ಪೈಲಟ್ ಸಾಹಸ

ಆಪತ್ಕಾಲೀನ ಪರಿಸ್ಥಿತಿಯಲ್ಲಿ ಯುದ್ಧ ವಿಮಾನದ ಪೈಲಟ್ ವಿಮಾನದಿಂದ ಕಳಚಿಕೊಂಡು (eject) ಪ್ಯಾರಾಶೂಟ್ ಮೂಲಕ ಸುರಕ್ಷಿತವಾಗಿ ಇಳಿಯುತ್ತಾನೆ. ಕೆನಡದಲ್ಲಿ ಒಂದು ಅಭ್ಯಾಸ ಯಾನದ ವೇಳೆ ತಾಂತ್ರಿಕ ವೈಫಲ್ಯದ ಕಾರಣ ನಿಯಂತ್ರಣ ತಪ್ಪಿದ ವಿಮಾನದಿಂದ ಪೈಲಟ್ ಕ್ಯಾಪ್ಟನ್ “ಬ್ರಯನ್ ಬ್ಯೂಸ್” ಸುರಕ್ಷಿತವಾಗಿ eject ಆಗಿ ತನ್ನ ಪ್ರಾಣ ಉಳಿಸಿಕೊಂಡ, ವಿಮಾನ ಅಗ್ನಿಗಾಹುತಿಯಾಯಿತು. ಇದನ್ನು ಕಣ್ಣಾರೆ ಕಂಡ ಛಾಯಾಗ್ರಾಹಕನೊಬ್ಬ ಸ್ವಲ್ಪವೂ ವಿಚಲಿತನಾಗದೆ ತನ್ನ ಗಮನ, ದೃಷ್ಟಿಯನ್ನು ಮೈ ನವಿರೇಳಿಸುವ ದೃಶ್ಯದ ಮೇಲೆ ಕೇಂದ್ರೀಕರಿಸಿ ತೆಗೆದ ಚಿತ್ರಗಳು…

ನೀವೆಷ್ಟು ಓದುವಿರಿ?

ಓದಿನ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನಾವೆಲ್ಲರೂ ಕೇಳುವ ದೂರು. ಅದರಲ್ಲೂ ಪುಸ್ತಕ  ಕೊಂಡು ಓದುವವರ ಸಂಖೆಯಂತೂ ವಿರಳವೇ. ವಿಶೇಷವಾಗಿ ಕನ್ನಡಿಗರಲ್ಲಿ ಆ ಕೊರತೆ ಎದ್ದು ಕಾಣುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಒಂದೇ ದಿನಪತ್ರಿಕೆ ಸಾಕು ಇಡೀ ಬಸ್ಸಿಗೆ ಅಥವಾ ರೈಲು ಬೋಗಿಗೆ. ನಮಗೆ recycling ನಲ್ಲಿ ದೊಡ್ಡ ವಿಶ್ವಾಸ. ಈ ವಿದ್ಯಮಾನ ದಿನಪತ್ರಿಕೆಗಳಂಥ ಓದಿಗಾದರೆ ಪುಸ್ತಕಗಳನ್ನು, ಗ್ರಂಥಗಳನ್ನು  ನಾವೆಷ್ಟು ಓದುತ್ತೇವೆ?

ಅಮೆರಿಕನ್ನರು ವರ್ಷದಲ್ಲಿ ೧೫ ಪುಸ್ತಕಗಳನ್ನಾದರೂ ಓದುತ್ತಾರಂತೆ. ಆಸ್ಟ್ರೇಲಿಯನ್ನರು ಅಮೆರಿಕನ್ನರಿಗಿಂತ ಹೆಚ್ಚು ಓದುತ್ತಾರಂತೆ. ಓದುವಿಕೆಗೆ ಪಾಶ್ಚಾತ್ಯರು ಕೊಡುವ ಪ್ರಾಧಾನ್ಯ ಪುಸ್ತಕ ಓದುವವರ ಕುರಿತ ನಡೆಸಿದ ಅಧ್ಯಯನ ಮತ್ತು ಸಮೀಕ್ಷೆ ಗಳಲ್ಲಿ ಕಾಣಬಹುದು. ಡೆಮೊಕ್ರಾಟ ಪಕ್ಷದ ಜನ ರಿಪಬ್ಲಿಕನ್ನರಿಗಿಂತ ಹೆಚ್ಚು ಓದುತ್ತಾರಂತೆ. ಆದರೆ ಧಾರ್ಮಿಕ ಪುಸ್ತಕಗಳನ್ನು ಡೆಮೊಕ್ರಾಟ್ ರಿಗಿಂತ ಹೆಚ್ಚಾಗಿ ರಿಪಬ್ಲಿಕನ್ನರು ಓದುತ್ತಾರಂತೆ. ಜಾರ್ಜ್ ಬುಶ್ ರಿಪಬ್ಲಿಕನ್ ಪಕ್ಷಕ್ಕೆ ಸೇರಿದವರು. ಹೆಚ್ಚು ಓದು, ಹೆಚ್ಚು ಅವಾಂತರ? ಅಷ್ಟು ಮಾತ್ರವಲ್ಲ ಧಾರ್ಮಿಕ ಪುಸ್ತಕಗಳನ್ನು ಕಪ್ಪು ಜನರು (blacks), ವಯಸ್ಸಾದವರು, ಗೃಹಿಣಿಯರು, ಕಡಿಮೆ ವಿದ್ಯಾಭ್ಯಾಸ ಇರುವವರು, ಕಡಿಮೆ ಸಂಪಾದನೆ ಮಾಡುವವರು, ಗ್ರಾಮ ವಾಸಿಗಳು ಹೆಚ್ಚಾಗಿ ಓದುತ್ತಾರಂತೆ.   

ಕಾಲೇಜು ವಿದ್ಯಾಥಿಗಳು ಹೆಚ್ಚು ಓದುತ್ತಾರೆ, ಯುವಜನರಿಗಿಂತ ಹೆಚ್ಚಾಗಿ ೫೦ ವಯಸ್ಸಿಗೆ ಮೇಲ್ಪಟ್ಟ ಜನ ಓದುತ್ತಾರೆ ಅಮೆರಿಕೆಯಲ್ಲಿ. 

ಈ ತೆರನಾದ ಸಮೀಕ್ಷೆ ನಮ್ಮಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಮಾತಂತೂ ಸತ್ಯ. ನಾವು ಭೇಟಿ ಕೊಡುವ ಬಂಧು ಮಿತ್ರರ ಮನೆಗಳಲ್ಲಿ ಪುಸ್ತಕಗಳ ದರ್ಶನ ಆಗುವುದು ಅಪರೂಪ. ಕೆಲಸಕ್ಕೆ ಬಾರದ ವಸ್ತುಗಳನ್ನು ಕೊಂಡು ಎಲ್ಲರಿಗೂ ಕಾಣುವಂತೆ drawing room ಗಳಲ್ಲಿ ಪ್ರದರ್ಶಿಸುವುದನ್ನು ಕಾಣಬಹುದು. ಮನೆ ಒಂದು ರೀತಿಯ ಮ್ಯೂಸಿಯಂ. ಕಣ್ಣಿಗೆ ವಿಶ್ರಾಂತಿ ಇರುವುದಿಲ್ಲ. ದೃಷ್ಟಿ ಎತ್ತ ಹಾಯಿಸಿದರೂ ಒಂದೊಂದು collection ಗಳ ದರ್ಶನ.    

ಒಳ್ಳೆಯ ಅಭಿರುಚಿ ಬೆಳೆಸಿಕೊಂಡು ಒಳ್ಳೆಯ ಪುಸ್ತಕ ಓದುವುದರಿಂದ ನಮ್ಮ ವ್ಯಕ್ತಿತ್ವವೂ ಬೆಳೆಯುತ್ತದಂತೆ. ಪುಸ್ತಕ ನಿರ್ಜೀವ ಅಲ್ಲ, ಉಸಿರಾಡದಿದ್ದರೂ ಅದು ಜೀವಂತ ಎಂದು ಒಬ್ಬ voracious reader ತನ್ನ ಅಭಿಪ್ರಾಯ ವ್ಯಕ್ತ ಪಡಿಸುತ್ತಾನೆ.  ಹೌದು ಪುಸ್ತಕ ಬರೆದ ವ್ಯಕ್ತಿಯ ಜೊತೆ ನಮ್ಮ ನಂಟು ಬೆಳೆಯುತ್ತದೆ, ಲೇಖನೊಂದಿಗೆ ಸಮಯ ಕಳೆದಂತೆ ಭಾಸವಾಗುತ್ತದೆ,ಓದುತ್ತಾ ಇದ್ದಂತೆ ನಾವು ನಮ್ಮದೇ ಆದ parallel ಪುಸ್ತಕದ ಬರಹವನ್ನೂ ಮನಸ್ಸಿನಲ್ಲೇ ಮಾಡಿಕೊಳ್ಳುತ್ತೇವೆ. ಹೊಸ ಲೋಕ ಸುತ್ತುತ್ತೇವೆ, ನಮಗಿಂತ ವಿಭಿನ್ನವಾದ ರೀತಿ ರಿವಾಜುಗಳ ಪರಿಚಯವಾಗುತ್ತದೆ. ಹೆಚ್ಚು ಓದುವುದರಿಂದ ಒಳ್ಳೆಯ ಬರಹಗಾರರಾಗಬಹುದು (ಅಂಥ ಇಚ್ಛೆ ಇದ್ದರೆ) ಮಾತ್ರವಲ್ಲ ನಮಗೆ ಗೊತ್ತಿಲ್ಲದ ಹೊಸ ಹೊಸ ಪದಗಳ ಪರಿಚಯವಾಗುತ್ತದೆ, ನಮ್ಮ ಶಬ್ದ ಭಂಡಾರ ಇನ್ನಷ್ಟು ಶ್ರೀಮಂತವಾಗುತ್ತದೆ, ನಮ್ಮ ಮಾತುಗಳು, ಚರ್ಚೆಗಳು ಹೆಚ್ಚು ಆಕರ್ಷಕವಾಗುತ್ತವೆ.   

ಪುಸ್ತಕ ಗಳನ್ನು ಓದುವ ಹವ್ಯಾಸ ನಿಜಕ್ಕೂ ಆಕರ್ಷಕ. ಓದುವಿಕೆಯ ಈ ಹವ್ಯಾಸವನ್ನು ಮನೆಯಲ್ಲಿರುವವರಿಗೂ ಹಂಚಬಹುದು. ನಾನು ಪುಸ್ತಕ ಕೈಯ್ಯಲ್ಲಿ ಹಿಡಿದ ಕೂಡಲೇ ನನ್ನ ಎರಡೂವರೆ ವರ್ಷದ ಮಗಳೂ ತನ್ನ ಪುಟ್ಟ ಪುಸ್ತಕ ಹಿಡಿದು ಕೊಂಡು ನನ್ನ ಪಕ್ಕ ಸೋಫಾದಲ್ಲಿ ಬಂದು ಕೂರುತ್ತಾಳೆ. ಏನೂ ಅರ್ಥವಾಗದಿದ್ದರೂ ಪುಟಗಳನ್ನುತಿರುವಿ ಹಾಕೋದು, ಚಿತ್ರಗಳನ್ನೂ ನೋಡಿ ಊ, ಆ , ಎಂದು ಉದ್ಗರಿಸೋದು ಮಾಡುತ್ತಾಳೆ. ಪುಸ್ತಕ ಅಂಗಡಿಗೆ ಹೋದರೆ ತನಗಾಗಿ ಒಂದು ಪುಸ್ತಕವನ್ನೂ ತೆಗೆದು ಕೊಳ್ಳುತ್ತಾಳೆ. ನೋಡಿ ನಮ್ಮ ಓದು ಯಾವ ರೀತಿ epidemic ಆಗಿ ಕೆಲಸ ಮಾಡುತ್ತದೆ.   

Prolific reader ಒಬ್ಬರ ಬ್ಲಾಗ್ ನೋಡಿದೆ. ಅಮೆರಿಕೆಯವನಾದ ಈತ ವಾರಕ್ಕೊಂದು ಪುಸ್ತಕ ಓದಲು ತೀರ್ಮಾನಿಸಿ ಅದರಂತೆಯೇ ಕಳೆದ ವರ್ಷ ೫೨ ಪುಸ್ತಗಗಳನ್ನು ಓದಿದನಂತೆ. ಆದರೆ ಇದು ಪ್ರಾಯೋಗಿಕವೇ ಎಂದು ಒಬ್ಬರು ಸಂಶಯ ವ್ಯಕ್ತ ಪಡಿಸಿದ್ದರು. ಏಕೆಂದರೆ ಈ ರೀತಿ ಹಠ ಹಿಡಿದು ಓದಿದರೆ ಮಾತ್ರ ಪ್ರಯೋಜನವಿಲ್ಲ, ತಲೆಯಲ್ಲಿ ಎಷ್ಟು ವಿಷಯಗಳು ಉಳಿಯಬಹುದು ಎನ್ನುವುದನ್ನೂ ನೋಡಬೇಕಾಗುತ್ತದೆ ಎಂದರು. ವಾರಕ್ಕೊಂದು ಪುಸ್ತಕ ಓದಬೇಕೆಂದೇ ಆದರೆ ಪುಸ್ತಕ ಗಾತ್ರವನ್ನೂ ನೋಡಬೇಕಾಗುತ್ತದೆ. ಸುಮಾರು ೩೦೦ ಪುಟಗಳ ಗಾತ್ರದ ಪುಸ್ತಕ ವಾದರೆ ವಾರಕ್ಕೊಂದು ನಿಯಮಕ್ಕೆ ಒಗ್ಗುತ್ತದೆ, ಆದರೆ ಪುಸ್ತಕ ಇತ್ತೀಚೆಗೆ ಜಸ್ವಂತ್ ಸಿಂಗರು ಬರೆದ ಪುಸ್ತಕದ ಗಾತ್ರಕ್ಕಿದ್ದರೆ? ಇಲ್ಲಿ ನಾವು ನೋಡಬೇಕಾದ್ದು ಕೇವಲ ೫೨ ಔಸ್ತಕಗಳನ್ನು ಓದುವ ಗುರಿಯಲ್ಲ, ಬದಲಿಗೆ ಈ ರೀತಿಯ ತಡೆರಹಿತ ಓದಿನಿಂದ ಆಗುವ ಪ್ರಯೋಜನ. ೫೨ ಅಲ್ಲದಿದ್ದರೂ ಅದರ ಅರ್ಧವಾದರೂ ಒಂದು ದೊಡ್ಡ ಸಾಧನೆಯೇ ಅಲ್ಲವೇ?   

ಕೆಲವರು ಒಂದಕ್ಕಿಂತ ಹೆಚ್ಚು ಪುಸ್ತಕ ಓದುತ್ತಾರೆ. ಒಂದಕ್ಕಿಂತ ಹೆಚ್ಚು ಪುಸ್ತಕ ಓದಲು ಸಾಧ್ಯವೇ? ಖಂಡಿತ ಸಾಧ್ಯ. ಕನ್ನಡ ಸೀರಿಯಲ್ಲು, ಹಿಂಡಿ ಸೀರಿಯಲ್ಲು, ಅವುಗಳ ಮಧ್ಯೆ ಸಿನೆಮಾಗಳು, ಇವೆಲ್ಲವುಗಳ ಪಾತ್ರಗಳು ನಮಗೆ ಕಲಸುಮೇಲೊಗರ ಆಗೋದಿಲ್ಲ. ಒಂದಕ್ಕಿಂತ ಹೆಚ್ಚು ಟೀ ವೀ ಸೀರಿಯಲ್ಲುಗಳನ್ನು ವೀಕ್ಷಿಸಿ ಜ್ಞಾಪಕ ಇಟ್ಟುಕೊಳ್ಳಲು ಸಾಧ್ಯವಾಗುವುದಾದರೆ ಪುಸ್ತಕಗಳಿಗೂ ಇದೇ ನಿಯಮ ಅನ್ವಯಿಸಿ ಕೊಳ್ಳಬಹುದು ಅಲ್ಲವೇ? 

ಅಥವಾ ಈ ರೀತಿಯ ಓದನ್ನು ರೂಢಿ ಮಾಡಿಕೊಂಡರೆ “ಓದಿ, ಓದಿ, ಮರುಳಾದ ಕೂಚು ಭಟ್ಟ” ಎಂದು ಗೇಲಿ ಮಾಡುವರೇ?

foto courtesy: fotosearch

“ರೊಮಾನ್ಸ್” ಇರಲಿ… ಹೀಗೆ

ಅವನು ೧೧.೫೯ ಕ್ಕೆ ಇರಿಸಿದ ಅಲಾರ್ಮ್ ಮೊಳಗುತ್ತಲೇ ಅವಳಿಗೆ ಡಯಲ್ ಮಾಡಿದ.

“ಹಲೋ?” ಮಂಪರು ತುಂಬಿದ ಸ್ವರ ಕೇಳಿತು

ಹ್ಯಾಪಿ ಬರ್ತ್ ಡೇ, ಅವನು ಉಸುರಿದ. ಇದನ್ನು ಕೇಳಿ ಅವಳು ಮುಗುಳ್ನಗುವುದು ಅವನಿಗೆ ಕೇಳಿಸಿತು.

“ವಂದನೆಗಳು, ಒಹ್, ಸಮಯವೇನೂ? ಸರಿಯಾಗಿ ಅರ್ಧ ರಾತ್ರಿ”.

“ಹೌದು. ಈ ದಿನ ನಿನ್ನೊಂದಿಗೆ ಇರಲು ಸಾಧ್ಯವಿಲ್ಲದ್ದರಿಂದ ನಿನ್ನನ್ನು ಕರೆಯುವ ಮನಸ್ಸಾಯಿತು”.

ಅವಳು ಹೇಳುತ್ತಾಳೆ, “ಆದರೆ ನನಗೆ ಆಶ್ಚರ್ಯ ಆಗ್ತಾ ಇದೆ. ನನಗಾಗಿ ನೀನು ಇಂದು ಯಾವುದೇ ಅಚ್ಚರಿಯ ಕಾರ್ಯಕ್ರಮ ಹಾಕಿಕೊಂಡಿಲ್ಲ ಎಂದು, ನೀನು ಬಹಳ ರೋಮಾಂಟಿಕ್ ತಾನೇ?”

ಅವನು ನಗುತ್ತಾ ಹೇಳುತ್ತಾನೆ..

 “ನಾನು ನಿನಗೆ ಓದಲು ಕೊಟ್ಟ ಪುಸ್ತಕದ ೧೫೭ ನೆ ಪುಟ ತೆರೆದು ನೋಡು, ಐ ಲವ್ ಯೂ, ಗುಡ ನೈಟ್ ಎನ್ನುತ್ತಾನೆ. ಆಕೆಯೂ ಐ ಲವ್ ಯೂ, ಶುಭ ರಾತ್ರಿ ಎಂದು ಹೇಳಿ ಅವನು ಹೇಳಿದ ಪುಟ ತೆರೆದಾಗ…   

ಕನಿಷ್ಠ ಶಬ್ದಗಳು, ಗರಿಷ್ಠ ಭಾವನೆಗಳು

“ಎಷ್ಟು ಸುಂದರವಾಗಿದೆ ಈ ಗುಡ್ಡ”

ನಾನಾಗಲೇ ಹೇಳಿದೆ ನಿನಗೆ” ಅವನೆಂದ ಚಹಾ ಹೀರುತ್ತಾ.

“ಹ್ಮ್ ಹ್ಮ್”

“ನಾವು ಯಾವುದಕ್ಕಾಗಿ ಬಂದಿದ್ದೆವೆಯೋ ಅದಕ್ಕೆ ಇದು ಪ್ರಶಸ್ತವಾದ ಸ್ಥಳ”  

“ಹೌದು ನಿರ್ಜನ ಪ್ರದೇಶ”

 “ಸುಂದರ ನಿಸರ್ಗ”  

“ರೋಮಾಂಟಿಕ್”

“ಆದರೆ ಈ ಸ್ಥಳ ರೋಮಾಂಟಿಕ್ ಆಗೋ ಅವಶ್ಯಕತೆ ಇರಲಿಲ್ಲ”

“ಸರಿ, ನಾವೇನು ಮಾಡೋಣ?”

ಆಕೆಯ ಪರ್ಸನ್ನು ಆಕೆಗೆ ಮರಳಿಸಿದಾಗ ಆಕೆ ಅದರ ಒಳಗೆ ನೋಡಿದಳು.

“ಇದರೊಳಗೇನೂ ಕಾಣ್ತಾ ಇಲ್ಲ ನನಗೆ”

“ಸರಿಯಾಗಿ ನೋಡು”

“ಇದ್ದರೆ ನನಗೆ ಕಾಣೋದಿಲ್ವಾ?

ಆಕೆ ಸರಿಯಾಗೇ ನೋಡಿದಳು, ಏನೂ ಕಾಣದಾದಾಗ ಬ್ಯಾಗನ್ನು ಬರಿದುಗೊಳಿಸಿದಳು, ಎಲ್ಲವನ್ನೂ ಕೆಳಕ್ಕೆ ಸುರಿದಳು  

ಇದೋ ಇಲ್ಲಿ ಎಂದು ಅವನು ಒಂದನ್ನು ಕೈಗೆತ್ತಿ ಕೊಂಡನು, ಅವಳಿಗೂ ಸಿಕ್ಕಿತು ಒಂದು.   

“ನನಗೆ ಈ “ನೀರ್ಗುಳ್ಳೆ” ಯೊಂದಿಗೆ ಆಡುವುದೆಂದರೆ ತುಂಬಾ ಇಷ್ಟ” ಎಂದಳು ಹುಬ್ಬನ್ನು ಹಾರಿಸುತ್ತಾ.

ಮೂಲ: ಆಂಗ್ಲ ಬ್ಲಾಗೊಂದರಲ್ಲಿ ಸಿಕ್ಕಿದ್ದು.

ಬುರ್ಖಾ ನಿಷೇಧ

ಯೂರೋಪಿನಲ್ಲಿ ಈಗ ಬುರ್ಖಾ ನಿಷೇಧಿಸುವ ಕುರಿತ ಚರ್ಚೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ಸಂಸತ್ತು ಬುರ್ಖಾವನ್ನು ನಿಷೇಧಿಸಲಿದೆ. ಎಂಥ ವೈಚಿತ್ರ್ಯ ಇದು. ಒಂದು ಕಡೆ ಮಹಿಳೆಯ ಜನ್ಮಸಿದ್ಧ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು, ಚಟುವಟಿಕೆಗಳು ಜರಗುತ್ತಿದ್ದರೆ ಮತ್ತೊಂದು ಕಡೆ ತಾನು ಮಾನವಾಗಿ ತನ್ನ ಶರೀರವನ್ನು ಮುಚ್ಚಿಕೊಂಡು ಓಡಾಡುತ್ತೇನೆ ಎಂದು ಹೇಳುವ ಮಹಿಳೆಯರ ಮೇಲೆ ಸಮಾಜದ ದಿಗ್ಬಂಧನ, ಕಾನೂನು. ಫ್ರಾನ್ಸ್ ನ ಅಧ್ಯಕ್ಷ ಮಹಾಶಯನ ಲೈಂಗಿಕ ಚಟುವಟಿಕೆ ತಿಳಿದವರಿಗೆ ಅಲ್ಲಿನ ಸಂಸತ್ತಿನಲ್ಲಿ ಅವನಂಥ ಎಷ್ಟು ಸದಸ್ಯರು ತಮ್ಮ ಅಧ್ಯಕ್ಷನ ರೀತಿ ಹೆಣ್ಣನ್ನು ತಮ್ಮ ತೃಷೆಗಾಗಿ ಉಪಯೋಗಿಸಿಕೊಳ್ಳುತ್ತಿರಬಹುದು ಎಂದು ಯೋಚಿಸಿದರೆ ತಪ್ಪಿಲ್ಲ. ಇದೇ ನಡತೆಗೆಟ್ಟ ಗಂಡಸರು ಹೆಣ್ಣು ವಿವಸ್ತ್ರಳಾಗೋದನ್ನು ಬಯಸುತ್ತಾ ಮಾನವಾಗಿ ನಡೆಯಲಿಚ್ಚಿಸುವ ಮಹಿಳೆಯರ ಮೇಲೆ ಕಾನೂನಿನ ತೂಗುಗತ್ತಿಯನ್ನು ಇಳಿ ಬಿಡುತ್ತಾರೆ. ಇವರಿಗೆ ಮಹಿಳೆ ಮೈತುಂಬಾ ಹೊದ್ದು ಕೊಳ್ಳುವುದು ಗುಲಾಮಗಿರಿಯ ಸಂಕೇತ. ಶೋಷಣೆಯ ಹೆಗ್ಗುರುತು. ಹೆಣ್ಣು ಕನಿಷ್ಠ ಉಡುಗೆ ತೊಡುವುದು ultimate civilization.     

ಬೆತ್ತಲೆ, ಕನಿಷ್ಠ ಉಡುಗೆ ಇಷ್ಟ ಪಡುವ ವಿಶ್ವ. ದೊಡ್ಡ ಕೋಲಾಹಲವನ್ನೇ ಸೃಷ್ಟಿಸುತ್ತಿದೆ ಈ ಸುಮಾರು ಐದು ಮೀಟರು ಬಟ್ಟೆ. ಮೂರೂ ಬಿಟ್ಟು, ಕನಿಷ್ಠ ಉಡುಗೆ ತೊಟ್ಟು ತಮ್ಮ ಶರೀರ ದಾರಿಹೋಕರ ಕಣ್ಣುಗಳಿಗೆ ಎಂದು ಬಿಂಕದಿಂದ ನಡೆಯುವ ಉದಾರವಾದಿ ಮಹಿಳೆ ಮತ್ತು ಇಂಥ ಉಡುಗೆಗಳಲ್ಲಿ ಪರಸ್ತ್ರೀಯರನ್ನು ನೋಡಿ ನಾಲಗೆ ಚಪ್ಪರಿಸಿ ಸವಿಯುವ  ಪುರುಷರಿಗೆ ಈ ಬುರ್ಖಾ ಎನ್ನುವ ವಸ್ತ್ರ ಸಹ್ಯವಾದರೂ ಹೇಗಾದೀತು? ಸೌಂದರ್ಯ ಸ್ಪರ್ದೆಯ ಹೆಸರಿನಲ್ಲಿ ಹೆಣ್ಣನ್ನು ನಾನಾ ಬಗೆಯ  ಉಡುಗೆಗಳಲ್ಲಿ ಅತ್ತಿಂದಿತ್ತ ಓಡಾಡಿಸಿ ಕ್ಯಾಮೆರಾ ಕಣ್ಣುಗಳಿಂದ ಅವಳ ಉಬ್ಬು ತಗ್ಗುಗಳನ್ನು ವಿವಿಧ ಕೊನಗಳಲ್ಲಿ ಸೆರೆಹಿಡಿದು, ಅವಳ ಅಂಗ ಸೌಷ್ಟವದ ಅಳತೆ ತೆಗೆದು ತಾವು ಕಲ್ಪಿಸಿಕೊಂಡ ಮಾನ ದಂಡಕ್ಕೆ ಅವಳ ಅಳತೆಯಿದ್ದರೆ ಅವಳನ್ನು ವಿಶ್ವ ಸುಂದರಿ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ದ್ಯಾಟ್, ಮಿಸ್ ದಿಸ್ ಎಂದು ಪ್ರಶಸ್ತಿ ಕೊಟ್ಟು ನಗ್ನತೆಯನ್ನು, ಬಹಿರಂಗ ಸೌಂದರ್ಯವನ್ನು ಸನ್ಮಾನಿಸುವ, ಆದರಿಸುವ ಸಮಾಜಕ್ಕೆ ಖಂಡಿತವಾಗಿಯೂ ಪಥ್ಯವಲ್ಲ ಬುರ್ಖಾ. ಈ ರೀತಿಯ ಅಳತೆಗೆ ನಿಲುಕದ ಬಹುಪಾಲು ಮಹಿಳೆಯರು  ಕೀಳರಿಮೆಯಿಂದ ಬಳಲುತ್ತಿದ್ದರೆ ಅದೊಂದು ಸಮಸ್ಯೆ ಅಲ್ಲ ಇವರಿಗೆ. size and beauty obssessed ಸಮೂಹಕ್ಕೆ.

ಬುರ್ಖಾ ನಿಷೇಧಿಸುವಲ್ಲಿ  ಫ್ರಾನ್ಸ್ ಕಾನೂನನನ್ನು ಜಾರಿ ಗೊಳಿಸಿದಂತೆ ಇಂಗ್ಲೆಂಡ್ ಸಹಾ ಬುರ್ಖಾ ನಿಷೇಧ ಕಾನೂನನ್ನು ತರಬೇಕೆಂದು ಒತ್ತಾಯಿಸುತ್ತಿರುವ ಜನರು ಹೆಣ್ಣನ್ನು ಸೌಂದರ್ಯ  ಪ್ರಸಾಧನ ಉತ್ಪಾದಿಸುವವರ, ಕಾಮ ಪಿಪಾಸುಗಳ ಆಟಿಕೆಯಾಗಿ ಬಳಸಿಕೊಳ್ಳುತ್ತಾ ತಮ್ಮನ್ನು ತಾವು ನಾಗರೀಕರು ಎಂದು ಬೆನ್ನು ತಟ್ಟಿ ಕೊಳ್ಳುವವರ ದಾರ್ಷ್ಟ್ಯತನವನ್ನು ಮೆಚ್ಚಲೇ ಬೇಕು. ಬುರ್ಖಾ ಗುಲಾಮಗಿರಿಯ ಸಂಕೇತ, ಪುರುಷರ ಒತ್ತಾಯಕ್ಕೆ ಮಣಿದು ಮಹಿಳೆಯರು ಧರಿಸುತ್ತಾರೆ ಎಂದು ವಾದಿಸುವ ಸಮೂಹಕ್ಕೆ ಈ ಸತ್ಯದ ಅರಿವಾದದ್ದು ಯಾವಾಗಲೋ ಏನೋ? ಅವರಿಗೆ ಹೇಗೆ ಗೊತ್ತು ಇದು ಪುರುಷ ಹೇರಿದ ಕಟ್ಟಳೆ ಎಂದು? ಸ್ವಂತ ಇಷ್ಟದಿಂದ ಹಿಜಾಬ್ ಧರಿಸುವ ಮಹಿಳೆಯರನ್ನು ನಾನು ನೋಡಿದ್ದೇನೆ. ತನ್ನ ತಾಯಿ ಧರಿಸುವ ಹಿಜಾಬನ್ನು ನೋಡಿ ಪುಟ್ಟ ಮಗುವೂ ತಾಯಿಯನ್ನು ಅನುಕರಿಸಲು ನೋಡುತ್ತದೆ. ಹೊರಗೆ ಮಹಿಳೆಯರು ತಮಗಿಷ್ಟದ, ನವೀನ ಶೈಲಿಯ ಬಟ್ಟೆ ಧರಿಸಿ ಹೋಗುವುದನ್ನು ಕಂಡರೂ ಆ ಪುಟ್ಟ ಮಗುವಿಗೆ ತನ್ನ ತಾಯಿ ಧರಿಸುವ ಕಪ್ಪು ಬಣ್ಣದ ಬುರ್ಖಾ ಕರಾಳವಾಗಿ ಕಾಣೋದಿಲ್ಲ. ಇಲ್ಲಿ ಆ ಮುಗ್ಧ ಮಗು ಕಾಣೋದು ತನ್ನ ತಾಯಿಯ ನಾರ್ಮಲ್ ಉಡುಗೆ ಮಾತ್ರ. ಬುರ್ಖಾ ಪದ್ಧತಿ ಇಸ್ಲಾಮಿನ ನಿಯಮವೋ, ಕಟ್ಟಳೆಯೋ ಅಲ್ಲ. ಪವಿತ್ರ ಕುರಾನಿನಲ್ಲಿ ದೇವರು ನಿರ್ದೇಶಿಸಿದ್ದು ಹೆಣ್ಣು ಮತ್ತು ಗಂಡು ಮೈ ತುಂಬಾ ಉಡಲು. ಅಂಗ ಸೌಷ್ಟವ ಪ್ರದರ್ಶಿಸದಂತೆ ತಾಕೀತು. ಹೆಣ್ಣು ಗಂಡು ಇಬ್ಬರೂ ತಮ್ಮ ದೃಷ್ಟಿಗಳನ್ನು ಅನಾವಶ್ಯವಾಗಿ ಬೇಕೆಂದಲ್ಲಿ ಹರಿಬಿಡದೆ ನಡೆಯಲು ಅಪೇಕ್ಷೆ, ನೆಲ ನೋಡಿ ವಿನೀತರಾಗಿ ನಡೆಯಲು ಸೂಚನೆ. ಇವು ಮಾತ್ರ ಇರುವುದು ಕುರಾನಿನಲ್ಲಿ. ಬಟ್ಟೆ ಹೀಗೆ ಇರಬೇಕು, ಇಂಥ ಬಣ್ಣದ್ದೇ ಆಗಿರಬೇಕು ಎಂದು ಎಲ್ಲೂ ಹೇಳಿಲ್ಲ. ಹಾಗಿದ್ದರೆ ಬುರ್ಖಾ ಸಾರ್ವತ್ರಿಕವಾಗಿರುತ್ತಿತ್ತು. ವಿಶ್ವದ ಬಹುಪಾಲು ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ದೂರದ ದೇಶಗಳ ಮಾತೇಕೆ ನಮ್ಮ ಪಕ್ಕದ ಕೇರಳದಲ್ಲೂ ಬಹುಪಾಲು ಮಹಿಳೆಯರು ಬುರ್ಖಾ ಧರಿಸುವುದಿಲ್ಲ. ಉದ್ದದ ತೋಳಿನ ರವಿಕೆ, ಮೈ ತುಂಬಾ ಸೀರೆ ಉಟ್ಟು ಕೊಳ್ಳುತ್ತಾರೆ. ಅಲ್ಲಿ ಯಾವ ಮುಲ್ಲಾ ಮಹಾಶಯರೂ ಫತ್ವಾ ಹೊರಡಿಸಲಿಲ್ಲ, ಕಪ್ಪು ಬಟ್ಟೆಯಿಂದ ಬಿಗಿದು ಕೊಳ್ಳಿ ನಿಮ್ಮ ಶರೀರವನ್ನು ಎಂದು. ಬುರ್ಖಾ ಒಂದು ಸಾಮಾಜಿಕ, ಸಾಂಸ್ಕೃತಿಕ ಉಡುಗೆ. ಸುಡಾನಿನ ಮಹಿಳೆಯರು ಸೀರೆ ಥರಾ ಕಾಣುವ  ಬಟ್ಟೆಯನ್ನು ಮೈ ತುಂಬಾ ಹೊದ್ದು ಕೊಳ್ಳುತ್ತಾರೆ. ಇರಾನಿನಲ್ಲಿ ಎಲ್ಲಾ  ಮಹಿಳೆಯರೂ ಧರಿಸುವುದಿಲ್ಲ. ಶೇಕಡಾ ೯೮ ಮುಸ್ಲಿಮರಿರುವ ತುರ್ಕಿ, ಟುನೀಸಿಯಾ ದೇಶಗಳ ಮಹಿಳೆಯರೂ ಸಹ ಬುರ್ಖಾ ಧಾರಿಗಳಲ್ಲ. ಅಲ್ಲಿ ಮುಲ್ಲಾಗಳ ಹಾವಳಿ ಇಲ್ಲ ಎಂದಲ್ಲ, ಆದರೆ ಇದೊಂದು ಧಾರ್ಮಿಕ ಉಡುಗೆ ಯಲ್ಲ ಎನ್ನುವ ಅರಿವಿರುವುದರಿಂದಲೇ ಅವರು ಅಲ್ಲಿನ ಮಹಿಳೆಯರ ಮೇಲೆ ಈ ವಸ್ತ್ರವನ್ನು ಹೇರದಿರುವುದು.

ಈ ಮೇಲಿನ ಮಾತಿಗೆ ಪುಷ್ಟಿಯಾಗಿ ಇತ್ತೀಚೆಗೆ ನಡೆದ ಘಟನೆಯೊಂದನ್ನು ನಿಮ್ಮ ಅವಗಾಹನೆಗೆ ತರಲು ಇಚ್ಛಿ ಸುತ್ತೇನೆ. ಪುರಾತನ ನಾಗರೀಕತೆಯ ತವರಾದ ಈಜಿಪ್ಟ್ ದೇಶ ಇಸ್ಲಾಂ ಧರ್ಮವನ್ನ ಅನುಸರಿಸುವ ದೇಶ. ಅಲ್ಲಿನ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯ ಅಲ್- ಅಜ್ಹರ್ ಸ್ಥಾಪಿತ ವಾಗಿದ್ದು ಕ್ರಿ. ಷ ೯೫೦ ರಲ್ಲಿ. ಅಲ್ಲಿನ “ರೆಕ್ಟರ್” ಆಗಿದ್ದ ಇತ್ತೀಚೆಗೆ ದಿವಂಗತರಾದ ಶೇಖ್ ತಂತಾವೀ. ಇವರು ಜಗದ್ವಿಖ್ಯಾತ ಮುಸ್ಲಿಂ ವಿಧ್ವಾಂಸ. ಅತ್ಯಂತ ಕ್ಲಿಷ್ಟ ಶರಿಯಾ ದ ಸಮಸ್ಯೆಗಳಿಗೆ ಮುಸ್ಲಿಂ ವಿಶ್ವ ಉತ್ತರ ಅರಸೋದು ಇವರಲ್ಲಿ. ಆರು ತಿಂಗಳ ಹಿಂದೆ ನಡೆದ ವಿಶ್ವ ವಿದ್ಯಾಲಯದ ಸಮಾರಂಭವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಭಿಕರಲ್ಲಿ ಒಬ್ಬ ಹದಿ ಹರೆಯದ ಯುವತಿಯೊಬ್ಬಳು ಹಿಜಾಬ್ ಮಾತ್ರವಲ್ಲದೆ ಕಣ್ಣು ಮಾತ್ರ ಕಾಣುವಂಥ “ನಿಕಾಬ್” ಸಹ ಧರಿಸಿದ್ದಳು. ಭಾಷಣ ಮಾಡುತ್ತಿದ್ದ ತಂತಾವೀ ಯುವತಿಗೆ ಹೇಳಿದರು ಮುಖದ ಮೇಲಿನ ನಿಕಾಬ್ ತೆಗೆಯುವಂತೆ. ಆಕೆ ಒಪ್ಪಲಿಲ್ಲ. ಒತ್ತಾಯಿಸಿದಾಗ ಆಕೆ ಹೇಳಿದಳು ಇದು ನನ್ನ ಧಾರ್ಮಿಕ ಉಡುಗೆ, ನನ್ನ ಸ್ವಂತ ಇಷ್ಟದಿಂದ ಧರಿಸಿದ್ದು ಎಂದು. ಇದನ್ನು ಕೇಳಿ ಕುಪಿತರಾದ ತಂತಾವೀ ಹೇಳದರು, ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿರುವ ಈ ಸುಪ್ರಸಿದ್ಧ ವಿದ್ಯಾಲಯದ ಕುಲಪತಿಯಾದ ನನಗಿಂತ ನಿನಗೆ ಗೊತ್ತೋ ಇಸ್ಲಾಮಿನ ಉಡುಗೆ ಬಗ್ಗೆ? ನೀನು ಧರಿಸುತ್ತಿರುವ ಮುಖ ಮುಚ್ಚಿ ಕೊಳ್ಳುವ ನಿಕಾಬ್ ಇಸ್ಲಾಮಿನ ಕಾನೂನಲ್ಲ, ಅದೊಂದು ಸಾಮಾಜಿಕ ಉಡುಗೆ ಎಂದು ಹೇಳಿ ಆಕೆಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಅದೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತು ಮುಸ್ಲಿಂ ಜಗತ್ತಿನಲ್ಲಿ, ವಿಶೇಷವಾಗಿ ಅರಬ್ ವಲಯಗಳಲ್ಲಿ. ಆಕೆ ಯಾರ ಬಲವಂತವೂ ಇಲ್ಲದೆ ತನ್ನ ಇಷ್ಟಾನುಸಾರ ಧರಿಸಿದ ವಸ್ತ್ರಕ್ಕೆ ಈ ವಿಧ್ವಾಂಸರ  ಆಕ್ಷೇಪವೇಕೆ ಎಂದು ಅವರನ್ನು ಟೀಕಿಸಲಾಯಿತು.

ಕುವೈತ್ ಅರಬ್ ಮುಸ್ಲಿಂ ರಾಷ್ಟ್ರ. ಅಲ್ಲಿನ ಸಂಸತ್ತಿನಲ್ಲಿ ಕೆಲವರು ಮಹಿಳಾ ಸದಸ್ಯೆಯರೂ ಇದ್ದಾರೆ. ಅವರಲ್ಲಿ ಇಬ್ಬರು ಸಂಸದೆಯರು ಹಿಜಾಬ್ ಧರಿಸುವುದಿಲ್ಲ. ಅರಬ್ ರಾಷ್ಟ್ರವಾದ ಮೇಲೆ ಧರ್ಮಗುರುಗಳ ವರ್ಚಸ್ಸು ಇಲ್ಲದ್ದಿಲ್ಲ, ಆದರೂ ಯಾವುದೇ ಧರ್ಮ ಗುರುವೂ ಇದುವರೆಗೆ ಆ ಸಂಸದೆಯರ ವಿರುದ್ಧ ಫತ್ವ ಹೊರಡಿಸಲಿಲ್ಲ.

ಮಧ್ಯ ಪ್ರಾಚ್ಯದ “ಜೋರ್ಡನ್” ದೇಶ ಪುರಾತನ ವಂಶಸ್ಥರ ರಾಜಮನೆತನ ಆಳುವ ದೇಶ. ಇಲ್ಲಿನ ರಾಜ ಅಬ್ದುಲ್ಲಾ ರ ಪತ್ನಿ “ರಾನಿಯಾ” ಹಿಜಾಬ ಧರಿಸುವುದಿಲ್ಲ. ಜೋರ್ಡನ್ ದೇಶದ ಧರ್ಮಗುರುಗಳು ಆಕೆಯ ವಿರುದ್ಧ ಫತ್ವ ಹೊರಡಿಸಲಿಲ್ಲ. ಜೋರ್ಡನ್ ದೇಶದ ರಾಣಿ ಮಾತು ದಿವಂಗತ ಬೆನಜೀರ್ ಭುಟ್ಟೋ ಹಿಜಾಬ್ ಧರಿಸದೆಯೂ ಮುಸ್ಲಿಮರಾಗಿರಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟು ಇಸ್ಲಾಂ ಯಾವ ರೀತಿ ಶಿಷ್ಟಾಚಾರ ಮತ್ತು ಆಧುನಿಕತೆಯೊಂದಿಗೆ ಹೆಜ್ಜೆ ಹಾಕಬಲ್ಲದು ಎಂದು ತೋರಿಸಿ ಕೊಟ್ಟ ಮುಸ್ಲಿಂ ಮಹಿಳೆಯರು.    

ಒಬ್ಬ ಮಹಿಳೆ ಹಿಜಾಬ್ ಧರಿಸಿದ ಮಾತ್ರಕ್ಕೆ ಪರಿಪೂರ್ಣ ಮುಸ್ಲಿಮಳಾಗುವುದಿಲ್ಲ. ಹಿಜಾಬ್ ಧರಿಸದೆಯೂ ಮುಸ್ಲಿಂ ಮಹಿಳೆ ತನ್ನ ಇಸ್ಲಾಮೀ ಸಂಸ್ಕೃತಿಯನ್ನು ಹೆಮ್ಮೆಯಿಂದ ಕೊಂಡಾಡಬಹುದು. ಆದರೆ ಆಕೆ ಏನನ್ನು ಧರಿಸಬೇಕು ಏನನ್ನು ಧರಿಸಬಾರದು ಎಂದು ನಿರ್ಧರಿಸುವ ಸಮಾಜ ಅವಳಿಗೂ ಅವಳದೇ ಆದ ಹಕ್ಕುಗಳಿವೆ, ಆ ಹಕ್ಕನ್ನು ಚಲಾಯಿಸಿಕೊಳ್ಳುವ ಅವಕಾಶವನ್ನೂ ಆಕೆಗೆ ನೀಡಬೇಕು ಎನ್ನುವುದನ್ನು ಮರೆಯಬಾರದು.    

ಇನ್ನು ಓರ್ವ ಮಹಿಳೆ ತನಗಿಷ್ಟವಾದ ಬಟ್ಟೆ ತೊಟ್ಟರೆ ಅವಳ ಸ್ವಾತಂತ್ರ್ಯಕ್ಕೆ ಹೇಗೆ ಅವಳು ಧರಿಸುವ ವಸ್ತ್ರ ಮುಳುವಾಗುತ್ತದೆ ಅನ್ನೋದೇ ಒಂದು ದೊಡ್ಡ ಒಗಟು.        

ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಅತೀವ ಕಾಳಜಿ ತೋರಿಸುವ ಸಮಾಜ ಗಲಭೆ, ಜನಾಂಗ ಧ್ವೇಷ ಗಳಂಥ ಸಂದರ್ಭಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ರಾಜಾರೋಷ ಅತ್ಯಾಚಾರ ಕಣ್ಣಿಗೆ ಗೋಚರಿಸೋಲ್ಲ ಏಕೆಂದರೆ ತಮಗೆ ಎಲ್ಲಿ ಬೇಕು ಅಲ್ಲಿ ಮಾತ್ರ  ಕಣ್ಣುಗಳನ್ನು ತೆರೆಯುತ್ತಾರೆ, ಬೇಡದೆಡೆ ತಾತ್ಕಾಲಿಕ, ಕುರುಡನ್ನು ಪ್ರದರ್ಶಿಸುತ್ತಾರೆ.   

ಸ್ವಾತಂತ್ರ್ಯದ ಹರಣದ ಬಗ್ಗೆ ಮಾತನಾಡುವ ಜನರಿಗೆ ಈವಾನ್ ಗೊಎಥ್ ಹೇಳಿದ ಮಾತು ನೆನಪಿಗೆ ತರಬೇಕು; “ತಾವು ಎಲ್ಲರಿಗಿಂತ ಸ್ವತಂತ್ರರು ಎಂದು ಭಾವಿಸಿ ನಡೆಯುವ ಜನರಷ್ಟು ಗುಲಾಮಗಿರಿಯಲ್ಲಿ ಬಂಧಿಸಲ್ಪಟ್ಟವರು  ಬೇರಾರಿಲ್ಲ”.

“None are more hopelessly enslaved than those who falsely believe they are free.”
von Goethe

 

ಹಿಜಾಬ್ ವಿವಿಧ ಧರ್ಮಗಳಲ್ಲಿ: ಯಹೂದ್ಯರು ತಮ್ಮ ಮಹಿಳೆಯರು ಶರೀರವನ್ನು ಸಂಪೂರ್ಣವಾಗಿ ಮುಚ್ಚುವಂಥ ವಸ್ತ್ರ ಧರಿಸಲು ಉತ್ತೆಜಿಸುತ್ತಿದ್ದರು. ಕೂದಲನ್ನು ಪ್ರದರ್ಶಿಸಿ ನಡೆಯುವುದು ಅಪರಾಧ. ಉಚ್ಚ ಕುಲೀನ ಸ್ತ್ರೀಯರು ತಲೆಯ ಮೇಲೆ ಬಟ್ಟೆ ಧರಿಸುತ್ತಿದ್ದರು ಮತ್ತು ಸಮಾಜದ ಕೆಳಸ್ತರದ ಮಹಿಳೆಯರು ಪ್ರತಿಷ್ಠೆ ಗಾಗಿ ತಲೆ ಕೂದಲನ್ನು ಮುಚ್ಚುತ್ತಿದ್ದರು. ಯಹೂದ್ಯ ಸಮಾಜದಲ್ಲಿ ವೇಶ್ಯೆಯರು ತಲೆ ಕೂದಲನ್ನು ಮರೆ ಮಾಚುವಂತಿಲ್ಲ.

ಕ್ರೈಸ್ತ ಧರ್ಮದಲ್ಲಿ: ಸಂತ “ಪಾಲ್” ಹೊಸ ಒಡಂಬಡಿಕೆಯಲ್ಲಿ ಹೇಳಿದ್ದು ಹೀಗೆ: ಪ್ರತೀ ಗಂಡಿನ ತಲೆಯೂ ಕ್ರೈಸ್ತನದು ಮತ್ತು ಪ್ರತೀ ಹೆಣ್ಣಿನ ತಲೆ ಗಂಡಿನದು ಮತ್ತು ಕ್ರಿಸ್ತನ ತಲೆ ದೇವರದು. ಪ್ರತೀ ಹೆಣ್ಣು ತಲೆ ಕೂದಲನ್ನು ಮರೆ ಮಾಚಲೇ ಬೇಕು ಇಲ್ಲಾ ತಲೆ ಬೋಳಿಸಿ ಕೊಳ್ಳಬೇಕು. ಗಂಡು ತಲೆ ಕೂದಲನ್ನು ಮರೆಮಾಚೋ ಅಗತ್ಯ ಇಲ್ಲ ಏಕೆಂದರೆ ಗಂಡು ದೇವರ ಪ್ರತಿ ರೂಪ. ಆದರೆ ಹೆಣ್ಣು ಗಂಡಿನ ಗೌರವ, ಘನತೆ. ಕ್ರೈಸ್ತ ಧರ್ಮ ಗುರುಗಳ ಪ್ರಕಾರ ಹೆಣ್ಣು ತಲೆ ಕೂದಲನ್ನು ಮರೆಮಾಚುವುದು ಆಕೆ ಗಂಡಿಗೆ ಮತ್ತು ದೇವರಿಗೆ ವಿಧೇಯಳಾಗಿರಬೇಕಾದ ಕುರುಹು.  ಯಹೂದ್ಯ ಮತ್ತು ಕ್ರೈಸ್ತ ಧರ್ಮದಲ್ಲಿ ಹಿಜಾಬ್ ಗಂಡಿಗೆ ಮತ್ತು ಸಮಾಜಕ್ಕೆ ಹೆಣ್ಣು ವಿಧೇಯಳಾಗುವ ನಿಟ್ಟಿನಲ್ಲಿ ಆಗ್ರಹಿಸಿದರೆ, ಬಯಸಿದರೆ ಇಸ್ಲಾಮ್ ಹಿಜಾಬನ್ನು ಬಯಸಿದ್ದು ಹೆಣ್ಣಿನ ನಮ್ರ ನಡತೆಯನ್ನು ಉತ್ತೇಜಿಸಲು ಮತ್ತು ಪರಪುರುಷರ ಆಸಕ್ತ ಕಣ್ಣುಗಳಿಂದ ರಕ್ಷಿಸಿಕೊಳ್ಳಲು.      

 

ಕೆನಡಾದ ಕ್ವೀನ್ಸ್ ವಿಶ್ವ ವಿದ್ಯಾಲಯ ಹೊರಡಿಸಿದ ಒಂದು ಪತ್ರದಲ್ಲಿ ಈ ಆಘಾತಕಾರಿ ಅಂಶಗಳು ಒಳಗೊಂಡಿದ್ದವು.  ಪ್ರತೀ ೬ ನಿಮಿಷ ಗಳಿಗೊಮ್ಮೆ ಹೆಣ್ಣಿನ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತದೆ;

ಪ್ರತೀ ಮೂರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾಳೆ.

ಪ್ರತೀ ನಾಲ್ವರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಬಲಾತ್ಕಾರದ ಅಪಾಯಕ್ಕೆ ಸಿಲುಕಿರುತ್ತಾಳೆ.

ಪ್ರತೀ ಎಂಟು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಕಾಲೇಜು ವ್ಯಾಸಂಗದ ವೇಳೆ ಲೈಂಗಿಕ ಶೋಷಣೆಗೆ ಒಳಪತ್ತಿರುತ್ತಾಳೆ.

ಆಧುನಿಕ ವಿಶ್ವದಲ್ಲಿ ಆಧುನಿಕ ಮನೋಭಾವದ ವ್ಯಕ್ತಿಗಳು ತಮ್ಮ ಆಧುನಿಕತೆಗೆ ವಸ್ತ್ರ ವನ್ನು ಮಾನದಂಡ ವಾಗಿರಿಸ ಕೂಡದು. ಗಂಡು ಮುಚ್ಚಿದಷ್ಟೂ gentleman ಮತ್ತು ಹೆಣ್ಣು ತೆರೆದಷ್ಟೂ cultured lady. ಈ ಮಾನ ದಂಡವನ್ನು ಎಲ್ಲರ ಮೇಲೂ ಹೇರಕೂಡದು.

ವೈಯಕ್ತಿವಾಗಿ ನಾನು ನಿಕಾಬ್ ಅಭಿಮಾನಿಯಲ್ಲ. ಬುರ್ಖಾ ಧರಿಸದೆಯೂ ಹೆಣ್ಣು ತನ್ನ ಅಂಗ ಸೌಷ್ಠವ ಪ್ರದರ್ಶಿಸದೆ ಬದುಕಬಹುದು. ಇತ್ತೀಚೆಗೆ ವಿವಾಹಿತರಾದ ಮಹೇಂದ್ರ ಸಿಂಗ್ ಧೋನಿ ಯವರ ಪತ್ನಿ ತುಂಬು ತೋಳಿನ ( full sleeved) ಚೂಡಿದಾರ್ ಧರಿಸಿ ತಲೆಯ ಮೇಲೆ ದುಪಟ್ಟಾ ಹಾಕಿಕೊಂಡು ಅಭಿನಂದಿಸಲು ಬಂದ ಜನರನ್ನು ಸ್ವೀಕರಿಸಿದರು ಎಂದು ಯಾರೋ ಹೇಳಿದರು. ಇಲ್ಲಿ ಈ ನವವಿವಾಹಿತೆ ತನಗರಿವಿಲ್ಲದೆಯೇ ಇಸ್ಲಾಮೀ ಸಂಸ್ಕೃತಿಯ ಉಡುಗೆಗೆ ಮಾರು ಹೋಗಿರಬೇಕು.       

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಕೇಳಿದಳು ಯಾವುದರ ಬಗ್ಗೆ ಬರೆಯುತ್ತಿದ್ದೀರಿ ಎಂದು. ಯೂರೋಪಿನಲ್ಲಿ ಬುರ್ಖಾ ಬ್ಯಾನ್ ಮಾಡ್ತಾರಂತೆ, ಅದರ ಬಗ್ಗೆ ಬರೆಯುತ್ತಿದ್ದೇನೆ ಎಂದೆ. ಅರ್ಥವಾಗದೆ ಕೇಳಿದಳು, ಬುರ್ಖಾ ಬ್ಯಾನ್ ಮಾಡ್ತಾರ? ಏಕೆ? ಕಾರಣ ಏನು?

ಕಾರಣ ನನಗೂ ಗೊತ್ತಿಲ್ಲ. ಕೆಲವೊಮ್ಮೆ  ಸಿಂಪಲ್ ಪ್ರಶ್ನೆಗಳಿಗೆ ಸಿಂಪಲ್ ಉತ್ತರ not so simple.

ಕಣ್ಣು ಹೋಗಿ, ಬಂತು ಕಾರಂಜಿ

ಈ ವಾರಾಂತ್ಯ ದ ಬಿಡುವಿನಲ್ಲಿ ಜೆಡ್ಡಾ ದ ಬಿಸಿಲ ಉರಿಯಿಂದ ರೋಸಿ ಹೋಗಿ ಎಲ್ಲಾದರೂ ತಂಪಾದ ಸ್ಥಳಕ್ಕೆ ಹೋಗಿ ಎರಡು ದಿನ ಕಳೆಯೋಣ ಎನ್ನಿಸಿತು. ಇಲ್ಲಿಂದ ಸುಮಾರು ೨೦೦ ಕಿ, ಮೀ ದೂರದಲ್ಲಿರುವ ತಾಯಿಫ್ ಒಂದು ಪ್ರವಾಸಿ ತಾಣ, ನಮ್ಮ ಕೆಮ್ಮಣ್ಣು ಗುಂಡಿಯ ಹಾಗೆ. ಮಳೆ, ಚಳಿ ಎಲ್ಲವೂ ಇದೆ ಇಲ್ಲಿ. ಆದರೆ ತಾಯಿಫ್ ಗೆ ಹಲವು ಸಾರಿ ಹೋಗಿದ್ದರಿಂದ ತಾಯಿಫ್ ನಂಥದ್ದೆ ಮತ್ತೊಂದು ತಾಣ “ಅಲ್-ಬಾಹ” ಎನ್ನುವ ಸ್ಥಳವಿದೆ ಎಂದು ಕೇಳಿದ್ದರಿಂದ ಅಲ್ಲಿಗೆ ಹೊರಟೆವು.

ಜೆಡ್ಡಾ ದಿಂದ ೪೦೦ ಕಿ ಮೀ ದೂರ ಅಲ್-ಬಾಹಾ. ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದಲ್ಲಿರುವ ಈ ಚಿಕ್ಕ ನಗರ ಸುಡು ಬಿಸಿಲಿನಲ್ಲಿ ಬೆಂದ ಶರೀರಕ್ಕೆ ತಂಪನ್ನೀಯುವ ತಾಣ. ಸೌದಿಯಿಂದ ಮಾತ್ರವಲ್ಲದೆ ನೆರೆಯ ಕತಾರ್, ಒಮಾನ್, ಕುವೈತ್, ಬಹರೇನ್ ದೇಶಗಳಿಂದಲೂ ರಜೆಗೆ ಜನ ಇಲ್ಲಿಗೆ ಬರುತ್ತಾರೆ. ಜೆಡ್ಡಾ ಬಿಟ್ಟು ಸುಮಾರು ೨೦೦ ಕಿ ಮೀ ಕ್ರಮಿಸುತ್ತಿದ್ದಂತೆಯೇ ಭೌಗೋಳಿಕ ಬದಲಾವಣೆಗಳು ಗೋಚರಿಸ ತೊಡಗಿತು. ಅಗಾಧ ಸಾಗರದಂತೆ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಮರಳೋ ಮರಳು. ಮಟ್ಟಸವಾದ, ಸಮನಾದ ಮರುಭೂಮಿ, ಆಗಾಗ sand storm area, ಮತ್ತು ಒಂಟೆಗಳ ಪ್ರದೇಶ ಎಂದು ಸೂಚಿಸುವ ಫಲಕಗಳು. ಸೂರ್ಯನ ಅಟ್ಟಹಾಸಕ್ಕೆ ಬೆಚ್ಚಿದ ಮರಳು ರಾಶಿ ರಹದಾರಿಯ ಮೇಲೆ ಪಲಾಯಾನ ಮಾಡುವ ಸುಂದರ ದೃಶ್ಯ ನೋಡುತ್ತಾ ಹೋದಂತೆ ಸುಂದರ ಬೆಟ್ಟಗಳ ಶ್ರೇಣಿ ಗೋಚರಿಸಿತು. ಹವಾನಿಯಂತ್ರಿತ ಕಾರಿನೊಳಕ್ಕೆ ಕೂತು ನೋಡಲು ಬಹು ಸುಂದರ ದೃಶ್ಯ. ಆದರೆ ಬಟಾ ಬೆತ್ತಲೆಯಾದ (ಹಸಿರಿನ ಸುಳಿವೂ ಇಲ್ಲದ) ಬೆಟ್ಟಗಳನ್ನು ಕಾರಿನಿಂದ ಇಳಿದು ನೋಡಿದರೆ ನರಕ ಸದೃಶ ಅನುಭವ. ಅಂಥ ಬೇಗೆ. ಅಲ್-ಬಾಹಾ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ಗಿಡ ಮರಗಳಿಂದ ತುಂಬಿದ ಚಿಕ್ಕ ಚಿಕ್ಕ ಬಯಲುಗಳು. ಈ ಪ್ರದೇಶದಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಆಗುವುದರಿಂದ ಹಸಿರು ತೊಡುವ ಭಾಗ್ಯ ಈ ಪ್ರದೇಶದ ನೆಲಕ್ಕೆ.

ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದ ಲ್ಲಿರುವ ಅಲ್-ಬಾಹಾ ತಲುಪಲು ಮಾಡಬೇಕು ಶಿಖರಾರೋಹಣ. ಆಗುಂಬೆ, ಚಾರ್ಮಾಡಿ, ಬಾಬಾ ಬುಡನ್ ಗಿರಿಗಳನ್ನು ನೋಡಿದ್ದ ನನಗೆ ಈ ಬೆಟ್ಟ ಇನ್ನೂ ಎತ್ತರ ಎಂದು ತೋರಿತು. ಸುತ್ತಲೂ ಆವರಿಸಿ ಕೊಂಡ ಎತ್ತರದ ಬೆಟ್ಟಗಳಿಗೆ ರಸ್ತೆ ಜೋಡಣೆ ನಿಸ್ಸಂಶಯವಾಗಿಯೂ  engineering marvel ಎನ್ನಬಹುದು. two way ರಸ್ತೆಯಾದ್ದರಿಂದಲೂ, ರಸ್ತೆಗಳ ಮಧ್ಯೆ ಯಾವುದೇ barrier ಇಲ್ಲದಿದ್ದರಿಂದಲೂ ನಿಧಾನವಾಗಿ ಚಲಿಸಿ ಎನ್ನುವ ಫಲಕಗಳು, ಮಾತ್ರವಲ್ಲ ರಸ್ತೆಯ ಒಂದು ಕಡೆ ಬೆಟ್ಟದ ಆಸರೆ ಇದ್ದರೆ ಮತ್ತೊಂದು ಕಡೆ ವಾಹನ ಕೆಳಗುರುಳದಂತೆ ಭಾರೀ ಗಾತ್ರದ ಮೂರಡಿ ಎತ್ತರದ ಕಾಂಕ್ರೀಟ್ ಗೋಡೆಗಳು. ಹತ್ತಾರು ಬೆಟ್ಟಗಳನ್ನು ಬಳಸಿ ಹೋಗುವ ರಸ್ತೆಗೆ ೨೫ ಸುರಂಗಗಳು, ಅಲ್ಲಲ್ಲಿ ಕಣಿವೆಯಿಂದ ಕಣಿವೆಗೆ ಕಟ್ಟಿದ ಸೇತುವೆಗಳು. ತೈಲ ಸಂಪತ್ತು ತನ್ನ ಕಾರ್ಯ ಕ್ಷಮತೆಯನ್ನು ತೋರಿಸುವುದು ಇಂಥ ಸ್ಥಳಗಳಲ್ಲಿ.

ಅಲ್-ಬಾಹ ದಲ್ಲಿ ಸುತ್ತಾಡುತ್ತಿದ್ದಾಗ  “ಥೀ ಐನ್” ಎಂದು ಸಾರಿಗೆ ಫಲಕಗಳಲ್ಲಿ ಕಾಣುತ್ತಿತ್ತು. ಈ ಹೆಸರು ನನಗೆ ವಿಚಿತ್ರವಾಗಿ ಕಂಡಿತು. ಇದೂ ಯಾವುದಾದರೂ ಒಂದು ವಿಶೇಷವಾದ ಚಿಕ್ಕ ಪಟ್ಟಣವಿರಬೇಕು, ಅದರ ಬಗ್ಗೆ ಯಾರಿಗಾದರೂ ಕೇಳೋಣ ಅಂದರೆ ಇಲ್ಲಿ ಇಂಥ ವಿಷಯಗಳಲ್ಲಿ, ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಜನರಿಗೆ ಒಲವು, ಆಸಕ್ತಿ ಕಡಿಮೆಯೇ. ಸರಿ ಶುಕ್ರವಾರದ ಪ್ರಾರ್ಥನೆ ಮುಗಿಸಿದ ಕೂಡಲೇ ಹೊರಟೆವು ಜೆದ್ದಾದ ಕಡೆ ಹೋಗುವ ಸ್ಥಳಗಲ್ಲಿ ಇನ್ಯಾವುದಾದರೂ ಪ್ರೇಕ್ಷಣೀಯ ಸ್ಥಳವಿದ್ದರೆ ಕತ್ತಲಾಗುವ ಮುನ್ನ ನೋಡಿಕೊಂಡು ಜೆಡ್ಡಾ ಸೇರಬಹುದು ಎನ್ನುವ ಎಣಿಕೆಯೊಂದಿಗೆ. ಮತ್ತದೇ ೨೫ ಸುರಂಗಗಳನ್ನು ತೂರಿಕೊಂಡು, ಚುಮು ಚುಮು ಮಳೆಗೆ ಹಿತವಾಗಿ, ನಗ್ನವಾಗಿ ಬಿದ್ದು ಕೊಂಡಿದ್ದ ಬೆಟ್ಟಗಳ ಸಾಲನ್ನೂ, ಒದ್ದೆಯಾದ ರಸ್ತೆಗಳ ಮೇಲೆ ವಾಹನಗಳು ಹೊರಡಿಸುವ ಕಾರಂಜಿ ಗಳನ್ನು ನೋಡುತ್ತಾ ಘಾಟಿ ಇಳಿದು ಒಂದ್ಹತ್ತು ಕಿ ಮೀ ದೂರ ಬರುತ್ತಿದ್ದಂತೆಯೇ ಮತ್ತದೇ ಫಲಕ ಕಾಣಿಸಿತು “ಧೀ ಐನ್”. ಈ ಸ್ಥಳ ಎಡಕ್ಕೆ ಎನ್ನುವ ನಿರ್ದೇಶನ ಕಂಡಿದ್ದೇ ಕುತೂಹಲದಿಂದ ಗಾಡಿಯನ್ನು ರಹ ದಾರಿಯಿಂದ ಚಿಕ್ಕ ಕಡಿದಾದ ರಸ್ತೆಗೆ ನಡೆಸಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಧುತ್ತೆಂದು ಎದುರಾಯಿತು ಒಂದು ಬೆಟ್ಟ, ಅದರ ತುಂಬಾ ಶಿಥಿಲಗೊಂಡ ಮನೆಗಳು. ಇದೇನಪ್ಪಾ, “ಹರಪ್ಪಾ”, “ಮೊಹೆಂಜೋದಾರೋ” ತಲುಪಿ ಬಿಟ್ಟೆನಾ ಎಂದು ಕೌತುಕದಿಂದ ಹತ್ತಿರ ಬಂದಾಗ ಬೇಲಿ. ಅಲ್ಲಿಂದಲೇ ಒಂದು ಫೋಟೋ ಕ್ಲಿಕ್ಕಿಸಿದಾಗ ನನ್ನಾಕೆಗೆ ಇನ್ನೂ ಮುಂದಕ್ಕೆ ಹೋಗಿ ಅದೇನೆಂದು ನೋಡೋಣ ಎನ್ನುವ ಆಸೆ. ಮತ್ತಷ್ಟು ದೂರ ಹೋದಾಗ ಒಂದು ಟೋಲ್ ಗೇಟ್. ವಿಚಾರಿಸಿದಾಗ ಒಳ ಹೋಗಲು ತಲೆಗೆ ೧೦ ರಿಯಾಲ್ (೧೨೫ ರೂ) ಎಂದ. ಹಣ ತೆತ್ತು ಪಾಸ್ ಪಡೆದು ಹತ್ತಿರ ಹೋದಾಗ ಎಲ್ಲಾ ಹಳೆ ಕಾಲದ ಮನೆಗಳು, ಗುಡ್ಡದ ತುಂಬಾ ಅಚ್ಚುಕಟ್ಟಾಗಿ ಖಾಲಿ ಸಿಗರೆಟ್ ಪ್ಯಾಕ್ ಗಳನ್ನು ಜೋಡಿಸಿದಂತೆ ಕಾಣುತ್ತಿತ್ತು. ಅರ್ಧ ಗುಡ್ಡ ಹತ್ತಿ ಒಂದೇ ನಮೂನೆಯ ಮನೆಗಳನ್ನು ನೋಡುತ್ತಾ ಕೆಳಗಿಳಿದಾಗ ಝರಿಯ ಸಪ್ಪಳ. ಹಾಂ, ಮರಳುಗಾಡಿನಲ್ಲಿ ಝರಿಯೇ ಎಂದು ಹೋಗಿ ನೋಡಿದಾಗ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಚಿಕ್ಕದಾದರೂ ಅರೇಬಿಯಾದಲ್ಲಿ ಝರಿ, ಕಾಲುವೆ, ಕಾರಂಜಿಗಳು, ಅಪರೂಪವೇ. ಹಾಗಾಗಿ ಇದೊಂದು ರೀತಿಯ welcome change. ತಂಪಾದ ಝರಿಯ ನೀರನ್ನು ಮುಖಕ್ಕೆ ಸಿಂಪಡಿಸಿ ಕೊಂಡು ಝರಿಯ ಮತ್ತು ಈ ಬೆಟ್ಟದ ಮೇಲೆ ವಾಸವಿದ್ದವರ ಕುರಿತು ವಿಚಾರಿಸಿದೆ.

ಸುಮಾರು ೪೦೦ ವರ್ಷಗಳ ಹಿಂದೆ ಜನ ವಾಸವಿದ್ದ ಒಂದು ಹಳ್ಳಿ “ಥೀ ಐನ್”. ಇದರ ಅರ್ಥ “ಝರಿ ಇರುವ ಹಳ್ಳಿ” ಎಂದು. ಮತ್ತೊಂದು ಅರ್ಥ “ಒಕ್ಕಣ್ಣಿನ ಮನುಷ್ಯ” ಎಂದೂ ಇದೆ. ಇದರ ಹಿನ್ನೆಲೆ ಹೀಗಿದೆ ನೋಡಿ. ನೂರಾರು ವರ್ಷಗಳ ಹಿಂದೆ ಯೆಮನ್ ದೇಶದ ಮುದುಕನ ಹತ್ತಿರ ಮಾಂತ್ರಿಕ ದಂಡ ಇತ್ತಂತೆ, ಅಲ್ಲಾವುದ್ದೀನನ ಹತ್ತಿರ ಮಾಂತ್ರಿಕ ದೀಪ ಇದ್ದಂತೆ. ಅದನ್ನು ಉಪಯೋಗಿಸಿ ನೀರನ್ನು ಕಂಡು ಹಿಡಿಯಲು ಹಳ್ಳಿಯ ಜನ ಹೇಳಿದಾಗ ಆ ಮುದುಕ ತನ್ನ ದಂಡ ದಿಂದ ನೆಲಕ್ಕೆ ಬಡಿಯುತ್ತಾನೆ. ಕೂಡಲೇ ಚಿಮ್ಮುತ್ತದೆ ನೀರಿನ ಚಿಲುಮೆ. ನೀರೆನೋ ಚಿಮ್ಮಿತು, ಆದರೆ ಅದಕ್ಕೆ ಬೆಲೆಯನ್ನೂ ತೆತ್ತ ಪಾಪದ ಮುದುಕ; ನೆಲಕ್ಕೆ ಬಡಿದ ದಂಡ ಅವನ ಕಣ್ಣಿನ ಮೇಲೆ ಬಿದ್ದು  ತನ್ನ ಒಂದು ಕಣ್ಣನ್ನು ಕಳೆದು ಕೊಳ್ಳುತ್ತಾನೆ. ಜನರಿಗೆ ಉಪಕಾರ ಮಾಡಲು ಹೋಗಿ ಒಂದು ಕಣ್ಣನ್ನು ಕಳೆದುಕೊಂಡ ಯೆಮನ್ ದೇಶದ ವೃದ್ಧನ ಕತೆಯನ್ನು ಮೆಲುಕು ಹಾಕುತ್ತಾ ಜೆಡ್ಡಾ ಕಡೆ ಪ್ರಯಾಣ ಬೆಳೆಸಿದೆ.

ಪ್ರಯಾಣದ ವೇಳೆ ತೆಗೆದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇನೆ. ನೋಡಿ, ಏನಾದರೂ ಅರ್ಥ ಆಗುತ್ತಾ ಅಂತ. ಏಕೆಂದರೆ ಹೇಳಿಕೊಳ್ಳುವಂಥದ್ದಲ್ಲದ ಕ್ಯಾಮರ ಮತ್ತು ಬೆನ್ನು ತಟ್ಟಿ ಕೊಳ್ಳುವಂಥ “ಕಲೆ”ಯಿಲ್ಲದೆ ತೆಗೆದ ಚಿತ್ರಗಳಿವು. ಇಂಥ ಚಿತ್ರಗಳನ್ನ ನೋಡಲು ಬಲವಂತ ಪಡಿಸಿದ್ದಕ್ಕೆ ಕ್ಷಮೆಯಿರಲಿ.   

 

ಹಂದಿಯೊಂದಿಗೆ ಸೆಣಸಬಾರದು

“ಹಂದಿಯೊಂದಿಗೆ ಸೆಣಸಬಾರದು, ನೀವು ಕೊಳಕಾಗುವುದು ಮಾತ್ರವಲ್ಲ, ಹಂದಿಗೆ ಇದು ಖುಷಿಯನ್ನೂ ಕೊಡುತ್ತದೆ”.

ವಾದ ವಿವಾದ, ಕಲಹ, ವೈಮನಸ್ಸು ಅತಿಯಾಗಿ ವಾದಿಸುವವರು ಎಷ್ಟೇ ತಪ್ಪಿದ್ದರೂ ತಮ್ಮ ಪಟ್ಟನ್ನು ಬಿಡದೆ ವಿತಂಡವಾದಕ್ಕೂ, ತಾವೇ ಸರಿ ಎಂದು ತೋರಿಸುವ ಉತ್ಸುಕತೆಯಲ್ಲಿ ಮೊಂಡುತನ ತೋರಿಸಿ ಕತ್ತೆಯನ್ನು ಕುದುರೆಯಾಗಿಸುವ ಪರಿಶ್ರಮ ಪಟ್ಟಾಗ ಮೇಲಿನ ಗಾದೆ ಅನ್ವಯವಾಗುತ್ತದೋ ಏನೋ? ಮೊಂಡು ತನದಿಂದ  ಚರ್ಚೆಯ ಧಾಟಿ ತಪ್ಪುತ್ತದೆ, ಮತ್ತೊಬ್ಬನ ವಿಚಾರಗಳನ್ನ ಒಪ್ಪಿ ಬಿಟ್ಟರೆ ತಮ್ಮ ಅಹಂ ಗೆ ಆಗುವ ಪೆಟ್ಟನ್ನು ನೆನೆದು ತಾವೇ ಸರಿ ಎಂದು ಕೊನೆಯವರೆಗೂ ಸಾಧಿಸಲು ವ್ಯರ್ಥ ಪ್ರಯತ್ನ ಮಾಡುವ ಜನರನ್ನು ನಾವು ಕಂಡೇ ಇರುತ್ತೇವೆ. ಆಂಗ್ಲ ಭಾಷೆಯಲ್ಲಿ live with the difference ಎನ್ನುತ್ತಾರೆ ಮತ್ತು agreeing to disagree ಎಂದೂ ಹೇಳುತ್ತಾ ವಾದ ವಿವಾದಗಳು ಮಾತುಕತೆಯ ರೂಪ ತಾಳಿದಾಗ ಈರ್ವರೂ ಯಾವ ರೀತಿ ನಡೆದು ಕೊಳ್ಳಬೇಕು ಎನ್ನುವತ್ತ ಮೇಲಿನ ಎರಡು ಮಾತುಗಳು ಮಾರ್ಗದರ್ಶನವೀಯುತ್ತವೆ. ಆದರೆ ಸುಶಿಕ್ಷಿತರಲ್ಲೇ ಅಸಹನೆ ಮನೆ ಮಾಡಿದರೆ ಚರ್ಚೆ ಬೀದಿ ಜಗಳದ ರೀತಿ acrimonious ಆಗುತ್ತದೆಯೇ ಹೊರತು ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ.

ಹಸಿವು ಮತ್ತು ಸರ್ಕಸ್

ಕೇರಳದ ಹೆಸರನ್ನು ಈಗ “ಕೇರಳಮ್” ಎಂದು ಮಾಡಲು ಸರಕಾರ ಯೋಚಿಸುತ್ತಿದೆ ಎಂದು ವರದಿ. ದಕ್ಷಿಣ ಭಾರತದ ಸಂಪೂರ್ಣಸಾಕ್ಷರ ರಾಜ್ಯ ಹೆಸರು ಬದಲಿಸುವುದರಲ್ಲಿ ಹಿಂದೆ ಇಲ್ಲ ಎಂದು ಈಗಾಗಲೇ ತೋರಿಸಿ ಕೊಟ್ಟಿದೆ. ತ್ರಿಚೂರ್, ಕ್ಯಾಲಿಕಟ್, ಟ್ರೀವೆನ್ಡ್ರಂ ಗಳನ್ನು ಬದಲಿಸಿ ತ್ರಿಶೂರ್, ಕೊಜಿಕೋಡ್, ತಿರುವನಂತಪುರಂ ಎಂದು ಬದಲಿಸಲಾಗಿದ್ದು ಹೆಸರುಗಳನ್ನ ಬದಲಿಸಿ ಅದೇನನ್ನು ಸಾಧಿಸಲು ಹೊರಟಿದ್ದೇವೆಯೋ ಎಂದು ಖಾದಿ ಧರಿಸುವ ರಾಜಕಾರಣಿಗಳೇ ಹೇಳಬೇಕು. ಭಾರತದ ಬಡತನದ ಬಗೆಗಿನ ವರದಿಯೊಂದು ನಮ್ಮ ವ್ಯವಸ್ಥೆಯ ವೈಫಲ್ಯದ ಮೇಲೆ ಕನ್ನಡಿ ಹಿಡಿದಿರುವಾಗ ರಾಜಕಾರಣಿಗಳು ಹೆಸರು ಬದಲಿಸುವ ಸರ್ಕಸ್ ಗಳಲ್ಲಿ ನಿರತರಾಗಿ ಜನರ ಲಕ್ಷ್ಯ ಬೇರೆಡೆ ತಿರುಗಿಸುವ ಆಟದಲ್ಲಿ ನಿರತರಾಗಿದ್ದಾರೆ. ಆಫ್ರಿಕಾದ ೨೬ ಅತಿ ಬಡ ರಾಷ್ಟ್ರಗಳಲ್ಲಿರುವ ಬಡವರಿಗಿಂತಲೂ ಹೆಚ್ಚು ಬಡವರು ನಮ್ಮ ದೇಶದ ಎಂಟು ರಾಜ್ಯಗಳಲ್ಲಿ ಇದ್ದಾರಂತೆ. ಆ ಎಂಟು ರಾಜ್ಯಗಳು ಯಾವುವೆಂದರೆ ಬಿಹಾರ್, ಛತ್ತೀಸ್ ಘಡ, ಒರಿಸ್ಸಾ, ಝಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ.      

ಆದರೆ ರೊಟ್ಟಿ ಯಿಲ್ಲದೆ ಹಸಿದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದಂತೆಯೇ ಕೋಟ್ಯಾಧಿ ಪತಿಗಳ ಸಂಖ್ಯೆಯೂ ಅಷ್ಟೇ ವೇಗದಲ್ಲಿ ಬೆಳೆಯುತ್ತಿರುವುದು ವಿಸ್ಮಯಕಾರಿ ಬೆಳವಣಿಗೆ ಎನ್ನಬಹುದು.

ನೀವೂ ಮರೆಗುಳಿಯೋ?

ಎಂದಿನಂತೆ ಇಂದೂ ಬೆಳಿಗ್ಗೆ ತಡಬಡಿಸಿ ಎದ್ದೆ. ಸ್ನಾನಕ್ಕೆ ಮತ್ತು ತಯಾರಾಗಲು ಬೇಕಾದ ಸಮಯ ಇಟ್ಟುಕೊಂಡು ಮಾತ್ರ ನಾನು ಏಳೋದು. ಸರಿ ಎದ್ದು ತಯಾರಾಗಿ ರಕ್ತದೊತ್ತಡದ ಮಾತ್ರೆ ತೆಗೆದುಕೊಳ್ಳೋಣ ಎಂದು ಸ್ವಲ್ಪ ನೀರನ್ನು ಕುಡಿದು ಪ್ಯಾಕೆಟ್ ತೆರೆಯುತ್ತಿದಂತೆ ನನಗೊಂದು ಸಂಶಯ. ನಾನು ಆಗಲೇ ಮಾತ್ರೆ ತೆಗೆದು ಕೊಂಡೆನೋ ಎಂದು. ಕೇವಲ ಕೆಲವೇ ಸೆಕೆಂಡುಗಳ ಅಂತರದಲ್ಲಿ ಸಂಶಯ ಪಿಶಾಚಿಯ ಆಗಮನ. ಈ ತೆರನಾದ ಮರೆಗುಳಿಗಳಿಗೆ ಔಷಧಿ ಕಂಪೆನಿಯವರು tablet strip ಹಿಂದುಗಡೆ ವಾರದ ಹೆಸರುಗಳನ್ನ ಹಾಕಿರುತ್ತಾರೆ. ಆದರೆ ದುರದೃಷ್ಟಕ್ಕೆ ನನ್ನ concor strip ಮೇಲೆ ಆ ಸೌಲಭ್ಯ ಇಲ್ಲ. ಥುತ್ ಹಾಳಾದ್ದು, ಸಂಶಯವೇ ಬೇಡ ಎಂದು ಮಾತ್ರೆ ತೆಗೆದುಕೊಳ್ಳದೆ ಕಾರಿನ ಕೀಲಿಗಳನ್ನು ತೆಗೆದಕೊಂಡು ಹೊರನಡೆಯ ಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಂಶಯ. ಲೇ, ನಾನು ತಲೆ ಬಾಚಿ ಕೊಂಡಿದ್ದೀನಾ, ಸ್ವಲ್ಪ ನೋಡು ಎಂದೆ. ಈಗಾಗಲೇ ನನ್ನನ್ನು ಗಮನಿಸುತ್ತಿದ್ದ ಪತ್ನಿ ಕೇಳಿದಳು, ಏನಾಗಿದೆರೀ ನಿಮಗೆ ಇವತ್ತು ಎಂದು ನನ್ನನ್ನೇ ಅಚ್ಚರಿಯಿಂದ ನೋಡಿ ಹೇಳಿದಳು ಬಾಚಿದ್ದೀರಾ ಹೋಗಿ ಎಂದು. ಮತ್ತೊಂದು ದಿನವೂ ಹೀಗೆಯೇ. ಆಫೀಸಿಗೆ ಹೊರಟೆ, ಮೊಬೈಲ್, ಕಾರಿನ ಕೀಲಿ, ವಾಲೆಟ್, ಎಲ್ಲಾ ಹಿಂದೆ ಬಿಟ್ಟು. ಕಾರಿನ ಕೀಲಿ ಬಿಟ್ಟು ಆಫೀಸಿಗೆ ಹೇಗೇ ಹೋಗುತ್ತೀರಾ, ನಡೆದುಕೊಂಡಾ ಎಂದು ನಾನು ಬಿಟ್ಟ ಎಲ್ಲಾ ವಸ್ತುಗಳನ್ನ ನನ್ನ ಕೈಗೆ ತುರುಕಿ ಬೀಳ್ಕೊಟ್ಟಳು. ಈ ರೀತಿಯ ಮರೆಗುಳಿತನದಿಂದ ಮೈ ಪರಚಿ ಕೊಳ್ಳುವಂತಾದರೂ ಚರ್ಮದ ಮೇಲೆ ಗೆರೆಗಳು ಉಳಿಯುತ್ತವೆಯೇ ಹೊರತು ಬೇರೆ ಪ್ರಯೋಜನ ಕಾಣದು.  ಆಶ್ಚರ್ಯ ಏನೆಂದರೆ ನಾವು ತೀರಾ ಅವಲಂಬಿತರಾಗಿರುವ ಮೊಬೈಲ್ ಅನ್ನು ಸಹಾ ಬಿಟ್ಟು ಹೋಗುತ್ತೇವೆ. ನನ್ನದು ಆನೆಯ ರೀತಿಯ ತೀಕ್ಷ್ಣ ಜ್ಞಾಪಕ ಶಕ್ತಿ ಎಂದು ಹೆಮ್ಮೆ ಪಡುವ ನಮ್ಮ ಬಾಸ್ ಸಹ ಹಲವು ಸಲ ಮೊಬೈಲ್ ಮನೆಯಲ್ಲಿ ಬಿಟ್ಟು ಬಂದಿರುತ್ತಾರೆ.     

ಮರೆಗುಳಿತನದ ಅನುಭವಗಳು baffling. Absent minded professor ಕಥೆ ನಮಗೆ ತಿಳಿದೇ ಇದೆ. ಯಾವಾಗಲೂ ತನ್ನ ಊರುಗೋಲನ್ನು ಹಿಡಿದು ಹೊರ ಹೋಗುತ್ತಿದ್ದ ಪ್ರೊಫೆಸರ್ ಮನೆಗೆ ಬಂದ ನಂತರ ಊರುಗೋಲನ್ನು ಬಾಗಿಲಿನ ಹಿಂದೆ ಇಟ್ಟು ಸೋಫಾದ ಮೇಲೆ ಕೂರುತ್ತಿದ್ದ. ಒಂದು ದಿನ ಅದೇನನ್ನೂ ಆಲೋಚಿಸುತ್ತಾ ಮನೆಗೆ ಬಂದ ಅವನು ಊರು ಗೋಲನ್ನು ಸೋಫಾದ ಮೇಲೆ ಕೂರಿಸಿ, ತಾನು ಹೋಗಿ ಬಾಗಿಲಿನ ಹಿಂದೆ ನಿಂತನಂತೆ. ಒಂದು ದಿನ ನಾನು ಸಾಕ್ಸ್ ಇಲ್ಲದೆ ಶೂ ಧರಿಸಿ, ಸಾಕ್ಸನ್ನು ಶೂಗೆ ತೊಡಿಸಲು ನೋಡಿದ್ದನ್ನು ನನ್ನ ಹೆಂಡತಿ ನೋಡಿ ಹೊಟ್ಟೆ ತುಂಬಾ ನಕ್ಕಿದ್ದಳು. alzheimer ಖಾಯಿಲೆ ಹತ್ತಿ ಕೊಂಡರೆ ಮರೆವು ಹೆಚ್ಚಂತೆ. ಮರೆವೇ ಈ ರೋಗದ ಮುಖ್ಯ ಲಕ್ಷಣ ಕೂಡಾ. 

ಕೆಲವರು ಕೋಣೆಗೆ ಹೋಗುತ್ತಾರೆ ಏನನ್ನೋ ತರಲು ಎಂದು, ಕೋಣೆ ತಲುಪಿದ ಕೂಡಲೇ ಮರೆತು ಬಿಡುತ್ತಾರೆ ಏನನ್ನು ತರಲು ಕೋಣೆಗೆ ನುಗ್ಗಿದ್ದು ಎಂದು. ಈ ರೀತಿಯ ಮರೆವಿಗೆ ಪ್ರಾಣಿಗಳೂ ಹೊರತಲ್ಲ, ಕೆಳಗಿದೆ ನೋಡಿ ಒಂದು ಉದಾಹರಣೆ.

ಹಾವುರಾಣಿ ಎನ್ನುವ ಜೀವಿಯೂ ಮರೆಗುಳಿಯಂತೆ. ಕಚ್ಚ ಬೇಕೆಂದು ಓಡಿ ಬರುವ ಅದಕ್ಕೆ ಹತ್ತಿರ ಬರುತ್ತಲೇ ಕಚ್ಚಬೇಕೆನ್ನುವುದು ಮರೆತುಬಿಡುತ್ತದಂತೆ. ಈ ಕಾರಣಕ್ಕಾಗಿಯೇ ಹಾವು ರಾಣಿ ಕಚ್ಚುವುದಿಲ್ಲ.

ನಾವೆಲ್ಲಾದರೂ ಏನನ್ನಾದರೂ ಮರೆತರೆ ನಮ್ಮ ಬಾಸ್ ಹೇಳುತ್ತಾರೆ, i know what I had asked you to do, I dont forget. My memory is like elephant’s. ಅಂದರೆ ಆನೆ ತೀಕ್ಷ್ಣ ಮತಿ ಅಂತ, ಅಲ್ವರ?  

ಕೆಲವೊಮ್ಮೆ ADHD ಇದ್ದರೂ ರೀತಿಯ ಮರೆವಿನ ತೊಡಕುಗಳು ಎದುರಾಗುತ್ತವೆ. attention deficit hyperactivity disorder ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಬಹುದು. ಇದಕ್ಕೆ ವೈದ್ಯಕೀಯ ನಿವಾರಣೆ ಇದೆ.  

ಗರ್ಭಿಣಿಯರಿಗೆ ಮರೆವು ಜಾಸ್ತಿ. ಇದಕ್ಕೆ pregnancy-induced brain fog ಎನ್ನುತ್ತಾರೆ. ಆದರೆ ಇದು ತಾತ್ಕಾಲಿಕ. ಹಾರ್ಮೋನುಗಳ ಏರು ಪೇರಿನಿಂದ ಆಗುತ್ತದೆ ಎಂದು ಹೇಳುತ್ತದೆ ವೈದ್ಯ ಶಾಸ್ತ್ರ.

ನೆನಪಿನಲ್ಲಿಡಬೇಕಾದ್ದನ್ನು ಬರೆದಿಟ್ಟು ಕೊಂಡರೆ ಒಳ್ಳೆಯದಂತೆ. ಈಗಂತೂ ಆಧುನಿಕ gadget ಗಳ ಯುಗ. black berry, laptop ಹೀಗೆ ಹಲವು ಉಪಕರಣಗಳು ನಮ್ಮ ಸಹಾಯಕ್ಕೆ. ಎಲ್ಲವನ್ನೂ ನಮ್ಮ ನೆನಪಿನ ಸುಪರ್ದಿಗೆ ಬಿಡದೆ ಬರೆದಿಟ್ಟು ಕೊಳ್ಳುವುದು ಒಳ್ಳೆಯದು ಎನ್ನುವುದಕ್ಕೆ ಒಂದು ಚೀನೀ ಗಾದೆಯೂ ಇದೆ, The palest ink is better than the best memory. ಅತ್ಯುತ್ತಮ ಜ್ಞಾಪಕಶಕ್ತಿಗಿಂತ ಮಬ್ಬಾದ ಮಸಿ ಒಳ್ಳೆಯದು.

ದೊಡ್ಡ embarrassing ಮರೆವು ಎಂದರೆ ನಾವು ಭೇಟಿ ಮಾಡಿದವರ, ಹೆಸರುಗಳನ್ನ ಮರೆಯೋದು. ನನಗಂತೂ ನನ್ನ ನಾದಿನಿಯ ಹೆಸರೂ ನೆನಪಿನಲ್ಲಿ ಇರುವುದಿಲ್ಲ, ಈ ಕಾರಣ ಹೆಂಡತಿಯಿಂದ ತಿವಿಸಿಕೊಂಡಿದ್ದೂ ಇದೆ.      

ನನಗೆ ತಿಳಿದ ಮಟ್ಟಿಗೆ ಈ ರೋಗಕ್ಕೆ ಕಾರಣ ನಮ್ಮ mind. ನಾನು ಮರೆಗುಳಿ, ನನ್ನ ತಲೆಯಲ್ಲಿ ಏನೂ ಉಳಿಯೋದಿಲ್ಲ, ಒಂದು ರೀತಿಯ ಜರಡೆಯಂತೆ ನನ್ನ ಜ್ಞಾಪಕ ಶಕ್ತಿ ಎಂದು ನಿಮ್ಮ ತಲೆಯನ್ನು  ನೀವೇ ಕೀಳರಿಮೆಯಿಂದ ನಡೆಸಿ ಕೊಂಡರೆ ಫಲಿತಾಂಶ ಮರೆಗುಳಿತನ. ಅದೇ ಸಮಯ ಆತ್ಮ ವಿಶ್ವಾಸದಿಂದ ನಾನು ನೆನಪಿಟ್ಟು ಕೊಳ್ಳ ಬಲ್ಲೆ ಎಂದು ನೆನಪಿಟ್ಟುಕೊಳ್ಳ ಬೇಕಾದ್ದನ್ನು ಶ್ರದ್ಧೆಯಿಂದ, ಗಮನವಿಟ್ಟು ಕೇಳಿ, ಓದಿದರೆ ಖಂಡಿತಾ ನಿಮ್ಮ ನೆನಪು ನಿಮಗೆ ಕೈಗೆ ಕೊಡುವುದಿಲ್ಲ.

ಇದನ್ನು ಬರೆಯುತ್ತಿದ್ದಂತೆ ನನ್ನ ಹೆಂಡತಿಯ ಫೋನ್ ಬಂತು. ಯಾಕೆ ಫೋನ್ ಮಾಡಿದ್ದು ಎಂದು ಕೇಳಿದ್ದಕ್ಕೆ ಅವಳು ಕೊಟ್ಟ ಉತ್ತರ, ಅಯ್ಯೋ ಮರೆತೆ ಹೋಯಿತು ಯಾಕೆ ಕರೆದಿದ್ದು ಅಂತ, ನೀವು ಫೋನ್ ಇಡಿ, ನೆನಪಾದಾಗ ಆಮೇಲೆ ಮಾಡುತ್ತೇನೆ ಎಂದಳು. ಅಂದರೆ ಈ ಮರೆವು universal, ನನಗೆ ಮಾತ್ರ ತಗುಲಿ ಕೊಂಡ ಪ್ರಾರಬ್ದ ಅಲ್ಲ.

ಯಾರೀ “ಸೈತಾನ”?

ಮೊನ್ನೆ ಆಪ್ತ ಸಂಪದಿಗರೊಬ್ಬರು ಸೈತಾನನೊಂದಿಗಿನ ಜೊತೆ ಬಸ್ಸಿನಲ್ಲಿ ತಮಗೆ ಆದ ಒಂದು ಅನುಭವವನ್ನು ಬರೆದಿದ್ದರು.  ಪ್ರಯಾಣದ ವೇಳೆ ಸಹಪ್ರಯಾಣಿಕರಾಗಿದ್ದ ಯಾರೋ ಅಪರಿಚಿತ ತಂದೆ-ಮಗಳ ನಡುವಿನ  ಸಂವಾದವನ್ನು ಆಲಿಸಿ ತಂದೆ ಉಪಯೋಗಿಸಿದ ಸೈತಾನ್ ಪದದ ಬಗ್ಗೆ ದುಃಖಿತರಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ತಮ್ಮ ಇಷ್ಟ ದೇವರನ್ನು ಸೈತಾನ ಎಂದು ಕರೆದ ವ್ಯಕ್ತಿಯ ನಂಬುಗೆಯ ಬಗ್ಗೆ ರಂಗು ರಂಗಿನ ಕಾಮೆಂಟುಗಳೂ ಬಂದವು. ನಾನಂತೂ ಇದು ಶುದ್ಧ ಸುಳ್ಳು ಎಂದು ಜೇನುಗೂಡಿಗೆ ಕಲ್ಲು ಬೀಸಿದ್ದೇ ತಡ ಬಂದೆರಗಿದವು  ದಂಡು. ನೆಚ್ಚಿನ ನಟನ autograph ಪಡೆಯಲು ಮುತ್ತಿಕ್ಕುವ ಅಭಿಮಾನಿಗಳಂತೆ. ಈ storm in a tea cup ತೆರನಾದ ವಿವಾದವನ್ನ ಎಬ್ಬಿಸಿದ ಸೈತಾನ್ ನನ್ನ ಹಿಂದೆಯೂ ಬಿದ್ದ ತನ್ನ ಬಗ್ಗೆ ಸಹಾ ಒಂದಿಷ್ಟು ಬರಿ ಎಂದು.  

ಸೈತಾನ್ ಮತ್ತು ಶೈತಾನ್ ಇವೆರಡೂ ಒಂದೇ ಪದಗಳು, ಉಚ್ಛಾರ ಮಾತ್ರ ಬೇರೆ. ಅರಬ್ಬೀ ಮೂಲದ ಈ ಪದಗಳು ವಿವಿಧ ಸಂದರ್ಭಗಳಲ್ಲಿ ವಿವಿಧ ಅರ್ಥ ಬರುವ ರೀತಿಯಲ್ಲಿ ಬಳಸುತ್ತಾರೆ. satanic verses ಬರೆದ ರುಶ್ಡಿ ತನ್ನ ಲೇಖನಿಯಿಂದ ಹೊರಹೊಮ್ಮಿದ ಸೈತಾನನ ದೆಸೆಯಿಂದ ತನ್ನ ತಲೆಗೆ ಭಾರೀ ಮೊತ್ತದ ಬಹುಮಾನವನ್ನು  ಕಟ್ಟಿಕೊಂಡ. ರುಶ್ಡಿ ಗೆ ತಗುಲಿಕೊಂಡ ಸೈತಾನನೇ ಕುಂಚವೀರ ಹುಸೇನನಿಗೂ ತಗುಲಿಕೊಂಡು ದೇಶಾಂತರ ಹೋಗಲು ಮಾಡಿದ್ದು. ನೋಡಿದಿರಾ ಸೈತಾನನ ಮಹಿಮೆಯನ್ನು. ವಿಕ್ರಮನ ಬೆಂಬಿಡದ ಭೇತಾಳನಂತೆ ಈತ ಕೂಡಾ.     

ಮಕ್ಕಳು ತುಂಬಾ ತುಂಟತನ ಮಾಡಿದಾಗ ಎಂಥ ಸೈತಾನ ಹುಡುಗ ಅಪ್ಪ ಇವನು ಎಂದು ಮೂದಲಿಸುವುದನ್ನು ಕೇಳಿದ್ದೇನೆ. ಮಕ್ಕಳನ್ನು ಸೈತಾನ ಎಂದು ಕರೆಯಬಾರದು ಎಂದು ಹಿರಿಯರು ನಯವಾಗಿ ಗದರುವುದೂ ಇದೆ. ದೇವರು ಮನುಷ್ಯನನ್ನು ಸೃಷ್ಟಿಸುವ ನಿರ್ಣಯ ಮಾಡಿದಾಗ ಸಕಲ ದೇವದೂತ ಸಮೂಹ ದೇವರನ್ನು ಉದ್ದೇಶಿಸಿ ಹೇಳುತ್ತದೆ, ಪ್ರಭು, ನಿನ್ನನ್ನು ಆರಾಧಿಸಲು, ನಿನ್ನ ಆಜ್ಞೆಗಳನ್ನು ಶಿರಸಾ ಪಾಲಿಸಲು ನಾವಿರುವಾಗ ಈ ಮನುಷ್ಯನನ್ನು ಸೃಷ್ಟಿಸಿ ಭೂಲೋಕಕ್ಕೆ ಕಳಿಸಿ ದೊಡ್ಡ ಗಂಡಾಂತರಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಅಲ್ಲವೇ ಎಂದಾಗ ದೇವರು ಹೇಳುತ್ತಾನೆ, ನನ್ನ ಆಜ್ಞಾನುವರ್ತಿ ದಾಸರೇ, ನಿಮಗೆ ಅರಿವಿಲ್ಲದ್ದು ನನಗೆ ತಿಳಿದಿದೆ, ನಿಮ್ಮನ್ನೂ ಸಹಾ ನಾನೇ ಅಲ್ಲವೇ ಸೃಷ್ಟಿಸಿದ್ದು ಎಂದು ಹೇಳಿ ಮಣ್ಣಿನಿಂದ ಸೃಷ್ಟಿಸಿದ ಮನುಷ್ಯನಿಗೆ ಸಾಷ್ಟಾಂಗ ಮಾಡುವಂತೆ ಅಪ್ಪಣೆ ಕೊಡುತ್ತಾನೆ. ಸಮಸ್ತ ದೇವದೂತ ಸಮೂಹ ಕೂಡಲೇ ಮನುಷ್ಯನಿಗೆ ಸಾಷ್ಟಾಂಗ ಎರಗುತ್ತವೆ, ಒಬ್ಬನನ್ನು ಹೊರತು ಪಡಿಸಿ. ಅವನೇ ದೇವದೂತರ ನಾಯಕ ಇಬ್ಲಿಸ್. ಇಬ್ಲಿಸ್ ಹೇಳುತ್ತಾನೆ, ಪ್ರಭು, ನನ್ನನ್ನು ನೀನು ಸೃಷ್ಟಿಸಿದ್ದು ಹೊಗೆಯಿಲ್ಲದ ಅಗ್ನಿಯಿಂದ, ಜೇಡಿ ಮಣ್ಣಿನಿಂದ ಸೃಷ್ಟಿಸಿದ ಈ ಮನುಷ್ಯನಿಗೆ ನಾನು ಸಾಷ್ಟಾಂಗ ಎರಗಲು ನೀನು ಕೇಳುವುದು ಯಾವ ನ್ಯಾಯ ಎಂದು ತನ್ನ ಒಡೆಯ, ತನ್ನನ್ನು ಸೃಷ್ಟಿಸಿದ ಸಕಲ ಲೋಕಗಳ ಪ್ರಭುವಿಗೆ ಮರುತ್ತರ ನೀಡುತ್ತಾನೆ. ಕುಪಿತನಾದ ದೇವರು ಅವನನ್ನು ದೇವಲೋಕದಿಂದ ಅಟ್ಟುತ್ತಾನೆ. ಪ್ರಥಮ ಮಾನವ ಜೋಡಿ “ಆದಂ” ಮತ್ತು “ಹವ್ವಾ” (adam and eve) ರನ್ನು ಸಂಬೋಧಿಸುವ ದೇವರು ನೀವು ಸ್ವರ್ಗ  ಲೋಕದಲ್ಲಿ ಬೇಕಾದ್ದನ್ನು ಮಾಡಿರಿ, ಸುಖಿಸಿ ಆದರೆ ಆ ವೃಕ್ಷದ ಫಲ ಮಾತ್ರ ತಿನ್ನಬೇಡಿ ಎಂದು ತಾಕೀತು ಮಾಡುತ್ತಾನೆ. ಈಗ ಆಗಮನವಾಗುತ್ತದೆ ಸ್ವರ್ಗಲೋಕದಿಂದ ಹೊರದಬ್ಬಲ್ಪಟ್ಟ “ಇಬ್ಲಿಸ್” ನದು. ನೀವೆಷ್ಟೆಲ್ಲ ರೀತಿಯ ಸುಖ ಅನುಭವಿಸುತ್ತಿರುವಾಗ ಈ ವೃಕ್ಷದ ಹಣ್ಣನ್ನು ತಿನ್ನಬೇಡಿ ಎಂದು ಪ್ರಭು ಹೇಳಲು ಏನು ಕಾರಣ, ನೀವು ತಿನ್ನಿ ಎಂದು ಅವರಿಗೆ ಆಮಿಷ ಒಡ್ಡುತ್ತಾನೆ. ಮನುಷ್ಯ ಚಂಚಲ, ಸ್ವರ್ಗದಲ್ಲಿ ಇಷ್ಟೆಲ್ಲಾ ಇದ್ದರೂ ಯಾವುದು ಪ್ರತಿಬಂಧಿಸಲ್ಪಟ್ಟಿದೆಯೋ ಅದನ್ನು ತಿನ್ನಬೇಕು. ಸರಿ ಆ ಫಲವನ್ನ ತಿಂದಿದ್ದೇ ತಡ ದೇವರು ಹೇಳುತ್ತಾನೆ, ಧಿಕ್ಕಾರಿಗಳಾದ ನೀವಿಬ್ಬರೂ ಸ್ವರ್ಗ ಬಿಟ್ಟು ತೊಲಗಿ, ಭೂಲೋಕಕ್ಕೆ ಹೋಗಿ ನೆಲೆಸಿ ಎಂದು ಅವರನ್ನು ಕಳಿಸುತ್ತಾನೆ. ಈ ಘಟನೆಗೆ ಆಮಿಷ ತೋರಿಸಿದ “ಇಬ್ಲಿಸ್” ಕಾರಣ ಮತ್ತು ಇವನನ್ನೇ ಸೈತಾನ್ ಎಂದೂ ಕರೆಯುತ್ತಾರೆ.

ಮುಸ್ಲಿಮರು ಏಕದೇವೋಪಾಸನೆಯಲ್ಲಿ ನಿರತರಾಗಿರುವಾಗಲೂ ಸೈತಾನ ಬಂದು ತನ್ನ ಕುಚೇಷ್ಟೆಗಳನ್ನು ತೋರಿಸುತ್ತಾನೆ ಎಂದು ನಂಬುಗೆ. ಹೇಗೆಂದರೆ, ಧ್ಯಾನ ನಿರತರಾಗಿದ್ದಾಗ ಅವರ ಮನಸನ್ನು ಇನ್ನೆಲ್ಲಿಗಾದರೂ ಸೆಳೆಯುವುದು, ನಮಾಜಿನ ಲಹರಿಯಲ್ಲಿ ಏರು ಪೇರುಂಟು ಮಾಡುವುದು, ಇಲ್ಲಸಲ್ಲದ ಆಲೋಚನೆಗಳನ್ನು ಬಿತ್ತುವುದು, ಈ ರೀತಿಯ ಕುಚೇಷ್ಟೆ ತೋರಿಸುತ್ತಾನೆ. ಅದಕ್ಕಾಗಿ ಆರಾಧನೆ ಆರಂಭದಲ್ಲಿ “ಅಊದು ಬಿಲ್ಲಾಹಿ ಮಿನ ಶೈತಾನಿ ರಜೀಮ್” ಎಂದು ಹೇಳಿಯೇ ನಮಾಜ್ ಆರಂಭಿಸುವುದು. ಈ ಸೂಕ್ತದ ಅರ್ಥ ” ಸೈತಾನನ ಚೇಷ್ಟೆಯಿಂದ ಅಲ್ಲಾಹನ ಅಭಯ ಅರಸುತ್ತೇನೆ” ಎಂದು. ಇಸ್ಲಾಮಿನಲ್ಲಿ ಕಡ್ಡಾಯ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಮಾಡಬೇಕೆಂದು ನಿಯಮವಿದೆ. ತಮ್ಮ ಹಿಂದೆ ಸಾಲಾಗಿ ನಿಲ್ಲುವ ಆರಾಧಕರನ್ನು ಉದ್ದೇಶಿಸಿ ಇಮಾಂ ಹೇಳುತ್ತಾರೆ, ನೇರವಾಗಿ ನಿಲ್ಲಿ, ಇಬ್ಬರ ಮಧ್ಯೆ ಸೈತಾನನಿಗೆ ನಿಲ್ಲಲು ಅವಕಾಶ ಮಾಡಬೇಡಿ ಎಂದು. ಮನೆಯಲ್ಲಿ ಒಬ್ಬರೇ ನಮಾಜ್ ಮಾಡಿದ ನಂತರ ನೆಲದ ಮೇಲೆ ಹರಡುವ ಚಿಕ್ಕ ಕಂಬಳಿಯನ್ನು (prayer mat) ಮಡಚಿ ಇಟ್ಟು ಹೋಗುತ್ತಾರೆ ಸೈತಾನ ಬಂದು ಉಪಯೋಗಿಸಬಹುದು ಎಂದು ಹೆದರಿ. “ಸೈತಾನನ ಚೇಷ್ಟೆಯಿಂದ ಅಲ್ಲಾಹನ ಅಭಯ ಕೇಳುವ ಪುಟ್ಟ ಪ್ರಾರ್ಥನೆ ಮುಸ್ಲಿಮರ ನಾಲಗೆಯ ತುದಿಯಲ್ಲಿ ಯಾವಾಗಲೂ ಇರುತ್ತದೆ.        

ಈ ಮೇಲಿನ ಸಂದರ್ಭದಲ್ಲಿ ಸೈತಾನ ಎಂದರೆ ಒಂದು ರೀತಿಯ distraction. ಶ್ರದ್ಧೆ ತಪ್ಪುವಂತೆ ಮಾಡುವುದು ಅವನ pastime.

ರಾತ್ರಿ ಮಕ್ಕಳು ಕಾಲು ತೊಳೆಯದೆ ಮಲಗಲು ಹೋದರೆ  ಇದ್ದರೆ ತಾಯಿ ಗದರಿಸುತ್ತಾಳೆ , ನಿಮ್ಮ ಕಾಲುಗಳನ್ನು ಸೈತಾನ ಬಂದು ನೆಕ್ಕುತ್ತಾನೆ ಎಂದು. ಭಯದಿಂದ ಮಕ್ಕಳು ತೆಪ್ಪಗೆ ಬಚ್ಚಲ ಮನೆಯ ಕಡೆ ಪ್ರಯಾಣ ಬೆಳೆಸುತ್ತಾರೆ. ಮನಸ್ಸಿಗೆ ಯಾವುದಾದರೂ ವಿಷಯದಲ್ಲಿ ಅನುಮಾನ ತೋರಿದಾಗ, ಜನರ ಬಗ್ಗೆ ಅನಾವಶ್ಯಕ ಗುಮಾನಿ ಮೂಡಿದಾಗಲೂ ದೂರುವುದು ಸೈತಾನನನ್ನೇ.  

ವಿವಾಹಿತರಾಗದ  ಹೆಣ್ಣು ಗಂಡು ಏಕಾಂತದಲ್ಲಿದ್ದರೆ ಮೂರನೆಯ ವ್ಯಕ್ತಿಯಾಗಿ ಹಾಜರಿರುತ್ತಾನಂತೆ ಸೈತಾನ.  ಸೈತಾನ ಬಂದು ಅವರೀರ್ವರ ಅಥವಾ ಅವರಲ್ಲೊಬ್ಬರ ಮನಸ್ಸಿನಲ್ಲಿ ಕೊಳಕು ಆಲೋಚನೆ ಬಿತ್ತುತ್ತಾನೆ ಎಂದು ವಿಧ್ವಾಂಸರು ಹೇಳುತ್ತಾರೆ. ಇದರರ್ಥ ಏನೆಂದರೆ ಅನಾವಶ್ಯಕವಾಗಿ ವಿರುದ್ಧ ಲಿಂಗದವರು ಒಟ್ಟಿಗೆ ಸೇರಬಾರದು ಎಂದು.

ಈ ಮೇಲಿನ ಉದಾಹರಣೆಯಲ್ಲಿ ಸೈತಾನ ಮಾಡುವ ಕೆಲಸ ಮನಸ್ಸಿನಲ್ಲಿ ಲಾಲಸೆ ಉಂಟು ಮಾಡುವುದು.

ಭೂತ, ಪ್ರೇತ, ಪಿಶಾಚಿ, ಮೋಹಿನಿ, ದೆವ್ವಾದಿಗಳಿಗೂ ಸೈತಾನ ಎಂದು ಕರೆಯುತಾರೆ. ವರುಷಗಳ ಹಿಂದಿನ ಮಾತು. ಹಳ್ಳಿಯೊಂದರಲ್ಲಿದ್ದ ನಮ್ಮ ತೆಂಗಿನ ತೋಟದಲ್ಲಿ ಒಂದು ಕೇರಳ ಮೂಲದ ಕುಟುಂಬ ತೋಟವನ್ನು ಕಾಯುವ ಕೆಲಸ ಮಾಡುತ್ತಿತ್ತು. ಪ್ರತೀ ರಂಜಾನ್, ಬಕ್ರೀದ್ ಹಬ್ಬಗಳಿಗೆ ಆ ಮನೆಯ ಯಜಮಾನ ಪಟ್ಟಣದಲ್ಲಿದ್ದ ನಮ್ಮ ಮನೆಗೆ ಬರುತ್ತಿದ್ದರು. ಅವರು ಹಿಂದಿರುಗುವಾಗ ನಮ್ಮಮ್ಮ ಅವರ ಮನೆಯವರಿಗೆಂದು ಬಿರಿಯಾನಿ ಕಟ್ಟಿ ಕೊಡುತ್ತಿದ್ದರು. ಒಮ್ಮೆ ಈ ರೀತಿ ಬುತ್ತಿಯನ್ನು ಸೈಕಲ್ ಕ್ಯಾರಿಯರ್ ಮೇಲೆ ಇಟ್ಟುಕೊಂಡು ಆ ವ್ಯಕ್ತಿ ತಮ್ಮ ಮನೆಗೆ ಹೋಗುತ್ತಿದ್ದರು. ಅವರು ವಾಸಿಸುತ್ತಿದ್ದ ಸ್ಥಳ ನಿರ್ಜನ. ಹೋಗುವ ದಾರಿಯಲ್ಲಿ ಸಿಗುವ  ರೈಲ್ವೆ ಕ್ರಾಸಿಂಗ್ ದಾಟಿ ಇಳಿಜಾರಿನಲ್ಲಿ ಸರಾಗವಾಗಿ ಹೋಗುತ್ತಿದ್ದ ಸೈಕಲ್ ಅನ್ನು ಯಾರೋ ಹಿಡಿದು ಹಿಂದಕ್ಕೆಳೆದ ಅನುಭವ ಅವರಿಗೆ. ಹಿಂದಿರುಗಿ ನೋಡಿದಾಗ ಯಾರೂ ಕಾಣಲಿಲ್ಲ. ಏನೋ ಭ್ರಮೆ ಇರಬೇಕು ಎಂದು ಮತ್ತೊಮ್ಮೆ ಸೈಕಲ್ ಹತ್ತಿ ಮುಂದಕ್ಕೆ ಹೋಗಲು ಹೊರಟಾಗ ಅದೇ ರೀತಿಯ ಅನುಭವ. ಹೀಗೆ ಮೂರ್ನಾಕು ಸಲ ಆದ ಕೂಡಲೇ ಬೇಸತ್ತ ಅವರು ಇದು ಸೈತಾನನ ಆಟ ಇರಬೇಕು, ಬಿರಿಯಾನಿ ತಿನ್ನಲು ಮನಸ್ಸಾಗಿದೆ ಸೈತಾನನಿಗೆ, ಅದಕ್ಕೇ ಎಳೆಯುತ್ತಿದೆ ಸೈಕಲ್ ಅನ್ನು ಎಂದು ಒಂದು ಡಬ್ಬದಷ್ಟು ಬಿರಿಯಾನಿಯನ್ನು ರಸ್ತೆಗೆ ಬಿಸಾಡಿದ ನಂತರವೇ ಸೈಕಲ್ ಸರಾಗವಾಗಿ ಓಡಿದ್ದು. ನಮಗೆ ಅಷ್ಟೇನೂ ರುಚಿಕರವಾಗಿ ಕಾಣದಿದ್ದರೂ ಸೈತಾನನಿಗಾದರೂ ಇಷ್ಟವಾಯಿತಲ್ಲ ನಮ್ಮಮ್ಮನ ಬಿರಿಯಾನಿ ಎಂದು ಈ ಕತೆ ಕೇಳಿದ ನಾವು ಅಂದು ಕೊಂಡು ಭಯದಿಂದ ಮುದುಡಿ ಮಲಗಿದ್ದೆವು ರಾತ್ರಿ.    

ಸೈತಾನ ಎಂದರೆ ಪ್ರೇತ ಎಂದೂ ಹೇಳಲಾಗುತ್ತದೆ. ಒಂದಾನೊಂದು ಕಾಲದಲ್ಲಿ ಉಕ್ಕಿನ ಕಾರ್ಖಾನೆಯ ಹತ್ತಿರ ಇದ್ದ  ನನ್ನ ಅಜ್ಜಿಯ ಮನೆಯಲ್ಲಿ ಸೈತಾನನ ಹಾವಳಿ ಇತ್ತಂತೆ. ತಡ ರಾತ್ರಿ ತನಕ ನನ್ನ ಅಜ್ಜ ರೇಡಿಯೋ ಕೇಳುತ್ತಿದ್ದರು. ಮಲಗಲು ಹೋದ ನಂತರ ಸೈತಾನ ಬಂದು ಮತ್ತೊಮ್ಮೆ ರೇಡಿಯೋ ಆನ್ ಮಾಡುತ್ತಿದ್ದನಂತೆ. ಮಾಡುತ್ತಿದ್ದನಂತೆ? ಮಾಡುತ್ತಿದ್ದಳಂತೆ ಏಕಾಗಬಾರದು? ಚಂಡಮಾರುತಗಳಿಗೆ ಸ್ತ್ರೀಯರ ಹೆಸರೇ ಏಕೆ ಎಂದು ಪ್ರತಿಭಟಿಸಿದ ನಾರೀಮಣಿಗಳ ಥರ ನಾವೂ ಪ್ರತಿಭಟಿಸಬೇಕು ನೋಡಿ ಸೈತಾನನ ಪುಲ್ಲಿಂಗ ಪ್ರಯೋಗದ ಬಗ್ಗೆ.              

ಒಂದು ಸಮುದಾಯಕ್ಕೆ ಸೇರಿದವರ ಇಷ್ಟ ದೇವರನ್ನು ಸೈತಾನ ಎಂದು ಜರೆದ ತಂದೆ ಮಗಳ ಸಂವಾದ ಆಲಿಸಿ ಅಳಲನ್ನು ತೋಡಿಕೊಂಡ ಸಂಪದಿಗರಿಗೆ ಸೈತಾನನ ಪ್ರಭಾವದಿಂದ ತಪ್ಪು ಗ್ರಹಿಕೆ ಆಗಿರಲಿಕ್ಕೂ ಸಾಕು. ಏಕೆಂದರೆ ಕೇಳಿದ್ದೆಲ್ಲಾ ಸತ್ಯವೇ ಆಗ ಬೇಕೆಂದಿಲ್ಲವಲ್ಲ. “ನೋಡಿದ್ದು  ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ, ನಿಜವು ತಿಳಿವುದು” ಎನ್ನುವ ನೀತಿ ಬೋಧನೆಯ ಹಾಡೇ ಇಲ್ಲವೇ? ಬಹುಶಃ ಬೇರಾವುದಾದರೂ ವಸ್ತುವನ್ನು ತೋರಿಸಿ ಸೈತಾನ ಎಂದು ತಂದೆ ತನ್ನ ಪ್ರೀತಿಯ ಮಗಳಿಗೆ ಹೇಳುತ್ತಿರುವಾಗ coincidentally ಅದೇ ಸಂದರ್ಭದಲ್ಲಿ ದೇವರ ಮೆರವಣಿಗೆ ಬಂದಿರಬೇಕು. possibilities are endless, you see? ಇದೂ ಒಂದು ರೀತಿಯ ಸೈತಾನನ ಆಟವೇ ಆಗಿರಬೇಕು, ಜನರ ನಡುವೆ ಸಂಶಯದ ಬೀಜ ಬಿತ್ತುವುದು. ಹಾಗೇನಾದರೂ ಆ ವ್ಯಕ್ತಿ ಹೇಳಿದ್ದು ಅವರ ದೇವರ ಬಗ್ಗೆಯೇ ಆಗಿದ್ದರೂ ಅದನ್ನು ಅವರಿಗೆ ಅರ್ಥವಾಗುವ ಹಾಗೆ ತಿಳಿ ಹೇಳಬೇಕು, ಎಲ್ಲಾ ಜನರ ನಂಬಿಕೆಗಳನ್ನೂ, ದೇವರುಗಳನ್ನೂ ಗೌರವಿಸಬೇಕಪ್ಪಾ ದೊರೆ ಎಂದು. ಅದಕ್ಕೇ ಅಲ್ಲವೇ ಮನುಷ್ಯನಿಗೆ ದೇವರು ಮಾತು ಎನ್ನುವ faculty ದಯಪಾಲಿಸಿದ್ದು? ಪ್ರಾಣಿಗಳಿಗಿಲ್ಲದ ಈ ಅದ್ಭುತ ಸೌಲಭ್ಯವನ್ನ ಆ ಕರುಣಾಮಯನಾದ ದೇವರು ಮನುಷ್ಯನಿಗೆ ದಯಪಾಲಿಸಿರುವಾಗ ಅದನ್ನು ಯಥೇಚ್ಚವಾಗಿ ಉಪಯೋಗಿಸಿಲ್ಲದಿದ್ದರೆ ನಾಳೆ “ಮಾತು” ಅನ್ನುವ ಪ್ರಯೋಗವನ್ನೇ ಮನುಷ್ಯ ಮರೆತು ಬಿಡಬಹುದು (ಸಂಸ್ಕೃತ ಭಾಷೆಯನ್ನೂ ಹೆಚ್ಚೂ ಕಡಿಮೆ ಕಳೆದುಕೊಂಡಂತೆ). ಸಂವಾದ ಬರೀ ಜಗಳ ಕಾಯಲು ಮಾತ್ರವಲ್ಲದೆ ಜನರಿಗೆ ತಿಳಿ ಹೇಳಲು, ವಿವರಿಸಲು, ಉಪದೇಶಿಸಲು, ಒಳ್ಳೆಯ ಮಾತುಗಳನ್ನಾಡಲು ಉಪಯೋಗಿಸಿದಾಗ ಎಲ್ಲಾ ರೀತಿಯ ಸಂಶಯಗಳೂ ಪರಿಹಾರ ಕಾಣುವುವು. ಮಾತೇ ಆಡದಿದ್ದರೆ ಯಾರೋ ಹೇಳಿದ ಸುಳ್ಳುಗಳನ್ನು ಸತ್ಯ ಎಂದು ನಂಬಿ, ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಬೇಡದ ಆಲೋಚನೆ, ಕಲ್ಪನೆ ಮಾಡಿ ಕೊಂಡು ಅನುಮಾನಗಳನ್ನೂ, ಸಂಶಯಗಳನ್ನೂ ಎದೆಯಲ್ಲಿ ಇಟ್ಟು ಕೊಂಡು ನಡೆದರೆ ಆರೋಗ್ಯಕ್ಕೂ, ಚಿತ್ತ ಸ್ವಾಸ್ಥ್ಯಕ್ಕೂ ಒಳ್ಳೆಯದಲ್ಲ ಎಂದು ಹಿರಿಯರು ಹೇಳುವರು.

ಬನ್ನಿ ಮಾತನಾಡೋಣ, ಸೈತಾನ್ ಹತ್ತಿರ ಸುಳಿಯೋದಿಲ್ಲ, ಏಕೆಂದರೆ ಸೈತಾನರು ಮನೆ ಮಾಡಿಕೊಂಡಿರುವುದು ಸ್ಮಶಾನದಂಥ ನಿರ್ಜನ ಸ್ಥಳಗಳಲ್ಲೂ, (scheming empty minds) ಬರಿದಾದ ಮನಸ್ಸಿನಲ್ಲೂ ಅಲ್ಲವೇ?

ನೋಡಿ ಸೈತಾನನ ಕೆಲಸ, ನಾನು ನಿಜವಾಗಿ ಬರೆಯಲು ಹೊರಟಿದ್ದು ಈಗ ನನ್ನ ಕೈಯಲ್ಲಿರುವ “ಕವಲು” ಕಾದಂಬರಿಯ ಬಗ್ಗೆ, ಆದರೆ ಗೀಚಿದ್ದು ಉಲ್ಟಾ ಕಾಲುಗಳ ಸೃಷ್ಟಿಗಳ ಬಗ್ಗೆ.

ವ್ಯಂಗ್ಯ ಚಿತ್ರ ಕೃಪೆ: joel roi aronowitz