ಪಾಕಿಸ್ತಾನದ yorker

ಪಾಕಿಸ್ತಾನದ ವಿದೇಶಾಂಗ ಸಚಿವೆ ಮಾತುಕತೆಗೆಂದು  ಭಾರತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಒಂದು ‘ಯಾರ್ಕರ್’ ನಮ್ಮ ಕಾಲ ಬುಡಕ್ಕೆ ಬಂದು ಬಿದ್ದಿದೆ. ಭಾರತದ ವಿದೇಶಾಂಗ ಸಚಿವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮುತ್ಸದ್ದಿಯಾಗಿದ್ದು ಪಾಕ್ ನ ಹೊಸ ವಿದೇಶಾಂಗ ಸಚಿವೆ ಅವರ ಮುಂದೆ ಏನೂ ಅಲ್ಲ ಅನುಭವದಲ್ಲಿ. ಹೀಗೆಂದು ಹೇಳಿದ್ದು ಕಾಂಗ್ರೆಸ್ ಹೈ ಕಮಾಂಡ್ ಅಲ್ಲ. ಈ ಅಪರೂಪದ ಹೊಗಳಿಕೆಯ ಮಾತುಗಳು ಪಾಕಿಸ್ತಾನದ ಜಮೀಯತ್ ಉಲೇಮಾ ಪಕ್ಷದ ಫಜ್ಲುರ್ ರಹಮಾನ್ ಬಾಯಿಂದ ಬಿದ್ದಿದ್ದು. ಭಾರತದ ಕೃಷ್ಣ, ಪಾಕ್ ನ ನೂತನ ವಿದೇಶಾಂಗ ಸಚಿವೆ ‘ಹೀನಾ ಖಾರ್’ ರನ್ನು outsmart ಮಾಡುವರು ಎನ್ನುವ ಮಾತಿನ ಹಿಂದೆ ಮಾತುಕತೆಗಳ ಮುನ್ನವೇ ನಮ್ಮನ್ನು outsmart ಮಾಡೋ ಹುನ್ನಾರವೇ ಪಾಕಿಗಳದು? ಪಾಕಿಸ್ತಾನವನ್ನು ನಂಬಿ ಕೆಟ್ಟವರ “ಕ್ಯೂ” ನಮ್ಮ ಪಡಿತರ ಅಂಗಡಿಯ ಮುಂದೆ ಸಕ್ಕರೆಗಾಗಿ ಕಾದು ನಿಲ್ಲುವವರಿಗಿಂತಲೂ ದೊಡ್ಡದು. ಹಾಗಾಗಿ ಪ್ರಶಂಸೆಯ ಮಾತುಗಳೂ ಸಹ ‘ಸ್ಕ್ಯಾನರ್’  ದಾಟಿಯೇ ಹೋಗಬೇಕು. ಇಲ್ಲದಿದ್ದರೆ ಚಳ್ಳೆ ಹಣ್ಣಿನ ಆತಿಥ್ಯ ನಮ್ಮದಾಗುತ್ತದೆ.   

 ಹೀನಾ ರಬ್ಬಾನಿ ಖಾರ್. ಆಧುನಿಕ ಶಿಕ್ಷಣ ಪಡೆದ, ಈ ಮಹಿಳೆ ಪಾಕ್ ರಾಜಕೀಯ ಕ್ಷೇತ್ರ ಪ್ರವೇಶ ಪಡೆದಿದ್ದು ತನ್ನ ತಂದೆಯ ಹೆಸರಿನ ಕಾರಣ. ಸಾಮಾನ್ಯವಾಗಿ ಮಹಿಳೆಯರು ರಾಜಕೀಯಕ್ಕೆ ಪುರುಷರ ನೆರಳಿನಿಂದಲೇ ಬರುವರು ಎನ್ನುವ ಮಾತು ಕೇಳಿ ಬಂದರೂ ಸಾಕಷ್ಟು ಮಹಿಳೆಯರು ಸ್ವ ಸಾಮರ್ಥ್ಯದಿಂದ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಬ್ರಿಟನ್ ದೇಶದ ಮಾರ್ಗರೆಟ್ ಥ್ಯಾಚರ್, ತುರ್ಕಿ ದೇಶದ ಮಾಜಿ ಪ್ರಧಾನಿ ತಾಂಸು ಚಿಲ್ಲರ್, ನಮ್ಮ ಮಮತಾ ಬ್ಯಾನರ್ಜೀ ಮುಂತಾದವರು ಸ್ವ ಸಾಮರ್ಥ್ಯದಿಂದ ಜನಬೆಂಬಲ ಪಡೆದು ಕೊಂಡವರು. ಪಾಕಿಸ್ತಾನದ  ಸಂಸತ್ ಸದಸ್ಯರಾಗ ಬೇಕೆಂದರೆ ಪದವೀಧರರಾಗಿರಬೇಕು ಎನ್ನುವ ನಿಯಮವಿದೆ. ಈ ನಿಯಮದ ಕಾರಣ ಪದವೀಧರರಲ್ಲದ ರಾಜಕಾರಣಿಗಳು ತಮ್ಮ ಮಕ್ಕಳನ್ನು ಚುನಾವಣೆಯಲ್ಲಿ ಸ್ಪರ್ದಿಸಲು ಉತ್ತೇಜಿಸುತ್ತಾರೆ. ಹೀಗೆ ಮತ್ತೆ ಇನ್ನಿತರ ರೀತಿಯಲ್ಲಿ ತಮ್ಮ ತಂದೆಯರ ಪ್ರಭಾವ ಬಳಸಿ ರಾಜಕಾರಣ ಪ್ರವೇಶಿಸುವವರು ಹೆಚ್ಚು. ಈ ವ್ಯವಸ್ಥೆಯ ಮುಖಾಂತರ ಹೀನಾ ರಾಜಕಾರಣ ಪ್ರವೇಶಿಸಿದ್ದು.

 ವಿದೇಶಾಂಗ ಖಾತೆಯ ವಿಷಯದಲ್ಲಿ ಪಾಕ್ ಬಹಳ ನಾಜೂಕು, choosy. ಕಳ್ಳರು ತಮ್ಮ ಕಿತಾಪತಿಯಿಂದ ಬೇಸತ್ತ ವಿಶ್ವಕ್ಕೆ ಅವಶ್ಯವಾಗಿ ಬೇಕಾದ ಆರೈಕೆಯನ್ನು ಆಕರ್ಷಕ ವ್ಯಕ್ತಿತ್ವಗಳ ಕೈಯ್ಯಲ್ಲಿ ಮಾಡಿಸುತ್ತಾರೆ. ಪಾಕಿಸ್ತಾನದ ಅಮೆರಿಕೆಯ ರಾಯಭಾರಿ ಯಾಗಿದ್ದ ಮಲೀಹಾ ಲೋಧಿ ಶ್ವೇತ ಭವನದ ಮೇಲೆ ದೊಡ್ಡ ಪ್ರಭಾವ ಬೀರಿದ್ದರು. ಪಾಕಿಸ್ತಾನ ಕಿತಾಪತಿ ಮಾಡಿದಾಗಲೆಲ್ಲಾ ಇನ್ನೇನು ಅಮೇರಿಕಾ ಆ ದೇಶವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುತ್ತದೆ ಎನ್ನುತ್ತಿದ್ದಂತೆಯೇ ಈಕೆ ತನ್ನ ಮಾತಿನ, ನಗುವಿನ ಪ್ರಭಾವದಿಂದ ತನ್ನ ದೇಶವನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದಳು.  ಜುಲ್ಫಿಕಾರ್ ಅಲಿ ಭುಟ್ಟೋ ಸಹ ಪಾಕ್ ದೇಶದ ಪ್ರತಿಭಾವಂತ ವಿದೇಶಾಂಗ ಸಚಿವರಾಗಿದ್ದರು. ದೇಶದ ವರ್ಚಸ್ಸು, ಹೆಚ್ಚೆಬೇಕೆಂದರೆ ಸಾಮಾನ್ಯವಾಗಿ ವಿದೇಶಾಂಗ ಸಚಿವರುಗಳು ಮತ್ತು ದೊಡ್ಡ ದೊಡ್ಡ ಪ್ರಭಾವಶಾಲೀ ದೇಶಗಳ ರಾಯಭಾರಿಗಳು ಆಕರ್ಷಕ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಇಂಥ ಹುದ್ದೆಗಳ ಆಯ್ಕೆಯಲ್ಲಿ ಸರಕಾರಗಳು ಜಾಗರೂಕವಾಗಿರುತ್ತವೆ.  

 ಕೇವಲ ೩೪ ವರುಷ ಪ್ರಾಯದ ಪಾಕಿಸ್ತಾನದ ನವ ನಿಯುಕ್ತ ವಿದೇಶಾಂಗ ಸಚಿವೆ ಕಂಡಿದ್ದು ಕಾರ್ಗಿಲ್ ಯುದ್ಧ ಮಾತ್ರ. ೨೦೦೫ ರ ಭೂಕಂಪದ ವೇಳೆ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ದೊಡ್ಡ ವಿದೇಶೀ ಅನುಭವ ಈಕೆಯಲ್ಲಿ ಕಾಣುತ್ತಿಲ್ಲ. ೨೦೦೯ ರಲ್ಲಿ ಪಾಕಿಸ್ತಾನದ ಆಯವ್ಯಯ ಪತ್ರವನ್ನೂ ಈಕೆ ಮಂಡಿಸಿದ್ದರು. ವಯಸ್ಸು ೩೨ ಆದರೂ ಈಗಾಗಲೇ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.  

ಹಾಗಾಗಿ ಸಾಕಷ್ಟು ಅನುಭವ ಇಲ್ಲದ ಈ ಮಹಿಳೆ ಭಾರತದಲ್ಲಿ ಬಂದು ಯಾವ ರೀತಿಯ ಪ್ರದರ್ಶನ ನೀಡುವರೋ ಎನ್ನುವುದು ಕುತೂಹಲಕರ ಸಂಗತಿ. ಆಕೆಯ ರಾಜಕೀಯ, ಕೌಟುಂಬಿಕ, ಅನುಭವದ ಹಿನ್ನೆಲೆ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳದೆ ನಾವು ಹೇಳಬೇಕಾದ್ದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಬೇಕು. ಅತಿಥಿ ಎಳೆ ಪ್ರಾಯದವಳು, ಅನುಭವ ಇಲ್ಲದಾಕೆ, ಅತಿಥಿ ಸತ್ಕಾರ, ಹಾಗೆ ಹೀಗೆ ಎಂದು ಸಲೀಸಾಗಿ ನಡೆಸಿಕೊಳ್ಳದೆ ನಮ್ಮ ಹಿತಾಸಕ್ತಿಯನ್ನು ಎಂದಿಗಿಂತ ಸ್ವಲ್ಪ ಜೋರಾಗಿಯೇ ಕಾಯ್ದು ಕೊಂಡರೆ ನಮಗೇ ಹಿತ. ಅಷ್ಟು ಮಾತ್ರ ಅಲ್ಲ, ಇಲ್ಲೊಂದು ‘caveat emptor’ ಸಹ ಇದೆ. ಪಾಕ್ ನ ಈ ವಿದೇಶಾಂಗ ಸಚಿವೆ ಪದವಿ ಪಡೆದಿದ್ದು ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ, ಅದೂ ಅಮೆರಿಕೆಯ ವಿಶ್ವ ವಿದ್ಯಾಲಯದಿಂದ. deadly double. ಈ ಪದವಿ ಪಡೆದವರು ಯಾವಾಗಲೂ ಮುಗುಳ್ನಗುವನ್ನೇ ಧರಿಸಿರುತ್ತಾರೆ, ಒಳ್ಳೆಯ, ಸಿಹಿಯಾದ, ಸತ್ಕಾರದ ಮಾತುಗಳನ್ನೇ ಆಡುತ್ತಾರೆ ಎಂಥ ಸಂದರ್ಭಗಳಲ್ಲೂ. ಹಳಸಿದ ಪುಳಿಯೋಗರೆ ಯನ್ನು ಇದು ತುಂಬಾ delicious ಎಂದು ನಮ್ಮ ಒಲ್ಲದ ಬಾಯಿಗೆ ತುರುಕುವ ಜನ ಈ hospitality management ಗಳಿಸಿದವರು.

ಒಂದು ಕಡೆ ಹಿಲರಿ ಕ್ಲಿಂಟನ್, ಮತ್ತೊಂದು ಕಡೆ ಹೀನಾ ರಬ್ಬಾನಿ, ಇವರಿಬ್ಬರ ನಡುವೆ ನಮ್ಮ ಮುದ್ದು ಕೃಷ್ಣಾ, ಊಹಿಸಿ ನೋಡಿ. ಅಂತಾರಾಷ್ಟ್ರೀಯ ರಾಜಕಾರಣ ಮುಗುಳ್ನಗುವಿನ, ಫೋಟೋ ಶಾಟ್ ಗಳಿಂದ ತುಂಬಿದ ಪಿಕ್ನಿಕ್ ಅಲ್ಲ. ನಲ್ನುಡಿಗಳ land mine ಗಳು ತುಂಬಿರುತ್ತವೆ ಹಾದಿ ಯುದ್ದಕ್ಕೂ. ಇವನ್ನು  ಗುರುತಿಸಿ ನಮ್ಮ ಹಿತಾಸಕ್ತಿ ಕಾಯ್ದು ಕೊಳ್ಳುವುದು ಒಂದು ದೊಡ್ಡ ಸಾಹಸವೇ ಸರಿ. ಈ ಸಾಹಸದಲ್ಲಿ ನಮ್ಮ ಕೃಷ್ಣ ವಿಜಯಿಯಾಗಲಿ.  

 ಚಿತ್ರ ಕೃಪೆ: ibtimes.com

ಸೊಕ್ಕಿದ ಪ್ರವಾಸಿ

ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಾಲ್ಕು ಟೆಸ್ಟ್ ಮತ್ತು ಇತರೆ ಪಂದ್ಯಗಳಲ್ಲಿ ಭಾಗವಹಿಸಲು ಬಂದ ಭಾರತ ಬರುತ್ತಲೇ ವಿವಾದದ ಕಂಬಳಿಯ ಮೇಲೆ ಕಾಲಿಟ್ಟಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಒಲ್ಲದ ಸೊಕ್ಕಿದ ಪ್ರವಾಸಿಗರು ಎಂದು ಇಂಗ್ಲೆಂಡ್ ನ ಪತ್ರಿಕೆಯೊಂದು ನಮ್ಮನ್ನು ಜರೆಯಿತು. ಅತಿಥಿಗಳನ್ನು ಆದರಿಸುವ ಪರಿ ಇದು. ಹೊಸ ತಂತ್ರ ಜ್ಞಾನ ( lbw verdicts under the Decision Review System ) ವನ್ನು ನಾವು ತಿರಸ್ಕರಿಸಿದ್ದಿದ್ದರೆ ಅದಕ್ಕೆ ಉತ್ತರಿಸ ಬೇಕಾದ ರೀತಿ ಇದಲ್ಲ.

ಹೌದು ಕ್ರಿಕೆಟ್ ಇಂಗ್ಲೆಂಡಿನ ಹುಲ್ಲುಗಾವಲಿನಲ್ಲಿ ಕುರಿ ಮೇಯಿಸುತ್ತಿದ್ದ ಕುರುಬರಿಂದ ಬಂದಿರಬಹುದು. ಆದರೆ ಆ ಕ್ರೀಡೆಗೆ ಮಾನ್ಯತೆ, ಜನಪ್ರಿಯತೆ, ರಂಗು, ಸ್ಪರ್ದೆ ಎಲ್ಲವನ್ನೂ ಒದಗಿಸಿದ್ದು ಏಷ್ಯಾದ ತಂಡಗಳು. ಕ್ರಿಕೆಟ್ ಇಂದು ವಿಶ್ವ ಮಾನ್ಯ ಕ್ರೀಡೆಯಾಗಿ ಕಂಗೊಳಿಸಿದರೆ ಅದರ ಕೀರ್ತಿಗೆ ಭಾರತ, ಶ್ರೀಲಂಕಾ, ಪಾಕಿಸ್ತಾನ ಭಾಜನರು. ಅದರಲ್ಲೂ ಭಾರತೀಯರ ಅಭೂತಪೂರ್ವ ಬೆಂಬಲ ಇಂದು ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿ ಹೊರ ಹೊಮ್ಮಲು ಕಾರಣ. ಭಾರತ ವಿಶ್ವದ ನಂಬರ್ ವನ್ ಕ್ರಿಕೆಟ್ ರಾಷ್ಟ್ರವಾಗದೆ ಬರೀ ಒಂದು “ಆಮ್ಲೆಟ್” ಆಗಿದ್ದಿದ್ದರೆ ಸರಿಯಾಗಿ ಬೆಂದಿಲ್ಲ ಎಂದು ಅಡುಗೆ ಕೋಣೆಗೆ ಕಳಿಸಬಹುದಿತ್ತು. ಈ ಮಾತಿನ ಧಾಟಿ ನೋಡಿ. ನಮ್ಮ ನಡತೆ ಸರಿಯಿಲ್ಲ ಎಂದು ಅವರ ಭಾವನೆ. ಭಾರತದ ನಿರ್ಧಾರದ ವಿರುದ್ಧ ICC ಮೊರೆ ಹೋಗೋ ಬದಲು ಮಾಧ್ಯಮದ ಮೊರೆ ಏಕೆ ಹೋದರೋ ಅವರಿಗೇ ಗೊತ್ತು. ಈ ಸರಣಿಯಲ್ಲಿ ಯಾರ ಕಾನೂನಿಗೆ ಮಾನ್ಯತೆ ಎಂದು ಎಂಬುದನ್ನು ಭಾರತ ತೋರಿಸಿ ಕೊಟ್ಟಿತು ತನ್ನ ರೂಪಾಯಿಯ ಶಕ್ತಿ (“rupee-pile of influence” ) ಮೂಲಕ ಎಂದು ದೂರಿತು ಪತ್ರಿಕೆ.

ವೆಸ್ಟ್ ಇಂಡೀಸ್ ನಲ್ಲಿ ಭಾರತದ ನಾಯಕ ಹೇಳಿದ ಮಾತನ್ನೂ ಈ ಲೇಖನದಲ್ಲಿ ಉದ್ಧರಿಸಲಾಯಿತು; ಆತ್ಮ ಸಾಕ್ಷಿಯಿಲ್ಲದೆ ಬಿಳಿ ಕೋಟ್ (ಅಂಪೈರ್) ಧರಿಸಿದವರ ಮೇಲೆ ಒತ್ತಡ ಹೇರಲಾಯಿತಂತೆ.

“ಆಧುನಿಕ ತಂತ್ರಜ್ಞಾನ ಉಪಯೋಗಿಸಲು ಒಪ್ಪದಿರುವುದು ಪ್ರವಾಸಿಗಳು ಮಾಡಿದ ವಿಧ್ವಂಸಕ ಕೃತ್ಯ” ಎನ್ನುವ ಶೀರ್ಷಿಕೆಯಡಿ ಬಂದ ಉದ್ದನಾದ ಲೇಖನ ಟೀಕೆ ಮಾಡಬೇಕೆಂದೇ ಬರೆದಿದ್ದು. ಕ್ರೀಡೆಯಲ್ಲೇ ಆಗಲೀ, ಸಂಸ್ಕಾರದಲ್ಲೇ ಆಗಲೀ, ವಾಣಿಜ್ಯವಹಿವಾಹಿಟಿನಲ್ಲೇ ಆಗಲೀ ಭಾರತದ ಉನ್ನತಿ ವಿದೇಶೀಯರಿಗೆ ಜೀರ್ಣಿಸಿಕೊಳ್ಳಲಾಗದ ಬೆಳವಣಿಗೆ. ಹೀಗೆ ಅಜೀರ್ಣದಿಂದ ನರಳುವಾಗ ದೇಶವೊಂದು “ಮೊಟ್ಟೆ ದೋಸೆ” ( ಆಮ್ಲೆಟ್ ) ಆಗಿ ಕಾಣುತ್ತದೆ. ಪ್ರವಾಸಿಗಳು ಸೊಕ್ಕಿದವರಂತೆ ಕಾಣುತ್ತಾರೆ.

http://www.independent.co.uk/sport/cricket/james-lawton-arrogant-tourists-refusal-to-embrace-technology-was-nothing-short-of-sabotage-2318950.html

ಕೋಶ ಓದು, ಇಲ್ಲಾ ದೇಶ ಸುತ್ತು

 ಕೋಶ ಓದು ಇಲ್ಲಾ ದೇಶ ಬಿಡು….ಹಾಂ, ಇದೇನಿದು, ನನ್ನ ಕಣ್ಣುಗಳು ನನ್ನನ್ನು ಮೋಸ ಮಾಡುತ್ತಿಲ್ಲವಷ್ಟೇ? ಶೀರ್ಷಿಕೆ ಯಲ್ಲಿ “ಕೋಶ ಓದು, ದೇಶ ಸುತ್ತು” ಎಂದಿರುವಾಗ ಲೇಖನದ ಆರಂಭದಲ್ಲೇ ಅದ್ಹೇಗೆ ಬದಲಾಗಿ ಬಿಟ್ಟಿತು ಶೀಷಿಕೆ? ರಾಜಕಾರಣಿ ತನ್ನ ಮಾತುಗಳನ್ನು ಪಲ್ಟಾಯಿಸುವ ರೀತಿ ಎಂದು ಯೋಚಿಸಿದಿರಾ?

ಬ್ಲಾಗ್ ಒಂದರಲ್ಲಿ ಬಂದ ಲೇಖನದಲ್ಲಿ ಈ ಕುರಿತು ಓದಿದೆ. ಕೋಲಾರದಲ್ಲಿ, ಸಮಾರಂಭ ವೊಂದರಲ್ಲಿ ಮಾನ್ಯ ಸಚಿವರು “ಭಗವದ್ಗೀತೆ ಬೇಡವಾದವರು ಭಾರತ ಬಿಟ್ಟು ತೊಲಗಿ” ಎಂದು ಗುಡುಗಿದರು ಎಂದು ಬರೆದಿದ್ದರು. ಸನ್ಮಾನ್ಯ ಶಿಕ್ಷಣ ಮಂತ್ರಿಗಳೇ ಹೀಗೆ ಹೇಳಿದಾಗ ಸಮಾಜ ಯಾವ ರೀತಿ ಪ್ರತಿಸ್ಪಂದಿಸಬಹುದು. ಸಮಾಜದಲ್ಲಿ ವಿಷಬೀಜ ಬಿತ್ತಲೆಂದೇ ಹುಟ್ಟಿ ಕೊಂಡ ಮಾಧ್ಯಮಗಳು ಸಚಿವರ ಈ rhetoric ನ ಎಳೆ ಹಿಡಿದು ಕೊಂಡು ಸಮಾಜದಲ್ಲಿ ಮತ್ತಷ್ಟು ಗದ್ದಲ ಗೊಂದಲಕ್ಕೆ ಕಾರಣರಾಗಲಾರರೆ? ಅತ್ಯಂತ ಜವಾಬ್ದಾರೀ ಹುದ್ದೆಯಲ್ಲಿರುವವರು, ಅದರಲ್ಲೂ ಜನರಿಂದ ನೇರವಾಗಿ ಆರಿಸಲ್ಪಟ್ಟವರ ಬಾಯಲ್ಲೇ ಇಂಥ ಮಾತುಗಳು ಉದುರಿದರೆ ಜನಸಾಮಾನ್ಯರ ಪಾಡೇನು?

ಕೋಶ ಓದು, ದೇಶ ಸುತ್ತು ಹಳೇ ಕಾಲದ ಮುತ್ಸದ್ದಿಗಳು, ಹಿರಿಯರು ಹೇಳಿದ್ದು. ಈ ಮಾತುಗಳಲ್ಲಿ ಅನುಭವ ತುಂಬಿ ತುಳುಕುತ್ತದೆ. ಕೋಶ ಓದು ಇಲ್ಲಾ ದೇಶ ಬಿಡು ಎನ್ನುವುದು ಆಧುನಿಕ ಮನೋಭಾವದ ಹಿರಿಯರು. ಇಂಟರ್ನೆಟ್ ಯುಗದ ಪ್ರಾಡಕ್ಟ್ ಗಳು. ಒಂದರಲ್ಲಿ ಅನುಭವ ತುಂಬಿ ತುಳುಕುತ್ತಿದ್ದರೆ, ಮತ್ತೊಂದರಲ್ಲಿ ಅಸಹನೆಯ ಕೊಡ ತುಂಬಿ ತುಳುಕುತ್ತಿರುತ್ತದೆ. ನಮ್ಮ ಪ್ರಯಾಣ ಯಾವ ಕಡೆ ಎಂದು ಅರಿಯದೆ ಜನ ಸಾಮಾನ್ಯ ಕಕ್ಕಾಬಿಕ್ಕಿಯಾಗುತ್ತಾನೆ ಈ ಮಾತುಗಳನ್ನು ಕೇಳಿ. ಇನ್ನು ಶಾಲೆಗೆ ಹೋಗುವ ಮಕ್ಕಳ ಸ್ಥಿತಿ? ವಿದ್ಯಾರ್ಥಿಯೊಬ್ಬ ಶಿಕ್ಷಕನಲ್ಲಿ ತನ್ನ ಅಳಲನ್ನು ತೋಡಿ ಕೊಳ್ಳುತ್ತಾನೆ. ತನಗೆ ಆಂಗ್ಲ ಬಾಷೆ ತುಂಬಾ ಕಷ್ಟ ಆಗ್ತಾಯಿದೆ, ತಲೆಗೆ ಏನೂ ಹೋಗೋದಿಲ್ಲ ಎಂದು. ಅದಕ್ಕೆ ಶಿಕ್ಷಕ ತಲೆಗೆ ಹೋಗದಿದ್ದರೆ ಶಾಲೆ ಬಿಡು ಅಥವಾ ಊರು ಬಿಡು ಎಂದು terrorize ಮಾಡಬಾರದು. ಅಸಹಾಯಕನಾಗಿ ಬಂದ ಶಿಷ್ಯನ ತಲೆ ನೇವರಿಸಿ ಇನ್ನಷ್ಟು ಶ್ರಮ ಪಡಲು ಹೇಳಬೇಕು ಅಥವಾ ಬೇರಾವುದಾದರೂ ಪರಿಹಾರ ಸೂಚಿಸಿ ಅವನಲ್ಲಿ ವಿದ್ಯೆ ಬಗ್ಗೆ ಆಸಕ್ತಿ ಮೂಡಿಸಬೇಕು. ಅದು ಬಿಟ್ಟು ಅವನನ್ನು ಗದರಿಸಿ ಬೆದರಿಸಿ ದಾರಿಗೆ ತರಲು ನೋಡಿದರೆ ಆಗದ ಮಾತು. ಶಿಕ್ಷಕ ರಿಯಾಕ್ಟಿವ್ ಆಗಬಾರದು. compassionate ಆಗಬೇಕು.

“ಈ ಲೋಕದಲ್ಲಾಗಲೀ, ಬೇರೆಲ್ಲೇ ಆಗಲಿ ಸಂಶಯ ಪಡುವವನಿಗೆ ಸಂತೋಷ ಸಿಗದು”

“ಕೋಪದ ಕಾರಣ ಭ್ರಮೆ ಹುಟ್ಟುತ್ತದೆ. ಭ್ರಮೆಯ ಕಾರಣ ಮನಸ್ಸು ಗೊಂದಲಗೊಳ್ಳುತ್ತದೆ. ಮನಸ್ಸು ಗೊಂದಲ ಗೊಂಡಾಗ ತರ್ಕ ನಾಶವಾಗುತ್ತದೆ. ತರ್ಕ ನಾಶವಾದಾಗ ಮನುಷ್ಯ ಬೀಳುತ್ತಾನೆ”

ಇಂಥ ನುಡಿ ಮುತ್ತುಗಳನ್ನು ನೀಡಿದ ಭಗವದ್ಗೀತೆಯ ಅಧ್ಯಯನಕ್ಕೆ ಈ ರೀತಿಯ ಧಮಕಿ ಕೂಡಿದ “ಉತ್ತೇಜನ” ವೇ ಹಿರಿಯರಿಂದ? – ಗೀತೆ ಗೀತೆಯಲ್ಲಿರುವ ಇಂಥ ಸಂದೇಶಗಳನ್ನು ಜನರಿಗೆ ತಿಳಿ ಹೇಳುವುದು ತರವೋ ಅಥವಾ ಇದನ್ನು ಬೇಡ ಎನ್ನುವವರು ದೇಶ ಬಿಟ್ಟು ತೊಲಗಲಿ ಎಂದು ಗೀತೆಯಿಂದ ಜನರನ್ನು ದೂರ ಓಡಿಸುವುದು ತರವೋ? ಸಚಿವರ ಈ ಹೇಳಿಕೆಯ ಔಚಿತ್ಯವನ್ನು ಜನರು ಪ್ರಶ್ನಿಸಬೇಕು. ಶಾಲೆಗಳಲ್ಲಿ ಗೀತೆ, ಕುರಾನ್, ಬೈಬಲ್, ಗುರುಗ್ರಂಥ್ ಸಾಹಿಬ್, ಬುದ್ಧರ ತ್ರಿಪಿಟಕ, ಪಾರ್ಸಿಗಳ ‘ಜೆಂದ್ ಅವೆಸ್ತಾ’, ಯಹೂದ್ಯರ ‘ತೋರಾ’ ಹೀಗೆ ಹೇಳಿಕೊಡುತ್ತಾ ಕೂತರೆ ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಗಳನ್ನು ಹೇಳಿಕೊಡಲು ಸಮಯ ಇರುವುದೇ ಎಂದು ಪ್ರಶ್ನಿಸುವವರಿದ್ದಾರೆ. ಪರಿಹಾರವಾಗಿ ಎಲ್ಲಾ ಧರ್ಮಗಳ ಸಾರವನ್ನು ಹೇಳಿಕೊಡುವ ಒಂದು ಪುಸ್ತಕದ ರಚನೆಯಾಗಲಿ. ಗೀತೆ, ಕುರಾನ್, ಬೈಬಲ್ ಮುಂತಾದವುಗಳ ಸುವರ್ಣ ವಾಕ್ಯಗಳು ಅದರಲ್ಲಿ ಸೇರಿರಲಿ. ವಿದ್ಯಾರ್ಥಿಗಳು ನಾವೆಂಥ ಸೊಗಸಾದ ಬಹು ಸಂಸ್ಕೃತಿ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನೋ ಭಾವನೆ ಬೆಳೆಸಿಕೊಳ್ಳಲಿ.

ನರಹಂತಕನ ಕಥೆ

ಅಂತರ್ಜಾಲ ತಾಣವೊಂದರಲ್ಲಿ ಇದಿ ಅಮೀನ್ ಬಗೆಗಿನ ವಿಸ್ತೃತ ಲೇಖನ ಓದಿದೆ. ಲೇಖಕರು ಚೆನ್ನಾಗಿ ವಿವರಿಸಿ ಬರೆದಿದ್ದಾರೆ ಆಫ್ರಿಕಾದ ಸರ್ವಾಧಿಕಾರಿ ಬಗ್ಗೆ. ಇದಿ ಅಮೀನ್ ಬಗ್ಗೆ ಬಹಳ ಹಿಂದಿನಿಂದಲೂ ಕೇಳಿದ್ದೆ, ಆತ ಕ್ರೂರ, ನಿರ್ದಯೀ, ನರಹಂತಕ ಕೊನೆಗೆ ನರಭಕ್ಷಕ ಕೂಡಾ ಎಂದು. ನರಭಕ್ಷಕ ಎಂದರೆ ಎಂಥವರ ಮೈ ನಡುಗುವುದು. ಮನುಷ್ಯನಾಗಿ ಹುಟ್ಟಿದವನು ಮನುಷ್ಯನ ಮಾಂಸ ತಿನ್ನಬೇಕಾದರೆ ಅದೆಂಥ ಕ್ರೌರ್ಯವನ್ನು ದೇವರು ಅವನಿಗೆ ಬಳುವಳಿಯಾಗಿ ನೀಡಿರಬಹುದು. ಮಾಧ್ಯಮಗಳು ಬರೆಯವುದನ್ನು, ಸರಕಾರಗಳು ಹೇಳುವುದನ್ನು ಎಷ್ಟರ ಮಟ್ಟಿಗೆ ನಂಬುವುದು?

1989ರಲ್ಲಿ ಅಮಿನ್ ಪುನಹ ಗದ್ದುಗೆಯನ್ನೇರುವ ಕನಸಿನ ಬೆನ್ನೇರಿ ಉಗಾಂಡಾಕ್ಕೆ ಮರಳುವ ಪ್ರಯತ್ನ ಮಾಡಿದ. ಆದರೆ ಕಾಂಗೋದ ಜೈರೆಯಲ್ಲಿ ಅವನನ್ನು ಗುರುತು ಹಿಡಿಯಲಾಗಿ,ಅವನ ಕನಸಿನ ರೆಕ್ಕೆ ಕತ್ತರಿಸಿ ಬಿತ್ತು. ಸಾವಿರಾರು ಅಥವಾ ಲಕ್ಷಾಂತರ ಜನರ ಕಗ್ಗೊಲೆಗೆ ಇದಿ ಅಮೀನ್ ಕಾರಣ ನಾಗಿದ್ದಿದ್ದರೆ ತನ್ನ ದೇಶಕ್ಕೆ ಮರಳಿ ಹೋಗುವ ಸಾಹಸ ಮಾಡುತ್ತಿದ್ದನೆ? ಕಾಂಗೋ ಸರಕಾರ ಅವನನ್ನು ಬಂಧಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದ ಸುಪರ್ದಿಗೆ ಅವನನ್ನು ಒಪ್ಪಿಸುತ್ತಿರಲಿಲ್ಲವೇ? ಇದಿ ಅಮೀನ್ ನರಭಕ್ಷಕ ಅಲ್ಲ ಎಂದು ಅವನ ಅರಮನೆಯಲ್ಲಿ ಕೆಲಸಕ್ಕಿದ್ದ ಅಡುಗೆಯಾಳು ಸಾಕ್ಷಿ ಇದ್ದಾನೆ. ಅಡುಗೆಮನೆಯ ಅಥವಾ ಅರಮನೆಯ ಬೇರಾವುದೇ ‘ಫ್ರಿಜ್’ ಗಳಲ್ಲಿ ಮನುಷ್ಯರ ತಲೆ ಬುರುಡೆ ಅಥವಾ ಇನ್ನಿತರ ಅಂಗಗಳನ್ನು ಕಂಡಿದ್ದಿಲ್ಲ ಎಂದು ಆತ ಹೇಳುತ್ತಾನೆ. ತಮ್ಮ ತಂದೆ ಹಾಗೇನಾದರೂ ಮನುಷ್ಯರನ್ನು ತಿನ್ನುತ್ತಿದ್ದರೆ ನಮಗೆ ನೋಡಿಕೊಂಡು ಇರಲು ಸಾಧ್ಯವಿತ್ತೆ, ಅಂಥ ತಂದೆಯ ಬಗ್ಗೆ ನಮಗೆ ಪ್ರೀತಿ ಇರುತ್ತಿತ್ತೇ ಎಂದು ಆತನ ಮಕ್ಕಳು ಕೇಳುತ್ತಾರೆ. ನರಭಕ್ಷಕ ನಾಗಿದ್ದಿದ್ದರೆ ಅವನಿಗೆ ಸೌದಿ ಯಲ್ಲಿ ಆಶ್ರಯ ಸಿಗುತ್ತಿರಲಿಲ್ಲ. ಇಲ್ಲಿನ ವಿಧ್ವಾಂಸರ ವಿರೋಧ ಇಟ್ಟುಕೊಂಡು ಸೌದಿ ಸರಕಾರ ಯಾರಿಗೂ ಆಶ್ರಯ ನೀಡುವುದಿಲ್ಲ. ಹಾಗೆಯೇ ಜೆಡ್ಡಾ ದ ಅಲ್-ಹಮ್ರಾ ವಲಯದಲ್ಲಿ ಬದುಕುತ್ತಿದ್ದ ಇದಿ ಅಮೀನ್ ತನ್ನ ಮನೆಯ ಪಕ್ಕದಲ್ಲಿದ್ದ ಅಂಗಡಿಯೊಂದಕ್ಕೆ ದಿನವೂ ಬರುತ್ತಿದ್ದ. ಕೇರಳ ಮೂಲದ ವ್ಯಾಪಾರೀ ಪ್ರಕಾರ ಇದಿ ಅಮೀನ್ ಸೌಮ್ಯ ಸ್ವಾಭಾದವನಾಗಿದ್ದು ಒಂದಿಷ್ಟು ಹೊತ್ತು ನಮ್ಮೊಂದಿಗೆ ಹರಟಿ ಹೋಗುತ್ತಿದ್ದ. ಈತ ನರಭಕ್ಷಕ ಎನ್ನುವುದನ್ನು ಓದಿ ದ್ದ ನಮಗೆ ಈ ವಿಷಯ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದ.

ಯಾವುದೇ ದೇಶದ ಸರ್ವಾಧಿಕಾರಿಗಳೂ ಬಲಪ್ರಯೋಗಿಸದೆ ಆಡಳಿತ ನಡೆಸಲಾರರು. ಪ್ರಜಾಪ್ರಭುತ್ವದಲ್ಲೇ ಕಾಣುವುದಿಲ್ಲವೇ ದಬ್ಬಾಳಿಕೆ, ದೌರ್ಜನ್ಯ. ಇದಿ ಅಮೀನ್ ಬಹಳಷ್ಟು ಹಿಂಸೆಗೆ ಕಾರಣನಾಗಿರಬಹುದು ಮತ್ತು ಬಿಳಿಯರನ್ನು ಆತ ನಡೆಸಿ ಕೊಳ್ಳುತ್ತಿದ್ದ ರೀತಿಗೆ ಪ್ರತೀಕಾರವಾಗಿ ಇಲ್ಲಸಲ್ಲದ ಆರೋಪ ಕಟ್ಟು ಕಥೆಗಳನ್ನ ವಿದೇಶೀ ಮಾಧ್ಯಮಗಳು ಸೃಷ್ಟಿಸಿರಬಹುದು. ಯಾವುದಕ್ಕೂ ನಿಷ್ಪಕ್ಷಪಾತವಾಗಿ, ಸಾವಧಾನದಿಂದ ವಿಷಯಗಳನ್ನ ಅವಲೋಕನ ಮಾಡಿ ನೋಡಿದಾಗ ಹೊಸ ವಿಚಾರಗಳು ತಿಳಿಯುವುವು, ಹೊಸ ದೃಷ್ಟಿ ಕೋನಕ್ಕೆ ದಾರಿ ಮಾಡಿ ಕೊಡುವುದು.

ಇದಿ ಅಮೀನ್, ಪಾಶ್ಚಾತ್ಯ ರಾಜಕಾರಣದ ಬಗ್ಗೆ ಹೆಚ್ಚು ತಿಳಿಯಬೇಕು ಎಂದೆನ್ನಿಸಿದರೆ ಇಲ್ಲಿದೆ ನೋಡಿ ಲಿಂಕು.

http://findarticles.com/p/articles/mi_qa5391/is_200310/ai_n21337458/

ಎಲ್ಲರನ್ನೂ ಆದರಿಸೋಣ, ಎಲ್ಲವನ್ನೂ ಗೌರವಿಸೋಣ

ಹಿಂದೂ ದೇವರುಗಳ ಬಗ್ಗೆ ಅಸಹ್ಯವಾಗಿ, ಚಿತ್ರಿಸುವ ಚಾಳಿ ಕುರಿತು ಕನ್ನಡದ ಖ್ಯಾತ ಆನ್ ಲೈನ್ ತಾಣದಲ್ಲಿ ಒಬ್ಬರು ಖೇದ, ಆಕ್ರೋಶ ವ್ಯಕ್ತಪಡಿಸಿದ್ದರು. ಕಲೆಯ ಹೆಸರಿನಲ್ಲಿ, ಸೃಜನಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳನ್ನ ಕೆರಳಿಸುವುದು, ನಮ್ಬಿಕೆಗಳನ್ನು ಘಾಸಿಗೊಳಿಸುವುದು ತರವಲ್ಲ. ಸೃಜನಶೀಲತೆ ಅಥವಾ ಬೇರಾವುದಾದರೂ ಪ್ರತಿಭೆಯನ್ನು ಸಾಕಾರಗೊಳಿಸಲು ಹತ್ತು ಹಲವು ಮಾರ್ಗಗಳಿವೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಕಲೆ ಕುಚೋದ್ಯದಿಂದ ಕೂಡಿದ್ದು. ಈ ಕುಚೋದ್ಯ ಇಸ್ಲಾಮ್ ಧರ್ಮದ ಮೇಲೆ ಪ್ರಯೋಗವಾದಷ್ಟು ಬೇರಾವ ಧರ್ಮದ ಮೇಲೂ ಆಗಿರಲಾರದು. ಅಂಥ ಕಲೆಯನ್ನು ಮುಸ್ಲಿಮರು ಖಂಡಿಸಿದಾಗ ಅವರನ್ನು ಬೆಂಬಲಿಸಲು ಯಾರೂ ಇರಲಿಲ್ಲ. ಬದಲಿಗೆ ಮುಸ್ಲಿಮರಿಗೆ ಸಿಕ್ಕಿದ್ದು ಕಲೆಯ ಬಗ್ಗೆ, ಸೃಜನಶೀಲತೆಯ ಬಗ್ಗೆ, ಆಧುನಿಕ ಬದುಕಿನ ಬಗ್ಗೆ ಪಾಠ. ಚಿಕ್ಕತನವನ್ನು ಬಿಟ್ಟು ನೀವು ಬೆಳೆಯಬೇಕು ಎನ್ನುವ ಕಿವಿಮಾತು. ಈಗ ಅದೇ ಪಿಶಾಚಿ ತಮ್ಮ ಹೊಸ್ತಿಲಿಗೆ ಬಂದು ನಿಂತಾಗ ಜನ ಹೌಹಾರುತ್ತಿದ್ದಾರೆ. reactions strangely different.

೨೦೦೩ ರಲ್ಲಿ ಡ್ಯಾನಿಶ್ ವ್ಯಂಗ್ಯಚಿತ್ರಕಾರ “ಕ್ರಿಸ್ಟಫರ್ ಜೈಲರ್” ಯೇಸು ಕ್ರಿಸ್ತರ ಬಗೆಗಿನ ಕೆಲವು ಚಿತ್ರಗಳನ್ನ ಅಲ್ಲಿನ ಖ್ಯಾತ ಪತ್ರಿಕೆ Jyllands-Posten ಗೆ ಕಳಿಸಿದ. ಸಂಪಾದಕ ಈತನಿಗೆ ‘ಈ ಮೇಲ್’ ಕಳಿಸಿ ಈ ಚಿತ್ರಗಳನ್ನು ಕ್ರೈಸ್ತರು ನೋಡಿ ಆನಂದಿಸಲಿಕ್ಕಿಲ್ಲ ಮತ್ತು ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ವಿವರಿಸಿದ. ಇದೇ ಪತ್ರಿಕೆ ೨೦೦೫ ರಲ್ಲಿ ಪ್ರವಾದಿ ಮುಹಮ್ಮದರ ಕಾರ್ಟೂನ್ ಗಳನ್ನು ಪ್ರದರ್ಶಿಸಿ ತನ್ನ ಕೊಳಕು ‘ಡಬಲ್ ಸ್ಟ್ಯಾಂಡರ್ಡ್’ ಅನ್ನು ಸೊಗಸಾಗಿ ಪ್ರದರ್ಶಿಸಿತು.

ಧಾರ್ಮಿಕ ಕುರುಹುಗಳನ್ನು ನಮಗೆ ಬೇಕಾದ ಸ್ಥಳಗಳಲ್ಲಿ, ಬೇಕಾದ ರೀತಿಯಲ್ಲಿ ಬಳಸಿ ಕೊಂಡಾಗ ಅದರ ಬಗ್ಗೆ ಗೌರವ, ಭಕ್ತಿ ತಂತಾನೇ ಕಡಿಮೆಯಾಗುತ್ತದೆ. ಧರ್ಮ ವೈಯಕ್ತಿಕವಾಗಿರಬೇಕು. ಧಾರ್ಮಿಕ ಭಾವನೆ ಮನಸ್ಸಿನಲ್ಲಿ ನೆಲೆಯೂರಿರಬೇಕು. we should not wear our faiths on our sleeves. ಗಣೇಶನ ಮೂರ್ತಿಗಳನ್ನು ತೋಚಿದ ರೀತಿಯಲ್ಲಿ, ಬ್ಯಾಟ್ ಹಿಡಿದು ಕೊಂಡೂ ಮತ್ಯಾವುದಾದರೂ ರೀತಿಯಲ್ಲಿ ರೂಪಿಸಿದಾಗ ನಾವು ನೀಡುತ್ತಿರುವ ಸಂದೇಶವಾದರೂ ಏನು? ಈ ರೀತಿ ದೇವರ ಚಿತ್ರಗಳನ್ನು, ಇನ್ನಿತರ ಧಾರ್ಮಿಕ ಸಂಕೇತಗಳನ್ನು ಸಾರಾಸಗಟಾಗಿ ಕಲೆಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಂಡಾಗ ಯಾವುದು ಸರಿ ಯಾವುದು ತಪ್ಪು ಎನ್ನುವ ವಿಂಗಡಿಸುವ ರೇಖೆ ಮಸುಕಾಗಿ ಬಿಡುತ್ತದೆ. ಆಗ ಸಮಸ್ಯೆಗಳು ಎದುರಾಗಲು ತೊಡಗುತ್ತವೆ.

ಮುಸ್ಲಿಮರಲ್ಲಿ ಯಾವುದೇ ಕೆಲಸ ಆರಂಭಿಸುವಾಗಲೂ ಕರುಣಾಮಯನೂ, ದಯಾಮಯನೂ ಆದ ಅಲ್ಲಾಹನ ನಾಮದಿಂದ (ಬಿಸ್ಮಿಲ್ಲಾ ಅರ್ರಹ್ಮಾನ್, ಅರ್ರಹೀಂ) ಎನ್ನುವ ಕುರಾನ್ ಸೂಕ್ತ ಉಪಯೋಗಿಸುತ್ತಾರೆ. ಈ ಸೂಕ್ತವನ್ನು ಕೆಲವರು ಪತ್ರ ಬರೆಯುವಾಗಲೂ ಇನ್ನಿತರ ಸ್ಥಳಗಳಲ್ಲೂ ಬಳಸುವುದನ್ನು ನೋಡಿದ ಧರ್ಮ ಗುರುಗಳು ಆಕ್ಷೇಪ ಮಾಡಿ ನಾವು ಬರೆದ ಕಾಗದ ಅದರ ಉಪಯೋಗ ಮುಗಿದ ನಂತರ ತಿಪ್ಪೆ ಸೇರುವುದರಿಂದ ಅಂಥ ಸ್ಥಳಗಳಲ್ಲಿ ಈ ಸೂಕ್ತ ಉಪಯೋಗಿಸಕೂಡದು ಎಂದು ನಿರ್ದೇಶಿಸಿದ್ದರು. ಹಾಗೆಯೇ ಕೊರಳಿಗೆ ಹಾಕಿ ಕೊಳ್ಳುವ ಸರದ ಲಾಕೆಟ್ ಗಳ ಮೇಲೆ ‘ಅಲ್ಲಾಹ್’ ಎಂದು ಬರೆಯುವುದನ್ನು ಬಹಳ ಜನ ಒಪ್ಪುವುದಿಲ್ಲ. ಏಕೆಂದರೆ ನಮ್ಮೊಂದಿಗೆ ಸರವೂ ಶೌಚ ಗೃಹ ಪ್ರವೇಶ ಮಾಡುವುದರಿಂದ ಅಲ್ಲಾಹನ ಹೆಸರಿನ ಪಾವಿತ್ರ್ಯಕ್ಕೆ ಧಕ್ಕೆ ಆಗಬಹುದು ಎಂದು ಬಗೆದು. ಇದು ಧಾರ್ಮಿಕ ಕುರುಹುಗಳನ್ನು ಕಾಪಾಡುವ ರೀತಿ.

ನಮ್ಮ ಧರ್ಮ ವೈಯಕ್ತಿಕ. ನಮ್ಮ ವೈಯಕ್ತಿಕ ವಿಷಯಗಳಲ್ಲಿ ಕೈ ಹಾಕಲು ಯಾರಿಗೂ ನಾವು ಅನುಮತಿಸುವುದಿಲ್ಲ. ಧರ್ಮಕ್ಕೂ ಅದೇ ನಿಲುವು ಅನ್ವಯವಾಗಲಿ. ಯಾರೂ ಯಾರ ಭಾವನೆಗಳನ್ನೂ ಘಾಸಿಗೊಳಿಸಲು ಹೋಗಬಾರದು. ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ, ಆದರಿಸುತ್ತಾ ನಡೆದರೆ ಯಾವ ರೀತಿಯ ಸಮಸ್ಯೆಗಳೂ ಎದುರಾಗವು.

ಒಂದು ಬಾಷ್ಪಾಂಜಲಿ, ಶಾಂತಿ ದೂತನಿಗೆ

ಬ್ರಿಟನ್ ಮೂಲದ ಶಾಂತಿ ದೂತ ಬ್ರಯಾನ್ ಹಾವ್ ಇನ್ನಿಲ್ಲ. ಎರಡು ವರ್ಷಗಳ ಹಿಂದೆ ಬ್ರಯನ್ ಹಾವ್ ನನ್ನು ‘ಬ್ರಿಟಿಷ್ ಏಕಲವ್ಯ’ ಎನ್ನುವ ಶೀರ್ಷಿಕೆಯಡಿ ಒಂದು ಲೇಖನ ಬರೆದು ನನ್ನ ‘ಹಳೇ ಸೆತುವೆ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ. ದುರ್ದೈವ, ಈಗ ಅವನಿಗೆ ಶ್ರದ್ಧಾಂಜಲಿ ಹೇಳುವ ಸಮಯ.

ಬ್ರಿಟಿಷ್ ಸಂಸತ್ ಭವನದ ಎದುರು ಚಳಿ ಮಳೆಗೆ ಮೈಯ್ಯೊಡ್ಡಿ ಡೇರೆ ಯೊಳಗೆ ಬದುಕುತ್ತಾ ಆಫ್ಘನ್ ಗುಡ್ಡ ಗಾಡಿನ ಲ್ಲಿ ಮತ್ತು ಇರಾಕ್ ನಲ್ಲಿ ನಡೆದ ಮಾರಣ ಹೋಮ ದ ಬಗ್ಗೆ ವಿಶ್ವದ ಗಮನ ಸೆಳೆಯಲು ಪ್ರಯತ್ನ ಪಡುತ್ತಿದ್ದ ಧ್ವನಿ ನಿಸ್ತೇಜ ಈತನ ಸಾವಿನೊಂದಿಗೆ. ರಾಜಕಾರಣಿಗಳ ಬೆದರಿಕೆಗೆ, ಪೊಲೀಸರ ದಬ್ಬಾಳಿಕೆಗೆ ಸಡ್ಡು ಹೊಡೆದು ನಿಂತಿದ್ದ ಹಾವ್ ಕೊನೆಗೆ ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಶರಣಾದ ಈ ತಿಂಗಳ ೧೮ ರಂದು. ಈತನ ಸಾವಿನೊಂದಿಗೆ ಬುಶ್ ಮತ್ತು ಬ್ಲೇರ್ ರಂಥ ಯುದ್ಧ ಕೋರರಿಗೆ ಒಸಾಮಾ ಸಾವಿನಿಂದಿಂದ ಸಿಕ್ಕ ‘closure’ ಭಾವ ಅಥವಾ ನಿರಾಳ ಭಾವ ಸಿಕ್ಕಿರಬಹುದು. ಲಂಚ ಸಮಾಜದ ಅವಿಭಾಜ್ಯ ಅಂಗ ಮಾತ್ರವಲ್ಲ ಅದೊಂದು ಮಾಮೂಲು ಧಂಧೆ ಎನ್ನುವ ಮಟ್ಟಕ್ಕೆ ಬಂದಾಗ ಅದರ ವಿರುದ್ಧ ಸೊಲ್ಲೆತ್ತಿದ ಸಿರಿವಂತ ಸಾಧು ರಾಮ್ ದೇವ್ ಮತ್ತು ಸಮಾಜ ಸೇವಕ ಅಣ್ಣಾ ಹಜಾರೆ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾದಂತೆಯೇ ಈತನೂ ಸಹ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಬ್ರಯನ್ ಕೆಚ್ಚೆದೆಯ ವ್ಯಕ್ತಿ. ನಾವೆಂದೂ ಮಾಡಲಾಗದ, ಕೆಲಸವನ್ನೂ ಆತ ಮಾಡಿ ತೋರಿಸಿದ. ಸರಕಾರದಿಂದ, ವ್ಯವಸ್ಥೆಯಿಂದ ಪ್ರತಿರೋಧ ಎದುರಾದಾಗ ವೇಷ ಬದಲಿಸಿಕೊಂಡು ಕಾಲಿಗೆ ಬುದ್ಧಿ ಹೇಳುವ ಯತ್ನ ಮಾಡಲಿಲ್ಲ.

ಶಾಂತಿಯ ಪರಂಪರೆ ಹುಟ್ಟು ಹಾಕಿದ ಬ್ರಯನ್ ನಮಗೆಲ್ಲರಿಗೂ ಒಂದು ಪಾಠ. ಉರಿ ಬಿಸಿಲಿನಲ್ಲಿ ಒಂದು ಘಂಟೆ ನಿಂತು ವ್ಯವಸ್ಥೆಯ ವಿರುದ್ಧ ಪ್ರತಿಭಟಿಸದ ನಾವು ಬ್ರಯನ್ ರೀತಿ ಹಗಲು ರಾತ್ರಿ ಪೂರ್ತಿ ಹತ್ತು ವರ್ಷಗಳ ಕಾಲ ಒಂದು ಕಡೆ ಡೇರೆ ಬಿಗಿದು ಕೂರಲು ಸಾಧ್ಯವೇ? ಅದರ ಮೇಲೆ ರಾಜಕಾರಣಿಗಳ ಕಟು ಟೀಕೆ. ಪೊಲೀಸರ ನಿರಂತರ ಒತ್ತಡ, ಡೇರೆ ಖಾಲಿ ಮಾಡಲು. ಒಮ್ಮೆ ಪೊಲೀಸರು ಬಂದು ಅವನು ಡೇರೆ ಹೊರಗೆ ಅಂಟಿಸಿದ್ದ ಕೈಬರಹದ ಪೋಸ್ಟರ್ ಗಳನ್ನು ಕಿತ್ತು ಹಾಕಿದ್ದರು. ಮರು ದಿನ ಶ್ರದ್ಧೆಯಿಂದ ಮತ್ತೆ ತಾನು ಬರೆಯಬೇಕಾದುದನ್ನು ಬರೆದು ನೇತು ಹಾಕಿದ ತಾನೇ ಬೀಡು ಬಿಟ್ಟಿದ್ದ ಠಿಕಾಣಿ ಹೊರಗೆ. ಈತನನ್ನು ಕೆಲವರು, ಧೀಮಂತ, ಶಾಂತಿ ದೂತ ಎಂದು ಕೊಂಡಾಡಿದರೆ ರಾಜಕಾರಣಿಗಳಿಗೆ ಈತ ಒಂದು nuisance. ಸಂಸತ್ ಭವನದ ಘನತೆಯನ್ನು ಗೌರವವನ್ನೂ ತನ್ನ ಭಿತ್ತಿ ಪತ್ರಗಳಿಂದ, ಬಾವುಟ, banner, placard, poster, teddy bears ಗಳಿಂದ ಹಾಳುಗೆಡವುತ್ತಿದ್ದಾನೆ ಎಂದು ದೂರು. ಈತ ಹಾಕಿದ್ದ ಡೇರೆ ಮತ್ತು ಅದರ ಸುತ್ತ ಮುತ್ತ ಅಂಟಿಸಿದ್ದ ಮುಗ್ಧ ಮಕ್ಕಳ, ಸ್ತ್ರೀಯರ ರೋದನದ ಚಿತ್ರಗಳು, ಭಿತ್ತಿ ಪತ್ರಗಳು ಸಂಸತ್ ವಲಯವನ್ನು ಕೊಳೆ ಗೇರಿಯಾಗಿ ಪರಿವರ್ತಿಸಿವೆ ಎಂದು ದೂರಿದ ರಾಜಕಾರಣಿಗೆ ಈ ವಿಷಯ ಹೊಳೆಯದೆ ಹೋಯಿತು ಸುಳ್ಳುಗಳನ್ನು ಹೆಣೆದು, ದಾಖಲೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ, ಕಾಲು ಕೆರೆದು ಯುದ್ಧಕ್ಕೆ ಹೋಗೋದು ಕೊಳೆಗೇರಿ ಎಬ್ಬಿಸುವುದಕ್ಕಿಂತ ಗಬ್ಬು ಕೆಲಸ ಎಂದು.

ಬ್ರಯನ್ ಹೀಗೆ ಹಗಲು ರಾತ್ರಿ ಎನ್ನದೆ ತನ್ನ ಕೌಟುಂಬಿಕ ಬದುಕನ್ನು ಬಿಟ್ಟು ವಿಶ್ವದ ಯಾವ್ಯಾವುದೋ ಮೂಲೆಯಲ್ಲಿ ನೆಲೆಸುವ ಜನರ ಮೇಲೆ ಈತನಿಗಿರುವ ಮರುಕ, ಕಾಳಜಿಗೆ ಆಸಕ್ತರಾಗಿ ಈತನೊಂದಿಗೆ ಮಾತಿಗೆ ನಿಲ್ಲುವವರ ಮೇಲೂ ಕೆಲವು ಜನರು ಹರಿಹಾಯ್ದಿದ್ದಿದೆ. ಈ ಜನ ಎಂಥವರೆಂದರೆ ಸರಕಾರ ಮಾಡುವುದು ತಪ್ಪು ಎಂದು ತೋರಿದರೂ ಪ್ರತಿಭಟಿಸಲು ಅವರಲ್ಲಿ ಬೇಕಾದ ಕಸುವು ಇರುವುದಿಲ್ಲ, ಅಥವಾ ವೇಳೆ ಇರೋಲ್ಲ. ಬೇರೆಯವ ಈ ಕಾರ್ಯವನ್ನ ಕೈಗೆತ್ತಿಕೊಂಡಾಗ ಭೀತಿ ಆವರಿಸಿಕೊಳ್ಳುತ್ತದೆ. ಆಗ ಬೈಗುಳಗಳ ಸುರಿಮಳೆ. ಸರಕಾರದ ಪರ ವಕಾಲತ್ತು. ಇಂಥ ಜನರ ಅಲ್ಪತನದಿಂದ ಈತ ಇನ್ನಷ್ಟು ಎತ್ತರಕ್ಕೆ ಬೆಳೆದನೆ ಹೊರತು ಈತನ ಕೆಚ್ಚನ್ನು ಕುಗ್ಗಿಸಲಿಲ್ಲ. ಕಟು ಮಾತುಗಳು. ಲಂಡನ್ನಿಗೆ ಬರುವ ಪ್ರವಾಸಿಗರಿಗೆ ಈತನ ಡೇರೆ ಒಂದು ಪ್ರಮುಖ ಆಕರ್ಷಣೆಯಾಗಿತ್ತು.

ಹೀಗೆ ಹೊರಗಿನವರ, ಸಂಘಟನೆಗಳ ವಶೀಲಿ ಬಾಜೀ ಇಲ್ಲದೆ ತೆರನಾದ ಸವಾಲುಗಳಿಗೆ ಧೃತಿಗೆಡದೆ ಸ್ಥೈರ್ಯದಿಂದ ತಾವು ನಂಬಿದ ಮೌಲ್ಯಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಡುವ ಸಾಧಕರು ಅಲ್ಲಲ್ಲಿ ಕಾಣಲು ಸಿಗುತ್ತಾರೆ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಿದ ನಮ್ಮವರೇ ಆದ ವ್ಯಕ್ತಿಯೊಬ್ಬರ ಉದಾಹರಣೆ ಇದೆ. ಅವರೇ ‘ಹೊಟ್ಟೆ ಪಕ್ಷ’ ದ ರಂಗ ಸ್ವಾಮಿ.

ಅತ್ಯಧಿಕ ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಉಂಡದ್ದು ಸೋಲನ್ನೇ ಆದರೂ ಬಡವರಿಗೆ ಕಿಲೋ ಗ್ರಾಂ ಗೆ ಒಂದು ರೂಪಾಯಿ ಅಕ್ಕಿ ಕೊಡುವ ವಾಗ್ದಾನ ದ ಮೂಲಕ ಚುನಾವಣೆಗಳನ್ನು ಸೆಣಸುತ್ತಿದ್ದರು ಹೊಟ್ಟೆ ಪಕ್ಷದ ರಂಗ ಸ್ವಾಮಿ. ಚಿಕ್ಕಮಗಳೂರಿನಲ್ಲಿ ಇಂದಿರಾ ವಿರುದ್ಧವೂ ಸ್ಪರ್ದಿಸಿದ್ದ ರಂಗ ಸ್ವಾಮೀ ಬಹುಶಃ ತಾವು ಗೆಲ್ಲುವುದಿಲ್ಲ ಎನ್ನುವ ಸ್ಪಷ್ಟ ಅರಿವಿದ್ದೂ ಚುನಾವಣೆಯಲ್ಲಿ ಸ್ಪರ್ದೆಗೆ ಮುಂದಾಗುತ್ತಿದ್ದದ್ದು ಒಪ್ಪೊತ್ತಿನ ಅನ್ನಕ್ಕಾಗಿ ಬಡವರು ಪಡುವ ಬವಣೆ ಬಗ್ಗೆ ರಾಜಕಾರಣಿಗಳ ಮನ ಸೆಳೆಯುವ ಉದ್ದೇಶವೂ ಆಗಿರಬಹುದು. ಚುನಾವಣೆ ಪ್ರಚಾರಕ್ಕೆ ಇವರು ಬಂದಾಗ ಸೋಲುವುದು ಗ್ಯಾರಂಟಿಯಾದರೂ ಯಾಕಾದರೂ ಈತ ನಿಲ್ಲುತ್ತಾರೋ ಎಂದು ಜನ ಕನಿಕರ ಮತ್ತು ಅಪಹಾಸ್ಯದಿಂದ ಮಾತಾಡಿದರೆ ಇವರಿಗೆ ಅದರ ಪರಿವೆಯಿಲ್ಲ. ರಂಗ ಸ್ವಾಮೀ ನಿಧನರಾಗಿ ನಾಲ್ಕು ವರ್ಷಗಳಾ ದುವಂತೆ. ಆದರೆ ನನಗೆ ತಿಳಿದಿದ್ದು ಬ್ರಯನ್ ಹಾವ್ ತೀರಿ ಹೋದ ದಿನ.

ಒಂದು ಕಡೆ ಬುಶ್ ಮತ್ತು ಬ್ಲೇರ್ ರ ಸುಳ್ಳಿನಿಂದ ಪ್ರೇರಿತವಾದ ಸೈನ್ಯಗಳು ದಿನದ ೨೪ ಘಂಟೆಗಳ ಕಾಲ ನಿರಂತರ ಇರಾಕ್ ಆಫ್ಘಾನಿಸ್ತಾನ, ಮುಂತಾದ ದೇಶಗಳ ಮೇಲೆ ಬಾಂಬುಗಳ ಮಳೆಗರೆಯುತ್ತಿದ್ದರೆ ಈ ಕೃತ್ಯಗಳ ವಿರುದ್ಧ ಈತ ಪ್ರತಿರೋಧ ನಡೆಸಿದ ೧೦ ವರ್ಷ ಪೂರ್ತಿ. ಕ್ಯಾನ್ಸರ್ ರೋಗದ ಚಿಕಿತ್ಸೆಗೆಂದು ಜರ್ಮನಿ ದೇಶಕ್ಕೆ ಹೋದ ಬ್ರಯನ್ ಮರಳಿ ಬರದೆ ಡೇರೆ ಖಾಲಿಯಾಯಿತೆ ವಿನಃ ಅವನನ್ನು ಹೊರಹಾಕಲು ಬ್ರಿಟಿಶ್ ಸರಕಾರ ನಡೆಸಿದ ಎಲ್ಲ ಪ್ರಯತ್ನಗಳೂ (ನಮ್ಮ ದೇಶದ UPA ಸರಕಾರಕ್ಕೆ ಈತನ ಡೇರೆ ಖಾಲಿ ಮಾಡಿಸುವ ಕೆಲಸದ ಗುತ್ತಿಗೆ ನೀಡಿದ್ದರೆ ಏನಾಗುತ್ತಿತ್ತೋ ಊಹಿಸಿ) ವಿಫಲವಾದವು. ಪ್ರಶಸ್ತಿ ಪುರಸ್ಕಾರಗಳ ಅಪೇಕ್ಷಿಯಿಲ್ಲದೆ ‘ಮೆಗಾ ಫೋನ್’ ಹಿಡಿದು ತನ್ನ ಕಸುಬನ್ನು ಅತೀ ಶ್ರದ್ಧೆಯಿಂದ ಮಾಡುತ್ತಿದ್ದ ಈ ‘ಬಡಗಿ’ ಗೆ ೨೦೦೭ ರಲ್ಲಿ ‘ಚಾನಲ್ ೪’ ಟೀವೀ ಸಂಸ್ಥೆ ‘ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿ’ ಎಂದು ಅವನನ್ನು ಆಯ್ಕೆ ಮಾಡಿದಾಗ ಹಿಗ್ಗಿದ ಬ್ರಯನ್ ತನಗೆ ಟೋನಿ ಬ್ಲೇರ್ ಮತ್ತು ಡೇವಿಡ್ ಕೆಮರೂನ್ ರಿಗಿಂತ ಹೆಚ್ಚು ಮತ ನೀಡಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಹರ್ಷದಿಂದ ಅಭಿನಂದನೆ ಸಲ್ಲಿಸಿದ. ಯುದ್ಧ ಕೋರ ನಾಯಕರ ಕೃತ್ಯಗಳ ಕಾರಣ ನೋವನ್ನನುಭವಿಸುವ ಜನರಿಗಾಗಿ ಏಕಾಂಗಿಯಾಗಿ ಹೋರಾಡಿದ ಬ್ರಯನ್ ವೈಯಕ್ತಿಕ ಜೀವನದಲ್ಲಿ ನೋವನ್ನೂ, ಹಿನ್ನಡೆಯನ್ನೂ ಕಂಡ. ೨೦೦೧ ರಲ್ಲಿ ಈ ಅಪರೂಪದ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಆರಂಬಿಸಿದ ಒಂದು ವರ್ಷದ ಒಳಗೆ ಈತನ ಪತ್ನಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದಳು. ವಿಚಲಿತನಾಗದ ಬ್ರಯನ್ ಹೇಳಿದ್ದು ನಾನು ನನ್ನ ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ, ಅವರು ದೂರವಾಗುವಂತೆ ಮಾಡಿದ್ದೂ ದುರುಳ ನಾಯಕರೆ ಎಂದು ಹಲುಬುತ್ತಾನೆ.

ಬ್ರಯನ್ ಗೆ ಏಳು ಜನ ಮಕ್ಕಳಿದ್ದರು.

ಪರಿವೃತ್ತಪಾರ್ಶ್ವಕೋನಾಸನ

 

ನಮ್ಮ ದೇಶದಲ್ಲಿ ಈಗ ಭ್ರಷ್ಟಾಚಾರದ ಕೋಲಾಹಲ. ದೇಶವನ್ನು ಹಗಲು ದರೋಡೆ ಮಾಡುತ್ತಿರುವ ರಾಜಕಾರಣಿ-ಉದ್ಯಮಿ ‘ನೆಕ್ಸಸ್’ ಜನರ ಸಹನೆ ಕೆಡಿಸಿದೆ. ಒಮ್ಮೆ ಶ್ರೀಲಂಕಾ ಮೂಲದ ನನ್ನ ಸಹೋದ್ಯೋಗಿ ತನ್ನ ದೇಶದ ಅಧ್ಯಕ್ಷ ಮಹೇಂದ್ರ ರಾಜಪಕ್ಸ ಮತ್ತು ಆತನ ಪರಿವಾದವರ ಮುಗಿಲು ಮುಟ್ಟಿದ ಭ್ರಷ್ಟಾಚಾರ ಯಾವ ರೀತಿ ದೇಶ ಮುಂದವರಿಯಲು ಅನುವು ಮಾಡಿ ಕೊಡುತ್ತಿಲ್ಲ ಮತ್ತು ಅವರುಗಳ ಕಪಿ ಮುಷ್ಠಿಯಲ್ಲಿ ದೇಶ ಯಾವ ರೀತಿ ಸಿಲುಕಿದೆ ಎಂದು ಹೇಳುವಾಗ ನಾನು ಸಂಭ್ರಮದಿಂದ ನಮ್ಮ ದೇಶದಲ್ಲಿ ಈ ರೀತಿಯ ಲಂಚಗುಳಿತನ ಸಾಧ್ಯವಿಲ್ಲ. ಕೆಳಸ್ತರದಲ್ಲಿ ಮಾತ್ರ ಒಂದಿಷ್ಟು ಭ್ರಷ್ಟಾಚಾರ ಇದೆ, ವ್ಯವಸ್ಥೆಯ ಮೇಲ್ಪದರದಲ್ಲಿ ಅದರ ಹಾವಳಿ ಇಲ್ಲ, ನಮ್ಮ ಮಾಧ್ಯಮ, ನ್ಯಾಯಾಲಯಗಳು, ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅವನನ್ನು ಬಿಡುವುದಿಲ್ಲ, ನಮ್ಮದು ಏಷ್ಯಾ ಉಪಖಂಡದ freest, transparent democracy ಎಂದೆಲ್ಲಾ ಬೀಗುತ್ತಾ ಹೇಳುವಾಗ ಆತನ ಕಣ್ಣುಗಳಲ್ಲಿ ಅಸೂಯೆ ಮಿಶ್ರಿತ ಮೆಚ್ಚುಗೆ ಕಾಣಬಹುದಿತ್ತು. ಆದರೆ ಇತ್ತೀಚೆಗೆ ಒಂದೇ ಸಮನೆ ಹಗರಣಗಳ ಮೇಲೆ ಹಗರಣಗಳು ನಮ್ಮ ಕೊರಳಿಗೆ ಮಾಲೆಯಾಗಿ ನಮ್ಮ ಉಸಿರುಗಟ್ಟಿಸಲು ಶುರುಮಾಡಿದಾಗ ನನಗನ್ನಿಸಿತು ನಾನೆಂಥಾ novice ಎಂದು.

ಶ್ರೀಲಂಕಾ ರಾಜಪಕ್ಸ ಪರಿವಾರದ ಕಪಿ ಮುಷ್ಠಿಯಲ್ಲಿ ಮಾತ್ರ ಇರೋದು, ಅದೇ ನಮ್ಮ ದೇಶ ಯಾರ್ಯಾರಿಗೆ ಬಲವಾದ, ಬಿಗಿಯಾದ, ಮುಷ್ಠಿಯಿದೆಯೋ ಅವರುಗಳೆಲ್ಲರ ಕೈಯ್ಯಲ್ಲಿ ಸಿಕ್ಕು ನರಳುತ್ತಿದೆ. ಚಾರ್ಲ್ಸ್ ಡಾರ್ವಿನ್ ನ survival of fittest ಸಿದ್ಧಾಂತ ಕ್ಕೆ ಜ್ವಲಂತ ನಿದರ್ಶನ ನಮ್ಮ ಲಂಚಗುಳಿ ರಾಜಕಾರಣಿಗಳು ಮತ್ತು ಅವರ ಆಶ್ರಯದಲ್ಲಿ ಮೆರೆಯುತ್ತಿರುವ ಉದ್ಯಮಿಗಳು. ತಾಕತ್ತಿರುವವರೆಲ್ಲಾ ಲೂಟಿಗೆ ಅರ್ಹರು.

ರಾಜಕಾರಣಿಗಳು ನಮ್ಮ ಕನಸುಗಳನ್ನು, ಆಶಯಗಳನ್ನು ಅಮೇರಿಕನ್ ಡಾಲರ್ ಗಳ ರೂಪಕ್ಕೆ ಪರಿವರ್ತಿಸಿ ಸ್ವಿಸ್ ಬ್ಯಾಂಕುಗಳಲ್ಲೂ, ಕಪ್ಪು ಹಣದ ರೂಪದಲ್ಲೂ ಜಮಾವಣೆ ಮಾಡಲು ಆರಂಬಿಸಿದ್ದರಿಂದ ಈ ಬೇಡಿಕೆಗೆ ಒತ್ತಾಸೆ ಜನರಿಂದ. ಶುಭ್ರ ಖಾದಿಗಳು ತಮ್ಮ ಕೊಳಕು antics ಗಳಿಂದ ನಮ್ಮನ್ನು ನಿರಾಶೆ ಗೊಳಿಸಿದಾಗ ಸಹಜವಾಗಿಯೇ ಜನ unconventional ಪರಿಹಾರದ ಕಡೆ ನೋಟ ಹರಿಸಲು ಆರಂಭಿಸಿದರು. ದೇಹವನ್ನ ದಂಡಿಸಿ ಸರಕಾರದ ಮನವೊಲಿಸಲು ಯತ್ನಿಸಿದರು. ಯೋಗ ಖ್ಯಾತಿಯ ಬಾಬಾ ರಾಮ್ ದೇವ್ ಸರಕಾರದ ಲಂಚ ಕುರಿತ ಸರಕಾರದ ನಿರ್ಲಿಪ್ತ ನೀತಿಗೆ ಸೆಡ್ಡು ಹೊಡೆದರು. ಅದರಲ್ಲೇನು ತಪ್ಪು? ಯೋಗ ಗುರು ರಾಮ್ ದೇವ್ ಜನರ ನಾಡಿ ಮಿಡಿತಕ್ಕೆ ಪ್ರತಿಸ್ಪಂದಿಸಿ ಸಮಾನಾಸಕ್ತರನ್ನು ಕಲೆ ಹಾಕಿ ರಾಮ ಲೀಲಾ ಮೈದಾನಕ್ಕೆ ಕರೆತಂದರು. ರಾಮಲೀಲಾ ಮೈದಾನ ಬದಲಾವಣೆಯ ‘ತಹ್ರೀರ್’ ಚೌಕ (ಈಜಿಪ್ಟ್) ಆಗಬಹುದು ಎಂದು ನಿರೀಕ್ಷಿಸಿದ್ದ ಜನರಿಗೆ ಕಾಣಲು ಸಿಕ್ಕಿದ್ದು miniature ತಿಯಾನನ್ಮೆನ್ ಚೌಕ. ಬೀಜಿಂಗ್ ನ ಚೌಕದಲ್ಲಿ ಟ್ಯಾಂಕುಗಳು ರಾರಾಜಿಸಿದರೆ ದಿಲ್ಲಿಯ ಮೈದಾನದಲ್ಲಿ lathi ಗಳು ರಾರಾಜಿಸಿದವು.

ಭ್ರಷ್ಟಾಚಾರದ ಬಗ್ಗೆ ಸರಕಾರದ ಅಸಡ್ಡೆ, ಉದಾಸೀನ ನೀತಿಗೆ ಬೇಸತ್ತ ಸಮಾಜ ಸೇವಕ ಅಣ್ಣಾ ಹಜಾರೆ ಅಮರಣಾಂತ ಉಪವಾಸಕ್ಕೆ ಹೊರಟಾಗ ಸರಕಾರ ಗಾಭರಿಯಾಗಿ ಲೋಕ ಪಾಲ್ ಮಸೂದೆ ಮಂಡಿಸಿ ಲಂಚ ರಿಶ್ವತ್ತನ್ನು ಪರಲೋಕ ಪಾಲ್ ಮಾಡ್ತೀವಿ ಎಂದು ನಂಬಿಸಿ ನಾಮ ಎಳೆದ ಸರಕಾರಕ್ಕೆ ಬಿಸಿ ಮುಟ್ಟಿಸಲು ರಾಮ್ ದೇವ್ ತಯಾರಾದಾಗ ಸರಕಾರ ಬೆದರಿತು. ಯೋಗ ಗುರುವಿನ ನೇತೃತ್ವದಲ್ಲಿ ಜಮಾಯಿಸಿದ್ದ ಹತ್ತಾರು ಸಾವಿರ ಜನ ಬಯಸಿದ್ದು ಸರಕಾರದಿಂದ ಒಂದು ಸಿಂಪಲ್ ಆಸನವನ್ನು. ಅದೇ ‘ಬದಲಾವಣೆ’ ಯ ಆಸನ. change. “Change we can believe in” ಇಷ್ಟೇ ಆಗಿತ್ತು ಜನರ ಬೇಡಿಕೆ. ಲೂಟಿ ಮಾಡಿ ದೇಶಾಂತರ ಹೋದ ಗಂಟು ಮರಳಿ ದೇಶಕ್ಕೆ ಬರಲಿ, ಇನ್ನು ಮುಂದೆ ಹೀಗಾಗದಂತೆ ಬೇಲಿ ಕಟ್ಟಿ ಎನ್ನುವ ಸಿಂಪಲ್ ಬೇಡಿಕೆ. ಲಂಚ ಮುಗಿಲು ಮುಟ್ಟಿದೆ, ನೈತಿಕತೆ ಪಾತಾಳ ಅಪ್ಪಿದೆ ಸ್ವಲ್ಪ ಬದಲಾಗಿ ಎಂದಷ್ಟೇ ಆಗಿತ್ತು ಜನರ ಬಯಕೆ. ಸರಕಾರ ಜಪ್ಪಯ್ಯ ಅನ್ನದಿದ್ದಾಗ ಬೇಸತ್ತ ಜನ ತಮಗೆ ತಿಳಿದ ಶಾಂತಿಯುತ ಪ್ರತಿಭಟನೆಯ ಮಾರ್ಗ ಅನುಸರಿಸಿದರು. ಬದಲಾವಣೆ ಎನ್ನುವ ಅತಿ ಸುಲಭದ ಆಸನಕ್ಕೆ ಒಪ್ಪದ ಸರಕಾರ ಜನರ ಮೇಲೆ ಪ್ರಯೋಗಿಸಿದ್ದು ಸ್ವಲ್ಪ ಕ್ಲಿಷ್ಟಕರವಾದ “ಪರಿವೃತ್ತ ಪಾರ್ಶ್ವಕೋನಾಸನ”. ಮೊದಲು cajoling, ನಂತರ ಬೆದರಿಕೆ, ಸ್ವಲ್ಪ ನಂತರ ಅಪವಾದ, ಕೊನೆಗೆ ಬಲಪ್ರಯೋಗ. revolving lateral angle position ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಈ ಆಸನ ಬಹು ಸಲೀಸಾಗಿ ಕೆಲಸಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲೂ ಈ ಆಸನ ಉಪಯೋಗಕ್ಕೆ ಬಂದಿತ್ತು. ಅದರ ನಂತರ ಹಲವು ರಾಜ್ಯಗಳಲ್ಲಿ ಹಲವು ಉದ್ದೇಶಗಳಿಗಾಗಿಯೂ ಈ ಆಸನ handy ಆಗಿ ಬಂತು ಸರಕಾರಗಳಿಗೆ.

ಯಾರಿಗೇ ಆದರೂ ಈ “ಬದಲಾಗು” ಎನ್ನುವ ಆಸನ ಬಹು ಕಷ್ಟಕರ. ಹೊಸ ವರ್ಷದ ಆರಂಭದಲ್ಲೂ, ಹಿರಿಯರಿಂದ ತಿವಿಸಿ ಕೊಂಡಾಗಲೂ ಪಾಲಕರಿಂದ ಉಗಿಸಿ ಕೊಂಡಾಗಲೂ ಈ ಆಸನದ ಮೇಲೆ ಆಸಕ್ತಿ ತೋರಿದರೂ ಅದು ತಾತ್ಕಾಲಿಕ. ಸುಲಭವಾಗಿ ಬಲೆಗೆ ಬೀಳಲೊಲ್ಲದು.

ಇನ್ನೊಂದು ಬೆಳವಣಿಗೆ ಗಮನಿಸಿದಿರಾ? ಭ್ರಷ್ಟ ರಾಜಕಾರಣಿಗಳ ಪಾಪ ತೊಳೆಯಲು ಯೋಗಿಗಳು, ಸಮಾಜ ಸೇವಕರು ಮುಂದೆ ಬರಬೇಕು. ಏಕೆ, ಭ್ರಷ್ಟಾಚಾರಿಗಳಲ್ಲದ ರಾಜಕಾರಣಿಗಳು extinct ಆಗಿ ಹೋದರೆ ‘ಡೋಡೋ’ ಪಕ್ಷಿ ಥರ? ಈ ಬಾಬಾ ಮತ್ತು ಸಮಾಜ ಸೇವಕರನ್ನು ಬೆಂಬಲಿಸುತ್ತಿರುವ, ಅವರ ಪರವಾಗಿ ಅರಚುತ್ತಿರುವ ರಾಜಕಾರಣಿಗಳೇಕೆ ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸರು?

ಒಂದು digression: ಈ ಉಪವಾಸದ ಗಲಾಟೆ ಮಧ್ಯೆ ಯಾವುದೇ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನಿರುವ ಕಂಪ್ಯೂಟರ್ ತಂತ್ರಾಂಶವೊಂದು ವಿವಾದಕ್ಕೆ ಎಳೆಯಲ್ಪಟ್ಟಿದ್ದು RSS ಹಿನ್ನೆಲೆ ಬಾಬಾರಿಗೆ ಇದೆ ಎನ್ನುವ ಅಪವಾದ ನನ್ನಂಥವರನ್ನು ತಬ್ಬಿಬ್ಬುಗೊಳಿಸಿದೆ. ಹೌದು rss ಗೂ ಬಾಬಾ ಗೂ ಇರೋ ಸಂಬಂಧ ಒಂದು ರೀತಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಗೂ ಇಮಾಂ ಸಾಹೇಬರಿಗೂ ಇರುವ ವ್ಯಾತ್ಯಾಸದ ರೀತಿ ಅಲ್ಲವೇ? RSS ಎಂದರೆ Really Simple Syndication ಎನ್ನುವ ಒಂದು ಚೊಕ್ಕ ಉಪಯೋಗಿ ತಂತ್ರಾಂಶ. ನಮಗೆ ಇಷ್ಟವಾದ ತಾಣಗಳ LIVE FEED ಗಳನ್ನು ಸುಲಭವಾಗಿ ನೀಡುವ ಈ ತಂತ್ರಾಂಶಕ್ಕೂ ಬಾಬಾ ರಿಗೂ ಇರಬಹುದಾದ ಸಂಬಂಧದ ಬಗ್ಗೆ ಯೋಚಿಸುತ್ತಾ ನನ್ನೀ ಲೇಖನ ಮುಕ್ತಾಯ.

ಚಿತ್ರ ಕೃಪೆ: http://janetyogahut.blogspot.com

ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ

ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ ಶೈಲಿಯಲ್ಲಿ ಪಾಕಿಸ್ತಾನದ ಅರಿವಿಗೆ ಸುಳಿವಿಗೆ ಸಿಗದೇ ತನ್ನ ಸೀಲ್-೬ ಕಮಾಂಡೋಗಳನ್ನು ಕಳಿಸಿ ಬಲಿ ಹಾಕಿತು. ತನಗೆ ತಿಳಿಸದೆ ತನ್ನ ದೇಶದೊಳಕ್ಕೆ ನುಗ್ಗಿ ಲಾದೆನ್ ಹತ್ಯೆಗೈದ ಅಮೇರಿಕೆಯ ಬಗ್ಗೆ ಪಾಕ್ ಕ್ರೋಧ ವ್ಯಕ್ತಪಡಿಸಿತು. ಪಾಕಿಸ್ತಾನದ ಅರಿವಿಗೆ ಬರದೆ ಬಿನ್ ಲಾದೆನ್ ಬದುಕುತ್ತಿದ್ದ ಅದೂ ಪಾಕ್ ರಾಜಧಾನಿಯ ಹತ್ತಿರ, ಅದೂ ಮಿಲಿಟರಿ ಅಕಾಡೆಮಿ ಯೊಂದರ ಸಮೀಪ ಎಂದರೆ ದೊಡ್ಡ ಆಶ್ಚರ್ಯವೇ. ಕೆಲವರ ಪ್ರಕಾರ ಪಾಕ್ ನೀಡಿದ ಸುಳಿವಿನ ಆಧಾರದ ಮೇಲೆಯೇ ಅಮೇರಿಕಾ ಬಿನ್ ಲಾದೆನ್ ನನ್ನು ಕೊಂದಿದ್ದು ಮತ್ತು ಪಾಕಿಸ್ತಾನದಲ್ಲಿರುವ ತಾಲಿಬಾನಿಗಳ ಆಕ್ರೋಶ ಎದುರಿಸಲು ಆಗದ ಪಾಕ್ ತನಗೆ ಈ ಕಾರ್ಯಾಚರಣೆ ಗೊತ್ತೇ ಇಲ್ಲ ಎಂದು ನಾಟಕ ಮಾಡಿ ಕೈ ತೊಳೆದು ಕೊಂಡಿತು ಎನ್ನುವ ಅಭಿಪ್ರಾಯದೊಂದಿಗೆ ಈ ಮಿಲಿಟರಿ ಕಾರ್ಯಾಚರಣೆ ಒಂದು ನಿಗೂಢ ರಹಸ್ಯವಾಗಿ ಜನರ ಊಹಾ, ಕಲ್ಪನೆಗಳಿಗೆ ಇನ್ನಷ್ಟು ಕಾಲ ಮೇವನ್ನು ಒದಗಿಸಲು ಕಾರಣವಾಯಿತು.

ಸೀಲ್ ಗಳು ನಡೆಸಿದ ಕಾರ್ಯಾಚರಣೆ ಪಾಕಿಗೆ ಗೊತ್ತೇ ಇರಲಿಲ್ಲ ಎನ್ನುವ ಮಾತಿಗೆ ಮನ್ನಣೆ ನೀಡುವುದಾದರೆ ರಹಸ್ಯ ಕಾರ್ಯಾಚರಣೆ ಪಾಕ್ ಮತ್ತು ಅಮೇರಿಕಾ ನಡುವಿನ ಆಪ್ತ ಬಾಂಧವ್ಯವನ್ನು ಡಿವೋರ್ಸ್ ಅಂಚಿಗೆ ತಂದು ನಿಲ್ಲಿಸಿದೆ ಎನ್ನಬಹುದು. ಡಿವೋರ್ಸ್ ಸಹ ಅಷ್ಟು ಸುಲಭದ್ದಲ್ಲ. ಅದು acrimonious ಆಗಿ ತೀರುತ್ತದೆ. ಏಕೆಂದರೆ ಅಮೇರಿಕಾ ಪಾಕ್ ಸುಮಧುರ ಸಂಬಂಧ ಮಕ್ಕಳು ಮರಿಗಳನ್ನು ಹುಟ್ಟಿಸಿದೆ ತಾನೇ? ತಾಲಿಬಾನ್, ಅಲ್ಕೈದಾ, ಆಫ್ಘಾನಿಸ್ತಾನ್, ಮುಲ್ಲಾ ಉಮರ್, ಭಯೋತ್ಪಾದನೆ ಇತ್ಯಾದಿ.. ಹೀಗೆ ಮುಂದುವರಿಯುವ ಸಂತಾನಗಳ ಲಾಲನೆ ಪಾಲನೆ ಹೇಗೆ? ಈ ಸಂತಾನಗಳು ಯಾರ ಜವಾಬ್ದಾರಿ? ಹೀಗೆ ಒಂದು ರೀತಿಯ ವಿಶ್ವದ ನೆಮ್ಮದಿ ಕೆಡಿಸುವ ‘ಡಿವೋರ್ಸ್ ಅಂಡ್ ಕಸ್ಟೋಡಿಯಲ್ ಪ್ರೊಸೀಡಿಂಗ್ಸ್’ ಯಾವ ಹಂತಕ್ಕೆ ಬಂದು ಮುಟ್ಟುತ್ತದೋ ಎಂದು ವಿಶ್ವ ಕೈ ಹೊಸಕಿಕೊಳ್ಳುತ್ತಾ ಆತಂಕಿತವಾಗಿದ್ದರೆ ಇದೋ ಬಂತು ಅಮೇರಿಕೆಯಿಂದ ವಿಶೇಷ ವಿಮಾನವೊಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯನ್ನು ಹೊತ್ತು. ಹಿಲರಿ ಕ್ಲಿಂಟನ್ ಬಂದರು ಫಸ್ಟ್ ಏಡ್ ಕಿಟ್ ನೊಂದಿಗೆ. ನೊಂದ ಪ್ರಿಯತಮ/ಮೆ ಮನಕ್ಕೆ ಕೂಲಿಂಗ್, ಹೀಲಿಂಗ್ ಬಾಮ್ ನೊಂದಿಗೆ ಬಂದ ಹಿಲರಿ ಅದೇ characteristic smile ನೊಂದಿಗೆ ಪಾಕಿಸ್ತಾನ ಈಗಲೂ “ಒಳ್ಳೆಯ ಸಹಭಾಗಿ” – ಎ, ಗುಡ್ ಪಾರ್ಟ್ನರ್ ಎಂದು ಹೇಳಿ ಮಲಾಮಿನ ಲೇಪನ ಶುರು ಮಾಡಿದರು. ಈ ಮಾತಿನೊಂದಿಗೆ ಈ ಶನಿ ಸಂಬಂಧ ಇನ್ನೆಂಥ ಮಕ್ಕಳನ್ನು ಹುಟ್ಟಿಸುವ ತರಾತುರಿಯಲ್ಲಿದೆಯೋ ಎಂದು ನಮಗನ್ನಿಸಿದರೆ ಅದರಲ್ಲೇನೂ ತಪ್ಪಿಲ್ಲ.

ಯಾರೊಂದಿಗಿನ ಸ್ನೇಹದಲ್ಲೂ, ಶತ್ರುತ್ವದಲ್ಲೂ ಅಮೇರಿಕಾ ಎಂದಿಗೂ ಸಕಾರಾತ್ಮಕ beneficiary ಆಗಿಯೇ ಉಳಿಯುತ್ತದೆ. ಅದಕ್ಕೆ ಇತರರ ಇರುಸು ಮುರುಸು, ಕಷ್ಟ ಕಾರ್ಪಣ್ಯ ಇವೆಲ್ಲಾ ನಗಣ್ಯ. ಪಾಕಿಸ್ತಾನದೊಂದಿಗಿನ ನಮ್ಮ ಗಡಿ ಬದಲಿಸಿ ಕೊಳ್ಳಲು ಆಗದೆ ಬೆರಳುಗಳ ನಟಿಕೆ ಮುರಿಯುತ್ತಾ ಹಲ್ಲು ಮಸೆಯುವ ನಮಗೆ ಇವರೀರ್ವರ ಸಂಬಂಧ ತಲೆ ಬೇನೆಯೇ. ಇವರಿಬ್ಬರ ಸಂಬಂಧ ಚೆನ್ನಾಗಿದ್ದರೂ, ಹಳಸಿದರೂ ನಮಗೆ ಮಾತ್ರ ಗದ್ದಲ ಕಟ್ಟಿಟ್ಟ ಬುತ್ತಿ.

ಅವರು ಹಾಗೆ, ನಾವ್ಯಾಕೆ ಹೀಗೆ?

ಜಾರ್ಜ್ ಬುಶ್ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅತ್ಯಾಧುನಿಕ ದುರ್ಬೀನು ಹಿಡಿದು ಗುಡ್ಡ ಕಣಿವೆ, ಹಳ್ಳ ಕೊಳ್ಳ ಬಿಡದೆ ಹುಡುಕಾಡಿದರೂ ಸಿಗದ ಒಸಾಮಾ ಬಿನ್ ಲಾದೆನ್ ನನ್ನು ತನ್ನ ಅಧಿಕಾರಾವಧಿಯ ಉತ್ತರಾರ್ಧದಲ್ಲೇ ಕೆಡವಿ ಬೀಳಿಸಿದ ಕೀರ್ತಿ ಒಬಾಮಾರದು. “ನನ್ನ” ನಿರ್ದೇಶನದ ಮೇರೆಗೆ “ನಾವಿಕ ಸೀಲ್ – ೬” ರ ವಿಶೇಷ ಪಡೆಗಳು ಒಸಾಮಾನನ್ನು ಬಲಿ ಹಾಕಿ ಜಲಸಮಾಧಿ ಮಾಡಿದರು ಎನ್ನುವ ಮಾತಿನಲ್ಲಿ “ನನ್ನ” ಎನ್ನುವ narcissistic ಮಾತೊಂದು ಬಿಟ್ಟರೆ ಒಬಾಮಾ ಬೇರಾವುದೇ ಶೌರ್ಯ ಪ್ರದರ್ಶನ ಮಾಡಲಿಲ್ಲ. ಒಸಾಮಾನನ್ನು ಬಲಿ ಹಾಕಿದ ಕೂಡಲೇ ಜಾರ್ಜ್ ಬುಶ್ ರಿಗೆ ಫೋನಾಯಿಸಿ ಇನ್ನು ಈ ಭೂಮಿಯ ಮೇಲೆ ಒಸಾಮಾ ನಡೆಯುವುದನ್ನು ನೋಡಲಾರಿರಿ ಎನ್ನುವ  ಸಂದೇಶ ನೀಡಿದರು ಅಧ್ಯಕ್ಷ ಒಬಾಮ. ದೇಶಕ್ಕೆ, ವಿಶ್ವಕ್ಕೆ ಈ ವಿಷಯವನ್ನ ಹೊರಗೆಡಹುವ ಮೊದಲೇ ತನ್ನ ಪಕ್ಷದವನಲ್ಲದ ರಿಪಬ್ಲಿಕನ್ ಪಕ್ಷದ ಹಿಂದಿನ ಅಧ್ಯಕ್ಷ ಬುಶ್ ನಿಗೆ ಈ ಸಂದೇಶ ರವಾನೆ ಮಾಡಿದ್ದು ಏಕೆ? ಈ ರಾಜಕಾರಣಕ್ಕೆ ನಿಷ್ಕೃಷ್ಟವಾಗಿ  bipartisan politics ಎಂದು ಕರೆಯುತ್ತಾರೆ ಅಮೆರಿಕೆಯಲ್ಲಿ. ದೇಶದ ಭದ್ರತೆ, ಸಮಗ್ರತೆ, ಮುಂತಾದ ಗಂಭೀರ ವಿಚಾರಗಳು ಬಂದಾಗ ಅಮೆರಿಕೆಯಲ್ಲಿ ಎಲ್ಲಾ ಪಕ್ಷಗಳೂ ಒಂದು. ಅವರೆಲ್ಲರ ಪಕ್ಷ ಒಂದೇ. ಅದುವೇ ಅಮೇರಿಕನ್. put america first, ಅಮೆರಿಕೆಯ ರಾಜಕಾರಣಿಗಳ ಧ್ಯೇಯ ವಾಕ್ಯ. ಅವರುಗಳ ಏಕೋದ್ದೇಶ. ದೇಶ ಉರಿಯುವಾಗ ಬಾಣಲೆ ಎತ್ತಿ ಕೊಂಡು ಬಂದು ಕಜ್ಜಾಯ ಹುರಿಯಲು ಮುಂದಾಗೋಲ್ಲ ಅಲ್ಲಿನ ರಾಜಕಾರಣಿಗಳು. ಹಾಗೇನಾದರೂ ಮಾಡಿದರೆ ಇ- ಮೇಲ್ ಮೂಲಕ ಬರುತ್ತವೆ ಎಕ್ಕಡಗಳು. ಮುಂದಿನ ಬಾರಿ ಆರಿಸಿ ಬರುವ ಆಸೆ ಕನಸಾಗುತ್ತದೆ.       

ಈಗ ಬನ್ನಿ ಭಾರತಕ್ಕೆ. “ನಿನ್ನ ತಲೆ ಹೋದರೂ ಪರವಾಗಿಲ್ಲ ನನ್ನ ತಲೆಯ ಮೇಲಿನ ಪೇಟ intact ಆಗಿದ್ದರೆ ಸಾಕು” ಎನ್ನುವ ರಾಜಕಾರಣಕ್ಕೆ ಸುಸ್ವಾಗತ. ೨೦೦೮ ನವೆಂಬರ್ ೨೬ ಕ್ಕೆ ವಿಶ್ವವನ್ನೇ ನಡುಗಿಸಿದ, ಪಾಕಿಸ್ತಾನದ ಭಯೋತ್ಪಾದಕರು ಮುಂಬೈಯಲ್ಲಿ ನಡೆಸಿದ ಮಾರಣ ಹೋಮ ಎರಡೂ ದೇಶಗಳು ಯುದ್ಧ ತಯಾರಿ ನಡೆಸುವಷ್ಟು ತೀವ್ರ ಪರಿಣಾಮ ಬೀರಿತು. ಮೂರು ದಿನಗಳ ಕಾಲ ಮುಂಬೈ ನಗರವನ್ನು ಒತ್ತೆಯಾಗಿರಿಸಿಕೊಂಡಿದ್ದ ಕೊಲೆಗಡುಕರು ನಮ್ಮ ಯೋಧರ ಗುಂಡುಗಳಿಗೆ ಒಬ್ಬೊಬ್ಬರಾಗಿ ಉರುಳಿದರು. ಎಲ್ಲಾ ಭಯೋತ್ಪಾದಕರೂ ಹತರಾಗಿ ಮುಂಬೈ ಮತ್ತೊಮೆ ಸುರಕ್ಷಿತ ಸ್ಥಿತಿಗೆ ಮರಳಿದಾಗ ನಮ್ಮ ಪ್ರಧಾನಿಗಳೂ, ವಿರೋಧ ಪಕ್ಷದ ನಾಯಕರೂ ಮುಂಬೈಗೆ ಧಾವಿಸಿ ಬಂದರು. ಬಂದಿದ್ದು ದೊಡ್ಡ ವಿಷಯವಲ್ಲ. ಅವರು ಬಂದ ರೀತಿ ಮಾತ್ರ ವಿಶೇಷವಾದದ್ದು. ಇಡೀ ವಿಶ್ವಕ್ಕೆ ನಾವು ಯಾವ ಪಕ್ಷಗಳಿಗೆ ಸೇರಿದ್ದರೂ ನಾವು ಭಾರತೀಯರು ಒಂದು ಎಂದು ತೋರಿಸಲು ಈ ಮಹನೀಯರುಗಳು ಒಟ್ಟಿಗೆ ಬರಲಿಲ್ಲ. ಬೇರೆ ಬೇರೆ ವಿಮಾನಗಳಲ್ಲಿ ಆಗಮಿಸಿದರು. ಈ ಇಬ್ಬರೂ ನಾಯಕರು ತಮ್ಮ ಹೇಳಿಕೆಗಳಲ್ಲಿ ದೇಶ ಒಗ್ಗಟ್ಟಾಗಿದೆ ಎಂದು ಸಾರಿದರೂ ಕೆಲವೊಂದು ಸಂದರ್ಭಗಳಲ್ಲಿ ಚಿಕ್ಕ ಪುಟ್ಟ ಸಂಗತಿಗಳು ಬೃಹದಾಕಾರವಾಗಿ ಗೋಚರಿಸುತ್ತವೆ. ಮುಂಬೈ ಮಾರಣ ಹೋಮಕ್ಕೆ ಮೊದಲು ಕಂದಹಾರಕ್ಕೆ ಅಪಹರಿಸಿಕೊಂಡು ಹೋದ ನಮ್ಮ ವಿಮಾನ, ಸಂಸತ್ ಭವನದ ಮೇಲೆ ನಡೆದ ಧಾಳಿ ಹೀಗೆ ಹಲವು ಯಾತನಾಮಯ ಸಂದರ್ಭಗಳಲ್ಲಿ ನಮ್ಮ ಒಗ್ಗಟು ಸಾಕಾಗಲಿಲ್ಲವೇನೋ ಎನ್ನುವಷ್ಟು ಐಕ್ಯತೆಯಿಂದ ಕೂಡಿರಲಿಲ್ಲ.

ಅಮೇರಿಕೆಯಿಂದ ನಾವು ಕಲಿಯುವುದು ಬಹಳಷ್ಟಿದೆ. ದೇಶ ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ, ಯಾರ ಬೆಂಬಲವನ್ನೂ ನಿರೀಕ್ಷಿಸುವ ಗತಿಗೇಡು ಸಹ ಬರುವುದಿಲ್ಲ. ನಮಗೆ ಸರಿ ಎನಿಸಿದ್ದನ್ನು ನಿರ್ಭಯವಾಗಿ, ನಿರ್ಭಿಡೆಯಿಂದ ಮಾಡಬಹದು ದೇಶದ ರಕ್ಷಣೆಯನ್ನು.           

 

 

ಜನರಿಗೆ ಭಯಪಡುವ ಮುಖ್ಯ ಮಂತ್ರಿ

ಇಂದು ಬೆಳಿಗ್ಗೆ ಮಲಯಾಳಿ ಒಬ್ಬಾತ ನಡೆಸುವ ಬುಫಿಯಾ ಎಂದು ಕರೆಯಲ್ಪಡುವ ಚಾದಂಗಡಿಯ ಟೀವಿಯಲ್ಲಿ ಕೇರಳದ ನೂತನ ಮಖ್ಯ ಮಂತ್ರಿಗಳ ಸಂದರ್ಶನವನ್ನು ಕೈರಳಿ ಚಾನಲ್ ನ ಬಾತ್ಮೀದಾರ ನಡೆಸುತ್ತಿದ್ದನ್ನು ವೀಕ್ಷಿಸಿದೆ. ಎರಡನೇ ಬಾರಿಗೆ ಮು. ಮಂತ್ರಿಯಾದ ಊಮ್ಮನ್ ಚಾಂಡಿ ಅನುಭವೀ ರಾಜಕಾರಣಿ.

ಬಾತ್ಮೀದಾರ ಕೇಳಿದ ಪ್ರಶ್ನೆಗಳಿಗೆ ವಿಚಲಿತನಾಗದೆ ನೇರವಾಗಿ ಉತ್ತರ ನೀಡುತ್ತಿದ್ದ ಮು. ಮಂತ್ರಿಗಳು ಕೆಲವೊಂದು ಕ್ಲಿಷ್ಟಕರ ಪ್ರಶ್ನೆಗಳನ್ನು ಎದುರಿಸಿದರು. ಕೇವಲ ಎರಡು ಶಾಸಕರ ಹೆಚ್ಚಳದ ಬಹುಮತ ಹೊಂದಿರುವ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಎಡರು ತೊಡರು ಗಳನ್ನು ಕಾಣದು ಎನ್ನುವುದು ಇವರ ವಿಶ್ವಾಸ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಯಾರಿಗೂ ಭಯ ಪಡುವ ಅವಶ್ಯಕತೆ ಎನಗಿಲ್ಲ ಎಂದಾಗ ಮು. ಮಂತ್ರಿಗಳನ್ನು ಬಾತ್ಮೀದಾರ ಕೇಳಿದ, ಭಯವಿಲ್ಲ ಎಂದಿರಲ್ಲ ಯಾರ ಭಯವೂ ಇಲ್ಲವೇ? ಆಗ ಮು. ಮಂತ್ರಿಗಳು ಹೇಳಿದ್ದು “ನನಗೆ ದೇವರ ಮೇಲೆ ಭಯ ಮತ್ತು ಜನರ ಭಯ ಇದೆ, ಅಷ್ಟೇ”.  

ಮಂತ್ರಿಗಳಿಗೆ ಇರಬೇಕಾದ ಅರ್ಹತೆಗಳ ಕುರಿತು ಕೇಳಲಾಗಿ integrity, common sense ಇದ್ದರೆ ಕೆಲಸ ಸುಗಮ ಎಂದರು. ಒಳ್ಳೆಯ ಮಾತುಗಳೇ. ಆದರೆ ಅವರು ಹೇಳಿದ ಈ ಎರಡು ಗುಣದ್ವಯಗಳು ರಾಜಕಾರಣಿ ಅಥವಾ ಮಂತ್ರಿ ಮಹೊದಯರುಗಳಲ್ಲಿ ಇದ್ದಿದ್ದರೆ ನಮ್ಮ ದೇಶ ಹೀಗೆ ಇರುತ್ತಿತ್ತೇ?    

ಕೊನೆಗೆ ಮುಖ್ಯಮಂತ್ರಿಗಳು ಸಂದರ್ಶನದ ಅವಧಿಯಲ್ಲಿ ದೇವರ ಪ್ರಸ್ತಾವನೆ ಮಾಡಿದ್ದನ್ನು ಮತ್ತೊಮ್ಮೆ ಕೆದಕುತ್ತಾ ಆತ ಕೇಳಿದ ಇಂದು ಬೆಳಿಗ್ಗೆ ದೇವರಲ್ಲಿ ಏನನ್ನು ಬೇಡಿ ಕೊಂಡಿರಿ ಎಂದು. ಅದಕ್ಕೆ ಊಮ್ಮನ್ ಚಾಂಡಿ ನೀಡಿದ ಉತ್ತರ “ಯಾವುದೇ ನಿರ್ದಿಷ್ಟ ಬೇಡಿಕೆ ಇಟ್ಟುಕೊಂಡು ನಾನು ದೇವರಲ್ಲಿ ಕೇಳೋಲ್ಲ, ನಾನು ಮಾಡುವ ಕೆಲಸಗಳು ಸರಿಯಾದ ಮಾರ್ಗದಲ್ಲಿ ಇರಲು ಸಹಕರಿಸು ಎಂದು ಮಾತ್ರ ಕೇಳಿ ಕೊಳ್ಳುತ್ತೇನೆ”.  

ಅತ್ಯಂತ ಸರಳವಾಗಿ ಬದುಕುವ, ತಲೆ ಸಹ ಬಾಚದ, ಇಸ್ತ್ರಿ ಹಾಕಿದ ಬಟ್ಟೆ ಧರಿಸದ, ದೇವರನ್ನು ಭಯಪಡುವ ದೈವ ಭಕ್ತ, ಜನರಿಗೆ ಹೆದರುವ ಪ್ರಜಾಪತಿ ಕೇರಳ ರಾಜ್ಯವನ್ನ ಅಭಿವೃದ್ಧಿ ಪಥದತ್ತ ಮುನ್ನಡೆಸಲಿ ಎಂದು ಹಾರೈಸೋಣ.