ನಮ್ಮ ಶಿಕ್ಷಣದ ಮಟ್ಟ

ಪೀಯೂಸೀ ಫಲಿತಾಂಶ ಬಂದು ನಮ್ಮ ಮಕ್ಕಳ ಕಳಪೆ ಪ್ರದರ್ಶನ ಮತ್ತು ಕಳಪೆ ಪ್ರದರ್ಶನದ ಕಾರಣ ಉಂಟಾದ ಆತ್ಮಹತ್ಯೆಗಳ ಕುರಿತು ಒಬ್ಬರು ಜನಪ್ರಿಯ ಸಾಹಿತ್ಯಕ ವೆಬ್ ತಾಣವೊಂದರಲ್ಲಿ ಪ್ರಸ್ತಾಪ ಮಾಡಿದ್ದರು. ನಮ್ಮ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ಪ್ರತೀ ವರ್ಷ ಫಲಿತಾಂಶ ಗಳು ಬಂದಾಗ ಮಾತ್ರ ಮಾತನಾಡುವುದರಿಂದ ಯಾವುದೇ ಪ್ರಯೋಜನ ವಿಲ್ಲ. ನಮ್ಮ educator ಗಳು ಯಾವಾಗ ಶಿಕ್ಷಣದಲ್ಲಿ ನಾವೀನ್ಯತೆಯನ್ನು, ಕ್ರಾಂತಿಕಾರಿ ಮಾರ್ಪಾಡುಗಳನ್ನು ಮಾಡಲು ಆಸಕ್ತಿ, ಆಸ್ಥೆ ತೋರಿಸುವುದಿಲ್ಲವೋ ಅಲ್ಲಿಯವರೆಗೆ ಈ ವಿಷಯದ ಕುರಿತು ಬರೀ ಮಾತನಾಡುತ್ತಾ, ಚರ್ಚಿಸುತ್ತಾ ಕಾಲಹರಣ ಮಾಡಬೇಕಾಗುತ್ತದೆ. ಅವರುಗಳ ಉತ್ಸಾಹ ಎಲ್ಲಾ ಇರುವುದು ಸಂದು ಹೋದ ಚರಿತ್ರೆಯನ್ನು ಕೆದಕಿ ಯಾರೂ ನೋಡಿರದ ಕೇಳಿರದ ವಿಷಯಗಳ ಬಗ್ಗೆ “‘some’ಶೋಧನೆ” ನಡೆಸಿ ತೋಚಿದ ರೀತಿ ತಿರುಚಿ ಬರೆದು ತೃಪ್ತರಾಗೋದು. ಅಲ್ಲಿಗೆ ಸೀಮಿತ ಅವರುಗಳ ಕ್ರಿಯಾಶೀಲತೆ. ಇಂಥವರಿಂದ ಶಿಕ್ಷಣದ ಮಟ್ಟ ಸುಧಾರಿಸುವ ಕನಸು ಬೇರೆ ನಮಗೆ.

ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ಕಾರಣ ಪ್ರೌಢರಲ್ಲದ ನಮ್ಮ ಎಳೆಯರು ಆತ್ಮಹತ್ಯೆ ಮಾಡಿ ಕೊಂಡಾಗ ನಮಗೆ ಅನುಕಂಪ ತೋರಲೇಬೇಕು. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗುವ ವ್ಯವಸ್ಥೆಯನ್ನು ಸರಿಪಡಿಸುವತ್ತ ಸಮಾಜ ಆಸಕ್ತಿ ವಹಿಸಬೇಕು. ನಮ್ಮ ಶಿಕ್ಷಣದ ಮಟ್ಟ ಮತ್ತು ಅದು ತರುತ್ತಿರುವ ಫಲಿತಾಂಶದ ಮಟ್ಟ ಮಾತ್ರ ನೋಡಿದರೆ ಸಾಲದು, ಶಿಕ್ಷಕರ ಮಟ್ಟ ಸಹ ಸ್ವಲ್ಪ ನೋಡಿ. ಶಿಕ್ಷಕರಾಗಲು ಎಷ್ಟು ಜನ ಬಯಸುತ್ತಿದ್ದಾರೆ? ಎಲ್ಲರ ಓಟ, ಇಂಜಿನಿಯರಿಂಗ್, ಮೆಡಿಸಿನ್, ಇನ್ಫೋ ಟೆಕ್ ಕಡೆಯೇ. ಏಕೆಂದರೆ ಹಣ ಇರುವುದು ಅಲ್ಲಿಯೇ. ಶಿಕ್ಷಕ ವೃತ್ತಿ ನಮ್ಮ ವ್ಯವಸ್ಥೆಯಲ್ಲಿ ಮತ್ತು ನಮ್ಮ ಸಮಾಜದಲ್ಲಿ glamorous ಅಲ್ಲ. prestigious ಅಲ್ಲ. ಕೈತುಂಬಾ ಸಂಬಳ ಸಹ ತಂದು ಕೊಡೋಲ್ಲ. ಪರಿಸ್ಥಿತಿ ಹೀಗಿರುವಾಗ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಕಷ್ಟವೇ.

ಐರೋಪ್ಯ ದೇಶಗಳನ್ನು ತೆಗೆದುಕೊಂಡಾಗ ಶಿಕ್ಷಣ ಕ್ಷೇತ್ರದಲ್ಲಿ ‘ಫಿನ್ ಲೆಂಡ್’ ದೇಶದವರು ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಫಿನ್ ಲೆಂಡ್ ದೇಶದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಇನ್ನೆರಡು ದೇಶಗಳೆಂದರೆ ಸಿಂಗಪೂರ್ ಮತ್ತು ದಕ್ಷಿಣ ಕೊರಿಯಾ. ಶಿಕ್ಷಕರ ನೇಮಕಾತಿಯಲ್ಲಿ ಅನುಸರಿಸುವ ನಿಯಮಗಳು, ಮತ್ತು ಭಾವೀ ಶಿಕ್ಷಕರಿಗೆ ಇರಬೇಕಾದ ಅರ್ಹತೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಪದವೀಧರರು ತೇರ್ಗಡೆ ಯಾಗುವುದು ಈ ದೇಶಗಳಲ್ಲಿ ತುಂಬಾ ಕಷ್ಟ. ನೇಮಕಾತಿಯಲ್ಲಿ ವಶೀಲಿ ಬಾಜಿ ನಡೆಯದೆ ಪ್ರತಿಭೆಗೆ ಮಾತ್ರ ಪುರಸ್ಕಾರ ಸಿಕ್ಕಿ ಅದಕ್ಕೆ ಹೊಂದುವ ವೇತನ ಸಹ ಸಿಕ್ಕಾಗ ಸಹಜವಾಗಿಯೇ ಶಿಕ್ಷಣ ಕ್ಷೇತ್ರ ಆಕರ್ಷಕವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

http://www.independent.co.uk/news/education/schools/are-finnish-schools-the-best-in-the-world-2289083.html

ಅಂಬಾನಿ ಸಂಪತ್ತಿಗೆ ಟಾ ಟಾ ಸವಾಲ್

ಉಪ್ಪಿನಿಂದ ಹಿಡಿದು ಬೆಲೆಬಾಳುವ ಜಾಗ್ವಾರ್ ಕಾರುಗಳ ತನಕ ಉತ್ಪಾದಿಸುವ ಬೃಹತ್ ಕೈಗಾರಿಕೋದ್ಯಮಿ ರತನ್ ಲಾಲ್ ಟಾ ಟಾ (ಕೆಲವರು ತಾ ತಾ ಎಂತಲೂ ಬರೆಯುತ್ತಾರೆ) ಇಂಗ್ಲೆಂಡಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಲಯನ್ಸ್ ಕೈಗಾರಿಕಾ ಸಮುಚ್ಚಯಗಳ ಮಾಲೀಕ ಮುಕೇಶ್ ಅಂಬಾನಿಯ ಶ್ರೀಮಂತಿಕೆ ಬಗ್ಗೆ ಮಾತನಾಡಿ ವಿವಾದಕ್ಕೆ ಒಳಗಾಗಿದ್ದಾರೆ.

ವಿಶ್ವ ನಿಬ್ಬೆರಗಾದ, ಶ್ರೀಮಂತಿಕೆಯ ನಗ್ನ ಪ್ರದರ್ಶನ ನೀಡಿದ ಅಂಬಾನಿ ವಾಸದ ಮನೆ ಭಾರತದಂಥ ಬಡ ದೇಶದಲ್ಲಿ ಭಾರತೀಯನೊಬ್ಬನಿಂದ ಬೇಕಿತ್ತೆ ಎಂದು ಸಾಮಾನ್ಯ ಜನ ಕೇಳಿದರೆ ವಕ್ರ ನೋಟ ಎದುರಿಸಬೇಕಾಗುತ್ತದೆ ಆದರೆ ಅದೇ ಮತೊಬ್ಬ ಆಗರ್ಭ ಶ್ರೀಮಂತ ಟಾ ಟಾ ಹೇಳಿದಾಗ  ಆ ಮಾತಿಗೆ ತೂಕ ಸೇರಿ ದೊಡ್ಡ ಸುದ್ದಿಯಾಯಿತು.

ಅಂಬಾನಿ ಕಟ್ಟಿದ ೧೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ, ೩೯೮,೦೦೦ ಸಾವಿರ ಚದರಡಿಯ, ಏಳು ವರ್ಷಗಳ ಕಾಲ ಸಮಯ ತೆಗೆದು ಕೊಂಡ, ೧೬೦ ಕಾರುಗಳನ್ನು, ಮೂರು ಹೆಲಿಕಾಪ್ಟರ್ ಗಳನ್ನು ಪಾರ್ಕ್ ಮಾಡಬಹುದಾದ  ೨೭ ಮಹಡಿಯ ಕಟ್ಟಡ ದ ಉದ್ಘಾಟನೆ ಗೇ  ವಿಶ್ವದ ವಿವಿಧ  ಕಡೆಗಳಿಂದ ಬರುವ ಅತಿಥಿಗಳು ಮೈಲುಗಟ್ಟಲೆ ಉದ್ದ ಚಾಚಿ ಕೊಂಡ ಕೊಳೆಗೇರಿಗಳನ್ನು ದಾಟಿ ಕೊಂಡು ಬರಬೇಕಂತೆ. ಭಾರತದ ಸುಮಾರು ಎಂಭತ್ತು ಕೋಟಿ ಗೂ ಅಧಿಕ ಜನ ದಿನಕ್ಕೆ ನೂರು ರೂಪಾಯಿಗಿಂತ ಕಡಿಮೆ ಸಂಪಾದನೆ ಮಾಡುವಾಗ ಈ ಆಗರ್ಭ ಶ್ರೀಮಂತ ಇಂಥ ದುಂದು ವೆಚ್ಚ ಮಾಡೋ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸುವವರೂ ಇದ್ದಾರೆ.

ಶ್ರೀಮಂತಿಕೆಯ ಮೇಲಿನ ಉದಾಹರಣೆ ದೇಶೀಯ ದಾದರೆ ಕೆಳಗಿದೆ ನೋಡಿ ವಿದೇಶೀ ಶ್ರೀಮಂತನ ಕಥೆ.

ಅಮೆರಿಕೆಯ ಆಗರ್ಭ ಶ್ರೀಮಂತ ನಿಕೊಲಸ್ ಬರ್ಗ್ರೆವಿನ್ ಎಲ್ಲ ಧನವಂತರ ಹಾಗೆ ಧನಪಿಶಾಚಿ ಅಲ್ಲ. ಈತ ಒಬ್ಬ ಮಹಾ ಸಾತ್ವಿಕ.  ತನ್ನ ಧನದ ಮದದಿಂದ ಓಲಾಡದೇ ಬಡವರಿಗೆ ದಾನ ಮಾಡುವ, ಕಾಳಜಿ ಇರುವ ಶ್ರೀಮಂತ.

ಕಾಂಬೋಡಿಯದಲ್ಲಿ ಕೃಷಿಕರಿಗೆ ಸಹಾಯ ಮತ್ತು ಬಡ ರಾಷ್ಟ್ರಗಳಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣ ಹೀಗೆ ಹತ್ತು ಹಲವು ದಾರಿದ್ರ್ಯ ನಿವಾರಣಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಕೊಲಸ್ ಇತರ ಧನವಂತರಿಗೆ ಮಾದರಿಯಾಗಿದ್ದಾರೆ.

ಷೇರುಮಾರುಕಟ್ಟೆಯಲ್ಲಿ ಅಗಾಧವಾಗಿ ಸಂಪಾದಿಸಿದ ನಿಕೊಲಸ್ ಹಣದೊಂದಿಗೆ ಬರುವ ಎಲ್ಲಾ ಸೌಕರ್ಯಗಳನ್ನೂ ಪಡೆದರು. ಫ್ಲೋರಿಡಾದ ಖಾಸಗಿ ದ್ವೀಪವೊಂದರಲ್ಲಿ ಬಂಗಲೆ, ನ್ಯೂಯಾರ್ಕಿನಲ್ಲಿ ಅತಿ ದುಬಾರಿ ಮನೆ, ಇವೆಲ್ಲವನ್ನೂ ಮಾರಿ ಹೋಟೆಲ್ನಲ್ಲಿ ಬಾಡಿಗೆಗಿದ್ದು,  ತಮ್ಮ ಸಂಪತ್ತನ್ನು ಬಡವರ ಏಳಿಗೆಗಾಗಿ ಇಟ್ಟಿದ್ದಾರೆ ನಿಕೊಲಸ್.

“ಥಳಕು ಬೆಳಕಿನ ಜೀವನ ಮತ್ತು ಜನರಿಗೆ ಪ್ರದರ್ಶಿಸುವ ತೋರಿಕೆಯ ಬದುಕು ಶೂನ್ಯ, ನನ್ನ ಹತ್ತಿರ ಇರುವುದೆಲ್ಲವೂ ಕ್ಷಣಿಕ, ನಾವೀ ಜಗತ್ತಿನಲ್ಲಿರುವುದು ಅಲ್ಪ ಸಮಯ ಮಾತ್ರ. ಶಾಶ್ವತವಾಗಿ ನಿಲ್ಲುವ ನಮ್ಮ ನಡವಳಿಕೆಗಳೇ ನಿಜವಾದ ಮೌಲ್ಯ” ಇವು ನಿಕೊಲಸ್ ಅವರ ನುಡಿಮುತ್ತುಗಳು.

ಪ್ರಚಾರಗಳಿಂದ ಯಾವಾಗಲೂ ದೂರವಿರುವ ಈ ಯುವ ಶ್ರೀಮಂತ ಅನೇಕರಿಗೆ ದೊಡ್ಡ ಒಗಟು. ಕೆಲ ವರ್ಷಗಳ ಹಿಂದೆ ಡಚ್ ಪತ್ರಿಕೆಯೊಂದು ಅವರ ಬಗ್ಗೆ  ಬರೆದಾಗ ಪತ್ರಿಕೆಯ ಎಲ್ಲ ಪ್ರತಿಗಳನು ಖರೀದಿಸಿ ಬಿಸಾಕಿದರು.

ನಮ್ಮಲ್ಲಿನ ಶ್ರೀಮಂತರಾದ ಅಂಬಾನಿಯಂಥವರು, ಮೈಮಾಟ ಪ್ರದರ್ಶಿಸಿ ಹಣಗಳಿಸುವ ಬಾಲಿವುಡ್ನ ನರ್ತಕ ನರ್ತಕಿಯರು ಮತ್ತು ಇತರೆ ಹತ್ತು ಹಲವು ಕೃತ್ರಿಮ ಗಳ ಮೂಲಕ ಸಂಪಾದಿಸಿದ ಹಣವಂತರು ನಿಕೊಲಸ್ ಬರ್ಗ್ರೆವಿನ್ ಅವರಿಂದ ಕಲಿಯಲು ಬಹಳಷ್ಟಿದೆ.

ಈಗಿನ ಕಾಲದ ಹಣವಂತರ ಅಹಂಕಾರ, ಧಿಮಾಕನ್ನು ಕಂಡ ನಮಗೆ ನಿಕೊಲಸ್ ಒಂದು ಕಾರಂಜಿ ಇದ್ದಂತೆ. ಒಂದು ಆಹ್ಲಾದಕರ ತಂಗಾಳಿ.

ಸುನ್ನತಿ ಕೂಡದು ಎನ್ನುವ ಸ್ಯಾನ್ ಫ್ರಾನ್ಸಿಸ್ಕೋ

ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರ ದಲ್ಲಿ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ “ಸುನ್ನತಿ” ಯನ್ನು ನಿಷೇಧಿಸುವ ಕುರಿತು ಜನಾಭಿಪ್ರಾಯ ಕೇಳಲಾಗುತ್ತದೆ. ಪುರುಷರ ಗುಪ್ತಾಂಗದ ತುದಿಯ ಚರ್ಮವನ್ನು ಕಳೆಯುವ ಈ ಆಚರಣೆ ಕ್ರೈಸ್ತರಲ್ಲಿ ವ್ಯಾಪಕವಾಗಿಯೂ, ಯಹೂದ್ಯ ಮತ್ತು ಇಸ್ಲಾಂ ಧರ್ಮೀಯರಲ್ಲಿ ಕಡ್ದಾ ಯವಾಗಿಯೂ ಆಚರಿಸಲ್ಪಡುತ್ತದೆ.

ಅಮೆರಿಕೆಯಲ್ಲಿ ಶೇಕಡ ಎಂಭತ್ತು ಅಮೆರಿಕನ್ನರು ಸುನ್ನತಿ ಮಾಡಿಸಿಕೊಂಡಿರುತ್ತಾರೆ. ಕ್ರೈಸ್ತ ಧರ್ಮ ಪಾಲಿಸಲ್ಪಡುವ ಫಿಲಿಪ್ಪೀನ್ಸ್ ನಂಥ ದೇಶಗಳಲ್ಲಿ ಎಲ್ಲಾ ಪುರುಷರೂ ಸುನ್ನತಿ ಮಾಡಿಸಿ ಕೊಂಡಿರುತ್ತಾರೆ. ಮತ್ತು ಸುನ್ನತಿ ಮಾಡಿಸಿಕೊಂಡವ ಪರಿಪೂರ್ಣ ಪುರುಷ ಎಂದು ಹೆಮ್ಮೆ ಪಡುತ್ತಾರೆ. ಇಸ್ಲಾಂ ಧರ್ಮದ ಪ್ರಭಾವದ ಕಾರಣ ಫಿಲಿಪ್ಪಿನ್ಸ್ ನಲ್ಲಿ ಸುನ್ನತಿ ಪದ್ಧತಿ ಜಾರಿಗೆ ಬಂದಿತು ಎಂದು ಅಲ್ಲಿನ ಇತಿಹಾಸಕಾರರೊಬ್ಬರ ಅಭಿಪ್ರಾಯ.

ಇಸ್ಲಾಂನ ಪವಿತ್ರ ಗ್ರಂಥ ‘ದಿವ್ಯ ಕುರಾನ್’ ನಲ್ಲಿ ಇದರ ಉಲ್ಲೇಖವಿಲ್ಲದಿದ್ದರೂ ಇಸ್ಲಾಂ ಧರ್ಮ ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳ ತರಹ ಅಬ್ರಹಾಮಿಕ್ ಧರ್ಮವಾದ್ದರಿಂದ ಮತ್ತು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಈ ಮೂರೂ ಧರ್ಮಗಳವರ ಪಿತಾಮಹರಾದ್ದರಿಂದ ಮುಸ್ಲಿಮರೂ ಕಡ್ಡಾಯವಾಗಿ ಸುನ್ನತಿ ಮಾಡಿಸಿ ಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕುರಾನಿನಲ್ಲಿ ಆ ಪ್ರಸ್ತಾಪ ಇಲ್ಲದಿದ್ದರೂ ಪ್ರವಾದಿಗಳು ವಿಶ್ವಾಸಿಗಳಿಗೆ ಇರಲೇ ಬೇಕಾದ “ಫಿತ್ರ” ಎಂದು ಕರೆಯಲ್ಪಡುವ ಶುಚಿತ್ವಕ್ಕೆ ಸಂಬಂಧಿಸಿದ “ನೈಜ” (natural) ಅಭ್ಯಾಸ  ಅನುಸರಿಸಲೇಬೇಕು ಎಂದು ನಿರ್ದೇಶಿಸಿದ್ದಾರೆ. ಅವು, ೧. ಸುನ್ನತಿ ೨. ಗುಪ್ತಾಂಗದ ಸುತ್ತ ಶುಚಿ ೩. ಮೀಸೆ ಚಿಕ್ಕದಾಗಿ ಕತ್ತರಿಸುವುದು, ೪. ಉಗುರು ಕತ್ತರಿಸುವುದು ಮತ್ತು ೫. ಕಂಕುಳಿನ ಭಾಗದ ಕೂದಲನ್ನು ತೆಗೆಯುವುದು.     

ಸುನ್ನತಿಯನ್ನು ಕೇವಲ ಧಾರ್ಮಿಕ ಕಟ್ಟಳೆಯಾಗಿ ಮಾತ್ರ ಮಾಡಿಸಿ ಕೊಳ್ಳದೆ ಶುಚಿತ್ವ ಮತ್ತು ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಮಾಡಿಸಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮೀಯರಿಗೆ ಪ್ರತೀದಿನ ಕಡ್ಡಾಯವಾದ ಐದು ಹೊತ್ತಿನ ಆರಾಧನಾ ನಿರ್ವಹಣೆಗೆ ದೈಹಿಕ ಶುಚಿತ್ವದೊಂದಿಗೆ “ಶೌಚ” ಶುಚಿತ್ವ ಇರುವುದೂ ಅತೀ ಅವಶ್ಯ. ಮೂತ್ರ ವಿಸರ್ಜನೆ ನಂತರ ನೀರಿನೊಂದಿಗೆ ಶುಚಿ ಮಾಡಿಕೊಳ್ಳಲೇ ಬೇಕು, ಹಾಗೆ ಯಾವುದಾದರೂ ಕಾರಣಕ್ಕೆ ಶುಚಿ ಮಾಡಿ ಕೊಳ್ಳಲು ಆಗದ ಸಂದರ್ಭದಲ್ಲಿ ಮಸ್ಜಿದ್ ಒಳಗೆ ಪ್ರವೇಶಿಸುವಂತಿಲ್ಲ. ಹಾಗೆಯೆ ಸುನ್ನತಿ ಮಾಡಿಸಿಕೊಳ್ಳದಿದ್ದವರು ನಮಾಜ್ ಮಾಡುವುದಾಗಲೀ, ಮಸ್ಜಿದ್ ಒಳಗೆ ಪ್ರವೇಶಿಸುವುದಾಗಲೀ ಕೂಡದು. ಸುನ್ನತಿ ಮಾಡಿಕೊಳ್ಳದ, ಶೌಚ ಶುಚಿತ್ವ ಅನುಸರಿಸದವರು ಪವಿತ್ರ ಕುರಾನ್ ಸಹ ಮುಟ್ಟುವಂತಿಲ್ಲ ಎಂದು ಸಂಪ್ರದಾಯವಾದಿಗಳ ನಿಲುವು.

ಈಗ ಇದಕ್ಕೆ ಚ್ಯುತಿ ಅಮೆರಿಕೆಯ ರಾಜ್ಯವೊಂದರಲ್ಲಿ. ಮುಸ್ಲಿಂ ವಿರೋಧಿ ಅಥವಾ Islamophobia ಕಾರಣ ಈ ನಿಯಮವನ್ನು ಜಾರಿಗೊಳಿಸುತ್ತಿಲ್ಲವಾದರೂ ಬಹಳಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರ ವಿರೋಧ ಈ ನಿಯಮಕ್ಕೆ ಬರುತ್ತಿದೆ. ಕ್ರೈಸ್ತರೂ ಮತ್ತು ಯಹೂದ್ಯರೂ ಈ ಕ್ರಮವನ್ನು ಟೀಕಿಸಿ ಇದು ಅಮೆರಿಕೆಯ first amendment ನಲ್ಲಿ ನೀಡಲಾಗಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುತ್ತಿದ್ದಾರೆ.  

ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು. ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು, ಸೋಂಕು ತಗುಲಬಹುದು ಎನ್ನುವ ಭಯ. ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ. ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ. ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು  ವೈದ್ಯರುಗಳ ಅಭಿಪ್ರಾಯ.

ಸುನ್ನತಿ ಶಸ್ತ್ರ ಚಿಕಿತ್ಸೆ ಅತ್ಯಂತ ವೇದನೆಯಿಂದ ಕೂಡಿದ್ದು, ಎಳೇ ಮಕ್ಕಳ ಮೇಲೆ ಇದನ್ನು ಅವರ ಸಮ್ಮತಿಯಿಲ್ಲದೆ ಹೇರಲಾಗುವುದರಿಂದ ಇದು ಕೂಡದು ಎನ್ನುವುದು ವಿರೋಧಿಗಳ ನಿಲುವು. ಸುನ್ನತಿ ಸಹಿಸಲಾಗದ  ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ. ಹದಿನೈದು ಇಪ್ಪತ್ತು ವರ್ಷಗಳ ಮೊದಲು ಅರಿವಳಿಕೆ ನೀಡದೆ ಹೆಚ್ಚಾಗಿ ಕ್ಷೌರಿಕರು ಸುನ್ನತಿ ಮಾಡುತ್ತಿದ್ದರು. ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.

ಯಹೂದ್ಯರಲ್ಲಿ ಸುನ್ನತಿ ಮಾಡಿಸಿ ಕೊಳ್ಳುವುದು ದೇವರ ಮತ್ತು ಅಬ್ರಹಾಮರ ನಡುವಿನ ಒಪ್ಪಂದದ ಆಚರಣೆಯಾಗಿ. ಯಹೂದ್ಯರು ಗಂಡು ಮಗು ಜನಿಸಿದ ಎಂಟನೆ ದಿನ ಸುನ್ನತಿ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಮಗು ಹುಟ್ಟಿದ ಕೂಡಲೇ ಮಾಡುವುದಾದರೂ, ಅವರವರ ಅನುಕೂಲಕ್ಕೆ ತಕ್ಕಂತೆ ೧೦-೧೨ ವರ್ಷಗಳ ಒಳಗೆ ಮಾಡುತ್ತಾರೆ.

ಸುನ್ನತಿ ವಿರುದ್ಧ ವಾದಿಸುವವರು ಯಾವುದೇ ರೀತಿಯ ಕಾರಣಗಳನ್ನು ನೀಡಿದರೂ ವಿವೇಚನೆಗೆ  ನಿಲುಕುವ ಯಾವುದೇ ಧಾರ್ಮಿಕ  ಆಚರಣೆಗಳಿಗೆ ಯಾರದೇ ಶಿಫಾರಸ್ಸಿನ ಅಥವಾ ವಿರೋಧದ ಪರಿವೆ ಇರಕೂಡದು. ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಧರ್ಮಗಳಿಗೆ ಸಂಬಂಧಿಸಿದ ಪ್ರತಿಯೊಂದನ್ನು ಟೀಕಿಸುವುದು ಕೆಲವರ ಜಾಯಮಾನ ಸರಿಯಲ್ಲ. ಆಚರಣೆಗಳನ್ನು ವಿರೋಧಿಸುವವರಿಗೆ ವಿರೋಧಿಸಳು ಇರುವ ಹಕ್ಕಿನಂತೆಯೇ ಅದರ ಪರವಾಗಿ ನಿಲ್ಲುವವರಿಗೂ ಅದೇ ತೆರನಾದ ಹಕ್ಕಿದೆ ಎನ್ನುವದನ್ನು ಮನಗಾಣಬೇಕು.

ಸುನ್ನತಿ ಬಗ್ಗೆ ಒಂದು ಜೋಕು: ಒಮ್ಮೆ ಒಬ್ಬ ಹುಡುಗನಿಗೆ ಸುನ್ನತಿ ಮಾಡಿಸಲು ಮನೆಯವರು ನಿರ್ಧರಿಸುತಾರೆ. ಅವನು ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾಗಿರುತ್ತಾನೆ. ಅವನ ಮಿತ್ರರುಗಳು ತುಂಬಾ ನೋವಾಗುತ್ತೆ ಈ ವಯಸ್ಸಿನಲ್ಲಿ ಕತ್ತರಿಸಿಕೊಂಡಾಗ ಎಂದು ಹೆದರಿಸಿದ ಕಾರಣ ಅವನು ರಂಪಾಟ ಮಾಡುತ್ತಾನೆ. ಒಂದೇ ಸಮನೆ ಅಳುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಬೇಡುತ್ತಿದ್ದ ಅವನನ್ನು ಕಂಡು ಅವನ ತಾಯಿಗೆ ಮರುಕ ತೋರುತ್ತದೆ. ಆಕೆ ಕೂಗಿ ಹೇಳುತ್ತಾಳೆ, ಪಾಪ ಆ ಹುಡುನನ್ನು ಯಾಕೆ ಹಾಗೆ ಎಳೆದು ಕೊಂಡು ಹೋಗ್ತೀರಾ, ಮೊದಲು ಅವನ ಅಪ್ಪನಿಗೆ ಸುನ್ನತಿ ಮಾಡಿಸಿ, ನಂತರ ಮಗನಿಗೆ ಮಾಡಿಸುವಿರಂತೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸುತ್ತಾಳೆ. ಹುಡುಗನ ಬದಲಿಗೆ ಈಗ ಹರಕೆ ಕುರಿಯಾಗುವ ಸರತಿ ಅಪ್ಪನದಾಗುತ್ತದೆ.

ಪ್ರಳಯವಂತೆ, ಇದೇ ತಿಂಗಳಂತೆ, ಸತ್ಯವಾಗ್ಲೂ ಅಂತೆ

ಪ್ರಳಯದ ಬಗ್ಗೆ ಆಗಾಗ ನಾವು ಓದುತ್ತಲೇ ಇರುತ್ತೇವೆ, ಓದಿ ಗಾಭರಿಯಾಗಿ ಸಿಕ್ಕ ಸಿಕ್ಕವರನ್ನು ವಿಚಾರಿಸುತ್ತೇವೆ. ವರ್ಷಗಳ ಹಿಂದೆ ದಕ್ಷಿಣ ಕನ್ನಡ ಮೂಲದ ಖ್ಯಾತ ವಾರಪತ್ರಿಕೆ ಪ್ರಳಯದ ಬಗ್ಗೆ ಒಂದು ಲೇಖನ ಹಾಕಿ ಅದು ಎಷ್ಟು ಜನಪ್ರಿಯ ಆಯಿತು ಎಂದರೆ ಆ ಲೇಖನದ ಪುಸ್ತಿಕೆ ಸಹ ಮಾರಾಟಕ್ಕೆ ಬಂದು ಲಕ್ಷ ಗಟ್ಟಲೆ ಜನ ಕೊಂಡು ಓದಿದರು. ಇಂಥ ಜನರಲ್ಲಿ, ಗಾಭರಿ, ಭಯ, ಹುಟ್ಟಿಸಿ ಹಣ ಮಾಡಿಕೊಳ್ಳುವ ದಂಧೆ ಬಹಳ ಹಳತು. ಈಗ ಅಮೆರಿಕೆಯ ಕ್ಯಾಲಿಫೋರ್ನಿಯಾದ ಧರ್ಮ ಬೋಧಕ ಹೆರಾಲ್ಡ್ ಕ್ಯಾಂಪಿಂಗ್  ಗುಲ್ಲೆಬ್ಬಿಸಿದ್ದಾನೆ ಇದೇ ತಿಂಗಳು ೨೧ ಕ್ಕೆ ಅದೂ ಆರು ಘಂಟೆಗೆ ಸರಿಯಾಗಿ ಪ್ರಳಯವಾಗಲಿದೆ ಅಂತ. ಪವಿತ್ರ ಬೈಬಲ್ ಗ್ರಂಥವನ್ನು ಅವನೂ ಅವನ ಮಿತ್ರರೂ decipher ಮಾಡಿದ್ದಾರಂತೆ. 89 ವರ್ಷ ಪ್ರಾಯದ ಈ ವ್ಯಕ್ತಿ ೭೦ ವರ್ಷಗಳ ಅವಿರತ ಬೈಬಲ್ ಅಧ್ಯಯನದಿಂದ ಪ್ರಳಯದ ಬಗ್ಗೆ ಪವಿತ್ರ ಗ್ರಂಥದಲ್ಲಿರುವುದನ್ನು ಜಗತ್ತಿಗೆ ಸಾರುತ್ತಿದ್ದಾನೆ. ಅದರಲ್ಲಿ ಪ್ರಳಯದ ವಿಷಯ ಸಿಕ್ಕಿತಂತೆ. ದೇವ ವಾಣಿ ಇರುವುದು ಮನುಷ್ಯರಿಗೆ ದಾರಿ ದೀಪವಾಗಿ. ಅದರ ಸಂದೇಶ ನೇರವಾದ ಭಾಷೆಯಲ್ಲಿ ಇರಬೇಕು.  ಯಾವುದೇ ಒಂದು ಉಪಕರಣ ಕೊಂಡಾಗ ಅದರೊಂದಿಗೆ ಬರುವ catalogue  ರೀತಿ. ಅದನ್ನು decipher ಮಾಡೋ ಅವಶ್ಯಕತೆ ಬರಕೂಡದು. ಏಕೆಂದರೆ decipher ಮನುಷ್ಯನಿಂದ ಮನುಷ್ಯನಿಗೆ ಬದಲಾಗುತ್ತಾ ಹೋಗುತ್ತದೆ. ಅದರೊಂದಿಗೆ decipher ಮಾಡಲ್ಪಟ್ಟ ಸಂದೇಶವೂ ಕೂಡಾ. ಅವರವರ ಬುದ್ಧಿ ಮತ್ತೆಗೆ ಅನುಸಾರ decipher ಕೆಲಸ ನಡೆಯುತ್ತದೆ.

ಹಿಂದೂ ಶಾಸ್ತ್ರಗಳಲ್ಲಿ ಪ್ರಳಯದ ಬಗ್ಗೆ ಉಲ್ಲೇಖ ಇರುವುದನ್ನು ಕಾಣಬಹುದು. ಕಲಿಯುಗದ ಅವಸಾನದಲ್ಲಿ ಪ್ರಳಯ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ. ಅದೇ ರೀತಿ “ಏಕದೇವೋಪಾಸನೆ” ಗೆ ಒತ್ತು ನೀಡುವ ಅಬ್ರಾಹಾಮಿಕ್ ಧರ್ಮಗಳಾದ ಯಹೂದ್ಯ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಲ್ಲೂ ಇದರ ಪ್ರಸ್ತಾಪ ಇದೆ. ಇಸ್ಲಾಂ ಧರ್ಮದಲ್ಲಿ ಪ್ರಳಯವನ್ನು “ಯೌಮ್ ಅಲ್ ಕಿಯಾಮ” (ಅಂತ್ಯ ದಿನ) ಎಂದು ಕರೆಯುತ್ತಾರೆ.

ಇಸ್ಲಾಮಿನಲ್ಲಿ ಪ್ರಳಯದ ದಿನದ ಬಗ್ಗೆ ಉಲ್ಲೇಖ ಕೆಲವೊಂದು ದೃಷ್ಟಾಂತ ಗಳೊಂದಿಗೆ ಕೊಡಲಾಗಿದೆ. ಏಕಾ ಏಕಿ ಪ್ರಳಯ ಆರಂಭ ಆಗೋಲ್ಲ. ತಂದೆ ಮಗನನ್ನು ಕೊಲ್ಲುವುದು, ತಾಯಿ ಮಗನ, ತಂದೆ ಮಗಳ ನಡುವಿನ ಲೈಂಗಿಕ ಸಂಬಂಧ, ಅನ್ಯಾಯಗಳು, ಬಡ್ಡಿ, ಮೋಸ, ವಂಚನೆ, ಕೊಲೆ ಸುಲಿಗೆ, ಕುಡಿತ,  ದಿನನಿತ್ಯದ ಪ್ರತಿಯೊಬ್ಬರ ಧಂಧೆಯಾಗಿ, ಜೀವನ ರೀತಿಯಾಗಿ ಮಾರ್ಪಟ್ಟು ಇಂಥ ಕೃತ್ಯಗಳಲ್ಲಿ ತೊಡಗಿಸಿ ಕೊಂಡವರು ಇದನ್ನು ಸ್ವಾಭಾವಿಕ ಎಂದು ಪರಿಗಣಿಸಿ ಉಡಾಫೆಯಿಂದ ಬದುಕುವುದು. ಆಳುವವರು ಅತಿ ಕ್ರೂರಿಗಳಾಗಿ ಮಾರ್ಪಡುವುದು. ಬಡವರಿಗೆ ಸಲ್ಲಬೇಕಾದ ಪಾಲನ್ನು ಕೊಡದೆ ಸ್ವತಃ ಸ್ವಾಹಾ ಮಾಡುವುದು. ಹೀಗೆ ಅನ್ಯಾಯ, ಅಕ್ರಮ, ಕ್ರೌರ್ಯಗಳು ಮುಗಿಲು ಮುಟ್ಟಿದಾಗ ಇನ್ನೂ ಗಂಭೀರವಾದ ಕೆಲವು ಘಟನೆಗಳು ಜರುಗುವುದು ಪ್ರಳಯಕ್ಕೆ ಮುನ್ನ.

ಪ್ರಥಮವಾಗಿ ಪವಿತ್ರ ಮಕ್ಕಾ ನಗರದಲ್ಲಿರುವ ಕಪ್ಪು ಚೌಕಾಕಾರದ “ಕಾಬಾ” ಭವನ ವನ್ನು ನಾಶ ಮಾಡ ಲಾಗುವುದು.

ಒಂದು ವಿಚಿತ್ರ, ಭೀಕರ ಜಂತುವಿನ ದರ್ಶನ ವಿಶ್ವಕ್ಕೆ ಆಗುವುದು.

ಭಯಂಕರ ಚಂಡಮಾರುತ ಬೀಸಿ ಬೆಟ್ಟ ಗುಡ್ಡಗಳು, ಪರ್ವತಗಳು ಹತ್ತಿಯ ಉಂಡೆಗಳಾಗಿ ಹಾರುವುವು.

ಅಂತಿಮವಾಗಿ, ಪೂರ್ವ ದಿಕ್ಕಿನಲ್ಲಿ ಹುಟ್ಟುವ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಹುಟ್ಟುವನು. ಈ ಬೆಳವಣಿಗೆಯೊಂದಿಗೆ ಮನುಷ್ಯನ ಎಲ್ಲಾ ಲೆಕ್ಕಾಚಾರಗಳ ಕಡತವನ್ನು ಮುಚ್ಚಲಾಗುವುದು.( end of year accounting ಥರ).

ಮೇಲೆ ಹೇಳಿದ ವರ್ಣನೆ ಇಸ್ಲಾಂ ಗ್ರಂಥ ಗಳಲ್ಲಿರುವ ನೂರಾರು ದೃಷ್ಟಾಂತ ಗಳಿಂದ ಆರಿಸಿದ್ದು.         

ಪ್ರಳಯದ ಬಗ್ಗೆ ಕನ್ನಡದ ನ್ಯೂಸ್ ಚಾನಲ್ ನವರು ದುಗುಡ, ಭಯ ಮಿಶ್ರಿತ ಧ್ವನಿಯಲ್ಲಿ ವಿವರಣೆ, ವರ್ಣನೆ ನೀಡುವುದನ್ನು ಕೇಳಿದವರು ಕಂಪಿಸುವುದರಲ್ಲಿ ಅನುಮಾನವಿಲ್ಲ. ಒಂದು ಆಂಗ್ಲ ಚಿತ್ರದ ತುಣುಕೊಂದನ್ನು ತೋರಿಸುತ್ತಾ ಪ್ರಳಯವಂತೆ, ಹಾಗಾಗುತಂತೆ, ಹೀಗಾಗುತ್ತಂತೆ ಎಂದು ಅಂತೆ ಕಂತೆಗಳನ್ನು ಪುಂಖಾನು ಪುಂಖವಾಗಿ ಬಿಡುತ್ತಾ ಜನರಲ್ಲಿ ಗಾಭರಿ ಹುಟ್ಟಿಸುವ ಇವರ ನಡವಳಿಕೆಗೆ ಏನನ್ನಬೇಕೋ? ಈ ವರದಿಗಳನ್ನು ನೋಡಿದ ಜನ ಗಾಭರಿಯಾಗೋ ಬದಲು ಆ ಚಾನಲ್ ಗಳಿಗೆ ಇ –ಮೇಲ್ ಮೂಲಕ ಛೀಮಾರಿ ಹಾಕಿ ಇಂಥ ಬೊಗಳೆ ಗಳನ್ನು ಜನ ಸಹಿಸರು ಎನ್ನುವ ಸಂದೇಶವನ್ನು ಕೊಡಬೇಕು.

ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು

ಕಣ್ಣಿಗೆ ಕಣ್ಣು, ಹಲ್ಲಿಗೆ, ಹಲ್ಲು – ಕ್ರೈಸ್ತ ಧರ್ಮದ “ಹಳೇ ಒಡಂಬಡಿಕೆ” ಯ ಈ ಮಾತುಗಳು ಇಸ್ಲಾಮಿನ ಶರಿಯಾ ಕಾನೂನಿನಲ್ಲೂ ಶಿಫಾರಸು ಮಾಡಲಾಗಿದೆ. ಒಂದು ರೀತಿಯ ಸೇಡಿಗೆ ಸೇಡು. ಆದರೆ ಇದನ್ನು ತಪ್ಪು ಎನ್ನುವವರೂ ಕೆಲವೊಮ್ಮೆ ಘಟನೆಗಳ, ಅಪರಾಧಗಳ ಕ್ರೌರ್ಯದ ಗಂಭೀರತೆಯನ್ನು ಗಮನದಲ್ಲಿಟ್ಟು ಕೊಂಡು ಈ ರೀತಿಯ retributory justice ವಿಧಾನ ಸರಿ ಎಂದು ವಾದಿಸುವರು.   

ಕಣ್ಣಿಗೆ ಕಣ್ಣು ಬೇಕು ಎನ್ನುವವರು ಒಂದು ಕಡೆಯಾದರೆ ಮಾನವೀಯ ದೃಷ್ಟಿಯಿಂದ ದೃಷ್ಟಿಯನ್ನು ಬೇರೆಡೆ ಹೊರಳಿಸಬೇಕು ಎನ್ನುವವರು ಮತ್ತೊಂದು ಕಡೆ. ಪ್ರತೀಕಾರ ಮಾನವ ಸಹಜ ಗುಣ. ಪುಟ್ಟ ಮಕ್ಕಳ ಪ್ರತಿಕ್ರಿಯೆಗಳೂ ಈ  ಮಾನವ ಸಹಜ ಗುಣಕ್ಕೆ ಅನುಗುಣವಾಗಿಯೇ ಇರುವುದನ್ನು ಗಮನಿಸಿದ್ದೇವೆ. ಕ್ಷಮಿಸುವವನು ಉದಾರಿ, ಆ ಗುಣ ಎಲ್ಲರಿಗೂ ಬರಬೇಕೆಂದಿಲ್ಲ. ಸಮಾಜ ಶಿಕ್ಷೆಯನ್ನು ಪ್ರತೀಕಾರ ಎನ್ನುವ ದೃಷ್ಟಿಯಿಂದ ನೋಡಬಾರದು, ಹಾಗೆ ನೋಡಿದಾಗ ಒಸಮಾ ಬಿನ್ ಲಾದೆನ್ ನ ವಧೆಯೂ ಸಮ್ಮತವೆನ್ನಿಸದು. ಒಸಾಮಾ ನ ವಧೆ ಸರಿ ಎಂದು ನಾಗರೀಕ ಸಮಾಜ ಖಂಡಿತವಾಗಿ ಒಪ್ಪುತ್ತದೆ. ಕೆಲವರು ಅವನನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬೇಕಿತ್ತು ಎನ್ನುವವರೂ ಇದ್ದಾರೆ. ಆದರೆ ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಲು ಮಾಡಿ ಕೊಳ್ಳ ಬೇಕಾದ ಸಿದ್ಧತೆಗಳನ್ನು ನೋಡಿದಾಗ, ಅದರ ಎಡರು ತೊಡರು ಗಳನ್ನು, ಗಮನಕ್ಕೆ ತೆಗೆದು ಕೊಂಡಾಗ targeted elemination ಹೆಚ್ಚು ಪ್ರಾಯೋಗಿಕ ಎಂದು ತೋರುತ್ತದೆ.  

ಪ್ರತಿಭಾವಂತಳಾದ ಇಂಜಿನಿಯರಿಂಗ್ ಪದವೀಧರೆಯಾದ ಇರಾನಿನ ಯುವತಿ ಅಮೀನ ಬೆಹ್ರಾಮಿಯ ಜೀವನ ಸಂಪೂರ್ಣವಾಗಿ ನಾಶವಾಗಿ ಹೋಯಿತು, ತನ್ನನ್ನು ಬಯಸಿದ ಮಾಜಿದ್ ಮೋವಾಹೆದಿ ಎನ್ನುವ ನರ ರಾಕ್ಷಸನಿಂದ. ಆಮಿನಾಳನ್ನು ವಿವಾಹವಾಗಲು ಬಯಸಿದ್ದ ಮಾಜಿದ್ ಈಕೆಯ ಅಸಮ್ಮತಿಯಿಂದ ಕ್ರುದ್ಧನಾದ. ನನ್ನನ್ನು ಮದುವೆಯಾಗದಿದ್ದರೆ ಕೊಲ್ಲುತ್ತೇನೆ ಎಂದು ಮೊದಲಿಗೆ ಬೆದರಿಸಿದ್ದ ಇವನು ಮನಸ್ಸು ಬದಲಿಸಿ ನನಗೆ ಸಿಗದ ಇವಳು ಬೇರಾರಿಗೂ ಸಿಗಕೂಡದು ಎಂದು ತೀರ್ಮಾನಿಸಿದ . ಒಂದು ಬಕೆಟ್ ತುಂಬಾ ಆಸಿಡ್ ಅನ್ನು ಅಮೀನಾಳ ಮುಖದ ಮೇಲೆ ಎರಚಿದ. ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡ ಈಕೆ ಭಯ ಹುಟ್ಟಿಸುವಂಥ ಕುರೂಪಿಯಾದಳು.  ಇರಾನಿನ ನ್ಯಾಯಾಲಯ ದಂಡವನ್ನೂ ಸೆರೆವಾಸದ ಶಿಕ್ಷೆಯನ್ನೂ ವಿಧಿಸಿತು ಮಾಜಿದ್ ನಿಗೆ. ಈ ತೀರ್ಪಿಗೆ ಅಮೀನ ಸಮ್ಮತಿಸಲಿಲ್ಲ. ನನ್ನ ನೋವನ್ನು  ಸ್ವತಃ ತನ್ನ ಕಣ್ಣು ಗಳನ್ನು ಕಳೆದು ಕೊಳ್ಳುವ ಮೂಲಕ ಮಾತ್ರ ಮಾಜಿದ್ ಅರಿಯಬಲ್ಲ ಎಂದು ವಾದಿಸಿದಳು. ಇದೇ ೧೪ ಮೇ, ೨೦೧೧ ರಂದು ಆಕೆಗೆ ಸಿಕ್ಕಿತು ಬಯಸಿದ ನ್ಯಾಯ. ಹತ್ತಿರದ ಆಸ್ಪತ್ರೆಗೆ ಮಾಜಿದ್ ನನ್ನು ದಾಖಲಿಸಿ ಅವನಿಗೆ ಅರಿವಳಿಕೆ ಕೊಟ್ಟು ಅವನ ಕಣ್ಣುಗಳಲ್ಲಿ ಆಸಿಡ್ ಪ್ರೋಕ್ಷಣೆ ಮಾಡಲು ತೀರ್ಮಾನ ವಾಯಿತು. ಈಗ ಆಗಮನವಾಯಿತು “ಕರುಣಾನಿಧಿ” ಜನರ ದಂಡು. amnesty international ನೇತೃತ್ವದ ಈ ದಂಡು ಹೇಳಿದ್ದು ಈ ರೀತಿ ನ್ಯಾಯ “ ಕಿರುಕುಳಕ್ಕೆ ಸಮಾನ” ಎಂದು. ಕ್ರೂರ ಮಾಜಿದ್ ಎಸಗಿದ ಕೃತ್ಯಕ್ಕೆ ಯಾವ ರೀತಿಯ ವಿಶ್ಲೇಷಣೆ ಕೊಡುತ್ತದೋ ಅಮ್ನೆಸ್ಟಿ. ಪಾಶ್ಚಾತ್ಯರ ಯಾವುದೇ ಮಾತಿಗೂ ಒಲ್ಲೆ ಎಂದು ಹೇಳಿ ಸುಖ ಅನುಭವಿಸುವ ಇರಾನ್ amnesty ಯ ಮಾತಿಗೆ ತಲೆ ಬಾಗಿತು. ಆದರೆ ಅಮೀನಾ ಮಾತ್ರ ತನ್ನ ಹೊರಾಟವನ್ನು ಖಂಡಿತಾ ಮುಂದುವರೆಸುವಳು. ಕಣ್ಣಿಗೆ ಕಣ್ಣು, ಈ ನ್ಯಾಯದಿಂದ ಮಾತ್ರ ಈಕೆ ತೃಪ್ತಳಾಗುವಳು. ಈ ತೆರನಾದ ನ್ಯಾಯದಿಂದ ಭಾವೀ ರಾಕ್ಷಸರು ಪಾಠ ಕಲಿಯಬೇಕು.          

ಗಾಂಧೀಜಿ ಪ್ರಕಾರ ಕಣ್ಣಿಗೆ ಕಣ್ಣು ಎನ್ನುವ ಪ್ರತೀಕಾರದ ಶಿಕ್ಷೆಯಿಂದ ಪ್ರಪಂಚವೇ ಕುರುಡಾಗಬಹುದು. ಇಡೀ ಪ್ರಪಂಚವೇ ಅನೈತಿಕತೆ, ಅನ್ಯಾಯ, ಹಿಂಸೆ ಎಸಗುವ ಕಣ್ಣಾಗುವುದಾದರೆ ಅದು ಕುರುಡಾಗಿರುವುದೇ ಹೆಚ್ಚು ಲೇಸು. ಇಲ್ಲದಿದ್ದರೆ ಪ್ರಪಂಚವೇ ಕುರೂಪಗೊಳ್ಳುವ ಸಾಧ್ಯತೆ ಹೆಚ್ಚು. ಗಾಂಧೀಜಿಯ ಈ ಮಾತಿಗೆ ನಾವು ಸಮ್ಮತಿಸಿದರೆ ಅವರನ್ನು ವಧಿಸಿದ ದ್ರೋಹಿಯನ್ನು ದೇಶ ಸುಮ್ಮನೆ ಬಿಡಬೇಕಿತ್ತು. ಯೋಚಿಸಿ ನೋಡಿ, ಮೈ ಝುಮ್ಮೆನ್ನುವುದಿಲ್ಲವೇ?  ಕೆಲವೊಂದು ಮಾತುಗಳು ಎಲ್ಲಾ ಕಾಲಕ್ಕೂ ಉದ್ಧರಿಸಲು ಉಪಯೋಗಕ್ಕೆ ಬರಬಹುದು, ದಯೆಯ ಆ ಮಾತುಗಳನ್ನು ಭಾಷಣಗಳಲ್ಲೂ, ಬರಹಗಳಲ್ಲೂ ಉಪಯೋಗಿಸಲು ಸುಂದರವಾಗಬಹುದು. quote ರೂಪದಲ್ಲಿ ಆಕರ್ಷಕ ಈ ಹೇಳಿಕೆಗಳು. ಆದರೆ ಸಮಾಜದ ಸ್ವಾಸ್ಥ್ಯವನ್ನೂ, ಹಿತವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡಾಗ ಮಾಜಿದ್ ನಂಥ ದುರುಳರ ಕಣ್ಣುಗಳನ್ನು ಕೀಳಲೇಬೇಕು. ಮುಗ್ಧ, ಅಮಾಯಕ ಹೆಣ್ಣಿನ ಕಣ್ಣುಗಳನ್ನು ಕಿತ್ತ ಅವನ ಕಣ್ಣುಗಳು ತನ್ನ ಕ್ರೌರ್ಯವನ್ನು ಕಂಡು ಹಿಗ್ಗಬಾರದು. ಅಂತಾರಾಷ್ಟ್ರೀಯ ಒತ್ತಡಕ್ಕೆ ಇರಾನ್ ತಲೆಬಾಗದೆ ಆಕೆ ಬಯಸಿದ ನ್ಯಾಯವವನ್ನು ಅವಳಿಗೆ ದಯಪಾಲಿಸಲೇಬೇಕು.  

ಹಿಂಸೆಗೆ ಪ್ರತಿ ಹಿಂಸೆಯಾಗಿ ಅಸ್ತ್ರ ದ ಪ್ರಯೋಗ ನಡೆಯದಿದ್ದರೆ ಪ್ರಪಂಚ ಸುರಕ್ಷಿತ ಸ್ಥಳವಲ್ಲ. ಸ್ಪೇನ್ ದೇಶದ ದ್ವೀಪವೊಂದರ ಪ್ರವಾಸದಲ್ಲಿದ್ದ ಇಂಗ್ಲೆಂಡಿನ ಮಧ್ಯ ವಯಸ್ಕ ಮಹಿಳೆಯೊಬ್ಬರನ್ನು ಯಾವುದೇ ಕಾರಣವಿಲ್ಲದೆ ಓರ್ವ ಯುವಕ ೧೫ ಬಾರಿ ಚಾಕುವಿನಿಂದ ಇರಿದದ್ದು ಸಾಲದು ಎಂದು ಆಕೆಯ ರುಂಡಚ್ಛೇದ ಮಾಡಿ ರಸ್ತೆ ಬದಿಗೆ ಎಸೆದ. ಈ ಮಹಿಳೆ ಪ್ರವಾಸದ ವೇಳೆ ಅಲ್ಲಿನ ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಪಾಠ ಹೇಳಿ ಕೊಡುತ್ತಿದ್ದಳಂತೆ. ಇಂಥ ಹಿಂಸ್ರ ಪಶುಗಳನ್ನು ಸಮಾಜ ಸಹಿಸಿದಾಗ, ಅವರಿಗೆ ತಕ್ಕ ಶಿಕ್ಷೆ ಕೊಡುವಲ್ಲಿ ವಿಫಲವಾದಾಗ ಇಂಥ ಕರುಳು ಹಿಂಡುವ ಘಟನೆಗಳು ಎಲ್ಲೆಲ್ಲೂ ಕಾಣಲು ಸಿಗುತ್ತವೆ. ಕೊಲೆಗಾರ ಒಂದೆರಡು ವರ್ಷ ಜೇಲಿನಲ್ಲಿ ಕಳೆದು ಸಮಾಜಕ್ಕೆ ಮರಳಿ ಬರುತ್ತಾನೆ ತನ್ನ ಮಿಕವನ್ನು ಅರಸುತ್ತಾ.

ಜಪಾನ್ ದುರಂತ ಮತ್ತು ಹಾಸ್ಯ

ಜಪಾನ್ ದುರಂತದಿಂದ ದಿಗ್ಭ್ರಾಂತವಾದ ವಿಶ್ವ ಜಪಾನೀಯರಿಗೆ ತಮ್ಮ ಅನುಭೂತಿ, ಸಂತಾಪ, ಪ್ರಾರ್ಥನೆಗಳನ್ನು ಒಂದು ಕಡೆ ಅರ್ಪಿಸುತ್ತಿದ್ದರೆ  ಮತ್ತೊಂದು ಕಡೆ ಅಲ್ಲಿನ ಸಾವು ನೋವಿನ ಬಗ್ಗೆ ಯಾವ ನೋವೂ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೀಳು ಅಭಿರುಚಿಯ ಜೋಕುಗಳನ್ನು ಸಿಡಿಸುತ್ತಿದ್ದಾರೆ ಕೆಲವರು.

ಅಮೆರಿಕೆಯ ಚಿತ್ರ ಸಾಹಿತ್ಯ ಲೇಖಕನೊಬ್ಬ ಜಪಾನ್ ದುರಂತದ ಬಗ್ಗೆ ಟ್ವೀಟಿಸಿದ್ದು ಹೀಗೆ; “ಜಪಾನಿನ ಭೂಕಂಪನದ ಬಗ್ಗೆ ಒಳ್ಳೆಯ ಭಾವನೆ ಬರಬೇಕಾದರೆ ಪರ್ಲ್ ಹಾರ್ಬರ್ ಸಾವಿನ ಸಂಖ್ಯೆ ಬಗ್ಗೆ ಗೂಗ್ಲಿಸಿ ನೋಡಿ”

೧೯೪೧ ರಲ್ಲಿ ಜಪಾನೀ ನಾವಿಕ ಪಡೆ ಅಮೆರಿಕೆಯ ಹವಾಯಿ ದ್ವೀಪದ ಪರ್ಲ್ ಹಾರ್ಬರ್ ಮೇಲೆ ನಡೆಸಿದ ಅಚ್ಚರಿದಾಯಕ ಆಕ್ರಮಣದಲ್ಲಿ ೨೦೦೦ ಸಾವಿರಕ್ಕೂ ಹೆಚ್ಚು ಜನ ಸತಿದ್ದರು. ಅದಕ್ಕೂ ಹೆಚ್ಚಾಗಿ ಈ ಆಕ್ರಮಣ ಅಮೆರಿಕೆಯ ಸೇನಾ ಪ್ರತಿಷ್ಠೆಗೆ ಭಾರೀ ಪೆಟ್ಟನ್ನೂ ನೀಡಿತ್ತು. ಈ ಆಕ್ರಮಣವನ್ನು ಗಮನದಲ್ಲಿಟ್ಟು ಕೊಂಡು ಪ್ರಸಕ್ತ ನೈಸರ್ಗಿಕ ವಿಕೋಪ ಕಾರಣ ಜಪಾನಿನಲ್ಲಿ ಸಂಭವಿಸಿದ ಅಗಾಧ ಸಾವು ನೋವಿಗೆ ಈತನ ಮನಸ್ಸು ಪ್ರತಿಸ್ಪಂದಿಸಲು ವಿಫಲವಾಯಿತು. ರಾಜಕೀಯ ಕಾರಣಗಳಿಗಾಗಿ ನಡೆದ ಆಕ್ರಮಣಕ್ಕೆ ಸೇಡು ಎನ್ನುವಂತೆ ಟ್ವೀಟಿಸುವ ಈತನಿಗೆ ಸಂದು ಹೋದ ಚರಿತ್ರೆ ಬಗ್ಗೆ ಮರುಗುವುದು ಹುಂಬತನ ಎನ್ನುವುದು ತಿಳಿಯದೆ ಹೋಯಿತು. ಇಂದು ಜಪಾನಿನ ಮೇಲೆ ಎರಗಿದ ನಿಸರ್ಗ ನಾಳೆ ತನ್ನ ದೇಶದ ಮೇಲೂ ಎರಗಬಾರದು ಎನ್ನುವ ಖಾತರಿ ಇಲ್ಲ ಎನ್ನ್ವುಉದು ಈ ಸಾಹಿತಿಗೆ ಅರಿಯದೆ ಹೋಯಿತು.   

ಮೇಲೆ ಹೇಳಿದ ಚಿತ್ರಸಾಹಿತಿಯ ಟ್ವೀಟ್ ಬಗ್ಗೆ ಗುಲ್ಲೆದ್ದು, ಪ್ರತಿಭಟನೆ ಬಂದಾಗ ಅವನು ಹೇಳಿದ್ದು, ನಾನು ಟ್ವೀಟಿ ಸುವಾಗ ೨೦೦ ಜನ ಮಾತ್ರ ಸತ್ತಿದ್ದರು, ಈಗ ೧೦ ಸಾವಿರಕ್ಕೆ ಮುಟ್ಟಿದೆ ಸಾವಿನ ಸಂಖ್ಯೆ, ನನ್ನ ಸಂವೇದನಾ ರಹಿತ ಕಾಮೆಂಟ್ ಗಳಿಗೆ ಕ್ಷಮೆಯಿರಲಿ”. ೨೦೦ ಜನ ಸತ್ತರೆ ಈತನಿಗೆ ದೊಡ್ಡ ವಿಷಯವಲ್ಲ. ಅದು ಗಂಭೀರವೂ ಅಲ್ಲ. ಅಮೆರಿಕೆಯ ದಿವಂಗತ ಸೆನಟರ್ ಟೆಡ್ ಕೆನಡಿಯ ಸಾಕು ನಾಯಿ “ಸ್ಪ್ಲಾಶ್” ಇತ್ತೀಚೆಗೆ ಸತ್ತಾಗ ಅದು ದೊಡ್ಡ ಸುದ್ದಿ. ಭೂಕಂಪದಲ್ಲಿ ಸತ್ತ ಜನರಿಗೆ ತಮಾಷೆಯ ಟ್ವೀಟ್. ಇದು ಸಂಸ್ಕಾರ.

ಈಗ ಮತ್ತೊಬ್ಬ ಹಾಸ್ಯನಟನ ಹಾಸ್ಯದ ಟ್ವೀಟ್ ನೋಡಿ; “ಜಪಾನೀಯರು ತುಂಬಾ ಮುಂದುವರಿದವರು, ಅವರು ಸಮುದ್ರ ತೀರಕ್ಕೆ ಹೋಗುವುದಿಲ್ಲ, ಬದಲಿಗೆ ತೀರವೇ ಅವರಿದ್ದಲ್ಲಿಗೆ ಬರುತ್ತದೆ”. ದೈತ್ಯಾಕಾರದ ಸುನಾಮಿ ಅಲೆಗಳು ೨೦೦ ರಿಂದ ೫೦೦ ಕಿಲೋ ಮೀಟರ್ ವೇಗದಲ್ಲಿ ಸೆನ್ಡಾಯ್ ನಗರದ ಮೇಲೆ ಅಪ್ಪಳಿಸಿ ಹತ್ತಾರು ಸಾವಿರ ಜನ ಸತ್ತಾಗ ಬಂದ ಶೋಕತಪ್ತ ಟ್ವೀಟ್ ಇದು. ಇದು ಬಿಳಿಯರಿಗೆ ಹಾಸ್ಯ. ಅಭಿವ್ಯಕ್ತಿ ಸ್ವಾಂತ್ರ್ಯ. ಬಿಳಿಯರಲ್ಲದ ಜನರ ಮೇಲೆ ಅವರಿಗಿರುವ ಅನುತಾಪ ಅಷ್ಟಕ್ಕಷ್ಟೇ. ಜಪಾನೀಯರನ್ನೂ, ಚೀನೀಯರನ್ನೂ ಹಳದಿ ಚರ್ಮದವರು ಎಂದು ತಮಾಷೆ ಮಾಡುತ್ತಾರಂತೆ ಪಾಶ್ಚಾತ್ಯರು.

ಆಧುನಿಕ ಬದುಕಿನ blackberry ಸಂಸ್ಕೃತಿ ಕಾರಣ ಮನುಷ್ಯ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸಲು, ಅನುಕಂಪ ತೋರಲು ಸೋಲುತ್ತಿದ್ದಾನೆ ಎಂದರೆ ಉತ್ಪ್ರೇಕ್ಷೆ ಆಗಬಹುದೇ?       

ಭೂತ ಕಾಲದ ಬಗ್ಗೆ ತಲೆ ಕೆಡಿಸಿಕೊಳ್ಳುವವರಿಗೆ ಒಬ್ಬ ಮಹನೀಯ ಹೇಳಿದ್ದು;

the past is a foreign country; they do things differently there

ನೀವು ಪುಸ್ತಕದ ನರಿಗಳೋ?

ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮಾಜವೇ ಈ ಹುಳು ಎನ್ನುವ ಪದವನ್ನು ಓದುಗನಿಗೆ ದಯಪಾಲಿಸಿದ್ದು ಅಚ್ಚರಿಯೇ ಸರಿ. ಜ್ಞಾನಾರ್ಜನೆಯ ಮೊದಲ ಮೆಟ್ಟಿಲೇ ಓದು. ಪವಿತ್ರ ಕುರಾನ್ ಅವತೀರ್ಣವಾಗಿದ್ದು ಈ ಆರಂಭದ ಸಾಲಿನಿಂದ. “ಓದು, ನಿನ್ನನ್ನು ಸೃಷ್ಟಿಸಿದ ಭಗವಂತನ ನಾಮದಿಂದ”. ಓದಿನ ಬಗೆಗಿನ ವರ್ಣನೆ, ಕಲ್ಪನೆಗಳು ಹೀಗಿರುವಾಗ ಹುಳು ನುಸುಳಿದ್ದಾದರೂ ಎಲ್ಲಿಂದ? ಅಥವಾ ಪುಸ್ತಕದ ಹುಳು ಎಂದು ಕರೆಯುವಾಗ ಅದರಲ್ಲಿ ಗೂಢಾರ್ಥವೇನಾದರೂ ಅವಿತಿರಬಹುದೇ? ಏಕೆಂದರೆ ಹಳೇ ತಲೆಮಾರಿನ ತಲೆ ಯೋಚಿಸುವ ರೀತಿಯೇ ಬೇರೆ ನೋಡಿ.

ಎಲ್ಲರಿಗೂ ತಿಳಿದಂತೆ ಕಾಗದದ ಉತ್ಪಾದನೆ ಮರಗಳಿಂದ ತಾನೇ ? ಗೆದ್ದಲಿನಂಥ ಹುಳುವಿನ ಕೆಲಸವೂ ಅದೇ ಅಲ್ಲವೇ? ಒಂದು ಆರೋಗ್ಯವಂತ, ದಷ್ಟ ಪುಷ್ಟ ಮರವನ್ನ ನಿಧಾನವಾಗಿ, ಶ್ರದ್ಧೆಯಿಂದ ಕೊರೆಯುತ್ತಾ ದುರ್ಬಲಗೊಳಿಸಿ ಕೊನೆಗೆ ಅದರ ಅವಸಾನಕ್ಕೆ ಕಾರಣವಾಗುವುದು? ಒಂದು ಮರವನ್ನು ಬಲಿ ಹಾಕಿ ತಾನೇ ನಮ್ಮ ಮಹೋನ್ನತ ನಾಯಕರ ಬಲಿದಾನದ ಬಗ್ಗೆ ನಾವು ಓದೋದು? ಈ ಕಾರಣಕ್ಕಾಗಿರಬಹುದೇ ಪುಸ್ತಕ ಪ್ರೇಮಿಗಳನ್ನು ಪುಸ್ತಕದ ಹುಳು ಎಂದು ನಿಕೃಷ್ಟವಾಗಿ ಕರೆಯುವುದು?

ಪುಸ್ತಕದ ನರಿ. ಪುಸ್ತಕಗಳನ್ನು ನುಂಗುವ, ಅತಿಯಾದ ಕಲ್ಪನಾಮಯಿಯಾಗಿದ್ದು ಮತ್ತು ಅತಿ ಹೆಚ್ಚು ಪುಸ್ತಕದಂಗಡಿಯ ಖರ್ಚುಳ್ಳ ಒಂದು ಪುಟ್ಟ ಸಸ್ತನಿ. ಪುಸ್ತಕದ ನರಿಗಳು ನಾನಾ ತೆರನಾದ ವಾಸಸ್ಥಳಗಳಲ್ಲಿ ಬದುಕುತ್ತವೆ ಮತ್ತು ಓದಲೆಂದು ಅಸಹಜವಾದ ಸ್ಥಳವನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಅವು ಒಂಟಿಯಾಗಿ ಬೇಟೆ ಯಾಡಲು ಇಷ್ಟಪಡುತ್ತವೆ ಮತ್ತು ತಮ್ಮ ಹಿಂಡಿನೊಂದಿಗೆ ತಮ್ಮ ಬೇಟೆಯ ಬಗ್ಗೆ ಚರ್ಚಿಸುತ್ತವೆ.

ಈ ಮೇಲಿನ ಮಾತುಗಳು ಪುಸ್ತಕಗಳನ್ನು ಪ್ರೀತಿಸುವ ವ್ಯಕ್ತಿಯೊಬ್ಬರ ಬ್ಲಾಗ್ನಿಂದ ಸಿಕ್ಕಿದ್ದು. ಓದುಗನನ್ನು ಹುಳು ವಿನೊಂದಿಗೆ ಹೋಲಿಸದೆ ನರಿಯೊಂದಿಗೆ ಹೋಲಿಸಿಕೊಂಡು ಬರೆದ ಸಾಲುಗಳು. ಪುಸ್ತಕದ ನರಿಗೂ, ನರನಿಗೂ ಎಷ್ಟೊಂದು ಸಾಮ್ಯ ನೋಡಿ.

ಈಗ ಹೇಳಿ ನೀವು ಪುಸ್ತಕದ ಹುಳುವೋ ಅಥವಾ ಪುಸ್ತಕದ ಗುಳ್ಳೆ ನರಿಯೋ ಎಂದು.

ನನ್ನ ಬಗ್ಗೆ ಕೇಳಿದಿರಾದರೆ ನನ್ನ ಪುಸ್ತಕ ಪ್ರೀತಿ ಹೀಗೆ. an ardent book enthusiast. ಪುಸ್ತಕದ ಮೇಲ್ಮೆಯನ್ನು ಅಪ್ಯಾಯಮಾನದಿಂದ ಓರ್ವ ಮಮತಾಮಯಿ ತಂದೆ ತನ್ನ ಮಗನ ತಲೆ ಸವರುವಂತೆ ಸವರಿ, ಪುಸ್ತಕದ ಪುಟಗಳನ್ನು ತಿರುವುತ್ತಾ ಅದರೊಳಗಿನಿಂದ ಬರುವ ನತದೃಷ್ಟ ಮರದ ತೊಗಟೆಯ ಘಮ ಘಮ ವಾಸನೆಯನ್ನು ಆಸ್ವಾದಿಸುತ್ತಾ, ಅಕ್ಷರಗಳ ಜೋಡಣೆ, ಅಲಂಕಾರದ ಚೆಂದಕ್ಕೆ ತಲೆದೂಗುತ್ತಾ, ಮುನ್ನುಡಿ, ಹಿನ್ನುಡಿ ಬರೆದವರ ಬಗ್ಗೆ ಕಲ್ಪಿಸಿಕೊಳ್ಳುತ್ತಾ, ಬರೆದವ ಎಷ್ಟು ಸಂಪಾದಿಸಿರಬಹುದೆಂದು ಲೆಕ್ಕ ಹಾಕುತ್ತಾ, ಕೊನೆಗೆ, ಓರೆಗಣ್ಣಿನಿಂದ ಈ ಪುಸ್ತಕಕ್ಕೆ ಎಷ್ಟಿರಬಹುದು ಎಂದು ಭಯ, ಆಸೆ ಮಿಶ್ರಿತ ಭಾವನೆಗಳಿಂದ ನೋಡುವುದೇ ನನ್ನ ಮಟ್ಟಿಗಿನ ಹುಮ್ಮಸ್ಸು, enthusiasm. ಹಾಗಾಗಿ ನಾನು ಅತ್ತ ಯಕಃಶ್ಚಿತ್ ಹುಳುವೂ ಅಲ್ಲ, ಇತ್ತ scheming ಗುಳ್ಳೆ ನರಿಯೂ ಅಲ್ಲ.

“ತಾಯ್ ಚೀ” ಇರಲಿ…“ಎರ್ ನಾಯ್” ಬೇಡ

“ತಾಯ್ ಚೀ” ಬಗ್ಗೆ ಹೇಳುವುದೇನೂ ಬೇಡವಲ್ಲ? ಚೀನಾದ ಅಥವಾ ಇಂಪೋರ್ಟೆಡ್ ವ್ಯಾಮೋಹಕ್ಕೆ ಬಿದ್ದ ಭಾರತೀಯರು ನಮ್ಮದೇ ಆದ ಯೋಗಾಸನವನ್ನು ನಿರ್ಲಕ್ಷಿಸಿ ತಾಯ್ ಚೀ ಕಲಿಯುತ್ತಿದ್ದಾರಂತೆ. ಚೀನಾದ ಅಲಾರಂ ಗಡಿಯಾರ, ಮಕ್ಕಳ ಆಟಿಕೆ ಮಾತ್ರ ಏಕೆ ಅವರ ಸಾಮಾಜಿಕ ಅಭ್ಯಾಸಗಳೂ ಇರಲಿ ಎನ್ನುವ ಧೋರಣೆ ಇರಬಹುದು ಚೀನಾದ ಈ ವ್ಯಾಯಮದ ಕುರಿತ ಆಸಕ್ತಿಯ ಹಿಂದೆ. ಇರಲಿ ಬಿಡಿ, ‘ತಾಯ್ ಚಿ’ ಶರೀರದ ಆರೋಗ್ಯಕ್ಕೆ ಒಳ್ಳೆಯದೇ, ಆದರೆ, ಎರ್ ನಾಯ್ ಮಾತ್ರ ಶರೀರಕ್ಕೆ ಒಳ್ಳೆಯದಾದರೂ, ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ ಎನ್ನುವುದಂತೂ ನಿಜವೇ.

ಅಲ್ರೀ, ಏನೀ ‘ಎರ್ ನಾಯ್’?

‘ಎರ್ ನಾಯ್’ ಎಂದರೆ ಚೀನೀ ಭಾಷೆಯಲ್ಲಿ “ಎರಡನೇ ಹೆಂಡತಿ” ಅಂತ. ಚೀನೀ ಸಮಾಜ ಇದನ್ನು ಒಪ್ಪದಿದ್ದರೂ ಬಹುತೇಕ, ಮೊದಲ ಪತ್ನಿಯರೂ ಸೇರಿ, ಚೀನೀಯರು ಇದರ ವಿರುದ್ಧ ದೊಡ್ಡ ಸ್ವರ ಎತ್ತದೆ ಕಂಡೂ ಕಾಣದಂತೆ ತಮ್ಮ ದೃಷ್ಟಿಯನ್ನು ಬೇರೆಡೆ ನೆಡುತ್ತಾರೆ. “ಎರ್ ನಾಯ್” ಯನ್ನು ಸಾಕುವುದು ಒಂದು ರೀತಿಯ ಪ್ರತಿಷ್ಠೆ ಚೀನಾದಲ್ಲಿ. ಮೇಲ್ಮಧ್ಯಮ ವರ್ಗದ ಗಂಡಸರು ಕಾಸು ಹೆಚ್ಚಿದ್ದರೆ ಈ ಸೌಲಭ್ಯ ಹೊಂದಿರುತ್ತಾರೆ. “ಎರ್ ನಾಯ್” ಗಳು ಅವಸರದಿಂದ ಹೆಕ್ಕಲ್ಪಟ್ಟ ಅಂತಿಂಥ ಸ್ತ್ರೀಯರಲ್ಲ. ಇವರು ಸುಶಿಕ್ಷಿತರೂ, ಆಧುನಿಕ ಮನೋಭಾವದವರೂ ಆದ ಚೆಂದುಳ್ಳಿ ಹೆಣ್ಣುಗಳು. ಇವರ ಉಪಯೋಗ ಬರೀ “ವೀಕೆಂಡ್” ಗಾಗಿಯೋ ಅಥವಾ boredom ಕಳೆಯಲಿಕ್ಕೋ ಅಲ್ಲ. ಇವರು ತಮ್ಮ ಪುರುಷರೊಂದಿಗೆ business meeting ಗಳಲ್ಲಿ ಪಾಲುಗೊಳ್ಳುತ್ತಾರೆ. ಇವರನ್ನು ನೋಡಿ business partner ಗಳು ಪ್ರಭಾವಿತರಾಗುತ್ತಾರೆ. ಗಟ್ಟಿ ಕುಳ ಎಂದುಕೊಳ್ಳುತ್ತಾರೆ. ಒಂದು ರೀತಿಯ ಷೋ ಪೀಸು. ಕೆಲವರು louis vuitton ಬ್ರೀಫ್ ಕೇಸು, “ಗುಚ್ಚಿ” ಪರ್ಫ್ಯೂಮು, “ಫ್ಲೋರ್ ಶೈಮ್” ಶೂ ಹಾಕಿಕೊಂಡು ಕ್ಲಯಂಟ್ ಗಳನ್ನು ಇಂಪ್ರೆಸ್ಸ್ ಮಾಡಲು ಹೊರಟರೆ ಇವರದು ಬೇರೆಯದೇ ಆದ ವಿಧಾನ. ತಮ್ಮ ಮಡದಿಯರ ಉದರಕ್ಕೆ ಬೆಂಕಿ ಹಾಕಿ ಇಂಪ್ರೆಸ್ ಮಾಡೋ ವಿಧಾನ.

ವಿವಾಹದ ಬಗ್ಗೆ ಚೀನಿಯರದು ಟೇಕ್ ಇಟ್ ಈಜಿ attitude. ರೋಷದಿಂದ ಸಂಪತ್ತಿನ ಹಿಂದೆ ಬಿದ್ದ ಪರಿಣಾಮವಿರಬೇಕು. ಒಬ್ಬ ಪಾಶ್ಯಾತ್ಯ ವ್ಯಕ್ತಿಯ ಪ್ರಕಾರ ಇಲ್ಲಿ ಚೀನಾದಲ್ಲಿ ವಿವಾಹ ಎನ್ನುವುದು ಎರಡು ಹೃದಯಗಳ ಬೆಸುಗೆ ಅಲ್ಲ. ಒಂದು ರೀತಿಯ ಎರಡು ಕುಟುಂಬಗಳ ಮಧ್ಯೆಯ ಒಪ್ಪಂದ. ಅದರ ಮೇಲೆ ಬೇರೆ ದೇಶಗಳ ರೀತಿ ಚೀನಾದಲ್ಲಿ ಮಾನವೀಯ ಕ್ರಾಂತಿ (humanist revolution) ಆಗಿಲ್ಲವಂತೆ. ಹಾಗಾಗಿ ವಿವಾಹ ತಲೆ ಕೆಡಿಸಿ ಕೊಳ್ಳುವಂಥ ವ್ಯವಸ್ಥೆಯಲ್ಲ. ವ್ಯವಸ್ಥೆ ಹೀಗಿರುವಾಗ ಜಾಣ, ಚೆಂದುಳ್ಳಿ ಹೆಣ್ಣುಗಳು “ಎರ್ ನಾಯ್” ಪಟ್ಟಕ್ಕೆ ಮೋಹಿತರಾಗುತ್ತಾರೆ. ಇರುವವನು ತಾನೇ ಈ ರೀತಿಯ ಎರಡನೇ ಹೆಣ್ಣನ್ನು ಇಟ್ಟು ಕೊಳ್ಳಲು ಸಾಧ್ಯ? ಮುಂದುವರಿದ ನಗರ ಗಳಲ್ಲಂತೂ ಶೇಕಡ ೮೦ ಶ್ರೀಮಂತ ಪುರುಷರಿಗೆ ಈ ತೆರನಾದ ಸಂಗಾತಿಗಳಿರುತ್ತಾರಂತೆ. ಮಹಿಳೆಯರೂ ಸಹ ಧನದ ಹಿಂದೆ ಓಡುವುದರಿಂದ ಯಾವುದೇ arrangement (ವಿವಾಹ ಅಥವಾ ಎರ್ ನಾಯ್) ನಲ್ಲಿ ಧನವಂತನನ್ನೇ ಇಷ್ಟ ಪಡುತ್ತಾಳೆ. ಈ ಧೋರಣೆಯ ಹಿಂದೆ economic interest ಸಹ ಇದೆ. ಒಬ್ಬ ಮಹಿಳೆಯ ಈ ಮಾತನ್ನು ಕೇಳಿ; “ ನಾನು ನನ್ನವನಿಂದ ತ್ಯಜಿಸಲ್ಪಟ್ಟಾಗ ಸೈಕಲ್ಲಿನ ಮೇಲೆ ಕೂತು ಕಣ್ಣೀರು ಹಾಕುವುದಕ್ಕಿಂತ BMW ಕಾರಿನಲ್ಲಿ ಕೂತು ಕಣ್ಣೀರು ಹಾಕಲು ಇಷ್ಟಪಡುತ್ತೇನೆ”. ಅಂದರೆ ಅವನು ನನ್ನನ್ನು ಬಿಟ್ಟರೂ BMW ನನ್ನ ಪಾಲಾದರೆ ಸಾಕು ಎಂದು. ‘crass materialism’ ತರುವ ಧೋರಣೆ ಇದು.

ಚೀನಾದ ಮಾಜಿ ಅಧ್ಯಕ್ಷ Jiang Zemin ಗೂ ಒಬ್ಬ ‘ಎರ್ ನಾಯ್’ ಇತ್ತಂತೆ. ಆಕೆ ಹಾಡುಗಾರ್ತಿ ಕೂಡಾ.

ನಮ್ಮ ದೇಶದ ಧೋರಣೆ ಏನು?

ನಮ್ಮ ದೇಶದಲ್ಲಿ ಈ ರೀತಿಯಾಗಿ ಪತ್ನಿಯಿದ್ದೂ ಮತ್ತೊಬ್ಬ ಸ್ತ್ರೀಯನ್ನು ಸಂಗಾತಿಯಾಗಿ ಇಟ್ಟುಕೊಳ್ಳುವುದಕ್ಕೆ ಇಟ್ಟು ಕೊಂಡವಳು, ಎಂದೂ ಸ್ವಲ್ಪ ತುಂಟ ತಮಾಷೆಯಾಗಿ “ಕೀಪ್” ಮತ್ತು “ಸ್ಟೆಪ್ನಿ” ಎಂದೂ ಕರೆಯುತ್ತಾರೆ. ಈ ರೀತಿಯಾಗಿ ವಿವಾಹದ ಹೊರಗೆ ಸಂಬಂಧ ಇಟ್ಟುಕೊಂಡ ಪುರುಷನನ್ನು ಸಮಾಜ ಅಸೂಯೆ ಮಿಶ್ರಿತ ಮೆಚ್ಚುಗೆಯಿಂದ ನೋಡಿದರೆ ಆ ಸೌಲಭ್ಯ ಮಹಿಳೆಗೆ ಇಲ್ಲ. ಇಟ್ಟು ಕೊಂಡವಳು, ಕೀಪ್ ಅಥವಾ ಸ್ಟೆಪ್ನಿ ಎಂದು ಕರೆಯುವುದರ ಬಗ್ಗೆಯೂ ಜನರಲ್ಲಿ ವಿಶೇಷವಾಗಿ ಫೆಮಿನಿಸ್ಟ್ ಪೈಕಿಯವರಿಗೆ ಭಾರೀ ವಿರೋಧವಿದೆ. ಈ ರೀತಿಯಾಗಿ ಕರೆಯುವುದು ಹೆಣ್ಣನ್ನು ನಿಕೃಷ್ಟವಾಗಿ ಕಂಡಂತೆ ಎನ್ನುವುದು ಇವರ ಅಭಿಪ್ರಾಯ. ದಾರಿ ಹೋಕರು ಸ್ಟೆಪ್ನಿ ಎಂತಲೋ, ಇಟ್ಟುಕೊಂಡವಳು ಎಂತಲೋ ಕರೆದುಕೊಳ್ಳಲಿ, ಆದರೆ ನಮ್ಮ ಸರ್ವೋಚ್ಚ ನ್ಯಾಯಾಲಯವೇ ಹಾಗೆ ಸಂಬೋಧಿಸಿದರೆ ಹೇಗಿರಬಹುದು?

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಒಂದು ತಗಾದೆ ಸರ್ವೋಚ್ಚ ನ್ಯಾಯಾಲಯದ ಕಟ್ಟೆ ಹತ್ತಿತು. ಇಟ್ಟು ಕೊಂಡ ವಳು ಖರ್ಚು ವೆಚ್ಚಕ್ಕೆ ಅರ್ಹಳೋ ಎಂದು. ಆ ಸಂದರ್ಭದಲ್ಲಿ ನ್ಯಾಯಾಲಯ “ಕೀಪ್” ಜೀವನಾಂಶಕ್ಕೆ ಅರ್ಹಳಲ್ಲ ಎನ್ನುವ ತೀರ್ಪು ನೀಡಿತು. ಕೀಪ್ ಪದವನ್ನು ಸಾಕ್ಷಾತ್ ನ್ಯಾಯ ಮೂರ್ತಿಗಳ ಬಾಯಲ್ಲಿ ಕೇಳಿದ ‘ಸೋಲಿಸಿಟರ್ ಜನರಲ್’ ಇಂದಿರಾ ಜೈಸಿಂಗ್ ತಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ. ಈ ೨೧ ನೆ ಶತಮಾನದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಗೆ ತಾನೇ ಓರ್ವ ಮಹಿಳೆಗೆ ಈ ಪದವನ್ನ ಉಪಯೋಗಿಸಬಲ್ಲುದು ಎಂದು ಗುಡುಗಿದರು. ಈ ಪದವನ್ನು ಕಡತದಿಂದ ತೆಗೆದು ಹಾಕಲು ನಾನು ಅರ್ಜಿ ಸಲ್ಲಿಸುತ್ತೇನೆ, ಅಲ್ಲಿಯವರೆಗೆ ಈ ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರತಿಭಟಿಸಿದರು. ಕೊನೆಗೆ keep ಬದಲಿಗೆ concubine ಪದ ಆಗಬಹುದೋ ಎಂದು ಕೇಳಿ ಜೈಸಿಂಗ್ ರನ್ನು ಸಮಾಧಾನ ಪಡಿಸಿತು ನ್ಯಾಯಾಲಯ. ಸುಪ್ರೀಂ ಕೋರ್ಟೇ ಈ ರೀತಿ ಪದ ಪ್ರಯೋಗ ಮಾಡಿರುವಾಗ ನಾವು ಯಾವ ಲೆಕ್ಕ ಎನ್ನುತ್ತೀರೋ? ಸಂಬಂಧ ಇಟ್ಟು ಕೊಂಡ ಹೆಣ್ಣಿಗೆ ಜೀವನಾಂಶ ಇಲ್ಲ, ಅದರಲ್ಲೂ “ಒಂದು ರಾತ್ರಿಯ ನಿಲುಗಡೆ” (one night stand) ಯವರಿಗಂತೂ ಈ ಸೌಲಭ್ಯ ಇಲ್ಲವೇ ಇಲ್ಲ ಎಂದು ತೀರ್ಪ ಹೊರಬಿದ್ದಿತು ಸರ್ವೋಚ್ಚ ನ್ಯಾಯಾಲಯದಿಂದ.

ಜಿಜ್ಞಾಸೆ: ಎರಡನೆಯ, ಅನಧಿಕೃತ ಹೆಣ್ಣು “ಕೀಪ್” ಆಗುವುದಾದರೆ, ಮೊದಲನೆಯವಳು ಗಂಡಿನ ಮೇಲೆ “ಹೇರಲ್ಪಟವಳು” ಎಂದೋ?

ಅಧ್ಯಕ್ಷರ ವಿಧವೆಯ ಪತ್ರ

ನಮ್ಮ ದೇಶದಲ್ಲಿ ಈಗ ಇರುವುದು ಅಧ್ಯಕ್ಷರಲ್ಲ, ಅಧ್ಯಕ್ಷೆ. ಹಾಗಾಗಿ ಇದು ನಮ್ಮ ದೇಶಕ್ಕೆ ಸಂಬಂಧಿಸಿದ್ದಲ್ಲ. ಇಂದಿನ ಇ- ಟಪ್ಪಾಲಿನಲ್ಲಿ ನನಗೊಂದು ಪತ್ರ ಬಂತು. ಶ್ರೀಮತಿ ಸುಹಾ ಅರಫಾತ್ ರಿಂದ. ಇವರು ಪಲೆಸ್ತಿನ್ ದೇಶದ ಮಾಜಿ ಅಧ್ಯಕ್ಷ ದಿವಂಗತ ಯಾಸಿರ್ ಅರಫಾತ್ ರ ಪತ್ನಿ. ಅರಫಾತ್ ನನಗೆ ಅಚ್ಚು ಮೆಚ್ಚು. ಇಸ್ರೇಲಿಗಳು ಆಕ್ರಮಿಸಿ ಕೊಂಡ ತನ್ನ ದೇಶದ ಬಿಡುಗಡೆಗೆ ಹೋರಾಡಿದ ಜೀವ. ಭಾರತದ ಆಪ್ತ ಮಿತ್ರನೂ ಹೌದು. ಇಂದಿರಾ ಗಾಂಧಿಯವರ ನಿಧನದ ಸುದ್ದಿ ಕೇಳುತ್ತಲೇ ಮೊದಲಿಗೆ ಭಾರತಕ್ಕೆ ಧಾವಿಸಿ ಬಂದ ಮೊದಲ ನಾಯಕರಲ್ಲಿ ಅರಫಾತ್ ಒಬ್ಬರು. ತನ್ನ ಜನರ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಮತ್ತು ಇಂದಿರಾ ನೀಡಿದ ಬೆಂಬಲವನ್ನೂ ಮೆಲುಕು ಹಾಕಿ ನಾನು ನನ್ನ ಸೋದರಿಯನ್ನು ಕಳೆದು ಕೊಂಡೆ ಎಂದು ಕಣ್ಣೀರು ಹಾಕಿದ್ದರು. ಯಾವಾಗಲೂ ಮಿಲಿಟರಿ ಉಡುಗೆ ಮತ್ತು ತಲೆಗೆ ಅರಬ್ಬರು ಕಟ್ಟುವ “ಕಿಫಾಯೇ’ ಎಂದು ಕರೆಯಲ್ಪಡುವ ಬಟ್ಟೆ ಧರಿಸುತ್ತಿದ್ದ ಅರಫಾತ್ ವಿಶ್ವದ ಅತಿ ಪರಿಚಿತ ನಾಯಕರು. ಅಂಥ ನಾಯಕರ ವಿಧವೆ ಪತ್ರ ನನಗ್ಗೆ ಬಂದಿದ್ದು ನೋಡಿ ಸಂತಸ. ನಡುಗುತ್ತಲೇ ಕ್ಲಿಕ್ಕಿಸಿದೆ. ತೆರೆದು ಕೊಂಡಿತು ಪತ್ರ…

ನಾನು ಸುಹಾ. ಸುಹಾ ಅರಫಾತ್. ಪಲೆಸ್ತಿನ್ ದೇಶದ ದಿವಂಗತ ಅಧ್ಯಕ್ಷರ ಪತ್ನಿ. ಪತಿಯ ಮರಣಾ ನಂತರ ನಾನೀಗ ಲಂಡನ್ನಿನಲ್ಲಿ ನೆಲೆಸಿದ್ದೇನೆ. ನನ್ನ ಹತ್ತಿರ ಐದು ಮಿಲ್ಲಿಯನ್ ಡಾಲರ್ ಇದೆ. ನಿಮ್ಮ ದೇಶದಲ್ಲಿ ವಿನಿಯೋಗಿಸುವ ಆಸೆ ಇದೆ. ಈ ಸಹಾಯಕ್ಕಾಗಿ ನಿಮಗೆ ಶೇಕಡಾ ೨೦ ಭಾಗವನ್ನು ಕೊಡಲು ನಾನು ತಯಾರು. ಹಾಗೆಯೇ ತಮ್ಮ ಮೊಬೈಲ್ ನಂಬರ್, ತಮ್ಮ ಉದ್ಯೋಗದ ಕುರಿತೂ ನನಗೆ ಬರೆಯಿರಿ…. ಹೀಗೆ ಶುರುವಾಯಿತು ವೃತ್ತಾಂತ. ಇದನ್ನು ಓದುತ್ತಿದ್ದಂತೆ ನನಗೆ ವಿಷಯ ತಿಳಿಯಾಗಲು ತೊಡಗಿತು. ಈ ಪತ್ರ ಸಾಮಾನ್ಯವಾಗಿ ಆಫ್ರಿಕಾದ ಅದರಲ್ಲೂ ನೈಜೀರಿಯಾದಿಂದ ಬರುವಂಥವು. ನನ್ನ ಅಪ್ಪ ಕೂಡಿಸಿಟ್ಟ ಐವತ್ತೋ ನೂರೋ ಮಿಲಿಯನ್ ಡಾಲರ್ ಇದೆ, ಅಪ್ಪ ಅಪಘಾತದಲ್ಲಿ ತೀರಿಕೊಂಡ. ಆ ಹಣವನ್ನು ನಿಮ್ಮ ಖಾತೆಗೆ ರವಾನಿಸುತ್ತೇನೆ ಎಂದು ಹೇಳಿ ನಯವಾಗಿ ಬಲೆಯನ್ನು ಹೆಣೆಯುತ್ತಾರೆ ಕಪಟವರಿಯದ ಜನರ ಸುತ್ತ. ನೀವು ತಿಳಿಯಬಹುದು ಇಂಥ ಮೋಸದ ವ್ಯಾಪಾರಕ್ಕೆ ಯಾರಾದರೂ ಬೀಳುತ್ತಾರೆಯೇ ಎಂದು. ಖಂಡಿತ ಬೀಳುತ್ತಾರೆ. ಖೊಟ್ಟಿ ಜನರ ಸಹವಾಸ ಎಂದರೆ ನಮ್ಮ ಜನರಿಗೆ ಬಹಳ ಇಷ್ಟ. ಮಕ್ಕಳಾಗದವರಿಗೆ ಭಸ್ಮ ನೀಡುವ ಸನ್ಯಾಸಿಯಿಂದ ಹಿಡಿದು, ನಪುಂಸಕತೆ ಹೋಗಲಾಡಿಸಿ ಹೊಸ ಪುರುಷತ್ವ ತಂದು ಕೊಡುವ ಖೊಟ್ಟಿ ವೈದ್ಯ ನವರೆಗೆ, ಹಲವು ರೀತಿಯಲ್ಲಿ ಜನರು ಮಾಡುವ ಮೋಸದ ಅರಿವಿದ್ದೂ ಪದೇ ಪದೇ ಅವರುಗಳು ತೋಡಿಟ್ಟ ಹೊಂಡಕ್ಕೆ ಬೀಳಲೇ ಬೇಕು ಅಮಾಯಕರು.

ಬೆಂಗಳೂರಿನ, ಇಂಟರ್ನೆಟ್ ಕೇಂದ್ರ ನಡೆಸುವ ಕೇರಳ ಮೂಲದ ದಂಪತಿಗಳಿಗೆ ಇದೇ ರೀತಿಯ ಟೋಪಿಯೊಂದು ಇಂಗ್ಲೆಂಡಿ ನಿಂದ ಹಾರಿ ಬಂದಿತ್ತು. ಸಾಲ ಸೋಲ ಮಾಡಿ, ಒಡವೆ, ಪಾತ್ರೆ ಪಗಡಿ ಎಲ್ಲಾ ಅಡವಿಟ್ಟು ಹಣ ಕಳಿಸಿದರು ಡಾಲರ್ ಸಿಗುವ ನಿರೀಕ್ಷೆಯಲ್ಲಿ. ಆದರೆ ತಮ್ಮ ಹೆಗಲು ಏರಿದ್ದು ಡಾಲರ್ ತುಂಬಿದ ಚೀಲವಲ್ಲ, ಶುದ್ಧ ಮೋಸ ಎಂದು ಅವರಿಗೆ ತಡವಾಗಿ ವೇದ್ಯವಾಯಿತು. ಬದುಕಿಡೀ ದುಡಿದರೂ ತೀರಿಸಲಾಗದ ಸಾಲದ ಹೊರೆ ಆ ನತದೃಷ್ಟ ದಂಪತಿಗಳ ಸಂಗಾತಿಯಾಯಿತು. ಮೇಲ್ ಮೂಲಕ ಹಣ ಹೇಗಾದರೂ, ಏಕಾದರೂ ಬರಬೇಕು, ಹೇಳಿ? ಯಾರಿಗಾದರೂ ಪುಕ್ಕಟೆಯಾಗಿ, ಯಾವುದೇ ಶ್ರಮವಿಲ್ಲದೆ ಹಣ ಬಂದಿದ್ದಿದೆಯೇ? ಲಾಟರಿ ಒಂದನ್ನು ಹೊರತು ಪಡಿಸಿ ಹಣ ಪುಕ್ಕಟೆಯಾಗಿ ಬರಲಿಕ್ಕಿಲ್ಲ. ಹೀಗಿರುವಾಗ ಮೇಲ್ ಮೂಲಕ ಮಿಲಿಯನ್ ಗಟ್ಟಲೆ ಡಾಲರ್ ಹೇಗೆ ಬರಬಹುದು?

ನೆನಪಿಡಿ, ಮೇಲ್ ಮೂಲಕ ಬರುವುದು bugs ಗಳು. bucks ಅಲ್ಲ.

ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.

ಇಂದು ಬೆಳಿಗ್ಗೆ ನನ್ನ ಮಿತ್ರ ನಾಗರಾಜನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಾಗ ಏನಪ್ಪಾ, ನಾಳೆ ಹಬ್ಬಾ ಜೋರಾ, ಎಂದು ಕೇಳಿದ. ಇದ್ಯಾವ ಹಬ್ಬಾ ನಾಳೆ, ಎಂದು ಯೋಚಿಸುತ್ತಿರುವಾಗ ಅವನು ಹೇಳಿದ ಅದೇ, ನಿಮ್ ಹಬ್ಬ ಈದ್ ಮಿಲಾದ್ ನಾಳೆ, ಇಲ್ಲಿ ಸರಕಾರೀ ರಜೆ ಎಂದ. ಓಹೋ, ಹೌದಾ ಎಂದು ಉದ್ಗಾರ ತೆಗೆದಾಗ ಅವನಿಗೆ ಆಶ್ಚರ್ಯ. ಏನು ಅಲ್ಲಿ ಇಲ್ವಾ ರಜೆ ಎಂದ. ನಾನಂದೆ ಇಲ್ಲಿ ಸೌದಿ ಅರೇಬಿಯಾದಲ್ಲಿ ಪ್ರವಾದಿಗಳ ಜಯಂತಿಗೆ ರಜೆ ಇಲ್ಲ. ಅಂಥ ಒಂದು ದಿನ ಇದೆ ಎಂದೂ ಇಲ್ಲಿನ ಜನಕ್ಕೆ ಗೊತ್ತಿಲ್ಲ. ಪ್ರವಾದಿ ಜಯಂತಿ ಇರಲಿ, ಇಲ್ಲಿನ ರಾಜ ಸತ್ತಾಗಲೂ ರಜೆ ಕೊಡದ ದುರುಳರು ಇವರು ಎಂದು ನನ್ನ ದುಃಖವನ್ನು ವ್ಯಕ್ತಪಪಡಿಸಿದಾಗ ಅವನೂ ಸಂತಾಪ ಸೂಚಿಸಿದ ನನ್ನ ದೌರ್ಭಾಗ್ಯಕ್ಕೆ. ದೌರ್ಭಾಗ್ಯವಲ್ಲದೆ ಮತ್ತೇನು? ಭಾರತದಲ್ಲಿ ಪ್ರತೀ ಮೂರು ದಿನಗಳಿಗೊಮ್ಮೆ ಒಂದಲ್ಲ ಒಂದು ರಜೆ ವಕ್ಕರಿಸಿಕೊಳ್ಳುತ್ತಲೇ ಇರುತ್ತದೆ. ಹಾಗೇನಾದರೂ ರಜೆ ಸಿಗದೇ ಒಂದೆರಡು ವಾರಗಳಾದವು ಅನ್ನಿ, ಆಗ ಯಾವುದಾದರೂ ಒಂದು ನೆಪದಲ್ಲಿ, ನಮ್ಮ ರಾಜಕೀಯ ಪಕ್ಷಗಳ ಕೃಪಾ ಕಟಾಕ್ಷ ದಲ್ಲಿ ಬಂದೋ, ದೊಂಬಿಯೋ ನಡೆದು ರಜೆ ಸಲೀಸಾಗಿ ಸಿಗುತ್ತದೆ. ಯಡ್ಡಿ ಹತ್ತಿರ ಬಹುಮತ ಸಾಬೀತು ಪಡಿಸಿ ಎಂದರೂ ರಜೆ, ಅಯೋಧ್ಯೆಯ ವಿವಾದ ಕ್ಕೆ ನ್ಯಾಯಾಲಯ ಕೊಡುವ ತೀರ್ಪಿನಂದೂ ರಜೆ.  

ಸೌದಿ ಅರೇಬಿಯಾದ ಹಿಂದಿನ ರಾಜ ಫಹದ್ ರವರು ತೀರಿ ಕೊಂಡ ಸುದ್ದಿ ಬಂದಾಗ ನಾನು ಬ್ಯಾಂಕಿನಲ್ಲಿ ಇದ್ದೆ. ನನ್ನ ಕೆಲಸ ಬೇಗ ಬೇಗನೆ ಪೂರೈಸಿ ಹಾಗೆಯೆ ಅಲ್ಲಿನ ಕ್ಲರ್ಕ್ ಹತ್ತಿರ ಕೇಳಿದೆ, ಎಷ್ಟು ದಿನ ರಜೆ ಕೊಡ್ತಾರೆ ಅಂತ? ಅವನು ಕೇಳಿದ, ರಜೆ? ಯಾವುದಕ್ಕೆ? ನಾನು ದೊರೆಯ ಮರಣದ ವಾರ್ತೆ ಆತನಿಗೆ ಹೇಳಿದಾಗ, ಅವನು ಫಹದ್ ನ ಸಮಯ ಮುಗಿಯಿತು ಅವನು ಸೇರಿಕೊಂಡ ಭಗವಂತನ ಪಾದಚರಣಗಳಿಗೆ, ಅದಕ್ಕೇಕೆ ರಜೆ, ನಿಮ್ ದೇಶದಲ್ಲಿ ಇದಕ್ಕೂ ಕೊಡ್ತಾರ ರಜೆ ಎಂದು ಅವನು ಮರು ಪ್ರಶ್ನೆ ಹಾಕಿದಾಗ ಉತ್ತರಿಸಲಾಗದೆ ಮುಗುಳ್ನಕ್ಕು ಹೊರ ನಡೆದೆ. ಸಾವು ನೈಸರ್ಗಿಕ, ಅದನ್ನು ತಡೆಯಲಾಗಲೀ, ವಿಳಂಬಿಸಲಾಗಲೀ ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಯಾರಾದರೂ ಸತ್ತರೂ ಅತಿಯಾಗಿ ಶೋಕ ವ್ಯಕ್ತ ಪಡಿಸಲೂ ಬಾರದು. ಹಾಗೆ ಮಾಡಿದ್ದೇ ಆದರೆ ಅವನಿಗೆ ದೇವನ ನಿರ್ಣಯ ಇಷ್ಟವಾಗಿಲ್ಲ ಎಂದು ಅರ್ಥ. ಇದು ಬಹುತೇಕ ಮುಸ್ಲಿಮರ ಅಭಿಪ್ರಾಯ. ಈಗ ಹೇಳಿ ಬಂದ್ ಕೊಡೋದಾದರೂ ಹೇಗೆ ಸಾಧ್ಯ? ಅಲ್ಲೂ ಬಾರದಂತೆ, ಬಂದ್ ಮಾತು ದೂರ ಉಳಿಯಿತು ಅಲ್ಲವೇ? ಅಲ್ಲಾ, ನಾನು ಮಾತಾಡ್ತಾ ಇದ್ದಿದ್ದು ಜಯಂತಿ ಬಗ್ಗೆ, ಇಲ್ಯಾಕೆ ಮುಖಹಾಕಿದ ಯಮ ಧರ್ಮರಾಯ? ಸಾವೆಂದರೆ ಹೀಗೆಯೇ. ಅಚಾನಕ್ ಆಗಿ ಹೊಂಚು ಹಾಕಿ ಬಿಡುತ್ತದೆ.  

ನಾನು ಹೋದ ವರ್ಷ, ಜುಲೈ ತಿಂಗಳಿನಲ್ಲಿ ಭಾರತಕ್ಕೆ ಬಂದಿದ್ದಾಗ ವಾಲ್ಮೀಕಿ ಜಯಂತಿ. ನಾನು ನನ್ನ ಮಿತ್ರನಿಗೆ ಕೇಳಿದೆ ಇದ್ಯಾವಗಿಂದ ಆರಂಭವಾಯ್ತು ಹೊಸ ಜಯಂತಿ ಎಂದು. ಭಾಜಪ ಸರಕಾರ ಆಲ್ವಾ ಇರೋದು, ಬೇರೆಯವರಿಗಿಂತ ತಾನು ಭಿನ್ನ ಎಂದು ತೋರಿಸಲು ಈ ರಜೆ ಅಂದ. ಇಂದು ಬೆಳಿಗ್ಗೆ ಅವನೊಂದಿಗೆ ಮಾತನಾಡಿದಾಗ ಅವನು ಹೇಳಿದ ರಜೆಯ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರಿಕೊಂಡಿವೆ, ಬಸವ ಜಯಂತಿ, ಕನಕ ಜಯಂತಿ. ವಚನಗಳ ಮಹಾತ್ಮ, ವೀರಶೈವ ಪಂಗಡ ಗುರುಗಳಾದ ಬಸವಣ್ಣರಿಗೆ ಅವರು ಹುಟ್ಟಿದ ದಿನ ಜನ ರಜೆಯಲ್ಲಿ ದಿನ ಕಳೆಯೋದು ಎಷ್ಟು ಪ್ರಿಯವಾದ ವಿಷಯವೋ ನಾ ಕಾಣೆ. ಬಸವ ಜಯಂತಿ ಇವತ್ತು ಎಂದು ಸಂಭ್ರಮ ಪಡುತ್ತಿರುವವರಿಗೆ ಅವರ ಒಂದೇ ಒಂದು ವಚನವನ್ನಾದರೂ ಒದರಲು ಹೇಳಿದರೆ ಅನಾಹುತವಾಗಬಹುದೋ, politically incorrect ಆಗಬಹುದೋ?

ಕನಕ ಜಯಂತಿ ಯಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಗವಾನ್ ಶ್ರೀ ಕೃಷ್ಣನ ಮಂದಹಾಸವನ್ನು ನೋಡಲು ದಲಿತನಿಗೆ ದಾರಿ ಮುಕ್ತವಾಗಿ ತೆರೆದಿರಬಹುದೇ? ಇಂಥ ಪ್ರಶ್ನೆಗಳು ರಜೆಯ ದಿನ ಏಳಲೇ ಬೇಕು, ನಾವದಕ್ಕೆ ಉತ್ತರ ಕಂಡು ಕೊಳ್ಳಲೇ ಬೇಕು. ನನಗೆ ಅದಕ್ಕೆ ಸಮಯವಿಲ್ಲ, ಏಕೆಂದರೆ ನನಗೆ ಇಂಥಾ ರಜೆಗಳ ಸೌಕರ್ಯ ಇಲ್ಲ  ಅಥವಾ ಸೌಭಾಗ್ಯ ಇಲ್ಲ.