ಮಾಧ್ಯಮಗಳು ನಂಬಲನರ್ಹ

ಚಾರ್ಲ್ಸ್ ಶೋಭರಾಜ್ ಅಂತಾರಾಷ್ಟ್ರೀಯ ಕುಖ್ಯಾತಿಯ ಕ್ರಿಮಿನಲ್. ಸರಣಿ ಕೊಲೆಗಾರ, serial killer. ಹಲವಾರು ಹೆಣ್ಣು ಮಕ್ಕಳನ್ನು ಕೊಲೆಗೈದಿದ್ದ ಈತನನ್ನು ಬಿಕಿನಿ ಕಿಲ್ಲರ್ ಎಂದೂ ಕರೆಯುತ್ತಾರೆ. ಈತ ಪೂಲೀಸರಿಗೆ ಲಂಚ್ ಕೊಟ್ಟೋ ಚಳ್ಳೆ ಹಣ್ಣು ತಿನ್ನಿಸಿಯೋ ತಪ್ಪಿಸಿಕೊಳ್ಳುತ್ತಿದ್ದ. ಒಮ್ಮೆ ಯಾರೋ ಒಬ್ಬ ಭಾರತೀಯ ಪೊಲೀಸರು ಇವನ ಹಿಂದೆ ಬಿದ್ದಿದ್ದಾರೆ ಎಂದು  ಪ್ರಸ್ತಾಪಿಸಿದಾಗ ಶೋಭ ರಾಜ್, ಓಹ್, ಭಾರತೀಯ ಪೊಲೀಸರು ೫ ರೂಪಾಯಿ ಪೊಲೀಸರು, ಐದು ರೂಪಾಯಿಯ ನೋಟನ್ನು ಕೊಟ್ಟರೆ ಬಿಟ್ಟು ಬಿಡುತ್ತಾರೆ ಎಂದು ಗಹ ಗಹಿಸಿ ನಕ್ಕಿದ್ದ. ಕೊನೆಗೆ ಇವನಿಗೆ ಮುಳುವಾಗಿದ್ದು ಒಬ್ಬ ಒಬ್ಬ ದಕ್ಷ ಭಾರತೀಯ ಪೊಲೀಸ್ ಅಧಿಕಾರಿ. ಚಾಣಕ್ಷ  ಪೊಲೀಸ್ ಅಧಿಕಾರಿ  “ಮಧುಕರ್ ಜೆನ್ಡೇ” ೧೯೯೬ ರಲ್ಲಿ ಅತ್ಯದ್ಭುತವಾದ ಕಾರ್ಯಾಚರಣೆ ಯೊಂದರಲ್ಲಿ ಚಾರ್ಲ್ಸ್ ನನ್ನು ಅರೆಸ್ಟ್ ಮಾಡಿದ್ದರು.

ಇವನ ದಸ್ತಗಿರಿಯೊಂದಿಗೆ ಭಾರತೀಯ ಪೊಲೀಸರು ಐದು ರೂಪಾಯಿ ಪೊಲೀಸರಲ್ಲ ಎಂದು ಸುಂದರವಾಗಿ ಸಾಬೀತಾಯಿತು. ಪೊಲೀಸ್ ಇಲಾಖೆಯ ವೃತ್ತಿಪರತೆ ವಿಜ್ರಂಭಿಸಿತು.

ವಿಜಯ್ ಮಲ್ಯ ರವರ ಕಿಂಗ್ ಫಿಶರ್ ಆರ್ಥಿಕ ಸಂಕಟ ದಲ್ಲಿರುವ ವೈಮಾನಿಕ  ಸಂಸ್ಥೆ. ಉತ್ತರ ಭಾರತದ ಮೋಸಗಾರ, ವಂಚಕ ಉದ್ಯಮಿಗಳಲ್ಲಿ ರಕ್ತಗತವಾಗಿರುವ ಕಪಟತನ, ಸರಕಾರೀ  ವ್ಯವಸ್ಥೆಯನ್ನ ಸಲೀಸಾಗಿ ಜೇಬಿಗಿಳಿಸಿ ಕೊಳ್ಳುವ ಕಂತ್ರಿ ಗುಣ ಈ ಕನ್ನಡಿಗ ಉದ್ಯಮಿಯಲ್ಲಿ ಇಲ್ಲ. ಇವರ ಹಣಕಾಸು ತೊಂದರೆಗಳಿಗೆ ರೆಕ್ಕೆ ಪುಕ್ಕ ಕೊಟ್ಟಿದ್ದು ಮಾತ್ರವಲ್ಲದೆ ವರ್ಣರಂಜಿತವಾಗಿ ಪ್ರಕಟಿಸಿ ತೀಟೆ ತೀರಿಸಿ ಕೊಂಡವು ಪತ್ರಿಕೆಗಳು. ಬಹುಶಃ ಕೆಲವು ಉದ್ಯಮಿಗಳ ಹಾಗೆ ದಕ್ಷಿಣೆ ಬಿಸಾಕುವ ಗುಣ ಮಲ್ಯರಲ್ಲಿಲ್ಲದ್ದರಿಂದಲೋ ಏನೋ ಇವರ ಬೆನ್ನು ಹತ್ತಿದವು. ತಮ್ಮನ್ನು ಗುರಿಯಾಗಿಸಿ ನಡೆಯುತ್ತಿರವ witch hunting ಗೆ ಬೇಸತ್ತ ಮಲ್ಯ ಕೊನೆಗೆ ಉದುರಿಸಿದರು ನನಗೂ ನಿಮಗೂ ತಿಳಿದಿದ್ದ ನುಡಿ ಮುತ್ತುಗಳನ್ನು; indian media has no credibility. ಭಾರತೀಯ ಮಾಧ್ಯಮಗಳು “ನಂಬಲರ್ಹ ಎಂದು.  ನಂಬಲನರ್ಹ ಅಥವಾ ಯೋಗ್ಯತೆಗೆಟ್ಟ  ಮಾಧ್ಯಮಗಳು ಎಂದರೂ ಸರಿಯೇ.

ಪತ್ರಕರ್ತರ ಮೇಲಿನ ವಿಶ್ವಾಸ ಕ್ರಮೇಣ ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ೧೯೮೦ ರ ಕ್ಕಿಂತ ಮೊದಲಿದ್ದ  ಪತ್ರಕರ್ತರ ಮೇಲಿನ ವಿಶ್ವಾಸ ಈಗ ಇಲ್ಲ. ಈಗ ಮಾಧ್ಯಮಗಳು ಸರಕಾರೀ ಯಂತ್ರಗಳ, ರಾಜಕಾರಣಿಗಳ ‘ಸ್ಟೆನೋ ಗ್ರಾಫರ್’ ಗಳಾಗಿ ಮಾರ್ಪಟ್ಟಿದ್ದಾರೆ. ರಾಜಕಾರಣಿ ಅಥವಾ ಅಧಿಕಾರಿಗಳು ಹೇಳಿದ್ದು ಸರಿಯೇ ಎಂದು ತನಿಖೆ ನಡೆಸಿ ವರದಿ ಮಾಡುವ ವ್ಯವಧಾನ, ವೃತ್ತಿಪರತೆ  ಇವರಿಗಿಲ್ಲ. ಯಾವ ಆಮಿಷಕ್ಕಾಗಿ ಪತ್ರಕರ್ತನಿಗಿರಬೇಕಾದ ಗುಣಗಳನ್ನ ಇವರು ಬಲಿ ಕೊಟ್ಟಿದ್ದಾರೆ ಎನ್ನುವುದು ಜನರಿಗೆ ಗೊತ್ತಿಲ್ಲ. ಕೆಲವು ಪತ್ರಕರ್ತರು ತಮ್ಮ ರಾಜಕೀಯ ಅಜೆಂಡಾ ಗಳಿಗೆ ಹೊಂದುವ ವರದಿ ಪ್ರಕಟಿಸಿ ಪತ್ರಕರ್ತ ಹುದ್ದೆಗೆ ಕಳಂಕ ತರುವ, ಆ ಹುದ್ದೆಯ ಘನತೆ ಕುಗ್ಗಿಸುವ ಕೆಲಸ ಮಾಡುತ್ತಿರುವುದೂ ಸಹ ಜನ ಗಮನಿಸುತ್ತಿದ್ದಾರೆ.      ಒಂದು ಪತ್ರಿಕೆ ಬರೆದ ವರದಿಗಳ ಕಾರಣ ಕರ್ನಾಟಕದ ಒಂದು ಪಟ್ಟಣ  ಸಂಪೂರ್ಣ ಬಂದ್ ಅನ್ನೂ ಆಚರಿಸಿತಂತೆ. ಹಿಂದೆಂದೂ  ಇದನ್ನು ಹೋಲುವ ಘಟನೆ ಕರ್ನಾಟಕದಲ್ಲಿ ನಡೆದ ಬಗ್ಗೆ ನನಗೆ ನೆನಪಿಲ್ಲ. unprecedented ಎನ್ನಬಹುದುನಮ್ಮ ನಾಡಿನಲ್ಲಿ ಪತ್ರಿಕೋದ್ಯಮ ಈ ಮಟ್ಟಕ್ಕೆ ಬಂದು ನಿಂತಿದೆ ಇಂದು.

ಒಬ್ಬ ಪತ್ರಕರ್ತ ಎನ್ನಿಸಿ ಕೊಳ್ಳಲು ನಾಲ್ಕು ವಾಕ್ಯಗಳನ್ನು ಹೆಣೆಯುವ ಕಲೆ ರೂಢಿಸಿ ಕೊಂಡರೆ ಸಾಲದು, ಕನಿಷ್ಠ ಓದು ಬರಹದ ವಿದ್ಯೆ ಮಾತ್ರ ಸಾಲದು. ಪಕ್ಷ ಅಥವಾ ಸಿದ್ಧಾಂತ ನಿಷ್ಠೆ ತೋರಿಸುವ ‘ಪಟ್ಟೆ’ಗಳು ಸಹ ಇರಕೂಡದು   ಪತ್ರಕರ್ತನಲ್ಲಿ. ಬದಲಿಗೆ   ವೃತ್ತಿ ಪರತೆಯ ಗುಣಗಳು ಇರಬೇಕು, libel and libel law ಇವುಗಳ ಜ್ಞಾನವೂ ಇರಬೇಕು. ಓಹ್, ಇದು ಒಂದು ಬಹು ದೊಡ್ಡ ಬೇಡಿಕೆಯಾಗಿ ತೋರಬಹುದೇನೋ ಪತ್ರಕರ್ತರ ವೇಷ ತೊಟ್ಟ ಜನರಿಗೆ.

ತಮ್ಮ ಬಗೆಗಿನ ವಿಜಯ್ ಮಲ್ಯರವರ ಲೆಕ್ಕಾಚಾರ ತಪ್ಪು ಎಂದು ಜನರಿಗೆ ಮನವರಿಕೆ ಮಾಡುವ ಕೆಲಸ ಈ ಪತ್ರಕರ್ತ ಸಮೂಹ ಮಾಡೀತೆ?

 

ಅತ್ಯಾಚಾರದ ಗರ್ಭಧಾರಣೆಗೆ “ದೈವೇಚ್ಚೆ” ಕಾರಣ

ಶೀಲಭಂಗದಿಂದ ಅಥವಾ ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಅಮೆರಿಕೆಯ ರಿಪಬ್ಲಿಕನ್ ಪಕ್ಷದ ನಾಯಕನೊಬ್ಬ. ಈಗ ಈ ಮಾತು ಅಮೆರಿಕೆಯ ರಾಜಕೀಯ ವಲಯದಲ್ಲಿ ಕಂಪನ ತರುತ್ತಿದೆ. ಡೆಮೊಕ್ರಾಟ್ ಪಕ್ಷದವರು ಈ ಮಾತನ್ನು ಹಿಡಿದು ಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾತುರರಾಗಿದ್ದಾರೆ. ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಬಲಪಂಥೀಯ ಎಂದು ರಿಪಬ್ಲಿಕನ್ ಪಕ್ಷ ಪರಿಗಣಿಸಲ್ಪಟ್ಟಿದೆ ಅಮೆರಿಕೆಯಲ್ಲಿ. ತಲೆಕೆಟ್ಟ ಕೆಲವು ಕ್ರೈಸ್ತ ಪಾದ್ರಿಗಳೂ ಈ ಪಕ್ಷವನ್ನ ಬೆಂಬಲಿಸುತ್ತಾರೆ. ಬಲಪಂಥವೋ, ಎಡ ಪಂಥವೋ, ನಡು ಪಂಥವೋ, ಪಂಥ ಯಾವುದೇ ಇರಲಿ ಮಾನವೀಯ ಮೌಲ್ಯಗಳ ವಿಷಯ ಬಂದಾಗ ಸರಿಯಾದ ವಿವೇಚನೆ, ತೋರದ ಪಂಥ ತಿಪ್ಪೆ ಸೇರುವುದಕ್ಕೆ ಮಾತ್ರ ಲಾಯಕ್ಕು.

Let us get back to rape-induced pregnancy. ಮತ್ತೊಮ್ಮೆ ಗರ್ಭ ಧಾರಣೆಗೆ ಬರೋಣ. ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಈತನ ಹೆಸರು ರಿಚರ್ಡ್ ಮುರ್ಡೋಕ್. ಇಂಡಿಯಾನ ರಾಜ್ಯದಿಂದ ಸೆನೆಟ್ ಗಾಗಿ ಸ್ಪರ್ದೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ. ತಾನಾಡಿದ  ಮಾತಿನಿಂದ ಎದ್ದ ವಿವಾದ ಈತನನ್ನು ವಿಚಲಿತನನ್ನಾಗಿಸಿದೆ.  ಈಗ ಈತ ಹೇಳುವುದು, “ನಾನು ಹೇಳಿದ ಅರ್ಥವೇ ಬೇರೆ. ನನ್ನ ಪಾಯಿಂಟ್ ಏನೆಂದರೆ ದೇವರು ಜೀವದ ಸೃಷ್ಟಿಗೆ ಕಾರಣ, ದೇವರಿಗ ಅತ್ಯಾಚಾರ ಇಷ್ಟವಿಲ್ಲ, ಅತ್ಯಾಚಾರ ಒಂದು horrible thing” ಈ ಸಮಜಾಯಿಷಿ ಈತನದು.

ಗರ್ಭಧಾರಣೆ ದೈವೇಚ್ಚೆ ಎಂದಾಗ ಒಂದು ಮಾತು ನೆನಪಿಗೆ ಬರುತ್ತದೆ. ಅದೆಂದರೆ “ತೇನ ವಿನಾ ತೃಣಮಪಿ ನ ಚಲತಿ”. ಈ ಮಾತಿನ ಅರ್ಥ ಒಂದು ಹುಲುಕಡ್ಡಿ ಅಲುಗಾಡಲೂ ಪರಮಾತ್ಮನ ಅಪ್ಪಣೆ ಬೇಕು. ಪವಿತ್ರ ಕುರ್’ಆನ್ ನ ಆರನೇ ಅಧ್ಯಾಯ, ೫೯ ನೇ ಸೂಕ್ತದಲ್ಲೂ ಇದೇ ಅರ್ಥ ಬರುವ ಮಾತಿದೆ. “Not a leaf fall but with His Knowledge”. ಈಗ ಈ ಮೇಲಿನ ಸೂಕ್ತಗಳನ್ನು ಉದ್ಧರಿಸಿ ಜಗತ್ತಿನಲ್ಲಿ ನಡೆಯುವ ಪ್ರತೀ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ಮೋಸ ದಗಾ, ವಂಚನೆ… ಎಲ್ಲವಕ್ಕೂ ತಂದು ನಿಲ್ಲಿಸಲಿ ಪರಮಾತ್ಮನನ್ನು ಸಾಕ್ಷಿಯಾಗಿ.

 

ಅವರು ಮತ್ತು ನಾವು

ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಡೆಮಾಕ್ರಟ್ ಪಕ್ಷದ ಒಬಾಮಾ  ಮತ್ತು ರಿಪಬ್ಲಿಕನ್ ಪಕ್ಷದ ಮಿಟ್ ರಾಮ್ನಿ ನಡುವೆ ಹಣಾಹಣಿ. ಒಬಾಮಾ ಎರಡನೇ ಬಾರಿ ಶ್ವೇತ ಭವನದಲ್ಲಿ ಸಮಯ ಕಳೆಯಲು ಬಯಸಿದರೆ ಮಿಟ್ ರಾಮ್ನಿ ಆ ಆಸೆಗೆ ತಣ್ಣೀರೆರೆಚಲು ಏನೆಲ್ಲಾ ಮಾಡಬೇಕೋ ಅವನ್ನು  ಮಾಡಲು ತಯಾರಿ ನಡೆಸುತ್ತಿದ್ದಾರೆ. ಅಮೆರಿಕೆಯಲ್ಲಿ ಇವರಿಬ್ಬರ ಗೆಲ್ಲುವ ಸಾಧ್ಯತೆ ಬಗ್ಗೆ punditry, ಹಾಗೆಯೇ ದಿನವೂ ಇವರಿಬ್ಬರಲ್ಲಿ ಯಾರು ಗೆಲ್ಲಬಹುದು ಎಂದು ಅಂಕಿ ಅಂಶಗಳ ಮಹಾಪೂರ. ತೈಲ ಅಥವಾ ಚಿನ್ನದ ಬೆಲೆ ಏರಿಳಿತದಂತೆ ದಿನವೂ ಅಂಕಿ ಅಂಶಗಳು ಏರು ಪೇರು. ಒಂದು ದಿನ ಒಬಾಮ ಮುಂದಿದ್ದರೆ, ಮತ್ತೊಂದು ದಿನ ರಾಮ್ನಿ. ರಾಜಕೀಯ ಪಂಡಿತರ ಲೆಕ್ಕಾಚಾರ ಮತ್ತು ಅಂಕಿ ಅಂಶಗಳ ಜೊತೆ ಇವರಿಬ್ಬರೂ ನಡೆಸಿದ ಬಹಿರಂಗ ಚರ್ಚೆಗಳು ಯಾರು ಅಧ್ಯಕ್ಷ ಪದವಿಗೆ ಹೆಚ್ಚು ಅರ್ಹ ಎಂದು ನಿರ್ಣಯಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಇದುವರೆಗೆ ಒಬಾಮಾ ಮತ್ತು ರಾಮ್ನಿ ನಡುವೆ ಮೂರು ಚರ್ಚೆಗಳು ನಡೆದಿವೆ. ಮೊದಲ ಚರ್ಚೆಯಲ್ಲಿ ಆಚ್ಚರಿದಾಯಕವಾಗಿ ಒಬಾಮಾ killer instinct ಪ್ರದರ್ಶಿಸದೆ ಸುಲಭವಾಗಿ ರಾಮ್ನಿಗೆ ಶರಣಾಗಿ ತಮ್ಮ ಪಕ್ಷದ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದರೆ, ಎರಡನೇ ಚರ್ಚೆಯಲ್ಲಿ ಚೇತರಿಸಿಕೊಂಡ ಒಬಾಮಾ, ಅಸಾಧಾರಣ ವಾಕ್ಪಟುತ್ವ ಮೆರೆಯದೆ ಇದ್ದರೂ ಮೇಲುಗೈಯಂತೂ ಸಾಧಿಸಿ ತಮ್ಮ ಅಭಿಮಾನಿಗಳಲ್ಲಿ ಆವೇಶ ತುಂಬಿದರು. ಮೊನ್ನೆ ನಡೆದ  ಮೂರನೇ ಚರ್ಚೆಯಲ್ಲಿ ಒಬಾಮ ತನ್ನ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸಿ ರಾಮ್ನಿಗೆ ಚಳ್ಳೆ ಹಣ್ಣು ತಿನ್ನಿಸಿದರು. ‘ಬೋಕಾ ರೇಟೋನ್’ ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಚರ್ಚೆಯಲ್ಲಿ ಒಬಾಮ ವಿಜಯೀ ಎಂದು ಮಾಧ್ಯಮಗಳ ವರದಿ.

ಆದರೆ ಮೊದಲ ಇಂಪ್ರೆಷನ್ ಬೆಸ್ಟ್ ಇಂಪ್ರೆಷನ್ ಅಂತೆ. ರಾಮ್ನಿ ವಿಜಯಿ ಯಾಗಬಹುದು ಎಂದು ಈಗ ಹೆಚ್ಚಿನವರ ಊಹೆ. ಈ ಚರ್ಚೆಗಳು ಯಾವ ರೀತಿ ಮತದಾರನ ಮೇಲೆ ಪ್ರಭಾವ ಬೀರುತ್ತವೆ, ಮತ್ತು ಈ  ಪ್ರಭಾವ ಮತಗಟ್ಟೆ ಯವರೆಗೂ ಪ್ರಯಾಣಿಸ ಬಹುದೇ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.   ದೇಶವನ್ನು ಕಾಡುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕೆಯ ಪ್ರಭಾವ ಮುಂತಾದ ಹತ್ತು ಹಲವು ವಿಷಯಗಳ ಬಗ್ಗೆ ಇವರೀರ್ವರ ನಿಲುವುಗಳನ್ನು ಅಮೇರಿಕಾ ಮಾತ್ರವಲ್ಲ ವಿಶ್ವವೇ ಬಹು ಆಸ್ಥೆಯಿಂದ ಆಲಿಸಿತು.  ಅಂತಾರಾಷ್ಟ್ರೀಯವಾಗಿ ಅಮೆರಿಕೆಯ ಪ್ರಭಾವದ ಬಗ್ಗೆ ಬಹು ಜೋರಾದ ಧಾಳಿ, ಪ್ರತಿ ಧಾಳಿಗಳು ನಡೆದವು ಒಬಾಮಾ ರಾಮ್ನಿ ನಡುವೆ. ಬಾಗ್ದಾದ್ ಬೀದಿಗಳಲ್ಲಿ, ಕಂದಹಾರದ ಗುಡ್ಡಗಾಡು ಗಳಲ್ಲಿ ನಡೆಯುವ ಗುಂಡಿನ ಚಕಮಕಿಗಿಂತ ಬಿರುಸೇ ಎನ್ನಬಹುದಾದ sniping. ಸೌದಿ ಅರೇಬಿಯಾ, ಇರಾಕ್ ಇರಾನ್, ಲಿಬ್ಯ, ಇಸ್ರೇಲ್ ಹೀಗೆ ಹಲವು ದೇಶಗಳ ಬಗ್ಗೆ ಚರ್ಚೆ ನಂತರ ಏಷ್ಯಾದ ಕಡೆಗೂ ಹರಿಯಿತು ಗಮನ. ಚೀನಾದ ಪ್ರಭಾವದ ಬಗ್ಗೆ ಕೂಡಾ ಹರಿಯಿತು ಒಬಾಮಾ, ರಾಮ್ನಿ ಯವರ ಗಮನ. ಏಷ್ಯಾ ಎಂದರೆ ಚೀನಾ ಎನ್ನುವಷ್ಟರ ಮಟ್ಟಿಗೆ ಚೀನಾ ಬೆಳೆದು ಬಿಟ್ಟಿದೆ. ಸರಿ, ಸರಿ, ಈ ಚರ್ಚೆಗಳಲ್ಲಿ ನಾವು ಎಲ್ಲಿದ್ದೇವೆ? ನಮ್ಮ ಸ್ಟೇಟಸ್ ಏನು?………ನಮ್ಮ ಸ್ಟೇಟಸ್ಸೋ? ಅದೇ ಹಳೆಯ ಸ್ಟೇಟಸ್ಸು, ಆರಕ್ಕೆ ಯೇರ್ಲಿಲ್ಲ, ಮೂರಕ್ಕೆ ಇಳೀಲಿಲ್ಲ ಎನ್ನುವ ಸ್ಟೇಟಸ್.  ವೆಬ್ ತಾಣಗಳಲ್ಲಿ ಉತ್ಸಾಹದಿಂದ ಸೇರಿಕೊಂಡು ಸ್ಟೇಟಸ್ ಅಪ್ಡೇಟ್ ಮಾಡದೆ ಸೋಮಾರಿತನ, ಜಡತ್ವ ಪ್ರದರ್ಶಿಸುವವರ ರೀತಿ ಅಮೇರಿಕಾ ನಮ್ಮ ಬಗ್ಗೆ ಅಸಾಧಾರಣ, ಆದರೂ ನಿರೀಕ್ಷಿತ, ಅಸಡ್ಡೆ ತೋರಿಸಿ ನಾವು ಗ್ಲೋಬಲ್ ಪ್ಲೇಯರ್ ಅಲ್ಲ ಎಂದು ಕೇಳದೆಯೇ ಪ್ರಮಾಣ ಪತ್ರ ದಯಪಾಲಿಸಿತು. ಅಮೆರಿಕೆಯ  ಈ ಅಸಡ್ಡೆ, ಉಡಾಫೆಯ ಬಗ್ಗೆ ಹೆಚ್ಚು ಹೇಳಿದರೆ anti american ಪಟ್ಟ ಗ್ಯಾರಂಟಿ ನನಗೆ. ಆದರೂ  ಒಂದನ್ನಂತೂ ಹೇಳಲೇಬೇಕು. ಅಮೆರಿಕೆಗೆ ನಾವು ಒಂದು invoice ಥರ. ಬರೀ ಒಬ್ಬ ಗಿರಾಕಿ. ವಾಲ್ ಮಾರ್ಟ್ ಮಳಿಗೆ ಮುಂದೆ ಡಿಸ್ಕೌಂಟ್ ಸೇಲ್ ಗಾಗಿ ಹಲ್ಲು ಕಿರಿಯುತ್ತಾ,  ಕತ್ತು ಉದ್ದ ಮಾಡಿ ನಿಲ್ಲುವ ಗಿರಾಕಿ.        

ನಮ್ಮನ್ನು ಇತರರು ಗೌರವದಿಂದ ಕಾಣಬೇಕು ಅನ್ನುವ ಬಯಕೆ ಆಕಾಂಕ್ಷೆ ನಮಗೆ ಇದ್ದರೆ ಮೊದಲು ನಾವು ನಮ್ಮನ್ನು ಗೌರವಿಸಿಕೊಳ್ಳಬೇಕು. ಇದು ನಿಯಮ. ಸದ್ಯಕ್ಕೆ ಆ ಆಸೆ ಈಡೇರಿಸುವ ಸರದಾರ ಅಥವಾ ಸರಾದರಿಣಿ ಇನ್ನೂ ಜನ್ಮ ಎತ್ತಿಲ್ಲ ನಮ್ಮ ದೇಶದಲ್ಲಿ. ಅಲ್ಲಿಯವರೆಗೂ ಏಷ್ಯಾ ಎಂದರೆ ಚೀನಾ, ಜಪಾನ್, ಮಲೇಷ್ಯಾ ಕೊನೆಗೆ ಬಾಂಗ್ಲಾದೇಶ. ನಾವು ಗೈರು ಹಾಜರು.

ಈಗ ಎಂಟರ್ ಅವರ್ ಮಹಾನ್ ಭಾರತ. ಋಷಿ ಪುಂಗವರು, ಸಾಧು ಸಂತರು, ಪೀರ್, ಸೂಫಿಗಳು, ನೆಮ್ಮದಿ ಕಂಡ, ಮುಕ್ತ ಕಂಠದಿಂದ  ಕೊಂಡಾಡಿದ ಈ ಸೊಗಸಾದ ದೇಶಕ್ಕೆ ದೇವರು ಒಳ್ಳೆಯ, ದಕ್ಷ, ಪ್ರಾಮಾಣಿಕ ಆಡಳಿತಗಾರರನ್ನು ದಯಪಾಲಿಸದೆ ಸ್ಪಷ್ಟ ರಾಜಕಾರಣ ತೋರಿಸಿದ್ದಾನೆ ಎಂದು ಯಾರಾದರೂ ದೂರಿದರೆ ಅವರ ದೂರು “ಕಂಪ್ಲೀಟ್ಲಿ ವ್ಯಾಲಿಡ್”. ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶೀ ಧಾಳಿಕೋರರು ನಮ್ಮನ್ನು  ಆಳಿದರೆ, ಸ್ವಾತಂತ್ರ್ಯಾ ನಂತರ ಸ್ವದೇಶೀ ಧಾಳಿಕೋರರ ಸರತಿ. ಯಾರು ಹಿತವರು ಇವರೀರ್ವರಲ್ಲಿ? ನಿಮ್ಮ ದೃಷ್ಟಿ  ಸಾಗರದಾಚೆ ಓಡಿದರೆ ಅದು ಕ್ಷಮಾರ್ಹವಾದ ದೃಷ್ಟಿಯೇ. ಭಿಕ್ಷುಕನ ತಟ್ಟೆಗೂ ಕನ್ನ ಹಾಕುವವರನ್ನು ನಾವಿಂದು ಆರಿಸಿ ಕಳಿಸುತ್ತಿದ್ದೇವೆ.    ನಮ್ಮ ದೇಶ ಎಷ್ಟು ಭ್ರಷ್ಟ ಎಂದು ನಮಗೆ ತಿಳಿಹೇಳಲು ಯಾವುದೇ ಅಂಕಿ ಅಂಶಗಳು ಬೇಕಿಲ್ಲ. ಗಡ್ಕಾರೀ ತನ್ನ ಕಂಪೆನಿಗಳ ಮೂಲಕ ಎಷ್ಟು ಸಂಪತ್ತು ದೋಚಿ ಗಡದ್ದಾಗಿದ್ದಾರೆ ಎಂದು  ಕಾಂಗ್ರೆಸ್ ಹಿಂದೆ ಬಿದ್ದಿದ್ದರೆ, ಕೇಜರಿವಾಲ ನಲ್ಲಿ ಎಷ್ಟು ಕೇಸರಿ ತುಂಬಿಕೊಂಡಿದೆ ಎಂದು ಸೆಕ್ಯುಲರ್ ವಾದಿಗಳು ದುರ್ಬೀನು ಹಿಡಿಯುತ್ತಿದ್ದಾರೆ. ಅಣ್ಣಾ ಹಜಾರೆಯ ನಿಯ್ಯತ್ತಿನ ಬಗ್ಗೆ ಕೆಲವರು ಅಪಸ್ವರ ಎತ್ತಿದರೆ ಮತ್ತೊಬ್ಬ ಸೋನಿಯಾರ ಸೆರಗು ಜಗ್ಗುತ್ತಾನೆ ತಮ್ಮ ಅಳಿಯಂದಿರ ವಹಿವಾಟುಗಳ ಕರ್ಮಕಾಂಡದ ತನಿಖೆಗಾಗಿ. ಕೆಸರೋ ಕೆಸರು. ಅಲ್ಲಿ ಅಮೆರಿಕೆಯಲ್ಲಿ ಚರ್ಚೆಯೋ ಚರ್ಚೆ. ಇಲ್ಲಿ ಕೆಸರೋ ಕೆಸರು.  ಅಮೆರಿಕೆಯಲ್ಲಿ ಆರೋಗ್ಯ ವಿಮಾ ಪದ್ಧತಿಯ ಬಗ್ಗೆ ವಿವಾದ, ನಿರುದ್ಯೋಗದ ಬಗ್ಗೆ ಚರ್ಚೆ, ಸಲಿಂಗಿಗಳ ಹಕ್ಕುಗಳ ಬಗ್ಗೆ ವಾಗ್ಯುದ್ಧ, ಕಾಲೇಜಿಗೆ ಹೋಗುವ ತರುಣ ತರುಣಿಯರಿಗೆ ಕಾಂಡೋಮ್ ನ ಖರ್ಚು ಸರಕಾರ ಭರಿಸಬೇಕೆ ಎನ್ನುವ ಜಿಜ್ಞಾಸೆ, ಕಂಪೆನಿಗಳನ್ನು ಸಾಲ ಮುಕ್ತ ರನ್ನಾಗಿಸಬೇಕೋ ಬೇಡವೋ ಎನ್ನುವುದರ ಡಿಬೇಟ್, ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಎಷ್ಟು ಆಳ ಮೂಗು ತೋರಿಸಬೇಕು ಎನ್ನುವುದರ ಮೇಲೆ ವಾಗ್ಯುದ್ಧ…ಆದರೆ ನಮ್ಮಲ್ಲಿ? ಬಡವರ ಹತಾಶೆ ಯಾವ ಮಟ್ಟಕೆ ಮುಟ್ಟಿದೆ ಎಂದು ಹೇಳಿ ತೀರದು. ರಾಜಸ್ಥಾನದಲ್ಲಿ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಹಸುಳೆಯನ್ನು ಬಟ್ಟೆಯಲ್ಲಿ  ಸುತ್ತಿ ತನ್ನ ಕೊರಳಿಗೆ ಕಟ್ಟಿ ಕೊಂಡು ಸೈಕಲ್ ರಿಕ್ಷಾ ಚಲಾಯಿಸುತ್ತಾನೆ ಬಡ ತಂದೆ. ಈ ವರದಿ ಬಿ.ಬಿ.ಸೀ ಯಲ್ಲಿ ಬಂದ ನಂತರವೇ ರಾಜಸ್ಥಾನದ ಸರಕಾರ ಸಹಾಯ ಹಸ್ತ ನೀಡಿದ್ದು. ಒಂದು ಕಡೆ ಈ ತೆರನಾದ ಅಸಹಾಯಕತೆ ನಮಗೆ ನೋಡಲು ಸಿಕ್ಕಿದರೆ ಮತ್ತೊಂದು ಕಡೆ ನಮ್ಮನ್ನು ನಿರ್ದಾಕ್ಷಿಣ್ಯವಾಗಿ  ದೋಚಿದವರ ತೀರದ ಅಟ್ಟಹಾಸ. ದೋಚಿದ ಸಂಪತ್ತಿನಲ್ಲಿ ಬಂಗಲೆ ಕಟ್ಟಿ ಕೊಂಡು, ದೊಡ್ಡ ದೊಡ್ಡ ಕಾರುಗಳಲ್ಲಿ ಹಸಿದವನ, ನಿರ್ಗತಿಕನ ಮುಂದೆಯೇ ಓಡಾಡುತ್ತಾರೆ ಯಾವ ಸಂಕೋಚವೂ ಇಲ್ಲದೆ. ಹಗಲೂ ರಾತ್ರಿಯೆನ್ನದೆ, ಪಕ್ಷ ಬೇಧವಿಲ್ಲದೆ ದೋಚಿದ ನಂತರ ನಾವು ಹಿಂದುಳಿದ ದೇಶ, ಮುಂದಕ್ಕೆ ತರಲು ನನ್ನು ಆರಿಸಿ ಎಂದು ನಿರ್ಭಿಡೆಯಿಂದ ನಮ್ಮ ಮತ ಸಹ ಕೇಳುತ್ತಾನೆ ರಾಜಕಾರಣಿ.

ಅಮೆರಿಕೆಯಲ್ಲಿ ಅಭ್ಯರ್ಥಿಗಳ ನಡುವೆ ನಡೆಯುತ್ತಿರುವ ಚರ್ಚೆ ರೀತಿ ನಮ್ಮ ದೇಶದಲ್ಲೂ ಯಾಕೆ ಮುಖಾ ಮುಖಿ ರಾಜಕಾರಣಿ ಗಳು ಕೂರೋಲ್ಲ? ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕ ಅಥವಾ ನಾಯಕಿ ಏಕೆ ಚರ್ಚೆಯಲ್ಲಿ ಎದುರು ಬದುರಾಗೋಲ್ಲ? ಏಕೆಂದರೆ ಇಬ್ಬರೂ ಅದೇ ವರ್ಗಕ್ಕೆ ಸೇರಿದವರು. ದೋಚುವ ವರ್ಗಕ್ಕೆ ಸೇರಿದವರು. ಉರ್ದು ಭಾಷೆಯಲ್ಲಿ ಮಾತೊಂದಿದೆ, “ಏಕ್ ಹಮ್ಮಾಮ್ ಕೆ ದೋ ನ್ಹಂಗೆ” ಅಂತ. ಅಂದರೆ ‘ಒಂದೇ ಬಚ್ಚಲಿನ ಇಬ್ಬರು ನಗ್ನರು’. ಈ ಪರಿಸ್ಥಿತಿ ಎದುರಾಗಬಹುದು ಎನ್ನುವ ಭೀತಿ. ಮುಚ್ಚಲು ಏನೂ ಇರುವುದಿಲ್ಲ, ನಾಚಿಕೆ ಪಡಬೇಕಾದ ತಾಪತ್ರಯವೂ ಇಲ್ಲ. ಇದೇ ಪರಿಸ್ಥಿತಿ ಎದುರಾಗುತ್ತದೆ ಆಳುವವ ಮತ್ತು ವಿರೋಧ ಪಕ್ಷದವ ಮುಖಾ ಮುಖಿಯಾದಾಗ. ನೂರಾರು ಪಕ್ಷಗಳಿವೆ ನಮ್ಮ ದೇಶದಲ್ಲಿ, ಒಂದೇ ಒಂದು ಪಕ್ಷಕ್ಕಾದರೂ ತಾನು ಸಾಚಾ ಎಂದು ಎಡೆ ತಟ್ಟಿ ಹೇಳುವ ವಿಶ್ವಾಸ, ಸ್ಥೈರ್ಯ ಇದೆಯೇ? ಆ ಸ್ಥೈರ್ಯ, ವಿಶ್ವಾಸ ಮೊದಲೂ ಮೂಡಲಿ ನಮ್ಮ ಪಕ್ಷಗಳಲ್ಲಿ, ಆಗ ಉದಯವಾಗಲಿ ಸಶಕ್ತ, ಅಭಿಮಾನೀ ಭಾರತ.

ಅಲ್ಲಿಯವರೆಗೆ ನಾನು ನೀವು ಒಂದು ಚಾತಕ ಪಕ್ಷಿ.

ಮೋದಿಗೆ ಸಿಕ್ಕಿತು ಟ್ರಾವಲ್ ಪರ್ಮಿಟ್

ಗುಜರಾತ್ ನಲ್ಲಿ ನಡೆದ ನರಮೇಧಕ್ಕೆ ನರೇಂದ್ರ ಮೋದಿ ಕಾರಣ ಎಂದು ಭಾರತೀಯರೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ಭಾವನೆಗೆ ಪೂರಕವಾಗಿ ಅಮೇರಿಕಾ ಮತ್ತು ಇಂಗ್ಲೆಂಡ್ ದೇಶಗಳು ಮೋದಿ ತಮ್ಮ ದೇಶಕ್ಕೆ ಕಾಲಿಡಲು ಅನುಮತಿ ನಿರಾಕರಿಸಿದ್ದವು. ಭಾರತದ ಒಳಗೂ ಈ ನಿಲುವಿಗೆ ಸಹಮತ ಸಹ ವ್ಯಕ್ತವಾಗಿತ್ತು. ಕಳೆದ ಬಿಹಾರದ ಚುನಾವಣೆಯ ಸಮಯ ಭಾಜಪದ ಪರವಾಗಿ ನರೇಂದ್ರ ಮೋದಿ ಬಿಹಾರಕ್ಕೆ ಬರುವ ವಿಷಯ ತಿಳಿದ ಅಲ್ಲಿನ ಮುಖ್ಯಮಂತ್ರಿ ನೀತೀಶ್ ಕುಮಾರ್ ತಮ್ಮ ರಾಜ್ಯಕ್ಕೆ ಆತ ಕಾಲಿಡ ಕೂಡದು ಎಂದು ತಾಕೀತು ಮಾಡಿ ವಿವಾದಕ್ಕೆ ಒಳಗಾಗಿದ್ದರು. ಮೋದಿ ಇಲ್ಲದೆಯೇ ಅಲ್ಲಿನ ಚುನಾವಣೆಯನ್ನ ಭಾಜಪ – ನಿತೀಶ್ ಪಕ್ಷದ ಒಕ್ಕೂಟ ಜಯಿಸಿತ್ತು. ಹೊರದೇಶಗಳಲ್ಲೂ, ಸ್ವದೇಶದಲ್ಲೂ ಈ ತೆರನಾದ ಅಭಿಪ್ರಾಯ ನರೇಂದ್ರ ಮೋದಿ  ಬಗ್ಗೆ ಇರುವಾಗ ಮೋದಿಯಾಗಲೀ ಭಾಜಪ ವಾಗಲೀ ಆತ್ಮಾವಲೋಕನ ಏಕೆ ಮಾಡಿಕೊಳ್ಳುತ್ತಿಲ್ಲ ಎನ್ನುವುದೇ ಒಂದು ಒಗಟು.  ಸುಖಾಸುಮ್ಮನೆ ಯಾರನ್ನೂ ನಮ್ಮ ಮನೆ ಕಡೆ ತಲೆ ಹಾಕಬೇಡ ಎಂದು ಯಾರೂ  ತಾಕೀತು ಮಾಡೋಲ್ಲ. ನಮ್ಮ ದೇಶದ ಚರಿತ್ರೆಯಲ್ಲಿ ಈ ರೀತಿಯ ಸನ್ನಿವೇಶವನ್ನು ಎದುರಿಸುವಂಥ ಪರಿಸ್ಥಿತಿಗೆ ಒಳಗಾದ ಒಬ್ಬನೇ ಒಬ್ಬ  ರಾಜಕಾರಣಿಯ ಹೆಸರು ನಮ್ಮ ನೆನಪಿಗೆ ಬರುವುದೇ?

ಗುಜರಾತ್ ರಾಜ್ಯದ ಹೆಸರು ಕೇಳಿದ ಕೂಡಲೇ ನಮ್ಮ ಕಣ್ಣಿಗೆ ಎದುರಾಗೋದು ಮುಗ್ಧರ ಹತ್ಯೆ ಮತ್ತು ಆಕ್ರಂದನ. ಗುಜರಾತ್ ನ ಮೇಲಿನ ಈ ಕಳಂಕ ವನ್ನು ತೊಡೆದು ಹಾಕಲು ಮೋದಿಯ ಅಂತರ್ಜಾಲ ಅಭಿಮಾನೀ ಸಮುದಾಯ ಹಗಲೂ ರಾತ್ರಿ ಶ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿದ್ದೇ. ಗುಜರಾತ್ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ, ಅಂಥ ರಾಜ್ಯ ಈ ದೇಶದಲ್ಲೆಂದೂ ಉದಯಿಸಿಲ್ಲ ಎಂದು ಟಾಮ್ ಟಾಮ್ ಮಾಡಿದ್ದೆ ಮಾಡಿದ್ದು. ಇದು ಪೊಳ್ಳು ಮತ್ತು ಸುಳ್ಳುಗಳ propaganda ಎಂದು ಭಾರತೀಯರಿಗೆ ಮನವರಿಕೆ ಆಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಗುಜರಾತ್ ನ ಅಭಿವೃದ್ಧಿ ಒಂದು myth ಎಂದು ಈಗ ವೇದ್ಯವಾಯಿತು. ಗುಜರಾತ್ ಗಿಂತ ಅಭಿವೃದ್ಧಿಯ ಪಥದಲ್ಲಿ ಬಿಹಾರ ದಾಪುಗಾಲು ಹಾಕುತ್ತಿದೆ. 

ನರೇಂದ್ರ ಮೋದಿ ಯನ್ನು ಯಾವ ಕಾರಣಕ್ಕೆ ಮತ್ತು ಉದ್ದೇಶಕ್ಕೆ  ಹೊಗಳಲಾಗುತ್ತಿದೆ, ಪ್ರಧಾನಿ ಹುದ್ದೆಗೆ ನಾಮಕರಣ ಮಾಡಲು ಉತ್ಸುಕತೆ, ಉತ್ಸಾಹ ತೋರಿ ಬರುತ್ತಿದೆ ಎಂದು ತಿಳಿಯದಷ್ಟು ಮೂಢ ನಲ್ಲ ಭಾರತೀಯ. ಗುಜರಾತ್ ಮು. ಮಂತ್ರಿಯ ಮೇಲಿನ ಪ್ರಯಾಣದ ನಿರ್ಬಂಧವನ್ನು ತೆಗೆದ ಇಂಗ್ಲೆಂಡ್ ದೇಶದ ಈ ಕ್ರಮ ಎಷ್ಟು ವಿವೇಚನಾಪೂರ್ಣ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ ವ್ಯಾಪಾರದ ಹಿತದೃಷ್ಟಿಯ ಮುಂದೆ ಮಾನವೀಯ ಮೌಲ್ಯಗಳು ಗೌಣ ಎಂದು ಇಂಗ್ಲೆಂಡ್ ದೇಶಕ್ಕೆ ಅನ್ನಿಸಿದರೆ ಅದು ಅವರಿಗೆ ಬಿಟ್ಟ ಆಯ್ಕೆ. ಅವರ ಹಿತ್ತಲಿನಲ್ಲೇ ನಡೆದ ಯಹೂದ್ಯರ ವಿರುದ್ಧ ನಡೆದ ಸಾಮೂಹಿಕ ನರಸಂಹಾರದ ಅನುಭವ ಇರುವ ದೇಶ ಇಂಗ್ಲೆಂಡ್. ಅವರಿಗೆ ನಾವು ಪಾಠ ಹೇಳುವ ಅಗತ್ಯ ಇಲ್ಲ. ನರೇಂದ್ರ ಮೋದಿಯನ್ನು ಗುಜರಾತ್ ನ ಮುಸ್ಲಿಮರು ಕ್ಷಮಿಸಿದ್ದಾರೆ. ಉತ್ತರ ಪ್ರದೇಶದ ‘ದೇವೋ ಬಂದ್’ ಇಸ್ಲಾಮೀ ಸಂಸ್ಥೆಯ ‘ಮೌಲಾನ ವಾಸ್ತಾನ್ವಿ’ ಕೂಡಾ ಹಳತನ್ನು ಮರೆತು ಮುನ್ನಡೆಯುವ ಮಾತನ್ನಾಡಿದ್ದಾರೆ. ಆದರೂ ಮನುಷ್ಯ ನಿರ್ದೋಷಿ ಯಾಗಿದ್ದರೆ ತನ್ನ ಹೆಸರಿಗೆ ಅಂಟಿದ ಕಳಂಕವನ್ನು ತೊಡೆಯುವ ಶತಾಯ ಗತಾಯ ಪ್ರಯತ್ನಿಸ ಬೇಕು, ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕು. ಈ ನಿಟ್ಟಿನಲ್ಲಿ ಗುಜರಾತಿನ ಮುಖ್ಯಮಂತ್ರಿ ತೊಡಗಿಸಿಕೊಂಡರೆ ‘feeling of closure’ ನ ಅವಕಾಶ ಭಾರತೀಯರಿಗೆ ಆತ ಕೊಟ್ಟಂತಾಗುತ್ತದೆ. ಆ ಕಾಲ ನಿಜಕ್ಕೂ ಬರಬಹುದೇ?            

ತಾಲಿಬಾನಿಗಳ ಅಟ್ಟಹಾಸಕ್ಕೆ ಕೊನೆ ಎಂದು?

ಮಲಾಲಾ. ನಾನು, ನೀವು ದಿನವೂ ನೋಡುವ, ಪುಸ್ತಕಗಳ ಹೊರೆಯೊಂದಿಗೆ ಕಣ್ಣುಗಳಲ್ಲಿ  ಕನಸನ್ನು ಹೊತ್ತು ಶಾಲೆಯ ಕಡೆ ದೃಢ ಹೆಜ್ಜೆ ಇಡುವ ಬಾಲಕಿಯರ ಹಾಗೆ ೧೫ ವರ್ಷದ ಓರ್ವ ಹೆಣ್ಣು ಮಗಳು.

ಪಾಕಿಸ್ತಾನದ ರಮಣೀಯ ನಿಸರ್ಗ ಪ್ರಾಂತ್ಯ ‘ಸ್ವಾತ್’ ಕಣಿವೆ ಪ್ರದೇಶವನ್ನು ವಶಪಡಿಸಿ ಕೊಂಡಿದ್ದ ತಾಲಿಬಾನ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ನಾಲ್ಕು ನೂರು ಮೈಲು ಗಳ ವರೆಗೆ ತಲುಪಿದ್ದರು. ಭಾರೀ ಹೋರಾಟದ ನಂತರ ಪಾಕಿ ಸೈನ್ಯ ತಾಲಿಬಾನಿಗಳನ್ನು ಹಿಮ್ಮೆಟ್ಟಿ ಕಣಿವೆಯನ್ನು ವಶ ಪಡಿಸಿಕೊಂಡಿದ್ದರು. ಆದರೂ ತಾಲಿಬಾನಿಗಳ ಪ್ರಭಾವ ಕಡಿಮೆಯಾಗಲಿಲ್ಲ. ಕಾದಾಟ ತಾಲಿಬಾನಿಗಳ ಕಸುಬು, ಅಸ್ತ್ರ ಶಸ್ತ್ರಗಳು ಇವರ ಆಹಾರ, ಮಾನವ ಸಂಸ್ಕಾರಕ್ಕೆ ವಿರುದ್ಧವಾದ ನಡವಳಿಕೆ ಇವರ ಉಸಿರು. ಇವೆಲ್ಲವೂ ಮಿಳಿತವಾದಾಗ ವಿಶ್ವಕ್ಕೆ ಲಭ್ಯ ಅರಾಜಕತೆ, ಕ್ರೌರ್ಯ, ಅಟ್ಟಹಾಸ. ಇವರನ್ನು ಬಲಿ ಹಾಕಲು ಪಾಕಿಸ್ತಾನದಿಂದ ಹಿಡಿದು ಅಂತಾರಾಷ್ಟ್ರೀಯ ಸಮುದಾಯದರೆಗೆ ಯಾರಿಗೂ ಇಚ್ಛೆಯಿಲ್ಲ. ಇದೂ ಒಂದು ರೀತಿಯ ರಾಜಕಾರಣ. ತಾನೇ ಪೋಷಿಸಿದ ಶಿಶು ರಾಕ್ಷಸನಾಗಿ ವರ್ತಿಸಲು ತೊಡಗಿದಾಗ ಅಮೇರಿಕಾ ಎಚ್ಚೆತ್ತು ಅವರನ್ನು ಹದ್ದು ಬಸ್ತಿಗೆ ತರಲು ಯತ್ನಿಸಿತು. ಇದರ ನಡುವೆ ತಾಲಿಬಾನಿಗಳೊಂದಿಗೆ ಚರ್ಚೆ ಕೂಡಾ. ಏಕೆಂದರೆ ಇವರನ್ನು ಸಂಪೂರ್ಣ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕೆಗೆ ಇತಿಹಾಸದ ಪಾಠಗಳು ನೆನಪು ಮಾಡುತ್ತವೆ. ಈ ದ್ವಂದ್ವಗಳ ನಡುವೆ ತಾಲಿಬಾನ್ ತನಗೆ ತೋಚಿದ ರೀತಿಯಲ್ಲಿ ವರ್ತಿಸುತ್ತದೆ. ಇವರಿಗೆ ಹೆಣ್ಣುಮಗಳು ಎಂದರೆ ಮನೆಯ ನಾಲ್ಕು ಗೋಡೆಗಳ ಮಧ್ಯೆ, ಶಿಕ್ಷಣ ಪಡೆಯದೇ ಬದುಕಬೇಕಾದ ಹೆರುವ ಯಂತ್ರಗಳು. ಯಾರಾದರೂ ಧೈರ್ಯ  ಮಾಡಿ ಶಾಲೆಗೆ ಹೋಗುತ್ತೇವೆ ಎಂದರೆ ಮೊದಲು ಬೆದರಿಕೆ, ನಂತರ ಬಂದೂಕು. ಮಲಾಲಾ ಎನ್ನುವ ಪೋರಿಗೆ ಸಿಕ್ಕಿದ್ದು ಇವೆರಡು. ಬೆದರಿಕೆಗೆ ಸೊಪ್ಪು ಹಾಕದೆ ಶಾಲೆಯ ಕಡೆ ನಡೆಯುತ್ತಿದ್ದ ಈಕೆ ತಾಲಿಬಾನಿಗಳಿಗೆ ಕಣ್ಣುರಿ ತರುತ್ತಿದ್ದಳು. ಇಷ್ಟೊಂದು ಚಿಕ್ಕ ಹುಡುಗಿ ತಮ್ಮಂಥ ರಾಕ್ಷಸರನ್ನು ಎದುರಿಸುತ್ತಿದ್ದಾಳಲ್ಲ ಎಂದು. ಬೆದರಿಕೆ ಫಲಿಸದಾದಾಗ ಬಂದೂಕು ಚಲಾಯಿಸಿದರು. ತಲೆಯನ್ನ  ಹೊಕ್ಕು ಹೊರಬಂದ ಗುಂಡು ಸಹ ಮಲಾಲಾ ಳನ್ನು ಕೊಲ್ಲಲು ನಿರಾಕರಿಸಿತು. ಅದ್ಭುತವಾಗಿ ಸಾವಿನಿಂದ ಪಾರಾದ ಮಲಾಲಾ ಹೆಚ್ಚುವರಿ ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲು ಅರಬ್ ಸಂಯುಕ್ತ ಸಂಸ್ಥಾನಗಳ ಆಳುವ ಕುಟುಂಬದ ಕಡೆಯಿಂದ ‘ಏರ್ ಅಂಬುಲೆನ್ಸ್’ ನ ನೆರವು ಸಿಕ್ಕಿತು. ಈಕೆಯ ಚಿಕತ್ಸೆ ಫಲಕಾರಿಯಾಗಲು ಇಡೀ ವಿಶ್ವ ದೇವರನ್ನು ಬೇಡುತ್ತಿದೆ.

ಮಲಾಲಳ ಮೇಲಿನ ಹಲ್ಲೆಯನ್ನು ಖಂಡಿಸುತ್ತಾ ಪಾಕಿಸ್ತಾನದ ರಾಜಕಾರಣಿ ಹೇಳಿದ್ದು, ತಾಲಿಬಾನ್ ಕರಾಳ ಶಕ್ತಿಗಳ ಗುಂಪಾಗಿದ್ದು, ಧರ್ಮ ಸಂಸ್ಕಾರ ವಿಹೀನರು ಎಂದು ಕಟುವಾಗಿ ಟೀಕಿಸಿದರು. ಮಲಾಲಾಳ ಮೇಲಿನ ಹಲ್ಲೆಕೋರರನ್ನು ಹಿಡಿದು ಕೊಟ್ಟವರಿಗೆ ಒಂದು ಕೋಟಿ ರೂಪಾಯಿಯ ಬಹುಮನವನ್ನು ಪಾಕ್ ಘೋಷಿಸಿದೆ.

ಮಹಿಳೆಯರಿಗೆ ಶಿಕ್ಷಣ ಕೂಡದು ಎನ್ನುವ ಐಡಿಯಾ ತಾಲಿಬಾನ್ ಗೆ ಕೊಟ್ಟವರಾರು ಎನ್ನುವುದು ತಿಳಿಯುತ್ತಿಲ್ಲ. ವೇಷದ ಸಹಾಯದಿಂದ ಮುಸ್ಲಿಮರ ಥರ ಕಾಣುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸುವ ದುಷ್ಟ ಶಕ್ತಿಗಳ ಸಂಗಮ ‘ತಾಲಿಬಾನ್’ ವರ್ತನೆಗೂ ಇಸ್ಲಾಂ ನ ಜನ್ಮ ಸ್ಥಳ ಸೌದಿ ಅರೇಬಿಯಾದ ನೀತಿಗೂ ಇರುವ ವ್ಯತ್ಯಾಸ ನೋಡಿ. ಇಸ್ಲಾಂ ನ  ತವರೂರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ  ರಾಜಕುಮಾರಿ ‘ನೂರಾ ಬಿಂತ್ ಅಬ್ದುಲ್ ರಹಮಾನ್’ ಮಹಿಳಾ ವಿಶ್ವವಿದ್ಯಾಲಯ ವಿಶ್ವದಲ್ಲೇ ಅತಿ ದೊಡ್ಡದು. 30 ಲಕ್ಷ ಚದರ ಮೀಟರುಗಳ ವಿಸ್ತೀರ್ಣದ ಈ ವಿಶ್ವ ವಿದ್ಯಾಲಯದಲ್ಲಿ ೨೬,೦೦೦ ವಿದ್ಯಾರ್ಥಿನಿಯರು ಕಲಿಯಬಹುದು. ವಿಶ್ವದ ಪ್ರತಿಭಾವಂತ ಪ್ರೊಫೆಸರ್ ಗಳನ್ನ ಆಕರ್ಷಿಸಲು ಸೌದಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತಿದೆ. ಈಗಿನ ರಾಜ ಅಬ್ದುಲ್ಲಾ ರ ಕನಸಿನ ಪ್ರಾಜೆಕ್ಟ್ ಈ ವಿಶ್ವವಿದ್ಯಾಲಯ.

ಹಲವು ಮುಸ್ಲಿಂ ದೇಶಗಳ ಪ್ರಧಾನಿಗಳಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮುಸ್ಲಿಂ ಮಹಿಳೆಯರಿಗೆ ತಮ್ಮ ದೇಶಗಳಲ್ಲಿ ಧಾರ್ಮಿಕ ಪಂಡಿತರಿಂದ ಯಾವುದೇ ತೊಡಕಾಗಲೀ, ಫತ್ವಾ ಗಳಾಗಲೀ ಎದುರಾಗಲಿಲ್ಲ. ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಈಜಿಪ್ಟ್ ದೇಶದ ಆಡಳಿತಗಾರ್ತಿಯಾಗಿ  ರಾಣಿ ‘ಶಜರ್ ಅಲ್-ದುರ್’ ಯಶಸ್ವಿಯಾಗಿದ್ದಳು. ವಿಧವೆಯಾಗಿದ್ದ ಈಕೆ ಕ್ರೈಸ್ತರ ಏಳನೆ ಧರ್ಮಯುದ್ಧ (ಕ್ರುಸೇಡ್) ದ ಮೇಲೆ ವಿಜಯ ಸಾಧಿಸಿದ್ದಳು.

ಪ್ರವಾದಿ ಮುಹಮ್ಮದರ ಪತ್ನಿ ‘ಆಯಿಷಾ’ ರಿಂದ ಪ್ರವಾದಿ ಅನುಚರರು ಅತೀ ಹೆಚ್ಚಿನ ಪ್ರವಾದಿ ವಚನಗಳನ್ನು ಸಂಗ್ರಹಿಸಿದ್ದರು. ಧರ್ಮದ ಅಥವಾ ರಾಜಕಾರಣದ ಯಾವುದೇ ವಿಷಯದಲ್ಲೂ ಅನುಮಾನ ಗಳು ತಲೆದೋರಿದಾಗ ಪ್ರವಾದೀ ಅನುವರ್ತಿಗಳು ಆಯಿಷಾ ರ ಗುಡಿಸಿಲಿನ ಕಡೆ ಧಾವಿಸುತ್ತಿದ್ದರು. ತನ್ನ ಮನೆಯ ಅಂಗಳದಲ್ಲಿ ಧರ್ಮ ಬೋಧನೆ ನಡೆಸುತ್ತಿದ್ದ ಆಯಿಷಾ ರಿಗೆ ವಿಶ್ವದ ಮೊಟ್ಟ ಮೊದಲ ‘ಮದ್ರಸಾ’ ದ ಸ್ಥಾಪಕರು ಎನ್ನುವ ಖ್ಯಾತಿ.

ಪ್ರವಾದಿಗಳ ನಿಧನಾ ನಂತರ ‘ಖಲೀಫಾ ಉಸ್ಮಾನ್’ ಪವಿತ್ರ ಕುರ್’ಆನ್ ಗ್ರಂಥವನ್ನು ಬರಹದ ರೂಪದಲ್ಲಿ ತರಲು ತೀರ್ಮಾನಿಸಿ ಪ್ರಥಮ ಆವೃತ್ತಿಯನ್ನು ದಿವಂಗತ ಖಲೀಫಾ ಉಮರ್ ರವರ ಪುತ್ರಿಗೆ ಗ್ರಂಥವನ್ನು ಸುರಕ್ಷಿತವಾಗಿ ಇಡುವ ಜವಾಬ್ದಾರೀ ನೀಡಿದ್ದರು. ಮಹಿಳೆಯರಿಗೆ ಈ ಜವಾಬ್ದಾರೀ ನೀಡಬಾರದು ಎನ್ನುವ ಪರಿಕಲ್ಪನೆ ಅವರಲ್ಲಿರಲಿಲ್ಲ. ಮಹಿಳೆಯ ‘ವಧುದಕ್ಷಿಣೆ’ ವಿಷಯದಲ್ಲಿ ಖಲೀಫಾ ಉಮರ್ ತಪ್ಪಾದ ನಿರ್ಣಯ ನೀಡುವುದನ್ನು ಗಮನಿಸಿದ ಮಹಿಳೆಯೊಬ್ಬಾಕೆ ಕುರ್’ಆನ್ ಗ್ರಂಥದ ಆಧಾರದಲ್ಲಿ ಆ ತಪ್ಪನ್ನು ತಿದ್ದಿದಾಗ ಒಪ್ಪಿಕೊಂಡ ಖಲೀಫಾ ಉಮರ್ ಹೇಳಿದ್ದು, ಈ ಮಹಿಳೆ ಖಲೀಫಾನ ಮೇಲೆ ಗೆಲುವು ಸಾಧಿಸಿದಳು ಎಂದು.

ಈ ಮೇಲಿನ ಉದಾಹರಣೆಗಳೊಂದಿಗೆ ಇಸ್ಲಾಂ ಮಹಿಳೆಗೆ ಕೊಡಮಾಡಿದ ಹಕ್ಕುಗಳನ್ನು ನೋಡಿದಾಗ ತಾಲಿಬಾನ್ ಯಾವುದೇ ರೀತಿಯಲ್ಲಿ ಇಸ್ಲಾಂ ನ ಆದರ್ಶಗಳಿಗೆ ಪ್ರತಿ ಸ್ಪಂದಿಸದೆ ಕೇವಲ ಸ್ತ್ರೀ ಧ್ವೇಷಿ ಮತ್ತು ನರಸಂಹಾರಕ ಸ್ಯಾಡಿಸ್ಟ್ ಗಳ ಒಂದು ರಾಕ್ಷಸೀ ಸಂಘಟನೆ ಎಂದು ಹೇಳಬಹುದು. ಆಫ್ಘಾನಿಸ್ಥಾನ ದ ರಷ್ಯನ್ ಸೈನ್ಯವನ್ನು, ಕಮ್ಯುನಿಸ್ಟ್ ಪ್ರಭಾವವನ್ನು ಮಟ್ಟ ಹಾಕಲು, ತಾಲಿಬಾನ್ ನ ಸಹಾಯ ಪಡೆದ ಅಮೇರಿಕಾ ತಾಲಿಬಾನ್ ನ ಶಕ್ತಿಗೆ ಬೆನ್ನೆಲುಬಾಗಿ ನಿಂತಿದ್ದೆ ಒಂದು ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು. ಕಮ್ಯುನಿಷ್ಟ್ ನ ನಿರ್ನಾಮದೊಂದಿಗೆ ‘ಇಸ್ಲಾಮಿಸ್ಟ್’ ಎನ್ನುವ ಭಸ್ಮಾಸುರ ನ ಸೃಷ್ಟಿಗೂ ಅಮೇರಿಕಾ ಕಾರಣಕರ್ತವಾಯಿತು. ತಾಲಿಬಾನ್ ಶಕ್ತಿಗಳ ನಿಗ್ರಹ ಮತ್ತು ಸಂಪೂರ್ಣ ನಿರ್ಮೂಲನೆ ನಾಗರೀಕ ಸಮಾಜದ ಆದ್ಯ ಕರ್ತವ್ಯ ವಾಗಬೇಕು. ಮಲಾಲಾ ಳ ಮೇಲೆ ನಡೆದ ವಿವೇಚನಾ ರಹಿತ ಕ್ರೂರ ಹಲ್ಲೆ ವಿಶ್ವದಾದ್ಯಂತ ನಾಗರೀಕ ಸಮಾಜವನ್ನು ಭೀತ ಗೊಳಿಸಿದರೂ ಸ್ವಾತ್ ಕಣಿವೆಯ ಹೆಣ್ಣು ಮಕ್ಕಳು ಮಾತ್ರ ತಾವು ತಾಲಿಬಾನ್ ಸೈತಾನಕ್ಕೆ ಬೆದರುವ ಹೆಣ್ಣುಮಕ್ಕಳಲ್ಲ ಎಂದು ಈ ಹೇಳಿಕೆಯೊಂದಿಗೆ ಸಾರಿದರು – “ಸ್ವಾತ್” ಕಣಿವೆಯ ಪ್ರತಿಯೊಬ್ಬ ಹೆಣ್ಣು ಮಗಳೂ ಓರ್ವ ಮಲಾಲಾ, ನಾವು ವಿದ್ಯೆ ಪಡೆದೇ ಸಿದ್ಧ, ಅವರು ನಮ್ಮನ್ನು ಸೋಲಿಸಲಾರರು” – ದಿಟ್ಟ ಮಾತುಗಳು ಮಲಾಲಾ ಳ ಗೆಳತಿಯರಿಂದ.

ಮಲಾಲಾ ಹೆಸರಿನ ಆರ್ಥ ಶೌರ್ಯ, ಧೈರ್ಯ, ‘ಪುಷ್ತು’ ಭಾಷೆಯಲ್ಲಿ. ರಾಕ್ಷಸರಿಗೆ ಹೆದರದೆ ಹೆಸರಿಗೆ ತಕ್ಕಂತೆ ನಡೆದುಕೊಂಡ ಮಾಲಾಲಾಳಿಗೆ ಅವಳ ದಿಟ್ಟ ಹೋರಾಟಕ್ಕೆ ಶುಭ ಹಾರೈಸೋಣ.

 

 

ಈ ಮರದ ಒಳಗೆ ಮನೆಯ ಮಾಡಿ..

ಊಹಿಸಿ, ಈ ಮರದ ಒಳಗೊಂದು ಮನೆ? ಎಷ್ಟೊಂದು cozy ಆಲ್ವಾ? ಈ ‘ಓಕ್’ ಮರದ ಕೆಳಗೆ ಸೇಬಿನ ಹಣ್ಣು ತಿನ್ನುತ್ತಿರುವಾಗಲಂತೆ ರಾಜಕುಮಾರಿ ಎಲಿಜಬೆತ್ ಗೆ ಸಂದೇಶ ಬಂದಿದ್ದು, ‘ನಿನ್ನ ಅಕ್ಕ ಮೇರಿ ತೀರಿಕೊಂಡಳು, ಈಗ ನೀನು ಇಂಗ್ಲೆಂಡ್ ದೇಶದ ರಾಣಿ ಎಂದು.

ಎಲಿಜಬೆತ್ ಗೆ ಪಟ್ಟ ಕೊಡಿಸಿದ ಈ ಮರ ಇಂಗ್ಲೆಂಡ್ ದೇಶದ ಹರ್ಟ್ ಫರ್ಡ್ಸ್ ಶೈರ್ ನಲ್ಲಿನ  ಹ್ಯಾಟ್ ಫೀಲ್ಡ್ ಹೌಸ್ ನಲ್ಲಿದೆ.

ನಾಣ್ಯಕ್ಕೆ ಮತ್ತೊಂದು ಮುಖ

ಅಮೆರಿಕೆಯ ವಿರುದ್ಧ ನಡೆದ ವೈಮಾನಿಕ ಧಾಳಿಯ ವಾರ್ಷಿ ಕ ದಂದು ಪ್ರವಾದಿ ಮುಹಮ್ಮದರ ಮೇಲೆ ಅವಹೇಳನಕಾರೀ ವೀಡಿಯೊ ‘ಯೂ ಟ್ಯೂಬ್’ ಗಳಲ್ಲಿ ರಾರಾಜಿಸಿ ದೊಡ್ಡ ಅಂತಾರಾಷ್ಟ್ರೀಯ ವಿವಾದ ಸೃಷ್ಟಿಯಾಯಿತು. ಪ್ರತಿಭಟನಾರ್ಥವಾಗಿ  ಲಿಬ್ಯಾದ ಬೆಂಗಾಜಿ ಯಲ್ಲಿ ಅಮೇರಿಕನ್ ದೂತಾವಾಸದ ಮೇಲೆ ನಡೆದ ಆಕ್ರಮಣದಲ್ಲಿ ಅಮೆರಿಕೆಯ ರಾಯಭಾರಿಯನ್ನು ಮತ್ತು ಇತರೆ ಮೂರು ಅಮೆರಿಕನ್ನರನ್ನು ರಾಕೆಟ್ ಧಾಳಿ ನಡೆಸಿ ಕೊಲ್ಲಲಾಯಿತು. ಅಮೇರಿಕನ್ ರಾಯಭಾರಿ ಮುಅಮ್ಮರ್ ಗದ್ದಾಫಿ ವಿರುದ್ಧದ ಹೋರಾಟದಲ್ಲಿ ಲಿಬ್ಯನ್ನರ ಬೆಂಬಲಕ್ಕೆ ನಿಂತಿದ್ದವರು. ವೀಡಿಯೊಗೂ ಅವರಿಗೂ ಯಾವ ಸಂಬಂಧವೂ ಇರಲಿಲ್ಲ. ಅವರ ಹತ್ಯೆಯಿಂದ ಅಮೆರಿಕೆಗೂ ಲಿಬ್ಯಾಕ್ಕೂ ತೀವ್ರ ಆಘಾತವಾಗಿ ಲಿಬ್ಯಾದ ಸರಕಾರ ಅಮೆರಿಕೆಯ ಕ್ಷಮೆ ಕೇಳಿ ಕೊಲೆಗಡುಕರನ್ನು ಶೀಘ್ರದಲ್ಲೇ ಹಿಡಿಯುವುದಾಗಿ ಭರವಸೆ ನೀಡಿತು. ಈ ಭೀಕರ ಘಟನೆ ಮತ್ತು ವೀಡಿಯೊ ವಿವಾದದ ಬಗ್ಗೆ ಅಮೆರಿಕೆಯ

NPR ರೇಡಿಯೋದಲ್ಲಿ ಒಂದು ಕಾರ್ಯಕ್ರಮ ಪ್ರಸಾರ ವಾಯಿತು. “ನೀಲ್ ಕೋನನ್” ನಡೆಸಿಕೊಡುವ ‘ಟಾಕ್ ಆಫ್  ದಿ ನೇಶನ್’ ಒಂದು ಜನಪ್ರಿಯ ಕಾರ್ಯಕ್ರಮ. ಪಂಡಿತರು, ಶ್ರೋತೃಗಳೂ ಪಾಲುಗೊಳ್ಳುವ ಈ ಚರ್ಚಾ ಕಾರ್ಯಕ್ರಮ ಸ್ವಾರಸ್ಯಕರ ವಾಗಿರುತ್ತದೆ. ವೀಡಿಯೊ  ಮತ್ತು ರಾಯಭಾರಿಯ ಹತ್ಯೆ ಯ ಮೇಲೆ ನಡೆದ ಕಾರ್ಯಕ್ರಮವನ್ನ ಆಲಿಸುತ್ತಿದ್ದ ಮಹಿಳಾ ಶ್ರೋತೃವೊಬ್ಬರು ಕೇಳಿದ ಪ್ರಶ್ನೆ ಹೀಗಿತ್ತು. “ಲಿಬ್ಯಾದ ಬೆನ್ಗಾಜಿಯಲ್ಲಿ ನಡೆದ ಭೀಭತ್ಸ ಘಟನೆ ಬಗ್ಗೆ ಓದುತ್ತಿದ್ದೇವೆ, ಕೇಳುತ್ತಿದ್ದೇವೆ. ಅತ್ಯಂತ ದಾರುಣ ಈ ಘಟನೆ. ಈ ಘಟನೆಯ ಸಮಯ ರಾಯಭಾರಿಯ ಮೇಲೆ ಧಾಳಿ ನಡೆದಾಗ ಲಿಬ್ಯಾದವರು ರಾಯಭಾರಿಯನ್ನು ರಕ್ಷಿಸಲು ಹೋರಾಡಿದರು, ಸಾವು ನೋವುಗಳೂ ಆದವು, ಆದರೆ ಇದರ ಬಗ್ಗೆ ನಾವು ಮಾತನಾಡುತ್ತಿಲ್ಲ, ಇದು ಸರಿಯಲ್ಲ, ಲಿಬ್ಯನ್ನರ ಸಹಾಯವನ್ನೂ ನಾವು ಸ್ಮರಿಸಬೇಕು” ಎಂದು ಹೇಳಿದಾಗ ನನಗೆ ಅಚ್ಚರಿಯಾಯಿತು. ತನ್ನ ದೇಶದವರ ವಿರುದ್ಧ ನಡೆದ ಧಾಳಿಯ ಸಮಯದಲ್ಲೂ ಬೇರೊಬ್ಬರ ತ್ಯಾಗ, ಧೈರ್ಯ ದ ಬಗ್ಗೆ ಮೆಚ್ಚುಗೆ ಸೂಸಲು ಕ್ಯಾಲಿಫೋರ್ನಿಯಾ ಮೂಲದ ಈ ಅಮೇರಿಕನ್ ಮಹಿಳೆ ಒತ್ತಾಯ ಮಾಡುತ್ತಿದ್ದಾಳಲ್ಲ ಎಂದು. ಈ ಮಹಿಳೆಯ ಮಾತು ಕೇಳಿದ ಬೆಂಗಾಜಿಯಿಂದ ‘ಆನ್ ಲೈನ್’ ಇದ್ದ ಬಾತ್ಮೀದಾರ ಹೇಳಿದ್ದು, ‘ಹೌದು, ಲಿಬ್ಯನ್ನರು ಬಹು ಧೈರ್ಯದಿಂದ ಹೋರಾಡಿದರು. ರಾಯಭಾರಿಯನ್ನು ಉಳಿಸುವ ಪ್ರಯತ್ನ ಮಾಡಿದರು, ಅಷ್ಟೇ ಅಲ್ಲ ಈ ಧಾಳಿಯ ವಿರುದ್ಧ ಇಂದು ಸಂಜೆ ಒಂದೆರಡು ಪ್ರತಿಭಟನಾ ಪ್ರದರ್ಶನಗಳೂ ನಡೆದವು’ ಎಂದು ವರದಿ ಮಾಡಿದ.

ಯಾವುದೇ ಘಟನೆಯ ಬಗ್ಗೆ ಓದುವಾಗ ನಾಣ್ಯಕ್ಕೆ ಮತ್ತೊಂದು ಮುಖ ಇದ್ದೇ ಇರುತ್ತದೆ ಎನ್ನುವ ಭಾವನೆ ನಮ್ಮೊಂದಿಗೆ ಇದ್ದರೆ ಆ  ಅಮೇರಿಕನ್ ಮಹಿಳೆಯ ಮನಸ್ಸಿನಲ್ಲಿ ಮೂಡಿದ ವಿಚಾರಗಳು ನಮ್ಮ ಮನಸ್ಸಿನಲ್ಲೂ ಮೂಡದೆ ಇರದು. ಎಲ್ಲದಕ್ಕೂ ಸಂಯಮ, ತಾಳ್ಮೆ, ವಿಚಾರ ಮಾಡುವ ಮನಸ್ಸು ಇದ್ದಾಗ ವಿಷಯ ಮತ್ತಷ್ಟು ತಿಳಿಯಾಗುವುದು.

ಇಂದೇ ಡ್ರಾ, ಗೆಲ್ಲಿರಿ ೫೦ ಕೋಟಿ

ಅಮೇರಿಕಾ. ಮಾಸ್ಟರ್ ಹಿರಿಯಣ್ಣಯ್ಯ ಡ್ರಾಮಾ ಕಂಪೆನಿ. ಬರೀ ತಂತ್ರಜ್ಞಾದಲ್ಲಿ ಮುಂದಲ್ಲ. ತಂತ್ರಗಾರಿಕೆಯಲ್ಲೂ ಮುಂದು. ಇಲ್ಲದಿದ್ದರೆ ವಿಶ್ವದ ‘ಹಿರಿಯಣ್ಣಯ್ಯ’ ನಾಗಿ ಮೆರೆಯಲು ಸಾಧ್ಯವೇ? ಮೊದಲು ವಿಶ್ವ ‘ಬೈ ಪೋಲಾರ್’ ಆಗಿತ್ತು. ಅಂದರೆ ಎರಡು ದೇಶಗಳ ಪಾರುಪತ್ಯ. ಅಮೇರಿಕಾ, ರಷ್ಯಾ ಒಬ್ಬರನ್ನೊಬ್ಬರು ಸಂಶಯದಿಂದ ನೋಡುತ್ತಾ, ಸಮಯ ಸಿಕ್ಕಾಗಲೆಲ್ಲಾ ಪರಸ್ಪರರಿಗೆ ಮದ್ದನ್ನು ಅರೆಯುತ್ತಾ ವಿಶ್ವದ balance ತಪ್ಪಿ ಹೋಗದಂತೆ ನೋಡಿ ಕೊಂಡಿದ್ದರು. ೮೦ ರ ದಶಕದಲ್ಲಿ ಅಂದಿನ ರಷ್ಯಾದ ಅಧ್ಯಕ್ಷ ಮಿಖಾಯಿಲ್ ಗೋರ್ಬಚೋಫ್ ರವರ perestroika, glasnost ನೀತಿಗಳ ಕಾರಣ ರಷ್ಯಾದ ಕಮ್ಯುನಿಸ್ಟ್ ಸರಕಾರ ಪತನಗೊಂಡು ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಇದರೊಂದಿಗೆ ರಷ್ಯಾದ ಹಿಡಿತ ವಿಶ್ವ ವಿದ್ಯಮಾನಗಳ ಮೇಲೆ ತಪ್ಪಿ ಅಮೇರಿಕಾ ಹಿರಿಯಣ್ಣ ನ ಪಟ್ಟ ಅಲಂಕರಿಸಿಕೊಂಡಿತು. ಅಲ್ಲಿಂದ ಶುರುವಾದ ದರ್ಬಾರು ಇದುವರೆಗೆ ಸಾಂಗವಾಗಿ ನಡೆದು ಬರುತ್ತಿದೆ. ತಂತ್ರ ಗಾರಿಕೆಯೊಂದಿಗೆ ಒಂದಿಷ್ಟು ಡ್ರಾಮಾ ಸಹ ಇದ್ದರೆ ತನ್ನ ಆಟಕ್ಕೆ ಯಾವ ಧಕ್ಕೆಯೂ ಬರದು ಎನ್ನುವ ತಿಳಿವಳಿಕೆಯೂ ಅಮೆರಿಕೆಗಿದೆ. ಅದಕ್ಕೆಂದೇ ಮಾಸ್ಟರ್ ಹಿರಿಯಣ್ಣಯ್ಯ ಡ್ರಾಮಾ ಕಂಪೆನಿ ಎಂದು ಹೇಳಿದ್ದು.   

“ಲಷ್ಕರ್ ಎ ತೈಬಾ” ಸಂಘಟನೆಯ ನಾಯಕ ಹಫೀಜ್ ಮುಹಮ್ಮದ್ ಸಯೀದ್ ನ ತಲೆಗೆ ೫೦ ಕೋಟಿ ರೂಪಾಯಿಗಳ ಬಹುಮಾನ ಘೋಷಿಸಿದ ಅಮೇರಿಕಾ ಭಾರತೀಯರಿಗೆ ಸಂತೋಷ ತಂದಿತು. ೧೦ ಮಿಲ್ಲಿಯನ್ ಡಾಲರ್. ಒಂದು ಕೋಟಿ ಡಾಲರ್. ಮುಂಬೈ ಮೇಲೆ ನಡೆದ ನರಸಂಹಾರಕ್ಕೆ ಹಫೀಜ್ ಸಯೀದ್ ನೇರ ಕಾರಣ ಎಂದು ಅಮೇರಿಕಾ ಈ ಕ್ರಮವನ್ನು ಘೋಷಿಸಿತು. ಮುಂಬೈ ಮೇಲೆ ಆಕ್ರಮಣ ನಡೆದಿದ್ದು, ದಕ್ಷ, ದಿಟ್ಟ  ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಸೇರಿದಂತೆ ೧೬೬ ಅಮಾಯಕ ಪ್ರಾಣಗಳು ಹೋಗಿದ್ದು ನವೆಂಬರ್ ೨೬, ೨೦೦೮ ರಲ್ಲಿ. ಮೂರೂವರೆ ವರ್ಷಗಳು ಬೇಕಾದವು ಅಮೆರಿಕೆಗೆ ಸಯೀದ್ ನ ವಿರುದ್ಧ ಕ್ರಮ ಜರುಗಿಸಲು. ಮುಂಬೈ ನರಸಂಹಾರ ನಡೆದ ಕೂಡಲೇ ಭಾರತ ಎಲ್ಲ ಪುರಾವೆಗಳನ್ನು ನೀಡಿಯೂ, ಅಮೇರಿಕಾ ಮಾತ್ರ ಸಾಂತ್ವನದ ಮಾತನ್ನು ಆಡಿತೆ ಹೊರತು ಪಾಕ್ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಆಫ್ಘಾನಿಸ್ತಾನದಲ್ಲಿ ತನ್ನ ಸೈನ್ಯಕ್ಕೆ ಪಾಕ್ ಸೈನ್ಯ ನೀಡುವ ಸಹಕಾರ ನಿಲ್ಲಬಹುದು ಎನ್ನುವ ಅಂಜಿಕೆಯಿಂದ ಮುಂಬೈ ಅಮಾಯಕರು ಅಮೆರಿಕೆಯ ಗಣನೆಗೆ ಬರಲಿಲ್ಲ. ಹಾಗಾದ್ರೆ ಈಗ ಏಕೆ ಅಮೆರಿಕೆಯ ಆಫರ್ ಸಯೀದ್ ಸಯೀದ್ ತಲೆಗೆ? ಒಬ್ಬ ನಿರ್ದೇಶಕನ ಡ್ರಾಮಾ ಗಳನ್ನು ಪಡೆ ಪಡೆ ನೋಡುವವನಿಗೆ ನಿರ್ದೇಶಕನ ಕಸುಬಿನ ಧಾಟಿ ತಿಳಿದು ಬಿಡುತ್ತದೆ. ಪ್ರಪಂಚ ಅಮೆರಿಕೆಯ ಎಷ್ಟು ಡ್ರಾಮಾಗಳನ್ನು ನೋಡಿರಲಿಕ್ಕಿಲ್ಲ? ಅಮೆರಿಕೆಯ ಸೈನ್ಯ ಕೆಲ ತಿಂಗಳುಗಳ ಹಿಂದೆ ಹತ್ತಾರು ಪಾಕ್ ಸೈನಿಕರನ್ನು ಪ್ರಮಾದವಶಾತ್ ಕೊಂದು ಹಾಕಿತ್ತು. ಪಾಕ್ ಉಗ್ರವಾಗಿ ಪ್ರತಿಭಟಿಸಿತು. ಗಾಯಕ್ಕೆ ಒಂದಿಷ್ಟು ಮುಲಾಂ (ಡಾಲರ್ ಮುಲಾಂ) ಬಳಿದ ನಂತರ ಪಾಕ್ ಸರಕಾರವೇನೋ ಸುಮ್ಮನಾಯಿತು, ಆದರೆ ಪಾಕ್ ನಲ್ಲಿ ವಿಜ್ರಂಭಿಸುತ್ತಿರುವ ಮೂಲಭೂತವಾದಿಗಳು ಸುಮ್ಮನಾಗಲಿಲ್ಲ. ಆ ಮೂಲಭೂತವಾದಿಗಳ ಗುರುವೇ ಈ ಸಯೀದ್ ಎನ್ನುವ ವ್ಯಕ್ತಿ. ಲಷ್ಕರ್ ಸಂಘಟನೆ ಯನ್ನು ಅಮೇರಿಕಾ ಬಹಿಷ್ಕರಿಸಿದ ಕೂಡಲೇ ‘ಜಮಾತ್ ಉದ್ ದಾವಾ’ ಎನ್ನುವ ಸಮಾಜ ಸೇವಾ ಸಂಘಟನೆ ಆರಂಭಿಸಿ ತನ್ನ ಅಜೆಂಡಾ ಜೀವಂತವಾಗಿರಿಸಿಕೊಂಡ ಈ ಸಯೀದ್. ಈತನಿಗೆ ಭಾರತದ ಮೇಲೆ ಅತೀವ ಧ್ವೇಷ. ಈತ ಅಮೆರಿಕೆಯ ವಿರುದ್ಧ ಕಿಡಿ ಕಾರಲು ಶುರು ಮಾಡಿದ. ಪಾಕ್ ಸೈನಿಕರನ್ನು ಕೊಂದ ಅಮೇರಿಕ ಮತ್ತು ಮಿತ್ರ ದೇಶಗಳ ಸೈನಿಕರನ್ನು ಪೀಡಿಸುವುದಾಗಿ ಧಮಕಿ ಕೊಟ್ಟ. ಇವನನ್ನು ಬಲಿ ಹಾಕಿದರೆ ತನ್ನ ಸೈನಿಕರು ನಿರಾಳವಾಗಿರಬಹುದು ಎಂದು ಅಮೇರಿಕಾ ಈತನ ಮೇಲೆ ಎರಗಿತು. ಸುಮ್ಮನೆ ಎರಗಿದರೆ ಲಾಭ ಕಡಿಮೆ. ಹಾಗಾಗಿ ಭಾರತ ಮೇಲೆ ಆಕ್ರಮಣ ಮಾಡಿದ ಕಾರಣ ಈ ಕ್ರಮ ಎಂದು ಅಮೇರಿಕಾ ಸಾರಿದ ಕೂಡಲೇ ನಮ್ಮ ನಾಯಕರು, ಮಾಧ್ಯಮಗಳು ಪಟಾಕಿ ಸಿಡಿಸಿದವು. ಅಮೆರಿಕೆಯ ಈ ಕ್ರಮದಿಂದ ಭಾರತಕ್ಕೆ ಲಾಭವಾದರೂ ನಿಜವಾದ ಲಾಭ ಅಮೆರಿಕೆಗೆ. ಮುಂಬೈ ಮೇಲೆ ನಡೆದ ಭಯೋತ್ಪಾದಕ ಕೃತ್ಯಗಳಿಗೆ ಭಾರತ ಸರಿಯಾದ ಪಾಠ ಕೊಡಬೇಕಿತ್ತು ಪಾಕಿಗೆ. ಆದರೆ ನಾವು ಸೌಮ್ಯತೆಯ ದಾರಿ ಹಿಡಿದೆವು. ಸಂಯಮ, ತಾಳ್ಮೆ ನಮ್ಮ ಮಂತ್ರವಾಯಿತು. ಈ ಸಂಯಮ ತಾಳ್ಮೆಯ ಲಾಭವೂ ಅಮೆರಿಕೆಗೆ ಎನ್ನುವುದು ನಮಗೆ ತಿಳಿದರೂ ಅಮೆರಿಕೆಯ ದಾಳದಾಟದ ನೈಪುಣ್ಯಕ್ಕೆ ನಮ್ಮದು ನಿರುತ್ತರ.

ಅಮೇರಿಕಾ ಆಗಾಗ ಅನ್ನ ಮಿತ್ರ ಮಂಡಳಿಯೊಂದಿಗೆ ಪ್ರಪಂಚ ಎನ್ನುವ ಪ್ರೇಕ್ಷಕನಿಗೆ ಹೊಸ ಹೊಸ ಡ್ರಾಮಾ ಗಳನ್ನು ಕೊಟ್ಟು ತಾನು ಮಾಡುವುದೆಲ್ಲಾ ಈ ಪ್ರಪಂಚದ ಭದ್ರತೆಗೆ, ಸುರಕ್ಷೆಗೆ ಎಂದು ನಂಬಿಸುತ್ತದೆ. you cannot fool all of the people all of the time ಎಂದು ಅಮೆರಿಕೆಯವನೇ ಆದ ಅಬ್ರಹಾಂ ಲಿಂಕನ್  ಹೇಳಿದ ಮಾತುಗಳು ಯಾವಾಗ ಸಾಕಾರ ವಾಗುವುದೋ ಕಾದು ನೋಡೋಣ. ಅಲ್ಲಿಯವರೆಗೆ ಮುಂದಿನ ಡ್ರಾಮಾದ ನಿರೀಕ್ಷೆಯಲ್ಲಿ ದಿನ ಕಳೆಯೋಣ.

ರಾಜಧಾನಿಯಲ್ಲಿ ನಮ್ಮ ಸೈನ್ಯ

ಇಂಡಿಯನ್ ಎಕ್ಸ್ಪ್ರೆಸ್ಸ್ ಪತ್ರಿಕೆ ಸೈನ್ಯದ ಬಗ್ಗೆ ವರದಿಯೊಂದನ್ನು ಪ್ರಕಟಿಸಿ ಕೋಲಾಹಲವನ್ನು ಸೃಷ್ಟಿಸಿದೆ. ಈ ವರ್ಷದ ಜನವರಿ ೧೬-೧೭ ರ ರಾತ್ರಿ ಭೂಸೇನೆಯ ಎರಡು ಪ್ರಮುಖ ತುಕಡಿಗಳು ದೇಶದ ರಾಜಧಾನಿಯ ಪರಿಸರಕ್ಕೆ ರಕ್ಷಣಾ ಇಲಾಖೆಯ ಅನುಮತಿಯಿಲ್ಲದೆ ಬಂದಿದ್ದು ಏಕೆ? ಸೈನ್ಯದ ಈ ಕ್ರಮ ಸರಕಾರದ ಉನ್ನತ ಸ್ತರದಲ್ಲಿ ಕಂಪನವನ್ನೇಕೆ ತಂದಿತು, ಪ್ರವಾಸದಲ್ಲಿದ್ದ ರಕ್ಷಣಾ ಕಾರ್ಯದರ್ಶಿಯನ್ನು ಮಲೇಷ್ಯಾದಿಂದ ಏಕಾಯೇಕಿ ಹಿಂದಕ್ಕೆ ಕರೆಸಿ ಕೊಂಡಿದ್ದು ಏಕೆ, ಎನ್ನುವ ಹಲವು ಪ್ರಶ್ನೆ ಸಂಶಯಗಳಿಗೆ ಅನುವು ಮಾಡಿ ಕೊಟ್ಟಿದೆ. ಪತ್ರಿಕೆಯ ಈ ವರದಿ ನೋಡಿ ಪ್ರಧಾನಿ, ರಕ್ಷಣಾ ಸಚಿವರು ಸೈನ್ಯದ ಬಗ್ಗೆ ಭರವಸೆಯ ಮಾತುಗಳನ್ನು ಹೇಳಿದ್ದಾರೆಯೇ ಹೊರತು ಪತ್ರಿಕೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಭಾರತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಇರಿಸಿ ಕೊಂಡಿರುವ ದೇಶ. ನಮ್ಮ ವ್ಯವಸ್ಥೆಯಲ್ಲಿ ಅದ್ಯಾವ ಕುಂದು ಕೊರತೆಗಳೇ ಇರಲಿ ಇಲ್ಲಿ ಪ್ರಜೆಯೇ ಪ್ರಭು. ಜನರಿಂದ ಚುನಾಯಿತನಾದ ಮಂತ್ರಿ ಎಂಥ ಹುಂಬನೇ ಆದರೂ ಅವನ ಆದೇಶದ ಅಡಿ ಅಧಿಕಾರಿಶಾಹಿ ಕೆಲಸ ಮಾಡಬೇಕು. ನಮ್ಮ ಸೈನ್ಯದ ಮಹಾ ದಂಡನಾಯಕ ಜನರಲ್ V.K.Singh ರಿಗೂ ಸರಕಾರಕ್ಕೂ ವೈಮನಸ್ಸಿರುವುದು ಎಲ್ಲರಿಗೂ ತಿಳಿದದ್ದೇ. ನಿವೃತ್ತಿಯಾಗುವ ವಯಸ್ಸಿನ ಕುರಿತು ಶುರುವಾದ ತಗಾದೆ ಸೈನ್ಯದಲ್ಲಿ ಭ್ರಷ್ಟಾಚಾರ ಇರುವ ವಿಷಯದವರೆಗೆ ಮುಂದುವರೆಯಿತು. ಸೈನ್ಯಾಧಿಕಾರಿ ರಿಪೋರ್ಟ್ ಕೊಡಬೇಕಿರುವುದು ರಕ್ಷಣಾ ಸಚಿವರಿಗೆ. ಸಿಂಗ್ ಈ ಕೆಲಸ ಮಾಡದೇ ನೇರವಾಗಿ ಪ್ರಧಾನಿಗೆ ಪತ್ರ ಬರೆದು protocol ಉಲ್ಲಂಘಿಸಿದರು. ಅವರು ಬರೆದ ಪತ್ರ ಸೋರಿಕೆ ಆಗಿ ಮತ್ತೊಂದು ಅನಾಹುತ ಕ್ಕೆ ಎಡೆಯಾಯಿಯಿತು. ಪತ್ರವನ್ನ ಯಾರು ಸೋರಿಸಿದರು ಎನ್ನುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಘಟನೆಗಳ ಬೆನ್ನಲ್ಲೇ ಸೈನ್ಯದ ತುಕಡಿಯ ರಾಜಧಾನಿ ಭೇಟಿ. ಸೈನ್ಯ ಸರಕಾರದ ಮಧ್ಯೆಯ ಜಟಾಪಟಿ ದೇಶಕ್ಕೆ ಒಳ್ಳೆಯದಲ್ಲ. ಕೋಲಾ ಹಲಕ್ಕೆ ಕಾರಣವಾದ ಹಲವು ಜಟಾಪಟಿಗಳನ್ನು ದೇಶ ಕಂಡಾಗಿದೆ. ಇಂದಿರಾ ಗಾಂಧೀ – ಅಲಹಾ ಬಾದ್ ನ್ಯಾಯಾಲಯದ ನಡುವಿನ ಜಗಳ,  ರಾಜೀವ್ ಗಾಂಧಿ – ಜೆಲ್ ಸಿಂಗರ ನಡುವಿನ ಕದನ, ಕೇಂದ್ರ ಸರಕಾರ – ಶೇಷನ್ ನಡುವಿನ ಗಲಾಟೆಗಳನ್ನು ಕಂಡ ದೇಶಕ್ಕೆ ಸೈನ್ಯ ಮತ್ತು ಸರಕಾರದ ನಡುವಿನ ಇರುಸು ಮುರುಸು ಹೊಸತಾಗಿ ಕಾಣುತ್ತಿದೆ. ಏಕೆಂದರೆ ನಮ್ಮ ದೃಷ್ಟಿಯಲ್ಲಿ ಸೇನೆ ಎಂದಿಗೂ ದೇಶಕ್ಕೂ, ಸರಕಾರಕ್ಕೂ ವಿಧೇಯವಾಗಿದ್ದ ಸಂಸ್ಥೆ. ಏಕಾ ಏಕಿ ಈ ತೆರನಾದ ಸಮಸ್ಯೆ ಬರಲು ಕಾರಣ ವೇನು, ನಿಜವಾಗಿಯೂ ನಡೆಯುತ್ತಿರುವುದು ಏನು ಎಂದು ತಿಳಿಯುವ ಹಕ್ಕು ದೇಶಕ್ಕಿದೆ. ಕೂಡಲೇ ಪ್ರಧಾನಿ, ರಕ್ಷಣಾ ಸಚಿವರು ಸಂಶಯ ನಿವಾರಣೆಯ ಕಡೆ ಗಮನ ಹರಿಸುವುದು ಒಳ್ಳೆಯದು.

ಮಾಯಾ, ಮಾಯ

ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಮಾಯಾವತಿಯ ಸೊಕ್ಕಿದ ಆನೆಗೆ ಜನ ಖೆಡ್ಡಾ ತೋಡಿ ಉರುಳಿಸಿದರು ಏರಿದ ಮದ ಇಳಿಯಲಿ ಎಂದು. ಕಳೆದ ಚುನಾವಣೆಯಲ್ಲಿ ಮುಸ್ಲಿಮರು ಮತ್ತು ಬ್ರಾಹ್ಮಣ ರನ್ನು ಒಂದುಗೂಡಿಸಿ ಒಂದು ಹೊಸ ರೀತಿಯ “ಸೋಷಲ್ ಇಂಜಿನಿಯರಿಂಗ್” ಪ್ರಯೋಗದ ಮೂಲಕ ಅಧಿಕಾರ ಕ್ಕೆ ಏರಿದ್ದ ದಲಿತ ನಾಯಕಿ ಮಾಯಾವತಿಗೆ ಜನ ಏನು ಬಯಸುತ್ತಾರೆ ಎನ್ನುವುದು ಅರಿಯದೆ ಹೋಯಿತು. ಈ ಸಲ ಸೋಷಲ್ ಇಂಜಿನಿಯರಿಂಗ್” ಬದಲು ಸಿಂಪಲ್ ಇಂಜಿನಿಯರಿಂಗ್ ಕೆಲಸ ಮಾಡಿತು. ಖೆಡ್ಡಾ ಇಂಜಿನಿಯರಿಂಗ್. ಮಾಯಾವತಿಯ ಅರಿವುಗೇಡಿತನಕ್ಕೆ ಜನ ತಕ್ಕ ಶಿಕ್ಷೆ ದಯಪಾಲಿಸಿದರು. ಅಧಿಕಾರ ಎನ್ನುವುದು ತನ್ನ ಸ್ವಾರ್ಥ ಸಾಧಿಸಲು, ತನ್ನ ಪ್ರತಿಮೆಗಳನ್ನು ಎಲ್ಲೆಂದರಲ್ಲಿ ಪ್ರತಿಷ್ಠಾಪಿಸಲು ಎಂದು ತಪ್ಪಾಗಿ ತಿಳಿದ ಮಾಯಾವತಿ ಈಗ ಕನಿಷ್ಠ ಐದು ವರ್ಷಗಳ ಕಾಲ ಉ. ಪ್ರದೇಶದ ರಾಜಕೀಯದಿಂದ ಮಾಯ. ಮುಲಾಯಂ ಸಿಂಗ್ ಯಾದವ್ ರ ಸಮಾಜವಾದಿ ಪಕ್ಷ ತಮ್ಮ ಮಗ ಅಖಿಲೇಶ್ ನ energetic ಪ್ರಚಾರದ ಕಾರಣ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು.

crown prince ರಾಹುಲ್ ಗಾಂಧಿಯ ಚಮತ್ಕಾರ ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ ತಂದು ಕೊಡಲಿಲ್ಲ. ಭಾರತದ ರಾಜಕೀಯ ಕ್ಷಿತಿಜಕ್ಕೆ ಮತ್ತೊಂದು crown prince ನ ಆಗಮನ ಅಖಿಲೇಶ್ ಯಾದವ್ ನ ಯಶಸ್ವೀ ಪ್ರಚಾರದ ಕಾರಣ.

rabble rouser ವರುಣ ಗಾಂಧೀ ಯಂಥವರು ಭಾಜಪಕ್ಕೆ liability ಎನ್ನುವುದನ್ನು ಭಾಜಪ ಶೀಘ್ರವೇ ಅರಿತು ಕೊಂಡರೆ ಮುಂದಿನ ಚುನಾವಣೆಗೆ ಒಳ್ಳೆಯದು. ಸಮಾಜವನ್ನು ಒಗ್ಗೂಡಿಸಿ ಕೊಂಡು ಹೋಗುವ ನಾಯಕರ ಅವಶ್ಯಕತೆ ಭಾಜಪಕ್ಕಿದೆ. rabble rouser ಗಳ ಅವಶ್ಯಕತೆ ಭಾರತೀಯ ರಾಜಕಾರಣಕ್ಕೆ ಇಲ್ಲ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ ಎಂದು ಕಾಂಗ್ರೆಸ್ಸನ್ನು ಹಳಿಯುವ ಭಾಜಪ ತಾನು ಮಾಡುತ್ತಿರುವುದು ಏನು ಎನ್ನುವುದರ ಕಡೆ ಸ್ವಲ್ಪ ನೋಟ ಹರಿಸಿದರೆ ಚೆನ್ನ. ತನಗೊಂದು ನ್ಯಾಯ, ಪರರಿಗೊಂದು ನ್ಯಾಯ ಎನ್ನುವ ನೀತಿ ಭಾರತೀಯ ಮತದಾರನೊಂದಿಗೆ ನಡೆಯುವುದಿಲ್ಲ. ಅದನ್ನು ಅರಿತುಕೊಳ್ಳಲಾಗಷ್ಟು ಮೂರ್ಖನಲ್ಲ ವೋಟರ್. ಒಟ್ಟಿನಲ್ಲಿ ಮುಂದಿನ ಮಹಾ ಚುನಾವಣೆಗೆ prelude ಆಗಿ ನಡೆದ ಈ ಚುನಾವಣೆ ಮುಂದಿನ ಸಲವೂ ಕಾಂಗ್ರೆಸ್ ಪಕ್ಷಕ್ಕೇ ಕೇಂದ್ರ ಸರಕಾರದ ಉಸ್ತುವಾರಿ ಎಂದು ನಿಚ್ಚಳವಾಗುತ್ತಿದೆ.