನ್ನು, ಗ್ರಹ, ಧೂಮಕೇತಾದಿಗಳನ್ನು, ನಂತರ ಇವುಗಳೆಲ್ಲವಕ್ಕೆ viceroy ಆಗಿ ಮನುಷ್ಯನನ್ನು ಸೃಷ್ಟಿಸಿ ಭೂಲೋಕಕ್ಕೆ ಕಳಿಸಿದ ತಪ್ಪಿಗೆ ರಷ್ಯಾದವರು ದೇವ ಸ್ಮರಣೆಯೇ ಬೇಡ ಎಂದರೆ  ಅವನಾದರೂ ಏಕೆ ಸುಮ್ಮನಿರಬೇಕು? ಗೋರ್ಬಚೋಫ್ ನನ್ನು ದಾಳವಾಗಿ ಉಪಯೋಗಿಸಿ ವಿಶ್ವದ ಮಹಾ ಶಕ್ತಿ ರಶ್ಯಾವನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟ ದೇವರು ಈಗಲಾದರೂ ನನ್ನ ಜಪ ಮಾಡುತ್ತಾ ಬಿದ್ದಿರಿ ಎಂದು.

ಆಫ್ಘಾನಿಸ್ತಾನದ ಯುದ್ಧದಲ್ಲಿ ತಲ್ಲೀನವಾದ ಅಮೆರಿಕೆಗೆ ಚಾರಿತ್ರಿಕ ಮತ್ತು ರಾಜತಾಂತ್ರಿಕ ತಿರುಗೇಟಾಗಿ ಪರಿಣಮಿಸಿದೆ ಆಫ್ಘನ್ ಯುದ್ಧ ಎಂದು ಗೋರ್ಬಚೋಫ್ ವಾದ. ಆಫ್ಘಾನಿಸ್ತಾನದಲ್ಲಿ ರಷ್ಯಾ ಬೆಂಬಲಿತ ಸರಕಾರವನ್ನು ಉರುಳಿಸಲು ಮುಜಾಹಿದೀನ್ಗಳನ್ನು ಹರಿಬಿಟ್ಟ ಅಮೆರಿಕೆಗೆ ಈಗ ಅದೇ ಮುಜಾಹಿದೀನ್ ಗಳೇ ಸವಾಲಾಗಿ ಪರಿಣಮಿಸಿರುವುದು ಒಂದು ರೀತಿಯ ಕಾಕತಾಳೀಯ ಬೆಳವಣಿಗೆ.” ನನ್ನ ಪ್ರಕಾರ ದೇವರು ತಪ್ಪು ಮಾಡುವವರನ್ನು ಶಿಕ್ಷಿಸಲು ತನ್ನದೇ ಆದ mechanism ಅನ್ನು ಬಳಸುತ್ತಾನೆ ಎಂದು ಗೋರ್ಬಚೋಫ್ ನುಡಿಯುತ್ತಾರೆ. ಕಮ್ಯುನಿಸ್ಟರೆಂದರೆ ನಮ್ಮ ಪ್ರಕಾರ ನಿರೀಶ್ವರವಾದಿಗಳು, ಗೋರ್ಬಚೋಫ್ ಒಬ್ಬ ಕಮ್ಯುನಿಸ್ಟ್. ಇವರ ಬಾಯಲ್ಲಿ ದೇವರ ಪ್ರಸ್ತಾಪವೇ? ಅಥವಾ ನಿರೀಶ್ವರವಾದಿಯಾಗಿದ್ದ ಗೋರ್ಬಚೋಫ್ ರ ಕೊರಳಿಗೆ ಅವರ ಮಿತ್ರ ಅಮೆರಿಕೆಯ ಅಧ್ಯಕ್ಷ ರೊನಾಲ್ಡ್ ರೇಗನ್ ಶಿಲುಬೆ ಕಟ್ಟಿಬಿಟ್ಟರೆ? ಏನೇ ಆದರೂ ಆಫ್ಘಾನಿಸ್ತಾನ ಮಾತ್ರ ಅಮೆರಿಕೆ ಮಟ್ಟಿಗೆ ನೀನೆ ಸಾಕಿದಾ ಗಿಳಿ, ನಿನ್ನಾ ಮುದ್ದಿನ ಗಿಳೀ, ಹದ್ದಾಗಿ ಕುಕ್ಕಿತಲ್ಲೋ….. ಆಗಿದ್ದಂತೂ ಗುನುಗಿಸಲೇಬೇಕಾದ ಬೇಕಾದ ಸತ್ಯವೇ.

ಚಿತ್ರ ಸೌಜನ್ಯ: independent ಪತ್ರಿಕೆ (UK)

ಇಂಥ ಮಾತುಗಳನ್ನು ಎಂದಾದರೂ ಕೇಳಿದ್ದೀರಾ?

ಆರು ವರ್ಷ ಪ್ರಾಯದ ಮುಬೀನ ನನ್ನ ಸೋದರಿಯ ಮಗಳು. ಅವಳು ಮಾತನಾಡಲು ಶುರು ಮಾಡಿದಂದಿನಿಂದ ನಮ್ಮನ್ನು ದಂಗು ಬಡಿಸುವ ಮಾತುಗಳನ್ನೇ ಆಡುತ್ತಿದ್ದುದು. ಅರಳು ಹುರಿದಂತೆ ಮಾತನ್ನಾಡುತ್ತಿದ್ದ ಮುಬೀನಾ ಳನ್ನು ನನ್ನ ತಂದೆ ತಾಯಿ ತುಂಬಾ ಪ್ರೀತಿಸುತ್ತಿದ್ದರು. ಒಂದೆರಡು ದಿನಗಳ ರಜೆ ಸಿಕ್ಕರೂ ಅಪ್ಪ ಅವಳಿರುವಲ್ಲಿಗೆ ತಾವೇ ಹೋಗಿ ಕರೆದು ಕೊಂಡು ಬರುತ್ತಿದ್ದರು. ಒಂದೆರಡು ದಿನ ಇದ್ದು ಅವಳ ಮನೆಗೆ ಅವಳು ಮರಳಿದರೆ ಮಣೆ ಬಿಕೋ ಎನ್ನುತ್ತಿರುತ್ತದೆ. ಕೆಲವೊಮ್ಮೆ ತನ್ನ ಅಮ್ಮನನ್ನು ಬಿಟ್ಟು ಅವಳ ಅಜ್ಜಿಯ ಮನೆಯಲ್ಲಿ ಇರುತ್ತಿದ್ದ ಸಮಯದಲ್ಲಿ ನಿನ್ನ ಅಜ್ಜಿ ಚೆನ್ನಾಗಿ ನೋಡಿ ಕೊಳ್ಳುತ್ತಾರಾ ಎಂದು ಮನೆಯಲ್ಲಿ ಕೇಳುತ್ತಿದ್ದರು. ಯಾವಾಗಲೂ ಏನಾದರೊಂದು ಕಂಪ್ಲೇಂಟ್ ಇದ್ದೇ ಇರುತ್ತಿತ್ತು ಅವಳ ಹತ್ತಿರ. ಅಜ್ಜಿ ಹಾರ್ಲಿಕ್ಸ್ ಕೊಡೋಲ್ಲ, ಐಸ್ ಕ್ರೀಂ ಕೊಡೋಲ್ಲ ಎನ್ನುವಂಥವು .

ಮೊನ್ನೆ ನಮ್ಮ ಮನೆಯಲ್ಲಿ ಅವಳನ್ನು ಕೇಳಿದರು ನಿನ್ನ ಅಜ್ಜಿ (ಅವಳ ತಂದೆಯ ತಾಯಿ) ನಿನ್ನನ್ನು ಹೇಗೆ ನೋಡಿಕೊಳ್ಳುತ್ತಾರೆ ಅಂತ. ಆಗ ಅವಳು ಹೇಳಿದ್ದು, ನಾವು ಹೋಂ ವರ್ಕ್ ಮಾಡುವಾಗ ಮೊದಮೊದಲು ಚೆನ್ನಾಗಿ ತಪ್ಪಿಲ್ಲದೆ ಗುಂಡು ಗುಂಡಾಗಿ ಬರೆಯುತ್ತೇವೆ, ಸ್ವಲ್ಪ ಬರೆದಾದ ಮೇಲೆ ಬೇಕಾಬಿಟ್ಟಿ ಬರೆಯುತ್ತೆವಲ್ಲಾ ಹಾಗೆ ಅಜ್ಜಿಯೂ ಕೂಡಾ. ಮೊದ ಮೊದಲು ಚೆನ್ನಾಗಿ ನೋಡಿ ಕೊಳ್ಳುತ್ತಾರೆ, ಆಮೇಲೆ ಏನೂ ಕೊಡೋಲ್ಲಾ, ಎಂದು ಹೇಳಿ ಎಲ್ಲರನ್ನೂ ಬೇಸ್ತು ಬೀಳಿಸಿದಳು. ಅವಳ camparison ನೋಡಿ.

ಮುಬೀನಾ ಶಾಲೆಗೆ ಹೋಗುತ್ತಿದ್ದ ಆರಂಭದ ದಿನಗಳು. ವ್ಯಾನ್ ಡ್ರೈವರ್ ಮಕ್ಕಳನ್ನು ಉಸಿರುಗಟ್ಟುವ ರೀತಿಯಲ್ಲಿ ತುಂಬುತ್ತಿದ್ದ. ಇದನ್ನು ಕಂಡು ರೋಸಿದ ಅವಳು ಡ್ರೈವರ್ನನ್ನು ಕೇಳಿದಳು, ಏಯ್, ನಾವೇನು ಕೋಳಿ ಮರಿಗಳಾ ಈ ಥರಾ ತುಂಬಲು ಎಂದು. ಮಕ್ಕಳಿಗೆ ಮಾತುಗಳ ಟ್ರೈನಿಂಗ್ ಸಾಮಾನ್ಯವಾಗಿ ದೊಡ್ಡವರಿಂದ ಬಂದರೂ ಕೆಲವೊಮ್ಮೆ ನಾವು ಹೇಳಿರದಂಥ ಮಾತುಗಳನ್ನು ಹೇಳಿ ಬೆಚ್ಚಿ ಬೀಳಿಸುತ್ತಾರೆ ನಮ್ಮನ್ನು.

ಮಗಳ ಹೆಸರು “ಫೇಸ್ ಬುಕ್”

ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಕ್ರಾಂತಿಗಳನ್ನು ಗಮನಿಸಿದವರಿಗೆ ಆ ಕ್ರಾಂತಿಗಳ ಹಿಂದೆ ಸಾಮಾಜಿಕ ವೆಬ್ ತಾಣಗಳು ಹೇಗೆ ಕೆಲಸ ಮಾಡಿದವು ಎಂದು ತಿಳಿದೇ ಇದೆ. ಈಜಿಪ್ಟ್ ದೇಶದ ಕ್ರಾಂತಿಯಲ್ಲಿ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳ ಪಾತ್ರ ಹಿರಿದು.  ಮೊದಲ ಸಲ ತಂದೆಯಾದ ಜಮಾಲ್ ಇಬ್ರಾಹೀಂ ಹುಟ್ಟಿದ ಮಗುವಿಗೆ ಫೇಸ್ ಬುಕ್ ಎಂದು ಹೆಸರಿಟ್ಟು ಒಬ್ಬ ಸರ್ವಾಧಿಕಾರಿಯನ್ನು ಪದಚ್ಯುತಿಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ ಫೇಸ್ ಬುಕ್ ಗೆ ತನ್ನದೇ ಆದ ವಿಚಿತ್ರ ಆದರೂ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ. ಹಾಗೆಯೇ ಫೇಸ್ ಬುಕ್ ನ ಸ್ಥಾಪಕ Mark Zuckerberg  ಈ gesture ನಿಂದ ಇಂಪ್ರೆಸ್ ಆಗಿ ತನ್ನ ಮಗಳಿಗೆ ಏನಾದರೂ ಉಡುಗೊರೆ ಕಳಿಸಬಹುದು ಎನ್ನುವ ಆಸೆ ಕೂಡಾ ಇರಬಹುದೇ ಇಬ್ರಾಹೀಮನ ಮನದಾಳದಲ್ಲಿ?  

ಸುಮಾರು ಎಂಟು ಕೋಟಿ ಜನಸಂಖ್ಯೆಯ ಈಜಿಪ್ಟ್ ನಲ್ಲಿ ಫೇಸ್ ಬುಕ್ ಉಪಯೋಗಿಸುವವರು ಸುಮಾರು ೫೦ ಲಕ್ಷವಂತೆ.