ಇನ್ನಾದರೂ ಜೀವನದಲ್ಲಿ ಹಿಂದೆ ಬನ್ನಿ ಹಾಡಿನಲ್ಲಿ ಮುಂದೆ ಬರುವ ಹುರುಪು ಇರಬಹುದು ಆದರೆ ನಿಜ ಜೀವನದಲ್ಲಿ ಕೆಲವೊಮ್ಮೆ ಹಿಂದೆ ಹೋಗುವ ಅವಶ್ಯಕತೆ ಬರುತ್ತದೆ. ಆಂಗ್ಲ ಭಾಷೆಯಲ್ಲಿ back to basics ಎನ್ನುತ್ತಾರೆ. ನೈತಿಕವಾಗಿ ಅಧಃಪತನದ ಹಾದಿ ಹಿಡಿದಾಗ ಹೇಳುವುದಿದೆ ಕಾಲ ಕೆಟ್ಟು ಹೋಯಿತು, now is time to look back ಅಂತ. ಕಾಲ ಎಂದಿಗೂ ಕೆಡುವುದಿಲ್ಲ, ಕಾಲವನ್ನು ಕೆಡಿಸುವವರು ನಾವು. ಇಷ್ಟೆಲ್ಲಾ ಹೇಳಲು ಕಾರಣ ಆಧುನಿಕ ಬದುಕಿನ ನೂರಾರು ಆವಿಷ್ಕಾರಗಳಲ್ಲಿ ಒಂದಾದ ಪ್ಲಾಸ್ಟಿಕ್ ಹೇಗೆ ನಮ್ಮ ಭೂಮಿಯ ಮೇಲಿನ ಬದುಕನ್ನು ದುಸ್ತರಗೊಳಿಸುತ್ತದೆ ಮತ್ತು ಅದನ್ನು ನಿಗ್ರಹಿಸಲು ನಾವೆಷ್ಟು ಶ್ರಮ ಪಡುತ್ತಿದ್ದೇವೆ ಎನ್ನುವುದರತ್ತ ಒಂದು ನೋಟ ಹರಿಸೋಣ. ಮಾರುಕಟ್ಟೆಗೆ ಕರಿಬೇವು ತರಲು ಹೋದರೆ ಕೂಡಲೇ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಾನೆ ಅಂಗಡಿಯವ. ಕಾಲವೊಂದಿತ್ತು ಬಟ್ಟೆ ಚೀಲವನ್ನು ಶಾಪಿಂಗ್ ವೇಳೆ ಕೊಂಡುಹೋಗುವುದು. ಈಗ ಅದು outdated ಮತ್ತು out of sync. ಕಾಲದೊಂದಿಗೆ ಹೆಜ್ಜೆ ಹಾಕಲು ಬರದವ ಎಂದು ಕನಿಕರದ ನೋಟ ಎದುರಾಗುತ್ತದೆ. ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಚೀಲದ ಉಪಯೋಗದಿಂದ ಆಗುವ ಅನಾಹುತ ಕೇಳಿಯೇ ಇದ್ದೇವೆ. ಕೆಲ ವರ್ಷಗಳ ಹಿಂದೆ ಮುಂಬೈ ಮಹಾ ನಗರದ ಚರಂಡಿಗಳು ಪಾಲಿಥಿನ್ ಚೀಲಗಳಿಂದ ತುಂಬಿ ಮಳೆ ನೀರು ಹರಿದು ಹೋಗಲು ಸ್ಥಳ ಇಲ್ಲದೆ ಪ್ರವಾಹದ ಪರಿಸ್ಥಿತಿ ನಿರ್ಮಿತವಾಗಿತ್ತು. ಇಂಥ ಘಟನೆಗಳಿಂದ ಬುದ್ಧಿ ಕಲಿಯುವ ಇರಾದೆ ಮತ್ತು ಸಮಯ ನಮಗಿಲ್ಲದಿದ್ದರೂ ಪಕ್ಕದ ಚೀನಾ ದೇಶ ಮಾತ್ರ ದೊಡ್ಡ ಅನಾಹುತ ಎರಗುವ ಮೊದಲೇ ಎಚ್ಚತ್ತುಕೊಳ್ಳುವ ಸಿದ್ಧತೆ ಮಾಡಿದೆ. ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಚೀನಾ ನಿಸರ್ಗಕ್ಕೆ ಮಾಡಿದ ಅನ್ಯಾಯದ ಅರಿವು ತಡವಾಗಿಯಾದರೂ ಬಂದಿತು. ಪ್ರತಿ ದಿನ ೩ ಕೋಟಿ ಚೀಲಗಳನ್ನು ಬಳಸುವ ಚೀನಾ ಇಂಥ ಚೀಲಗಳ ಉತ್ಪಾದನೆಗೆ ಬಹಳಷ್ಟು ಸಂಪನ್ಮೂಲಗಳನ್ನು ಉಪಯೋಗಿಸಬೇಕಿತ್ತು. ಅಮೇರಿಕಾ ಈ ಪ್ರಮಾಣದ ( ೩ ಕೋಟಿ ) ಚೀಲ ಬಳಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಚೀನಾ ಈಗ ಪಾಲಿಥಿನ್ ಚೀಲದ ಮೇಲೆ ನಿರ್ಬಂಧ ಹೇರಿದ್ದು ಸಾರ್ವಜನಿಕ ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ. ಈ ವಿಷಯದಲ್ಲಿ ನಾವೇಕೆ ಹಿಂದೆ ಬೀಳಬೇಕು? ಇನ್ನು ಮುಂದೆ ಸಾಮಾನು ಕೊಳ್ಳಲು ಹೋಗುವಾಗ ಬಟ್ಟೆ ಚೀಲವನ್ನು ಏಕೆ ಉಪಯೋಗಿಸಬಾರದು. ನಾವು ಮಾತ್ರವಲ್ಲ, ಮನೆಯವರಿಗೂ, ನೆಂಟರಿಷ್ಟರಿಗೂ ಸ್ನೇಹಿತರಿಗೂ ಇದರ ಬಗ್ಗೆ ತಿಳಿ ಹೇಳಿ ಒಂದು ಪುಟ್ಟ ಅಭಿಯಾನ ಆರಂಬಿಸಿದರೆ ಹೇಗೆ? every great journey starts with one small step, ಅಲ್ಲವೇ?
Uncategorized
ಆಗದು ಎಂದು ಕೈ ಕಟ್ಟಿ ಕುಳಿತರೆ….
ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನೋ ಹಂಬಲ ಹಲವರಲ್ಲಿ ಇರುತ್ತದೆ. ಆದರೆ ಪರಿಸ್ಥಿತಿಗಳ ಒತ್ತಡದಿಂದ ಕೆಲವರಿಗೆ ಅವು ಸಾಧ್ಯವಾಗದೇ ಆಸೆ ಸುಪ್ತ ಮನಸ್ಸಿನಲ್ಲಿ ಅದಮ್ಯವಾಗಿ ಕುಳಿತು ತಕ್ಕ ಸಮಯಕಾಗಿ ಕಾಯುತ್ತಿರುತ್ತದೆ. ಆದರೆ ಅಂಥ ಆಸೆ ಈಡೇರಿಸಿಕೊಳ್ಳುವ ಸಮಯ ಬಂದಾಗ ಕೆಲವೊಮ್ಮೆ ಮುಪ್ಪು ಆವರಿಸಿ ಮನಸ್ಸಿನಲ್ಲಿ ಗೊಂದಲ, ಶಂಕೆ ಮನೆ ಮಾಡಿ ಆಸೆಯನ್ನು ತಮ್ಮ ಗೋರಿಗಳಿಗೆ ಕೆಲವರು ಕೊಂಡೊಯ್ದರೆ ಇನ್ನೂ ಕೆಲವರು ಮುಪ್ಪಿಗೆ ತಮ್ಮ ಛಲ ಮತ್ತು ಬಯಕೆಯನ್ನು ಬಲಿಕೊಡದೆ ತ್ರಿವಿಕ್ರಮನಂತೆ ತಮ್ಮ ಗುರಿಯತ್ತ ಸಾಗುತ್ತಾರೆ. ಆಂಗ್ಲ ಭಾಷೆಯ ಮಾತಿನಂತೆ its never too late ಮತ್ತು never say never again ಮಾತಿಗೆ ಉದಾಹರಣೆಯಾಗಿ ಕಂಗೊಳಿಸುವ ಸಾಧಕರು ನಮಗೆ ಬಹಳಷ್ಟು ಮಂದಿ ಸಿಗುತ್ತಾರೆ. ಅಂಥ ಅಪರೂಪದ ಸಾಧಕರಲ್ಲಿ ವಿಶ್ವದ ಅತಿ ಹಿರಿಯ blogger ಎಂಬ ಹೆಗ್ಗಳಿಕೆಗೆ ಪಾತ್ರರು 96 ವರುಷದ ಭಾರತೀಯ ಮೂಲದ ಈಗ ಅಮೇರಿಕೆಯಲ್ಲಿ ನೆಲೆಸಿರುವ ರಂಡಲ್ ಬೂಟಿ ಸಿಂಗ್. browse ಮಾಡುತ್ತಿದ್ದಾಗ ಆಕಸ್ಮಿಕವಾಗಿ ಸಿಕ್ಕ ಈ ಬ್ಲಾಗ್ ನೋಡಿ ತುಂಬಾ ಖುಷಿಯ ಜೊತೆ ಸಾಕಷ್ಟು ಉತ್ತೇಜನವೂ ಸಿಕ್ಕಿತು. 80 ನೆ ವಯಸ್ಸಿನಲ್ಲಿ ಪವಿತ್ರ ಕುರಾನ್ ಕಲಿಯಲು ಅರೇಬಿಕ್ ಭಾಷೆ ಕಲಿತ ಇವರು ಮುಸ್ಲಿಮರಾಗಿರುವ ತಮ್ಮಮಗಳು ಮತ್ತು ಅಳಿಯನ್ದಿರೊಂದಿಗೆ ವಾಸವಾಗಿದ್ದಾರೆ. ಬದುಕು 80 ರಲ್ಲಿ ಆರಂಭವಾಗುತ್ತದೆ ಎನ್ನುವ website ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಆದರ್ಶ ತಂದೆ
ಕುಖ್ಯಾತ ಕಾಡುಗಳ್ಳ ಮತ್ತು ಆನೆ ಹಂತಕ ವೀರಪ್ಪನ ಹತ್ಯೆಯೊಂದಿಗೆ ಕಾನನದೊಳಗಿನ ಮಾನವನ ಆಕ್ರಂದನಕ್ಕೆ ತೆರೆ ಬಿತ್ತು. ಆನೆಗಳಿಗೂ, ವೃಕ್ಷಗಳಿಗೂ, ಪೊಲೀಸರಿಗೂ, ಜನಸಾಮಾನ್ಯರಿಗೂ ಸಿಂಹ ಸ್ವಪ್ನವಾಗಿದ್ದು ವ್ಯವಸ್ಥೆ ನಪುಂಸಕವೇನೋ ಎಂದು ಅನುಮಾನ ಹುಟ್ಟುವಷ್ಟು ಎತ್ತರ ಬೆಳೆದಿದ್ದ ಆಗಾಧ ಮೀಸೆಯ ಸಣ್ಣ ಮನುಷ್ಯ ಕೊನೆಗೂ ಬಲಿಯಾದ ಪೋಲೀಸರ ಗುಂಡಿಗೆ. ಅವನ ಪುತ್ರಿಗೆ IAS ಮಾಡುವ ಬಯಕೆಯಂತೆ. IAS, IPS ಅದ್ಧಿಕಾರಿಗಳ ನಿದ್ದೆಗೆಡಿಸಿದ್ದ ಈ ಅಪ್ಪನ ಮಗಳಿಗೆ ಅಧಿಕಾರಿಯಾಗುವ ಆಸೆ. ಅಷ್ಟು ಮಾತ್ರ ಅಲ್ಲ ತನ್ನ ತಂದೆ ಇವಳಿಗೆ ಆದರ್ಶ ವ್ಯಕ್ತಿಯಂತೆ. ಈ ಆದರ್ಶ ವ್ಯಕ್ತಿಯನ್ನು ಈಕೆ ತನ್ನ ಬದುಕಿನಲ್ಲಿ ಕಂಡಿದ್ದು ಎರಡೇ ಎರಡು ಸಲ. ಅದೆಂಥ ಪ್ರಭಾವ ಬೀರಿರಬೇಕು ಅವಳ ತಂದೆ?
ಇವಳ ಆದರ್ಶದ ವ್ಯಕ್ತಿಯ ಮಾತ ಕೇಳಿ ಅಳಿದುಳಿದ ಆನೆಗಳು ಈಗ ಕಾಡು ಬಿಟ್ಟು ಓಡಿದರೆ ಅಚ್ಚರಿಯಂತೂ ಇಲ್ಲ ಅನ್ನಿ.
Rain, rain, go away..
ಮುಂಗಾರು ಮಳೆಯ ಆರ್ಭಟ ಜನರನ್ನು ಕಂಗೆಡಿಸಿದೆ. ಬೆಂಬಿಡದ ಭೂತದಂತೆ ಬೆನ್ನು ಬಿದ್ದಿರುವ ಮಳೆಯಿಂದ ಸಾವು ನೋವು ಮಾತ್ರವಲ್ಲ ಕೋಟ್ಯಾಂತರ ರೂಪಾಯಿಗಳ ನಷ್ಟ ಬೇರೆ. ಮಳೆರಾಯನನ್ನು ಒಲಿಸಲು ಕಪ್ಪೆಗಳಿಗೂ ಕತ್ತೆಗಳಿಗೂ ಮದುವೆ ಸೀಮಂತ ಮಾಡಿದ ನಾವು ಈಗ ಮಳೆ ನಿಲ್ಲಿಸುವಂತೆ ವರುಣನ ಕಾಲಿಗೆ ಬೀಳಲು ತಯಾರಾಗಿದ್ದೇವೆ. ಬತ್ತಿದ ನದಿಗಳೆಲ್ಲ ಮೈ ತುಂಬಿಕೊಂಡಿದ್ದನ್ನು ನೋಡಿ ನಲಿದ ನಮಗೆ ಈಗ ಮಳೆರಾಯನ ಕೃಪೆ ಅವಶ್ಯಕತೆಗಿಂತ ಹೆಚ್ಚಾದಾಗ ಆಜೀರ್ಣವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ೩೯ ವರ್ಷಗಳಲ್ಲಿ ಆಗದ ಮಳೆ ಈಗ ಆಗುತ್ತಿದ್ದು ರೈತರ ಪೈರು ನೀರು ಪಾಲಾಗಿ ಹಲುಬುವಂತೆ ಮಾಡಿದೆ. ಮಳೆಯಿಂದ ನಿಸರ್ಗ ಕಂಗೊಳಿಸುತ್ತಿದ್ದರೂ ಜನ ಕಂಗಾಲಾಗುವಂತೆ ಮಾಡಿದೆ ಈ ಮಳೆ. ಹೀಗೆ ಪ್ರಕೃತಿಯ ವಿಕೋಪ ನಮ್ಮ ಮೇಲೆ ಎರಗಲು ನಾವು ಮಾಡಿದ ಪಾಪಗಳೇ ಕಾರಣ. ಈ ಮಾತು ಅತಿಶಯೋಕ್ತಿಯಲ್ಲ. ಅತಿಯಾಸೆಯಿಂದ ಪ್ರಕೃತಿಯ ಮೇಲೆ ಧಾಳಿ ಮಾಡಿದ ನಮಗೆ ಪ್ರಕೃತಿಯ ಕೃಪೆ ಸಿಗುವುದಾದರೂ ಹೇಗೆ? ಕಾಡನ್ನು ಬೋಳಿಸುವುದು, ಗುಡ್ಡಗಳನ್ನು ನೆಲಸಮ ಮಾಡುವುದು, ಭೂ ಸವೆತ, ಎರ್ರಾಬಿರ್ರಿ ಕಾರ್ಖಾನೆಗಳ ಸ್ಥಾಪನೆಯಿಂದ ವಿಷಾನಿಲವನ್ನು ಆಗಸಕ್ಕೂ, ಕಲ್ಮಶಗಳನ್ನು ನದೀ ಸಮುದ್ರಗಳಿಗೆ ಬಿಡುವುದೂ ಮಾಡಿದ್ದರಿಂದ ನಿಸರ್ಗದ ಲೆಕ್ಕಾಚಾರದಲ್ಲಿ ಏರುಪೆರುಂಟಾಗಿ ಈ ರೀತಿಯ ಸಮಸ್ಯೆಗಳು ತಲೆದೋರುತ್ತಿವೆ. ನಿಸರ್ಗವನ್ನು ಗೌರವಿಸದ, ಆದರಿಸದ ನಮಗೆ ನಿಸರ್ಗ ನಮ್ಮ ಮೇಲೆ ಕರುಣೆಯನ್ನು ಹೇಗೆ ತೋರಬಹುದು?
ಮನೋರಂಜನೆ ಮತ್ತು ಮಕ್ಕಳು
” ವಿದ್ಯುಚ್ಛಕ್ತಿ ತಡೆಯಿಲ್ಲದೆ ಸರಬರಾಜಿದ್ದರೆ ಜನ ತಡ ರಾತ್ರಿವರೆಗೂ ಟೀ ವೀ ನೋಡಿ ಮಲಗಿಬಿಡುವುದರಿಂದ ಮಕ್ಕಳನ್ನು ಉತ್ಪಾದಿಸಲು ಅವಕಾಶ ಸಿಗದು ಎಂದು ನಮ್ಮ ಸನ್ಮಾನ್ಯ ಕೇಂದ್ರ ಆರೋಗ್ಯ ಮಂತ್ರಿ ಗುಲಾಂ ನಬಿ ಆಜಾದ್ ಭಾರತದ ಜನ ಸಂಖ್ಯೆ ತಡೆಯಲು ತಮ್ಮದೇ ಆದ ಸುವರ್ಣ ಸೂತ್ರ ಬೋಧಿಸಿದರು. ಇದು ಎಷ್ಟು ಯಶಸ್ವಿ ಸೂತ್ರವೋ ಏನೋ ಕಾಲವೇ ಹೇಳಬೇಕು.
ನನ್ನ ಪ್ರಕಾರ ಜನಸಂಖ್ಯೆ ವೃಧ್ಧಿಗೂ ಮನೋರಂಜನೆಗೂ ಯಾವುದೇ ಸಂಬಂಧವಿಲ್ಲ. ಲೈಂಗಿಕ ಕ್ರಿಯೆ ನಡೆಸುವವನಿಗೆ ಕರೆಂಟ್ ಇದ್ದರೂ ಬಿಟ್ಟರೂ ಕಾಮ ಕೇಳಿಗೆ ಯಾವ ಅಡಚಣೆಯೂ ಬರದು. ಉದಾಹರಣೆಗೆ ಒಬ್ಬ ಶ್ರಮಜೀವಿ ತನ್ನ ಕೆಲಸ ಮುಗಿಸಿ ದಣಿದು ಮನೆಗೆ ಬಂದಾಗ ಅವನಿಗೆ ಬೇಕಿದ್ದರೆ ಲೈಂಗಿಕ ಕ್ರಿಯೆ ನಡೆಸಿಯೇ ತೀರುತ್ತಾನೆ. ಇನ್ನು ಅವನಿಗೆ ಪೂರಕ ಮನೋರಂಜನೆಯನ್ನು ಕೊಟ್ಟು ನೋಡಿ. ಕೆಲಸ ಮುಗಿಸಿ ದಣಿದು ಬಂದು ಒಂದಿಷ್ಟು ವಿಶ್ರಮಿಸಿ ಟೀವೀ ನೋಡುತ್ತಾನೆ. ಟೀವೀಯಲ್ಲಿ ತೋರಿಸುವುದಾದರೂ ಏನನ್ನು? ಬಿಪಾಶಾಳ ಮೈಮಾಟವನ್ನೂ, ನಿಹಾ ಧುಪಿಯಾಳ ಅಂಗಸೌಷ್ಟವವನ್ನೂ ಅಲ್ಲವೇ? ಇದನ್ನು ನೋಡಿದ ನಮ್ಮ ಉಪ್ಪು ಹುಳಿ ತಿಂದ ಶ್ರಮ ಜೀವಿ ಇನ್ನ್ನಷ್ಟು ಉದ್ರೇಕಗೊಂಡು ರತಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳದೆ ಇರುತ್ತಾನೆಯೇ? ಎಲ್ಲಾ ರೀತಿಯ ಮನೋರಂಜನೆಯನ್ನು ನೀಡಿದ ಮತ್ತು ಪಡೆದ ಮಾಜಿ ಮಂತ್ರಿ ಮಹೋದಯರಾದ ಲಾಲೂ ಪ್ರಸಾದ್ ಅವರಿಗೆ ಎಷ್ಟು ಮಕ್ಕಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ?
ಜನಸಂಖ್ಯೆ ಅ ನಿಯಂತ್ರಣಕ್ಕೆ ಬೇಕಿರುವುದು ಅತ್ಯಂತ ಪ್ರಭಾವೀ ಮತ್ತು ಜ ಕ್ರಿಯಾತ್ಮಕ ಅಭಿಯಾನ. ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದರೆ ಆಗುವ ಅಭಾಸ ಜನಸಂಖ್ಯೆಯ ಹೆಚ್ಚಳ. ಉತ್ತರ ಭಾರತದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದ್ದರಿಂದ ನಾವು ಅಸಹಾಯಕರೆಂದು ಆಂಗ್ಲ ಪತ್ರಿಕೆಯ ವರದಿಗಾರ್ತಿಗೆ ತಿಳಿಸಿದಳು. ಆರೋಗ್ಯ ಮಂತ್ರಿಗಳ ಸೂತ್ರದ ಬಗ್ಗೆ ಕೇಳಿದಾಗ “ಓರ್ವ ಗಂಡು ಮತ್ತು ಚಂಡಮಾರುತ ಮೇಲೆರಗುವ ಮೊದಲು ಮುನ್ಸೂಚನೆಗಳನ್ನೇನೂ ಕೊಡುವುದಿಲ್ಲ” ಎಂದು ಹಾಸ್ಯ ಚಟಾಕಿ ಹಾರಿಸಿದಳು. ನಮ್ಮ ಕಾಲದಲ್ಲಿ ಪ್ರತಿಯೊಬ್ಬರಿಗೂ 13 ಮಕ್ಕಳಿದ್ದು ಈಗ ಕುಟಂಬ ಯೋಜನೆ ಪ್ರಭಾವದಿಂದ ನಾಲ್ಕರಿಂದ ಆರಕ್ಕೆ ಇಳಿದಿದೆ ಎಂದು ವಯಸ್ಸಾದ ಮಹಿಳೆಯೊಬ್ಬರು ಹೇಳಿದರು. ಈ ವರದಿಗಳನ್ನು ನೋಡಿದಾಗ ನಮಗನ್ನಿಸುವುದು ಮಕ್ಕಳ ಸಂಖ್ಯೆ ನಿರ್ಧರಿಸುವುದರಲ್ಲಿ ಗಂಡಿನ ಪಾತ್ರವೂ ಮತ್ತು ಹೆಣ್ಣುಮಕ್ಕಳಲ್ಲಿ ಶಿಕ್ಷಣದ ಕೊರತೆಯೂ ಇರುವುದು.
ಇನ್ನು ಕೆಲವೊಂದು ಸ್ವಾರಸ್ಯಕರವಾದ ಅಂಕಿ ಅಂಶಗಳತ್ತ ದೃಷ್ಟಿ ಹರಿಸೋಣ.
೧. ಭಾರತದಲ್ಲಿ ಜನಸಂಖ್ಯೆ ವಿಪರೀತ ಹೆಚ್ಚುತ್ತಿದೆ.
ತಪ್ಪು. ನಿಜವೆಂದರೆ ೧೯೮೧ ರಿಂದ ಜನಸಂಖ್ಯೆ ಇಳಿಯುತ್ತಿದೆ.
೨. ಜನಸಂಖ್ಯೆ ಅವಿದ್ಯಾವಂತರಲ್ಲೂ ಮತ್ತು ಗ್ರಾಮೀಣರಲ್ಲೂ ಹೆಚ್ಚಳ ಕಾಣುತ್ತಿದೆ.
ಇಲ್ಲ. ಗ್ರಾಮೀಣ ಜನರಲ್ಲೂ ಮತ್ತು ನಗರ ವಾಸಿಗಳಲ್ಲೂ ೭೦ ರ ದಶಕಕ್ಕೆ ಹೋಲಿಸಿದಾಗ ಜನಸಂಖ್ಯೆ ಶೇಕಡಾ ೪೪ ರಷ್ಟು ಇಳಿತ ಕಂಡಿದೆ.
೩. ಜನಸಂಖ್ಯೆ ಆಹಾರ ಉತ್ಪಾದನೆಯನ್ನು ಹಿಂದಕ್ಕೆ ಹಾಕಿದೆ.
ಇಲ್ಲ. ಆಹಾರ ಉತ್ಪಾದನೆ ೧೯೪೭ ರ ನಂತರ ನಾಲ್ಕು ಪಟ್ಟು ಹೆಚ್ಚಿದ್ದು ಅದೇ ಸಮಯ ಜನಸಂಖ್ಯೆ ಮೂರು ಪಟ್ಟು ಹೆಚ್ಚಿದೆ.
೪. ದೊಡ್ಡ ಜನಸಂಖ್ಯೆ ಬಡತನಕ್ಕೆ ಕಾರಣ.
ತಪ್ಪು. ಬಾಂಗ್ಲಾದೇಶ ೧೯೭೫ ರಿಂದ ೧೯೯೮ ರವರೆಗೆ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಗ್ರಹಿಸಿದ್ದು ಇನ್ನೂ ಬಡ ರಾಷ್ಟ್ರವಾಗಿಯೇ ಉಳಿದಿದೆ.
ವರದಕ್ಷಿಣೆ
ವರದಕ್ಷಿಣೆ ಒಂದು ಸಾಮಾಜಿಕ ಅನಿಷ್ಟ. ಇದು ಅದನ್ನು ಪಡೆಯುವವನಿಗೂ ಗೊತ್ತು. ಆದ್ರೇನು ಮಾಡೋದು ಪುಕ್ಕಟೆ ಸಿಗುವ ಹಣ ಅಲ್ಲವೇ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ಈ ವಿಷಯದಲ್ಲಿ ಎಲ್ಲಾ ಧರ್ಮೀಯರೂ ಸಮಾನರು. ಇಲ್ಲಿ ಮಾತ್ರ ಸಮಾನತೆ ವಿಜ್ರಂಭಿಸುತ್ತದೆ. ಗಂಡಿಗೆ ಲಾಭ ಆಗುವ ಸಮಾನತೆ. ಜಮಾತೆ ಇಸ್ಲಾಮಿನವರು ( ಮುಸ್ಲಿಂ ಸಾಮಾಜಿಕ ಸಂಘಟನೆ ) ಒಂದು ಅಭಿಯಾನ ಆರಂಭಿಸಿದರು. ವರದಕ್ಷಿಣೆ ಪುರುಷ ವೇಶ್ಯಾವಾಟಿಕೆಗೆ ಸಮಾನ ಎಂದು. ಎಲ್ಲ ಧರ್ಮಗಳ ಸುಧಾರಕರು ಈ ಅನಿಷ್ಟದ ವಿರುದ್ಧ ಕೂಗೆತ್ತಿದರು. ಫಲ ಅಷ್ಟಕ್ಕಷ್ಟೇ.
ಸರಿ ಅಷ್ಟೆಲ್ಲಾ ಕೊಟ್ಟು ಮದುವೆಯಾಗುವ ಹೆಣ್ಣಿಗೆ ಸಿಗುವುದು ಏನು? ವಿವಾಹಿತೆ ಅನ್ನೋ ಕಿರೀಟ. ಮದುವೆಯಾದ ಕೂಡಲೇ ತನ್ನ ತಂದೆಯ ಹೆಸರಿನಿಂದ ಗುರುತಿಸಲ್ಪಡುವುದಿಲ್ಲ. ಬದಲಿಗೆ ಇಂಥಹ ಮಹಾತ್ಮನ ಪತ್ನಿ ಎಂದು ಗುರುತಿಸುತ್ತಾರೆ ಜನ. ಅವಳ ವೇಷ ಭೂಷಣಗಳಲ್ಲೂ ಬದಲಾವಣೆ. ಒಂದಿಷ್ಟು ಹೆಚ್ಚುವರಿ ಉಡುಗೆ. ತಾಳಿಯಿಂದ ಹಿಡಿದು ಕಾಳುನ್ಗುರದವರೆಗೆ ಗಂಡನ ಅಸ್ತಿತ್ವ, ಪಾರುಪತ್ಯ ಸಾರಿ ತೋರಿಸುವ ಕುರುಹುಗಳು. ಈ ತ್ಯಾಗ ಹೆಣ್ಣಿನ ತಂದೆ ಸಾಲ ಸೋಲ ಮಾಡಿಯೋ, ಜೀವನ ಪೂರ್ತಿ ಉಳಿಸಿದ ಹಣ ತೆತ್ತೋ ಕೊಟ್ಟ ಕಪ್ಪ ಕಾಣಿಕೆ. ಅಷ್ಟೇ ಅಲ್ಲ, ವರದಕ್ಷಿಣೆ ಕೊಟ್ಟರಷ್ಟೇ ಸಾಲದು. ನೆರೆದ ನೂರಾರು ಜನರ ಮುಂದೆ ಇವನ ಪಾದಾರವಿನ್ದಗಳನ್ನು ಅತ್ತೆ ಮಾವ ತೊಳೆಯಬೇಕು. ಬೆಳ್ಳಿ ಬಟ್ಟಲಿನಲ್ಲೇ ತೀರ್ಥ ಕುಡಿಸಬೇಕು ಕಪ್ಪ ಕಾಣಿಕೆ ಪಡೆದ ದಣಿದ ದೇಹಕ್ಕೆ. ಬೆಳ್ಳಿ ಲೋಟ ಇಲ್ಲವೊ ಮಾವ ಕೊಟ್ಟ ವರದಕ್ಷಿಣೆಯ ಸ್ಕೂಟರಿನಲ್ಲೇ ಜಾಗ ಖಾಲಿ ಮಾಡುತ್ತಾನೆ.
ಒಮ್ಮೆ ಇಂಥ ಒಂದು ಸಂತೆಗೆ ಹೋಗುವ ಭಾಗ್ಯ ನನ್ನದು. ಮದುವೆಗೆ ಮುಂಚೆ ನಡೆಯುವ ಚೊಕಾಸಿ ವ್ಯಾಪಾರ ಕಂಡು ಹೇಸಿಗೆ ಆಯಿತು. ಜನ ಯಾವ ಮಟ್ಟಕ್ಕೆ ಇಳಿಯುವರು ಹಣದ ಆಸೆಯಲ್ಲಿ ಎಂದು ಅಚ್ಚರಿ ಪಟ್ಟೆ. ಕೋಲೆ ಬಸವನಂತೆ ಭಾವಿ ಮಾವನೆದುರು ತನ್ನ ತಂದೆ ಶಾಪಿಂಗ್ ಲಿಸ್ಟ್ ಓದುವುದನ್ನು ಜೊಳ್ಳು ಸುರಿಸುತ್ತಾ ನೋಡುವ ಗಂಡಿಗೆ ಎಕ್ಕಡ ಸೇವೆ ಮಾಡುವ ಮನಸ್ಸಾದರೂ ಭಯದಿಂದ ಸುಮ್ಮನಾಗುತ್ತೇನೆ. ಈ ಕುದುರೆ ವ್ಯಾಪಾರ ನಮ್ಮ ಮೌಲ್ವಿಗಳ ಎದುರಿನಲ್ಲಿ ನಡೆಯುವುದು ಮತ್ತೊಂದು ರೀತಿಯ ಅವಮಾನ.
ಇಸ್ಲಾಮಿನಲ್ಲಿ ವರದಕ್ಷಿಣೆ ಇಲ್ಲ. ಬೂಟಾಟಿಕೆ ಬಹಳಷ್ಟಿದೆ. ಗಂಡು ವಧು ದಕ್ಷಿಣೆ ಕೊಡಬೇಕು. ಓಕೆ, ವೈ ನಾಟ್? ನೆರೆದವರ ಮುಂದೆ ಕವಡೆ ಬಿಸಾಕಿ ಹಿಂದಿನ ಬಾಗಿಲಿನಿಂದ ಲಾರಿಗಟ್ಟಲೆ ಸಾಮಾನು, ನಾಗ ನಾಣ್ಯ ಲೂಟಿ. ದುಡ್ಡಿನ ಮುಂದೆ ಆದರ್ಶಗಳು ಆಲಸ್ಯದಿಂದ ಆಕಳಿಸುತ್ತವೆ.
ತೀರ ಗತಿಕೆಟ್ಟ ಕುಟುಂಬದವರಿಂದಲೂ ಹಣ ಬಯಸುವ ಗಂಡು ಅದ್ಹೇಗೆ ತಾನು ಗಂಡು ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯುತ್ತಾನೋ? ದರೋಡೆಕೋರನಿಗೆ ಕರುಣೆ ಎಲ್ಲಿಂದ ಅಲ್ಲವೇ? ಶ್ರೀಮಂತನ ಮನೆಯಾದರೂ ಸರಿ ದರಿದ್ರದವನ ಮನೆಯಾದರೂ ಸರಿ ತನಗೆ ಬೇಕಿದ್ದು ಸಿಗುವಾಗ ತಾರತಮ್ಯವೇಕೆ?
ಗಂಡಾಗಿ ಹುಟ್ಟುವುದೇ ಒಂದು ಕ್ವಾಲಿಫಿಕೇಶನ್ ಕೆಲವರಿಗೆ. ಈ ಕ್ವಾಲಿಫಿಕೇಶನ್ ಇಟ್ಟುಕೊಂಡು ಅವನು ಕೊಡುವ ಸರ್ವಿಸ್ ಗೊತ್ತೇ ಇದೆಯಲ್ಲ?
ಚಂಡಿ
ಇವಳೇ, ಪಕ್ಕದ ಚಿತ್ರದಲ್ಲಿರುವ ಪೋರಿಯೇ ಚಂಡಿ. ನನ್ನ ಮುದ್ದಿನ ಒಂದು ವರುಷ ೫ ತಿಂಗಳ ಚಂಡೀ. ಗಡಿಯಾರದ “ಸೆಕೆಂಡ್” ಮುಳ್ಳಿನಂತೆ ನಿಲ್ಲದ ಚಟುವಟಿಕೆ, ತುಂಟಾಟಿಕೆ. ಕೆಲವೊಮ್ಮೆ ಅಪಾಯಕಾರಿ ಆಟದಿಂದ ನಮ್ಮನ್ನು ತುದಿಗಾಲಿನಲ್ಲಿ ನಿಲ್ಲಿಸಿ ನಗುತ್ತಾಳೆ.
ಮನೆಗೆ ಜ್ಯೋತಿಯಾಗಿ ಬಂದ ಮಗ. ನಂತರ ಬೆಳದಿಂಗಳಾಗಿ ಬಂದಳು ನನ್ನ ಮಗಳು. ಗಂಡು ಮಕ್ಕಳು ತುಂಟರು, ಹೆಣ್ಣು ಮಕ್ಕಳು ಸ್ವೀಟ್ ಎನ್ನುತ್ತಾರೆ ಹಲವರು. ಆದರೆ ನನ್ನ ಮನೆಯಲ್ಲಿ ಇದು ವಿರುಧ್ಧ. ಸಹನೆಯ, ತಾಳ್ಮೆಯ ಸಾಕಾರ ನನ್ನ ಮಗ, ಎಲ್ಲಾ ಅವಾಂತರಗಳ ಕರ್ತೃ ನನ್ನ ಪುತ್ರಿ.
ಇವಳು ಬೆಳಿಗ್ಗೆ ಏಳುವುದೇ ಸೈರನ್ ಮೂಲಕ. ಎದ್ದು ಸೀದಾ ಅಡುಗೆ ಮನೆಗೆ ನಡೆದು ಒಂದಿಷ್ಟು ಪಾತ್ರೆಗಳನ್ನು ನೆಲಕ್ಕೆ ಕೆಡವಿ ತನ್ನ ದಿನ ಈ ರೀತಿ ಎಂದು ಪ್ರಚುರಪಡಿಸುತ್ತಾಳೆ. ತನ್ನ ೬ ವರ್ಷದ ಅಣ್ಣನನ್ನು ಸಾಕಷ್ಟು ಸತಾಯಿಸಿ ಶಾಲೆಗೆ ಕಳಿಸಿಕೊಟ್ಟು ತನ್ನ ಅಮ್ಮನನ್ನು ವಿಚಾರಿಸಿಕೊಳ್ಳುತ್ತಾಳೆ. ಶಾಲೆಯಿಂದ ಮನೆಗೆ ಮರಳಿದ ಹಿಶಾಮನ ಹಿಂದೆಯೇ ಸುತ್ತುತ್ತಾ ಅವನ ರೇಶಿಮೆಯಂಥ ಕೂದಲನ್ನು ಮನಸೋ ಇಚ್ಚೆ ಎಳೆದು ಆನಂದ ಪಡುತ್ತಾಳೆ. ಅವನ ಹೋಂ ವರ್ಕ್ ನ ಹಾಳೆಗಳನ್ನು ಕಸಿದು ಕೊಂಡು ಓಡುವ ಇವಳು ಪರಿಪರಿಯಾಗಿ ಬೇಡಿದ ನಂತರವೇ ಅವನಿಗೆ ಹಿಂದಿರುಗಿಸುವುದು.
ಒಂದು ದಿನ ಶಾಲೆಯಿಂದ ಮರಳಿದ ನನ್ನ ಮಗ ಬಟ್ಟೆ ಬದಲಿಸಿ ಕಪಾಟಿನ ಮುಂದೆ ನಗ್ನನಾಗಿ ನಿಂತು ಬಟ್ಟೆ ಆರಿಸುತ್ತಿದ್ದ. ಯಾವುದೋ ಕಿತಾಪತಿ ಮುಗಿಸಿ ಹಾದು ಹೋಗುತ್ತಿದ್ದ ಚಂಡಿಯ ಕಣ್ಣಿಗೆ ಬಿತ್ತು ತನ್ನ ಅಣ್ಣನ ಪ್ರುಷ್ಟಗಳು. ಹಸಿದ ಹುಲಿಯಂತೆ ಎರಗಿದ ಅವಳು ಚೆನ್ನಾಗಿ ಕಚ್ಚಿದಳು ಅವನ ಪಿರ್ರೆಗಳನ್ನು. ಅರಚಾಟ ಕೇಳಿ ಬಂದು ನೋಡಿದರೆ ಮೂರು ಹಲ್ಲುಗಳು, ಅವನ ಕುಂಡಿಗಳ ಮೇಲೆ.
ಊಟಕ್ಕೆ ಕೂತಾಗ ನನ್ನ ಮಡಿಲೇರುವ ಇವಳು ಡೈನಿಂಗ್ ಟೇಬಲ್ ಉಲ್ಟಾ ಮಾಡಿಯೇ ಏಳುವುದು. ಊಟ ಮುಗಿಸಿ ಸೋಫಾ ದ ಮೇಲೆ ಆಸೀನನಾದ ಕೂಡಲೇ ನನ್ನ ಓದುವ ಚಟ ಅರಿತ ಅವಳು ಒಂದು ಪುಸ್ತಕವನ್ನು ತಂದು ನನ್ನ ಕೈಗಿಟ್ಟು ಪುಸ್ತಕ ತೆರೆಯುವ ಮೊದಲೇ ನನ್ನ ಕೈಯಿಂದ ಕಸಿದು ಬಿಸುಡುತ್ತಾಳೆ. ಇದು ತನ್ನ ಕಡೆ ಗಮನ ನೀಡುವಂತೆ ಹೇಳುವ ಭಾಷೆ ಅವಳದು.
ಇವಳಿಗೆ ನನ್ನ ಮೊಬೈಲ್ ಮತ್ತು ಲ್ಯಾಪ್ ಟಾಪ್ ತುಂಬಾ ಇಷ್ಟ. ತೆರೆದ ಲ್ಯಾಪ್ಟಾಪ್ ಅನ್ನು ಮುಚ್ಚುವುದು, ಇಲ್ಲ ತೆರೆದು ಕಯ್ಗಳಿಂದ ಪಟಪಟ ಬಡಿದು ಏನ್ ಮಾಡ್ಕೊಳ್ತೀಯ ಎಂದು ನನ್ನತ್ತ ನೋಡುವುದು ಅವಳ ಫೇವರೆಟ್ ಪಾಸ್ ಟೈಮ್. ನಮ್ಮನ್ನು ಸಾಕಷ್ಟು ಗೋಳು ಹೊಯ್ದುಕೊಂಡ ಮೇಲೆ ಹಿಡಿದಿಟ್ಟ ನಗುವಿನ ಮಂದಹಾಸ ನಮ್ಮನ್ನು ಸಂಪೂರ್ಣ ಶರಣಾಗುವಂತೆ ಮಾಡುತ್ತದೆ. 
ಎಲ್ಲಾದರೂ ಒಂದು ಕ್ಷಣ ಅವಳ ಸುಳಿವಿಲ್ಲದೆ ಮನೆಯಲ್ಲಿ ಶಾಂತಿ ನೆಲೆಸಿದ್ದರೆ ಅದರರ್ಥ ಏನೋ ನಡೆಯುತ್ತಿದೆ ಎಂದು. calm before storm ಅನ್ನುತ್ತಾರಲ್ಲ ಹಾಗೆ. ಒಂದು ದಿನ ನಡೆದಿದ್ದು ಹೀಗೆ. ಎಲ್ಲಿದ್ದಾಳೆ ಎಂದು ನೋಡುವಾಗ ನನ್ನ ಲ್ಯಾಪ್ ಟಾಪ್ ಅನ್ನು ಸದ್ದಿಲ್ಲದೆ ಸೋಫಾದ ಮೇಲಿನಿಂದ ಎಳೆಯುತ್ತಿದ್ದಳು. ಹೇ ಎಂದು ಹತ್ತಿರ ಹೋಗುವುದಕ್ಕೂ ಧಪ್ ಎಂದು ಲ್ಯಾಪ್ ಟಾಪ್ ಬೀಳುವುದಕ್ಕೂ ಸರಿಹೋಯಿತು. ನನ್ನ ಕಯ್ಯಿಂದ ತಪ್ಪಿಸಿಕೊಂಡು ಓಡಿ ಬುಕ್ ಶೆಲ್ಫ್ ನಿಂದ ಪುಸ್ತಕಗಳನ್ನು ಕೆಡವಿ ಅಲ್ಲಿಂದಲೂ ಪರಾರಿ. ಒಂದು ರೀತಿಯ ಪಾದರಸ. ಹೊಸ ಲ್ಯಾಪ್ ಟಾಪ್. ಕೊಂಡು ೨ ತಿಂಗಳಾಗಿತ್ತಷ್ಟೆ. ಎರಡೂ ಕೊನೆಯಲ್ಲಿ ಕ್ರಾಕ್ ಆಯಿತು. ಇದನ್ನು ನೋಡಿದ ನನ್ನ ಮಗ ಬಹಳ ಆಸೆಯಿಂದ ಕಾತುರತೆಯಿಂದ ಕಾದ ತಂಗೆಮ್ಮನಿಗೆ ಒಂದೆರಡು ಬೀಳಬಹುದು ಎಂದು. ನಿರಾಶೆ ಕಾದಿತ್ತು ಅವನಿಗೆ ಪಾಪ.
ಮಕ್ಕಳಿಗೆ ಈ ರೀತಿಯ ಎನರ್ಜಿ ಎಲ್ಲಿಂದ ಬರುತ್ತದೋ ಏನೋ.
ಮನೆಯ ಬಾಗಿಲ ಹತ್ತಿರ ಶೂ ಸ್ಟ್ಯಾಂಡ್ ಬೇಡ ಎಂದು ಬದಲಿಗೆ ಒಂದೆರಡು ಖಾಲಿ ಪಿಂಗಾಣಿ ಹೂದಾನಿಗಳನ್ನು ಇಟ್ಟಿದ್ದೆ. ಸ್ವಲ್ಪ ದಿನ ಅದರ ಕಡೆ ಗಮನ ಬೀಳಲಿಲ್ಲ ಚೂಟಿಯದು. ಒಂದು ದಿನ ಎಲ್ಲಿ ನನ್ನ ಶೂ ಕಾಣ್ತಾ ಇಲ್ವಲ್ಲ ಎಂದು ಹುಡುಕುತ್ತಾ ನೋಡಿದರೆ pot ಒಳಗೆ ಹಾಕಿದ್ದಾಳೆ. ಸರಿ ಈ ಪ್ರಯೋಗದ ನಂತರ ಚಟ ಹತ್ತಿತು ಕೈಗೆ ಸಿಕ್ಕಿದ್ದನೆಲ್ಲಾ ಅದರಲ್ಲಿ ತುರುಕುವುದು. ಈಗ ಏನಾದರೂ ಕಾಣೆಯಾದರೆ ಮೊದಲು ನಾವು ನೋಡುವುದು ಈ “ಕುಂಡ” ದೊಳಕ್ಕೆ. ಅಪ್ಪ ಅಮ್ಮ ಹೂವು ಹಾಕಿದ್ದೆ ಇದ್ದರೇನಂತೆ ನಾನು ಹಾಕುವೆ ನನ್ನ ಲೂಟಿ ಮಾಡಿದ ವಸ್ತುಗಳನ್ನು ಎಂದು ಮಗಳ ತೀರ್ಮಾನ.
ಹಿಂದೆಲ್ಲೋ ಓದಿದ ಸಾಲುಗಳ ನೆನಪು.
ತೃಣಮಪಿ ನ ಚಲತಿ
ನಿನ್ನ ವಿನಾ, ನಿನ್ನ ವಿನಾ…
ಹೌದು ನನ್ನ ಮಗಳ ಮಟ್ಟಿಗೆ ಇದು ನಿಜ.
ಬುರ್ಖಾ ಹೆಣ್ತನಕ್ಕೆ ಅಪಮಾನ

ಬುರ್ಖಾ ಧಾರ್ಮಿಕ ತೊಡುಗೆ ಅಲ್ಲ ಬದಲಿಗೆ ಅದೊಂದು ಗುಲಾಮಗಿರಿಯ ಸಂಕೇತ ಎಂದು ಕರೆದು ಫ್ರೆಂಚ್ ಅಧ್ಯಕ್ಷ ನಿಕೊಲಸ್ ಸರ್ಕೊಜಿ ಹೊಸ ವಿವಾದಕ್ಕೆ ನಾಂದಿ ಹಾಡಿದರು.
ಈ ಅಧ್ಯಕ್ಷ ಮದುವೆಯಾಗದೆ ತನ್ನೊಂದಿಗೆ ಒಬ್ಬ ಹಾಡುಗಾರ್ತಿಯನ್ನು (ಮಾಡೆಲ್ ಸಹ ಹೌದು) ಇಟ್ಟುಕೊಂಡು ವಿಶ್ವವೆಲ್ಲಾ ಸುತ್ತಾಡಿದ. ಅನೈತಿಕ ಸಂಬಂಧ ಹೊಂದಿದ್ದ ಈ ಪ್ರಜೆಗಳಿಂದ ಆಯ್ಕೆಯಾದ ಅಧ್ಯಕ್ಷನಿಗೆ ಮುಸ್ಲಿಮರಾರೂ ಹೀಗಳೆಯಲಿಲ್ಲ. ಇವರ ಸಂಸ್ಕೃತಿಯೇ ಸ್ವೇಚ್ಚಾಚಾರದ್ದು, ನಮಗೇಕೆ ಅದರ ಅದರ ಉಸಾಬರಿ ಎಂದು ಮುಸ್ಲಿಮರು ಸುಮ್ಮನಿದ್ದರು.
ಇಂಥದ್ದೇ ಮತ್ತೊಬ್ಬ ನಾಯಕ ಇಟಲಿಗೆ. ಸಿಲ್ವಿಯೋ ಬೆರ್ಲಸ್ಕೊನಿ ಪ್ರಧಾನಿಯಾದರೂ ತನ್ನ ಸ್ತ್ರೀ ಲೋಲುಪತೆಯನ್ನು ಬಿಡಲಿಲ್ಲ. ಆಗರ್ಭ ಶ್ರೀಮಂತ ಬೇರೆ. ಹೆಣ್ಣುಗಳಿಗೆ ಬರವೇ? ೭೨ ರ ಈತನಿಗೆ ೧೯ರ ಪೋರಿ ಸಂಗಾತಿ. ಮೊನ್ನೆ ಮತ್ತೊಂದು ಹಗರಣ. ಶ್ರೀಮಂತ ಕರೆವೆಣ್ಣನ್ನು ತನ್ನ ಬಂಗಲೆಗೆ ಕರೆಸಿ ” wait for me in the big bed ” ಎಂದು ಸಂದೇಶ ಕಳಿಸಿದ. ಇವಾವುದೂ ಅವರಿಗೆ ದೊಡ್ಡದಲ್ಲ. ಓರ್ವ ಹೆಣ್ಣು ತನ್ನ ಇಷ್ಟದ ಪ್ರಕಾರ ಉಡುಗೆ ತೊಟ್ಟರೆ, ಮಾನವಾಗಿರಲು ಇಚ್ಚಿಸಿದರೆ ಬಂತು ತಕರಾರು. ಹೆಣ್ಣಿನ ಶೋಷಣೆ ಅಂತ ಪುಕಾರು.
ಮುಸ್ಲಿಮರು ಇತರರ ವಸ್ತ್ರ ಶೈಲಿಯನ್ನು ಟೀಕಿಸುವುದಿಲ್ಲ, ಬಿಕಿನಿ ಆದರೂ ಹಾಕಲಿ, ನಗ್ನಾರಾಗಿಯಾದರೂ ಹೋಗಲಿ, ಅದು ನಮಗೆ ಸಂಬಂಧಿಸಿದ್ದಲ್ಲ. ಆಧುನಿಕತೆಯ ಹೆಸರಿನಲ್ಲಿ, ಸೌಂದರ್ಯ ಸ್ಪರ್ದೆಯ ಹೆಸರಿನಲ್ಲಿ ನಗ್ನತೆಯನ್ನು ಕೊಂಡಾಡುವ ಸಂಸ್ಕೃತಿಗೆ ಇಸ್ಲಾಮಿನ ಮನ್ನಣೆ ಇಲ್ಲ. ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯಕ್ಕೆ ಗೌರವ ಸಲ್ಲಿಸುವ ಧರ್ಮಕ್ಕೆ ಸ್ತ್ರೀ ಲೋಲುಪ ನಾಯಕರುಗಳ ಶಿಫಾರಸು ಬೇಡ, ಅದರ ಅಗತ್ಯವೂ ಇಲ್ಲ.
ತಲೆ ಕೂದಲು ನೆರೆತರೆ…
ತಲೆ ಕೂದಲು ನೆರೆತರೆ ಫಾರ್ಮಸಿಗೆ ಓಡ ಬೇಡಿ hair dye ಕೊಳ್ಳಲು. ನೆರೆ, ಕ್ಯಾನ್ಸರ್ ವಿರುದ್ಧ ಕವಚವಂತೆ. ಜಪಾನೀ ಸಂಶೋಧಕರ ಶೋಧನೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ಈ ಸುಳಿವು ಸಿಕ್ಕಿದ್ದು.
ಮುಂದಿನ ಗುರಿ ಚರ್ಮ ಸುಕ್ಕುಗಟ್ಟಿದರೆ ಅದ್ಯಾವ ರೋಗಕ್ಕೆ ಕವಚ ಎಂಬುದು. ಹೊಸ ಹೊಸ ಪ್ರಯೋಗಗಳು, ನವನವೀನ ಶೋಧನೆಗಳು. ರೋಗಗಳಿಗಂತೂ ಬರವಿಲ್ಲ. swine flu, H1N1, mad cow disease, rift valley fever ಇತ್ಯಾದಿ ಇತ್ಯಾದಿ.
ಯಾರು ಕದ್ದರು ನನ್ನ ಮತವ?
ಯಾರು ಕದ್ದರು ನನ್ನ ಮತವ? where is my vote, dude? ಇದು ತೆಹೆರಾನಿನ ಮತ್ತು ಇರಾನಿನ ಬೀದಿಗಳಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ. ಈ ಪ್ರಶ್ನೆಗಳಿಗೆ ಉತ್ತರ ಇರಾನಿನ ಧರ್ಮ ಗುರುಗಳ ಮುಂಡಾಸಿನಲ್ಲಿ ಬೆಚ್ಚಗೆ ಅಡಗಿ ಕೂತಿದೆ. ಈಗಿನ ಅಧ್ಯಕ್ಷ ಅಹ್ಮದಿ ನಿಜಾದ್ ಚುನಾವಣೆ ಗೆದ್ದೆ ಎಂದರೆ ಪ್ರತಿಪಕ್ಷದ ಮೂಸಾವಿ ಇಲ್ಲ, ಮೋಸ ನಡೆದಿದೆ ಮರು ಎಣಿಕೆ ಆಗಲಿ ಎಂದು ಗರ್ಜಿಸಿದರು. ಅವರ ಗರ್ಜನೆ ಇರಾನಿನ ಆಡಳಿತಗಾರನ್ನು ಹೊರತು ಪಡಿಸಿ ವಿಶ್ವವೆಲ್ಲ ಕೇಳಿತು. ಊಹೂಂ, ನೋ ಚೇಂಜ್ ಇನ್ ಸ್ಟೇಟಸ್. ಯಾವಗಲೂ ತನ್ನ ಮೂಗನ್ನು ತನ್ನ ದೇಶದ ಗಡಿ ಹೊರಗೆ ತೂರಿಸಿ ಕೂರುವ ಅಮೇರಿಕ ಸಹ ಅಂಥ ದೊಡ್ಡ ಹೇಳಿಕೆಯನ್ನೇನೂ ಕೊಡಲಿಲ್ಲ. ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್ ಮರು ಎಣಿಕೆ ಆಗಲಿ ಎಂದವು. ಗಲಾಟೆ ಜಾಸ್ತಿ ಆಯಿತು. ಕೆಲವರು ಪ್ರಾಣವನ್ನೂ ಕಳೆದುಕೊಂಡರು. ತೆರೆಮರೆಯಲ್ಲಿ ಒಂದಿಷ್ಟು ಮಠಗಳನ್ನು ಎಣಿಸಿದಂತೆ ಮಾಡಿದ ಆಡಳಿತಗಾರರು ಎಲ್ಲ ಫೈನ್, ಇದೆಲ್ಲ ನಮ್ಮ ಶತ್ರುಗಳ ಕೆಲಸ, ಹೆಚ್ಚು ಕಿತಾಪತಿಗಿಳಿಯದೆ ತೆಪ್ಪಗೆ ಇರಿ ಎಂದು ತನ್ನ ಜನರಿಗೆ ಬೋಧಿಸಿದರು.
ಇರಾನ್ ನಮ್ಮ ದೇಶದಂತೆ ಪ್ರಾಚೀನ ರಾಷ್ಟ್ರ. ಜನ ಬಹಳ ಬುಧ್ಧಿವಂತರು. ಸರ್ವಾಧಿಕಾರಿ, ಐಶಾರಾಮಿ ರಾಜ ಷಾ ಪಹಲವಿಯನ್ನು ಇಸ್ಲಾಮೀ ಕ್ರಾಂತಿ ಮೂಲಕ ಕಿತ್ತೊಗೆದು ಧರ್ಮ ಗುರುಗಳ ಸರಕಾರ ಕೂರಿಸಿದವರು. ಏನೋ ಒಳ್ಳೆ ಕೆಲಸ ಮಾಡಬಹುದು ಎಂದು. ಆದರೆ ಅಮೇರಿಕೆಗೆ ಸದ್ದು ಹೊಡೆಯುವುದೇ ತಮ್ಮ ನೀತಿ ಎಂದು ಭಾವಿಸಿ ಹಲವು ಬಾರಿ ಜಗಳಕ್ಕೆ ನಿಂತರು. ಈಗಿನ ಪ್ರದರ್ಶನ, ಪ್ರತಿಭಟನೆಗಳಲ್ಲಿ ಅಮೆರಿಕೆಯ ಕೈವಾಡ ಅಲ್ಲಗಳೆಯುವಂತಿಲ್ಲ. ಏಕೆಂದರೆ ಅಮೆರಿಕೆಯ ಆಟಗಳನ್ನು ನೋಡಿಲ್ಲವೇ ನಾವು, ಸಾಕಷ್ಟು?