ರಾಜಕಾರಣದಲ್ಲಿ ಧರ್ಮ ಎಷ್ಟಿರಲಿ?

“ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಪಡಬೇಕಿಲ್ಲ ” – ಈ ಮಾತನ್ನು ಕ್ರೈಸ್ತ ಮೂಲಭೂತವಾದಿ ಇವಾನ್ಜೆಲಿಸ್ಟ್ (ಧರ್ಮಪ್ರಚಾರಕ) ಜೆರ್ರಿ ಫಾಲ್ವೆಲ್, ಅಥವಾ ಟೆರ್ರಿ ಜೋನ್ಸ್ ರಂಥವರು ಹೇಳಿದ್ದರೆ ಚಿಂತೆ ಇರಲಿಲ್ಲ, ಏಕೆಂದರೆ ಇವರುಗಳು ಹೀಗೆ ಮಾತನಾಡಿದಾಗಲೇ ಚೆನ್ನ. ಅಸಹನೆಯೇ ಅವರ ಉಸಿರು, ಹಾಗಾಗಿ ಅವರ ಬಾಯಲ್ಲಿ ನೀಟ್ ಆಗಿ ಫಿಟ್ ಅಗೋ ಮಾತುಗಳು ಅವು. ಆದರೆ ಈ ಮಾತನ್ನು ಸೆಕ್ಯುಲರ್ ದೇಶ ಎಂದು ಹೆಮ್ಮೆ ಪಡುವ ಬ್ರಿಟನ್ ದೇಶದ ಪ್ರಧಾನಿ ಹೇಳಿದ್ದು ಎಂದಾದ ಮೇಲೆ ಈ ಮಾತಿನ ಕಡೆ ಸ್ವಲ್ಪ ಗಮನ ಅತ್ಯಗತ್ಯ.

“ಕಿಂಗ್ ಜೇಮ್ಸ್” ಬೈಬಲ್ ನ ೪೦೦ ವಾರ್ಷಿಕೋತ್ಸವದ ವೇಳೆ ‘ಚರ್ಚ್ ಆಫ್ ಇಂಗ್ಲೆಂಡ್’ ಗೆ ಸೇರಿದ ಪಾದ್ರಿಗಳನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು ಡೇವಿಡ್ ಕೆಮರೂನ್. ಇದೇ ಮಾತನ್ನು ನಮ್ಮ ದೇಶದ ಪ್ರಧಾನಿ ಹೇಳಿದ್ದಿದ್ದರೆ ಆಗುತ್ತಿದ್ದ ವೈಚಾರಿಕ ಅನಾಹುತ ಏನು ಎಂದು ಊಹಿಸಲು ಅಸಾಧ್ಯ. ಆದರೆ ಇಷ್ಟು ಮಾತ್ರ ಹೇಳಿ ಸುಮ್ಮನಾಗಲಿಲ್ಲ ಪ್ರಧಾನಿ. “ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಬೀಳಬೇಕಿಲ್ಲ… ನನ್ನನ್ನು ಅರ್ಥ ಮಾಡಿಕೊಳ್ಳಿ… ಮತ್ತೊಂದು ಧರ್ಮ ಅಥವಾ ಧರ್ಮವಿಲ್ಲದಿರುವಿಕೆಯ ವ್ಯವಸ್ಥೆ ಇರುವುದು ತಪ್ಪು ಎಂದು ನಾನು ಖಂಡಿತಾ ಹೇಳುತ್ತಿಲ್ಲ” ಇದು ಪ್ರಧಾನಿಗಳ ಪೂರ್ತಿ ಮಾತುಗಳು. ಈಗ ಸ್ವಲ್ಪ ಸಮಾಧಾನ. ಏಕೆಂದರೆ ಬ್ರಿಟನ್ ಬರೀ ಕ್ರೈಸ್ತರ ದೇಶವಲ್ಲ, ಅಲ್ಲಿ, ಹಿಂದೂಗಳೂ, ಮುಸ್ಲಿಮರೂ, ಯಹೂದಿಗಳೂ ಇನ್ನಿತರ ಹಲವು ಧರ್ಮೀಯರೂ, ಧರ್ಮವಿಲ್ಲದವರೂ ಸಾಮರಸ್ಯದಿಂದ ಬದುಕುವ ದೇಶ. ಹಾಗಾಗಿ ಎಲ್ಲರೂ, ಧರ್ಮವಿಲ್ಲದವರೂ, ತಾರತಮ್ಯವಿಲ್ಲದೆ ಸಮಾನಾವಕಾಶಗಳೊಂದಿಗೆ ಬದುಕಬಹುದು ಎನ್ನುವ ಆಶಯ ಪ್ರಧಾನಿಯದು. ಅದೇ ಅವರ ನಿರೀಕ್ಷೆಯೂ ಕೂಡಾ. ಆದರೆ ರಾಜಕಾರಣದಲ್ಲಿ ಧರ್ಮದ ಪಾತ್ರ ಎಷ್ಟಿರಬೇಕು ಎನ್ನುವುದು ಮುಗಿಯದ ಚರ್ಚೆ. “ರಾಜಕಾರಣ ಧರ್ಮವಲ್ಲ, ಅಥವಾ ಹಾಗೇನಾದರೂ ಆಗುವುದಾದರೆ ಅದು inquisition ಅಲ್ಲದೇ ಮತ್ತೇನೂ ಅಲ್ಲ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ದಾರ್ಶನಿಕ ಅಲ್ಬರ್ಟ್ ಕ್ಯಾಮು ಹೇಳುತ್ತಾರೆ ( Politics is not religion, or if it is, then it is nothing but the Inquisition – albert camus, french philosopher).

Inquisition ಎಂದ ಕೂಡಲೇ ಕಣ್ಣ ಮುಂದೆ ಬರೋದು ವ್ಯಾಟಿಕನ್ ಬೆಂಬಲಿತ ಸಾಮೂಹಿಕ ಹಿಂಸೆ, ಬರ್ಬರ ಶಿಕ್ಷೆ. ಕ್ರೈಸ್ತರಲ್ಲದವರೂ, ಕ್ಯಾಥೊಲಿಕ್ ಧರ್ಮದ ಚೌಕಟ್ಟಿಗೆ ಬರದ ಕ್ರೈಸ್ತರೂ inquisition ನ ಬರ್ಬರತೆ ಅನುಭವಿಸಿದರು. ಹಾಗಾಗಿ ರಾಜಕಾರಣದಲ್ಲಿ ಧರ್ಮ ಕೂಡದು ಎಂದು ಪಾಶ್ಚಾತ್ಯ ರಾಷ್ಟ್ರಗಳ ನಿಲುವು. ಇದು ಬರೀ ನಿಲುವು ಮಾತ್ರ, ಯಥಾಸ್ಥಿತಿ ಬೇರೆಯೇ ಎಂದು ದಿನನಿತ್ಯದ ವಿದ್ಯಮಾನಗಳು ನಮಗೆ ಹೇಳುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಬಲ ಪಂಥೀಯ ಇವಾನ್ಜೆಲಿಸ್ಟ್ ಗಳು ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಈಗ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದಲ್ಲಿರುವ ಅಮೆರಿಕೆಯಲ್ಲಿ ಇವರ ಅಬ್ಬರ ತುಸು ಹೆಚ್ಚು. ರಾಜಕಾರಣಿಗಳ ಕೈಗೆ ಧರ್ಮ ಸಿಕ್ಕಾಗ ಅದು ಚಿನ್ನದ ಸೌಂದರ್ಯ ಕಳೆದು ಕೊಂಡು ಕಳಪೆ ಉಕ್ಕಿನ ರೂಪ ಪಡೆದು ಕೊಳ್ಳುತ್ತದೆ ಎನ್ನುತ್ತಾರೆ ಲೇಖಕಿ ಯಾಸ್ಮೀನ್ ಅಲಿ ಭಾಯಿ. ಈಕೆ ಬ್ರಿಟನ್ ದೇಶದ ಪ್ರಸಿದ್ಧ ಲೇಖಕಿ. ಆಕರ್ಷಕ ಹೆಸರುಗಳೊಂದಿಗೆ ರಾಜಕಾರಣದಲ್ಲಿ ಧರ್ಮವನ್ನು ನುಸುಳಿಸಲು ಹವಣಿಸುವವರಿಗೆ ಈ ಮಾತುಗಳು ಬಹುಶಃ ಪಥ್ಯವಾಗಲಾರದು.

ಧರ್ಮದ ಸಾರವನ್ನು, ಸತ್ವವನ್ನು ಸಂಪೂರ್ಣವಾಗಿ ಅರಿತ ಹಿಂದೂ, ಮುಸ್ಲಿಂ, ಕ್ರೈಸ್ತ ಇನ್ನಿತರ ಧಮೀಯರಿಂದ ಯಾವುದೇ ತೊಂದರೆಯಿಲ್ಲ, ಆದರೆ ಅರೆಬರೆ ಕಲಿತು ‘ಪಾರ್ಟ್ ಟೈಂ’ ಧರ್ಮಾನುಯಾಯಿಗಳಿಂದ ಗಂಡಾಂತರ ಹೆಚ್ಚು ಎಂದು ಚಾರಿತ್ರಿಕ ಘಟನೆಗಳು ಸಾಕ್ಷಿಯಾಗಿವೆ. ಧರ್ಮವನ್ನು ‘ಆಫೀಮ್’ ಎಂದು ಕಡೆಗಣಿಸುವುದಾಗಲೀ, ತನ್ನ ಧರ್ಮವೇ ಶ್ರೇಷ್ಠ ಎಂದು ಇತರರ ಬದುಕನ್ನು ದುರ್ಭರಗೊಳಿಸುವುದಾಗಲೀ ಕೂಡದು ಎನ್ನುವ ವಿವೇಚನೆಯಿದ್ದರೆ ಸಾತ್ವಿಕ ಬದುಕು ಸರಾಗ, ವೈಯಕ್ತಿಕ ಬದುಕಿನಲ್ಲೂ, ರಾಜಕೀಯ ಕ್ಷೇತ್ರದಲ್ಲೂ.

ವ್ಯಾಟಿಕನ್ ನಿಯಮ

ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನ ಮಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು ಹೋಗುವುದು ಸಹಜವೇ. contraception (ಗರ್ಭನಿರೋಧಕ) ಬಳಕೆಯಿಂದ ಹಿಡಿದು climate change ವರೆಗೆ ಚರ್ಚಿಸಲು ಪೋಪ್ ರನ್ನು ಭೇಟಿಯಾಗುತ್ತಾರೆ ಜನ. ಪೋಪ್ ರನ್ನು ಭೇಟಿಯಾದ ಬ್ರಿಟಿಷ ತಂಡದ ಕುರಿತು ನನ್ನ ಆಸಕ್ತಿ ಏನೆಂದರೆ, ತಂಡದಲ್ಲಿ ‘ಸಯೀದ ಹುಸೇನ್ ವಾರ್ಸಿ’ ಎನ್ನುವ ಮುಸ್ಲಿಂ ಮಹಿಳೆ ಸಹ ಇದ್ದರು. ಈಕೆ ಬ್ರಿಟಿಷ್ ಮಂತ್ರಿಮಂಡಲದ ಏಕೈಕ ಮುಸ್ಲಿಂ ಮಹಿಳಾ ಸಚಿವೆ. ವಾರ್ಸಿ ಪೋಪ್ ರನ್ನು ಕಾಣಲು ಹೋಗುವಾಗ vatican protocol ಪ್ರಕಾರ ಕಪ್ಪು ವಸ್ತ್ರ ಮತ್ತು ಸ್ಕಾರ್ಫ್ ಧರಿಸಿದ್ದರು. ಇದು ವಿಶ್ವದ ಅತಿ ಚಿಕ್ಕ ದೇಶವಾದ ಸುಮಾರು ೧೧೦ ಎಕರೆ ವಿಸ್ತೀರ್ಣದ ವ್ಯಾಟಿಕನ್ ನ ನಿಯಮ.

ವ್ಯಾಟಿಕನ್ ಕ್ರೈಸ್ತರ ಅತ್ಯಂತ ಪವಿತ್ರ ಕ್ಷೇತ್ರ. ತೋಚಿದ ರೀತಿಯ ಉಡುಗೆ ತೊಡುಗೆ ಸಲ್ಲದು. ಶಿಷ್ಟಾಚಾರಗಳು ಎಲ್ಲೆಲ್ಲಿ ಅವಶ್ಯಕವೋ ಅವುಗಳನ್ನ ಗೌರವಿಸಿ, ಅನುಸರಿಸಬೇಕು. ಈ ತೆರನಾದ ನಿಯಮಗಳು ಯಾವುದೇ ಸಮಾಜ ಅಥವಾ ಸಂಸ್ಕೃತಿಗಳಲ್ಲಿದ್ದರೆ ಅವುಗಳಿಗೆ ಬೇರೆಯೇ ತೆರನಾದ ಅರ್ಥ ಕೊಟ್ಟು ಟೀಕಿಸಬಾರದು. ನಮಗೊಂದು ನ್ಯಾಯ, ಪರರಿಗೊಂದು ನ್ಯಾಯ, ಈ ಬೇಧ ಭಾವ ಉದ್ಭವಿಸಿದಾಗ ಸಹಜವಾಗಿಯೇ ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ.

ಕ್ರೈಸ್ತರ ಪವಿತ್ರ ಕ್ಷೇತ್ರ ದಂತೆಯೇ ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರ ಗಳಾದ ಮಕ್ಕಾ ಮತ್ತು ಮದೀನಾ ನಗರಗಳು ಸೌದಿ ಅರೇಬಿಯಾದಲ್ಲಿವೆ. ವಿಶೇಷವೇನೆಂದರೆ ಕೇವಲ ಮಕ್ಕಾ, ಮದೀನ ಮಾತ್ರ ಪವಿತ್ರ ನಗರಗಳಲ್ಲ, ಬದಲಿಗೆ ಇಡೀ ಸೌದಿ ಅರೇಬಿಯಾ ದೇಶವೇ ಇಸ್ಲಾಮಿನ ಪುಣ್ಯ ಭೂಮಿ. ಹಾಗೆಂದು ಮುಸ್ಲಿಂ ವಿಧ್ವಾಂಸರ ಅಭಿಪ್ರಾಯವೂ ಹೌದು. ಮಕ್ಕಾ, ಮದೀನ ನಗರಗಳಿಗೆ ಮುಸ್ಲಿಮೇತರರು ಬರುವ ಹಾಗಿಲ್ಲ, ಹಾಗೆಯೇ ಸೌದಿ ಅರೇಬಿಯಾ ದೇಶಕ್ಕೆ ಬರುವವರೂ ವಸ್ತ್ರದ ವಿಷಯದಲ್ಲಿ modesty ತೋರಿಸಬೇಕು. ಮಹಿಳೆಯರು ನೀಳ, ಕಪ್ಪು ಬಟ್ಟೆ ಧರಿಸಬೇಕು. ಇದಕ್ಕೆ ಹಿಜಾಬ್ ಎನ್ನುತ್ತಾರೆ. ಸ್ವಾರಸ್ಯವೇನೆಂದರೆ ವ್ಯಾಟಿಕನ್ ವಿಷಯದಲ್ಲಿ ತೋರಿಸುವ ಸಜ್ಜನಿಕೆ ಮುಸ್ಲಿಂ ಧರ್ಮೀಯ ಆಚರಣೆಗೆ ಇಲ್ಲದಿರುವುದು. ಸೌದಿ ಅರೇಬಿಯಾದ ಉಡುಗೆ ಮತ್ತು ಇತರೆ ನಿಯಮಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ.

ಭಾವನೆಗಳನ್ನು ಮನ್ನಿಸುವ ಔದಾರ್ಯ ಎಲ್ಲರಿಗೂ ಏಕೆ ಲಭ್ಯವಲ್ಲ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಜೈಪುರ ಸಾಹಿತ್ಯ ಮೇಳ

• ಜೈಪುರ ಸಾಹಿತ್ಯ ಮೇಳ ಪ್ರಸಿದ್ಧಿ ಪಡೆದ ಸಾಹಿತ್ಯಾಸಕ್ತರ ಕೂಟ. ಇಲ್ಲಿ ವಿಶ್ವಾದಾದ್ಯಂತ ಪ್ರಕಾಶಿತವಾದ ಪುಸ್ತಕಗಳ ಅಮೋಘ ಸುಗ್ಗಿ ಮತ್ತು ಹೆಸರಾಂತ ಲೇಖಕರ ಸಮ್ಮಿಲನ. ಪುಸ್ತಕಗಳ Cannes ಎಂದು ಹೇಳಬಹುದು. ಸಾಮಾನ್ಯವಾಗಿ ಇಂಥ ಪುಸ್ತಕ ಮೇಳಗಳು ನೀರಸವಾಗಿ ಶುರುವಾಗಿ ಅಷ್ಟೇ ನೀರಸವಾಗಿ ಮುಗಿದು ಬಿಡುತ್ತವೆ ಕೂಡಾ. ಯಾರೋ ಸಾಹಿತ್ಯ ಪ್ರೇಮಿಗಳು, ಡಿಸ್ಕೌಂಟ್ ಪುಸ್ತಕಕ್ಕಾಗಿ ಆಸೆಯಿಂದ ಬರುವ ಒಂದಿಷ್ಟು ಜನರನ್ನು ಬಿಟ್ಟರೆ ಈ ಉತ್ಸವದ ಮೇಲಿನ ಆಸಕ್ತಿ ಗೌಣ. ಆದರೆ ಈ ಬಾರಿಯ ಮೇಳ ಸ್ವಲ್ಪ ವಿಭಿನ್ನವಾಗಿ ಆರಂಭವಾಗಿ ವಿವಾದದ ಸುಳಿಯಲ್ಲಿ ಸಿಕ್ಕಿ ಕೊಂಡಿತು. ಕಾರಣ ವಿಶ್ವ ಪ್ರಸಿದ್ಧ ಲೇಖಕ, ಕಾದಂಬರಿಕಾರ ಸಲ್ಮಾನ್ ರುಷ್ಡಿ ಈ ಮೇಳಕ್ಕೆ ಆಗಮಿಸುವ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ರುಶ್ಡಿ ಬರಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳಿದ್ದೆ ತಡ ರಾಜ್ಯ ಸರಕಾರಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭೂಗತ ಲೋಕದ ಬಾಡಿಗೆ ಹಂತಕರಿಂದ ರುಶ್ಡಿ ಜೀವಕ್ಕೆ ಅಪಾಯವಿದೆ ಎಂದು ರುಶ್ಡಿ ತನ್ನ ಭಾರತ ಪ್ರಯಾಣದ ಟಿಕೆಟ್ ಗಳನ್ನು ಹರಿದು ಹಾಕುವಂತೆ ಮಾಡಿದವು. ಮಾರನೆ ದಿನ ಮತ್ತೊಂದು ಸುದ್ದಿ, ಈ ವಿಷಯ ಮುಂಬೈ ಪೊಲೀಸರಿಗೆ ತಿಳಿದೇ ಇಲ್ಲ. ಎರ್ಡೆಡ್ಲೆ ನಾಕು, ಸಲ್ಮಾನ್ ರುಶ್ಡಿ ಗೆ ಮನವರಿಕೆ ಆಯಿತು ಈ ಸುದ್ದಿ ಸುಳ್ಳೆಂದು, ತನ್ನನ್ನು ಉತ್ಸವದ ಹೊರಗಿಡಲು ಸರಕಾರ ಮಾಡಿದ ಹುನ್ನಾರ ಎಂದು.

ಭಾವನೆಗಳನ್ನ ಘಾಸಿಗೊಳಿಸುವ ಅಧಿಕಾರ ಯಾವ ಲೇಖಕನಿಗೂ ಇರಕೂಡದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ವೈಚಾರಿಕ ಸ್ವೇಚ್ಚಾಚಾರಕ್ಕಿರುವ ಮುಕ್ತ ಪರವಾನಗಿ ಅಲ್ಲ. ಕ್ರಿಯಾಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಜನರನ್ನು ಕೆರಳಿಸುವ ಪರಿಪಾಠಕ್ಕೆ ನಾಗರೀಕ ಸಮಾಜ ಮಣೆ ಹಾಕಬಾರದು. ಸ್ವೇಚ್ಚಾಚಾರ ಅರಗಿಸಿಕೊಳ್ಳುವ ಗುಣ ನಮ್ಮ ಉಪಖಂಡದ ಜನತೆಗೆ ಇನ್ನೂ ಬಂದಿಲ್ಲ. ಕಾಲ ಬದಲಾದಾಗ ರುಶ್ಡಿ ಯಂಥವರಿಗೆ ಮನ್ನಣೆ ನೀಡೋಣ, ಅಲ್ಲಿಯತನಕ ಸಂಯಮದಿಂದ ಕಾಲದೊಂದಿಗೆ ಹೆಜ್ಜೆ ಹಾಕೋಣ.

ಹಾಗೆಯೇ ಸಲ್ಮಾನ್ ರುಶ್ಡಿ ಪ್ರಕರಣ ಪ್ರಪಂಚದ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ.

ಕೆಳಗಿನ ಲಿಂಕ್ ಕ್ಲಿಕ್ಕಿಸಿದರೆ ಪ್ರಪಂಚದಲ್ಲಿ ಇದುವರೆಗೆ ಬಹಿಷ್ಕರಿಸಲ್ಪಟ್ಟ ಕೆಲವು ಪುಸ್ತಕಗಳ ಮಾಹಿತಿ ಇದೆ. • http://www.ala.org/advocacy/banned/frequentlychallenged/challengedclassics/reasonsbanned

ಅ-ಣ್ಣಾ-ರಣ್ಯ ರೋದನ

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ೧೯೪೨ ರಲ್ಲಿ ಆರಂಭವಾಯಿತು.  ಸ್ವಾತಂತ್ರ್ಯಕ್ಕಾಗಿನ ತುಡಿತ, ದಾಸ್ಯದಿಂದ ಬಿಡಿಸಿ ಕೊಂಡು ನಮ್ಮನ್ನು ನಾವೇ ಆಳಿಕೊಳ್ಳುವ ಮಹದಾಸೆ ಈ ಚಳುವಳಿಗೆ ಪ್ರೇರಣೆ. ಆರು ವರ್ಷಗಳ ಹೋರಾಟದ ನಂತರ ಬ್ರಿಟಿಷರು ನಮ್ಮನ್ನು ದಾಸ್ಯ ಮುಕ್ತ ಗೊಳಿಸಿದರು ೧೯೪೭ ರಲ್ಲಿ. ಸ್ವಾತಂತ್ರ್ಯ ತರುವ ಹರ್ಷ, ಪುಳಕವನ್ನು ಭಾರತೀಯರು ಅನುಭವಿಸಿದರು.  ಆದರೆ ಅರವತ್ತೈದು ವರ್ಷಗಳ ನಂತರ ನಾವು ನಮಗರಿವಿಲ್ಲದೆಯೇ ಬಾಣಲೆಯಿಂದ ಬೆಂಕಿಗೆ ಜಾರಿದ ವಾಸ್ತವದ ಅರಿವು ನಿಧಾನವಾಗಿ ಆಗ ತೊಡಗಿತು.  

೧೯೪೭ ರಲ್ಲಿ ನಮ್ಮ ಹಾಗೇ ಕಡುಬಡತನ ದಿಂದ ಬಳಲುತ್ತಿದ್ದ ದೇಶ ದಕ್ಷಿಣ ಕೊರಿಯಾ ಇಂದು ಶ್ರೀಮಂತಿಕೆಯಲ್ಲಿ ವಿಶ್ವದ ಅಗ್ರಮಾನ್ಯ ದೇಶಗಳ ಸಾಲಿನಲ್ಲಿ ನಿಂತಿದೆ. ನಮ್ಮ ನೆರೆಯ ಚೀನಾ ಪ್ರಜಾಪ್ರಭುತ್ವ, ಅದೂ, ಇದೂ ಎಂದು ಯಾವುದೇ ಸದ್ದು ಗದ್ದಲ ಮಾಡದೆ ತನ್ನಷ್ಟಕ್ಕೆ ತಾನೇ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದೆ. ಆದರೆ ನಾವು ಮಾತ್ರ ರಾಜಕಾರಣಿ – ಅಧಿಕಾರಶಾಹಿ ಚಕ್ರವ್ಯೂಹದಲ್ಲಿ ಸಿಕ್ಕು ನರಳುತ್ತಿದ್ದೇವೆ. ಭ್ರಷ್ಟಾಚಾರ ದೇಶವನ್ನು ಅಗ್ನಿ ಪರೀಕ್ಷೆಗೆ ಒಡ್ಡಿದೆ.   

ದಿನೇ ದಿನೇ ಒಂದಲ್ಲ ಒಂದು ಹಗರಣದಿಂದ ಕಂಗೆಟ್ಟ ದೇಶಕ್ಕೆ ಆಶಾ ದೀಪವಾಗಿ ಬಂದರು ಅಣ್ಣಾ ಹಜಾರೆ. ‘ಎನಫ್ ಈಸ್ ಎನಫ್’ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದರು. ಜನರೂ ಆರಂಭದಲ್ಲಿ ಹುಮ್ಮಸ್ಸು ತೋರಿಸಿದರು. ಅಣ್ಣಾ ಜನಪ್ರಿಯತೆ ಪಡೆಯುತ್ತಿದ್ದಂತೆ ಸರಕಾರ ಎಚ್ಚೆತ್ತು ಕೊಳ್ಳಲು ಆರಂಭಿಸಿತು. ಅಣ್ಣಾ ಜೊತೆ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಸಹ ಸೇರಿಕೊಂಡರು. ಇವರು ತಮ್ಮ ಅಧಿಕಾರಾವಧಿಯಲ್ಲಿ ಎಂಥೆಂಥ ಲಂಚಗುಳಿ ಅಧಿಕಾರಿಗಳನ್ನು ಕಂಡಿರಲಿಕ್ಕಿಲ್ಲ. ಬೇಡಿ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಸೊಲ್ಲೆತ್ತಿದ್ದು ನಾವೆಂದಾದರೂ ಕೇಳಿದ್ದೇವೆಯೇ? ಎಲ್ಲಿಂದ ಪುಟಿದೆದ್ದಿತು ಲಂಚದ ವಿರುದ್ಧ ಹೋರಾಡೋ ಹಂಬಲ? ಕಿರಣ್ ಬೇಡಿ ಮಧ್ಯೆ ಮತ್ತೊಂದು ವ್ಯಕ್ತಿ, ಅರವಿಂದ  ಕೇಜರಿವಾಲ ಅಂತೆ. ಸ್ವಾತಂತ್ರ್ಯ ಚಳುವಳಿಯಲ್ಲೋ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲೋ, ಬೇರೆಲ್ಲೂ ಈ ವ್ಯಕ್ತಿಯ ಹೆಸರು ಕೇಳಿದ್ದಿಲ್ಲ. ಯಾರೀತ? who is this kejriwala? ‘ವೋ, ಕೇಸರಿ ವಾಲ ಹೈ’ ಎಂದು ಮೂದಲಿಸಿತು ಕಾಂಗ್ರೆಸ್.   ಇವೆಲ್ಲಾ ಆದ ನಂತರ ಜನ ರೊಚ್ಚಿಗೆದ್ದಿದ್ದನ್ನು ಗಮನಿಸಿದ ಕೇಂದ್ರದ ಆಳುವ ಪಕ್ಷಕ್ಕೆ ಈಗ ದುರ್ಬೀನಿಟ್ಟು ನೋಡ ತೊಡಗಿತು. ಅಣ್ಣಾ ಜೊತೆ ವೇದಿಕೆಯ ಮೇಲೆ ಯಾರ್ಯಾರಿದ್ದಾರೆ? ಅವರ ಹಿನ್ನೆಲೆ ಏನು? ಯಾವ ಸಂಘಟನೆಗಳ ಒಲವು ಇವರಿಗೆ? ಹಿಡ್ಡನ್ ಅಜೆಂಡಾ ಏನಾದರೂ ಇದೆಯೇ ಈ ಚಳುವಳಿ ಹಿಂದೆ? ಹೀಗೆ ನೂರೆಂಟು ಅನುಮಾನಗಳನ್ನು ಹರಿ ಬಿಟ್ಟು ಜನರನ್ನು ಕನ್ಫ್ಯೂಸ್ ಮಾಡಿ ಬಿಟ್ಟರು.  ಎಡಬಿಡದ ವಾಕ್ಪ್ರಹಾರ, ಆರೋಪ ಪ್ರತ್ಯಾರೋಪಗಳ ಗದ್ದಲದಲ್ಲಿ ಚಳುವಳಿ ತನ್ನ ಮಹತ್ವ ಕಳೆದು ಕೊಂಡಿತು. ಈ ಚಳುವಳಿಯಲ್ಲೂ ನುಸುಳಲೇ ಬೇಕಿತ್ತೆ ರಾಜಕಾರಣ?

ದಿನನಿತ್ಯ ಬದುಕಿನ ಜಂಜಾಟದಲ್ಲಿ ಸಿಕ್ಕಿ ಕೊಂಡ ಸಾಮಾನ್ಯ ಪ್ರಜೆ ಲಂಚದ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ. ಲಂಚಕ್ಕಾಗಿನ ಅಧಿಕಾರಿಗಳ  ತೀರದ  ದಾಹಕ್ಕೆ ಬೇರೆ ದಾರಿ, ಕಾಣದೇ ಮೂರು ಗೋಣಿಚೀಲ ತುಂಬಾ ಸುಮಾರು ನಲವತ್ತು ತರಾ ವರಿ, ನಮೂನೆ ನಮೂನೆ (ಥೇಟ್ ಲಂಚಗುಳಿಗಳ ಥರ) ಹಾವುಗಳನ್ನು ಸರಕಾರೀ ಕಛೇರಿಯೊಳಕ್ಕೆ ತಂದು ಗೋಣಿ ಚೀಲ ಬರಿದು ಮಾಡಿ ಬಿಟ್ಟರು ರೈತರಾದ ಹುಕ್ಕುಲ್ ಖಾನ್ ಮತ್ತು ರಾಮ್ ಕುಲ್ ರಾಮ್. ಭಯಭೀತರಾದ ಅಧಿಕಾರಿಗಳು ಓಟ ಕಿತ್ತರು. ಇದು ಹತಾಶ ಪ್ರಜೆಯ ಹತಾಶ ಪ್ರತಿಕ್ರಿಯೆ. ಇದರಿಂದ ಅಧಿಕಾರಿಗಳು ಏನಾದರೂ ಕಲಿತಾರೆಯೇ ಪಾಠವನ್ನು? no chance. ಹಾವುಗಳನ್ನು ಹರಿ ಬಿಟ್ಟ ರೈತರನ್ನೇ ಖಳ ನಾಯಕರನ್ನಾಗಿಸಿ ಬಿಡುತ್ತಾರೆ, ಈ ಹಾವುಗಳಿಗಿಂತ ಅಪಾಯಕಾರಿಯಾದ ಅಧಿಕಾರಿಶಾಹಿ ಹಾವು.        

ಲಂಚದ ಹಾವಳಿ ವಿರುದ್ಧ ನಮ್ಮಲ್ಲಿ ಬಹಳಷ್ಟು ಕಾನೂನುಗಳಿವೆ. ಕಾನೂನಿನ ಪ್ರಕಾರ ಲಂಚ ಕೊಡುವುದು ಲಂಚ ತೆಗೆದುಕೊಳ್ಳುವಷ್ಟೇ ಅಪರಾಧ. ಲಂಚಗುಳಿಗಳ ವಿರುದ್ಧ ಸಮರ ಸಾರಿದ ಅಣ್ಣಾ ಲಂಚ ಕೊಡುವವರ ವಿರುದ್ಧ ಸೊಲ್ಲನ್ನೇಕೆ ಎತ್ತುತ್ತಿಲ್ಲ, ಇದು ಕೆಲವರ ಜಿಜ್ಞಾಸೆ. ಕೊಡುವವನಿಲ್ಲದಿದ್ದರೆ ಭವತಿ ಭಿಕ್ಷಾಂದೇಹಿ ಎನ್ನುವವನ ಅಸ್ತಿತ್ವ ಇರುವುದಿಲ್ಲ, ಅಲ್ಲವೇ?  

ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೊರಹೋದಾಗ ಜ್ಯೂಸ್ ಕೊಳ್ಳಲು ಹೋಗುವ ಪುಟ್ಟ ಬಕಾಲಾ ಎಂದು ಕರೆಯಲ್ಪಡುವ ಮಿನಿ ಮಾರ್ಕೆಟ್ ಇದೆ. ಅಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ವ್ಯಕ್ತಿಯೊಬ್ಬ ಕಾಣದೇ ಇದ್ದುದರಿಂದ ವಿಚಾರಿಸಿದೆ. ಆಗ ಅಲ್ಲಿ ಕೆಲಸ ಮಾಡುವ ವ್ಯಕ್ತಿ ಹೇಳಿದ, ಅವರನ್ನು ಜೈಲಿಗೆ ಹಾಕಿದಾರೆ ಎಂದು. ಅರೆ, ಜೈಲಾ, ಅಂಥ ಮನುಷ್ಯ ಅಲ್ಲವಲ್ಲಾ ಈತ ಎಂದು ನನ್ನ ಅನುಮಾನವನ್ನು ವ್ಯಕ್ತ ಪಡಿಸಿದಾಗ ಆತ ಹೇಳಿದ ಪುರಸಭೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿಗೆ ೨೦೦ ರಿಯಾಲ್ ( ಸುಮಾರು ೨,೭೦೦ ರೂ. ) ಲಂಚ ಕೊಟ್ಟಿದ್ದು ಕಾರಣ ಎಂದು.

ನಮ್ಮ ಕಂಪೆನಿಯ ಮಾಲೀಕರ ಮಿತ್ರರಿಗೆ ಸಂಭವಿಸಿದ್ದು ಇದು. ಸುಮಾರು ಹತ್ತುವರ್ಷಗಳ ಹಿಂದೆ ಸೌದಿ ಅರೇಬಿಯಾದ ಮತ್ತೊಂದು ನಗರವಾದ ದಮ್ಮಾಮಿನ ಬಂದರಿನಲ್ಲಿ ವಿದೇಶದಿಂದ ಆಮದಾಗಿ ಬಂದ ಸರಕನ್ನು ಸ್ವಲ್ಪ ಬೇಗನೆ ಬಿಡಿಸಿ ಕೊಳ್ಳಲು ಅಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಲಂಚ ಕೊಟ್ಟರು. ಹತ್ತು ವರ್ಷಗಳ ನಂತರ ಈ ವಿಷಯ ಬೆಳಕಿಗೆ ಬಂದು ಅವರನ್ನು ಕೂಡಲೇ ದೇಶದಿಂದ ಗಡೀ ಪಾರು ಮಾಡಿದರು. ಪಾಕಿಸ್ತಾನ ಮೂಲದ ಈ ವ್ಯಕ್ತಿ ಚಿಕ್ಕ ಆಸಾಮಿ ಅಲ್ಲ. ದಮ್ಮಾಮಿನ ಬಂದರಿನಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ತನಂದೆ ಆದ ಕಂಪೆನಿ ಸಹ ಆರಂಭಿಸಿದ್ದರು. ಏಕಾಯೇಕಿ ಅವರನ್ನು  ಗಡೀಪಾರು ಮಾಡಿತು ಸೌದಿ ಸರಕಾರ. ದಮ್ಮಾಮಿನ ಪಕ್ಕದ ಲ್ಲೇ ಇರುವ ಪುಟ್ಟ ಬಹರೇನ್ ದೇಶದಲ್ಲಿ ಕೂತು ತಮ್ಮ ವಹಿವಾಟನ್ನು ನಿಯಂತ್ರಿಸುತ್ತಿದ್ದಾರೆ. ಹೇಗಿದೆ, ನಮ್ಮ ಕಾನೂನು, ಅರೇಬಿಯಾದ ಸರ್ವಾಧಿಕಾರಿ ಕಾನೂನು? ಇಲ್ಲಿ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಸಿಗುವುದರಿಂದ ಜನರಿಗೆ ಫ್ರೀಡಂ, ಡೆಮಾಕ್ರಸಿ ಇವುಗಳ ಚಿಂತೆ ಇಲ್ಲ. ನಮಗೆ ಫ್ರೀಡಂ ಇದ್ದರೂ ಒಂದು ನಿಸ್ಶಹಾಯಕತೆ, ಕಟ್ಟಿ ಹಾಕಲ್ಪಟ್ಟ ಭಾವ.

ಸರಿ, ಸಮಾಜದ ಎಲ್ಲ ವರ್ಗದವರನ್ನೂ ಯಾವುದೆ ಬೇಧ ಭಾವ ಇಲ್ಲದೆ ಬಾಧಿಸುವ ಈ ಲಂಚಕೋರತನ ದ ವಿರುದ್ಧದ ಹೋರಾಟ ಏಕೆ ಬಿರುಸಾಗಿಲ್ಲ? ಜನ ಏಕೆ ದೊಡ್ಡ ರೀತಿಯಲ್ಲಿ ಭಾಗವಹಿಸುತ್ತಿಲ್ಲ? ಎಲ್ಲೋ ಒಂದೆರಡು ನಗರ ಪ್ರದೇಶಗಳಲ್ಲಿ ಒಂದು ರೀತಿಯ boredom ಕಳೆಯಲೆಂಬಂತೆ ಬಂದ ಒಂದಿಷ್ಟು ಯುವಜನರು. ಅಣ್ಣಾ ಮನವಿಗೆ ಜನ ಕಿವಿಗೊಡದಿರಲು ಕಾರಣ ಭ್ರ್ಹಷ್ಟಾಚಾರದ ಬಗ್ಗೆ ಜನರಿಗೆ ಇರುವ ಪರೋಕ್ಷ ಒಲವು ಕಾರಣ ಇರಬಹುದು. ಯಾವುದೇ ಕೆಲಸ ಕೈಗೆತ್ತಿಕೊಳ್ಳಬೇಕಾದರೂ ಆ ಕೆಲಸದಲ್ಲಿ ನಮಗೆ passion ಎನ್ನುವುದು ಇರಬೇಕು. ardent passion. ಅದು ನಮ್ಮಲ್ಲಿ ಕಾಣಲು ಸಿಗಲಿಲ್ಲ ಈ ಚಳುವಳಿಯಲ್ಲಿ. ಅದೇ ಸಮಯ ನಮಗಿಷ್ಟವಾದ, ಊಟ ನಿದ್ದೆಯನ್ನೂ ತ್ಯಜಿಸಿ ಆಸಕ್ತಿ ತೋರಿಸುವ ಕ್ರಿಕೆಟ್ ಆಟದ ಕಡೆ ನಮ್ಮ ಆಸಕ್ತಿ ಸ್ವಲ್ಪ ನೋಡಿ. ಯಾವುದಾದರೂ ಪಂದ್ಯದಲ್ಲಿ ಭಾರತ ಸೋತರೆ ಪ್ರತೀ ತಿಮ್ಮ, ಬೋರ, ವೆಂಕ ಎಕ್ಸ್ಪರ್ಟ್ ಆಗಿ ಬಿಡುತ್ತಾರೆ. ಥತ್, ನಾಯಕ  ಟಾಸ್ ಗೆದ್ದು ಬ್ಯಾಟಿಂಗ್ ತಗೋ ಬೇಕಿತ್ತು, ನಾವು ಚೇಸ್ ಮಾಡಲು ನಾಲಾಯಕ್ಕು ಅಂತ ಅವ್ನಿಗ್ ಗೊತ್ತಿಲ್ವಾ….ಪಿಚ್ ತುಂಬಾ ಸ್ಲೋ ಆಗೋಯ್ತು…. ಇಬ್ಬರು ಸ್ಪಿನ್ನರ್ ಗಳನ್ನು ಆಡಿಸಬೇಕಿತ್ತು ನೋಡು….. ಅಂಪೈರ್ ಕೈ ಕೊಟ್ಟ……..ಎಲ್ಲಿಂದ ಸಿಕ್ಕುದ್ನೋ ಈ ಕೋಚು?……. D/L ಮೆಥಡ್ ಸರಿಯಿಲ್ಲ, ನಮಗೆ ಅನುಕೂಲ ಆಗ್ಲಿಲ್ಲ ಡಕ್ವರ್ಥ್ ಲೀವೈಸ್ (D/L)……. ವಾವ್, ನೋಡಿದಿರಾ ಜ್ಞಾನವನ್ನು? ಇವರ ಅನಾಲಿಸಿಸ್ ಗಳಿಗೆ ಜೆಫ್ ಬಾಯ್ಕಾಟ್, ಹರ್ಷ ಭೋಗ್ಲೆ ಯಂಥವರು ಹಿಮ್ಮೆಟ್ಟುತ್ತಾರೆ. ಆ ಪಾಟಿ ಜ್ಞಾನ. ಜೀವಮಾನದಲ್ಲಿ ಬ್ಯಾಟ್ ಹಿಡಿದಿರದ, ಪಿಚ್ ಮೇಲೆ ಹೆಜ್ಜೆಯೂರಿಲ್ಲದವರ ಅನಾಲಿಸಿಸ್ಸು ಇದು. ಅದೇ ಸಮಯ ಅಣ್ಣಾ ಹಜಾರೆ ಹೆಸರು ಕೇಳಿದ ಕೂಡಲೇ ಯಾರಪ್ಪಾ ಈ ತಾತ ಎಂದು ಗೂಗ್ಲಿಸಿ ನೋಡುತ್ತಾರೆ. ಕ್ರಿಕೆಟ್ ನ ಗೂಗ್ಲೀ ಬಗ್ಗೆ ಸರಾಗವಾಗಿ ಮಾತನಾಡುವವರು ಅಣ್ಣಾ ಬಗ್ಗೆ ತಿಳಿಯಲು ಗೂಗ್ಲ್ ಮೊರೆ ಹೋಗುತ್ತಾರೆ. ಈಗ ತಿಳಿಯಾಯಿತೆ ಮರ್ಮ? ಲಂಚದ ವಿರುದ್ಧದ ಜನರ ಆಸಕ್ತಿ ನಿರಾಸಕ್ತಿ, ಅನಾದಾರದ ಮರ್ಮ? ಇದೇ passion ತರುವ ಫಲಿತಾಂಶ. ದೇಶವನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರದ ಬಗ್ಗೆ ಕ್ರಿಕೆಟ್ ಕಡೆ ತೋರಿಸುವ ಕಿಂಚಿತ್ ಆಸಕ್ತಿಯನ್ನಾದರೂ ಜನ ತೋರಿಸಿದ್ದಿದ್ದರೆ ಬೀದಿಗಳು ಪ್ರತಿಭಟಿಸುವ ಜನರಿಂದ ತುಂಬಿ ಹೋಗುತ್ತಿದ್ದವು.  ಒಂದು ದಿನದ ಕಡ್ಡಾಯ ಓವರ್ಗಳ ಪಂದ್ಯಕ್ಕಾಗಿ ಮೈದಾನ ತುಂಬುವಂತೆ.

ಎರಡನೇ ವಿಶ್ವ ಮಹಾಯುದ್ಧದ ಹೀರೋ ವಿನ್ಸ್ಟನ್ ಚರ್ಚಿಲ್ ಅಂದಿನ ಬ್ರಿಟಿಶ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಯನ್ನು  ಮನವಿ ಮಾಡಿಕೊಂಡ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಡ ಎಂದು. ಬಹುಶಃ ಆಳಿಕೊಳ್ಳುವ ಸಾಮರ್ಥ್ಯ ಭಾರತೀಯರಿಗೆ ಇನ್ನೂ ಬಂದಿಲ್ಲ ಎಂದು ಈ ಸಿಗಾರ್ ಪ್ರೇಮಿ ಮುತ್ಸದ್ದಿಗೆ ತೋರಿರಬೇಕು. ಹಳೇ ತಲೆಮಾರಿನ, ವಯಸ್ಸಾದ ಯಾರನ್ನೇ ಹೀಗೇ ಮಾತಿಗೆ ಕೇಳಿ, ಅಯ್ಯೋ ಬ್ರಿಟಿಷರ ಕಾರುಬಾರೆ ಚೆನ್ನಿತ್ತು ಎನ್ನದಿರಲಾರರು. ಈ ಮಾತನ್ನು ಹತಾಶ ಜನರ ಬಾಯಲ್ಲಿ ಹಾಕಿದವರು, ನಮ್ಮ ಖಾದಿಧಾರಿ ರಾಜಕಾರಣಿಗಳು. ಆದರೆ ಪ್ರಜಾ ಪ್ರಭುತ್ವಕ್ಕೆ ಅವರೇ ಜೀವಾಳ. ಶಪಿಸುತ್ತಾ, ರಮಿಸುತ್ತಾ ಅವರೊಂದಿಗೇ ಕಳೆಯಬೇಕು ಕಾಲವನ್ನು ನಾವು ಮತ್ತು ನಮ್ಮ ಪ್ರೀತಿಯ ದೇಶ.

ಗೋ ಹತ್ಯೆ ನಿಷೇಧಿಸಿ

ದೇಶದ ಸಮಯ, ಸಂಪನ್ಮೂಲಗಳನ್ನು ನುಂಗುತ್ತಿರುವ ಹಲವು ತಗಾದೆಗಳಲ್ಲಿ ಗೋ ಹತ್ಯೆ ಒಂದು. ಹಿಂದೂಗಳು ಪವಿತ್ರ, ಮಾತೆ ಎಂದು ಆದರಿಸಲ್ಪಡುವ, ಗೌರವಿಸಲ್ಪಡುವ ಗೋವಿನ ಮತ್ತು ಅದನ್ನು ಸಂರಕ್ಷಿಸಬೇಕಾದ ವಿಧಾನಗಳ ಬಗ್ಗೆ ಚರ್ಚೆಗೆ ಶತಮಾನಗಳ ಇತಿಹಾಸ ಇದೆ. ಸಾಕಷ್ಟು ನೆತ್ತರೂ ಹರಿದಿದೆ. ದೇಶವನ್ನು ಕಿತ್ತು ತಿನ್ನುವ ಸಮಸ್ಯೆಗಳಿಗೆ ರಾಜಕಾರಣದ ಲೇಪನ ಇಲ್ಲದಿದ್ದರೆ ಅದಕ್ಕೆ ಮಹತ್ವವಾಗಲೀ, ಮೋಜಾಗಲೀ ಇರುವುದಿಲ್ಲ. ಗೋ ವಿನ ವಿಷಯದಲ್ಲೂ ಆಗಿದ್ದೂ ಇದೇ.  ಗೋ ಮಾಂಸ ಭಕ್ಷಕರೆಂದು ಪರಿಗಣಿಸಲ್ಪಡುವ, ಮುಖ್ಯವಾಗಿ ಕ್ರೈಸ್ತರು ಮತ್ತು ಮುಸ್ಲಿಮರಿಗೆ, ಗೋ ಮಾಂಸವನ್ನು ಅವರ ಮೆನ್ಯು (menu) ಪಟ್ಟಿಯಿಂದ ತೆಗೆದುಬಿಟ್ಟರೆ ಆಕಾಶ ಕಳಚಿ ಬೀಳೋಲ್ಲ. ಹೃದಯದ  clogged arteries ಗಳಿಗೆ ಮಾತ್ರ ದೊಡ್ಡ ಪ್ರಯೋಜನವಾಗುತ್ತದೆ ಈ ಮಾಂಸ ಮೆನ್ಯು ವಿನಿಂದ ಹೊರಗುಳಿದರೆ.

ಈಗ ಪ್ರವೇಶ ರಾಜಕಾರಣ. ಎಂಟರ್ ದಿ ಡ್ರಾಗನ್ ಥರ. ಅಪಾಯಕಾರಿ ಆದರೂ ಒಂದಿಷ್ಟು ಸೀಟುಗಳನ್ನು ಅಥವಾ ಅಧಿಕಾರದ ಗದ್ದುಗೆಯನ್ನು ತರಲು ಸಹಕಾರಿಯಾದರೆ ಗೋವನ್ನು ಮಾತ್ರವಲ್ಲ ಯಾರನ್ನು ಬೇಕಾದರೂ ಬಲಿ ಕೊಡಲು ಸಿದ್ಧ. ಗೋಮಾಂಸ ನಿಷೇಧಿಸಿದರೆ ಅಲ್ಪಸಂಖ್ಯಾತರ ಆಹಾರ ಪದ್ಧತಿ ಯಲ್ಲಿ ಹಸ್ತಕ್ಷೇಪ ನಡೆಸಿದಂತೆ ಎಂದು ರಗಳೆ ಇವರದು. ಗೋ ಮಾಂಸ ತಿಂದೇ ಸಿದ್ಧ ಎಂದು ಪಟ್ಟು ಹಿಡಿಯುವ ಅಲ್ಪತನ ಅಲ್ಪ ಸಂಖ್ಯಾತರು ತೋರಿಸರು ಎನ್ನುವ ಪ್ರಜ್ಞೆ ಇವರಿಗಿಲ್ಲ, ಆಳುವ ಮಂದಿಗೆ. ಗೋ ಮಾಂಸ ನಿಷೇಧಿಸಿ ಬಿಟ್ಟರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದೀತು ಎನ್ನುವ ಅತಂತ್ರ, ಅಭದ್ರ ಮನಸ್ಥಿತಿಯವರೂ ಅಲ್ಲ ಮುಸ್ಲಿಮರು ಅಥವಾ ಕ್ರೈಸ್ತರು. ಮತ್ತೇಕೆ ಈ ಸಮಸ್ಯೆ ಆಗಾಗ ತಲೆ ಎತ್ತುತ್ತಾ ಇರುತ್ತದೆ ಎನ್ನುವುದು ಯಕ್ಷ ಪ್ರಶ್ನೆ.

ಗೋ ಹತ್ಯೆ ಬಹುಸಂಖ್ಯಾತ ವರ್ಗದವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಾದರೆ ಖಂಡಿತಾ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದೇ ತೀರಬೇಕು. ಗೋ ಹತ್ಯಾ ನಿಷೇಧ ಕೂಡದು ಎನ್ನುವ ಕಾಂಗ್ರೆಸ್ಸಿಗರು ಮುಸ್ಲಿಮರ ಓಟಿಗಾಗಿ ದೊಂಬರಾಟ ನಡೆಸೋದು ನಿಲ್ಲಿಸಬೇಕು. ಮುಸ್ಲಿಮರಿಗೆ ಗೋ ಮಾಂಸ ತಿನ್ನಲೇ ಬೇಕೆನ್ನುವ ನಿಯಮವೇನಿಲ್ಲ. ದಿನ ಪೂರ್ತಿ ಇದರ ಜಪ ಮಾಡುತ್ತಾ ಕೂರುವ ವ್ಯವಧಾನವೂ ಇಲ್ಲ ಅವರಲ್ಲಿ. ಅವರಿಗೆ (ಮುಸ್ಲಿಮರಿಗೆ) ತಲೆಕೆಡಿಸಿ ಕೊಳ್ಳಬೇಕಾದ ನೂರೊಂದು ವಿಷಯಗಳಿವೆ. ಮುಸ್ಲಿಂ ಧರ್ಮೀಯ ಸಸ್ಯಾಹಾರಿಯಾಗಲು ಧರ್ಮದ ಅಡ್ಡಿಯಿಲ್ಲ. ನಿಷೇಧ ಬೇಡ ಎನ್ನುವ ಕಾಂಗ್ರೆಸ್ಸಿಗರಿಗೆ ಏಕೆ ಗೋವು ಪವಿತ್ರ ಅಲ್ಲ ಅನ್ನೋದು ಒಂದು ಒಗಟು. ಹಾಗೆಯೇ ಗೋವು ಪಾವಿತ್ರ್ಯತೆಯನ್ನು ಪಡೆದು ಕೊಂಡಿದ್ದು ಯಾವಾಗಿನಿಂದ ಎಂದು ಯಾರಾದರೂ ಬೆಳಕು ಚೆಲ್ಲಿದರೆ ಉಪಕಾರ. ಈ ಸಂಬಂಧ ಪ್ರೊಫೆಸರ್ D.N. Jha ರವರು ಬರೆದ the myth of holy cow ಪುಸ್ತಕದಲ್ಲಿ ಗೋಮೇಧ, ಅಶ್ವಮೇಧ ಯಾಗಗಳು, ಗೋಮಾಂಸ ಭಕ್ಷಿಸಿದ ಉದಾಹರಣೆಗಳೊಂದಿಗೆ ವಿಸ್ತೃತವಾದ ಮಾಹಿತಿಗಳಿವೆ.

ಗೋ ಹತ್ಯೆಯ ಬಗ್ಗೆ ಮುಸ್ಲಿಮರಿಗೆ ಇರುವ ತಕರಾರಿಗಿಂತ ಬಹುಸಂಖ್ಯಾತರಿಗೆ ಹೆಚ್ಚು ಆಸಕ್ತಿಕರ ಎನ್ನುವುದು ಕಾಂಗ್ರೆಸ್ಸಿಗರ ಮತ್ತು ಇತರೆ ಪಕ್ಷಗಳವರ ಪ್ರತಿಭಟನೆಗಳಿಂದ ವ್ಯಕ್ತವಾಗುತ್ತದೆ. ಈ ತಗಾದೆಯಿಂದ ಶಾಂತಿ ಪ್ರಿಯ ಭಾರತೀಯರು ಹೊರಗುಳಿದರೆ ದೇಶಕ್ಕೆ ಒಳ್ಳೆಯದು. ಏಕೆಂದರೆ ಇಲ್ಲಿ ನಡೆಯುತ್ತಿರುವುದು ಚರ್ಚೆಗಿಂತ ಸಮುದಾಯಗಳ ನಡುವಿನ ಕಂದಕದ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತದೆ.     

  

 

ಇಲ್ಲಿ ಹೀಗೆ, ನಮ್ಮಲ್ಲಿ ಹಾಗೆ, ಯಾಕೆ ಹೀಗೆ?

ವಿಜಯ್ ಮಲ್ಯರ ಕಿಂಗ್ ಫಿಶರ್ ವಿಮಾನ ಕಂಪೆನಿ ಆರ್ಥಿಕ ಸಂಕಟ ಕಾರಣ ತನ್ನ ರೆಕ್ಕೆಗಳನ್ನು ಮುದುಡಿ ಕೊಳ್ಳುವ ಸ್ಥಿತಿಯಲ್ಲಿದೆ. “ಕಿಂಗ್ ಆಫ್ ಗುಡ್ ಟೈಮ್ಸ್” ಮಲ್ಯ ಈಗ bad times ನಿಂದ ಹೊರಬರಲು ಸರಕಾರದ ಕಡೆ ನೋಟ ನೆಟ್ಟಿದ್ದಾರೆ. ಪ್ರಧಾನಿಗಳೂ ಮಲ್ಯರ ಸಂಕಷ್ಟವನ್ನು ಗಮನಿಸಿದ್ದಾರೆ. ಏನಾದರೂ ಮಾಡುವ ಭರವಸೆ ನೀಡಿದ್ದಾರೆ. ವಿಜಯ್ ಮಲ್ಯ ಚಾಣಾಕ್ಷ ಉದ್ಯಮಿಯಾದರೂ ತಮ್ಮ ಏರ್ ಲೈನ್ಸ್ ಅನ್ನು ನಷ್ಟದ ಮೋಡಗಳಿಂದ ಆಚೆ ತರಲು ಹೆಣಗುತ್ತಿರುವುದು ಖೇದಕರ.

ಇಂದು ನಮ್ಮ ಕಂಪೆನಿಯ ಜನರಲ್ ಮ್ಯಾನೇಜರ್ ರಿಯಾಧ್ ನಗರಕ್ಕೆ ಪ್ರಯಾಣಿಸಲು ವಿಮಾನದ ಟಿಕೆಟ್ ಗೆ ಹೋದಾಗ ಟಿಕೆಟ್ ಫ್ರೀ. ಫ್ರೀ………..? ಹೌದ್ರೀ, ಫ್ರೀ. ಉಚಿತ. ಪುಕ್ಕಟೆ. ಆದರೆ ತೆರಿಗೆ ಮಾತ್ರ ಪಾವತಿಸಬೇಕು. ಜೆಡ್ಡಾ ದಿಂದ ೧೨೦೦ ಕಿಲೋ ಮೀಟರ್ ದೂರ ರಾಜಧಾನಿ ರಿಯಾದ್. ಸಾಮಾನ್ಯವಾಗಿ ಟಿಕೆಟ್ ದರ ೬,೦೦೦ ರೂಪಾಯಿ. ತೆರಿಗೆ ಸೇರಿ. ಈಗ ತೆರಿಗೆ ಮಾತ್ರ ಪಾವತಿಸಿದರೆ ಸಾಕು, ರೆಕ್ಕೆಗಳು ಅರಳಿಕೊಳ್ಳುತ್ತವೆ. ತೆರಿಗೆ ೨,೦೦೦ ರೂಪಾಯಿ ಮಾತ್ರ. ಈ ಉಚಿತವಾಗಿ ಹಾರು ಎನ್ನುವ ಆಫರ್ ಕೊಡುತ್ತಿರುವ ಕಂಪೆನಿ “ನಾಸ್ ಏರ್”.  ಇದು low cost airline. ಇವರು ಸೌದಿ ಅರೇಬಿಯಾದ ಒಳಗೆ ಮಾತ್ರವಲ್ಲ ಮಧ್ಯ ಪ್ರಾಚ್ಯದ ಹಲವು ದೇಶಗಳಿಗೂ ತಮ್ಮ ಹಾರಾಟದ ಧಂಧೆ ಇಟ್ಟು ಕೊಂಡಿದ್ದಾರೆ. ಜೆಡ್ಡಾ ದಿಂದ ೧೬೦೦ ಕಿಲೋ ಮೀಟರು ಇರುವ ದಮ್ಮಾಂ ನಗರಕ್ಕೆ ಕೇವಲ ೧೨೦೦ ರೂಪಾಯಿ ಚಾರ್ಜ್ ಮಾಡುತ್ತಾರೆ ಆಫರ್ ಸಮಯದಲ್ಲಿ.  ಇಲ್ಲಿ ಹೀಗೆ, ನಮ್ಮಲ್ಲಿ ಹಾಗೆ, ಯಾಕೆ ಹೀಗೆ?   

ಮೈಸೂರು ಹುಲಿ, ಟಿಪ್ಪೂ ಸುಲ್ತಾನರ ಖಡ್ಗ ವನ್ನು ಹಣ ಕೊಟ್ಟು ಬ್ರಿಟಿಶ್ ಸಂಗ್ರಹಾಲಯದಿಂದ ಭಾರತಕ್ಕೆ ಮರಳಿ ತಂದು ಹೆಸರು ಮಾಡಿದ ಶ್ರೀಯುತ ವಿಜಯ್ ಮಲ್ಯ ಆರ್ಥಿಕ ಸಂಕಷ್ಟದಿಂದ ಹೊರ ಬಂದು ತಮ್ಮ ಕಿಂಗ್ ಫಿಶರ್ ಮತ್ತೊಮ್ಮೆ ಆಗಸವನ್ನು ಆಳುವಂತೆ ಮಾಡಲಿ ಎಂದು ಹಾರೈಸೋಣ.

ಹೀಗೊಂದು ಕಾನೂನಿನ ಲೈಂಗಿ’ಕಥೆ’

ಜೂಲಿಯಾನ್ ಅಸಾಂಜ್ ಹೆಸರು ಸಾಮಾನ್ಯ ವಿದ್ಯಾವಂತರು ಕೇಳಿರಲೇ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಹಿತಿ ಹಕ್ಕು ಮುಂತಾದ ಹಕ್ಕುಗಳ ಪ್ರತಿಪಾದಕ ಅಸಾಂಜ್. ಈತ ವಿಶ್ವದ ಸರಕಾರಗಳು ತೆರೆಮರೆಯಲ್ಲಿ ನಡೆಸಿ ಮಗುಮ್ಮಾಗಿ ಇದ್ದು ಬಿಡುವ ವಿಷಯಗಳ ಬಗ್ಗೆ ವಿಶ್ವಕ್ಕೆ ಡಂಗುರ ಬಾರಿಸಿ ಹೇಳುತ್ತಿದ್ದ ತನ್ನದೇ ಆದ ವೆಬ್ ತಾಣ “ವಿಕಿಲೀಕ್” ಮೂಲಕ. ಈ ವಿಕಿಲೀಕ್ ಎನ್ನುವ ನಲ್ಲಿ ತೊಟ ತೊಟ ತೊಟ ತೊಟ ಎಂದು ಉದುರಿಸ ಬೇಕಾದ್ದನ್ನೂ, ಉದುರಿಸಬಾರದ್ದನ್ನೂ ಉದುರಿಸಿ ಸರಕಾರಗಳ ಕೆಂಗಣ್ಣಿಗೆ ಕಾರಣವಾಯಿತು. ಈ ನಲ್ಲಿಯ ಬಾಯಿ ಮುಚ್ಚಿಸಲು ಸರಕಾರಗಳು ಎಲ್ಲಾ ಕಸರತ್ತುಗಳನ್ನೂ ಮಾಡಿದವು. ಅದರಲ್ಲಿನ ಒಂದು ಕಸರತ್ತು ಲೈಂಗಿಕ ದೌರ್ಜನ್ಯದ ಅಥವಾ ಅತ್ಯಾಚಾರದ ಆರೋಪ ಜೂಲಿಯಾನ್ ಅಸಾಂಜ್ ವಿರುದ್ಧ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಜೂಲಿಯಾನ್ ಅಸಾಂಜ್ ನಿಗೆ ಇಬ್ಬರು ಮಹಿಳೆಯರ ಪರಿಚಯ ವಾಯಿತು; ಆನ್ನಾ ಆರ್ಡಿನ್ ಮತ್ತು ಸೋಫಿಯಾ ವಿಲೆನ್ ಇವರೇ ಆ ಮಹಿಳೆಯರು.

ಈ ಮಹಿಳೆಯರು ಯಾರು, ಅವರು ಹೇಗೆ ಜೂಲಿಯಾನ್ ಅಸಾಂಜ್ ನಿಗೆ ಹತ್ತಿರವಾದರು ಎನ್ನುವುದು ದೊಡ್ಡ ಕತೆ. ಆನ್ನಾ ಆರ್ಡಿನ್ ಜೂಲಿಯಾನ್ ಒಂದಿಗೆ ಲೈಂಗಿಕ ಚಟುವಟಿಕೆ ನಡೆಸುವಾಗ ಅರ್ಧ ದಾರಿಯಲ್ಲಿ ಕಾಂಡೋಂ ಹರಿದು ಹೋಯಿತು. ಈಗ ಆನ್ನಾ ಗೆ ಶಂಕೆ ತನಗೆ ಲೈಂಗಿಕ ರೋಗ ತಗುಲಿರಬಹುದೋ ಅಥವಾ ಗರ್ಭಧಾರಣೆಯಾಗಿರಬಹುದೋ ಎಂದು. ಆದರೆ ಆಕೆ ಪೊಲೀಸರಿಗೆ ದೂರು ನೀಡಿದ್ದು ಅಸಾಂಜ್ ಉದ್ದೇಶಪೂರ್ವಕ ಕಾಂಡೋಂ ಹರಿದ ಎಂದು.

ಈಗ ಎರಡನೇ ಪಾತ್ರದ ಆಗಮನ, ಸೋಫಿಯಾ ವಿಲೆನ್. ಈಕೆ ಸಹ ಒಂದೆರಡು ದಿನಗಳ ನಂತರ ಅಸಾಂಜ್ ನೊಂದಿಗೆ ಕೂಡಿದಳು. ಮೊದಲ ಸಲ ಕೂಡುವಾಗ ಅಸಾಂಜ್ ಕಾಂಡೋಂ ಧರಿಸಿದ್ದ, ಮರುದಿನ ಬೆಳಿಗ್ಗೆ ಮತ್ತೊಮ್ಮೆ ಕೂಡುವಾಗ ಅಸಾಂಜ್ ಕಾಂಡೋಂ ಅನ್ನು ಧರಿಸಿರಲಿಲ್ಲ ಎಂದು ಸೋಫಿಯಾ ಪೊಲೀಸ್ ಠಾಣೆ ಗೆ ಹೋದಳು ದೂರಲು. ಇಬ್ಬರೂ ಸಮ್ಮತಿಯುಕ್ತ ಸಂಭೋಗಕ್ಕೆ ಒಪ್ಪಿಗೆ ನೀಡಿದ್ದರು ಎಂದು ಅಸಾಂಜ್ ಹೇಳಿದರೆ ಈ ಮಹಿಳೆಯರ ದೂರು ಬೇರೆಯೇ. ಸಮ್ಮತಿ ನೀಡಿದ್ದು ಕಾಂಡೋಂ ರಹಿತ ಸೆಕ್ಸ್ ಗಾಗಿ ಅಲ್ಲ ಎಂದು. ಈಗ ಆಗಮನ ಸೆಕ ನಷ್ಟೇ ರೋಮಾಂಚನ ಕೊಡುವ ಸ್ವಿಸ್ ಕಾನೂನಿಗೆ.

ಸುಸ್ವಾಗತ ಸ್ವಿಟ್ಸರ್ಲೆಂಡ್. ಈ ದೇಶದಲ್ಲಿ ಕಾನೂನು ಸ್ವಿಸ್ ವಾಚಿನಷ್ಟೇ ಸಂಕೀರ್ಣ. ಸುಲಭವಾಗಿ ಅರ್ಥವಾಗೋಲ್ಲ. ಇಲ್ಲಿನ ಕಾನೂನಿನಲ್ಲಿ “ಸರ್ಪ್ರೈಸ್ ಸೆಕ್ಸ್” ಎನ್ನುವ ಕಾಯಿದೆ ಇದೆ. ಈ ನಿಯಮದಡಿ ಲೈಂಗಿಕ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಮಹಿಳೆ ಸಾಕು ಎಂದರೂ ಕೇಳದೆ ಮುಂದುವರಿದರೆ ಅದು ಅತ್ಯಾಚಾರ. ಸಂಭೋಗ ನಿರತರಾಗಿರುವಾಗಲೇ ಮಹಿಳೆ ಸಮ್ಮತಿಯನ್ನು ಹಿಂದಕ್ಕೆ ಪಡೆಯಬಹುದಂತೆ. ಸಮ್ಮಿಶ್ರ ಸರಕಾರ ಉರುಳಿಸಲು ಪಕ್ಷವೊಂದು ಸರಕಾರಕ್ಕೆ ಬೆಂಬಲ ಹಿಂದಕ್ಕೆ ಪಡೆಯುವ ಹಾಗೆ. ಹಾಗೇನಾದರೂ ಸಮ್ಮತಿಯನ್ನು ಹಿಂದಕ್ಕೆ ಪಡೆದೂ ಗಂಡು ಮುಂದುವರಿದರೆ ಅದು ಅತ್ಯಾಚಾರ. (ಒಂದು ಸಂಶಯ; ಸಂಭೋಗ ನಿರತ ಗಂಡು ಕಿವುಡನಾದರೆ?) ಕಿವುಡನಾದರೆ ಸಂವಿಧಾನಕ್ಕೆ ತರುವ ತಿದ್ದುಪಡಿ ಯಂತೆ ಈ ಹಾಸ್ಯಾಸ್ಪದ ಸ್ವಿಸ್ law (lessness) ಗೂ ತರಬೇಕು ತಿದ್ದು ಪಡಿಯೊಂದ. ಮಹಿಳೆ ಉಪಯೋಗಿಸುವ withdrawal method ಇದು. withdrawal method ಏನು ಎಂದು ವಿವರಿಸಲು ಇದು ಸೆಕ್ಸ್ ಲೇಖನ ಅಲ್ಲ.

ಮೇಲಿನ ಈ ಕಾನೂನಿನ ಅಡಿ ಅಸಾಂಜ್ ನನ್ನು ಕಟಕಟೆಯಲ್ಲಿ ನಿಲ್ಲಿಸುವ, ತದನಂತರ ಜೈಲಿಗೆ ಅಟ್ಟುವ ಪ್ರಯತ್ನ ಸ್ವಿಸ್ ಸರಕಾರದ್ದು.

ಇನ್ನೂರು ರೂಪಾಯಿಗೆ ಒಂದು ವರ್ಷ

ಇನ್ನೂರು ರೂಪಾಯಿ ಕದ್ದ ಆರೋಪಕ್ಕೆ ಹದಿ ಹರೆಯದ ಹುಡುಗನಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆ ಒಂದು ವರ್ಷದ ಕಾರಾಗೃಹ ವಾಸ. ಸಾವಿರಾರು ಕೋಟಿ ನುಂಗಿದ, ತೆರಿಗೆ ಪಾವತಿಸದೆ ಮೆರ್ಸಿ ಡೀಸ್, BMW ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುವ ಕಳ್ಳರಿಗೆ ಹೋದಲ್ಲೆಲ್ಲಾ ಮಣೆ, ಆದರ, ಅಭಿಮಾನ, ಸನ್ಮಾನ. ಭಾರತ ಕೇವಲ ಶ್ರೀಮಂತರ, ಲೂಟಿಕೋರರ, ಬಾಲಿವುಡ್, ಕ್ರಿಕೆಟ್ ತಾರೆಯರ, ಅಧಿಕಾರವಿರುವವರ ಉಲ್ಲಾಸಕ್ಕಾಗಿ ಇರುವ  ನಾಡೇ? ಹುಡುಗ ಜೈಲಿನಿಂದ ಹೊರ ಹೋಗುವಾಗ ಇಂಥಾ ಕೆಲಸ ಇನ್ನೊಮ್ಮೆ ಮಾಡಬೇಡ ಎಂದು ಪೋಲೀಸಪ್ಪನೊಬ್ಬ ಹೇಳುತ್ತಾನಂತೆ. ಈ ಮಾತನ್ನು ಕಿನ್ನಿಮೋಳಿಗೋ, ಕಲ್ಮಾಡಿಗೋ, ರಾಜಾಗೋ ಹೇಳಲು ಪೇದೆಯೊಬ್ಬನಿಂದ  ಸಾಧ್ಯವೇ?

ಸಮಾಜದ ಗಣ್ಯ ವ್ಯಕ್ತಿಗಳು ಮಾಡಿದ ಪಾಪಗಳು ಸೆಷನ್ಸ್ ಕೋರ್ಟು, ಹೈ ಕೋರ್ಟು, ಸುಪ್ರೀಂ ಕೋರ್ಟು, ಸುಳ್ಳು ಸುಳ್ಳೇ ಮಾತನಾಡುವ ಕರಿ ಕೋಟುಗಳನ್ನೆಲ್ಲಾ ಸುತ್ತಿ ಸುತ್ತಿ ಬಸವಳಿದು ಕೊನೆಗೆ ಮರೆಯಾಗಿ ಹೋಗುತ್ತವೆಯೇ ವಿನಃ ಮಹನೀಯರುಗಳು ಅನುಭವಿಸಿದ ಜೈಲು ಶಿಕ್ಷೆ ಬಗ್ಗೆ ಓದಿದ ನೆನಪಿದೆಯೇ?      

 

ಈ ಜಾತಿ ನನಗೆ ತುಂಬಾ ಇಷ್ಟ

ಯೆಡಿಯೂರಪ್ಪ ನವರು ಹೊರಹೋಗಬೇಕು ಎಂದು ಕೊನೆಗೂ ‘ಭಾಜಪ’ದ ಹೈ ಕಮಾಂಡ್ ಜಪಿಸಿತು. ಈ ಜಪಕ್ಕಾಗಿ ಕುಮಾರಪ್ಪ ಅಂಡ್ ಕಂಪೆನಿ ಚಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಹೊರನಡಿಯಿರಿ ಎನ್ನುವ ಆಜ್ಞೆ ಹೊರಬಿದ್ದಾಗ ಕಾಂಗ್ರೆಸ್ ನದು ಅಪಸ್ವರ, ಈ ಆಜ್ಞೆ ತುಂಬಾ ತಡವಾಗಿ ಬಂತು ಅಂತ. ಏನೇ ಇರಲಿ, ರಾಜಕಾರಣದಲ್ಲಿ ಇವೆಲ್ಲಾ ಇದ್ದಿದ್ದೆ, ಯಾರು ಅಧಿಕಾರದ ಸ್ಥಾನದಲ್ಲಿ ಕೂತಿರ್ತಾರೋ ಅವರ ಕಾಲನ್ನು ಎಳೆದು ಹಾಕಲು ಮತ್ತೊಂದು ಮಾಜಿ ಅಧಿಕಾರಸ್ಥರ ಗುಂಪು ಕಾಯುತ್ತಾ ಇರುತ್ತದೆ. ಸರಿ, ಈಗ ನಮ್ಮ ರಾಜ್ಯದ ಮುಂದಿನ ಮುಖ್ಯ ಮಂತ್ರಿಗಳು ಯಾರು ಅಂತ ಕವಡೆ ಹಾಕಿ ನೋಡಲು ಕವಡೆ ಹುಡುಕುವಾಗ ಮತ್ತೊಂದು ಶಾಕ್ ತಗುಲಿತು. ಯಾವ ಜಾತಿಯ ಮುಖ್ಯಮಂತ್ರಿ ಬೇಕು ಅಂತ. ಈ ಪ್ರಶ್ನೆ ಒಂದು ಬ್ಲಾಗ್ ಕೇಳ್ತು. ಥತ್ತೇರಿ, ಮತ್ತೊಂದು ಸಮಸ್ಯೆ ಈಗ. ಈ ಸಮಸ್ಯೆ ನಮ್ಮ ಮಧ್ಯೆ ಇಲ್ಲ ಅಂತ ಭಾವಿಸಿಕೊಂಡಿರುವಾಗಲೇ ಪಾಟೀ ಸವಾಲಿನಂತೆ ಬಂದು ಎರಗಿತು, ಯಾವ ಜಾತಿಯ ಮುಖ್ಯ ಮಂತ್ರಿ ಬೇಕು ಅಂತ. ಅಷ್ಟೆಲ್ಲಾ ರಾಜಕಾರಣ ನನಗೆ ತಿಳೀ ಒಲ್ದು, ಇಷ್ಟು ಮಾತ್ರ ಗೊತ್ತು, ನಮ್ಮ ಅಲ್ಫೋನ್ಸೋ ಜಾತಿಯ ಮಾವಿನ ಹಣ್ಣಿನಂಥ ಹಣ್ಣು ಎಲ್ಲೂ ಹುಟ್ಟಿಲ್ಲ. ಹುಟ್ಟೋದೂ ಇಲ್ಲ.

ಯಾವ ಜಾತಿಯ ವ್ಯಕ್ತಿಯ ಕೈಗೇ ಹೋಗಲಿ ಅಧಿಕಾರ ಜಾತಿ, ಮತ, ಧರ್ಮ, ಪಂಥ ಭೇಧ ಮರೆತು ನಮ್ಮ ರಾಜ್ಯದ ಅಭ್ಯುದಯವನ್ನು ಮಾತ್ರ ಗಮನದಲ್ಲಿಟ್ಟು ಕೊಂಡು ಸರಕಾರ ನಡೆಸಲಿ ಎನ್ನುವ ಸಣ್ಣ ಆಸೆ ದೂರದ ಮರಳುಗಾಡಿನಿಂದ.

ನಮ್ಮ ರಾಷ್ಟ್ರಗೀತೆ ಚಿಕ್ಕದಾಯಿತು

ನಮ್ಮ ರಾಷ್ಟ್ರ ಗೀತೆ ಚಿಕ್ಕದಾಯಿತು, ಸ್ವಲ್ಪ ದೊಡ್ಡದು ಮಾಡಬಾರದೇ? ಡಿಮಾಂಡಪ್ಪೋ ಡಿಮಾಂಡು, ತರಾವರಿ ಡಿಮಾಂಡುಗಳು ಜನರದು. ತಿನ್ನೋಕ್ಕೆ ಒಪ್ಪೊತ್ತಿನ ಅನ್ನ ಇಲ್ಲ, ಅನ್ನ ಹಾಕಿ ಎಂದು ಎಂದು ಕೆಲವರ ಡಿಮಾಂಡ್ ಆದರೆ ಇನ್ನೂ ಕೆಲವರದು ತಮ್ಮ ತಲೆ ಮೇಲೆ ಸೂರಿಲ್ಲ, ಸಹಾಯ ಮಾಡಿ ಎನ್ನುವ ಡಿಮಾಂಡು. ಬದುಕಿನ ಅತ್ಯವಶ್ಯಕತೆ ಗಳ ಡಿಮಾಂಡು ಗಳನ್ನು ಈಡೇರಿಸಲು ಪ್ರಪಂಚ ಹೆಣಗಾಡುತ್ತಿದ್ದರೆ ನಮ್ಮ ರಾಷ್ಟ್ರ ಗೀತೆ ಯಾಕೋ ತುಂಬಾ ಚಿಕ್ಕದಾಯಿತು, ಅದನ್ನು ಸ್ವಲ್ಪ ಸ್ಟ್ರೆಚ್ ಮಾಡಿ ದೊಡ್ಡದು ಮಾಡಬಾರದೇ ಎನ್ನುವ ತುಂಟನದ ಡಿಮಾಂಡು. ಬೇಸ್ತು ಬೀಳಬೇಡಿ, ಈ ಡಿಮಾಂಡನ್ನು ನಮ್ಮ ದೇಶ ವಾಸಿಗಳಲ್ಲಿ ಯಾರೂ ಮಾಡಲಿಲ್ಲ, ಈ ಸವಿನಯ, ದೇಶಭಕ್ತಿ ತುಂಬಿ ತುಳುಕುವ ಮನವಿ ಬಂದಿದ್ದು ಫಾರ್ಮುಲಾ ಒನ್ ಕಾರ್ ರೇಸಿನ ಇಂಗ್ಲೆಂಡ್ ಮೂಲದ ಡ್ರೈವರ್ ಒಬ್ಬನಿಂದ. ಚಾಲಕ ಲೀವೈಸ್ ಹ್ಯಾಮಿಲ್ಟನ್ ನ ಅಳಲಿನ ಮರ್ಮ ಸ್ವಲ್ಪ ನೋಡೋಣ.

ಯಾವುದೇ ಕ್ರೀಡಾಪಟುವೂ ಸ್ಪರ್ದೆಯಲ್ಲಿ ವಿಜೇತನಾದಾಗ podium ಮೇಲೆ ನಿಂತು ತನ್ನ ರಾಷ್ಟ್ರ ಗೀತೆಯನ್ನು ನುಡಿಸುವುದನ್ನು ಹೆಮ್ಮೆಯಿಂದ ಕೇಳುವುದು ರೋಮಾಂಚನವೇ ಸರಿ. ಆದರೆ ನಾನು ಈ ಕಾರ್ ರೇಸಿನ ಈ ಪಂದ್ಯದಲ್ಲಿ ಗೆದ್ದು podium ಮೇಲೆ ನಿಂತ ಅರ್ಧ ನಿಮಿಷದಲ್ಲೇ ಮುಗಿದು ಹೋಯಿತು ನನ್ನ ರಾಷ್ಟ್ರ ಗೀತೆ. ಕೆಲವರು ೧೦ ನಿಮಿಷಗಳಿಗೂ ಹೆಚ್ಚು ಹೊತ್ತು ನಿಂತು ತಮ್ಮ ಗೀತೆಯನ್ನು ಆಲಿಸುತ್ತಾರೆ. ಇದು ಅವನ ಅಳಲು. ಅವನಿಗೆ podium ಮೇಲೆ ಹೆಚ್ಚು ಹೊತ್ತು ನಿಂತು ಸಂಭ್ರಮಿಸುವ ಆಸೆ, ಈ ಆಸೆ ಪೂರಸಲು ಅವನ ದೇಶದ god save the queen ಎನ್ನುವ ರಾಷ್ಟ್ರಗೀತೆಯನ್ನು ಇನ್ನಷ್ಟು ಉದ್ದ ಮಾಡಬೇಕು. ಹೇಗಿದೆ ಬೇಡಿಕೆ?

ನಮ್ಮ ರಾಷ್ಟ್ರಗೀತೆಯಲ್ಲಿ ಸ್ವಲ್ಪ alteration ಮಾಡಿ ಎಂದು ನಮ್ಮ ದೇಶದಲ್ಲಿ ಒಬ್ಬರು ಕೋರ್ಟು ಹತ್ತಿದರಂತೆ. “ಪಂಜಾಬ್, ಸಿಂಧು, ಗುಜರಾತ, ಮರಾಠ…” ಗೀತೆಯ ಈ ಸಾಲಿನಲ್ಲಿನ ಸಿಂಧ್ ಈಗ ನಮ್ಮ ದೇಶದಲ್ಲಿಲ್ಲದ್ದರಿಂದಲೂ, ಕಾಶ್ಮೀರ ನಮ್ಮ ದೇಶದಲ್ಲಿದ್ದರೂ ಅದರ ಪ್ರಸ್ತಾಪ ಗೀತೆಯಲ್ಲಿಲ್ಲದ್ದರಿಂದಲೂ ಸ್ವಲ್ಪ ಬದಲಾವಣೆ ಮಾಡಬಾರದೇ ಎನ್ನುವ ಮನವಿ. ಸಿಂಧ್ ಎಂದರೆ ಬರೀ ಪ್ರಾಂತ್ಯ ಮಾತ್ರವಲ್ಲ ಅದೊಂದು ನಾಗರೀಕತೆ, ನದಿಯ ಹೆಸರೂ ಹೌದು, ಹಾಗಾಗಿ ಯಾವ ಬದಲಾವಣೆ ಕೂಡದು ಎಂದು ವಿರೋಧಿಸಿದವರ ಪಾಟೀ ಸವಾಲು. ನ್ಯಾಯಾಲಯ alteration ಮನವಿಯನ್ನು ತಿಪ್ಪೆಗೆ ಬಿಸುಟಿತು.

ಆಫ್ಘಾನಿಸ್ತಾನದಲ್ಲಿ ೧೯೯೯- ೨೦೦೨ ರವರೆಗೆ ರಾಷ್ಟ್ರ ಗೀತೆಯೇ ಇರಲಿಲ್ಲ. ಬದಲಿಗೆ ಇದ್ದಿದ್ದು “ಕಲಾಶ್ನಿಕೋವ್” ಕೋವಿಗಳ ಸಂಗೀತ ಮಾತ್ರ.

ರಾಷ್ಟ್ರ ಗೀತೆಗಳ ಅಧ್ಯಯನಕ್ಕೆ anthematology ಎಂದು ಹೆಸರು. ಅಧ್ಯಯನ ಮಾಡುವ ವ್ಯಕ್ತಿ anthematologist.