ಪಾಳು ಬಿದ್ದ ‘ಸುದ್ದಿ’ ಮನೆ

ಬೆಳಗಿನ ಪತ್ರಿಕೆ ಓದುವ ಅಭ್ಯಾಸವಿರುವರು ತಾವೇಕಾದರೂ ಈ ಪತ್ರಿಕೆ ಓದುವ ಹಾಳು ಚಟ ಅಂಟಿಸಿಕೊಂಡೆವೋ ಎಂದು ಮರುಗಿದರೆ ಅದರಲ್ಲಿ ಅವರ ತಪ್ಪಿಲ್ಲ. ಪತ್ರಿಕೆ ತೆರೆದಾಕ್ಷಣ ಧುತ್ತೆಂದು ಎದುರಾಗುವುದು ಹಿಂಸೆ, ಕ್ರೌರ್ಯದ ತಾಂಡವ. ಕೆಲಸವಿಲ್ಲದ ಬಡಗಿ ಮಗನ ಕುಂಡೆ ಕೆತ್ತಿದ್ನಂತೆ. ಆದರೆ ಇತ್ತೀಚೆಗೆ ದಿಲ್ಲಿಯ ೩೩ ವರ್ಷ ಪ್ರಾಯದ ನಿರುದ್ಯೋಗಿ ಯುವಕ ತನ್ನ ತಂದೆಯನ್ನೇ ಕೊಂದು ಬಿಟ್ಟ. ತಡೆಯಲು ಬಂದ ತಾಯಿಯನ್ನು ತದುಕಿದ. ಇದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾದ ಸುದ್ದಿ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಒಂದು ರೀತಿಯ “ಕ್ರೈಮ್ಸ್” ಆಫ್ ಇಂಡಿಯಾ ಪತ್ರಿಕೆಯಾಗಿ ಹೊರಹೊಮ್ಮುತ್ತಿರುವುದು ವಿಷಾದಕರ. ತನ್ನ ತಂದೆಯ ಕೊಲೆ ಮಾಡಿದ ಈ ವ್ಯಕ್ತಿ ಕೆಲ ತಿಂಗಳ ಹಿಂದೆಯೂ ತನ್ನ ಪಾಲಕರ ಮೇಲೆ ಹಲ್ಲೆ ಮಾಡಿದ್ದ, ಆದರೆ ಹೆತ್ತ ಕರುಳು ಈ ದುರುಳನನ್ನು ಕ್ಷಮಿಸಿ ಪೊಲೀಸರಿಂದ ಬಿಡಿಸಿ ಕೊಂಡು ಬಂದಿತ್ತು. ಬಂಧ ಮುಕ್ತನಾಗಿ ಹೊರಬಂದ ಈ ಯುವಕ ತನ್ನ ತಂದೆ ಪಾಲಿಗೆ ಯಮನಾಗಿ ಎರಗಿದ.

ಗುಜರಾತಿನಲ್ಲಿ ೮೫ ರ ಪ್ರಾಯದ ವೃದ್ಧ ಅರ್ಚಕರನ್ನು ಬಡಿದು ಕೊಂಡರು ಆಗಂತುಕರು. ಪ್ರಾಯಕ್ಕೆ ಬಂದ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿ ಓಡಿದ್ದಕ್ಕೆ ಹುಡಗಿಯ ತಂದೆ ಮತ್ತು ನೆಂಟರಿಷ್ಟರು ಕ್ರುದ್ಧರಾಗಿ ಹುಡುಗನ ತಾಯಿ ಮತ್ತು ಚಿಕ್ಕಮ್ಮನ ಮೇಲೆ ಅತ್ಯಾಚಾರ ವೆಸಗಿದರು. ಎಸಗಿದ ಕ್ರೌರ್ಯ ಸಾಲದೆಂಬಂತೆ ಈ ಅತ್ಯಾಚಾರಕ್ಕೆ ಹುಡುಗಿಯ ಕಡೆಯ ಮಹಿಳೆಯರ ಬೆಂಬಲವೂ ಇತ್ತು. ಕೆಲ ತಿಂಗಳುಗಳ ಹಿಂದೆ ಪರಾಟಾ ಗಾಗಿ ಹೊಡೆದಾಡಿ ಒಬ್ಬ ಸತ್ತ.

ತಮಿಳು ನಾಡಿನ ವಿದ್ಯಾಮಂತ್ರಿಯೊಬ್ಬ ೧೦ ನೆ ತರಗತಿ ಪರೀಕ್ಷೆಗೆ ಕೂತು  ಪರೀಕ್ಷೆ ಬರೆಯಲು ಬೇರೊಬ್ಬ ವ್ಯಕ್ತಿಯನ್ನು ಹೈರ್ ಮಾಡಿದ. ಶೌಚಾಲಯದಲ್ಲಿ ಶೌಚಕ್ಕೆ ಕೂತ ಒಬ್ಬ ಹೊರಬರಲು ಹೆಚ್ಚು ಸಮಯ ತೆಗೆದು ಕೊಂಡ ಎಂದು ತನ್ನ ಸರತಿಗಾಗಿ ಕಾಯುತ್ತಿದ್ದ ಮತೊಬ್ಬ ಅವನ ಮೇಲೆ ಹಲ್ಲೆ ನಡೆಸಿ ಕೊಂದು ಬಿಟ್ಟ.

ಚೆನ್ನೈ ನಗರದಲ್ಲಿ ಶಾಲಾ ಬಾಲಕನೊಬ್ಬ ತನ್ನ ಅದ್ಯಾಪಿಕೆಯ ಮೇಲೆ ಚೂರಿಯಿಂದ ಆಕ್ರಮಿಸಿ ಕೊಲೆ ಮಾಡಿದ. ಅದ್ಯಾಪಿಕೆ ತನ್ನನ್ನು ಟೀಕಿಸಿದಳು ಎನ್ನುವ ಕಾರಣಕ್ಕೆ ನಾನಾಕೆಯನ್ನು ಕೊಂದೆ ಎಂದ ಬಾಲಕ. ಪ್ರೇಮಿಗಳ ದಿನಾಚರಣೆಯಂದು ಇಬ್ಬರು ಬಾಲಕರು ಸೇರಿ ತಮ್ಮ ಗೆಳೆಯನ ಹತ್ಯೆ ಮಾಡಿದರು. ಹುಡುಗಿಯ ವಿಷಯದಲ್ಲಿ ಈ ಕೊಲೆ. ಹದಿಹರೆಯದ ಪ್ರೇಮ ಹುಚ್ಚು ಹೊಳೆ ಎನ್ನುವುದಕ್ಕೆ ಜ್ವಲಂತ ನಿದರ್ಶನ ಈ ಘಟನೆ.

ನೈತಿಕ ಮೌಲ್ಯಗಳಿಗೆ ಅತೀವ ಪ್ರಾಮುಖ್ಯತೆ ಕೊಡುವ ನಮ್ಮ ದೇಶದಲ್ಲಿ ಈ ತೆರನಾದ ಘಟನೆಗಳು ಜರುಗುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು? ನೈತಿಕ ಮೌಲ್ಯಗಳ ಬಗ್ಗೆ ಅಷ್ಟೇನೂ ಹೆಚ್ಚಾಗಿ ತಲೆ ಕೆಡಿಸಿ ಕೊಳ್ಳದ, ಮಾರ್ಗದರ್ಶನಕ್ಕಾಗಿ ನಮ್ಮ ಕಡೆ ನೋಡುತ್ತಿದ್ದ ಪಾಶ್ಚಾತ್ಯ ವಿಶ್ವಕ್ಕಿಂತ ನಾವು ಕಡೆಯಾಗುತ್ತಿದ್ದೆವೆಯೇ? ಹಿಂಸೆ, ಅತ್ಯಾಚಾರ ಎಸಗುವ ತಪ್ಪಿತಸ್ಥರಿಗೆ ತಡಮಾಡದೆ ತಕ್ಕ ಶಿಕ್ಷೆ ಪ್ರದಾನ ಮಾಡುತ್ತಿದ್ದೇವೆಯೇ? ದಿನ ನಿತ್ಯ ಈ ರೀತಿಯ ಸುದ್ದಿಗಳನ್ನು ಓದುವ, ತಪ್ಪಿತಸ್ಥರು ರಾಜಾರೋಷವಾಗಿ ಜಾಮೀನಿನ ಮೇಲೆ ಓಡಾಡುವುದನ್ನು ನೋಡುವ ನಮ್ಮ ಎಳೆಯರು ಹಿಂಸೆಯ, ದಾರಿ ತುಳಿದರೆ ಭವಿಷ್ಯದಲ್ಲಿ ಭಾರತದ ಕತೆ ಏನಾದೀತು?

  ಒಟ್ಟಿನಲ್ಲಿ ಸಮಾಜ ತುಳಿಯುತ್ತಿರುವ ಹಾದಿ ನಮ್ಮ ಪೂರ್ವಜರ ದಾರಿಗಿಂತ ವಿಭಿನ್ನವಾಗಿದೆ ಎಂದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಮನುಷ್ಯ ಸಂಯಮ, ತಾಳ್ಮೆಯ ಕಲೆಯನ್ನು ರೂಢಿಸಿ ಕೊಳ್ಳಬೇಕಿದೆ. ತಾಳ್ಮೆ, ಸಂಯಮ, ಬದುಕಿನ ಎಂಥಾ ಪರೀಕ್ಷೆಗಳನ್ನೂ ನಿಭಾಯಿಸಬಲ್ಲುದು ಎನ್ನುವುದಕ್ಕೆ ಧರ್ಮ ಗ್ರಂಥದ ಸೂಕ್ತ ಇಲ್ಲಿದೆ…

“ಕಾಲದಾಣೆ. ನಿಸ್ಸಂಶಯವಾಗಿಯೂ ಮನುಷ್ಯ ಹಾದಿ ತಪ್ಪಿದ್ದಾನೆ. ಸತ್ಕರ್ಮಗಳನ್ನು ಮಾಡುವವರೂ, ಸತ್ಯಕ್ಕಾಗಿ ಶ್ರಮಿಸುವವರೂ, ಸಂಯಮವನ್ನು ಪಾಲಿಸುವವರನ್ನು ಹೊರತುಪಡಿಸಿ”.    

 

ಬನ್ನಿ ನೋಡಿ ವಿಯೆಟ್ನಾಮ

 

 

ವಿಯೆಟ್ ನಾಮ್ ಎಂದ ಕೂಡಲೇ ಮನಃ ಪಟಲದಲ್ಲಿ ಮೂಡೋದು ಅಮೇರಿಕ. ಈ ರೀತಿ ಒಂದು ದೇಶವನ್ನು ಕಲ್ಪಿಸಿ ಕೊಂಡಾಗ ಮತ್ತೊಂದು ದೇಶ “ಬಯ್ ವನ್ ಗೆಟ್ ವನ್” ಥರ ತೇಲಿ ಬರೋದು ಬಹುಶಃ ವಿಯೆಟ್ ನಾಮ್-ಅಮೇರಿಕಾ ಜೋಡಿ ಮಾತ್ರ ಇರಬೇಕು.

“ವಿಯೆಟ್ ಕಾಂಗೋ” ಬಂಡು ಕೋರರ ಸದ್ದಡಗಿಸುತ್ತೇವೆ ಎಂದು ಬಂದ ಅಮೆರಿಕೆಗೆ ಅಲ್ಲಿ ಸಿಕ್ಕಿದ್ದು ಸಾವು, ಸೋಲು. ದಶಕಗಳಿಗೂ ಹೆಚ್ಚು ಕಾಲ ನಡೆದ ಈ ಕದನದಲ್ಲಿ ಅಮೆರಿಕೆಯ ೫೬,೦೦೦ ಸೈನಿಕರು ಹತರಾದರು. ಈ ಯುದ್ಧದಿಂದ ಅಮೇರಿಕಾ ಅದ್ಯಾವ ಪಾಠ ಕಲಿಯಿತು ಅಥವಾ ಕಲಿತಿಲ್ಲ ಎಂದು ನೋಡುವ ಕೆಲಸ ಅಲ್ಲ ಈ ನನ್ನ ಬ್ಲಾಗ್ ಬರಹ ಮಾಡುತ್ತಿರುವುದು. ‘ವರ್ಡ್ ಪ್ರೆಸ್’ ತಾಣದಲ್ಲಿ ‘ಫ್ರೆಶ್ಲಿ ಪ್ರೆಸ್ಡ್’ ಪುಟದಲ್ಲಿ ವಿಯೆಟ್ ನಾಮ್ ನ ಚಿತ್ರ ರೂಪದ ಪ್ರವಾಸ ಕಥನ ಬಂದಿತ್ತು. ಅದರಲ್ಲಿದ್ದ ಹಲವು ಚಿತ್ರಗಳಲ್ಲಿ ಮೂರು ಚಿತ್ರಗಳು (ಗ)ಮನ ಸೆಳೆದವು. ಅವನ್ನು ನಿಮ್ಮೊಂದಿಗೆ ಹಂಚಿ ಕೊಳ್ಳೋಣ ಎಂದು ತಂದಿದ್ದೇನೆ, ನೋಡಿ ಆನಂದಿಸಿ.

ಮೊದಲನೆಯ ಚಿತ್ರ, ಹಾನೋಯ್ ನಗರದಲ್ಲಿ ವ್ಯಾಯಾಮ ನಿರತ ಜನರದು. ವ್ಯಾಯಾಮ ಮುಗಿದ ನಂತರ ನಮ್ಮ ಬೆಂಗಳೂರಿನವರ ಥರ ಯಾವುದಾದರೂ ದರ್ಶಿನಿಗೆ ನುಗ್ಗಿ ಮತ್ತಷ್ಟು ಕೊಬ್ಬನ್ನು ದಯಪಾಲಿಸೋ ಉದ್ದಿನವಡೆ, ಮಸಾಲೆ ದೋಸೆ ಅಲ್ಲಿನ ಜನ ಮೆಲ್ಲುತ್ತಾರೋ ಗೊತ್ತಿಲ್ಲ.

ಎರಡನೇ ಚಿತ್ರ, ನಮ್ಮ ಬೆಂಗಳೂರಿನ ಬಡಾವಣೆ ಕಣ್ಣ ಮುಂದೆ ತರುವುದಿಲ್ಲವೇ? ಸ್ವಚ್ಛತೆ ಹೊರತು ಪಡಿಸಿ?

ಮೂರನೇ ಚಿತ್ರ, ಒಬ್ಬ ಪೋರಿಯದು. ತನ್ನ ದೇಶವನ್ನು ಆಕ್ರಮಿಸಿ, ತನ್ನ ತಾತ ಮುತ್ತಾತಂದಿರ ಬದುಕನ್ನು ನರಕವಾಗಿಸಿದರೇನು, ನನಗೆ ಅಮೆರಿಕೆಯ ಪ್ರಿನ್ಗ್ಲ್ಸ್ ಪೊಟೆಟೋ ಚಿಪ್ಸ್ ಇಷ್ಟ ಎನ್ನುವ ಫೋಸ್ ಕೊಡುತ್ತಿಲ್ಲವೇ ಈ ಪುಟ್ಟ ಹೆಣ್ಣು ಮಗು? ಈ ಚಿತ್ರವನ್ನು ನೋಡಿದ ಆಕೆಯ ತಾತ ಮುತ್ತಾತಂದಿರು ತಮ್ಮ ಸಮಾಧಿಗಳಲ್ಲಿ ನೋವಿನಿಂದ ಹೊರಳಾಡದೆ ಇರಲಾರರೇನೋ?

ಚಿತ್ರ ಕೃಪೆ: http://stoltzproject.com/

ಇಲ್ಲಯ್ತ್ ಒಂದ್ ತಮಾಷಿ

• ಒಬ್ಬ ತನ್ನ ಮಿತ್ರರಿಗೆ ರಾತ್ರಿಯಲ್ಲಿ ಔತಣ ನೀಡುವ ಕಾರ್ಯಕ್ರಮ ಇಟ್ಟು ಕೊಳ್ಳುತ್ತಾನೆ. ತನ್ನ ಮನೆಯಿಂದಲೇ ತನ್ನ ಹೆಂಡತಿಗೆ ಗೊತ್ತಾಗದಂತೆ ಕುರಿಯನ್ನು ಕದ್ದು ಕೊಂಡು ಹೋಗಿ ಸಖತ್ ಪಾರ್ಟಿ ಕೊಡುತ್ತಾನೆ ತನ್ನ ಮಿತ್ರರಿಗೆ.

ಪಾರ್ಟಿ ಮುಗಿಸಿ ಬೆಳಿಗ್ಗೆ ಮನೆಗೆ ಈತ ಬಂದಾಗ ಮನೆಯಲ್ಲಿ ಕುರಿ ಕಾಣುತ್ತದೆ. ಚಕಿತನಾದ ಈತ ತನ್ನ ಹೆಂಡತಿಯನ್ನ ಕೇಳುತ್ತಾನೆ, ಅಲ್ಲಾ, ಈ ಕುರಿ ಎಲ್ಲಿಂದ ಬಂತು? ಅದಕ್ಕೆ ಅವನ ಹೆಂಡತಿ ಹೇಳುತ್ತಾಳೆ……….,

ಕುರಿಗೆ ಹೊಡೆಯಿರಿ ಗೋಲಿ………., ಈಗ ಹೇಳಿ ರಾತ್ರಿ ಕಳ್ಳರ ರೀತಿ ಎಲ್ಲಿಗೆ ಕೊಂಡು ಹೋದಿರಿ ಮನೆ ನಾಯಿಯನ್ನು?

ಜೇಡನಿಗೂ ಇರಲೊಂದು ಸಂಕೋಲೆ

ಅಂತರ್ಜಾಲದ ಮೇಲೆ ಕಡಿವಾಣ ಹಾಕಲು ಸರಕಾರಗಳು ಯೋಚಿಸುವುದರ ವಿರುದ್ಧ ಅಂತರ್ಜಾಲದ ಮಾಹಿತಿ ಸಾಗರವಾದ ‘ವಿಕಿ ಪೀಡಿಯ’ ಸಮರವನ್ನು ಸಾರಿದ್ದು ತನ್ನ ಗೂಡಂಗಡಿಯನ್ನು ಒಂದು ದಿನದ ಕಾಲ ಬಂದ್ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದೆ. ಬಂದ್ ಮಾಡಿ ಪ್ರತಿಭಟನೆ ಮಾಡೋ ಕಲೆ ವಿಕಿ ಯಲ್ಲಿ ಕೆಲಸ ಮಾಡೋ ಯಾರಾದರೂ ಮಲಯಾಳೀ ಕಲಿಸಿರಬಹುದು. ಏಕೆಂದರೆ ಕೇರಳ “ಗಾಡ್ಸ್ ಓನ್ ಕಂಟ್ರಿ” ಮಾತ್ರ ಅಲ್ಲ, bandh’s own state ಸಹ ಹೌದು. ಇರಲಿ ಈಗ ಸರಕಾರಗಳ ಹಸ್ತ ಕ್ಷೇಪ ಅಥವಾ ಮೂಗು ತೂರಿಸುವಿಕೆಯ ಬಗ್ಗೆ ಮಾತನಾಡೋಣ.

ನಮ್ಮ ಕೇಂದ್ರದ ಘನ ಸರಕಾರದ ಉಸ್ತುವಾರಿ ವಹಿಸಿ ಕೊಂಡಿರುವ ಪಕ್ಷದ ನಾಯಕಿಯ ಮೇಲೆ ಬೇಡದ ಸುದ್ದಿ ಮಾಹಿತಿಗಳು ಅಂತರ್ಜಾಲದಲ್ಲಿ ಹೇರಳವಾಗಿ ಇರುವುದರ ಬಗ್ಗೆ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬ್ಬಲ್ ಸಿಟ್ಟಾಗಿದ್ದರು. ಸರಕಾರಕ್ಕೆ ಸಿಟ್ಟು ಬಂದರೆ ಸಿಟ್ಟನ್ನು ಶಮನ ಮಾಡಲು ಸುಲಭ ಉಪಾಯ ಹುಡುಕುತ್ತಾರೆ. ಅಂತರ್ಜಾಲವನ್ನೇ ನಿಯಂತ್ರಿಸಿ ಬಿಡೋದು. ಅರಬ್ ದೇಶಗಳಲ್ಲಿ ಕೆಲ ತಿಂಗಳುಗಳಿಂದ ನಡೆಯುತ್ತಿರುವ ಕ್ರಾಂತಿಗೂ ಅಂತರ್ಜಾಲ ಕಾರಣ ಎಂದು ಎಲ್ಲರಿಗೂ ಗೊತ್ತು, ಆಳುವವರಿಗೂ, ಆಳಿಸಿ ಕೊಳ್ಳುವವರಿಗೂ, ಆದರೂ ಇಲ್ಲಿ ಯಾರೂ ಅಂತರ್ಜಾಲವನ್ನು ನಿರೋಧಿಸುವ ಸಾಹಸ ಮಾಡಲಿಲ್ಲ, ಸಾಕಷ್ಟು despotic ಅಧಿಕಾರಗಳಿದ್ದೂ ಸಹ. ನಮ್ಮದು ಪ್ರಜಾತಂತ್ರ, (ಹೆಸರಿಗೆ ಮಾತ್ರ ಪ್ರಜಾ ತಂತ್ರ, ಏಕೆಂದರೆ ಪ್ರಜೆಗೆ ತಂತ್ರ ಏನೂ ಗೊತ್ತಿಲ್ಲ, ಗೊತ್ತಿರೋದೆಲ್ಲಾ ಪ್ರಭುಗಳಿಗೆ) ಆದರೂ ರಂಗೋಲಿ ನುಸುಳಿ ನಿರ್ಬಂಧ ಹೇರಲೇ ಬೇಕು ಎಂದರೆ ಐಡಿಯಾ ಹೊಳೆಯದೆ ಇರುತ್ತದೆಯೇ? ಏನೂ ಸಿಗದಿದ್ದರೂ ಭಯೋತ್ಪಾದನೆ ಎನ್ನೋ ಬೆದರುಬೊಂಬೆ ಸಾಕು, ಜನ ತಮ್ಮ ಎಲ್ಲಾ ಸ್ವಾತಂತ್ರ್ಯಗಳನ್ನೂ ಸರಕಾರದ ಕೈಗಳಿಗೆ ಒತ್ತೆ ಇಡಲು.  

ತಮ್ಮ ಸಮಯಸಾಧಕತನ, ಮೋಸ, ದಗಲಬಾಜಿ ಇವುಗಳು ಸಾಂಗವಾಗಿ ನಡೆದು ಕೊಂಡು ಹೋಗಲು ಅಂತರ್ಜಾಲದ ಬಾಲ ಕತ್ತರಿಸಲು ಸರಕಾರಗಳು ಹವಣಿಸಿದರೆ ನನ್ನಂಥ  “ಆಮ್ ಆದ್ಮಿ” (ಮಾವಿನ ಮನುಷ್ಯ ಅಲ್ಲ ರೀ, ಸಾಮಾನ್ಯ ಮನುಷ್ಯ) ಏನೂ ಮಾಡಲಾರ, ಕೆಳಗೆ ಕಾಣಿಸಿದ ಒಂದು “ಕೊಂಡಿ” ಯ ಭಿನ್ನಹ ಸರಕಾರಗಳಿಗೆ ಕೊಡಮಾಡುವುದರ ಹೊರತು,

 www.en.wikipedia.org/wiki/middlefinger

ಇವುರ್ಗೇನ್ ಲಾಬ ಅಂತೀನಿ

“ವರ್ಡ್ ಪ್ರೆಸ್” ಉಚಿತವಾಗಿ ಬ್ಲಾಗ್ ಆರಂಭಿಸಲು ಅನುವು ಮಾಡಿ ಕೊಡುವ ಒಂದು ಸುಂದರ ವೆಬ್ ವ್ಯವಸ್ಥೆ. ಹೊಸ ಹೊಸ ಫೀಚರ್ ಗಳಿಂದ ಕಂಗೊಳಿಸುವ ಈ ತಾಣ ಈಗ ಬರಹಗಾರರನ್ನು ಹುರಿದುಂಬಿಸಲು ಡ್ಯಾಶ್ ಬೋರ್ಡ್ ನ ಎಡ ಭಾಗದ ಕಾಲಂ ನಲ್ಲಿ ನಾವು ಪೋಸ್ಟ್ ಮಾಡಿದ ಬ್ಲಾಗ್ ಬಗ್ಗೆ ವಿವರ ನೀಡುತ್ತಿದೆ. ನನ್ನ ಡ್ಯಾಶ್ ಬೋರ್ಡ್ ನಲ್ಲಿ ಹೀಗಿತ್ತು, ೩೧೨ ಪೋಸ್ಟ್ಗಳು ಬಂದಿವೆ, ಮುಂದಿನ ಗುರಿ ೩೧೫ ಪೋಸ್ಟ್ಗಳು ಎಂದು. ಇದೊಂದು ರೀತಿಯ ಸ್ಫೂರ್ತಿದಾಯಕ ವ್ಯವಸ್ಥೆ ಅಲ್ಲವೇ? ಆದರೆ ಹೀಗೆ ಮಾಡೋದ್ರಿಂದ ಅವರಿಗೆ ಸಿಗುವ ಲಾಭವಾದರೂ ಏನು? ನಮ್ಮ ಬರಹ ಯಾವುದರ ಬಗ್ಗೆ ಇರುತ್ತದೆ ಎಂದು ಗೂಢಚರ್ಯೆ ನಡೆಸಿ ನಮ್ಮ ತಿಕ್ಕಲುತನವನ್ನು ಕಂಪೆನಿಗಳಿಗೆ ಮಾರುತ್ತಾರೋ ಏನೋ, ಅಲ್ಲವೇ? “There ain’t no such thing as a free lunch” ಅಥವಾ there is no free lunch in this world ಅಂತಾರೆ. ಬಿಟ್ಟಿ ಕೂಳು ಸಿಗಾಕ್ಕಿಲ್ಲ ಈ ಪರ್ಪಂಚದಾಗೆ, ಅಲ್ವರ?

ಸಚಿನ್ ಮತ್ತೊಬ್ಬ ಬ್ಯಾಟ್ಸ್ಮನ್, ಅಷ್ಟೇಯ

ಸಚಿನ್ ಮತ್ತೊಬ್ಬ ಬ್ಯಾಟ್ಸ್ ಮ್ಯಾನ್ ಅಷ್ಟೇ, ಎಂದ ಆಸ್ಟ್ರೇಲಿಯದ ಪೋರ. sachin is just another batsman. ಸತ್ಯವನ್ನೇ ನುಡಿದ ಆಸೀ ಬೌಲರ್ ‘ಪೀಟರ್ ಸಿಡ್ಲ್’. ಸಿಡಿಲಿನಂಥ ಮಾತು ಸಿಡ್ಲ್ ನಿಂದ. “ಸಚಿನ್ ಒಬ್ಬ ದೊಡ್ಡ ಮಿಕ. ಆತನನ್ನು ಔಟ್ ಮಾಡೋದೆಂದರೆ ಖುಷಿಯೇ. ಆದರೆ ನನಗೆ ಆತ ಮತ್ತೊಬ್ಬ ಬ್ಯಾಟ್ಸ್ಮನ್” ಎಂದು ಹೇಳಿದ ಸಿಡ್ಲ್ ಮಾತುಗಳಲ್ಲಿ ಸಚಿನ್ ಬಗ್ಗೆ ಅಭಿಮಾನವೂ, ಅದರೊಂದಿಗೇ ಸ್ಪರ್ದಾತ್ಮಕ ಕ್ರೀಡೆಯ ವಾಸ್ತವದ ಬಗೆಗಿನ ಸ್ಪಷ್ಟ ಕಲ್ಪನೆಯೂ ಕಾಣಬಹುದಿತ್ತು. ನಿಸ್ಸಂಶಯವಾಗಿಯೂ ಸಚಿನ್ ಒಬ್ಬ ಮಾಂತ್ರಿಕ, ಚಮತ್ಕಾರಿಕ ಬ್ಯಾಟ್ಸ್ಮನ್. ಆತನ ಹಲಗೆಯಿಂದ ಬಂದ ಓಟಗಳು ಶತ್ರು ಎನ್ನುವ ಭೂತದ ಬೆನ್ನು ಹತ್ತುತ್ತಿತ್ತು. ಬೌಂಡರಿಗಳ, ಸಿಕ್ಸರಗಳ ಸುರಿಮಳೆ. ಎಲ್ಲವೂ ಸರಿ. ಆತ ಅಪ್ಪಟ ಚಿನ್ನ, ಸ್ವಭಾವದಲ್ಲಿ. ಕೀರುತಿ, ಕಾಂಚಾಣ ತನ್ನ ಕಾಲ ಬುಡದಲ್ಲಿ ಬಿದ್ದಿದ್ದರೂ ಅಹಂ ಎನ್ನುವ ನೆರಳೂ ಸಹ ಅವನ ಬಳಿ ಸುಳಿಯಲಿಲ್ಲ. ಸಾಮಾನ್ಯವಾಗಿ ಜನರಿಗೆ ಯಶಸ್ಸು ಬಹು ಬೇಗ ತಲೆಗೆ ಏರಿ ಬಿಡುತ್ತದೆ. ಆದರೆ ಸಚಿನ್ ವಿಷಯದಲ್ಲಿ ಹಾಗಾಗಲಿಲ್ಲ. ತಾನು ಸೀದಾ ಸಾದಾ ಆಗಿರಲು ಬಯಸಿದ, ಹಾಗೆಯೇ ಪ್ರಪಂಚಕ್ಕೆ ತೋರಿಸಿದ ಕೂಡಾ. ಆದರೆ ಆದದ್ದೇನೆಂದರೆ ಯಶಸ್ಸು ಅವನ ತಲೆಗೆ ಹತ್ತದಿದ್ದರೂ ನಮ್ಮ ತಲೆಗಂತೂ ಖಂಡಿತಾ ಏರಿತು, ಯಶಸ್ಸಿನ ಮದ. ಸಚಿನ್ ನಂಥವನು ಹುಟ್ಟೇ ಇಲ್ಲ ಎಂದು ಒಬ್ಬ ಹೇಳಿದರೆ, ಮತ್ತೊಬ್ಬ ಹೇಳಿದ ಸಚಿನ್ ನಂಥವರು ಹುಟ್ಟೋದಿಲ್ಲ ಎಂದು. ಸಚಿನ್ ನನ್ನು ಸೃಷ್ಟಿಸಿದ ದೇವರಿಗೆ ನೇರವಾದ ಸವಾಲು. ಸಚಿನ್ ಡೋನಾಲ್ಡ್ ಬ್ರಾಡ್ಮನ್ ಎಂದು ಒಬ್ಬ ಉಲಿದರೆ, ಮತ್ತೊಬ್ಬನಿಗೆ ಬ್ರಾಡ್ಮನ್ ಗಿಂತ ಆತ ಮಿಗಿಲು. ಕೊನೆಗೆ ಒಬ್ಬ ಹೇಳಿಯೇ ಬಿಟ್ಟ. ಹೇಳಬಾರದ್ದನ್ನ. ಏನಂತ……..? ಸಚಿನ್ ಈಸ್ ಗಾಡ್………ಒಹ್ ಮೈ ಗ್ಗಾಡ್ !  ವಿವೇಚನೆಯ ಶವಪೆಟ್ಟಿಗೆಗೆ ಕಟ್ಟ ಕಡೆಯ ಮೊಳೆ. ಜನರನ್ನು ಅಟ್ಟಕ್ಕೆ ಏರಿಸುವುದು ಅಥವಾ ಚಟ್ಟಕ್ಕೆ ಏರಿಸುವುದು ಹಳೆಯ ಚಾಳಿ. ಪ್ರದರ್ಶನ ಉತ್ತಮ, ಅಮೊಘವಾದರೆ ಹೊಗಳಿಕೆ ಕಿವಿ ಗಡಚ್ಚಿಕ್ಕುವ ಹಾಗೆ. ಯಾವುದಾದರೂ ಕಾರಣಕ್ಕೆ ಸ್ವಲ್ಪ ಎಡವಟ್ಟಾಯಿತೋ ಅಂತ್ಯ ಸಂಸ್ಕಾರ ಶುರು.

ಸಚಿನ್ ಶತಕದಿಂದ ಭಾರತಕ್ಕೆ ಆದ ಲಾಭ ನಷ್ಟಗಳನ್ನು ನೋಡಿದರೆ ಬ್ಯಾಲನ್ಸ್ ಡೆಬಿಟ್ ಆಗಿ ಕಾಣುತ್ತದೆ. hasty eighties, nervous nineties ದಾಟಿಕೊಂಡು ಮುಟ್ಟುವ ಯಾವುದೇ ಶತಕ ತಂಡದ ನೆರವಿಗೆ ಬರುವುದು ಸ್ವಲ್ಪ ಕಡಿಮೆಯೇ ಎನ್ನಬಹುದು. ಸ್ಕೋರ್ ಬೋರ್ಡ್ ಕಡೆ ಕಣ್ಣು ನೆಡದೆ ಕೈ ಹೊಸಕಿಕೊಳ್ಳುತ್ತಾ ಕಾತುರದಿಂದ ವಿಜಯದ ನಿರೀಕ್ಷೆ ಅಥವಾ ಸೋಲಿನ ದವಡೆಯಿಂದ ಪಾರಾಗಲು ಪ್ರಾರ್ಥಿಸುವವರನ್ನು ಗಮನದಲ್ಲಿಟ್ಟು ಕೊಂಡು ಆಡುವ ಆಟವೇ ಬೇರೆ. ಸಚಿನ್ ಎಲ್ಲಾ ಸಮಯವೂ ಸ್ವಾರ್ಥದಿಂದ ಆಡಿದ ಎಂದಲ್ಲ ನನ್ನ ಅಭಿಪ್ರಾಯ. ಸೋಲು ಗೆಲುವಿನ ದಾಖಲೆಗಳನ್ನು ನೋಡಿದಾಗ ಕಂಪೆನಿಗೆ ನಷ್ಟ, ನೌಕರನಿಗೆ ಲಾಭದ ರೀತಿಯ ಲೆಕ್ಕಾಚಾರ ಗೋಚರಿಸುತ್ತದೆ.

ಸಚಿನ್ ನ ನೂರನೇ ಶತಕಕ್ಕಾಗಿ ದೇಶ ಚಾತಕ ಪಕ್ಷಿ. ಆಸ್ಟ್ರೇಲಿಯಾದ ವಿರುದ್ಧದ ಮೊದಲ ಟೆಸ್ಟಿನಲ್ಲಿ ಭಾರತದ ಸೋಲು. ಬೆನ್ನಟ್ಟಲು ಇದ್ದಿದ್ದು ಮುನ್ನೂರಕ್ಕೂ ಕಡಿಮೆ ರನ್ನುಗಳು. ಬ್ಯಾಟಿಂಗ್ ಆಳ ನೋಡಿದರೆ ಅಟ್ಲಾಂಟಿಕ್ ಸಾಗರದ ಥರ. ಅಗಾಧ, ಆಳ. ಈ ಅಗಾಧ, ಆಳ, ಕಾಗದದ ಮೇಲೆ ಮಾತ್ರ ಎಂದು ನಮಗೆ ಅರಿವಾಗೋದು ತಂಡ ಮೈದಾನ ಪ್ರವೇಶಿಸಿದಾಗಲೇ. ಪೇಪರ್ ಟೈಗರ್ ಗಳು ಪೇಪರ್ ಮೇಲೆ ಆಡಬೇಕು ಕ್ರಿಕೆಟನ್ನ. ‘ಸುಡೋಕೋ’ ರೀತಿ. ಅದು ಬಿಟ್ಟು ನಮ್ಮಲ್ಲಿ ದಾಖಲೆಗಳ ಮೇಲೆ ದಾಖಲೆ ಇದೆ ಎಂದು ಮೈದಾನಕ್ಕೆ ಇಳಿದರೆ, ಅದೂ ಆಸ್ಟ್ರೇಲಿಯಾದ ರೀತಿಯ ಅತ್ಯಂತ ವೃತ್ತಿಪರ ತಂಡದ ಎದುರು ನಿಂತರೆ, ಸೋತು ಸುಣ್ಣವಾಗದೆ ಬೇರೆ ದಾರಿಯಿಲ್ಲ. ಆಸೀ ಗಳು ಮೈದಾನದ ಮೇಲೆ hungry wolves. ಹರಿದು ತಿನ್ನೋ ತೋಳಗಳು. ಒಂದಿಂಚು ಸ್ಥಳಾವಕಾಶ ನೀಡಿದಿರೋ, ಮೈಲುಗಟ್ಟಲೆ ಎಳೆದು ಬಿಡುತ್ತಾರೆ. ತಂಡ ಬಿಡಿಯಾಗಿ ಆಡೋದಿಲ್ಲ. ಹನ್ನೊಂದೂ ಜನ “ಏಕಲವ್ಯ” ರಾಗಿ ಆಡುತ್ತಾರೆ, ಛಲದಿಂದ. ಆದರೆ ನಮ್ಮ ಗಮನ? ಸಚಿನ್ ಈ ಸಲ ಹೊಡೀಬಹುದಾ ಸೆಂಚುರಿ? ಇಲ್ಲಿಗೆ ಸೀಮಿತ ನಮ್ಮ ಆಶಯ, ಆಕಾಂಕ್ಷೆ. ದೇಶದ ಈ ಒತ್ತಡ ಪಾಪ ಗಿಡ್ಡ ಸಚಿನ್ ಮೇಲೆ ಅಗಾಧವಾಯಿತು. ನೂರನೇ ಶತಕ ಮರೀಚಿಕೆಯಾಗಿಯೇ ಕಾಡಲು ತೊಡಗಿತು. ಒಂದು ಉಪಾಯ ನಮ್ಮ BCCI ಗೆ ಹೊಳೆಯಲಿಲ್ಲ. ಸಚಿನ್ ನಿಂದ ಆ elusive century ಸಾಕಾರಗೊಳಿಸಲೇ ಬೇಕು ಎಂದಾಗಿದ್ದರೆ, ತಂಡವನ್ನು ಆಸ್ಟ್ರೇಲಿಯಾಗೆ ಕಳಿಸೋ ಬದಲು ಕೆನಡಾ ದೇಶಕ್ಕೋ ಅಥವಾ ಮತ್ಯಾವುದಾದರೂ mediocre ತಂಡ ಇರೋ ದೇಶಕ್ಕೋ (ಪಾಕಿಸ್ತಾನ?) ಕಳಿಸಿ ಅಲ್ಲಿ ತಮ್ಮ ಅಜೆಂಡಾ ಕಾರ್ಯಗತವಾದ ಕೂಡಲೇ ಟಿಕೆಟ್ ಬುಕ್ ಮಾಡಿಸಬಹುದಿತ್ತು ಕಾಂಗರೂ ನಾಡಿಗೆ. ಹಾಗೆ ಆಗಲಿಲ್ಲ, ಸಚಿನ ಶತಕ ಬಾರಿಸಲಿಲ್ಲ.

ಎರಡನೇ ಟೆಸ್ಟ್ ಶೀಘ್ರದಲ್ಲೇ ಶುರುವಾಗುತ್ತದೆ. ಮತ್ತೊಮೆ ಸೊಪ್ಪು ಮಾರುವ ಮಲ್ಲಮ್ಮ ನಿಂದ ಹಿಡಿದು ದೊಡ್ಡ ದೊಡ್ಡ ಕಂಪೆನಿಗಳ CEO ಗಳ ತನಕ, ಎಲ್ಲರ ಗಮನ ಮತ್ತದೇ ಗುರಿಯ ಕಡೆ. ಮರೀಚಿಕೆಗೆ ಈ ಬಾರಿ ಬಾಣ ನಾಟುತ್ತದೋ, ಇಲ್ಲಾ ಆ ಬಾಣ ನಿಟ್ಟುಸಿರಾಗಿ ನಮ್ಮ ಕಡೆಯೇ ಮರಳುತ್ತದೋ, ಕಾದು ನೋಡೋಣ.

ಕುಹೂ ಕುಹೂ ಕೋಗಿಲೆ ಮತ್ತು ಮೆದುಳಿಲ್ಲದ ಮೀನು

ಕಾಂಗೋ ದೇಶದ ನಿತ್ಯಹರಿದ್ವರ್ಣ (rain forest) ಕಾಡಿನಲ್ಲಿ ಕುಹೂ ಕುಹೂ ಎಂದು ಹಾಡುತ್ತಾ ತಿಂದುಂಡು ಸುಖವಾಗಿರುವ ಕೋಗಿಲೆಗಳ ಆಶ್ಚರ್ಯದಾಯಕ ಪರ್ಯಟನದ ಬಗೆಗಿನ ಲೇಖನಕ್ಕೆ ಕೆಳಗೆ ಕೊಟ್ಟ ಲಿಂಕನ್ನು ಕ್ಲಿಕ್ಕಿಸಿ ಓದಿ. ಪರಿಸರ, ಪಕ್ಷಿಪ್ರಿಯರಾದ ಓದುಗರು ಖಂಡಿತ ಇದನ್ನು ಓದಿ ಕುಹೂ ಕುಹೂ ಎನ್ನದಿರಲಾರರು. ಬ್ರಿಟನ್ ದೇಶ ಬಿಟ್ಟ ಐದು ಕೋಗಿಲೆಗಳು – ಕ್ಲೆಮೆಂಟ್, ಮಾರ್ಟಿನ್, ಲಿಸ್ಟರ್, ಕ್ಯಾಸ್ಪರ್ ಮತ್ತು ಕ್ರಿಸ್ ಇವರ ಹೆಸರುಗಳು – ದೂರದ ಕಾಂಗೋ ದೇಶಕ್ಕೆ ತಲುಪಿದ್ದನ್ನು extraordinary rendezvous ಎಂದು ಬಣ್ಣಿಸಿ ಪ್ರಕಟವಾದ ಲೇಖನ ಇಂಗ್ಲೆಂಡಿನ independent ಪತ್ರಿಕೆಯಲ್ಲಿ ಕಾಣಲು ಸಿಕ್ಕಿತು. ಕಿರುರೂಪದ ಉಪಗ್ರಹ ಪ್ರಸಾರ ಯಂತ್ರ ( miniature satellite transmitter ) ಗಳನ್ನು ಕಾಲಿಗೆ ಕಟ್ಟಿಸಿಕೊಂಡು ಹಾರಿದ ಈ ಕೋಗಿಲೆಗಳ ಪ್ರಯಾಣ ನಿಜಕ್ಕೂ ವಿಸ್ಮಯಕಾರಿಯೇ. ಪ್ರಕೃತಿ ಮತ್ತು ಅದರ ಹೆಮ್ಮೆಯ ಮಕ್ಕಳು (ಮನುಷ್ಯರನ್ನು ಬಿಟ್ಟು) ಒಂದು ವಿಸ್ಮಯವೇ ಸರಿ ಅಲ್ಲವೇ? ವಸಂತ ಋತುವಿನ ಆಗಮನವನ್ನು ನಮಗೆ ಸಂಭ್ರಮದಿಂದ ಘೋಷಿಸುವ ಈ ಕೋಗಿಲೆಗಳ ಸುದೀರ್ಘ ಪಯಣ ಮತ್ತು ವಲಸೆ ದಿನೇ ದಿನೇ ಸಂಖ್ಯೆಯಲ್ಲಿ ಕ್ಷೀಣಿಸುತ್ತಿರುವ ಪಕ್ಷಿ ಸಮುದಾಯದ ಕುರಿತು ಮಾಹಿತಿ ನೀಡುತ್ತದಂತೆ. http://www.independent.co.uk/environment/nature/extraordinary-rendezvous-of-the-migrating-cuckoos-6281525.html

ಇತ್ತೀಚೆಗೆ ಅಪೂರ್ವ ಜಾತಿಯ ಮೀನಿನ ಪತ್ತೆ ಹಚ್ಚಿದ್ದಾರೆ ವಿಜ್ಞಾನಿಗಳು. ಈ ಮೀನಿಗೆ ಮೆದುಳೂ ಇಲ್ಲ, ಮುಖವೂ ಇಲ್ಲ. ಈ brainless and faceless ಮೀನಿನ ಜೊತೆ ಇನ್ನೂ ೧೫ ಜಾತಿಗಳ ಮೀನುಗಳನ್ನೂ ಕಂಡು ಹಿಡಿದ್ದಾರೆ. ಸಮುದ್ರದಲ್ಲಿ ಸಿಕ್ಕ ಮೆದುಳೂ ಇಲ್ಲದ, ಮುಖವೂ ಇಲ್ಲದ ಜಾತಿಯ ಜೀವಿ ಭೂಮಿಯ ಮೇಲೂ ನಡೆದಾಡುತ್ತಿವೆ ಅಲ್ಲವೇ? ರಾಜಕಾರಣಿಗಳಾಗಿ. ಈ ಪತ್ತೆ ಹಚ್ಚುವಿಕೆ ಕುರಿತ ಲಿಂಕು ಕೆಳಗಿದೆ ನೋಡಿ. http://www.independent.co.uk/environment/nature/rare-species-discovered-under-water-6282617.html

೨೦೧೧… ಹೀಗಿತ್ತು !

ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್ ಬಿಡುತ್ತೇನೆ, ವಾಕ್ ಮಾಡುತ್ತೇನೆ ಎನ್ನುವ ನಿರ್ಣಯಗಳ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು ಸಂದು ಹೋದ ವರ್ಷ ನಮಗೆ ನೀಡಿದ ಹರ್ಷ, ಭರವಸೆ ಮತ್ತು ದುಃಖ ದುಮ್ಮಾನಗಳ ಕುರಿತು ಸ್ವಲ್ಪ ಓದಿ.

ಈ ವರ್ಷ ಸರ್ವಾಧಿಕಾರದ ಉಸಿರು ಗಟ್ಟಿಸುವ ವಾತಾವರಣದಿಂದ ಕೆಲವು ದೇಶಗಳ ಜನರಿಗೆ ಮುಕ್ತಿ ಸಿಕ್ಕಿದರೆ ತಮ್ಮ ಬದುಕಿನಲ್ಲಿ ಅಮೋಘವಾದದ್ದನ್ನು ಸಾಧಿಸಿ ಸಾರ್ಥಕ ಬದುಕು ಸಾಗಿಸಿ ಕಣ್ಮರೆಯಾದ ಚೇತನಗಳು ಹಲವು.

ಉತ್ತರ ಆಫ್ರಿಕಾದ ಪುಟ್ಟ ದೇಶ ಟುನೀಸಿಯಾದಲ್ಲಿ ಅರಬ್ ಕ್ರಾಂತಿ. “ಅರಬ್ ವಸಂತ” ಎಂದು ಬಣ್ಣಿಸಲ್ಪಟ್ಟ ಈ ಕ್ರಾಂತಿ ೨೩ ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಜೈನುಲ್ ಆಬಿದೀನ್ ರ ಕುರ್ಚಿ ಪಲ್ಲಟ ಮಾಡಿತು. ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿ ಜನಸಾಮಾನ್ಯರನ್ನು ಬಾಧಿಸಿತು. ಲಂಚಗುಳಿತನದಿಂದ ಬೇಸತ್ತ ನಿರೋದ್ಯೋಗಿ ಯುವಕ “ಮುಹಮ್ಮದ್ ಬೂ ಅಜೀಜಿ” ಆತ್ಮಹತ್ಯೆ ಮಾಡಿಕೊಂಡಾಗ ಬಂತು ಸರಕಾರಕ್ಕೆ ಸಂಚಕಾರ. ಜನ ಸಿಡಿದೆದ್ದರು, ಪ್ರದರ್ಶನಗಳು ನಡೆದವು. ಅಲ್ಲಿನ ಅಧ್ಯಕ್ಷನ ಯಾವ ಸಾಂತ್ವನದ ಮಾತುಗಳೂ ಜನರ ಆಕ್ರೋಶ ತಣಿಸಲು ವಿಫಲವಾದವು. ದಾರಿಗಾಣದೆ ಆಬಿದೀನ್ ದೇಶ ಬಿಟ್ಟು ಓಡಿದ. ಟುನೀಸಿಯಾ ಸರಕಾರ ಪತನವಾಗುತ್ತಿದಂತೆಯೇ ಈಜಿಪ್ಟ್, ಲಿಬಿಯಾ, ಸಿರಿಯಾ, ಯೆಮೆನ್, ಬಹರೇನ್, ದೇಶಗಳಿಗೂ ಕಾಲಿಟ್ಟಿತು ಅರಬ್ ವಸಂತ. ಮೂರು ದಶಕಗಳ ಕಾಲ ಈಜಿಪ್ಟ್ ದೇಶವನ್ನು ಆಳಿದ ಮುಬಾರಕ್ ಕೊನೆಗೂ ಅಧಿಕಾರ ತ್ಯಜಿಸಿದ. ರಕ್ತದ ಕೊನೇ ತೊಟ್ಟಿನ ವರೆಗೂ ಹೋರಾಡುವೆ ಎಂದ ಬಲಿಷ್ಠ ಮುಅಮ್ಮರ್  ಗದ್ದಾಫಿ ಕ್ರಾಂತಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಹತನಾದ. ಲಿಬ್ಯಾ ವಸಂತದ ಸಂಭ್ರಮದ ಕುಣಿತ ಕಂಡಿತು. ಅರಬರಿಗೆ ಸ್ವಾತಂತ್ರ್ಯ ಎಂದರೇನು ಎಂದು ಗೊತ್ತಿಲ್ಲ ಎಂದು ಮೂಗು ಮುರಿಯುತ್ತಿದ್ದ ವಿಶ್ವ ಅರಬರ ಸ್ವಾತಂತ್ರ್ಯಕ್ಕಾಗಿನ ತುಡಿತ ನೋಡಿ ಮೂಗಿನ ಮೇಲೆ ಬೆರಳಿಟ್ಟು ಕೊಂಡಿತು.

ಅರಬ್ ದೇಶಗಳ ಈ ರಾಜಕೀಯ ವಿದ್ಯಮಾನಗಳಿಗೆ ಒತ್ತು ಕೊಟ್ಟ, ಕುಮ್ಮಕ್ಕು ನೀಡಿದ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಯೂ ಟ್ಯೂಬ್ ಗಳು ರಾರಾಜಿಸಿದವು. ಸಾಮಾನ್ಯವಾಗಿ ತಂತ್ರಜ್ಞಾನ ಉಳ್ಳವರ ಸೊತ್ತು. ಆದರೆ ಸಾಮಾಜಿಕ ತಾಣಗಳು ಈ ಅಸಮಾನತೆಯನ್ನು ಅಮೋಘವಾಗಿ ಹೋಗಲಾಡಿಸಿದವು.  ಕಂಪ್ಯೂಟರ್ ತಂತ್ರಜ್ಞಾನ ಜನರನ್ನು ದಾಸ್ಯದ ಸಂಕೋಲೆಯಿಂದ ಹೊರಬರಲು ದೊಡ್ಡ ರೀತಿಯಲ್ಲಿ ಸಹಾಯ ಮಾಡಿತು.  

ಎರಡನೇ ವಿಶ್ವ ಯುದ್ಧದಲ್ಲಿ ಅಮೆರಿಕೆಯ ಕೆಂಗಣ್ಣಿಗೆ ಸಿಕ್ಕು ನುಚ್ಚು ನೂರಾದ ಜಪಾನ್ ಪ್ರಕೃತಿಯ ವಿಕೋಪಕ್ಕೆ ತುತ್ತಾಯಿತು ಮಾರ್ಚ್ ೨೦೧೧ ರಲ್ಲಿ. ತ್ಸುನಾಮಿ ಅಲೆಗಳು ಜಪಾನ್ ದ್ವೀಪವನ್ನು ನಿರ್ದಯವಾಗಿ ಗುಡಿಸಿ ಹಾಕಿತು. ೧೬,೦೦೦ ಕ್ಕೂ ಮಿಕ್ಕು ಜನ ಸತ್ತರು. ನಿಸರ್ಗ ತಮ್ಮ ಮೇಲೆ ಈ ರೀತಿ ಎರಗಿ ಬಂದರೂ ಧೃತಿಗೆಡದೆ, ದುರಾದೃಷ್ಟವನ್ನು ಶಪಿಸದೆ, ಜಪಾನೀಯರು ತಾಳ್ಮೆಯಿಂದ ಅಳಿದುಳಿದುದನ್ನು ಹೆಕ್ಕಿ ತಮ್ಮ ಬದುಕಿನ ಮರುನಿರ್ಮಾಣದ ಕಡೆ ಗಮನ ನೆಟ್ಟರು.   

ಮುಪ್ಪಿನೊಂದಿಗೆ ಶೃಂಗಾರ ಚಟುವಟಿಗಳು ಸಾಮಾನ್ಯವಾಗಿ ಕೊನೆಯಾಗುತ್ತವೆ ಅಥವಾ ಹಂಪ್ ಗಳನ್ನು ದಾಟುವ ವಾಹನಗಳಂತೆ ನಿಧಾನವಾಗುತ್ತವೆ. ಆದರೆ ಚಿರ ರಸಿಕ ಇಟಲಿಯ ಪ್ರಧಾನಿ ಸಿಲ್ವಿಯೋ ಬೆರ್ಲಸ್ಕೊನಿ ಯ ಹಾರ್ಮೋನುಗಳು ಯುವಜನರನ್ನು ನಾಚಿಸುತ್ತವೆ. ಉರುಳುವ ವರ್ಷಗಳು ಪಂಚಾಂಗಕ್ಕೆ ಮಾತ್ರ ಸೀಮಿತ, ತನ್ನ ಲೈಂಗಿಕ ಚಪಲಕ್ಕಲ್ಲ ಎಂದು ಹದಿ ಹರೆಯದ ಪೋರಿಯರೊಂದಿಗೆ ಸಲ್ಲಾಪ ಆಡಿ ಕಷ್ಟಕ್ಕೆ ಸಿಕ್ಕಿಕೊಂಡ ಪ್ರಧಾನಿ. ಲೈಂಗಿಕ ಹಗರಣಕ್ಕೆ ಬಲಿಯಾಗದೆ ಅಚ್ಚರಿದಾಯಕವಾಗಿ ಬದುಕುಳಿದ ಬೆರ್ಲೋ ಅಧಿಕಾರ ತ್ಯಜಿಸಿದ್ದು ಆರ್ಥಿಕ ಸಮಸ್ಯೆ ಕಾರಣ.

ಏಪ್ರಿಲ್ ತಿಂಗಳ ಮೊದಲ ದಿನ ಮೂರ್ಖರ ದಿನ. ಕೇಂದ್ರ ಸರಕಾರ ಭ್ರಷ್ಟಾಚಾರದ ಮೂಲಕ ಲಂಗು ಲಗಾಮಿಲ್ಲದೆ ದೇಶವನ್ನು ಒಂದು ಮೂರ್ಖರ ಸಂತೆ ರೀತಿ ನಡೆಸಿ ಕೊಳ್ಳಲು ತೊಡಗಿದಾಗ ಸಿಡಿದೆದ್ದರು “ಇಳಿ ಚೇತನ” ಅಣ್ಣಾ ಹಜಾರೆ. ತನ್ನ ಸ್ವ ಪ್ರಯತ್ನದಿಂದ ಮಹಾರಾಷ್ಟ್ರದ ಹಳ್ಳಿಯೊಂದನ್ನು ಅಭಿವೃದ್ಧಿ ಗೊಳಿಸಿದ ಈ ಸ್ವಾತಂತ್ರ್ಯ ಹೋರಾಟಗಾರ ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೂ ಆವರಿಸಿಕೊಂಡ ಲಂಚಗುಳಿತನವನ್ನು ಇಲ್ಲವಾಗಿಸಲು ಉಪವಾಸ ಸತ್ಯಾಗ್ರಹ ಶುರು ಮಾಡಿದರು. ಐದು ಸಾವಿರ ಮೈಲು ದೂರದಿಂದ ವ್ಯಾಪಾರಕ್ಕೆ ಎಂದು ಬಂದು ನಮ್ಮನ್ನು ಒದ್ದು, ದಬ್ಬಾಳಿಕೆಯಿಂದ ಆಡಳಿತ ನಡೆಸಿದ ಪರದೇಸೀ ಬ್ರಿಟಿಷರೂ ಉಪವಾಸ ಸತ್ಯಾಗ್ರಹಕ್ಕೆ ಮಣಿದರು. ಆದರೆ ನಮ್ಮ ದೇಸೀ ನಾಯಕರು ಜಪ್ಪಯ್ಯ ಎನ್ನಲಿಲ್ಲ. ಬ್ರಿಟಿಷರಿಗಿದ್ದ ನಾಚಿಕೆ, ಔದಾರ್ಯ ಇವ್ಯಾವುವೂ ನಮ್ಮ ನಾಯಕರಲ್ಲಿ ಕಾಣದಾಯಿತು. ಅಣ್ಣಾರವರ ಆಂದೋಲನವನ್ನು  ಮೊದ ಮೊದಲು ಅವಗಣನೆ ಮಾಡಿ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಭಯ ಬಿದ್ದು ಲೋಕಪಾಲ್ ಮಸೂದೆಗೆ ಒಪ್ಪುವ ನಾಟಕ ಆಡಿ ಅಣ್ಣಾ ರಿಗೆ ಸೊಗಸಾಗಿ ನಾಮ ಬಳಿದರು. ಅದೂ ಸಾಲದು ಎಂಬಂತೆ ಅಣ್ಣಾ ಜೊತೆ ವೇದಿಕೆಯಲ್ಲಿರುವವರ ಪೂರ್ವಾಪರ ಚರಿತ್ರೆ ತೆಗೆದು ಅಣ್ಣಾ ದೇಶ ಎಣಿಸಿದ ಮುಗ್ಧ ಅಣ್ಣಾ ಅಲ್ಲ, ಆರೆಸ್ಸೆಸ್ ಏಜೆಂಟ್ ಎಂದು ಪ್ರಚಾರ ಮಾಡಿ ಲಂಚದ ವಿರುದ್ಧದ ಅಂದೋಲನದ ದಿಕ್ಕನ್ನೇ ದಿಕ್ಕಾ ಪಾಲು ಮಾಡಿತು ಕೇಂದ್ರ ಸರಕಾರ. ತುನೀಸಿಯಾದ ಬೂ ಅಜೀಜಿ ಯ ಆತ್ಮ ಹತ್ಯೆ ಮತ್ತು ಜನರ ಪ್ರತಿಭಟನೆಗೆ ಅಲ್ಲಿನ ಅಧ್ಯಕ್ಷ ಲಂಚಗುಳಿಯಾದರೂ, ಮರ್ಯಾದಸ್ಥನಂತೆ ತಲೆ ಬಾಗಿ ಹೊರನಡೆದ.  ನಮ್ಮಲ್ಲಿ ಹಾಗಾಗಲಿಲ್ಲ. ನಮ್ಮ ಕೇಂದ್ರ ಸರಕಾರಕ್ಕೆ ತಲೆ ಇದ್ದರಲ್ಲವೇ ಬಾಗುವ ಪ್ರಶ್ನೆ ಏಳೋದು.          

ನಾರ್ವೆ ದೇಶದಲ್ಲಿ ನರಸಂಹಾರ: ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾದ ಅಇರೋಪ್ಯ ಖಂಡದ “ನಾರ್ವೆ” ಪುಟ್ಟ ದೇಶ. ಇಲ್ಲಿನ ಸಾಲ್ಮನ್ ಜಾತಿಯ ಮೀನು ಜಗತ್ಪ್ರಸಿದ್ಧ. ಸಾಲ್ಮನ್ ಮೀನು ಹೃದಯಕ್ಕೆ ತುಂಬಾ ಒಳ್ಳೆಯದಂತೆ. land of midnight sun ಎಂದೂ ಅರಿಯಲ್ಪಡುವ ಈ ದೇಶದಲ್ಲಿ ವರ್ಷದ ಕೆಲವೊಂದು ತಿಂಗಳು ಸೂರ್ಯ ಮಧ್ಯ ರಾತ್ರಿ ಉದಯಿಸುತ್ತಾನೆ. ೩೨ ವರ್ಷ ಪ್ರಾಯದ ಸುಂದರ ಯುವಕ ‘ಆಂಡರ್ಸ್ ಬೆಹ್ರಿಂಗ್ ಬ್ರೆವಿಕ್’ ಪ್ರಶಾಂತ ನಾರ್ವೆ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದ ತನ್ನ ನಿರ್ದಯೀ ಹಿಂಸೆಯ ಮೂಲಕ. ರಾಜಧಾನಿ ಓಸ್ಲೋ ನಗರದಲ್ಲಿ ಬಾಂಬಿಟ್ಟು ನಗರದ ಸಮೀಪದಲ್ಲೇ ಇದ್ದ ದ್ವೀಪಕ್ಕೆ ಹೋಗಿ ಅಲ್ಲಿ ನೆರೆದಿದ್ದ ನೂರಾರು ಜನರ ಮೇಲೆ ಎರ್ರಾಬಿರ್ರಿ ಗುಂಡು ಹಾರಿಸಿ ೮೦ ಕ್ಕೂ ಹೆಚ್ಚು ಜನರನ್ನು ಕೊಂದ. ಕ್ರೈಸ್ತ ಮೂಲಭೂತವಾದಿಯಾಗಿದ್ದ ಈತನ ಕ್ರೌರ್ಯಕ್ಕೆ ವಿಶ್ವ ಬೆಚ್ಚಿತು, ರಾತ್ರಿ ಉದಯಿಸುತ್ತಿದ್ದ ಸೂರ್ಯ ಹಾಡು ಹಗಲೇ ಅಸ್ತಮಿಸಿದ ಇವನ ಕ್ರೌರ್ಯಕ್ಕೆ ಬೆಚ್ಚಿ.  

ಯಾವುದೇ ಕಾರಣವಿಲ್ಲದೆ ಇರಾಕಿನ ಮೇಲೆ ಧಾಳಿ ಮಾಡಿ, ಆ ದೇಶವನ್ನು ಆಕ್ರಮಿಸಿಕೊಂಡು ಎರಡು ದಶಲಕ್ಷಕ್ಕೂ ಜನರನ್ನು ಕೊಂದ ಅಮೇರಿಕಾ ತನ್ನ ಸೈನ್ಯ ಹಿಂದಕ್ಕೆ ಕರೆಸಿಕೊಳ್ಳಲು ಕೊನೆಗೂ ತೀರ್ಮಾನಿಸಿತು. ಇರಾಕಿನ ಮೇಲಿನ ಯುದ್ಧ ಯಾವ ರೀತಿ ಅಮೇರಿಕಾ, ಇಂಗ್ಲೆಂಡ್ ನಂಥ ಬಲಿಷ್ಠ ದೇಶಗಳು ಜನರ ಕಣ್ಣಿಗೆ ಬೂದಿ ಎರಚಿ ತಮ್ಮ ಸ್ವಾರ್ಥ ಸಾಧಿಸಲು ತಯಾರು ಎನ್ನುವುದಕ್ಕೆ ಇರಾಕ್ ಜ್ವಲಂತ ನಿದರ್ಶನವಾಯಿತು.

ಆಫ್ರಿಕಾ ಖಂಡದ ಸುಡಾನ್ ದೇಶದಿಂದ ದಕ್ಷಿಣ ಸುಡಾನ್ ಎನ್ನುವ ದೇಶ ಪ್ರತ್ಯೇಕಗೊಂಡು ಸ್ವಾತಂತ್ರ್ಯವಾಯಿತು. 

೨೦೧೧ ರ ನೊಬೆಲ್ ಶಾಂತಿ ಪುರಸ್ಕಾರ ಈ ಸಲ ಮೂರು ಮಹಿಳೆಯರು ಹಂಚಿಕೊಂಡರು. ಸ್ವಾತಂತ್ರ್ಯ, ಸೌಹಾರ್ದ, ಮತ್ತು ಲಿಂಗ ಬೇಧ ನಿವಾರಣೆಗೆ ಶ್ರಮಿಸಿದ ಈ ಮಹಿಳೆಯರಲ್ಲಿ ಇಬ್ಬರು ಆಫ್ರಿಕಾ ಖಂಡದ ಲೈಬೀರಿಯ ದೇಶದವರು, ಮತ್ತೊಬ್ಬರು ಅರಬ್ ಪ್ರಾಂತ್ಯದ ಯೆಮೆನ್ ದೇಶದವರು. ಸಾಂಪ್ರದಾಯಿಕ ಅರಬ್ ಮುಸ್ಲಿಂ  ಸಮಾಜದಿಂದ ಬಂದ “ತವಕ್ಕುಲ್ ಕರ್ಮಾನ್” ಯಾವ ತೊಡಕುಗಳಿಗೂ ಅಂಜದೆ ತನ್ನ ದೇಶದ ಸರ್ವಾಧಿಕಾರಿಯನ್ನು ಧೈರ್ಯವಾಗಿ ಎದುರಿಸಿ ಯಶಸ್ವಿಯಾದರು. ಮಹಿಳೆ ಧೈರ್ಯವಾಗಿ ಮುನ್ನುಗ್ಗಿದರೆ ಯಾವ ಮೂಲಭೂತವಾದಿಗಳಾಗಲೀ, ಸಮಾಜದ ಯಾವ ನಿರ್ಬಂಧಗಳೇ ಆಗಲಿ ಲೆಕ್ಕಕ್ಕೆ ಬರದು ಎಂದು ವಿಶ್ವಕ್ಕೆ ಸಾರಿದ ೩೨ ರ ಹರೆಯದ ತವಕ್ಕುಲ್ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ಮುಸ್ಲಿಂ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಇರಾನಿನ ಶಿರೀನ ಇಬಾದಿ ನೊಬೆಲ್ (೨೦೦೩) ವಿಜೇತ ಮತ್ತೊಬ್ಬ ಮಹಿಳೆ.   

ಈ ಸಲದ ಪುರಸ್ಕಾರ ಅರಬ್ ವಿಶ್ವದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಬ್ಲಾಗಿಗಳಿಗೆ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಸ್ವಾತಂತ್ರ್ಯದೊಂದಿಗೆ ಸಮಾನತೆಯ ಕಹಳೆ ಮೊಳಗಿಸಿದ ಧೀರ ಮಹಿಳೆಯರ ಪಾಲಾಯಿತು ನೊಬೆಲ್.  

ಕಾಲನ ಕರೆಗೆ ವಿಧೇಯರಾಗಿ ಓಗೊಟ್ಟು ಕಣ್ಮರೆಯಾದವರು

ವಿವಾದಾಸ್ಪದ ಕಲಾವಿದ ಮಕ್ಬೂಲ್ ಫಿದಾ ಹುಸೇನ್ ನಿಧನ. ಹುಸೇನರ ಕುಂಚಗಳು ತನ್ನ canvas ಗಡಿ ಮೀರಿ ಜನರ ನಂಬಿಕೆಗಳ ಮೇಲೆ ಹರಿದಾಡ ತೊಡಗಿಡಾಗ ಗಡೀ ಪಾರಾಗಬೇಕಾಯಿತು. ಕತಾರ್ ದೇಶದ ಪೌರತ್ವ ಪಡೆದರೂ ಮಾತೃ ಭೂಮಿಗಾಗಿ ಮಿಡಿಯಿತು ಹುಸೇನ್ ಮನ. ಹುಸೇನ್ ಅಂತ್ಯ ಲಂಡನ್ನಿನಲ್ಲಿ. ಹುಸೇನ್ ಮರಣಕ್ಕೆ ಪ್ರಧಾನಿ, ರಾಷ್ಟ್ರಪತಿ ಶೋಕ. ಹುಸೇನ್ ಸಾವು ರಾಷ್ಟ್ರೀಯ ನಷ್ಟ ಎಂದು ಪ್ರಧಾನಿ ಹೇಳಿದರೆ, ರಾಷ್ಟ್ರಪತಿ ಗಳು ಹೇಳಿದ್ದು ಹುಸೇನ್ ಇಲ್ಲದ ಕಲೆ ಶೂನ್ಯ ಎಂದು.

ವಿಶ್ವದ ಕುಖ್ಯಾತ ಭಯೋತ್ಪಾದಕ ಬಿನ್ ಲಾದೆನ್. ಅಮೆರಿಕೆಯ to do list ನಲ್ಲಿ ಆಗ್ರ ಪಂಕ್ತಿಯಲ್ಲಿದ್ದ ಲಾದೆನ್ ನ ಅವಸಾನ ಕೊನೆಗೂ ಕೈಗೂಡಿತು. ಪಾಕ್ ರಾಜಧಾನಿಯ ಸಮೀಪದ ಅಬೋಟ್ಟಾ ಬಾದ್ ನಲ್ಲಿ ಅಡಗಿ ಕೂತಿದ್ದ ಬಿನ್ ಲಾದೆನ್ ನನ್ನು ಅಮೆರಿಕೆಯ ಅತಿ ಪ್ರತಿಷ್ಠಿತ ಕಮಾಂಡೋ ಪಡೆ “ಸೀಲ್” ಬೇಟೆಯಾಡಿ ಅಮೇರಿಕಾ ನಿರಾಳ ಭಾವ ಅನುಭವಿಸುವಂತೆ ಮಾಡಿತು. ಬಿನ್ ಲಾದೆನ್ ಸಾವಿನ ಸುದ್ದಿ ವಿಶ್ವ ಪುರಾವೆ ಬಯಸಿದಾಗ ಅಮೇರಿಕಾ ಹೇಳಿದ್ದು, ಪ್ರದರ್ಶಿಸಲು ಪಾರಿತೋಷಕ ಅಲ್ಲ ನಮಗೆ ಸಿಕ್ಕಿದ್ದು, ನಾವು ಹೇಳಿದ್ದನ್ನು ನಂಬಿ ಎಂದು. ಸಾವಿರಾರು ಜನರ ಭವಿಷ್ಯವನ್ನು ಭೂ ಸಮಾಧಿ ಮಾಡಿದ್ದ ಬಿನ್ ಲಾದೆನ್ ಗೆ ಸತ್ತಾಗ ಸಿಕ್ಕಿದ್ದು ಜಲಸಮಾಧಿ.  

ಕಂಪ್ಯೂಟರ್ ಎಂದರೆ ಆಕರ್ಷಣೆ ಇಲ್ಲದ ಒಂದು bland ಉಪಕರಣ ಅಲ್ಲ, ಅದು ಒಂದು ಮೋಜನ್ನು, ನೀಡುವ ಆಕರ್ಷಕ ಉಪಕರಣ ಎಂದು ಜಗತ್ತಿಗೆ ತೋರಿಸಿದ “ಆಪಲ್” ನ ಒಡೆಯ ಸ್ಟೀವ್ ಜಾಬ್ಸ್  ಯಕೃತ್ತಿನ ಕ್ಯಾನ್ಸರ್ ಗೆ ಬಲಿಯಾದ. ತಂತ್ರಜ್ಞಾನ ಬಡವಾಯಿತು ಎಂದು ಶೋಕಿಸಿದರು ಟೆಕ್ಕಿಗಳು.

ಭಾರತೀಯ ಕ್ರಿಕೆಟ್ ನ ಗತಕಾಲದ ಹೀರೋ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನದಿಂದ ಕ್ರಿಕೆಟ್ ಆಟ ತನ್ನ ಹೊಳಪನ್ನು ಕಳೆದು ಕೊಂಡಿತು. ಟೈಗರ್ ಎಂದು ಕರೆಯಲ್ಪಡುತ್ತಿದ್ದ ಈ ಸ್ಫುರದ್ರೂಪಿ “ಪಟೌಡಿ” ಪ್ರಾಂತ್ಯದ “ನವಾಬ್’ ಭಾರತದ ಯಶಸ್ವೀ ನಾಯಕರಲ್ಲೊಬ್ಬರು. ಅಂದಿನ ಪ್ರಸಿದ್ಧ ನಟಿ ಶರ್ಮಿಳಾ ಟಾಗೋರ್ ರನ್ನು ವರಿಸಿದ ಪಟೌಡಿ ಕ್ರಿಕೆಟ್ ಆಟಕ್ಕೆ ಗ್ಲಾಮರ್ ತಂದು ಕೊಟ್ಟವರು. ಪಟೌಡಿ ನಿಧನರಾದಾಗ ವಯಸ್ಸು ೭೦.

ಭೀಂ ಸೇನ್ ಜೋಶಿ, ಭಜನ್ ಲಾಲ್, ಭೂಪೇನ್ ಹಜಾರಿಕಾ, ಅಂಬಿಕಾ ಚೌಧುರಿ, ಚಿತ್ರನಟ ದೇವ್ ಆನಂದ್, ಶಮ್ಮಿ ಕಪೂರ್, ಸತ್ಯಸಾಯಿ ಬಾಬ, ಅರ್ಜುನ್ ಸಿಂಗ್ ಇತರೆ ಗಣ್ಯರು ಅಗಲಿದವರು.  

ನಮ್ಮ ರಾಜ್ಯದ ವರ್ಣರಂಜಿತ ವ್ಯಕ್ತಿತ್ವ ಕಣ್ಮರೆ. ಎಸ್, ಬಂಗಾರಪ್ಪ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಸಂಸದರಾಗಿ ರಾಜಕೀಯ ಕ್ಷೇತ್ರದಲ್ಲಿ ದುಡಿದವರು. ಒಂದು ಕಾಲದಲ್ಲಿ ನಾನು ಅವರ ಅಭಿಮಾನಿ. ಪಕ್ಷದಿಂದ ಪಕ್ಷಕ್ಕೆ ಜಿಗಿದು ಅಭಿಮಾನಿಗಳಿಗೆ ಇರುಸು ಮುರುಸು ಕಸಿವಿಸಿ ತರುತ್ತಿದ್ದ ಬಂಗಾರಪ್ಪ ಟೆನ್ನಿಸ್ ಮತ್ತು ಯೋಗ ಪ್ರೇಮಿ. ತಂದೆಯ ಹೆಸರು ಎಷ್ಟಿ ಆಕರ್ಷಕ, ಜನಪ್ರಿಯ  ಎಂದರೆ ಅವರ ಮಗನಿಗೆ ಸ್ವಂತದ ಹೆಸರಿನ ಅವಶ್ಯಕತೆಯೇ ಬರಲಿಲ್ಲ. ಕುಮಾರ್ ಬಂಗಾರಪ್ಪ ಎಂದು ಪ್ರಸಿದ್ಧನಾದ. 

ಸಮಸ್ತ ಕನ್ನಡಿಗರಿಗೂ, ಭಾರತೀಯರಿಗೂ ಬರಲಿರುವ ಹೊಸ ವರುಷ ಉಲ್ಲಾಸ, ಹರ್ಷ, ಯಶಸ್ಸನ್ನು ತರಲಿ ಎಂದು ಹಾರೈಸುತ್ತಾ…….

ನಿಮ್ಮ ಅಬ್ದುಲ್

‘ಆಪಲ್’ ನ ಸೇಬು ಕಳಾಹೀನ

ಆಪಲ್ ಖ್ಯಾತಿಯ ಸ್ಟೀವ್ ಜಾಬ್ಸ್ ಇನ್ನಿಲ್ಲ. ಆಪಲ್ ಮ್ಯಾಕಿಂತೋಷ್ ಕಂಪೆನಿಯ ಮೂವರು ಮಾಲಿಕರಲ್ಲಿ ಸ್ಟೀವ್ ಒಬ್ಬ. ಆದರೆ ಮೂವರಲ್ಲಿ ಈತನ ಹೆಸರು ಮಾತ್ರ ಹೆಚ್ಚು ಜನಜನಿತ. ಕಪ್ಪು ಬಣ್ಣದ ‘ಟರ್ಟಲ್ ನೆಕ್’ ಟೀ ಶರ್ಟ್, ತಿಳಿ ನೀಲಿ ಜೀನ್ಸ್ ಪ್ಯಾಂಟು ಧರಿಸಿ ಮಂದಹಾಸದೊಂದಿಗೆ ಆಗಾಗ ಹೊಸ ಹೊಸ ಯಂತ್ರಗಳನ್ನು ಖುದ್ದಾಗಿ ವಿಶ್ವಕ್ಕೆ ಪರಿಚಯಿಸುತ್ತಿದ್ದ ಈ ಕನ್ನಡಕಧಾರಿ ಮಾಂತ್ರಿಕ ಗಣಕಯಂತ್ರವನ್ನು “ಸ್ಟುಪಿಡ್ ಬಾಕ್ಸ್” ಎನ್ನುವ ಹಣೆಪಟ್ಟಿಯಿಂದ ಹೊರತಂದು ಹೊಸ ರೂಪ, ಕಾರ್ಯಕ್ಷಮತೆ ಕೊಡುವ ಮೂಲಕ ಜನ ಆತುರ ಕಾತುರದಿಂದ ಕೊಳ್ಳಲು ಪ್ರೇರೇಪಿಸುವಂತೆ ಮಾಡಿದ. ತಾನು ಉದ್ಯಮಿ, ಸಂಶೋಧಕ ಮಾತವಲ್ಲ, ಕಲಾಕಾರ ಕೂಡಾ ಎಂದು ಜನರಿಗೆ ತೋರಿಸಿದ ವೈಶಿಷ್ಟ್ಯ ತುಂಬಿದ ಮೆಶೀನುಗಳ ನ್ನು ತಯಾರಿಸುವುದರ ಮೂಲಕ.

ಅಮೆರಿಕೆಯ “ಎನ್ರಾನ್” ತೈಲ ಕಂಪೆನಿ ಬಿಟ್ಟರೆ ಜಾಬ್ಸ್ ಶುರು ಮಾಡಿದ mac ಅಮೆರಿಕೆಯಲ್ಲಿ most valued company ಯಾಗಿ ಮೂಡಿ ಬಂತು. ತನ್ನ ಮಲ ಪೋಷಕರ ಮನೆಯ garage ನಿಂದ ಆರಂಭ ಗೊಂಡ mac ಉದ್ದಿಮೆ ಶೇರು ಹೂಡಿಕೆದಾರರ ಕಣ್ಮಣಿಯಾಗಿ ಹೊಮ್ಮಿತು. ಸೇಬಿನ ಹಣ್ಣಿನ trade mark ಹೊಂದಿದ್ದ ಈ mac ಕಂಪೆನಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. ಸಾವಿರ ಹಾಡುಗಳನ್ನು ಜೇಬಿನಲ್ಲಿರಿಸ ಬಹುದಾದ i pod ಅನ್ನು ಜಗತ್ತಿಗೆ ಪರಿಚಯಿಸಿದ ಈ ಸಂಸ್ಥೆ ಸಂಗೀತ ಉದ್ದಿಮೆ ನೆಲಕಚ್ಚಲು ಕಾರಣವಾಯಿತು ಎನ್ನುವ ದೂರು ಕೂಡಾ ಇದೆ. ಮ್ಯಾಕ್ ಪ್ರೊ, ಮ್ಯಾಕ್ ಏರ್ ಗಳಂಥ ಕಂಪ್ಯೂಟರ್ಗಳ ಉತ್ಪಾದನೆ ಮೂಲಕ ಅಮೇರಿಕಾ ಮತ್ತು ಅಇರೋಪ್ಯ ದೇಶಗಳಲ್ಲಿ ಪ್ರಸಿದ್ದಿ ಗಳಿಸಿದ್ದ ಆಪಲ್ ಕಂಪೆನಿ ಏಷ್ಯಾದಲ್ಲಿ ಹೆಚ್ಚು ಗಮನಕ್ಕೆ ಬಂದಿದ್ದು i phone, i phone ಗಳ ಜನಪ್ರಿಯತೆಯಿಂದ.

ಅಮೆರಿಕೆಯವರಿಗೆ ಬಹು ಪ್ರಿಯವಾದ ಕಾರು ಉದ್ಯಮಿ ‘ಫೋರ್ಡ್’ ಮತ್ತು ‘ಕ್ರೈಸ್ಲರ್’ ನಂಥ ಬಹು ಕೋಟಿ ಡಾಲರ್ ನಿಗಮಗಳ ಸಾಲಿನಲ್ಲಿ mac ನಿಲ್ಲಲು ಹೆಚ್ಚು ಸಮಯ ತೆಗೆದು ಕೊಳಲಿಲ್ಲ. ಗಣಕ ಯಂತ್ರದ ಉದ್ಯಮದಲ್ಲಿ ಮೈಕ್ರೋಸಾಫ್ಟ್ ಕಂಪೆನಿಯ ಮುಂದೆ ಆಪಲ್ ನ ಪಾಲು ಕಡಿಮೆಯದಾದರೂ ಜನಪ್ರಿಯತೆ ಮತ್ತು ಪ್ರತಿಷ್ಠೆ ಯಲ್ಲಿ ಮಾತ್ರ ಬಹು ಮುಂದು. ಮ್ಯಾಕಿಂತೋಷ್ ಗಣಕಯಂತ್ರವನ್ನು ಕೊಳ್ಳುವುದೂ, ಉಪಯೋಗಿಸುವುದೂ ಒಂದು fashion statement. ಬೇರೆ ಕಂಪ್ಯೂಟರ್ ಗಳಿಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಬೆಲೆಯಿದ್ದರೂ ಜನ ಕೊಳ್ಳುವುದನ್ನು ಬಿಡಲಿಲ್ಲ, ಆಕರ್ಷಣೆಯೂ ತಗ್ಗಲಿಲ್ಲ. mac ಅನ್ನು ಕೊಂಡವರು ಅದರ ಖಾಯಂ ಗಿರಾಕಿಯಾಗುವುದು ಮಾತ್ರವಲ್ಲದೆ brand ambassador ಸಹ ಆಗುತ್ತಾರಂತೆ. mac ಮೇಲಿನ ಸೆಳೆತ ಮೋಹ ಅಂಥದ್ದು. ಜನರ ಈ ಸೆಳೆತ ಮತ್ತು ಮೋಹಕ್ಕೆ ಸರಿಯಾದ ನ್ಯಾಯವನ್ನೇ ಒದಗಿಸುತ್ತಿತ್ತು ಈ ಯಂತ್ರ ತನ್ನ ಕಾರ್ಯಕ್ಷಮತೆಯಲ್ಲಿ. ಅಮೆರಿಕೆಯ ಹೆಮ್ಮೆಯ ಅಚ್ಚುಮೆಚ್ಚಿನ ನಿಗಮವಾಗಿ mac ರಾರಾಜಿಸಿತು.    

ಸ್ಟೀವ್ ಜಾಬ್ಸ್ ಎಂದರೆ ಆಪಲ್, ಆಪಲ್ ಎಂದರೆ ಸ್ಟೀವ್ ಜಾಬ್ಸ್. ಮನುಷ್ಯ ಮತ್ತು ಯಂತ್ರದ ನಡುವಿನ ಎಂಥ ಮಧುರ, ಮುರಿಯಲಾಗದ ಸಂಬಂಧ. ಬಹುಶಃ ಪ್ರಪಂಚದ ಯಾವುದೇ ಉತ್ಪನ್ನವೂ ತನ್ನ ಒಡೆಯನೊಂದಿಗೆ ಇಷ್ಟು ಸೊಗಸಾಗಿ ಗುರುತಿಸಿ ಕೊಂಡಿರಲಿಕ್ಕಿಲ್ಲ. ನಾನು ನೀವು ಎಷ್ಟೊಂದು ಉಪಕರಣ ಗಳನ್ನು ಬಳಸುತ್ತೇವೆ, ಆದರೆ ಅವುಗಳ ಒಡೆಯರ ಹೆಸರನ್ನು ಗಮನಿಸಿದ್ದೇವೆಯೇ, ನೆನಪಿಟ್ಟುಕೊಂಡಿದ್ದೇವೆಯೇ? ತನ್ನನ್ನು ಎದುರು ಗೊಳ್ಳುವ ಸಾವಿನ ಬಗ್ಗೆ ಐದು ವರ್ಷಗಳ ಹಿಂದೆಯೇ ತಿಳಿದಿದ್ದ ಸ್ಟೀವ್ ವೇದಾಂತಿಯಂತೆ ಹೇಳಿದ್ದು “Remembering that you are going to die is the best way I know to avoid the trap of thinking you have something to lose”. ಬದುಕಿನ ಸವಾಲನ್ನು ಸಾಹಸದಿಂದ ಎದುರಿಸಿದ ಸ್ಟೀವ್ ಸಾವಿನೊಂದಿಗೂ ಅದೇ ನಿಲುವನ್ನು ಪ್ರದರ್ಶಿಸಿದ. ತನ್ನ ಜೀವಿತದ ಕೊನೇ ವರ್ಷವನ್ನು ಕೊರಿಯಾದ ಎಲೆಕ್ಟ್ರಾನಿಕ್ ದೈತ್ಯ ಸ್ಯಾಮ್ಸಂಗ್ ಯೊಂದಿಗೆ ರಚನಾ patent ವಿಷಯದಲ್ಲಿ ತಗಾದೆಯಲ್ಲಿ ಕಳೆದ ಸ್ಟೀವ್ ಜಾಬ್ಸ್ ಜನರ ನೆನಪಿನಿಂದ ಮಾಸಲಾರದ ಹೆಸರು ಎಂದರೂ ತಪ್ಪಾಗಲಾರದು. ಯಕೃತ್ತಿನ ಕ್ಯಾನ್ಸರ್ ರೋಗಕ್ಕೆ ತುತ್ತಾದ ಸ್ಟೀವ್ ತಾನು ಕೊನೆಯುಸಿರೆಳೆಯುವಾಗ ವಯಸ್ಸು ಕೇವಲ ಐವತ್ತಾರು.   

ಸ್ಟೀವ್ ಜಾಬ್ಸ್ ನಿಧನದ ಸುದ್ದಿ ಕೇಳುತ್ತಲೇ ಕಂಪ್ಯೂಟರ್ ಬಳಕೆದಾರರು ದುಃಖಭರಿತರಾಗಿ ಶೋಕ ವ್ಯಕ್ತ ಪಡಿಸಲು ಸಾಮಾಜಿಕ ತಾಣಗಳನ್ನು ಬಳಸಿಕೊಂಡರು. ಟ್ವಿಟ್ಟರ್ ನಲ್ಲಿ ಸಂದೇಶಗಳ ಮಹಾಪೂರ. ಅಂಥ ಒಂದು ಸಂದೇಶದಲ್ಲಿ ಈ ಅನಿಸಿಕೆ ಕಾಣಲು ಸಿಕ್ಕಿತು.
ಪ್ರಪಂಚದಲ್ಲಿ ಮೂರು ಸೇಬಿನ ಹಣ್ಣುಗಳು ಚರಿತ್ರೆ ಬದಲಿಸಿದುವಂತೆ. ಈಡನ್ ಉದ್ಯಾವನದಲ್ಲಿ ಈ ಸೇಬಿನ ಹಣ್ಣನ್ನು ತಿನ್ನಬಾರದು ಎಂದು ತಾಕೀತು ಮಾಡಿದ ದೇವರ ಆಜ್ಞೆಯನ್ನು ಉಲ್ಲಂಘಿಸಿ ಪ್ರಥಮ ವನಿತೆ “ಈವ್” ತಾನು ತಿಂದಿದ್ದು ಮಾತ್ರವಲ್ಲದೆ ಪ್ರಥಮ ಮಾನವ “ಆಡಂ” ಸಹ ತಿನ್ನುವಂತೆ ಮಾಡಿ ಸ್ವರ್ಗ ಲೋಕದಿಂದ ಹೊರಗಟ್ಟಲ್ಪಟ್ಟರು…

ಮಧ್ಯಾಹ್ನದ ಊಟದ ನಂತರ ಹಾಯಾಗಿ ಸೇಬಿನ ಮರದ ಕೆಳಗೆ ಬಿದ್ದು ಕೊಂಡಿದ್ದ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ತಲೆಯ ಮೇಲೆ ಸೇಬಿನ ಹಣ್ಣೊಂದು  ಬಿದ್ದು ಗುರುತ್ವಾಕರ್ಷಣೆಯ ನಿಯಮವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸಹಕಾರಿಯಾಯಿತು…   

ಅಂತಿಮವಾಗಿ, ಆರೋಗ್ಯವರ್ಧಕ ಹಣ್ಣಾಗಿ ಮತ್ತು ಸುಂದರ ಹೆಣ್ಣಿನ ಗಲ್ಲದೊಂದಿಗೆ ಮಾತ್ರ ಗುರುತಿಸಿಕೊಂಡಿದ್ದ ಈ humble “ಸೇಬು” ಕ್ಯಾಲಿಫೋರ್ನಿಯಾದ “ಕ್ಯುಪರ್ಟೀನೋ” ನಗರದ ತಂತ್ರಜ್ಞಾನ ಕಂಪೆನಿಯೊಂದರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿತು…

ಸ್ಟೀವ್ ಜಾಬ್ ನಿಧನದೊಂದಿಗೆ apple ನ ಸೇಬು ಕಳಾಹೀನವಾಯಿತು.                   

ಸ್ಟೀವ್ ಜಾಬ್ಸ್, ‘ಆಪಲ್’ ನಿಗಮದ ಒಡೆಯ. ಜನನ: ೧೨.೨.೧೯೫೫, ನಿಧನ: ೦೬.೯.೨೦೧೧ 

ಚಿತ್ರ ಕೃಪೆ: “ಸ್ಟೆಫನೀ” ಯವರ ಟ್ವಿಟರ್ ಖಾತೆಯಿಂದ.

ಎಲ್ಲದಕ್ಕೂ ಧೋನಿಯೇ ಕಾರಣ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟಿನಲ್ಲಿ ಭಾರತ ಮತ್ತೊಮ್ಮೆ ಸೋತಿತು. ಮೊದಲ ಟೆಸ್ಟಿನ ಪಂಗ ನಾಮದ ನಂತರ ಒಂದು ಒಳ್ಳೆಯ ಪ್ರದರ್ಶನ ನೀಡಿ ತಿರುಗೇಟು ನೀಡಬಹುದು ಎಂದು ಕಾತುರದಿಂದ ನಿರೀಕ್ಷಿಸಿದ್ದ ನಮಗೆ ದಕ್ಕಿದ್ದು ಮತ್ತೊಂದು ಲಾತಾ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಪಂದ್ಯದ ಉಳಿದೆಲ್ಲಾ ಸೆಷನ್ಸ್ ಗಳಲ್ಲೂ ಮಿಂಚಿದ್ದು ಬಿಳಿಯರೇ. ಇಂಗ್ಲೆಂಡ್ ತಂಡ ಒಂದು ಪರಿಪೂರ್ಣ ತಂಡವಾಗಿ, ಪರಿಪಕ್ವತೆ ಯಿಂದ ಕ್ರಿಕೆಟ್ ಆಡುತ್ತಿದೆ ಎಂದರೆ ಯಾರೂ ಅಲ್ಲಗಳೆಯಲಾರರು. ಸರಿ ಸೋತಿದ್ದು ಒಂದು ಒಳ್ಳೆಯ ತಂಡದೆದುರು. ಅದರಲ್ಲೇನು ಅವಮಾನ? ಮುಜುಗುರ? ಹಾಗಂತ ನಾನೂ, ನೀವೂ ಹೇಳಬಹುದು,TRP ಸಲುವಾಗೇ ಬದುಕುವ, TRP ಏರಲು ಯಾವ ಪಾತಾಳಕ್ಕೂ ಇಳಿಯಲು ಹೇಸದ ಮಾಧ್ಯಮಕ್ಕೆ ಆಟದ ಗಮ್ಮತ್ತು, ಅದರ ಕೌಶಲ್ಯ, ವೃತ್ತಿ ಪರಿಣತೆ ಎಲ್ಲಾ ಅರ್ಥವಾಗಲು ಸಾಧ್ಯವೇ? ಸೋತು ತಂಡ ಪೆವಿಲಿಯನ್ ಸೇರಿಕೊಳ್ಳುವ ಮುನ್ನವೇ ಶುರುವಾಯಿತು ಧೋನಿಯ ಮತ್ತು ತಂಡದ ಅಂತ್ಯ ಸಂಸ್ಕಾರ. ಸತ್ತ ಹೆಣದ ಮುಂದೆ ಲಬೋ ಲಬೋ ಎಂದು ಎದೆ ಬಡಿದು ಕೊಳ್ಳುವ ರೀತಿಯಲ್ಲಿ ಆಡಿದವು ಮಾಧ್ಯಮಗಳು. ಸ್ಟಾರ್ ಟೀವಿ ಕತೆ ಹೇಳಬೇಕಿಲ್ಲ. ‘ಧೋನಿ ಕಾರಣ ಈ ಸೋಲಿಗೆ’, ‘ಧೋನಿ ನಾಯಕತ್ವದಲ್ಲಿ ಸೋಲು’, ‘ಧೋನಿ ನಾಯಕತ್ವದಲ್ಲಿ ಮೊಟ್ಟ ಮೊದಲ, ಅತಿದೊಡ್ಡ ಸೋಲು’, ಧೋನಿ… ಧೋನಿ… ಧೋನಿ… ಎಂದು ಅರಚಲು ಶುರು ಮಾಡಿತು. ಯಾಕೆ ತಂಡದಲ್ಲಿ ಒಂದೇ ಧೋನಿಯೇ ಇರೋದು? ಇನ್ನೂ ದೊಡ್ಡ ದೊಡ್ಡ ‘ದೋಣಿ’ ಗಳಿದ್ದವಲ್ಲ? ಅವಕ್ಕೆಲ್ಲಾ ಏನಾಗಿ ಬಿಟ್ಟಿತು? ಹನ್ನೊಂದು ದೋಣಿ ಗಳಲ್ಲಿ ಒಂದು ಕೆಟ್ಟಿತು, ಬಾಕಿ ಹತ್ತು?

ಇಂಗ್ಲೆಂಡ್ ನ ಬೌಲಿಂಗ್ ಪ್ರಾವೀಣ್ಯತೆ ನೋಡಿದವರಿಗೆ ಅರ್ಥವಾಗುತ್ತೆ. ಬಾಕಿ ಉಳಿದ ಎರಡು ಟೆಸ್ಟ್ ಗಳಲ್ಲಿ ಸೋಲದೆ ಡ್ರಾ ಮಾಡಿ ಕೊಂಡು ಬಂದರೂ ಅದು ದೊಡ್ಡ ಸಾಹಸವೇ ನಮ್ಮ ಪಾಲಿಗೆ. ಅಷ್ಟು ಚೊಕ್ಕ ಬೌಲಿಂಗ್ ಪ್ರದರ್ಶನ. ಇಂಗ್ಲೆಂಡ್ ಎಸೆದ ಶಾರ್ಟ್ ಪಿಚ್ ಬಾಲ್ ಗಳನ್ನು ನಾವು ಆಡಿದ ರೀತಿ ನೋಡಿದವರಿಗೆ ತಿಳಿಯುತ್ತೆ ನಮ್ಮ ತಯಾರಿ ಬಗ್ಗೆ, ನಮ್ಮ ಟೆಕ್ನಿಕ್ ಬಗ್ಗೆ. ಎರಡನೇ ಇನ್ನಿಂಗ್ಸ್ ನಲ್ಲಿ ಶಾರ್ಟ್ ಪಿಚ್ ಬಾಲ್ ಒಂದನ್ನು ಆಡಲು ಹೋಗಿ ಎಲ್ಲಿಗೋ ಬ್ಯಾಟ್ ಬೀಸಿದ ಯುವರಾಜ್ ಸಿಂಗ್, ತಾನು ಹೊಡೆದ ಬಾಲ್ ಎಲ್ಲಿಗೋ ಹೋಗಿ ಫೀಲ್ಡರ್ ಕೈ ಸೇರಿದ್ದು ಬೆಪ್ಪನಂತೆ ನೋಡಿದ ದೃಶ್ಯ ಅವಿಸ್ಮರಣೀಯ. ಔಟ್ ಆಗಿ ಆತ ಕ್ರೀಸ್ ಬಿಟ್ಟು ಹೋಗುವಾಗ ಮಾಡಿದ ಮುಸುಡಿಯ ದೃಶ್ಯ (ತರಡು ಬೀಜ ಕಳಕೊಂಡಾಗ ಆಗುವ ರೀತಿ) ಬಹಳ ಕಾಲ ನಮ್ಮ ಮನದಲ್ಲಿ ನಿಲ್ಲುತ್ತದೆ.           

ವೆಸ್ಟ್ ಇಂಡೀಸ್ ಪದ್ಯವೊಂದರಲ್ಲಿ ಗೆದ್ದ ನಂತರ ಅಂಪೈರಿಂಗ್ ಚೆನ್ನಾಗಿದ್ದಿದ್ದರೆ ಇನ್ನೂ ಬೇಗೆ ಗೆದ್ದು ಪೆವಿಲಿಯನ್ ಗೆ ತೆರಳಿ ವಿಶ್ರಮಿಸಬಹುದಿತ್ತು ಎಂದು ಕೊರಗಿದ್ದ ಧೋನಿಗೆ ಎರಡನೇ ಟೆಸ್ಟನ್ನು ಕೇವಲ ಮೂರೂವರೆ ದಿನಗಳಲ್ಲಿ ಮುಗಿಸಿ ಸುದೀರ್ಘ ವಿಶ್ರಮ ಇಂಗ್ಲೆಂಡ್ ಕೊಟ್ಟಿದ್ದು ಈ ಪಂದ್ಯದ ವೈಶಿಷ್ಟ್ಯ. ಈ ವಿಶ್ರಮ ಧೋನಿ ಪಾಲಿಗೆ ಸ್ವಯಂ ನಿವೃತ್ತಿ ತೆರನಾದ ವಿಶ್ರಾಮವಾಗದಿರಲಿ ಎಂದು ಹಾರೈಸುತ್ತಾ..