ನಾವು “ಅಕಶೇರುಕ” ರಾಗಿದ್ದು ಎಂದಿನಿಂದ?

ಪಾಕಿಸ್ತಾನ ಅಮೆರಿಕೆಯ ಒಂದು ಪಪ್ಪೆಟ್. ಇದು ಪಾಕಿಸ್ತಾನದ ಸರಕಾರಕ್ಕಿಂತ ಅಲ್ಲಿನ ಜನಕ್ಕೆ ಚೆನ್ನಾಗಿ ಗೊತ್ತು. ತಮ್ಮ ಸರಕಾರಗಳು ಪ್ರತೀ ನಿರ್ಧಾರಕ್ಕೂ ವಾಷಿಂಗ್ಟನ್ ಮೇಲೆ ಪರಾವಲಂಬಿ ರೀತಿ ಅವಲಂಬಿತ ಎಂದು.  ಪಾಕಿಸ್ತಾನ ಒಂದು miserably failed state, ಪಾಕಿಸ್ತಾನದ ಈ degenaration ನೋಡಿ ಕನಿಕರ ಪಡುತ್ತಿದ್ದ ನಮಗೆ ಒಂದು ವಿಚಿತ್ರ ಆದರೆ  ಆಘಾತಕಾರಿಯಾದ ಬೆಳವಣಿಗೆ ಕಾಣಲು ಸಿಕ್ಕಿದೆ. ಒಂದು ಬೆಳಿಗ್ಗೆ ಅಮೆರಿಕೆಯ ದೂತಾವಾಸದ ಸಿಬ್ಬಂದಿಯೊಬ್ಬ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್ ಬಂದು ನಿಲ್ಲುತ್ತದೆ, ಗುಂಡಿನ ಚಕಮಕಿ ನಡೆಯುತ್ತದೆ, ಬೈಕ್ ಸವಾರರಲ್ಲಿ ಇಬ್ಬರು ಸಾಯುತ್ತಾರೆ ಅಮೆರಿಕೆಯವನನ್ನು ಪೊಲೀಸರು ಬಂಧಿಸುತ್ತಾರೆ. ಪಾಕ್ ಬೀದಿಗಳಲ್ಲಿ  ಬೈಕ್ ನಲ್ಲಿ ಬರುವುದೂ, ಬಂದ ಕೂಡಲೇ ಗುಂಡಿನ ಕಾಳಗ ನಡೆಯುವುದೂ ಸಾಮಾನ್ಯವೇ. ನಾವು ನಮ್ಮ ಚಿತ್ರಗಳಲ್ಲಿ ಕಾಣುವುದನ್ನು ಅಲ್ಲಿ ನಿಜ ಜೀವನದಲ್ಲಿ ಆಡಿ ತೋರಿಸುತ್ತಾರೆ. ಆದರೆ ವಿಷಯದ ಗಾಂಭೀರ್ಯ ಇರುವುದು ಅಮೆರಿಕೆಯವ ಈ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದು. ಅದೂ ಸಾಧಾರಣ ಅಮೆರಿಕೆಯ ನಾಗರೀಕನಲ್ಲ. ದೂತಾವಾಸದ ಸಿಬ್ಬಂದಿ. ಅವನಿಗೆ ಇದ್ದೇ ಇರುತ್ತದೆ diplomatic immunity. ತನ್ನ ದೇಶದವರು ಸಿಕ್ಕಿಬಿದ್ದಾಗ ಸಹಜವಾಗಿಯೇ ಅಮೆರಿಕನ್ನರು ಕಿಡಿ ಕಿಡಿ ಯಾಗುತ್ತಾರೆ. ಈ ವಿಷಯದಲ್ಲೂ ಸಹ ಅಸಮಾಧಾನ ಗೊಂಡರು. ಮಾಮೂಲಿ ಪ್ರತಿಭಟನೆ ಕೆಲಸ ಮಾಡದಾದಾಗ ಅಮೆರಿಕೆಯಲ್ಲಿನ ಪಾಕ ರಾಜತಾಂತ್ರಿಕ ನನ್ನು ಕರೆಸಿ ನಮ್ಮ ಪ್ರಜೆಯನ್ನು ವಿಮುಕ್ತಿಗೊಳಿಸದಿದ್ದರೆ ನಿನ್ನನ್ನು ಒದ್ದೋಡಿಸುತ್ತೇವೆ ಎಂದು ಧಮಕಿ ಹಾಕಿದರು. ಧಮಕಿ ಕೇಳಿ ಮರಳಿದ ಆತ ನನಗೆ ಅಂಥ ಎಚ್ಹರಿಕೆಯನ್ನೇನೂ ಅಮೇರಿಕಾ ನೀಡಿಲ್ಲ ಎಂದು ಟ್ವೀಟಿಸಿ ಸುಮ್ಮನಾದ. ಆದರೆ ಅಮೇರಿಕ ನೇರವಾಗಿ ಅಲ್ಲಿನ ಸರಕಾರದ ಮೇಲೆ ಪ್ರಭಾವ ತೋರಿಸಲು ತೊಡಗಿತು. ಅಲ್ಲಿನ ಪೊಲೀಸರು ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಇವನು ದೂತಾವಾಸದ ಅಧಿಕಾರಿ ಅಲ್ಲ, ಬದಲಿಗೆ ಒಬ್ಬ ಗೂಢಚಾರ ಎಂದು ಕರೆದು ಅವನ ಬಳಿಯಿದ್ದ ಆಧುನಿಕ ಉಪಕರಣಗಳ ಹೆಸರುಗಳನ್ನೂ ಪಟ್ಟಿ ಮಾಡಿ ಬಹಿರಂಗಗೊಳಿಸಿದರು, charge sheet ಹಾಕಿ ಅತ್ತೆ ಮನೆಗೂ ಸಹ ಅಟ್ಟಿದರು. ಈ ಘಟನೆ ನಮ್ಮ ದೇಶದಲ್ಲಿ ನಡೆದಿದ್ದರೆ? ಪಾಕಿಸ್ತಾನದ ಗಾಯಕ ಕೋಟ್ಯಂತರ ರೂಪಾಯಿ ಅನಧಿಕೃತವಾಗಿ  ತಂದ ಎಂದು ಬಂಧಿಸಿದ ಕೂಡಲೇ ಅವನನ್ನು ಬಿಡುಗಡೆ ಗೊಳಿಸಲು ಆದೇಶ.   

ಪ್ರಥಮ ಕೊಲ್ಲಿ ಯುದ್ಧದ ವೇಳೆ ಅಮೆರಿಕೆಯ ಯುದ್ಧ ವಿಮಾನಗಳಿಗೆ ಇಂಧನ ಹಾಕಬಾರದು ಎಂದು ನಿರ್ಣಯಿಸಿದ್ದ ನಮ್ಮ  ಸರಕಾರ ಕೊನೆಗೆ ಸದ್ದಿಲ್ಲದೇ ಇಂಧನ ತುಂಬಿಸಿ ಕೊಟ್ಟಿತು. ಬಿಳಿ ನಗು ನಮ್ಮ ಮೇಲೆ ಚೆನ್ನಾಗಿ ಪ್ರಭಾವ ಬೀರುತ್ತದೆ. ಈ ಪಾಠವನ್ನು ಅಮೆರಿಕನ್ನರಿಗೆ ನೀಡಿದ್ದು ನಮ್ಮನ್ನು ೨೦೦ ವರ್ಷ ಗಳ ಕಾಲ ಆಳಿದ ಬ್ರಿಟಿಷರು. ಇರಾನ್ ನಮ್ಮ ದೇಶದ ಆಪ್ತ ಮಿತ್ರ. ಆದರೆ ಇರಾನ ವಿರುದ್ಧದ ಭದ್ರತಾ ಮಂಡಳಿಯ ನಿರ್ಣಯಕ್ಕೆ ಪರವಾಗಿ ನಾವು ಮತ ಚಲಾಯಿಸಿ ಮಧ್ಯ ಪ್ರಾಚ್ಯದಲ್ಲಿನ ಒಂದು ದೇಶದ ಬೆಂಬಲವನ್ನು ಕಳೆದು ಕೊಂಡೆವು.

ಕೇಂದ್ರ ಸರಕಾರದಲ್ಲಿ ಕೆಲಸ ಮಾಡದ ಅಥವಾ ಮಾಡಲು ಬಾರದ ಒಂದು ಇಲಾಖೆ ಇದ್ದರೆ ಅದೇ ವಿದೇಶಾಂಗ ಇಲಾಖೆ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಎಂದರೆ ಗರಿ ಗರಿಯಾದ ಸೂಟು, ಅಥವಾ ರೇಶಿಮೆ ಸೀರೆ ಉಟ್ಟು ದೇಶ ಸುತ್ತುವುದು ಎನ್ನುವ ತಪ್ಪು ಕಲ್ಪನೆ ಮನೆ ಮಾಡಿದೆ. ನೆಹರೂ ಕಾಲಾದ outdated ರಾಜನೀತಿಯ ನಿಯಮಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎನ್ನುವ ಭಾವನೆ ಬೇರೆ. ನಾವು ಯಾರ ಪರವೂ ಅಲ್ಲ, ಎಲ್ಲರ ಸವಾರಿ ನಮ್ಮ ಮೇಲೆ ನಡೆಯಲಿ ಎನ್ನುವ ನಿರ್ಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ. ಆ ನೀತಿಗೆ ಒಂದೇ ಒಂದು ಬದಲಾವಣೆಯಂತೂ ಕಾಣಲು ಸಿಕ್ಕಿದೆ. ಅದೇ ಅಮೇರಿಕಾ ಪರ ನೀತಿ. ಹಿಂದೆ ರಷ್ಯಾ ಪರ, ಈಗ ಅಮೇರಿಕಾ ಪರ. ನಮಗೇಕೆ ಸ್ವಂತಿಕೆ ಇಲ್ಲ ಅಥವಾ ಇರಕೂಡದು? ವಿನಾಕಾರಣ ಕಾರ್ಗಿಲ್ ಅನ್ನು ಆಕ್ರಮಿಸಿ ನಮ್ಮ ಸಾವಿರಾರು ಸೈನಿಕರ ಸಾವಿಗೆ ಕಾರಣವಾದ ಪಾಕಿಸ್ತಾನವನ್ನು ಸದೆ ಬಡಿಯುವ ಸುಂದರ, ಬಹುಶಃ ಇನ್ನೆಂದೂ ಬರದ ಅವಕಾಶವನ್ನು ನಾವು ಕಳೆದು ಕೊಂಡೆವು. ಇದಕ್ಕೆ ಕಾರಣ ನಮಗೆ ಅಮೇರಿಕೆಯಿಂದ ಬಂದ ಮನವಿ. ಅವರಿಗೆ ಬೇಕಾದಾಗ ಮನವಿ, ಅಥವಾ ಬೆದರಿಕೆ. ಈ ಎರಡರಲ್ಲಿ ಒಂದನ್ನು ಕೊಟ್ಟು ಅಮೇರಿಕಾ ತನ್ನ ಕೆಲಸವನ್ನೂ ಸಾಧಿಸಿ ಕೊಳ್ಳುತ್ತದೆ.

೨೦೦೧ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕೆಯ ಮೇಲೆ ನಡೆದ ಧಾಳಿಗೆ ತತ್ತರಿಸಿ ಪ್ರಪಂಚದ ಎಲ್ಲ ದೇಶಗಳಿಂದ ಮುಚ್ಚಳಿಕೆ ಬರೆಸಿ ಕೊಂಡಿತು ಅಮೇರಿಕಾ. ಭಯೋತ್ಪಾದಕರು, ಅದಕ್ಕೆ ಧನ ಸಹಾಯ ನೀಡುವವರು ಯಾರದೇ ನೆಲದ ಮೇಲೆ ಇದ್ದರೋ ಅಮೆರಿಕೆಯ ಸುಪರ್ದಿಗೆ ಒಪ್ಪಿಸತಕ್ಕದ್ದು ಎನ್ನುವುದು ಮುಚ್ಚಳಿಕೆ. ವಿಧೇಯರಾಗಿ ಎಲ್ಲಾ ದೇಶಗಳೂ ತಲೆ ಬಾಗಿದವು. ನಮ್ಮ ದೇಶದ ಗಡಿ ನುಗ್ಗಿ ಒಂದು ನಗರವನ್ನು ತನ್ನ ಹಿಂಸೆಯಿಂದ ತತ್ತರಿಸುವಂತೆ ಮಾಡಿದ ಪಾಕ ಬಗ್ಗೆ ಮಾತ್ರ ಬೇರೆಯೇ ತೆರನಾದ ನಿಲುವು. ಉಗ್ರವಾಗಿ ಪ್ರತಿಭಟಿಸಿದಾಗ ಅಲ್ಲಿಂದ ಧಾವಿಸಿ ಬಂದ ವಿದೇಶಾಂಗ ಕಾರ್ಯದರ್ಶಿ ಕ್ಲಿಂಟನ್ ಒಂದ್ರೆಅದು ಮೊಂಬತ್ತಿ ಗಳನ್ನು ಹಚ್ಚಿ, ಎರಡು ನಿಮಿಷ ಮೌನ ಆಚರಿಸಿ ಸಮಾಧಾನ ಮಾಡಿ ಹೋದರು. ಮುಂಬೈ ಮೇಲಿನ ಆಕ್ರಮಣದ ವೇಳೆಯೂ ಭಾರತಕ್ಕೆ ಒಂದು ಸುವರ್ಣಾವಕಾಶ ಇತ್ತು ಪಾಕಿಗೆ ಒಂದು “ಝಟ್ಕಾ” ನೀಡಲು. ಅಲ್ಲೂ ಬಿಳಿ ನಗೆ ನಮ್ಮ priority ಮರೆಯುವಂತೆ ಮಾಡಿತು. ಬಿಳಿ ನಗುವಿನ ಮಾಯೆ ಅಂಥದ್ದು.     

ನಮ್ಮ ರಕ್ಷಣಾ ಸಚಿವ (ಜಾರ್ಜ್ ಫೆರ್ನಾಂಡಿಸ್) ರನ್ನು ಬೆತ್ತಲೆ ಮಾಡಿ ಅಮೆರಿಕೆಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅದು ದೊಡ್ಡ ವಿಷಯವಲ್ಲ ನಂಗೆ. ಮೆಚ್ಚುಗೆ, ಅಬ್ಬಾ, ಎಂಥ ಭದ್ರತಾ ವ್ಯವಸ್ಥೆ ಅವರದು. ನಮ್ಮ ರಾಷ್ಟ್ರಪತಿ ಕಲಾಂ ರನ್ನು ವಿಮಾನ ನಿಲ್ದಾಣ ದಲ್ಲಿ ಅನುಚಿತವಾಗಿ ವರ್ತಿಸಿದಾಗಲೂ ನಿರ್ಲಿಪ್ತತೆ. ನಮ್ಮ ವಿದ್ಯಾರ್ಥಿಗಳನ್ನು ಅಲ್ಲಿನ ವಿದ್ಯಾಲಯವೊಂದು ಮೋಸ ಮಾಡಿ ನಂತರ ವಿದ್ಯಾರ್ಥಿಗಳು ಓಡಿ ಹೋಗದಂತೆ electronic tag ಅವರ ಕಾಲಿಗೆ ಕಟ್ಟಿ ಅವರ ಮೇಲೆ ನಿರಂತರ ನಿಗಾ ಇಟ್ಟಾಗಲೂ ನಮಗೆ ಅಮೆರಿಕೆಯ ನಡವಳಿಕೆ ಅಸಹನೀಯವಾಗಿ ತೋರುವುದಿಲ್ಲ. ಇನ್ನು ನಮಗೆ ತಿಳಿಯದ ಇನ್ಯಾವ್ಯಾವ ರೀತಿಯಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿದೆಯೋ ದೇವರೇ ಬಲ್ಲ. ನಮ್ಮ ಸರಕಾರ ಗಳನ್ನು ನಡೆಸಲು ಮಂತ್ರಿಗಳು, ಕಾರ್ಯದರ್ಶಿಗಳು ಎಲ್ಲಾ ಅರವತ್ತು, ಎಪ್ಪತ್ತು ವಯಸ್ಸು ದಾಟಲೇ ಬೇಕು. ಒಂದೆರಡು ಅಪವಾದಗಳನ್ನು ಬಿಟ್ಟರೆ ವಯೋವೃದ್ಧರ ಕಾರುಬಾರು. ಅವರಿಗೆ ರೋಷ ಎಲ್ಲಿಂದ ತಾನೇ ಬರಬೇಕು.   

ಈಗಿನ ವಿಶ್ವ bi-polar ಆಗಬೇಕಿಲ್ಲ. ಪ್ರಪಂಚದ ತುಂಬಾ ದೊಡ್ಡದು. ಹಳೇ ಕಾಲದ ರೀತಿಯ ರಾಜಕಾರಣವನ್ನು ಅಲ್ಲ ನಾವು ಕಾಣುತ್ತಿರುವುದು. ಪಕ್ಕದ ಚೀನಾ ಅತ್ಯಾಧುನಿಕ ಆಯುಧಗಳನ್ನು ಶೇಖರಿಸುತ್ತಿದೆ ಎಂದು ನಮ್ಮ ಗೃಹ ಮಂತ್ರಿ ಕಳವಳ ವ್ಯಕ್ತ ಪಡಿಸಿದರು. ಅವರ ಮನೆಯೊಳಗೇ ಕೂತು ಅವರೇನಾದರೂ ಮಾಡಿಕೊಳ್ಳಲಿ. ನಮಗೇಕೆ ಅವರ ಉಸಾಬರಿ? 3G ಸ್ಕ್ಯಾಮು ಮತ್ತು ಸ್ವಿಸ್ ಮತ್ತು ಇತರೆ ಬ್ಯಾಂಕುಗಳಲ್ಲಿ ನಮ್ಮ ಜನ ಹುಗಿದಿಟ್ಟಿರುವ ಸಂಪತ್ತನ್ನು ಉಪಯೋಗಿಸಿ ನಮ್ಮ ಸೈನ್ಯವನ್ನೂ ಬಲ ಗೊಳಿಸಲಿ. ಭಾರತದ ನೇತೃತ್ವದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಧ್ರುವೀಕರಣ ನಡೆಯಲಿ. ನಮ್ಮೊಂದಿಗೆ ಹೆಜ್ಜೆ ಹಾಕಲು ಲ್ಯಾಟಿನ್ ಅಮೆರಿಕೆಯಲ್ಲೂ, ಮಧ್ಯ ಪ್ರಾಚ್ಯದೇಶ ಗಳಲ್ಲೂ, ಆಫ್ಫ್ರಿಕಾ ಖಂಡದಲ್ಲೂ ದೇಶಗಳಿವೆ.

ಈಜಿಪ್ಟ್ ಕ್ರಾಂತಿ

ಕಳೆದ ತಿಂಗಳ ಟುನೀಸಿಯಾ ಕ್ರಾಂತಿ ಅಲ್ಲಿನ ಅಧ್ಯಕ್ಷ ಪದವಿ ತೊರೆದು ಸೌದಿ ಸೇರುವುದರೊಂದಿಗೆ ಮುಕ್ತಾಯಗೊಂಡು ಅದರ ಪರಿಣಾಮ ಮಧ್ಯ ಪ್ರಾಚ್ಯ ದೇಶಗಳ ಇತರೆ ಸರ್ವಾಧಿಕಾರಿಗಳ ಮೇಲೂ ಬೀಳಲು ಆರಂಭಿಸಿತು. ಹೊಸ್ನಿ ಮುಬಾರಕ್ ಈಜಿಪ್ಟ್ ನ ಮಾಜಿ ಅಧ್ಯಕ್ಷ ಅನ್ವರ್ ಸಾದಾತ್ ರ ವಧೆಯ ನಂತರ ಗದ್ದುಗೆಗೆ ಏರಿದ ಕೂಡಲೇ ಇಳಿದು ಹೋಗುವ ದಾರಿ ಮರೆತು ಬಿಟ್ಟ. ತನ್ನ ದೀರ್ಘಾವಧಿ ಆಡಳಿತದ ಅವಧಿಯಲ್ಲಿ ತನ್ನ ದೇಶದ ವಿದ್ಯಾವಂತ ಸಮುದಾಯವನ್ನು ಒಂದು ಒಳ್ಳೆಯ ಗುಣಮಟ್ಟದ ಬದುಕಿನ ಕಡೆಗೆ ನಡೆಸುವ ಪ್ರಯತ್ನ ಮಾಡಲಿಲ್ಲ ಮುಬಾರಕ್. ಅವನ ದೂರದೃಷ್ಟಿತ್ವ ಕೇವಲ ತನ್ನ ಮಗ “ಗಮಾಲ್” ನನ್ನು ಪಟ್ಟಕ್ಕೆ ಏರಿಸುವುದೇ ಆಗಿತ್ತು. ಇದನ್ನು ಕಂಡು ರೋಸಿದ ಜನ ಒಳಗೊಳಗೇ ಕುದಿಯುತ್ತಿದ್ದರು. ಸಹನೆಯ ಕಟ್ಟೆ ಕೊನೆಗೂ ಒಡೆದು ಮುಬಾರಕ್ ನನ್ನು ಪದಚ್ಯುತಿಗೊಳಿಸಲು ತೀರ್ಮಾನಿಸಿದರು. ಮೊದ ಮೊದಲು “ಟ್ವಿಟ್ಟರ್” ಮತ್ತು “ಫೇಸ್ ಬುಕ್” ಸಹಾಯದಿಂದ ಜನರನ್ನು ಕಲೆ ಹಾಕಿ ನಂತರ ಬೀದಿಗೆ ಇಳಿದ ಜನ ಪೊಲೀಸರ ದಬ್ಬಾಳಿಕೆಗೆ ಜಪ್ಪಯ್ಯ ಅನ್ನದೆ ಬೀದಿ ಹೋರಾಟಕ್ಕೆ ನಿಂತರು. ಈ ಹೋರಾಟದಲ್ಲಿ ಜನರ ಕೈ ಮೇಲಾಗಿ ಪೊಲೀಸರು ಕಾಲು ಕಿತ್ತರು. ಈಗ ಸೈನ್ಯದ ಸರತಿ. ಆದರೆ ಸೈನ್ಯ ಜನರ ವಿರುದ್ಧ ಗುಂಡು ಹಾರಿಸಲಿಲ್ಲ. ಚೀನಾದ ತಿಯಾನನ್ಮೆನ್ ಚೌಕದಲ್ಲಿ ನಡೆದ ರಕ್ತದೋಕುಳಿ ಇಲ್ಲ ಮರುಕಳಿಸಲಿಲ್ಲ. ೩೦ ವರ್ಷಗಳ ಕಾಲ ಅಧಿಕಾರದಲ್ಲಿರುವ ಮುಬಾರಕ್ ಗೆ ಈ ಜನ ವಿರೋಧವನ್ನೂ ಯಾವ ರೀತಿಯಲ್ಲಿ ಹತ್ತಿಕ್ಕಬೇಕು ಎಂದು ಯಾರೂ ಪಾಠ ಹೇಳಬೇಕಿರಲಿಲ್ಲ. ರಾತ್ರಿ ಹೊತ್ತು ಜೈಲಿನಲ್ಲಿದ್ದ ಕೈದಿಗಳನ್ನು ಬಿಡುಗಡೆ ಮಾಡಿ ಜನರನ್ನು ಲೂಟಿ ಮಾಡಲು ಪರೋಕ್ಷವಾಗಿ ಪ್ರೇರೇಪಿಸಿದ. ಇದನ್ನು ನೋಡಿದವರು ತಿಳಿಯಬೇಕು ಲೂಟಿಕೋರರ, ದಂಗೆಕೋರರ ಗಲಭೆ ಎಂದು. ಹೇಗಿದೆ ಟ್ರಿಕ್ಕು? ಸೌದಿ ಅರೇಬಿಯಾದ ದೊರೆ ಸಹ ಈ ಕ್ರಾಂತಿಯನ್ನು ಟೀಕಿಸಿ ಇದು ಅಲ್ಲಿನ ಪುಂಡರ ಕೃತ್ಯ ಎಂದು ತನ್ನ ಆಪ್ತ ಮಿತ್ರ ಮುಬಾರಕ್ ನ ಪರವಾಗಿ ಹೇಳಿಕೆ ನೀಡಿದರು. ಅದಕ್ಕೆ ಅಲ್ಲಿನ ಜನ ಕೊಟ್ಟ ಉತ್ತರ, ದೊರೆಗಳೇ, ತಾವು ಒಂದು ದಿನಕ್ಕೆ ೨ ಡಾಲರ್ ದುಡಿಮೆಯಲ್ಲಿ ದಿನ ಕಳೆಯಿರಿ ಆಗ ತಿಳಿಯುತ್ತದೆ ನಮ್ಮ ಕಷ್ಟ ಎಂದು. ಈಜಿಪ್ಟ್ ನ ಶೇಕಡಾ ೪೦ ರಶ್ಟು ಜನ ೨ ಡಾಲರ್ ಗಿಂತ ಕಡಿಮೆ ದುಡಿಯುತ್ತಾರಂತೆ. ನಿರೋದ್ಯೋಗ ಮುಗಿಲು ಮುಟ್ಟಿದ್ದು ಜನ ಹೇಗೂ ಬೀದಿ ಪಾಲಾಗಿದ್ದರು, ಅದರೊಂದಿಗೆ ಒಂದಿಷ್ಟು ಘೋಷಣೆಗಳನ್ನು ಕೂಗಿ, ಇಟ್ಟಿಗೆ ತುಂಡುಗಳನ್ನು ಪೊಲೀಸರ ಕಡೆ ಬೀಸಿ ಒಗೆದಾಗ ಹುಟ್ಟಿಕೊಂಡಿತು ಜನ ಕ್ರಾಂತಿ. ದಿನವೂ ಜನರು ಈಜಿಪ್ಟ್ ನ ರಾಜಧಾನಿ ಕೈರೋ ನಗರದ “ತೆಹ್ರೀರ್” ಚೌಕದಲ್ಲಿ ಸೇರಲು ತೊಅಗಿದರು. ಕೆಲವರಂತೂ ಟೆಂಟು ಗಳನ್ನು ಹಾಕಿ ಕೊಂಡು ಅಲ್ಲೇ ವಾಸಿಸುತ್ತಿದ್ದರು. ತಾತ್ಕಾಲಿಕ ಆಸ್ಪತ್ರೆಗಳೂ, ಔಷಧದಂಗಡಿ ಗಳೂ ತೆರೆದು ಕೊಂಡವು ಪ್ರತಿಭಟನಾಕಾರರ ಅವಶ್ಯಕತೆ ಪೂರೈಸಲು. ಇದನ್ನೆಲ್ಲಾ ನೋಡುತ್ತಿದ್ದ ಮುಬಾರಕ್ ಸಮಯ ತನ್ನ ಸಹಾಯಕ್ಕೆ ಬರಬಹುದು ಎಂದು ಲೆಕ್ಕ ಹಾಕುತ್ತಿದ್ದ. ಮುಬಾರಕ್ ಠಕ್ಕ ಮಾತ್ರವಲ್ಲ ಜಾಣ ನರಿಯೂ ಕೂಡಾ. ಎಷ್ಟಿದ್ದರೂ ರಾಜಕಾರಣಿಯಲ್ಲವೇ. ರಾಜಕಾರಣದ ಜೊತೆಗೇ ತಾನು ಸೇವೆ ಸಲ್ಲಿಸುತ್ತಿದ್ದ ಸೈನ್ಯದ ಕಾಠಿಣ್ಯ ಸಹ ಅವನಿಗೆ ಬಳುವಳಿಯಾಗಿ ಬಂದಿತ್ತು. ವಾಯುಸೇನೆಯ ನಿವೃತ್ತ ಫೈಟರ್ ಪೈಲಟ್ ಮುಬಾರಕ್. ವಿವಿಧ ಕ್ಷೇತ್ರಗಳಲ್ಲಿ ತಾನು ಕಲಿತ ವಿದ್ಯೆಯನ್ನು ದುಡಿಸಿ ಕೊಳ್ಳಲು ನೋಡಿದ. ಊಹೂಂ. ಜನ ಮೊಂಡು. ಕ್ರಾಂತಿಯ ಮೊದಲ ದಿನಗಳಲ್ಲಿ ಅವರ ಬೇಡಿಕೆ ಸರಳವಾಗಿತ್ತು. ನೀನು ತೊಲಗಿದರೆ ಸಾಕು, ಬೇರೇನೂ ಬೇಡ ಎಂದು. ದಿನ ಗಳೆದಂತೆ, ಹೊಸ ಹೊಸ ಸೂರ್ಯನ ಕಿರಣಗಳು ಚೌಕದ ಮೇಲೆ ಬೀಳುತ್ತಿದ್ದಂತೆ ತಲೆಯಲ್ಲಿ ಹೊಸ ಹೊಸ ವಿಚಾರಗಳು ಹುಟ್ಟಿಕೊಂಡವು. ಸಂವಿಧಾನ ಬದಲಿಸಬೇಕು, ನಿನ್ನ ಸಂಗಾತಿಗಳು ಉತ್ತರಾಧಿಕಾರಿ ಆಗಬಾರದು, ನೀನು ತೊಲಗಿದರೆ ಮಾತ್ರ ಸಾಲದು, ಕಟಕಟೆಯ ಹಿಂದೆ ನಿಂತು ಆಡಳಿತ ದುರುಪಯೋಗದ ಮತ್ತು ಖಜಾನೆ ಲೂಟಿಯ ಬಗ್ಗೆ ಉತ್ತರ ಕೊಡಬೇಕು ಎಂದು ದೊಡ್ಡ ಪಟ್ಟಿ ಮಾಡಿದರು. ಯಾವುದೇ ಪರಿಣಾಮ ಕಾಣದಾದಾಗ ಆಡಳಿತಾರೂಢ ಪಕ್ಷದ ಕೇಂದ್ರ ಕಛೇರಿಯನ್ನು ಜನ ಅಗ್ನಿಗೆ ಅರ್ಪಿಸಿದಾಗ ಭಯಬಿದ್ದ ಮುಬಾರಕ್ ಜನರನ್ನುದ್ದೇಶಿಸಿ ಮಾತನಾಡಿ ಎಲ್ಲ ರೀತಿಯ ಆಶ್ವಾಸನೆಗಳನ್ನು ಜನರಿಗೆ ನೀಡಲು ತೊಡಗಿದ. ಅವನ ಬತ್ತಳಿಕೆಯಲ್ಲಿನ ಬಾಣಗಳು ಖಾಲಿಯಾದವೇ ಹೊರತು ಜನರ ಬೇಡಿಕೆ ಮಾತ್ರ ಸ್ಪಷ್ಟವಾಗಿತ್ತು. Mubarak, we hate you.

೧೧.೨.೨೦೧೧ ಶುಕ್ರವಾರ. ಶುಭ ಶುಕ್ರವಾರ ಈಜಿಪ್ಷ್ಯನ್ನರಿಗೆ. ಗುರುವಾರ ರಾತ್ರಿಯಷ್ಟೇ ನಾನು ರಾಜೀನಾಮೆ ನೀಡಲಾರೆ ಎಂದು ಹಠ ಹಿಡಿದಿದ್ದ ಮುಬಾರಕ್ ಕೊನೆಗೂ ಶರಣಾದ ಜನರ ಬೇಡಿಕೆಗಳಿಗೆ, ಭಾವನೆಗಳಿಗೆ.

೨೫.೧.೨೦೧೧ ಕ್ಕೆ ಆರಂಭವಾದ ಈಜಿಪ್ಟ್ ಕ್ರಾಂತಿ ಪರ್ವಯವಸಾನ ಕಂಡಿದ್ದು ಹೀಗೆ. ಜನರ ಆಸೆಗಳಿಗೆ, ಆಕಾಂಕ್ಷೆಗಳಿಗೆ ಸ್ಪಂದಿಸದ ಎಂಥದ್ದೇ ದೊಡ್ಡ ಸರ್ವಾಧಿಕಾರಿಯೂ ಹೆಚ್ಚು ದಿನ ಆಳಲಾರ. ದೀರ್ಘಾವಧಿ ಅಧಿಕಾರದ ಗದ್ದುಗೆ ಮೇಲೆ ಕೂತ ವ್ಯಕ್ತಿ ಶುದ್ಧ ಸೋಮಾರಿಯಾಗಿ ಬಿಡುತ್ತಾನೆ. ಕಿವುಡೂ ತನ್ನನ್ನು ಸುತ್ತುವರೆದುಕೊಳ್ಳುತ್ತದೆ. ಮಧ್ಯ ಪ್ರಾಚ್ಯದಲ್ಲಿ ಇಂಥ ಸೋಮಾರಿಗಳ ದೊಡ್ಡ ದಂಡೇ ಇದೆ. ಬಹುಶಃ ತುನೀಸಿಯಾದ ಮತ್ತು ಈಜಿಪ್ಟ್ ನ ಬೀದಿಗಳು ಅವರಿಗೆ ಪಾಠಗಳಾಗ ಬಹುದು. ಈ ಕ್ರಾಂತಿಗಳಿಂದ ಮೈಮುರಿಯುತ್ತಾ ಏಳುತ್ತಿರುವ ಸಿರಿಯಾ, ಜೋರ್ಡನ್, ಯೆಮನ್ ದೇಶಗಳು ಈಗಾಗಲೇ ಜನರಿಗೆ ರಿಯಾಯಿತಿ ನೀಡಲು ಆರಂಭಿಸಿವೆ. ಈ ಕ್ರಾಂತಿಯ ವೇಳೆ ಸೌದಿ ದೊರೆ ಬೆನ್ನು ನೋವಿನಿಂದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದು ಮೊರೋಕ್ಕೋ ದೇಶದ ತನ್ನ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆತಂಕದಿಂದ ದೊರೆ ಮರಳಿ ತನ್ನ ದೇಶಕ್ಕೆ ಧಾವಿಸಿ ಬರಬಹುದು ಎಂದು ಇಲ್ಲಿ ಜನ ತಿಳಿದಿದ್ದರು. ಆದರೆ ಇಲ್ಲಿನ ದೊರೆಯ ಕಾರ್ಯಶೈಲಿ ಸ್ವಲ್ಪ ಭಿನ್ನ, ಮುಬಾರಕ್ ನಂಥವರಿಗಿಂತ. ದೇಶದ ಸಂಪತ್ತನ್ನು ದೋಚಿಕೊಂಡು ಜನರಿಗೆ ಏನನ್ನೂ ಮಾಡದೆ ಕೂತು ಬಿಡುವುದಿಲ್ಲ. ತನ್ನ ಜನರಿಗೂ ಒಂದಿಷ್ಟು ಒಳಿತನ್ನೇ ಮಾಡುತ್ತಾರೆ. ಈ ಕ್ರಾಂತಿಗಳ ನಂತರ ಸೌದಿಯಲ್ಲಿಯೂ ಸಹ ಜನರ ಮನೆ ಸಾಲವನ್ನು ಸರಕಾರ ಮನ್ನಾ ಮಾಡಿದೆ. ಇನ್ನೂ ಕೆಲವು sop ಗಳು ಬರಲಿವೆ ಎಂದು ಜನ ಜೊಳ್ಳು ಸುರಿಸುತ್ತಾ ಕಾಯುತ್ತಿದ್ದಾರೆ. ಇದ್ಯಾವುದೂ ಸಾಲದು ಎಂದೇನಾದರೂ ಜನ ಗೊಣಗುವ ಯತ್ನ ನಡೆಸಿದರೆ ಸದೆ ಬಡಿಯಲು ಧಾರ್ಮಿಕ ಗುರುಗಳನ್ನು ಬಳಸಿಕೊಳ್ಳುತ್ತಾರೆ. ಶ್ರದ್ಧಾವಂತ ಸೌದಿ ಜನತೆ ಇಲ್ಲಿನ ಪುರೋಹಿತ ಶಾಹಿಗಳಿಗೆ ಹೆದರುತ್ತಾರೆ, ಪುರೋಹಿತಶಾಹಿಗಳು ಸರಕಾರೀ ಆಶ್ರಯದಲ್ಲಿ ತಮಗೆ ಬೇಕಾದನ್ನು ಪಡೆದು ನಿಷ್ಠೆಯ ಬಾಡಿಗೆ ವಸೂಲು ಮಾಡುತ್ತಾರೆ. demand and supply policy.

ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಶೀತವಾದರೆ ಮೊದಲು ಸೀನುವುದು ಅಮೆರಿಕ ಎನ್ನುವ ವಿಚಾರ ಎಲ್ಲರಿಗೂ ತಿಳಿದದ್ದೇ. ಕ್ರಾಂತಿಯ ಮೊದ ಮೊದಲ ದಿನಗಳಲ್ಲಿ ದೊಡ್ಡ ರೀತಿಯ ಸುದ್ದಿ ಮಾಡದೆ ಮೌನವಾಗಿ ನೋಡಿದ ಅಮೇರಿಕಾ ಕೆಮ್ಮಲು ಆರಂಭಿಸಿತು. ಕೆಮ್ಮು ಜನರ ಪರವಾಗಿರಲಿಲ್ಲ. ಮುಬಾರಾಕ್ ಪರವಾಗಿತ್ತು. ಪ್ರತಿಭಟನೆ ಜೋರಾದಾಗ ವಿಚಲಿತವಾದ ಅಮೇರಿಕಾ ಹೇಳಿದ್ದು ನಮಗೆ ಈಜಿಪ್ಟ್ ಶಾಂತವಾಗಿರುವುದು ಬಹು ಮುಖ್ಯ, ಅಲ್ಲಿನ ಸರಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು. ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ನೀಡಿದ ಅರ್ಧ ಡಜನ್ ಗೂ ಹೆಚ್ಚು ಪತ್ರಿಕಾ ಹೇಳಿಕೆಗಳಲ್ಲಿ ಎಲ್ಲಿಯೂ ಮುಬಾರಕ್ ನ ರಾಜೀನಾಮೆ ಕೇಳಲಿಲ್ಲ. ಅಮೆರಿಕೆಗೆ ಮುಬಾರಕ್ ಬೇಕು. ಇಲ್ಲದಿದ್ದರೆ ಅಮೇರಿಕಾ ಮತ್ತು ಇತರೆ ದೇಶಗಳು ಹೆದರುವ muslim brotherhood ಎನ್ನುವ ಸಂಘಟನೆ ಅಧಿಕಾರಕ್ಕೆ ಬರುವ ಅಪಾಯ ವಿದ್ದು ಈ ಸಂಘಟನೆಯನ್ನು ಮುಬಾರಕ್ ಹದ್ದುಬಸ್ತಿನಲ್ಲಿ ಇಟ್ಟಿದ್ದ. ಪ್ರತಿಭಟನಾಕಾರರಲ್ಲಿ ಗಡ್ಡ ಬಿಟ್ಟವರ ಸಂಖ್ಯೆ ಹೆಚ್ಚಿತ್ತೋ ಎಂದು ಅಮೆರಿಕೆಯ ಮಾಧ್ಯಮಗಳು ದುರ್ಬೀನಿಟ್ಟು ನೋಡಿದವು ತಹ್ರೀರ್ ಚೌಕದ ಸುತ್ತ. ಶಕ್ತಿಶಾಲಿ ಅಮೇರಿಕಾ ಶತ್ರುವಿನ ಅತ್ಯಾಧುನಿಕ ಕ್ಷಿಪಣಿಗಳನ್ನೂ, ಯುದ್ಧ ನೌಕೆಗಳನ್ನೂ, ಸಮರ ಟ್ಯಾಂಕುಗಳನ್ನೂ ಬಹು ಸಲೀಸಾಗಿ ನಿಭಾಯಿಸಬಲ್ಲುದು. ಆದರೆ ಗಡ್ಡವನ್ನು ಕಂಡರೆ ಮಾತ್ರ ಕರುಳಿಗೆ ಚಳಿ ಹಿಡಿಯುತ್ತದೆ. muslim brotherhood ತನಗೆ ರಾಜಕೀಯದಲ್ಲಿ ವಿಶೇಷವಾದ ಆಸಕ್ತಿಯಿಲ್ಲ ಎನ್ನುವ ಹೇಳಿಕೆ ನೀಡಿದರೂ “hidden agenda” ಇಟ್ಟುಕೊಂಡು ಕೆಲಸ ಮಾಡುವ ಸಂಘಟನೆಗಳನ್ನು ನಂಬುವುದು ಕಷ್ಟದ ಮಾತೇ.

ಈಜಿಪ್ಟ್ ಶನಿವಾರದಿಂದ ಒಂದು ಹೊಸ ಸೂರ್ಯನನ್ನು ಸ್ವಾಗತಿಸಲಿದೆ. ಹೊಸ ಸ್ವಾತಂತ್ರ್ಯ, ಹೊಸ ಸಂಭ್ರಮ. ಎರಡು ವಾರಗಳ ಬೀದಿ ಹೋರಾಟ ಒಂದು ಹೊಸ ಅಧಾಯವನ್ನು ಆರಂಭಿಸಲು ಸಹಾಯ ಮಾಡಿದೆ. ಸಾಮಾಜಿಕ ವೆಬ್ ತಾಣಗಳ (twitter, facebook) ಮೂಲಕ ಯುವಜನ ಆರಂಭಿಸಿದ ನವಯುಗದ ಹೋರಾಟ ಫಲ ನೀಡಿದೆ. ಈ ಹೋರಾಟದಲ್ಲಿ ಯಾರ್ಯಾರು ಪಾಠ ಕಲಿಯಲಿದ್ದಾರೆ ಎಂದು ಕಾಲವೇ ಉತ್ತರ ಹೇಳಲಿದೆ.

ಚಿತ್ರ: ಅಲ್-ಜಜೀರ

Switzerland. ಭೂಮಿಯ ಮೇಲಿನ ಸ್ವರ್ಗ

Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿ, swiss army knife, ವಿಶ್ವ ಪ್ರಸಿದ್ಧ Lindt chocolate, ಬೆಲೆಬಾಳುವ ವಾಚುಗಳ ಉತ್ಪಾದನೆ, ಮತ್ತು ವಿಶ್ವ ರಾಜಕಾರಣದಲ್ಲಿ ಯಾರ ಗೊಡವೆಗೂ ಹೋಗದೆ ತಟಸ್ಥ ನೀತಿ ಅನುಸರಿಸುವ ಒಂದು ಪುಟ್ಟ, ಅತಿ ಶ್ರೀಮಂತ ದೇಶ ಸ್ವಿಟ್ಜರ್ ಲ್ಯಾಂಡ್. ಇದು ನಮ್ಮ ಮುಗ್ಧ  ತಿಳಿವಳಿಕೆ ಈ ಪುಟ್ಟ ದೇಶದ ಬಗ್ಗೆ. 

ಆದರೆ ತನ್ನ ಸುತ್ತಲೂ ಶುಭ್ರ, ಮಂಜಿನ ಪರ್ವತವನ್ನೇ ಇಟ್ಟುಕೊಂಡ ಈ ಪುಟ್ಟ ದೇಶ ತನ್ನ ಒಡಲೊಳಗೆ ಇಟ್ಟುಕೊಂಡಿರುವುದು, ಶ್ರೀಮಂತವಾಗಿರುವುದು ಪಾಪದ ಹಣದ ಸಹಾಯದಿಂದ ಎಂದು ಹೇಳಿದರೆ ಹೌಹಾರುವಿರಾ?  

ವಿಶ್ವದ ಎಲ್ಲಾ ಭ್ರಷ್ಟ ರಾಜಕಾರಣಿ, ಅಧಿಕಾರಿ, ಕೈಗಾರಿಕೋದ್ಯಮಿ, ಕಳ್ಳ ಸಾಗಣೆದಾರ, ಮಾದಕ ದ್ರವ್ಯದ ವ್ಯಾಪಾರಿ ಹೀಗೆ ಹತ್ತು ಹಲವು ವರ್ಣರಂಜಿತ ವ್ಯಕ್ತಿತ್ವಗಳು ಲೂಟಿಗೈದ ಹಣವನ್ನು ಬಚ್ಚಿಡಲು ಆರಿಸಿಕೊಂಡ ತಾಣವೇ ಸ್ವಿಟ್ಜರ್ ಲ್ಯಾಂಡ್. ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ಇಟಲಿ ದೇಶಗಳಿಂದ ಸುತ್ತುವರೆದ ಸ್ವಿಸ್ಸ್, ಒಳ್ಳೆ ಬೆಚ್ಚಿಗಿನ ದೇಶ ಲೂಟಿ ಕೋರರಿಗೆ, ಪುಂಡರಿಗೆ. ಇದಕ್ಕಿಂತ ಬೆಚ್ಚಗಿನ, ರಹಸ್ಯ ಸ್ಥಳ ಬೇರೆಲ್ಲಿ ಸಿಗಲು ಸಾಧ್ಯ ಕಳ್ಳ ಧನವನ್ನು ಬಚ್ಚಿಡಲು, ಅಲ್ಲವೇ?   

ಭಾರತೀಯರು ಕೋಟಿಗಟ್ಟಲೆ ತೆರಿಗೆ ವಂಚಿಸಿದ, ನಮ್ಮ ಸಂಪನ್ಮೂಲ ಕದ್ದ, ಲಂಚದ ಮೂಲಕ ಗಳಿಸಿದ ಪಾಪದ ಹಣವನ್ನೂ ಸ್ವಿಸ್ ರೀತಿಯದೇ ಆದ Liechtenstein (ಲೀಚ್ಟೆನ್ ಸ್ಟೈನ್, ಯೂರೋಪ್ ನ ಮತ್ತೊಂದು ಮೈಕ್ರೋ ಸ್ಕೋಪಿಕ್ ದೇಶ )  ಬ್ಯಾಂಕ್ ನಲ್ಲಿ ಹೂತು ಹಾಕಿರುವುದನ್ನು ತೆಹೆಲ್ಕಾ ಬಯಲಿಗೆ ಹಾಕಿದೆ. ಸುಮಾರು ಹದಿನೈದು ಜನರ ಹೆಸರನ್ನು ಬಹಿರಂಗ ಗೊಳಿಸಿರುವ ತೆಹೆಲ್ಕಾ ಬರುವ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಹೊರಗೆಡವಲಿದೆ.  

ಸ್ವಿಸ್ ದೇಶದಲ್ಲಿ ಅಕ್ರಮವಾಗಿ ಧನ ಗುಡ್ಡೆ ಹಾಕಿರುವ ಜನರ ಹೆಸರುಗಳನ್ನು ಅಲ್ಲಿನ ಬ್ಯಾಂಕುಗಳು ಬಹಿರಂಗ ಪಡಿಸಬೇಕು. ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದೂ ಅಲ್ಲದೆ ಲೂಟಿಗೈದ ಸಂಪತ್ತಿಗೆ ತೆರಿಗೆಯನ್ನೂ ಕಟ್ಟದೆ ದುರಹಂಕಾರದಿಂದ ಮೆರೆಯುವ, ಶ್ರೀಮಂತರು ತಾವು ತಿಂದಿದ್ದನ್ನು ಕಕ್ಕಬೇಕು. ದೇಶದಲ್ಲಿ ಆಗಾಗ ಹೊರಬೀಳುತ್ತಿರುವ ಪ್ರತೀ ಹಗರಣದ ಹಿಂದೆಯೂ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿಯ ಮಾಹಿತಿ ಇದ್ದೂ ನಾವು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.  ಅದರ ಮೇಲೆ ಭಾರತ ಬಡ ದೇಶ ಎನ್ನುವ ಪಟ್ಟ ಬೇರೆ.  ಹೆಚ್ಚು ಎಂದರೆ ಅವನು ರಾಜಕಾರಣಿಯಾದರೆ ರಾಜೀನಾಮೆ ನೀಡಬಹುದು ಅಷ್ಟೇ. ರಾಜೀನಾಮೆ ನಂತರ ತಾನು ಕಬಳಿಸಿದ ಸಂಪತ್ತನ್ನು ಜೀವನ ಪೂರ್ತಿ ತಾನು ತನ್ನ ಮಕ್ಕಳು ತಿನ್ನಬಹುದು. ಜನರ ಮನ್ನಣೆಯನ್ನೂ ಗಳಿಸಿಕೊಳ್ಳಬಹುದು. ಇಂಥ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಒಳಗೊಂಡ ಹಗರಣಗಳನ್ನು ನೋಡಿದಾಗ ನಮಗನ್ನಿಸದೆ ಇರುತ್ತದೆಯೇ ನಮ್ಮ ದೇಶ ನಾವೆಣಿಸಿದಂತೆ ಬಡ ದೇಶವಲ್ಲ ಎಂದು?  

ತನ್ನ ಸ್ವ- ರಕ್ಷಣೆಗಾಗಿ ಅಥವಾ ಇಂಧನದ ಅವಶ್ಯಕತೆಗಾಗಿ ಅಣು ಸ್ಥಾವರಗಳನ್ನು ನಿರ್ಮಿಸಿದ್ದಕ್ಕೆ ಇರಾನಿನ ಮೇಲೆ ಹರಿ ಹಾಯುವ ಪಾಶ್ಚಾತ್ಯ ದೇಶಗಳು ಸ್ವಿಸ್ ತೆರನಾದ ಮೋಸದ ಜಾಲದ ಬಗ್ಗೆ ಮಾತ್ರ ಮೌನ ತಾಳಿರುವುದು  ಆಷಾಢ ಭೂತಿತನದ ಪರಮಾವಧಿ. ಕೊಳಕು ಹಣವನ್ನು ಒಡಲಲ್ಲಿಟ್ಟುಕೊಂಡು ವಿಶ್ವಕ್ಕೆ ತಾನು ಸಭ್ಯಸ್ಥ ಎಂದು ತೋರಿಸುವ ಸ್ವಿಸ್ ಪರಿಪಾಠ ಹೇಸಿಗೆ ಹುಟ್ಟಿಸುವಂಥದ್ದು. ಮೋಸದ, ಲಂಚದ ಹಣವನ್ನು ರಹಸ್ಯವಾಗಿ,  ಜೋಪಾನವಾಗಿರಿಸಿ ಬಡ ದೇಶಗಳಲ್ಲಿರುವ ಲಂಚಗುಳಿತನದ ಬಗ್ಗೆ ಮರುಕ ತೋರುತ್ತಾ ತಾನು ವಿಶ್ವದಲ್ಲಿ ಲಂಚ ರಹಿತ ದೇಶ ಎಂದು ತೋರಿಸಿಕೊಳ್ಳುವ ದೇಶದ ಬಗ್ಗೆ ಏನೆನ್ನಬೇಕೋ ತಿಳಿಯದು. ಬ್ಯಾಂಕಿಂಗ್ ಗೌಪ್ಯವನ್ನು ಕಾಪಾಡಲು ಸ್ವಿಟ್ಜರ್ ಲ್ಯಾಂಡ್ ನ ೭೩ % ಜನ ರ ಬೆಂಬಲವಿದೆಯಂತೆ. ಇಲ್ಲದೆ ಏನು, ಈ ಕಳ್ಳ ಹಣದ ನೆರವಿನಿಂದಲೇ ಅಲ್ಲವೇ ಅವರ ಬಾಳು ಬೆಳಗುತ್ತಿರುವುದು.

ಭಯೋತ್ಪಾದಕರು ಯಾವುದಾದರೂ ದೇಶದಲ್ಲಿ ಅಡಗಿ ಕೂತರೆ ಅವರನ್ನು ಹೊಗೆ ಹಾಕಿ ಹೊರಕ್ಕೆಳೆಯುವ ಅಮೆರಿಕೆಯಾಗಲಿ, ಅಥವಾ ಇನ್ಯಾವುದೇ ದೇಶವಾಗಲೀ ಸ್ವಿಸ್ ಬ್ಯಾಂಕುಗಳಲ್ಲಿ ಬಡ ದೇಶಗಳ ಧನ ಲೂಟಿ ಮಾಡಿ ಕಲೆಹಾಕಿದ್ದಕ್ಕೆ ಸ್ವಿಸ್ ದೇಶವನ್ನು ದಂಡಿಸಲು ಸಾಧ್ಯವೇ? ಭಯೋತ್ಪಾದಕ ಕೃತ್ಯದಲ್ಲಿ ಒಬ್ಬ ಭಾಗಿಯಾಗಿಲ್ಲದಿದ್ದರೂ ಓರ್ವ  ಭಯೋತ್ಪಾದಕನಿಗೆ ಆಶ್ರಯ ನೀಡುವುದೂ ಭಯೋತ್ಪಾದನೆಗೆ ಸಹಕರಿಸಿದ್ದಂತೆ. ಈ ಮಾನದಂಡವನ್ನು ಸ್ವಿಸ್ ನಂಥ ದೇಶಗಳ ಮೇಲೆ ಏಕೆ ಉಪಯೋಗಿಸಬಾರದು?  ಲೂಟಿ ಮಾಡಿದವ ಮಾತ್ರ ಕಳ್ಳನಲ್ಲ, ಅವನ ಲೂಟಿಯನ್ನು ಜಾಗರೂಕತೆಯಿಂದ ಕಾಯುವುದೂ ಠಕ್ಕತನವೇ.  

ಸ್ವಿಸ್ ದೇಶದ ಗಿರಾಕಿಗಳಲ್ಲಿ ಬರೀ ಲಂಚ ತಿನ್ನುವ ರಾಜಕಾರಣಿಗಳು ಮಾತ್ರವಲ್ಲ. ಮೆಕ್ಸಿಕೋ ದೇಶದ ಮಾದಕ ದ್ರವ್ಯ ಮಾರುವ ದೊರೆಗಳು ಸಹ ಇಲ್ಲಿ ಹಣ ಅಡಗಿಸಿಡುತ್ತಾರೆ. ಅಂದರೆ ಪ್ರಪಂಚವನ್ನು ಕಾಡುತ್ತಿರುವ ಎಲ್ಲ ರೀತಿಯ ಪೀಡೆಗಳಿಗೆ ಸ್ವಿಸ್ ನೇರ ಹೊಣೆ ಎಂದರೆ ತಪ್ಪಾಗಬಹುದೇ?

ನೈಜೀರಿಯಾದ ಸಾನಿ ಅಬಾಚ, ಕೀನ್ಯಾದ ಡೇನಿಯಲ್ ಅರಪ್ ಮೊಯ್, ಫಿಲಿಪ್ಪಿನ್ಸ್ ದೇಶದ ಮಾರ್ಕೋಸ್, ನೆರೆಯ ಪಾಕಿಸ್ತಾನದ ಭುಟ್ಟೋ ಪರಿವಾರ, ಇಂಥ ಸರ್ವಾಧಿಕಾರಿಗಳು ಮತ್ತು ಭ್ರಷ್ಟರು ಸ್ವಿಸ್ ದೇಶದ ಮಿತ್ರರುಗಳು. ಆಂಗ್ಲ ಭಾಷೆಯಲ್ಲಿನ ಗಾದೆ; A person is known by the company he keeps.   

ವಿಶ್ವ ಸಮುದಾಯದಲ್ಲಿ ಸ್ವಿಸ್ ತಟಸ್ಥ ದೇಶವಾದರೆ ಮಾತ್ರ ಸಾಲದು, ಒಂದು ಜವಾಬ್ದಾರಿಯುತ ದೇಶವಾಗಿ ವಿಶ್ವದ ಬಡಜನರ, ಹತಾಶೆಗೂ ಸಹ ಸ್ಪಂದಿಸಬೇಕಾದ್ದು ಅತ್ಯಗತ್ಯ. ಬಡದೇಶಗಳ ಸಂಪತ್ತನ್ನು ಲೂಟಿ ಮಾಡಿದ ನಾಯಕರುಗಳ ಬ್ಯಾಂಕ್ ಖಾತೆಯನ್ನು ರಹಸ್ಯವಾಗಿರಿಸಿ ತನ್ಮೂಲಕ ಹಗಲು ದರೋಡೆಗೆ ಪರೋಕ್ಷ ಸಹಾಯ ನೀಡುತ್ತಿರುವ ಸ್ವಿಸ್ ಒಂದು ಪರಾವಲಂಬಿ ದೇಶ ಎನ್ನುವ ಬಿರುದು ಕಟ್ಟಿಕೊಂಡು ಬದುಕುವುದು ಬೇಡ. ಶೀತಲ ವಾತಾವರಣದ ಜನರ ಭಾವನೆಗಳು ಶೀತಲವಾಗಿಬಿಟ್ಟರೆ ಆಗುವ ಅನಾಹುತಕ್ಕೆ ಸ್ವಿಸ್ಸ್ ದೇಶವೇ ಸಾಕ್ಷಿಯೇನೋ? ಹಸಿವು, ರೋಗ, ಕುಡಿಯುವ ಸ್ವಚ್ಚ ನೀರಿನ ಅಭಾವ, ರಸ್ತೆ, ಆಸ್ಪತ್ರೆ, ಶಾಲೆಗಳ ತೀವ್ರ ಕೊರತೆ ಮುಂತಾದ ನೂರೊಂದು ಸಾಮಾಜಿಕ ಸಮಸ್ಯೆಗಳಿಂದ ಬಡ ದೇಶಗಳ ಜನ ಬಳಲುತ್ತಿದ್ದರೆ ತನ್ನ ತಿಜೋರಿಯನ್ನು ಪಾಪದ ಹಣದಿಂದ ಅಲಂಕರಿಸುವುದು ಬೇಡ. 

 ಬಡ ರಾಷ್ಟ್ರಗಳು ತಮ್ಮ ದೇಶದಿಂದ ಹೊರ ಹೋದ ಹಣಕ್ಕಾಗಿ ಸ್ವಿಸ್ ದೇಶವನ್ನು ಸಂಪರ್ಕಿಸಿದಾಗ ಕಾನೂನು ತೊಡಕುಗಳನ್ನು ಕಾರಣವಾಗಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ಕೊಡದೆ ವರ್ಷಗಟ್ಟಲೆ ಕಾಯಿಸಿದರು. ಈ ಅವಧಿಯಲ್ಲಿ ಈ ಬಡ ರಾಷ್ಟ್ರಗಳಲ್ಲಿ ಹೊಟ್ಟೆಗಿಲ್ಲದೆ, ಔಷಧಿ ಇಲ್ಲದೆ ಸತ್ತ ಜನರ ಸಂಖ್ಯೆ ಅದೆಷ್ಟೋ ದೇವರೇ ಬಲ್ಲ. ತನ್ನ ಪ್ರಜೆಗಳು ಕೊಬ್ಬು ತುಂಬಿದ ಸ್ಟೇಕ್ ತಿನ್ನುತ್ತಾ ವೈನು, ಬೀರು ಸವಿಯುತ್ತಿದ್ದರೆ ಬಡ ದೇಶಗಳ ಬಹುಸಂಖ್ಯಾತ ಜನ ಒಪ್ಪೊತ್ತಿನ ಅನ್ನವಿಲ್ಲದೆ ನರಳುವ ದೃಶ್ಯ ವಿಶ್ವದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ನಮ್ಮ ದೇಶದಿಂದ ಸ್ವಿಸ್ ದೇಶಕ್ಕೆ ವಲಸೆ ಹೋದ ಅಗಾಧ ಸಂಪತ್ತು ಮರಳಿ ಬಂದರೆ ಕೆಳಗೆ ತೋರಿಸಿದ ಮಕ್ಕಳ ಅಸಹಾಯಕ ಪರಿಸ್ಥಿತಿ ಸುಧಾರಿಸಲು ನೆರವಾಗಬಹುದು.

ಆರು ವರ್ಷ ಪ್ರಾಯದ ವಿಶಾಲ್ ಒಂದು ಕಪ್ ಚಹಾ ಮತ್ತು ಎರಡು ತುಂಡು ಬಿಸ್ಕಿಟ್ ಒಂದಿಗೆ ತನ್ನ ದಿನವನ್ನು ಆರಂಭಿಸುತ್ತಾನೆ. ಬಡ ಮಕ್ಕಳಿಗೆ ಪುಕ್ಕಟೆಯಾಗಿ ಹಂಚುವ ಚಿತ್ರಾನ್ನ ಅವನ ಮಧ್ಯಾಹ್ನದ ಊಟ. ಅದರಲ್ಲಿ ಅರ್ಧ ತಿಂದು ಮತ್ತೊಂದಿಷ್ಟನ್ನು ತೆಗೆದಿಡುತ್ತಾನೆ ಹಸಿದಾಗ ತಿನ್ನಲು. ರಾತ್ರಿ ಹಸಿದಾಗ ಐದು ರೂಪಾಯಿಯ ಕುರ್ಕುರೆ ಕೊಡಿಸುತ್ತಾಳೆ ಅವನ ತಾಯಿ. ಈ ತಿನಿಸುಗಳೇ ಅವನ ಒಂದು ದಿನದ ಆಹಾರ. ಇಷ್ಟು ತಿಂದಾಗ ವಿಶಾಲನಿಗೆ ಸಿಗುವ ಕ್ಯಾಲೋರಿಗಳು ೮೫೬.

ಎರಡು ವರ್ಷದ ಸುರ್ಜ ಕೊಲ್ಕತ್ತಾದ ಕಲ್ಯಾಣಿ ರೈಲ್ವೆ ಸ್ಟೇಶನ್ ನ ಪ್ಲಾಟ್ಫಾರ್ಮ್ ನಾಲ್ಕರಲ್ಲಿ ಮನೆ ಮಾಡಿ ಕೊಂಡಿದ್ದಾನೆ. ಬೆಳಗ್ಗಿನ ತಿಂಡಿಗೆ ಅರ್ಧ ಪೂರಿ. ಮಧ್ಯಾಹ್ನ, ಎರಡು ಹಿಡಿ ಅನ್ನ ಮತ್ತು ಬೇಳೆ ಸಾರು. ರಾತ್ರಿ ಮತ್ತೆರಡು ಹಿಡಿ ಅನ್ನ, ಸಾರು ಅಥವಾ ಒಂದು ರೊಟ್ಟಿ. ಸುರ್ಜ, ಐದು ವರ್ಷಗಳ ತನ್ನ ಅಕ್ಕ, ಮತ್ತು ಕುಷ್ಠ ರೋಗಿ ತಂದೆಯೊಂದಿಗೆ ವಾಸಿಸುತ್ತಾನೆ. ಬೇಡಿ ತಿನ್ನುವುದು ಅವರ ಬದುಕು. ದಿನಕ್ಕೆ ೨೦ – ೨೫ ರೂಪಾಯಿ ದುಡಿಯುತ್ತಾರೆ. ರೈಲು ಪ್ರಯಾಣಿಕರು ತಿಂದು ಉಳಿದುದನ್ನು ಇವರು ತಿಂದು ಬದುಕುತ್ತಾರೆ. ಇವರಿಗೆ ದೊರಕುವ ಕ್ಯಾಲೋರಿ ಹೆಚ್ಚು ಕಡಿಮೆ ವಿಶಾಲನಷ್ಟೇ. ನಮ್ಮ ಹೊಟ್ಟೆ ಬಡಿದ ಪಾಶ್ಚಾತ್ಯ ದೇಶಗಳ ಮಕ್ಕಳು ತಿನ್ನುವ ತಿನಿಸು ಮತ್ತು ಅವರಿಗೆ ಲಭ್ಯವಾಗುವ ಕ್ಯಾಲೋರಿ ಬಗ್ಗೆ ಬರೆಯಬೇಕೆ? ಬೇಡ ಬಿಡಿ, ಅವರಾದರೂ ತಿಂದುಂಡು ಚೆನ್ನಾಗಿರಲಿ.

child, Relief and You (CRY) ನಡೆಸಿದ ಸಮೀಕ್ಷೆಯ ವೇಳೆ ಸಿಕ್ಕಿದ ಚಿತ್ರಣ ಮೇಲಿನದು. CRY ಸಂಸ್ಥೆಗೆ ಸ್ವಿಸ್ ಸೇರಿ ಬಿಳಿಯ ದೇಶಗಳು ಧಾರಾಳವಾಗಿ ದಾನ ಕೊಡುತ್ತಿರಬಹುದು. ನಮ್ಮ ನಾಯಕರುಗಳು ಪೇರಿಸಿಟ್ಟ ಧನದ ಮೇಲೆ ಅವರಿಗೆ ಸಿಗುವ ಬಡ್ಡಿಯ ಒಂದಿಷ್ಟು ಅಂಶ. LET POOR KIDS FROM THIRD WORLD COUNTRIES SURVIVE ಅಂತ ಕನಿಕರದಿಂದ ದಾನ ಮಾಡುತ್ತಾರೆ ಬಿಳಿಯರು.   

“ವಿಶ್ವ ಹಸಿವಿನ ಸೂಚಿ” (world hunger index)  ಪ್ರಕಾರ ವಿಶ್ವದ ಪೌಷ್ಟಿಕಾಂಶ ಕೊರತೆಯಿರುವ ಶೇಕಡಾ ೪೨ ರಷ್ಟಿರುವ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳು ಭಾರತದಲ್ಲಿ ಇದ್ದಾರಂತೆ. India shining? ಕ್ಷಮಿಸಿ india starving ಎಂದಿರಬೇಕಿತ್ತು. india shining ಎಂದು ಹೇಳಿ ನಮಗೆ ಗರಿ ಗರಿಯಾದ ಟೋಪಿ ತೊಡಿಸಲು ಬಂದ ನಮ್ಮ ನಾಯಕರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದು ಹೇಳಿದವರಾರು?

ನನ್ನ ಮನವಿ ಇಷ್ಟೇ. ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯಲು ಹಾಕಿರುವ ಹಣ ನಮ್ಮ ದೇಶಕ್ಕೆ ಹಿಂತಿರುಗಲಿ. ಲೂಟಿ ಮಾಡಿದವರ ಮೇಲೆ ಸೇಡು ಬೇಡ. ಅವು ಆಗುವ ಹೋಗುವ ಕೆಲಸಗಳಲ್ಲ. ಅವರನ್ನು ಕ್ಷಮಿಸೋಣ ಆದರೆ ನಮ್ಮ ಸಂಪತ್ತು ಮಾತ್ರ ರವಾನೆಯಾಗಲಿ ಭಾರತಕ್ಕೆ.

ಪುಟ್ಟ ದೇಶ, ದಿಟ್ಟ ಹೆಜ್ಜೆ

ಟುನೀಸಿಯಾ, ಆಫ್ರಿಕಾ ಖಂಡದ ತುತ್ತ ತುದಿಯಲ್ಲಿ, ಮೆಡಿಟೆರ್ರೆನಿಯನ್ ಸಮುದ್ರದ ತೀರದಲ್ಲಿ ಪ್ರಶಾಂತವಾಗಿ ನಿದ್ರಿಸುವ ಒಂದು ಪುಟ್ಟ ಅರಬ್ ದೇಶ. ಎರಡನೇ ಭಾಷೆ ಫ್ರೆಂಚ್. ಜನಸಂಖ್ಯೆ ಸುಮಾರು ಒಂದು ಕೋಟಿ. ಟುನೀಸಿಯಾದ ಬಗ್ಗೆ ನಾವೇನಾದರೂ ಕೇಳಿದ್ದಿದ್ದರೆ ಅದು ಒಂದು ಪ್ರವಾಸಿ ತಾಣ ಎಂದು ಮಾತ್ರ. ನಮ್ಮ ಗೋವಾ ರೀತಿಯದು.

ದಿನನಿತ್ಯ ದ ಸಾಮಗ್ರಿಗಳ ಬೆಲೆ ವಿಪರೀತ ಏರಿದ್ದು ಮಾತ್ರವಲ್ಲದೆ ನಿರುದ್ಯೋಗ ಸಮಸ್ಯೆಯೂ ಕಿತ್ತು ತಿನ್ನಲು ಆರಂಭಿಸಿದಾಗ ಜನ ಸಿಡಿದೆದ್ದರು ಟುನೀಸಿಯಾದಲ್ಲಿ. ಓರ್ವ ಯುವಕ ಆತ್ಮಹತ್ಯೆ ಮಾಡಿ ಕೊಳ್ಳುವುದರೊಂದಿಗೆ ಪರಿಸ್ಥಿತಿ ಹದಗೆಟ್ಟಿತು. ಅಧ್ಯಕ್ಷ ಜೈನುಲ್ ಆಬಿದೀನ್ ಬಿನ್ ಅಲಿ ತಾನು ಆಳುವ ಜನರ ನಾಡಿಮಿಡಿತ ಅರಿಯಲು ವಿಫಲನಾದ. ಪ್ರತಿಭಟಿಸುತ್ತಿದ್ದ ಜನರನ್ನು ಬಲಪ್ರಯೋಗದ ಮೂಲಕ ಅಡಗಿಸಲು ಯತ್ನಿಸಿದ. ಹತ್ತಾರು ಜನರು ಸತ್ತರು. ಜನ ಜಗ್ಗಲಿಲ್ಲ. ಬೀದಿಗಳಿಂದ ಮನೆಗೆ ಹೋಗಲು ನಿರಾಕರಿಸಿ ಉಗ್ರವಾಗಿ ಪ್ರತಿಭಟಿಸಿದರು. ಭ್ರಷ್ಟ ಲಂಚಗುಳಿ ಅಧ್ಯಕ್ಷನ ಸಂಬಂಧಿಯೊಬ್ಬನನ್ನು ಹಾಡು ಹಗಲೇ ಕೊಲೆ ಮಾಡಿದರು. ಇದನ್ನು ಕಂಡು ಕಂಗಾಲಾದ ಬಿನ್ ಅಲಿ ಕಾಲಿಗೆ ಬುದ್ಧಿ ಹೇಳಿದ. ಫ್ರಾನ್ಸ್ ದೇಶ ಅಭಯ ನೀಡಲು ನಿರಾಕರಿಸಿದಾಗ ಸೌದಿ ಅರೇಬಿಯಾ ಆಶ್ರಯ ನೀಡಿತು. ನೇರವಾಗಿ ಜೆದ್ದಾ ನಗರಕ್ಕೆ ಬಂದ ಬಿನ್ ಅಲಿ. ಉಗಾಂಡಾ ದೇಶದ ಸರ್ವಾಧಿಕಾರಿ ದಿವಂಗತ ಇದಿ ಅಮೀನ್ ಮತ್ತು ಪಾಕಿನ ನವಾಜ್ ಶರೀಫ್ ರಂಥ ಭ್ರಷ್ಟ ಅತಿಥಿ ಗಳಿಗೆ ಆಶ್ರಯ ನೀಡಿದ ಕೆಂಪು ಸಮುದ್ರದ ವಧು, ಜೆಡ್ಡಾ ನಗರ ಬಿನ್ ಅಲಿಯನ್ನೂ ಸ್ವಾಗತಿಸಿತು ತನ್ನ ತೀರಕ್ಕೆ.

ಪ್ರತಿಭಟಿಸುವ ಅಸ್ತ್ರವಾಗಿ ಜೀವವನ್ನು ಕಳೆದು ಕೊಳ್ಳುವುದು ತೀರಾ ಅಪರೂಪ ಮುಸ್ಲಿಂ ಜಗತ್ತಿನಲ್ಲಿ. ಹುಟ್ಟಿಗೆ ಕಾರಣನಾದ ದೇವರೇ ಕಳಿಸಬೇಕು ದೇವದೂತನನ್ನು ಜೀವ ತೆಗೆಯಲು. ಆತ್ಮಹತ್ಯೆ ಮಹಾ ಪಾಪ. ಯಾವುದೇ ಸಮಜಾಯಿಷಿ ಇಲ್ಲ ಜೀವ ಕಳೆದುಕೊಳ್ಳುವ ಕೃತ್ಯಕ್ಕೆ. ಆದರೆ ಮನುಷ್ಯ ಹಸಿದಾಗ, ನಿಸ್ಸಹಾಯಕನಾಗಿ ಗೋಡೆಗೆ ದೂಡಲ್ಪಟ್ಟಾಗ ಧರ್ಮ back seat ತೆಗೆದು ಕೊಳ್ಳುತ್ತದೆ. ಟುನೀಸಿಯಾದಲ್ಲಿ ಆದದ್ದು ಇದೇ. ಬರೀ ಅಧ್ಯಕ್ಷ ಮಾತ್ರ ಭ್ರಷ್ಠನಲ್ಲ. ಈತನ ಮಡದಿ ಸಹ ಮುಂದು ಖಜಾನೆಯ ಲೂಟಿಯಲ್ಲಿ. ಒಂದೂವರೆ ಟನ್ನುಗಳಷ್ಟು ಚಿನ್ನವನ್ನು ತೆಗೆದುಕೊಂಡು ದೇಶ ಬಿಟ್ಟಳು. ಎಲ್ಲಿ ಆಶ್ರಯ ಸಿಕ್ಕಿತು ಎಂದು ಇನ್ನೂ ಗೊತ್ತಿಲ್ಲ. ಜನರ ಹತ್ತಿರ ಕವಡೆಗೆ ಬರ ಬಂದಾಗ ಅಧ್ಯಕ್ಷ, ಅವನ ಪತ್ನಿ, ಅವರಿಬ್ಬರ ಸಂಬಂಧಿಕರು ಐಶಾರಾಮದಿಂದ ಬದುಕುವಾಗ ಸಹಜವಾಗಿಯೇ ಓರ್ವ ನಿಸ್ಸಹಾಯಕ ಯುವಕ ಆತ್ಮಹತ್ಯೆಗೆ ಶರಣಾದ ದಾರಿ ಕಾಣದೆ. ತನ್ನ ಜೀವ ಕಳೆದುಕೊಳ್ಳುವ ಮೂಲಕ ಅರಬ್ ಜಗತ್ತಿನ ಒಂದು ಅಪರೊಪದ ಕ್ರಾಂತಿಗೆ ನಾಂದಿ ಹಾಡಿದ.

೨೩ ವರುಷಗಳ ಕಾಲ ಒಂದೇ ಸಮನೆ ತನ್ನ ದೇಶವವ್ವು ಕೊಳ್ಳೆ ಹೊಡೆದ ಬಿನ್ ಅಲಿ ಪಾಶ್ಚಾತ್ಯ ದೇಶಗಳಿಗೆ ಮಿತ್ರ. ಏಕೆಂದರೆ ಅಲ್ಕೈದಾ ಬಂಟರು ತನ್ನ ದೇಶದಲ್ಲಿ ನೆರೆಯೂರಲು ಈತ ಬಿಡಲಿಲ್ಲ. ಈತ ಬಿಡಲಿಲ್ಲ ಎನ್ನುವುದಕ್ಕಿಂತ ಇಲ್ಲಿನ ಜನ ಶಾಂತಿ ಪ್ರಿಯರು ಎಂದೇ ಹೇಳಬಹುದು. ಬಹುತೇಕ ಅರಬ್ ರಾಷ್ಟ್ರಗಳಲ್ಲಿ ಅಲ್ ಕೈದಾ ದ ಪ್ರಭಾವ ಅಷ್ಟಿಲ್ಲ. ತಮ್ಮ ಆಶಯಗಳಿಗೆ ಅನುಸಾರ ಯಾರಾದರೂ ನಡೆಯುವುದಿದ್ದರೆ ಅಲ್ಲಿ ಪ್ರಜಾಪ್ರಭುತ್ವ, ಸ್ವೇಚ್ಛಾಚಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಎನ್ನುವ ಮಾರುದ್ದದ ಶಾಪ್ಪಿಂಗ್ ಲಿಸ್ಟ್ ಹಿಡಿದು ಕೊಂಡು ಬರುವುದಿಲ್ಲ ಅಮೇರಿಕಾ ಮತ್ತು ಅದರ ಬಾಲಂಗೋಚಿಗಳು. ಪಶ್ಚಿಮದ ಸಮಯಸಾಧಕತನಕ್ಕೆ ಟುನೀಸಿಯಾ ಸಹ ಹೊರತಾಗಲಿಲ್ಲ. ಈ ತೆರನಾದ ಇಬ್ಬಂದಿಯ ನೀತಿಯ ಪರಿಣಾಮವೇ ೨೩ ವರ್ಷಗಳ ಅವ್ಯಾಹತ ದಬ್ಬಾಳಿಕೆ ಬಿನ್ ಅಲಿಯದು.

ಅರಬ್ ರಾಷ್ಟ್ರಗಳಲ್ಲಿ ಟುನೀಸಿಯಾ ರೀತಿಯ ಕ್ರಾಂತಿಗಳು ಅಪರೂಪ. ಉಣ್ಣಲು, ಉಡಲು, ಸಾಕಷ್ಟಿದ್ದು ಸಾಕಷ್ಟು ಸಂಬಳ ಸಿಗುವ ನೌಕರಿ ಇದ್ದರೆ ಬೇರೇನೂ ಕೇಳದವರು ಅರಬರು. ಅರಬ್ಬರ ಈ ನಡವಳಿಕೆ ನೋಡಿಯೇ ಇಲ್ಲಿ ಸರ್ವಾಧಿಕಾರಿಗಳದು ದರ್ಬಾರು. ಊಳಿಗಮಾನ್ಯ ಪದ್ಧತಿಗೆ ಉದಾಹರಣೆಗಾಗಿ ವಿಶ್ವ ಎಲ್ಲೂ ಪರದಾಡ ಬೇಕಿಲ್ಲ. ಕೊಲ್ಲಿ ಕಡೆ ಒಂದು ಪಿಕ್ ನಿಕ್ ಇಟ್ಟುಕೊಂಡರೆ ಸಾಕು. ಈ ಪ್ರಾಂತ್ಯದಲ್ಲಿ ಪ್ರಜಾಪ್ರಭುತ್ವ ಮೊಳಕೆ ಒಡೆಯುವುದು ಕಷ್ಟದ ಕೆಲಸವೇ.

ಮರಳುಗಾಡಿನಲ್ಲಿ ಹಸಿರು ಮೊಳಕೆಯೊಡೆಯಲು ಸಾಧ್ಯವೇ? ಇಲ್ಲಿನ ನಿಸರ್ಗ, ವಾತಾವರಣ, ಜನರ ನಡಾವಳಿ ಎಲ್ಲವೂ ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತ. ಹಾಗಾಗಿ ನಿರಂಕುಶಾಧಿಕಾರಿಗಳ ದೊಡ್ಡ ದಂಡನ್ನೇ ಕಾಣಬಹುದು ಇಲ್ಲಿ. ಆಫ್ರಿಕಾದಲ್ಲೂ, ಏಷ್ಯಾದಲ್ಲೂ ಇರುವ ಸರ್ವಾಧಿಕಾರಿಗಳಿಗೆ ಹೋಲಿಸಿದರೆ ಇಲ್ಲಿನವರು ನಿರ್ದಯಿಗಳಲ್ಲ. ತಾವು ಹೊಡೆದ ಲೂಟಿಯಲ್ಲಿ ಜನರಿಗೂ ಒಂದಿಷ್ಟನ್ನು ಕೊಡುತ್ತಾರೆ. ಕಾರು ಕೊಳ್ಳಲು ಸಾಲ, ಉನ್ನತ ವ್ಯಾಸಂಗಕ್ಕಾಗಿ ಸಾಲ, ಮನೆ ಕಟ್ಟಲು ಸಾಲ, ಕೊನೆಗೆ ಮದುವೆಯಾಗಲೂ ಕೂಡ ಸಾಲ. ಆಹಾ, ಇಷ್ಟೆಲ್ಲಾ ಸವಲತ್ತಿರುವಾಗ ಗೋಡೆ ತುಂಬಾ ಧಿಕ್ಕಾರ ಗೀಚಿ, ಬೀದಿ ಅಲೆಯುತ್ತಾ ಮೈಕ್ ಹಿಡಿದು ಜಯಕಾರ ಕೂಗಿ ಪ್ರಜಾಪ್ರಭುತ್ವವನ್ನು ಮೆರೆಯುವುದಾದರೂ ಏತಕ್ಕೆ ಹೇಳಿ?

ತಮ್ಮ ಪಾಡಿಗೆ ತಾವು ಲೂಟಿ ಮಾಡುತ್ತಾ, ಒಂದಿಷ್ಟು ಜನಕಲ್ಯಾಣ ಮಾಡಿ ಪಾಪದ ಹೊರೆ ಹಗುರ ಮಾಡಿಕೊಳ್ಳುತ್ತಿದ್ದ ಅರಬ್ ಆಡಳಿತಗಾರರಿಗೆ ಟುನೀಸಿಯಾದ ಬೆಳವಣಿಗೆ ಬೆವರೊಡೆಸಿತು. ಭಯ ಆವರಿಸಿತು. ಅಮ್ಮಾನ್, ಕೈರೋ, ಡಮಾಸ್ಕಸ್, ರಿಯಾದ್ ನಗರಗಳ ಬೀದಿಗಳೂ ಟುನೀಸಿಯಾದ ಬೀದಿಗಳ ಹಾದಿ ಹಿಡಿದರೆ? ಕೂಡಲೇ ಅಗತ್ಯ ವಸ್ತುಗಳ ಬೆಲೆ ತಮಗೆ ತಾವೇ ಇಳಿದವು ಸಿರಿಯಾ ಮತ್ತು ಜೋರ್ಡನ್ ದೇಶಗಳಲ್ಲಿ. ಈ ಎರಡೂ ರಾಷ್ಟ್ರಗಳು ನಿದ್ದೆಯಿಂದ ಎಚ್ಚೆತ್ತು ಕೊಳ್ಳುವ ಪ್ರಯತ್ನ ಮಾಡಿದರೆ ಇವಕ್ಕೆಲ್ಲಾ ಸೊಪ್ಪು ಹಾಕಲಾರೆ ಎನ್ನುವ ಮತ್ತೊಬ್ಬ ಸರ್ವಾಧಿಕಾರಿ ಹೋಸ್ನಿ ಮುಬಾರಕ್. ಈಜಿಪ್ಟ್ ನ ಹೋಸ್ನಿ ಮುಬಾರಕ್ ೩೦ ವರುಷಗಳ ಸುದೀರ್ಘ ಅನುಭವವಿರುವ ಠಕ್ಕ. ಬೇರೆಲ್ಲಾ ಠಕ್ಕರು ಚಾಪೆ ಕೆಳಗೆ ತೂರಿಕೊಂಡರೆ ಈತ ರಂಗೋಲಿ ಕೆಳಗೆ ತೂರಿ ಕೊಳ್ಳುತ್ತಾನೆ. ಆತನಿಗೆ ಅದಕ್ಕೆ ಬೇಕಾದ ಪರಿಣತಿ ಒದಗಿಸಲು ಶ್ವೇತ ಭವನ ಸಿದ್ಧವಾಗಿದೆ ಕರಾಳ ಟ್ರಿಕ್ಕುಗಳೊಂದಿಗೆ.

ಈಗ ಈ ಕ್ರಾಂತಿಯ ಪರಿಣಾಮ ನಾನಿರುವ ಸೌದಿಯಲ್ಲಿ ಹೇಗೆ ಎಂದು ಊಹಿಸುತ್ತಿದ್ದೀರೋ? ಇಲ್ಲಿನ ದೊರೆ ಅಬ್ದುಲ್ಲಾ ಜನರಿಗೆ ಅಚ್ಚು ಮೆಚ್ಚು. ಜನರಿಗೆ ಬೇಕಾದ ಎಲ್ಲಾ ಸೌಕರ್ಯವನ್ನೂ ಮಾಡಿ ಕೊಡುತ್ತಾ, ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಡಾಲರುಗಳನ್ನು ಅನುದಾನ ನೀಡುತ್ತಾ ಇರುವ ಈ ದೊರೆ ಜನರ ಕ್ಷೇಮ ವನ್ನು ವೈಯಕ್ತಿಕ ಭೇಟಿ ಮೂಲಕ ನೋಡಿ ಕೊಳ್ಳುತ್ತಾರೆ. ಜನರಿಗೆ ಅನ್ಯಾಯವಾದರೆ ಎಂಥ ಪ್ರಭಾವಶಾಲಿಗಳಾದರೂ ಈ ದೊರೆಯ ನಿಷ್ಟುರ ನ್ಯಾಯದಿಂದ ತಪ್ಪಿಸಿ ಕೊಳ್ಳಲಾರರು. ಕಳೆದ ವರ್ಷ ಜೆಡ್ಡಾ ನಗರದಲ್ಲಿ ಮಳೆಯಿಂದ ಆದ ಅಪಾರ ಅನಾಹುತ ೧೫೯ ಜನರ ಪ್ರಾಣ ತೆಗೆದು ಕೊಂಡಿತ್ತು. ಜನರ ಒತ್ತಾಯದ ಮೇರೆಗೆ ಈ ಅನಾಹುತಕ್ಕೆ ನಗರಸಭೆಯ ಅಧಿಕಾರಿಗಳನ್ನು ನೇರವಾಗಿ ಹೊಣೆಯಾಗಿರಿಸಿ ಅವರುಗಳ ಮೇಲೆ criminal ದಾವೆ ಹೂಡಿ ಜೈಲಿಗೆ ಅಟ್ಟಿದರು ಇಲ್ಲಿನ ದೊರೆ. ಟುನೀಸಿಯಾದ ಕ್ರಾಂತಿ ಸೌದಿ ಬ್ಲಾಗಿಗರೂ ಕುತೂಹಲದಿಂದ ವರದಿ ಮಾಡಿದ್ದಾರೆ ಎಂದು ಅಮೆರಿಕೆಯ npr ರೇಡಿಯೋ ದ ಬಾತ್ಮೀದಾರರು ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿದ್ದರೂ ಫೇಸ್ ಬುಕ್, ಟ್ವಿಟ್ಟರ್, ಗಳನ್ನು ಬಹಿಷ್ಕರಿಸಿಲ್ಲ. ಈ ಸಾಮಾಜಿಕ ತಾಣಗಳ ಮೂಲಕ ಜನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಕಳೆದ ದಶಕದಿಂದೀಚೆಗೆ ಇಲ್ಲಿನ ವಾರ್ತಾ ಪತ್ರಿಕೆಗಳೂ ಸಹ ಸಾಕಷ್ಟು ಮುಕ್ತವಾಗಿ ವರದಿ ಮಾಡುತ್ತಿವೆ. ಅಮೆರಿಕೆಯ ಕೆಂಗಣ್ಣಿಗೆ ಗುರಿಯಾದ al-jazeera ಟೀವೀ ಮಾಧ್ಯಮ ಕೂಡಾ ಇಲ್ಲಿ ನೋಡಲು ಲಭ್ಯ. ಅದೇ ರೀತಿ ಸೌದಿ ರಾಜ ಮನೆತನಕ್ಕೆ ವಿರುದ್ಧವಾಗಿ ಬರೆಯುವ ಗಾರ್ಡಿಯನ್, independent ಪತ್ರಿಕೆಗಳು ಇಲ್ಲಿ ಲಭ್ಯ. ವಾಣಿಜ್ಯ, ವ್ಯಾಪಾರ ಸಂಬಂಧಕ್ಕೆ ಅವಶ್ಯವಿರುವ ಪ್ರಕ್ರಿಯೆಯಲ್ಲಿ ವಿಶ್ವದಲ್ಲಿ ೧೩ ನೆ ಸ್ಥಾನ ಸೌದ್ ಅರೇಬಿಯಾಕ್ಕೆ. ಮುಕ್ತತೆಗೆ ಆಹ್ವಾನ ನೀಡಿ ಸಾಮಾಜಿಕ ಅನಿಷ್ಟಗಳನ್ನು ತನ್ನ ಮಡಿಲಿಗಿರಿಸಿ ಕೊಂಡಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE) ಮತ್ತು ಬಹರೇನ್ ದೇಶಗಳು ಸೌದಿಗಿಂತ ತುಂಬಾ ಹಿಂದಿವೆ ವಾಣಿಜ್ಯ ನೀತಿಯಲ್ಲಿ.

ಟುನೀಸಿಯಾ ದೇಶಕ್ಕೆ ಭೇಟಿ ಕೊಟ್ಟ ಯಾರೇ ಆದರೂ ಹೇಳುವುದು ಎರಡೇ ಮಾತುಗಳನ್ನು ಸುಂದರ ದೇಶ. ಸ್ನೇಹಜೀವಿ ಜನ. ಪ್ರವಾಸೋಧ್ಯಮದ ಮೂಲಕ ದೊಡ್ಡ ರೀತಿಯಲ್ಲಿ ವಿದೇಶೀ ವಿನಿಮಯ ಗಳಿಸುತ್ತಾ, ತನ್ನ ರಮಣೀಯ ಆಲಿವ್ (olive) ಬಯಲುಗಳನ್ನೂ, ಸುಂದರ ತೀರ ಪ್ರದೇಶವನ್ನೂ ಜನರಿಗೆ ತೋರಿಸಿ ತನ್ನ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಪುಟ್ಟ ಟುನೀಸಿಯಾ ದೇಶ ಇಟ್ಟಿರುವ ದಿಟ್ಟ ಹೆಜ್ಜೆ ಅದಕ್ಕೆ ಮುಳುವಾಗದೆ ಇರಲಿ ಎಂದು ಹಾರೈಸೋಣ.

ಹೀಗೇ ಸುಮ್ಮನೆ: ಇಸ್ಲಾಮಿನ flexibility ಯ ದ್ಯೋತಕವಾಗಿ ಟುನೀಸಿಯಾ ದಲ್ಲಿ ಬಹುಪತ್ನಿತ್ವ ನಿಷಿದ್ಧ. ಇದು ಶರಿಯತ್ ಗೆ ವಿರುದ್ಧ ಎಂದು ಇಲ್ಲಿನ ಮುಲಾಗಳು ಇದುವರೆಗೂ ಅರಚಿಲ್ಲ.

ಓರ್ವ ವಿಜ್ಞಾನಿ ಮತ್ತು ಉಸಿರಾಡುವ ಭೂಮಿ

ಭೂತಾಪದಲ್ಲಿ ಏರಿಕೆ ವಿಷಯ ಹಲವು ದೇಶಗಳ ರಾಜಕಾರಣಿಗಳ ತಾಪಮಾನವನ್ನು ಏರಿಸುವುದನ್ನು ಕಂಡಿದ್ದೇವೆ. ಪ್ರಗತಿಗಾಗಿ ಮಾನವ ತನ್ನೆಲ್ಲಾ ಬುದ್ಧಿ ಶಕ್ತಿಯನ್ನೂ ಹರಿಬಿಟ್ಟಂತೆಯೇ ವಾತಾವರಣ ಕೂಡ ತನ್ನ ಕೋಪ ತಾಪವನ್ನು ಮನುಜನ ಮೇಲೆ ಹರಿ ಬಿಡಲು ಆರಂಭಿಸಿತು. ಪರಿಣಾಮ? ಅಕಾಲಿಕ ಮಳೆ, ಪ್ರವಾಹ, ಸುನಾಮಿ, ಚಂಡಮಾರುತಗಳು ಭೂತಾಯಿಯ ಶಾಪಗಳಾಗಿ ನಮ್ಮನ್ನು ಕಾಡಲು ತೊಡಗಿದವು. ಆದರೆ ಈ ಗ್ಲೋಬಲ್ ವಾರ್ಮಿಂಗ್ ಎಂದು ಚಿರಪರಿಚಿತವಾಗಿರುವ ಭೂತಾಪದಲ್ಲಿನ ಏರಿಕೆಯ ಈ ವಿದ್ಯಮಾನ ಎಷ್ಟು ಜನರಿಗೆ ತಿಳಿದಿದೆ. ನಮ್ಮ ಮಾಧ್ಯಮಗಳು ಈ ಕುರಿತು ಜನರ ಗಮನ ಹರಿಸುವಲ್ಲಿ ಮತ್ತು ಅವರನ್ನು ಜಾಗೃತ ರಾಗಿಸುವಲ್ಲಿ ಎಷ್ಟುಮಟ್ಟಿಗೆ ಯಶಸ್ವಿಗಳಾಗಿದ್ದಾರೆ ಎಂದು ನೋಡಿದಾಗ ನಮಗೆ ಸಿಗುವುದು ನಿರಾಶದಾಯಕ ಬೆಳವಣಿಗೆ. ಪತ್ರಿಕೋದ್ಯಮ ಅಂತ ದೊಡ್ಡ ಗ್ಲಾಮರಸ್ ಕೆಲಸ ಅಲ್ಲ ಮಾತ್ರವಲ್ಲ ಅದರಲ್ಲಿ ಸುಗುವ ಕಾಸು ಸಹ ಅಷ್ಟಕ್ಕಷ್ಟೇ ಎನ್ನುವ ಅಭಿಪ್ರಾಯದ ಕಾರಣ ಎಲ್ಲರೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಗಳತ್ತ ಕಣ್ಣು ಹಾಕಿದರೆ ಪತ್ರಿಕೋದ್ಯಮ ಪ್ರತಿಭೆಯ ಕೊರತೆಯಿಂದ ಸೊರಗಿತು ನಮ್ಮ ದೇಶದಲ್ಲಿ. ವಿದೇಶೀ ಪತ್ರಿಕೆಗಳೊಂದಿಗೆ ನಮ್ಮ ಪತ್ರಿಕೆಗಳನ್ನು ಹೋಲಿಸಿ ನೋಡಿದಾಗ ಮನವರಿಕೆ ಆದೀತು ನಮ್ಮ ಪತ್ರಿಕೆಗಳ ಗುಣಮಟ್ಟ ಎಂಥದ್ದು ಎಂದು. ಅವಕ್ಕೆ ಕ್ಷುಲ್ಲಕ ವಿಷಯಗಳತ್ತ ಹೆಚ್ಚು ಗಮನ. liz hurley ಎಂಬ ಮಧ್ಯವಯಸ್ಕ ಬೆಡಗಿ ಭಾರತೀಯ ಸಂಜಾತ ಅರುಣ್ ನಾಯರ್ ನಿಗೆ ಕೊಕ್ ಕೊಟ್ಟು ಶೇನ್ ವಾರ್ನ್ ಜೊತೆಗಿನ ಆಕೆಯ ಚಕ್ಕಂದ ನಮ್ಮ ಮಾಧ್ಯಮಗಳಿಗೆ  ದೊಡ್ಡ ಸುದ್ದಿ.  

ನಿನ್ನೆ ಅಮೆರಿಕೆಯ newyork times ಪತ್ರಿಕೆಯಲ್ಲಿ “A Scientist, His Work and a Climate Reckoning”  ಎನ್ನುವ ತಲೆಬರಹವಿರುವ ಲೇಖನ ಪ್ರಕಟವಾಯಿತು. ಭೂತಾಪದ ಬಗ್ಗೆ ಅಮೆರಿಕೆಯ ವಿಜ್ಞಾನಿಯೋರ್ವನ ಸಂಶೋಧನೆ ಮತ್ತು ವಾತಾವರಣದ ಬಗ್ಗೆ ಐದು ಪುಟಗಳ ಲೇಖನವಿದೆ. ಕೆಳಗಿನ ಕೊಂಡಿ ಕ್ಲಿಕ್ಕಿಸಿ ಲೇಖನ ಓದಿ. http://www.nytimes.com/2010/12/22/science/earth/22carbon.html?pagewanted=1&_r=1

ಬಿಹಾರದ “ನೀತಿ” ಪಾಠ

ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು. ಅತ್ಯಂತ ಸಂಕುಚಿತ, ‘ಹೇಟ್’ ಅಜೆಂಡಾದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಪಕ್ಷಗಳಿಗೆ ಮಂದಿರವೊಂದೇ ಮಂತ್ರವಲ್ಲ, “ಸರ್ವೇ ಜನಃ ಸುಖಿನೋಭವಂತು” ವೇ ನನ್ನ ತಂತ್ರ ಎಂದು ಸ್ಪಷ್ಟವಾಗಿಸಿದ ನೀತೀಶ್ ಕುಮಾರ್, ಕೇವಲ ಅಭಿವೃದ್ದಿ, ಹಿಂದುಳಿದವರ, ಬಡ ಜನರ ಏಳಿಗೆಯ ಮಂತ್ರದೊಂದಿಗೆ ಚುನಾವಣೆ ಗೆಲ್ಲಲು ಸಾಧ್ಯ ಎನ್ನುವ ಸಾಮಾನ್ಯ ಸತ್ಯದ ಪರಿಚಯ ಮಾಡಿಸಿದರು. ಹೀಗೆ ಅಭಿವೃದ್ದಿಯ ಏಕ ಮಾತ್ರ ಅಜೆಂಡಾ ಇಟ್ಟುಕೊಂಡು ಬಿಹಾರದ ಚುನಾವಣೆಯಲ್ಲಿ ಸೆಣಸಿದ ನೀತೀಶ್ ಕುಮಾರ್ ಅಭೂತಪೂರ್ವವಾದ ವಿಜಯವನ್ನೂ ಸಾಧಿಸಿದರು. ಚುನಾವಣೆಯ ಪ್ರಚಾರದ ವೇಳೆ ದಿಗ್ಗಜರನ್ನು ಪ್ರಚಾರಕ್ಕೆ ಇಳಿಸುವುದು ವಾಡಿಕೆ. ಹಿಂದುತ್ವದ ಪೋಸ್ಟರ್ ಬಾಯ್ ಗಳೆಂದೇ ಗುರುತಿಸಿಕೊಳ್ಳುವ ನರೇಂದ್ರ ಮೋದಿ ಮತ್ತು ವರುಣ್ ಗಾಂಧೀ ಯನ್ನ ಪ್ರಚಾರಕ್ಕೆ ಇಳಿಸಲು ಭಾಜಪ ಶ್ರಮ ಪಟ್ಟರೂ ನೀತೀಶ್ ಮಾತ್ರ ಪಟ್ಟು ಬಿಡದೆ ಯಾವುದೇ ಕಾರಣಕ್ಕೂ ಈ ಈರ್ವರು ವ್ಯಕ್ತಿಗಳು ಬಿಹಾರದಲ್ಲಿ ಕಾಲಿಡಕೂಡದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಈ ತಾಕೀತಿನ ತಾಕತ್ತಿನಿಂದ ಮತ್ತು ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳುವ ತಮ್ಮ ಇರಾದೆಯಿಂದ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆದು ದೇಶದಲ್ಲಿ ಒಂದು ಹೊಸ ಸಾಮಾಜಿಕ ರಾಜಕೀಯ ಸಮೀಕರಣದ ನಿರ್ಮಾಣಕ್ಕೆ ನೀತೀಶ್ ಕಾರಣಕರ್ತರಾದರು. ಸ್ವಜನ ಪಕ್ಷಪಾತ, ಹಗರಣ, ಮತೀಯವಾದ, ಜಾತೀವಾದ ಮುಂತಾದ ಹಲವು ರೋಗಗಳಿಂದ ಬಳಲುತ್ತಿರುವ ಭಾರತೀಯ ರಾಜಕಾರಣಕ್ಕೆ ನೀತೀಶರಂಥ ರಾಜಕಾರಣಿಗಳು ತುಂಬಾ ಅವಶ್ಯಕ. ತೀರಾ ಹಿಂದುಳಿದ ರಾಜ್ಯವೆಂದು ಗೇಲಿಗೆ ಒಳಗಾಗಿದ್ದ ಬಿಹಾರಕ್ಕೆ ಒಂದು ಸುಂದರವಾದ ಆಡಳಿತವನ್ನು ನೀತೀಶರು ಕೊಡುವಂತಾಗಲಿ ಎಂದು ಹಾರೈಸೋಣ.

star war

೧೯೮೧ ರಿಂದ ೧೯೮೯ ರವರೆಗೆ ಅಮೆರಿಕೆಯ ೪೦ ನೇ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅಮೆರಿಕೆಯ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲೊಬ್ಬರು. ಇವರ ಕಾಲದಲ್ಲಿಯೇ ಅಮೇರಿಕ SDI (Strategic Defence Initiative) ಕಾರ್ಯಕ್ರಮದ ಅಡಿಯಲ್ಲಿ star war ತಂತ್ರಜ್ಞಾನಕ್ಕೆ ಮುನ್ನುಡಿ ಬರೆದಿದ್ದು. ವಿಕಿಲೀಕ್ ಹಗರಣ ಈಗ ಒಂದು ರೀತಿಯ star war ರೀತಿಯ ಕದನಕ್ಕೆ ದಾರಿ ಮಾಡಿ ಕೊಡುತ್ತಿದೆ. ಅಸಾಂಜ್ ನನ್ನು ಬಂಧಿಸಿದ್ದರಿಂದ ಅವನ ಬೆಂಬಲಿಗರು ತಮ್ಮ ಸಮರವನ್ನು ನಭೋ ಮಂಡಲಕ್ಕೆ ಒಯ್ದಿದ್ದಾರೆ. ಅಂದರೆ ಪೂರ್ಣ ಪ್ರಮಾಣದ assault through web sphere. ಅಮೆರಿಕೆಯನ್ನೂ ಒಳಗೊಂಡು ವಿಶ್ವದ ಬಹುತೇಕ ರಾಷ್ಟ್ರಗಳ ರಾಜತಾಂತ್ರಿಕರ, ಆಳುವವರ ಮಧ್ಯೆ ನಡೆದ ಮಾತುಕತೆ, ರಹಸ್ಯಗಳನ್ನು ಕ್ಷಣ  ಮಾತ್ರದಲ್ಲಿ ವಿಶ್ವದೆಲ್ಲೆಡೆ ವೆಬ್ ತಂತ್ರಜ್ಞಾನದ ಮೂಲಕ ಹರಡಿದ ಕಾರಣ ಭುಗಿಲೆದ್ದ ವಿವಾದ ಮತ್ತು ಸಮರಕ್ಕೆ ನಭೋ ಮಂಡಲವೇ ಯುದ್ಧ ಭೂಮಿ. ಅದೇ ಸಮಯ ಅಸಾಂಜ್ ನಿಗೂ ಬೆಂಬಲದ ಮಹಾಪೂರ ವೆಬ್ ಟೆಕ್ಕಿಗಳಿಂದ ಮತ್ತು ಪಾರದರ್ಶಕತೆ ಯಲ್ಲಿ ವಿಶ್ವಾಸ ಇರಿಸಿದ ಆಸಕ್ತರಿಂದ. ಈಗ ಆರಂಭ mother of all battles.

mother of all battles. ಈ ನುಡಿಮುತ್ತುಗಳನ್ನು ಚಲಾವಣೆಗೆ ತಂದಿದ್ದು ಇರಾಕಿನ ಮಾಜಿ ಅಧ್ಯಕ್ಷ ಸದ್ದಾಮ್ ಹುಸೇನ್. ೧೯೯೦ ರ ಲ್ಲಿ ಕುವೈತ್ ದೇಶವನ್ನು ಆಕ್ರಮಿಸಿಕೊಂಡಾಗ ಅಮೆರಿಕೆಯೂ ಸೇರಿ ಬಲಿಷ್ಠ ರಾಷ್ಟ್ರಗಳು ಎಚ್ಚರಿಕೆ ನೀಡಿದ್ದಕ್ಕೆ ಸದ್ದಾಮ್ ಗುಡುಗಿದ್ದು ನನ್ನ ತಂಟೆಗೆ ಬಂದರೆ ಕೊಲ್ಲಿ ಯುದ್ಧ mother of all battles ಗೆ ಕಾರಣವಾಗುತ್ತದೆ ಎಂದು.   

ವಿಕಿ ಲೀಕ್ ವಿರುದ್ಧದ ಕಾರ್ಯಾಚರಣೆ ಈ ರೀತಿ ಆರಂಭ. ಅಸಾಂಜ್ ತನ್ನ ವಿಕಿಲೀಕ್ ಎನ್ನುವ ಟಾಮ್ ಟಾಮ್ ಅಂಗಡಿಯನ್ನು ನಡೆಸುತ್ತಿದ್ದದ್ದು ದೇಣಿಗೆಯ ಸಹಾಯದಿಂದ. ಅದಕ್ಕೆ ಬಿತ್ತು ಮೊದಲ ಕತ್ತರಿ. ಹಣ paypal, visa, master card ನಂಥ ವ್ಯವಸ್ಥೆಗಳ ಮೂಲಕ ಬರುತ್ತಿದ್ದರಿಂದ ಅಮೆರಿಕೆಗೆ ಹೆದರಿ ಅವೂ ಸಹ ತಮ್ಮ ಗಿರಾಕಿ ಅಸಾಂಜ್ ನನ್ನು ಹೊರಗಟ್ಟಿದವು. ಹಾಗೆಯೇ ಅವನ ‘ಅಂಗಡಿ’ ಗೆ ಸ್ಥಳ ದಯಪಾಲಿಸಿದ್ದ ವೆಬ್ ಸರ್ವರ ಗಳ ಮೇಲೂ ಸರಕಾರಗಳ ಕೆಂಗಣ್ಣು. ಸರ್ವರುಗಳೂ ಅಸಾಂಜ ನ ಮುಖಕ್ಕೆ ಬಡಿದವು ಕದಗಳನ್ನು. ಅಸಾಂಜ್ ನನ್ನು ಅತ್ಯಾಚಾರದ ಆರೋಪ ಹೊರಿಸಿ ಸರಳುಗಳ ಹಿಂದಕ್ಕೆ ನೂಕಿದ ಕ್ರಮ ಪ್ರತಿಭಟಿಸಿ, ಕುಪಿತರಾದ ಆತನ ಬೆಂಬಲಿಗರು ಎಲ್ಲಾ ರೀತಿಯ ವೆಬ್ ಧಾಳಿಗಳನ್ನು ಹರಿ ಬಿಟ್ಟಿದ್ದಾರೆ ವಿರೋಧಿ ಪಾಳೆಯದ ಮೇಲೆ. ಬೆಂಬಲಿಗರು facebook , twitter ಮೂಲಕ ಸಭೆ ನಡೆಸಿದರು, ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದರು. ಇಲ್ಲಿಗೂ ಬಂತು ಕುತ್ತು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಹ ಅಸಾಂಜ್ ಗೆ ವಿರೋಧ ವ್ಯಕ್ತಪಡಿಸಿದವು. ಇಷ್ಟೆಲ್ಲಾ ರಾದ್ಧಾಂತವನ್ನು ನೋಡಿದ ನಮಗೆ ಅನ್ನಿಸದೆ ಇರುತ್ತದೆಯೇ ನಮ್ಮ ಪುರಾಣದ ಸತ್ಯ ಹರೀಶ್ ಚಂದ್ರನೂ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿರಲಿಕ್ಕಿಲ್ಲವೇನೋ ಎಂದು?

ಈ “ಹೈ ಟೆಕ್” ಸಮರ ಒಂದು ರೀತಿಯ ಸೈ ಫೈ (sci fi )  ಸಿನೆಮಾ ನೋಡಿದಂತೆ. ಮೂರನೇ ಮಹಾಯುದ್ಧಕ್ಕೆ ನಾಂದಿ ಸಹ ಹಾಡಬಹುದೇನೋ ಇದು. ಈ ಸಮರದಲ್ಲಿ apache helicopter ಗಳಿಗಾಗಲಿ, F 16, JAGUAR ಯುದ್ಧ ವಿಮಾನಗಳಿಗಾಗಲಿ, HEAT SEEKING MISSILE ಗಳಿಗಾಗಲಿ ಕೆಲಸವಿಲ್ಲ. ಇಲ್ಲಿ “ಕೀಲಿ ಮಣೆ” ಗಳದೇ ದರ್ಬಾರು. ಈ ಕೀಲಿ ಮನೆಗಳ ವಟ ಗುಟ್ಟುವಿಕೆಗೆ ಎಲ್ಲರೂ ತತ್ತರ. ಎಲ್ಲರೂ ಎಂದರೆ ಅಸಾಂಜ್ ನ ಮೇಲೆ ನಂಜು ಕಾರುವವರು. ಅಸಾಂಜ್ ನ ಬೆಂಬಲಿಗರು ಮೇಲೆ ಸರಕಾರಗಳ ಕಿರುಕುಳಗಳಿಗೆ ಉತ್ತರ ನೀಡಲು ತೀರ್ಮಾನಿಸಿದರು. ಆಪರೇಶನ್ ಪೇ ಬ್ಯಾಕ್. ಅಂದರೆ ಮರು ಪಾವತಿ ಕಾರ್ಯಾಚರಣೆ.  PAY PAL, VISA, MASTER CARD, SERVER ಇವುಗಳ ಮೇಲೆ ಮಿಂಚಿನ ಧಾಳಿ. ವೆಬ್ಸೈಟ್ ಗಳು ಒಂದೊಂದಾಗಿ ತರಗೆಲೆಗಳಂತೆ ಉದುರ ತೊಡಗಿದವು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಗೆ ಗಂಭೀರ ಎಚ್ಚರಿಕೆ. ಅತ್ಯಾಚಾರ ನಡೆದಿದ್ದು ಸ್ವಿಸ್ ನಲ್ಲಿ ಎಂದು ಅಲ್ಲಿನ ಸರಕಾರ ಅಸಾಂಜ್ ನ ಕಸ್ಟಡಿ ಕೇಳಿದ್ದಕ್ಕೆ ಅಲ್ಲಿನ ಸರ್ಕಾರದ ವೆಬ್ ತಾಣದ ಮೇಲೂ ಧಾಳಿ. ಸರಕಾರದ ವೆಬ್ ತಾಣದ ಮೇಲೆಯೇ ಧಾಳಿ ಮಾಡಿದ ಬೇಕೆಂದರೆ ಅಸಾಂಜ್ ನಿಗೆ ಯಾವ ರೀತಿಯ ಆರಾಧಕರಿದ್ದಾರೆ ಮತ್ತು ಅವರ ಸಾಮರ್ಥ್ಯ ಎಂಥದ್ದು ಎಂದು ಊಹಿಸಿ. ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ಅಸಾಂಜ್ ಮಾತ್ರ ವಿಚಲಿತನಾಗಲಿಲ್ಲ. ಛಲ ಬಿಡದ ತ್ರಿವಿಕ್ರಮ. ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವೊಂದನ್ನು ಎದುರು ಹಾಕಿಕೊಂಡಾಗ ಸಹಜವಾಗಿಯೇ ಬಂದೆರಗುವ ಆಪತ್ತುಗಳನ್ನು ಊಹಿಸಿ ಅದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ ಎಂದು ತನ್ನ ಸಂದರ್ಶಕರಿಗೆ ಕೂಲ್ ಆಗಿ  ಹೇಳಿದ.  

ಅಸಾಂಜ್ ನ ಮೇಲೆ ಅತ್ಯಾಚಾರದ ಆರೋಪ. ಈಗ ಈ ಸಮಸ್ಯೆಗೆ ಒಂದು ರೋಮಾಂಟಿಕ್ angle ಸಹ ಇದೆ. ಘಟನೆ ನಡೆದಿದ್ದು ಸ್ವಿಸ್ ನಲ್ಲಿ. ಅದಕ್ಕೆ ಸ್ವಿಸ್ ಸರಕಾರಕ್ಕೆ ಅಸಾಂಜ್ ನ ಕಸ್ಟಡಿ ಬೇಕಿರುವುದು.  ತಮ್ಮ ಇಷ್ಟಕ್ಕೆ ವಿರುದ್ಧವಾಗಿ ನಮ್ಮೊಂದಿಗೆ ಲೈಂಗಿಕವಾಗಿ ನಡೆದು ಕೊಂಡ ಎಂದು ಇಬ್ಬರು ತರುಣಿಯರ ದೂರು. ಅಸಾಂಜ್ ನ ವಿರುದ್ಧದ ಅತ್ಯಾಚಾರದ ಆರೋಪ ದ ಬಗ್ಗೆ ಸ್ವಲ್ಪ ನೋಡೋಣ. ಇಬ್ಬರ ಸಮ್ಮತಿಯೊಂದಿಗೆ ನಡೆದ ಲೈಂಗಿಕ ಚಟುವಟಿಕೆ ವೇಳೆ ಗರ್ಭ ನಿರೋಧಕ ಕಾಂಡೋಂ ಅಸಾಂಜ್ ಧರಿಸಿರಲಿಲ್ಲ, ಹಾಗಾಗಿ ಇದರಿಂದ ತಮಗೆ AIDS ರೋಗ ಅಥವಾ STD ಅಂಟಿ ಕೊಂಡಿತೆ ಎಂದು ಒಬ್ಬ  ಹುಡುಗಿಯ ಗಾಭರಿ. AIDS ಅಥವಾ STD (Sexually transmitted disease) ಇದೆಯೋ ಎನ್ನುವ ಗಾಭರಿ ಕೋಣೆ ಸೇರುವಾಗ ಇರಲಿಲ್ಲವೇ ಎಂದು ಬಹುಶಃ ಅಸಾಂಜ್ ನ ವಕೀಲರು ಕೇಳಬಹುದು ನ್ಯಾಯಾಲಯದಲ್ಲಿ. ಮತ್ತೊಬ್ಬಾಕೆಯ ದೂರು ಹೀಗೆ. ಲೈಂಗಿಕ ಚಟುವಟಿಕೆ ಸಮಯ ಅಸಾಂಜ್ ಧರಿಸಿದ್ದ ಗರ್ಭ ನಿರೋಧಕ ಚೀಲ ‘ದಾರಿ’ ಮಧ್ಯೆ ಹರಿದು ಹೋಯಿತು, ಉದ್ದೇಶ ಪೂರ್ವಕವಾಗಿ ಅಸಾಂಜ್ ಈ ರೀತಿ ಮಾಡಿದ ಎಂದು. ಹೇಗಿದೆ ನೋಡಿ ಸಂಸ್ಕಾರ. ಒಬ್ಬ ವ್ಯಕ್ತಿಯನ್ನು ಇಷ್ಟ ಪಟ್ಟು ಆತ ಸಂಭಾವಿತ ಎಂದು ಖಾತರಿಯಾದ ಮೇಲೆ ಅವನೊಂದಿಗೇ ಇರುಳನ್ನು ಕಳೆಯೋದು, ಬೆಳಗಾದ ಕೂಡಲೇ, ಅಮಲಿಳಿದ ನಂತರ, ಕಲ್ಪನಾ ಲಹರಿಯನ್ನು ಹರಿ ಬಿಟ್ಟು ನಲ್ಲನ ಚಾರಿತ್ರ್ಯ ವಧೆ ಮಾಡುವುದು. ವಿವಾಹದ ಹೊರಗೆ, ಕಾನೂನು ಬಾಹಿರವಾಗಿ ಈ ಕೆಲಸ ಮಾಡುವವರಿಗೆ ಚಾರಿತ್ರ್ಯ ಎಲ್ಲಿಂದ ಬಂತು ಎಂದು ಮಾತ್ರ ಕೇಳಬೇಡಿ. ಏಕೆಂದರೆ they do things differently. 

ಈ ವಿವಾದದಲ್ಲಿ ಏನೆಲ್ಲಾ ಸಂಗತಿಗಳು ಹೊರಬಂದವು ನೋಡಿ. ಸರಕಾರಗಳು ವ್ಯವಹರಿಸುವ ರೀತಿ, ರಾಷ್ಟ್ರ ರಾಷ್ಟ್ರ ಗಳ ಮಧ್ಯೆ ಮಾತುಕತೆಗಳ ಧಾಟಿ, ಮೋಸ, ವಂಚನೆ, ಇಬ್ಬಂದಿತನ.   

ಅಸಾಂಜ್ ಮತ್ತು ಸರಕಾರಗಳ ನಡುವಿನ ಜಟಾಪಟಿ ವಿಶ್ವದ ವಿಶ್ವವಿದ್ಯಾಲಯಗಳಲ್ಲಿ ಹೊಸ ಅಧ್ಯಯನ ಕೇಂದ್ರಗಳ ಸ್ಥಾಪನೆಗೂ ನಾಂದಿ ಹಾಡಬಹುದೇನೋ?  

ಮತ್ತಷ್ಟು: ವಿಕಿ ಲೀಕ್ ಮೇಲೆ ಆಗಂತುಕರು ಹಲ್ಲೆ ನಡೆಸಿದ್ದು distributed denial of service attack ಮೂಲಕ. ಅಂದರೆ ನಮಗಿಷ್ಟವಾಗದ ವೆಬ್ ಸೈಟ್ ಮೇಲೆ ನಿರಂತರವಾಗಿ, ಅವ್ಯಾಹತವಾಗಿ ಲಾಗ್ ಇನ್ ಆಗಿ ಅದನ್ನು ಅಸ್ತವ್ಯಸ್ತಗೊಳಿಸೋದು. ಒಂದು ರೀತಿಯ carpet bombing. ಉದಾಹರಣೆಗೆ ಒಂದು ಚಿಕ್ಕ ಚಾದಂಗಡಿಗೆ ಒಮ್ಮೆಲೆ ನೂರಾರು ಜನ ಗಿರಾಕಿಗಳು ಬಂದಾಗ ಆಗುವ ಅವ್ಯವಸ್ಥೆ. ಓಡಿ ಹೋಗುತ್ತಾನೆ ಅಡುಗೆ ಭಟ್ಟ. ಮಾಹಿತಿಗಾಗಿ ಎಲ್ಲರೂ ವೆಬ್ಸೈಟ್ ಮೇಲೆ ಧಾಳಿ ಮಾಡಿದಾಗ ಒತ್ತಡ ತಾಳಲಾರದೆ ಕ್ಷಣ ಕಾಲ ಮುಚ್ಚಿ ಹೋಗುತ್ತದೆ. ಕೆಲವೊಮ್ಮೆ ಟ್ವಿಟ್ಟರ್ ಗೆ ಸಹ ಈ ಪರಿಸ್ಥಿತಿ ಎದುರಾಗುವುದುಂಟು. 

pic courtesy: http://editorialcartoonists.com/cartoon/display.cfm/93568/

‘ವಿಕಿಲೀಕ್’ ಅವಾಂತರ

ವಿಕಿಲೀಕ್ ಈಗ ವಿಶ್ವ ಸುದ್ದಿಯಲ್ಲಿ. ವಿಶ್ವದ ಸರಕಾರಗಳ ಮಧ್ಯೆ, ಧುರೀಣರ ಮಧ್ಯೆ ನಡೆದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಕೇಬಲ್ ಗಳನ್ನು ತನ್ನ ವೆಬ್ ತಾಣದಲ್ಲಿ ಪ್ರಕಟಿಸಿ ಅಂತಾರಾಷ್ಟ್ರೀಯ ರಾಜಕಾರಣ ಎಂದರೆ ಗರಿ ಗರಿ ಕಪ್ಪು ಸೂಟು, ಮುಗುಳ್ನಗುವಿನೊಂದಿಗೆ ಹಸ್ತಲಾಘವ, ನಂತರ ಮೃಷ್ಟಾನ್ನ ಭೋಜನ ಎಂದು ತಿಳಿದಿದ್ದ ನಮಗೆ ಹೊಸತೊಂದು ವಿಶ್ವದ ಪರಿಚಯ ಮಾಡಿಕೊಟ್ಟಿತು ವಿಕಿಲೀಕ್. ‘ವಿಕಿಪೀಡಿಯ’ ಗೊತ್ತು, ಇದೇನೀ ‘ವಿಕಿಲೀಕ್’ ಎಂದಿರಾ? ವಿಕಿಪೀಡಿಯ ನಮಗೆ ತಿಳಿಯಬೇಕಾದ ವಿಷಯಗಳನ್ನು ಸರಾಗವಾಗಿ, ಕ್ಷಣ ಮಾತ್ರದಲ್ಲಿ ತಿಳಿಸಿಕೊಡುವ ತಾಣವಾದರೆ, ವಿಕಿಲೀಕ್ ಮಾತ್ರ ಸ್ವಲ್ಪ ಸರಿದು ನಿಂತು ನಾವೆಂದಿಗೂ ‘ಕೇಳಬಾರದ, ಆಡಬಾರದ, ನೋಡಬಾರದ’, ವಿಷಯಗಳನ್ನು ನಮಗೆ ತಲುಪಿಸಿ ಮಗುಮ್ಮಾಗಿ ಇದ್ದುಬಿಡುವ whistle blower. ಸ್ವಲ್ಪ ಮಟ್ಟಿಗೆ ನಮ್ಮ ಅಚ್ಚು ಮೆಚ್ಚಿನ ‘ತೆಹೆಲ್ಕಾ’ ರೀತಿಯದು. ಈ ವೆಬ್ ತಾಣದ ಸಾರಥಿ ಆಸ್ಟ್ರೇಲಿಯಾದ 39 ರ ಪ್ರಾಯದ ಜೂಲಿಯಾನ್ ಅಸಾಂಜ್. ಈಗ ಈತ ಕಂಬಿ ಎಣಿಸಲು ಅಥವಾ ತನ್ನ ತಲೆ ಕಳೆದುಕೊಳ್ಳುವ ನಿರೀಕ್ಷೆಯಲ್ಲಿ ಲಂಡನ್ನಿನ ಮೂಲೆಯೊಂದರಲ್ಲಿ ದಿನ ಕಳೆಯುತ್ತಿದ್ದಾನೆ.

ಅಭಿವ್ಯಕ್ತಿ ಸ್ವಾತಂತ್ರ್ಯ. ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬಂದಾಗ ತಮ್ಮದೇ ಆದ ಧೋರಣೆ. ಆ ಧೋರಣೆ ಹಿಂಸಾರೂಪ ತಾಳಿದರೂ ಯಾರಿಗೂ ಅದರ ಪರಿವೆ ಇಲ್ಲ. ಸೂಟು ಬೂಟು, ಬಿಳಿಚರ್ಮ ಹೊತ್ತವರು ಏನೇ ಹೇಳಿದರೂ ಎಲ್ಲಾ ಓಕೆ. ಗಡ್ಡ ಮಾತ್ರ ಇರಬಾರದು ಈ ರೀತಿಯ ಮಾತನ್ನಾಡಲು. ಆಗ ಪದಪ್ರಯೋಗದ ಸಮೀಕರಣ ಬದಲಾಗಿ ಬಿಡುತ್ತದೆ. ಕೆನಡಾದ ಪ್ರಧಾನಿಯ ಮಾಜಿ ಸಲಹೆಗಾರ stephen ‘Harper’ ನ ಪ್ರಕಾರ ವಿಕಿ ಲೀಕ ನ ಅಸಾಂಜ್ ನನ್ನು ಕೊಲ್ಲಬೇಕು. ನೋಡಿ ಎಂಥ ಅಸಂಬದ್ಧ, harping ಈತನದು. ಹೆಸರಿಗೆ ತಕ್ಕಂತೆ ನಡತೆ. ಅಭಿವ್ಯಕ್ತಿ ಸ್ವಾತಂತ್ರ್ಯ ತಂದು ಕೊಡುವ ಕಚಗುಳಿ ಎಂಥದ್ದು ಎಂದು ತಡವಾಗಿ ತಿಳಿಯಿತು ಅಮೆರಿಕೆಗೆ ಮತ್ತು ಅದರ ಹಿಂಬಾಲಕರಿಗೆ.

ರಾಜನಿಂದ ಹಿಡಿದು ರಾಜತಾಂತ್ರಿಕನವರೆಗೆ ಯಾರು ಏನು ಹೇಳಿದರು ಎಂದು ಸವಿಸ್ತಾರವಾಗಿ ಪ್ರಕಟಿಸಿದ ವಿಕಿಲೀಕ್ ಅಂತಾರಾಷ್ಟ್ರೀಯ ರಾಜಕಾರಣ ಯಾವ ರೀತಿಯ ‘ಡಬಲ್ ಗೇಂ’ ಎಂದು ನಮಗೆ ಮನವರಿಕೆ ಮಾಡಿಕೊಡುತ್ತಿದೆ. ನಮ್ಮ ದೇಶಕ್ಕೆ ಬಂದು ನಮ್ಮೆಲ್ಲರನ್ನೂ ಮರುಳು ಮಾಡಿ, ನಮಗೆ ಬಾಲಿವುಡ್ ಮೇಲೆ ಇರುವ ವ್ಯಾಮೋಹಕ್ಕೆ ತಕ್ಕಂತೆ ಒಂದಿಷ್ಟು ಡ್ಯಾನ್ಸ್ ಮಾಡಿ ಕೊನೆಗೆ ತಮ್ಮ ಊರು ತಲುಪಿದ ನಂತರ ಬೇರೆಯದೇ ಆದ ಸನ್ನೆ ಕಳಿಸುವುದು. ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕಾಗಿರುವ ನಮ್ಮ ಆಸೆಯನ್ನೂ, ಅದಕ್ಕಾಗಿ ನಾವು ಹೆಣಗುತ್ತಿರುವುದನ್ನು ಅರಿತ ಅಮೇರಿಕಾದ ಅಧ್ಯಕ್ಷ ನಮ್ಮಲ್ಲಿಗೆ ಬಂದು ಭಾರತ ಈ ಸ್ಥಾನಕ್ಕೆ ಅತ್ಯಂತ ಅರ್ಹ ರಾಷ್ಟ್ರ, ನಮ್ಮ ಬೆಂಬಲ ಅದಕ್ಕಿದೆ ಎಂದು ನಮ್ಮನ್ನು ಪುಳಕಿತರಾಗಿಸಿ ಹೋದರು. ಈ ಮಾತು ಕೇಳಿ ನಮಗೆ ಆನಂದದ ಮಂಪರು. ಅತ್ತ ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಅಭಿಪ್ರಾಯ ಬೇರೆಯೇ. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತ “ಸ್ವಯಂ ನೇಮಿತ” ಆಕಾಂಕ್ಷಿ ಎಂದು ಬಿರುದು ನೀಡಿದರು. “self appointed frontrunners” ಅಂತೆ. ಬೇಸರಿಸಬೇಡಿ, ಈ ಸ್ವಯಂ ನೇಮಿತ ಕ್ಲಬ್ಬಿನಲ್ಲಿ ಜಪಾನ್, ಬ್ರೆಜಿಲ್ ಮತ್ತು ಜರ್ಮನಿ ಸಹ ಸೇರಿವೆ. ಆಹ್, ಈಗ ಸ್ವಲ್ಪ ಸಮಾಧಾನ ನೋಡಿ. ನಮ್ಮೊಂದಿಗೆ ಇತರರನ್ನೂ ಸೇರಿಸಿ ಅಪಹಾಸ್ಯ ಮಾಡಿದರೆ ಭಾರ ಸಹಜವಾಗಿಯೇ ಸ್ವಲ್ಪ ಕಡಿಮೆ ಆಗುತ್ತದೆ. ಈ ಭಾವನೆಯೇ ಇರಬೇಕು ನಮ್ಮ ಮಾಧ್ಯಮಗಳು ಇದನ್ನು ಒಂದು ‘slight’ ಎಂದು ಪರಿಗಣಿಸಲು ಸೋತಿದ್ದು. ನೀವು ಅನುಮತಿಸಿದರೆ ನನ್ನದೊಂದು ಸಂಶಯ. ಅಮೇರಿಕಾ ನಮ್ಮನ್ನು ಇನ್ಯಾವ ರೀತಿಯಲ್ಲಿ ನಡೆಸಿ ಕೊಂಡಾಗ ನಾವು ಎಚ್ಚೆತ್ತು ಕೊಂಡು ‘ thanks for everything, yank. bye bye’ ಎಂದು ವಿನಯದಿಂದ ಹೇಳೋದು? ಅಮೆರಿಕೆಯ ಸಹವಾಸ ಮಾಡಿದವರು ಉದ್ಧಾರವಾದ ಕುರಿತು ಕೈಲಾಸದಲ್ಲಿ ಮನೆ ಮಾಡಿರುವವನಿಗೆ ಬಹುಶಃ ಗೊತ್ತಿರಬಹುದು. ಬೇರಾರಿಗೂ ಗೊತ್ತಿರುವ ಬಗ್ಗೆ ವರದಿಯಿಲ್ಲ. ಸದ್ದಾಮ್ ಕಾಲಾವಧಿ ನಂತರದ ಇರಾಕಿನ ತೈಲ ಸಚಿವನಾಗಿದ್ದ ‘ಅಹಮದ್ ಶಲಾಬಿ’ ಹೇಳಿದ್ದು america betrays its friends. it sets them up and betrays them. I’d rather be america’s enemy. ನಿನ್ನ ಮೈತ್ರಿಗಿಂತ ನಿನ್ನ ಶತ್ರುತ್ವವೇ ಬಲು ಚೆಂದ ಎಂದು. ವಿಷಕನ್ಯೆಗೆ ಹೇಳಬಹುದಾದ ಸವಿ ಮಾತುಗಳು ಇವು, ಅಲ್ಲವೇ? ಅಮೆರಿಕೆಯ ಸಹಾಯದಿಂದ ಅಧಿಕಾರದ ಗದ್ದುಗೆಗೆ ಏರಿದ ವ್ಯಕ್ತಿಯೊಬ್ಬ ಈ ಮಾತನ್ನು ಹೇಳಬೇಕೆಂದರೆ ಅವನಿಗೆ ಎಂಥ ರಾಜೋಪಚಾರ ಸಿಕ್ಕಿರಬೇಕು?

ಈಗ ಈ ಬರಹದಲ್ಲಿ anti americanism ಧೋರಣೆಯನ್ನು ದಯಮಾಡಿ ಕಾಣಬೇಡಿ. ಅಮೆರಿಕೆಯವೇ ಆದ “Levis” ಜೀನ್ಸ್, ‘papa johns’ pizza, ಮತ್ತು ಕಡಿಮೆ ಸ್ಪೆಲ್ಲಿಂಗ್ ಇರುವ ‘ಅಮೇರಿಕನ್ ಇಂಗ್ಲಿಶ್’ ನನಗೆ ತುಂಬಾ ಇಷ್ಟ. ನನ್ನ ನಿಲುವು ಇಷ್ಟೇ. ನಮ್ಮ ರಾಜಕಾರಣ ಮತ್ತು ಅವರ ರಾಜಕಾರಣ ಸ್ವಲ್ಪ ‘ಡಿಫ್ಫ್ರೆಂಟು’. ಆದರೆ ನಮಗೆ ಈ ‘ಡಿಫ್ಫ್ರೆನ್ಸು’ ಅರಗಿಸಿಕೊಳ್ಳಲಾಗದಂಥ ‘depression’ ತಂದೊಡ್ಡುತ್ತದೆ. ಹಾಗಾಗಿ ಸಂಚಾರಿ ನಿಯಮದ ಥರ ‘ನಡುವೆ ಅಂತರವಿರಲಿ’ ರೀತಿಯ ಅಂತರ ಕಾಯ್ದು ಕೊಳ್ಳಲು ನನ್ನ ಹಂಬಲ. ಗುಮಾನಿ ಪಡಬೇಕಾದ ulterior motive ಇಲ್ಲ.

ಬನ್ನಿ ನಾನಿರುವ ಕೊಲ್ಲಿ ಪ್ರದೇಶಕ್ಕೆ. ಇಲ್ಲೊಂದು ಸ್ವಾರಸ್ಯ. ನೋಡಿ, ನಾನು ಕೊಲ್ಲಿ ಎಂದು ಟೈಪ್ ಮಾಡಿದಾಗ “ಕೊಳ್ಳಿ” ಅಂತ ತೋರಿಸಿತು ಗೂಗಲ್. ಒಂದು ರೀತಿಯ “ಕೊಳ್ಳಿ” ಎಂದೇ ಕರೆಯಬಹುದು ಈ ಪ್ರಾಂತ್ಯವನ್ನು. ಸೌದಿ ಅರೇಬಿಯಾದ ದೊರೆ ‘ಅಬ್ದುಲ್ಲಾ ಇಬ್ನ್ ಅಬ್ದುಲ್ ಅಜೀಜ್ ಅಲ್-ಸೌದ್’ ವಿಶ್ವದ ಮುಸ್ಲಿಮರು ಗೌರವಿಸುವ ವ್ಯಕ್ತಿತ್ವ. ಏಕೆಂದರೆ ಇಸ್ಲಾಮಿನ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನ ಇರುವುದು ಸೌದಿ ಅರೇಬಿಯಾದಲ್ಲಿ. ಇಲ್ಲಿನ ದೊರೆ ಹೆಮ್ಮೆಯಿಂದ ತನ್ನನ್ನು ತಾನು ಕರೆದುಕೊಳ್ಳುವುದು ಎರಡು ಪವಿತ್ರ ಕ್ಷೇತ್ರಗಳ ಸಂರಕ್ಷಕ ಎಂದು. ಸಾವಿರಾರು ಕೋಟಿ ಖರ್ಚು ಮಾಡಿ ಎರಡು ಪವಿತ್ರ ಕ್ಷೆತ್ರಗಳನ್ನು ಇನ್ನಷ್ಟು ವಿಸ್ತರಿಸಿದ ಖ್ಯಾತಿ ಈ ದೊರೆಗೆ. ಹಾಗಾಗಿ ವಿಶ್ವದ ಮುಸ್ಲಿಮರಿಗೆ ಇವರ ಮೇಲೆ ಆದರ, ಗೌರವ. ಹಾವಿನ ತಲೆ ಕಡಿಯುವಂತೆ ಕಡಿಯಬೇಕು ಎಂದು ಇರಾನಿನ ಕುರಿತು ಅಮೆರಿಕೆಗೆ ಶಿಫಾರಸು ಮಾಡಿದರು ದೊರೆ ಅಬ್ದುಲ್ಲಾ ಎಂದು ವಿಕಿಲೀಕ್ ಎಲ್ಲರನ್ನೂ ತಲ್ಲಣಗೊಳಿಸಿತು. ಒಬ್ಬ ಮುಸ್ಲಿಮ್ ರಾಷ್ಟ್ರದ ದೊರೆ ಮತ್ತೊಂದು ಸೋದರ ದೇಶದ ವಿರುದ್ಧ ಈ ರೀತಿ ಮಾತನಾಡಿದ್ದು ಅಚ್ಚರಿ ತರಿಸಿತು ಪಾಶ್ಚಾತ್ಯ ದೇಶಗಳಿಗೆ. ಇವರಿಬ್ಬರ ನಡುವಿನ ಸ್ನೇಹದ “ಆಳ” ಎಲ್ಲರಿಗೂ ಗೊತ್ತಿದ್ದರೂ ತಲೆ ಕಡಿಯಲು ಶಿಫಾರಸ್ಸು ಮಾಡುವ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಇರಾನ್ ಶಿಯಾ ಬಾಹುಳ್ಯದ ರಾಷ್ಟ್ರ ಮತ್ತು ಸೌದಿ, ಸುನ್ನಿ ರಾಷ್ಟ್ರ. ಚಾರಿತ್ರಿಕವಾಗಿ ಶಿಯಾ – ಸುನ್ನಿ ಪಂಗಡಗಳ ನಡುವಿನ ಜಟಾಪಟಿ ತುಂಬಾ ಹಳತು. ideological difference ಅಲ್ಲದಿದ್ದರೂ ವ್ಯಕ್ತಿ (ಪ್ರವಾದಿ ಮುಹಮ್ಮದ್ ಮತ್ತು ‘ಹಜರತ್ ಅಲಿ’ ವಿಷಯದಲ್ಲಿ) ನಿಷ್ಠೆಯಲ್ಲಿ ಸುನ್ನಿ ಮತ್ತು ಶಿಯಾ ಜನರಲ್ಲಿ ಒಡಕಿದೆ. ಸೌದಿ ದೊರೆಯ ಈ ಬೆಚ್ಚಿ ಬೀಳಿಸುವಂಥ ಮಾತನ್ನು ಕೇಳಿದ ಇರಾನ್ ಸೌದಿಯನ್ನು ಇನ್ನು ಯಾವ ರೀತಿ ನಡೆಸಿಕೊಳ್ಳಬಹುದು ಎಂದು ಕಾದು ನೋಡಬೇಕು.

ಈ ತೆರನಾದ ಸುದ್ದಿಗಳನ್ನು ಚಿಕ್ಕಾಸಿನ ಅಪೇಕ್ಷೆಯೂ ಇಲ್ಲದೆ ಬಟಾಬಯಲು ಮಾಡುತ್ತಿರುವ ವಿಕಿಲೀಕ್ ಮೇಲೆ ಅಮೇರಿಕ ಮುಂತಾದ ರಾಷ್ಟ್ರಗಳ ಕೆಂಗಣ್ಣು. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದೆಯೋದು ಲೋಕ ರೂಢಿಯೇ ತಾನೇ? ಅಮೇರಿಕಾ ಏಕೆ ಅದಕ್ಕೆ ಹೊರತಾಗಬೇಕು? ವಿಕಿಲೀಕ್ ವೆಬ್ ತಾಣ ಬೇರಾವುದಾದರೂ ಒಂದು ದೇಶ ಅಮೆರಿಕೆಯ ವಿರುದ್ಧ ಹೇಳಿದ್ದನ್ನು ಲೀಕ್ ಮಾಡಿದ್ದಿದ್ದರೆ ಅಮೇರಿಕ ಕುಣಿದು ಕುಪ್ಪಳಿಸುತ್ತಿತ್ತು. ಆದರೆ ‘ವಿಕಿಲೀಕ್’ ನ ಕೊಡಲಿ ತನ್ನ ಬುಡದ ಕಡೆಗೆ ಪ್ರಯಾಣ ಬೆಳೆಸಿದಾಗ ಮಾತ್ರ ಅಮೇರಿಕಾ ಹೌಹಾರಿತು. ಹೌಹಾರದೆ ಏನು? ಬೇಲಿಯೂ ತಾನೇ, ಮೇಯುವವನೂ ತಾನೇ. ಇದು ಅಮೆರಿಕೆಯ ವಿದೇಶಾಂಗ ನೀತಿ. ಹಾಗಾಗಿ ವಿಕಿಲೀಕ್ ಸ್ಥಾಪಕ ‘ಅಸಾಂಜ್’ ನನ್ನು ದೇಶದ್ರೋಹಿ ಎಂದು ಹಣೆ ಪಟ್ಟಿ ಲಗತ್ತಿಸಿದ್ದಲ್ಲದೆ ಅವನನ್ನು ವಧಿಸುವ ತನಕ ಅಮೆರಿಕೆಯ ಆಕ್ರೋಶ ಆವರಿಸಿತು. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದೆ ಅಸಾಂಜ್ ತನ್ನ ಕೆಲಸ ಇನ್ನೂ ಮುಂದುವರಿಸುವುದಾಗಿ ಅವನ ಬೆಂಬಲಿಗರಿಗೆ ಭರವಸೆ ನೀಡಿದ. ಈಗ ಆತನ ಕಣ್ಣು ಅಮೆರಿಕೆಯ ಅತಿ ದೊಡ್ಡ ಬ್ಯಾಂಕುಗಳ ಅವ್ಯವಹಾರ ಮತ್ತು ಕಾರ್ಯವೈಖರಿಯ ಕಡೆ. ಅಸಾಂಜ್ ನ ಮಾತು ಸಿಡಿಲಿನಂತೆ ಎರಗಿತು ಬ್ಯಾಂಕಿಂಗ್ ವಲಯಗಳ ಮೇಲೆ. ಇವನ್ನೆಲ್ಲಾ ಕೇಳುತ್ತಿರುವ, ನೋಡುತ್ತಿರುವ ನಮಗೆ ಅಮೇರಿಕಾ ಪ್ರಪಂಚದ ಎಲ್ಲಾ ಪಾಪಗಳ, ಕೃತ್ರಿಮಗಳ ಉಗಮಸ್ಥಾನವೋ ಎಂದು ತೋರುವುದು ಅಸಹಜವೇನಲ್ಲ. ಹಾಲಿವುಡ್ ಅಂದ್ರೆ ಒಂದಿಷ್ಟು ಸೆಕ್ಸ್ ಇರಲೇಬೇಕು, ಏನಂತೀರಾ? ಹಾಗೆಯೇ ಅಂತಾರಾಷ್ಟ್ರೀಯ ರಾಜಕಾರಣದಲ್ಲೂ ಒಂದಿಷ್ಟು ಶೃಂಗಾರ ನುಸುಳುವುದಿದೆ ಎಂದು ವಿಕಿಲೀಕ್ ಬಯಲು ಮಾಡಿತು. ಲಿಬ್ಯಾ ದೇಶದ charismatic ಅಧ್ಯಕ್ಷ ‘ಮುಅಮ್ಮರ್ ಗದ್ದಾಫಿ’ ಜೊತೆ ಯಾವಾಗಲೂ ಮೋಹಕ ಅಂಗಸೌಷ್ಟವ ಹೊಂದಿದ ಯುಕ್ರೇನ್ ದೇಶದ ನರ್ಸ್ ಇರುತ್ತಾಳೆ ಎಂದು ಒಬ್ಬ ರಾಜತಾಂತ್ರಿಕ ಅಸೂಯೆಯಿಂದ ಜೊಳ್ಳು ಸುರಿಸಿದ. ಅಂದ್ರೆ ಬರೀ ಬೋರ್ ಹೊಡೆಸುವ global warming ರಾಜಕಾರಣ ಮಾತ್ರ ಅಲ್ಲ ಮಹೋದಯರ ಆಸಕ್ತಿ ಎಂದು ಇದರಿಂದ ಸ್ಪಷ್ಟವಾಯಿತು. ಕಂಪ್ಯೂಟರ್ ಬದಿಗೆ ಸರಿಸಿ ಹೀಗೇ ಮೋಜಿಗಾಗಿ ಸ್ವಲ್ಪ ಊಹಿಸಿ. ವಿಕಿಲೀಕ್ ತೆರನಾದ ಒಂದು ವ್ಯವಸ್ಥೆ ನಮ್ಮ ದೇಶದಲ್ಲಿಯೂ ಇದ್ದಿದ್ದರೆ 2G, 3G ಕಾಂಡಗಳು, ಆದರ್ಶ್ ಸೊಸೈಟಿ, ಸೈನಿಕರ ಶವ ಪೆಟ್ಟಿಗೆ ಗಳಂಥ ಹಗರಣ ಗಳು, ನಾವು ಕಂಡ ಬಗೆ ಬಗೆಯ ವರ್ಣರಂಜಿತ ಧಂಧೆಗಳು, ಇವೆಲ್ಲಾ ಪಿಕ್ನಿಕ್ ಥರ ಕಾಣುತ್ತಿದ್ದವು. ಈ ಮೇಲೆ ಹೇಳಿದ ಹಗರಣಗಳನ್ನೂ ಮೀರಿಸುವ ದೈತ್ಯಾಕಾರದ ತಿಮಿಂಗಿಲಗಳು ವಿಕಿಲೀಕ್ ಬಲೆಗೆ ಸಿಕ್ಕು ವಿಲವಿಲ ಎನ್ನುತ್ತಿದ್ದವೋ ಏನೋ.

ಜೂಲಿಯನ್ ಅಸಾಂಜ್ ನ ವಿಕಿಲೀಕ್ ಜ್ವಾಲಾಮುಖಿಯಂತೆ ಸ್ಫೋಟಿಸಿದೆ. ಅದರ ಸುಡುವ ಲಾವಾರಸ ಜಗತ್ತಿನ ನಾಲ್ಕೂ ಕಡೆ ಹರಿಯುತ್ತಿದೆ. ಹರಿಯುವ ನಾಲಗೆಗಳಿಗೆ ಇನ್ನಷ್ಟು ಫಲವತ್ತನ್ನು ಒದಗಿಸುತ್ತಿದೆ. ಇದಕ್ಕೆಲ್ಲಾ ಕಾರಣೀಭೂತನಾದ ಜೂಲಿಯಾನ್ ಅಸಾಂಜ್ ನನ್ನು ಹೇಗೆ ಗತಿ ಕಾಣಿಸಬೇಕೆಂದು ಬಲಿಷ್ಠ ರಾಷ್ಟ್ರಗಳು ಲೆಕ್ಕ ಹಾಕುತ್ತಿವೆ. ಅಮೇರಿಕಾ ವಿರೋಧಿಯಾದ ಅಸಾಂಜ್ ಒಬ್ಬ ಸಾಮಾನ್ಯ ಆಸ್ಟ್ರೇಲಿಯನ್ ಪ್ರಜೆ. ಆತನದು ಠಿಕಾಣಿ ಯಿಲ್ಲದ ವಾಸ. ಒಂದೇ ಸ್ಥಳದಲ್ಲಿ ಎರಡು ರಾತ್ರಿಗಳನ್ನು ಕಳೆಯದ ಅಲೆಮಾರಿ. ವಿಶ್ವದ ಮೇಲಿನ ಅಮೆರಿಕೆಯ ಕಪಿ ಮುಷ್ಠಿ ಅವನಿಗೆ ಇಷ್ಟವಿಲ್ಲ. ಪ್ರಪಂಚದಲ್ಲಿ ನಡೆಯುವ ಅನ್ಯಾಯಗಳು ಜನರಿಗೆ ತಲುಪಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಂಬಿರುವ ಈತ, ಮಾಡುತ್ತಿರುವುದು ಒಳ್ಳೆಯ ಕೆಲಸವೋ ಅಥವಾ ಕೆಲಸವಿಲ್ಲದ ಬಡಗಿಯ ಬೇಡದ ಉಸಾಬರಿಯೋ ಎಂದು ವಿಶ್ವವೇ ಹೇಳಬೇಕು. ಆದರೆ ಆತನ ತಾಯಿ ಮಾತ್ರ ಹೇಳುತ್ತಿರುವುದು “ನನಗೆ ನನ್ನ ಮಗನ ಪರಿಸ್ಥಿತಿಯ ಬಗ್ಗೆ ಆತಂಕವಾಗುತ್ತಿದೆ, ನಾನು ಅವನನ್ನು ಪ್ರೀತಿಸುತ್ತೇನೆ, ಅವನು ಎಷ್ಟಿದ್ದರೂ ನನ್ನ ಮಗನೇ. ನನ್ನ ಮತ್ತು ನನ್ನ ಮಗನ ಬಗ್ಗೆ ಅವರು ಹೇಳುತ್ತಿರುವುದೆಲ್ಲಾ ನಿಜವಲ್ಲ’ ಎಂದು ಆಕೆ ತನ್ನ ಮಗನ ಸುರಕ್ಷೆಗಾಗಿ ಹಂಬಲಿಸುತ್ತಾಳೆ, ಎಲ್ಲಾ ಹೆತ್ತಬ್ಬೆಯರು ಚಡಪಡಿಸುವ ರೀತಿಯಲ್ಲಿ.

ಗೊತ್ತಿಲ್ಲದವರಿಗೆ: ‘ವಿಕಿ’ ಎಂದರೆ, ‘ಹವಾಯಿ’ ಭಾಷೆಯಲ್ಲಿ ವೇಗ, ಕ್ಷಿಪ್ರ ‘fast’ ಅಂತ. ಮತ್ತು ಲೀಕ್ ಎಂದರೆ ಅದೇ ಆರ್ಡಿನರಿ ಲೀಕು, ನಮ್ಮಗಳ ಅಡುಗೆ ಮನೆಯಲ್ಲಿನ ‘ನಲ್ಲಿ’ ತೊಟ ತೊಟ ಎಂದು ಹನಿಯುದುರಿಸುತ್ತಾ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸೋರಿಕೆ. ಈ ಕ್ಷಿಪ್ರ ಮತ್ತು ಸೋರಿಕೆ ಇವೆರಡೂ ಸೇರಿಕೊಂಡಾಗ ಆಗುವುದು ants in the pant ಪರಿಸ್ಥಿತಿ. ಮೇಲೆ ವಿವರಿಸಿದ ಪರಿಸ್ಥಿತಿ.

pic courtesy: independent, UK

ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು

ಕೆಲವೊಂದು ಮಾತುಗಳು ಎಂದಿಗೂ ಕಿವಿಗಳಲ್ಲಿ ರಿಣ ಗುಟ್ಟು ತ್ತಿರುತ್ತವೆ. ಅವು ಕುಹಕವಾಗಿರಬಹುದು, ಪ್ರಶಂಸೆ ಆಗಿರಬಹುದು, ತಮಾಷೆ ಅಥವಾ ಗೇಲಿಗಾಗಿ ಇರಬಹುದು. ಕೆಳಗಿದೆ ಒಂದಿಷ್ಟು ಮಾತುಗಳು ನನ್ನ ನೆನಪಿನ ಮೂಸೆಯಿಂದ ಹೊರಬಂದವು.

ಸೋಮನಾಥ್ ಚಟರ್ಜೀ ದೊಡ್ಡ ಮಾತುಗಾರ, ವಾಗ್ಮಿ. ಭಾಜಪ ಸೋತ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರ ಸೋಮನಾಥರನ್ನು ಲೋಕಸಭೆಯ ಸಭಾಪತಿ ಆಗಿ ನೇಮಿಸಿತು. ಚಟರ್ಜಿ ಯವರನ್ನು ಅಭಿನಂದಿಸುತ್ತಾ, ಸೋಮನಾಥ ಚಟರ್ಜಿ ಮಟ್ಟದ ವಾಗ್ಮಿಯಲ್ಲದಿದ್ದರೂ ಒಳ್ಳೆಯ ಭಾಷಣಕಾರರಾದ ವಾಜಪೇಯಿ “ಇಷ್ಟು ಕಾಲ ತಾವು ಹೇಳಿದ್ದನ್ನು ನಾವು ಕೇಳುತ್ತಿದ್ದೆವು, ಈಗ ನಾವು ಹೇಳಿದ್ದನ್ನು ಕೇಳುತ್ತಾ ಕೂರುವ ಸರದಿ ತಮ್ಮದು ಎಂದು ಹಾಸ್ಯದ ಚಟಾಕಿ ಹಾರಿಸಿದ್ದರು. ಸಭಾಪತಿಯ ಕೆಲಸ ಸದಸ್ಯರು ಮಾತನಾಡುವುದನ್ನು ಕೇಳುತ್ತಾ ಕೂರುವುದು ತಾನೇ?

ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಯಾವುದೇ ಗಲಭೆಗಳು ದೇಶದಲ್ಲಿ ನಡೆದರೂ ಮೂರಕ್ಷರದ ಸಂಘಟನೆ ಯೊಂದನ್ನು ಯಾವಾಗಲೂ ದೂರುತ್ತಿದ್ದರು. ಹಾಗೆಯೇ ವಿದೇಶೀ ಕೈವಾಡದ ಮಾತು ಬಂದಾಗ ನೆರೆಯ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸುತ್ತಿದ್ದರು. ಪದೇ ಪದೇ ಈ ಮಾತನ್ನು ಕೇಳಿ ಬೇಸತ್ತಿದ್ದ ವಿರೋಧಪಕ್ಷದ ನಾಯಕರಲ್ಲಿ ಒಬ್ಬರಾದ ಸುಬ್ರಮಣ್ಯಮ್ ಸ್ವಾಮೀ ಭಾಷಣ ವೊಂದರಲ್ಲಿ ಹೇಳಿದ್ದು. “ ನಾನು ಲೋಕಸಭೆಯ ಕಲಾಪಗಳಲ್ಲಿ ಪಾಲುಗೊಂಡಾಗ ವಿದೇಶೀ ಸಮಸ್ಯೆಗಳಿಗೆ ಇಂದಿರಾ ಪಾಕಿನ ಕೈವಾಡ ಇದೆ ಎಂದು ಹೇಳುವುದನ್ನು ಹಲವು ಬಾರಿ ಕೇಳಿದ್ದೇನೆ. ಭಾರತದಲ್ಲಿ ಜನಸಂಖ್ಯೆ ವಿಪರೀತ ಏರುತ್ತಿದೆ, ಇದರಲ್ಲೂ ಪಾಕಿಸ್ತಾನದ ಕೈವಾಡ ಇರಬಹುದೇ ಎಂದು ನನ್ನ ಸಂಶಯ ಎಂದು ತಮಾಷೆ ಮಾಡಿದರು.

ಬಾಟ್ಲಿಂಗ್ ಹಗರಣದ ಸಮಯ ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಡೆ ವಿಚಾರಣೆಗೆ ಆದೇಶ ನೀಡಿದರು. ಕುಂಬ್ಳೆ ಕಾಯಿ ಕಳ್ಳ ಅಂದ್ರೆ ಹೆಗಲನ್ನು ಯಾಕೆ ಮುಟ್ಟಿ ನೋಡ್ ಕೊಳ್ತೀರಾ ಎಂದು ವಿರೋಧ ಪಕ್ಷ ಕೆಣಕಿದಾಗ ಹೆಗ್ಡೆ ಹೇಳಿದ್ದು, “… ಹೆಗಲು ಮುಟ್ಟಿ ನೋಡಿಕೊಂಡಾಗ ಬೂದಿ ಮೆತ್ತಿ ಕೊಂಡಿತ್ತು” ಸಂಶಯ ನಿವಾರಣೆಯಾಗಲಿ ಎಂದು ತನಿಖೆಗೆ ಆದೇಶ ನೀಡಿದೆ ಎಂದರು.

ಬಹಳ ವರ್ಷಗಳ ಹಿಂದಿನ ಮಾತು. ಲೋಕಸಭೆಯಲ್ಲಿ ಒಮ್ಮೆ ಸದಸ್ಯರೊಬ್ಬರು ಕೇರಳದ ಬಗ್ಗೆ ಚರ್ಚೆ ನಡೆದಾಗ “ಕೇರಳದ ಹೆಣ್ಣು ಮಕ್ಕಳು ಬೆಳದಿಂಗಳಿನಲ್ಲಿ ನೋಡಲು ಬಲು ಚೆಂದ” ಎಂದು ಪ್ರಶಂಸಾತ್ಮಕವಾಗಿ ಹೇಳಿದ್ದೆ ತಡ ಕೇರಳದ ಸದಸ್ಯರೆಲ್ಲ ತೀವ್ರವಾಗಿ ಪ್ರತಿಭಟಿಸಿ ಆ ಬಡಪಾಯಿ ಸದಸ್ಯ ಕ್ಷಮೆ ಕೇಳುವಂತೆ ಮಾಡಿದರು.

ನಮ್ಮ ಕರ್ನಾಟಕದ ವಿಧಾನ ಪರಿಷತ್ ಸದಸ್ಯ A.K. ಸುಬ್ಬಯ್ಯ ಒಂದು ರೀತಿಯ AK 47 ತುಪಾಕಿಯಂತೆ. ಅವರ ಯಾವುದೇ ಮಾತುಗಳು ನೆನಪಿಗೆ ಬರದಿದ್ದರೂ ಇಬ್ರಾಹೀಮರ ROLEX WATCH ನ ಹಿಂದೆ ಬಿದ್ದು ಸಾಕಷ್ಟು ಸತಾಯಿಸಿದ್ದು ಮಾತ್ರ ಇನ್ನೂ ನೆನಪಿದೆ.

ತನ್ನ rabble rousing ಭಾಷಣದಿಂದ ದೇಶದ ವಿವಿದೆಡೆ ದೊಡ್ಡ ತಲೆನೋವು ತರುತ್ತಿದ್ದ ತೊಗಾಡಿಯಾ ಬಿಹಾರ ಪ್ರವಾಸದ ಮೇಲೆ ಪಾಟ್ನಾ ನಗರದಲ್ಲಿ ಬಂದಿಳಿದಾಗ ವಿಮಾನ ನಿಲ್ದಾಣ ದಿಂದಲೇ ಆತನನ್ನು ಆತ ಬಂದ ಊರಿಗೆ ರವಾನಿಸಿ ಆದೇಶ ಹೊರಡಿಸಿದ ಲಾಲೂ ಪ್ರಸಾದ ಯಾದವ್ ಪತ್ರಕರ್ತರಿಗೆ ಹೇಳಿದ್ದು “ ತೊಗಾಡಿಯಾ ನಿಗೆ ಎಂಥ ಲಾತ (kick) ಕೊಟ್ಟಿದ್ದೇವೆ ಎಂದರೆ ಆತ land ಆಗೋದು ದೆಹಲಿಯಲ್ಲೇ (we have kicked him like a football and he will land only in delhi) ಎಂದು ತಮ್ಮ ಎಂದಿನ ಚಮತ್ಕಾರದ ನಗುವಿನೊಂದಿಗೆ ಹೇಳಿದರು. ರಾಜಕಾರಣಿಗಳು ಬರೀ ರಾಜಕೀಯ ಮಾತ್ರವಲ್ಲ ತಮ್ಮನ್ನು ಆರಿಸಿದ ಜನರಿಗೆ ಆಗಾಗ ಪುಕ್ಕಟೆ ಮನರಂಜನೆಯನ್ನೂ ಕೊಡುತ್ತಾರೆ.

ಭಾಜಪದ ಅಧಿಕಾರಾವಧಿಯಲ್ಲಿ ವಾಜಪೇಯೀ ಪ್ರಧಾನಿಯಾದರೂ ತೆರೆಮರೆಯ ಚುಕ್ಕಾಣಿ ಅದ್ವಾನಿ ಕೈಯ್ಯಲ್ಲಿ ಎಂದು ಕೆಲವರ ಅಭಿಮತವಾಗಿತ್ತು. ಹಾಗೆಂದ ಮೇಲೆ ಯಾರದಾದರೂ ಬಾಯಲ್ಲಿ ಉದುರಲೇ ಬೇಕಲ್ಲವೇ ಅಣಿ ಮುತ್ತುಗಳು? ಉದುರಿದವು ನೋಡಿ ಆವರದೇ ಪಕ್ಷದ ಮುಖಂಡ ಶೇಷಾದ್ರಿ ಬಾಯಿಂದ. ವಾಜಪೇಯೀ ಭಾಜಪ ಸರಕಾರದ ಮುಖವಾಡ ಮಾತ್ರ ಎಂದು ಹಾಕಿದರು ಬಾಂಬನ್ನು. ಹಿಂದಿಯಲ್ಲಿ “ಮುಖೋಟ” ಕನ್ನಡದಲ್ಲಿ ಮುಖವಾಡ. ರಾಜಧಾನಿ ಸೇರಿ ದೇಶವೇ ನಲುಗಿತು ಈ ಬಾಂಬಿಗೆ. ಈ ಮಾತಿನ ಕಾರಣ ದೊಡ್ಡ ಗಲಾಟೆ ಎದ್ದ ಕೂಡಲೇ ತಡಬಡಿಸಿ ಅವರು ಹೇಳಿದ್ದು “ನಾನು ಹೇಳಿದ್ದು ಮುಖೋಟಾ ಅಲ್ಲ, “ಮುಕುಟ್” (ಕಿರೀಟ) ಹೇ ಹೇ ಹೇ ಎಂದು ಸೋತ ನಗುವಿನೊಂದಿಗೆ ತಮ್ಮ ಮತ್ತು ಸರಕಾರದ ಮಾನ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದರು. ಕೆಲವೊಮ್ಮೆ ರಾಜಕಾರಣಿಗಳು ತಾವು ಮೊದಲು ರಾಜಕಾರಣಿ ನಂತರ ಎಲ್ಲರಂತೆಯೇ “ಮನುಷ್ಯ” ಎಂದು ಸಾಬೀತು ಪಡಿಸುತ್ತಾರೆ ತಮ್ಮ ಮಾತುಗಳಿಂದ.

೧೯೯೦ ರಲ್ಲಿ ಇರಾಕ್ ನ ಅಧ್ಯಕ್ಷರಾದ ಸದ್ದಾಮ್ ಹುಸೇನರು ಕುವೈತ್ ದೇಶವನ್ನು ವಶಪಡಿಸಿಕೊಂಡದ್ದಕ್ಕೆ ಅಮೆರಿಕಾದ ಅಧ್ಯಕ್ಷ ಬುಶ್ ಸೀನಿಯರ್ ಇರಾಕಿನ ಮೇಲೆ ಆಕ್ರಮಣ ಎಸಗಲು ಮೀನಾ ಮೇಷ ಎಣಿಸುತ್ತಿದ್ದಾಗ ಅಂದಿನ ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಹೇಳಿದ್ದು “dont wobble, george” ಅಂತ. ಅಂದರೆ ಹೆದರಬೇಡ ಜಾರ್ಜ್, ನಾನಿದ್ದೇನೆ ನಿನ್ನ ಸಾಮೂಹಿಕ ನರಹತ್ಯೆಗೆ ಸಾಕ್ಷಿಯಾಗಿ ಮತ್ತು ಬೆಂಬಲವಾಗಿ, ಸಾಂಗವಾಗಿ ಸಾಗಲಿ ನಿನ್ನ ಅಮಾಯಕರ ಮೇಲಿನ ಆಕ್ರಮಣ ಎಂದು. ಒಳ್ಳೆಯ ಕೆಲಸಕ್ಕೆ ಮಿತ್ರರು ಸಿಗುವುದು ಸ್ವಲ್ಪ ವಿರಳವೇ, ಆದರೆ ಮನೆ ಹಾಳು ಕೆಲಸಕ್ಕೆ ಸದಾ ಜನರ ಬೆಂಬಲ ಇರುತ್ತದೆ ಎನ್ನುವುದಕ್ಕೆ ಬ್ರಿಟನ್ನಿನ “ಉಕ್ಕಿನ ಮಹಿಳೆ” ಸಾಕ್ಷಿಯಾದರು.

ಒಬಾಮಾ ಬಂದ್ರು, ಹೋದ್ರು , period .

ಅಮೆರಿಕೆಯ ಅಧ್ಯಕ್ಷ ಮಹೋದಯರು ಭಾರತದಲ್ಲಿ. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು, ಗಗನಚುಂಬಿ ಕಟ್ಟಡಗಳು ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನ ನೋಡಿ ಪ್ರಶಂಸಿಸಲು ಮತ್ತು ಮುಂಬೈಗೆ ಬಂದಿಳಿದ ಒಬಾಮ ಮುಂಬೈ ನರಹತ್ಯೆಯ ರೂವಾರಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ನಾಮಕರಣ ಮಾಡಬಹುದು ಎಂದು. ಆದರೆ ಒಬಾಮರಿಗೆ ಅಥವಾ ಅಮೆರಿಕನ್ನರಿಗೆ ಮುಂಬೈ ನರಹತ್ಯೆ ದೊಡ್ಡ ವಿಷಯವಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ರಾಷ್ಟ್ರರಾಷ್ಟ್ರ ಗಳ ನಡುವಿನ ಸಂಬಂಧದಲ್ಲಿ ಅನುಭವವಾಗುವ collateral damage ಅಷ್ಟೇ ಮುಂಬೈಯಲ್ಲಿ ನಡೆದ ನಗ್ನ ಹಿಂಸೆ. ಪಾಕಿಗಳನ್ನು ವಿಚಾರಿಸಿ ಕೊಳ್ಳಲು ನಾವು ಅಮೆರಿಕೆಯನ್ನಾಗಲೀ ಇನ್ಯಾವುದೇ ರಾಷ್ಟ್ರವನ್ನಾಗಲಿ ಅವಲಂಬಿಸಕೂಡದು ಎಂದು ಚಾಣಕ್ಯಪುರಿಗೆ ಯಾವಾಗ ಹೊಳೆಯುತ್ತದೋ ನೋಡೋಣ. ಹಾಗೇನಾದರೂ ಸುದೈವವಶಾತ್ ಹೊಳೆದಲ್ಲಿ ಅಷ್ಟು ಹೊತ್ತಿಗೆ ನಾವೆಲ್ಲಾ ಪಾಕಿ ಭಯೋತ್ಪಾದಕರಿಗೆ  ಬಲಿಯಾಗದೆ ಜೀವಂತವಾಗಿದ್ದರೆ ನಮ್ಮ ಪುಣ್ಯ ಸಹ ಹೌದು.

ಈ ಮಧ್ಯೆ ಪತ್ರಿಕೆಗಳು ಮತ್ತು ಟೀವೀ ಮಾಧ್ಯಮಗಳು ಒಬಾಮಾ ಪಾಕ್ ಬಗ್ಗೆ ಏನೂ ಹೇಳಲೇ ಇಲ್ಲ ಎಂದು ಮುನಿಸಿಕೊಂಡವು. ನಾವೆಲ್ಲಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಬೇಡಿ ಎಂದು ಪಾಕಿಗಳಿಗೆ ತಾಕೀತು ಮಾಡಬಹುದು ಎಂದು ಬಗೆದಿದ್ದೆವು ಆದರೆ ಅಮೇರಿಕಾ ಎಂದಿಗೂ ಪಾಕಿನ ಮಿತ್ರ ಎಂದು ಸಾಬೀತು ಪಡಿಸಿತು ಎಂದು ಹಲುಬಿದವು ಮಾಧ್ಯಮಗಳು. ಒಂದು ರೀತಿಯ ದೈನಂದಿನ ಬದುಕಿನ ದೃಶ್ಯದ ಥರ ಕಾಣುತ್ತಿಲ್ಲವೇ ಇದು? ಕಮಲಮ್ಮನ ಮನೆಗೆ ಪಕ್ಕದ ಮನೆಯ ಜಾನಕಮ್ಮ ಬಂದು ಸರಸಮ್ಮನ ಬಗ್ಗೆ ಏನೂ ಚಾಡಿ ಹೇಳಿಲ್ಲ ಎಂದು ದೂರುವ ಹಾಗೆ ವರ್ತಿಸಿದವು ಮಾಧ್ಯಮಗಳು ಮತ್ತು ಒಬಾಮಾರ ಭೇಟಿಯ ಬಗ್ಗೆ ಮಾತನಾಡಲು ಬಂದ ಪಂಡಿತರು. ಅಮೇರಿಕಾ ಪಾಕಿನ ಬಗ್ಗೆ ಅಷ್ಟು ಸುಲಭವಾಗಿ ದೂರಲು ಹೋಗೋದಿಲ್ಲ. ಕೆಲವಾರಗಳ ಹಿಂದೆ ಬ್ರಿಟಿಶ್ ಪ್ರಧಾನಿ ಕಮೆರೂನ್ ಬಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದು ಕೊಂಡಿದ್ದರು. ಭಯೋತ್ಪಾದಕತೆ ಶುರು ಆಗೋದೆ ಪಾಕಿನಿಂದ ಎನ್ನುವರ್ಥದ ಮಾತನ್ನು ಹೇಳಿದರು. ಹಾಗೆ ಹೇಳಿದ್ದಕ್ಕೆ ಪಾಕಿನಿಂದ ಉಗ್ರ ಪ್ರತಿಭಟನೆ ಬಂದರೂ ಕಮೆರೂನ್ ಜಗ್ಗಲಿಲ್ಲ. ಆದರೆ ಇದನ್ನು ವೀಕ್ಷಿಸಿದ್ದ ಅಮೆರಿಕೆಗೆ ಇದು ಎಚ್ಚರಿಕೆ ಗಂಟೆಯಾಯಿತು. ಕೆಮೆರೂನ್ ಏನೇ ಹೇಳಿದರೂ ಅವರಿಗೆ ನಷ್ಟವಿಲ್ಲ ಏಕೆಂದರೆ ಆಫ್ಘಾನಿಸ್ತಾನದಲ್ಲಿ ಅವರ ಪಾತ್ರ ದೊಡ್ಡದಲ್ಲ. ಆದರೆ ಅಮೆರಿಕೆಯ ವಿಷಯ ಹಾಗಲ್ಲ. ಕಂದಹಾರದ ಉಗ್ರರನ್ನು ಬಲಿ ಹಾಕಬೇಕೆಂದರೆ ಪಾಕಿನ ಸಹಕಾರ ಬೇಕೇ ಬೇಕು. ನಾವ್ಯಾಕೆ ಬೇಡದ ಉಸಾಬರಿಗೆ ಕೈ ಹಾಕಿ ಕಷ್ಟದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕು. ನಾವು ಬಂದಿರೋದು ವ್ಯಾಪರಕ್ಕೊಸ್ಕರ. ವ್ಯಾಪಾರ ಕುದುರಿಸಿ ಒಂದಿಷ್ಟು ಡಾನ್ಸ್ ಮಾಡಿ ಭಾರತೀಯರನ್ನು ಮೋಡಿ ಮಾಡಿದರೆ ಸಾಕು ಎಂದು ಅಮೆರಿಕೆಯ ಎಣಿಕೆ. ಈ ಕಾರಣಕ್ಕಾಗಿಯೇ ಅಮೆರಿಕೆಯ ದಿವ್ಯ ಮೌನ ಪಾಕ್ ಭಯೋತ್ಪಾದಕತೆ ಬಗ್ಗೆ. ಒಬಾಮ ಬಂದ ಮೊದಲ ದಿನವೇ 10 billion ಡಾಲರ್ಗಳ ವ್ಯಾಪಾರ ಮಾಡಿತು ಅಮೇರಿಕ.

NPR ಅಮೆರಿಕೆಯ ಪ್ರಸಿದ್ಧ ರೇಡಿಯೋ ಮಾಧ್ಯಮ. ಒಬಾಮಾ ಜೊತೆಗೆ ಬಂದಿದ್ದ npr ವರದಿಗಾರ st. xaviers college ನಲ್ಲಿ ನಡೆದ ಅಧ್ಯಕ್ಷರ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ದ ವೇಳೆ ೧೯ ರ ಓರ್ವ ತರುಣಿ ಪಾಕಿನ ಭಯೋತ್ಪಾದನೆ ಬಗ್ಗೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಹೇಳುತ್ತಾ “ಭಾರತಕ್ಕೆ ಪಾಕಿಸ್ತಾನ ಎಂದರೆ ಒಂದು ರೀತಿಯ jealous and rivalry ಎಂದು ಹೇಳಿದ. rivalry ಏನೋ ಸರಿಯೇ. ಆದರೆ jealous ಯಾವುದರ ಬಗ್ಗೆಯೋ ತಿಳಿಯುತ್ತಿಲ್ಲ. ಎಲ್ಲಾ ತೀರ್ಮಾನಗಳಿಗೂ, ನಿರ್ಧಾರಗಳಿಗೂ ಇಸ್ಲಾಮಾಬಾದ್ ಅಮೆರಿಕೆಯ ವಾಷಿಂಗ್ಟನ್ ನಿಂದ dictation ತೆಗೆದು ಕೊಳ್ಳುತ್ತದಲ್ಲಾ, ಪಾಕಿಗಳ ಈ ಬೆನ್ನುಲುಬಿಲ್ಲದ ನಡವಳಿಕೆ ಬಗ್ಗೆ ಇರಬೇಕು ನಮಗೆ ಮತ್ಸರ, jealousy.           

ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕಾರಣಿಗಳಂತೆಯೇ ಭರವಸೆಯನ್ನ ನೀಡಲು ಮರೆಯಲಿಲ್ಲ ಒಬಾಮಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ ಒಬಾಮ ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತ ಜಗಾರೂಕತೆಯಿಂದ ವರ್ತಿಸುವಂತೆ ಸೂಕ್ಷ್ಮವಾಗಿ ಸೂಚಿಸಿದರು. ಆದರೆ ಈ ಆಶ್ವಾಸನೆಯ ಬೆನ್ನಲ್ಲೇ ಬಂದವು ಅಪಸ್ವರಗಳು, ಜರ್ಮನಿ ಮತ್ತು ಜಪಾನ್ ದೇಶಗಳಿಂದ. ಒಬಾಮಾ ನೀಡಿದ್ದು ಆಶ್ವಾಸನೆ ಮಾತ್ರ, ಈ ಆಶ್ವಾಸನೆ ವಿರುದ್ಧವೇ ತಕರಾರು ಬಂದರೆ ಇನ್ನು ವಿಶ್ವಸಂಸ್ಥೆಯಲ್ಲಿ ನಮಗೆ ಯಾವ ರೀತಿಯ ಬೆಂಬಲ ಸಿಕ್ಕೀತು ಎಂದು ಊಹಿಸಲು ನಮಗೆ ರಾಜನೀತಿಯಲ್ಲಿ ಡಾಕ್ಟರೇಟ್ ಪದವಿಯ ಅವಶ್ಯಕತೆಯಿಲ್ಲ.  

ಒಟ್ಟಿನಲ್ಲಿ ಒಬಾಮ ಬಂದರು, ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. ಒಬಾಮ ಎಲ್ಲಿಗೆಹೋದರು, ಏನನ್ನು ತಿಂದರು,  ಹೇಗೆ ಕುಣಿದರು ಇತ್ಯಾದಿ ಇತ್ಯಾದಿ ಪುಂಖಾನುಪುಂಖವಾಗಿ ವರದಿ ಮಾಡಿದವು. ನಮಗೂ ಒಂದು ರೀತಿಯ ಪುಳಕ. ಬಿಳಿಯರ ನಾಡಿನಿಂದ ಒಂದು ಕಾಗೆ ಬಂದಿಳಿದರೂ ನಮ್ಮ ಬದುಕು ಸಾರ್ಥಕವಾಗಿ “ಅತಿಥಿ ದೇವೋ ಭವನನ್ನು ಸಂತುಷ್ಟ ನನ್ನಾಗಿಸಿದ ಭಾವನೆಯಲ್ಲಿ ಧನ್ಯರಾಗಿ ಬಿಡುತ್ತೇವೆ.