ಈ ತಿಂಗಳು ನಿನಗೆ ಸಿಗುತ್ತೆ ಕೋಟಿ

ಜೂನ್, ಜುಲೈ ತಿಂಗಳಿನಲ್ಲಿ ಭಾರತದಲ್ಲಿದ್ದಾಗಿನ ಅನುಭವ. ಪ್ರತೀ ಸಲ ಬಂದಾಗ ವಿಶೇಷ ಇದ್ದೇ ಇರುತ್ತೆ.  ನನಗೆ ಕಾಣುವ ವಿಶೇಷ ಅಲ್ಲಿನ ಜನರಿಗೆ (ಭಾರತೀಯರಿಗೆ) ವಿಶೇಷವೇನೂ ಅಲ್ಲ. ಆದರೆ ನನ್ನಂಥ, ಬದುಕಿನ ಬಹುಪಾಲು ಹೊರದೇಶದಲ್ಲಿ ಕಳೆಯುವ ಅನಿವಾಸಿಗಳಿಗೆ ಇಲ್ಲಿಯ ಪ್ರತೀ ಕ್ಷಣವೂ ರೋಚಕ, ಕುತೂಹಲಭರಿತ. ಭಾರತದಲ್ಲಿ ಇರುವಷ್ಟು ದಿನ ಪ್ರತೀ ಕ್ಷಣವನ್ನು ಆಸ್ವಾದಿಸಿ ಮನಸು ಹಗುರಾಗುವ ಸವಿ ನೆನಪುಗಳೊಂದಿಗೆ, ವಿದಾಯ ನೀಡುವ ಭಾರವಾದ ಹೃದಯದೊಂದಿಗೆ ಮರಳುತ್ತಾನೆ ಅನಿವಾಸಿ ಪೆವಿಲಿಯನ್ ಗೆ. ಹಾಗಂತ ನಮಗೆ ಕಾಣ ಸಿಗುವುದೆಲ್ಲಾ ರೋಚಕವೋ, ಅವಿಸ್ಮರಣೀಯವೋ ಆಗಬೇಕೆಂದಿಲ್ಲ. ಆದರೆ ಕೆಲವೊಂದು ಮೋಸ ಹೋಗುವ ಕಹಿ ಘಟನೆಗಳ ಹಿಂದೆಯೇ ಹೇ, ನಿಲ್ಲು ಅನಿವಾಸಿ, ಭಾರತ ಇಷ್ಟೇ ಅಲ್ಲ, ಇನ್ನೂ ಬೇಕಷ್ಟಿದೆ ಅವಳ ಮಡಿಲಲ್ಲಿ ಎಂದು ಕೈ ಬೀಸಿ ಕರೆದು ಮನಸ್ಸನ್ನು ಮುದ ಗೊಳಿಸುವ ಅನುಭವಗಳೇ ಹೆಚ್ಚು ಎಂದು ಸುಲಭವಾಗಿ ಹೇಳಬಹುದು.

ಬೆಂಗಳೂರಿನಲ್ಲಿ ಮಿತ್ರರು ಇರುವುದರಿಂದ ಭೇಟಿ ಅನಿವಾರ್ಯ. ನನ್ನ ಕಾರಿನಲ್ಲಿ ಬಂದಿದ್ದರೂ ಬೆಂಗಳೂರ ತುಂಬಾ ಗುಂಡಿ ತೋಡಿ ಅಲ್ಲಿ ಇಲ್ಲಿ ಎಂದು ಸಿಕ್ಕ ಸಿಕ್ಕಲ್ಲಿ deviation ಗಳಿದ್ದರಿಂದ ಕಾರನ್ನು ಮಿತ್ರನ ದ್ಮನೆಯ ಹತ್ತಿರ ಪಾರ್ಕ್ ಮಾಡಿ ಯಾರನ್ನೋ ಕಾಣಲೆಂದು ರಿಕ್ಷಾ ಹಿಡಿದೆ. ಈಗ ರಿಕ್ಷಾಗಳ ಬಣ್ಣ ಬೇರೆಯಾಗಿ ಬಿಟ್ಟಿದೆ. ವನಸಿರಿಯ ಹಸಿರು ಬಣ್ಣ ಬಳಿದು ಕೊಂದು ಸ್ವಲ್ಪ ಆಹ್ಳದಕರವಾಗಿ ಕಾಣುತ್ತಿವೆ ರಿಕ್ಷಾಗಳು. ಆದರೆ ಅದರೊಂದಿಗೆ ಅವುಗ್ಲಾ ಚಾಲಕರೂ ತಮ್ಮ ಸುಲಿಯುವ ಅಭ್ಯಾಸದಲ್ಲಿ ಸ್ವಲ್ಪವೂ ಸುಧಾರಣೆ ಮಾಡಿ ಕೊಂಡಿದ್ದು ನನ್ನ ಅನುಭವಕ್ಕೆ ಬರಲಿಲ್ಲ. ಯಾವ ರಿಕ್ಷಾ ಚಾಲಕನನ್ನು ಸಂಪೂರ್ಣ ನಂಬಿ ಚೌಕಾಶಿ ಮಾಡದೆ, ಇವನು ಸುತ್ತಿಸುತ್ತಿದ್ದ ಜಾಗಗಳ ಬಗ್ಗೆ ತಂಟೆ ತಕರಾರು ಮಾಡದೆ ಕೂತರೂ ಸುಲಿಗೆ ಮಾತ್ರ ಬಿಡುತ್ತಿರಲಿಲ್ಲ. ಇರಲಿ ಪರವಾಗಿಲ್ಲ. ಏಕೆಂದರೆ ಅವನೆಷ್ಟೇ ಸುಲಿಗೆ ಮಾಡಿದರೂ ರೂಪಾಯಿ ಯನ್ನು ರಿಯಾಲ್ ನೊಂದಿಗೆ ಭಾಗಿಸಿದಾಗ ಯಾಗುವ ನಷ್ಟ ಜುಜುಬಿ. ಅಂಬೇಡ್ಕರ್ ಮೆಡಿಕಲ್ ಕಾಲೇಜಿನಿಂದ, ಪಿಳ್ಳಣ್ಣ ಗಾರ್ಡನ್ ಗೆ ಬರಬೇಕಿತ್ತು. ರಿಕ್ಷಾ ಹಿಡಿದೆ. ಸಭ್ಯ ಚಾಲಕ, ಇಂಗ್ಲೀಷ ಸಹ ಮಾತನಾಡುತ್ತಿದ್ದ. ಹೆಸರು ಥಾಮಸ್. ಇಂಥ ಕಡೆ ಹೋಗ್ಬೇಕು ಎಂದಾಗ ಕೂರಿಸಿ ಕೊಂಡು ಹೊರಟ. ಸ್ವಲ್ಪ ದೂರ ಹೋಗುತ್ತಲೇ ತಿಳಿಯಾಯಿತು ನಾನೀಗ  round  the  world  ಟ್ರಿಪ್ ಮೇಲೆ ಹೊರಟಿದ್ದೇನೆಂದು. ಆಟೋದವರ public  relations ಸ್ಕಿಲ್ ಗಳು ಜನಜನಿತ ವಾದ್ದರಿಂದ ಹೆಚ್ಚು ಮಾತನಾಡದೆ ಸುತ್ತಾ ಮುತ್ತಾ ನೋಡ ತೊಡಗಿದೆ. ಕೆಲವೊಮ್ಮೆ ನಾವು ಮೋಸ ಹೋಗುತ್ತಿದ್ದೇವೆ ಎನ್ನುವ ಅರಿವು ಇದ್ದರೂ ಪ್ರತಿಭಟಿಸಲು ನಾಲಗೆಯೇ ಏಳೋಲ್ಲ. ಒಂದು ತೆರನಾದ hypnotic ಅನುಭವ. ನನಗಂತೂ ಈ ಅನುಭವ ಆಗುತ್ತಲೇ ಇರುತ್ತೆ, ಆದರೂ ಏನೂ ಮಾತನಾಡೋಲ್ಲ. ಗುರಿ ಮುಟ್ಟಿದ ನಂತರ hypnotism ನ ನಶೆ ಇಳಿದ ನಂತರ ಛೇ, ನಾನೆಂಥ ಹೆಡ್ಡ ಎಂದು ತಲೆಯನ್ನು ಚಚ್ಚಿ ಕೊಂಡು ಸುಮ್ಮನಿರುತ್ತಿದ್ದೆ.  ಆಟೋ ಚಲಾಯಿಸುತ್ತಾ ಗಾಯಕ್ಕೆ ಉಪ್ಪು ಹಚ್ಚುವಂತೆ ಈತ ಹೇಳಿದ, just  sit and relax , i  am very honest  person you  know  ಎಂದು ನನ್ನನ್ನು ತಬ್ಬಿಬ್ಬು ಮಾಡಿದ. ಅವನ ಈ ಮಾತು ಸಹನೆಯ ಶವ ಪೆಟ್ಟಿಗೆ ಮೇಲಿನ ಕೊನೆಯ ಮೊಳೆಯಾದರೂ ಯಾರೋ, ಅವನ ತಾತನ ಬಗ್ಗೆ ಹೇಳುತ್ತಿರಬೇಕು ಪಾಪ ಎಂದು ತೆಪ್ಪಗೆ ಕೂತೆ. ಪಿಳ್ಳಣ್ಣ ಗಾರ್ಡನ್ ಬಂತು. ಮೀಟರ್ ೯೬ ರೂಪಾಯಿ ತೋರಿಸುತ್ತಿತ್ತು. ಅವಸರದಿಂದ ನೂರು ರೂಪಾಯಿ ಅವನ ಕೈಗೆ ತುರುಕಿ keep  the  rest  ಎಂದು ಚಿಲ್ಲರೆಯನ್ನು ಅವನಿಗೆ ಬಿಟ್ಟು ಸೌದಿಯ ಬರೀ ಏಳು ರಿಯಾಲ್ ತಾನೇ ಆಗಿದ್ದು ಎಂದು ಸಮಾಧಾನಿಕೊಳ್ಳುತ್ತಾ ಹೆಜ್ಜೆ ಹಾಕಿದೆ. ಇದು ನನಗಾದ krack jack ಅನುಭವ, ಸ್ವಲ್ಪ ಸಿಹಿ, ಸ್ವಲ್ಪ ಕಹಿ.

ಈ ಕತೆ ಕೇಳಿ.

ಸಂಬಂಧದಲ್ಲಿ ಒಬ್ಬರಿಗೆ ಅಪಘಾತ ವಾಗಿದ್ದರಿಂದ ಅವರನ್ನು ನೋಡಲು ಹೊರಟೆ. ಭದ್ರಾವತಿಯಿಂದ ಹುಬ್ಬಳ್ಳಿಗೆ. ಜೂನ್ ತಿಂಗಳಾದರೂ ಉರಿಯುವ ಸೂರ್ಯ ಮಾತ್ರ ತನ್ನ ಖುರ್ಚಿ ಮಳೆರಾಯನಿಗೆ ಬಿಟ್ಟು ಕೊಡದೆ ಹಠ ಮಾಡುತ್ತಿದ್ದ. ಹುಬ್ಬಳ್ಳಿ ಯ ಬಿಸಿಲ ದರ್ಬಾರು ಸ್ವಲ್ಪ ಜೋರೆ ಎನ್ನಬಹುದು. ನನ್ನ ಕೆಲಸ ಮುಗಿಸಿ ಕೊಂಡು ತಂಗಿಯ ಅತ್ತೆ ಮಾವಂದಿರನ್ನು ಕಂಡು ಬರೋಣ ಎಂದು ಹಾನಗಲ್ ಕಡೆ ಹೊರಟೆ. ಹುಬ್ಬಳ್ಳಿಯ ಜನ-ವಾಹನ ನಿಬಿಡ ರಸ್ತೆಯಿಂದ ಹೇಗೋ ನುಣುಚಿಕೊಂಡು ಹೆದ್ದಾರಿ ತಲುಪಿ ನಿರಾಳವಾಗಿ accelarator ಮೇಲೆ ಜೋರಾಗಿ ಪಾದ ಊರಿದ್ದೆ ತಡ ಬಕ ಪಕ್ಷಿಗಳಂತೆ ರಸ್ತೆಗೆ ಅಡ್ಡವಾಗಿ ಮುಗಿ ಬಿದ್ದರು ಪೊಲೀಸರು. ಗಾಡಿ ನಿಲ್ಲಿಸಿ ಏನೆಂದು ಕೇಳಿದಾಗ, ತುಂಬಾ ಫಾಸ್ಟ್ ಆಗಿ ಹೋಗುತ್ತಿದ್ದೀರಾ ಬನ್ನಿ ಎಂದ. ಅಲ್ಲೇ ರಸ್ತೆಯ ಪಕ್ಕದಲ್ಲಿ ಮರದ ಕೆಳಗೆ ಕ್ಯಾಮರಾ ಹಿಡಿದು ಕೊಂಡು ಸ್ಪೀಡ್ ಆಗಿ ಹೋಗೋ ವಾಹನಗಳ ಶೂಟಿಂಗ್ ನಲ್ಲಿ ನಿರತರಾಗಿದ್ದರು ಪೇದೆಗಳು. ನನ್ನ ಸ್ಪೀಡು ೮೦ ಎಂದು ತೋರಿಸುತ್ತಿತ್ತು ಕ್ಯಾಮರಾ. ದಂಡ ೪೦೦ ರೂಪಾಯಿ ಪೀಕಿ, ಬೇರೆಲ್ಲೂ ಕ್ಯಾಮರಾ ಇಲ್ಲ ಎಂದು ಅವರಿಂದಲೇ ಖಾತ್ರಿ ಪಡಿಸಿಕೊಂಡು ಹೊರಟೆ ಹಾನಗಲ್ ಕಡೆ. ಒಂದು ಕಡೆ ರಸ್ತೆ ಸರಿಯಾಗಿ ತಿಳಿಯದ ಕಾರಣ ಹತ್ತಿರದಲ್ಲೇ ಇದ್ದ restaurant ಹತ್ತಿರ ಹೋಗುತ್ತಿದ್ದಂತೆ ಜಟೆ ಬಿಟ್ಟು ಕೊಂಡ  ಮಧ್ಯವಯಸ್ಸಿನ, ಆಕರ್ಷಕ ಮಹಿಳೆ ಕುಂಕುಮದ ಬಟ್ಟಲನ್ನು ಹಿಡಿದು ಎದುರು ಬಂದಳು. ಅವಸರದಲ್ಲಿ ಇದ್ದಿದ್ದರಿಂದ ಏನೇನೇನೂ ಹೇಳುತ್ತಿದ್ದ ಆಕೆಯ ಮಾತಿಗೆ ಕಿವಿಗೊಡದೆ ಹತ್ತು ರೂಪಾಯಿ ಆಕೆಗೆ ಕೊಟ್ಟು, ಹಾನಗಲ್ ದಾರಿ ಖಾತ್ರಿ ಮಾಡಿಕೊಂಡು ಕಾರ್ ಹತ್ತುವಾಗ ಮತ್ತೊಮ್ಮೆ ಆಕೆ ಬಂದು, ಸ್ವಲ್ಪ ನಿಲ್ಲಪ್ಪಾ ತಮ್ಮಾ ಎಂದು ನಿಲ್ಲಿಸಿಕೊಂಡಳು.  ನೋಡಪ್ಪಾ ತಮ್ಮ, ನಿನ್ನ ಮನಸ್ಸು ದೊಡ್ಡದು, ಎಷ್ಟು ಬೇಗ ನನಗೆ ಹತ್ತು ರೂಪಾಯಿ ಕೊಟ್ಟು ಬಿಟ್ಟೆ ನೋಡು, ಆದರೆ ನಿನಾನ್ ಕೈಲಿ ಕಾಸು ನಿಲ್ಲೋಲ್ಲ, ಈ ತಿಂಗಳು ಕಳೀಲಿ ನೋಡು ನಿನಗೆ ಕೋಟಿ  ಸಿಗತ್ತೆ ಎಂದು ಹೇಳುತ್ತಾ, ನೀನು ಮತ್ತೊಮ್ಮೆ ಈ ಕಡೆ ಬಂದಾಗ ನನಗೆ ರವಿಕೆಗೆ ಅಂತ ಐವತ್ತು ರೂಪಾಯಿ ಕೊಡಬೇಕು ಎಂದು ನನ್ನಿಂದ ಪ್ರಾಮಿಸ್ ಮಾಡಿಸಿ ಕೊಂಡಾಗ ನಾನು ಸರೀ ಸರೀ ಖಂಡಿತ ಕೊಡುತ್ತೇನೆ ಐವತ್ತು ರೂಪಾಯಿ ಎಂದು ಅಲ್ಲಿಂದ ಹೊರಟೆ. ನನ್ನ ಪ್ರವಾಸ ಮುಗಿಸಿ ಮನೆ ತಲುಪಿದ ನಂತರ ಈ ಘಟನೆಯನ್ನು ಮನೆಯಲ್ಲಿ ಎಲ್ಲರಿಗೂ ಹೇಳಿದಾಗ ಮಡದಿ, ನನ್ನ ತಾಯಿ, ತಂಗಿಯರು, ತಮ್ಮನ ಹೆಂಡತಿ ಎಲರೂ ಒಂದೇ ಸ್ವರದಲ್ಲಿ ಅಯ್ಯೋ, ಹಣ ಕೊಡದೆ ಎಂಥ ಕೆಲಸ ಮಾಡಿ ಬಿಟ್ಟೆ ನೀನು, ಆಕೆಗೆ ರವಿಕೆಗೆಂದು ನೂರು ರೂಪಾಯಿ ಕೊಡಬಾರದಿತ್ತಾ ಎಂದು ದೂರಿದಾಗ ಹೌದಲ್ವಾ, ನನ್ನ ಮಂದ ಬುದ್ಧಿಗೆ ಇದು ಹೊಳೆಯಲೇ ಇಲ್ವಲ್ಲ ಎಂದು ಕೊಂಡೆ. ಆಕೆ ಹೇಳಿದ ಹಾಗೆ ನನಗೆ ಕೋಟಿ ಸಿಗಬೇಕಿರುವುದು ಈ ತಿಂಗಳಿನಲ್ಲಿ. ಇದುವರೆಗೂ ಸಿಕ್ಕಿಲ್ಲ. ಸಿಗಬೇಕೆನ್ನುವ ಆಸೆಯೂ ಇಲ್ಲ. ಆದರೂ ಮುಂದಿನ ನನ್ನ ಭೇಟಿಯಲ್ಲಿ ಆಕೆ ಸಿಕ್ಕರೆ ಆಕೆಗೆ ರವಿಕೆಯಂತೂ ಖಂಡಿತಾ ಹೊಂದಿಸಬೇಕು.

ರಮದಾನ್ ಶುಭಾಶಯಗಳು

 

ನಾಳೆ ಪವಿತ್ರ ರಮದಾನ್ ನ ಪ್ರಥಮ ದಿನ ಎಂದು ಸೌದಿ ಅರೇಬಿಯಾ ಮತ್ತು ಇತರ ರಾಷ್ಟ್ರಗಳು ಘೋಷಿಸಿವೆ. ಸಾವಿರ ಮಾಸಗಳಿಗಿಂತಲೂ ಶ್ರೇಷ್ಠ ಎಂದೂ, ವ್ರತಾಚರಣೆಯ ಪವಿತ್ರ ಮಾಸ ಎಂದೂ ಅರಿಯಲ್ಪಡುವ ರಮದಾನ್ ಜಗದಾದ್ಯಂತ ಮುಸ್ಲಿಂ ಬಾಂಧವರಲ್ಲಿ ಧಾರ್ಮಿಕ ಸಂಚಲನೆ ಆರಂಭಿಸಲಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಇನ್ನೂರು ಕೋಟಿ ಮುಸ್ಲಿಂ ಬಾಂಧವರಲ್ಲಿ ಸುಮಾರು ನೂರು ಕೋಟಿಗೂ ಹೆಚ್ಚು ಜನ ದಿನ ಪೂರ್ತಿ ಉಪವಾಸ ಇದ್ದು ಪವಿತ್ರ  ಕುರಾನ್ ಪಠಣ, ನಮಾಜ್, ದಾನ, ಮುಂತಾದ ಸತ್ಕರ್ಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅತ್ಯಪೂರ್ವವಾದ ಧಾರ್ಮಿಕತೆ ವಿಶ್ವವನ್ನು ಬೆರಗುಗೊಳಿಸಲಿದೆ.

ರಮಾದಾನ್ ಮಾಸದ ಚಂದ್ರ ದರ್ಶನ ಆಗುತ್ತಲೇ ಸಮಾಜ ಬಾಂಧವರು ಪರಸ್ಪರರನ್ನು ಅಭಿನಂದಿಸುತ್ತಾ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಫೇಸ್ ಬುಕ್, ಯೂ ಟ್ಯೂಬ್ ತಾಣಗಳಲ್ಲಿ ರಮಾದಾನ್ ಸಂದೇಶಗಳು ಆಗಮಿಸುತ್ತಿವೆ.  twitter ತಾಣವಂತೂ ರಮಾದಾನ್ tweet  ಗಳ ಅಭೂತಪೂರ್ವ ಸುಗ್ಗಿಯನ್ನೇ ಕಾಣುತ್ತಿದೆ. twitter ನಲ್ಲಿ ಸಿಕ್ಕ tweet  ಹೀಗಿವೆ ನೋಡಿ….

Ramadan is the time when you reboot your soul…

I wish everyone on the planet a beautiful ramadan..

Ramadan is coming, Shaitan is leaving…

Let us reflect on the year that has passed…

ರಮದಾನ್ ಮಾಸ ಮುಸ್ಲಿಂ ಬಾಂಧವರಿಗೂ, ಹಿಂದೂ, ಕ್ರೈಸ್ತ, ಸಿಖ್, ಬುದ್ಧ, ಜೈನ, ಪಾರ್ಸಿ, ಯಹೂದ್ಯ ಮತ್ತಿತರ ಧಾರ್ಮಿಕ ಬಾಂಧವರಿಗೂ ಸಂತಸ, ಉಲ್ಲಾಸವನ್ನು ತರಲಿ, ದೇಶದಲ್ಲಿ ಸುಭಿಕ್ಷೆ ಹೆಚ್ಚಲಿ, ಕೈ ಕೊಟ್ಟು ಕೂತಿರುವ ಮಳೆರಾಯ ರಮಾದಾನ್ ತಿಂಗಳ ಪುಣ್ಯದಿಂದ ಮೋಡಗಳನ್ನು ಕರಗಿಸಿ ಭೂಮಿಗೆ ನವ ಚೇತನ ತರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಾ ,

 

ಸರ್ವರಿಗೂ ರಮಾದಾನ್ ತಿಂಗಳ ಶುಭಾಶಯಗಳು.

 

 

why do they hate us?

ಆಫ್ಘಾನಿಸ್ತಾನದಲ್ಲಿ ಅಮೆರಿಕೆಯ ಸೈನ್ಯ ದಿಂದ ಮತ್ತೊಂದು ಅತಿರೇಕ. ಕೆಲ ದಿನಗಳ ಹಿಂದೆ ಪವಿತ್ರ ಕುರ್’ಆನ್ ಗ್ರಂಥಗಳನ್ನು ಸುಟ್ಟು ಸುದ್ದಿ ಮಾಡಿದ ಅಮೆರಿಕನ್ನರು ಈಗ ಸಾಮೂಹಿಕ ಕಗ್ಗೊಲೆ ಮೂಲಕ ಮತ್ತೊಮ್ಮೆ ವಿವಾದದ ಸುಳಿಗೆ ಸಿಕ್ಕಿ ಬಿದ್ದಿದ್ದಾರೆ. ಅಮೆರಿಕೆಯ ಸೈನಿಕನೊಬ್ಬ ತನ್ನ ಬ್ಯಾರಕ್ ನಿಂದ ಮಧ್ಯರಾತ್ರಿ ಎದ್ದು ಸಮೀಪದ ಗ್ರಾಮಕ್ಕೆ ನುಗ್ಗಿ ಮನೆಗಳಲ್ಲಿ ಮಲಗಿದ್ದ ಜನರ ಮೇಲೆ ಎರ್ರಾ ಬಿರ್ರಿ ಗುಂಡಿನ ಧಾಳಿ ನಡೆಸಿ ೧೬ ಜನರನ್ನು ಕೊಂದ. ಸತ್ತವರಲ್ಲಿ ೯ ಮಕ್ಕಳು ಸೇರಿದ್ದರು. ಈ ತೆರನಾದ senseless ಕೃತ್ಯಗಳು ಒಂದಲ್ಲ, ಎರಡಲ್ಲ, ನಮ್ಮ ಅರಿವಿಗೆ ಬಂದಿರುವುದು. ೨೦೦೬ ರಲ್ಲಿ ಇರಾಕಿನಲ್ಲಿ ೧೪ ವರ್ಷ ಪ್ರಾಯದ ಹುಡಗಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನೂ  ಆಕೆಯ ಇಡೀ ಕುಟುಂಬವನ್ನೂ ಅಮೆರಿಕೆಯ ಸೈನಿಕರು ಕೊಂದು ಹಾಕಿದ್ದರು.

ಈತ ಮಾನಸಿಕವಾಗಿ ಅಸ್ವಸ್ಥ ಎಂದು ಹೇಳಿ ಕೈ ತೊಳೆದು ಕೊಳ್ಳಲು ಅಮೇರಿಕಾ ನೋಡುತ್ತಿದೆ. ದೀರ್ಘಕಾಲದ ಮಿಲಿಟರಿ ಸೇವೆಯ ಕಾರಣ ಸೈನಿಕರು ಒತ್ತಡಕ್ಕೆ ಸಿಲುಕಿ ಕೊಳ್ಳುತ್ತಾರಂತೆ. ಇದನ್ನು ಆಂಗ್ಲ ಭಾಷೆಯಲ್ಲಿ PTSD ( post traumatic stress disorder ) ಎಂದು ಕರೆಯುತ್ತಾರೆ. ಆದರೆ ಈ ಸೈನಿಕ ptsd ಯಿಂದ ಬಳಲುತ್ತಿದ್ದನೆ ಎನ್ನುವುದು ಗೊತ್ತಿಲ್ಲ.  

ಅವಕಾಶ ಸಿಕ್ಕಾಗ ಯಾವುದಾದರೂ ದೇಶದೊಳಕ್ಕೆ ನುಗ್ಗುವುದು ಹೇಗೆ ಎಂದು ವಿಶ್ವದ ಸೂಪರ್ ಪವರ್ ಅಮೆರಿಕೆಗೆ ಯಾರೂ ಹೇಳಿ ಕೊಡಬೇಕಿಲ್ಲ. ಆದರೆ ನುಗ್ಗಿದ ನಂತರ ಅಲ್ಲಿನ ಜನರ ರೀತಿ ರಿವಾಜು, ಸಂಸ್ಕೃತಿ ಮುಂತಾದುವುಗಳ ಬಗ್ಗೆ ಸರಿಯಾಗಿ ಟ್ರೇನ್ ಮಾಡಲು ಜನರ ಅವಶ್ಯಕತೆ ಇದೆ ಎಂದು ಅಮೆರಿಕೆಯ ಸೈನ್ಯ ಎಸಗಿದ ಕೃತ್ಯಗಳು ಹೇಳುತ್ತವೆ.

ನನ್ನ ಅಮೆರಿಕೆಯ ಭೇಟಿ ವೇಳೆ ಕೆಲವು ಅಮೆರಿಕನ್ನರ ಭೇಟಿಯಾಯಿತು ರೆಸ್ಟುರಾಂಟ್ ಒಂದರಲ್ಲಿ. ಹೀಗೇ ಮಾತನಾಡುತ್ತಿದ್ದಾಗ ಅವರುಗಳು ಹೇಳಿದ್ದು,  we do so much to poor and needy countries in the world and why do they still hate us? ಇದಕ್ಕೆ ಉತ್ತರ ನನ್ನ ಬಳಿ ಇದ್ದರೂ ಹೇಳಲು ಸಾಧ್ಯವಾಗಲಿಲ್ಲ.  ಕಾರಣ ನಾನು ಅವರ ಅತಿಥಿ. ಅತಿಥಿ ನಲ್ನುಡಿಗಳನ್ನೇ ಆಡಬೇಕು, ಎಷ್ಟೇ ಕಷ್ಟವಾದರೂ.

ಜ್ಞಾಪಕ ಶಕ್ತಿ ಹೆಚ್ಚಲು…..

ಜ್ಞಾಪಕ ಶಕ್ತಿ ಹೆಚ್ಚಲು  ದಿನಕ್ಕೊಂದು ಲೋಟ ಹಾಲು ಕುಡಿಯಬೇಕಂತೆ. ಅಮೆರಿಕೆಯ ಮೇಯ್ನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ, ಅಥವಾ some-ಶೋಧನೆ. ಯಾವುದಾರೂ ಕಂಪೆನಿ, ಹಾಲಿನ ಕಂಪೆನಿಯೋ, ಚಾಕಲೇಟ್ ಕಂಪೆನಿಯೋ some thing ಕೊಟ್ಟರೆ ಅವರಿಗೆ ಇಷ್ಟವಾದ , ಅವರ ಉತ್ಪಾದನೆಗಳು ಮಾರಾಟವಾಗಲು ಸಹಾಯಕವಾಗುವ some-ಶೋಧನೆಗಳು ಲಭ್ಯ. ಇಲ್ಲಿ ಯಾರಾದರೂ ಈ ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಹಾಲು ಕುಡಿಯಿರಿ, ಕುಡಿದರೆ ಒಳ್ಳೆಯದು ಎನ್ನವುದು ನಮ್ಮ ಭೂಮಿಯಷ್ಟೇ ಹಳತಾದ ಸತ್ಯ. ಅದಕ್ಕೆ ಅಲ್ಲವೇ ಮನುಷ್ಯನಿಂದ ಹಿಡಿದು ಮೃಗಗಳವರೆಗೂ ಭೂಮಿಗೆ ಉದುರಿದ ಕೂಡಲೇ ಭಗವಂತ ಹಾಲಿನ ಸರಬರಾಜನ್ನು  ಅಡೆತಡೆಯಿಲ್ಲದೆ ಮುಂದುವರೆಸಿರುವುದು?

ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತಂತೆ. ಎಲ್ಲರೂ ಕಿವಿ ನಿಮಿರಿಸಿ ಕೇಳುವ, ಕಣ್ಣರಳಿಸಿ ನೋಡುವ ವಿಷ್ಯ ಇದು. ವಾವ್, ನನ್ನ ಮಟ್ಟಿಗೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ ಕೊಳ್ಳುವುದಕ್ಕಿಂತ ಇಂಪಾರ್ಟೆಂಟ್ ಈ ಜ್ಞಾಪಕ ಶಕ್ತಿ ವರ್ಧನೆ. ಏಕೆಂದರೆ ಜ್ಞಾಪಕ ಶಕ್ತಿ ಇಲ್ಲ ಎಂದರೆ ಲೈಂಗಿಕ ಚಟುವಟಿಕೆ ನಡೆಸುವುದನ್ನು ಮರೆತು ಬಿಡುತ್ತೇವೆ. ಕೆಲವೊಮ್ಮೆ ಹಸಿವಿನಂತೆ ಲೈಂಗಿಕ ಬಯಕೆಗಳು spontaneous ಆಗಿ ಬಂದರೂ ಬದುಕಿನಲ್ಲಿ ಒಂದು ಸ್ಟೇಜ್ ಬರುತ್ತೆ ಜ್ಞಾಪಕ ಬಂದಾಗ ದೈಹಿಕ ಸುಖ ಪಡೆಯಬೇಕು ಎನ್ನುವ ಆಸೆ. ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚು, ೨೩ ರಿಂದ ೯೮ ವರ್ಷ ವಯಸ್ಸಿನ ಸುಮಾರು ೯೦೦ ‘ಎಳೆ’ಯರ ಮೇಲೆ ನಡೆಸಿದ ಸಂಶೋಧನೆಯಿಂದ ಕಂಡು ಕೊಂಡ ಅಂಶ ಇದು. ಆದರೆ ಈಗ ನಾವು ಸೇವಿಸುತ್ತಿರುವುದು – ಹಾಲಾಗಲೀ, ಸೊಪ್ಪಾಗಲೀ, ಮೊಟ್ಟೆಯಾಗಲೀ, ಮಾಂಸವಾಗಲೀ – ಆಹಾರಕ್ಕಿಂತ ಹೆಚ್ಚು ರಾಸಾಯನಿಕಗಳನ್ನು. ಗೊಬ್ಬರದಿಂದ ಶುರುವಾದ ಈ ರಾಸಾಯನಿಕಗಳ ಹಸ್ತಕ್ಷೇಪ ಸೇಬಿನ ಹಣ್ಣಿಗೆ ಮೆರುಗನ್ನು ನೀಡುವವರೆಗೆ ಬಂದು ತಲುಪಿದೆ. ತರಕಾರೀ, ಹಣ್ಣುಗಳು, ಮಾಂಸ ಇವುಗಳಿಗೆ ರಾಸಾಯನಿಕ ಸಿಂಪಡಿಸೀ, ಸಿಂಪಡಿಸೀ ಈಗ ಆಹಾರಕ್ಕೆ ಅಂಟಿಕೊಂಡ ರಸಾಯನಿಕಗಳನ್ನು ತೊಳೆದು ತೆಗೆಯಲು ಮತ್ತೊಂದು ರೀತಿಯ washing detergent ಬಂದಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಅಲ್ಲವೇ?

ಈಗ ಮತ್ತೊಮ್ಮೆ ಹಾಲಿನ ವಿಷಯಕ್ಕೆ ಬರೋಣ. ಹಾಲು ಕುಡಿಯೋಣ, ಅದು ಹಾಲಿನ ಲಕ್ಷಣ ಹೊಂದಿದ್ದರೆ. ಅರ್ಥ? ನಮ್ಮ ದೇಶದಲ್ಲಿ ಸಿಗುವ ಹಾಲು ಹಾಲಲ್ವಂತೆ. ಅಂದ್ರೆ? ಅಂದ್ರೆ, ನಾವು ಕುಡಿಯೋ ಹಾಲಿಗೆ ಯೂರಿಯಾ, ಹಾಳೂ ಮೂಳೂ ಸೇರಿಸಿ ಕೊಡ್ತಾರಂತೆ. ಒಹ್, ಹಾಗಾದ್ರೆ ಹಾಲು ಕುಡಿದು ನಮ್ಮ ಜ್ಞಾಪಕ ಶಕ್ತಿ ವರ್ಧಿಸುವುದೂ ಬೇಡ, ಈಗ ಇರೋ ಶಕ್ತಿಯೇ ಸಾಕು ಎಂದು ಹಾಲಿಗೆ ಬೆನ್ನು ತಿರುಗಿಸಿದರೆ ಒಳ್ಳೆಯದು ಎಂದು ನನ್ನ ಒಪೀನಿಯನ್ನು.

ಸಂತೃಪ್ತ ಹೆಣ್ಣು ಗಂಡಿಗೆ ಇಷ್ಟ, ಕೋಪಗ್ರಸ್ಥ ಗಂಡು ಹೆಣ್ಣಿಗೆ ಇಷ್ಟ….

ತನ್ನ ಪತ್ನಿ ಅಥವಾ ಪ್ರೇಯಸಿ ಸಂತೃಪ್ತಳಾಗಿದ್ದರೆ ಅದು ಗಂಡಿಗೆ ಸಂತಸ ತರುತ್ತದಂತೆ. ಅದೇ ಸಮಯ ಕೋಪಗ್ರಸ್ಥ, ಚಿಂತಿತ ಪತಿ ಅಥವಾ ಪ್ರಿಯಕರ ಹೆಣ್ಣಿಗೆ ಇಷ್ಟವಂತೆ. ಇದ್ಯಾವ ಸೀಮೆಯ ಗುಣ ಕಣಯ್ಯಾ ಎಂದಿರಾ? ೧೫೬ ಹೆಣ್ಣು ಗಂಡು ಜೋಡಿಗಳ ಮೇಲೆ ನಡೆದ ಅಧ್ಯಯನ ಈ ಅಂಶವನ್ನು ಬೆಳಕಿಗೆ ತಂದಿದೆ. ಇದು NPR ರೇಡಿಯೋ ದ ವೆಬ್ ತಾಣದಲ್ಲಿ ಸಿಕ್ಕ ಸುದ್ದಿ. ಇರಲಿ ಬಿಡಿ ಅವರು ಚೆನ್ನಾಗಿದ್ದರೆ ಸಾಕು, ನಮ್ಮ ಬದುಕು ಸಾರ್ಥಕ ಎಂದು ನಿರುಮ್ಮಳವಾಗಿ ಇರಬೇಡಿ. ಇದನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು. ಈ ಸ್ಯಾಡಿಸ್ಟ್ ಮನೋಭಾವ ಮನೆಯ ಅಥವಾ ಪಾರ್ಕಿನ (ಪ್ರೇಯಸಿ ನ ಕಾಣೋದು ಪಾರ್ಕನಲ್ಲಿ ತಾನೇ?) ಹೊಸ್ತಿಲು ದಾಟಿ ಒಳಗೆ ಬರೋದು ಬೇಡ. ನಾವು ತೊಳಲಾಡುವಾಗ, ನಮ್ಮ ತೊಳಲಾಟ ಇವರಿಗೇಕೆ orgasmic pleasure ಕೊಡುತ್ತೋ? ನೋಡಿ, ಅಧ್ಯಯನ ಅಷ್ಟೇನೂ ಸ್ಪಷ್ಟವಾಗಿ ಹೇಳ್ತಾ ಇಲ್ಲ ಈ ಖಾಯಿಲೆ ಬಗ್ಗೆ. ನನ್ನ ‘ಟೇಕ್’ ಏನಪ್ಪಾ ಅಂದರೆ ನಾವು ಗಂಡಸರು ಒಂದು ರೀತಿಯ samaritan ಗಳು. ಪರರ ಸಂತೋಷ ನಮ್ಮ ಸಂತೋಷ. ಅದರಲ್ಲೂ ಹೆಂಡತಿ ಅಥವಾ ಪ್ರೇಯಸಿಯ ವಿಷಯ ಬಂದಾಗ ಹೇಳೋದು ಬೇಡ. ಅವರ ಸಂತೋಷಕ್ಕೆ ಏನು ಬೇಕಾದರೂ ಮಾಡಬಲ್ಲೆವು. ದಿನವಿಡೀ ದುಡಿದು ದಣಿದರೂ ಮನೆಗೆ ಅಥವಾ ಪಾರ್ಕಿಗೆ ಬರುವಾಗ ಆಕೆಗೆ ಹೂವೋ, ಚಾಕಲೇಟೋ ತಂದು ಆಕೆಯ ಮೊಗದ ಮೇಲಿನ ಮಂದಹಾಸ ನಮ್ಮ ದಣಿದ ಮೊಗದ ಮೇಲೆ ಸುರಿದು ಕೊಂಡು ಆನಂದಿಸುವುದಿಲ್ಲವೇ ನಾವು ಗಂಡಸರು? ಆಕೆಯ ಮುಖದ ಮೇಲಿನ ಮಂದಹಾಸದ ಎದುರು ನಮ್ಮ ದಣಿವು ನೋವು, ದುಮ್ಮಾನ ಎಲ್ಲವೂ ಗೌಣ ನಮಗೆ.

ಈಗ ಆಕೆಯ ಸರತಿ. ಅಲ್ಲಾ, ನಮಗೆ ಎಡವಟ್ಟಾದರೆ ಈಕೆ ಏಕೆ ಕುಣಿಯುತ್ತಾಳೆ? men are from mars, women are from venus ನ ಸಿಂಡ್ರೋಮೋ ಇದು? ಗಂಡು ಬುಧ ಗ್ರಹದವನೂ, ಹೆಣ್ಣು ಶುಕ್ರ ಗ್ರಹದವರೂ ಎಂದು ತನಗೆ ತೋಚಿದ್ದನ್ನು ಗೀಚಿ ಕೋಟಿಗಟ್ಟಲೆ ಬಾಚಿಕೊಂಡ ಲೇಖಕ john gray ಹಿಡಿತಕ್ಕೂ ಸಿಗೊಲ್ಲ ಹೆಣ್ಣು. ನೀರಿನ ಮೇಲಿನ ಹೆಜ್ಜೆ ಬೇಕಾದರೂ ನೋಡಬಹುದಂತೆ, ಹೆಣ್ಣಿನ ಮನಸ್ಸಿನ ಮರ್ಮ ಯಾರಿಗೂ ಹಿಡಿಯೋಕೆ ಆಗೋಲ್ಲ. ಇದು ಶತ ಶತಮಾನಗಳಿಂದ ಋಷಿ ಪುಂಗವ ರಿಂದ ಹಿಡಿದು ನನ್ನಂಥ ಆರ್ಡಿನರಿ ಮಿಕ ನ ವರೆಗೆ ಕಾಡಿದ, ಕಾಡುವ conundrum. ಹಾಗಾದರೆ ಈ ಖಾಯಿಲೆಗೆ ಕಾರಣ ನೀರಿನ ಮೇಲಿನ ಹೆಜ್ಜೆ ಥರವೋ? ನನ್ನ ಪ್ರಕಾರ ಬಹುಶಃ ಹೆಣ್ಣಿಗೆ ಚಿಂತಿತ ಗಂಡು ಕ್ರಿಯಾಶೀಲ ಗಂಡಾಗಿ ಕಾಣುತ್ತಿರಬಹುದು. ಎಷ್ಟಿದ್ದರೂ,   ಪರಂಪರಾಗತವಾಗಿ ಗಂಡು bread winner ತಾನೇ? ಕೂಳನ್ನು ಹೊಂದಿಸೋದು (ಅಥವಾ ಚಾಕಲೇಟನ್ನು) ಅಷ್ಟು ಸುಲಭ ಸಾಧ್ಯವಲ್ಲ. ಏಕೆಂದರೆ ಇದು dog eat dog world. ನಾಯಿ ನಾಯಿಯನ್ನೇ ಬೇಟೆಯಾಡೋ ಜಮಾನ. ಅಂಥದ್ದರಲ್ಲಿ ಗಂಡಿನ ನೆತ್ತಿಯ ಮೇಲೆ ಸುಕ್ಕು ಕಂಡರೆ ಹೆಣ್ಣಿಗೆ ಸಂತೋಷ ತರುತ್ತದೆ. ಅಥವಾ ರಿಲೇಶನ್ ಶಿಪ್ ಅನ್ನೋ ಹಡಗು ಡೋಲಾಯಮಾನ ಸ್ಥಿತಿಯಲ್ಲಿದ್ದರೆ ಅದರ ರೆಪೇರಿ ಸಹ ಗಂಡಿನ ಹೆಗಲ ಮೇಲೇ ಬೀಳೋದು. ಇಲ್ಲದಿದ್ದರೆ ಅಡುಗೆ ಮನೆಯಲ್ಲಿ ಗದ್ದಲ ಹೆಚ್ಚುತ್ತೆ. ಪಾತ್ರೆ ಪಗಡಿಗಳು ಹಾರುವ ತಟ್ಟೆ ಗಳಾಗುತ್ತವೆ. ತಮ್ಮ ಸಂಬಂಧ cadbury’s ಗಿಂತ ಅಥವಾ ಅಚ್ಚು ಬೆಲ್ಲಕ್ಕಿಂತ ಇನ್ನಷ್ಟು ಮಧುರಗೊಳಿಸಲು ಪಾಪ ತನ್ನ ಗಂಡು ಪಡುವ ಪಾಡು ಹೆಣ್ಣಿಗೆ ಸಂತೋಷ ತರುತ್ತಿರಬಹುದು. ಏಕೆಂದರೆ ಹಡಗು ಮುಳುಗೋದು ಅವಳಿಗೆ ಇಷ್ಟವಿಲ್ಲ. ಮುಳುಗಿದರೆ ಗಂಡು ಸುಲಭವಾಗಿ ಮತ್ತೊಂದು ಹಡಗನ್ನು ಹೊಂದಿಸಿ ಕೊಳ್ಳುತ್ತಾನೆ. ಸದ್ಯದ ಪರಿಸ್ಥಿತಿಯಲ್ಲಿ ಈ ಮಾತು ಹೆಣ್ಣಿಗೆ ಅಷ್ಟು ಸುಲಭವಾಗಿ ಅನ್ವಯವಾಗೋದಿಲ್ಲ. ಮೇಲೆ ಹೇಳಿದ ಎರಡು ಕಾರಣಗಳಿಗಾಗಿ ಗಂಡಿನ ರೋಷ ಹೆಣ್ಣಿಗೆ ಅಪ್ಯಾಯಮಾನ.

image courtesy: www.photobucket.com

ಹಾಕಿರಣ್ಣ, ಈಕೆಗೊಂದು ಸೆಲ್ಯೂಟ್

ಅಂತಾರಾಷ್ಟ್ರೀಯ ಮಹಿಳಾ ದಿನ. ಹೆಣ್ಣುಮಗಳ ಶಕ್ತಿ ಸಾಮರ್ಥ್ಯ, ತ್ಯಾಗ ಬಲಿದಾನಗಳ ಬಗ್ಗೆ ಹಾಡಿ ಹೊಗಳಲು ಮತ್ತೊಂದು ವಿಶೇಷ ದಿನ. ದಿನಗಳ ಆಚರಣೆ ಅರ್ಥಹೀನ ನಾವು ಅದರ ಹಿಂದಿನ ಅರ್ಥ ಹುಡುಕಿ ಮಹಿಳೆಗಾಗಿ ಸಮಾನತೆಯ ಪ್ರಬಂಧ ಸೃಷ್ಟಿಸಲು ಅಸಮರ್ಥರಾದಾಗ. ಆಧುನಿಕ ಯುಗದಲಿ ಮಹಿಳೆ ಬಹಳಷ್ಟನ್ನು ಸಾಧಿಸಿದ್ದರೂ ಪ್ರಪಂಚದ ಹಲವು ಭಾಗಗಳಲ್ಲಿ ಈಗಲೂ ಆಕೆ ಕಗ್ಗತ್ತಿಲಿನಲ್ಲಿ ತಡಕಾಡುತ್ತಿದ್ದಾಳೆ. ಬಿರುದು ಬಾವಲಿ, ಸಮ್ಮಾನ ಸಂಪತ್ತಿಗಾಗಿ ಅಲ್ಲ, ದೇವರು ಹೆಣ್ಣು ಗಂಡು ಎನ್ನುವ ಬೇಧವಿಲ್ಲದೆ ಕೊಡಮಾಡಿದ ಸ್ವಾತಂತ್ರ್ಯಕ್ಕಾಗಿ.

ಮಹಿಳೆಯ ಹುಟ್ಟು ಈಗಲೂ ಕೆಲವು ಸಮಾಜಗಳಲ್ಲಿ ಅಸಮಾಧಾನ, ಅತೃಪ್ತಿ ತರುತ್ತದೆ. ಗಂಡು ಮಗುವನ್ನ ಹೆರುವುದು ಹೆಣ್ಣಿಗೆ ಪ್ರತಿಷ್ಠೆ ತಂದು ಕೊಡುತ್ತದೆ. ಗಂಡು ಮಗುವಿನ ಜನ್ಮ ಕುಟುಂಬದಲ್ಲಿ, ನೆಂಟರಿಷ್ಟರಲ್ಲಿ ಸಂತಸವನ್ನು ಹರಡುತ್ತದೆ. ಒಂದೆರಡು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ತಾಯಿಗೆ ನಿನ್ನ ಹೊಟ್ಟೆಯಲ್ಲಿ ದೇವರು ಗಂಡು ಮಗುವನ್ನ ಹಾಕಿಲ್ಲವೆ ಎಂದು ಮೂದಲಿಕೆ ಕೇಳಿ ಬರುತ್ತದೆ. ಗಂಡು ಸಂತಾನಕ್ಕೆ ಇರುವ ಬೇಡಿಕೆ ಕಂಡ ವೈದ್ಯಕೀಯ ಸಮೂಹ ಕೂಡಾ ಅಲ್ಟ್ರಾ ಸೌಂಡ್, ಅಬಾರ್ಶನ್ ಮೂಲಕ ಹೆಣ್ಣಿನ ಹುಟ್ಟನ್ನು ಕೊನೆಗೊಳಿಸುವ ನೀಚ ಪ್ರವೃತ್ತಿಗೆ ಸಾಕ್ಷಿ ಯಾಗುತ್ತಿದೆ.  ಗುಜರಾತಿನಲ್ಲಿ ಗಂಡು ಮಕ್ಕಳನ್ನು ಸೃಷ್ಟಿಸುವ ಕ್ಲಿನಿಕ್ ಕಾರ್ಯಾಚರಣೆಯ ಆಘಾತಕಾರಿ ಸುದ್ದಿಯ ಬಗ್ಗೆ ಇತ್ತೀಚೆಗೆ ತಾನೇ ಓದಿದ್ದೇವೆ. ಹೆಣ್ಣು ಮಗುವಿನ ಸಂತಾನ ಇಲ್ಲದಂತೆ ಮಾಡುವ ಇನ್ನೂ ಯಾವ ಯಾವ ತೆರನಾದ ಟ್ರಿಕ್ಕು ಗಳು ಅವಿತು ಕೊಂಡಿವೆಯೋ ಕುಬುದ್ಧಿ ತಲೆಗಳಲ್ಲಿ. ಅರೇಬಿಯದಲ್ಲಿ ಹುಟ್ಟುವ ಮೊದಲ ಮಗು ಹೆಣ್ಣಾದರೆ ಜೀವಂತ ಹೂಳುತ್ತಿದ್ದರಂತೆ. ಹುಟ್ಟಿದ ಹೆಣ್ಣುಮಗುವಿನ ಬಾಯೊಳಗೆ ಬೂಸಾ ಹಾಕಿ ಕೊಲ್ಲುತ್ತಿದ್ದರು ತಮಿಳು ನಾಡಿನಲ್ಲಿ. ಅರೇಬಿಯಾದ ಅನಿಷ್ಟ ಅಮಾನವೀಯ ಪದ್ಧತಿಗೆ ಪ್ರವಾದಿ ಮುಹಮ್ಮದರು ಅಂತ್ಯ ಹಾಡಿದರು. ಯಾವ ತಪ್ಪೂ ಮಾಡದ ಹೆಣ್ಣು ಹಸುಳೆ ಯನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಎಂದು ಸಮಜಾಯಿಷಿ ಕೇಳಲಾಗುವುದು ಎಂದು ದೇವರು ಪವಿತ್ರ ಕುರಾನ್ ನಲ್ಲಿ ಕಟ್ಟೆಚ್ಚರ ನೀಡುತ್ತಾನೆ. ಯಾರು ತಮಗೆ ಹೆಣ್ಣು ಮಕ್ಕಳನ್ನು ತಾರತಮ್ಯ ತೋರಿಸದೆ ಅವರ ಲಾಲನೆ ಪೋಷಣೆ ಮಾಡಿ ಸಂರಕ್ಷಿಸುವರೋ ಅವರು ಮತ್ತು ನಾನು ಸ್ವರ್ಗ ಲೋಕದಲ್ಲಿ ಇಷ್ಟು ಸಮೀಪ ಇರುತ್ತೇವೆ ಎಂದು ಪ್ರವಾದಿಗಳು ತಮ್ಮ ತೋರುಬೆರಳನ್ನು ಮತ್ತು ಮಧ್ಯದ ಬೆರಳನ್ನು ತೋರಿಸಿ ಹೇಳುತ್ತಾರೆ. ಆಸ್ತಿಯಲ್ಲಿ ಹಕ್ಕು, ವಿಚ್ಛೇದನದಲ್ಲಿ ಹಕ್ಕು, ವಿಧವೆಗೆ ಮರು ವಿವಾಹದ ಹಕ್ಕು, ವೇದ ಪಾರಾಯಣದಲ್ಲಿ ಹಕ್ಕು ಹೀಗೆ ಎಲ್ಲ ರೀತಿಯ ಹಕ್ಕುಗಳಿಗೆ ಮಹಿಳೆಯನ್ನು ಅರ್ಹಳನ್ನಾಗಿಸಿದ ಪ್ರವಾದಿಗಳು ಮಹಿಳೆಯನ್ನು ಯಾವ ರೀತಿ ನಡೆಸಿ ಕೊಳ್ಳಬೇಕು ಎಂದು ಜಗತ್ತಿಗೆ ತೋರಿಸಿ  ಒಂದು ಮಹಾ ಪರಂಪರೆಯನ್ನೇ ಹುಟ್ಟು ಹಾಕಿದರು. ದುರದೃಷ್ಟವಶಾತ್ ಈ ಹಕ್ಕುಗಳನ್ನ ಕೊಡ ಮಾಡಲು ಮುಸ್ಲಿಂ ಸಮಾಜ ಚೌಕಾಸಿ ಮಾಡುತ್ತಿರುವುದು ಖಂಡನೀಯ.

ಮದುವೆ ವಿಷಯದ ತಕರಾರಿಗೆ ಮಹಿಳೆಯೊಬ್ಬಳನ್ನು ನಗ್ನವಾಗಿ ಪರೇಡ್ ಮಾಡಲಾಯಿತು ಲಾಹೋರ್ ನಗರದಲ್ಲಿ. ಈ ತೆರನಾದ ಮಹಿಳೆ ವಿರುದ್ಧದ ಹಿಂಸೆ ನಮಗೆ ಎಲ್ಲೆಲ್ಲೂ ಕಾಣಲು ಸಿಗುತ್ತದೆ. ಈ ವಿಷಯದಲ್ಲಿ ಅತಿ ಮುಂದುವರಿದ, ಅತಿ ಹಿಂದುಳಿದ ದೇಶಗಳು ಸಮಾನತೆಯನ್ನು ಸಾಧಿಸಿವೆ. ಇಂಗ್ಲೆಂಡ್ ನಲ್ಲಿ ಪ್ರತೀ ಮೂವರು ಹೆಣ್ಣುಮಕ್ಕಳಿಗೆ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಂತೆ. ಸೂರ್ಯ ಮುಳುಗದ ಸಾಮ್ರಾಜ್ಯದ ಕಥೆ ಇದು. ಕುಡಿತ, ಜೂಜು ಮುಂತಾದ ಅನಿಷ್ಟಗಳಿಗೆ ಗುಲಾಮನಾದ ಗಂಡು ಮಹಿಳೆಯ ಮೇಲೆ ದೌರ್ಜನ್ವ ಎಸಗುತ್ತಾನೆ. ವರವ ನೀಡು ತಾಯೆ ಕುಡುಕನಲ್ಲದ ಗಂಡನ. ಈ ಮಾತಿನ ಹಿಂದೆ ಹೆಣ್ಣು ನೆಮ್ಮದಿಯ ಬದುಕು ಬಯಸುವುದು ವ್ಯಕ್ತ ವಾಗುತ್ತದೆ. ಕಾರು ಬಂಗಲೆ ಕೇಳುತ್ತಿಲ್ಲ ಆಕೆ. ಕೇವಲ ನೆಮ್ಮದಿಯ ಬದುಕು ಆಕೆಯ ಆಸೆ. 

ಗರ್ಭ ನಿರೋಧಕ ಸೌಲಭ್ಯ ಕೇಳಿದ ವಿಶ್ವ ವಿದ್ಯಾಲಯದ ಹೆಣ್ಣು ಮಗಳೊಬ್ಬಳನ್ನು ಅಮೆರಿಕೆಯ ರೇಡಿಯೋ ಬಾತ್ಮೀದಾರ “ರಷ್ ಲಿಂಬಾ” (rush limbaugh) ವೇಶ್ಯೆ ಎಂದು ಜರೆದ. ಕಾಮ ತೀಟೆ ತೀರಿಸಿ ಕೊಳ್ಳಲು ಸರಕಾರ ಭರಿಸಬೇಕಂತೆ ವೆಚ್ಚ ಎಂದು ಕೀಳು ಮಟ್ಟದ ವಾಗ್ದಾಳಿ ಮಾಡಿದ ಈ ಬಲಪಂಥೀಯ ವರದಿಗಾರ. ಇದು ಅತ್ಯಂತ ಮುಂದುವರೆದ ದೇಶವೊಂದರ ಕಥೆ. ಇಂಥ ಮಾತುಗಳನ್ನು ತಲೆ ಕೆಟ್ಟ ತಾಲಿಬಾನಿಯೂ ಆಡಿರಲಿಕ್ಕಿಲ್ಲ. ಗುಹೆಗೆಳಲ್ಲಿ ಅಡಗಿ ಕೂತು ಮಹಿಳೆಗೆ ಸ್ವಾತಂತ್ರ್ಯ ಕೊಡಲು ಒಪ್ಪದ ತಾಲಿಬಾನಿ ಬಾಯಿಂದ ಇಂಥ ಮಾತುಗಳು ಹೊರಡಲಿಲ್ಲ. ಗಗನಚುಂಬಿ ಕಟ್ಟಡಗಳ ನಾಡಿನಿಂದ ಬಂದವು ಈ ಮಾತುಗಳು. ಅದ್ಯಾವ ನಿಗೂಢ ಕಾರಣಕ್ಕೆ ಮಹಿಳೆಯನ್ನು ಗಂಡು ಶತ್ರು ಎಂದು ಪರಿಗಣಿಸುತ್ತಾನೋ ಅರ್ಥವಾಗುತ್ತಿಲ್ಲ. ಈಡನ್ ಉದ್ಯಾನವನದಲ್ಲಿ ದೇವರು  ನಿಷಿದ್ಧ ಗೊಳಿಸಿದ ಸೇಬನ್ನು ತಿನ್ನಲು ಆಡಂ ನಿಗೆ ಈವ್ ಉತ್ತೇಜಿಸಿದ ಕಾರಣ ದೇವರು ಮಹಿಳೆಗೆ ಪ್ರಸವ ವೇದನೆ ನೀಡಿದ ಎನ್ನುವ ಮತಿಹೀನರೂ ಇದ್ದಾರೆ. ಅಂದರೆ ಈ ಮಹಿಳೆ ವಿರುದ್ಧದ ಭಾವನೆಗೆ, ನಡವಳಿಕೆಗೆ ಕಾರಣ ಸಿಗುತ್ತದೆ.

ಮಹಿಳೆಯನ್ನು ಹಾಯ್, ಸೆಕ್ಸಿ ಎಂದು ಕರೆದರೆ ಸಿಕ್ಸಿಸ್ಟ್ ಆಗಬಹುದೋ ಅಥವಾ ಅದು ಒಂದು complimentary ಯೋ ಎಂದು ಒಂದು ಪತ್ರಿಕೆ ಕೇಳುತ್ತದೆ. ಮಾಧ್ಯಮಗಳು ಹೆಣ್ಣಿನ ಸೌಂದರ್ಯಕ್ಕೆ ಕೊಡುತ್ತಿರುವ ಅತೀವ ಮಹತ್ವ ಆಕೆ ತನಗರಿವಿಲ್ಲದೆಯೇ ಕೀಳರಿಮೆ ಬೆಳೆಸಿಕೊಂಡು ತೊಳಲಾಡುವಂತೆ ಮಾಡುತ್ತಿದೆ. ಅಂತರಂಗದ ಸೌಂದರ್ಯಕ್ಕೆ ಮಹತ್ವ ಮನ್ನಣೆ ಬರುವವರೆಗೆ ಈ ಕೀಳರಿಮೆಯ ಬವಣೆ ಹೆಣ್ಣಿಗೆ ತಪ್ಪದು. ಮಾಧ್ಯಮಗಳ, ಸೌಂದರ್ಯ ಪ್ರಸಾಧನ ಉತ್ಪಾದಿಸುವ ಕಂಪೆನಿಗಳ ಈ ನಡವಳಿಕೆಗೆ ದಾರಿ ಬೇರೆ ಕಾಣದೇ ತನಗರಿವಿಲ್ಲದಂತೆಯೇ ಭಾಗವಹಿಸುತ್ತಿರುವುದು ಖೇದಕರ. ಮಹಿಳೆಗೆ ಹೆಚ್ಚು ಮೈ ಪ್ರದರ್ಶನ ಮಾಡಲು ಕೊಟ್ಟ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ ಎಂದು ಬಗೆದ ಆಧುನಿಕ ವಿಶ್ವ ಮಹಿಳೆಯನ್ನು ಎಲ್ಲ ರೀತಿಯ ಅಪಮಾನಗಳಿಗೆ ಎಗ್ಗಿಲ್ಲದೆ ಉಪಯೋಗಿಸಿ ಕೊಂಡಿತು. ಕನಿಷ್ಠ ಉಡುಗೆ ತೊಟ್ಟು cat walk ಮಹಿಳೆಯ ಸೌಂದರ್ಯಕ್ಕೆ ಆಶ್ಚರ್ಯದಿಂದ ಹುಬ್ಬೇರಿಸಿ ಕರತಾಡನ ಮಾಡುವ ಜನ ಆಕೆ ವೇತನದಲ್ಲಿ ಸಮಾನತೆ ಬೇಡಿದಾಗ ಹುಬ್ಬು ಗಂಟಿಕ್ಕುತ್ತಾರೆ. ಹೆರಿಗೆ ವೇಳೆ ಅವಳಿಗೆ ಬೇಕಾದ ಸೌಲಭ್ಯ ಕೊಡಲು ತಕರಾರು ಮಾಡುತ್ತಾರೆ. ಗಂಡಿನಂತೆಯೇ ದುಡಿದರೂ ಅವಳ ಶ್ರಮಕ್ಕೆ ಬೆಲೆಯಿಲ್ಲ. ಹೊಲ ಗದ್ದೆಗಳಲ್ಲಿ ಕೆಲಸಮಾಡುವ, ಮನೆಗೆಲಸ ಮಾಡುವ, ತಮ್ಮದೇ ವ್ಯಾಪಾರ ಧಂಧೆ ನಡೆಸುವ, ಚಿಕ್ಕ ಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವೂ ಇಲ್ಲ, ಭದ್ರತೆಯೂ ಇಲ್ಲ. 

ಇಷ್ಟೆಲ್ಲಾ ಅಡೆ ತಡೆಗಳ ನಡುವೆಯೂ, ದೌರ್ಜನ್ಯ ಅಪಮಾನಗಳ ಮಧ್ಯೆಯೂ ಹೆಣ್ಣು ಸಾಧನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಳೆ. ನನಗೆ ಪರಿಚಯದ ವ್ಯಕ್ತಿಯೊಬ್ಬರ ಅವಳಿ ಹೆಣ್ಣುಮಕ್ಕಳು ಗಣಕ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಪದವೀಧರೆಯರಾದರು. ಡಿಗ್ರೀ ಪಡೆದು ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಒಳ್ಳೆಯ ಸಂಸ್ಥೆಯಲ್ಲಿ ಕೆಲಸವೂ ಸಿಕ್ಕಿತು. ಗ್ರಾಮ ಪ್ರದೇಶದಿಂದ, ಮುಸ್ಲಿಂ ಕುಟುಂಬದಿಂದ ಬಂದ ಈ ಹೆಣ್ಣು ಮಕ್ಕಳು ಸುತ್ತ ಮುತ್ತಲಿನವರ ಅಸಮ್ಮತಿಗೆ ಸೊಪ್ಪು ಹಾಕದೆ, ತನ್ನ ಪಾಲಕರ ಪ್ರೋತ್ಸಾಹದಿಂದ ತಮ್ಮ ಶಿಕ್ಷಣದ ಉದ್ದಕ್ಕೂ ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಾ ತಮ್ಮ ಕನಸನ್ನು ನನಸಾಗಿಸಿಕೊಂಡರು.

ಹೀಗೆ ಸಮಾಜದ ಕೆಂಗಣ್ಣಿಗೆ, ಕುಹಕಕ್ಕೆ ತಲೆ ಬಾಗದೆ ಮುನ್ನಡೆಯ ದೃಢವಾದ ಹೆಜ್ಜೆ ಇಡುತ್ತಿರುವ ಹೆಣ್ಣು ಮಕ್ಕಳಿಗೆ ಮಹಿಳಾ ದಿನದ ಶುಭಾಶಯಗಳು.

ಚಿತ್ರ ಕೃಪೆ: http://www.nationalgeographic.com

ಪ್ರತಿಕ್ರಿಯೆ ಬೇಡ

  • ಕನಿಷ್ಠ  ದಿನಕ್ಕೊಮ್ಮೆ ಪೋಸ್ಟು ಪೋಸ್ಟು ಎಂದು ಹೇಗ್ರೀ ಕೂಗೋದು? ಈಗ ಎಲ್ಲಿದೆ ಪೋಸ್ಟು ಗೀಸ್ಟು, ಈಗ ಎಲ್ಲಾ ಮೇಲು ಗೀಲು ಎಂದಿರಾ? ಪೋಸ್ಟ್ ಅಂದಿದ್ದು ವರ್ಡ್ ಪ್ರೆಸ್ ಬ್ಲಾಗ್ ತಾಣಕ್ಕೆ ನಾವು ಬರೆದು ಪ್ರಕಟಿಸುವ ಬರಹದ ಬಗ್ಗೆ. ವರ್ಡ್ ಪ್ರೆಸ್ ತಾಣವನ್ನು ಹೊಕ್ಕ ಕೂಡಲೇ freshly pressed ವಿಭಾಗದಲ್ಲಿ ಇರುವ ಲೇಖನದ ಮೇಲೆ ಕಣ್ಣಾಡಿಸಿ ಪ್ರಕಟವಾದ ಲೇಖನಗಳಿಗೆ ಬರುವ ಸ್ವಾರಸ್ಯಕರ ಪ್ರತಿಕ್ರಿಯೆ ಓದುವುದು ನನ್ನ ಅಭ್ಯಾಸ. ಕೇಕ್ ಹೇಗೇ ಮಾಡೋದು ಎನ್ನುವುದರಿಂದ ಹಿಡಿದು ವಾಕ್ ಹೇಗೇ ಮಾಡೋದು, ಪೇರೆಂಟಲ್ (ಪಾಲಕತ್ವ?) ಬಗ್ಗೆ, ಪ್ರವಾಸದ ಬಗ್ಗೆ, ಬರೆಯಲು ಏನೂ ಹೊಳೆಯದಾದಾಗ ವಿಷಯ ಕಂಡು ಕೊಳ್ಳುವುದು ಹೇಗೆ………ಹೀಗೆ ಬ್ಲಾಗ್ ಪೋಸ್ಟ್ ಗಳ ಸುಗ್ಗಿ ಕಾಣಲು ಸಿಗುತ್ತದೆ. ಒಂದೊಂದು ಪೋಸ್ಟ್ ಗೂ ನೂರಾರು ಪ್ರತಿಕ್ರಿಯೆಗಳು. ವಿಷಯ ಎಷ್ಟೇ trivial ಆಗಿರಲಿ ಆಸ್ಥೆಯಿಂದ ತಮ್ಮ ಅಭಿಪ್ರಾಯ ಪ್ರಕಟಿಸುತ್ತಾರೆ ಓದುಗರು. ಅದೇ ವೇಳೆ ನಮ್ಮ ಕನ್ನಡ ತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳ ಕಡೆ ಸ್ವಲ್ಪ ನೋಡಿ. ಪ್ರತಿಕ್ರಿಯೆ ಗಳಿಲ್ಲದೆ ಆಹಾರ, ಪೋಷಕಾಂಶ ಇಲ್ಲದೆ, ಕೃಶರಾಗಿ  ನರಳುವ ಸೊಮಾಲಿಯಾ ದೇಶದ ಮಕ್ಕಳ ಥರ ಕಾಣುತ್ತದೆ ಬ್ಲಾಗ್ ಪೋಸ್ಟು. ಈ ಅಸಡ್ಡೆಗೆ, indifference ಗೆ ಕಾರಣವಾದರೂ ಏನಿರಬಹುದು? ಥಟ್ಟನೆ ಸೋಮಾರಿತನ ಕಾರಣ ಎಂದು ತೋರಿದರೂ ಕೆಲವೊಮ್ಮೆ ಮತ್ತೊಂದು ಕಾರಣ ತಲೆಗೆ ತೂರಿ ಕೊಳ್ಳುತ್ತದೆ. ಅದೇನೆಂದರೆ ಓದಿದ ಬರಹಕ್ಕೆ   ಪ್ರತಿಕ್ರಯಿಸಬೇಕೆಂದರೆ ಕೀಲಿ ಮಣೆ ಕುಟ್ಟಲೇ ಬೇಕಲ್ಲವೇ? ಹೀಗೆ ಪ್ರತೀ ಬರಹಕ್ಕೂ ಕೀಲಿಗಳನ್ನು ಕುಟ್ಟುತ್ತಾ ಕೂತರೆ ಕೀಲಿಗಳು ಕೀಲು ಬಿಟ್ಟುಕೊಂಡು ಉದುರಿದರೆ? ಕಂಪ್ಯೂಟರ್ ಹತ್ತಾರು ಸಾವಿರ ಬೆಲೆಬಾಳುವ ಉಪಕರಣ ತಾನೇ? ಸುಮ್ಮ ಸುಮ್ಮನೆ ಅದನ್ನು ಹಾಳುಗೆಡವಲು ಸಾಧ್ಯವೇ? ನಿಮಗೆ ಗೊತ್ತೇ ಇರಬಹುದು, ಟೀವೀ ಬಂದಾಗ ಅದರೊಂದಿಗೆ ಬರುವ ರಿಮೋಟ್ ಕಂಟ್ರೋಲ್ ಉಪಕರಣವನ್ನು ನಾವು ಜೋಪಾನ ಮಾಡೋ ರೀತಿ. ಕೆಲವರು ಪ್ಲಾಸ್ಟಿಕ್ ಕವರ್ ಹೊದಿಸಿದರೆ ಮತ್ತೆ ಕೆಲವರು ಪ್ಲಾಸ್ಟಿಕ್ ಕವಚ ಹಾಕುತ್ತಾರೆ, ಒತ್ತಿ ಒತ್ತಿ ಎಲ್ಲಿ ಬಟನ್ನುಗಳು ಕಿತ್ತು ಬರುತ್ತೋ ಎಂದು. ಈ ತೆರನಾದ ಕಾರಣವೇನಾದರೂ ಇರಬಹುದೇ ಪ್ರತಿಕ್ರಿಯೆಗಳ ಬರಗಾಲಕ್ಕೆ? ಕೆಲಸವಿಲ್ಲದವನು ಏನೋ ಬರೆದು ಹಾಕಿದ್ದಕ್ಕೆ ನಾವೇಕೆ ಪ್ರತಿಕ್ರಯಿಸಿ ನಮ್ಮ ಕೀ ಬೋರ್ಡ್ ಹಾಳುಗೆಡವ ಬೇಕು ಎನ್ನುವ ಧೋರಣೆಯೋ? ಹೊಸತಾಗಿ ಬರಹ ಕೈಗೆತ್ತಿ ಕೊಂಡು ಈ ರೀತಿಯ ಓದುಗ ಸಮೂಹದ ಅಸಡ್ಡೆಗೆ expose ಆದನೋ, ಅವನ ಗತಿ ದೇವರಿಗೇ ಪ್ರೀತಿ. ಬರಹ ನೂ ಬೇಡ ಏನೂ ಬೇಡ, ಇದು ನನ್ನ ಕೈಗೆ ಹೇಳಿಸಿದ ಕೆಲಸ ಅಲ್ಲ ಎಂದು ಮುದುಡಿ ಕೊಳ್ಳುತ್ತಾನೆ. ಆದರೆ ನನ್ನಂಥ ದಪ್ಪ ಚರ್ಮದ ಜನರಿಗೆ ಓದುಗರ “ಅಸಡ್ಡೆ” ಯೇ ಒಂದು ರೀತಿಯ ಮೂಕಿ (ಮೂಕಿ ಟಾಕಿ ಗೊತ್ತಲ್ಲ?) ಪ್ರತಿಕ್ರಿಯೆ.
  • ನನ್ನ “ಹಳೇ ಸೇತುವೆ” ಬ್ಲಾಗ್ ಗೆ ಇದುವರೆಗೆ ಭೇಟಿ ಕೊಟ್ಟವರ ಸಂಖ್ಯೆ ೨೦,೦೦೦ ದಾಟಿದ “ಅವಿಸ್ಮರಣೀಯ ಅನುಭವ” ಕ್ಕೆ ಅರ್ಪಣೆ ಈ ಲಘು ಬರಹ. ಎಲ್ಲರಿಗೂ ವಂದನೆಗಳು.
  • ಸೂಚನೆ: ಬೇಡ, ಬೇಡ, ಪ್ರತಿಕ್ರಿಯೆ ಬೇಡ, ನೀವು ಓದುವಾಗ ನಿಮ್ಮ ಕಣ್ಣುಗಳಲ್ಲೇ ನನಗೆ ಕಾಣುತ್ತಿದೆ ಶುಭಾಶಯಗಳು ಎನ್ನುವ ಹಾರೈಕೆ.                 

ವ್ಯಾಟಿಕನ್ ನಿಯಮ

ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನ ಮಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು ಹೋಗುವುದು ಸಹಜವೇ. contraception (ಗರ್ಭನಿರೋಧಕ) ಬಳಕೆಯಿಂದ ಹಿಡಿದು climate change ವರೆಗೆ ಚರ್ಚಿಸಲು ಪೋಪ್ ರನ್ನು ಭೇಟಿಯಾಗುತ್ತಾರೆ ಜನ. ಪೋಪ್ ರನ್ನು ಭೇಟಿಯಾದ ಬ್ರಿಟಿಷ ತಂಡದ ಕುರಿತು ನನ್ನ ಆಸಕ್ತಿ ಏನೆಂದರೆ, ತಂಡದಲ್ಲಿ ‘ಸಯೀದ ಹುಸೇನ್ ವಾರ್ಸಿ’ ಎನ್ನುವ ಮುಸ್ಲಿಂ ಮಹಿಳೆ ಸಹ ಇದ್ದರು. ಈಕೆ ಬ್ರಿಟಿಷ್ ಮಂತ್ರಿಮಂಡಲದ ಏಕೈಕ ಮುಸ್ಲಿಂ ಮಹಿಳಾ ಸಚಿವೆ. ವಾರ್ಸಿ ಪೋಪ್ ರನ್ನು ಕಾಣಲು ಹೋಗುವಾಗ vatican protocol ಪ್ರಕಾರ ಕಪ್ಪು ವಸ್ತ್ರ ಮತ್ತು ಸ್ಕಾರ್ಫ್ ಧರಿಸಿದ್ದರು. ಇದು ವಿಶ್ವದ ಅತಿ ಚಿಕ್ಕ ದೇಶವಾದ ಸುಮಾರು ೧೧೦ ಎಕರೆ ವಿಸ್ತೀರ್ಣದ ವ್ಯಾಟಿಕನ್ ನ ನಿಯಮ.

ವ್ಯಾಟಿಕನ್ ಕ್ರೈಸ್ತರ ಅತ್ಯಂತ ಪವಿತ್ರ ಕ್ಷೇತ್ರ. ತೋಚಿದ ರೀತಿಯ ಉಡುಗೆ ತೊಡುಗೆ ಸಲ್ಲದು. ಶಿಷ್ಟಾಚಾರಗಳು ಎಲ್ಲೆಲ್ಲಿ ಅವಶ್ಯಕವೋ ಅವುಗಳನ್ನ ಗೌರವಿಸಿ, ಅನುಸರಿಸಬೇಕು. ಈ ತೆರನಾದ ನಿಯಮಗಳು ಯಾವುದೇ ಸಮಾಜ ಅಥವಾ ಸಂಸ್ಕೃತಿಗಳಲ್ಲಿದ್ದರೆ ಅವುಗಳಿಗೆ ಬೇರೆಯೇ ತೆರನಾದ ಅರ್ಥ ಕೊಟ್ಟು ಟೀಕಿಸಬಾರದು. ನಮಗೊಂದು ನ್ಯಾಯ, ಪರರಿಗೊಂದು ನ್ಯಾಯ, ಈ ಬೇಧ ಭಾವ ಉದ್ಭವಿಸಿದಾಗ ಸಹಜವಾಗಿಯೇ ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ.

ಕ್ರೈಸ್ತರ ಪವಿತ್ರ ಕ್ಷೇತ್ರ ದಂತೆಯೇ ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರ ಗಳಾದ ಮಕ್ಕಾ ಮತ್ತು ಮದೀನಾ ನಗರಗಳು ಸೌದಿ ಅರೇಬಿಯಾದಲ್ಲಿವೆ. ವಿಶೇಷವೇನೆಂದರೆ ಕೇವಲ ಮಕ್ಕಾ, ಮದೀನ ಮಾತ್ರ ಪವಿತ್ರ ನಗರಗಳಲ್ಲ, ಬದಲಿಗೆ ಇಡೀ ಸೌದಿ ಅರೇಬಿಯಾ ದೇಶವೇ ಇಸ್ಲಾಮಿನ ಪುಣ್ಯ ಭೂಮಿ. ಹಾಗೆಂದು ಮುಸ್ಲಿಂ ವಿಧ್ವಾಂಸರ ಅಭಿಪ್ರಾಯವೂ ಹೌದು. ಮಕ್ಕಾ, ಮದೀನ ನಗರಗಳಿಗೆ ಮುಸ್ಲಿಮೇತರರು ಬರುವ ಹಾಗಿಲ್ಲ, ಹಾಗೆಯೇ ಸೌದಿ ಅರೇಬಿಯಾ ದೇಶಕ್ಕೆ ಬರುವವರೂ ವಸ್ತ್ರದ ವಿಷಯದಲ್ಲಿ modesty ತೋರಿಸಬೇಕು. ಮಹಿಳೆಯರು ನೀಳ, ಕಪ್ಪು ಬಟ್ಟೆ ಧರಿಸಬೇಕು. ಇದಕ್ಕೆ ಹಿಜಾಬ್ ಎನ್ನುತ್ತಾರೆ. ಸ್ವಾರಸ್ಯವೇನೆಂದರೆ ವ್ಯಾಟಿಕನ್ ವಿಷಯದಲ್ಲಿ ತೋರಿಸುವ ಸಜ್ಜನಿಕೆ ಮುಸ್ಲಿಂ ಧರ್ಮೀಯ ಆಚರಣೆಗೆ ಇಲ್ಲದಿರುವುದು. ಸೌದಿ ಅರೇಬಿಯಾದ ಉಡುಗೆ ಮತ್ತು ಇತರೆ ನಿಯಮಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ.

ಭಾವನೆಗಳನ್ನು ಮನ್ನಿಸುವ ಔದಾರ್ಯ ಎಲ್ಲರಿಗೂ ಏಕೆ ಲಭ್ಯವಲ್ಲ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಋತು ಗಾನ

ಋತು ಚಕ್ರ ಒಂದು ರೀತಿಯ ರಾಕೆಟ್ ಸೈನ್ಸ್ ಕೆಲವರಿಗೆ. ಒಬ್ಬ ಗಂಡು ಋತು ಚಕ್ರದ ಬಗ್ಗೆ ಬರೆದಾಗ ಸಹಜವಾಗಿಯೇ ಹುಬ್ಬುಗಳು ಮೇಲೇರುತ್ತವೆ. ಏಕೆಂದರೆ ಇದು ಪುರುಷರ domain ಅಲ್ಲ. writer’s block ನಿಂದ ಹೊರಬರಲು ವಿಷಯವೊಂದನ್ನು ಹುಡುಕುತ್ತಿದ್ದಾಗ ಹೊಳೆಯಿತೀ ವಿಷಯ, ಹಳೇ ಲಾಪ್ ಟಾಪ್ ಬದಲಿಸಿ ಮೊನ್ನೆ ತಾನೇ ಕೊಂಡ ಹೊಸ ಅತಿ ತೆಳುವಾದ “ಅಲ್ಟ್ರಾ ಬುಕ್’ ಲಾಪ್ ಟಾಪ್ ನಿಂದ ಹೊರಹೊಮ್ಮಿದ ಲೇಖನ ಓದಿ.

ನಾನು ಬೆಂಗಳೂರಿನಲ್ಲಿ ಮೆಡಿಕಲ್ ಟ್ರಾನ್ಸ್ ಕ್ರಿಪ್ಶನ್ ಮಾಡುತ್ತಿರುವಾಗ ಟ್ರೈನರ್ ಒಬ್ಬರು ಅಮೇರಿಕನ್ ಮಹಿಳೆ. ಆಕೆ human anatomy ವಿಷಯ ಕಲಿಸುವಾಗ ಋತು ಚಕ್ರದ ವಿಷಯ ಬಂತು. ಕೆಣಕಲೆಂದೇ ಏನೋ ಹುಡುಗರನ್ನು ಒಬ್ಬೊಬ್ಬರಾಗಿ ಎಬ್ಬಿಸಿ you know how long menstruation lasts ಎಂದು ಕೇಳಿದಾಗ ಇಡೀ ತರಗತಿಯೇ ನಗೆಗಡಲಲ್ಲಿ ಮುಳುಗುವ ಉತ್ತರ ಬರುತ್ತಿತ್ತು. ಒಬ್ಬ ಹತ್ತು ದಿನ ಎಂದರೆ, ಮತ್ತೊಬ್ಬ ಇನ್ನೂ ಮುಂದಕ್ಕೆ ಹೋಗಿ ಆರು ತಿಂಗಳು ಎಂದು ಬಿಟ್ಟ. ಆಕೆ ನಗುತ್ತಾ ಮಹಿಳೆಯರ ಈ ಮಾಸಿಕ ವಿದ್ಯಮಾನವನ್ನು ವಿವರಿಸಿ knives fly in the kitchen and this is the time guys have to leave town ಎಂದು ಹೇಳಿದಾಗ ಹೆಣ್ಣು ಮಕ್ಕಳು ಗಹಗಹಿಸಿ ನಕ್ಕಿದ್ದರು.

ನಾನು ಚಿಕ್ಕವನಿದ್ದಾಗ ಕೆಲವರು ಹೇಳಿದ್ದು ಕೇಳಿದ್ದೇನೆ, ಅವಳು ದೊಡ್ಡವಳಾದಳು ಎಂದು. ನಿನ್ನೆ ನಾನು ಹೇಗೆ ನೋಡಿದ್ದೇನೋ ಹಾಗೆಯೇ ಇದ್ದಾಳಲ್ಲಾ ಇವಳು, ಮತ್ತೆ ದೊಡ್ಡವಳಾದಳು ಎಂದರೆ ಏನರ್ಥ ಎನ್ನುವ ನನ್ನ ಹುಡುಗು ಜಿಜ್ಞಾಸೆಗೆ ಉತ್ತರ ಸಿಕ್ಕಿರಲಿಲ್ಲ. ಈಗಿನ ಥರ ಉತ್ತರ ಕೊಡುವಷ್ಟು ಬೆಳೆದಿರಲಿಲ್ಲ ಸಮಾಜ ಆಗ.

ಸೌದಿ ಅರೇಬಿಯಕ್ಕೆ ಬಂದಾಗ ಇಲ್ಲಿ ಕಾಣುವುದೆಲ್ಲಾ ಹೊಸತು ನನಗೆ. ಒಮ್ಮೆ ಒಂದು ಮನೆಯ ಮೇಲೆ ಸೌದಿ ದೇಶದ ಧ್ವಜ ಹಾರಿದ್ದನ್ನು ಕಂಡೆ. ನಮ್ಮ ದೇಶದಲ್ಲಿ ಮನೆಗಳ ಮೇಲೆ, ಅಲ್ಲಿ ಇಲ್ಲಿ ಎಂದು ಬಾವುಟ ಹಾರಿಸುವ ಹಾಗಿಲ್ಲವಲ್ಲ. ಹಾಗಾಗಿ ಕುತೂಹಲದಿಂದ ಒಬ್ಬ ಶ್ರೀಲಂಕೆಯ ವ್ಯಕ್ತಿಯ ಹತ್ತಿರ ಕೇಳಿದಾಗ ಆತ ಹೇಳಿದ ಆ ಮನೆಯ ಹುಡುಗಿ ವಯಸ್ಸಿಗೆ ಬಂದಿದ್ದಾಳೆ, ಅದನ್ನು ತಿಳಿಸುವುವ ಉದ್ದೇಶದಿಂದ ಬಾವುಟ ಹಾರಿಸುತ್ತಾರೆ ಎಂದಿದ್ದ ಕುಚೋದ್ಯಭರಿತ ಹಾಸ್ಯದ ಯಾವುದೇ ಸುಳಿವನ್ನೂ ಕೊಡದೆ. ನಮ್ಮ ದೇಶದಲ್ಲಿ ಕೆಲವರು ಮನೆಯ ಜಗುಲಿಯ ಸುತ್ತ ಒಂದು ಬೆಡ್ ಶೀಟ್ ಮರೆ ಮಾಡಿ ಅಲ್ಲಿ ಹುಡಗಿಯನ್ನು ಕೂರಿಸುವುದನ್ನು ನಾನು ನೋಡಿದ್ದೇನೆ. ಇನ್ನೂ ಒಂದು ಸಮುದಾಯದವರು ಚಪ್ಪರ ಹಾಕಿ ಹುಡುಗಿ ಸಿಂಗರಿಸಿ ಯನ್ನು ಕೂರಿಸುತ್ತಾರೆ. ಈಗ ಇದೆಲ್ಲಾ ಬದಲಾಗಿರಬೇಕು. ಇದು ಬದಲಾಗಿದೆಯೇ, ಇಲ್ಲವೇ ಎಂದು ಗಮನಿಸಲೇ ಬೇಕಾದ, ಕುತೂಹಲ ಭರಿತ ವಿಷಯವೂ ಅಲ್ಲ ಅನ್ನಿ ಇದು.

ಏನೇ ಇರಲಿ, ಮಹಿಳೆಯರಿಗೆ ಆಗುವ ಈ ಜೈವಿಕ ಬದಲಾವಣೆ ವಿವಿಧ ಸಮಾಜಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಿಸುತ್ತದೆ. ಕ್ರೈಸ್ತರ ಹಳೆ ಒಡಂಬಡಿಕೆ ಪ್ರಕಾರ ಋತು ಚಕ್ರ ಅರ್ಧ ಸಾವಿನಂತೆ. ಪವಿತ್ರ ವಾದುದನ್ನು ಅಪವಿತ್ರ ಗೊಳಿಸುತ್ತದೆ ಋತು ಚಕ್ರ ಎನ್ನುವ ಅಭಿಪ್ರಾಯದೊಂದಿಗೆ ಅದು ಒಂದು ಶಾಪ ಎನ್ನುವ ಅಭಿಪ್ರಾಯ ಹಳೆ ಒಡಂಬಡಿಕೆ ಕಾಲದ ಜನರದ್ದಾಗಿತ್ತು. ಇಥಿಯೋಪಿಯಾ ದೇಶದಲ್ಲಿ ಈ ಅವಸ್ಥೆಯಲ್ಲಿರುವ ಹೆಣ್ಣು ಮಕ್ಕಳು ಅದಕ್ಕೆಂದೇ ನಿರ್ಮಿಸಲಾಗಿದ್ದ ಗುಡಿಸಿಲಿಗೆ ಹೋಗಿ ವಾಸವಾಗುವ ಪದ್ಧತಿ ಇದೆಯಂತೆ. ದೇವತೆಯರನ್ನು ಆರಾಧಿಸುವ ಪ್ರಾಚೀನ ಸಮಾಜಗಳಲ್ಲಿ ಋತು ಚಕ್ರ ಒಂದು ಪವಿತ್ರ ಕ್ರಿಯೆ. ಹಾಗೂ ತಿಂಗಳಿನ ಆ ಅವಧಿಯಲ್ಲಿ ಮಹಿಳೆ ಹೆಚ್ಚು ಬಲಶಾಲೀ ಎನ್ನುವ ಅಭಿಪ್ರಾಯವೂ ಇತ್ತು. ಅಷ್ಟೇ ಅಲ್ಲ ಈ ಅವಧಿಯಲ್ಲಿ ಮಹಿಳೆ ಗದ್ದೆ ಹೊಲದಲ್ಲಿ ಓಡಾಡಿದರೆ ಬೆಳೆ ಚೆನ್ನಾಗಿ ಆಗುವ ನಂಬಿಕೆ ಇತ್ತಂತೆ.

 ಇಸ್ಲಾಮಿನಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ, ಈ ಸಮಯದಲ್ಲಿ ಮಹಿಳೆ ನಮಾಜ್ ನಿರ್ವಹಿಸುವಂತಿಲ್ಲ , ಪವಿತ್ರ ಕುರಾನ್ ಪಠಿಸುವಂತಿಲ್ಲ, ವೃತಾಚಾರಣೆ ಪಾಲಿಸುವಂತಿಲ್ಲ. ಒಮ್ಮೆ ಪ್ರವಾದಿಗಳು ತಮ್ಮ ಪತ್ನಿಗೆ ನೀರು ಕೊಡೆಂದು ಕೇಳಿದಾಗ, ನಾನು ಋತುಮತಿ ಯಾಗಿದ್ದೇನೆ ಎನ್ನುವ ಉತ್ತರ ಬಂತು. ಆಗ ಪ್ರವಾದಿಗಳು ಕೇಳಿದರು, ಅದರಲ್ಲೇನು ತಪ್ಪು? ಋತು ಚಕ್ರ ಆಗೋದು ಬಿಡೋದು ನಿನ್ನ ಕೈಯಲ್ಲಿಲ್ಲವಲ್ಲ ಎಂದು ಉತ್ತರಿಸಿದ್ದರು. ಅಂದರೆ ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ದೈನಂದಿನ ಚಟುವಟಿಕೆ ಸಾಂಗವಾಗಿ ನಡೆಸಬಹುದು ಎಂದಾಗಿತ್ತು ಪ್ರವಾದಿಗಳ ಅಭಿಪ್ರಾಯ.

ಸ್ಟೀವ್ ಜಾಬ್ಸ್ ರವರ ಆಪಲ್ ಕಂಪೆನಿ ಮೊದಲ ಬಾರಿಗೆ i pad ತಯಾರಿಸಿ ಅದಕ್ಕೆ ಹೆಸರೇನೆಂದು ಇಡಬೇಕು ಎಂದು i pad ಒಳಗೊಂಡು ಒಂದೆರಡು ಹೆಸರುಗಳನ್ನು ಕೊಟ್ಟು ಜನರ ಅಭಿಪ್ರಾಯ ನೋಡಿದಾಗ ಬಹಳ ಜನ ಹೇಳಿದ್ದು i pad ಹೆಸರು ಬೇಡ, ಇದು ಸ್ತ್ರೀಯರ ಋತುಚಕ್ರವನ್ನು ನೆನಪಿಸುತ್ತದೆ, kotex pad, ‘always ‘ pad ಗಳ ತೆರನಾದ ಹೆಸರು ಬೇಡ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೂ ಆಪಲ್ ಸಂಸ್ಥೆ ಇವುಗಳನ್ನು ಕಿವಿಗೆ ಹಾಕಿ ಕೊಳ್ಳದೆ ವಿಶ್ವಕ್ಕೆ ನೀಡಿದರು i pad . ಎಲ್ಲರೊಳಗೊಂದಾಗು ಎನ್ನುವ ಮಾತಿನಲ್ಲಿ ಆಪಲ್ ಗೆ ನಂಬಿಕೆಯಿಲ್ಲ. ಸ್ವಲ್ಪ ಸರಿದು ನಿಂತು ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿ ಕಾಲಿಡುತ್ತಾರೆ ಆಪಲ್ ಜನ. ಹಾಗಾಗಿ ಅಷ್ಟೊಂದು ಯಶಸ್ವಿ ಈ ಕಂಪೆನಿ.

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಬಂದು ಕೇಳಿದಳು, ಬೆಳಗ್ಗಿನಿಂದ ಲಾಪ್ ಟಾಪ್ ಅನ್ನ ಅಂಟಿಸಿ ಕೊಂಡು ಕೂತಿದ್ದೀರಾ (ಶುಕ್ರವಾರ ರಜೆ ಯಾದ್ದರಿಂದ), ಸಾಕು ಏಳಿ ಈಗ ಎಂದಾಗ ನಾನು, ತಡಿಯೇ ಋತು ಚಕ್ರದ ಬಗ್ಗೆ ಬರೆಯುತ್ತಿದ್ದೇನೆ ಎಂದಿದ್ದೇ ತಡ, ಓಹೋ, ನಿಮಗೂ ಶುರು ಆಗ್ಬಿಡ್ತಾ ಅದು… ಅಲ್ಲಾ ಮತ್ತೆ… ಎಂದು ಸಿಡುಕಿ ಮರೆಯಾದಳು.

ಜೈಪುರ ಸಾಹಿತ್ಯ ಮೇಳ

• ಜೈಪುರ ಸಾಹಿತ್ಯ ಮೇಳ ಪ್ರಸಿದ್ಧಿ ಪಡೆದ ಸಾಹಿತ್ಯಾಸಕ್ತರ ಕೂಟ. ಇಲ್ಲಿ ವಿಶ್ವಾದಾದ್ಯಂತ ಪ್ರಕಾಶಿತವಾದ ಪುಸ್ತಕಗಳ ಅಮೋಘ ಸುಗ್ಗಿ ಮತ್ತು ಹೆಸರಾಂತ ಲೇಖಕರ ಸಮ್ಮಿಲನ. ಪುಸ್ತಕಗಳ Cannes ಎಂದು ಹೇಳಬಹುದು. ಸಾಮಾನ್ಯವಾಗಿ ಇಂಥ ಪುಸ್ತಕ ಮೇಳಗಳು ನೀರಸವಾಗಿ ಶುರುವಾಗಿ ಅಷ್ಟೇ ನೀರಸವಾಗಿ ಮುಗಿದು ಬಿಡುತ್ತವೆ ಕೂಡಾ. ಯಾರೋ ಸಾಹಿತ್ಯ ಪ್ರೇಮಿಗಳು, ಡಿಸ್ಕೌಂಟ್ ಪುಸ್ತಕಕ್ಕಾಗಿ ಆಸೆಯಿಂದ ಬರುವ ಒಂದಿಷ್ಟು ಜನರನ್ನು ಬಿಟ್ಟರೆ ಈ ಉತ್ಸವದ ಮೇಲಿನ ಆಸಕ್ತಿ ಗೌಣ. ಆದರೆ ಈ ಬಾರಿಯ ಮೇಳ ಸ್ವಲ್ಪ ವಿಭಿನ್ನವಾಗಿ ಆರಂಭವಾಗಿ ವಿವಾದದ ಸುಳಿಯಲ್ಲಿ ಸಿಕ್ಕಿ ಕೊಂಡಿತು. ಕಾರಣ ವಿಶ್ವ ಪ್ರಸಿದ್ಧ ಲೇಖಕ, ಕಾದಂಬರಿಕಾರ ಸಲ್ಮಾನ್ ರುಷ್ಡಿ ಈ ಮೇಳಕ್ಕೆ ಆಗಮಿಸುವ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ರುಶ್ಡಿ ಬರಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳಿದ್ದೆ ತಡ ರಾಜ್ಯ ಸರಕಾರಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭೂಗತ ಲೋಕದ ಬಾಡಿಗೆ ಹಂತಕರಿಂದ ರುಶ್ಡಿ ಜೀವಕ್ಕೆ ಅಪಾಯವಿದೆ ಎಂದು ರುಶ್ಡಿ ತನ್ನ ಭಾರತ ಪ್ರಯಾಣದ ಟಿಕೆಟ್ ಗಳನ್ನು ಹರಿದು ಹಾಕುವಂತೆ ಮಾಡಿದವು. ಮಾರನೆ ದಿನ ಮತ್ತೊಂದು ಸುದ್ದಿ, ಈ ವಿಷಯ ಮುಂಬೈ ಪೊಲೀಸರಿಗೆ ತಿಳಿದೇ ಇಲ್ಲ. ಎರ್ಡೆಡ್ಲೆ ನಾಕು, ಸಲ್ಮಾನ್ ರುಶ್ಡಿ ಗೆ ಮನವರಿಕೆ ಆಯಿತು ಈ ಸುದ್ದಿ ಸುಳ್ಳೆಂದು, ತನ್ನನ್ನು ಉತ್ಸವದ ಹೊರಗಿಡಲು ಸರಕಾರ ಮಾಡಿದ ಹುನ್ನಾರ ಎಂದು.

ಭಾವನೆಗಳನ್ನ ಘಾಸಿಗೊಳಿಸುವ ಅಧಿಕಾರ ಯಾವ ಲೇಖಕನಿಗೂ ಇರಕೂಡದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ವೈಚಾರಿಕ ಸ್ವೇಚ್ಚಾಚಾರಕ್ಕಿರುವ ಮುಕ್ತ ಪರವಾನಗಿ ಅಲ್ಲ. ಕ್ರಿಯಾಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಜನರನ್ನು ಕೆರಳಿಸುವ ಪರಿಪಾಠಕ್ಕೆ ನಾಗರೀಕ ಸಮಾಜ ಮಣೆ ಹಾಕಬಾರದು. ಸ್ವೇಚ್ಚಾಚಾರ ಅರಗಿಸಿಕೊಳ್ಳುವ ಗುಣ ನಮ್ಮ ಉಪಖಂಡದ ಜನತೆಗೆ ಇನ್ನೂ ಬಂದಿಲ್ಲ. ಕಾಲ ಬದಲಾದಾಗ ರುಶ್ಡಿ ಯಂಥವರಿಗೆ ಮನ್ನಣೆ ನೀಡೋಣ, ಅಲ್ಲಿಯತನಕ ಸಂಯಮದಿಂದ ಕಾಲದೊಂದಿಗೆ ಹೆಜ್ಜೆ ಹಾಕೋಣ.

ಹಾಗೆಯೇ ಸಲ್ಮಾನ್ ರುಶ್ಡಿ ಪ್ರಕರಣ ಪ್ರಪಂಚದ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ.

ಕೆಳಗಿನ ಲಿಂಕ್ ಕ್ಲಿಕ್ಕಿಸಿದರೆ ಪ್ರಪಂಚದಲ್ಲಿ ಇದುವರೆಗೆ ಬಹಿಷ್ಕರಿಸಲ್ಪಟ್ಟ ಕೆಲವು ಪುಸ್ತಕಗಳ ಮಾಹಿತಿ ಇದೆ. • http://www.ala.org/advocacy/banned/frequentlychallenged/challengedclassics/reasonsbanned