ಬೇಡದ ಕಡೆ ತಲೆ ಹಾಕಿದ ಕರಡಿ

ನಮಗೆ ಅವಶ್ಯಕತೆ ಇರದ ಕಡೆ ತಲೆ ಹಾಕಬಾರದು ಎಂದು ಹಿರಿಯರ ಬುದ್ಧಿವಾದ. ಕಿತಾಪತಿ ಮಾಡುವವರನ್ನು ಕಂಡರೆ ಹೇಳುತ್ತಾರೆ ಬೇಡದೆ ಇರೋ ಜಾಗದಲ್ಲಿ ತಲೆ ಹಾಕೋದು ಅಂದ್ರೆ ಇವ್ನಿಗೆ ತುಂಬಾ ಇಷ್ಟ ಎಂದು ತೆಗಳೋದನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ಬೇಡ ಕಡೆ ತಲೆ ಹಾಕಿ ಮಂಗಳಾರತಿ ಮಾಡಿಸಿ ಕೊಂಡಿದ್ದು ಹುಲು ಮನುಜನಲ್ಲ. ಬದಲಿಗೆ ಮೈ ತುಂಬಾ ಕೇಶ ಇಟ್ಟುಕೊಂಡು ನಮ್ಮ ಮಕ್ಕಳಿಗೆ ಬೊಂಬೆ ರೂಪದಲ್ಲೂ, ನಿಜ ರೂದಲ್ಲೂ ಕಚಗುಳಿ ಇಡುವ ಜಾಂಬವ. ಕರಡಿ.

ಫ್ಲೋರಿಡಾ ರಾಜ್ಯದಲ್ಲಿರುವ “ಒಕಾಲಾ” ನಗರದಲ್ಲಿ ವಾಸಿಸುವ ಕರಡಿಯೊಂದು ತನ್ನ ತಲೆಯನ್ನು ಪ್ಲಾಸ್ಟಿಕ್ ಬಾಟಲಿ ಯೊಂದರಲ್ಲಿ ಸಿಕ್ಕಿಸಿಕೊಂಡು ಪರದಾಡಿತು. ಪೂರ್ತಿ ಹತ್ತು ದಿನ. ಓಹ್, ಹತ್ತು ದಿನಗಳ ಮನುಷ್ಯನ ನಿರ್ಲಕ್ಷ್ಯೆ ಕಾರಣ  ಕಾಲ ತಿನ್ನಲು, ಕುಡಿಯಲು ಆಗದೆ ಒದ್ದಾಡಿದ ಕರಡಿಗೆ ಕೊನೆಗೆ ಮುಕ್ತಿ ಸಿಕ್ಕಿದ್ದೂ ಭಾಗ್ಯಕ್ಕೆ ಮನುಷ್ಯನಿಂದಲೇ. ಪ್ರವಾಸದ ವೇಳೆ ಹೋದ ಹೋದೆಡೆ ನಮ್ಮ ಗಾರ್ಬೇಜ್ ಎಳೆ ದು ಕೊಂಡು ಹೋಗುವ ನಮಗೆ ನಿಸರ್ಗದ ಕಡೆ ನಮಗಿರುವ ಬೇಜವಾಬ್ದಾರಿತನಕ್ಕೆ ಪ್ರವಾಸ ಅಥವಾ ಪರ್ಯಟನ ಕಳೆದು ಬರುವಾಗ ನಮ್ಮ ಹಿಂದೆ ಬಿಟ್ಟು ಹೋಗುವ ತಿಪ್ಪೆಗಳೇ ಸಾಕ್ಷಿ.

ಜೆಡ್ಡಾ ದಿಂದ ಸುಮಾರು ೨೦೦ ಕಿ.ಮೀ ಇರುವ ನಮ್ಮ ಕೆಮ್ಮಣ್ಣು ಗುಂಡಿಯನ್ನು ಹೋಲುವ “ತಾಯಿಫ್” ಭೇಟಿಯ ವೇಳೆ ಬೆಟ್ಟದ ಕೆಳಗಿನ ದಾರಿಯಲ್ಲಿ ಒಂದು ಮರವನ್ನು ಕಂಡೆ. ಸಾಮಾನ್ಯವಾಗಿ ಮರ ಎಂದ ಮೇಲೆ ಎಲೆಗಳು ಇದ್ದೇ ಇರುತ್ತವೆ, ಅಲ್ಲವೇ? ಸಖೇದಾಶ್ಚರ್ಯ, ಇದೊಂದು ವಿಚಿತ್ರ ಮರವಾಗಿ ಕಂಡಿತು ನನಗೆ. ಮರದ ಟೊಂಗೆಯ ತುಂಬಾ ಬಣ್ಣ ಬಣ್ಣದ, ವಿವಿಧ ಆಕಾರದ, ಗಾತ್ರದ ಚೀಲಗಳು. ಪ್ಲಾಸ್ಟಿಕ್ ಚೀಲಗಳು. ಸಂಪೂರ್ಣ ಮರವನ್ನು ಆವರಿಸಿ ಬಿಟ್ಟಿತ್ತು. ಗಾಡಿಯಲ್ಲಿ ಹೋಗುವಾಗ ಮೇಯೋದು, ತದನಂತರ ಬಿಡೋದು ಗಾಳಿ ಪಟವ. ಅಲ್ಲಲ್ಲ, ಪ್ಲಾಸ್ಟಿಕ್ ಪಟವ. ಸ್ವಲ್ಪ ದೂರ ಹೋದ ನಂತರವೇ ನನ್ನ ಮಂದ ಮಾತಿಗೆ ತೋಚಿದ್ದು ಒಹ್, ಈ ಮರದ ಚಿತ್ರವೊಂದನ್ನು ಕ್ಲಿಕ್ಕಿಸಬೇಕಿತ್ತು ಎಂದು.       

ತನ್ನ ಸುಂದರ ಮೂತಿಯನ್ನು ಈ ಪ್ಲಾಸ್ಟಿಕ್ ಬಾಟಲಿಗೆ ಸಿಕ್ಕಿಸಿಕೊಂಡ ಕೇವಲ ಆರು ತಿಂಗಳ ಹಸುಳೆ ಕರಡಿಗೆ ವನ್ಯ ಜೀವಿ ಸಂರಕ್ಷಕರು ಬಂದು ಮೊದಲು ಪಕ್ಕದಲ್ಲೇ ಇದ್ದ ಅದರ ತಾಯಿಗೆ ಶಾಂತ ಗೊಳಿಸುವ ಚಚ್ಚು ಮದ್ದನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಗೊಳಿಸಿದರು. ಅವರ ಪ್ರಕಾರ ಆ ಕರಡಿ ಒಂದೆರಡು ದಿನಗಳಲ್ಲಿ ಸಾಯುತ್ತಿತ್ತಂತೆ ಬಾಟಲಿ ಕಾರಣ  ತಿನ್ನಲು ಕುಡಿಯಲು ಆಗದೆ.     

ಚಿತ್ರ ಕೃಪೆ: http://www.newstimes.com/news/article/Plastic-jar-removed-from-Fla-bear-cub-s-head-615774.php#photo-3

ಒಂದು ತಮಾಷೆಯ ಸಂಜೆ

ತಂಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದರಿಂದ ಅವಳ ಮನೆಯಲ್ಲೂ, ನನ್ನ ಮನೆಯಲ್ಲೂ ವಾಸ. ಮಧ್ಯಾಹ್ನ  ನಾಲ್ಕು ಘಂಟೆಗೆ ಚಹಾ ಮುಗಿಸಿ ಹೊರಟಾಗ ನನ್ನ ಪತ್ನಿ ಹೇಳಿದಳು ನಮ್ಮನ್ನೂ ಮನೆಗೆ ಬಿಡಿ ಎಂದಳು. ಮಗ ಓಡಿ ಬಂದು ಮುಂದಿನ ಸೀಟಿನಲ್ಲೂ, ಮಗಳು ಹಿಂದಿನ ಸೀಟಿನಲ್ಲೂ ಕೂತರು. ಮಡದಿ ಕೆಲವು ಸಾಮಾನುಗಳನ್ನು ಡಿಕ್ಕಿಯಲ್ಲೂ, ಹಿಂದಿನ ಸೀಟಿನಲ್ಲೂ ಇಡುತ್ತಿದ್ದಳು. ಹಿಂದಿನ ಡೋರ್ ಹಾಕಿದ ಸದ್ದು ಕೇಳುತ್ತಿದ್ದಂತೆ ನಾನು ಕಾರನ್ನು ಚಲಾಯಿಸಿದೆ. ಗಾಡಿ ಚಲಾಯಿಸುತ್ತಾ ಆಫೀಸಿನಲ್ಲಿ ನಡೆದ ತಮಾಷೆಯ ಪ್ರಸಂಗವನ್ನು ಹೇಳುತ್ತಾ ಹೊರಟೆ. ಹಾಂ, ಹೂಂ ಏನೂ ಇಲ್ಲದ್ದನ್ನು ಗಮನಿಸದೆ ನನ್ನ ಪಾಡಿಗೆ ನಾನು ಮಾತನ್ನಾಡುತ್ತಿರುವಾಗ ಫೋನ್ ರಿಂಗ್ ಆಯಿತು, ನೋಡಿದರೆ ನನ್ನ ಹೆಂಡತಿಯ ನಂಬರ್, ಯಾಕ್ ಕಾಲ್  ಮಾಡ್ತಾ ಇದ್ದೀಯ ನನಗೆ ಎನ್ನುತ್ತಾ ಕನ್ನಡಿಯ ಮೂಲಕ ಹಿಂದಕ್ಕೆ ನೋಡಿದರೆ ಗಾಡಿಯಲ್ಲಿ ಅವಳಿಲ್ಲ. ಅರ್ರೇ, ಇದೇನಿದು, ಅವಳು ಕೂತೆ ಇಲ್ಲ, ನಾನು ಗಾಡಿ ಚಲಾಯಿಸುತ್ತಾ ಬಂದೆನಲ್ಲಾ, ಈ ಪುಟಾಣಿಗಳಾದರೂ ಹೇಳಬಾರದೆ ಅಮ್ಮ ಗಾಡಿಯಲ್ಲಿಲ್ಲ ಎಂದು ನನಗೆ ನಾನೇ ಹೊಟ್ಟೆ ತುಂಬಾ ನಗುತ್ತಾ ಹೆಂಡತಿಯನ್ನ ಪಿಕ್ ಮಾಡಲು ಹೋದರೆ ಮುಖ ಕೆಂಪಗೆ ಮಾಡಿಕೊಂಡು ನಿಂತಿದ್ದಳು ನನ್ನನ್ನು ಶಪಿಸುತ್ತಾ. ಅಲ್ಲಾ ಇದೇ ಥರಾ ನನ್ನನ್ನು ಎಲ್ಲಾದರೂ ಡೆಸರ್ಟ್ ನಲ್ಲೋ ಮತ್ತೆಲ್ಲೋ ಬಿಟ್ಟು ಹೋದರೆ ಹೇಗ್ರೀ ಎಂದು ಗದರಿಸುತ್ತಾ ಹತ್ತಿದಳು ಕಾರನ್ನು.   

ದುರಂತ ಕಂಡ ಅತ್ರಿ ಪ್ರಕಾಶನ

ಕನ್ನಡಿಗನೊಬ್ಬನ ಕನ್ನಡ ಪುಸ್ತಕ ಮಾರುವ ಧಂಧೆ ಕನ್ನಡಿಗರ ಅಸಡ್ಡೆ, ನಿರುತ್ಸಾಹ, ಅವಗಣನೆ ಯಿಂದ ಯಾವ ರೀತಿ ಅವಸಾನದ ಅಂಚಿನಲ್ಲಿದೆ ಎನ್ನುವ ಒಂದು ಲೆಲ್ಹನವನ್ನು ಓದಿದೆ. ಕಣ್ಣಲ್ಲಿ ನೀರು ಬಂತು ಇದನ್ನು ಓದಿ. ಪರಭಾಷಾ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಸ್ವಂತ ಭಾಷೆಯನ್ನೂ ಕಡೆಗಣಿಸುವ, ಅಷ್ಟೇ ಅಲ್ಲ ಆ ಕಡೆ ಗಣಿ ಸುವಿಕೆಗೆ ತಮ್ಮದೇ ಆದ ಕುತರ್ಕಗಳನ್ನು ನೀಡುವ ಮಂದಿ ಎಂದು ಎಚ್ಚೆತ್ತು ಕೊಳ್ಳುತ್ತಾರೋ ನೋಡಬೇಕು. ಪೂರ್ತಿ ಓದಿಗೆ ಕೆಳಗಿನ ಕೊಂಡಿ ಕ್ಲಿಕ್ಕಿಸಿ..

ಅತ್ರಿ ತಮ್ಮ ಪ್ರಕಾಶನವನ್ನು ಮುಚ್ಚಿದರು

ಮರೆತು ಹೋದ ಮಾತೃ ಭಾಷೆ

ಸೋನಿಯಾ ಅಮೇರಿಕೆಯಿಂದ ವಾಪಸಾಗಿ ಲೋಕಸಭೆಯ ಕಲಾಪಗಳಲ್ಲಿ ಮತ್ತು ತಮ್ಮ ಪಕ್ಷದ ಬೈಠಕ್ ವೊಂದರಲ್ಲಿ ಭಾಗಿಯಾದರು ಎಂದು ವರದಿ. ತಮ್ಮ ತಾಯಿಯವರ ಅನಾರೋಗ್ಯದ ಕಾರಣ ಅವರ ಶುಶ್ರೂಷೆಗೆಂದು ಅಮೆರಿಕೆಗೆ ಹೋಗಿದ್ದರು ಸೋನಿಯಾ ಗಾಂಧೀ.   

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ಇಟಲಿ ದೇಶದ ಟೀವೀ ಚಾನಲ್ ನ ತಂಡ ಅವರ ಸಂದರ್ಶನಕ್ಕೆಂದು ದಿಲ್ಲಿಗೆ ಬಂದಿತ್ತು. ಸಂದರ್ಶಕ ಇಟಾಲಿಯನ್ ಭಾಷೆಯಲ್ಲಿ ಪ್ರಶ್ನೆ ಕೇಳಲು ಆರಂಭಿಸಿದಾಗ ಸೋನಿಯಾ ನನಗೆ ಇಟಾಲಿಯನ್ ಭಾಷೆ ಬರುವುದಿಲ್ಲ, ದಶಕಗಳ ಹಿಂದೆಯೇ ಬಳಸುವುದನ್ನು ನಿಲ್ಲಿಸಿದ್ದರಿಂದ ಇಟಾಲಿಯನ್ ಭಾಷೆಯಲ್ಲಿ ಮಾತನಾಡಲಾಗದು ಎಂದು ಹೇಳಿದ್ದರು. ಯಾರೇ ಆದರೂ, ಅದೆಷ್ಟೇ ದಶಕಗಳನ್ನು ತಮ್ಮ ಮಾತೃ ಭಾಷೆಯ ನಂಟಿನಿಂದ ದೂರ ಇದ್ದರೂ ತಮ್ಮ ಸ್ವಂತ ಭಾಷೆಯನ್ನೂ ಮರೆಯುವ ಪ್ರಶ್ನೆಯೇ ಇರುವುದಿಲ್ಲ. ಆದರೆ ತಮ್ಮನ್ನು ವಿದೇಶೀ ಮಹಿಳೆ ಎಂದು ಜರೆಯುತ್ತಿದ್ದ ವಿರೋಧ ಪಕ್ಷಗಳಿಗೆ ಹೆದರಿ ತಮ್ಮ ಮಾತೃ ಭಾಷೆಯನ್ನು ನಿರಾಕರಿಸುವಂತೆ ಅವರನ್ನು ಪ್ರೇರೇಪಿಸಿತು. ಹಾಗಾದರೆ ತಮ್ಮ ತಾಯಿಯ ಶುಶ್ರೂಷೆ ಗೆಂದು ಅಮೆರಿಕೆಗೆ ಹೋದ ಸೋನಿಯಾ ತಮ್ಮ ತಾಯಿಯೊಂದಿಗೆ ಯಾವ ಭಾಷೆಯಲ್ಲಿ ಮಾತನಾಡಿಸಿರಬೇಕು? ಏಕೆಂದರೆ ಬಹುತೇಕ ಇಟಾಲಿಯನ್ನರಿಗೆ ಆಂಗ್ಲ ಭಾಷೆ ಬರುವುದಿಲ್ಲ. ಆಂಗ್ಲ ಭಾಷೆಯೇ ಶ್ರೇಷ್ಠ ಎಂದು ತಮ್ಮ ತಮ್ಮ ಮಾತೃ ನುಡಿಗಳನ್ನು ಕಡೆಗಣಿಸಿ ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಲು ಪ್ರೋತ್ಸಾಹಿಸುವ ಪಾಲಕರಿಗೆ ಗೊತ್ತಿದೆಯೇ ಸಂಪೂರ್ಣ ಯೂರೋಪಿನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನ್ನಾಡುವ, ವ್ಯವಹರಿಸುವ ದೇಶ ಒಂದೇ ಒಂದು ಎಂಬುದು?      

ಒಬ್ಬ ಮಹಿಳೆ ಭಾರತೀಯ ಸಂಜಾತನನ್ನು ಪ್ರೀತಿಸಿ ಮದುವೆಯಾಗುತ್ತಾಳೆ, ಭಾರತೀಯ ಪೌರತ್ವ ಪಡೆದು ಇಲ್ಲಿನ ಸಂಸ್ಕೃತಿಗೆ ತಲೆಬಾಗಿ ಬದುಕನ್ನು ಸಾಗಿಸುತಾಳೆ. ಜನರ ಅಭೂತ ಪೂರ್ವ ಬೆಂಬಲದಿಂದ ಲಕ್ಷಾಂತರ ಮತಗಳಿಂದ ತನ್ನ ಪ್ರತಿಸ್ಪರ್ದಿಯನ್ನು  ಪರಾಭವ ಗೊಳಿಸಿದ್ದು ಮಾತ್ರವಲ್ಲದೆ ತನ್ನ ನಾಯಕತ್ವದಲ್ಲಿ ಪಕ್ಷವೊಂದನ್ನು ಅಧಿಕಾರದ ಗದ್ದುಗೆಗೂ ಏರಿಸುತ್ತಾಳೆ. ಈ ರೀತಿಯ ಜನಮನ್ನಣೆ ಇದ್ದರೂ ಆಕೆ ದೇಶದ ಅತ್ಯುನ್ನತ ಹುದ್ದೆಗೆ ಅನರ್ಹಳಾಗುತ್ತಾಳೆ. ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಕೂರಲು ಬಿಡದ ಜನರಿಗೆ ಬೆದರಿ ತನ್ನ ಮಾತೃ ಭಾಷೆಯಲ್ಲಿ ತನಗೆ ಮಾತನಾಡಲು ಬರುವುದಿಲ್ಲ ಎಂದು ಹೇಳಿಕೆಯನ್ನು ಕೊಡುತ್ತಾಳೆ. ಒಬ್ಬ ವ್ಯಕ್ತಿಗೆ ತನ್ನ ಮಾತೃ ಭಾಷೆಯಲ್ಲಿ ಮಾತನಾಡಲು ಹೆದರುವಂಥ ಪರಿಸ್ಥಿತಿ ಸೃಷ್ಟಿಸುವ ವ್ಯವಸ್ಥೆ ಮತ್ತು ಅಸಹನೆಯಿಂದ ನಾವು ವಿಶ್ವಕ್ಕೆ ನೀಡುತ್ತಿರುವ ಸಂದೇಶವಾದರೂ ಏನು?

ನಮಗೆ “ಹುಬ್ಬು” ಗಳೇಕಪ್ಪಾ ?

ಎಲ್ಲಾ ಮಕ್ಕಳೂ ಚಂದಿರನೇಕೆ ಓಡುವನಮ್ಮಾ ಎಂದು ಕೌತುಕದಿಂದ ಕೇಳಿದರೆ ನನ್ನ ಮಗನಿಗೆ ಬೇರೆಯದೇ ಆದ ಒಂದು ಚಿಂತೆ.

ನಮಗೆ “ಹುಬ್ಬು” ಗಳೇಕಪ್ಪಾ ? ಹುಬ್ಬು ಹಾರಿಸುತ್ತಾ ಕೇಳಿದ ನನ್ನ ಮಗ ನಿನ್ನೆ ರಾತ್ರಿ ಅವನ ಬೆಡ್ ಟೈಮ್ ಸ್ಟೋರಿ ಸೆಶನ್ ಸಮಯ. ನಾನು ಹೇಳುತ್ತಿದ್ದ ಕಥೆಯ ಬಗ್ಗೆ ಅವನು ಪ್ರಶ್ನೆ ಕೇಳಿದ್ದರೆ ಕಥೆಯಲ್ಲಿ ಪ್ರಶ್ನೆಯಿಲ್ಲ ಎಂದು ಅವನ ಪುಟ್ಟ ಬಾಯಿ ಮುಚ್ಚಿಸಬಹುದಿತ್ತು. ಆದರೆ ಕೇಳುತ್ತಿರುವುದು ಲಾಜಿಕ್ ಆದ ಪ್ರಶ್ನೆಯಾದ್ದರಿಂದ ಒಂದು ಕ್ಷಣ ಮೇಲೆ ಏರಿದ ನನ್ನ ಹುಬ್ಬುಅಲ್ಲೇ ನಿಂತಿತು ನನ್ನ ಸಮಜಾಯಷಿಗಾಗಿ ಕಾಯುತ್ತಾ. ಹೌದೇ, ಸುಂದರ ಮೊಗದ ಮೇಲೆ, ಬೊಗಸೆ ಕಣ್ಣುಗಳ ಮೇಲೆ ಹುಬ್ಬುಗಳೆಂಬ “ಛಾವಣಿ” ಯ ಅವಶ್ಯಕತೆ ಏನಿತ್ತೋ? ಕಣ್ಣುಗಳನ್ನು ರಕ್ಷಿಸಲು ರೆಪ್ಪೆಗಳಿದ್ದೆ ಇವೆಯಲ್ಲಾ? ಓಹ್, ಬಹುಶಃ ಡಬ್ಬಲ್ ಪ್ರೊಟೆಕ್ಷನ್ ಆಗಿ ಇರಬೇಕು ಹುಬ್ಬುಗಳು ಬಡಿಯುವ ರೆಪ್ಪೆಗಳಿಗೆ ಸಂಗಾತಿಯಾಗಿ.  

ಹುಬ್ಬು ಮತ್ತು ಮೂಗಿನ ರೂಪ, ಅಂಕು ಡೊಂಕಿನ ಬಗ್ಗೆಯೂ ಸಾಕಷ್ಟು ಕುತೂಹಲ ಇದ್ದಿದ್ದೇ.

ಮಹಿಳೆಯರಿಗೆ ಕರಡಿಗಿರುವಂಥ ಹುಬ್ಬಿದ್ದರೆ ಅದನ್ನು ರೆಪೇರಿ ಮಾಡಿಸಿಕೊಳ್ಳುತ್ತಾರೆ. ಅದಕ್ಕೆ ಆಂಗ್ಲ ಭಾಷೆಯಲ್ಲಿ blepharoptosis ಎಂದು ಕರೆಯುತ್ತಾರೆ.  ಕಾಲುಗುರು ಸ್ವಲ್ಪ ಡೊಂಕಾದಾಗ toe nail repair ಇರುವಂತೆ ಮುಖಕ್ಕೆ ಕಿರೀಟ ಪ್ರಾಯವಾಗಿ ಕಂಗೊಳಿಸುವ ಹುಬ್ಬಿಗೆ ಇಲ್ಲದೆ ಇರುತ್ತದೆಯೇ ಒಂದು ರೆಪೇರಿ? ಹಾಂ, ಈ ಹುಬ್ಬಿನ ರೆಪೆರಿಯೊಂದಿಗೆ ಅದಕ್ಕೊಂದು ಚೆಂದದ ರಿಂಗ್ ಇದ್ದರೆ ಇನ್ನೂ ಚೆಂದ ಅಲ್ಲವೇ? ಮೂಗಿಗೆ, ಕಾಲುಂಗುರಕ್ಕೆ, ಹೊಕ್ಕುಳಿಗೆ ಒಂದೊಂದು ರಿಂಗ್ ಇರುವಾಗ ಹುಬ್ಬಿಗೆ ಬೇಕೇ ಬೇಕು ಮಾರಾಯ್ರೆ ಒಂದು ರಿಂಗು.         

ಮತ್ತೊಂದು ಮಾತು, ಹೆಂಡತಿ ಪಕ್ಕದಲ್ಲಿಲ್ಲ. ಅರಬ್ ಮಹಿಳೆಯರ ಹುಬ್ಬಿಗೆ ಅದೇನು ಸೌಂದರ್ಯವೋ ಏನೋ? ಕಾಮನ ಬಿಲ್ಲುಗಳು ಮೋಡಗಳೊಳಗೆ ಅವಿತು ಕೊಳ್ಳುತ್ತವೆ ಇವರ ಹುಬ್ಬುಗಳ ಸೌಂದರ್ಯವನ್ನು ನೋಡಿ. ಬುರ್ಖಾ ಧರಿಸಿ, ಆದರ ಮೇಲೆ ಮೂಗನ್ನು ಮುಚ್ಚುವ “ನಿಕಾಬ್” ಎನ್ನುವ  ತೆಳು ಪರದೆಯನ್ನು ಧರಿಸಿದಾಗ ಹುಬ್ಬುಗಳು ಪ್ರಾಮುಖ್ಯತೆ ಪಡೆಯುತ್ತವೆ ಇವರ ಸೌಂದರ್ಯ ಪ್ರದರ್ಶನದಲ್ಲಿ. ಕೆಲವೊಮ್ಮೆ ಅನ್ನಿಸುವುದಿದೆ ಇಷ್ಟೆಲ್ಲಾ ಮೈ ಮುಚ್ಚಿ ಕೊಂಡು, ಈ ಪರಿಯಾಗಿ ಹುಬ್ಬುಗಳನ್ನು ರೆಪೇರಿ ಮಾಡಿಸಿಕೊಂಡು ಪುರುಷರ ಅಲೆಯುವ ಕಣ್ಣುಗಳಿಗೆ ಏಕೆ ಇವರು torment ಮಾಡುತ್ತಾರೋ ಎಂದು. ಇಸ್ಲಾಂ ಹುಬ್ಬನ್ನು ರೆಪೇರಿ ಮಾಡಿಸಿ ಕೊಳ್ಳುವ ಗೀಳಿಗೆ ಹುಬ್ಬುಗಂಟಿಕ್ಕಿ ಅಸಮ್ಮತಿ ಸೂಚಿಸಿದರೂ ಅರಬ್ ಲಲನಾ ಮಣಿಗಳಿಗೆ ಅದರ ಪರಿವೆ ಇಲ್ಲ. ಈ ವಿಷಯದಲ್ಲಿ ಇನ್ನೂ ಯಾವುದೇ ಫತ್ವ ಬಂದ ನೆನಪಿಲ್ಲ.     

ಈಗ ನನ್ನ ಮಗನ ಪ್ರಶ್ನೆಗೆ ಎಲ್ಲಿದೆ ಉತ್ತರ? ಇಗೋ ಇಲ್ಲಿ. ತಲೆಯ ಮೇಲಿನಿಂದ ಮಳೆ ಹನಿ, ಹೇನು, ಹೊಟ್ಟು ಇತ್ಯಾದಿಗಳು ಕಣ್ಣಿನೊಳಗೆ ಬೀಳದೆ ಇರಲು ಇರುವ ಸಿಸ್ಟಂ ಹುಬ್ಬು. ಅಷ್ಟೇ ಅಲ್ಲ ಸೂರ್ಯನ ಪ್ರಖರ ಶಾಖ ನೇರವಾಗಿ ಕಣ್ಣಿಗೆ ಬೀಳದಂತೆ ತಡೆಯುತ್ತದೆ ಕೂಡಾ ನಮ್ಮ ಹುಬ್ಬುಗಳು.  

ಚಿಕ್ಕ ಪುಟ್ಟ ಸೌಜನ್ಯಗಳು

ಚಿಕ್ಕ ಚಿಕ್ಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬಾರದಂತೆ.ಆಂಗ್ಲ ಭಾಷೆಯಲ್ಲಿ ಇದನ್ನು ಹೊಂದುವ ಮಾತು dont sweat the small stuff ಅಂತ. ಆದರೆ ಈ ಚಿಕ್ಕ ಪುಟ್ಟ ಕೆಲಸಗಳು ಆಹ್ಲಾದಕರ ಸೌಜನ್ಯಗಳಾಗಿ ಮಾರ್ಪಟ್ಟಾಗ? ತರುವುದು ನಾಕ, ಅಲ್ಲವೇ? ನಮ್ಮ ಬದುಕಿನ ನಿರಂತರ ಜಂಜಾಟಗಳ ನಡುವೆಯೂ ಕೆಲವೊಂದು ಮುಗುಳ್ನಗು ಮತ್ತು ಉಲ್ಲಾಸ ತರುವ ಘಟನೆಗಳು ಬಂದೇ ಇರುತ್ತವೆ. ಅಂಥ ಪುಟ್ಟ ಪುಟ್ಟ ಉಲ್ಲಾಸಮಯ ಕ್ಷಣ ಗಳಿಗಾಗಿಯೇ ಒಂದು ವೆಬ್ ತಾಣವೂ ಇದೆ. ಅದರಲ್ಲಿ ಜನ ತಮ್ಮ ದೈನಂದಿನ ಬದುಕಿನಲ್ಲಿ ಎದುರಾದ, ಎಡವಿದ ಸುಂದರ ಕ್ಷಣಗಳ ಬಗ್ಗೆ ಬರೆದು ಕೃತಜ್ಞತೆ ತೋರಿಸುತ್ತಾರೆ ಮತ್ತು ವಿಶ್ವ ನಾವೆಣಿಸಿದಂತೆ ತೀರಾ ಸ್ವಾರ್ಥಿಗಳ ಸಂತೆ ಅಲ್ಲ ಎಂದು ತೋರಿಸುತ್ತಾರೆ. ನನಗೂ ಈ ರೀತಿಯ ಮುಖದಲ್ಲಿ ಮಂದಹಾಸ, ಮನಸ್ಸಿಗೆ ಮುದ ನೀಡುವ ಚಿಕ್ಕ ಪುಟ್ಟ ಸಂಗತಿಗಳು ಸಿಗುತ್ತವೆ.

ಒಮ್ಮೆ ಪವಿತ್ರ ಮಕ್ಕಾ ನಗರ ತಲುಪಿ ಕಾರನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಮಗಳನ್ನ ಎತ್ತಿಕೊಂಡು ಮಸೀದಿಯ ಕಡೆ ನಡೆದು ಬರುತ್ತಿದ್ದೆ. ಸ್ವಲ್ಪ ದೂರ ಬಂದಾಗ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದರಿಂದ ಮಹಿಳೆಯ ಸ್ವರ ಕೇಳಿಸಿತು excuse me, please accept this from me ಎಂದು. ತೆಗೆದುಕೊಂಡಾಗ ಪುಟ್ಟ ಚೀಲದಲ್ಲಿ ಒಂದು ಚಿಕ್ಕ ಖರ್ಜೂರದ ಪೊಟ್ಟಣ ಮತ್ತು ಲಬನ್ (ಮೊಸರನ್ನು ಹೋಲುವ ಪಾನೀಯ, ಅರೇಬಿಯಾದಲ್ಲಿ ಜನಪ್ರಿಯ) ಪ್ಯಾಕೆಟ್ ಇತ್ತು. ಆಕೆಯನ್ನು ವಂದಿಸಿ ಸ್ವಲ್ಪ ಮುಂದೆ ಹೋದ ಕೂಡಲೇ ಮತ್ತೊಬ್ಬ ರೊಟ್ಟಿ ಹಂಚುತ್ತಿದ್ದ. ಆತ ಕೊಟ್ಟ ರೊಟ್ಟಿಯನ್ನೂ ಪಡೆದು ಅಲ್ಲೇ ಒಂದು ಗೋಪುರದ ೩೭ ಡಿಗ್ರೀ ಎಂದು ತಾಪಮಾನ ಸೂಚಿಸುವ ಫಲಕ ನೋಡುತ್ತಾ ಮಸ್ಜಿದ್ ನ ಮಹಾದ್ವಾರದ ಹತ್ತಿರ ಬಂದಾಗ ನನ್ನ ಮಗನ ಅದೃಷ್ಟ ಖುಲಾಯಿಸಿತು. ಒಂದಡಿ ಉದ್ದದ ಎರಡು ಪೆನ್ಸಿಲ್ ಮತ್ತು eraser ಇದ್ದ ಪುಟ್ಟ ಕಾಣಿಕೆ ನನ್ನ ಮಗನಿಗೆ ಓರ್ವ ವ್ಯಕ್ತಿಯಿಂದ. ದಣಿದಿದ್ದ ಮಗನ ಮುಖ ಅರಳಿ ಅಲ್ಲೇ ಒಂದು ಚಿಕ್ಕ jig ಮಾಡಿ ಆ ವ್ಯಕ್ತಿಗೆ ಥ್ಯಾಂಕ್ ಯೂ ಹೇಳಿದ. ಪವಿತ್ರ ಕ್ಷೇತ್ರಗಳಾದ ಮಕ್ಕಾ ಮತ್ತು ಮದೀನಾ ಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯ ಎನ್ನಬಹುದು. ವಿಶ್ವದ ಹಲವೆಡೆಗಳಿಂದ ಬರುವ ಯಾತ್ರಾರ್ಥಿಗಳನ್ನು ಆದರಿಸುವುದು, ಉಡುಗೊರೆ ಕೊಡುವುದು, ಅವರಿಗೆ ಸಹಾಯ ಮಾಡುವುದು ಇಲ್ಲಿನ ಜನರಿಗೆ ಖುಷಿ ಕೊಡುತ್ತದೆ. ಈ ಕ್ಷೇತ್ರಗಳಿಗೆ ಬರುವವರ ಸೇವೆ ಮಾಡಿದರೆ ಪುಣ್ಯ ಹೆಚ್ಚು ಎನ್ನುವ ನಂಬಿಕೆ ಇರಬೇಕು ಜನರನ್ನು ಈ ರೀತಿ ಸೌಜನ್ಯಯುತವಾಗಿ ವರ್ತಿಸುವಂತೆ ಮಾಡುವುದು. ಕೆಲವೊಮ್ಮೆ ನಾನಂದು ಕೊಳ್ಳುತ್ತೇನೆ ಇದೇ ಸೌಜನ್ಯವನ್ನ ಜನ ಬರೀ ಪವಿತ್ರ ಕ್ಷೇತ್ರಗಳಿಗೆ ಮೀಸಲಿಡದೆ ತಾವು ಹೋದೆಡೆ ಮತ್ತು ಅವಶ್ಯಕತೆ ಇರುವೆಡೆ ಎಲ್ಲಾ ಮಾಡಬಾರದೇ ಎಂದು. ಏಕೆಂದರೆ ದೇವರು ಹೇಳುತ್ತಾನೆ, ಇಡೀ ಭೂಮಂಡಲವನ್ನೇ ನಾನು ನನ್ನ ಆರಾಧನೆಗೆಂದು ಹರಡಿಟ್ಟಿದ್ದೇನೆ ಎಂದು. ಮೇಲೆ ಹೇಳಿದ ಚಿಕ್ಕ ಪುಟ್ಟ gestures ಸಹ ಆರಾಧನೆಯ ಒಂದು ಅಂಗವೇ ತಾನೇ? ಹೀಗೆ ಯೋಚಿಸುತ್ತಾ ಪಾದರಕ್ಷೆಗಳನ್ನು ಕಳಚಿ ಬ್ಯಾಗಿನಲ್ಲಿರಿಸಿ ಮಸ್ಜಿದ್ ಪ್ರವೇಶಿ ಸಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಸುಮಾರು ಅರವತ್ತು ವರುಷ ಪ್ರಾಯದ, ಬಿಳಿ ಗಡ್ಡ ಬಿಟ್ಟ, ಶುಭ್ರ ಬಿಳಿ ಬಣ್ಣದ ನೀಳ ವಸ್ತ್ರ ಧರಿಸಿದ ವ್ಯಕ್ತಿಯೊಬ್ಬರು ಕೈಯ್ಯಲ್ಲಿ ಒಂದು ಚಿಕ್ಕ ಸುಗಂಧ ದ್ರವ್ಯದ ಬಾಟಲಿ ಹಿಡಿದು ತನ್ನನ್ನು ದಾಟಿ ಹೋಗುವವರ ಕೈಗಳಿಗೆ ಹಚ್ಚುತ್ತಾ ನಿಂತಿದ್ದರು. ಆ ವ್ಯಕ್ತಿಯ ಮುಖದಲ್ಲಿ ಅದೇನೋ ಧನ್ಯತಾ ಭಾವ. ನನ್ನ “ಸರ್ವಾಂತರ್ಯಾಮಿ” ಮಗ ಒಡ್ಡಿದ ತನ್ನ ಕೈಯ್ಯನ್ನೂ ತಾತನ ಸುಗಂಧ ದ್ರವ್ಯಕ್ಕಾಗಿ.

ಮೊನ್ನೆ ಬೆಳಿಗ್ಗೆ ಘಂಟೆ ಹತ್ತಾಗುತ್ತಿದ್ದಂತೆ ಹಸಿವು ಶುರುವಾಯಿತು. ಹತ್ತಿರವೇ ಇದ್ದ “ಬಕಾಲ” ಎಂದು ಕರೆಯಲ್ಪಡುವ ಚಿಕ್ಕ ಮಾರ್ಕೆಟ್ ಒಂದರೊಳಗೆ ಹೋಗಿ ಒಂದು ಖರ್ಜೂರದ ಕೇಕ್ ಮತ್ತು ನಿಂಬೆ ರಸ ತೆಗೆದು ಕ್ಯಾಶ್ ಕೌಂಟರ್ ಗೆ ಬಂದು ವಾಲೆಟ್ ತೆರೆದಾಗ ಒಂದು ಚಿಕ್ಕಾಸೂ ಇಲ್ಲ. ಕ್ರೆಡಿಟ್ ಕಾರ್ಡ್ ಮತ್ತು ಒಂದಿಷ್ಟು ಕಾಗದಗಳು ಮಾತ್ರ ಇದ್ದವು. ಛೆ, ಹಣ ತರಲು ಮರೆತೆನಲ್ಲಾ ಎನ್ನುತ್ತಾ ಕೈಯ್ಯಲ್ಲಿದ್ದ ಕೇಕ್, ಮತ್ತು ನಿಂಬೆ ರಸದ ಪ್ಯಾಕೆಟ್ ಅವುಗಳಿದ್ದ ಸ್ಥಳದಲ್ಲಿಡಲು ಹೋದಾಗ ಅಂಗಡಿಯವ ಕಾರಣ ಕೇಳಿದ. ಹಣ ತರಲು ಮರೆತೆ ಎಂದು ಹೇಳಿದಾಗ ನನಗೆ ಪರಿಚಯವಿಲ್ಲದ ಆ ಅಂಗಡಿಯ ಎಷ್ಟು ಹೇಳಿದರೂ ಕೇಳದೆ ಮತ್ತೆಂದಾದರೂ ಹಣ ತಂದು ಕೊಡುವಂತೆ ಹೇಳಿ ನನ್ನ ಬೆಳಗಿನ ತಿಂಡಿಯನ್ನು ನನಗೆ ನೀಡಿ ಕಳಿಸಿದ. ನೋಡಲು ಯಮನ್ ದೇಶದವನ ಥರ ಕಾಣುತ್ತಿದ್ದ ಅಂಗಡಿಯವ ನನಗೆ ಅಪರಿಚಿತ, ಆದರೂ ಹಣವಿಲ್ಲದಿದ್ದರೂ ನನಗೆ ಬೇಕಾದ್ದನ್ನು ಕೊಟ್ಟು ಕಳಿಸಿದ. ಈ ತೆರನಾದ ಘಟನೆಗಳು ಎದುರಾದಾಗ ಒಂದು ರೀತಿಯ ಸಂತಸ ಮನಸ್ಸಿಗೆ. ಕೆಲವೊಮ್ಮೆ ನಾನು ಹೋಗುವ ಪೆಟ್ರೋಲ್ ಬಂಕ್ ನ ಬಾಂಗ್ಲಾ ದೇಶದ ಹುಡುಗರಿಗೆ ತಂಪಾದ ಪಾನೀಯ ಕೊಡಿಸುತ್ತೇನೆ. ಬಿಸಿಲಿನ ಬೇಗೆ ಯಲ್ಲಿ ಬೇಯುತ್ತಾ ಕೆಲಸ ಮಾಡುವ ಹುಡುಗರ ಮೊಗದಲ್ಲಿ ತಂಪು ಪಾನೀಯ ಸಿಕ್ಕಾಗ ನೋಡ ಸಿಗುವ ಮುಗುಳ್ನಗು ಮನಸ್ಸಿಗೆ ಖುಷಿ ಕೊಡುತ್ತದೆ. ಯಾಂತ್ರಿಕ ಬದುಕಿನಲ್ಲಿ ಇಂಥ ಮಾಂತ್ರಿಕ ಕ್ಷಣಗಳು ನಮ್ಮೆದುರು ಬಂದಾಗ ಯಾರಿಗೆ ತಾನೇ ಸಂತಸವಾಗದಿರಲು ಸಾಧ್ಯ? ಅಮೆರಿಕೆಯ ಯುವತಿಯೊಬ್ಬಳು ತನ್ನ ಬ್ಲಾಗ್ ನಲ್ಲಿ ಹೀಗೆ ಬರೆದಿದ್ದಳು…

“ಪ್ರತೀ ತಿಂಗಳೂ ಅಥವಾ ಎರಡು ತಿಂಗಳಿಗೊಮ್ಮೆಯಾದರೂ ನಾನು ಕಾಫಿಗೆಂದು drive in ಕಾಫೀ ಶಾಪ್ ಗೆ ಹೋದರೆ ನನ್ನ ಹಿಂದಿರುವ ಕಾರಿನವರ ಕಾಫಿಯ ಹಣವನ್ನೂ ಕೊಟ್ಟು ಹೋಗುತ್ತೇನೆ. ಅದೇ ರೀತಿ ಪಟ್ಟಣ ಬಿತ್ತು ಹೊರಕ್ಕೆ ಹೋದಾಗಲೂ toll gate ಹಣವನ್ನು ನನ್ನ ಹಿಂದೆ ಇರುವ ಕಾರಿಗೂ ಸೇರಿಸಿ ಕೊಟ್ಟು ಮುಂದೆ ಹೋಗುತ್ತೇನೆ. ಇದು ನನಗೆ ಆನಂದವನ್ನು ಕೊಡುವ ಕೃತ್ಯಗಳು. ಒಮ್ಮೆ ಹೀಗೆಯೇ drive in ಕಾಫೀ ಶಾಪ್ ನಲ್ಲಿ ನನ್ನ ಹಿಂದಿನ ಕಾರಿನಲ್ಲಿದ್ದ ಮಹಿಳೆಯ ಕಾಫಿಗೂ ಹಣ ಕೊಟ್ಟು ಹೋದೆ. ಸ್ವಲ್ಪ ದೂರ ಹೋದ ನಂತರ ಆ ಮಹಿಳೆ ನನ್ನನ್ನು ಹಿಂಬಾಲಿಸುತ್ತಿದ್ದಳು. ಒಂದು ಕಡೆ ಸಿಗ್ನಲ್ ಹತ್ತಿರ ಕಾರನ್ನು ನಿಲ್ಲಿಸಿದಾಗ ಆಕೆ ತನ್ನ ಕಾರನ್ನು ಪಕ್ಕಕ್ಕೆ ನಿಲ್ಲಿಸಿ, ಕಿಟಕಿಯ ಗಾಜನ್ನು ಕೆಳಗಿಳಿಸಿ, ಕಾಫಿ ಕಪ್ಪನ್ನು ಎತ್ತಿ ಹಿಡಿದು ಹೇಳಿದಳು, ” ವಂದನೆಗಳು, ನಾನು ನಿರುದ್ಯೋಗಿ, ಈ ಕಾಫಿ ನನಗೆ ದುಬಾರಿಯಾದರೂ ಇಂದು ಕುಡಿಯುವ ಮನಸ್ಸಾಯಿತು. ಆದರೆ ಅದರ ಹಣವನ್ನು ನೀನು ಪಾವತಿಸಿದೆ” ಎಂದು ಆಕೆ ಹೇಳುವಾಗ ಆಕೆಯ ಕಣ್ಣುಗಳು ತುಂಬಿತ್ತು. ಈಕೆಯ ಮಾತು, ಮತ್ತು ಆಕೆಯ ಭಾವನೆಗಳನ್ನು ನೋಡಿ ನಾನು ತಬ್ಬಿಬ್ಬಾದೆ, ಇಷ್ಟೊಂದು ಚಿಕ್ಕ ಒಂದು ವಿಷಯ ಆಕೆಗೆ ಎಷ್ಟೊಂದು ಸಂತೋಷವನ್ನು ಕೊಟ್ಟಿತು, ಕೆಲಸ ಹುಡುಕಿ ನಡೆಯುತ್ತಿರುವ ಈಕೆಗೆ ಕೆಲಸ ಸಿಗಲಿ ಎಂದು ಹಾರೈಸುತ್ತಾ ನನ್ನ ಕಾರನ್ನು ಮುನ್ನಡೆಸಿದೆ”.

ಕಲ್ಲಾಗಿ ಸತ್ತು…ಜಲಾಲುದ್ದೀನ್ ರೂಮಿ ಕವನ

ಕಲ್ಲಾಗಿ ಸತ್ತು ಸಸಿಯಾಗಿ ಹುಟ್ಟಿದೆ ನಾ

ಸಸಿಯಾಗಿ ಸತ್ತು ಪ್ರಾಣಿಯಾಗಿ ಹುಟ್ಟಿದೆ ನಾ  

ಪ್ರಾಣಿಯಾಗಿ ಸತ್ತು ಮನುಜನಾಗಿ ಹುಟ್ಟಿದೆ ನಾ

ಭಯವಾದರೂ ಏಕೆ ನನಗೆ..

ಸಾವಿನಲ್ಲಿ ಕಳೆದುಕೊಂಡಿರುವಾಗ?

ಬೇಡವಾದೆವಾ ನಾವು ನೊಣಗಳಿಗೂ?

ಕಾಲವೊಂದಿತ್ತು, ಮಾವಿನ ಹಣ್ಣು, ದ್ರಾಕ್ಷಿ ಹೀಗೆ ತರಾವರಿ ಹಣ್ಣು ಹಂಪಲುಗಳ ಮೇಲೆ ನೊಣಗಳು ಮುತ್ತಿಗೆ ಹಾಕುತ್ತಿದವು. ಪುಷ್ಪದ ಮೇಲೆ ಹಾರುವ ಭ್ರಮರಗಳ ಹಾಗೆ. ಆದರೆ ಈಗ ನೊಣಗಳು ಹಣ್ಣುಗಳ ಮೂಸಿ ನೋಡಲೂ ತಯಾರಿಲ್ಲ, ಅವು ಮಣ್ಣಿನ ಮೇಲಾದರೂ ಕೂತಾವು ಆದರೆ ಹಣ್ಣುಗಳ ಮೇಲಲ್ಲ. ಕಾರಣ?ಬಹುಶಃ ನೊಣಗಳಿಗೂ ಸುಳಿವು ಸಿಕ್ಕಿರಬೇಕು ಈ ಹಣ್ಣುಗಳು ಸತ್ವವಿಲ್ಲದವು, ರಾಸಾಯನಿಕಗಳ ಸಹವಾಸದಿಂದ ತನ್ನತನವನ್ನು ಕಳೆದುಕೊಂಡವು ಎಂದು. ಮನುಷ್ಯನ ಅತಿಯಾಸೆ, ದುರ್ಬುದ್ಧಿಯ ಸುಳಿವು ನೊಣ ಗಳಿಗೂ ಅರಿವಾಯಿತು. ಆದರೆ ಲಜ್ಜೆಯಿಲ್ಲದ ಮನುಷ್ಯನಿಗೆ ನೊಣಗಳ ಬಹಿಷ್ಕಾರದಿಂದ ಆಗುವ ನಷ್ಟವಾದರೂ ಏನು?

ಮಾರುಕಟ್ಟೆಯಲ್ಲಿ ಕಾಣಸಿಗುವ ನಾನಾ, ತರಾವರಿ ಹಣ್ಣು ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣುಗಳಿಗೆ ಸಿಂಪಡಿಸುವ “ಕೀಟನಾಶಕ” ಗಳಿವೆ ಎಂದು ವರದಿ. ೨೮ ನಮೂನೆಯ ಅಪಾಯಕಾರೀ ಕೀಟ ನಾಶಕಗಳಿದ್ದು ಒಂದೊಂದು ಹಣ್ಣಿನ ಮೇಲೂ ಕನಿಷ್ಠ ಐದು ನಮೂನೆಯ ಕೀಟ ನಾಶಕಗಳ ಬಳಕೆಯಾಗುತ್ತದಂತೆ. ಐರೋಪ್ಯ ಸಂಸತ್ತು ಈ ವಿಷಯವನ್ನೂ ಬಯಲುಮಾಡಿತು. ಈ ೨೮ ನಮೂನೆಯ ಕೀಟನಾಶಕಗಳಲ್ಲಿ ೧೦ ಕ್ಯಾನ್ಸರ್ ರೋಗಕ್ಕೂ, ೩ ನರ ದೌರ್ಬಲ್ಯಗಳಂಥ ಕಾಯಿಲೆಗೂ ಕಾರಣವಂತೆ.   

ಈ ರೀತಿ “ಕೀಟನಾಶಕ” ಗ್ರಸ್ಥ ಹಣ್ಣು ಗಳನ್ನೂ, ತರಕಾರಿಗಳನ್ನೂ ಚೆನ್ನಾಗಿ ತೊಳೆದರೂ ಸಹ ಅವಕ್ಕೆ ಅಂಟಿದ ವಿಷ ರಾಸಾಯನಿಕಗಳು ಸಂಪೂರ್ಣವಾಗಿ ಹೋಗುವುದಿಲ್ಲವಂತೆ. ಅಂಥ ಆಹಾರ ಪದಾರ್ಥಗಳು ಕೆಳಗಿನವು:

Celery, Cherries, Peaches, Strawberries, Apples, Domestic blueberries, Nectarines, Sweet bell peppers, Spinach, Kale and collard greens,Potatoes, Imported grapes, Lettuce

ರಸಾಯನಿಕಗಳು ಕೆಳಗೆ ತೋರಿಸಿದ ಕೆಲವು ಹಣ್ಣುಗಳ ಮೇಲೆ ಮತ್ತು ತರಕಾರಿಗಳ ಮೇಲೆ ಇದ್ದರೂ ತೊಳೆದರೆ ಮಾಯವಾಗುವಂಥವು. ಅವುಗಳು ಕೆಳಗಿನಂತಿವೆ,

Onions, Avocados, Sweet corn, Pineapples, Mango,Sweet peas, Asparagus, Kiwi fruit, Cabbage, Eggplant (ಬದನೆ), Cantaloupe, Watermelon, Grapefruit, Sweet potatoes,Sweet onions 

ಹೀಗೆ ನಾವು, ನಮ್ಮ ಪುಟ್ಟ ಮಕ್ಕಳು ಸೇವಿಸುವ ಆಹಾರಕ್ಕೆ ರಾಸಾಯನಿಕಗಳು ಹಾಕಿದ ಲಗ್ಗೆ ಸಾಲದೆಂಬಂತೆ ಈ ವಿಷ ಪದಾರ್ಥಗಳನ್ನು ನಿರ್ಮೂಲನ ಮಾಡಲು ಮತ್ತೊಂದು ರಾಸಾಯನಿಕ. ಅದೇ ಲಿಕ್ವಿಡ್ ಸೋಪು. ಈ ಸೋಪಿನಿಂದ ಆಹಾರವನ್ನೂ ತೊಳೆದರೆ ರಾಸಾಯನಿಕ ಮುಕ್ತವಾಗುತ್ತದಂತೆ ನಮ್ಮ ಆಹಾರ. ಈ ಸೋಪಿನ ಮೇಲೆ ಎಷ್ಟು ಪದರಗಳ ರಾಸಾಯನಿಕಗಳು, ಕೀಟ ನಾಶಕಗಳು ಕುಳಿತಿವೆ ಎಂದು ಮಾತ್ರ ಕೇಳಬೇಡಿ.

ತರಕಾರಿ ಮತ್ತು ಹಣ್ಣು ಗಳನ್ನು ಹೇಗೆ ತೊಳೆಯ ಬೇಕೆಂಬುದರ ಬಗ್ಗೆ ತಿಳಿಯಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ.

http://www.associatedcontent.com/article/1183252/the_safe_way_to_clean_fresh_fruits.html?cat=6

word press ನಲ್ಲಿ ಹೊಸತು

be the first to like this post – ಈ ಪೋಸ್ಟನ್ನು ಇಷ್ಟಪಟ್ಟವರಲ್ಲಿ ಮೊದಲಿಗರಾಗಿರಿ – ಈ ಸಂದೇಶ ಈಗ wordpress ನ ಪ್ರತೀ ಬ್ಲಾಗ್ ಪೋಸ್ಟ್ ಅಡಿಯಲ್ಲಿ ಕಾಣ ಸಿಗುತ್ತದೆ. ಆದರೆ ಈ ವ್ಯವಸ್ಥೆಯನ್ನು ಕನ್ನಡ ಬ್ಲಾಗಿಗರು ದೊಡ್ಡ ರೀತಿಯಲ್ಲಿ ಬಳಸಿಕೊಳ್ಳುವುದು ಅನುಮಾನವೇ.       

ಪ್ರತಿಕ್ರಿಯೆ ಬರೆಯಲು ಸೋಮಾರಿತನ ತೋರಿಸುವವರಿಗೆ ಒಂದು ರೀತಿಯ ಸುಲಭ ವಿಧಾನ ಈ “ನನಗಿಷ್ಟವಾಯಿತು” ಎಂದು ಹೇಳುವ ಸೌಲಭ್ಯ. ಆಧುನಿಕ ಬದುಕಿನಲ್ಲಿ ಎಲ್ಲವೂ ಸಲೀಸಾಗಿರಬೇಕೆನ್ನುವ ಅಲಿಖಿತ ನಿಯಮ ಇದ್ದೇ ಇದೆಯಲ್ಲ. ಬನ್ನಿ, ಉಪಯೋಗಿಸೋಣ.

ಕವನ ವಾಚನ

ಬದುಕೇ, ನೀನಾರೆಂದು ನನಗೆ ತಿಳಿದಿಲ್ಲ

ಇಷ್ಟು ಮಾತ್ರ ಗೊತ್ತು ನಾವು ಅಗಲಲೇಬೇಕು

ಹೇಗೆ, ಯಾವಾಗ, ಎಲ್ಲಿ ನಾವು ಭೆಟ್ಟಿಯಾದೆವು

ನನಗದು ರಹಸ್ಯವೆ ಈಗಲೂ.

ಏಳು ಬೀಳುಗಳನ್ನು ಒಟ್ಟಿಗೆ ಕಂಡೆವು ನಾವು

ನಿಜಕ್ಕೂ ಕಷ್ಟಕರ ಮಿತ್ರರು ಅಗಲುವುದು

ಅಗಲಿಕೆ ಸಮಯ ನೀನೇ ನಿಶ್ಚಯಿಸಿಕೋ

ಹೇಳಬೇಡ ವಿದಾಯವ ಎಂದಿಗೂ

ಬದಲಿಗೆ ಹಾರೈಸುವೆಯಾ 

ಶುಭ ಮುಂಜಾನೆಯ..

R . Barbauld ರವರ ಕವಿತೆಯ ಅನುವಾದ