ಬಹುಪತ್ನಿತ್ವ ಮತ್ತು popular perception

ಬಹುಪತ್ನಿತ್ವ ಎಂದ ಕೂಡಲೇ popular perception ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆ ಯಾಗುವವರು ಎಂದು. ಈ ತಪ್ಪು ತಿಳಿವಳಿಕೆಗೆ ಜನರ ತಿಳಿಗೇಡಿತನಕ್ಕಿಂತ ಮಾಧ್ಯಮಗಳ ಮತ್ತು ಹಗೆ ವರ್ತಕ ರಾಜಕಾರಣಿಗಳ ಕುಚೋದ್ಯದ ಅಪಪ್ರಚಾರ ಕಾರಣ ಎನ್ನಬಹುದು. ಹೌದು ಇಸ್ಲಾಂ ಬಹುಪತ್ನಿತ್ವ ವನ್ನು ಅನುಮತಿಸುತ್ತದೆ ಷರತ್ತುಗಳೊಂದಿಗೆ. ಈ ಶರತ್ತುಗಳೇ ನನ್ನಂಥ ಮತ್ತು ಶೇಕಡಾ 90 ಕ್ಕಿಂತ ಹೆಚ್ಚು ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದಲು ಇಷ್ಟ ಪಡದೆ ಇರುವುದು. ದೇವ ವಾಣಿ “ಪವಿತ್ರ ಕುರ್’ ಆನ್” ನಲ್ಲಿ ವಿಶ್ವಾಸ ಇಡುವ ಮುಸ್ಲಿಮನೊಬ್ಬ ದೇವರು ವಿಧಿಸಿದ ಶರತ್ತುಗಳನ್ನು ಅವಗಣಿಸಿ ತನ್ನ ಶಾರೀರಿಕ ತೃಷೆಗಾಗಿ ಪಾಪವನ್ನು ತನ್ನ ಮೇಲೆ ಹೇರಿಕೊಳ್ಳಲಾರ. ಹಾಗೆಯೇ ಬಹುಪತ್ನಿತ್ವ ಇಸ್ಲಾಮಿನ prerogative ಮಾತ್ರ ಅಲ್ಲ ಎಂದು ಈ ಕುರಿತು ನಡೆದ ಅಧ್ಯಯನಗಳು ಸ್ಥಿರೀಕರಿಸುತ್ತವೆ.

ಹಿಂದೂ ಧರ್ಮೀಯರ ಬೌಧಾಯನ ಧರ್ಮಶಾಸ್ತ್ರದಲ್ಲಿ ಬ್ರಾಹ್ಮಣರು ನಾಲ್ಕು ಹೆಂಡಿರನ್ನೂ, ಕ್ಷತ್ರಿಯ ಮೂರು, ವೈಶ್ಯ ಎರಡು ಮತ್ತು ಶೂದ್ರ ಒಂದು ಹೆಣ್ಣನ್ನು ಮದುವೆಯಾಗಬಹುದು. ಭಗವಾನ್ ಶ್ರೀ ಕೃಷ್ಣನೂ, ಮತ್ತು ಪಾಂಡವರೂ ಬಹುಪತ್ನಿತ್ವವನ್ನು ಆಚರಿಸಿದವರು.      

ಕನ್ನಡದ ಸುಪ್ರಸಿದ್ಧ ವೆಬ್ ತಾಣವೊಂದರಲ್ಲಿ ಒಬ್ಬರು “ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!” ಶೀರ್ಷಿಕೆಯಡಿ ಮೈಸೂರಿನ ರಾಜ ಮನೆತನ ಬಹುಪತ್ನಿತ್ವವನ್ನು ಆಚರಿಸುತ್ತಿತ್ತು ಎಂದು ಬರೆದಿದ್ದರು. . ಅದರ ತುಣುಕೊಂದನ್ನು ಕೆಳಗೆ ನೀಡಿದ್ದೇನೆ.

ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ ಹೆಂಡತಿಯರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನೂ ದಾಖಲಿಸಲಾಗಿದೆ. ಇಡೀ ಚೂರ್ಣಿಕೆಯ ಬರಹ “ಎಫಿಗ್ರಾಫಿಯಾ ಕರ್ನಾಟಿಕ” ಸಂಪುಟ ೫ ರಲ್ಲಿ ಪ್ರಕಟವಾಗಿದೆ. ಅದರ ಇಂಗ್ಲೀಷ್ ಅನುವಾದವೂ ಅಲ್ಲೇ ಪ್ರಕಟವಾಗಿದೆ.

ಈ ಚೂರ್ಣಿಕೆಯನ್ನು ಸಿದ್ಧ ಪಡಿಸಿದ ಕಲಾವಿದ ತಿಪ್ಪಣ್ಣ ಎನ್ನುವ ವ್ಯಕ್ತಿ.

ಮೈಸೂರು ರಾಜರುಗಳು ಮತ್ತು ಅವರ ಸಂಸಾರ:

ದೊಡ್ಡ ದೇವರಾಜ ವೊಡೆಯರ್ – 53 ಹೆಂಡಿರು 11 ಮಕ್ಕಳು

ಚಿಕ್ಕ ದೇವರಾಜ ವೊಡೆಯರ್ – 22 ಹೆಂಡಿರು, 2 ಮಕ್ಕಳು

ಕಂತೀರವ ಮಹಾರಾಜ ವೊಡೆಯರ್ – 3 ಹೆಂಡಿರು, 5 ಮಕ್ಕಳು

ವಮ್ಮಡಿ ದೊಡ್ಡ ಕೃಷ್ಣ ರಾಜ ವೊಡೆಯರ್ – 45 ಹೆಂಡಿರು, 2 ಮಕ್ಕಳು

ವಮ್ಮಡಿ ಚಾಮರಾಜ ವೊಡೆಯರ್ – 3 ಹೆಂಡಿರು, ಮಕ್ಕಳಿಲ್ಲ

ಇಮ್ಮಡಿ ಕೃಷ್ಣರಾಜ ವೊಡೆಯರ್ – 8 ಹೆಂಡಿರು, 9 ಮಕ್ಕಳು

ಮುಮ್ಮಡಿ ಖಾಸಾ ಚಾಮರಾಜ ವೊಡೆಯರ್ – 10 ಹೆಂಡಿರು ಮತ್ತು 4 ಮಕ್ಕಳು

ಮುಮ್ಮಡಿ ಶ್ರೀ ಕೃಷ್ಣ ರಾಜ ವೊಡೆಯರ್ ಬಹಾದುರ್ – 20 ಹೆಂಡಿರು

ಚಾಮರಾಜ ವೊಡೆಯರ್ – 65 ಹೆಂಡಿರು

ಬೆಟ್ಟ ಚಾಮರಾಜ ವೊಡೆಯರ್ – 13 ಹೆಂಡಿರು, 6 ಮಕ್ಕಳು

ರಾಜ ವೊಡೆಯರ್  – 8 ಹೆಂಡಿರು, 6 ಮಕ್ಕಳು

ಇಮ್ಮಡಿ ರಾಜ ವೊಡೆಯರ್ – 19 ಹೆಂಡಿರು.

ಮೇಲೆ ಹೇಳಿದ ಅರಸರು ವಿವಿಧ ಕಾರಣಗಳಿಗಾಗಿ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಇಟ್ಟು ಕೊಂಡಿರಬಹುದು ಮತ್ತು ಅವರುಗಳು ಬದುಕಿದ ಕಾಲದಲ್ಲಿ ಹಾಗೆ ಬಹುಪತ್ನೀ ವೃತಸ್ಥರಾಗುವುದು ರೂಢಿಯೂ ಇದ್ದಿರಬೇಕು. ಅರಸರು ಈ ರೀತಿ ಮಾಡಿದಾಗ ಸಮಾಜದ ಪ್ರತಿಷ್ಟಿತ ಗಣ್ಯರೂ ಸಹ 20, 30 ಅಲ್ಲದಿದ್ದರೂ 2, 3 ಪತ್ನಿಯರನ್ನಾದರೂ ಹೊಂದಿರುವ ಸಾಧ್ಯತೆ ಹೆಚ್ಚು ಎಂದೇ ಹೇಳಬಹುದು. ಹಾಗಾಗಿ ಬಹುಪತ್ನಿತ್ವ ಆಗಿನ ಕಾಲದಲ್ಲಿ ubiquitous ಎನ್ನಬಹುದು.  

ಆಫ್ರಿಕಾದ swaziland ದೇಶದ ರಾಜ ಪ್ರತೀ ವರ್ಷವೂ ಸುರ ಸುಂದರ ಕನ್ಯೆಯರ ಮೇಳ ಏರ್ಪಡಿಸಿ ತನಗೆ ಚೆಂದುಳ್ಳಿಯಾಗಿ ಕಂಡ ಚಕೋರಿ ಯನ್ನು ಮದುವೆಯಾಗಿ ತನ್ನ ಚಂದ್ರಮಂಚದ ಸಂಗಾತಿಯರ ಸಾಲಿಗೆ ಸೇರಿ ಕೊಳ್ಳುತ್ತಾನಂತೆ. ಅವನ ಅದೃಷ್ಟಕ್ಕೆ ನಾವು ಹಲುಬಿ ಕರುಬಿ ಫಲವಿಲ್ಲ ಎನ್ನಿ, ಏಕೆಂದರೆ ಇರುವ ಒಬ್ಬ ಹೆಂಡತಿಯ ಆಸೆ, ಅಭಿಲಾಷೆ, ಬೇಕು ಬೇಡಗಳನ್ನು ಪೂರೈಸುವತ್ತ ನಾವು ನಡೆಸುವ ಕುಸ್ತಿ ಕಸರತ್ತೇ ಸಾಕು ಬೇಕಾಗಿರುವಾಗ  ಮತ್ತೊಂದು, ಮಗುದೊಂದು, ಇನ್ನೊಂದು ….ಹೀಗೆ ಹೆಂಡತಿಯರನ್ನು ನಮ್ಮ ಗೋಣಿನ ಸುತ್ತಾ ಪೋಣಿಸುತ್ತಾ ಹೋದರೆ  ಒಂದು ದಿನ ಅದೇ ನಮಗೆ ಉರುಳಾಗಿ ನಮ್ಮ ಅವಸಾನಕ್ಕೆ ಕಾರಣವಾಗಬಹುದು ಎನ್ನುವುದರಲ್ಲಿ ಸಂಶಯ ಬೇಡ, ಏನಂತೀರ?

ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು

ಕೆಲವೊಂದು ಮಾತುಗಳು ಎಂದಿಗೂ ಕಿವಿಗಳಲ್ಲಿ ರಿಣ ಗುಟ್ಟು ತ್ತಿರುತ್ತವೆ. ಅವು ಕುಹಕವಾಗಿರಬಹುದು, ಪ್ರಶಂಸೆ ಆಗಿರಬಹುದು, ತಮಾಷೆ ಅಥವಾ ಗೇಲಿಗಾಗಿ ಇರಬಹುದು. ಕೆಳಗಿದೆ ಒಂದಿಷ್ಟು ಮಾತುಗಳು ನನ್ನ ನೆನಪಿನ ಮೂಸೆಯಿಂದ ಹೊರಬಂದವು.

ಸೋಮನಾಥ್ ಚಟರ್ಜೀ ದೊಡ್ಡ ಮಾತುಗಾರ, ವಾಗ್ಮಿ. ಭಾಜಪ ಸೋತ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರ ಸೋಮನಾಥರನ್ನು ಲೋಕಸಭೆಯ ಸಭಾಪತಿ ಆಗಿ ನೇಮಿಸಿತು. ಚಟರ್ಜಿ ಯವರನ್ನು ಅಭಿನಂದಿಸುತ್ತಾ, ಸೋಮನಾಥ ಚಟರ್ಜಿ ಮಟ್ಟದ ವಾಗ್ಮಿಯಲ್ಲದಿದ್ದರೂ ಒಳ್ಳೆಯ ಭಾಷಣಕಾರರಾದ ವಾಜಪೇಯಿ “ಇಷ್ಟು ಕಾಲ ತಾವು ಹೇಳಿದ್ದನ್ನು ನಾವು ಕೇಳುತ್ತಿದ್ದೆವು, ಈಗ ನಾವು ಹೇಳಿದ್ದನ್ನು ಕೇಳುತ್ತಾ ಕೂರುವ ಸರದಿ ತಮ್ಮದು ಎಂದು ಹಾಸ್ಯದ ಚಟಾಕಿ ಹಾರಿಸಿದ್ದರು. ಸಭಾಪತಿಯ ಕೆಲಸ ಸದಸ್ಯರು ಮಾತನಾಡುವುದನ್ನು ಕೇಳುತ್ತಾ ಕೂರುವುದು ತಾನೇ?

ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಯಾವುದೇ ಗಲಭೆಗಳು ದೇಶದಲ್ಲಿ ನಡೆದರೂ ಮೂರಕ್ಷರದ ಸಂಘಟನೆ ಯೊಂದನ್ನು ಯಾವಾಗಲೂ ದೂರುತ್ತಿದ್ದರು. ಹಾಗೆಯೇ ವಿದೇಶೀ ಕೈವಾಡದ ಮಾತು ಬಂದಾಗ ನೆರೆಯ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸುತ್ತಿದ್ದರು. ಪದೇ ಪದೇ ಈ ಮಾತನ್ನು ಕೇಳಿ ಬೇಸತ್ತಿದ್ದ ವಿರೋಧಪಕ್ಷದ ನಾಯಕರಲ್ಲಿ ಒಬ್ಬರಾದ ಸುಬ್ರಮಣ್ಯಮ್ ಸ್ವಾಮೀ ಭಾಷಣ ವೊಂದರಲ್ಲಿ ಹೇಳಿದ್ದು. “ ನಾನು ಲೋಕಸಭೆಯ ಕಲಾಪಗಳಲ್ಲಿ ಪಾಲುಗೊಂಡಾಗ ವಿದೇಶೀ ಸಮಸ್ಯೆಗಳಿಗೆ ಇಂದಿರಾ ಪಾಕಿನ ಕೈವಾಡ ಇದೆ ಎಂದು ಹೇಳುವುದನ್ನು ಹಲವು ಬಾರಿ ಕೇಳಿದ್ದೇನೆ. ಭಾರತದಲ್ಲಿ ಜನಸಂಖ್ಯೆ ವಿಪರೀತ ಏರುತ್ತಿದೆ, ಇದರಲ್ಲೂ ಪಾಕಿಸ್ತಾನದ ಕೈವಾಡ ಇರಬಹುದೇ ಎಂದು ನನ್ನ ಸಂಶಯ ಎಂದು ತಮಾಷೆ ಮಾಡಿದರು.

ಬಾಟ್ಲಿಂಗ್ ಹಗರಣದ ಸಮಯ ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಡೆ ವಿಚಾರಣೆಗೆ ಆದೇಶ ನೀಡಿದರು. ಕುಂಬ್ಳೆ ಕಾಯಿ ಕಳ್ಳ ಅಂದ್ರೆ ಹೆಗಲನ್ನು ಯಾಕೆ ಮುಟ್ಟಿ ನೋಡ್ ಕೊಳ್ತೀರಾ ಎಂದು ವಿರೋಧ ಪಕ್ಷ ಕೆಣಕಿದಾಗ ಹೆಗ್ಡೆ ಹೇಳಿದ್ದು, “… ಹೆಗಲು ಮುಟ್ಟಿ ನೋಡಿಕೊಂಡಾಗ ಬೂದಿ ಮೆತ್ತಿ ಕೊಂಡಿತ್ತು” ಸಂಶಯ ನಿವಾರಣೆಯಾಗಲಿ ಎಂದು ತನಿಖೆಗೆ ಆದೇಶ ನೀಡಿದೆ ಎಂದರು.

ಬಹಳ ವರ್ಷಗಳ ಹಿಂದಿನ ಮಾತು. ಲೋಕಸಭೆಯಲ್ಲಿ ಒಮ್ಮೆ ಸದಸ್ಯರೊಬ್ಬರು ಕೇರಳದ ಬಗ್ಗೆ ಚರ್ಚೆ ನಡೆದಾಗ “ಕೇರಳದ ಹೆಣ್ಣು ಮಕ್ಕಳು ಬೆಳದಿಂಗಳಿನಲ್ಲಿ ನೋಡಲು ಬಲು ಚೆಂದ” ಎಂದು ಪ್ರಶಂಸಾತ್ಮಕವಾಗಿ ಹೇಳಿದ್ದೆ ತಡ ಕೇರಳದ ಸದಸ್ಯರೆಲ್ಲ ತೀವ್ರವಾಗಿ ಪ್ರತಿಭಟಿಸಿ ಆ ಬಡಪಾಯಿ ಸದಸ್ಯ ಕ್ಷಮೆ ಕೇಳುವಂತೆ ಮಾಡಿದರು.

ನಮ್ಮ ಕರ್ನಾಟಕದ ವಿಧಾನ ಪರಿಷತ್ ಸದಸ್ಯ A.K. ಸುಬ್ಬಯ್ಯ ಒಂದು ರೀತಿಯ AK 47 ತುಪಾಕಿಯಂತೆ. ಅವರ ಯಾವುದೇ ಮಾತುಗಳು ನೆನಪಿಗೆ ಬರದಿದ್ದರೂ ಇಬ್ರಾಹೀಮರ ROLEX WATCH ನ ಹಿಂದೆ ಬಿದ್ದು ಸಾಕಷ್ಟು ಸತಾಯಿಸಿದ್ದು ಮಾತ್ರ ಇನ್ನೂ ನೆನಪಿದೆ.

ತನ್ನ rabble rousing ಭಾಷಣದಿಂದ ದೇಶದ ವಿವಿದೆಡೆ ದೊಡ್ಡ ತಲೆನೋವು ತರುತ್ತಿದ್ದ ತೊಗಾಡಿಯಾ ಬಿಹಾರ ಪ್ರವಾಸದ ಮೇಲೆ ಪಾಟ್ನಾ ನಗರದಲ್ಲಿ ಬಂದಿಳಿದಾಗ ವಿಮಾನ ನಿಲ್ದಾಣ ದಿಂದಲೇ ಆತನನ್ನು ಆತ ಬಂದ ಊರಿಗೆ ರವಾನಿಸಿ ಆದೇಶ ಹೊರಡಿಸಿದ ಲಾಲೂ ಪ್ರಸಾದ ಯಾದವ್ ಪತ್ರಕರ್ತರಿಗೆ ಹೇಳಿದ್ದು “ ತೊಗಾಡಿಯಾ ನಿಗೆ ಎಂಥ ಲಾತ (kick) ಕೊಟ್ಟಿದ್ದೇವೆ ಎಂದರೆ ಆತ land ಆಗೋದು ದೆಹಲಿಯಲ್ಲೇ (we have kicked him like a football and he will land only in delhi) ಎಂದು ತಮ್ಮ ಎಂದಿನ ಚಮತ್ಕಾರದ ನಗುವಿನೊಂದಿಗೆ ಹೇಳಿದರು. ರಾಜಕಾರಣಿಗಳು ಬರೀ ರಾಜಕೀಯ ಮಾತ್ರವಲ್ಲ ತಮ್ಮನ್ನು ಆರಿಸಿದ ಜನರಿಗೆ ಆಗಾಗ ಪುಕ್ಕಟೆ ಮನರಂಜನೆಯನ್ನೂ ಕೊಡುತ್ತಾರೆ.

ಭಾಜಪದ ಅಧಿಕಾರಾವಧಿಯಲ್ಲಿ ವಾಜಪೇಯೀ ಪ್ರಧಾನಿಯಾದರೂ ತೆರೆಮರೆಯ ಚುಕ್ಕಾಣಿ ಅದ್ವಾನಿ ಕೈಯ್ಯಲ್ಲಿ ಎಂದು ಕೆಲವರ ಅಭಿಮತವಾಗಿತ್ತು. ಹಾಗೆಂದ ಮೇಲೆ ಯಾರದಾದರೂ ಬಾಯಲ್ಲಿ ಉದುರಲೇ ಬೇಕಲ್ಲವೇ ಅಣಿ ಮುತ್ತುಗಳು? ಉದುರಿದವು ನೋಡಿ ಆವರದೇ ಪಕ್ಷದ ಮುಖಂಡ ಶೇಷಾದ್ರಿ ಬಾಯಿಂದ. ವಾಜಪೇಯೀ ಭಾಜಪ ಸರಕಾರದ ಮುಖವಾಡ ಮಾತ್ರ ಎಂದು ಹಾಕಿದರು ಬಾಂಬನ್ನು. ಹಿಂದಿಯಲ್ಲಿ “ಮುಖೋಟ” ಕನ್ನಡದಲ್ಲಿ ಮುಖವಾಡ. ರಾಜಧಾನಿ ಸೇರಿ ದೇಶವೇ ನಲುಗಿತು ಈ ಬಾಂಬಿಗೆ. ಈ ಮಾತಿನ ಕಾರಣ ದೊಡ್ಡ ಗಲಾಟೆ ಎದ್ದ ಕೂಡಲೇ ತಡಬಡಿಸಿ ಅವರು ಹೇಳಿದ್ದು “ನಾನು ಹೇಳಿದ್ದು ಮುಖೋಟಾ ಅಲ್ಲ, “ಮುಕುಟ್” (ಕಿರೀಟ) ಹೇ ಹೇ ಹೇ ಎಂದು ಸೋತ ನಗುವಿನೊಂದಿಗೆ ತಮ್ಮ ಮತ್ತು ಸರಕಾರದ ಮಾನ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದರು. ಕೆಲವೊಮ್ಮೆ ರಾಜಕಾರಣಿಗಳು ತಾವು ಮೊದಲು ರಾಜಕಾರಣಿ ನಂತರ ಎಲ್ಲರಂತೆಯೇ “ಮನುಷ್ಯ” ಎಂದು ಸಾಬೀತು ಪಡಿಸುತ್ತಾರೆ ತಮ್ಮ ಮಾತುಗಳಿಂದ.

೧೯೯೦ ರಲ್ಲಿ ಇರಾಕ್ ನ ಅಧ್ಯಕ್ಷರಾದ ಸದ್ದಾಮ್ ಹುಸೇನರು ಕುವೈತ್ ದೇಶವನ್ನು ವಶಪಡಿಸಿಕೊಂಡದ್ದಕ್ಕೆ ಅಮೆರಿಕಾದ ಅಧ್ಯಕ್ಷ ಬುಶ್ ಸೀನಿಯರ್ ಇರಾಕಿನ ಮೇಲೆ ಆಕ್ರಮಣ ಎಸಗಲು ಮೀನಾ ಮೇಷ ಎಣಿಸುತ್ತಿದ್ದಾಗ ಅಂದಿನ ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಹೇಳಿದ್ದು “dont wobble, george” ಅಂತ. ಅಂದರೆ ಹೆದರಬೇಡ ಜಾರ್ಜ್, ನಾನಿದ್ದೇನೆ ನಿನ್ನ ಸಾಮೂಹಿಕ ನರಹತ್ಯೆಗೆ ಸಾಕ್ಷಿಯಾಗಿ ಮತ್ತು ಬೆಂಬಲವಾಗಿ, ಸಾಂಗವಾಗಿ ಸಾಗಲಿ ನಿನ್ನ ಅಮಾಯಕರ ಮೇಲಿನ ಆಕ್ರಮಣ ಎಂದು. ಒಳ್ಳೆಯ ಕೆಲಸಕ್ಕೆ ಮಿತ್ರರು ಸಿಗುವುದು ಸ್ವಲ್ಪ ವಿರಳವೇ, ಆದರೆ ಮನೆ ಹಾಳು ಕೆಲಸಕ್ಕೆ ಸದಾ ಜನರ ಬೆಂಬಲ ಇರುತ್ತದೆ ಎನ್ನುವುದಕ್ಕೆ ಬ್ರಿಟನ್ನಿನ “ಉಕ್ಕಿನ ಮಹಿಳೆ” ಸಾಕ್ಷಿಯಾದರು.

ಒಬಾಮಾ ಬಂದ್ರು, ಹೋದ್ರು , period .

ಅಮೆರಿಕೆಯ ಅಧ್ಯಕ್ಷ ಮಹೋದಯರು ಭಾರತದಲ್ಲಿ. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು, ಗಗನಚುಂಬಿ ಕಟ್ಟಡಗಳು ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನ ನೋಡಿ ಪ್ರಶಂಸಿಸಲು ಮತ್ತು ಮುಂಬೈಗೆ ಬಂದಿಳಿದ ಒಬಾಮ ಮುಂಬೈ ನರಹತ್ಯೆಯ ರೂವಾರಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ನಾಮಕರಣ ಮಾಡಬಹುದು ಎಂದು. ಆದರೆ ಒಬಾಮರಿಗೆ ಅಥವಾ ಅಮೆರಿಕನ್ನರಿಗೆ ಮುಂಬೈ ನರಹತ್ಯೆ ದೊಡ್ಡ ವಿಷಯವಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ರಾಷ್ಟ್ರರಾಷ್ಟ್ರ ಗಳ ನಡುವಿನ ಸಂಬಂಧದಲ್ಲಿ ಅನುಭವವಾಗುವ collateral damage ಅಷ್ಟೇ ಮುಂಬೈಯಲ್ಲಿ ನಡೆದ ನಗ್ನ ಹಿಂಸೆ. ಪಾಕಿಗಳನ್ನು ವಿಚಾರಿಸಿ ಕೊಳ್ಳಲು ನಾವು ಅಮೆರಿಕೆಯನ್ನಾಗಲೀ ಇನ್ಯಾವುದೇ ರಾಷ್ಟ್ರವನ್ನಾಗಲಿ ಅವಲಂಬಿಸಕೂಡದು ಎಂದು ಚಾಣಕ್ಯಪುರಿಗೆ ಯಾವಾಗ ಹೊಳೆಯುತ್ತದೋ ನೋಡೋಣ. ಹಾಗೇನಾದರೂ ಸುದೈವವಶಾತ್ ಹೊಳೆದಲ್ಲಿ ಅಷ್ಟು ಹೊತ್ತಿಗೆ ನಾವೆಲ್ಲಾ ಪಾಕಿ ಭಯೋತ್ಪಾದಕರಿಗೆ  ಬಲಿಯಾಗದೆ ಜೀವಂತವಾಗಿದ್ದರೆ ನಮ್ಮ ಪುಣ್ಯ ಸಹ ಹೌದು.

ಈ ಮಧ್ಯೆ ಪತ್ರಿಕೆಗಳು ಮತ್ತು ಟೀವೀ ಮಾಧ್ಯಮಗಳು ಒಬಾಮಾ ಪಾಕ್ ಬಗ್ಗೆ ಏನೂ ಹೇಳಲೇ ಇಲ್ಲ ಎಂದು ಮುನಿಸಿಕೊಂಡವು. ನಾವೆಲ್ಲಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಬೇಡಿ ಎಂದು ಪಾಕಿಗಳಿಗೆ ತಾಕೀತು ಮಾಡಬಹುದು ಎಂದು ಬಗೆದಿದ್ದೆವು ಆದರೆ ಅಮೇರಿಕಾ ಎಂದಿಗೂ ಪಾಕಿನ ಮಿತ್ರ ಎಂದು ಸಾಬೀತು ಪಡಿಸಿತು ಎಂದು ಹಲುಬಿದವು ಮಾಧ್ಯಮಗಳು. ಒಂದು ರೀತಿಯ ದೈನಂದಿನ ಬದುಕಿನ ದೃಶ್ಯದ ಥರ ಕಾಣುತ್ತಿಲ್ಲವೇ ಇದು? ಕಮಲಮ್ಮನ ಮನೆಗೆ ಪಕ್ಕದ ಮನೆಯ ಜಾನಕಮ್ಮ ಬಂದು ಸರಸಮ್ಮನ ಬಗ್ಗೆ ಏನೂ ಚಾಡಿ ಹೇಳಿಲ್ಲ ಎಂದು ದೂರುವ ಹಾಗೆ ವರ್ತಿಸಿದವು ಮಾಧ್ಯಮಗಳು ಮತ್ತು ಒಬಾಮಾರ ಭೇಟಿಯ ಬಗ್ಗೆ ಮಾತನಾಡಲು ಬಂದ ಪಂಡಿತರು. ಅಮೇರಿಕಾ ಪಾಕಿನ ಬಗ್ಗೆ ಅಷ್ಟು ಸುಲಭವಾಗಿ ದೂರಲು ಹೋಗೋದಿಲ್ಲ. ಕೆಲವಾರಗಳ ಹಿಂದೆ ಬ್ರಿಟಿಶ್ ಪ್ರಧಾನಿ ಕಮೆರೂನ್ ಬಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದು ಕೊಂಡಿದ್ದರು. ಭಯೋತ್ಪಾದಕತೆ ಶುರು ಆಗೋದೆ ಪಾಕಿನಿಂದ ಎನ್ನುವರ್ಥದ ಮಾತನ್ನು ಹೇಳಿದರು. ಹಾಗೆ ಹೇಳಿದ್ದಕ್ಕೆ ಪಾಕಿನಿಂದ ಉಗ್ರ ಪ್ರತಿಭಟನೆ ಬಂದರೂ ಕಮೆರೂನ್ ಜಗ್ಗಲಿಲ್ಲ. ಆದರೆ ಇದನ್ನು ವೀಕ್ಷಿಸಿದ್ದ ಅಮೆರಿಕೆಗೆ ಇದು ಎಚ್ಚರಿಕೆ ಗಂಟೆಯಾಯಿತು. ಕೆಮೆರೂನ್ ಏನೇ ಹೇಳಿದರೂ ಅವರಿಗೆ ನಷ್ಟವಿಲ್ಲ ಏಕೆಂದರೆ ಆಫ್ಘಾನಿಸ್ತಾನದಲ್ಲಿ ಅವರ ಪಾತ್ರ ದೊಡ್ಡದಲ್ಲ. ಆದರೆ ಅಮೆರಿಕೆಯ ವಿಷಯ ಹಾಗಲ್ಲ. ಕಂದಹಾರದ ಉಗ್ರರನ್ನು ಬಲಿ ಹಾಕಬೇಕೆಂದರೆ ಪಾಕಿನ ಸಹಕಾರ ಬೇಕೇ ಬೇಕು. ನಾವ್ಯಾಕೆ ಬೇಡದ ಉಸಾಬರಿಗೆ ಕೈ ಹಾಕಿ ಕಷ್ಟದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕು. ನಾವು ಬಂದಿರೋದು ವ್ಯಾಪರಕ್ಕೊಸ್ಕರ. ವ್ಯಾಪಾರ ಕುದುರಿಸಿ ಒಂದಿಷ್ಟು ಡಾನ್ಸ್ ಮಾಡಿ ಭಾರತೀಯರನ್ನು ಮೋಡಿ ಮಾಡಿದರೆ ಸಾಕು ಎಂದು ಅಮೆರಿಕೆಯ ಎಣಿಕೆ. ಈ ಕಾರಣಕ್ಕಾಗಿಯೇ ಅಮೆರಿಕೆಯ ದಿವ್ಯ ಮೌನ ಪಾಕ್ ಭಯೋತ್ಪಾದಕತೆ ಬಗ್ಗೆ. ಒಬಾಮ ಬಂದ ಮೊದಲ ದಿನವೇ 10 billion ಡಾಲರ್ಗಳ ವ್ಯಾಪಾರ ಮಾಡಿತು ಅಮೇರಿಕ.

NPR ಅಮೆರಿಕೆಯ ಪ್ರಸಿದ್ಧ ರೇಡಿಯೋ ಮಾಧ್ಯಮ. ಒಬಾಮಾ ಜೊತೆಗೆ ಬಂದಿದ್ದ npr ವರದಿಗಾರ st. xaviers college ನಲ್ಲಿ ನಡೆದ ಅಧ್ಯಕ್ಷರ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ದ ವೇಳೆ ೧೯ ರ ಓರ್ವ ತರುಣಿ ಪಾಕಿನ ಭಯೋತ್ಪಾದನೆ ಬಗ್ಗೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಹೇಳುತ್ತಾ “ಭಾರತಕ್ಕೆ ಪಾಕಿಸ್ತಾನ ಎಂದರೆ ಒಂದು ರೀತಿಯ jealous and rivalry ಎಂದು ಹೇಳಿದ. rivalry ಏನೋ ಸರಿಯೇ. ಆದರೆ jealous ಯಾವುದರ ಬಗ್ಗೆಯೋ ತಿಳಿಯುತ್ತಿಲ್ಲ. ಎಲ್ಲಾ ತೀರ್ಮಾನಗಳಿಗೂ, ನಿರ್ಧಾರಗಳಿಗೂ ಇಸ್ಲಾಮಾಬಾದ್ ಅಮೆರಿಕೆಯ ವಾಷಿಂಗ್ಟನ್ ನಿಂದ dictation ತೆಗೆದು ಕೊಳ್ಳುತ್ತದಲ್ಲಾ, ಪಾಕಿಗಳ ಈ ಬೆನ್ನುಲುಬಿಲ್ಲದ ನಡವಳಿಕೆ ಬಗ್ಗೆ ಇರಬೇಕು ನಮಗೆ ಮತ್ಸರ, jealousy.           

ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕಾರಣಿಗಳಂತೆಯೇ ಭರವಸೆಯನ್ನ ನೀಡಲು ಮರೆಯಲಿಲ್ಲ ಒಬಾಮಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ ಒಬಾಮ ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತ ಜಗಾರೂಕತೆಯಿಂದ ವರ್ತಿಸುವಂತೆ ಸೂಕ್ಷ್ಮವಾಗಿ ಸೂಚಿಸಿದರು. ಆದರೆ ಈ ಆಶ್ವಾಸನೆಯ ಬೆನ್ನಲ್ಲೇ ಬಂದವು ಅಪಸ್ವರಗಳು, ಜರ್ಮನಿ ಮತ್ತು ಜಪಾನ್ ದೇಶಗಳಿಂದ. ಒಬಾಮಾ ನೀಡಿದ್ದು ಆಶ್ವಾಸನೆ ಮಾತ್ರ, ಈ ಆಶ್ವಾಸನೆ ವಿರುದ್ಧವೇ ತಕರಾರು ಬಂದರೆ ಇನ್ನು ವಿಶ್ವಸಂಸ್ಥೆಯಲ್ಲಿ ನಮಗೆ ಯಾವ ರೀತಿಯ ಬೆಂಬಲ ಸಿಕ್ಕೀತು ಎಂದು ಊಹಿಸಲು ನಮಗೆ ರಾಜನೀತಿಯಲ್ಲಿ ಡಾಕ್ಟರೇಟ್ ಪದವಿಯ ಅವಶ್ಯಕತೆಯಿಲ್ಲ.  

ಒಟ್ಟಿನಲ್ಲಿ ಒಬಾಮ ಬಂದರು, ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. ಒಬಾಮ ಎಲ್ಲಿಗೆಹೋದರು, ಏನನ್ನು ತಿಂದರು,  ಹೇಗೆ ಕುಣಿದರು ಇತ್ಯಾದಿ ಇತ್ಯಾದಿ ಪುಂಖಾನುಪುಂಖವಾಗಿ ವರದಿ ಮಾಡಿದವು. ನಮಗೂ ಒಂದು ರೀತಿಯ ಪುಳಕ. ಬಿಳಿಯರ ನಾಡಿನಿಂದ ಒಂದು ಕಾಗೆ ಬಂದಿಳಿದರೂ ನಮ್ಮ ಬದುಕು ಸಾರ್ಥಕವಾಗಿ “ಅತಿಥಿ ದೇವೋ ಭವನನ್ನು ಸಂತುಷ್ಟ ನನ್ನಾಗಿಸಿದ ಭಾವನೆಯಲ್ಲಿ ಧನ್ಯರಾಗಿ ಬಿಡುತ್ತೇವೆ.

paracetamol ರಾಮ ಬಾಣ ಅಲ್ಲ

ಜ್ವರ ಅಥವಾ ನೋವು ಕಾಣಿಸಿ ಕೊಂಡ ಕೂಡಲೇ ನಾವು ಮೊರೆ ಹೋಗುವುದು paracetamol ಇರುವ ಔಷಧಿ ಕಡೆಗೆ. ವಿಶೇಷವಾಗಿ ಮಕ್ಕಳಿಗೆ ಕಾಣಿಸಿಕೊಳ್ಳುವ ಜ್ವರಕ್ಕೆ paracetamol ರಾಮ ಬಾಣ ಎಂದು ನಮ್ಮೆಲ್ಲರ ಗ್ರಹಿಕೆ. ಆದರೆ ಈ ಗ್ರಹಿಕೆಗೆ ಒಂದು ಕೊಡಲಿಯೇಟು ಬಿದ್ದಿದೆ; paracetamol ಒಳಗೊಂಡ ಔಷಧಿ ಮಕ್ಕಳಲ್ಲಿ ಅಸ್ತಮಾ ರೋಗವನ್ನು ಬರಿಸುತ್ತದೆ. ಗರ್ಭಿಣಿಯರು paracetamol ಹೆಚ್ಚು ತೆಗೆದು ಕೊಂಡಷ್ಟೂ ಹುಟ್ಟುವ ಮಕ್ಕಳಲ್ಲಿ ಅಸ್ತಮಾ ಕಾಣಿಸಿಕೊಳ್ಳಲು ಕಾರಣವಾಗುತ್ತದಂತೆ. ಈ ಔಷಧಿಯನ್ನು ಆಂಗ್ಲ ಭಾಷೆ ಮಾತನಾಡುವ ರಾಷ್ಟ್ರಗಳ ಜನ ಹೆಚ್ಚು ತೆಗೆದು ಕೊಳ್ಳುತ್ತಿದ್ದು ಅಲ್ಲಿನ ಮಕ್ಕಳ ಆರೋಗ್ಯದ ಅಧ್ಯಯನ ನಡೆಸಿದ ಮೇಲೆ ಈ ವಿದ್ಯಮಾನ ಬೆಳಕಿಗೆ ಬಂತು. ಆದರೆ ಕಂಪೆನಿಗಳು ಈ ಅಧ್ಯಯನವನ್ನು ಒಪ್ಪುತ್ತಿಲ್ಲ. ಅಸ್ತಮಾದ ಬಗೆಗಿನ ಅಧ್ಯಯನ ಗಮನಾರ್ಹವಲ್ಲದಿದ್ದರೆ medical journal “Lancet” ಪತ್ರಿಕೆಯಲ್ಲಿ ಇದು ಬೆಳಕನ್ನು ಕಾಣುತ್ತಿರಲಿಲ್ಲ.ಮಕ್ಕಳಲ್ಲಿ ಕಫ ತುಂಬಿ ಉಬ್ಬಸ ತೋರಿದಾಗ ಕೊಡುವ paracetamol ಕ್ರಮೇಣ ಮಕ್ಕಳಲ್ಲಿ ಅಸ್ತಮಾ ರೋಗಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ. ಹಾಗಾದರೆ ಮಕ್ಕಳಿಗೆ ಜ್ವರ ಬಂದಾಗ ಕೊಡಬೇಕಾದದ್ದಾದರೂ ಏನು? ಕೆಲವು ವೈದ್ಯರ ಪ್ರಕಾರ ಜ್ವರ ಬಂದಾಗ ಯಾವ ಔಷಧಿಯನ್ನೂ ಕೊಡುವ ಅಗತ್ಯವಿಲ್ಲವಂತೆ. ಏಕೆಂದರೆ ಶರೀರಕ್ಕೆ ತಗಲುವ ಸೋಂಕಿಗೆ ನೈಸರ್ಗಿಕ ಪ್ರತಿರೋಧವಾಗಿ ಜ್ವರ ಬರುತ್ತದಂತೆ. ಆದರೆ ನಾವೀಗ ಕಾಣುತ್ತಿರುವ ಇಲಿ ಜ್ವರ, ಹಂದಿ ಜ್ವರ ಮುಂತಾದ “zoo” ಜ್ವರಗಳ ಬಗ್ಗೆ ಮಾತ್ರ ಎಚ್ಚರಿಕೆಯಿಂದಿರುವುದು ಅತ್ಯವಶ್ಯಕ.

ಮಾಡಲೇಬೇಕಾದ ಕೆಲಸವನ್ನ ಮಾಡದೆ ವೃಥಾ ಮುಂದೂಡುವುದು

ಬರೆಯಲು ಸಾಕಷ್ಟು ಟಾಪಿಕ್ ಗಳಿದ್ದರೂ ಒಂದು ಕಡೆ ಅಂಡನ್ನು ಆಳವಾಗಿ ಊರಿ ಬರೆಯಲು ಸೋಮಾರಿತನ, lethargy. ಈ lethargy ಗೆ ಸಂಗಾತಿಯಾಗಿ procrastination ಸಿಕ್ಕಿದರಂತೂ ಕೇಳೋದೇ ಬೇಡ ಅನ್ನಿ. ಈ procrastinate ಅನ್ನೋ ಖಾಯಿಲೆಯನ್ನ ನೊಬೆಲ್ ಪ್ರಶಸ್ತಿ ವಿಜೇತರೂ ಅಂಟಿಸಿ ಕೊಂಡಿದ್ದಾರಂತೆ. ದಾರ್ಶನಿಕ ಸಾಮ್ಯುಎಲ್ ಜಾನ್ಸನ್ ಸಹ ಈ ಪಿಡುಗಿಗೆ ಬಲಿಯಾಗಿರಬೇಕಾದರೆ ನೀವೇ ಊಹಿಸಿ. ಖ್ಯಾತ ಸಾಹಿತಿ ವಿಕ್ಟರ್ ಹ್ಯೂಗೋ ತಾನುಟ್ಟ ಬಟ್ಟೆ ಬಿಚ್ಚಿ, ಸೇವಕನಿಗೆ ಒಪ್ಪಿಸಿ, ಅಡಗಿಸಿಡಲು ಹೇಳಿ ನಗ್ನನಾಗಿ ಕೂತು ಬರೆಯುತ್ತಿದ್ದನಂತೆ ತಾನು ಬರೆಯುವುದನ್ನು ನಿಲ್ಲಿಸಿ ಹೊರಕ್ಕೆ ಹೋಗಬಾರದು ಎಂದು. ನೋಡಿದಿರಾ ತನ್ನ ಮೇಲೆ ತಾನೇ ಯಾವ ರೀತಿಯ “ನಗ್ನ” ನಿರ್ಬಂಧವನ್ನು ಹೇರಿಕೊಂಡ ಈ ಪ್ರತಿಭಾವಂತ ಸಾಹಿತಿ procrastination ಎನ್ನುವ ಪೆಡಂಭೂತಕ್ಕೆ ಹೆದರಿ? procrastination ಪದ ಲ್ಯಾಟಿನ್ ಮೂಲದ್ದು ಮತ್ತು ಆಂಗ್ಲ ಭಾಷೆಗೆ ಆಮದಾಗಿದ್ದು ಸುಮಾರು ೧೬ ನೆ ಶತಮಾನದಲ್ಲಿ.

ನಿಂಬೆ ಹಣ್ಣಿನಲ್ಲಿ cholesterol

ಹಾಂ, ಎಂದು ಹಾವು ತುಳಿದವರಂತೆ ಆಡಬೇಡಿ….

ರಾತ್ರಿ ಊಟಕ್ಕೆ ಕುಳಿತೆ. ಅದೇ ಉಪ್ಪು ಇನ್ನು ಇಲ್ಲದ ಒಣಗಿದಂತೆ ಕಾಣುವ ಚಪಾತಿ, ಒಂದು ಡಬ್ಬ lowfat yoghurt ಒಂದಿಷ್ಟು ಪಲ್ಯ, ಇದನ್ನು ನೋಡಿ ಹೇಗಪ್ಪಾ ತಿನ್ನೋದು ಎಂದು ನನಗೆ ಸಂಕಟ. ಈ ದರಿದ್ರದ BP (ಹೆಚ್ಚಿಲ್ಲ, ಬರೀ ೧೩೦/೯೦) ನನ್ನ ಗೆಳೆಯನಾದಂದಿನಿಂದ ನನ್ನ ಮೇಲೆ ನಾನೇ ಹೇರಿಕೊಂಡ ಶಿಕ್ಷೆ. ಸರಿ, ಒಂದಿಷ್ಟು ಈರುಳ್ಳಿ, ನಿಂಬೆ ಹಣ್ಣನ್ನಾದರೂ ಇಡಬಾರದೇ ಎಂದಾಗ ನಿಂಬೆ ಹಣ್ಣು ಇಲ್ಲ ಎಂದು ಹೇಳೋ ಬದಲು ಹಾಕಿದಳು ಬಾಂಬನ್ನು, ನಿಂಬೆ ಹಣ್ಣಿನಲ್ಲಿ cholesterol ಇದ್ಯಲ್ಲಾ ಅದಕ್ಕೇ ಇಟ್ಟಿಲ್ಲ ಎಂದು. ಮೇಲೆ ನೀವು ತುಳಿದಂತೆ ನಾನೂ ತುಳಿದೆ ಹಾವನ್ನು. ನಿಂಬೆ ಹಣ್ಣಿನಲ್ಲಿ cholesterol? ಇದೆಲ್ಲಿಂದ ಸಿಕ್ಕಿತು ಹೊಸ, lemon shattering ಸುದ್ದಿ ಇವಳಿಗೆ? ಬೆಂಗಳೂರಿನಲ್ಲಿದ್ದಾಗ ಅಮೆರಿಕೆಯ isntructor ಹತ್ತಿರ medical transcription ಸಮಯವೂ ನನಗೆ ಈ ಸಂಗತಿ ಗೊತ್ತಾಗಲಿಲ್ಲ. med trans ಸಹವಾಸದ ಕಾರಣ ಹಚ್ಚಿಕೊಂಡ ಖಾಯಿಲೆ ಬಗೆಗಿಗಿನ ಗೀಳು, ಮತ್ತು ಏನಿಲ್ಲವೆಂದರೂ ಒಂದುವಾರಕ್ಕೊಮ್ಮೆ ಯಾದರೂ mayo clinic ವೆಬ್ ಸೈಟ್ ನೋಡಿಯೇ ತೀರುವ ಅಭ್ಯಾಸ, ಇವೆರಡರಿಂದಲೂ ಸಿಗದ info ಈಕೆಗೆ ಹೇಗೆ ಸಿಕ್ಕಿತು. ಈಕೆ ಓದುವ ಮಂಗಳ ಅಷ್ಟೊಂದು ಮುಂದುವರಿದು ಬಿಟ್ಟಿತೆ? ಸರಿ ಕೇಳಿಯೇ ಬಿಡೋಣ ಅವಳನ್ನೇ ಎಂದು ಅಲ್ಲಾ, ನಿನಗೆ ಎಲ್ಲಿಂದ ಸಿಕ್ತು ಈ ಹೊಸ ವಿಷ್ಯ ಎಂದು ಕೇಳಿದೆ. ನಿಮ್ಮ ಭಾವ ನಿಂಬೆ ಹಣ್ಣು ತಿನ್ನೋದಿಲ್ಲ cholesterol ಅಂತ ಎಂದು ಹೇಳಿದಾಗ ತಿಳಿಯಿತು ಸರಿಯಾಗೇ ಎಡವಿದ್ದಾಳೆ ಇವಳು ಎಂದು. ನನ್ನ ಭಾವನಿಗೆ uric acid ಸಮಸ್ಯೆ. ಅದಕ್ಕೆ ನಿಂಬೆ ಹಣ್ಣು ತಿನ್ನೋದಿಲ್ಲ. ಯಾವುದೇ citrus ಮೂಲದ ವಸ್ತುವೂ ಪಥ್ಯ ಅವರಿಗೆ. uric acid ನನ್ನ ಅರ್ಧಾಂಗಿನಿಗೆ cholesterol ಆಯಿತು. ಆಂಗ್ಲ ಭಾಷೆಯಲ್ಲಿ mind ur p’s and q’s ಎನ್ನುತ್ತಾರೆ confuse ಮಾಡಿ ಕೊಂಡಾಗ. ಈ confusion ನನ್ನನ್ನೂ ನಿಮ್ಮನ್ನೂ ಸುಖಾಸುಮ್ಮನೆ ಹಾವು ತುಳಿಯುವಂತೆ ಮಾಡಿದ್ದು.

ಕನ್ನಡ ಪುಸ್ತಕಗಳ ಪ್ರದರ್ಶನ

ಮಂಗಳೂರಿನಲ್ಲಿ ಇತ್ತೀಚೆಗೆ ಕನ್ನಡ ಪುಸ್ತಕಗಳ ಭಾರೀ ಪ್ರದರ್ಶನ ಏರ್ಪಟ್ಟಿತ್ತು. ಕನ್ಫ್ಯೂಸ್ ಮಾಡ್ಕೋಬೇಡಿ, ಭಾರೀ ಎಂದರೆ ಭಾರೀ ತಯಾರಿ ಮತ್ತು ಉತ್ಸಾಹ ಎಂದು. ಭಾರೀ ಯಶಸ್ಸಲ್ಲ. ಓದಿನ ಕಡೆ ಜನರ ಧೋರಣೆ ಏನು ಎಂದು ಖಾಲಿಯಾಗಿ ಭಣಗುಟ್ಟುತ್ತಿದ್ದ ಗಲ್ಲಾ ಪೆಟ್ಟಿಗೆಗಳೇ ಸಾಕ್ಷಿಯಾದವು. ನೆಹರೂ ಮೈದಾನದ ಮೂಲಕ ಹಾದು ಹೋಗುತ್ತಿದ್ದಾಗ ನನ್ನ ಭಾವನವರ ಕಣ್ಣಿಗೆ ಬಿತ್ತು ಪುಸ್ತಕ ಪ್ರದರ್ಶನ. ಕೂಡಲೇ ಅಲ್ಲಿಂದಲೇ ನನಗೆ ಫೋನಾಯಿಸಿ ಬನ್ನಿ, ನಿಮಗಿಷ್ಟವಾದ ಒಂದು ಪ್ರದರ್ಶನ ಏರ್ಪಟ್ಟಿದೆ ಎಂದು ಆಮಂತ್ರಿಸಿದ್ದೆ ತಡ ಅಲ್ಲಿಗೆ ದೌಡಾಯಿಸಿದೆ. ಸೊಗಸಾದ ವಿಶಾಲವಾದ ಸಾಲಕೃತ ಮಂಟಪದಲ್ಲಿ ಡಜನು ಗಟ್ಟಲೆ ಪ್ರಕಾಶಕರು ವಿದ್ಯಾ ದೇವತೆಯನ್ನು ಅಲಂಕರಿಸಿ ಕರೆದು ಕೊಂಡು ಬಂದಿದ್ದರು ನಾಡಿನ ಮೂಲೆ ಮೂಲೆಯಿಂದ. ತಮಿಳು ಚಿತ್ರ ರಜನಿ ನಟಿಸಿದ ಎನ್ಧಿರನ್ ನೋಡಲೆಂದು ಸೇರಿದ್ದ ಜನ ಜಮಾವಣೆ ಇರಬಹುದೆಂದು ಊಹಿಸಿ ಬಂದಿದ್ದ ನನಗೆ ನಿರಾಶೆ. ಸಾರ್ವಜನಿಕರಿಗಿಂತ ಹೆಚ್ಚಾಗಿ ಅಲ್ಲಿನ ಸಿಬ್ಬಂದಿಗಳೇ ತುಂಬಿದ್ದರು. ಒಂದೇ ಸೂರಿನಡಿ ಅಷ್ಟೊಂದು ಪುಸ್ತಕಗಳನ್ನು ಖುಷಿ ಯಿಂದ ನೋಡುತ್ತಾ ಒಂದೊಂದೇ ಮಳಿಗೆ ಕಡೆ ಕಣ್ಣು ಹಾಯಿಸುತ್ತಾ ಬೆಳಗೆರೆ ಕೃಷ್ಣ ಶಾಸ್ತ್ರಿಗಳ “ಮರೆಯಲಾದೀತೇ”, “ಸಾಹಿತಿಗಳ ಸ್ಮೃತಿ”, ಫಾಕೀರ್ ಮುಹಮ್ಮದ್ ಕಟ್ಪಾಡಿ ಯವರ “ಸೂಫಿ ಸಂತರು”, S.M. ಮುಶ್ರಿಫ್ ರವರ ಕನ್ನಡ ಅನುವಾದಿತ “ಕರ್ಕರೆಯನ್ನು ಕೊಂದವರು ಯಾರು”, ವೆಂಕಟ ಸುಬ್ಬಯ್ಯ ಅವರ “ಇಗೋ ಕನ್ನಡ”… ಮತ್ತು ಇನ್ನೂ ಕೆಲವು ಪುಸ್ತಕಗಳನ್ನೂ ಖರೀದಿಸಿ ಮರಳಿದೆ. ಹಿಂದೊಮ್ಮೆ ಸಂಪದದಲ್ಲೇ ಕರಾವಳಿಯಲ್ಲಿ ಕನ್ನಡಕ್ಕಿರುವ ಪ್ರಾಶಸ್ತ್ಯದ ಬಗ್ಗೆ ಬರೆದದ್ದಕ್ಕೆ ಅರಬ್ಬೀ ಸಮುದ್ರದ ಅಲೆಗಳಂತೆ ನನ್ನ ಮೇಲೆ ಕೆಲವರು ಹಾಯ್ದಿದ್ದರು. ಆ ಪ್ರದೇಶದಲ್ಲಿ ಕನ್ನಡ ಬಳಕೆ, ಅಷ್ಟಕ್ಕಷ್ಟೇ ಎಂದರೆ ಅದು ಒಂದು ದೂಷಣೆ ಯಾಗಿ ಮಾರ್ಪಡಬಾರದು. ಅಲ್ಲಿನ ಜನರಿಗೆ ಕೊಂಕಣಿ, ತುಳು ಭಾಷೆಗಳೊಂದಿಗೆ ನಂಟು ಹೆಚ್ಚು. ಹಾಗೆಂದು ಕನ್ನಡ ಬಗ್ಗೆ ಅಸಡ್ಡೆ ಇದೆಯೆಂದಲ್ಲ. ಆದರೆ ಈ ಪ್ರದರ್ಶನಕ್ಕೆ ಜನರ ಪ್ರತಿಕ್ರಿಯೆ ಮತ್ತು ಪ್ರಕಾಶಕರ ಅಳಲು ನೋಡಿದರೆ ಓದುಗರ ಸಂಖ್ಯೆ ದಿನೇ ದಿನೇ ಇಳಿ ಮುಖವಾಗುತ್ತಿದೆ ಎಂದೆನ್ನಿಸದಿರಲಾರದು. ಓದುಗ ಸಮೂಹ ಪುಸ್ತಕಗಳನ್ನ ಖರೀದಿ ಮಾಡಿ, ಹಲ್ಲು ಗಿಂಜುತ್ತಾ ಇನ್ನಷ್ಟು ಡಿಸ್ಕೌಂಟ್ ಕೊಡು ಎಂದು ಕೇಳೋದು, ಸಿನೆಮಾ ಟಿಕೆಟ್ಗಾದರೆ ಎಷ್ಟನ್ನಾದರೂ ಕೊಟ್ಟು ಬ್ಲಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಕೊಳ್ಳಲು ತಯಾರಾಗೋದು ನೋಡಿದಾಗ ಕನಿಕರ ತೋರದಿರದು. ಕನ್ನಡ ಪುಸ್ತಕಗಳ ಮಾರಾಟದ ಕಾರ್ಮೋಡದ ಪರಿಸ್ಥಿತಿಯಲ್ಲೂ ಒಂದು ಹೊಂಗಿರಣ ಏನೆಂದರೆ ಕನ್ನಡ ಪ್ರಕಾಶನ ಈಗ ಮೊದಲಿನಂತಲ್ಲ ಎನ್ನುವ ಸೂಚನೆ ಸಿಕ್ಕಿದ್ದು. ಮುದ್ರಣ, ಮುಖಪುಟದ ವಿನ್ಯಾಸ ಹೀಗೆ ಹಲವು ಪ್ರಾಕಾರಗಳಲ್ಲಿ ಸ್ವಾಗಾತಾರ್ಹ ಮತ್ತು ಪ್ರಶಂಸಾರ್ಹ ಸುಧಾರಣೆ ಕಂಡಿದೆ ಕನ್ನಡ ಪ್ರಕಾಶನ. ಆದರೆ ದುರದೃಷ್ಟವಶಾತ್ ಈ ಮಾತನ್ನು ಮೈಸೂರು ವಿಶ್ವ ವಿದ್ಯಾಲಯದ ಪ್ರಕಾಶನದ ಬಗ್ಗೆ ಹೇಳಲು ಬರುವುದಿಲ್ಲ. ಸರಕಾರೀ ಕೆಲಸದ ಹಾಗೆಯೇ ಒಂದು ನೀರಸ, ನಿಸ್ತೇಜ, ದಯನೀಯ ಪುಸ್ತಕಗಳು. ದಿನೇ ದಿನೇ ಅತ್ಯಾಧುನಿಕ ಮಾಲುಗಳ ಸಂಖ್ಯೆ, ಹೊಸ ಹೊಸ ಅಂತಾರಾಷ್ಟ್ರೀಯ ಬ್ರಾಂಡುಗಳ ಆಗಮನ ಮಂಗಳೂರಿನ ಜನರ ಕೊಳ್ಳುವ ಸಾಮಾರ್ಥ್ಯದ ಕಡೆ ಬೆಟ್ಟು ಮಾಡಿದರೆ ಮತ್ತೊಂದೆಡೆ ವೈಚಾರಿಕ ದಾರಿದ್ರ್ಯ ತನ್ನ ಕುತ್ತಿಗೆಯನ್ನು ನೀಳವಾಗಿಸುತ್ತಿರುವ ದೃಶ್ಯ ಮಂಗಳೂರಿಗೆ ಮಾತ್ರ ಸೀಮಿತ ಅಲ್ಲ ಎನ್ನುವುದನ್ನು ಸಾಕಷ್ಟು ಸುತ್ತಾಡಿದ ಜನರಿಗೆ ಮನವರಿಕೆ ಆಗಿರಲಿಕ್ಕೂ ಸಾಕು.

ಯೋಗಾಸನ ಪೈಶಾಚಿಕವಂತೆ

ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ ಪೈಶಾಚಿಕ ತರಗತಿಗೂ ಸೇರುತ್ತಿದ್ದೀರಿ ಎಂದು ಕ್ರೈಸ್ತ ಧರ್ಮೀಯರಿಗೆ ಕಿವಿ ಮಾತು ಹೇಳಿದ R Albert Mohler Jr, ಕೆಂಟಕಿಯ ದಕ್ಷಿಣ ಬ್ಯಾಪ್ಟಿಸ್ಟ್ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ. ಯೋಗದ ವೇಳೆ ಪಠಿಸಲ್ಪಡುವ ಮಂತ್ರಗಳು ಸಂಸ್ಕೃತ ದ್ದೂ ಮತ್ತು ಕ್ರೈಸ್ತ ಧರ್ಮದ ಆದರ್ಶಗಳಿಗೆ ವಿರೋಧಿಯೆಂದೂ ಹೇಳಿಕೆ ನೀಡಿದ ಈ ಪಾದ್ರಿ ಅಮೇರಿಕಾ ಹೇಗೆ ದಿನೇ ದಿನೇ ಕ್ರೈಸ್ತ ಮೂಲಭೂತವಾದದ ತನಗರಿವಿಲ್ಲದಂತೆ ಜಾರುತ್ತಿದೆ ಎನ್ನುವುದಕ್ಕೆ ನಿದರ್ಶನವಾದರು. ಕೆಲ ವಾರಗಳ ಹಿಂದೆ ಪವಿತ್ರ “ಕುರ್’ ಆನ್” ಗ್ರಂಥವನ್ನು ಬಹಿರಂಗವಾಗಿ ಸುಡಲು ಕರೆ ನೀಡಿದ್ದ ಪಾದ್ರಿಯೊಬ್ಬ ವಿಶ್ವದಾದ್ಯಂತ ಕೇಳಿ ಬಂದ ಪ್ರತಿಭಟನೆಗೆ ಮಣಿದು ಹಿಂಜರಿದ. ಯೋಗದ ಬಗ್ಗೆ ಮಲೇಷ್ಯಾದ ಮುಸ್ಲಿಂ ವಿಧ್ವಾಂಸರೂ ಅಪಸ್ವರ ಎತ್ತಿದ್ದರು, ಅದು ಇಸ್ಲಾಮಿನ ಅಡಿಗಲ್ಲಾದ ಏಕದೇವೋಪಾಸನೆಯ ತತ್ವಗಳಿಗೆ ವಿರುದ್ಧ ಎಂದು. ಆದರೆ ಇದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ನನ್ನ ಭಾವ ಮತ್ತು ನನ್ನ ಅತ್ತೆ (ಸೋದರ ಮಾವನ ಪತ್ನಿ) ಯೋಗ ದ ಅಭಿಮಾನಿಗಳು. ಇಸ್ಲಾಂ ತತ್ವದ ಪರಿಧಿಯ ಒಳಗಿದ್ದು ಕೊಂಡೆ ಯೋಗದ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ರೀತಿಯ ಧಾರ್ಮಿಕ ಅಸಹಿಷ್ಣುತೆ ಯ ಮತ್ತೊಂದು ಉದಾಹರಣೆ ಕೇರಳ ರಾಜ್ಯದಲ್ಲಿ ಕಾಣಲು ಸಿಕ್ಕಿತು ಮೊನ್ನೆ. ಅತಿ ಹೆಚ್ಚು ಸಾಕ್ಷರತೆ ಇರುವ, ರಾಜಕೀಯ ಪ್ರಬುದ್ಧತೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಕೇರಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಹಚ್ಚುವ ಧಾರ್ಮಿಕ ಪರಂಪರೆಯಿದೆ. ಅದಕ್ಕೆ “ವಿದ್ಯಾರಂಭಂ” ಎಂದು ಕರೆಯುತ್ತಾರೆ. ಸಾವಿರಾರು ಮಕ್ಕಳು ಈ ಸಮಾರಂಭದಲ್ಲಿ ಪಾಲುಗೊಂಡು ಅಕ್ಷರಾಭ್ಯಾಸಕ್ಕೆ ತಮ್ಮ ಮೊದಲ ಹೆಜ್ಜೆ ಇಡುತ್ತಾರೆ. ಈ ಸಮಾರಂಭಕ್ಕೆ ಜಾತಿ ಮತಗಳ ಬೇಧ ಭಾವ ಇಲ್ಲ. ಇರಲಿಲ್ಲ ಈ ವರ್ಷದವರೆಗೂ. ಸಬ್-ಇನ್ಸ್ಪೆಕ್ಟರ್ ಒಬ್ಬರ ಎರಡೂವರೆ ವರ್ಷದ ಪುಟಾಣಿ ಸಹ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಬಂದಿದ್ದ. ಆತ ಹಿಂದೂ ಅಲ್ಲ ಎಂದು ಹೇಳಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಓರ್ವ ಇಸ್ಲಾಂ ಧರ್ಮೀಯರಾದ ಕಾರಣ ಹುಡುಗನ ಪಾಲಕರಿಗೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. “ವಿದ್ಯಾರಂಭಂ” ಸಮಾರಂಭ ನಡೆಯುವ ಸ್ಥಳವನ್ನು “ಇಲ್ಲಂ” ಎಂದು ಕರೆಯುತ್ತಾರೆ ಮಲಯಾಳಂ ಭಾಷೆಯಲ್ಲಿ, ಮತ್ತು “ಇಲ್ಲಂ” ಸಹ ದೇವಸ್ಥಾನದ ಒಂದು ಅಂಗ ಎಂದು ಕುಂಟು ನೆಪ ಒಡ್ಡಿ ಈ ಪುಟಾಣಿಗೆ ಪ್ರವೇಶ ನಿರಾಕರಿಸಲಾಯಿತಂತೆ. ಈ ಸುದ್ದಿ ಬಂದಿದ್ದ ಆಮಂತ್ರಿತ ಗಣ್ಯರಿಗೆ ತಿಳಿದು ಸಮಾರಂಭಕ್ಕೆ ಬಂದಿದ್ದ ಖ್ಯಾತ ಲೇಖಕ ಸಿ. ವಾಸುದೇವನ್ ಈ ತಾರತಮ್ಯವನ್ನು ಖಂಡಿಸಿ “ಇಲ್ಲಂ” ಆವರಣದ ಹೊರಗೆ ಈ ಮುಸ್ಲಿಂ ಹುಡುಗನಿಗೆ ಅಕ್ಷರಾಭ್ಯಾಸಕ್ಕೆ ಹಚ್ಚಿದರು. ಜಗತ್ತು ಯಾವ ರೀತಿ ದಿನೇ ದಿನೇ ಅಸಹಿಷ್ಣುತೆ ಕಡೆ ವಾಲುತ್ತಿದೆ, ಜನರ ಮಧ್ಯೆ ಕಂದಕ ಸೃಷ್ಟಿಸುತ್ತಿದೆ ಎಂದು ಶಾಂತಿ ಪ್ರಿಯ ಜನತೆ ಕಳವಳ ಪಡಲು ಮೇಲಿನ ಉದಾಹರಣೆಗಳೇ ಸಾಕೇನೋ.

ಮಾವಿನ ಮರದಲ್ಲಿ ತೆಂಗು

ಈಗಿನ ಕಾಲದ ಹುಡುಗ ರಿಗೆ concentration ಕಡಿಮೆ ಎಂದು ಹೇಳ್ತಾರೆ. ಏನೇ ಹೇಳಿದರೂ ಒಂದೋ, ತಲೆಗೆ ಹೋಗೋದಿಲ್ಲ, ಇಲ್ಲಾ, ಎಲ್ಲಾ ಕೇಳಿ ನನಗೆ ಅರ್ಥವಾಯಿತು ಅಂತ ಗೋಣಾಡಿಸಿ ಮರೆತು ಬಿಡೋದು, ಇದು ಈಗಿನ ಪೀಳಿಗೆಯ ವೈಶಿಷ್ಟ್ಯ. ಕಳೆದ ವಾರ ಹಾನಗಲ್ಲಕ್ಕೆ ಹೋಗುತ್ತಾ ನನ್ನ ಸೋದರ ಮಾವನ ಮಗನಿಗೆ ದಾರಿಯಿಂದ ಫೋನ್ ಮಾಡಿ ಹೊಳೆ (ಭದ್ರಾವತಿ) ಸಾಲಿನಿಂದ (ಮರದಿಂದ ಬಿದ್ದಿದ್ದರೆ) ಒಂದು ಹಕ್ಕಿ ಗೂಡನ್ನು ತೆಗೆದು ಕೊಂಡು ಬರಲು ನಿನ್ನ ಅಣ್ಣನಿಗೆ ಹೇಳು ಎನ್ನುವ ಸಂದೇಶ ನೀಡಿ ಅರ್ಥ ಆಯಿತು ಎಂದು ಖಾತ್ರಿ ಪಡಿಸಿ ಕೊಂಡ ನಂತರ  ಫೋನ್ ಇಟ್ಟೆ. ರಾತ್ರಿ ಮನೆಗೆ ವಾಪಸಾದ ನಂತರ ಹೋಂ ವರ್ಕ್ ಮಾಡುತ್ತಾ ಕೂತವನಿಗೆ ಕೇಳಿದೆ ನನ್ನ ಬೆಳಗ್ಗಿನ ಸಂಭಾಷಣೆಯ ಬಗ್ಗೆ. ಏನೂ ಗೊತ್ತಿಲ್ಲದವನಂತೆ ನಾಟಕ ವಾಡಿದ. ಹತಾಶನಾಗಿ, ಅಲ್ಲಾ ಕಣೋ ನಿನಿಗ್ ನಾನ್ ಫೋನ್ ಮಾಡಿ ಏನ್ ಹೇಳ್ದೆ ಎಂದಾಗ, ಫೋನಾ? ಯಾವಾಗ? ಎಂದು ಇಷ್ಟಗಲ ಬಾಯ್ತೆರೆದ. ನಿನ್ನ ಅಣ್ಣನಿಗೆ ಏನ್ ಮೆಸೇಜ್ ಕೊಡಲು ನಾನ್ ಹೇಳ್ದೆ, ಎಂದು ಸಿಡುಕಿ ಕೇಳಿದಾಗ  ಮೆಸೇಜಾ, ಊಂ, ಹಾಂ… ತಲೆ ಕೆರೆದುಕೊಳ್ಳುತ್ತಾ, ಹಾಂ…. ಈಗ ಜ್ಞಾಪಕ ಬಂತು ಎಂದ. ಸರಿ ಜ್ಞಾಪಕ ಬಂದಿದ್ದು ಏನಂತ ಹೇಳು ನೋಡೋಣ ಅಂದಾಗ, ಅದೇ…. ಅಟ್ಟದ ಮೇಲಿನಿಂದ ಕೊಬ್ಬರಿ ತೆಗೆಯೋದಕ್ಕೆ ಆಲ್ವಾ ನೀವು ಹೇಳಿದ್ದು ಎಂದಾಗ ನನ್ನ ಸಹನೆಯ ಕಟ್ಟೆ ಒಡೆಯದಿದ್ದರೂ ಸಂಭಾಳಿಸಿಕೊಂಡು ಹೇಳಿದೆ, ಅಲ್ಲಾ ಕಣೋ ಪೆದ್ದೆ, ನಾನು ಹೇಳಿದ್ದು ಅಟ್ಟದ ಮೇಲಿಂದ ಕೊಬ್ಬರಿ ಇಳಿಸೋದಕ್ಕಲ್ಲ, ಹೊರಗಿರುವ ಮಾವಿನ ಮರದಲ್ಲಿ ತೆಂಗು ಬಿಟ್ಟಿದೆ ಅದನ್ನು ಕೀಳು ಎಂದು ಹೇಳಿದ್ದು ಎಂದು  ಹಲ್ಲು ಮಸೆಯುತ್ತಾ ಜಾಗ ಬಿಟ್ಟೆ. ಈ ಬೆಳವಣಿಗೆ growing years ನ ಮತ್ತೊಂದು ಪ್ರಾರಬ್ದ ಅಂತ ಬಿಟ್ಹಾಕೋದೋ, ಇಲ್ಲ, ಇದೂ (lack of concentration) ಒಂದು ರೀತಿಯ ರೋಗ ಎಂದು ಚಿಕಿತ್ಸೆ ಕಡೆ ಗಮನ ಹರಿಸೋದೋ ತಿಳಿಯುತ್ತಿಲ್ಲ.

ಶುಂಠಿ, ನೊಬೆಲ್, “ಸಪ್ಲೈ ಮತ್ತು ಡಿಮಾಂಡ್”

ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್ ಪಿಸ್ಸಾರಿಡ್ಸ್, ಪ್ರಶಸ್ತಿ ಯನ್ನು ಮೂರು ಪಾಲು ಮಾಡಿಕೊಂಡ ಅರ್ಥಶಾಸ್ತ್ರಜ್ಞರು ತಮ್ಮ ಪ್ರತಿಭೆಯ ಆಧಾರದ ಮೇಲೆ. ಏಕೆ ಸಿಕ್ಕಿತು ಈ ತ್ರಿಮೂರ್ತಿಗಳಿಗೆ ನೊಬೆಲ್? ಪೂರೈಕೆ ಮತ್ತು ಬೇಡಿಕೆ – supply and demand – ಮೇಲಿನ ಅಧ್ಯಯನಕ್ಕೆ ಲಭಿಸಿತು ಇವರುಗಳಿಗೆ ವಿಶ್ವದ ಅತ್ಯುನ್ನತ ಪ್ರಶಸ್ತಿ ನೊಬೆಲ್. ೧೯೭೦ ರ ದಶಕದಲ್ಲಿ ಮುಂದುವರಿದ ರಾಷ್ಟ್ರಗಳಿಗೆ “ತೈಲ ಸಂಕಷ್ಟ” ದ ನಂತರ ಎದುರಾದ ಮತ್ತೊಂದು ಸಮಸ್ಯೆ ನಿರುದ್ಯೋಗ. ನಿರುದ್ಯೋಗ, ಉದ್ಯೋಗದ ಲಭಿಕೆ ಮತ್ತು ವೇತನ, ಈ ಮೂರು ಅಂಶಗಳು ಒಂದಕ್ಕೊಂದು ತಳುಕು ಹಾಕಿಕೊಂಡು ವಿಶ್ವದ ಸರಕಾರಗಳಿಗೆ ಒಂದು ಸವಾಲಾಗಿತ್ತು. ಈ ಸಮಸ್ಯೆ ಹೇಗೆಂದರೆ ಕೆಲಸ ಕೊಡುವ ಧಣಿಗೆ ಕೆಲಸಗಾರರು ಸಿಗುವುದಿಲ್ಲ, ಕೆಲಸಗಾರಿಗೆ ಕೆಲಸ ಕೊಡುವ ಧಣಿ ಸಿಗುವುದಿಲ್ಲ. ಒಂದು ರೀತಿಯ catch 22 ಪರಿಸ್ಥಿತಿ. ಈ ಪರಿಸ್ಥಿತಿಯಿಂದ ಹೇಗೆ ಹೊರಬರಬಹುದು ಎಂದು ತೋರಿಸಿ ಕೊಟ್ಟರು ಈ ತ್ರಿಮೂರ್ತಿ ವಿಧ್ವಾಂಸರುಗಳು. “ಉದ್ಯೋಗಗಳಿದ್ದೂ ನಿರೋದ್ಯೋಗ” ಸಮಸ್ಯೆಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ನಡೆಸಿದ ಇವರುಗಳ ಅಧ್ಯಯನ ಮತ್ತು ಪರಿಹಾರ ವಿಶ್ವ ಸರಕಾರಗಳಿಗೆ ನೆರವಾಗುತ್ತದಂತೆ.

“ಸಪ್ಲೈ ಮತ್ತು ಡಿಮಾಂಡ್”ಎಂದರೇನು? ಬಹುತೇಕ ಜನರಿಗೆ ತಿಳಿದದ್ದೇ ಇದು, ಆದರೂ ದಿನ ನಿತ್ಯ ನಮಗೆ ಕಾಣ ಸಿಗುವ ಉದಾಹರಣೆಗಳ ಮೂಲಕ ಅರ್ಥೈಸಿ ಕೊಳ್ಳೋಣ ಈ phenomenon ಅನ್ನು. ಮೇಲೆ ಹೇಳಿದ “ಉದ್ಯೋಗಗಳಿದ್ದೂ ನಿರೋದ್ಯೋಗ” ಗೆ ಸಂಬಂಧಿಸಿದ ಅನುಭವವಲ್ಲ ಕೆಳಗಿನದು. ಇದು ೧೯೮೪ ರ ಮಾತು.

ಒಮ್ಮೆ ತರಕಾರಿಗೆಂದು ಭದ್ರಾವತಿಯ ಪುರಸಭೆ ಒಡೆತನದ (ನಿಜವಾದ ಒಡೆಯ ರೈಲ್ವೆ ಅಂತೆ, ಈಗ ಅದನ್ನು ನೆಲಸಮಗೊಳಿಸಿದ್ದಾರೆ ರಸ್ತೆ ಅಗಲೀಕರಣದ ಕಾರಣ ಒಡ್ಡಿ ) ಮಾರುಕಟ್ಟೆಗೆ ಹೋಗಿದ್ದೆ. ಪರಿಚಯದ ಕೇರಳ ಮೂಲದ ಅಂಗಡಿಯವ ಹೇಳಿದ ಹೇ, ಶುಂಠಿ ತಗೊಂಡು ಹೋಗು, ಈ ಶುಂಠಿ ಮಾರಿಯೇ ನಿನ್ನ ಮಾವನಿಗೆ ವರದಕ್ಷಿಣೆ ಕೊಟ್ಟಿದ್ದು ಹೆಣ್ಣಿನ ಕಡೆಯವರು ಎಂದು. ನನಗೆ ಅರ್ಥವಾಗಲಿಲ್ಲ, ಆತ ಬಿಡಿಸಿ ಹೇಳಿದ. ಆ ಸಮಯದಲ್ಲಿ ರಾಜ್ಯದಲ್ಲಿ ಶುಂಠಿಗೆ ಬಂತು ಬರ, ಶುಂಠಿ ಬೆಳೆದು ಗುಡ್ಡ ಹಾಕಿದವನೇ ಶ್ರೀಮಂತ. ಲಾಟರಿ ಹೊಡೆದಂತೆ. ನನ್ನ ಅತ್ತೆಯ ಮನೆಯವರು ಜಮೀನ್ದಾರರು. ಅವರ ಲಕ್ ಖುಲಾಯಿಸಿದ್ದರಿಂದ ಎಲ್ಲಾ ಬಿಟ್ಟು ಅಂಕು ಡೊಂಕಾಗಿ ತರಕಾರಿಯಲ್ಲಿ ಶುದ್ಧ ಕುರೂಪಿಯಾದ ಶುಂಠಿಯನ್ನು ಬೆಳೆದರು ತಮ್ಮ ಹೊಲದ ತುಂಬಾ. ಬಂತು ಒಳ್ಳೆ ಬೆಲೆ, ಮಾರಿದ್ದೇ ಮಾರಿದ್ದು. ಶುಂಠಿ ಇಲ್ಲದ ಮಾರುಕಟ್ಟೆಯಲ್ಲಿ ಶುಂಠಿ ಇಟ್ಟುಕೊಂಡವನೇ “ಶಾಣ”. ಶುಂಠಿ ಬೆಳೆದವ ವಿಜಯದ ನಗೆ ಬೀರಿದ. ಜೇಬು ತುಂಬಿಸಿಕೊಂಡ. ಈಗಲೂ ನೋಡಿ, ಆ ಪಕ್ಷದಿಂದ ಈ ಪಕ್ಷ ಎಂದು ನೆಗೆಯುವ ನಾಚಿಕೆಗೆಟ್ಟ ಶಾಸಕ, ರಾಜಕಾರಣಿಯಂತೆ ನಮ್ಮ ರೈತರೂ ಒಲಾಡುತ್ತಾರೆ, ಒಮ್ಮೆ ಕಬ್ಬು ಎಂದರೆ, ಮತ್ತೊಮ್ಮೆ ಅಡಿಕೆ, ಮಗುದೊಮ್ಮೆ ರೇಶಿಮೆ, ಬಾಳೆ ಹೀಗೇ. ಯಾವುದಕ್ಕೆ ಮಾರುಕಟ್ಟೆಯಲ್ಲಿ ಕ್ಷಾಮವಿರುತ್ತದೋ ಅದನ್ನು ಪೂರೈಸಿದಾಗ ಸಿಗುವ ಲಾಭದ ಮೇಲೆ ಕಣ್ಣಿಟ್ಟು ಬೆಳೆಯುತ್ತಾರೆ ಉತ್ಪನ್ನಗಳನ್ನು.

ಇದು ನಾನು ಅರ್ಥೈಸಿ ಕೊಂಡ supply demand story.