ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು “ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ. ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭಾವನೆ ಇದ್ದರೆ ಇನ್ನೂ ಕೆಲವರಿಗೆ ಅವರ ಆದರ್ಶ ಮತ್ತು ಆಶಯಗಳ ಬಗ್ಗೆ ತಕರಾರು. ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಚರಿತ್ರೆಯ ಅಧ್ಯಾಪಕರು ಗಾಂಧೀಯವರನ್ನು ಏಕವಚನದಲ್ಲಿ ಸಂಬೋಧಿಸಿ ತಮ್ಮದೇ ಆದ ರಾಜಕೀಯ ಆಶಯಗಳ ಚರಿತ್ರೆ ಓದುತ್ತಿದ್ದಾಗ ಸಿಟ್ಟಿಗೆದ್ದಿದಿದೆ. ಮನೆಗಳಲ್ಲಿ ನಾವು ಕಲಿತಿದ್ದು ಹಿರಿಯರನ್ನು ಗೌರವಿಸಬೇಕು, ಬಹುವಚನದಲ್ಲಿ ಕರೆಯಬೇಕು ಎಂದು. ಅದರಲ್ಲೂ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾ ಚೇತನ ಎಂದರಂತೂ ಏಕವಚನ ದೂರವೇ ಉಳಿಯಿತು. ದೊಡ್ಡವನಾಗುತ್ತಾ ಗಾಂಧಿಯ ಬಗ್ಗೆ ಇನ್ನೂ ಚಿತ್ರ ವಿಚಿತ್ರ ಸಂಗತಿಗಳು ಕೇಳಲು ಸಿಕ್ಕವು. ಗಾಂಧೀ ರಾಜಕಾರಣದ ಬಗ್ಗೆ ಅವರ ಉದ್ದೇಶಗಳ ಬಗ್ಗ್ಗೆ ಹಲವರಿಗೆ ಹಲವು ರೀತಿಯ ಅಭಿಪ್ರಾಯ. ವಿಚಿತ್ರವೆಂದರೆ ಗಾಂಧೀ ಬಗ್ಗೆ ದೇಶದ ಒಳಗೆ ಮಾತ್ರ ವಿರೋಧವಲ್ಲ, ಅವರು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದ್ದಾರೆಂದು, ಮುಸ್ಲಿಂ ದೇಶವನ್ನು ಹುಟ್ಟುಹಾಕಲು ಕಾರಣಕರ್ತರಾದರೆಂದು ಅವರನ್ನು ವಧಿಸಿದ ನಾಥೂರಾಂ ಗೋಡ್ಸೆಯ ಅಭಿಪ್ರಾಯದಿಂದ ಹಿಡಿದು ಪಾಕಿಸ್ತಾನದ ದಿವಂಗತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ವರೆಗೂ ಅವರ ಬಗ್ಗೆ ಸಂಶಯ. ಭುಟ್ಟೋ ತಾವು ಬರೆದ ಪುಸ್ತಕವೊಂದರಲ್ಲಿ ಗಾಂಧೀಜೀ ಹೀಗೆ ಹೇಳಿದ್ದರೆಂದು ಉಲ್ಲೇಖಿಸಿದ್ದರು. “ಒಂದು ವೇಳೆ ಹಿಂದೂಧರ್ಮ ಭಾರತದಿಂದ ಅಥವಾ ಏಷಿಯಾ ಖಂಡದಿಂದ ಮೂಲೋತ್ಪಾಟನೆಯಾದರೆ ಹಿಂದೂ ಧರ್ಮದ ಕತೆ ಮುಗಿದಂತೆ, ಆದರೆ ಇಸ್ಲಾಂ ಭಾರತದಿಂದ, ಯಾ ಏಶಿಯದಿಂದಲೇ ಮೂಲೋತ್ಪಾಟನೆಯಾದರೂ ಅದು ಬೇರೆಲ್ಲಾದರೂ ಚಿಗುರೊಡೆಯುತ್ತದೆ, ಬೆಳೆಯುತ್ತದೆ” ಎಂದು ಹೇಳಿದ ಗಾಂಧೀಜಿ ಮುಸ್ಲಿಮರು ಭಾರತದಿಂದ ಹೊರದಬ್ಬಲ್ಪಟ್ಟರೆ ಅದು ಸಮರ್ಥನೀಯ ಎನ್ನುವ ಅಭಿಪ್ರಾಯವ ನ್ನು ಹೊಂದಿದ್ದರು ಎಂದು ಬರೆದು ಗಾಂಧೀಜಿಯ ಇಬ್ಬಂದಿತನವನ್ನು ಟೀಕಿಸಿದ್ದರು. ಗಾಂಧಿ ಇಲ್ಲೂ ಸಲ್ಲಲಿಲ್ಲ, ಅಲ್ಲೂ ಸಲ್ಲಲಿಲ್ಲ.

ಗಾಂಧೀ ದೇಶದ ಒಳಗೆ ಮಾತ್ರವಲ್ಲ ವಿಶ್ವದೆಲ್ಲೆಡೆ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಆಫ್ರಿಕಾದ ಮಂಡೇಲಾ ರಿಂದ ಹಿಡಿದು ಅಮೆರಿಕೆಯ ಮಾರ್ಟಿನ್ ಲೂಥೆರ್ ಕಿಂಗ್ ವರೆಗೆ ಮಹನೀಯರಿಗೆ ಗಾಂಧೀ ಆದರ್ಶ ವ್ಯಕ್ತಿ. ಇಂಗ್ಲೆಂಡಿನಿಂದ ಪ್ರಕಟವಾಗುವ independent ಪತ್ರಿಕೆಯಲ್ಲಿ ಗಾಂಧಿಯವರ ಬಗ್ಗೆ ಲೇಖನ ನಿನ್ನೆ ಪ್ರಕಟವಾಯಿತು. ಸಾಧಾರಣ ರಾಜಕೀಯ ಆಶಯಗಳ ಬಗೆಗಿನ ಲೇಖನವಾಗಿದ್ದರೆ ಆಸಕ್ತಿ ಇರುತ್ತಿರಲಿಲ್ಲವೇನೋ. ಆದರೆ ಇದು ಗಾಂಧೀಯವರ ಲೈಂಗಿಕ ಬದುಕಿನ ಬಗ್ಗೆ ಬರೆದ ಲೇಖನವಾಗಿತ್ತು. ಒಂದು ರೀತಿಯ explosive material. ಇದನ್ನು ನೋಡಿ ನಾನು ಸ್ವಲ್ಪ ಹಿಮ್ಮೆಟ್ಟಿದರೂ ಪೀಯುಸೀ ಯಲ್ಲಿದ್ದಾಗ ” intimate sex lives of famous people” ಪುಸ್ತಕದಲ್ಲಿ ಹಿಟ್ಲರ್ ಮಹಾಶಯನ ಲೀಲೆಗಳಿಂದ ಹಿಡಿದು ಗಾಂಧಿಯ ತನಕ ಪ್ರಸ್ತಾಪವಿತ್ತು. ಈಗ ಮತ್ತೊಮ್ಮೆ ಈ ಪೆಡಂಭೂತ ತಲೆ ಎತ್ತಿದ್ದು ನೋಡಿ ಈ ಲೇಖನವನ್ನು ತಮ್ಮೊಂದಿಗೂ ಹಂಚಿ ಕೊಳ್ಳಲು ನಿರ್ಧರಿಸಿದೆ.

ಗಾಂಧೀಜಿ ಕೇವಲ ಒಬ್ಬ ರಾಜಕಾರಣಿ ಯಾಗಿರದೆ ಆಧ್ಯಾತ್ಮಿಕ ವ್ಯಕ್ತಿಯೂ ಆಗಿದ್ದರು. ಮುಸ್ಲಿಂ ಪರ ಎಂದು ಅವರನ್ನು ಧ್ವೇಷಿಸುತ್ತಿದ್ದ ಹಿಂದೂ ಪರ ವ್ಯಕ್ತಿಗಳಿಗಿಂತ ಹೆಚ್ಚು ಸಂಪ್ರದಾಯಸ್ಥರಾಗಿದ್ದರು ಗಾಂಧೀ. ತಮ್ಮ ಆಶ್ರಮದ ಲ್ಲಿ ಭಜನೆ, ವ್ರತ ಗಳಂಥ ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುತ್ತಿದ್ದ ಗಾಂಧೀಜಿಗೆ ಲೈಂಗಿಕ ಬದುಕಿನ ಬಗ್ಗೆ ಒಂದು ರೀತಿಯ ಪಾಪ ಭಾವನೆ ಇತ್ತು. ತಮ್ಮ ಪ್ರೀತಿಯ ತಂದೆ ಕೊನೆಯುಸಿರೆಳೆಯುತ್ತಿದ್ದರೂ ಅದರ ಮಧ್ಯೆ ಎದ್ದು ಹೋಗಿ ತಮ್ಮ ಲೈಂಗಿಕ ಚಪಲ ತೀರಿಸಿ ಕೊಳ್ಳಲು ಹೋಗಿದ್ದರು. ಆದರೆ ತಮಗೆ ಬೇಕಿದ್ದನ್ನು ಪಡೆದುಕೊಂಡ ಗಾಂಧೀ ತನ್ನ ತಂದೆಯಯನ್ನು ಕಳೆದುಕೊಂಡಿದ್ದರು. ಇಲ್ಲಿಂದ ಶುರುವಾಗಿದ್ದು ಗಾಂಧೀಜಿಯ ವೈರಾಗ್ಯ ಭಾವ. ವಿವಾಹಿತರಾದರೂ ಲೈಂಗಿಕ ಕ್ರಿಯೆ ನಡೆಸದೆ ಸನ್ಯಾಸದ ಬದುಕು ನಡೆಸಿ ಎಂದಾಗ ಬಹಳ ಷ್ಟು ಜನ ಹುಬ್ಬೇರಿಸಿದ್ದರು. ಸಹಜ ತಾನೇ. ಮನುಷ್ಯ ಮದುವೆಯಾದ ಕೂಡಲೇ ಜಿಗಿಯುವುದು ಪ್ರಸ್ಥದ ಕೋಣೆಗೆ. ಅದು ಬಿಟ್ಟು ವೃತಾಚರಿಸುತ್ತಾ “ರಘು ಪತಿ ರಾಘವ ರಾಜಾರಾಂ ಎನ್ನುತ್ತ ಇರು ಎಂದರೆ ಜನ ಹುಬ್ಬೆರಿಸದೆ ಇರುತ್ತಾರೆಯೇ, ಅದರಲ್ಲೂ ನೆಹರೂರಂಥ ರಸಿಕ ಮಹಾನರು? ಗಾಂಧೀಜಿಯ ಈ ಹೊಸ ವಾದ ಕೇಳಿದ ನೆಹರೂ ಹೇಳಿದ್ದು ” ಅಸ್ವಾಭಾವಿಕ ಮತ್ತು ವಿಕೃತ” ಎಂದು. ಗಾಂಧೀಜಿಯನ್ನು ರಾಷ್ಟ್ರ ಪಿತ ಪಟ್ಟಕ್ಕೆ ಏರಿಸಿದ್ದರಿಂದ ಬಹಳಷ್ಟು ಅಪ್ರಿಯ ವಿಷಯಗಳನ್ನ ಮುಚ್ಚಿ ಹಾಕಲಾಯಿತು. ಹೀಗೆ ಗಾಂಧೀಜಿಯ ಕೆಲವೊಂದು ವಿಷಯಗಳನ್ನು ಒಪ್ಪದವರು ಶಿಷ್ಟಾಚಾರಕ್ಕೆ ಮಣಿದು ಮೌನವಾಗಿದ್ದರೆ ಇನ್ನೂ ಕೆಲವರು ಗಾಂಧೀಜಿಯನ್ನು ” ಅತ್ಯಂತ ಅಪಾಯಕಾರಿ ಮತ್ತು ಪಾರ್ಶ್ವವಾಗಿ ಅದುಮಿಟ್ಟ ಕಾಮೋನ್ಮತ್ತ” ಎಂದು ಕರೆದರು. ಅಂದರೆ ಗಾಂಧೀಜಿಯ ಜೀವಿತ ಕಾಲದಲ್ಲೂ ಬಹಳಷ್ಟು ಟೀಕಾಕಾರರು ಅವರನ್ನು ವಿಮರ್ಶಿಸಿದ್ದರು ಎಂದು ನಮಗೆ ಅರಿವಾಗುವುದು.

ಹೀಗೆ ತಮ್ಮ ತಂದೆಯ ಸಾವಿನ ಸಂದರ್ಭದ ಘಟನೆಯಿಂದ ನೊಂದ ಗಾಂಧೀಜಿ ವೈರಾಗ್ಯದ ಕಡೆ ವಾಲ ತೊಡಗಿ ತಾವೇ ನಡೆಸುತ್ತಿದ್ದ ಪತ್ರಿಕೆಗೆ ಹೀಗೆ ಬರೆದರು. ” ವಿವಾಹಿತರಾಗದೆ ಇರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹಾಗೇನಾದರೂ ಆತ ವಿವಾಹದ ವಿಷಯದಲ್ಲಿ ನಿಜಕ್ಕೂ ನಿಸ್ಸಹಾಯಕನಾದರೆ ತನ್ನ ಪತ್ನಿಯೊಂದಿಗೆ ಲೈಂಗಿಕತೆಯನ್ನು ತ್ಯಜಿಸಬೇಕು”. ಇದೊಂಥರಾ ವಿಚಿತ್ರ ನಡವಳಿಕೆಯಾಗಿ ತೋರಿತು ಜನರಿಗೆ. ಹಸಿದವನ ಮುಂದೆ ಮೃಷ್ಟಾನ್ನ ಬಡಿಸಿ ಉಪವಾಸವಿರು ಎಂದಂತೆ. ಆದರೆ ಮನುಷ್ಯನ ಈ ನೈಸರ್ಗಿಕ ಭಾವನೆಗಳನ್ನು ಅದುಮಿಡಲು ಸಾಧ್ಯವಾಗದು ಎನ್ನುವ ಸಾಮಾನ್ಯ ಜ್ಞಾನ ಗಾಂಧೀಜಿಗೆ ಹೇಗೆ ತಪ್ಪಿತೋ ಏನೋ. ಹೀಗೆ ಜನರನ್ನು ಲೈಂಗಿಕತೆಯಿಂದ ದೂರ ಎಳೆಯಲು ಪ್ರಯತ್ನಿಸಿದ ಅವರು ತಮ್ಮಲ್ಲಿ ಸುಪ್ತವಾಗಿ ಅಡಗಿದ್ದ ದಾಹವನ್ನು ಬೇರೆಯದೇ ಆದ ರೀತಿಯಲ್ಲಿ ಅದುಮಿಡಲು ದಾರಿ ಕಂಡು ಕೊಂಡರು. ತಮ್ಮ ಆಶ್ರಮದಲ್ಲಿ ಹೆಣ್ಣು ಗಂಡುಗಳು ಒಟ್ಟಿಗೆ ಸ್ನಾನ ಮತ್ತು ಮಲಗುವುದಕ್ಕೆ (ಲೈಂಗಿಕ ಚಟುವಟಿಕೆ ಖಂಡಿತಾ ಇಲ್ಲ) ಅನುಮತಿ ನೀಡಿ, ಲೈಂಗಿಕತೆ ಕೂಡಿದ ಮುಕ್ತ ಹರಟೆಗಳಿಂದ ಅವರನ್ನು ತಡೆದರು. ಅಷ್ಟೇ ಅಲ್ಲ, ಗಂಡಂದಿರು ತಮ್ಮ ಪತ್ನಿಯರೊಂದಿಗೆ ಯಾವಾಗಲೂ ಏಕಾಂತ ವಾಗಿ ಇರಕೂಡದು ಮತ್ತು ಹಾಗೇನಾದರೂ ಎಡವಟ್ಟಾಗುವ ಭಯವಿದ್ದಲ್ಲಿ ತಣ್ಣೀರಿನ ಸ್ನಾನ ಮಾಡಬೇಕೆಂದು ತಾಕೀತು ಮಾಡುವುದನ್ನು ಮರೆಯಲಿಲ್ಲ ಮಹಾತ್ಮ.

ಆದರೆ ಈ ತಾಕೀತು ತಮಗೆ ಅನ್ವಯಿಸಿಕೊಳ್ಳ ಲಿಲ್ಲ ಗಾಂಧೀಜಿ ಎಂದು ಹೇಳುತ್ತಾರೆ ಲೇಖಕ ಆಡಮ್ಸ್. ಗಾಂಧೀಜಿಯವರ ಆಪ್ತ ಸಹಾಯಕರ ಆಕರ್ಷಕ ಸೋದರಿ ಸುಶೀಲ ನಾಯರ್ (ಈಕೆ ಗಾಂಧೀಜಿಯವರ ಖಾಸಗಿ ವೈದ್ಯೆ ಸಹ) ಗಾಂಧೀಜಿ ಯೊಂದಿಗೆ ಸ್ನಾನವನ್ನೂ ಮಾಡುತ್ತಿದ್ದರು ಮತ್ತು ಒಟ್ಟಿಗೆ ಮಲಗುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಗಾಂಧೀಜಿ ಹೇಳಿದ್ದು “ಸಭ್ಯತೆ ಮೀರದಂತೆ ನಾವೀ ಕೆಲಸ ಮಾಡುತ್ತಿದ್ದದ್ದು, ಮತ್ತು ಆಕೆ ಸ್ನಾನ ಮಾಡುವಾಗ ನಾನು ಕಣ್ಣು ಮುಚ್ಚಿ ಕೊಂಡು ಇರುತ್ತಿದ್ದೆ ಮತ್ತು ಆಕೆ ವಿವಸ್ತ್ರಳಾಗಿದ್ದಳೋ ಎಂದು ನನಗೆ ತಿಳಿಯದು, ಆದರೆ ಸಾಬೂನನ್ನು ಹಚ್ಚಿಕೊಳ್ಳುತ್ತಿದ್ದ ಶಬ್ದ ಮಾತ್ರ ನನಗೆ ಕೇಳಿಸುತ್ತಿತ್ತು”. ಈ ರೀತಿಯ ಗಾಂಧೀಜಿಯ “ಪ್ರಯೋಗ” ಗಳು ಆಶ್ರಮದ ಸಹ ನಿವಾಸಿಗಳಲ್ಲಿ ಮತ್ಸರವನ್ನು ಹುಟ್ಟಿಸಿತು ಮಾತ್ರವಲ್ಲ ಇದು ಸ್ವಲ್ಪ ಅತಿಯಾಯಿತೆಂದು ಕೆಲವರಿಗೆ ತೋರಿದರೆ ಗಾಂಧೀಜಿಗೆ ಅನ್ನಿಸಿದ್ದು ” ಈ ಪ್ರಯೋಗದ ಮೂಲಕವೇ ನಿಜವಾದ ದೇಶ ಸೇವೆ ಸಾಧ್ಯ” ಎಂದು. ಈ ರೀತಿಯದಾದ ದೇಶ ಸೇವೆಯ ಮಾದರಿಯನ್ನು ಸಹಿಸದ ಕೆಲವರು ಗಾಂಧೀಜಿ ನಡೆಸುತ್ತಿದ್ದ ಪತ್ರಿಕೆಯನ್ನು ತೊರೆದರು.

ಆದರೆ ಈ ವಿಷಯಗಳೆಲ್ಲಾ ಗಾಂಧೀಜಿಯ ಸುತ್ತಮುತ್ತಲಿನವರಿಗೆ ತಿಳಿದಿದ್ದರೂ ಗಾಂಧೀಜಿ ಇದರ ಬಗ್ಗೆ ಗೌಪ್ಯತೆ ಯನ್ನು ಪಾಲಿಸಲಿಲ್ಲ. ಮತ್ತು ಇದರ ಬಗ್ಗೆ ತಮ್ಮ ಮಗನಿಗೂ ಪತ್ರದ ಮೂಲಕ ಬರೆದು ತಿಳಿಸಿದ್ದರು. ಹೀಗೆ ನಿರ್ಭಿಡೆಯಿಂದ, ಗೌಪ್ಯತೆ ಪಾಲಿಸದೆ ತನ್ನದೇ ಆದ ವಿಶ್ಲೇಷಣೆ ಗಳನ್ನು ನೀಡುತ್ತಾ ನಡೆದ ಗಾಂಧೀಜಿ ಬಹುಶಃ ಸಾಮಾನ್ಯವಾಗಿ ಸಾಧಾರಣ ಜನರಲ್ಲಿ ಕಾಣಸಿಗುವ ಲೈಂಗಿಕತೆಯಿಂದ ಮುಕ್ತರಾಗಿದ್ದರೋ ಏನೋ. ತಮ್ಮ ಮಗನಿಗೆ ತಮ್ಮ ಈ ಪ್ರಯೋಗ ಗಳ ಬಗ್ಗೆ ಬರೆಯಲು ಗಾಂಧೀಜಿ ಹೇಳಿದರೂ ಪುತ್ರ ಇದಕ್ಕೆ ಸಮ್ಮತಿಸದೆ ಸಂಬಂಧಿಸಿದವರಿಗೆ ತಾಕೀತನ್ನೂ ಮಾಡಿದರು ಬರೆಯದಂತೆ.

ಬದುಕಿಗೆ ಎದುರಾಗುವ ಸವಾಲುಗಳನ್ನು ಎದುರಿಸುವತ್ತ ಬೌಧ್ದಿಕ ದೃಢಚಿತ್ತತೆಯ ಅಗತ್ಯ ಇರುತ್ತದೆ ಮತ್ತು ಇದಕ್ಕಾಗಿ ಕಿರಿ ವಯಸ್ಸಿನ ಮಹಿಳೆಯರನ್ನು ಗಾಂಧೀಜಿ ಉಪಯೋಗಿಸಿಕೊಳ್ಳುತ್ತಿದ್ದರು ಎಂದು ಜಾಡ್ ಆಡಮ್ಸ್ ಹೇಳುತ್ತಾರೆ.

ಮಹಾನ್ ವ್ಯಕ್ತಿಗಳು ತಮ್ಮ ಕಾರ್ಯ ಸಿದ್ದಿ ಗಾಗಿ ತಮ್ಮದೇ ಆದ ಶೈಲಿಯಲ್ಲಿ ಕಾರ್ಯ ತಂತ್ರ ರೂಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವು ನಮಗೆ ಆಭಾಸವಾಗಿ ಕಂಡರೂ ಮಹಾತ್ಮರಿಗೆ ಹಾಗೆ ತೋರುವುದಿಲ್ಲ. ಗಾಂಧೀಜಿ ತಮ್ಮಲ್ಲಿ ಆಗಾಗ ತಲೆಎತ್ತುತ್ತಿದ್ದ ಕಾಮ, ಕ್ರೋಧ, ಮದ, ಮತ್ಸರಗಳನ್ನು ಗೆಲ್ಲಲು ತಮ್ಮದೇ ಆದ ಮಾರ್ಗ ಅನುಸರಿಸಿದರು. ಉದಾಹರಣೆಗೆ, ಕೇವಲ ಉಪವಾಸ ಸತ್ಯಾಗ್ರಹದಿಂದ ತನ್ನ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟು ವಿಶ್ವವನ್ನು ದಂಗು ಬಿಡಿಸಿದ ಗಾಂಧೀಜಿಯ ಈ ಮಾರ್ಗವನ್ನು ಎಷ್ಟು ಜನ, ಎಷ್ಟು ಮಹನೀಯರು ಅನುಕರಿಸುತ್ತಿದ್ದಾರೆ? ಏಕೆಂದರೆ ಅಹಿಂಸಾತ್ಮಕ ಹೋರಾಟದಲ್ಲಿ ಗಾಂಧೀಜಿಗೆ ಬಲವಾದ ನಂಬಿಕೆ ಇತ್ತು ಮತ್ತು ಆ ನಂಬಿಕೆ ಅವರನ್ನು ಹುಸಿಗೊಳಿಸಲಿಲ್ಲ.

ಸಾವಿರಾರು ವರ್ಷಗಳಿಂದ ಮಾನವ ಸಂತತಿಯನ್ನು ಕಾಪಾಡುತ್ತಾ, ಉಳಿಸುತ್ತಾ ಬಂದಿರುವ ವೀರ್ಯದ ಶಕ್ತಿಯ ಬಗ್ಗೆ ಅಪಾರ ವಿಶ್ವಾಸವಿದ್ದ ಗಾಂಧೀಜಿ ಹೇಳಿದ್ದು, “ಗಂಡಿನಲ್ಲಿ ಹರಿಯುವ ಈ ದ್ರವವನ್ನು ಉಳಿಸಿಕೊಳ್ಳುವವರು ಅಜೇಯ ಶಕ್ತಿ ಪಡೆಯುವರು” ಎಂದು. ಗಾಂಧೀಜಿ ತಮ್ಮ ವೀರ್ಯವನ್ನು ಹಿಡಿದಿಟ್ಟು ಕಾಮವನ್ನು ಗೆಲ್ಲಲು ಯತ್ನಿಸಿ ಯಶಸ್ಸನ್ನು ಸಹ ಪಡೆದರೂ ತಮ್ಮ ಪ್ರೀತಿಯ ದೇಶ ಮಾತ್ರ ಇಬ್ಭಾಗವಾಗುವುದನ್ನು ಈ “ಪ್ರಯೋಗ” ದಿಂದ ತಡೆಗಟ್ಟಲು ಸಾಧ್ಯವಾಗದೆ ಇದ್ದದ್ದು ದೊಡ್ಡ ದುರಂತವೆಂದೇ ಹೇಳಬಹುದು.

ಚಿತ್ರ ಕೃಪೆ: ಇಂಗ್ಲೆಂಡಿನ ದಿನ ಪತ್ರಿಕೆ Independent

ಭಗ್ನ ಪ್ರೇಮಿ

ಸಂಜೆ ಬೋರ್ ಹೊಡೆಯುತ್ತಿತ್ತು. ಅದೂ ಅಲ್ಲದೆ ಏನಾದರೂ ಶಾಪಿಂಗ್ ಮಾಡೋಣ, ಏನಿಲ್ಲವೆಂದರೂ ಒಂದೆರಡು ಶರ್ಟ್ಗಳನ್ನಾದರೂ ಕೊಳ್ಳೋಣ ಎಂದು ಪಕ್ಕದಲ್ಲೇ ಆಡುತ್ತಿದ್ದ ನನ್ನ ಆರು ವರ್ಷದ ಮಗನನ್ನು ಹೊರಡಿಸಿಕೊಂಡು ಮಾಲ್ ಕಡೆ ಹೊರಟೆ ಮಡದಿ, ಪುಟ್ಟ ಸುಪುತ್ರಿಯನ್ನು ಹಿಂದಕ್ಕೆ ಬಿಟ್ಟು. ಎಲ್ಲಾದರೂ ಹೊರಕ್ಕೆ ಹೋಗಲು ಹೆಂಗಸರನ್ನು ಹೊರಡಿಸೋ ತಾಪತ್ರಯ ನಿಮಗೆ ಗೊತ್ತೇ ಇದೆಯಲ್ಲ. ದಸರಾದ ಆನೆಯನ್ನಾದರೂ ಶೃಂಗರಿಸಿ ಹೊರಡಿಸಬಹುದು ಕೆಲವೇ ನಿಮಿಷಗಳಲ್ಲಿ.

ಮಗನೊಂದಿಗೆ ಹರಟುತ್ತಾ ಮಾಲ್ ತಲುಪಿದೆ. ಮನೆಯಿಂದ ಕಾರಿನಲ್ಲಿ ೧೦ ನಿಮಿಷ ದೂರದಲ್ಲಿರುವ city plaza ಮಾಲ್ ವಿಶಾಲವಾದ, ಸುಂದರ ಮಳಿಗೆ. ಅಮೆರಿಕೆಯ ಸಂಸತ್ ಭವನದ ರೀತಿಯಲ್ಲಿ ಕತಿರುವ ಕಟ್ಟಡದ ಗೋಪುರ ತುಂಬಾ ದೂರದ ತನಕ ಗೋಚರಿಸುತ್ತದೆ. ನಿರಂತರ ಮತ್ತು ಅಗ್ಗದ ವಿದ್ಯುತ್ ಸರಬರಾಜು ಇಡೀ ಮಾಲ್ ಮಾತ್ರವಲ್ಲ ನಗರವನ್ನೇ ಹಗಲಾಗಿಸಿರುತ್ತದೆ ಇರುಳನ್ನು. ಮಾಲ್ ತಲುಪಿ ಪಾರ್ಕಿಂಗ್ ಲಾಟ್ ನೋಡಿಯೇ ಅಂದು ಕೊಂಡೆ ಇಂದು sale ಹಾಕಿದ್ದಾರೆ ಎಂದು. ಇಲ್ಲಿನ ಜನ sale ಅಂದು ಬಿಟ್ಟರೆ ಪುಕ್ಕಟೆ ಹಂಚುತ್ತಾರೇನೋ ಅನ್ನಬೇಕು ಹಾಗೆ ಮುಗಿ ಬೀಳುತ್ತಾರೆ. ಹೇಳಿ ಕೇಳಿ ಶುಕ್ರವಾರ ಬೇರೆ. ಒಂದು ರೀತಿಯ ಔಟಿಂಗ್ ಸಹ. ಮೇಲೆ ಹೇಳಿದ ಮಾಲ್ ಭಾರತೀಯರದು. ನಮ್ಮ ದೇಶದಲ್ಲೂ ಇವೆ ಇವರ ಸರಣಿ ಅಂಗಡಿಗಳು. city plaza, home plaza ಅಂತ. ಪ್ರತಿಯೊಂದು ವಸ್ತುವೂ ಇಲ್ಲಿ ಲಭ್ಯ. ಈ ಮಾಲ್ ಒಳಗೆ ಹೊಕ್ಕರೆ ದಿನಸಿ ಬಿಟ್ಟು ಬಾಕಿಯೆಲ್ಲಾ ಸಿಗುತ್ತದೆ. ಜೆಡ್ಡಾ ಒಂದರಲ್ಲೇ ಇಂಥ ಸುಮಾರು ೧೦ ಮಾಲುಗಳು ಈ city plaza ಗೆ ಸೇರಿದವು. ಒಳ ಹೋದ ಕೂಡಲೇ ಆಟಿಕೆಗಳ ವಿಭಾಗದ ಕಡೆ ಮಗ ಜಿಗಿದು “ಯೋ ಯೋ” ಹಿಡಿದು ಕೊಂಡು ಬಂದ. ನಾನೂ ನನಗೆ ಬೇಕಾದ ಒಂದೆರಡು ಶರ್ಟ್ ಗಳನ್ನು ಕೊಂಡು ರಾತ್ರಿಯ ಕೊನೆಯ ಪ್ರಾರ್ಥನೆಗೆ ಇನ್ನೂ ಸಮಯವಿದೆಯಲ್ಲ (ಇಲ್ಲಿ ಅಂಗಡಿ ಮುಂಗಟ್ಟು ಗಳು ಅರ್ಧ ಘಂಟೆ ಬಂದ್, ಪ್ರಾರ್ಥನೆಯ ಕರೆ ಕೇಳಿದ ಕೂಡಲೇ) ಎಂದು ಎಲಿವೇಟರ್ ಮೂಲಕ ಮೊದಲ ಮಹಡಿಗೆ ಹೋದೆ ಫರ್ನಿಚರ್ ನೋಡೋಣ ಎಂದು. ಅಲ್ಲಿಗೆ ಹೋದ ಕೂಡಲೇ ಥಟ್ಟನೆ ನೆನಪಾಯಿತು, ನಾನು ತುಂಬಾ ಸಲ ಕೊಳ್ಳಬೇಕೆಂದು ಬಯಸಿದ್ದ ಟೇಬಲ್ ಇದೆಯಾ ಎಂದು. ನಮೂನೆಯ ನಮೂನೆಯ ಫರ್ನಿಚರ್ ಗಳು ಸೇಲ್ ಗೆ ಇದ್ದವು. spring sale ಅಂತೆ (ವಸಂತ ಋತು). ಹೊರಗೆ ಭಣ ಭಣ ಅನುತ್ತಿದ್ದರೂ ಕಡೆ ಪಕ್ಷ ಇಲ್ಲಾದರೂ ಮಳಿಗೆ ಒಳಗೆ ವಸಂತ ಕಾಲ ಇದೆಯಲ್ಲಾ ಎಂದು ಕೊಳ್ಳುತ್ತಾ ಸುತ್ತಾ ಮುತ್ತಾ ಕಣ್ಣು ಹಾಯಿಸುತ್ತಾ. ಆದರೆ ನನ್ನ ಮೆಚ್ಚಿನ ಮೇಜು ಮಾತ್ರ ಕಾಣಲಿಲ್ಲ. ಅಲ್ಲೇ ಅಡ್ಡಾಡುತ್ತಿದ್ದ ವ್ಯಕ್ತಿಯನ್ನು ಮೇಜಿನ ವಿವರಣೆ ನೀಡಿ ಕೇಳಿದೆ. ಹಾಂ, ಅದು ಕೆಳಗಿನ ಫ್ಲೋರ್ ನಲ್ಲಿದೆ ಎಂದ. ಸರಿ ಅಲ್ಲಿಗೆ ಬಂದು ನೋಡಿದಾಗ ನನ್ನ ಮೆಚ್ಚಿನ ಮೇಜು ನಾಚುವ ಲಲನೆಯಂತೆ ಗೋಚರಿಸಿದಳು ನನಗೆ. ತನ್ನ ಸೊಂಟಕ್ಕೆ ಹಳೆ ಬೆಲೆ ಮತ್ತು ಹೊಸ ಇಳಿ ತಾಯದ ಬೆಲೆಯ ಟ್ಯಾಗ್ ಗಳನ್ನು ಸಿಕ್ಕಿಸಿಕೊಂಡು ಬಿಂಕದಿಂದ ನಿಂತ ಮೇಜನ್ನು ಆಸೆಗಣ್ಣುಗಳಿಂದ ನೋಡುತ್ತಾ ಹತ್ತಿರ ಬಂದೆ. ೮೯೫ ರಿಯಾಲ್ ಬೆಲೆ ಬಾಳುವ (೧೦,೫೦೦ ರೂಪಾಯಿ) ಈ ಮೇಜಿಗೆ ಶೇಕಡಾ ೭೦ ಇಳಿತಾಯ. ಅಬ್ಬಾ, ಇಂಥಾ ಇಳಿತಾಯಕ್ಕೆ “ಕುಸಿತಾ”ಯ ಎಂದೇ ಕರೆಯಬೇಕು. ೨೬೫ ರಿಯಾಲ್ ಅಂದ್ರೆ ೩೦೦೦ ರೂಪಾಯಿ ಹತ್ತತ್ರ. ವಾವ್, ಎಂದು ಕುಣಿದೆ, ಮನಸ್ಸಿನಲ್ಲೇ. ನಮ್ಮ ದೇಶದಲ್ಲಿ ಒಂದೆರಡು ತುಂಡು ಹಲಗೆಯೂ ಸಿಗಲಿಕ್ಕಿಲ್ಲ ಈ ಬೆಲೆಗೆ. ಒಳ್ಳೆ ಡಿಸ್ಕೌಂಟ್ ಅನ್ನೇ ಕೊಟ್ಟಿದ್ದಾರೆ ಎಂದು ಮನದಲ್ಲೇ ವಂದಿಸುತ್ತಾ ಇದ್ದಾಗ ಒಮ್ಮೆಲೇ ಮಾನವ ಸಹಜ ಕುಬುದ್ಧಿ ಇಣುಕ ತೊಡಗಿತು. ಮೇಲಿನ ಒಂದು ಡ್ರಾವರ್ ಗೆ ಒಂದು ನಾಬ್ ಇರಲಿಲ್ಲ. “dont look gift horse in the mouth” ಅಂತಾರೆ ಆಂಗ್ಲ ಭಾಷೆಯಲ್ಲಿ, ಹಾಗಂದ್ರೆ ಉಡುಗೊರೆಯಾಗಿ ಸಿಕ್ಕ ಕುದುರೆಯ ಬಾಯಗಲಿಸಿ ಹಲ್ಲುಗಳು ಸರಿ ಇವೆಯೋ ಎಂದು ನೋಡಬಾರದು. ಅಲ್ಲೇ ಪಕ್ಕದಲ್ಲಿದ್ದ ಸೇಲ್ಸ್ ಮ್ಯಾನ್ ಗೆ ಕೇಳಿದೆ ಇದರ ಒಂದು ನಾಬ್ ಹೋಗಿದೆಯಲ್ಲ ಅಂತ. ಮುಗುಳ್ನಗುತ್ತಾ ನನ್ನನ್ನು ಸಿಗಿಯುವಂತೆ ನೋಡಿ ಸರ್, ಅದಕ್ಕೇ ಆಲ್ವಾ ಇದು ೭೦ ಶೇಕಡಾ ಡಿಸ್ಕೌಂಟ್ ನಲ್ಲಿ ಇರೋದು ಅಂದ. ಆದರೆ ಅವನ ಮುಖ ಹೇಳುತ್ತಿತ್ತು, ಅಲ್ಲಾ ಬೆಪ್ಪೆ, ನಿನ್ನ ಮುಸುಡಿ ನೋಡಿ ಅಲ್ಲ ಅದಕ್ಕೆ ಶೇಕಡಾ ೭೦ ರ ರಿಯಾಯಿತಿ, ಆ ಹಿಡಿಕೆ ಇಲ್ಲದ್ದಕ್ಕೇ ಎಂದು. ಈಗ ನಾಬ್ ಮರೆತು ನನ್ನ ವಶವಾಗಲಿರುವ ಆ ಮೇಜನ್ನೇ ಮತ್ತೊಮ್ಮೆ ನೋಡುತ್ತಾ ಇದ್ದಾಗ ನನ್ನ ಹುಟ್ಟು ಗುಣದ ಒಂದು ಭಾಗ ಜಾಗೃತವಾಯಿತು. ಈಗ ಬೇಡ ನಾಳೆ ತಗೋ ಎಂದು. ಈ ನಾಳೆ ಅನ್ನೋನ ಮನೆ ಹಾಳು ಅಂತಾರೆ. ನನಗೆಷ್ಟೇ ಸಲ ಈ ಅನುಭವ ಆಗಿದ್ರೂ ತ್ರಿವಿಕ್ರಮನ ಬೆನ್ನು ಬಿಡದ ಭೇತಾಳದಂತೆ, ಸಾರಾಯಿ ಬಿಟ್ಟಿರಲಾರದ ಮದ್ಯ ವ್ಯಸನಿಯಂತೆ ನನಗೆ ಈ ನಂಟು ನಾಳೆಯದು. ಬೆಳಿಗ್ಗೆ ಶಾಲೆಯಿದೆ, ಮಗನಿಗೆ ಡಿನ್ನರ್ಗೆ ತಡವಾಗಬಹುದು ಎಂದು ನನಗೆ ನಾನೇ ನೆಪ ಹೇರಿಕೊಂಡು ನಾಳೆ ಬರುವ ತೀರ್ಮಾನದೊಂದಿಗೆ ಹೊರನಡೆದೆ.

ಮಹೋಗನಿ ಮರದಿಂದ ಮಾಡಿದ ಆ ಮೇಜು ಒಂದು ರೀತಿಯ antique ಪೀಸ್ ಎಂತಲೇ ಹೇಳಬಹುದು. ಮೇಜಿನ ಮೇಲಿನ ಭಾಗದಲ್ಲಿ ಮೂರು ಡ್ರಾವರ್ ಗಳು. ಚಿಕ್ಕ ಪುಟ್ಟ ವಸ್ತುಗಳನ್ನು ಇಡಲು. ಅದರ ಕೆಳಗೆ ಅರ್ಧ ವೃತ್ತಾಕಾರದ ಮುಚ್ಚಳ. ಮುಚ್ಚಳ ತೆರೆದ ಕೂಡಲೇ (ಶ್ರೀ ಕೃಷ್ಣಾ ಬಾಯೋ ತೆರೆದಾಗ ಬ್ರಹ್ಮಾಂಡವೇ ಕಾಣಿಸಿತಂತೆ) ಕಾಣದಂತೆ ಫ್ರೇಂ ಒಳಕ್ಕೆ ಸೇರಿಕೊಳ್ಳುತ್ತದೆ. ಕೆಳಗೆ ಮತ್ತೆರಡು ಡ್ರಾವರ್ಗಳು. ಮೇಜಿನ ಬರೆಯುವ ಪಟ್ಟಿ ಹೊರಕ್ಕೆಳೆದರೆ ದೊಡ್ಡದಾಗುವಂಥದ್ದು. ಅಂದರೆ ಅದನ್ನು ಎಳೆದರೆ (expandable) ಬರೆಯಲು ಮತ್ತಷ್ಟು ಜಾಗ ಸಿಗುತ್ತದೆ. ಮೇಜಿನ ಕಾಲುಗಳೂ ಸಹ ಸುಂದರವಾಗಿ ಕೆತ್ತಲ್ಪಟ್ಟವು. ಒಟ್ಟಾರೆ ಒಳ್ಳೆ ಫಿನಿಶಿಂಗ್ ಇರುವ ಸುಂದರ, ಮನೆಯ ಯಾವುದೇ ಭಾಗದಲ್ಲೂ ಇಟ್ಟರೂ ಒಂದು ರೀತಿಯ ಬರವಣಿಗೆಯ ಭಾವವನ್ನು ಹುಟ್ಟಿಸುವಂಥದ್ದು. ಬರೆಯಲು ಪ್ರೇರಣೆ ಸಿಗದಾಗ ಈ ಮೇಜು ದೊಡ್ಡ ಸಹಾಯಾಗಿ ಬರುತ್ತದೆ. inspiring table. ಭಾರತದಲ್ಲಾದರೆ ನಮ್ಮ ಬಡಗಿಗಳು ಇಂಥ ಟೇಬಲ್ಲನ್ನು ಸೃಷ್ಟಿಸಲಾರರು. ಹಾಗೇನಾದರೂ ನೀವು ಪ್ರಯತ್ನಿಸಿದ್ದೇ ಆದರೆ ಅದೇನೂ ದೊಡ್ಡ ವಿಷಯವಲ್ಲ ಮರ ಕೊಡಿಸಿ ಬಿಡಿ ಮಾಡಿ ಕೊಡುತ್ತೇನೆ ಎಂದು ಹೇಳಿ ನಮ್ಮಿಂದ ಮರ ಖರೀದಿ ಮಾಡಿಸಿ ನಮ್ಮ ಕಾಲಕ್ಕಲ್ಲದಿದ್ದರೂ ನಮ್ಮ ಮಕ್ಕಳ ಅವಶ್ಯಕತೆಗಾದರೂ ಮೇಜನ್ನು ತಯಾರು ಮಾಡಿ ಕೊಡುತ್ತಾನೆ. ಯಾಕೆಂದರೆ ನಮ್ಮಿಂದ ಅಡ್ವಾನ್ಸ್ ತೆಗೆದು ಕೊಂಡು ಮಾಯವಾಗುವ ಬಡಗಿ ಇದೇ ರೀತಿ ನಾಲ್ಕೈದು ಜನರ ಹತ್ತಿರ ಅಡ್ವಾನ್ಸ್ ತೆಗೆದುಕೊಂಡು ಬೆಳಗ್ಗಿನ ರೌಂಡ್ಸ್ ಗೆ ಬರುವ ವೈದ್ಯರಂತೆ ಅಡ್ವಾನ್ಸ್ ತೆಗೆದುಕೊಂಡ ನಾಲ್ಕೈದು ಮನೆಗಳಿಗೆ ತೆರಳಿ, ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಕೆಲಸ ಮಾಡಿ ಬರುತ್ತಾನೆ. ಇಷ್ಟೆಲ್ಲಾ ಆದ ಮೇಲೆ ನಮ್ಮ ಕೈಗೆ ಸಿಗುವ ಎಂಡ್ ಪ್ರಾಡಕ್ಟೋ ? ನಮಗೇ ಗೊತ್ತಿರುವುದಿಲ್ಲ ನಾವೇನನ್ನು ಮಾಡಲು ಆರ್ಡರ್ ಬಡಗಿಗೆ ಕೊಟ್ಟಿದ್ದು ಎಂದು. ನನ್ನ ತಂಗಿ ಒಂದು ಮಂಚ ಮಾಡಿಕೊಡಲು order ಕೊಟ್ಟಿದ್ದಳು. ಅವನು ಮಂಚ ರೆಡಿ ಮಾಡಿ ಕೊಡು ವಷ್ಟರಲ್ಲಿ ನಾನು ಮೂರು ಸಲ ರಜೆಗೆ ಎಂದು ಭಾರತಕ್ಕೆ ಬಂದು ಹೋದೆ. ಕೊನೆಗೆ ಕೋಣೆಗೆ ಬಂದ ಮಂಚವಾದರೂ ಎಂಥದ್ದು? ಹೆಣ ಹೊತ್ತು ಕೊಂಡು ಹೋಗುವ ಚಟ್ಟದ ರೀತಿ ಇತ್ತು ಮಂಚ. ಚಟ್ಟವಾದರೋ ಇನ್ನೂ ಚೆನ್ನಿರುತ್ತದೆ. ಕೊನೆ ಸವಾರಿ ಅಲ್ಲವಾ ಅಂತ ನಾಜೂಕಿನಿಂದ, ಸೊಗಸಾಗಿ, ಪ್ರೀತಿಯಿಂದ ತಯಾರು ಮಾಡಿ ಕೊಡುತ್ತಾರೆ. ಈ ಮಂಚ ಚಟ್ಟಕ್ಕಿಂತ ಕಡೆ. ಇದನ್ನು ನೋಡಿ ನನ್ನ ತಂಗಿಯ ಮುಖ ಬಣ್ಣ ಕಳೆದುಕೊಂಡ ಹೆಣದ ಥರ ಆಗಿದ್ದು ನೋಡಿ ಕನಿಕರ ತೋರಿತು. ಈಗ ನನ್ನ ಆ ಮಾಯಾ ಮೇಜನ್ನು ಕೊಳ್ಳಲು ಮಾರನೆ ದಿನ ಬೆಳಿಗ್ಗೆ ಅದೇ ದಾರಿಯಲ್ಲಿ ನಾನು ಕೆಲಸದ ನಿಮಿತ್ತ ಹೋದರೂ ಬಿಡುವಿಲ್ಲದ ಕಾರಣ ಹೋಗಲಾರದೆ ಸಂಜೆಗೆ ಅಂಗಡಿ ಕಡೆ ಒಬ್ಬನೇ ಹೋದೆ. ಮತ್ತದೇ ಗಿಜಿ ಗಿಜಿ, ಏನು ಸಾಯುತ್ತಾರೋ ಡಿಸ್ಕೌಂಟ್ ಅಂದ್ರೆ (ನೀನು? ಎಂದು ಕೇಳಿ ನನ್ನ ಪಾರ್ಟಿ ದಯಮಾಡಿ ಹಾಳು ಮಾಡ ಬೇಡಿ) ಎಂದು ನನ್ನಲ್ಲೇ ಗೊಣಗುತ್ತಾ ಬುರ್ಖಾಧಾರಿ ಅರಬ್ ಸುಂದರಿಯರ ಜೊತೆ elevator ಹತ್ತಿದೆ. ಇದ್ದಕ್ಕಿದ್ದಂತೆ ಮನದಲ್ಲಿ ಪುಕು ಪುಕು, ನಾನು ಬಯಸಿದ, ಪ್ರೇಮಪಾಶಕ್ಕೆ ಬಿದ್ದ ಆ ಮೇಜು ಅಲ್ಲಿಲ್ಲದಿದ್ದರೆ? ಛೆ ಶುಭ್, ಶುಭ್, ಬೋಲೋ ಎಂದು ಧೈರ್ಯ ಹೇಳಿಕೊಳ್ಳುತ್ತಾ ದಾಪುಗಾಲು ಹಾಕಿದೆ. ಒಹ್, ಅಲ್ಲೇ ಇದೇ ನನ್ನ ಬರವಿಕೆಗಾಗಿ ಕಾಯುತ್ತಾ ನನ್ನ ಮೇಜು. ಇದನ್ನ ನಾನಲ್ಲದೆ ಯಾರು ಕೊಳ್ಳಲು ಸಾಧ್ಯ ಎಂದು ಗೆಲುವಿನ ನಗೆ ನಗುತ್ತಾ ಹತ್ತಿರ ಬಂದು ನಿಂತೆ ಹಾಡೊಂದನ್ನು ಗುನುಗಿಸುತ್ತಾ, “ನಾನು ನೀನು ಒಂದಾದ ಮೇಲೆ ಹೀಗೇಕೆ ನನ್ನನ್ನೇ ನೋಡುವೆ, ಪುಸ್ತಕಗಳಿಂದ ನಿನ್ನಾ, ಸಿಂಗಾರ ಮಾಡಿ ಕಣ್ತುಂಬಾ ನಾ ನೋಡುವೇ…” ಈಗ ಮತ್ತೊಂದು ಯೋಚನೆ ತಲೆ ಹಾಕಿತು. ಅಲ್ಲಾ, ಮೇಜನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ಕೊಳ್ಳುತ್ತೇನೆ ಆದರೆ ಅದಕ್ಕೆ ಹೊಂದುವ ಕುರ್ಚಿ? ಅಲ್ಲೇ ಪಕ್ಕದಲ್ಲೇ ಕೆಲವು ಕುರ್ಚಿಗಳು ನನ್ನನ್ನು ಆರಿಸಿಕೋ ಎಂದು ಸ್ವಯಂವರದ ರೀತಿಯಲ್ಲಿ ನಿಂತಿದ್ದವು. ಯಾವುವೂ ಇಷ್ಟವಾಗಲಿಲ್ಲ. ಕೆಲವೊಂದು plastic ನದ್ದಾದರೆ, ಇನ್ನೂ ಕೆಲವು artistic ಅಲ್ಲದವು. ಈ ಮೋಹಕ ಮೇಜಿಗೆ ಹೊಂದುವ ಕುರ್ಚಿ ಇಟ್ಟಿಲ್ಲವಲ್ಲ ಈ ಜನ ಎಂದು ಹಳಿಯುತ್ತಾ ಸರಿ ಈ ಮೇಜನ್ನು ತೆಗೆದುಕೊಂಡು ಗಾಡಿ ಬಿಡೋಣ ಎಂದು ಹತ್ತಿರ ಬಂದು ಅದರ ಟ್ಯಾಗ್ ಅನ್ನು ಹಾಗೇ ಹಿಂದಕ್ಕೆ ತಿರುವಿದೆ. ಇದ್ದಕ್ಕಿದ್ದಂತೆ ಒಂದು ರೀತಿಯ ತಲೆ ಸುತ್ತು, ನೆಲದಡಿಯ ನೆಲ ಜಾರುತ್ತಿರುವ ಅನುಭವ, ದಿಕ್ಕು ತಪ್ಪಿ ತೇಲುತ್ತಿರುವ ಹಾಗೆ. ಸಾವರಿಸಿಕೊಂಡು ಮತ್ತೊಮ್ಮೆ ನೋಡಿದೆ. ಟ್ಯಾಗ್ ಮೇಲೆ product code ಬರೆದು pick up ಎಂದು ಬರೆದಿದ್ದರು. ನಾನು “ಸೀಸನ್ಡ್” ಶಾಪ್ಪರ್, ನನಗೆ ವ್ಯಾಪಾರದ ಕೋಡು, ಕೋರೆ, ಬಾಲ ಎಲ್ಲಾ ಗೊತ್ತು. ಆದರೂ ಒಂದು ಆಸೆ, ಮತ್ತದೇ ಸೇಲ್ಸ್ ಮ್ಯಾನ್ನ ಹತ್ತಿರ ಹೋದೆ ನಡುಗುತ್ತಾ. ಕೆಲಸ ಬೇಕೆಂದು ಕೇಳಿ ಸುರುಳಿ ಮಾಡಿ bio data ಎಂಬ ಸೊರಗಿದ ಕಾಗದ ಹಿಡಿದ ಉದ್ಯೋಗಾರ್ಥಿಯ ಹಾಗೆ. ಸೇಲ್ಸ್ ಮ್ಯಾನ್ ಫಿಲಿಪ್ಪಿನ್ಸ್ ದೇಶದವನು. ಬೆಳ್ಳಗಿನ ಚರ್ಮ, ಹೊಳೆಯುವ ಹಲ್ಲುಗಳು, ನಿಷ್ಕಳಂಕ ವ್ಯಾಪಾರೀ ನಗೆ. ಹತ್ತಿರ ಕರೆದು ಈ ಮೇಜು ಮಾರಾಟವಾಯಿತಾ ಎಂದು ತೊದಲಿದೆ. ಅವನೂ ಸಹ ಟ್ಯಾಗ್ ಅನ್ನು ತಿರುವಿ ನನ್ನೆಡೆ ಕನಿಕರದಿಂದ ನೋಡಿ ನೇಣಿನ ತೀರ್ಪು ನೀಡುವ ನ್ಯಾಯಾಧೀಶನಂತೆ ತೀರ್ಪನ್ನು ಹೊರಬಿಟ್ಟ. ನನ್ನ ಪಾಲಿನ death sentence. ಎಸ್ ಸರ್, it is sold. ಧಸಕ್ ಎಂದಿತು ಎದೆ. ನಾನು ಇಷ್ಟಪಟ್ಟ ಹೆಣ್ಣಿಗೆ ಯಾರೋ ಬಂದು ತಾಳಿ ಕಟ್ಟಿ ಹೋದ ಹಾಗೆ. ಸಾವರಿಸಿಕೊಳ್ಳುತ್ತಾ, aah, its ok, there will always be another chance ಎನ್ನುತ್ತಾ ದ್ರಾಕ್ಷಿ ಹುಳಿ ಎಂದು ಗಂಭೀರವಾಗಿ ಹೊರ ನಡೆದೆ ನರಿಮಾಮನ ಅದೇ ಶೈಲಿಯಲ್ಲಿ.

ಬರೀ ಗೇಣಿನ ದೂರದಲ್ಲಿದ್ದ ಮೇಜನ್ನು procrastination ಎನ್ನುವ ವಿಷ ಕನ್ಯೆಯ ಆಟಕ್ಕೆ ಕಳೆದುಕೊಂಡು ಹವಾನಿಯಂತ್ರಿತ ವಸಂತ ಋತುವಿಗೆ ವಿದಾಯ ಹೇಳಿ ಅದೇ ಮರುಭೂಮಿಯ ಸುಡುವ ಒಣ ಹವೆಗೆ ಮುಖವೊಡ್ಡುತ್ತಾ ಪಾರ್ಕಿಂಗ್ ಲಾಟ್ ಕಡೆ ನಡೆದೆ ಹೊರಲಾರದ ಹೆಜ್ಜೆಗಳನ್ನು ಹಾಕುತ್ತಾ.

ಸೂರಿನ ಕೂಗು

ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ “ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು” ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು  ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲವರು ಶತಪಥ ಹಾಕುತ್ತಾ ತಮ್ಮ ಕೋಪವನ್ನು ನೆಲದ ಮೇಲೆ, ಪಾಪಿ ಶರೀರ ಹೊತ್ತ ಪಾದಗಳ ಮೇಲೆ ತೋರಿಸುತ್ತಾರೆ, ಇಲ್ಲಾ ಕೈಗೆ ಸಿಗುವ ಮಕ್ಕಳ ಕಿವಿ ಹಿಂಡಿ, ಅವರ ಬಾಯಿಂದ ಸಪ್ತ ಸ್ವರ ಹೊರಡಿಸಿ ಕೋಪ ತೀರಿಸಿಕೊಳ್ಳುತ್ತೇವೆ. ಕೋಪ ಎನ್ನುವುದೇ ಹೀಗೆ. ವ್ಯಕ್ತಪಡಿಸಲೇ ಬೇಕು. ಇಲ್ಲದಿದ್ದರೆ ಹಿಡಿದಿಟ್ಟುಕೊಂಡ ಕೋಪ depression ಆಗಿಯೋ ಮತ್ತೇನಾದರೂ ಆಗಿಯೋ ಪರಿಣಮಿಸುತ್ತದೆ. pent up anger ಒಳ್ಳೆಯದಲ್ಲ.  ವೈಯಕ್ತಿಕ ಜೀವನದಲ್ಲಿ ಹೀಗಾದರೆ ಪ್ರಜಾಪ್ರಭುತ್ವದಲ್ಲಿ ಈ ಕೋಪ, ನಿರಾಶೆ, ಹತಾಶೆಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳು. ನಾಯಕನ ಅಥವಾ ವಿರೋಧಿಯ ಪ್ರತಿಕೃತಿ ಸುಟ್ಟೋ, ಘೋಷಣೆ ಕೂಗಿಯೋ (ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ೧೯೭೭ ರಲ್ಲಿ ಜನತಾ ಪಕ್ಷದವರು ಹೇಳುತ್ತಿದ್ದುದು, ಈಗ ಇದು ಹಳೆ ಫ್ಯಾಶನ್), ಕಪ್ಪು ಬಾವುಟ ಮೂತಿಗೆ ಹಿಡಿದೋ, ರಸ್ತೆ ತಡೆ ನಡೆಸಿಯೋ ಪ್ರಕಟ. ಮೇಲೆ ಹೇಳಿದವು run of the mill ಅಂತಾರಲ್ಲ ಹಾಗೆ. ಕೇಳಿ, ನೋಡಿ ಸಾಕಾಗಿ ಹೋದ ನಮೂನೆಗಳು. ಎಲ್ಲಿ ಹೋದರೂ, ಯಾವ ಸಂದರ್ಭಗಳಲ್ಲೂ ಎಲ್ಲಾ ಹೆಣ್ಣು ಮಕ್ಕಳ ಮೈ ಮೇಲೂ ನಡೆದಾಡುವ “ಮಾಕ್ಸಿ” ಗಳ  ಹಾಗೆ. ಸರ್ವಾಂತರ್ಯಾಮಿ. ಇತ್ತೀಚೆಗೆ ಈ ಏಕತಾನತೆಗೆ, monotonous ಗೆ, ಬಿಡುವು ಸಿಕ್ಕಿತು. ನಮ್ಮಲ್ಲೂ ಇದೆ ಕ್ರಿಯಾಶೀಲತೆ ಎಂದು ತೋರಿಸಿದೆವು. ಪ್ರೇಮಿಗಳ ದಿನದಂದು ಈ ಆಚರಣೆ ಸಲ್ಲದು ಎಂದು ಪ್ರೇಮಿಗಳಿಗೆ ಎಚ್ಚರಿಸಿದವರ ಅಂಡುಗಳಿಗೆ ಕೆಂಪು ಕೆಂಪಾದ ಚಡ್ಡಿಗಳ ವಿತರಣೆ. ಜಯಲಲಿತಾಳ ಸೀರೆ ವಿತರಣೆ ಥರ, ಐಶ್ವರ್ಯಾ ರೈ ವಿವಾಹದ ಲಡ್ಡುಗಳ ಥರ ಅತ್ಯುತ್ಸಾಹದ ಚಡ್ಡಿ ವಿತರಣೆ. ಪ್ರತಿಭಟಿಸಲು ನಾವು ಕಂಡುಕೊಂಡ ಈ ವಿನೂತನ ವಿಧಾನ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲೂ ಜನಪ್ರಿಯವಾಗಿ ಅಮೆರಿಕೆಯ ಪ್ರಸಿದ್ಧ NPR ರೇಡಿಯೋ ಸಹ ಬಿತ್ತರಿಸಿತು. ಈಗಾಗಲೇ ಚಡ್ಡಿಗಳು ಸವೆದೋ, ಹರಿದೋ ಹೋದರೂ ಈ ಪ್ರತಿಭಟನೆಯ “ರೂವಾರಿಣಿ” ಮಾತ್ರ ಅಜರಾಮರಳಾದಳು. ಕ್ರಿಯಾಶೀಲತೆಗೆ “ಚಡ್ಡಿ ಸಾಕ್ಷಿ” ಯಾದಳು.   

ಬಹಳ ಸಂಭಾವಿತರಾದ, ಸುಸಂಸ್ಕೃತರಾದ ನಾವು ಜನ ಚಡ್ಡಿ ಹಾಕಿಕೊಳ್ಳಲಿ ಎಂದು ಸರಬರಾಜು ಮಾಡಿದರೆ ಮತ್ತೊಂದೆಡೆ ಪ್ಯಾಂಟ್ ಬಿಚ್ಚಿ ಪ್ರತಿಭಟನೆ. ಆಂ, ಏನ್ರೀ ಇದು ಉದ್ಧಟತನ ಎಂದಿರಾ? ಯಾರಿಗ್ರೀ ಉದ್ಧಟತನ?  ಉದ್ಧತನ ನಮಗೆ. ನಗ್ನತೆಯೇ ನೈಜತೆ ಎಂದು ನಂಬುವ, ನಂಬಿದಂತೆ ನಡೆಯುವ ಪಾಶ್ಚಾತ್ಯರಿಗೆ ಏನ್ರೀ ಉದ್ಧಟತನ? ಮೇಲೆ ಹೇಳಿದ ಪ್ಯಾಂಟ್ ಅವರೋಹಣ ಮಾಡಿ ಪ್ರತಿಭಟನೆ ನಡೆದಿದ್ದು ಇಟಲಿಯ ರೋಮ್ ನಗರದಲ್ಲಿ. ಇಟಲಿ ಎಂದ ಕೂಡಲೇ ಕಿವಿ ನಿಮಿರುತ್ತವೆ ನಮ್ಮದು, ಎಷ್ಟಿದ್ದರೂ ನಮ್ಮ ಬೀಗರಲ್ಲವೇ ಅವರು?  ರೋಮ್ ನಗರದ ಮೇಯರ್ ಹೊಸ ತೆರಿಗೆ ಒಳಗೊಂಡಿದ್ದ ಆಯ-ವ್ಯಯ ಪತ್ರ ಮಂಡಿಸಲು ತಯಾರಿಲ್ಲ. ಚುನಾವಣೆ ಹತ್ರ ಬಂತು ಎಂದು ಆಯ-ವ್ಯಯ ಪತ್ರ ಅಡಿಗಿಟ್ಟು ಕೂತು ಬಿಟ್ಟ ಪರಮ ಪೂಜ್ಯ ಮೇಯರ್. ಇದನ್ನು ತೆಗೆಸಲು ಮಾಡಿದ ಎಲ್ಲಾ ಪ್ರಯತ್ನವೂ ವಿಫಲವಾದ ಮೇಲೆ ಈ ಅವರೋಹಣ ಕಾರ್ಯಕ್ರಮ. ಇದರ ಉದ್ಘಾಟನೆ ಯಾರು ಮಾಡಿದರೋ ಗೊತ್ತಿಲ್ಲ, ಅವರೋಹಣ ಸಾಂಗವಾಗಿ ಜರುಗಿತು. ಜನರ ಅವಸ್ಥೆ ಕಂಡು ಬಂಡೆ ಕರಗಿದರೂ ಮೇಯರ್ ನ ಹೃದಯ ಕರಗದೆ ಆಯ ವ್ಯಯ ಪತ್ರ ಬಚ್ಚಲು ಸೇರಿಕೊಂಡಿತು.

ಅಮೆರಿಕೆಯ ಆಪ್ತ ಮಿತ್ರ, ತಾನು ಪಶ್ಚಿಮ ಎಂದರೆ ಪೂರ್ವ ಎನ್ನುವ ಇರಾನ್ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ. ಹಾಲಿ ಅಧ್ಯಕ್ಷ “ಅಹ್ಮದಿ ನಿಜಾದ್” ಸೋತರೂ ಸೋಲೊಪ್ಪದೆ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಬುಶ್ ಸಾಹೇಬರು ಪ್ರತಿಸ್ಪರ್ದಿ “ಅಲ್ ಗೋರ್” ಗೆ ಹಾಕಿದ ಟೋಪಿಯನ್ನೇ ತಮ್ಮ ಎದುರಾಳಿಗೆ ತೊಡಿಸಿ recycling ನ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಜಗಕ್ಕೆ, ವಿಶೇಷವಾಗಿ ಪಾಶ್ಚಾತ್ಯರಿಗೆ (recycling ಪಾಶ್ಚಾತ್ಯರ ಕೂಸು) ಪಾಠ ಹೇಳಿಕೊಟ್ಟರು. ಈ ವಿಷಯದಲ್ಲಿ ಅಹ್ಮದಿ ನಿಜಾದ್ ಬುಶ್ ಅಭಿಮಾನಿ. ಪ್ರಪಂಚದ ಯಾವುದೇ ದಿಕ್ಕುಗಳಲ್ಲಿ ಹರಡಿ ಹೋದರೂ ತಮ್ಮ ಗುಣ ವೈಶಿಷ್ಟ್ಯಗಳ ಜನರನ್ನು ಕಂಡುಕೊಳ್ಳುತ್ತಾರೆ ಖದೀಮರು. ವಿರೋಧ ಪಕ್ಷದ ಅಭ್ಯರ್ಥಿ ಬಿಡುತ್ತಾನೆಯೇ, ಅದೂ  ಉರಿಯುವ ಬೆಂಕಿಗೆ ಅಮೇರಿಕಾ ಗಾಳಿ ಹಾಕಲು ತಯಾರಾಗಿರುವಾಗ? ವಿದ್ಯಾರ್ಥಿಗಳು ಬೀದಿಗೆ ಬಂದರು. ನಮ್ಮ ನೆರೆಯ ಮಿತ್ರ ೧೯೮೯ ರಲ್ಲಿ “ತಿಯಾನನ್ಮೆನ್ ಚೌಕ” ದ ಬಳಿ ಸೇನೆಯ ಟ್ಯಾಂಕರು ಗಳನ್ನು ಕಳಿಸಿ ರಸ್ತೆಯನ್ನು ಕೆಂಬಣ್ಣಕ್ಕೆ (ಪ್ರದರ್ಶನಕಾರರ ರಕ್ತದಿಂದ) ತಿರುಗಿಸಿದ ಹಾಗೆ ಮಾಡಲಿಲ್ಲ ಪ್ರೊಫೆಸರ್ ಅಹ್ಮದಿ ನಿಜಾದ್. ಡ್ರಿಲ್ ಮಾಸ್ತರ್ ನಂತೆ ಒಂದಿಷ್ಟು ಲಾಠಿ, ಮತ್ತೊಂದಿಷ್ಟು ಬೆದರಿಕೆ ಹಾಕಿ ಒಳಕ್ಕೆ ಕಳಿಸಿದರು ಪ್ರದರ್ಶನಕಾರರನ್ನು. ಈಗ “ಪೆಂಟ್ ಅಪ್” ಕೋಪವನ್ನೇನು ಮಾಡೋದು? ನೆಲೆ ಕಾಣದ ಕೋಪ ಸೂರು ಹತ್ತಿತು. ಜನ ತಮ್ಮ ಮನೆಗಳ ಸೂರಿನ ಮೇಲೆ ನಿಂತು ಅರಚಿದರು ಘೋಷಣೆಗಳನ್ನು. ದಿನವೂ ನಿರ್ದಿಷ್ಟ ಸಮಯಕ್ಕೆ ಕಿರುಚುವುದು. ಪಾಪ ಇವರಿಗೆ ಗೊತ್ತಿಲ್ಲ ರಾಜಕಾರಣಿಗಳು ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಮೊದಲನೆಯದಾಗಿ ಕಳೆದುಕೊಳ್ಳುವುದು ಕಿವಿಗಳನ್ನು ಎಂದು. ಎರಡನೆಯದಾಗಿ ಕಳಕೊಳ್ಳೋದು ಮಾನವನ್ನು. ಟೆಹರಾನಿನಲ್ಲೂ, ಇರಾನಿನ ಇತರೆ ನಗರಗಳಲ್ಲೂ ನಡೆದ ಗದ್ದಲ ಬೇರೆಲ್ಲ ದೇಶಗಳ ನಿದ್ದೆಗೆಡಿಸಿ ಗಡದ್ದಾಗಿ ಮಲಗಿದ್ದ ಶ್ವೇತ ಭವನವನ್ನು ಎಚ್ಚರಿಸಿತು. ಎಂದಿನಂತೆ ಕಟುವಾದ ಶಬ್ದಗಳು ಉರುಳಲಿಲ್ಲ ತಡಬಡಿಸಿ ಎದ್ದ ಶ್ವೇತ ಭವನದ ಹಸಿರು ಹುಲ್ಲು ಹಾಸಿನಿಂದ. ಏಕೆಂದರೆ ಇದು ಬುಶ್ ಶ್ವೇತ ಭವನವಲ್ಲ, ಒಬಾಮ ಭವನ. ಸ್ವಲ್ಪ ನಯವಾಗಿಯೇ ಗದರಿಸಿತು ಅಮೇರಿಕಾ. ನೋಡಪ್ಪಾ ಹೀಗೆಲ್ಲ ಮಾಡಬಾರದು, ಸರಿಯಾಗಿ ಮತಗಳನ್ನೂ ಎಣಿಸು, ಎಣಿಸಲು ಬರದಿದ್ದರೆ ಬೇಕಾದರೆ ನಮ್ಮ ಜನಗಳನ್ನು ಕಳಿಸುತ್ತೇವೆ ಎಂದು. ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರೂ ಆದ ಇರಾನಿನ ಅಧ್ಯಕ್ಷರು ಅಮೆರಿಕೆಗೆ ತಮ್ಮದೇ ಭಾಷೆಯಲ್ಲಿ mind your business ಎಂದು ಹೇಳಿ ಅಮೆರಿಕೆಯ ಪ್ರತಿಭಟನೆಗೂ, ವಿದೇಶೀ ಸರಕಾರಗಳ ಮೂದಲಿಕೆಗೂ, ಮಾಧ್ಯಮಗಳ ತಿವಿತಗಳಿಗೂ ಅಸಾಧಾರಣವಾದ ಕಿವುಡುತನ ಪ್ರದರ್ಶಿಸಿದರು. ತಾವು ತಮಗರಿವಿಲ್ಲದೆಯೇ ಮಹಾತ್ಮ ಬುಶ್ ರ ಅಭಿಮಾನಿ ಎಂದು ತೋರಿಸಿಕೊಟ್ಟರು ಪ್ರಪಂಚಕ್ಕೆ.

ಥಾಯ್ಲೆಂಡಿನಲ್ಲಿ ಪದಚ್ಯುತ ಪ್ರಧಾನಿ “ಥಕ್ಸಿನ್ ಶಿನಾವತ್ರ” ರನ್ನು ಮರಳಿ ಅಧಿಕಾರಕ್ಕೆ ತರಬೇಕೆಂದು ಪಟ್ಟು ಹಿಡಿದು  ಜನ ಬೀದಿಗಿಳಿದರು ಕೆಂಪು ಅಂಗಿ ಧರಿಸಿ. ನಗರವೆಲ್ಲಾ ಕೆಂಪೋ ಕೆಂಪು. ಪ್ರತಿಭಟನೆಯ ವ್ಯಾಲೆಂಟೈನ್. ಜಪ್ಪಯ್ಯ ಎನ್ನಲಿಲ್ಲ ಸೇನಾ ಬೆಂಬಲಿತ “ಅಭಿಸಿತ್ ವೆಜ್ಜಜೀವ”. ೪೫ ರ, ಆಕ್ಸ್ಫೋರ್ಡ್ ನಲ್ಲಿ ಕಲಿತ ಸ್ಫುರದ್ರೂಪಿ ರಾಜಕಾರಣಿ ಥಾಯಿಲೆಂಡ್ ಅನ್ನು ವಿದೇಶೀ ಬಂಡವಾಳ ಹೂಡಿಕೆದಾರರಿಗೆ ಆಕರ್ಷಕವನ್ನಾಗಿ ಮಾಡಿದ್ದರು. ಆದರೆ ಶಿನಾವತ್ರ ಬೆಂಬಲಿಗರಿಗೆ ಈ ಬದಲಾವಣೆಯಾಗಲಿ, ಪ್ರಗತಿಯಾಗಲಿ ಬೇಕಿಲ್ಲ. ತರಬೇಕು ಮರಳಿ ತಮ್ಮ ನಾಯಕನನ್ನು ಗದ್ದುಗೆಗೆ. ಕೊನೆಗೆ ಎಲ್ಲರೂ ತಮ್ಮ ತಮ್ಮ ರಕ್ತ ಶೇಖರಿಸಿಕೊಂಡು ಬಕೇಟು ಗಳಲ್ಲಿ ತುಂಬಿ ಅಭಿಸಿತ್ ನಿವಾಸದ ಮುಂದೆ ಸುರಿದರು. ಅಭಿಸಿತ್ ಅವರ ಜಗುಲಿ ನೆತ್ತರುಮಯವಾಯಿತು, ಕ್ಷಣಗಳಲ್ಲಿ ರಕ್ತ ಹೆಪ್ಪುಗಟ್ಟಿತು. ಅದರೊಂದಿಗೆ ಅಭಿಸಿತ್ ನ ಅಧಿಕಾರದ ಮೋಹವೂ ಇನ್ನಷ್ಟು ಹೆಪ್ಪುಗಟ್ಟಿತು.         

ಹೀಗೆ ಪ್ರತಿಭಟನೆಗಳು ಒಂದಲ್ಲ ಒಂದು ತಮ್ಮದೇ ಆದ ರೀತಿಯಲ್ಲಿ ಪ್ರತ್ಯಕ್ಷಗೊಂಡು, ಸೋತ, ನೀರಸ ವಿಶ್ವಕ್ಕೆ ಗೆಲುವನ್ನೂ, ಲವಲವಿಕೆಯನ್ನು ತಂದು ಕೊಡುತ್ತವೆ. ನಿಮ್ಮದೂ ಏನಾದರೂ ವಿಶಿಷ್ಟ ವಿಧಾನಗಳಿದ್ದರೆ ಹೇಳಿ. ನಿಮಗಾಗದ ಸಹೋದ್ಯೋಗಿ ಸಮೀಪ ಇಲ್ಲದಾಗ ಅವನ ಹೆಸರಿನಲ್ಲಿ (ಆತ ತೆರೆದಿಟ್ಟು ಹೋದ office outlook ಮೂಲಕ) ಬೇಡದ ಮೇಲ್ ಕಳಿಸಿ ಆತನ ಬಾಳನ್ನು ಬಂಗಾರ ಮಾಡಿದ ನಿದರ್ಶನಗಳಿದ್ದರೆ ಹಂಚಿಕೊಳ್ಳಿ.

ಕೋಪ ಬಂದಾಗ ಒಂದು ಮೊಳೆ

ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನೆ. ಉತ್ಸಾಹದಿಂದ ಹೋಗುವ ಹುಡುಗ ಮೊದಲ ದಿನವೇ ೩೭ ಮೊಳೆಗಳನ್ನು ಹೊಡೆದು ಹಾಕುತ್ತಾನೆ ಗೋಡೆಗೆ.  ಒಂದೆರಡು ವಾರಗಳಲ್ಲಿ ತನ್ನ ಕೋಪ ತಾಪ ಎಲ್ಲಾ ತಹಬಂದಿಗೆ ಬಂದು ಗೋಡೆಗೆ ಹೊಡೆಯಬೇಕಾದ ಮೊಳೆಗಳು ಸಂಖ್ಯೆಯಲ್ಲಿ ಕಡಿಮೆಯಾಗುತ್ತವೆ. ತನ್ನ ಅಪ್ಪ ಹೇಳಿದ ಹಾಗೆ ಮೊಳೆ ಹೊಡೆಯುವುದಕ್ಕಿಂತ ಸುಲಭ ತನ್ನ ಕೋಪವನ್ನು ನಿಯಂತ್ರಿಸುವುದು ಎಂದು ಈ ಹೊತ್ತಿಗಾಗಲೇ ಹುಡುಗ ಅರಿತು ಕೊಳ್ಳುತ್ತಾನೆ. ಕೊನೆಗೊಂದು ದಿನ ಹುಡುಗ ಮೊದಲಿನ ಥರ ಕೋಪಿಷ್ಠನಾಗದೇ ಮಂದಸ್ಮಿತನಾಗುತ್ತಾನೆ, ಸಂಯಮಿಯಾಗುತ್ತಾನೆ, ಮೊಳೆಯ ಚೀಲ ಬರಿದಾಗುತ್ತದೆ. ಈ ವಿಷಯವನ್ನು ತನ್ನ ತಂದೆಗೆ ಬಂದು ಹೇಳಿದಾಗ ತಂದೆ ಹೇಳುತ್ತಾನೆ, ಮಗನೇ, ಈಗ ಹೋಗಿ ನೀನು ಹೊಡೆದ ಮೊಳೆಗಳನ್ನೆಲ್ಲಾ ದಿನಕ್ಕೊಂದರಂತೆ ಕೀಳು ಎಂದು. ಮತ್ತೊಮ್ಮೆ ಗೋಡೆ ಕಡೆ ಮರಳಿದ ಹುಡುಗ ಸಾವಧಾನದಿಂದ ದಿನಕ್ಕೊಂದರಂತೆ  ಒಂದೊಂದೇ ಮೊಳೆ ಗಳನ್ನು ಕೀಳುತ್ತಾನೆ. ಒಂದೆರಡು ವಾರಗಳ ತರುವಾಯ ಹುಡುಗ ಬಂದು ತಾನು ಎಲ್ಲಾ ಮೊಳೆಗಳನ್ನು ಕಿತ್ತ ವಿಷಯ ಹಿಗ್ಗುತ್ತಾ ತಂದೆಗೆ ತಿಳಿಸುತ್ತಾನೆ. ಮಗನನ್ನು ನೋಡಿ ಮುಗುಳ್ನಗುತ್ತಾ ಅವನ ಕೈ ಹಿಡಿದು ಕೊಂಡು ಹಿತ್ತಲಿನ ಗೋಡೆಗೆ ಬಂದ ತಂದೆ ಮಗನ ತಲೆ ತಡವುತ್ತಾ ಹೇಳುತ್ತಾನೆ, ಮಗೂ, ಎಷ್ಟು ಸುಂದರ ಕೆಲಸ ನೀನು ಮಾಡಿದೆ, ಆದರೆ ನೋಡು ಒಮ್ಮೆ ಗೋಡೆಯನ್ನು. ಮೊದಲಿನ ಹಾಗಿದೆಯೇ ಗೋಡೆ? ಎಷ್ಟೊಂದು ತೂತುಗಳು ಬಿದ್ದಿವೆ ನೋಡು ಗೋಡೆಯ ಮೇಲೆ. ಈ ಗೋಡೆ ಮೊದಲಿನ ಹಾಗೆ ಆಗಲು ಸಾಧ್ಯವೆ?  ಎಂದಿಗೂ ಇಲ್ಲ. ನೀನು ಕೋಪದಲ್ಲಿ ಆಡಿದ ಮಾತುಗಳೂ ಸಹ ಹಾಗೆಯೇ. ನಿನ್ನ ಕೋಪದ ಮಾತುಗಳು, ಜನರಿಗೆ ಮಾಡಿದ ನೋವು ನೀನು ಮೊಳೆಗಳಿಂದ ಗೋಡೆಗೆ ಮಾಡಿದ ತೂತುಗಳಂತೆ.  ಅವೆಂದೂ ಮಾಸಲಾರವು. ಒಬ್ಬನಿಗೆ ಚೂರಿ ಇರಿದು ಆ ಚೂರಿಯನ್ನು ಹಿಂದಕ್ಕೆ ಎಳೆಯಬಹುದು, ಆದರೆ ಆ ಚೂರಿ ಮಾಡಿದ ಗಾಯ? ಆ ಗಾಯ ಮಾಸುವುದೇ? ನೀನೆಷ್ಟೇ ಕ್ಷಮೆ ಕೋರಿದರೂ ಆ ಗಾಯ ಅಲ್ಲೇ ಇರುತ್ತದೆ.

ಅನರ್ಘ್ಯ ರತ್ನಗಳಂಥ ಮಾತುಗಳನ್ನು ತನ್ನ ಪ್ರೀತಿಯ ತಂದೆಯ ಬಾಯಿಂದ ಆಲಿಸಿದ ಹುಡುಗ ದಂಗುಬಡಿದವನಂತೆ, ತಟಸ್ಥನಾಗಿ ನಿಂತು ತನ್ನ ತಂದೆಯನ್ನೇ ನೋಡುತ್ತಾ ನಿಂತ ಕಣ್ಣೀರು ಹರಿಸುತ್ತಾ.

ನಮಗೂ ಇರಲಿ ಕೊಂಚ, ಭಾಷಾಭಿಮಾನ

ಅಲ್-ನಂಸ” ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನೆಟ್ ಮೇಲೆ ನೇತಾಡುವ ನನ್ನ ಅಭ್ಯಾಸ. ಸರಿ, ಬೇಕಾದ್ದನ್ನೆಲ್ಲ ಕೇಳಲು ಅಲ್ಲಾವುದ್ದೀನನ ದೀಪ ದ ಮೊರೆಗೆ ಹೋದ ಹಾಗೆ ಯಾಹೂ ಸರ್ಚ್ ಬಾರ್ ಗೆ ನನ್ನ ಪಯಣ. ಕೂಡಲೇ ಸಿಕ್ಕಿತು ಉತ್ತರ. “ಅಲ್-ನಂಸ” ಎಂದರೆ ಆಸ್ಟ್ರಿಯಾ ದೇಶ ಅಂತ. ಆಸ್ತ್ರಿಯಾಕ್ಕೆ “ಅಲ್-ನಂಸ” ಎಂದು ಕರೆಯುತ್ತಾರೆ. ಅರಬ್ ಭಾಷೆ ರೋಚಕ. ಪ್ರತಿ ಆಂಗ್ಲ ಪದಕ್ಕೂ ಪರ್ಯಾಯವಾಗಿ ಒಂದು ಪದ ಇದ್ದೆ ಇರುತ್ತದೆ. ನಾವು ಫೋನ್ ಗೆ ಕನ್ನಡದಲ್ಲಿ ದೂರವಾಣಿ ಎನ್ನದೇ ಫೋನ್ ಎಂದೇ ಕರೆಯುತ್ತೇವೆ, ಅದೇ ರೀತಿ ಮೊಬೈಲ್ ಸಹ. ಮೊಬೈಲ್ ಗೆ ಕನ್ನಡದಲ್ಲಿ ಏನನ್ನುತ್ತಾರೋ ನನಗೆ ಗೊತ್ತಿಲ್ಲ ಆದರೆ ಅರಬ್ಬೀ ಭಾಷೆಯಲ್ಲಿ ಇದಕ್ಕೆ “ಜವ್ವಾಲ್” ಎನ್ನುತ್ತಾರೆ. ಅಪ್ಪಿತಪ್ಪಿಯೂ ಯಾವ ಅರಬನೂ ತಾನು ಮಾತನಾಡುವಾಗ ಮೊಬೈಲ್ ಎನ್ನುವುದಿಲ್ಲ. ಫೋನ್ ಗೆ “ಹಾತಿಫ್” ಎನ್ನುತ್ತಾರೆ. ಕಾರಿಗೆ “ಸಿಯಾರ”. ವಿಮಾನಕ್ಕೆ “ತಯಾರ”. ಇವುಗಳಿಂದಲೇ ತಿಳಿಯುತ್ತದೆ ಅರಬರಿಗೆ ತಮ್ಮ ಭಾಷೆಯ ಮೇಲೆ ವ್ಯಾಮೋಹ ಹೆಚ್ಚು ಎಂದು, ಅದರಲ್ಲೇನು ತಪ್ಪಿದೆ ಹೇಳಿ? ನಾವೂ ಸಹ ಅವರನ್ನು ಅನುಕರಿಸಬೇಕು ಈ ವಿಷಯದಲ್ಲಿ ಅಲ್ಲವೇ. ಇಲ್ಲದಿದ್ದರೆ ಬೆಳಿಗ್ಗೆ ಎದ್ದು ತಿಂಡಿಗೆ ಎಂದು ಉಪಾಹಾರ ಮಂದಿರಕ್ಕೆ ಹೋಗಿ ಅಲ್ಲಿ ಉದ್ದಿನ ವಡೆಗೆ “ಮೆದು ವಡ” ಎಂದು ಬರೆದ ಎಂದು ತಕರಾರು ಮಾಡಿ ನಂತರ ಸ್ವಲ್ಪ ದೂರ ಬಂದು ಬಾಯಾರಿತು ಎಂದು ಎಳನೀರು ಕುಡಿಯಲು ಹೋದರೆ ಅಲ್ಲಿ ಎಳೆ ನೀರಿಗೆ “ನಾರಿಯಲ್” ಎಂದ ಎಂದು ಅರಚಾಡಿ ಗಂಟಲನ್ನು ಮತ್ತಷ್ಟು ಒಣಗಿಸುವುದಕ್ಕಿಂತ ನಮ್ಮ ಭಾಷೆ ಬಗ್ಗೆ ನಮ್ಮಲ್ಲೂ, ನಮ್ಮ ಮಕ್ಕಳಲ್ಲೂ ಅಭಿಮಾನ ಹುಟ್ಟಿಸಬೇಕು. ಉಪಕರಣಗಳ ಹಾಗೂ ಇತರೆ ಹೆಸರುಗಳನ್ನು ಬಿಡಿ ದೇಶಗಳ ಹೆಸರೂ ಅರಬ್ಬೀಕರಣ. ಭಾರತಕ್ಕೆ “ಹಿಂದ್” ಎನ್ನುತ್ತಾರೆ. ಜರ್ಮನಿಗೆ ” ಅಲ್-ಮಾನಿಯಾ”, ಗ್ರೀಸ್ ದೇಶಕ್ಕೆ “ಯುನಾನಿ”. ಹಂಗೇರಿ ಗೆ “ಅಲ್-ಮಜಾರ್”, ಹೀಗೆ ಸಾಗುತ್ತದೆ ಪಟ್ಟಿ. ಋತು “ಶರತ್ಕಾಲ” ಕ್ಕೆ ಅರಬ್ಬೀ ಭಾಷೆಯಲ್ಲಿ “ಖಾರಿಫ್” ಎನ್ನುತ್ತಾರೆ. ಖಾರಿಫ್ ಎಂದು ನಮ್ಮಲ್ಲೂ ಕೇಳಿದ ನೆನಪು, ಅದೇನೆಂದು ಸರಿಯಾಗಿ ಗೊತ್ತಿಲ್ಲ. ಚಳಿಗಾಲಕ್ಕೆ ” ಶಿತ “. ಇದನ್ನು ಕೇಳಿ ಚಳಿ ಹಿಡಿಯಿತಾ? ಇದೇನಪ್ಪಾ ನಮ್ಮ ಮೇಜು, ಕುರ್ಚಿ ಹಾಗೆ ಶೀತಾ ಸಹ ಅರಬ್ಬೀ ಮೂಲದ್ದೇ ಎಂದು? ಅದರ ಬಗ್ಗೆ ನನಗರಿವಿಲ್ಲ. ವಾರದ ದಿನಗಳಿಗೆ ಅರಬರ ಹೆಸರುಗಳು ಸ್ವಲ್ಪ ನೀರಸವೇ ಎನ್ನಬಹುದು. ಭಾನುವಾರ ಕ್ಕೆ “ಅಹದ್” ಅಂದರೆ ಮೊದಲು ಎಂದು. ವಾರದ ಮೊದಲ ದಿನ ಭಾನುವಾರ ಅಲ್ಲವ, ಅದಕ್ಕಿರಬೇಕು. ಸೋಮವಾರಕ್ಕೆ ” ಇತ್ನೇನ್” ಅಂದರೆ ಎರಡು. ಮಂಗಳವಾರ ಮೂರನೇ ದಿನ…..ಶುಕ್ರವಾರಕ್ಕೆ “ಜುಮಾ” ಮತ್ತು ಶನಿವಾರಕ್ಕೆ “ಸಬ್ತ್”.

ಅರಬ್ಬೀ ಮತ್ತು ಪೆರ್ಶಿಯನ್ ಪದಗಳು ಕನ್ನಡದಲ್ಲೀ ಹೇರಳವಾಗಿ ಕಾಣಲು ಸಿಗುತ್ತವೆ. ಅವುಗಳ ಬಗ್ಗೆ ಮುಂದೆಂದಾದರೂ ಬರೆಯುವೆ. ಅದೂ ಅಲ್ಲದೆ ಅರಬ್ಬೀ ಅಕ್ಷರ ಮಾಲೆಯಲ್ಲಿ “p” , “t” ಗಳು ಇಲ್ಲ. ಇವುಗಳ ಅನುಪಸ್ಥಿತಿಯಲ್ಲಿ ಬರುವ ಕೆಲವು ಪದಗಳು ತಮಾಷೆಯಾಗಿವೆ, ಇವುಗಳ ಬಗ್ಗೆಯೂ ಮುಂದೆಂದಾದರೂ ಬರೆಯುವೆ.

ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು:  

shreekant mishrikoti

ರಾಬಿ ಮತ್ತು ಖಾರಿಫ್ ಬೆಳೆ ಅಂದರೆ ಮುಂಗಾರು ಬೆಳೆ ಮತ್ತು ಹಿಂಗಾರು ಬೆಳೆ .
ವಿಕಿಪೀಡಿಯದಲ್ಲಿ ಹೀಗಿದೆ.
Rabi crop, spring harvest in India
The Kharif crop is the autumn harvest (also known as the summer or monsoon crop) in India and Pakistan.

ಮತ್ತೆ
ಲ್ಯಾಂಡ್-ಲೈನ್ ಗೆ ಸ್ಥಿರದೂರವಾಣಿ ಮತ್ತು ಮೊಬೈಲ್ ಗೆ ಸಂಚಾರಿ ದೂರವಾಣಿ ಅನ್ನೋ ಶಬ್ದಗಳು ಹೆಚ್ಚು ಚಾಲ್ತಿಯಲ್ಲಿವೆ . ಕೆಲವರು ನಿಲ್ಲುಲಿ , ನಡೆಯುಲಿ, ಜಂಗಮವಾಣಿ ಮುಂತಾದವನ್ನು ಬಳಸುವರು.

salimath wrote:

landline = ನಿಲ್ಲುಲಿ
mobile phone = ನಡೆಯುಲಿ (credits: ಬರತ್ ವೈ)

car= ನೆಲದೇರು (ನೆಲ+ತೇರು)
ವಿಮಾನ = ಬಾಂದೇರು (ಬಾನ್+ತೇರು)
ಗನನಸಖಿ= ಬಾಂಗೆಳತಿ (ಬಾನ್+ಗೆಳತಿ)
ಶೀತ = ಕುಳಿಱು

ಹೀಗೊಂದು ಜಾಹೀರಾತು

ಸೌದಿ ಅರೇಬಿಯಾದ ಜೆಡ್ಡಾ  ದ ನಗರದಲ್ಲಿ ಕಾಣ ಸಿಕ್ಕಿದ ಜಾಹೀರಾತು. ಡ್ರೈವ್ ಮಾಡುತ್ತಾ ಹೋಗುತ್ತಿದ್ದಾಗ ಈ ಚಿತ್ರ ನೋಡಿದ ಕೂಡಲೇ ನನಗನ್ನಿಸಿದು ಇದೇನೋ ಅಪ್ಪಿ ತಪ್ಪಿ ಅರಿವಿಲ್ಲದೆ ಬಂದು ಬಿಟ್ಟಿದೆ, ಯಾವುದೋ ಹಳೆಯ ಮಲಿನವಾದ ಚಿತ್ರವಿರಬೇಕು ಎಂದು. ನನ್ನ ಗ್ರಹಿಕೆ ಸುಳ್ಳಾಯಿತು ಎಂದು ಸ್ವಲ್ಪ ದೂರ ಒಂದು ರೌಂಡ್ ಅಬೌಟ್ (ಸರ್ಕಲ್) ಸಿಕ್ಕ ಕೂಡಲೇ ತಿಳಿಯಿತು. ಅಲ್ಲೂ ಹಿಂದಿನದಕ್ಕಿಂತ ದೊಡ್ಡ ಜಾಹೀರಾತು. ಇದನ್ನು ಸೃಷ್ಟಿಸಿದ ವ್ಯಕ್ತಿಯ ಕಲೆ, ತಲೆ ಬಗ್ಗೆ ವಿಪರೀತ ಅಭಿಮಾನ ಉಂಟಾಗಿ ಸೌದಿ ಅರೇಬಿಯಾದ ಪ್ರಸಿದ್ಧ ಕೇಕ್ ಕಂಪೆನಿ ನಗರದ ತುಂಬಾ ಜಾಹೀರಾತಿನ ಮೆರವಣಿಗೆಯನ್ನೇ ಶುರು ಮಾಡಿದ್ದರು. 

ಚಿತ್ರ ದಲ್ಲಿರುವವನ ತಲೆ ಕೂದಲು, ಆ ದಾಡಿ, ಅವನ ಅವತಾರ ನೋಡಿದರೆ ತಿನ್ನುವ ಚಪಲ ಬಿಡಿ ವಾಕರಿಕೆ ಶುರುವಾಗುತ್ತದೆ.   

western bakeries “lusine” ಬ್ರಾಂಡ್  ಅಡಿಯಲ್ಲಿ ಸ್ವಾದಿಷ್ಟಕರವಾದ ತಿನಿಸುಗಳನ್ನು ಸೊಗಸಾಗಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುತ್ತದೆ. ಸೌದಿಯಲ್ಲಿರುವ  ಅತೀ ದೊಡ್ಡ ಏಕೀಕೃತ ಡಯರಿ ಫಾರ್ಮ್ ಗಳಲ್ಲಿ ಒಂದಾದ “ಅಲ್-ಮರೈ” ಒಡೆತನದ ಈ ಕೇಕ್ ಕಂಪೆನಿ ಜಾಹೀರಾತು ವಿಭಾಗದಲ್ಲಿ ಎಂಥ ಹೆಡ್ಡ ರನ್ನು ಕೆಲಸಕ್ಕಿಟ್ಟುಗೊಂಡಿದ್ದಾರೆಂದು ತಿಳಿಯಲಿ ಎಂದು ಕಂಪೆನಿಗೆ ಫೋನಾಯಿಸಿದೆ. ಗ್ರಾಹಕ ಸಂಪರ್ಕ ವಿಭಾಗದಿಂದ ಒಬ್ಬ ತರುಣಿ ಉತ್ತರಿಸಿದಳು. ಸ್ವರಮಾಧುರ್ಯ ಕೇಳಿ ಪುಳಕವಾಗಿ ನನ್ನನ್ನು ಬಾಧಿಸಿದ ವಿಷಯ ಹೇಳಿದೆ. ಈ ಜಾಹೀರಾತು sick looking, ಅಷ್ಟೇ ಅಲ್ಲ ಇದನ್ನು ನೋಡಿದ ಯಾವನೂ ನಿಮ್ಮ ಕೇಕ್ ತಿನ್ನಲಿಕ್ಕಿಲ್ಲ, ನೀನು ಮಹಿಳೆ ಆದ್ದರಿಂದ ಆ ಚಿತ್ರ ನಿಜಕ್ಕೂ ಹೇಗೆ ಕಾಣುತ್ತಿದೆ ಎಂದು ಹೇಳಲು ಆಗುತ್ತಿಲ್ಲ, ಎಂದು ಹೇಳಿದಾಗ ಅತ್ಯಂತ ಗಮನ ಕೊಟ್ಟು ಆಲಿಸಿದ ಲಲನಾ ಮಣಿ ತನಗೂ ಆ ಜಾಹೀರಾತು ಅಷ್ಟು ಚೆನ್ನಾಗಿ ಕಾಣಲಿಲ್ಲ, ಆದರೆ ನೌಕರಳಾಗಿ ನಾನೇನೂ ಹೇಳುವಂತಿಲ್ಲವಲ್ಲ, ನಿಮ್ಮ ದೂರನ್ನು ನಾನು ಮುಖ್ಯಸ್ಥರಿಗೆ ತಲುಪಿಸುತ್ತೇನೆ ಎಂದು ನನ್ನ ಹೆಸರು, ಮೊಬೈಲ್ ನಂಬರ್ ತೆಗೆದುಕೊಂಡಳು. ಸುಂದರ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದ ಆಕೆಯನ್ನು ಕೇಳಿದೆ ಯಾವ ದೇಶದವಳೆಂದು. ಹೇಳಿಯೇ ಬಿಟ್ಟಳು, ನಮ್ಮ ಪರಮ ಮಿತ್ರ, ಆಪತ್ಕಾಲವನ್ನು ಆಗಾಗ ನಮ್ಮ ಹೊಸ್ತಿಲಿಗೆ ತಂದು ನಿಲ್ಲಿಸುವ ದೇಶದವಳು, ಪಾಕಿಸ್ತಾನ ಎಂದು.

 
ಈಗ ಸೌದಿ ಅರೇಬಿಯಾದಲ್ಲಿ ಬಹುತೇಕ ಕಂಪೆನಿಗಳು ಮಹಿಳೆಯರನ್ನು ಕೆಲಸಕ್ಕಿಟ್ಟುಕೊಂಡಿವೆ, ನಮ್ಮ ಕಂಪೆನಿಯನ್ನು ಹೊರತು ಪಡಿಸಿ. ಅದಕ್ಕೇ ಇರಬೇಕು ನಮ್ಮ ಕಂಪೆನಿ ಎಂದರೆ ನನ್ನ ಶ್ರೀಮತಿಗೆ ಪ್ರೀತಿ ಸ್ವಲ್ಪ ಜಾಸ್ತಿ, ನನ್ನ ದಾರಿಗೆ distraction ತಂದು ಒಡ್ಡುತ್ತಿಲ್ಲವಲ್ಲ ಎಂದು.                   
 
ಜಾಹೀರಾತಿನ ಎಡ ತುದಿಯಲ್ಲಿ ಅರಬಿಯಲ್ಲಿ ಬರೆದಿರುವುದು “ಎಚ್ಚರಿಕೆ, ಕೇಕ್ನಲ್ಲಿ ಕ್ರೀಮ್ ಹೆಚ್ಚಾಗಿ ತುಂಬಲ್ಪಟ್ಟಿದೆ” ಎಂದು. ನಿಮಗೆ ಹೇಗೆ ಕಾಣುತ್ತದೆ, ಈ ಜಾಹೀರಾತಿನ ಚಿತ್ರ ನೋಡಿ?

ಹಗಲಿನಲ್ಲಿ ದೀಪ

ಇರುಳು ಕವಿಯುತ್ತಿದ್ದಂತೆ ವಾಹನ ಚಾಲಕರು (ಕೆಲವರು ಭಕ್ತಿಯಿಂದ ಕಸಿ ಮುಗಿದು ) ತಮ್ಮ ವಾಹನಗಳ ದೀಪಗಳನ್ನು ಉರಿಸುತ್ತಾರೆ. ಇದರಲ್ಲೇನೂ ಆಶ್ಚರ್ಯವಿಲ್ಲ ಬಿಡಿ. ಆದರೆ ಹಗಲಿನಲ್ಲಿ? ಹಗಲಿನಲ್ಲಿ ದೀಪದ ವಾಹನಗಳಿಗೆ? ಇದೆ ಎನ್ನುತ್ತಾರೆ ಕೆಲವರು, ಅಲ್ಲಲ್ಲ ಹಲವರು. ವಿಶೇಷವಾಗಿ ಮುಂದುವರಿದ ದೇಶಗಲವರು. ಲಿಬ್ಯಾ ದೇಶದಿಂದ ಮುಸ್ಲಿಂ ಮಹಿಳೆಯೊಬ್ಬರು ಬ್ಲಾಗ್ ಪ್ರಕಟಿಸುತ್ತಾರೆ. ಸೊಗಸಾಗಿ ಆಂಗ್ಲ ಭಾಷೆಯಲ್ಲಿ ಬರೆಯುವ ಈ ಮಹಿಳೆ ಜೀವನದ ಹಲವು ಘಟನೆಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಈ ಮಹಿಳೆ ಕಾರನ್ನು ಹಗಲಿನಲ್ಲಿ ಓಡಿಸುವುದು ದೀಪಗಳನ್ನು ಉರಿಸಿಕೊಂಡು. ಹೀಗೆ ಪ್ರತಿ ಸಲವೂ ರಸ್ತೆಯಲ್ಲಿ ಹೋಗುವಾಗ ಜನ ಲೈಟ್ ಆಫ ಮಾಡುವಂತೆ ಈಕೆಗೆ ಸನ್ನೆ ಮಾಡುತ್ತಾರಂತೆ. ಕೆಲವರು ಕರ್ಕಶವಾಗಿ ಹಾರ್ನ್ ಮಾಡಿ ಎಚ್ಚರಿಸಿದರೆ ಇನ್ನೂ ಕೆಲವರು ಹಿಂದುಗಡೆಯಿಂದ ಲೈಟ್ ಬಿಟ್ಟು ಎಚ್ಚರಿಸುತ್ತಾರೆ. ತನಗಿಲ್ಲದ ಕಾಳಜಿ ಇವರಿಗೆಕೋ ಎಂದು ಸಿಡುಕುವ ಈ ಮಹಿಳೆ ಜನ ತಮ್ಮ ತಮ್ಮ ಕಾರುಗಳಲ್ಲಿ ತಮ್ಮ ಮಕ್ಕಳು ಕಿಟಕಿಯ ಹೊರಗೆ ನೇತಾಡುತ್ತಿದ್ದರೂ ಯಾವ ಪರಿವೆಯೂ ಇಲ್ಲದೆ ಓಡಿಸುವುದು ದೊಡ್ಡ ಒಗಟು ಎನ್ನುತ್ತಾರೆ. ಈ ಪರಿಪಾಠವನ್ನು ನಾನೂ ನೋಡುತ್ತಿರುತ್ತೇನೆ ಸೌದಿ ಅರೇಬಿಯಾದಲ್ಲಿ. ಮಕ್ಕಳು ಕಿಟಿಕಿಯಿಂದ ತಲೆ ಹೊರಕ್ಕೆ ಹಾಕಿದರೂ ಪಾಲಕರಿಗೆ ಏನೂ ಅನ್ನಿಸುವುದೇ ಇಲ್ಲ. ಕೆಲವರು ತಮ್ಮ ತೊಡೆಗಳ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಡ್ರೈವ್ ಮಾಡುವುದೂ ಇದೆ. ಕೆಲವೊಮ್ಮೆ ಪೊಲೀಸರು ಇಂಥ ವನ್ನು ನೋಡಿದಾಗ ವಿಒಳಶನ್  ಟಿಕೆಟ್ ಇಶ್ಯೂ ಮಾಡುತ್ತಾರೆ         

ಈಗ ದೀಪದ ಸಮಸ್ಯೆಗೆ ಬರೋಣ. ಕೆಲವೊಂದು ಕಾರುಗಳು ಸ್ಟಾರ್ಟ್ ಮಾಡಿದ ಕೂಡಲೇ ಲೈಟ್ಗಳನ್ನೂ ಉರಿಸುತ್ತವೆ. ನನ್ನ ಕಾರಿನಲ್ಲಿ ಆ ಸೌಲಭ್ಯ ಇಲ್ಲ. ನನ್ನ ಭಾವನ GMC YUKON ಕಾರಿಗೆ ಈ ಸೌಲಭ್ಯ ಇದೆ. ನಾನು ಅದನ್ನು ಓಡಿಸುವಾಗ ಹಗಲಿನಲ್ಲಿ ಉರಿದ ದೀಪಗಳನ್ನು ಆರಿಸಿಬಿಡುತ್ತೇನೆ. ಮೇಲೆ ಹೇಳಿದ ಬ್ಲಾಗ್ ಓದಿದ ನಂತರ ನನಗೂ ಕುತೂಹಲ ಉಂಟಾಗಿ “ಯಾಹೂ” ಮೊರೆ ಹೋದೆ; ನನ್ನದೇ ಆದ, (ನನಗೆ ಗೊತ್ತಿಲ್ಲದ) ಕಾರಣಕ್ಕೆ ನಾನು ಗೂಗ್ಲಿಸುವುದಿಲ್ಲ.     

ಮೊದಲಿಗೆ ಸಿಕ್ಕಿದ್ದು ಆಸ್ಟ್ರಿಯಾ ದೇಶದ ವೆಬ್ ತಾಣ. ಹಗಲಿನಲ್ಲಿ ದೀಪ ಉರಿಸಿ ವಾಹನ ಚಲಾಯಿಸುದರಿಂದ ಅಪಘಾತಗಳು ಕಡಿಮೆ ಆಗುತ್ತವೆ ಎಂದು ಅಭಿಪ್ರಾಯ. ಹಗಲಿನಲ್ಲಿ ದೀಪದ ಬಗ್ಗೆ ಆಸ್ಟ್ರಿಯಾ ಕಾನೂನನ್ನು ಸಹ ಮಾಡಿತ್ತು. ಅ೯೭೦ ರ ದಶಕದಿಂದಲೂ ಯೂರೋಪಿನ ಹಲವು ದೇಶಗಳಲ್ಲಿ ಇದು ಕಡ್ಡಾಯವಾಗಿತ್ತು ಕೂಡಾ. ಹೀಗೆ ದೀಪ ಉರಿಸಿ ಚಲಾಯಿಸಿದರೆ ಎಂದುರಿನಿಂದ ಬರುವ ವಾಹನಗಳಿಗೂ ಅನುಕೂಲ, ಪಾದಚಾರಿಗಳಿಗೂ, ಸೈಕಲ್ ಸವಾರರಿಗೂ, ರಸ್ತೆ ದಾಟುವ  ಮಕ್ಕಳಿಗೂ ವಾಹನ ಗೋಚರಿಸಿ ಅಪಘಾತಗಳು ಸಂಭವಿಸುವುದಿಲ್ಲವಂತೆ. ಹಗಲಿನಲ್ಲಿ ದೀಪ ಉರಿಸಿ ಚಾಲಾಯಿಸಿ ತಿಂಗಳಿಗೆ ಕನಿಷ್ಠ ೩೦ ಜೀವಗಳನ್ನು ಉಳಿಸಿ ಎಂದು ಆಸ್ಟ್ರಿಯಾ ವಾಹನ ಚಾಲಕರಿಗೆ ನಿರ್ದೇಶಿಸಿದೆ.ಮತ್ತೊಂದು ವೆಬ್ ತಾಣ ಆಟೋ ಮೋಟೋ ಪೋರ್ಟಲ್ ಡಾಟ್ ಕಾಂ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸಿದೆ.

ಈಗ ಇವನ್ನು ಓದಿ ನಾನೂ ನನ್ನ ಕಾರಿನ ಲೈಟು ಗಳನ್ನು ಹಗಲಿನಲ್ಲಿ ಆನ್ ಮಾಡಿ ಓಡಿಸಿದರೆ ಬೆಂಬಿಡದ ಭೂತದಂತೆ ಜನ ದೀಪ ಆರಿಸುವಂತೆ (ಲಿಬ್ಯಾದ ಮಹಿಳೆಗೆ ಅನುಭವ ಆದಂತೆ) ವಿವಿಧ ರೀತಿಗಳಲ್ಲಿ ನನ್ನನ್ನು ಪೀಡಿಸುವರೋ ಏನೋ? ಭಾರತದಲ್ಲಿ ಹೇಗೋ ಏನೋ ಗೊತ್ತಿಲ್ಲ, ಏಕೆಂದರೆ ಈ ಹೊಸ ವಿಚಾರ ನನಗೆ ಗೊತ್ತಾಗಿದ್ದೆ ಈಗ. ಅದೂ ಅಲ್ಲದೆ ನಮ್ಮಲ್ಲಿ ದಾರಿಹೋಕ  “ಸಮಾಜ ಸೇವಕರು” ಹೆಚ್ಚು. ಖಂಡಿತ ಜನ ಬೆನ್ನು ಬೀಳುತ್ತಾರೆ ಇಲ್ಲಾ ತಮಾಷೆ ಮಾಡಿ ನಗುತ್ತಾರೆ, ನೋಡ್ರಲಾ, ಹೈದ ಹೊಸದಾಗಿ ಕಾರ್ ತಗೊಂಡಿರ್ಬೇಕು, ಅದ್ಕೆ ಓಡುಸ್ತಾ ಇದ್ದಾನೆ ಲೈಟ್ ಹಾಕ್ಕೊಂಡು. ಬೇಡ ಬಿಡಿ, ಈ ಹೊಸ ಸಾಹಸ, ಜನ ತಾವಾಗೇ ತಿಳಿದುಕೊಳ್ಳುವವರೆಗೂ. ಏನಂತೀರಾ?

ಮರುಭೂಮಿಯ ಎಲೆಮರೆಕಾಯಿ

ವಾರಾಂತ್ಯವಾದ್ದರಿಂದ ಮೊನ್ನೆ ಗುರುವಾರ ಜೆಡ್ಡಾ ದಿಂದ ೪೦೦ ಕಿ. ಮೀ ದೂರ ಇರುವ ಮದೀನಾ ನಗರಕ್ಕೆ ಹೊರಟೆವು ಪರಿವಾರ ಸಮೇತ. ಮಧ್ಯಾಹ್ನ ಬುತ್ತಿ ಕಟ್ಟಿಕೊಂಡು ( ಇಲ್ಲಿ ರಸ್ತೆಗೆ ತಾಗಿದ ಮರಳುಗಾಡಿನಲ್ಲಿ ಕಂಬಳಿ ಹಾಸಿ ಕೂತು ತಿನ್ನುವುದು ಒಂದು ರೀತಿಯ ಮೋಜು, ನಮ್ಮಲ್ಲಿನ ತೋಟದಲ್ಲಿ ಊಟದ ಥರ ) ಹೊರಟೆವು. ನಗರದ ಪರಿಮಿತಿ ಬಿಟ್ಟು ಸ್ವಲ್ಪ ದೂರ ಬರುತ್ತಲೇ ತಪಾಸಣಾ ನಿಲುಗಡೆ. ಸೌದಿ ಅರೇಬಿಯಾದಲ್ಲಿ ಎಲ್ಲಿ ನೋಡಿದರೂ ತಪಾಸಣೆಯೇ. ನಗರದ ಗಡಿ ಬಿಟ್ಟಾಗ, ಬೇರೆ ನಗರ ಪ್ರವೇಶಿಸುವಾಗ, ಇವೆರೆಡರ ನಡುವೆ random ಆಗಿ patrol ಮಾಡುವ ಪೋಲೀಸರ ತಪಾಸಣೆ ಅಲ್ಲಲ್ಲಿ. ೧೯೯೦ ರ ಕೊಲ್ಲಿ ಯುದ್ಧಾ ನಂತರ ಇಲ್ಲಿನ ಅರಸು ಮನೆತನಕ್ಕೆ ಮುನಿದು ಅಲ್ ಕೈದಾ ನಡೆಸಿದ ಕೆಲವು ಭಯೋತ್ಪಾದಕ ಚಟುವಟಿಕೆಗಳ ನಂತರ ಹೆಚ್ಚಿನ ಬಂದೋಬಸ್ತು. ಈಗ ಈ ದೇಶ ತುಂಬಾ ಸುರಕ್ಷಿತ. ಸರಿ ತಪಾಸಣಾ ನಿಲುಗಡೆ ಸಮೀಪಿಸುತ್ತಲೇ ನಾನು ಕಾರನ್ನು ನಿಧಾನಗೊಳಿಸಿ ಕಿಟಕಿಯ ಗಾಜನ್ನು ಇಳಿಸಿದೆ. ನನ್ನತ್ತ ನೋಡಿದ ಸುಮಾರು ಇಪ್ಪತ್ತರ ಚಿಗುರು ಮೀಸೆಯ ಮಂದಸ್ಮಿತ ಪೋಲಿಸ್ ಕೇಳಿದ ನಾನು ಯಾವ ದೇಶದವನೆಂದು. ನಾನು ಭಾರತೀಯ ಎಂದು ಹೇಳುತ್ತಿದ್ದಂತೆಯೇ ಆಹ್, ಹಿಂದಿ ಎನ್ನುತ್ತಾ ಸ್ವಾಗತ (ಮರ್ಹಬ) ಎಂದು ಅರಬ್ಬಿಯಲ್ಲಿ ಹೇಳಿ ನನ್ನ ಗುರುತು ಚೀಟಿ ಮತ್ತು ವಾಹನ ಚಾಲನಾ ಪರವಾನಗಿಯನ್ನು ತೆಗೆಯಲು ಬಿಡದೆ ಮುಂದೆ ಹೋಗಲು ಬಿಟ್ಟ. ಭಾರತೀಯರಿಗೆ ಅರಬರು ಹಿಂದಿ ಎಂದು ಕರೆಯತ್ತಾರೆ. ಹಿಂದ್ ದೇಶದವ ಎಂದರ್ಥ. ಕೆಲವು ಪಂಡಿತರ ಪ್ರಕಾರ ಹಿಂದೂ ಶಬ್ದ ಮೂಲವೂ ಅದೇ. ಅದೇ ಪದದಿಂದಲೇ ಹಿಂದೂ ಎನ್ನುವ ಪದವೂ ಬಂದಿದ್ದು. ಭಾರತೀಯರ ಮೇಲಿನ ಪೋಲಿಸ್ ಪೇದೆಯ ನಂಬುಗೆ ನೋಡಿ ನನಗೆ ಭಾರತೀಯನಾಗಿ ಹುಟ್ಟಿದ್ದು ಧನ್ಯ ಎನ್ನಿಸಿತು. ಈ ಮರ್ಯಾದೆ, ಆತಿಥ್ಯ  ಭಾರತದಲ್ಲೂ ನನಗೆ ಸಿಗಲಿಕ್ಕಿಲ್ಲವೇನೋ? ಭಾರತೀಯರು ತಮ್ಮ ದೇಶದ ಒಳಗೆ ಜಾತಿ ಧರ್ಮ, ಭಾಷೆ ಎಂದು ಹೇಗಾದರೂ ಕಚ್ಚಾಡಿಕೊಳ್ಳಲಿ, ಸಾಗರೋಲ್ಲಂಘನ ಅಥವಾ ಸೀಮೋಲ್ಲಂಘನ ಮಾಡಿದ ಕೂಡಲೇ ನಮ್ಮ identity ಎಲ್ಲಿ ಹೋದರೂ ಒಂದೇ. identical. ಭಾರತೀಯ. Indian. ಪೂರ್ಣ ವಿರಾಮ.

 ಭಾರತೀಯತೆಯೇ ಗುಣ, ಬಾಕಿ ಎಲ್ಲಾ ಗೌಣ.

 ಬೇರಾವುದೇ ದೇಶದವರನ್ನು ಕಂಡರೂ, ವಿಶೇಷವಾಗಿ ಪಾಕಿ, ಆಫ್ಘನ್ ರನ್ನು ಕಂಡರಂತೂ ಪೊಲೀಸರಿಗೆ ದೊಡ್ಡ ಕೆಲಸ. ಬರೀ ಅವರ ಕಾಗದ ಪತ್ರ, ಜಾತಕವಲ್ಲ, ವಾಹನವನ್ನೂ ಕೆಳಗೆ ಮೇಲೆ ಎಂದು ಕನ್ನಡಿ ಹಿಡಿದು ಪರೀಕ್ಷಿಸಿ ಮುಂದೆ ಬಿಡುತ್ತಾರೆ. ಅಂಥ reputation ಅವರದು. ಹೊಡಿ ಬಡಿ ಕಡಿ ಎಂದರೆ ಇವರುಗಳು ಮುಂದೆ. ಹೆಚ್ಚು ಮಾತನಾಡಿದರೆ ಪೇದೆಯನ್ನೂ ತದುಕಲು ಹೆದರುವುದಿಲ್ಲ. ಹಾಗಾಗಿ ಇವರಿಗೆ ತಪಾಸಣಾ ಸ್ಥಳಗಳಲ್ಲಿ ವಿಶೇಷ ಮನ್ನಣೆ ಮತ್ತು ಮಣೆ. ವಿಷದ ಹಲ್ಲು ಇಲ್ಲ ಎಂದು ಚೆನ್ನಾಗಿ ಖಾತ್ರಿ ಪಡಿಸಿಕೊಂಡ ನಂತರವೇ ಹಸಿರು ನಿಶಾನೆ ಮುಂದೆ ಹೋಗಲು. ಆದರೆ ಭಾರತೀಯ ಹಾಗಲ್ಲ, ತಾನಿರುವ ನಾಡಿನ ಕಾನೂನಿಗೆ ತಲೆಬಾಗಿ ಇರುವಷ್ಟು ದಿನ ಯಾವ ತಕರಾರುಗಳಿಗೂ ಹೋಗದೆ ಎಲೆಮರೆಕಾಯಿಯಂತೆ ತನ್ನ ಪಾಡಿಗೆ ದುಡಿದು ದಣಿದು ಬಂದು ರೂಮಿನಲ್ಲಿ ತನ್ನ ಪ್ರೀತಿ ಪಾತ್ರರ ಭಾವ ಚಿತ್ರಗಳನ್ನು ನೋಡುತ್ತಾ ಮುದುಡಿ ಬಿದ್ದಿರುತ್ತಾನೆ ತನ್ನ ನಾಡಿನ ಕನಸನ್ನು ಕಾಣುತ್ತಾ.  

 ಈ ದೇಶದ ಬಿಗಿಯಾದ ಕಾನೂನಿನ ಬಗ್ಗೆ ಒಂದೆರಡು ಮಾತುಗಳನ್ನೂ ಹೇಳುತ್ತೇನೆ, ಮತ್ತು ಇಂಥವನ್ನು ನಾವೂ ಅಳವಡಿಸಿಕೊಂಡರೆ ಮುಂಬೈಯಲ್ಲಿ ಪಾಕಿ ಪಾತಕಿಗಳು ನಡೆಸಿದ ನರಸಂಹಾರದಂಥ ಘಟನೆಗಳು ಮರುಕಳಿಸದಂತೆ ತಡೆಗಟ್ಟಬಹುದು. ಈ ದೇಶಕ್ಕೆ ಉದ್ಯೋಗಕ್ಕಾಗಿ ಬರುವ ಪ್ರತಿಯೊಬ್ಬನೂ ತನ್ನ ಪಾಸ್ ಪೋರ್ಟನ್ನು ತನ್ನ ಯಜಮಾನನಿಗೆ (employer) ಒಪ್ಪಿಸಿ ಅದರ ಬದಲಿಗೆ “ಇಕಾಮ” ಎಂದು ಕರೆಯಲ್ಪಡುವ ಗುರುತಿನ ಕಾರ್ಡನ್ನು ಪಡೆಯಬೇಕು. ಈ ಕಾರ್ಡನ್ನು ತಾನು ತನ್ನ ರೂಮನ್ನು ಬಿಟ್ಟು ಎಲ್ಲೇ ಹೋದರೂ ಜೊತೆಗೇ ಒಯ್ಯಬೇಕು. ಅಲ್ಲಲ್ಲಿ ನಡೆಯುವ random ತಪಾಸಣೆಗಳಲ್ಲಿ ಗುರುತು ಚೀಟಿ ಇಲ್ಲದ್ದನ್ನು ಕಂಡರೆ ಯಾವುದೇ ಸಮಜಾಯಿಷಿಗೂ ಕಿವಿಗೊಡದೆ ಒಳಗೆ ತಳ್ಳುತ್ತಾರೆ. ಚೀಟಿಯನ್ನು ತಂದ ನಂತರವೆ ಬಿಡುಗಡೆ. ಹಜ್ ಸಮಯದಲ್ಲಿ ತಪಾಸಣೆ ಸ್ವಲ್ಪ ಜೋರು. ಯಾತ್ರಾರ್ಥಿಯಾಗಿ ಬಂದು ಮರಳಿ ತಮ್ಮ ದೇಶಕ್ಕೆ ವಾಪಸು ಹೋಗದೆ ದುಡಿಯಲು ಇಲ್ಲೇ ಉಳಿದು ಕೊಳ್ಳುವ ಜನರು ಅಸಂಖ್ಯ. ಅವರಲ್ಲಿ ಬಡ ರಾಷ್ಟ್ರಗಳ ಅರಬರು ಮತ್ತು ಆಫ್ರಿಕನ್ನರು ಹೇರಳ. ಹೀಗೆ ಅಕ್ರಮವಾಗಿ ಉಳಿದು ಕೊಳ್ಳುವ ಯಾವ ದೇಶದವನೇ ಆಗಲಿ, ಮುಸ್ಲಿಮನೇ ಆಗಿರಲಿ ಯಾವ ರಿಯಾಯ್ತಿಯೂ ಇಲ್ಲ. forced deportation.  

 ಮೇಲೆ ಹೇಳಿದ ಮದೀನಾ ಹೋಗುವ ದಾರಿಯಲ್ಲಿನ  ತಪಾಸಣೆ ಮುಗಿದ ಕೂಡಲೇ, ದೇವನೊಬ್ಬನೇ ಆರಾಧನೆಗೆ ಅರ್ಹ ಎಂದು ವಿಶ್ವ ಕೇಳುವಂತೆ ಮೊಳಗಿಸಿ, ಸಮಾನತೆಯ ಕಹಳೆ ಊದಿದ ಮರಳುಗಾಡಿನ ನಿರಕ್ಷರಕುಕ್ಷಿ, ಸಂಪತ್ತು, ಕೀರ್ತಿ ನಶ್ವರ, ದೈವಭಕ್ತಿ, ಸನ್ನಡತೆಯೇ ಶಾಶ್ವತ ಎಂದು ಜಗಕ್ಕೆ ಹೇಳಿ ಕೊಟ್ಟ ಮಹಾ ಪ್ರವಾದಿಯ ಪ್ರೀತಿಯ ಪಟ್ಟಣದ ಕಡೆ ಕಾರು ಸಾಗುತ್ತಿದ್ದಂತೆ ನನಗೊಂದು ಕರೆ ಬಂದಿತು. ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ store assistant ನನ್ನು ಗುರುತು ಚೀಟಿ ಇಲ್ಲದೆ ತನ್ನ ರೂಮಿನ ಹೊರಗಿನ browsing center ಹತ್ತಿರ ಅಡ್ಡಾಡುತ್ತಿದ್ದ ಎಂದು ಪೊಲೀಸರು ಬಂಧಿಸಿದರು ಎಂದು ಸುದ್ದಿ. ಜೆಡ್ಡಾ ಬಿಟ್ಟು ತುಂಬಾ ದೂರ ಬಂದಿದ್ದರಿಂದ ನಾನು ನಮ್ಮ ಮಾನವ ಸಂಪನ್ಮೂಲ ವಿಭಾಗದ ಸೌದಿಗೆ ಫೋನಾಯಿಸಿ ವಿಚಾರಿಸಲು ಹೇಳಿದೆ. ಸೌದಿಯ ವಿವರಣೆಗೂ ಪೊಲೀಸರು ಜಪ್ಪಯ್ಯ ಎನ್ನಲಿಲ್ಲ. ಕೊನೆಗೆ ಬಹಳಷ್ಟು ಮನವಿಯ ನಂತರವೇ ಆತನನ್ನು ಅವರು ಬಿಟ್ಟಿದ್ದು. ಹಿಡಿಯಲ್ಪಟ್ಟವನು ಮುಸ್ಲಿಂ ಮಾತ್ರವಲ್ಲ, ಪೊಲೀಸರು ಮರ್ಯಾದೆ ಕೊಡುವ, ಗೌರವಿಸುವ ವಿಶ್ವಾಸಿಗಳು ಬಿಡುವ  ದೊಡ್ಡ ಗಡ್ದವನ್ನೂ ಹುಲುಸಾಗಿ ಬೆಳೆಸಿದ್ದ. ಊಹೂಂ, ಚೀಟಿ ಇಲ್ಲವೋ ನಡಿ ಮಾವನ ಮನೆಗೆ ಎಂದರು ಪೊಲೀಸರು. ಧರ್ಮ, ಜಾತಿ ಎಲ್ಲಾ ಆಮೇಲೆ. ಈ ಗುರುತಿನ ಚೀಟಿಯ ನಿಯಮ ಬರೀ ವಿದೇಶೀಯರಿಗೆ ಮಾತ್ರವಲ್ಲ, ಸೌದಿ ಗಳೂ “ಬುತಾಕ” ಅಥವಾ “ಹವ್ವಿಯ್ಯ” ಎನ್ನುವ ಕಾರ್ಡನ್ನು ಹೊಂದಿರಲೇಬೇಕು. ಬ್ಯಾಂಕಿನಲ್ಲಿ ಹಣ ಪಾವತಿಸುವಾಗಲಾಗಲಿ, ಬೇರೆ ಯಾವುದೇ ಕಾರ್ಯಗಳಿಗೂ ಮೊದಲಿಗೆ ಕಾರ್ಡ್ ನ ದರ್ಶನ ಆಗಬೇಕು, ಇಲ್ಲದಿದ್ದರೆ ಕಾನೂನಿನ ದುರ್ದರ್ಶನ. ನಾನು ಮನೆಯಲ್ಲಿ ಮರೆತೆ, ಅತ್ತೆ ಮನೆಯಲ್ಲಿ ಬಿಟ್ಟು ಬಂದೆ ಹಾಗೆ ಹೀಗೆ ಎಂದು ಕತೆಗಳನ್ನ ನೇಯ್ದರೆ ಅವು ನಮ್ಮ ಕಿವಿಗಳಿ ಗೇ ಇಂಪು. ಕೇಳಿಸಿಕೊಳ್ಳುವವನ ಕಿವಿಗಲ್ಲ. ಎಷ್ಟೋ ಜನ ಸೌದಿಗಳು ಗೊಗರೆಯುವುದನ್ನು  ನೋಡಿದ್ದೇನೆ, ನಾನು ಕಾರ್ಡನ್ನು ಮರೆತು ಬಂದೆ, ನನ್ನ ಕೆಲಸ ಮಾಡಿ ಕೊಡು ಎಂದು. ಕೇಳುವವರು ಬೇಕಲ್ಲ.  ನಮ್ಮ ದೇಶದಲ್ಲೂ ಇಂಥ ಒಂದು ಕಟ್ಟುನಿಟ್ಟಿನ ವ್ಯವಸ್ಥೆ ಇರಬೇಕು. ಎಷ್ಟೇ ಹಣ ಖರ್ಚಾದರೂ ಭಾರತದ ಪ್ರತೀ ಪೌರನಿಗೆ ಒಂದು ಗುರುತು ಚೀಟಿಯನ್ನು ಹೊಂದಿಸಲೇ ಬೇಕು.

 ಅಕ್ರಮವಾಗಿ ನಮ್ಮ ಗಡಿ ಹಾರಿ ಬರುವ ನೇಪಾಳಿ ಮತ್ತು ಇತರೆ ದೇಶಗಳ ಜನರನ್ನು ತಡೆಯಲು ಇದೇ ಮಾದರಿಯ ಕಾರ್ಡು ಮತ್ತು ತಪಾಸಣೆ ನಮಗಿರಬೇಕು. ಅದಕ್ಕೆ ತಗಲುವ ಖರ್ಚು ದುಂದು ಖರ್ಚಲ್ಲ.  ದೇಶದ ಗಡಿ, ಜನ ಸುರಕ್ಷಿತವಾಗಿರಬೇಕೆಂದರೆ ನಾವು ನಿಷ್ಟುರರಾಗಿರಬೇಕು. ನಮ್ಮ ಒಳ್ಳೆಯತನವನ್ನು, ಹೃದಯ ವೈಶಾಲ್ಯತೆಯನ್ನು  ದೇಶದ ಒಳಗೆ ನೆಲೆಸಿ ಕೊಂಡಿರುವ ಸಹ ಭಾರತೀಯರಿಗೆ ಮಾತ್ರ ಮೀಸಲಿಟ್ಟರೆ ಸಾಕು.

* ಕರಿಯರೇ, ಹೊರ ನಡೆಯುವಿರಾ?

ಅಮೆರಿಕೆಯ ನ್ಯೂ ಜೆರ್ಸಿ ರಾಜ್ಯದ ವಾಶಿಂಗ್ಟನ್ ಉಪನಗರದಲ್ಲಿ ಒಂದು “ವಾಲ್ ಮಾರ್ಟ್” ಮಳಿಗೆ. ೧೬ ವರ್ಷದ ಪೋರನೊಬ್ಬ ಮಳಿಗೆಗೆ ಹೋಗಿ ಅಲ್ಲಿಟ್ಟಿದ್ದ ಮೈಕನ್ನು ಹಿಡಿದು ಘೋಷಿಸಿದ, ಕರಿಯರೇ, ಮಳಿಗೆ ಬಿಟ್ಟು ಕೂಡಲೇ ಹೊರನಡೆಯಿರಿ ಎಂದು. ಈ ಒಂದು ಮಾತಿನಿಂದ ಇಡೀ ಮಳಿಗೆಯಲ್ಲಿದ್ದ ಗ್ರಾಹಕರು ಮಾತ್ರವಲ್ಲ, ಅದರೊಂದಿಗೆ ನಗರವೂ ದಿಗ್ಭ್ರಾಂತವಾಯಿತು. ಪೊಲೀಸರು ಬಂದರು ವಿಚಾರಿಸಲು, ಅಧಿಕಾರಿಗಳೂ ಬಂದರು, ಘಟನೆಯನ್ನು ಖಂಡಿಸಲು. ಇದು ವಿಶ್ವಕ್ಕೆ ಸಮಾನತೆಯನ್ನು ಬೋಧಿಸುವ ಹಿರಿಯಣ್ಣ ಅಮೆರಿಕೆಯ ಪರಿಸ್ಥಿತಿ. ಕರಿಯ ಅಧ್ಯಕ್ಷ ನಾದರೇನು, ಸೇನೆಯ ದಂಡನಾಯಕನಾದರೇನು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾದರೇನು, ಹುಟ್ಟು ಗುಣ ಎಲ್ಲಿಂದ ಹೋಗಬೇಕು? ಈ ಹುಡುಗನ ಮಾತಿನಿಂದ ಹಿಟ್ಲರ್ ತನ್ನ ಸಮಾಧಿಯಲ್ಲಿ ಮಲಗಿ ಮುಸಿ ಮುಸಿ ನಗುತ್ತಿರಬೇಕು. ಅವನಿಗೂ ಕರಿಯರೆಂದರೆ ತಾತ್ಸಾರ ತಾನೇ? ಈ ಆಧುನಿಕ ಯುಗದಲ್ಲೂ ಬಿಳಿಯರಿಗೆ ಕರಿಯರನ್ನು ಸಮಾನತೆಯಿಂದ, ಗೌರವದಿಂದ ಕಾಣಲು ಕಷ್ಟವಾಗುತ್ತಿರುವುದು ವಿಪರ್ಯಾಸವೇ ಸರಿ.

ಸರಿ ಸುಮಾರು 1400 ವರ್ಷಗಳ ಹಿಂದಿನ ಮಾತು. ಬಿಲಾಲ್ ಇಥಿಯೋಪಿಯಾ ದೇಶದಿಂದ ಅರಬ್ ದೇಶಕ್ಕೆ ಬಂದ ಹದಿಹರೆಯದ ಜೀತದಾಳು. ಅಪ್ಪಟ ಕರಿಯ. ಪ್ರವಾದಿಗಳ ಸಮಾನತೆಯ ಸಂದೇಶ ಕೇಳಿ ಇಸ್ಲಾಂ ನ ದೀಕ್ಷೆ ಪಡೆಯುತ್ತಾನೆ. ಈ ಕಾರಣಕ್ಕಾಗಿ ಅವನ ಯಜಮಾನ ಬಹಳಷ್ಟು ಕಿರುಕುಳ ಕೊಡುತ್ತಾನೆ. ಇದ ನೋಡಿ ಪ್ರವಾದಿಗಳ ಸಹವರ್ತಿಯೊಬ್ಬರು ಬಿಲಾಲ್ ನನ್ನು ಖರೀದಿಸಿ ಜೀತದಿಂದ ವಿಮೋಚನೆಗೊಳಿಸುತ್ತಾರೆ. ಇದನ್ನು ಕಂಡ ಪ್ರವಾದಿಗಳ ಮತ್ತೊಬ್ಬ ಅನುಚರ ಉಮರ್ ಉದ್ಗರಿಸುತ್ತಾರೆ, “ನಮ್ಮ ಒಡೆಯ ಅಬು ಬಕರ್ ಮತ್ತೊಬ್ಬ “ಒಡೆಯ ಬಿಲಾಲ್” ನನ್ನು ವಿಮೋಚಿಸಿದರು” ಎಂದು. ಅಗರ್ಭ ಶ್ರೀಮಂತ, ಬಿಳಿ ವರ್ಣದ ಉಮರ್ ಕರಿಯ ಬಿಲಾಲ್ ರನ್ನು ಸಂಬೋಧಿಸಿದ್ದು “ಒಡೆಯ” ಎಂದು. ಇಸ್ಲಾಂ ಅರೇಬಿಯಾದಲ್ಲಿ ಸ್ಥಾಪಿತವಾದ ನಂತರ ಪವಿತ್ರ ಕಾಬಾ ಭವನದ ಮೇಲೆ ನಿಂತು ಪ್ರಾಥನೆಯ ಕರೆಯನ್ನು ನೀಡಲು ಬಿಲಾಲ್ ರನ್ನು ಪ್ರವಾದಿಗಳು ಆಮಂತ್ರಿಸಿದಾಗ ಇಡೀ ಅರೇಬಿಯಾ ಕೆಂಡಾ ಮಂಡಲ. ಒಬ್ಬ ಕರಿಯ, ಅದೂ ಮಾಜಿ ಜೀತದಾಳು ಪವಿತ್ರ ಕಾಬಾದ ಮೇಲೆ ನಿಲ್ಲುವುದು ಎಂದರೇನು ಎಂದು ಸಿಡುಕುತ್ತಾರೆ. ಆಗ ಪ್ರವಾದಿಗಳು ಹೇಳುತ್ತಾರೆ, ಈ ದಿನದೊಂದಿಗೆ ಹುಟ್ಟಿನಿಂದ ಬಂದ ಎಲ್ಲಾ ವಿಶೇಷ ಸವಲತ್ತುಗಳು, ಮರ್ಯಾದೆಗಳು, ಹಕ್ಕುಗಳು ನಿಂತವು, ಮಾನವರೆಲ್ಲರೂ ಸಮಾನರು ಮತ್ತು ಎಲ್ಲರೂ ಆ ಮಹಾ ಪ್ರಭು ಸೃಷ್ಟಿಸಿದ ಆದಮನ ಮಕ್ಕಳು ಎಂದು ಸಾರುತ್ತಾರೆ.

ಘಟನೆಯ ನಂತರ ಹುಡುಗ ಎಳೆ ಪ್ರಾಯದವನು ಎಂದು ಪೊಲೀಸರು ಅವನ ಹೆತ್ತವರಿಗೆ ಅವನನ್ನು ಒಪ್ಪಿಸಿ ಅವನನ್ನು ಇನ್ನೊಮ್ಮೆ juvenile court ಗೆ ಹಾಜರುಪಡಿಸಲು ನಿರ್ಧರಿಸಿದರು. ಎಳೆ ಪ್ರಾಯದ ಹುಡುಗನಿಗೆ ಇಂಥ ದೊಡ್ಡ ಮಾತನ್ನು ಹೇಳಿಕೊಟ್ಟವರಾರೋ? ಗೌಪ್ಯತೆ ಕಾಪಾಡುವ ಉದ್ದೇಶದಿಂದ ಹುಡಗನ ಹೆಸರನ್ನಾಗಲಿ, ಅವನು ಬಿಳಿಯನೆಂದಾಗಲಿ ಪೊಲೀಸರು ಮಾಹಿತಿ ನೀಡಲಿಲ್ಲ. ಒಟ್ಟಿನಲ್ಲಿ ಅಮೆರಿಕೆಯ ಬಿಳಿ ನಗುವಿನ ಬಹಿರಂಗದ ಹಿಂದೆ ಅಡಗಿದೆ ಕರಾಳ ಅಂತರಂಗ.

* ತಿಳಿವಳಿಕೆಗೆ ತಿಳಿಸಾರು

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ, ನಿರಾಶೆ ಇವೆಲ್ಲಾ ಹೆಚ್ಚೂ ಕಡಿಮೆ ನಮ್ಮ ಸಂಪಾದನೆಯೇ. ಬಳುವಳಿಯಾಗಿ ಬಂದವೇನೂ ಅಲ್ಲ. ನಮ್ಮ ವಂಶವಾಹಿಯಲ್ಲೂ ಇಲ್ಲ. ಅತಿಯಾಸೆ, ಅನುಕಂಪವಿಲ್ಲದ ಬದುಕು, ನಮ್ಮದಾಗುವುದು ಬೇಡ.   

ಸುಪ್ರಸಿದ್ಧ ತತ್ವಜ್ಞಾನಿ ಕಾರ್ಲ್ ಜಂಗ್ ಹೇಳುತ್ತಾನೆ, ಹೃದಯದೊಳಕ್ಕೆ ನಾವು ಇಣುಕಿ ನೋಡಿಕೊಂಡಾಗಲೇ ನಮ್ಮ ದೃಷ್ಟಿ ತಿಳಿಯಾಗುವುದು ಎಂದು. ಯಾರು ತಮ್ಮ ಹೃದಯದ ಹೊರಕ್ಕೆ ನೋಡುತ್ತಾರೋ ಅವರು ಕನಸನ್ನು ಕಾಣುವರು, ಮತ್ತು ಯಾರು ತಮ್ಮ ಹೃದಯದೊಳಕ್ಕೆ ಇಣುಕಿ ನೋಡುತ್ತಾರೋ ಅವರು ಎಚ್ಚೆತ್ತುಕೊಳ್ಳುವರು. ಇಷ್ಟೆಲ್ಲಾ ಸರ್ಕಸ್ ಮಾಡಲು ನಮಗಿದೆಯೇ ವ್ಯವಧಾನ, ಸಮಯ? ದಿನವೂ ನಮ್ಮ ಚಟುವಟಿಕೆಗಳ ಬಗ್ಗೆ ನಾವು ತೆಗೆದುಕೊಳ್ಳಬೇಕು stock taking. taking stock of the situation ಅಂತಾರಲ್ಲ ಹಾಗೆ, ನಮ್ಮ ಅಂತರಂಗ ಬಹಿರಂಗದ stock taking.  ಸೂಫಿ ಸಂತ ರೊಬ್ಬರು ಈ ಮಾತನ್ನು ಹೇಳುತ್ತಾರೆ, ಎಂದಿಗೂ ಅಹಂಕಾರದಿಂದ ಬೇರೆಯವರ ಮೇಲೆ ಸವಾರಿ ಮಾಡಬೇಡ, ಹಾಗೂ ನಿನ್ನ ಅಡಿಯಾಳುಗಳ ಮೇಲಂತೂ ನಿನ್ನ ದರ್ಪ ಬೇಡವೇ ಬೇಡ. ನಿಮ್ಮಲ್ಲಿ ಅಂತರಂಗ, ಬಹಿರಂಗ ಶುದ್ಧಿಯಿಲ್ಲದಿದ್ದರೆ ಸೃಷ್ಟಿ ಕರ್ತನ ಬಳಿ ನೀವು ಸಲ್ಲುವುದಿಲ್ಲ.

ನಾವು ತಿಂಡಿಗೋ  ಊಟಕ್ಕೋ ಹೋಗುವ ರೆಸ್ಟುರಾಂಟ್ ನಲ್ಲಿ ಕೆಲಸಮಾಡುವ ಮಾಣಿ (ವೇಟರ್) ನ ಹತ್ತಿರದ ನಮ್ಮ ವರ್ತಿಸುವ ರೀತಿಯನ್ನು ನೋಡೋಣ. ಮುಖ ಸಿಂಡರಿಸಿಕೊಂಡು ಆರ್ಡರ್ ಕೊಡುವ ನಮಗೆ ಇಷ್ಟು ಜ್ಞಾನವೂ ಇರುವುದಿಲ್ಲ ಆರ್ಡರ್ ತೆಗೆದುಕೊಂಡು ಹೋಗಿ ಅಡುಗೆ ಮನೆಯಿಂದ ಆತ ನಮ್ಮ ಮುಂದೆ ತಂದಿಡುವುದು ನಾವು ಸೇವಿಸುವ ಆಹಾರವನ್ನು ಎಂದು. ಮಾಣಿ ಮಾಡುತ್ತಿರುವುದು ಅತ್ಯಂತ ಗೌರವಾರ್ಹವಾದ ಕೆಲಸ ಎಂದು ನಮಗೆಂದಾದರೂ ತೋಚಿದ್ದಿದೆಯೇ? ಅವನನ್ನು ಕೆಲಸಕ್ಕಿಟ್ಟ ಯಜಮಾನನಿಂದ ಹಿಡಿದು, ಅಡುಗೆ ಭಟ್ಟನವರೆಗೆ  ನಮ್ಮನೂ ಸೇರಿಸಿ ಅವನ ಪಾಡು ನೋಡಿ. ಹರಿದು ತಿನ್ನುವ ತೋಳಗಳು. ಮರುಕ ತೋರುವುದಿಲ್ಲವೇ? ಆದರೆ ಈ ರೀತಿಯ ನಡವಳಿಕೆ ನಮ್ಮ ದೇಶದಲ್ಲಿ ಅಥವಾ ದಕ್ಷಿಣ ಏಶಿಯಾದ ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ಮುಂದುವರಿದ ದೇಶಗಳಲ್ಲಿ ಚೆನ್ನಾಗಿ ಕಲಿತವರು ಮಾಣಿಯ ಕೆಲಸ ಮಾಡುವುದರಲ್ಲಿ ಯಾವುದೇ ಅವಮಾನವನ್ನೂ ಕಾಣುವುದಿಲ್ಲ. ಏಕೆಂದರೆ ಮಾಣಿಯ ಕೆಲಸ ಹಲವು ಗುಣ ವೈಶಿಷ್ಟ್ಯ ಗಳನ್ನು ನಮಗೆ ಕಲಿಸುತ್ತದೆ. ಯಾವ ರೀತಿ ಅತಿಥಿಯನ್ನು ಬರಮಾಡಿಕೊಳ್ಳಬೇಕು, ಉಪಚರಿಸಬೇಕು, ಅವರಿಗಿಷ್ಟವಾದ ಆಹಾರದೊಂದಿಗೆ ಅವರನ್ನು ಹೇಗೆ  ಸತ್ಕರಿಸಬೇಕು, ಅವರೊಡನೆ ಯಾವ ರೀತಿ ವರ್ತಿಸಬೇಕು…..ಇತ್ಯಾದಿ. ಹೀಗಿರುವಾಗ ನಮಗೆ ಈ ಉದ್ಯೋಗದ ಬಗ್ಗೆ ತಾತ್ಸಾರ. ನಮ್ಮ ಸಂಸ್ಕಾರವೇ ಯಜಮಾನಿಕೆಯ ಸಂಸ್ಕಾರ ನೋಡಿ. ಕೈಯ್ಯಲ್ಲಿ ಒಂದಿಷ್ಟು ಕಾಸು ಓಡಾಡುತ್ತಿದ್ದರೆ ನೆಲ ಕಾಣುವುದಿಲ್ಲ ನಮಗೆ. ಯಜಮಾನ ಎಂದರೆ ಮುಖ ಗಂಟಿಕ್ಕಿಕೊಂಡಿರಬೇಕೆಂದು ಸಮಾಜದ ಅಲಿಖಿತ ನಿಯಮ. ನಾವು ಯಾವ ರೀತಿ ಇವರೊಂದಿಗೆ ವರ್ತಿಸುತ್ತೇವೆಯೋ ಅದೇ ರೀತಿಯೇ ನಮ್ಮ ಮಕ್ಕಳೂ ನಮ್ಮನ್ನು ಅನುಕರಿಸುವುದು.

ಸಂಪತ್ತು ಸ್ಥಿರವಲ್ಲ. ಅಗರ್ಭ ಶ್ರೀಮಂತರು ಯಾವುದಾದರೂ ಒಂದು ಕಾರಣಕ್ಕೆ ತಮ್ಮ ಸಂಪತ್ತನ್ನೆಲ್ಲಾ ಕಳೆದು ಕೊಂಡು ಬೀದಿಗೆ ಬಂದಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ೧೯೯೦ ರಲ್ಲಿ ಇರಾಕಿನ ಆಗಿನ ಅಧ್ಯಕ್ಷ ಸದ್ದಾಮ್ ಪಕ್ಕದ ಪುಟ್ಟ ರಾಷ್ಟ್ರ ಕುವಿತನ್ನು ಆಕ್ರಮಿಸಿ ಅದು ತನ್ನ ೧೯ ನೆ ಪ್ರಾಂತ್ಯ ವೆಂದು ಘೋಷಿಸಿ ವಿಶ್ವವನ್ನೇ ದಿಗಿಲುಗೊಳಿಸಿದ. ರಾತ್ರೋ ರಾತ್ರಿ ಕುವೈತ್ ನ ಅರಸ ದೇಶ ಬಿಟ್ಟು ಹೆಲಿಕಾಪ್ಟರ್ ನಲ್ಲಿ ಸೌದಿ ಗೆ ಬಂದಿಳಿದು ಆಶ್ರಯ ಬೇಡಿದ. ವಿಶ್ವದ ಅಗರ್ಭ ಶ್ರೀಮಂತ ರಲ್ಲಿ ಒಬ್ಬನಾಗಿದ್ದ ಅರಸ “ಅಲ್-ಸಬಾ” ಕೆಲವೇ ಘಂಟೆಗಳಲ್ಲಿ ಎಲ್ಲವನ್ನೂ ಕಳೆದು ಕೊಂಡ. ಅಲ್ಲಿಯವರೆಗೂ ಕುವೈತ್ ನ ಹಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವಿದೇಶಿ ವಿನಮಯ ಹೊಂದಿತ್ತು. ಈ ಘಟನೆಯ ನಂತರ ಕುವೈತ್ ನ ಹಣಕ್ಕೆ ವಿಶ್ವದ ಅತ್ಯಂತ ಬಡ ರಾಷ್ಟ್ರದ ಹಣದ ಮುಂದೆ ಯಾವ ಬೆಲೆಗೂ ಬರದೇ ಹೋಯಿತು. ಕುವೈತಿ ನೋಟುಗಳು ಬೀದಿಗಳಲ್ಲಿ ಚೆಲ್ಲಾಟ, ಡ್ರಾ ಆದ ನಂತರ ಗೋತಾ ಹೊಡೆದ ಲಾಟರಿ ಟಿಕೆಟುಗಳು ರಸ್ತೆಯ ಮೇಲೆ ದಿಕ್ಕಾ ಪಾಲಾದಂತೆ. ತನ್ನ ದೇಶವನ್ನು ಮರಳಿ ಕೊಡಿಸುವಂತೆ ಸರಕಾರಗಳನ್ನು ಒತ್ತಾಯಿಸಲು ವಿಶ್ವದ ರಾಜಧಾನಿಗಳನ್ನು ಅಲೆದ, ಗೋಗರೆದ. ನೋಡಿ, ಕೇವಲ ಕೆಲವೇ ಘಂಟೆಗಳ ವಿದ್ಯಮಾನ ತಂದ ಅವಸ್ಥೆ.

ಈ ಅರಸ (ಮಧ್ಯ ಪ್ರಾಚ್ಯದ ಎಲ್ಲ ಅರಸರ ಕತೆಯೂ ಇದೇ) ತಾನು ಹೋಗುವ ಕಡೆಯೆಲ್ಲಾ ಅವನದೇ ಖಾಸಗಿ ಹೆಲಿ ಪ್ಯಾಡು, ಅರಮನೆಗಳು, ರೋಲ್ಲ್ಸ್ ರಾಯ್ಸ್ ಕಾರುಗಳು. ಧಿಡೀರನೇ ಎಲ್ಲವನ್ನೂ – ರಾಜ್ಯ, ಕೋಶ, ಪದವಿ, ಪೀಠ – ಕಳೆದುಕೊಂಡು ಬೀದಿಯಲ್ಲಿ ಅಸಹಾಯಕನಾಗಿ ತಲೆ ಮೇಲೆ ಕೈ ಹೊತ್ತು ಕೂರುವ ಬೇಡುವವನ ಪರಿಸ್ಥಿಗೆ ಬಂದು ಬಿಟ್ಟ. ಸಂಪತ್ತಿನ ಅಹಂಕಾರದಿಂದ ಕುವೈತಿ ಅರಸ ಒಂದು ಸಭೆಯಲ್ಲಿ ಸದ್ದಾಮನನ್ನು ಹೀನಾಯವಾಗಿ ನಡೆಸಿಕೊಂಡ, ಆದ್ದರಿಂದ ಸದ್ದಾಮ್ ಈ ಶಿಕ್ಷೆ ನೀಡಿದ ಎನ್ನುವವರೂ ಇದ್ದಾರೆ. ಅದೇನೇ ಇರಲಿ ಕೆಲ ತಿಂಗಳ ಕಾಲ ಅವನು ಬೀದಿ ಪಾಲಾದದ್ದು ವಾಸ್ತವವೇ.      

ಒಬ್ಬ ವ್ಯಕ್ತಿ ಅಸಹಾಯಕನಾಗಿ ಬೀದಿ ಬದಿಯ ಕಟ್ಟೆಯ ಮೇಲೆ ತಲೆಯನ್ನು ತನ್ನ ಕೈಗಳಲ್ಲಿ ಹೊತ್ತು ಅಳುತ್ತಾ ಕುಳಿತಿರುತ್ತಾನೆ. ದಾರಿ ಹೋಕನೊಬ್ಬ ಇದನ್ನು ಕಂಡು ಕನಿಕರ ಪಟ್ಟು ಅಲ್ಲೇ ಹತ್ತಿರದ ಹೂವಿನ ಅಂಗಡಿಗೆ ಹೋಗಿ ಒಂದು ಹೂವಿನ ಗುಚ್ಚವನ್ನು ಖರೀದಿಸಿ ಆ ವ್ಯಕ್ತಿಗೆ ಕೊಟ್ಟು, take heart my friend, life is still good, Lord will help you ಎಂದು ಸಾಂತ್ವನದ ಮಾತುಗಳನ್ನು ಆಡಿ ಹೋಗುತ್ತಾನೆ. ಈ spontaneous gesture ಆ ನೊಂದ ವ್ಯಕ್ತಿಗೆ ದೊಡ್ಡ ಅಸರೆಯನ್ನೇ ನೀಡುತ್ತದೆ. Dont sweat over small things (ಚಿಕ್ಕ ವಿಷಯಗಳ ದೊಡ್ಡದು ಮಾಡುವುದು ಬೇಡ) ಎಂದು ಹೇಳುವುದಿದೆ. ಆದರೆ ಇಂಥ ಸನ್ನಿವೇಶಗಳಲ್ಲಿ ಚಿಕ್ಕ- ಚಿಕ್ಕ, ಪುಟ್ಟ- ಪುಟ್ಟ, ಹೃದಯವನ್ನು ಅರಳಿಸುವ ಚಮತ್ಕಾರಗಳನ್ನು ನಾವು ಮಾಡಲು, ಪ್ರದರ್ಶಿಸಲು ತೊಡಗಿದರೆ ನಮ್ಮ worth ಕೂಡಾ ಚಮತ್ಕಾರಗಳನ್ನು ಸಾಧಿಸುತ್ತದೆ. ಈ ತೆರನಾದ ಚಮತ್ಕಾರಗಳನ್ನು ಅನಾವರಣ ಮಾಡಲು ನಮಗಿದೆಯೇ ವ್ಯವಧಾನ? where is time? we are in hurry. ಮೇಲೆ ಕೂತ, ನಮ್ಮ ನಾಗಾಲೋಟ ಗಮನಿಸುತ್ತಿರುವ ಆ “ಹರಿ” ನಮ್ಮ ಆಕಾಂಕ್ಷೆಗಳು ಪೂರ್ತಿಯಾಗುವ ಮುನ್ನ ನಮ್ಮನ್ನು ಕರೆಸಿಕೊಳ್ಳದಿರಲಿ.

ಒಬ್ಬ ವ್ಯಕ್ತಿ, ಒಬ್ಬನ ಬಳಿ ಹೋಗಿ ೧೦೦ ಡಾಲರ್ ನ ಚಿಲ್ಲರೆ ಕೇಳುತ್ತಾನೆ. ದೊಡ್ಡ ಮುಗುಳ್ನಗುವಿನೊಂದಿಗೆ ಓಹ್ ಸ್ಸಾರಿ, ನನ್ನಲ್ಲಿದ್ದಿದ್ದರೆ ಖಂಡಿತ ನಿನಗೆ ಕೊಡುತ್ತಿದ್ದೆ ಎಂದು ಹೇಳಿದಾಗ ಚಿಲ್ಲರೆಗೆ ಬಂದ ವ್ಯಕ್ತಿ ಅವನ ಮುಗುಳ್ನಗುವಿಗೆ ಮಾರು ಹೋಗಿ ನನಗಿನ್ನು ಚಿಲ್ಲರೆಯ ಅವಶ್ಯಕತೆಯಿಲ್ಲ ನಿನ್ನ ಆ ದೊಡ್ಡ, ಮನಃಪೂರ್ವಕವಾಗಿ ಬಂದ ಮುಗುಳ್ನಗುವೇ ನನಗೆ ಸಿಕ್ಕ ಚಿಲ್ಲರೆ, you made my day ಎಂದು ವಂದಿಸಿ ಹೋಗುತ್ತಾನೆ. ನೋಡಿ ಒಂದೇ ಒಂದು ನಗು, ಪುಕ್ಕಟೆಯಾಗಿ ದೈವದತ್ತವಾಗಿ, ulterior motive ಇಲ್ಲದೆ ಬಂದ, ಸೂರ್ಯನ ರಶ್ಮಿ ಗಳಂಥ ಬೆಚ್ಚಗಿನ ಮುಗುಳ್ನಗು. ಮುಖ ಸಿಂಡರಿಸಲು ನೂರಾರು ಸ್ನಾಯುಗಳು ಕೆಲಸ ಮಾಡುತ್ತವಂತೆ. ಮಂದಾಹಸಕ್ಕೆ ಕೆಲವೇ ಸ್ನಾಯುಗಳು.  

ಬಾಲಿವುಡ್ ತಾರೆಯೊಬ್ಬ (ಅಮೀರ್ ಖಾನ್ ಇರಬೇಕು) ಹೊರಗೆ ರೆಸ್ಟುರಾಂಟ್ ಗೆ ಹೋದರೆ ತಾನು  ಆರ್ಡರ್ ಮಾಡಿದ ಆಹಾರ ಹೆಚ್ಚು ಎಂದು ತೋರಿದರೆ ಅದನ್ನು ಹಾಳು ಮಾಡದೆ ಮನೆಗೆಂದು (take home) ಕಟ್ಟಿಸಿಕೊಂಡು ಹೊರಗೆಲ್ಲಾದರೂ ಕೂತು ಬೇಡುವವರಿಗೆ ಕೊಡುತ್ತಾನಂತೆ. ನಾವು? ಹೊಟ್ಟೆ ಬಿರಿಯುವ ಹಾಗೆ ತಿಂದು ಉಳಿದದ್ದನ್ನು ನಾಳೆ ಬೆಳಿಗ್ಗೆಗೋ, ಮಧ್ಯಾಹ್ನಕ್ಕೋ ಆಯಿತು ಎಂದು ಕಟ್ಟಿಸಿಕೊಂಡು ಹೋಗುತ್ತೇವೆ. ನಾಳೆಯ ಬಗ್ಗೆ ಅಷ್ಟೊಂದು ಖಾತರಿ. ಇಸ್ತ್ರಿ ಪೆಟ್ಟಿಗೆ ಒಂದು ವರ್ಷದ ಖಾತರಿಯೊಂದಿಗೆ ಬರುತ್ತದೆ, ಆದರೆ ಮನುಷ್ಯನ ಜೀವಕ್ಕೆ ಒಂದು ಸೆಕೆಂಡಿನ ಖಾತರಿಯೂ ಇಲ್ಲ ಎಂದು ಬಹುತೇಕ ಜನರಿಗೆ, ಬಹಳಷ್ಟು ಸಮಯ ಅರಿವೇ ಇರುವುದಿಲ್ಲ.     

ಮಾರುಕಟ್ಟೆಗಳ ತಿಕ್ಕಲುತನ ಮತ್ತು ಹೊಸ ಅಂತರ್ಜಾಲ ತಂತ್ರಜ್ಞಾನದ development ಗಳಿಂದ ಬಹಳಷ್ಟು ಜನ ಹಣ ಬಾಚಿಕೊಳ್ಳ ತೊಡಗಿದರು. ಸುಲಭವಾಗಿ ಬಂದ ಹಣವನ್ನು ಯಾವ ರೀತಿ ಬಳಸಬೇಕೆಂದು ಅರಿಯದೆ ಬೇಕಾ ಬಿಟ್ಟಿಯಾಗಿ ಖರ್ಚು ಮಾಡಿ, ಮಾರುಕಟ್ಟೆಯಲ್ಲಿ ಬೆಲೆಗಳು ಸಾಮಾನ್ಯ ಜನರಿಗೆ ಎಟುಕದಂತೆ ಮಾಡಿದರು. ಕಳೆದ ವರ್ಷದ ಆರ್ಥಿಕ ಸಂಕಷ್ಟದಲ್ಲಿ ಸಾಫ್ಟ್ ವೇರ್ ಕಂಪೆನಿಗಳು ಉದ್ಯೋಗಿಗಳಿಗೆ ಸೋಡಾ ಚೀಟಿ ಕೊಟ್ಟಾಗ ಸಂತಸ ಪಟ್ಟವರೂ ಇದ್ದಾರೆ. ದೊಡ್ಡ ದೊಡ್ಡ ಸಂಬಳ ತೆಗೆದು ಕೊಳ್ಳುವ ಈ ಉದ್ಯೋಗಿಗಳು ವರ್ತಕ ಹೇಳಿದ ಬೆಲೆ ಕೊಟ್ಟು ಸಾಮಾನು ಕೊಂಡರು. ಕಾಲದ ಸವಾಲನ್ನು ಎದುರಿಸಿದ “ಚೌಕಾಸಿ” ದೂರ ಉಳಿಯಿತು. what? haggling for bargain? NO!  ಪ್ರಳಯ ಡಿಕ್ಲೇರ್ ಆಯ್ತೇನೋ ಎನ್ನಬೇಕು, ಆ ತೆರನಾದ frantic shopping spree. baskin’ robbins, cafe coffee day, pub, pizza hut, glittering mall ಇವರ ತಾಣಗಳು.  ಇದು ಸಮಾಜದ ಕೆಲ ವರ್ಗಗಳ, ಕಡಿಮೆ ಸಂಬಳ ಪಡೆಯುವ, ಒಂದೊಂದು ರೂಪಾಯಿಯನ್ನೂ, ಪೈಸೆಯನ್ನೂ ಜೋಪಾನವಾಗಿ ಕಾಪಾಡಿ, ಬೇಕಿದ್ದ ಕಡೆ ಮಾತ್ರ ಖರ್ಚು ಮಾಡುವ ಜನರನ್ನು ಬಾಧಿಸಿ ಅವರು ಮನಸಾರೆ ಶಪಿಸುವಂತಾಯಿತು.

ಬದುಕಿನ ಪ್ರತಿ ಘಟ್ಟಗಳಲ್ಲೂ ನಮಗೆ ಸವಾಲುಗಳಿರುತ್ತವೆ. ಧನದಲ್ಲೂ, ಆರೋಗ್ಯದಲ್ಲೂ, ಅಧಿಕಾರದಲ್ಲೂ ಸವಾಲುಗಳಿರುತ್ತವೆ. ಇವನ್ನು ಸಮರ್ಥವಾಗಿ ಎದುರಿಸಲು ವಿಫಲರಾದಾಗ ಉಂಟಾಗುತ್ತದೆ ಕ್ಲೇಶ, ತರುತ್ತದೆ ಮತ್ಸರ. ಆದರೆ ಇಂಥ ಸಂಕೋಲೆಗಳಿಂದ ಬಿಡಿಸಿಕೊಳ್ಳಲು ಹೊರಬರಲು, ನಮಗೆ ವಿದೇಶೀ ಗುರುವಿನ ಅಗತ್ಯ ಬರಬಹುದೇ? ಬರಕೂಡದು. ಈ ವಿದೇಶಿ ಗುರು ಹೇಳಿಕೊಡುವುದು ಪೂರ್ವ ದಿಕ್ಕಿನ ಆದರ್ಶಗಳನ್ನು. ನಮ್ಮ ಅಜ್ಜ ಅಜ್ಜಿಯಂದಿರು ನಮಗೆ ಹೇಳಿ ಕೊಟ್ಟ ನೀತಿ ಕಥೆಗಳನ್ನು. ಸೂಫಿ ವರ್ಯರು, ಮುನಿಗಳು ಹೇಳಿದ ಸತ್ಯವನ್ನು. ನಮ್ಮ ಆದರ್ಶಗಳನ್ನು ನಮಗೆ ಹೇಳಿಕೊಡಲು ನಮ್ಮಿಂದ ಫೀಸನ್ನೂ ಪೀಕುತ್ತಾನೆ, ತನ್ನ ಮೂರನೇ ವಿವಾಹ ವಿಚ್ಛೇದನಕ್ಕಾಗಿ ಹೋರಾಡಿ ಬಂದ, ಸೂಟು ಬೂಟು ತೊಟ್ಟ, ತಲೆಗೆ ಫಳ, ಫಳ ಹೊಳೆಯುವ “ಜೆಲ್” ಹಚ್ಚಿಕೊಂಡ ವಿದೇಶೀ ಗುರು. ದೇಶೀ ಆದರ್ಶಗಳ ವಿದೇಶೀ ಗುರು.      

ಸರ್ವಿಸ್ ಗೆಂದು ಬಿಟ್ಟಿದ್ದ ನನ್ನ ಕಾರನ್ನು ತರಲು ಟ್ಯಾಕ್ಸಿ ಯಲ್ಲಿ ಹೋಗುವಾಗ ಚಾಲಕ ಹೇಳಿದ, ಈ ಅರಬರಿಗೆ ಹಣದ ಮದ ಸರಿಯಾಗಿ ಹತ್ತಿದೆ, ತಾವೇನು ಮಾಡುತ್ತಿದ್ದೇವೆ ಎಂದು ತಮಗೆ ಗೊತ್ತಿರುವುದಿಲ್ಲ. “ಕ್ಯಾಮೆಲ್ ಟು ಕ್ಯಾಮ್ರೀ” transformation ಕಣ್ಣಿವೆ ಇಕ್ಕುವಷ್ಟರಲ್ಲಿ ಆಯಿತು ಎಂದು. ಇದರರ್ಥ ಒಂಟೆ ಸವಾರಿ ಮಾತ್ರ ಮಾಡಿ ಗೊತ್ತಿದ್ದ ಅರಬ್ ಕ್ಯಾಮ್ರೀ (ದುಬಾರಿ ಕಾರು) ಕಾರಿನಲ್ಲಿ ಓಡಾಡ ತೊಡಗಿದಾಗ ಆದ confusion.

yes, money brings confusion, when priorities are lost. ಈ ಕಹಿ ಸತ್ಯ ನಮಗೆ ಅನ್ವಯಿಸದೆ ಇರಲಿ.