ಮನುಷ್ಯರು ಮತ್ತು ಪ್ರಾಣಿಗಳ ಮೇಳ

ಈ ಚಿತ್ರ ಗಾರ್ಡಿಯನ್ ಪತ್ರಿಕೆಯಿಂದ ಸಿಕ್ಕಿತು. ಈ ಚ್ತ್ರದಲ್ಲಿನ ಡ್ರಾಮಾ ನನಗೆ ಇಷ್ಟವಾದ್ದರಿಂದ ನಿಮ್ಮೊಂದಿಗೆ ಹಂಚಿ ಕೊಳ್ಳುವ ಆಸೆ. ಎಷ್ಟಿದ್ದರೂ, ಇಷ್ಟವಿದ್ದೋ, ಇಲ್ಲದೆಯೋ, ನನ್ನ ಹಳೇ ಸೇತುವೆ  ಮೇಲೆ ನಡೆದಾಡಿ ಚಪ್ಪಲಿ ಸವೆಸೋರು ನೀವು ಅಲ್ಲವೇ?

ಸ್ಕಾಟ್ ಲ್ಯಾಂಡ್ ದೇಶದ ರಾಜ ‘ಅಲೆಕ್ಸಾಂಡರ್ ತೃತೀಯ’ ಬೇಟೆಗೆ ಹೋದ ಸಮಯ ಒಂದು ‘ಕಡವೆ’ಯ (ಗಂಡು ಜಿಂಕೆ,

stag) ಆಕ್ರಮಣಕ್ಕೆ ತುತ್ತಾದಾಗ ಅವನನ್ನು ರಕ್ಷಿಸುವ ಸನ್ನಿವೇಶ ವನ್ನ ಅತ್ಯಂತ ಸುಂದರವಾಗಿ ಬಿಡಿಸಿದ್ದಾನೆ ಕಲಾಕಾರ. ಬೇಟೆಯ ಸಮಯ ಹುಲಿ, ಸಿಂಹ ದ ಧಾಳಿಗೆ ಒಳಗಾಗೋದನ್ನು ಕೇಳಿದ್ದೇನೆ. ಆದರೆ….ಜಿಂಕೆ?

ಚಿತ್ರ ಕೃಪೆ: ದಿ ಗಾರ್ಡಿಯನ್

   

 

ಯೇಸು ಕ್ರಿಸ್ತ ವಿವಾಹಿತರೇ?

papyrus ಎನ್ನುವ ಪ್ರಾಚೀನ ಕಾಲದಲ್ಲಿ ಪಯೋಗಿಸಲ್ಪಡುತ್ತಿದ್ದ ಕಾಗದ ಮೇಲೆ ಯೇಸು ಕ್ರಿಸ್ತ ಮದುವೆಯಾದ ಉಲ್ಲೇಖವಿದೆ ಎನ್ನುತ್ತಾರೆ ಇತಿಹಾಸಕಾರರೊಬ್ಬರು. ನಾಲ್ಕನೇ ಶತಮಾನದ ಈ ಕಾಗದದಲ್ಲಿ ಕಾಪ್ಟಿಕ್ ಭಾಷೆಯಲ್ಲಿ “ನನ್ನ ಪತ್ನಿ ನನ್ನ ಅನುಯಾಯಿಯಾಗಲು ಸಮರ್ಥಳು” ಎಂದು ಬರೆದಿರುವ ಬಗ್ಗೆ ಗಮನ ಸೆಳೆಯುತ್ತಾರೆ ಸಂಶೋಧಕರು.

ಯೇಸು ಕ್ರಿಸ್ತರು ವಿವಾಹಿತರೋ ಅಲ್ಲವೋ ಎನ್ನುವುದು ಕ್ರೈಸ್ತ ವಲಯದಲ್ಲಿ ಆಗಾಗ ಏಳುವ ಚರ್ಚೆ. ಹಾಗೆಯೆ ಕ್ರೈಸ್ತ ಧರ್ಮದಲ್ಲಿ ಮಹಿಳೆ ಮತ್ತು ವಿವಾಹಿತ ಗಂಡು ಪುರೋಹಿತರಾಗಳು ಸಾಧ್ಯವಿಲ್ಲ ಎನ್ನುವುದಕ್ಕೂ ಯೇಸು ಕ್ರಿಸ್ತರು ಅವಿವಾಹಿತರು ಎನ್ನುವುದಕ್ಕೆ ಸಂಬಂಧವಿದೆ.

ಆದರೆ ಯೇಸು ಕ್ರಿಸ್ತರನ್ನು ದೇವ ಪ್ರವಾದಿ ಎಂದು ಕೊಂಡಾಡುವ ಇಸ್ಲಾಂ ಧರ್ಮದಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ, ಹಾಗೆಯೇ ಅದರ ಬಗೆಗಿನ ವಿವಾದ ಕೂಡ ಗೌಣ.

 

ಈತನ ಹೆಣ್ಣಿನ ಚಪಲವೇ…

ನಮ್ಮ ಕಡೆಯ ಗುಬ್ಬಿಯನ್ನು ಹೋಲುವ “ಮಾರ್ಶ್ ರೆನ್” marsh wren ಉತ್ತರ ಅಮೇರಿಕಾ ಪ್ರದೇಶದಲ್ಲಿ ಕಾಣ ಸಿಗುವ ಒಂದು ವಿಶಿಷ್ಟ ಗುಣಗಳನ್ನ ಪ್ರದರ್ಶಿಸುವ ಪಕ್ಷಿ. ಇವು polygynous, ಅಂದರೆ ಎಷ್ಟು ಸಾಧ್ಯವೋ ಅಷ್ಟು ಹೆಣ್ಣು ಗಳೊಂದಿಗೆ ಕೂದಲು ಬಯಸುವ ಪೋಲಿ ಹಕ್ಕಿ. ಈ ಹಕ್ಕಿ ಹಗಲೂ ರಾತ್ರಿಯೆನ್ನದೆ ಹಾಡುತ್ತದಂತೆ. ಸುಮ್ಮಾರು ಇನ್ನೂರು ತೆರನಾದ ಗೀತೆಗಳನ್ನು ಹಾಡಲು ಇವಕ್ಕೆ ಸಾಧ್ಯವಂತೆ. ಬಹುಶಃ ಈ ಕಾರಣ ಕ್ಕಾಗೇ ಇರಬೇಕು ಇವುಗಳ ಬಲೆಯಲ್ಲಿ ಬೀಳಲು ಹೆಣ್ಣುಗಳು ತವಕಿಸೋದು. ಇವುಗಳ ಹೆಣ್ಣಿನ ಚಪಲ ಎಷ್ಟಪ್ಪಾ ಎಂದರೆ ಒಂದು ಹಕ್ಕಿ ತನ್ನ ಕೊಕ್ಕಿನಲ್ಲಿ ಜೇಡನ ನನ್ನು ಹಿಡಿದು ಕೊಂಡು, ಬ್ಯಾಲನ್ಸ್ ಮಾಡುತ್ತಾ  ಹೆಣ್ಣನ್ನು ಆಕರ್ಷಿಸಲು ಹಾಡಲು ಪ್ರಯತ್ನಿಸಿದ್ದು ಒಬ್ಬ ಪಕ್ಷಿ ಪರಿಣಿತ ನೋಡಿದ್ದಾನಂತೆ.  ಇವುಗಳ ಸಾಮರ್ಥ್ಯ ಇಷ್ಟಕ್ಕೆ ಮಾತ್ರ ಸೀಮಿತ ಅಲ್ಲ, ಕನಿಷ್ಠ ಪಕ್ಷ ೧೪ ರಿಂದ ೨೨ ಗೂಡು ಗಳನ್ನು ಸಹ ಕಟ್ಟುತ್ತವಂತೆ.  

ಇವು ಡಮ್ಮಿ ಗೂಡುಗಳು. ತನ್ನನ್ನು ತಿನ್ನಲು ಬರುವ ಶತ್ರುಗಳಿಗೆ ಚಳ್ಳೆ ಹಣ್ಣು ತಿನ್ನಿಸಲು. ಸದ್ದಾಮ್ ಹುಸೇನ್ ತನ್ನನ್ನು ಹತ್ಯೆ ಗೈಯಲು ಬರುವವರಿಗೆ ಫೂಲ್ ಮಾಡಲು ತನ್ನಂತೆಯೇ ಇರುವ ಸುಮಾರು ೧೨ ಜನರನ್ನು ನೇಮಕ ಮಾಡಿದ್ದನಂತೆ. ಈ ಹಕ್ಕಿ ಸದ್ದಾಮ್ ಗಿಂತಲೂ ಜಾಣ.

ಈಗ ಹೇಳಿ, ಈ ಮಾರ್ಶ್ ರೆನ್ ಪಕ್ಷಿ ಹೈ ಸ್ಕೂಲಿನಲ್ಲಿದ್ದಾಗ ಆಂಗ್ಲ ವ್ಯಾಕರಣದಲ್ಲಿ ತಲೆ ತಿಂದ ‘ರೆನ್ ಅಂಡ್ ಮಾರ್ಟಿನ್’ ಗಿಂತ ಎಷ್ಟೋ ವಾಸಿ, ಆಲ್ವಾ?

೨೦೦೧, ಸೆಪ್ಟೆಂಬರ್ ೧೧

ಇಂದು ಅಮೆರಿಕೆಯ ವಿರುದ್ಧ ನಡೆದ ಭೀಕರ ವೈಮಾನಿಕ kamikaze ಧಾಳಿಗಳ ವಾರ್ಷಿಕ ದಿನಾಚರಣೆ. ೨೦೦೧, ಸೆಪ್ಟೆಂಬರ್ ೧೧ ಅಮೆರಿಕೆಯ ಪಾಲಿಗೆ ಒಂದು ದುರ್ದಿನ ಮಾತ್ರವಲ್ಲ, ವಿಶ್ವದಾದ್ಯಂತ ಎಲ್ಲ ಜನರನ್ನು ಒಂದಲ್ಲ ಒಂದು ರೀತಿಯಲ್ಲಿ ಬಾಧಿಸಿದ ದುರ್ಘಟನೆ. ಚರಿತ್ರೆ ಬದಲಾಯಿತು ಈ ಧಾಳಿಯಿಂದ. ಅಮೆರಿಕೆಗೆ  ಇಡೀ ವಿಶ್ವವೇ ಸಹಾನುಭೂತಿ ವ್ಯಕ್ತ ಪಡಿಸಿತು. ಅಮೇರಿಕ ದೇಶದ ವಿದೇಶಾಂಗ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದವರೂ ಅಮೆರಿಕೆಯ ಬೆಂಬಲಕ್ಕೆ ನಿಂತರು. ಫ್ರಾನ್ಸ್ ದೇಶದ ಪತ್ರಿಕೆಯೊಂದು “ನಾವೆಲ್ಲರೂ ಅಮೆರಿಕನ್ನರು” ಎಂದು ಘೋಷಿಸಿ ಅನುಕಂಪ ವ್ಯಕ್ತ ಪಡಿಸಿತು. ೯/೧೧ ಈಗ ಚರಿತ್ರೆ. ಚರಿತ್ರೆ ಮರುಕಳಿ ಸುವುದು ಬೇಡ. ಅದೂ ರಕ್ತ ಸಿಕ್ತ ಚರಿತ್ರೆಯಂತೂ ಎಂದಿಗೂ ಮತ್ತೊಮ್ಮೆ ಕಾಣಲು, ಅನುಭವಿಸಲು ಸಿಗಕೂಡದು. ಕ್ರೈಸ್ತ, ಮುಸ್ಲಿಂ, ಹಿಂದೂ, ಬಿಳಿಯ ಕರಿಯ, ಬಡವ ಬಲ್ಲಿದ ಎಲ್ಲರೂ ಯಾವುದೇ ತಾರತಮ್ಯ ಎಸಗದೆ ಆ ಮಹಾಪ್ರಭು   ಸೃಷ್ಟಿಸಿದ ಭೂಮಿಯ ಮೇಲೆ ನಿರಾತಂಕವಾಗಿ ಬದುಕಬೇಕು. ತಾನು ನಂಬಿದ ಆದರ್ಶಗಳ, ಧಾರ್ಮಿಕ ಮೌಯಗಳು ನಮಗೆ ಉರುಳಾಗಬಾರದು.

“ಲಿವ್ ಅಂಡ್ ಲೆಟ್ ಲಿವ್” ಎಲ್ಲರ ಮಂತ್ರವಾಗಬೇಕು.        

”SAY TWO WAY -ಸೇತುವೆ” ಆಡಿದ ಮಾತು

ಭದ್ರಾವತಿಯ ನನ್ನ ಮಿತ್ರ ಸುರೇಶ್ ಬಾಬು ನನ್ನ ತಂಗಿಯ ಮಗಳ ಮದುವೆಗೆಂದು ಮಿತ್ರರೊಂದಿಗೆ ಬಂದಿದ್ದರು. ನನ್ನ ತಂಗಿಯ ಮದುವೆಗೂ ಪತ್ನೀ ಸಮೇತರಾಗಿ ಬಂದಿದ್ದ ಅವರು ಅವಳ ಮಗಳ ಮದುವೆಗೂ ಬಂದಿದ್ದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಸಮಯ ಹೇಗೆ ಹಾರುತ್ತದೆ ನೋಡಿ, ರೆಕ್ಕೆಗಳಿಲ್ಲದೆ. ತಂಗಿ ಮದುವೆ…ಈಗ ಅವಳ ಮಗಳ ಮದುವೆ, ನಡುವೆ ಸುಮಾರು ೨೪ ವರ್ಷಗಳ ನೆನಪುಗಳಿಂದ ತುಂಬಿದ ಕಂದರ. ಅಲ್ಲ ಅಲ್ಲ, ಹಂದರ. ನಮ್ಮ ಮಮೆಯಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿ ಒಂದು ಸೊಗಸಾದ ಸೇತುವೆ ಇದೆ. ತೂಗು ಸೇತುವೆ. ಚಂದ್ರಗಿರಿ ನದಿಗೆ ಅಡ್ಡವಾಗಿ ಒಂದು ನೆಕ್ಲೇಸ್ ಥರ. ಸುತ್ತಲೂ ತೆಂಗು, ಕಂಗು, ಹಸಿರಿನ ಸುಗ್ಗಿ. ಮದುವೆ ಮುಗಿದ ಕೂಡಲೇ ಸೇತುವೆ ನೋಡಲು ಹೋದ ಸುರೇಶ ಮಂತ್ರಮುಗ್ಧ, ಪ್ರಕೃತಿಯ ಸೊಬಗಿಗೆ ದಿಗ್ಮೂಢ.  ನದಿಯ ಹರಿವು ತಿರುವ ಮಾಟಕ್ಕೆ, ಬಳುಕುವ ತೆಂಗು ಕಂಗುಗಳ ಚೆಂದಕ್ಕೆ ಬೆರಗಾಗಿ ನೇತಾಡುವ ತೂಗು ಸೇತುವೆ ಸುರೇಶ್ ಅವರ ಕೆಳಗಿನ ಕವನಕ್ಕೆ ಪ್ರೇರೇಪಣೆ.

”SAY TWO WAY – ಸೇತುವೆಆಡಿದ ಮಾತು

ಕಾಣದ ಅಲೆ ಅಲೆಯಾಗಿ , ಮನಕೆ ಬಂತು ,ಮನೆಗೆ ಬಂತು. ಬಂದ ಮಾತ ಮಾತನಾಡಿಸಿಧಾಗ

MAHATHMA GANDHI ಮಾತು ನಿಂತು .’ BE THE CHANGE YOU WISH TO SEE IN THEWORLD’. ಅಂತು.

ಮನಕೆ ಬಂದ ಮಾತು ಮನನವಾಗಿ, ಮನದಅಂಕದಲ್ಲಿಮಂಕನಾಗಿ ಇಟ್ಟ ಒಂದೆಜ್ಜೆ,

ಕಾನನವನ್ನು ಛೇಧಿಸುತ್ತ ,ಬೆಟ್ಟವನ್ನು ಸುತ್ತಿ , ಸಾಗರದತೀರದ ಮನೆಗೆ ಬಂದೆ.

ಮದುವೆಗೂ ಬಂದೆ. ಬಂದುಗಳಲಿ , ಭಾವನೆಗಳಲಿ ಒಂದಾಗಿ,

ಇಳಿಜಾರು ತೆಂಗು, ಗುಡ್ಡಗಳ ಸುತ್ತಿ, ಗಿರಿಗಳಿಂದ ಸುತ್ತುವರೆದು,

ಹಿನ್ನೀರಿನ ನದಿಯಿಂದ ಮುತ್ತು ಹರಿದು

ಆ ತೂಗುಯ್ಯಾಲೆ ಇಂದ ನೋಡಿದ ನೋಟ

ಮಂಕನನ್ನು ವೆಂಕನನ್ನಾಗಿಸಿತು.

ಪ್ರಕೃತಿಯ ಅಂತರಾಳದಲ್ಲಿ ಏನೆಲ್ಲಾ ಕೃತಿಗಳು…

ಧನ್ಯನಾದೆ.. ಧನವಂತನಾದೆ…ಮನ ತುಂಬಿದಂತೆ.

ಆಹಾ, ಆ ಸೇತುವೆ ಮೇಲೆ ನಿಂತು, ತೂಗಾಡುವ ಸೇತುವೆ…ಜೋತಾಡುವ ಸೇತುವೆ..

ಮನದ ಮಾತನಾಡುವ ಸೇತುವೆ, ಮನಸು ಮರುಳಾಗಿಸಿತು.

ನಾವು ಬದಲಾದರೆ ಬದುಕಲ್ಲಿ ಬೇಕಾದನ್ನು ಕಾಣಬಹುದು. ನಾವು ಬದ್ಧರಾದರೆ , ಬೇಕಾದ್ದನ್ನು ಪಡೆಯಬಹುಧು.

ಬದಲಾದ ಬದುಕಿನ ನೆನಪು ಮತ್ತೆ ಮತ್ತೆ ಬಾಳನ್ನು ಹದಗೊಳಿಸುತ್ತದೆ. ಅನುಭವ ಹೊಸತನವನ್ನು, ಉತ್ಸಾಹವನ್ನು, ತುಂಬುತ್ತದೆ .

ಮೇಲಿನಿಂದ ನೋಡಿದಾಗ, LATTITUDE ನಲ್ಲಿ ಕುಳಿತು ಬರೆಯುವಾಗ,

ನಮ್ಮ ATTITUDE ,

ಆಕಾಶದಂತೆ, ಭೂಮಿಯಂತೆ, ಗಾಳಿಯಂತೆ, ನೀರಿನಂತೆ ,ಸೂರ್ಯ ಕಿರಿಣದಂತೆ ಬೆತ್ತಲಾಗುತ್ತದೆ.

ಬರೆದಷ್ಟು  –ಬೆರೆತಷ್ಟು ಬಾಳಾಗುತ್ತದೆ. ಬೆಳಗುತ್ತದೆ.

ಆದರೆ , ಸುಂದರ ಬಾಳಲ್ಲಿ ,ಹಂದರಗಳೇ ಹೆಚ್ಚು, ನೋಡುವ ನೋಟದಲ್ಲಿ ಸೌಂದರ್ಯದ ಹುಚ್ಹು,

ಕಾಣುವ ಕಣ್ಣಲ್ಲಿ , ಕನವರಿಸುವ ಕಿಚ್ಚು ,

ಪ್ರಕೃತಿಯನ್ನು ಒಲಿಸಿಕೊಳ್ಳುವ, ಓಲೈಸಿಕೊಳ್ಳುವ ತವಕ. ಕವ, ಕವ, ಸಂಸಾರ ಸಾಗರಕೆ ಮರುಳಾದೆ,

ಮರುಥಕವೆಂದು ಮರಳು ಮುಟ್ಟಿದೆ ಮರುಳಾದೆ,

ಉಪ್ಪು ಮೆತ್ತಿತು, ಮೆಲ್ಲನೆ, ಮೆಲ್ಲಿದೆ, ಮುಖ ಕಪ್ಪಿಟ್ಟಿತು…

‘TIMELESS PHILOSOPHY, CHANGE YOURSELF.. THE WORLD WILL CHANGE’

ಪೌಷ್ಠಿಕಾಂಶ ಮತ್ತು ಸೌಂದರ್ಯ ಪ್ರಜ್ಞೆ

ಗುಜರಾತ್ ದೇಶದ ಅತ್ಯಂತ ಮುಂದುವರಿದ ರಾಜ್ಯ, ಇತರೆ ರಾಜ್ಯಗಳಿಗೆ ಮಾದರಿ ರಾಜ್ಯ, ಗುಜರಾತ್ ನ ಅಮೋಘ ಸಾಧನೆಗೆ ನರೇಂದ್ರ ಮೋದಿಯ ನಾಯಕತ್ವ ಕಾರಣ, ಹಾಗೆ, ಹೀಗೆ ಎಂದು ಪುಂಖಾನು ಪುಂಖವಾಗಿ ಪ್ರಶಂಸೆಗಳು ಮೊಳಗಿದವು. ಈ ಪ್ರಶಂಸೆಯ ಹಿಂದೆ ಯಾವುದೇ ನಿಷ್ಪಕ್ಷಪಾತೀ ಸಂಸ್ಥೆಗಳಿರಲಿಲ್ಲ, ಬದಲಿಗೆ ಮೋದಿಯ ಗುಣಗಾನ ಮಾಡಲು ಸನ್ನದ್ಧ ವಾದ ಸೇನೆ ಮೋದಿಯನ್ನು ಹೇಗಾದರೂ ಮಾಡಿ ಗುಜರಾತ್ ನ ಭೀಕರ, ಭೀಭತ್ಸ ಗುಜರಾತ್ ಹತ್ಯಾಕಾಂಡದ ಮಸಿಯನ್ನು ತೊಳೆದು ಆತನನ್ನು ಒಬ್ಬ ಒಳ್ಳೆಯ, ದಕ್ಷ, ಸಮರ್ಥ ರಾಜಕಾರಣಿ ಎಂದು ಪ್ರಪಂಚಕ್ಕೆ ಬಿಂಬಿಸುವುದೇ ಆಗಿತ್ತು. ಆದರೆ, ಗುಜರಾತ್ ಗಿಂತ ನೀತೀಶ್ ಕುಮಾರ್ ಮುನ್ನಡೆಸುವ ಬಿಹಾರ್ ಅಭಿವೃದ್ಧಿಯಲ್ಲಿ ಮುಂದೆ ಎಂದು ಎಲ್ಲರಿಗೂ ತಿಳಿಯಲು ಬಹಳ ಕಾಲ ಬೇಕಾಗಲಿಲ್ಲ. ಗುಜರಾತ್ ಹತ್ಯಾಕಾಂಡದ ಕಾರಣ ನರೇಂದ್ರ ಮೋದಿ ಬರೀ ದೇಶದಲ್ಲಿ  ಮಾತ್ರವಲ್ಲ ಅಂತಾರಾಷ್ಟ್ರೀಯವಾಗಿಯೂ ಚಿರಪರಿಚಿತ. ಬಹುಶಃ ಮಹಾತ್ಮ ಗಾಂಧಿಯ ನಂತರ ನರೇಂದ್ರ ಮೋದಿಯದು ಹೆಚ್ಚು ಪರಿಚಿತ ಹೆಸರು ಎಂದರೂ ಉತ್ಪ್ರೇಕ್ಷೆ ಯಾಗಲಾರದು. ಕಾಕತಾಳೀಯವೆಂಬಂತೆ ಈ ಈರ್ವರೂ ಗುಜರಾತ್ ಮೂಲದವರು. ಬೇರೆ, ಬೇರೆ ಕಾರಣಗಳಿಗಾಗಿ ಹೆಸರು ಮಾಡಿದವರು.

ಇತ್ತೀಚೆಗೆ ನರೇಂದ್ರ ಮೋದಿಯ ಸಂದರ್ಶನ ಅಮೆರಿಕೆಯ ಸುಪ್ರಸಿದ್ಧ ಪತ್ರಿಕೆಯಾದ “ವಾಲ್ ಸ್ಟ್ರೀಟ್ ಜರ್ನಲ್” ನಲ್ಲಿ ಪ್ರಕಟವಾಯಿತು. ಸಂದರ್ಶನದಲ್ಲಿ ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಗುಜರಾತೀ ಮಕ್ಕಳ ಬಗ್ಗೆ ಕೇಳಿದಾಗ ನರೇಂದ್ರ ಮೋದಿ ಕೊಟ್ಟ ಉತ್ತರ ವಾಲ್ ಸ್ಟ್ರೀಟ್ ಜರ್ನಲ್ ಮಾತ್ರವಲ್ಲ ವಿಶ್ವವನ್ನೇ ದಂಗು ಬಡಿಸಿತು. “ಗುಜರಾತ್ ಒಂದು ಮಧ್ಯಮ ದರ್ಜೆಯ ಜನ ಇರುವ ರಾಜ್ಯ. ಈ ಜನರಿಗೆ ತಮ್ಮ ಶರೀರ ಸೌಂದರ್ಯದ ಕಾಳಜಿ ಹೆಚ್ಚು ಇದ್ದು, ಆಧುನಿಕತೆ ಬಯಸುವಂತೆ ಅವರು ಯಾವಾಗಲೂ ಕೃಶರಾಗಿಯೇ ಇರಲು ಇಷ್ಟ ಪಡುತ್ತಾರೆ” ಎಂದು ಮೋದಿ ಉತ್ತರಿಸಿದಾಗ ಸಂದರ್ಶನ ನಡೆಸುತ್ತಿದ್ದ ವ್ಯಕ್ತಿಯ ಮುಖವನ್ನ ನಾವು ಊಹಿಸಿಕೊಳ್ಳಬಹುದು. ಬಿದ್ದರೂ ಮೀಸೆ ಮಣ್ಣಾಗಲಿಲ್ಲ. ಈ ಮಾತಿಗೆ ನಿಷ್ಠವಾಗಿ ನಡೆದುಕೊಂಡ ಗುಜರಾತಿನ ಮು. ಮಂತ್ರಿ ಇನ್ನೂ ಎಷ್ಟು ಕಾಲ ನಮ್ಮ ದೇಶವನ್ನು ಮತ್ತು ಪ್ರಪಂಚವನ್ನು ಬ್ಲಫ್ ಮಾಡುತ್ತಾ ಕಳೆಯಬಹುದು ಎಂದು ಯಾರಿಗೂ ತಿಳಿಯದು. ಪೌಷ್ಟಿಕಾಂಶದ ಕೊರತೆ ಮತ್ತು ಸೌಂದರ್ಯ ಪ್ರಜ್ಞೆಯ ವಿತಂಡವಾದದ ಸಹಾಯದಿಂದ, ‘ಮೋದಿ ಫಾರ್ಮುಲಾ’ ವನ್ನು ಬಳಸಿಕೊಂಡು ನಮ್ಮನ್ನು ಕಾಡುತ್ತಿರುವ ಇನ್ನಷ್ಟು ಸಾಮಾಜಿಕ ಸಮಸ್ಯೆಗಳಿಗೆ ಸುಂದರವಾದ ಸಮಜಾಯಿಷಿ ಕೊಟ್ಟು ಜನರಿಗೆ ಚಳ್ಳೆ ಹಣ್ಣು ತಿನ್ನಿಸಬಹುದು. ಭಾರತದ ಬಹುಪಾಲು ಜನ ಏಕೆ ಬಟಾ ಬಯಲಿನಲ್ಲಿ, ರೈಲು ಹಳಿಗಳ ಹತ್ತಿರ ಶೌಚಕ್ಕೆ ಹೋಗುತ್ತಾರೆ ಎಂದು ಯಾರಾದರೂ ಕೇಳಿದರೆ, ನಮ್ಮ ಉತ್ತರ, ಶೌಚದ ಕೊರತೆ ಕಾರಣ ಅಲ್ಲ, ನಮ್ಮ ಜನ ನಿಸರ್ಗದ ಮಧ್ಯೆ, ತಂಗಾಳಿಯೊಂದಿಗೆ ಆಡುತ್ತಾ, ಸೊಳ್ಳೆ ಗಳಿಂದ ಕಚ್ಚಿಸಿಕೊಳ್ಳುತ್ತಾ ಶೌಚ ಮಾಡಲು ಇಷ್ಟ ಪಡುತ್ತಾರೆ ಎಂದು ಹೇಳಿ ವಿಜಯದ ನಗೆ ಬೀರಬಹುದು. ವ್ಯಾಪಕವಾಗಿ ಹರಡುತ್ತಿರುವ ಲಂಚ-ರಿಷುವತ್ತಿನ ಬಗ್ಗೆ ಕೇಳಿದರೆ ಅದನ್ನು ಲಂಚ ಎಂದು ಕರೆಯಬಾರದು, ನಮ್ಮ ಸಮಾಜ ಉಡುಗೊರೆ ಕೊಡುವ ವಿಚಾರದಲ್ಲಿ ಬಹಳ ಉದಾರೀ, ಹಾಗಾಗೀ ಉಡುಗೊರೆಯನ್ನು ಸ್ವಲ್ಪ ಸಲುಗೆಯಿಂದ, ಸ್ವಲ್ಪ ಬಲವಂತವಾಗಿ ಜನರಿಂದ ವಸೂಲು ಮಾಡುತ್ತದೆ ಅಧಿಕಾರೀಶಾಹೀ ಅಷ್ಟೇಯ ಎಂದು ಕಳ್ಳ ನಗೆ ನಗಬಹುದು. ವಾಲ್ ಸ್ಟ್ರೀಟ್ ಜರ್ನಲ್ ವಿಶ್ವದ ಪ್ರಮುಖ ವ್ಯಕ್ತಿಗಳು, ಆಡಳಿತಗಾರರು, ಉದ್ಯಮಿಗಳು ಓದುವ ಪತ್ರಿಕೆ. ಈಗ ಊಹಿಸಿ, ಭಾರತದ ನೆತಾರನೊಬ್ಬ ಈ ತೆರನಾದ ಉತ್ತರ ಕೊಡುತ್ತಾ ಹೋದರೆ ಆಗುವ ಪರಿಣಾಮ.

ಮಾತನಾಡುವ ಅಪರೂಪದ ಗುಣವನ್ನ ದೇವರು ಮನುಷ್ಯನಿಗೆ ದಯಪಾಲಿಸಿದ್ದು ಬಹುಶಃ ಇದೇ ಕಾರಣಕ್ಕಾಗಿ ಇರಬಹುದು. ತಾನಾಡುವ ಮಾತಿನ ಮೂಲಕ ಮನುಷ್ಯ ತನ್ನ ಅಳತೆ, ಯೋಗ್ಯತೆ ಎಷ್ಟರ ಮಟ್ಟಿನದು ಎಂದು ವಿಶ್ವಕ್ಕೆ ಸಾರಲಿ ಎಂದಿರಬಹುದು ಅವನ ಉದ್ದೇಶ. ದೇವರ ಆಟ ನಿಗೂಢ, ಅಲ್ಲವೇ?

ಲೋಕಸಭೆಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ನರೇಂದ್ರ ಮೋದಿಯನ್ನು ಭಾವೀ ಪ್ರಧಾನಿಯನ್ನಾಗಿ ಬಿಂಬಿಸಲಾಗುತ್ತಿದೆ. ಮಿತ್ರಪಕ್ಷಗಳ ವಿರೋಧದ ನಡುವೆಯೂ ಹಿಂದುತ್ವ ರಾಷ್ಟ್ರ ವಾದೀ ಭಾ.ಜ.ಪ. ಕ್ಕೆ ನರೇಂದ್ರ ಮೋದಿಯ ವ್ಯಕ್ತಿತ್ವ ಟ್ರಂಪ್ ಕಾರ್ಡ್ ಆಗಿ ಕಾಣುತ್ತಿದೆ. ಬಿಹಾರದ ಶ್ರೀಯುತ ನಿತೀಶ್ ಕುಮಾರ್ ಅವರಂತೂ ನಮ್ಮ ದೇಶಕ್ಕೆ ಪ್ರಧಾನಿಯಾಗುವ ವ್ಯಕ್ತಿ ‘ಮತಾಂಧ ಚಹರೆ’ (fanatic face) ಯುಳ್ಳವನಾಗಿರುವುದು ಬೇಡ ಎಂದು ಸಾರಿ NDA ವಲಯದಲ್ಲಿ ಒಂದು ಕಂಪನವನ್ನೇ ಎಬ್ಬಿಸಿದರು. ಮಹಾ ಚುನಾವಣೆ ಸನ್ನಿಹಿತವಾಗುತ್ತಿದೆ. ಪ್ರಧಾನಿ ಹುದ್ದೆಗೆ ಯಾವ ಅಭ್ಯರ್ಥಿ ಸೂಕ್ತ ಎನ್ನುವುದು ಭಾಜಪ ದ ಆಂತರಿಕ ವಿಷಯ. ಆದರೆ ದೇಶದ ಭಾವೀ ಪ್ರಧಾನಿ ವಿದೇಶೀ ಪತ್ರಿಕೆಯೊಂದರ ಸಂದರ್ಶನದ ವೇಳೆ ಲಘುವಾಗಿ, ಉಡಾಫೆಯಾಗಿ ಮಾತನಾಡಿದರೆ ವಿಶ್ವ ಮಟ್ಟದಲ್ಲಿ ನಮಗಾಗುವ ಅವಮಾನ, ಮುಜುಗುರ ಅಳೆಯಲು ರಾಜಕೀಯ ಪಂಡಿತರ ಅಗತ್ಯ ಬೀಳಲಿಕ್ಕಿಲ್ಲ. ಪ್ರಧಾನಿಯ ಆಯ್ಕೆಯಲ್ಲಿ ಅಲ್ಪಕಾಲೀನ ಲಾಭ, ಭಾವೋದ್ವೇಗ ನಿರ್ಣಾಯಕವಾಗುವುದು ಬೇಡ. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವ್ಯಕ್ತಿ ಅಲಂಕರಿಸಲಿ ಪ್ರಧಾನಿ ಗದ್ದುಗೆಯನ್ನು. ಅದರೊಂದಿಗೆ ನಮ್ಮ ಭವಿಷ್ಯದ ಪ್ರಧಾನಿ ವಿದೇಶಗಳಲ್ಲೂ ಸ್ವಾಗತಾರ್ಹ ವ್ಯಕ್ತಿಯಾಗುವುದು ಅತ್ಯವಶ್ಯ.

ನಾರ್ವೆ ದೇಶದಲ್ಲಿ ನಡೆದ ಸಾಮೂಹಿಕ ನರಸಂಹಾರಕ್ಕೆ ಒಂದು ವರ್ಷ

ನಾರ್ವೆ ದೇಶದಲ್ಲಿ ನಡೆದ ಸಾಮೂಹಿಕ ನರಸಂಹಾರಕ್ಕೆ ಒಂದು ವರ್ಷ ತುಂಬಿತು. ನಾರ್ವೆಯ ರಾಜಧಾನಿ ಮತ್ತು ಪಕ್ಕದ ದ್ವೀಪದ ಮೇಲೆ Anders Behring Breivik  ನಡೆಸಿದ ಭೀಕರ ಬಾಂಬ್ ಸ್ಫೋಟ ಮತ್ತು ಗುಂಡಿನ ಧಾಳಿಯಲ್ಲಿ ಸತ್ತವರು ೬೯ ಅಮಾಯಕ ಜನ. ಅದರಲ್ಲಿ ಬಹುತೇಕ ಹದಿಹರೆಯದ ಯುವಕ ಯುವತಿಯರು. ವಿಶ್ವವೇ ಬೆಚ್ಚಿ ಬೆರಗಾದ ಈ ನರಹತ್ಯೆ ನರಹನ್ತಕನಲ್ಲಿ ಯಾವುದೇ ಭಾವನೆಯನ್ನೂ ಹುಟ್ಟಿಸಲಿಲ್ಲ. ಮಂದಸ್ಮಿತನಾಗಿ, ಪೊಲೀಸರಿಗೆ ಶರಣಾದ, ಸಮಯ ಸಿಕ್ಕಿದ್ದಿದ್ದರೆ ಇನ್ನಷ್ಟು ಜನರನ್ನು ಕೊಲ್ಲುತ್ತಿದ್ದೆ ಎಂದೂ ಹೇಳಿದ ಈ ಕಟುಕ. ಇವನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗಳೂ ಈತನದು ಭಂಡ defiant  ನಿಲುವು. ಈತ white  supremacist . ಈ ಖಾಯಿಲೆಯೇ ೬೦ ರಿಂದ ೮೦ ಲಕ್ಷ ಯಹೂದ್ಯರನ್ನು ಮಾರಣ ಹೋಮ ಮಾಡಲು ಹಿಟ್ಲರ್ ನನ್ನು ಪ್ರಚೋದಿಸಿದ್ದು. anders ನ ಕ್ರೌರ್ಯಕ್ಕೆ ಬಲಿಯಾದ ಯುವಜನರ ಅಪರಾಧ ಏನೆಂದರೆ ಅವರು palestine ದೇಶದ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದು ಮತ್ತು ನಾರ್ವೆ ದೇಶಕ್ಕೆ ಬರುವ ವಲಸಿಗರನ್ನು ಬೆಂಬಲಿಸಿದ್ದು.

ಈ ತೆರನಾದ ನರಸಂಹಾರಕ್ಕೆ ಕಾರಣನಾದವನನ್ನು ಗಲ್ಲಿಗೆ ಏರಿಸೋಲ್ಲವಂತೆ ನಾರ್ವೆ ದೇಶ. ಗಲ್ಲು ಶಿಕ್ಷೆ ಈ ದೇಶದಲ್ಲಿ ಇಲ್ಲ. ಇವನಿಗೆ ಹೆಚ್ಚೆಂದರೆ ೨೧ ವರ್ಷ ಜೈಲು ಶಿಕ್ಷೆ. ಬಿಡುಗಡೆಯಾಗುವಾಗ ಅವನಿಗೆ ಇನ್ನೂ ಮಧ್ಯ ವಯಸ್ಸು ಆರಂಭ ವಾಗಿರುತ್ತದೆ ಅಷ್ಟೇ. ಈ ಹಿಂಸೆಯಲ್ಲಿ ಜೀವ ಕಳಕೊಂಡವರ ಹೆತ್ತವರು, ಸಂಬಂಧಿಕರು ಅಸಾಧಾರಣ ತಾಳ್ಮೆ ಪ್ರದರ್ಶಿಸಿದರು ಈ ಕಟುಕನನ್ನು ವಿಚಾರಣೆಗೆ ತಂದಾಗ. ಇವನ ಕಡೆ ಕಣ್ಣೆತ್ತಿ ಸಹ ನೋಡಲಿಲ್ಲ, ನೀನು ನಮ್ಮ ಪಾಲಿಗೆ ಅಸ್ತಿತ್ವದಲ್ಲಿಲ್ಲದ ಜೀವಿ ಅಷ್ಟೇ ಎಂದು ಪರೋಕ್ಷವಾಗಿ ಹೇಳಿದರು ಜನ. ಧ್ವೇಷಗ್ರಸ್ಥ, ಹಗೆ ವರ್ತಕ ಸಮೂಹಕ್ಕೆ ನಾಗರೀಕ ಸಮಾಜ ನಡೆಸಿಕೊಳ್ಳ ಬೇಕಾದ ತಕ್ಕುದಾದ ನಡವಳಿಕೆ. ಇನ್ನು ಈತ ತನ್ನ ದಿನಗಳನ್ನು ಕಳೆಯಬೇಕಾದ ಜೈಲಿನ ಕತೆ ಹೀಗೆ. ನಾರ್ವೆ ದೇಶದ ಜೈಲುಗಳು ಪ್ರಪಂಚದ ಲ್ಲೇ ಅತ್ಯಂತ ಸುಖಕರ ಜೈಲುಗಳಂತೆ. ಕೈದಿಗಳಿಗೆ ಬೇಸರವಾದಾಗ ಅಧಿಕಾರಿಗಳು ಹೊರಗಿನಿಂದ ಅವನಿಗೆ ಮಿತ್ರರನ್ನು ಹೊಂದಿಸುತ್ತಾರಂತೆ. ಎಂದಿಗೂ ಅಪರಾಧಿ ಏಕಾಂತದಲ್ಲಿ ಇದ್ದು ಬಳಲಬಾರದಂತೆ. ಏಕಾಂಗಿತನ ಕ್ರೌರ್ಯವಂತೆ.  ವಾಹ್, ಎಂಥಾ ವ್ಯವಸ್ಥೆ.  ಇಷ್ಟೆಲ್ಲಾ ಅನುಕೂಲ ನಮಗೆ ನಮ್ಮ ಮನೆಯೊಳಗೂ ಸಿಗಲಿಕ್ಕಿಲ್ಲ.

ಟಿಬೆಟ್ ನ ಮುಸ್ಲಿಮರು ಕಾಶ್ಮೀರದಲ್ಲಿ

ಟಿಬೆಟ್ ನ ಬುದ್ಧರ ಗುರು ದಲಾಯಿ ಲಾಮ ಕಾಶ್ಮೀರದಲ್ಲಿ ನೆಲೆಸುತ್ತಿರುವ ಟಿಬೆಟ್ ದೇಶದ ಮುಸ್ಲಿಮರನ್ನು ಭೇಟಿಯಾದರು. ಟಿಬೆಟನ್ ಸಾರ್ವಜನಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ದಲಾಯಿ ಲಾಮ ಉತ್ತಮ ಮಟ್ಟದ ಶಿಕ್ಷಣ ಯಾವ ರೀತಿ ಪರಿವಾರ, ಸಮಾಜ ಮತ್ತು ದೇಶಕ್ಕೆ ಉಪಯುಕ್ತ ವಾಗುತ್ತದೆ ಎಂದು ವಿವರಿಸಿದರು. ಇಂದಿನ ಶಿಕ್ಷಣ ವ್ಯಾಪಾರೀಕರಣ ಗೊಳ್ಳುತ್ತಿದ್ದು ಅಂತರಾತ್ಮದ ನೆಮ್ಮದಿಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲ ಎಂದು ವಿಷಾದಿಸಿದರು. ಪ್ರಸಕ್ತವಾಗಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ದಲಾಯಿ ಲಾಮರ ಆಶಯದ ಅರ್ಥ ನಮಗರ್ಥವಾಗುತ್ತದೆ. ಶಿಕ್ಷಣ ವ್ಯಾಪಾರೀಕರಣ ಗೊಳ್ಳುತ್ತಿರುವುದು ಮಾತ್ರವಲ್ಲ “ಅಜೆನ್ಡೀಕರಣ” (agenda ) ವೂ ಆಗುತ್ತಿರುವ ಬಗ್ಗೆ ಲಾಮಾ ರಿಗೆ ಬಹುಶಃ ತಿಳಿದಿರಲಿಕ್ಕಿಲ್ಲ. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ. ಅಂಥ  ಶಿಕ್ಷಣ ಎನ್ನುವ ಪವಿತ್ರ ತೀರ್ಥಕ್ಕೆ ಕಲಬೆರಕೆ ನಡೆಸಿ ಗುಮಾನಿ ಪಡದ ಮುಗ್ಧ ಮಕ್ಕಳಿಗೆ ಕೊಟ್ಟಾಗ ಕಳ್ಳಭಟ್ಟಿ ಕುಡಿದಾಗ ಆಗುವ ಅನಾಹುತಕ್ಕೆ ಸರಿಸಮಾನವಾದ ಪರಿಣಾಮ ಉಂಟು ಮಾಡುತ್ತದೆ ಎನ್ನುವ ಅರಿವು ಬಹುಶಃ ಬಹಳ ಜನರಿಗೆ ತಿಳಿದಿಲ್ಲ ಎಂದು ತೋರುತ್ತದೆ.

ಬ್ರಿಟಿಷರು ಮತ್ತು ನಾಯಿಗಳು

ಮನಮೋಹನ ಸಿಂಗರು ಸೋನಿಯಾ ಗಾಂಧಿಯವರ “ಪೂಡ್ಲ್”  ಆದರಾ?  poodle  ಎಂದರೆ ಮೈ ತುಂಬಾ ರೋಮ ಇರೋ ಬೇಟೆ ನಾಯಿ. ಮತ್ತೊಂದು ಅರ್ಥ ಎಂದರೆ ಹೇಳಿದಂತೆ ಕೇಳುತ್ತಾ, ಹೌದಪ್ಪಾ ಹೌದು ಎಂದು ಗೋಣು  ಹಾಕುವವ.  ಮನಮೋಹನ್ ಸಿಂಗ್ ಸೋನಿಯಾರ spineless   ಪೂಡ್ಲೋ, ಹರಿತವಾದ ಕುಡ್ಲೋ ಎಂದು ಸಮಯವೆ ಹೇಳಲಿದೆ. ಅಷ್ಟಕ್ಕೂ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕರೊಬ್ಬರನ್ನು ಸಾಕು ನಾಯಿ ಎಂದು ಕರೆದು ಹೀಯಾಳಿಸುವ ಅವಶ್ಯಕತೆ ಅಥವಾ ಯೋಗ್ಯತೆ ಬ್ರಿಟನ್ ನಂಥ ದೇಶಕ್ಕಂತೂ ಇಲ್ಲ. ಗ್ರೇಟ್ ಬ್ರಿಟನ್ ಯಾವ ತೆರನಾದ ಪೂಡ್ಲ್ ಎಂದು ವಿಶ್ವಕ್ಕೆ ತಿಳಿದಿದೆ. ಅಮೇರಿಕಾ ಹೇಳಿದ್ದಕ್ಕೆಲ್ಲಾ ಹೂಂ ಎಂದು ಹೇಳುತ್ತಾ ವಿಶ್ವ ವನ್ನು ಒಂದು ಅಭದ್ರ ತಾಣ ವಾಗಿಸಿದ ಕೀರ್ತಿ ಇಂಗ್ಲೆಂಡ್ ದೇಶಕ್ಕಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ಅಮೆರಿಕೆಯ ಕುಂಡೆಗೆ ಭದ್ರವಾಗಿ weld ಮಾಡಿ ಕೊಂಡು ತನ್ನ ತನವನ್ನು ಕಳೆದುಕೊಂಡ ಬ್ರಿಟನ್ ತನ್ನ ತಟ್ಟೆಯಲ್ಲಿರುವುದತ್ತ ಕಣ್ಣು ಹಾಯಿಸುವುದು ಒಳ್ಳೆಯದು.

ನಾಯಕರನ್ನು ನಾಯಿಗೆ ಸಮಾನವಾಗಿ ತೋರಿಸುವುದು, ನಾಯಕರ ನ್ನು ಸ್ವಾಗತಿಸುವ ಚಿತ್ರ ಬಿಟ್ಟು ನಾಯಿಯ ಚಿತ್ರ ಹಾಕುವುದು ಬ್ರಿಟಿಷರ ಹಳೆಯ ಜಾಯಮಾನ. ಪ್ರಧಾನಿ ರಾಜೀವ ಗಾಂಧಿಯವರ ಚೊಚ್ಚಲ ಬ್ರಿಟಿಶ್ ಪ್ರವಾಸದ ಸಮಯ ಅವರನ್ನು ಸ್ವಾಗತಿಸಲು ಅಂದಿನ ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಾರನೆ ದಿನದ ಪತ್ರಿಕೆಯಲ್ಲಿ ಥ್ಯಾಚರ್ ರಾಜೀವ್ ಹಸ್ತ ಲಾಘವ ಮಾಡುತ್ತಿದ್ದ ಚಿತ್ರದ ಬದಲು ಬಂದಿದ್ದು ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಇರುವಾಗ ಅಲ್ಲೇ ಇದ್ದ ಪೋಲೀಸ್ ನಾಯಿಯ ತಲೆ ಸವರುವ ಥ್ಯಾಚರ್ ರ ಚಿತ್ರ. ಇದು ಈ ಮಾಜೀ ಯಜಮಾನರು ನಮಗೆ ತೋರಿಸೋ ಮರ್ಯಾದೆ.

ನೂರು ದಿನಗಳ ನಂತರ…

ಇಂದಿಗೆ ಸರಿಯಾಗಿ ನೂರು ದಿನಗಳು. ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಧಿಕಾರ ವಹಿಸಿ ಕೊಂಡಲ್ಲ. ಪಾಪ ಇನ್ನೂರು ಘಂಟೆಗಳೂ ಕಳೆದಿಲ್ಲ ಅವರಿಗೆ. ನಮ್ಮ ದೇಶದ hottest ಕುರ್ಚಿ ಮೇಲೆ ಕೂತು. ನೂರು ದಿನಗಳು ಕಳೆದಿದ್ದು ನನ್ನ ಹಳೆ ಸೇತುವೆ ಮೇಲೆ ಓಡಾಡಿ. ಮೇ ಐದಕ್ಕೆ ನನ್ನ ಕೊನೆಯ ಬ್ಲಾಗು. ನಾನು ಬ್ಲಾಗ್ ಅನ್ನ ಅಪ್ಡೇಟ್ ಮಾಡದೇ ಇದ್ದರೆ ಆಗಸವೇನೂ ಕಳಚಿ ಬೀಳೋಲ್ಲ ಅನ್ನಿ, ಆದರೂ ಅಲ್ಲಿ ಇಲ್ಲಿ ಅಂತ ಕೆಲವು “ರವಿ” ಯವರಂಥ ಸಹೃದಯಿಗಳು ನನ್ನ “ಭಾರತ ಬಂದ್” ಗೆ ಬಿಕೋ ಎನ್ನುವ ಬೀದಿಗಳ ಥರ ನನ್ನ ಸೇತುವೆಯೂ ಬರಿದಾದದ್ದರ ಕುರಿತು ಕಾಳಜಿಯಿಂದ ಬರೆದು ಕೇಳುತ್ತಾರೆ. ಏನ್, ಅಬ್ದುಲ್, ಸೇತುವೆ ಮೇಲೆ ಕಲರವ ಕೇಳಿಸ್ತಾ ಇಲ್ವಲ್ಲಾ ಎಂದು. ಈ ನೂರು ದಿನಗಳ ಅವಧಿಯಲ್ಲಿ ಸೇತುವೆ ಅಡಿ ಸಾಕಷ್ಟು ಕಬ್ಬಿಣ, ಉಕ್ಕು, ಸಕ್ಕರೆ, ಕಾರ್ಖಾನೆಗಳ ಹೊಲಸು ತುಂಬಿ ಕೊಂಡಿದೆ. ಸಾಲದೆಂಬಂತೆ ಸಾಕಷ್ಟು ಮೊಸಳೆಗಳೂ ಮರಿ ಹಾಕಿವೆ. ಹಾಂ, ಮೊಸಳೆ? ಭದ್ರಾ ನದಿಯಲ್ಲಿ? ಎಂದಿರಾ. ಹೌದಂತೆ. ಕಳೆದ ತಿಂಗಳ ಭಾರತ ಪ್ರವಾಸ ದ ವೇಳೆ ಸಿಕ್ಕ ಮಾಹಿತಿ ಇದು. ವೆರಿ ವೆರಿ ಥಾಟ್ ಪ್ರೊವೋಕಿಂಗ್. ಸಾರಿ, ಸಾರಿ ವೆರಿ ವೆರಿ ಫ್ರೈಟನಿಂಗ್. ಅಲ್ವಾ ಮತ್ತೆ. ಇದೇ ಭದ್ರಾ ನದಿಯಲ್ಲಿ ನಾನೆಷ್ಟು ಸಲ ಮನೆಯವರ ಕಣ್ತಪ್ಪಿಸಿ ನದೀ ಮಧ್ಯದ ಆಮೆ ಕಲ್ಲಿನ ಮೇಲೆ ಹಾಯಾಗಿ ಬಿದ್ದು ಕೊಂಡಿರಲಿಕ್ಕಿಲ್ಲ? ನಮ್ಮ ಹೆಂಗಳೆಯರೂ ಬಟ್ಟೆ, ಪಾತ್ರೆ ಪಗಡಿ ತೊಳೆಯಲು ಎಂದು ಹೋಗಿಲ್ಲ? ಈಗ ನೋಡಿದರೆ ಮೊಸಳೆಗಳ ಅಡ್ಡಾ ಆಗಿದೆಯಂತೆ ಭದ್ರಾ. ಒಂದು ಕಡೆ ನಮ್ಮ ದೇಶ ಲಂಚಗಡುಕ ಮೊಸಳೆಗಳ ಅಡ್ಡಾ ಆಗುತ್ತಿದ್ದರೆ ಮತ್ತೊಂದು ಕಡೆ ನನ್ನ ಪ್ರೀತಿಯ ಭದ್ರಾ ನದಿ ಮೊಸಳೆಗಳ ಅಡ್ಡಾ. ಅಬ್ಬಾ! ಆದರೂ ಈ ಸಲ ಹೋದಾಗ ಅಲ್ಲಿ ಇಲ್ಲಿ ಎಂದು ಹೆಣ್ಣು ಮಕ್ಕಳು ಈಗಲೂ ಬಟ್ಟೆ ಒಗೆಯುತ್ತಿದ್ದರು. ಇಲ್ಲದಿದ್ದರೂ ನಮ್ಮ ಜನರಿಗೆ ಭಂಡ ಧೈರ್ಯ ಸ್ವಲ್ಪ ಹೆಚ್ಚೆಂದೇ ಹೇಳಬೇಕು. ಈ ಸಲ ಭಾರತಕ್ಕೆ ಬರೋ ಮೊದಲು ನದಿಯ ಮೇಲೆ ತೆಪ್ಪದ ಮೇಲೆ ತೆವಳುವ ಆಸೆ ಉಟ್ಕಂತು. ತೆಪ್ಪ ಗೊತ್ತಲ್ಲ? ದುಂಡಗಿನ, ಯಾವುದೋ ಒಂದು ಗಡುಸಾದ ಪ್ರಾಣಿಯ ಚರ್ಮ ವನ್ನು ಮರದ ಫ್ರೇಮ್ ಗೆ ಅಂಟಿಸಿ ತಯಾರಿಸಿದ ವೆರಿ ಸಿಂಪಲ್ ದೋಣಿ. ಅದೇ ತೆಪ್ಪ. ಆಂಗ್ಲ ಭಾಷೆಯಲ್ಲಿ ತೆಪ್ಪಕ್ಕೆ coracle ಎನ್ನುತ್ತಾರೆ. ಸರಿ ನನ್ನ ತೆಪ್ಪದ ಮೇಲಿನ ತೆವಳುವಿಕೆಯ ಆಸೆ ಮೊಸಳೆ ಬಾಯಿ ಸೇರಿ ಕೊಂಡಿತು. ತೆಪ್ಪದ ಮೇಲೆ ಪಯಣಿಸುವ ಆಸೆ ನನ್ನ ಮಿತ್ರರಿಗೆ ಹೇಳಿದಾಗ ಯಾಕಪ್ಪಾ, ಸಾಯೋಕೆ ಸೌದಿ ಯಲ್ಲಿ ಜಾಗ ಸಿಗ್ಲಿಲ್ವಾ ಎಂದು ಹೇಳುತ್ತಾ ಮೊಸಳೆ ಕತೆ ಕೇಳಿಸಿದರು. ಅಲ್ಲಿಗೆ ಆ ಆಸೆ ಮುದುರಿಕೊಂಡಿತು. ಈ ನೂರು ದಿನಗಳ ಅವಧಿಯಲ್ಲಿ ನಮ್ಮ ರಾಜ್ಯದಲ್ಲಿ ನಿತ್ಯಾನಂದನ ರಾಸ ಲೀಲೆಯಿಂದ ಹಿಡಿದು ಯಡ್ಡಿ, ಸದಾನಂದರ ರಾಜಕೀಯ ದಾಳದಾಟ, ರಾಷ್ಟ್ರಪತಿ ಹುದ್ದೆಗೆ ಇದ್ದಕ್ಕಿದ್ದಂತೆ ಯೋಗ್ಯರ ಬರ ನಮ್ಮ ದೇಶದ ಮೇಲೆ ಮಗುಚಿ ಬಿದ್ದಿದ್ದು (ಭಾರತದ ಕ್ರಿಕೆಟ್ ಗೆ ಸಚಿನ್ ಬಿಟ್ಟರೆ ಬೇರೊಬ್ಬ ಹುಟ್ಟಿಲ್ಲ, ರಾಷ್ಟ್ರ ಪತಿ ಹುದ್ದೆಗೆ ಕಲಾಮ್ ಬೇರೆ ಯಾರನ್ನೂ ಭಾರತ ಮಾತೆ ಹೆತ್ತಿಲ್ಲ, ಎಂಥ ದಿವಾಳಿತನ ನೋಡಿ), ಸಿರಿಯಾ ದೇಶದ ಹಸನ್ಮುಖಿ ಸರ್ವಾಧಿಕಾರಿ ಎಗ್ಗಿಲ್ಲದೆ ತನ್ನ ಜನರನ್ನ ಕೊಲ್ಲುತ್ತಿರುವುದು.. ಹೀಗೆ ಹತ್ತು ಹಲವು ಸಂಗತಿಗಳು, ಬೆಳವಣಿಗೆಗಳು ನನ್ನನ್ನ ಕೀಲಿ ಮಣೆ ಕಡೆ ಮುಸುಡಿ ತಿರುಗಿಸಲು ವಿಫಲವಾಗಿದ್ದು god particle ನಷ್ಟೇ ರೋಚಕ.

ನನ್ನ ಭಾರತದ ಪ್ರವಾಸ ಸಮಯದ ಒಂದೆರಡು ಕತೆ ಒಂದೆರಡು ದಿನಗಳಲ್ಲಿ ಹೇಳುತ್ತೇನೆ. ಒಂದೆರಡು ಚಿತ್ರಾ ನೂ ಆಕ್ತೀನಿ. ವಸಿ ತಡ್ಕಳಿ.