ಅ-ಣ್ಣಾ-ರಣ್ಯ ರೋದನ

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ೧೯೪೨ ರಲ್ಲಿ ಆರಂಭವಾಯಿತು.  ಸ್ವಾತಂತ್ರ್ಯಕ್ಕಾಗಿನ ತುಡಿತ, ದಾಸ್ಯದಿಂದ ಬಿಡಿಸಿ ಕೊಂಡು ನಮ್ಮನ್ನು ನಾವೇ ಆಳಿಕೊಳ್ಳುವ ಮಹದಾಸೆ ಈ ಚಳುವಳಿಗೆ ಪ್ರೇರಣೆ. ಆರು ವರ್ಷಗಳ ಹೋರಾಟದ ನಂತರ ಬ್ರಿಟಿಷರು ನಮ್ಮನ್ನು ದಾಸ್ಯ ಮುಕ್ತ ಗೊಳಿಸಿದರು ೧೯೪೭ ರಲ್ಲಿ. ಸ್ವಾತಂತ್ರ್ಯ ತರುವ ಹರ್ಷ, ಪುಳಕವನ್ನು ಭಾರತೀಯರು ಅನುಭವಿಸಿದರು.  ಆದರೆ ಅರವತ್ತೈದು ವರ್ಷಗಳ ನಂತರ ನಾವು ನಮಗರಿವಿಲ್ಲದೆಯೇ ಬಾಣಲೆಯಿಂದ ಬೆಂಕಿಗೆ ಜಾರಿದ ವಾಸ್ತವದ ಅರಿವು ನಿಧಾನವಾಗಿ ಆಗ ತೊಡಗಿತು.  

೧೯೪೭ ರಲ್ಲಿ ನಮ್ಮ ಹಾಗೇ ಕಡುಬಡತನ ದಿಂದ ಬಳಲುತ್ತಿದ್ದ ದೇಶ ದಕ್ಷಿಣ ಕೊರಿಯಾ ಇಂದು ಶ್ರೀಮಂತಿಕೆಯಲ್ಲಿ ವಿಶ್ವದ ಅಗ್ರಮಾನ್ಯ ದೇಶಗಳ ಸಾಲಿನಲ್ಲಿ ನಿಂತಿದೆ. ನಮ್ಮ ನೆರೆಯ ಚೀನಾ ಪ್ರಜಾಪ್ರಭುತ್ವ, ಅದೂ, ಇದೂ ಎಂದು ಯಾವುದೇ ಸದ್ದು ಗದ್ದಲ ಮಾಡದೆ ತನ್ನಷ್ಟಕ್ಕೆ ತಾನೇ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದೆ. ಆದರೆ ನಾವು ಮಾತ್ರ ರಾಜಕಾರಣಿ – ಅಧಿಕಾರಶಾಹಿ ಚಕ್ರವ್ಯೂಹದಲ್ಲಿ ಸಿಕ್ಕು ನರಳುತ್ತಿದ್ದೇವೆ. ಭ್ರಷ್ಟಾಚಾರ ದೇಶವನ್ನು ಅಗ್ನಿ ಪರೀಕ್ಷೆಗೆ ಒಡ್ಡಿದೆ.   

ದಿನೇ ದಿನೇ ಒಂದಲ್ಲ ಒಂದು ಹಗರಣದಿಂದ ಕಂಗೆಟ್ಟ ದೇಶಕ್ಕೆ ಆಶಾ ದೀಪವಾಗಿ ಬಂದರು ಅಣ್ಣಾ ಹಜಾರೆ. ‘ಎನಫ್ ಈಸ್ ಎನಫ್’ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದರು. ಜನರೂ ಆರಂಭದಲ್ಲಿ ಹುಮ್ಮಸ್ಸು ತೋರಿಸಿದರು. ಅಣ್ಣಾ ಜನಪ್ರಿಯತೆ ಪಡೆಯುತ್ತಿದ್ದಂತೆ ಸರಕಾರ ಎಚ್ಚೆತ್ತು ಕೊಳ್ಳಲು ಆರಂಭಿಸಿತು. ಅಣ್ಣಾ ಜೊತೆ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಸಹ ಸೇರಿಕೊಂಡರು. ಇವರು ತಮ್ಮ ಅಧಿಕಾರಾವಧಿಯಲ್ಲಿ ಎಂಥೆಂಥ ಲಂಚಗುಳಿ ಅಧಿಕಾರಿಗಳನ್ನು ಕಂಡಿರಲಿಕ್ಕಿಲ್ಲ. ಬೇಡಿ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಸೊಲ್ಲೆತ್ತಿದ್ದು ನಾವೆಂದಾದರೂ ಕೇಳಿದ್ದೇವೆಯೇ? ಎಲ್ಲಿಂದ ಪುಟಿದೆದ್ದಿತು ಲಂಚದ ವಿರುದ್ಧ ಹೋರಾಡೋ ಹಂಬಲ? ಕಿರಣ್ ಬೇಡಿ ಮಧ್ಯೆ ಮತ್ತೊಂದು ವ್ಯಕ್ತಿ, ಅರವಿಂದ  ಕೇಜರಿವಾಲ ಅಂತೆ. ಸ್ವಾತಂತ್ರ್ಯ ಚಳುವಳಿಯಲ್ಲೋ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲೋ, ಬೇರೆಲ್ಲೂ ಈ ವ್ಯಕ್ತಿಯ ಹೆಸರು ಕೇಳಿದ್ದಿಲ್ಲ. ಯಾರೀತ? who is this kejriwala? ‘ವೋ, ಕೇಸರಿ ವಾಲ ಹೈ’ ಎಂದು ಮೂದಲಿಸಿತು ಕಾಂಗ್ರೆಸ್.   ಇವೆಲ್ಲಾ ಆದ ನಂತರ ಜನ ರೊಚ್ಚಿಗೆದ್ದಿದ್ದನ್ನು ಗಮನಿಸಿದ ಕೇಂದ್ರದ ಆಳುವ ಪಕ್ಷಕ್ಕೆ ಈಗ ದುರ್ಬೀನಿಟ್ಟು ನೋಡ ತೊಡಗಿತು. ಅಣ್ಣಾ ಜೊತೆ ವೇದಿಕೆಯ ಮೇಲೆ ಯಾರ್ಯಾರಿದ್ದಾರೆ? ಅವರ ಹಿನ್ನೆಲೆ ಏನು? ಯಾವ ಸಂಘಟನೆಗಳ ಒಲವು ಇವರಿಗೆ? ಹಿಡ್ಡನ್ ಅಜೆಂಡಾ ಏನಾದರೂ ಇದೆಯೇ ಈ ಚಳುವಳಿ ಹಿಂದೆ? ಹೀಗೆ ನೂರೆಂಟು ಅನುಮಾನಗಳನ್ನು ಹರಿ ಬಿಟ್ಟು ಜನರನ್ನು ಕನ್ಫ್ಯೂಸ್ ಮಾಡಿ ಬಿಟ್ಟರು.  ಎಡಬಿಡದ ವಾಕ್ಪ್ರಹಾರ, ಆರೋಪ ಪ್ರತ್ಯಾರೋಪಗಳ ಗದ್ದಲದಲ್ಲಿ ಚಳುವಳಿ ತನ್ನ ಮಹತ್ವ ಕಳೆದು ಕೊಂಡಿತು. ಈ ಚಳುವಳಿಯಲ್ಲೂ ನುಸುಳಲೇ ಬೇಕಿತ್ತೆ ರಾಜಕಾರಣ?

ದಿನನಿತ್ಯ ಬದುಕಿನ ಜಂಜಾಟದಲ್ಲಿ ಸಿಕ್ಕಿ ಕೊಂಡ ಸಾಮಾನ್ಯ ಪ್ರಜೆ ಲಂಚದ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ. ಲಂಚಕ್ಕಾಗಿನ ಅಧಿಕಾರಿಗಳ  ತೀರದ  ದಾಹಕ್ಕೆ ಬೇರೆ ದಾರಿ, ಕಾಣದೇ ಮೂರು ಗೋಣಿಚೀಲ ತುಂಬಾ ಸುಮಾರು ನಲವತ್ತು ತರಾ ವರಿ, ನಮೂನೆ ನಮೂನೆ (ಥೇಟ್ ಲಂಚಗುಳಿಗಳ ಥರ) ಹಾವುಗಳನ್ನು ಸರಕಾರೀ ಕಛೇರಿಯೊಳಕ್ಕೆ ತಂದು ಗೋಣಿ ಚೀಲ ಬರಿದು ಮಾಡಿ ಬಿಟ್ಟರು ರೈತರಾದ ಹುಕ್ಕುಲ್ ಖಾನ್ ಮತ್ತು ರಾಮ್ ಕುಲ್ ರಾಮ್. ಭಯಭೀತರಾದ ಅಧಿಕಾರಿಗಳು ಓಟ ಕಿತ್ತರು. ಇದು ಹತಾಶ ಪ್ರಜೆಯ ಹತಾಶ ಪ್ರತಿಕ್ರಿಯೆ. ಇದರಿಂದ ಅಧಿಕಾರಿಗಳು ಏನಾದರೂ ಕಲಿತಾರೆಯೇ ಪಾಠವನ್ನು? no chance. ಹಾವುಗಳನ್ನು ಹರಿ ಬಿಟ್ಟ ರೈತರನ್ನೇ ಖಳ ನಾಯಕರನ್ನಾಗಿಸಿ ಬಿಡುತ್ತಾರೆ, ಈ ಹಾವುಗಳಿಗಿಂತ ಅಪಾಯಕಾರಿಯಾದ ಅಧಿಕಾರಿಶಾಹಿ ಹಾವು.        

ಲಂಚದ ಹಾವಳಿ ವಿರುದ್ಧ ನಮ್ಮಲ್ಲಿ ಬಹಳಷ್ಟು ಕಾನೂನುಗಳಿವೆ. ಕಾನೂನಿನ ಪ್ರಕಾರ ಲಂಚ ಕೊಡುವುದು ಲಂಚ ತೆಗೆದುಕೊಳ್ಳುವಷ್ಟೇ ಅಪರಾಧ. ಲಂಚಗುಳಿಗಳ ವಿರುದ್ಧ ಸಮರ ಸಾರಿದ ಅಣ್ಣಾ ಲಂಚ ಕೊಡುವವರ ವಿರುದ್ಧ ಸೊಲ್ಲನ್ನೇಕೆ ಎತ್ತುತ್ತಿಲ್ಲ, ಇದು ಕೆಲವರ ಜಿಜ್ಞಾಸೆ. ಕೊಡುವವನಿಲ್ಲದಿದ್ದರೆ ಭವತಿ ಭಿಕ್ಷಾಂದೇಹಿ ಎನ್ನುವವನ ಅಸ್ತಿತ್ವ ಇರುವುದಿಲ್ಲ, ಅಲ್ಲವೇ?  

ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೊರಹೋದಾಗ ಜ್ಯೂಸ್ ಕೊಳ್ಳಲು ಹೋಗುವ ಪುಟ್ಟ ಬಕಾಲಾ ಎಂದು ಕರೆಯಲ್ಪಡುವ ಮಿನಿ ಮಾರ್ಕೆಟ್ ಇದೆ. ಅಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ವ್ಯಕ್ತಿಯೊಬ್ಬ ಕಾಣದೇ ಇದ್ದುದರಿಂದ ವಿಚಾರಿಸಿದೆ. ಆಗ ಅಲ್ಲಿ ಕೆಲಸ ಮಾಡುವ ವ್ಯಕ್ತಿ ಹೇಳಿದ, ಅವರನ್ನು ಜೈಲಿಗೆ ಹಾಕಿದಾರೆ ಎಂದು. ಅರೆ, ಜೈಲಾ, ಅಂಥ ಮನುಷ್ಯ ಅಲ್ಲವಲ್ಲಾ ಈತ ಎಂದು ನನ್ನ ಅನುಮಾನವನ್ನು ವ್ಯಕ್ತ ಪಡಿಸಿದಾಗ ಆತ ಹೇಳಿದ ಪುರಸಭೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿಗೆ ೨೦೦ ರಿಯಾಲ್ ( ಸುಮಾರು ೨,೭೦೦ ರೂ. ) ಲಂಚ ಕೊಟ್ಟಿದ್ದು ಕಾರಣ ಎಂದು.

ನಮ್ಮ ಕಂಪೆನಿಯ ಮಾಲೀಕರ ಮಿತ್ರರಿಗೆ ಸಂಭವಿಸಿದ್ದು ಇದು. ಸುಮಾರು ಹತ್ತುವರ್ಷಗಳ ಹಿಂದೆ ಸೌದಿ ಅರೇಬಿಯಾದ ಮತ್ತೊಂದು ನಗರವಾದ ದಮ್ಮಾಮಿನ ಬಂದರಿನಲ್ಲಿ ವಿದೇಶದಿಂದ ಆಮದಾಗಿ ಬಂದ ಸರಕನ್ನು ಸ್ವಲ್ಪ ಬೇಗನೆ ಬಿಡಿಸಿ ಕೊಳ್ಳಲು ಅಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಲಂಚ ಕೊಟ್ಟರು. ಹತ್ತು ವರ್ಷಗಳ ನಂತರ ಈ ವಿಷಯ ಬೆಳಕಿಗೆ ಬಂದು ಅವರನ್ನು ಕೂಡಲೇ ದೇಶದಿಂದ ಗಡೀ ಪಾರು ಮಾಡಿದರು. ಪಾಕಿಸ್ತಾನ ಮೂಲದ ಈ ವ್ಯಕ್ತಿ ಚಿಕ್ಕ ಆಸಾಮಿ ಅಲ್ಲ. ದಮ್ಮಾಮಿನ ಬಂದರಿನಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ತನಂದೆ ಆದ ಕಂಪೆನಿ ಸಹ ಆರಂಭಿಸಿದ್ದರು. ಏಕಾಯೇಕಿ ಅವರನ್ನು  ಗಡೀಪಾರು ಮಾಡಿತು ಸೌದಿ ಸರಕಾರ. ದಮ್ಮಾಮಿನ ಪಕ್ಕದ ಲ್ಲೇ ಇರುವ ಪುಟ್ಟ ಬಹರೇನ್ ದೇಶದಲ್ಲಿ ಕೂತು ತಮ್ಮ ವಹಿವಾಟನ್ನು ನಿಯಂತ್ರಿಸುತ್ತಿದ್ದಾರೆ. ಹೇಗಿದೆ, ನಮ್ಮ ಕಾನೂನು, ಅರೇಬಿಯಾದ ಸರ್ವಾಧಿಕಾರಿ ಕಾನೂನು? ಇಲ್ಲಿ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಸಿಗುವುದರಿಂದ ಜನರಿಗೆ ಫ್ರೀಡಂ, ಡೆಮಾಕ್ರಸಿ ಇವುಗಳ ಚಿಂತೆ ಇಲ್ಲ. ನಮಗೆ ಫ್ರೀಡಂ ಇದ್ದರೂ ಒಂದು ನಿಸ್ಶಹಾಯಕತೆ, ಕಟ್ಟಿ ಹಾಕಲ್ಪಟ್ಟ ಭಾವ.

ಸರಿ, ಸಮಾಜದ ಎಲ್ಲ ವರ್ಗದವರನ್ನೂ ಯಾವುದೆ ಬೇಧ ಭಾವ ಇಲ್ಲದೆ ಬಾಧಿಸುವ ಈ ಲಂಚಕೋರತನ ದ ವಿರುದ್ಧದ ಹೋರಾಟ ಏಕೆ ಬಿರುಸಾಗಿಲ್ಲ? ಜನ ಏಕೆ ದೊಡ್ಡ ರೀತಿಯಲ್ಲಿ ಭಾಗವಹಿಸುತ್ತಿಲ್ಲ? ಎಲ್ಲೋ ಒಂದೆರಡು ನಗರ ಪ್ರದೇಶಗಳಲ್ಲಿ ಒಂದು ರೀತಿಯ boredom ಕಳೆಯಲೆಂಬಂತೆ ಬಂದ ಒಂದಿಷ್ಟು ಯುವಜನರು. ಅಣ್ಣಾ ಮನವಿಗೆ ಜನ ಕಿವಿಗೊಡದಿರಲು ಕಾರಣ ಭ್ರ್ಹಷ್ಟಾಚಾರದ ಬಗ್ಗೆ ಜನರಿಗೆ ಇರುವ ಪರೋಕ್ಷ ಒಲವು ಕಾರಣ ಇರಬಹುದು. ಯಾವುದೇ ಕೆಲಸ ಕೈಗೆತ್ತಿಕೊಳ್ಳಬೇಕಾದರೂ ಆ ಕೆಲಸದಲ್ಲಿ ನಮಗೆ passion ಎನ್ನುವುದು ಇರಬೇಕು. ardent passion. ಅದು ನಮ್ಮಲ್ಲಿ ಕಾಣಲು ಸಿಗಲಿಲ್ಲ ಈ ಚಳುವಳಿಯಲ್ಲಿ. ಅದೇ ಸಮಯ ನಮಗಿಷ್ಟವಾದ, ಊಟ ನಿದ್ದೆಯನ್ನೂ ತ್ಯಜಿಸಿ ಆಸಕ್ತಿ ತೋರಿಸುವ ಕ್ರಿಕೆಟ್ ಆಟದ ಕಡೆ ನಮ್ಮ ಆಸಕ್ತಿ ಸ್ವಲ್ಪ ನೋಡಿ. ಯಾವುದಾದರೂ ಪಂದ್ಯದಲ್ಲಿ ಭಾರತ ಸೋತರೆ ಪ್ರತೀ ತಿಮ್ಮ, ಬೋರ, ವೆಂಕ ಎಕ್ಸ್ಪರ್ಟ್ ಆಗಿ ಬಿಡುತ್ತಾರೆ. ಥತ್, ನಾಯಕ  ಟಾಸ್ ಗೆದ್ದು ಬ್ಯಾಟಿಂಗ್ ತಗೋ ಬೇಕಿತ್ತು, ನಾವು ಚೇಸ್ ಮಾಡಲು ನಾಲಾಯಕ್ಕು ಅಂತ ಅವ್ನಿಗ್ ಗೊತ್ತಿಲ್ವಾ….ಪಿಚ್ ತುಂಬಾ ಸ್ಲೋ ಆಗೋಯ್ತು…. ಇಬ್ಬರು ಸ್ಪಿನ್ನರ್ ಗಳನ್ನು ಆಡಿಸಬೇಕಿತ್ತು ನೋಡು….. ಅಂಪೈರ್ ಕೈ ಕೊಟ್ಟ……..ಎಲ್ಲಿಂದ ಸಿಕ್ಕುದ್ನೋ ಈ ಕೋಚು?……. D/L ಮೆಥಡ್ ಸರಿಯಿಲ್ಲ, ನಮಗೆ ಅನುಕೂಲ ಆಗ್ಲಿಲ್ಲ ಡಕ್ವರ್ಥ್ ಲೀವೈಸ್ (D/L)……. ವಾವ್, ನೋಡಿದಿರಾ ಜ್ಞಾನವನ್ನು? ಇವರ ಅನಾಲಿಸಿಸ್ ಗಳಿಗೆ ಜೆಫ್ ಬಾಯ್ಕಾಟ್, ಹರ್ಷ ಭೋಗ್ಲೆ ಯಂಥವರು ಹಿಮ್ಮೆಟ್ಟುತ್ತಾರೆ. ಆ ಪಾಟಿ ಜ್ಞಾನ. ಜೀವಮಾನದಲ್ಲಿ ಬ್ಯಾಟ್ ಹಿಡಿದಿರದ, ಪಿಚ್ ಮೇಲೆ ಹೆಜ್ಜೆಯೂರಿಲ್ಲದವರ ಅನಾಲಿಸಿಸ್ಸು ಇದು. ಅದೇ ಸಮಯ ಅಣ್ಣಾ ಹಜಾರೆ ಹೆಸರು ಕೇಳಿದ ಕೂಡಲೇ ಯಾರಪ್ಪಾ ಈ ತಾತ ಎಂದು ಗೂಗ್ಲಿಸಿ ನೋಡುತ್ತಾರೆ. ಕ್ರಿಕೆಟ್ ನ ಗೂಗ್ಲೀ ಬಗ್ಗೆ ಸರಾಗವಾಗಿ ಮಾತನಾಡುವವರು ಅಣ್ಣಾ ಬಗ್ಗೆ ತಿಳಿಯಲು ಗೂಗ್ಲ್ ಮೊರೆ ಹೋಗುತ್ತಾರೆ. ಈಗ ತಿಳಿಯಾಯಿತೆ ಮರ್ಮ? ಲಂಚದ ವಿರುದ್ಧದ ಜನರ ಆಸಕ್ತಿ ನಿರಾಸಕ್ತಿ, ಅನಾದಾರದ ಮರ್ಮ? ಇದೇ passion ತರುವ ಫಲಿತಾಂಶ. ದೇಶವನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರದ ಬಗ್ಗೆ ಕ್ರಿಕೆಟ್ ಕಡೆ ತೋರಿಸುವ ಕಿಂಚಿತ್ ಆಸಕ್ತಿಯನ್ನಾದರೂ ಜನ ತೋರಿಸಿದ್ದಿದ್ದರೆ ಬೀದಿಗಳು ಪ್ರತಿಭಟಿಸುವ ಜನರಿಂದ ತುಂಬಿ ಹೋಗುತ್ತಿದ್ದವು.  ಒಂದು ದಿನದ ಕಡ್ಡಾಯ ಓವರ್ಗಳ ಪಂದ್ಯಕ್ಕಾಗಿ ಮೈದಾನ ತುಂಬುವಂತೆ.

ಎರಡನೇ ವಿಶ್ವ ಮಹಾಯುದ್ಧದ ಹೀರೋ ವಿನ್ಸ್ಟನ್ ಚರ್ಚಿಲ್ ಅಂದಿನ ಬ್ರಿಟಿಶ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಯನ್ನು  ಮನವಿ ಮಾಡಿಕೊಂಡ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಡ ಎಂದು. ಬಹುಶಃ ಆಳಿಕೊಳ್ಳುವ ಸಾಮರ್ಥ್ಯ ಭಾರತೀಯರಿಗೆ ಇನ್ನೂ ಬಂದಿಲ್ಲ ಎಂದು ಈ ಸಿಗಾರ್ ಪ್ರೇಮಿ ಮುತ್ಸದ್ದಿಗೆ ತೋರಿರಬೇಕು. ಹಳೇ ತಲೆಮಾರಿನ, ವಯಸ್ಸಾದ ಯಾರನ್ನೇ ಹೀಗೇ ಮಾತಿಗೆ ಕೇಳಿ, ಅಯ್ಯೋ ಬ್ರಿಟಿಷರ ಕಾರುಬಾರೆ ಚೆನ್ನಿತ್ತು ಎನ್ನದಿರಲಾರರು. ಈ ಮಾತನ್ನು ಹತಾಶ ಜನರ ಬಾಯಲ್ಲಿ ಹಾಕಿದವರು, ನಮ್ಮ ಖಾದಿಧಾರಿ ರಾಜಕಾರಣಿಗಳು. ಆದರೆ ಪ್ರಜಾ ಪ್ರಭುತ್ವಕ್ಕೆ ಅವರೇ ಜೀವಾಳ. ಶಪಿಸುತ್ತಾ, ರಮಿಸುತ್ತಾ ಅವರೊಂದಿಗೇ ಕಳೆಯಬೇಕು ಕಾಲವನ್ನು ನಾವು ಮತ್ತು ನಮ್ಮ ಪ್ರೀತಿಯ ದೇಶ.

ಗೋ ಹತ್ಯೆ ನಿಷೇಧಿಸಿ

ದೇಶದ ಸಮಯ, ಸಂಪನ್ಮೂಲಗಳನ್ನು ನುಂಗುತ್ತಿರುವ ಹಲವು ತಗಾದೆಗಳಲ್ಲಿ ಗೋ ಹತ್ಯೆ ಒಂದು. ಹಿಂದೂಗಳು ಪವಿತ್ರ, ಮಾತೆ ಎಂದು ಆದರಿಸಲ್ಪಡುವ, ಗೌರವಿಸಲ್ಪಡುವ ಗೋವಿನ ಮತ್ತು ಅದನ್ನು ಸಂರಕ್ಷಿಸಬೇಕಾದ ವಿಧಾನಗಳ ಬಗ್ಗೆ ಚರ್ಚೆಗೆ ಶತಮಾನಗಳ ಇತಿಹಾಸ ಇದೆ. ಸಾಕಷ್ಟು ನೆತ್ತರೂ ಹರಿದಿದೆ. ದೇಶವನ್ನು ಕಿತ್ತು ತಿನ್ನುವ ಸಮಸ್ಯೆಗಳಿಗೆ ರಾಜಕಾರಣದ ಲೇಪನ ಇಲ್ಲದಿದ್ದರೆ ಅದಕ್ಕೆ ಮಹತ್ವವಾಗಲೀ, ಮೋಜಾಗಲೀ ಇರುವುದಿಲ್ಲ. ಗೋ ವಿನ ವಿಷಯದಲ್ಲೂ ಆಗಿದ್ದೂ ಇದೇ.  ಗೋ ಮಾಂಸ ಭಕ್ಷಕರೆಂದು ಪರಿಗಣಿಸಲ್ಪಡುವ, ಮುಖ್ಯವಾಗಿ ಕ್ರೈಸ್ತರು ಮತ್ತು ಮುಸ್ಲಿಮರಿಗೆ, ಗೋ ಮಾಂಸವನ್ನು ಅವರ ಮೆನ್ಯು (menu) ಪಟ್ಟಿಯಿಂದ ತೆಗೆದುಬಿಟ್ಟರೆ ಆಕಾಶ ಕಳಚಿ ಬೀಳೋಲ್ಲ. ಹೃದಯದ  clogged arteries ಗಳಿಗೆ ಮಾತ್ರ ದೊಡ್ಡ ಪ್ರಯೋಜನವಾಗುತ್ತದೆ ಈ ಮಾಂಸ ಮೆನ್ಯು ವಿನಿಂದ ಹೊರಗುಳಿದರೆ.

ಈಗ ಪ್ರವೇಶ ರಾಜಕಾರಣ. ಎಂಟರ್ ದಿ ಡ್ರಾಗನ್ ಥರ. ಅಪಾಯಕಾರಿ ಆದರೂ ಒಂದಿಷ್ಟು ಸೀಟುಗಳನ್ನು ಅಥವಾ ಅಧಿಕಾರದ ಗದ್ದುಗೆಯನ್ನು ತರಲು ಸಹಕಾರಿಯಾದರೆ ಗೋವನ್ನು ಮಾತ್ರವಲ್ಲ ಯಾರನ್ನು ಬೇಕಾದರೂ ಬಲಿ ಕೊಡಲು ಸಿದ್ಧ. ಗೋಮಾಂಸ ನಿಷೇಧಿಸಿದರೆ ಅಲ್ಪಸಂಖ್ಯಾತರ ಆಹಾರ ಪದ್ಧತಿ ಯಲ್ಲಿ ಹಸ್ತಕ್ಷೇಪ ನಡೆಸಿದಂತೆ ಎಂದು ರಗಳೆ ಇವರದು. ಗೋ ಮಾಂಸ ತಿಂದೇ ಸಿದ್ಧ ಎಂದು ಪಟ್ಟು ಹಿಡಿಯುವ ಅಲ್ಪತನ ಅಲ್ಪ ಸಂಖ್ಯಾತರು ತೋರಿಸರು ಎನ್ನುವ ಪ್ರಜ್ಞೆ ಇವರಿಗಿಲ್ಲ, ಆಳುವ ಮಂದಿಗೆ. ಗೋ ಮಾಂಸ ನಿಷೇಧಿಸಿ ಬಿಟ್ಟರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದೀತು ಎನ್ನುವ ಅತಂತ್ರ, ಅಭದ್ರ ಮನಸ್ಥಿತಿಯವರೂ ಅಲ್ಲ ಮುಸ್ಲಿಮರು ಅಥವಾ ಕ್ರೈಸ್ತರು. ಮತ್ತೇಕೆ ಈ ಸಮಸ್ಯೆ ಆಗಾಗ ತಲೆ ಎತ್ತುತ್ತಾ ಇರುತ್ತದೆ ಎನ್ನುವುದು ಯಕ್ಷ ಪ್ರಶ್ನೆ.

ಗೋ ಹತ್ಯೆ ಬಹುಸಂಖ್ಯಾತ ವರ್ಗದವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಾದರೆ ಖಂಡಿತಾ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದೇ ತೀರಬೇಕು. ಗೋ ಹತ್ಯಾ ನಿಷೇಧ ಕೂಡದು ಎನ್ನುವ ಕಾಂಗ್ರೆಸ್ಸಿಗರು ಮುಸ್ಲಿಮರ ಓಟಿಗಾಗಿ ದೊಂಬರಾಟ ನಡೆಸೋದು ನಿಲ್ಲಿಸಬೇಕು. ಮುಸ್ಲಿಮರಿಗೆ ಗೋ ಮಾಂಸ ತಿನ್ನಲೇ ಬೇಕೆನ್ನುವ ನಿಯಮವೇನಿಲ್ಲ. ದಿನ ಪೂರ್ತಿ ಇದರ ಜಪ ಮಾಡುತ್ತಾ ಕೂರುವ ವ್ಯವಧಾನವೂ ಇಲ್ಲ ಅವರಲ್ಲಿ. ಅವರಿಗೆ (ಮುಸ್ಲಿಮರಿಗೆ) ತಲೆಕೆಡಿಸಿ ಕೊಳ್ಳಬೇಕಾದ ನೂರೊಂದು ವಿಷಯಗಳಿವೆ. ಮುಸ್ಲಿಂ ಧರ್ಮೀಯ ಸಸ್ಯಾಹಾರಿಯಾಗಲು ಧರ್ಮದ ಅಡ್ಡಿಯಿಲ್ಲ. ನಿಷೇಧ ಬೇಡ ಎನ್ನುವ ಕಾಂಗ್ರೆಸ್ಸಿಗರಿಗೆ ಏಕೆ ಗೋವು ಪವಿತ್ರ ಅಲ್ಲ ಅನ್ನೋದು ಒಂದು ಒಗಟು. ಹಾಗೆಯೇ ಗೋವು ಪಾವಿತ್ರ್ಯತೆಯನ್ನು ಪಡೆದು ಕೊಂಡಿದ್ದು ಯಾವಾಗಿನಿಂದ ಎಂದು ಯಾರಾದರೂ ಬೆಳಕು ಚೆಲ್ಲಿದರೆ ಉಪಕಾರ. ಈ ಸಂಬಂಧ ಪ್ರೊಫೆಸರ್ D.N. Jha ರವರು ಬರೆದ the myth of holy cow ಪುಸ್ತಕದಲ್ಲಿ ಗೋಮೇಧ, ಅಶ್ವಮೇಧ ಯಾಗಗಳು, ಗೋಮಾಂಸ ಭಕ್ಷಿಸಿದ ಉದಾಹರಣೆಗಳೊಂದಿಗೆ ವಿಸ್ತೃತವಾದ ಮಾಹಿತಿಗಳಿವೆ.

ಗೋ ಹತ್ಯೆಯ ಬಗ್ಗೆ ಮುಸ್ಲಿಮರಿಗೆ ಇರುವ ತಕರಾರಿಗಿಂತ ಬಹುಸಂಖ್ಯಾತರಿಗೆ ಹೆಚ್ಚು ಆಸಕ್ತಿಕರ ಎನ್ನುವುದು ಕಾಂಗ್ರೆಸ್ಸಿಗರ ಮತ್ತು ಇತರೆ ಪಕ್ಷಗಳವರ ಪ್ರತಿಭಟನೆಗಳಿಂದ ವ್ಯಕ್ತವಾಗುತ್ತದೆ. ಈ ತಗಾದೆಯಿಂದ ಶಾಂತಿ ಪ್ರಿಯ ಭಾರತೀಯರು ಹೊರಗುಳಿದರೆ ದೇಶಕ್ಕೆ ಒಳ್ಳೆಯದು. ಏಕೆಂದರೆ ಇಲ್ಲಿ ನಡೆಯುತ್ತಿರುವುದು ಚರ್ಚೆಗಿಂತ ಸಮುದಾಯಗಳ ನಡುವಿನ ಕಂದಕದ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತದೆ.     

  

 

ಬಡವಾದ ಸಾರಂಗಿ

ಖ್ಯಾತ ಗಾಯಕ ಮತ್ತು ಸಾರಂಗಿ ವಾದಕ ಉಸ್ತಾದ್ ಸುಲ್ತಾನ್ ಖಾನ್ ಇನ್ನಿಲ್ಲ. ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ಈ ಪ್ರತಿಭೆ ಅಗಲಿದ ವಿಷಯ ತಿಳಿದಿದ್ದು ಟ್ವೀಟ್ ಒಂದರಿಂದ. ದಿನ ಬೆಳಗಾದರೆ ಕಳ್ಳಕಾಕ ರಾಜಕಾರಣಿಗಳ ಕಳ್ಳ ಧಂಧೆ ಯನ್ನು ವರದಿ ಮಾಡಲು ವೇಳೆಯಿಲ್ಲದ ಪತ್ರಕರ್ತರಿಗೆ ಸುಲ್ತಾನ್ ಖಾನರ ನಿಧನ ಟ್ವೀಟ್ ಮೂಲಕ ತಿಳಿಯುವಂತಾಯಿತು.

ಮೂತ್ರಕೋಶದ ಖಾಯಿಲೆ ಯಿಂದ ಬಳಲುತ್ತಿದ್ದ ಸುಲ್ತಾನ್ ರಿಗೆ ೭೧ ವರ್ಷ ವಯಸ್ಸಾಗಿತ್ತು.

ಸಾರಂಗಿ ಪದದ ಮೂಲ ಹಿಂದಿ ಯಾಗಿದ್ದು, ಸೌ (ನೂರು) + ರಂಗ್ (ಬಣ್ಣ) ಪದಗಳ ಮಿಶ್ರಣದಿಂದ ಸಾರಂಗಿ ಆಯಿತು ಎಂದು ಪಂಡಿತ “ವಿಕಿ ಪೀಡಿಯ” ದ ಅಭಿಪ್ರಾಯ.

live in, three some, ನಮ್ಮ ದೇಶದಲ್ಲಿ?

ಅಹಮದಾಬಾದಿನಲ್ಲಿ ಬಾಳ ಗೆಳೆಯ /ತಿ ಯರನ್ನು ಕಂಡುಕೊಳ್ಳುವ ಒಂದು ಮೇಳವಂತೆ. ಬದುಕಿನ ಸಂಜೆಯಲ್ಲಿರುವವರು ಬದುಕಿನ ಒಂದಿಷ್ಟು ಪ್ರಕಾಶವನ್ನು ತಮ್ಮ ಬಾಳಿನೊಳಕ್ಕೆ ಬಿಟ್ಟು ಕೊಳ್ಳಲು ಸದವಕಾಶ. ಇದರಲ್ಲೇನು ವಿಶೇಷ? ವಿಶೇಷ ಇದೆ. ಇವರುಗಳು ಮದುವೆಯಾಗೋಲ್ಲವಂತೆ. “ಲಿವ್ ಇನ್” ಅಂತೆ. ಅಡುಗೆ ಚೆನ್ನಾಗಿದೆಯೋ ಇಲ್ಲವೋ ಎಂದು ನೋಡುವ tastiing ಥರ. ಅಮೇರಿಕನ್ ಅಥವಾ ಪಾಶ್ಚಾತ್ಯ ಸ್ಟೈಲ್ ಅಂತೆ. ಹೌದು. ಆಧುನಿಕ ಬದುಕಿಗೆ ಬರ್ಗರ್, ಬಾಸ್ಕಿನ್ ರಾಬಿನ್ಸ್, ಜೀನ್ಸ್ ಅನಿವಾರ್ಯ ಆಗೋದಾದರೆ ಹೆಣ್ಣು ಗಂಡಿನ ನಡುವಿನ ಬಂಧವೂ, ಬದುಕುವ ರೀತಿಯೂ ಅವರ ಹಾಗೇ ಯಾಕಾಗಕೂಡದು? ಎಲ್ಲಿಯವರೆಗೆ ನಾವು ಪಾಶ್ಚಾತ್ಯರನ್ನು ಅನುಕರಿಸ ಬಹುದು ಎನ್ನುವದು ಕಠಿಣ ಪ್ರಶ್ನೆ.  

ಅಸ್ಸಾಂ, ಕರ್ನಾಟಕ, ಗುಜರಾತ ರಾಜ್ಯಗಳಿಂದ ಬಂದಿದ್ದರಂತೆ ಜನ ಈ ಮೇಳದಲ್ಲಿ ಪಾಲುಗೊಳ್ಳಲು. ಒಂದು ರೀತಿಯ ಸಾಮೂಹಿಕ ಸ್ವಯಂವರ. ಈ ಅನಿಷ್ಠಕರ ಬೆಳವಣಿಗೆಯನ್ನು ಧಾರ್ಮಿಕ ನಾಯಕರುಗಳು ವಿರೋಧಿಸುವುದು ದೇಶದ, ಸಂಸ್ಕೃತಿಯ ಹಿತದೃಷ್ಟಿಯಿಂದ ಒಳ್ಳೆಯದು. ಇಂದು ಲಿವ್ ಇನ್, ನಾಳೆ three some ಮಟ್ಟಕೆ ಇಳಿಯಬಾರದು ಸಂಬಂಧಗಳು.     

ಮೇಲಿನ ಹೊಸ ಸಂಪ್ರದಾಯವನ್ನು ವಿರೋಧಿಸಿದ ವ್ಯಕ್ತಿಯೊಬ್ಬ ಹೇಳಿದ. ಹಿರಿಯರು ಈ ರೀತಿಯ ಸಂಬಂಧಗಳನ್ನು ಇಷ್ಟ ಪದುವುದಾದರೆ ನಾಳೆ ದಿನ ಕಿರಿಯರೂ ಅದನ್ನೇ ಬಯಸಬಹುದು. ಅವರೇಕೆ ತಾನೇ ಬಯಸಬಾರದು?  ತಮ್ಮ ಅಜ್ಜ  ಅಥವಾ ಅಜ್ಜಿ ಬಯಸಿದ್ದು ತನಗೂ ಇರಲಿ ಎಂದರೆ ತಡೆಯಲು ಸಾಧ್ಯವೇ ಅಥವಾ ತಡೆಯುವುದು ತರವೇ?

ಹೀಗೊಂದು ಕಾನೂನಿನ ಲೈಂಗಿ’ಕಥೆ’

ಜೂಲಿಯಾನ್ ಅಸಾಂಜ್ ಹೆಸರು ಸಾಮಾನ್ಯ ವಿದ್ಯಾವಂತರು ಕೇಳಿರಲೇ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಹಿತಿ ಹಕ್ಕು ಮುಂತಾದ ಹಕ್ಕುಗಳ ಪ್ರತಿಪಾದಕ ಅಸಾಂಜ್. ಈತ ವಿಶ್ವದ ಸರಕಾರಗಳು ತೆರೆಮರೆಯಲ್ಲಿ ನಡೆಸಿ ಮಗುಮ್ಮಾಗಿ ಇದ್ದು ಬಿಡುವ ವಿಷಯಗಳ ಬಗ್ಗೆ ವಿಶ್ವಕ್ಕೆ ಡಂಗುರ ಬಾರಿಸಿ ಹೇಳುತ್ತಿದ್ದ ತನ್ನದೇ ಆದ ವೆಬ್ ತಾಣ “ವಿಕಿಲೀಕ್” ಮೂಲಕ. ಈ ವಿಕಿಲೀಕ್ ಎನ್ನುವ ನಲ್ಲಿ ತೊಟ ತೊಟ ತೊಟ ತೊಟ ಎಂದು ಉದುರಿಸ ಬೇಕಾದ್ದನ್ನೂ, ಉದುರಿಸಬಾರದ್ದನ್ನೂ ಉದುರಿಸಿ ಸರಕಾರಗಳ ಕೆಂಗಣ್ಣಿಗೆ ಕಾರಣವಾಯಿತು. ಈ ನಲ್ಲಿಯ ಬಾಯಿ ಮುಚ್ಚಿಸಲು ಸರಕಾರಗಳು ಎಲ್ಲಾ ಕಸರತ್ತುಗಳನ್ನೂ ಮಾಡಿದವು. ಅದರಲ್ಲಿನ ಒಂದು ಕಸರತ್ತು ಲೈಂಗಿಕ ದೌರ್ಜನ್ಯದ ಅಥವಾ ಅತ್ಯಾಚಾರದ ಆರೋಪ ಜೂಲಿಯಾನ್ ಅಸಾಂಜ್ ವಿರುದ್ಧ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಜೂಲಿಯಾನ್ ಅಸಾಂಜ್ ನಿಗೆ ಇಬ್ಬರು ಮಹಿಳೆಯರ ಪರಿಚಯ ವಾಯಿತು; ಆನ್ನಾ ಆರ್ಡಿನ್ ಮತ್ತು ಸೋಫಿಯಾ ವಿಲೆನ್ ಇವರೇ ಆ ಮಹಿಳೆಯರು.

ಈ ಮಹಿಳೆಯರು ಯಾರು, ಅವರು ಹೇಗೆ ಜೂಲಿಯಾನ್ ಅಸಾಂಜ್ ನಿಗೆ ಹತ್ತಿರವಾದರು ಎನ್ನುವುದು ದೊಡ್ಡ ಕತೆ. ಆನ್ನಾ ಆರ್ಡಿನ್ ಜೂಲಿಯಾನ್ ಒಂದಿಗೆ ಲೈಂಗಿಕ ಚಟುವಟಿಕೆ ನಡೆಸುವಾಗ ಅರ್ಧ ದಾರಿಯಲ್ಲಿ ಕಾಂಡೋಂ ಹರಿದು ಹೋಯಿತು. ಈಗ ಆನ್ನಾ ಗೆ ಶಂಕೆ ತನಗೆ ಲೈಂಗಿಕ ರೋಗ ತಗುಲಿರಬಹುದೋ ಅಥವಾ ಗರ್ಭಧಾರಣೆಯಾಗಿರಬಹುದೋ ಎಂದು. ಆದರೆ ಆಕೆ ಪೊಲೀಸರಿಗೆ ದೂರು ನೀಡಿದ್ದು ಅಸಾಂಜ್ ಉದ್ದೇಶಪೂರ್ವಕ ಕಾಂಡೋಂ ಹರಿದ ಎಂದು.

ಈಗ ಎರಡನೇ ಪಾತ್ರದ ಆಗಮನ, ಸೋಫಿಯಾ ವಿಲೆನ್. ಈಕೆ ಸಹ ಒಂದೆರಡು ದಿನಗಳ ನಂತರ ಅಸಾಂಜ್ ನೊಂದಿಗೆ ಕೂಡಿದಳು. ಮೊದಲ ಸಲ ಕೂಡುವಾಗ ಅಸಾಂಜ್ ಕಾಂಡೋಂ ಧರಿಸಿದ್ದ, ಮರುದಿನ ಬೆಳಿಗ್ಗೆ ಮತ್ತೊಮ್ಮೆ ಕೂಡುವಾಗ ಅಸಾಂಜ್ ಕಾಂಡೋಂ ಅನ್ನು ಧರಿಸಿರಲಿಲ್ಲ ಎಂದು ಸೋಫಿಯಾ ಪೊಲೀಸ್ ಠಾಣೆ ಗೆ ಹೋದಳು ದೂರಲು. ಇಬ್ಬರೂ ಸಮ್ಮತಿಯುಕ್ತ ಸಂಭೋಗಕ್ಕೆ ಒಪ್ಪಿಗೆ ನೀಡಿದ್ದರು ಎಂದು ಅಸಾಂಜ್ ಹೇಳಿದರೆ ಈ ಮಹಿಳೆಯರ ದೂರು ಬೇರೆಯೇ. ಸಮ್ಮತಿ ನೀಡಿದ್ದು ಕಾಂಡೋಂ ರಹಿತ ಸೆಕ್ಸ್ ಗಾಗಿ ಅಲ್ಲ ಎಂದು. ಈಗ ಆಗಮನ ಸೆಕ ನಷ್ಟೇ ರೋಮಾಂಚನ ಕೊಡುವ ಸ್ವಿಸ್ ಕಾನೂನಿಗೆ.

ಸುಸ್ವಾಗತ ಸ್ವಿಟ್ಸರ್ಲೆಂಡ್. ಈ ದೇಶದಲ್ಲಿ ಕಾನೂನು ಸ್ವಿಸ್ ವಾಚಿನಷ್ಟೇ ಸಂಕೀರ್ಣ. ಸುಲಭವಾಗಿ ಅರ್ಥವಾಗೋಲ್ಲ. ಇಲ್ಲಿನ ಕಾನೂನಿನಲ್ಲಿ “ಸರ್ಪ್ರೈಸ್ ಸೆಕ್ಸ್” ಎನ್ನುವ ಕಾಯಿದೆ ಇದೆ. ಈ ನಿಯಮದಡಿ ಲೈಂಗಿಕ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಮಹಿಳೆ ಸಾಕು ಎಂದರೂ ಕೇಳದೆ ಮುಂದುವರಿದರೆ ಅದು ಅತ್ಯಾಚಾರ. ಸಂಭೋಗ ನಿರತರಾಗಿರುವಾಗಲೇ ಮಹಿಳೆ ಸಮ್ಮತಿಯನ್ನು ಹಿಂದಕ್ಕೆ ಪಡೆಯಬಹುದಂತೆ. ಸಮ್ಮಿಶ್ರ ಸರಕಾರ ಉರುಳಿಸಲು ಪಕ್ಷವೊಂದು ಸರಕಾರಕ್ಕೆ ಬೆಂಬಲ ಹಿಂದಕ್ಕೆ ಪಡೆಯುವ ಹಾಗೆ. ಹಾಗೇನಾದರೂ ಸಮ್ಮತಿಯನ್ನು ಹಿಂದಕ್ಕೆ ಪಡೆದೂ ಗಂಡು ಮುಂದುವರಿದರೆ ಅದು ಅತ್ಯಾಚಾರ. (ಒಂದು ಸಂಶಯ; ಸಂಭೋಗ ನಿರತ ಗಂಡು ಕಿವುಡನಾದರೆ?) ಕಿವುಡನಾದರೆ ಸಂವಿಧಾನಕ್ಕೆ ತರುವ ತಿದ್ದುಪಡಿ ಯಂತೆ ಈ ಹಾಸ್ಯಾಸ್ಪದ ಸ್ವಿಸ್ law (lessness) ಗೂ ತರಬೇಕು ತಿದ್ದು ಪಡಿಯೊಂದ. ಮಹಿಳೆ ಉಪಯೋಗಿಸುವ withdrawal method ಇದು. withdrawal method ಏನು ಎಂದು ವಿವರಿಸಲು ಇದು ಸೆಕ್ಸ್ ಲೇಖನ ಅಲ್ಲ.

ಮೇಲಿನ ಈ ಕಾನೂನಿನ ಅಡಿ ಅಸಾಂಜ್ ನನ್ನು ಕಟಕಟೆಯಲ್ಲಿ ನಿಲ್ಲಿಸುವ, ತದನಂತರ ಜೈಲಿಗೆ ಅಟ್ಟುವ ಪ್ರಯತ್ನ ಸ್ವಿಸ್ ಸರಕಾರದ್ದು.

ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?

ನಾಳೆ ಸೋಮವಾರ ಹುಟ್ಟಲಿರುವ ಮಗು ಪ್ರಪಂಚದ ೭೦೦ ನೇ ಕೋಟಿಯದಂತೆ. ೧೨ ವರ್ಷಗಳ ಹಿಂದೆ ೬೦೦ ಕೋಟಿಯಿದ್ದದ್ದು ಈಗ ೭೦೦ ಕೋಟಿಗೆ ಭಡ್ತಿ. ಈ ವರ್ಷ ಹುಟ್ಟಲಿದ್ದ ಏಳು ಕೋಟಿ ಎಂಭತ್ತು ಲಕ್ಷ ಮಕ್ಕಳಲ್ಲಿ ಸೋಮವಾರದಂದು ಹುಟ್ಟಲಿರುವ ಮಗು ೭೦೦ ಕೋಟಿಯದು. ಭರ್ತಿ ಏಳು ಬಿಲ್ಲಿಯನ್. ವಿರಾಮ ಖುರ್ಚಿ ಪಂಡಿತರಿಗೆ ಈ ಸುದ್ದಿ ಒಂದು ಸುಗ್ಗಿ. ತಮಟೆ ಬಾರಿಸಲು ಆರಂಭಿಸುತ್ತಾರೆ ಜನಸಂಖ್ಯೆಯ ವಿಪರೀತ ವೃದ್ಧಿ ಮತ್ತು ಅದು ತರಬಹುದಾದ ಆಪತ್ತುಗಳ, ಅನಾಹುತಗಳ ವರ್ಣನೆಯೊಂದಿಗೆ.     

ಜನಸಂಖ್ಯೆ ತಡೆಯಲು ಇರುವ ನೂರ ಒಂದು ಅಥವಾ ಸಾವಿರದ ಒಂದು ಉಪಾಯಗಳ ಜೊತೆ ಮತ್ತೊಂದು ಉಪಾಯ ಈಗ ಸೇರಿಕೊಂಡಿದೆ. ಮಹಿಳೆಯರಿಗೆ ಸಂತಾನೋತ್ಪತ್ತಿ ಫ್ಯಾಕ್ಟರಿಯ ಉಸ್ತುವಾರಿ ವಹಿಸಿದರೆ ಜನಸಂಖ್ಯೆ ತಗ್ಗ ಬಹುದಂತೆ. ದೇವರೇ ಬಲ್ಲ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಧ್ವನಿ ಜೋರಾದಾಗ ಸಂತಾನೋತ್ಪತ್ತಿ ತಂತಾನೇ ನಿಧಾನ ಆಗಬಹುದು ಅನ್ನೋ ಆಶಯ. ಜನಸಂಖ್ಯೆ ಏರಿಕೆ ಈಗ ಇರುವ ಸಂಪನ್ಮೂಲಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಂಡಿತರ ಒಂದು ಗುಂಪು ಹೇಳುತ್ತಿದ್ದರೆ ಮತ್ತೊಂದು ಗುಂಪಿಗೆ ಈ ಥಿಯರಿ ನಥಿಂಗ್ ಬಟ್ ಟ್ರಾಶ್. ಯಾರನ್ನು ನಂಬುವುದು?

 ಕ್ಷಿಪ್ರ ಗತಿಯಲ್ಲಿ ಮುಪ್ಪಾಗುತ್ತಿರುವ ಜಪಾನ್

ಒಂದು ಕಡೆ ಏರುತ್ತಿರುವ ಜನಸಂಖ್ಯೆ ವಿಶೇಷಜ್ಞರ ಆತಂಕವನ್ನು ಹೆಚ್ಚಿಸುತ್ತಿದ್ದರೆ ಮತ್ತೊಂದು ಕಡೆ ತಮ್ಮ ದೇಶದ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಡಿಸ್ಕೌಂಟು, ಅದರ ಜೊತೆ ಟೈಮ್ ಆಫು ಮುಂತಾದುವುಗಳನ್ನು ಯುವಜನರ ಮುಂದೆ ಇಡುತ್ತಿರುವ ಬೆಳವಣಿಗೆ. ಈ ಬೆಳವಣಿಗೆ ಎರಡನೇ ವಿಶ್ವ ಮಹಾಯುದ್ಧದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾದರೂ ಪವಾಡಸದೃಶವಾಗಿ ಶ್ರೀಮಂತಿಕೆಯಿಂದ ಕಂಗೊಳಿಸಿದ ಜಪಾನ್ ದೇಶದ್ದು. time off ಏಕೆಂದರೆ ಮಕ್ಕಳನ್ನು ಹುಟ್ಟಿಸಲು, ದೊಡ್ಡ ಪರಿವಾರಕ್ಕಾಗಿ ಅಂಗಡಿ ಮುಂಗಟ್ಟು ಗಳು ರಿಯಾಯಿತಿಯನ್ನು ಘೋಷಿಸುತ್ತಿವೆ ಜಪಾನ್ ದೇಶದಲ್ಲಿ. ಹುಟ್ಟುವ ಪ್ರತೀ ಮಗುವಿನ ಮೇಲೂ ಹಣಕಾಸಿನ ಸಹಾಯ ಕೊಡ ಮಾಡುತ್ತಿದೆ ಅಲ್ಲಿನ ಸರಕಾರ. ಈ ಕ್ರಮಗಳ ಮೂಲಕ ಏನಾದರೂ ಮಾಡಿ, ಹೇಗಾದರೂ ಮಾಡಿ, ಜನಸಂಖ್ಯೆ ಹೆಚ್ಚಿಸಿರಯ್ಯ ಎಂದು ಅಲ್ಲಿನ ಸರಕಾರದ ವಿಜ್ಞಾಪನೆ. ನಮ್ಮ ದೇಶ one is fun ಎಂದು ಊಳಿಡುತ್ತಿದ್ದರೆ, ಜಪನೀಯರ ಆಕ್ರಂದನ more please ಎಂದು.  ಪ್ರಪಂಚ ವೈರುಧ್ಯಗಳ ಸಂತೆ, ಅಲ್ಲವೇ?

ಬಹುಪಾಲು ಜಪನೀಯರಿಗೆ ಸಂತಾನ ವೃದ್ಧಿ ಅನ್ನೋದು ‘to do list’ ನ ಕಟ್ಟಕಡೆಯ ಎಂಟ್ರಿ. ಇದನ್ನು ಟಾಪ್ ಪ್ರಯಾರಿಟಿ ಮಾಡಲು ಸರಕಾರದ ಸರ್ಕಸ್ಸು. ಯುವಜನರ ಒತ್ತು ಪ್ರೋಗ್ರೆಸ್ ಕಡೆ, ಪ್ರೊಕ್ರಿಯೇಶನ್ ಕಡೆ ಅಲ್ಲ. ಏಕೆಂದರೆ ಅಲ್ಲಿ ವಿವಾಹ ದುಬಾರಿ. ಪ್ರತೀ ವಿವಾಹಕ್ಕೆ ಸುಮಾರು ೨೦ ಲಕ್ಷ ರೂಪಾಯಿ ಖರ್ಚು. ಮದುವೆಯಾದ ಮೇಲೆ ಮಗು ಹುಟ್ಟಿದರೆ ಮಗುವಿನ ತಾಯಿಗೆ ಒಳ್ಳೆಯ ವರಮಾನ ಕೊಡುವ ಕೆಲಸ ಸಿಗೋದು ಕಷ್ಟ. ಅಮೇರಿಕಾ ಅಥವಾ ಅಇರೋಪ್ಯ ದೇಶಗಳ ಹಾಗೆ  ಮದುವೆಯಾಗದೆ ಸಂತಾನೋತ್ಪತ್ತಿ ಜಪಾನಿನಲ್ಲಿ ವಿರಳ.  ಅಷ್ಟು ಮಾತ್ರವಲ್ಲ ಜಪಾನಿನಲ್ಲಿ ದೀರ್ಘಾಯುಷಿಗಳು ಹೆಚ್ಚು. ಮೇಲಿನ ಕಾರಣಗಳನ್ನು ಕೂಡಿಸಿ ನೋಡಿದಾಗ ಜಪಾನಿನಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ಅತಿ ಕಡಿಮೆ.     

ಜನಸಂಖ್ಯೆ ವೃದ್ಧಿಗೆ ಒತ್ತು ಕೊಡುತ್ತಿರುವ ಮತ್ತೊಂದು ದೇಶ ಸ್ಪೇನ್. ಸ್ಪೇನ್ ದೇಶದಲ್ಲಿ ಹುಟ್ಟುವ ಪ್ರತೀ ಮಗುವಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಸರಕಾರ ನೀಡುತ್ತದೆ.      

ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು

ತಟ್ಟು ಚಪ್ಪಾಳೆ ಪುಟ್ಟ ಮಗು, ಇಕೋ ಕೈ, ತಕೋ ಕೈ, ತಟ್ಟು ಚಪ್ಪಾಳೆ ಪುಟ್ಟ ಮಗು… ಈ ಕವಿತೆಯನ್ನು ೭೦೦ ನೇ ಕೋಟಿ ಮಗುವಿಗೆ ಹಾಡಿ ಕೇಳಿಸಲು ಸಲ್ಮಾನ್ ರುಶ್ಡಿ ತಯಾರಲ್ಲ. ೭೦೦ ನೇ ಕೋಟಿ ಮಗುವಿಗೆ ನೀವು ಕೊಡುವ ಸಂದೇಶವೇನು ಎಂದು ಕೇಳಿದಾಗ ಬುಕರ್ ಪ್ರಶಸ್ತಿ ವಿಜೇತ, ವಿವಾದಾಸ್ಪದ ಲೇಖಕ ಹೇಳಿದ್ದು “(ಧರೆಯ ಮೇಲೆ) ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು” ಎಂದು. imagine no heaven.

ಸಂಪನ್ಮೂಲಗಳನ್ನು ನುಂಗಲೆಂದೇ ಹುಟ್ಟುತ್ತವೆ ಮಕ್ಕಳು ಎಂದು ನಂಬುವವರು ಇದಕ್ಕಿಂತ ಒಳ್ಳೆಯ ಮಾತನ್ನು ಆಡಲಾರರು. ಸುಮಾರು ಐದು ದಶಕಗಳಿಂದಲೂ ನಾವು ಕೇಳುತ್ತಾ ಬಂದಿದ್ದು, ಜನಸಂಖ್ಯೆ ಏರುತ್ತಿದೆ, ವಾತಾವರಣ ಬದಲಾಗುತ್ತದೆ, ತಿನ್ನಲು ಏನೂ ಇರುವುದಿಲ್ಲ, ಹಸಿವಿನಿಂದ ಜನ ಸಾಯಲಿದ್ದಾರೆ, ಬರ ಬಂದೆರಗಲಿದೆ. ಏರುತ್ತಿರುವ ಜನಸಂಖ್ಯೆ ಕಾರಣ ನಮ್ಮ ಗ್ರಹ ಇಕ್ಕಟ್ಟಾಗುತ್ತಿದೆ, ಹಾಗೇ ಹೀಗೆ…ಆದರೆ ಅಂಥ ಎಚ್ಚರಿಕೆಗಳು, ‘caveat emptor’ ಗಳು  ಪ್ರಕಟವಾದ ಕಾಗದಗಳ ಜೊತೆ ರದ್ದಿ ಸೇರಿದವೆ ವಿನಃ ಯಾವುದೇ ಕೇಡುಗಾಲ ಬಂದೆರಗಲಿಲ್ಲ.   

ಈ ಲೇಖನದ ಕರ್ತೃವಿನ ಸಂದೇಶ

ಕಂದಾ ಸುಸ್ವಾಗತ, ನಮ್ಮ ಭವ್ಯ ಧರೆಗೆ. ಶತಮಾನಗಳಿಂದ ಪೂರ್ವದಿಂದ ಹುಟ್ಟುತ್ತಿರುವ ಸೂರ್ಯ ಮತ್ತು ಪಶ್ಚಿಮದಲ್ಲಿ ಮುಳುಗುವ ಸೂರ್ಯನ ನಡಿಗೆಯ ನಿಯಮವನ್ನು ನಾವು ಬದಲಿಸಲಿಲ್ಲ. ಉಸಿರಾಡುವ ಗಾಳಿ ಎಂದಿನ ಹಾಗೇ ಈಗಲೂ ತೆರಿಗೆಯಿಂದ ಮುಕ್ತ. ಹೌದು ನಿನ್ನಿಂದ ಎರವಲು ಪಡೆದಿದ್ದ ಭೂಮಿಯ ಮೇಲೆ ನಮ್ಮ ಅಹಂ ಮತ್ತು ಸ್ವಾರ್ಥದ ಕಾರಣ ಸಾಕಷ್ಟು ಅನಾಚಾರ ಎಸಗಿದ್ದೇವೆ. ನಮ್ಮ ಮಣ್ಣನ್ನು ಮೊನ್ಸಾಂಟೊ ಕಂಪೆನಿಗೆ ಗುತ್ತಿಗೆ ಕೊಟ್ಟು ಉಸಿರುಗಟ್ಟಿಸಿದ್ದೇವೆ. ಕಾಯಿ ಹಣ್ಣಾಗಲು ನಿಸರ್ಗ ನಿಯಮ ತೆಗೆದುಕೂಳ್ಳುವ ಸಮಯಕ್ಕೆ ಕಾಯುವ ವ್ಯವಧಾನ ನಮ್ಮಲ್ಲಿಲ್ಲ, ಅದಕ್ಕೆ. ಆದರೂ, ಇವೆಲ್ಲದರ ನಡುವೆಯೂ, ಕೆಲವೊಂದು ಒಳ್ಳೆಯ ಅವಿಷ್ಕಾರಗಳನ್ನೂ ನಿನಗಾಗಿ ತಯಾರಿಸಿ ಇಟ್ಟಿದ್ದೇವೆ. ನೀನು ಜನರೊಂದಿಗೆ ಬೇರೆಯದೇ, ಯಾವುದೇ ಸಭೆ ಸಮಾರಂಭ ಗಳಿಗೂ ಹೋಗುವ ತಾಪತ್ರಯವಿಲ್ಲದೆ ಮನೆಯಲ್ಲೇ ಕೂತು ಜೇಡನ ಬಲೆಯೊಳಕ್ಕೆ ಅವಿತುಕೊಂಡು ಮೊಬೈಲ್, ಫೇಸ್ ಬುಕ್, ಟ್ವಿಟ್ಟರ್, ಎಸ್ಸೆಮ್ಮೆಸ್, ಐ-ಪ್ಯಾಡ್, ಐ-ಪಾಡ್, ಇ-ಮೇಲ್ ಮುಂತಾದ ಸಾಮಾಜಿಕ ತಾಣ, ಅನುಕೂಲಗಳ ಮೂಲಕ ಜನರೊಂದಿಗೆ ನೇರವಾಗಿ ಬೆರೆಯದೆ ವ್ಯವಹರಿಸಲು ಅನುಕೂಲ ಮಾಡಿದ್ದೇವೆ. ಜನರೊಂದಿಗೆ ಬೆರೆತಾಗ ತಾನೇ ತಾಪತ್ರಯ? ಇಂಥ ಸುಂದರ ಪ್ರಪಂಚಕ್ಕೆ ನಿನಗಿದೋ ನನ್ನ ಸ್ವಾಗತ. ನೆನಪಿರಲಿ, ವಿಶ್ವ ಸಮಾನ ಅವಕಾಶ ನೀಡುವ fair ground ಅಂತೂ ಅಲ್ಲ, ಇದು ದಗಲಬಾಜಿಗಳ, ಸುಳ್ಳರ, ಕಪಟ ಜನರ, ಪ್ರತೀ ಕಾರ್ಯಕ್ಕೂ ಕಮಿಷನ್ ವಾಸನೆಯ ಬೆನ್ನು ಹತ್ತಿ ಹೋಗುವ ಅತಿ ದೊಡ್ಡ fair (ಜಾತ್ರೆ). ಲಂಚಗುಳಿತನದ ಒಂದು ಸುಂದರ eco system ಅನ್ನು  ಹುಟ್ಟುಹಾಕಿದ್ದೇವೆ.  ಲಕ್ಷಾಂತರ ವರ್ಷಗಳ ಕಾಲ ನಿರಂತರ ಪ್ರಯಾಣ ಮಾಡಿದ ವೀರ್ಯದ ಫಲ ನೀನಾಗಿರೋದರಿಂದ ಈ ಪ್ರಪಂಚದಲ್ಲಿ ಬಾಳಿಬದುಕಲು ನಿನಗೆ ಕಷ್ಟವೇನೂ ಆಗಲಿಕ್ಕಿಲ್ಲ, you will effortlessly adapt.     

ಬೀಳ್ಕೊಡುವ ಮೊದಲು ಒಂದು ಮಾತು ನೆನಪಿರಲಿ…..ಯಾರು ತಾವು ಕಾಣುವ ಸುಂದರ ಕನಸನ್ನು ನಂಬುವರೋ ಅವರಿಗೆ ಮಾತ್ರ ಭವಿಷ್ಯ ಸೇರಿದ್ದು; “ಸ್ವರ್ಗ ಕಲ್ಪಿಸಿಕೊಳ್ಳದಿರು” ಎಂದು ಹೇಳುವ ಮತಿಹೀನರಿಗಂತೂ ಖಂಡಿತಾ ಅಲ್ಲ. ಧುಮುಕು ಧರೆಗೆ ಧೈರ್ಯವಾಗಿ.   

 ಚಿತ್ರ ಸೌಜನ್ಯ: ಇಂಗ್ಲೆಂಡಿನ “ಗಾರ್ಡಿಯನ್” ದಿನಪತ್ರಿಕೆ.

ಇನ್ನೂರು ರೂಪಾಯಿಗೆ ಒಂದು ವರ್ಷ

ಇನ್ನೂರು ರೂಪಾಯಿ ಕದ್ದ ಆರೋಪಕ್ಕೆ ಹದಿ ಹರೆಯದ ಹುಡುಗನಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆ ಒಂದು ವರ್ಷದ ಕಾರಾಗೃಹ ವಾಸ. ಸಾವಿರಾರು ಕೋಟಿ ನುಂಗಿದ, ತೆರಿಗೆ ಪಾವತಿಸದೆ ಮೆರ್ಸಿ ಡೀಸ್, BMW ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುವ ಕಳ್ಳರಿಗೆ ಹೋದಲ್ಲೆಲ್ಲಾ ಮಣೆ, ಆದರ, ಅಭಿಮಾನ, ಸನ್ಮಾನ. ಭಾರತ ಕೇವಲ ಶ್ರೀಮಂತರ, ಲೂಟಿಕೋರರ, ಬಾಲಿವುಡ್, ಕ್ರಿಕೆಟ್ ತಾರೆಯರ, ಅಧಿಕಾರವಿರುವವರ ಉಲ್ಲಾಸಕ್ಕಾಗಿ ಇರುವ  ನಾಡೇ? ಹುಡುಗ ಜೈಲಿನಿಂದ ಹೊರ ಹೋಗುವಾಗ ಇಂಥಾ ಕೆಲಸ ಇನ್ನೊಮ್ಮೆ ಮಾಡಬೇಡ ಎಂದು ಪೋಲೀಸಪ್ಪನೊಬ್ಬ ಹೇಳುತ್ತಾನಂತೆ. ಈ ಮಾತನ್ನು ಕಿನ್ನಿಮೋಳಿಗೋ, ಕಲ್ಮಾಡಿಗೋ, ರಾಜಾಗೋ ಹೇಳಲು ಪೇದೆಯೊಬ್ಬನಿಂದ  ಸಾಧ್ಯವೇ?

ಸಮಾಜದ ಗಣ್ಯ ವ್ಯಕ್ತಿಗಳು ಮಾಡಿದ ಪಾಪಗಳು ಸೆಷನ್ಸ್ ಕೋರ್ಟು, ಹೈ ಕೋರ್ಟು, ಸುಪ್ರೀಂ ಕೋರ್ಟು, ಸುಳ್ಳು ಸುಳ್ಳೇ ಮಾತನಾಡುವ ಕರಿ ಕೋಟುಗಳನ್ನೆಲ್ಲಾ ಸುತ್ತಿ ಸುತ್ತಿ ಬಸವಳಿದು ಕೊನೆಗೆ ಮರೆಯಾಗಿ ಹೋಗುತ್ತವೆಯೇ ವಿನಃ ಮಹನೀಯರುಗಳು ಅನುಭವಿಸಿದ ಜೈಲು ಶಿಕ್ಷೆ ಬಗ್ಗೆ ಓದಿದ ನೆನಪಿದೆಯೇ?      

 

ಬಿಡುವು ಮತ್ತು ನಿಸರ್ಗದ ನಂಟು

ಮನುಷ್ಯನ ಮನಸ್ಸುಹಾಗು ದೇಹ  ದೈನಂದಿನ ದಿನಚರಿ ಯಿಂದ, ಕೆಲಸ ಕಾರ್ಯಗಳ ಒತ್ತಡದಿಂದ , ಪಟ್ಟಣದ ಗದ್ದಲದ ಜಂಜಾಟದ  ವಾತಾವರಣದಿಂದ , ಬಿಡುವಿಲ್ಲದ ದಣಿವಿನಿಂದ  ಮುಕ್ತಿ  ಪಡೆಯಲು  ವಿಶ್ರಾಂತಿ ಪಡೆಯಲು ಬಯಸುತ್ತದೆ. ಸ್ವಲ್ಪ ದಿನ ಈ ಜಂಜಾಟ ಗಳನ್ನು ಮರೆತು ಹಾಯಾಗಿ  ಹೊರಗಡೆ ಎಲ್ಲಾದ್ರೂ ಕುಟುಂಬದೊಡನೆ / ಸ್ನೇಹಿತರೊಡನೆ / ಅಥವಾ ಒಬ್ಬರೇ  ನೆಮ್ಮದಿಯಾಗಿ ಹೋಗಬೇಕೆನ್ನಿಸುತ್ತದೆ, ನಿಮಗೆ ಇಷ್ಟವಾದ ಸ್ಥಳಗಳು, ಸೌಕರ್ಯಗಳು ಇವುಗಳ ಬಗ್ಗೆ ಹೇಳಿ ಎಂದು ವೆಬ್ ತಾಣವೊಂದರಲ್ಲಿ ಒಬ್ಬರು ಕೇಳಿದ್ದರು. ನಮ್ಮ ಮನಸ್ಸಿನಲ್ಲಿ ಎಲ್ಲಾದರೂ ಹೊರಗೆ ಹೋಗೋದು ಎಂದರೆ ನಮ್ಮ ಪಾಕೀಟ್ ಖಾಲಿ ಎಂದು ಭಾವನೆ. ಆದರೆ ವಾಸ್ತವ ಬೇರೆಯೇ. ಹೆಚ್ಚು ಖರ್ಚಿಲ್ಲದೆ ಹೆಚ್ಚು ಆನಂದ ಪಡೆಯುವ ಮಾರ್ಗಗಳಿವೆ.

ನಮ್ಮ ದೇಶದಲ್ಲಿ ಕುಟುಂಬ ಸಹಿತ ಔಟಿಂಗ್ ಹೋಗುವ ಪರಿಪಾಠ ದೊಡ್ಡ ರೀತಿಯಲ್ಲಿ ಬೆಳೆದಿಲ್ಲ ಎನ್ನಬಹುದು. ದೊಡ್ಡ ಸಂಬಳ, ಇನ್ನಷ್ಟು ದೊಡ್ಡ ಗಿಂಬಳದ ಸೌಲಭ್ಯ ಇರುವವರು ರಿಸಾರ್ಟ್ ಮುಂತಾದ ಕಡೆ ಹೋಗಬಹುದು. ಔಟಿಂಗ್ ಹೋಗಲು ದೊಡ್ಡ ಸಂಬಳದ ಅವಶ್ಯಕತೆ ಇಲ್ಲ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಗೊತ್ತಿದ್ದರೂ ಅಯ್ಯೋ ಜನ ಏನೆಂದು ಕೊಳ್ಳುತ್ತಾರೋ ಎಂದು ಮುಜುಗರ ಪಟ್ಟು ಕೊಳ್ಳುತ್ತಾರೆ. ನನ್ನ ಮಿತ್ರನೊಬ್ಬ ಆಗಾಗ ತನ್ನ ಪರಿವಾರದೊದಿಗೆ ಬುತ್ತಿ ಕಟ್ಟಿ ಕೊಂಡು ಊರ ಹೊರಗೆ, ಪ್ರಶಾಂತ ಬಯಲಿನಲ್ಲಿ, ಅಡಿಕೆ ತೋಟದಲ್ಲಿ ಯಜಮಾನನ ಅನುಮತಿ ಪಡೆದು ಒಂದಿಷ್ಟು ಸಮಯ ಕಳೆಯುತ್ತಾನೆ. ನಾನಿರುವ ಜೆಡ್ಡಾ ನಗರದಲ್ಲಿ ಸಮಯ ಕಳೆಯಲು ನಾವು ವಿಶಾಲವಾಗಿ ಹರಡಿ ಕೊಂಡ ಮರುಭೂಮಿಯಲ್ಲಿ ಒಳ್ಳೆ ಜಾಗ ನೋಡಿ ಕೊಂಡು ಒಂದಿಷ್ಟು ಸಮಯ ಕಳೆಯುತ್ತೇವೆ. ಇದಕ್ಕೆ ಚಿಕ್ಕಾಸಿನ ಖರ್ಚೂ ಬರದು. ಇಲ್ಲಿನ ಜನ ಡೇರೆ ಹಾಕಿಕೊಂಡು ಮರು ಭೂಮಿಯಲ್ಲಿ ವೀಕೆಂಡ್ ಕಳೆಯುತ್ತಾರೆ. ಅಥವಾ ಸಮುದ್ರ ತೀರದಲ್ಲಿ ಕಂಬಳಿ ಹಾಸಿ, barbecue ಮಾಡಿ ಕೊಂಡು ಮೋಜಾಗಿ ಕಳೆಯುತ್ತಾರೆ. ನಮ್ಮ ದೇಶದಲ್ಲಿ ಹೋದ ಹೋದಲ್ಲೆಡೆ ನದೀ ತೀರಗಳು, ಹಸಿರು ಬಯಲು, ಕಣಿವೆ, ಬೆಟ್ಟ ಗುಡ್ಡ ಗಳಿದ್ದರೂ ಎಷ್ಟು ಜನ ಟೆಂಟ್ ಹಾಕಿ ದಿನ ಕಳೆಯುವುದನ್ನು ನೋಡಿದ್ದೇವೆ? ನಿಸರ್ಗದೊಂದಿಗೆ ನಾವು ನಂಟು ಇಟ್ಟುಕೊಂಡಾಗ ಆ ಅಭ್ಯಾಸ ನಮ್ಮ ಮಕ್ಕಳಿಗೂ ಬರುತ್ತದೆ. ಅಂಥ ಔಟಿಂಗ್ ಸಮಯ ಮಕ್ಕಳಿಗೆ ನಿಸರ್ಗದಲ್ಲಿ ಕಾಣಸಿಗುವ ವಸ್ತುಗಳನ್ನು ಸಂಗ್ರಹಿಸಲು, ಅವುಗಳ ಬಗ್ಗೆ ಅಧ್ಯಯನ ಮಾಡಲು ಸಹ ಪ್ರೋತ್ಸಾಹಿಸಬಹುದು.
ನನ್ನ ಪಾಲಕರು ಇರುವ ಮನೆಯ ಹತ್ತಿರವೇ ನದಿಯೊಂದಕ್ಕೆ ಸುಂದರವಾದ ತೂಗು ಸೇತುವೆ ಕಟ್ಟಿದ್ದಾರೆ. ನದಿಯ ಸುತ್ತ ಮುತ್ತಲಿನ ಸೌಂದರ್ಯದ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅಲ್ಲಿಗೆ ಹೋಗಿ, ಒಂದರ್ಧ ದಿನ barbecu ಮಾಡಿಕೊಂಡು ಕಳೆಯೋಣ ಅಂದರೆ, ಅಯ್ಯೋ, ಜನ ನಗುತ್ತಾರೆ ಅಷ್ಟೇ ಎನ್ನುತ್ತಾರೆ ಮನೆಯವರು. ಈ ರೀತಿಯ ಮನೋಭಾವನೆ ಇದ್ದಾರೆ ಔಟಿಂಗ್ ಸಾಧ್ಯವೇ?

ದೈನಂದಿನ ಜಂಜಾಟದಿಂದ, ನೂಕು ನುಗ್ಗಲಿನಿಂದ ದೂರವಾಗಿ ಎಲ್ಲಾದರೂ ಡೇರೆ ಹಾಕಿಯೋ, ಮತ್ತೇನಾದರೂ ವ್ಯವಸ್ಥೆ ಮಾಡಿಕೊಂಡೋ ದಿನ ಕಳೆಯುವುದು ಎಷ್ಟು ಮಜಾ? ರಜೆಯ, ವೀಕೆಂಡಿನ ಆನಂದ ಪಡೆಯಲು ರೆಸಾರ್ಟ್ ಗಳಿಗೆ ಹೋಗಬೇಕೆಂದಿಲ್ಲ. ರಿಸಾರ್ಟ್ ನಮಗೆ ಬೇಕಾದ ಸ್ಥಳದಲ್ಲಿ ಸೃಷ್ಟಿಸಿಕೊಳ್ಳಬಹುದು ಮನಸ್ಸೊಂದಿದ್ದರೆ.
ನಮ್ಮ ಇಡೀ ದೇಶವೇ ಒಂದು ಅದ್ಭುತ ರೆಸಾರ್ಟ್, ಏನಂತೀರಾ?

ನಮ್ಮ ರಾಷ್ಟ್ರಗೀತೆ ಚಿಕ್ಕದಾಯಿತು

ನಮ್ಮ ರಾಷ್ಟ್ರ ಗೀತೆ ಚಿಕ್ಕದಾಯಿತು, ಸ್ವಲ್ಪ ದೊಡ್ಡದು ಮಾಡಬಾರದೇ? ಡಿಮಾಂಡಪ್ಪೋ ಡಿಮಾಂಡು, ತರಾವರಿ ಡಿಮಾಂಡುಗಳು ಜನರದು. ತಿನ್ನೋಕ್ಕೆ ಒಪ್ಪೊತ್ತಿನ ಅನ್ನ ಇಲ್ಲ, ಅನ್ನ ಹಾಕಿ ಎಂದು ಎಂದು ಕೆಲವರ ಡಿಮಾಂಡ್ ಆದರೆ ಇನ್ನೂ ಕೆಲವರದು ತಮ್ಮ ತಲೆ ಮೇಲೆ ಸೂರಿಲ್ಲ, ಸಹಾಯ ಮಾಡಿ ಎನ್ನುವ ಡಿಮಾಂಡು. ಬದುಕಿನ ಅತ್ಯವಶ್ಯಕತೆ ಗಳ ಡಿಮಾಂಡು ಗಳನ್ನು ಈಡೇರಿಸಲು ಪ್ರಪಂಚ ಹೆಣಗಾಡುತ್ತಿದ್ದರೆ ನಮ್ಮ ರಾಷ್ಟ್ರ ಗೀತೆ ಯಾಕೋ ತುಂಬಾ ಚಿಕ್ಕದಾಯಿತು, ಅದನ್ನು ಸ್ವಲ್ಪ ಸ್ಟ್ರೆಚ್ ಮಾಡಿ ದೊಡ್ಡದು ಮಾಡಬಾರದೇ ಎನ್ನುವ ತುಂಟನದ ಡಿಮಾಂಡು. ಬೇಸ್ತು ಬೀಳಬೇಡಿ, ಈ ಡಿಮಾಂಡನ್ನು ನಮ್ಮ ದೇಶ ವಾಸಿಗಳಲ್ಲಿ ಯಾರೂ ಮಾಡಲಿಲ್ಲ, ಈ ಸವಿನಯ, ದೇಶಭಕ್ತಿ ತುಂಬಿ ತುಳುಕುವ ಮನವಿ ಬಂದಿದ್ದು ಫಾರ್ಮುಲಾ ಒನ್ ಕಾರ್ ರೇಸಿನ ಇಂಗ್ಲೆಂಡ್ ಮೂಲದ ಡ್ರೈವರ್ ಒಬ್ಬನಿಂದ. ಚಾಲಕ ಲೀವೈಸ್ ಹ್ಯಾಮಿಲ್ಟನ್ ನ ಅಳಲಿನ ಮರ್ಮ ಸ್ವಲ್ಪ ನೋಡೋಣ.

ಯಾವುದೇ ಕ್ರೀಡಾಪಟುವೂ ಸ್ಪರ್ದೆಯಲ್ಲಿ ವಿಜೇತನಾದಾಗ podium ಮೇಲೆ ನಿಂತು ತನ್ನ ರಾಷ್ಟ್ರ ಗೀತೆಯನ್ನು ನುಡಿಸುವುದನ್ನು ಹೆಮ್ಮೆಯಿಂದ ಕೇಳುವುದು ರೋಮಾಂಚನವೇ ಸರಿ. ಆದರೆ ನಾನು ಈ ಕಾರ್ ರೇಸಿನ ಈ ಪಂದ್ಯದಲ್ಲಿ ಗೆದ್ದು podium ಮೇಲೆ ನಿಂತ ಅರ್ಧ ನಿಮಿಷದಲ್ಲೇ ಮುಗಿದು ಹೋಯಿತು ನನ್ನ ರಾಷ್ಟ್ರ ಗೀತೆ. ಕೆಲವರು ೧೦ ನಿಮಿಷಗಳಿಗೂ ಹೆಚ್ಚು ಹೊತ್ತು ನಿಂತು ತಮ್ಮ ಗೀತೆಯನ್ನು ಆಲಿಸುತ್ತಾರೆ. ಇದು ಅವನ ಅಳಲು. ಅವನಿಗೆ podium ಮೇಲೆ ಹೆಚ್ಚು ಹೊತ್ತು ನಿಂತು ಸಂಭ್ರಮಿಸುವ ಆಸೆ, ಈ ಆಸೆ ಪೂರಸಲು ಅವನ ದೇಶದ god save the queen ಎನ್ನುವ ರಾಷ್ಟ್ರಗೀತೆಯನ್ನು ಇನ್ನಷ್ಟು ಉದ್ದ ಮಾಡಬೇಕು. ಹೇಗಿದೆ ಬೇಡಿಕೆ?

ನಮ್ಮ ರಾಷ್ಟ್ರಗೀತೆಯಲ್ಲಿ ಸ್ವಲ್ಪ alteration ಮಾಡಿ ಎಂದು ನಮ್ಮ ದೇಶದಲ್ಲಿ ಒಬ್ಬರು ಕೋರ್ಟು ಹತ್ತಿದರಂತೆ. “ಪಂಜಾಬ್, ಸಿಂಧು, ಗುಜರಾತ, ಮರಾಠ…” ಗೀತೆಯ ಈ ಸಾಲಿನಲ್ಲಿನ ಸಿಂಧ್ ಈಗ ನಮ್ಮ ದೇಶದಲ್ಲಿಲ್ಲದ್ದರಿಂದಲೂ, ಕಾಶ್ಮೀರ ನಮ್ಮ ದೇಶದಲ್ಲಿದ್ದರೂ ಅದರ ಪ್ರಸ್ತಾಪ ಗೀತೆಯಲ್ಲಿಲ್ಲದ್ದರಿಂದಲೂ ಸ್ವಲ್ಪ ಬದಲಾವಣೆ ಮಾಡಬಾರದೇ ಎನ್ನುವ ಮನವಿ. ಸಿಂಧ್ ಎಂದರೆ ಬರೀ ಪ್ರಾಂತ್ಯ ಮಾತ್ರವಲ್ಲ ಅದೊಂದು ನಾಗರೀಕತೆ, ನದಿಯ ಹೆಸರೂ ಹೌದು, ಹಾಗಾಗಿ ಯಾವ ಬದಲಾವಣೆ ಕೂಡದು ಎಂದು ವಿರೋಧಿಸಿದವರ ಪಾಟೀ ಸವಾಲು. ನ್ಯಾಯಾಲಯ alteration ಮನವಿಯನ್ನು ತಿಪ್ಪೆಗೆ ಬಿಸುಟಿತು.

ಆಫ್ಘಾನಿಸ್ತಾನದಲ್ಲಿ ೧೯೯೯- ೨೦೦೨ ರವರೆಗೆ ರಾಷ್ಟ್ರ ಗೀತೆಯೇ ಇರಲಿಲ್ಲ. ಬದಲಿಗೆ ಇದ್ದಿದ್ದು “ಕಲಾಶ್ನಿಕೋವ್” ಕೋವಿಗಳ ಸಂಗೀತ ಮಾತ್ರ.

ರಾಷ್ಟ್ರ ಗೀತೆಗಳ ಅಧ್ಯಯನಕ್ಕೆ anthematology ಎಂದು ಹೆಸರು. ಅಧ್ಯಯನ ಮಾಡುವ ವ್ಯಕ್ತಿ anthematologist.

ಅತ್ತೆ ಜೋಕು

ಅತ್ತೆ ಯರ ಬಗೆಗೆ ಇರುವ quote ಗಳ ಬಗ್ಗೆ ಗೂಗ್ಲ್ ಮಾಡ್ತಾ ಇದ್ದೆ. ಪಾಶ್ಚಾತ್ಯ ಗಂಡಸರಿಗೆ ತಮ್ಮ ಅತ್ತೆಯಂದಿರ ಬಗ್ಗೆ ಅಂಥ ಒಳ್ಳೆ ಅಭಿಪ್ರಾಯ ಇಲ್ಲ ಅಂತ ಕಾಣುತ್ತೆ. ಆದರೆ ಭಾರತೀಯ ಗಂಡು ಈ ವಿಷಯದಲ್ಲಿ ಅದೃಷ್ಟಶಾಲಿ. ಮಗಳು ಭದ್ರವಾಗಿರಲೆಂದು ಅತ್ತೆ ತಮ್ಮ ಅಳಿಯಂದಿರನ್ನು ತುಂಬಾ ಜೋಪಾನವಾಗಿ ನೋಡಿ ಕೊಳ್ಳುತ್ತಾರೆ. ಗಂಡನನ್ನು ಹೇಗೆ ನೋಡಿ ಕೊಳ್ಳಬೇಕೆಂದು ತನ್ನ ಮಗಳಿಗೂ ಬುದ್ಧಿ ಹೇಳುತ್ತಾಳೆ. ಆದರೆ ಈ ಅದೃಷ್ಟ ಮಹಿಳಾ ಮಣಿಗಳಿಗೆ ಮಾತ್ರ ಇಲ್ಲ. ಒಂದು ಕಡೆ ಅತ್ತೆ – ಅಳಿಯಂದಿರ ಸಂಬಂಧ ಸುಮಧುರವಾಗಿದ್ದರೆ ಮತ್ತೊಂದು ಕಡೆ ಅತ್ತೆ- ಸೊಸೆಯರ ಜಟಾಪಟಿ ಸೂರ್ಯನಷ್ಟೇ ಸತ್ಯ, ಪ್ರಖರ.

ಈಗ ಪಾಶ್ಯಾತ್ಯ ಗಂಡಿನ ಕಡೆ ಬರೋಣ. ಮೇಲೆ ಹೇಳಿದ ಹಾಗೆ ಅಲ್ಲಿನ ಅತ್ತೆ – ಅಳಿಯದಿರ ಸಂಬಂಧ ನಮ್ಮ ದೇಶದ DMK-CONGRESS ಪಕ್ಷದ ರೀತಿ. ಅಂಥಾ understanding. ಪಾಶ್ಚಾತ್ಯ ಗಂಡು ಹಾಡೋದು, ಅತ್ತೆ, ನೀನು ಸತ್ತರೆ, ನನ್ನ ಬಾಳು ಸಕ್ಕರೆ… ಅಂತ.

ಒಬ್ಬ ತನ್ನ ಅತ್ತೆಯನ್ನು ಮೃಗಾಲಯಕ್ಕೆ ಕರೆದೊಯ್ಯುತ್ತಾನೆ. ಮೊಸಳೆಗಳಿರುವ ಕೊಳದ ಹತ್ತಿರ ಬಂದಾಗ ತನ್ನ ಅತ್ತೆಯನ್ನು ನೂಕಿ ಬಿಡುತ್ತಾನೆ. ಅತ್ತೆಯನ್ನು ಕೊಂದ ಅಪವಾದ ಸಾಲದೆಂಬಂತೆ ಈಗ ಅವನ ಮೇಲೆ ಪ್ರಾಣಿ ದಯಾ ಸಂಘದವರು ಕೇಸು ಹಾಕಿದ್ದಾರೆ, ಮೊಸಳೆಗಳೊಂದಿಗೆ ಈತ ಕ್ರೂರವಾಗಿ ವರ್ತಿಸಿದ ಎಂದು. ಆತ್ತೆಯ ಬಗ್ಗೆ ಇದಕ್ಕಿಂತ ಕ್ರೂರವಾದ ಹೇಳಿಕೆ ಬೇರೇನಿದೆ?