ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ

 

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಯಮಾಡಿ ಈ ವ್ಯಕ್ತಿಯನ್ನು ಭೆಟ್ಟಿಯಾಗಿ

ಬದುಕಿನಲ್ಲಿ ಸೋಲು, ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಮೂಡಿದಾಗ ಬಹಳಷ್ಟು ಜನ ಸಾವಿನ ಮೊರೆ ಹೋಗುತ್ತಾರೆ. ಯಾವ ಧರ್ಮವೂ ಆತ್ಮಹತ್ಯಗೆ ಬೆಂಬಲ ನೀಡದೆ ಇದ್ದರೂ ಬದುಕು ದುಸ್ತರ, ದುರ್ಭರವಾದಾಗ ಯಾವ ಉಪದೇಶವೂ ಕೆಲಸಕ್ಕೆ ಬಾರದು. ಕೆಲವರು ವಿಷ ಸೇವಿಸಿ ಬದುಕಿಗೆ ಬೈ ಹೇಳಿದರೆ ಇನ್ನೂ ಕೆಲವರು ರೈಲು, ಹಗ್ಗ ಹೀಗೆ ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ಎತ್ತರದ ಬಂಡೆ ಅಥವಾ ಕಣಿವೆಯ ತುದಿಯ ಮೇಲಿನಿಂದ ಜಿಗಿದು ಪ್ರಾಣ ಕಳೆದು ಕೊಳ್ಳುತ್ತಾರೆ. ಇಂಥ “ಸಾವಿನ  ತಾಣ” ಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ನಿರೀಕ್ಷೆಯಲ್ಲಿ ಒಬ್ಬ ವ್ಯಕ್ತಿ ಹತ್ತಾರು ವರ್ಷಗಳಿಂದ ದಿನ ಕಳೆಯುತ್ತಾನೆ. ಜನ ಕೆಳಕ್ಕೆ ಜಿಗಿದು ತಲೆ ಒಡೆದುಕೊಂಡು ಚೀರಿಡುತ್ತಾ ಸಾಯುವುದನ್ನು ನೋಡಿ ಆಸ್ವಾದಿಸಲು ಅಲ್ಲ. ಆತನ ಉದ್ದೇಶ ಬೇರೆಯೇ.

೮೪ ವರ್ಷ ಪ್ರಾಯದ ರಿಚೀ ಯಮನಿಗೆ ಪ್ರಿಯವಾದ ತಾಣಗಳಲ್ಲಿ ಕಾಲ ಕಳೆಯುತ್ತಾ ಯಮನ ಗಿರಾಕಿಗಳನ್ನು ತನ್ನೆಡೆ ಎಳೆದುಕೊಂಡು ಜೀವ ಉಳಿಸಿದ್ದು ಇದುವರೆಗೂ ಹೆಚ್ಚೂ ಕಡಿಮೆ ೧೬೦ ಜನರನ್ನು. ಯಮಧರ್ಮ ರಾಯನ ವ್ಯಾಪಾರ ಸಾವಾದರೆ ಈತನ ವ್ಯಾಪಾರ ಬದುಕಿನತ್ತ ಮತ್ತೊಂದು ನೋಟ ಹರಿಸಿ ಎರಡನೇ ಇನ್ನಿಂಗ್ಸ್ ಗೆ ಅವಕಾಶ ಮಾಡಿ ಕೊಡುವುದು. ಆಸ್ಟ್ರೇಲಿಯಾದ ಈ ಮಹಾತ್ಮ ತನ್ನ ೫೦ ವರ್ಷಗಳ ಈ “ಆತ್ಮ” ಸೇವೆಗೆ ತನ್ನನ್ನು ಮುಡಿಪಾಗಿರಿಸಿಕೊಂಡು ಸಮಾಜದ ಪ್ರಶಂಸೆಗೆ ಕಾರಣವಾಗಿರುವುದು ಅಚ್ಚರಿಯೇನಲ್ಲ ಅಲ್ಲವೇ? “the gap” ಎಂದು ಕರೆಯಲ್ಪಡುವ ಈ ಆತ್ಮಹತ್ಯೆಯ ಸ್ಪಾಟ್ ಇರುವುದು ಸಿಡ್ನಿ ಬಂದರು ಪ್ರದೇಶದಲ್ಲಿ. ಈ ಇಳಿ ಪ್ರಾಯದವನಿಗಾಗಿ ಯಮ ಅವನ ಮನೆ ತಡಕಾಡುತ್ತಿ ದ್ದರೆ ಈತ ಈ ದುರ್ಗಮ ಸ್ಥಳಕ್ಕೆ ಬಂದು ಜೀವನ ಶೂನ್ಯ ಎನ್ನುವವರಿಗೆ ಊರುಗೋಲಾಗಿ ನಿಲ್ಲುತ್ತಾನೆ. ಮೇಲೆ ಹೇಳಿದ ಕಣಿವೆಯ ತುದಿಗೆ ಬಂದು ಇನ್ನೇನು ಕೆಳಕ್ಕೆ ಹಾರಿ  ಪ್ರಾಣ ಕಳೆದುಕೊಳ್ಳ ಬೇಕು ಎನ್ನುವವರಿಗೆ ಇದ್ದಕ್ಕಿದ್ದಂತೆ ಅಶರೀರ ವಾಣಿಯಂತೆ ಸೌಮ್ಯವಾದ, ಸ್ನೇಹಮಯವಾದ ಸ್ವರ ಕೇಳಿಬರುತ್ತದೆ; “ಒಂದು ಲೋಟ ಚಹಾ ಗಾಗಿ ನನ್ನಲ್ಲಿಗೆ ಬರಬಾರದೇ?” ಇದೇ ಆ ವಾಣಿ. ಪಕ್ಕದ ಸಾಗರದ ಸೌಮ್ಯ ಅಲೆಗಳು ರಿಚಿ ಯ ಸೌಮ್ಯವಾದ ಮಾತುಗಳನ್ನ ಸಾಯ ಬೇಕೆನ್ನುವವರ ಕಿವಿಗಳನ್ನು ತಲುಪಿಸಿ ಒಂದು ಕ್ಷಣ ತಬ್ಬಿಬ್ಬಾಗಿಸುತ್ತದೆ.  ಸಾವಿನಂಗಡಿಯ ಹೊಸ್ತಿಲಿನಲ್ಲಿ ನಿಂತ ವ್ಯಕ್ತಿಗೆ ಮತ್ತೊಮ್ಮೆ ಇದೇ ವಾಣಿ ಕೇಳಿಬರುತ್ತದೆ. why dont you come and have a cup of tea? ಓಹ್, ಇದುವರೆಗೂ ಯಾರೂ ಕೇಳಿರಲಿಲ್ಲ ಹೀಗೆ. ರೈಲು ನಿಲ್ದಾಣಗಳಲ್ಲೂ, ಇತರೆ ಸಾರ್ವಜನಿಕ ಸ್ಥಳಗಳಲ್ಲೂ ತಲೆಯನ್ನು ಕೈಯ್ಯಲ್ಲಿ ಹೊತ್ತು ಗಳಗಳ ಅಳುತ್ತಾ ಕೂತರೂ, ವ್ಯವಹಾರದ ಮತ್ತು ಇನ್ನಿತರ ಕೆಲಸ ನಿಮಿತ್ತ ಗಡಿ ಬಿಡಿಯಲ್ಲಿ ಓಡಾಡುವ ಸಾವಿರಾರು ಜನರನ್ನು ತಾನು ದೀನ ನೋಟದಿಂದ ನೋಡಿದರೂ ಅಲಕ್ಷಿಸಿ ಮುನ್ನಡೆವ ಈ ಜಗತ್ತಿನಲ್ಲಿ ಈ ತೆರನಾದ ಕೋರಿಕೆ? why dont you come and have a cup of tea? ಒಂದು ಕಪ್ ಚಹಾಕ್ಕೆ ಯಾಕೆ ಬರಬಾರದು? ಈ ವಾಣಿ ಬಂದ ಕಡೆ ತಿರುಗಿ ನೋಡಿದಾಗ ಸ್ನೇಹಮಯಿ ನಿಂತಿದ್ದಾನೆ, ತನ್ನ ಸುಕ್ಕುಗಟ್ಟಿದ ಕೈಗಳ ತುಂಬಾ ಬದುಕಿನ ಭರವಸೆಗಳನ್ನು ಇಟ್ಟುಕೊಂಡು. ರಿಚಿಯ ನಿಷ್ಕಳಂಕ ಸುಕ್ಕಿಲ್ಲದ ನಗು ಅವರ ಕೈಗಳಿಂದ ಸಾವಿನ ಅಸ್ತ್ರ ಕಳೆದು ಕೊಳ್ಳುವಂತೆ ಮಾಡುತ್ತದೆ. ಹೌದು ಕೆಲವೊಮ್ಮೆ ಒಂದು ಸರಳ, ಸ್ವಚ್ಚ ನಗು ಮಾಂತ್ರಿಕ ಶಕ್ತಿಯನ್ನೂ ಹೊಂದಿರುತ್ತದೆ. ಎಮ್ಮೆಯ ಮೇಲೆ ಕೂತು ಮೀಸೆ ತಿರುವುತ್ತಾ ಆಸೆಗಣ್ಣುಗಳಿಂದ ಗಿರಾಕಿಯ ನಿರೀಕ್ಷೆಯಲ್ಲಿ ಜವರಾಯ ಕೂತಿದ್ದರೆ ತನ್ನ ಹಸಿರು ಬಣ್ಣದ ತೊಗಲು ಕುರ್ಚಿಯಲ್ಲಿ ರಿಚಿ ಕೂತಿರುತ್ತಾನೆ, ಗಾಳ ಹಿಡಿದು. ಬದುಕಿನ, ಭರವಸೆಯ, ನಿರೀಕ್ಷೆಗಳ, ಹೊಂಗನುಸುಗಳ ಗಾಳ ಹಿಡಿದು. ಆತ ಹೇಳುವುದು, “ಅವರನ್ನು ಉಳಿಸಲೇಬೇಕು, ಇದು ಸುಲಭ ಸಾಧ್ಯ” ಎಂದು.its pretty simple ಈತನ ಪಾಲಿಗೆ. ಅದು ನಿಜವೂ ಕೂಡಾ.

೧೮ ನೇ ಶತಮಾನದಿಂದ ಇಲ್ಲಿಗೆ ಬರುತ್ತಿದ್ದಾರಂತೆ ಜನರು ಸಾವನ್ನು ಅರಸುತ್ತಾ. ವಾರಕ್ಕೊಂದರಂತೆ ಸಾವನ್ನು ಕಾಣುತ್ತಿರುವ ಈ ಸ್ಥಳವನ್ನು ಜನರಿಂದ ದೂರ ಇಡಲು ಸರಕಾರ ದೊಡ್ಡ ಮೊತ್ತದ ಹಣವನ್ನೂ ವ್ಯಯಿಸುತ್ತಿದೆಯಂತೆ.

ಯಾರಾದರೂ ಈ ಸಾವಿನ ಕಣಿವೆಯ ತುದಿಗೆ ಬಂದು ನಿಂತರೂ ಹತ್ತಿರದಲ್ಲೇ ಇರುವ ತನ್ನ ಮನೆಯಿಂದ ಧಾವಿಸುವ ಈತ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಈತನ ನಯವಾದ ಮಾತಿಗೆ ಮರುಳಾಗಿ ತಮ್ಮ ಬದುಕಿಗೆ ಮತ್ತೊಮ್ಮೆ “ಹಾಯ್” ಹೇಳಲು ಮರಳಿದವರೂ ಇದ್ದಾರೆ. ಒಮ್ಮೆ ಊರುಗೋಲಿನ (crutches) ಸಹಾಯದಿಂದ ಬಂದ ವ್ಯಕ್ತಿ ಯೊಬ್ಬ ತುದಿಯಲ್ಲಿ ನಿಂತಿದ್ದನ್ನು ಕಂಡ ರಿಚಿ ಅಲ್ಲಿಗೆ ಧಾವಿಸುತ್ತಾನೆ, ಆದರೆ ಅವನು ಅಲ್ಲಿಗೆ ತಲುಪುವಷ್ಟರಲ್ಲಿ ಆ ವ್ಯಕ್ತಿ ತನ್ನ ಊರುಗೋಲನ್ನು ತನ್ನ ಬದುಕನ್ನು ದುಸ್ತರವಾಗಿಸಿದ ಲೋಕಕ್ಕೆ ಕಾಣಿಕೆಯಾಗಿ ಬಿಟ್ಟು ಪ್ರಪಾತಕ್ಕೆ ಜಿಗಿದಿರುತ್ತಾನೆ.        

ಈ ರೀತಿಯ ಸೇವೆ ರಿಚಿಗೆ ಇಳಿ ವಯಸ್ಸಿನಲ್ಲಿ ಸಿಕ್ಕಿದ್ದಲ್ಲ. ಯೌವ್ವನದಿಂದಲೇ ಈತ ಜನರನ್ನು ಸಾವಿನಂಚಿನಿಂದ ದೂರ ಇಡಲು ಪ್ರಯತ್ನಿಸುತ್ತಿದ್ದ. ಕೆಲವೊಮ್ಮೆ ಜನರನ್ನು ಅವರ ಅಂತ್ಯದಿಂದ ರಕ್ಷಿಸಲು ಹೋಗಿ ತನ್ನ ಜೀವವನ್ನೂ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾನೆ ಸಹ ಈ ಮಹಾತ್ಮ. ನೋವು, ಹಿಂಸೆ, ಅಸಮಾನತೆ ಕಂಡು ರೋಸಿದ ವಿಶ್ವಕ್ಕೆ ರಿಚಿ ಯಂಥ ವ್ಯಕ್ತಿಗಳು ಹೊಂಗಿರಣದಂತೆ ಕಂಗೊಳಿಸುತ್ತಾರೆ.

ಚುಂಬನ ಸ್ಪರ್ದೆ

ಚುಂಬನ ಸ್ಪರ್ದೆ ಚೀನಾದಲ್ಲಿ. ಹಾಂ? ಚುಂಬನ?ಚೀನಾದಲ್ಲಿ? ಅದೂ ಸಾರ್ವಜನಿಕವಾಗಿ? ನಾವೆಲ್ಲಾ ತಿಳಿದಂತೆ ಚೀನೀಯರ ಕೆಲಸ ನಮ್ಮ ಅರುಣಾಚಲ ಪ್ರದೇಶವನ್ನು, ಮತ್ತು ಇತರೆ ಈಶಾನ್ಯ ರಾಜ್ಯಗಳತ್ತ ಆಸೆ ಗಣ್ಣು ಬೀರುವುದು ಎಂದು. ಊಹೂಂ, ಈ ಚಪ್ಪಟೆ ಮೂಗಿನವರಿಗೆ ಒಂದಿಷ್ಟು ಚುಂಬನದ ಕಲೆಯೂ ಗೊತ್ತು, ಯಾರಿಗೆ ಗೊತ್ತು ನಮ್ಮ ವಾತ್ಸ್ಯಾಯನ ಅಡ್ಡಾಡುತ್ತಾ ಚೀನದ ಕಡೆಗೂ ತಲೆ ಹಾಕಿರಬಹುದು. valentine ದಿನದಂದು ಚೀನಾ ದ ಸೂಪರ್ ಮಾರ್ಕೆಟ್ ಒಂದು ವಿವಿಧ ಭಂಗಿಯಲ್ಲಿ ದೀರ್ಘವಾಗಿ ಚುಂಬಿಸುವುದಕ್ಕೆ ಯುವ ಹೃದಯಿಗಳಿಗೆ ಮುಕ್ತ ಆಹ್ವಾನ ನೀಡಿದಾಗ ಸಿಕ್ಕ ಚಿತ್ರಗಳಿವು. ನೋಡಿ ಆನಂದಿಸಿ, ಪೂರ್ಣ ವಿರಾಮ. ಪ್ರಿಯ/ತಮೆ ಯರ ಮೇಲೆ ಪ್ರಯೋಗಿಸದಿರಿ.

ನಲವತ್ತು ಸಂವತ್ಸರಗಳು, ಒಂದು ವಿಚ್ಛೇದನ

ನಲವತ್ತು ವಸಂತಗಳು, ಎಂಥ ಮೊಂಡು ಮರವನ್ನೂ ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು ಹೊಸ ಅನುಭೂತಿಯನ್ನು ತರುತ್ತದೆ ಮನುಷ್ಯನಲ್ಲಿ. ನಲವತ್ತು ವರುಷಗಳ ಅನುಭವ ಮನುಷ್ಯನನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ನಾಲ್ಕು ದಶಕಗಳು….ಅವುಗಳ ಬಗ್ಗೆ ಊಹಿಸುವುದೂ ಕಷ್ಟ.

ನಲವತ್ತು ವರುಷಗಳ ಕಾಲ ತೀರಾ ಹತ್ತಿರವಾಗಿದ್ದವರು, ಸಾವಿರಾರು ಹಗಲನ್ನೂ, ಇರುಳನ್ನೂ ಕಂಡವರು ಏಕಾಏಕಿ ದೂರವಾದರು, ಅಮೆರಿಕೆಯಲ್ಲಿ.  

ಅಮೆರಿಕೆಯ ಮಾಜಿ ಅಧ್ಯಕ್ಷ ಅಲ್-ಗೋರ್ ತಮ್ಮ ಪತ್ನಿ ಮೇರಿ ಎಲಿಜಬೆತ್ ಟಿಪ್ಪರ್ ರಿಂದ  ವಿಚ್ಚೇದಿತರಾಗುತ್ತಿದ್ದಾರೆ.   ನಲವತ್ತು ವರ್ಷಗಳ ಬಾಳ ಸಂಗಾತಿಯನ್ನು ತೊರೆದು ನಿಸರ್ಗದ ಏಕಾಂತದ ಅನುಭವಕ್ಕಾಗೋ ಏನೋ. ವಿವಾಹ ಮತ್ತು ವಿಚ್ಚೇದನ ಜನರಿಗೆ ಅತಿ ವೈಯಕ್ತಿಕ ವಿಷಯ. ಅದರ ಚರ್ಚೆ ನಮಗೇಕೆ ಎಂದು ನಿಮಗೆ ಅನ್ನಿಸಬಹುದು. ಆದರೆ ಇಲ್ಲಿ ಕಾಣ ಸಿಕ್ಕಿರುವ ಪಾತ್ರಗಳು ಸಾರ್ವಜನಿಕ ಬದುಕಿನಲ್ಲಿರುವವರು. ಇಂಥವರ ಬೇರೆಲ್ಲಾ ಲೀಲೆಗಳನ್ನೂ ಚರ್ಚಿಸುವ ನಾವು ಅವರ ಸಂಕಷ್ಟಗಳ ಬಗ್ಗೆಯೂ ಯೋಚಿಸಿ ಅದರಲ್ಲಿ ನಮಗೇನಿದೆ ಕಲಿಯಲು ಎಂದು ಸೂಕ್ಷ್ಮವಾಗಿ ನೋಡಿದಾಗ ಅರಿವಾಗುತ್ತದೆ ಈ ವಿಷಯ ನಮಗೆ ಪ್ರಸ್ತುತ ಎಂದು.     

“Everyone you meet is fighting some kind of battle.” – ಎಷ್ಟು ಸತ್ಯ ನೋಡಿ ಈ ಮಾತು. “ನಾವು ಭೆಟ್ಟಿಯಾಗುವ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಧದ ಸೆಣಸಿನಲ್ಲಿರುತ್ತಾರೆ”- ಹೌದು ಒಂದಲ್ಲ ಒಂದು ರೀತಿಯ ಹೋರಾಟ ಪ್ರತಿಯೊಬ್ಬರದೂ. ನಲವತ್ತು ವರುಷಗಳ ಸಂಬಂಧ ಈ ರೀತಿ ಕಳಚಿ ಕೊಂಡು ಬಿದ್ದರೆ ಅನಂತತೆಯ ಮಾತು ದೂರ ಉಳಿಯಿತು. ಹಾಗಾದರೆ ವಿವಾಹ ಸಂಬಂಧ ನಿರಂತರ, ಶಾಶ್ವತ (ಸಾವನ್ನು ಬಿಟ್ಟು) ವಾಗಿರಿಸಲು ಸಾಧ್ಯವಿಲ್ಲವೇ? ಕೆಲವರು ಹೇಳ್ತಾರೆ time is a great healer ಅಂತ. ಆದರೆ ಇಲ್ಲಿ ಆ ಹೀಲಿಂಗ್ ಕಾಣ್ತಾ ಇಲ್ಲ. ಇಲ್ಲಿ ಕಾಣ್ತಾ ಇರೋದು drifting. ಅಬ್ಬರದ ಅಲೆಗೆ ನಲುಗುವ ದೋಣಿಯಂತೆ. ವೈಯಕ್ತಿಕ ಬದುಕಿನ ಚರ್ಚೆ ನಮಗೆ ಬೇಡವೆಂದರೂ ಈ ತೆರನಾದ ಸುದ್ದಿಗಳು ನಮ್ಮನ್ನು ಖಂಡಿತ ಗಲಿಬಿಲಿಗೊಳಿಸುತ್ತವೆ. ವಿಶ್ವದ ತಾಪ ಮಾನ ಹೆಚ್ಚಳದ ಬಗ್ಗೆ ಪುಸ್ತಕ ಬರೆದು, ನೊಬೆಲ್ ಗಿಟ್ಟಿಸಿಕೊಂಡ ವ್ಯಕ್ತಿ ತನ್ನ ಮಗ್ಗುಲಲ್ಲೇ ಇದ್ದ ವ್ಯಕ್ತಿಯನ್ನು ಅರಿಯದಾದನೆ? ಹವಾಮಾನ ಬಿಕ್ಕಟ್ಟು (climate crisis), ಅಲ್-ಗೋರ್ ಅವರ ಧ್ಯೇಯ, ಆದರೆ ಮನೆಯೊಳಗಿನ ಹವಾಮಾನ ತಣ್ಣಗೆ ಕೈ ಕೊಡುತ್ತಿದ್ದನ್ನು ಕಾಣದೆ ಎಡವಿದರು ಅಮೆರಿಕೆಯ  ಮಾಜಿ ಉಪಾಧ್ಯಕ್ಷರು. ಹವಾಮಾನದ ಏರು ಪೇರಿನ ಮೇಲೆ ಬಹಳಷ್ಟು ಅಧ್ಯಯನ ನಡೆಸಿದ್ದ ಅಲ್-ಗೋರ್ ಒಂದು ಪುಸ್ತಕ ಸಹ ಬರೆದಿದ್ದರು. ಅದರ ಹೆಸರು An Inconvenient Truth. ಈ ಶೀರ್ಷಿಕೆ ಹವಾಮಾನಕ್ಕೆ ಮಾತ್ರವಲ್ಲ ತಮ್ಮ ವೈಯಕ್ತಿಕ ಬದುಕಿಗೂ ಅನ್ವಯಿಸಬಹುದು ಎಂದು ಬಹುಶಃ ಅವರಿಗೆ ತಿಳಿದಿರಲಿಲ್ಲವೇನೋ? ಅವರ ಇತ್ತೀಚಿನ ಪುಸ್ತಕದ ಹೆಸರು The Assault on Reason. ಶೀರ್ಷಿಕೆಗಳನ್ನು ಗಮನಿಸಿದಿರಿ ತಾನೇ?    

Familiarity breeds contempt ಎನ್ನುತ್ತಾರೆ. ಆದರೆ ಈ ವಿವಾಹದ ಸಲುಗೆಯ ಬೆಸುಗೆ ಸಡಿಲವಾಗಿ ಕಳಚಿ ಬೀಳಲು ತೆಗೆದುಕೊಂಡವು ಪೂರ್ತಿ ನಲವತ್ತು ವರ್ಷಗಳು. ಅಷ್ಟಕ್ಕೂ ವಿವಾಹದಲ್ಲಿ ಇರಬಾರದ ಸಲುಗೆ ಬೇರೆಲ್ಲಿ ಸಿಗಬಹುದು ಹೇಳಿ? all is fair in love and war ಅಲ್ವಾ? ಒಂದು ಜೋಡಿ ಗೃಹಸ್ಥಾಶ್ರಮಕ್ಕೆ ಮಧುರ ಭಾವನೆಗಳನ್ನು, ಹೊಂಗನಸುಗಳನ್ನು ಇಟ್ಟುಕೊಂಡು ಪ್ರವೇಶಿಸುತ್ತದೆ. ತನ್ನ ಹಿರಿಯರು, ಪೂರ್ವಜರು ಆರಿಸಿಕೊಂಡ ದಾರಿಯನ್ನೇ ಕ್ರಮಿಸಲು ಹೊರಡುವ ಜೋಡಿಗೆ ಆರಂಭದ ಪ್ರೇಮದ ಹುಚ್ಚು ಹೊಳೆ ಈಜಿ ದಡ ಸೇರಿದ ನಂತರ ಒಂದೊಂದೇ ಮುಳ್ಳುಗಳು ಕಾಣಲು, ಪೀಡಿಸಲು ತೊಡಗುತ್ತವೆ. ಆದರೆ ತಮ್ಮ ಪೂರ್ವಜರ ನಿರೀಕ್ಷೆ, ಮಿತಿ ಅರಿತು ಕೊಂಡ, ಜೋಡಿ ಅವನ್ನು ಹೇಗೆ ತನ್ನ ಪೂರ್ವಜರು ನಿಭಾಯಿಸಿದರು ಕಂಡುಕೊಂಡ ಜೋಡಿಗೆ ಸಂಕಷ್ಟಗಳು ತೋರದು. ತೋರಿದರೂ ಅದೂ ಬದುಕಿನ ಅವಿಭಾಜ್ಯ ಅಂಗ ಎಂದು ಕೊಂಡು ತಮ್ಮ ಅಪ್ಪುಗೆಯಲ್ಲಿ ತೊಡಕುಗಳನ್ನೂ ಸೇರಿಸಿಕೊಂಡು ಮುನ್ನಡೆಯುತ್ತಾರೆ. ಅದರಲ್ಲೂ ಆ ವೈವಾಹಿಕ ಬದುಕು ಒಂದೆರಡು, ಮೂರು ಮೊಗ್ಗುಗಳನ್ನು ನೀಡಿದರಂತೂ ಅವರ ಲಾಲನೆ ಪಾಲನೆಯಲ್ಲೂ, ತಮಗಾಗಿ ಅಲ್ಲದಿದ್ದರೂ ತಮ್ಮ ಮಕ್ಕಳಿ ಗಾಗಿಯಾದರೂ ಸಂಬಂಧವನ್ನೂ ಖಾಯಂ ಆಗಿ ಇರಿಸಲು ಪಣ ತೊಡುತ್ತಾರೆ.      

ಅಲ್-ಗೋರ್ ಅವರದು ವಿಶಿಷ್ಟ ವ್ಯಕ್ತಿತ್ವ. ಅಲ್-ಗೋರ್ ಅವರಿಗೆ ಹಿನ್ನಡೆ ಮತ್ತು ಪೆಟ್ಟುಗಳು ಹೊಸತಲ್ಲ. ಇಂಥ ಮತ್ತೊಂದು ಮರ್ಮಾಘಾತ ಅವರಿಗೆ ರಾಜಕೀಯ ಜೀವನದಲ್ಲಿ ಸಿಕ್ಕಿತ್ತು. ೨೦೦೧, ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ. ಜಾರ್ಜ್ ಬುಶ್ ಎದುರಿಗೆ ಸೆಣಸಲು ಡೆಮೊಕ್ರಾಟಿಕ್ ಪಕ್ಷ ಅಲ್-ಗೋರ್ ಅವರನ್ನು ಆರಿಸಿತು. ಪರಸ್ಪರ ಕೆಸರೆರೆಚಾಟ ಜೋರಾಗಿ ನಡೆದು ಅಲ್-ಗೋರ್ ಗೆಲ್ಲಬಹುದು ಎಂದು ಅಮೇರಿಕಾ ಮತ್ತು ವಿಶ್ವ ಭಾವಿಸಿತು. ಮತಗಣನೆ ಪೂರ್ತಿಯಾದ ಕೂಡಲೇ ನಾನು ಸೋತೆ, ಅಭಿನಂದನೆಗಳು ಎಂದು ಬುಶ್ ತನ್ನ ಪ್ರತಿಸ್ಪರ್ದಿ ಗೋರ್ ಅವರಿಗೆ ಫೋನಾಯಿಸಿ ಶುಭ ಕೋರುತ್ತಾರೆ. ಆದರೆ ಮಾರನೆ ದಿನ ಎಣಿಕೆಯಲ್ಲಿ ಎಡವತ್ತಾಗಿದ್ದನ್ನು ಅರಿತ ಬುಶ್ ಪ್ಲೇಟ್ ಬದಲಿಸಿ ಮರು ಎಣಿಕೆ ಆಗಬೇಕು ಎಂದು ಪಟ್ಟು ಹಿಡಿಯುತ್ತಾರೆ. ಸಾಂವಿಧಾನಿಕ ಬಿಕ್ಕಟ್ಟು ಅಮೆರಿಕೆಯನ್ನು ಆವರಿಸುತ್ತದೆ ಸುಮಾರು ಆರು ವಾರಗಳ ನಂತರ ಸರ್ವೋಚ್ಚ ನ್ಯಾಯಾಲಯದ ಸಹಾಯದಿಂದ ಬುಶ್ ಗದ್ದುಗೆಗೆ ಏರುತ್ತಾರೆ ತನ್ನ ಕಪಟ ತಂತ್ರ ತೋರಿಸಿ. Bush stole the election ಎಂದು ಹಲವರು ಬೊಬ್ಬೆ ಇಟ್ಟರೂ ಏನೂ ಫಲಿಸುವುದಿಲ್ಲ. ಈ ಆಘಾತದಿಂದ ಚೇತರಿಸಿಕೊಂಡ ಅಲ್-ಗೋರ್ ಗೆ ಸಾಂತ್ವನ ನೀಡಿ ತನ್ನ ಪರವಾಗಿ ಹೋರಾಡುವಂತೆ ಕೋರಿತು ನಿಸರ್ಗ ಅಲ್-ಗೋರ್ ಅವರಲ್ಲಿ.

ಅಲ್-ಗೋರ್ ಅಂತರ್ಜಾಲ ತಂತ್ರಜ್ಞಾನ ಅಮೆರಿಕೆಯ ಮೂಲೆ ಮೂಲೆ ತಲುಪುವಂತೆ ಮಾಡಿದ ವ್ಯಕ್ತಿ. ಹವಾಮಾನ, ನಿಸರ್ಗಕ್ಕಾಗಿ ಹೋರಾಡಿದ ಅಲ್-ಗೋರ್ ನೊಬೆಲ್ ಪ್ರಶಸ್ತಿ ವಿಜೇತರು. ಈ ವೈವಾಹಿಕ ಸಂಕಷ್ಟದಲ್ಲಿ ಸಿಲುಕಿರುವ ಈ ಲವಲವಿಕೆಯ ಜೋಡಿಗೆ ತಾವು ಆರಿಸಿಕೊಂಡ ದಾರಿ ಸುಗಮವಾಗಲೆಂದು ಹಾರೈಸೋಣವೇ?

ಒಬ್ಬ ಒಳ್ಳೆಯ, ಮನಸ್ಸಿಗೆ ಒಪ್ಪುವ ವ್ಯಕ್ತಿಯನ್ನು ನಾವು ಸ್ಮರಿಸಬೇಕಾದರೆ ಅವನು ಸಾಯಬೇಕು, ಅಥವಾ ಗೋರ್ ರೀತಿಯಲ್ಲಿ ಬದುಕಿನಲ್ಲಿ ದೊಡ್ಡ ಏಟನ್ನು ಅನುಭವಿಸಬೇಕು. ಅವರ ವ್ಯಕ್ತಿತ್ವದ ಬಗ್ಗೆ ಅರಿಯಲು ನಮಗೆ ತೋಚಿದ ಸಮಯ ಅವರು ನ್ಯಾಯಾಲಯದ ಮೆಟ್ಟಿಲು ಹತ್ತುವ ಸಮಯ, ತನ್ನ ವೈವಾಹಿಕ ಬದುಕನ್ನು (ವಿವಾಹಗಳು ಸ್ವರ್ಗದಲ್ಲಿ ಏರ್ಪಡುತ್ತವೆ, ಬಾಕಿ ಕಾರ್ಯಗಳು ಕೋರ್ಟ್ ಗಳಲ್ಲಿ ) dissolve  ಮಾಡಲು ನ್ಯಾಮೂರ್ತಿಯನ್ನು ಕೇಳುವ ಸಮಯ. ಸ್ವರ್ಗದಲ್ಲಿ ಶುಭ್ರ, ಶ್ವೇತ ದೇವದೂತರ ಸಮ್ಮುಖದಲ್ಲಿ ಜರುಗುವ ಮದುವೆ ಕಪ್ಪು ಕೋಟುಗಳನ್ನು ತೊಟ್ಟ ವಕೀಲರ ಮಧ್ಯೆ ಪರ್ಯವಸಾನ.   

ದಶಕಗಳ ಹಿಂದೆ ನನ್ನ ಶಾಲಾ ಮೇಷ್ಟರೊಬ್ಬರು ಹೇಳಿದ ಮಾತು. ವಿಚ್ಚೇದನ ಸರ್ವೇ ಸಾಮಾನ್ಯ ಪಾಶ್ಚಾತ್ಯರಲ್ಲಿ. ಒಬ್ಬಾಕೆ ತನ್ನ ಗಂಡನನ್ನು ತೊರೆದು ಇನ್ನೊಬ್ಬ ನನ್ನು ಮದುವೆಯಾಗುತ್ತಾಳೆ. ಆತನೂ ವಿಚ್ಛೇದಿತ. ಇಬ್ಬರಿಗೂ ತಮ್ಮ ಮಾಜಿ ಸಂಗಾತಿಗಳಿಂದ ಮಕ್ಕಳಿರುತ್ತವೆ. ಇವರು ಮದುವೆಯಾದ ನಂತರ ಇವರಿಗೂ ಮಕ್ಕಳಾಗುತ್ತವೆ. ಆಗ ಮಕ್ಕಳು ಜಗಳವಾಡುವಾಗ ಹೆಂಡತಿ ತನ್ನ ಗಂಡನನ್ನು ಉದ್ದೇಶಿಸಿ ಹೀಗೆ ಹೇಳುತ್ತಾಳೆ ” honey, my children and your children are fighting with “OUR” children” ಅಂತ.

ಪುರುಷರೇಕೆ ಚಿಕ್ಕ ಪ್ರಾಯದ ಅಥವಾ ಎಳೆ ಪ್ರಾಯದ ಹೆಣ್ಣುಗಳನ್ನು ಬಯಸುತ್ತಾರೆ?

ಪುರುಷರೇಕೆ ಚಿಕ್ಕ ಪ್ರಾಯದ ಅಥವಾ ಎಳೆ ಪ್ರಾಯದ ಹೆಣ್ಣುಗಳನ್ನು ಬಯಸುತ್ತಾರೆ? ಭಾರತದಲ್ಲಿ ಈ ವಿದ್ಯಮಾನ ದೊಡ್ಡ ರೀತೊಯಲ್ಲಿ ಇಲ್ಲದಿದ್ದರೂ ಪಾಶ್ಚಾತ್ಯರಲ್ಲಿ ಇದನ್ನು ಹೆಚ್ಚು ಕಾಣಬಹುದು. ಉದಾಹರಣೆಗೆ ಇಟಲಿಯ ಪ್ರಧಾನಿ ಅಗರ್ಭ ಶ್ರೀಮಂತ ೭೨ ವರುಷ ಪ್ರಾಯದ ಬೆರ್ಲಸ್ಕೊನಿ ಗೆ ೧೮ ರ ಹರೆಯದ ಪ್ರೇಯಸಿ. ಈ ಪ್ರಣಯದ ಪರಿಣಾಮ ವಿಚ್ಚೇದನ. ಇಟ್ಟು ಕೊಂಡವಳು ಬಂದಾಗ ಕಟ್ಟಿ ಕೊಂಡವಳು ಕಟ್ಟಿಕೊಂಡಳು ಗಂಟು ಮೂಟೆಯನ್ನು. ೭೨ ರ್ ಈ ತರುಣನಿಗೆ ಇದು ಹೊಸತಲ್ಲ. ಸಾಮಾನ್ಯವಾಗಿ ಈತ ಬೇಟೆಯಾಡುವುದೇ “ಮೈ ತುಂಬಿದಾ ಮಾಗಿದ ಸಿಹಿಯ” ಹುಡುಗಿಯರನ್ನು. ಈ ರೀತಿಯ ಮುದುಕರು ಹರೆಯದ ಹೆಣ್ಣುಗಳ ಹಿಂದೆ ಹೋಗುವಾಗ ಸ್ತ್ರೀ ಮಣಿಗಳಿಗೆ ಉರಿ. ಈ ಗಂಡಸರಲ್ಲಿ ಏನಿರಬಹುದು ಎಂದು ಹುಡುಗಿಯರು ಹಿಂದೆ ಬೀಳುತ್ತಾರೋ ಎಂದು.  ಕೆಲವರಿಗೆ ತಮಾಷೆ, ತಮ್ಮದೇ ಕಾರಣಗಳನ್ನು ನೀಡಿ ಉರಿಯುವ ಉದರಕ್ಕೆ ಒಂದಿಷ್ಟು ಶಾಂತಿ ಮಾಡೋದು. ಕೆಳಗಿವೆ ನೋಡಿ ಕೆಲವೊಂದು ಕಾರಣಗಳು ಪಡ್ಡೆ ಹುಡ್ಗೀರು ಏಕೆ ಮುದಿಯರ ಬೆನ್ನ ಹಿಂದೆ ಎಂದು.

೧. ಮುದಿಯನೊಂದಿಗೆ ಬರುತ್ತದೆ ಅವನು ಉಳಿಸಿದ ಹಣ.

೨. ದಿನಕ್ಕೆರಡು, ಮೂರು ಸಾರಿಯಾದರೂ ಫೋನ್ ಮಾಡಿ ವಿಚಾರಿಸಿ ಕೊಳ್ಳುತ್ತಾನೆ. (ಇದ್ದಾಳೋ, ಇಲ್ಲಾ ಇನ್ಯಾವುದಾದರೂ ತರಲೆ ಮುದುಕ ಹಾರಿಸಿ ಕೊಂಡು ಹೋದನೋ ಎಂದು ನೋಡಲಾದರೂ )

೩. ಅವಳ home work ನಲ್ಲಿ ಅವನು ಸಹಾಯ ಮಾಡಬಹುದು.

೪. ಅವಳಿಗೆ ಉಳುಕಿದಾಗ ಅವನ ಊರುಗೋಲನ್ನು ಉಪಯೋಗಿಸಬಹುದು.

೫. ಲೈಂಗಿಕ ಕ್ರೀಡೆಯಲ್ಲಿ ಸಾವಧಾನ ಮತ್ತು ಸಹನೆ.

೬. ಅವನು ಆಕೆಯನ್ನು ಸುಲಭವಾಗಿ ಬದಲಿಸುವುದಿಲ್ಲ (ಬದಲಿಸಿದರೆ ಇದೆ ಥರದ ಗಿಳಿ ಎಲ್ಲಿ ಸಿಕ್ಕಬಹುದು?)

ಇನ್ನೂ ಏನೇನೋ ನಮೂನಿ, ನಮೂನಿ, ಕಾರಣಗಳು…

ಹುಲ್ಲಾಗು ಬೆಟ್ಟದಡಿ,, ಸಿಹಿಯಾಗು ಮಾತಿನಲ್ಲಿ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು — ಮಂಕುತಿಮ್ಮ ।।

ಸಿಹಿಯಾಗು ಮಾತಿನಲ್ಲಿ, ಬೆಳಕಾಗು ಬಾಳಿನಲ್ಲಿ

ರೋಷಾ….ಬಿಡೂ, ಬಿಡೂ, ಸಾಕೂ….   

ಸಂಪದದಲ್ಲಿ ಸಿಕ್ಕ ಈ ಡೀ ವೀ ಜೀ ಯವರ ಸಾಲುಗಳು ಇಷ್ಟವಾದವು, ಹಾಗೆಯೇ ಅದನ್ನು ಓದುತ್ತಿರುವಾಗ “ಸಿಹಿಯಾಗು ಮಾತಿನಲ್ಲಿ…..” ಹಾಡು ನೆನಪಿಗೆ ಬಂತು.

ಈ ಮೇಲಿನ ಮಾತುಗಳು ಬಹುಶಃ ಹಗೆ ವರ್ತಕರಿಗೆ ಇಷ್ಟವಾಗದಿರಬಹುದು. ಆದರೂ ಒಂದಲ್ಲ ಒಂದು ದಿನ ತಮ್ಮ “ವ್ಯಾಪಾರ” ಬಿಟ್ಟು ಮಾನವೀಯ ಮೌಲ್ಯಗಳ ಕಡೆ ಗಮನ ಕೊಡುವರೆಂಬ ಆಶಯ ಮನದ ಮೂಲೆಯಲ್ಲಿ.

ಅಪರೂಪದ ಚಿತ್ರಗಳು, ಅಪರೂಪ ಚೇತನಗಳದು

ಅಪರೂಪದ ಚಿತ್ರಗಳು, ಅಪರೂಪ ಚೇತನಗಳದು…

ಗಾಂಧೀಜಿ ಗಡಿ ನಾಡ ಗಾಂಧೀ ಖಾನ್ ಅಬ್ದುಲ್ ಗಫ್ಫಾರ್ ಖಾನರೊಂದಿಗೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಖಾನ್ ಸಾಹೇಬರು ಭಾರತದ ಬಗ್ಗೆ ಉತ್ಕಟ ಪ್ರೀತಿ ಇಟ್ಟುಕೊಂಡಿದ್ದವರು. ಭಾರತದ ವಿಭಜನೆಯನ್ನು ಶತಾಯ ಗತಾಯ ವಿರೋಧಿಸಿದ್ದ ಭಾರತ ಮಾತೆಯ ಅಪೂರ್ವ, ನೆಚ್ಚಿನ ಪುತ್ರ ಖಾನ್ ಅಬ್ದುಲ್ ಗಫ್ಫಾರ್ ಖಾನ್ ರಿಗೆ “ಭಾರತ ರತ್ನ” ಪ್ರಶಸ್ತಿ ನೀಡುವ ಮೂಲಕ ದೇಶ ತನ್ನ ಕೃತಜ್ಞತೆ ಅರ್ಪಿಸಿತು.      

ಗಾಂಧೀಜಿ, ನೆಹರೂ, ವಲ್ಲಬ್ಹ್ ಪಟೇಲ್ ಜೊತೆ

ಗಾಂಧೀಜಿ ರೈಲಿನಿಂದ ಇಳಿಯುತ್ತಿರುವುದು…

ಗಮನಿಸಿ, ಬೋಗಿ ಮೂರನೇ ದರ್ಜೆಯದು (third class). ಗಾಂಧೀಜಿ ಯಾವಾಗಲೂ ಈ ದರ್ಜೆಯಲ್ಲೇ ಪ್ರಯಾಣಿಸುತ್ತಿದ್ದರು. ಬೋಗಿ ಮೂರನೇ ದರ್ಜೆಯಾದರೂ ಮಹಾತ್ಮ ಹತ್ತಿದ ಕೂಡಲೇ ಮೂರನೇ ದರ್ಜೆಯ ಬೋಗಿ ಉನ್ನತ ಮಟ್ಟಕ್ಕೇರಿತು, ಅಲ್ಲವೇ?

ನೆಹರೂ ಕ್ರಿಕೆಟ್ ಮೈದಾನದಲ್ಲಿ

ಸಮಸ್ಯೆಯ ಜಾಡನ್ನು ಹಿಡಿದು…..

Alexis de Tocqueville, ೧೯ ನೇ ಶತಮಾನದ ಫ್ರೆಂಚ್ ದಾರ್ಶನಿಕ ತನ್ನ Democracy in America ಪುಸ್ತಕದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆಯುತ್ತಾ The old regime and the revolution ಪುಸ್ತಕದಲ್ಲಿ ಫ್ರೆಂಚ್ ಕ್ರಾಂತಿ ವಾಸ್ತವ ಕ್ರಾಂತಿಗಿಂತ ಬಹು ಮೊದಲೇ ಶುರುವಾಗಿತ್ತು ಎಂದು ವಾದವನ್ನು ಮಂಡಿಸಿದ. ೧೮ ನೇ ಶತಮಾನದ ಕೊನೆಯಭಾಗದಲ್ಲಿ ನಡೆದ ಫ್ರೆಂಚ್ ಕ್ರಾಂತಿಗೆ ದಶಕಗಳ ಮೊದಲೇ ಭೂಗತ ಕಂಪನಗಳು ಶುರುವಾಗಿತ್ತು ಹಾಗೂ ಅಸಮಾನತೆ ಮತ್ತು ಅನ್ಯಾಯದ ಕಾರಣ ನಡೆದ ಈ ಕ್ರಾಂತಿಯ ಸುಳಿವನ್ನು ಜನ ಮೊದಲೇ ಅರಿತು ಜಾಣತನದಿಂದ ಪ್ರತಿಕ್ರಯಿಸಿದ್ದರೆ “ಭೀತಿಯ ಆಳ್ವಿಕೆ” (Reign of Terror) ಯನ್ನು ತಡೆಗಟ್ಟಬಹುದಿತ್ತು ಎಂದೂ ಹೇಳಿದ.

ಮೇಲಿನ ಹೇಳಿಕೆಯಲ್ಲಿ ನಮಗೆ ನಮ್ಮ ಮಧ್ಯೆಯೇ ಸಂಭವಿಸುತ್ತಿರುವ ಘಟನೆಗಳೊಂದಿಗೆ  ಸಾಮ್ಯತೆ ಕಾಣುತ್ತಿದೆಯೇ? ನಿನ್ನೆ ನಡೆದ ಬರ್ಬರ ಸಾಮೂಹಿಕ ಹತ್ಯೆಗೆ ಕಾರಣರಾದ ಮಾವೋ ಗಳು ನಮಗೆ ಈ ಸಾಮ್ಯತೆಯನ್ನು ಒದಗಿಸುತ್ತಿಲ್ಲವೇ? ಕಾಡಿನಿಂದ ಆರಂಭವಾದ ಸಾವಿನ ಛಾಯೆ ಈಗ ನಗರಗಳನ್ನೂ ಆವರಿಸತೊಡಗಿದೆ. ಎಲ್ಲರಿಗೂ ತಿಳಿದಂತೆ ಈ ನಕ್ಸಲ್, ಮಾವೋ ಮುಂತಾದ ಚಳುವಳಿಗಳು ಬಹು ಹಿಂದೆಯೇ ಶುರುವಾಗಿದ್ದವು. ಆದರೆ ಪ್ರಪಂಚದ ಎಲ್ಲಾ ಸರಕಾರಗಳಂತೆ ನಮ್ಮ ಸರಕಾರವೂ ಕಣ್ಣು ಬಿಟ್ಟಿದ್ದು ಹಿಂಸೆ ಕೈ ಮೀರಿದಾಗ, ರಕ್ತ ದ ಹೊಳೆ ಹರಿಯಲು ತೊಡಗಿದಾಗ. ಝರಿಯ ರೀತಿ ಆರಂಭವಾದ ಈ ಚಳುವಳಿ ರಕ್ತದ ಕಾಲುವೆಯನ್ನು ಹರಿಬಿಟ್ಟಾಗ ನಾವು ಕಂಗಾಲು. ನಿಜವಾಗಿ ಹೇಳಬೇಕೆಂದರೆ ಈ ಚಳುವಳಿಯನ್ನು ಹತ್ತಿಕ್ಕಲು ಬೇಕಾದ ಯಾವ ಪರಿಹಾರವೂ ನಮ್ಮಲ್ಲಿಲ್ಲ. ಇದ್ದಿದ್ದರೆ ನಮ್ಮ ಗಡಿ ಭದ್ರತಾ ಪಡೆಯ ಸೈನಿಕರು ದಂತೆವಾಡ ದಲ್ಲಿ ಜೀವ ತೆತ್ತಾಗಲೇ ಹೊರಬರುತ್ತಿತ್ತು ಪರಿಹಾರದ ಅಸ್ತ್ರ. ಈ ಸಾಮಾಜಿಕ ಸಮಸ್ಯೆಗೆ  ಸೈನಿಕ ಪರಿಹಾರವಾಗಲಿ, ಸಾಮಾಜಿಕ ಪರಿಹಾರವಾಗಲಿ ನಮಗೆ ಕಾಣುತ್ತಿಲ್ಲ. ನಕ್ಸಲ್ ಪೀಡೆಯನ್ನು ಬಲಿ ಹಾಕಲು ಸೈನ್ಯವನ್ನು ಕಾನನಕ್ಕೆ ಬಿಡಲು ಸಾಧ್ಯವಿಲ್ಲ ಎಂದು ನಾವು ಅರಿತಿದ್ದಾಯಿತು ಶ್ರೀಲಂಕೆಯಲ್ಲಿ. ತಮಿಳು ಭಯೋತ್ಪಾದಕರನ್ನು ಸದೆ ಬಡಿಯಲು ರಾಜೀವ್ ಗಾಂಧೀ ಆತುರ ತೋರಿಸಿ ಬೆರಳು ಕಚ್ಚಿ ಕೊಂಡಿದ್ದು ಮಾತ್ರವಲ್ಲ, ಶ್ರೀಲಂಕೆಯ ಅಂದಿನ ಅಧಕ್ಷ J.R. ಜಯವರ್ಧನೆ ಯವರ ರಾಜಕೀಯ ದಾಳಕ್ಕೆ ಬಲಿಯಾಗಿ, ಅಲ್ಲಿನ ಸೇನೆಯ ದ್ರೋಹದಿಂದಲೂ, ಕಾಡಿನಲ್ಲಿ ಹೋರಾಡಿದ ಅನುಭವದ ಕೊರತೆಯೂ ನಾವು ಮುಖ ಭಂಗ ಅನುಭವಿಸುವಂತೆ ಮಾಡಿತು. ಕಾಡಿನಲ್ಲಿ ಅವಿತು ಹೋರಾಡುವ ನಕ್ಸಲರು vietnam ನ “ವಿಎಟ್ ಕಾಂಗ್” ಥರದ ಹೋರಾಟಗಾರರು. ಸಾಮಾನ್ಯ ಜನ ಯಾರು, ನಕ್ಸಲರು ಯಾರು ಎಂದು ಹೇಳಲು ಸಾಧ್ಯವಿಲ್ಲ. vietnam ನಲ್ಲಿ ಅಮೇರಿಕಾ ಸೋತು ಸುಣ್ಣವಾಗಿದ್ದು ಈ ವ್ಯತ್ಯಾಸದ ಅರಿವಿಲ್ಲದೆ ಇದ್ದುದರಿಂದ. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ನಮ್ಮ ಸೈನ್ಯವನ್ನು ಕಾಡಿಗೆ ಕಳಿಸಬಾರದು. ದುಡುಕಿನ, ಮೂರ್ಖ ಸಾಹಸಕ್ಕೆ ನಮ್ಮ ಸೈನಿಕರು ಬಲಿಯಾಗುವುದು ಬೇಡ.  

ಶ್ರೀಮಂತ ಅತಿ ಶ್ರೀಮಂತನಾಗುತ್ತಿರುವುದು ಮತ್ತು ಬಡವ ದಿನೇ ದಿನೇ ಬಡತನದ ಪಾತಾಳಕ್ಕೆ ಇಳಿಯುತ್ತಿರುವುದು ನಮಗೆ ತಿಳಿದ ಸತ್ಯ. ಆದರೆ ಬಂಡವಾಳಶಾಹಿ ವ್ಯವಸ್ಥೆಯ ಮೊರೆ ಹೋದ ನಮಗೆ ಝಗ ಝಗಿಸುವ ನಿಯಾನ್ ಬೆಳಕುಗಳು, ಗಗನ ಚುಂಬಿ ಗೋಪುರಗಳು, ಕೆಲವು fly over ಗಳು ನಮ್ಮ ದೃಷ್ಟಿ ತಪ್ಪಿಸಿದವು. ನಮಗೆ ಟಾಟಾ, ಗೋದ್ರೆಜ್, ಅಂಬಾನಿಗಳಂಥವರ ಶ್ರೀಮಂತಿಕೆ,  ಬಾಲಿವುಡ್ ತಾರೆಯರ ಬದುಕುವ ರೀತಿ ಮೋಡಿ ಮಾಡಿದವು. ಇದೇ ನಿಜವಾದ ಭಾರತ ಎನ್ನುವ ಭ್ರಮೆ ಆವರಿಸಿತು. ಈ ಭ್ರಮೆಗೆ ಆಂಗ್ಲ ಮಾಧ್ಯಮಗಳು, ಕೃತಕ ಬದುಕನ್ನು ವೈಭವೀಕರಿಸುವ ಟಿವಿ ಧಾರಾವಾಹಿಗಳು ನೀರೆರೆದು ನಾವು ಪ್ರಗತಿಯಲ್ಲಿ  ಅಮೆರಿಕೆಯನ್ನು ಹಿಂದಕ್ಕೆ ಹಾಕಲು ಮೂರು ಗಜ ದೂರ ಮಾತ್ರ ಉಳಿದಿರುವುದು ಎಂದು ನಂಬುವಂತೆ ಮಾಡಿದವು. ಆದರೆ ವಾಸ್ತವವೋ? ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಪಾಲು ಒಪ್ಪೊತ್ತಿನ ಕೂಳಿಗಾಗಿ ಹರ ಸಾಹಸ ಮಾಡಬೇಕು. ದಿನೇ ದಿನೇ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿದವು. ಇಂಟರ್ನೆಟ್ ಯುಗ ಮತ್ತೊಂದು ರೀತಿಯ ಸಮಾಜವನ್ನೇ ಸೃಷ್ಟಿಸಿತು. ಎಂದೂ ಕಾಣದ ಕೇಳದ ದಶಸಾವಿರದಲ್ಲಿ ಎಷ್ಟು ಸೊನ್ನೆಗಳಿವೆ ಎಂದು ಗೊತ್ತಿಲ್ಲದ ಸಮುದಾಯ ಧಿಡೀರನೆ ದೊಡ್ಡ ಮೊತ್ತದ ಸಂಬಳ ಪಡೆದು ಮೆರೆಯಲು ತೊಡಗಿತು. ಚೌಕಾಶಿ ಎಂದರೆ ಒಂದು ಕೀಳು ಪರಿಪಾಠ ಎನ್ನುವ ಮಟ್ಟಿಗೆ ಹೇಳಿದ ಬೆಲೆಗೆ ಸಾಮಾನುಗಳನ್ನು ಕೊಂಡು ಬಡ ಜನರ ಬದುಕನ್ನು ಇನ್ನಷ್ಟು ದುಸ್ತರವಾಗಿಸಿತು. ಈ ರೀತಿಯ ಅಸಹಾಯಕ ಪರಿಸ್ಥಿತಿ ನಕ್ಸಲರಿಗೆ ವರದಾನವಾಗಿ ಪರಿಣಮಿಸಿತು.  ಥಳಕಿನ ಬದುಕು ಶೋಷಣೆ ಎಂದು ಜನರಿಗೆ ಮನವರಿಕೆ ಮಾಡಿಸಿ ಮುಗ್ಧ ಜನ ಶಸ್ತ್ರದ ಮೊರೆ ಹೋಗುವಂತೆ ಮಾಡಿತು.

ಹಿಂಸೆಯಿಂದ ಯಾರಿಗೂ ಲಾಭವಿಲ್ಲ ಎಂದು ಹೊಟ್ಟೆ ತುಂಬಿದವನಿಗೆ, ದೊಡ್ಡ ಕಾರನ್ನು ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿ ಟ್ಯಾಂಕ್ ತುಂಬುವವನಿಗೆ  ಗೊತ್ತು. ಆದರೆ ಹೊಟ್ಟೆಗಿಲ್ಲದೆ ಚೀರಾಡುವ, ತನ್ನ ಪುಟಾಣಿಗಳನ್ನು ವ್ಯರ್ಥವಾಗಿ ಸಮಾಧಾನ ಪಡಿಸಲು ಹೆಣಗಾಡುವವನಿಗೆ ಗೊತ್ತೇ ಈ ಸಾಮಾನ್ಯ ಲಾಜಿಕ್? ದಾರಿ ಕಾಣದೆ ಅಸಹಾಯಕರಾಗಿ ತನ್ನ ಹೊಟ್ಟೆಗಿಲ್ಲದಿದ್ದರೂ ಚಿಂತೆಯಿಲ್ಲ ನಮ್ಮನ್ನು ವಂಚಿಸಿದ ವ್ಯವಸ್ಥೆ ವಿರುದ್ಧ ಹೋರಾಡಿ ರಕ್ತ ಹರಿಸಬೇಕು ಎನ್ನುವುದು ಇವರ ಗುರಿಯಾಯಿತು. ಸಂಪತ್ತನ್ನು ದೋಚಿ ದುರಹಂಕಾರದಿಂದ ಮೆರೆಯುವವರಿಗೆ ತಿಳಿದಿರಲಿಲ್ಲವೇ ಇದೇ ಸಂಪತ್ತು ಅಸೂಯೆಯ ಹಾವಾಗಿ ಬಂದು ಕಚ್ಚೀತು ಎಂದು? ಪಾಪ ಅವರಿಗೆ ತಿಳಿಯುವ ಸಾಧ್ಯತೆ ತುಂಬಾ ಕಡಿಮೆ. surround sound ಮ್ಯೂಸಿಕ್ ಸಿಸ್ಟಂ, ಮತ್ತು ಹೋಂ ಥಿಯೇಟರ್ ನಲ್ಲಿ ಹಾಡು ಕೇಳುತ್ತಾ ಮೈಮರೆಯುವ ಮಂದಿಗೆ ಬಡವನ ಆಕ್ರಂದನ ಮುಟ್ಟದು, ಕೇಳದು. ಅಂದರೆ ಈ ರೀತಿಯ ತಾರತಮ್ಯದ ಬದುಕು ಗೂಳಿಯಾಗಿ ನಮ್ಮ ಮೇಲೆಯೇ ಎರಗದು ಎಂದು ನಮಗೆ ತಿಳಿದಿಲ್ಲ ಎಂದಲ್ಲ. ನಾವೆಷ್ಟೇ ಕೃತಕ ಮುಗ್ಧತೆ ಯನ್ನು ಪ್ರದರ್ಶಿಸಿದರೂ ನಮ್ಮೊಳಗೊಬ್ಬ ಇದ್ದೇ ಇರುತ್ತಾನಲ್ಲವೇ? ಮನಸ್ಸಾಕ್ಷಿ ಎಂಬ “ಗುರು” (inner teacher) ನಮಗೆ ತಿಳಿ ಹೇಳುತ್ತಲೇ ಇರುತ್ತಾನೆ. ಆದರೆ ಹಿತೋಪದೇಶ ಮಾಡುವ ತಂದೆಯನ್ನು, ಹಿರಿಯರನ್ನು ಅವಗಣನೆ ಮಾಡಿ ಬಾಯಿ ಮುಚ್ಚಿಸುವ ರೀತಿ ಈ ಗುರುವಿಗೂ ಇದೇ ಉಪಚಾರವನ್ನು ನಾವು ಕೊಟ್ಟೆವು. ಪರಿಣಾಮ ಈ ರಕ್ತದೋಕುಳಿ. ಏಕಾಏಕಿ ಮಕ್ಕಳು ತಬ್ಬಲಿಯಾಗುತ್ತಾರೆ, ಸುಮಂಗಲಿಯರು ವಿಧವೆಯರಾಗುತ್ತಾರೆ. ವೃದ್ಧ ಪಾಲಕರು ಪೋಷಿಸುವ ಮಕ್ಕಳನ್ನು ಕಳೆದುಕೊಂಡು ಪರಿತಪಿಸುತ್ತಾರೆ. ಭಯ, ಅಸಹಾಯಕತೆ ಎಲ್ಲೆಲ್ಲೂ ಆವರಿಸುತದೆ.

ನಿಸರ್ಗ calm before storm ರೀತಿ ನಮ್ಮ ನ್ನು ಅಚ್ಚರಿಗೊಳಿಸುತ್ತದೆ. ಆದರೆ ನಾವು ಕಾಣುತ್ತಿರುವ ನಕ್ಸಲ್ ಪ್ರತಿರೋಧಗಳು ಏಕಾಕಿ ಬಂದು ಬಿದ್ದಿದ್ದಲ್ಲ. ಚಿಕ್ಕ ಚಿಕ್ಕ ಕಂಪನಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಬಹುಶಃ ನಮಗದು ಸಂಗೀತದ drum ನ ಸದ್ದಿನಂತೆ ಕೇಳಿಸಿತು. ಮೇಲೆ ಹೇಳಿದಂತೆ ದೊಡ್ಡ ಮಟ್ಟದ ಹಿಂಸೆ ಆದಾಗಲೇ ಸರಕಾರ ತೂಕಡಿಕೆಯಿಂದ ತಲೆ ಎತ್ತುವಂತೆ ಮಾಡುವುದು. ತಲೆ ಎತ್ತಿದ ಮೇಲೋ? ತಲೆ, ಬಾಲ ಇಲ್ಲದ, ನಿಲ್ಲದ ಹರಟೆ. ಒಣ ಜಂಭ, ಒಣ ಬೆದರಿಕೆ. ಒಂದಿಷ್ಟು ಟಾಕ್ ಷೋ ಗಳು. ನಿವೃತ್ತ ಅಧಿಕಾರಿಗಳನ್ನು ಕರೆಸಿ ಒಂದಿಷ್ಟು ಚರ್ಚೆ, ನಂತರ ಮಹೋಗನಿ ಹಲಗೆಗಳಿಂದ ಆವೃತ್ತವಾದ, ಹವಾನಿ ಯಂತ್ರಿತ ಕಚೇರಿಗೆ ಹಿಂದಿರುಗಿ ಮತ್ತೊಂದು ತೂಕಡಿಕೆಗೆ ಸಿದ್ಧತೆ. ಇವರು ತೂಕಡಿಸುತ್ತಿರುವಾಗ ಅಮಾಯಕರು ರೈಲು ಹಳಿಗಳ ಮೇಲೆ ತಮ್ಮ ರಕ್ತ ಹರಿಬಿಟ್ಟು ಕೊಂಡು ಪ್ರಾಣ ಕಳೆದುಕೊಳ್ಳುವುದು. ಒಂದು ರೀತಿಯ vicious cycle.     

ಯಾವುದೇ ವಿವಾದ, ಸಮಸ್ಯೆ ಪರಿಹರಿಸಲು ಮಾತುಕತೆ ಬೇಕು. ಮಾತುಕತೆ ಎಂಥ ಸನ್ನಿವೇಶಗಳಿಗೂ ಒಂದು ದಿವ್ಯ ಮಂತ್ರ. ಜನ ಪರಸ್ಪರ ಮಾತನಾಡಬೇಕು. ಕಿವುಡತನ ಪ್ರದರ್ಶಿಸದೆ ಸವಾಧಾನವಾಗಿ ಒಬ್ಬರನ್ನೊಬ್ಬರು  ಅರಿಯಲು ಆರಂಭಿಸಬೇಕು. ಈ ಪ್ರಕ್ರಿಯೆ ಸಮಯ ತೆಗೆದು ಕೊಂಡರೂ ಆ ಸಮಯ ವ್ಯರ್ಥವಾಗಿ ಹೋಗುವುದಿಲ್ಲ.    

ಕ್ಷಿಪಣಿ ಉಡಾವಣೆಗಳು, ಚಂದ್ರಯಾನ, ಕಾಮನ್ ವೆಲ್ತ್ ಕ್ರೀಡೆಗಳು ಹಸಿದ ಜನರಿಗೆ ಒಪ್ಪೊತ್ತಿನ ಅನ್ನವನ್ನೋ, ಜೀವರಕ್ಷಕ ಔಷಧಿಗಳನ್ನೋ ಪೂರೈಸಲಾರವು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಮ್ ಸದಸ್ಯತ್ವ ದಿಂದ ದೊಡ್ಡ ಲಾಭವೇನೂ ಇಲ್ಲ. ನಮ್ಮ ego ವನ್ನು ಇನ್ನಷ್ಟು ಉಬ್ಬಿಸುತ್ತದೆ ಅಷ್ಟೇ. ಆಳುವವರು ಬಡವರ, ಅವಕಾಶ ವಂಚಿತರ ಹಿತದೃಷ್ಟಿಯ ಕಡೆ ತಮ್ಮ ದೃಷ್ಟಿ ನೆಡಬೇಕು. ಕೈಗಾರಿಕೋದ್ಯಮಿಗಳ, ಅಗರ್ಭ ಶ್ರೀಮಂತರ ಕೈಗಳಿಂದ “ಮದ್ಯ ತುಂಬಿದ ಪೆಗ್ಗು” ಗಳನ್ನು ಕಸಿದು ಒಂದು ಪರಿಹಾರಕ್ಕೆ ಅವರನ್ನೂ ಎಳೆದು ತರಬೇಕು. ತೆರಿಗೆ ವಂಚಿಸಿ ಮತ್ತು ತಮಗೆ ತೋಚಿದ ದಾರಿ ಹಿಡಿದು ಸಂಪತ್ತು ದೋಚುವವರಿಗೆ ಸಾಮಾಜಿಕ ಜವಾಬ್ದಾರಿ ಸಹ ಇರಬೇಕು. ಕ್ಷಿಪಣಿಗಳು ತಮ್ಮ ಘಳಿಗೆಗಾಗಿ ಇನ್ನಷ್ಟು ಸಮಯ ಕಾಯಲಿ. ಹಸಿದ ಉದರಕ್ಕೆ ಸಮಯ ಎನ್ನುವುದ ಜೀವನಾಡಿ. ಇನ್ನಷ್ಟು ಸಮಯ ವ್ಯರ್ಥಗೊಳಿಸದೆ ಎಲ್ಲಾ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ನಿರ್ದಿಷ್ಟ ಕಾರ್ಯ ಸೂಚಿಗೆ ಅಂತಿಟ್ಟುಕೊಂಡು ಬಡವರ, ನಿರ್ಗತಿಕರ ಆಕಾಂಕ್ಷೆ ಗಳನ್ನು ನೆರವೇರಿಸುವತ್ತ ಸರಕಾರ ಗಮನ ನೀಡಬೇಕು. ಅಲ್ಲಿಯವರೆಗೆ ನಕ್ಸಲರನ್ನು ಗಾಂಧೀವಾದಿಗಳು ಎಂದೆಲ್ಲಾ ಬಣ್ಣಿಸಿ ಯಾರಿಗೂ ಪ್ರಯೋಜನ ತಾರದ ಲೇಖನಗಳನ್ನ ಪ್ರಕಟಿಸಿ ಪರಿಸ್ಥಿತಿಯನ್ನು ಇನ್ನಷ್ಟು ಗೋಜಲುಗೊಳಿಸುವ ಬುದ್ಧಿವಂತರು ತಮ್ಮ ಲೇಖನಿಗೆ ಕಡಿವಾಣ ಹಾಕಲಿ.

ಪರೋಪಕಾರಿ ವೃಕ್ಷ

ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಕಳ್ಳ ಕಳ್ಳಿಯರಿಗೆ ಅನುಕೂಲವಾಗುವಂತೆ ಹಣ್ಣುಗಳನ್ನು ತನ್ನ ಮೈಮೇಲೆ ಬೆಳೆಸಿಕೊಂಡು ಮುಕ್ತ ಆಹ್ವಾನವೀಯುತ್ತದೆ ಲೂಟಿ ಮಾಡಿ ಕೊಳ್ಳಿ ಎಂದು. ಎಂಥ samaritan ಮರ ನೋಡಿ. ಎಲ್ಲಿದೆ ಆ ಮರ, ಎಂದು ಆಸೆ ಬುರುಕತನದಿಂದ ಕೇಳಬೇಡಿ. ಈ ಮರದ ತವರು ಸಾಗರದಾಚೆ. ಹಾಂ, ಸಾಗರದಾಚೆಯೋ? ಹಾಗಾದರೆ ಸಂಜೀವಿನಿಗಾಗಿ ಸಾಗರೋಲ್ಲಂಘನ ಮಾಡಿದ ಹನುಮಂತನ ಒಂದು ಟ್ರಿಕ್ ಪ್ರಯೋಗಿಸಿದರೆ ಹೇಗೆ? ಯಾವ ಉಲ್ಲಂಘನ ಬೇಕಾದರೂ ಮಾಡಿಕೊಳ್ಳಿ, ನನ್ನ ಕೈ ಕಾಲಿಗಲ್ಲವಲ್ಲಾ ಆಗೋದು ಬ್ಯಾನೆ.

ಹುಲು ಮನುಜರಿಗೆ ಒಂದು ತವರಾದರೆ ಈ ಪರೋಪಕಾರಿ ಮರಕ್ಕೆ ಹಲವು ತವರುಗಳು. ಪೆರಗ್ವೆ, ಅರ್ಜೆಂಟೀನ, ಬ್ರೆಜಿಲ್ ದೇಶಗಳಲ್ಲಿ ಕಾಣಸಿಗುವ ಈ ಮರ ಬರೀ ಪೋಕರಿಯರಿಗೆ ಮಾತ್ರ ಉಪಕಾರಿಯಲ್ಲ, ಔಷಧೀ ಗುಣಗಳನ್ನೂ ಸಹ ಹೊಂದಿದೆ. ಅಸ್ತಮಾ, ಆಮಶಂಕೆ ಮುಂತಾದ ರೋಗಗಳಿಗೆ ಇವು ರಾಮಬಾಣವಂತೆ. ಕ್ಯಾನ್ಸರ್ ರೋಗಕ್ಕೂ ಇದರ ಟೊಂಗೆಯಲ್ಲಿ ಉತ್ತರ ಇರಬಹುದು ಎಂದು ಲೆಕ್ಕಾಚಾರ. ಪುಕ್ಕಟೆ ಏನಾದರೂ ಸಿಗುತ್ತೆ ಎಂದರೆ ಜೋರಾಗಿಯೇ ಸಾಗುತ್ತದೆ ಲೆಕ್ಕಾಚಾರ, ಅಲ್ಲವೇ?

ಇನ್ನಷ್ಟು ಚಿತ್ರಗಳಿಗೆ ಕೆಳಗೆ ತೋರಿಸಿದ ತಾಣಕ್ಕೆ ಯಾತ್ರೆ ಬೆಳೆಸಿ:

http://www.kuriositas.com/2010/04/jabuticaba-tree-that-fruits-on-its.html

ಸ್ತ್ರೀಯರೇಕೆ ಚಂಡಮಾರುತಗಳು?

ಚಂಡಮಾರುತಗಳಿಗೂ, ಹೆಣ್ಣಿಗೂ ಇರುವ ಸಂಬಂಧವೇನು?

ಇದೀಗ ಆಂಧ್ರ, ತಮಿಳು ನಾಡಿನ ತೀರಗಳನ್ನು ಅಪ್ಪಳಿಸಲಿರುವ ಚಂಡಮಾರುತದ ಹೆಸರು “ಲೈಲಾ” ಲೈಲಾ, ಹೋ ಲೈಲಾ ಲೈಲಾ, ಕೈಸಿ ಹೋ ಲೈಲಾ, ಹರ್ ಕೊಯಿ ಚಾಹೇ ತುಜ್ಸೆ, ಮಿಲ್ನಾ ಅಕೇಲಾ” ಎಂದು ತೀರದ ಮೀನುಗಾರರಂತೂ ಖಂಡಿತ ಹಾಡಲಾರರು. WMO (World Meterological Organization ) ಅದ್ಯಾವ ಮಾನದಂಡವನ್ನು ಉಪಯೋಗಿಸುತ್ತಾರೋ ಹೆಸರನ್ನು ನಿರ್ಧರಿಸುವಲ್ಲಿ ಎನ್ನುವುದು ಗೊತ್ತಿಲ್ಲ. ಆದರೂ ಈ ಹೆಸರುಗಳು invariably female ಆದ್ದರಿಂದ ಇವರೇನಾದರೂ ಸ್ತ್ರೀ ಧ್ವೇಷಿಗಳೋ ಎನ್ನುವ ಅನುಮಾನವೂ ಕಾಡದಿರದು. ಕೆಲವು ಪುರುಷರಿಗಂತೂ ಈ ಹೆಸರುಗಳು ಪುಳಕ ತರುವುದಂತೂ ನಿಜ. ಆಗೊಮ್ಮೆ ಈಗೊಮ್ಮೆ ನಮ್ಮ ಮನೆಯ ಅಡುಗೆ ಮನೆಯಲ್ಲಿ ಚಂಡಮಾರುತ brew ಆಗೋ ಲಕ್ಷಣ ಕಂಡಾಗ ನಾನು ನೋಡು, WMO ಇಲಾಖೆಗೆ ಮುಂದಿನ ಚಂಡಮಾರುತಕ್ಕೆ ಎಂದು ನಿನ್ನ ಹೆಸರನ್ನು ಸೂಚಿಸಿ ಮನವಿಯನ್ನು ಸಲ್ಲಿಸುತ್ತೇನೆ ಎಂದು ಬೆದರಿಸಿದಾಗ ಚಂಡಮಾರುತ ಹಿತ ಮಾರುತವಾಗಿ ಪರಿವರ್ತಿತವಾಗುತ್ತದೆ. ಸ್ತ್ರೀರತ್ನಗಳ ಹೆಸರುಗಳನ್ನ ಚಂಡಮಾರುತಕ್ಕೆ ಇಟ್ಟು ಮನೋರಂಜನೆ ಪಡೆಯುವ WMO ಇಲಾಖೆಗೆ ನಾರೀ ಮಣಿಗಳು ಪ್ರತಿಭಟನೆ ಸಲ್ಲಿಸಿದ್ದರಿಂದ ಈಗ ಈ ಕೆಣಕುವ ಪರಿಪಾಠವನ್ನು ನಿಲ್ಲಿಸಲಾಗಿದೆಯಂತೆ. ಈಗ ಒಂದು ಹೆಸರು ಹೆಣ್ಣಿನದ್ದಾದರೆ ಮತ್ತೊಂದು ಹೆಸರು ಗಂಡಿನದು. ಈಗ ಇಲ್ಲೊಂದು ಅನ್ಯಾಯ BREW ಆಗ್ತಾ ಇದೆ ನೋಡಿ. ಹೆಣ್ಣು, ಗಂಡಿನ ದೇನೋ ಆಯಿತು ಚಂಡಮಾರುತಗಳಿಗೆ ನಾಮಕರಣ, ಆದರೆ ಇವೆರೆಡರ ನಡುವಿನವರ ಕತೆ ಏನು? shhhh ಪಾದ್ರಿ ಮುಲ್ಲಾಗಳು ಮುನಿಸಿಕೊಂಡಾರು.

ಅಮೆರಿಕೆಗೆ ಬೆಚ್ಚುವ ಅಪ್ಪುಗೆ ನೀಡಿದ ಚಂಡಮಾರುತ “ಕತ್ರೀನಾ”. ಆಹಾ ಎಂಥ ಹೆಸರು, ಆದರೆ ಆ ಹೆಸರೆಬ್ಬಿಸಿದ ರಾಡಿಯೋ? SHAKESPEARE ಹೇಳುತ್ತಾನೆ ರೋಮಿಯೋ – ಜೂಲಿಯೆಟ್ ನಲ್ಲಿ

” Whats in a name? that which we call a rose,

By any other name would smell as sweet.

ಆದರೆ ಲಲನೆಯರ ಹೆಸರಿಟ್ಟುಕೊಂಡ ಬಿಂಕದ ಚಂಡ ಮಾರುತಗಳಂತೂ ಜನರಿಗೆ ರೋಮಾಂಚನಕ್ಕೆ ಬದಲು ಭಯಗ್ರಸ್ಥರಾಗಿಸುತ್ತವೆ.

ಚಂಡ ಮಾರುತಗಳಿಗೆ ಮಹಿಳೆಯರ ಹೆಸರನ್ನಿಡುವ ಟ್ರೆಂಡ್ ಶುರು ಮಾಡಿದ್ದು ಆಸ್ಟ್ರೇಲಿಯಾದ Clement Wragge. ಈತ ಹವಾಮಾನ ಶಾಸ್ತ್ರಜ್ಞ.

ಬರದಿರಿ ನಮ್ಮ ದೇಶಕ್ಕೆ

ಒಂದು ಕಡೆ ವಿಶ್ವ ನಮ್ಮ ಪ್ರಗತಿಯ ಬಗ್ಗೆ ಮೆಚ್ಚುಗೆ ತೋರಿದರೆ ಮತ್ತೊಂದೆಡೆ ನಮ್ಮ ಅಧಿಕಾರಿ, ರಾಜ ಕಾರಣಿಗಳಿಗೆ ತಮ್ಮ ದೇಶಗಳಿಗೆ ಬರದಂತೆ ವಿಸಾ ನೀಡದೆ ಅಪಮಾನ ಮಾಡುತ್ತಿದೆ. ವಿಶ್ವ ರಾಜಕಾರಣದಲ್ಲಿ ನಮ್ಮದೇ ಆದ ಛಾಪು ಮೂಡಿಸಲು ಯತ್ನಿಸುತ್ತಿರುವ ನಮಗೆ ವಿವಿಧೆಡೆಗಳಿಂದ ಊಹಿಸಲಾಗದ ತೊಡಕುಗಳು ಎದುರಾಗುತ್ತಿವೆ. ನಮ್ಮ ಮೇಲೆ ಹಗೆ ಸಾಧಿಸುವುದೇ ತಮ್ಮ ಕಸುಬು ಎಂದುಕೊಂಡಿರುವ ನೆರೆಯ ದೇಶಕ್ಕೆ ಅದರ ಎಲ್ಲಾ ರೀತಿಯ ಹುನ್ನಾರಗಳ ಅರಿವಿದ್ದೂ ಪಾಶ್ಚಾತ್ಯ ರಾಷ್ಟ್ರಗಳು ತಮ್ಮದೃಷ್ಟಿಯನ್ನು ಮತ್ತೆಲ್ಲೋ ಬೀರಿ ಪರೋಕ್ಷ ಬೆಂಬಲವನ್ನು ನೀಡುತ್ತಿವೆ. ಅವರ ಪ್ರಕಾರ ಪಾಕ್ ನಿಜವಾಗಿಯೂ “ಪಾಕ್” (ಶುದ್ಧ). ನಮ್ಮ ವಿದೇಶಾಂಗ ಇಲಾಖೆಯನ್ನು ನಿರ್ವಹಿಸುತ್ತಿರುವವರಿಗೆ ತಮ್ಮ ಸೂಟು, ಗರಿಗರಿಯಾದ ರೇಷ್ಮೆ ಸೀರೆ ಪ್ರದರ್ಶಿಸುವುದೇ ತಮ್ಮ ಪ್ರತಿಭೆ ಎಂದು ಬಗೆದು ನಡೆಯುತ್ತಿರುವುದು ಖೇದಕರ.

ಉತ್ತರ ಅಮೇರಿಕಾ ಖಂಡದ ಕೆನಡಾ ದೇಶ ಅಂತರ ರಾಷ್ಟ್ರೀಯ ರಾಜಕಾರಣದಲ್ಲಿ ಅಷ್ಟೇನೂ ದೊಡ್ಡ ಪಾತ್ರ ವಹಿಸದ ದೇಶ. ಈ ದೇಶಕ್ಕೆ ಹೋಗಲು ಗಡಿ ಭದ್ರತಾ ಪಡೆಗೆ ಸೇರಿದ ನಿವೃತ್ತ ಪೇದೆ ವಿಸಾ ಕೇಳಿದಾಗ ಸಿಕ್ಕ ಉತ್ತರ  “ಕುಪ್ರಸಿದ್ಧ ಹಿಂಸಾತ್ಮಕ ಪಡೆ” (notoriously violent force) ಗೆ ಸೇರಿದವರಿಗೆ ಕೆನಡಾ ಒಂದು ಕನಸು ಎಂದು. ನಮ್ಮ ಅರೆ ಸೈನಿಕ ಪದೆಯನ್ನು “ಕುಪ್ರಸಿದ್ಧ” ಎನ್ನುವ ಮಟ್ಟಿಗೆ ಬೆಳೆಯಿತು ದಾರ್ಷ್ಟ್ಯತನ ಈ ಸದಾ ಮಗುಮ್ಮಾಗಿ ಇರುವ ದೇಶಕ್ಕೆ.  ಇನ್ನಿತರ ಸೈನಿಕ ಅಧಿಕಾರಿಗಳಿಗೂ ಇದೇ ರೀತಿ ಒಂದಲ್ಲ ಒಂದು ರೀತಿಯ “ನೀವು ನಮ್ಮ ದೇಶಕ್ಕೆ ಬರಲು ಅರ್ಹರಲ್ಲ” ಎಂದು ಹಣೆ ಪಟ್ಟಿ. ಈಗ ಒಂದು ಪ್ರಶ್ನೆ. ಪಕ್ಕದ ಪಾಕಿಸ್ತಾನದ ಅಧಿಕಾರಿಗಳಿಗೂ ಇದೇ ರೀತಿಯ ಉಪಚಾರ ಸಿಕ್ಕಿದೆಯೇ? ಸಿಕ್ಕಿರಲಿಕ್ಕಿಲ್ಲ. ಏಕೆಂದರೆ ಅಲ್ಲಿನ ಅಧಿಕಾರಿ, ರಾಜಕಾರಣಿಗಳು ಸಮಯ ಸಾಧಕರು, ಅವರಿಗೆ ರೊಟ್ಟಿಯ ಯಾವ ಮಗ್ಗುಲಿಗೆ ಬೆಣ್ಣೆ ತಗುಲಿದೆ ಎಂದು ಚೆನ್ನಾಗಿ ಗೊತ್ತು, ಅದರ ಪ್ರಕಾರವೇ ನಡೆದುಕೊಂಡು ತಮ್ಮ ಕಾರ್ಯ ಸಾಧಿಸಿ ಕೊಳ್ಳುತ್ತಾರೆ. ನಾವಾದರೋ, ಬೆಳ್ಳಗಿರುವುದೆಲ್ಲಾ ಹಾಲು ಎನ್ನುವ ಸಮೂಹ. ಅಷ್ಟು ಮಾತ್ರವಲ್ಲ, ಬಿಳಿಯರ ಯುದ್ಧವನ್ನು ಪಾಕಿ ಸೈನಿಕರು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೂ ಅವರ ತಂಟೆಗೆ ಯಾರೂ ಹೋಗುವುದಿಲ್ಲ.  

ಇಂಥ ಕಸಿವಿಸಿಯುಂಟು ಮಾಡುವ ಘಟನೆಗಳಿಂದ ನಮಗೆ ಮುಕ್ತಿ ಕೊಡಿಸಲು ಚಾಣಕ್ಯ ಪುರಿಯ ಸಾಹೇಬರುಗಳಿಂದ (ಅಲ್ಲಿ ಈಗ ಮಹಿಳಾ ಸಾಹೇಬರೂ ಇದ್ದಾರೆ) ಸಾಧ್ಯವೇ? ಕೇವಲ ಕೋಪದಿಂದ ಒಂದು ಪತ್ರ ಬರೆದು ಸ್ಪಷ್ಟೀಕರಣ ಕೇಳಿ, ಸಂಜೆಯಾದ ಕೂಡಲೇ ಇದೇ ಬಿಳಿಯರ ಜೊತೆ ಸೇರಿಕೊಂಡು ಪಂಚತಾರಾ ಹೋಟೆಲುಗಳಲ್ಲಿ ಮಜಾ ಉಡಾಯಿಸುವವರಿಂದ ದೇಶ ತನಗೆ ಸಲ್ಲಬೇಕಾದ ಮಾನವನ್ನು ನಿರೀಕ್ಷಿಸ ಬಹುದೇ?

ಈ ತೆರನಾದ ಘಟನೆಗಳಿಗೆ ಬಿಳಿಯರ ದೃಷ್ಟಿದೋಷ ಕಾರಣವೋ ಅಥವಾ ನಮ್ಮಲ್ಲೇ ಏನಾದರೂ ನಮಗೇ ಕಾಣದ ಐಬಿದೆಯೋ ತಿಳಿಯದು. ಹೌದು ಕೆಲವೊಮ್ಮೆ ಪ್ರಮಾದಗಳು ಸಂಭವಿಸಿರಬಹುದು, ಅಂಥ ಘಟನೆಗಳನ್ನ ಆಧಾರವಾಗಿಟ್ಟು ಕೊಂಡು ನಮ್ಮನ್ನು ಈ ರೀತಿ ಹೀನಾಯವಾಗಿ ನಡೆಸಿಕೊಂಡರೆ ಅದಕ್ಕೆ ನಮ್ಮ ಉತ್ತರ ಹೇಗಿರಬೇಕು? ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಅಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ ಮಾಡಿದ್ದರಿಂದ ನಮ್ಮಲ್ಲಿನ ರೋಷ ಮಾಯವಾಗಿ ಎಲ್ಲವನ್ನೂ ಸೈರಿಸಿಕೊಂಡು ಸೋತ ನಗೆಯೊಂದಿಗೆ ನಮ್ಮ ದಾರಿ ನೋಡಿ ಕೊಳ್ಳುವ ನಮ್ಮ ಜಾಯಮಾನ ನಮಗೇ ಮುಳು ವಾಗುತ್ತಿದೆ. ವಿದೇಶಾಂಗ ಇಲಾಖೆಗೆ ಹೊಸರಕ್ತ ತುಂಬಿ, ಈ ಇಲಾಖೆ ನಡೆಸಲು ವಯಸ್ಸಾದವರ ಅಗತ್ಯವಿಲ್ಲ, ಯುವ ಅಧಿಕಾರಿಗಳಿಗೆ ಸಿಗಲಿ ಚುಕ್ಕಾಣಿ.